Blog

  • ಸಾಲುಮರದ ತಿಮ್ಮಕ್ಕ

    ಸಾಲುಮರದ ತಿಮ್ಮಕ್ಕ

    ಇದೀಗ ಸುದ್ದಿಯಲ್ಲಿ:

    • ಪದ್ಮಶ್ರೀ ಪುರಸ್ಕೃತೆ ಹಾಗೂ ಪರಿಸರ ಸಂರಕ್ಷಣೆಯ ಸಾಕಾರಮೂರ್ತಿ, ಸುಮಾರು 385 ಆಲದ ಮರಗಳನ್ನು ನೆಟ್ಟು ಪೋಷಿಸಿದ ಕೀರ್ತಿಗೆ ಭಾಜನರಾಗಿದ್ದ ಸಾಲುಮರದ ತಿಮ್ಮಕ್ಕ ಅವರು ಬೆಂಗಳೂರಿನಲ್ಲಿ ತಮ್ಮ 114 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

    ವೈಯಕ್ತಿಕ ಪರಿಚಯ:

    • ಪೂರ್ಣ ಹೆಸರು: ಸಾಲುಮರದ ತಿಮ್ಮಕ್ಕ (ಮೂಲ ನಾಮ: ತಿಮ್ಮಕ್ಕ).
    • ಬಿರುದುಗಳು: ಇವರು “ವೃಕ್ಷ ಮಾತೆ” ಮತ್ತು “ಸಾಲುಮರದ ತಿಮ್ಮಕ್ಕ” ಎಂದೇ ಜಗದ್ವಿಖ್ಯಾತರಾಗಿದ್ದಾರೆ.
    • ಜನ್ಮಸ್ಥಳ: ಇವರು ಕರ್ನಾಟಕದ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಜನಿಸಿದರು.
    • ಕಾರ್ಯಕ್ಷೇತ್ರ: ಇವರ ಪರಿಸರ ಕಾಳಜಿಯ ಕಾರ್ಯಗಳು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಹುಲಿಕಲ್ ಗ್ರಾಮದ ಸುತ್ತಮುತ್ತ ಕೇಂದ್ರೀಕೃತವಾಗಿದ್ದವು.
    • ಪತಿ: ಇವರು ಬಿಕ್ಕಲ ಚಿಕ್ಕಯ್ಯ ಅವರನ್ನು ವಿವಾಹವಾಗಿದ್ದರು. 1991 ರಲ್ಲಿ ಚಿಕ್ಕಯ್ಯ ಅವರು ನಿಧನರಾಗುವವರೆಗೂ, ಮರಗಳನ್ನು ನೆಡುವ ಕಾಯಕದಲ್ಲಿ ತಿಮ್ಮಕ್ಕ ಅವರಿಗೆ ಜೊತೆಯಾಗಿದ್ದರು.
    • ಜೀವಿತಾವಧಿ: ಇವರು 2025 ರ ನವೆಂಬರ್ 14 ರಂದು, ಅಂದಾಜು 114 ವರ್ಷ ವಯಸ್ಸಿನಲ್ಲಿ ನಿಧನರಾದರು.

    ಪರಿಸರ ಕ್ಷೇತ್ರದ ಸಾಧನೆ

    • ಸಸ್ಯ ಪ್ರಭೇದ: ಇವರು ಪ್ರಮುಖವಾಗಿ ಆಲದ ಮರಗಳನ್ನು (ವೈಜ್ಞಾನಿಕ ಹೆಸರು: ಫಿಕಸ್ ಬೆಂಗಾಲೆನ್ಸಿಸ್) ನೆಟ್ಟರು.
    • ಸ್ಥಳ: ಹುಲಿಕಲ್ ಮತ್ತು ಕುಡುರು ನಡುವಿನ ರಾಜ್ಯ ಹೆದ್ದಾರಿ-94 ರ 4 ರಿಂದ 4.5 ಕಿ.ಮೀ ಉದ್ದದ ರಸ್ತೆಯ ಇಕ್ಕೆಲಗಳಲ್ಲಿ ಈ ಮರಗಳನ್ನು ನೆಟ್ಟು ಪೋಷಿಸಿದ್ದಾರೆ.
    • ಮರಗಳ ಸಂಖ್ಯೆ: ಈ ನಿರ್ದಿಷ್ಟ ಸಾಲಿನಲ್ಲಿ ಅವರು 385 ಆಲದ ಮರಗಳನ್ನು ನೆಟ್ಟು ಬೆಳೆಸಿದ್ದಾರೆ.
    • ಒಟ್ಟು ಕೊಡುಗೆ: ತಮ್ಮ ಜೀವಿತಾವಧಿಯಲ್ಲಿ ಅವರು ಒಟ್ಟಾರೆಯಾಗಿ 8,000 ಕ್ಕೂ ಹೆಚ್ಚು ಮರಗಳನ್ನು ನೆಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ.
    • ವಿಧಾನ : ಸಸಿಗಳ ರಕ್ಷಣೆಗಾಗಿ ಮುಳ್ಳಿನ ಪೊದೆಗಳನ್ನು ಬೇಲಿಯನ್ನಾಗಿ ಬಳಸುತ್ತಿದ್ದರು ಮತ್ತು ಪ್ರತಿದಿನ 4 ಕಿಲೋಮೀಟರ್‌ಗಳಷ್ಟು ದೂರ ನಡೆದು, ಕೊಡಗಳಲ್ಲಿ ನೀರು ಹೊತ್ತು ತಂದು ಸಸಿಗಳಿಗೆ ಉಣಿಸುತ್ತಿದ್ದರು.

    ಪ್ರಮುಖ ಪ್ರಶಸ್ತಿಗಳು ಮತ್ತು ಮನ್ನಣೆಗಳು

    • ಸಂಪುಟ ದರ್ಜೆ ಸ್ಥಾನಮಾನ(2022): ಕರ್ನಾಟಕ ಸರ್ಕಾರವು ಇವರಿಗೆ ಸಚಿವ ಸಂಪುಟ ದರ್ಜೆ ಸ್ಥಾನಮಾನದೊಂದಿಗೆ “ಪರಿಸರ ರಾಯಭಾರಿ” ಎಂಬ ಗೌರವವನ್ನು ನೀಡಿತ್ತು.
    • ಪದ್ಮಶ್ರೀ (2019): ಅಂದಿನ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಂದ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ‘ಪದ್ಮಶ್ರೀ’ ಪ್ರಶಸ್ತಿಯನ್ನು ಇವರು ಸ್ವೀಕರಿಸಿದರು.
    • ಬಿಬಿಸಿ 100 ಮಹಿಳೆಯರು (2016): ಬಿಬಿಸಿ ಸಂಸ್ಥೆಯು ಪಟ್ಟಿ ಮಾಡಿದ ವಿಶ್ವದ ಅತ್ಯಂತ ಪ್ರಭಾವಶಾಲಿ ಮತ್ತು ಸ್ಫೂರ್ತಿದಾಯಕ ಮಹಿಳೆಯರ ಪಟ್ಟಿಯಲ್ಲಿ ಇವರು ಸ್ಥಾನ ಪಡೆದಿದ್ದರು.
    • ನಾಡೋಜ ಪ್ರಶಸ್ತಿ (2010): ಹಂಪಿ ಕನ್ನಡ ವಿಶ್ವವಿದ್ಯಾಲಯವು ಇವರಿಗೆ ಪ್ರತಿಷ್ಠಿತ ‘ನಾಡೋಜ’ ಪ್ರಶಸ್ತಿ ನೀಡಿ ಗೌರವಿಸಿದೆ.
    • ರಾಷ್ಟ್ರೀಯ ನಾಗರಿಕರ ಪ್ರಶಸ್ತಿ (1995): ತಳಮಟ್ಟದಲ್ಲಿ ಇವರು ಮಾಡಿದ ಪರಿಸರ ಸೇವೆಗಾಗಿ ಭಾರತ ಸರ್ಕಾರವು ಈ ಪ್ರಶಸ್ತಿ ನೀಡಿ ಗೌರವಿಸಿತು.
    • ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ (1997): ಅರಣ್ಯೀಕರಣಕ್ಕೆ ನೀಡಿದ ಅನನ್ಯ ಕೊಡುಗೆಗಾಗಿ ಇವರು ಈ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದರು.
    • ಅಂತರರಾಷ್ಟ್ರೀಯ ಗೌರವ: ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿರುವ ಪರಿಸರ ಸಂಸ್ಥೆಯೊಂದಕ್ಕೆ “ತಿಮ್ಮಕ್ಕಾಸ್ ರಿಸೋರ್ಸಸ್ ಫಾರ್ ಎನ್ವಿರಾನ್ಮೆಂಟಲ್ ಎಜುಕೇಶನ್” ಎಂದು ಹೆಸರಿಡುವ ಮೂಲಕ ಗೌರವ ಸೂಚಿಸಲಾಗಿದೆ.

    ಸರ್ಕಾರದ ಉಪಕ್ರಮಗಳು ಮತ್ತು ಪರಂಪರೆ

    • ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನ: ರಾಜ್ಯದಲ್ಲಿ ಹಸಿರು ಹೊದಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ, ಕರ್ನಾಟಕ ರಾಜ್ಯ ಸರ್ಕಾರವು ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ತಿಮ್ಮಕ್ಕನವರ ಹೆಸರಿನಲ್ಲಿ ವೃಕ್ಷ ಉದ್ಯಾನವನವನ್ನು ಸ್ಥಾಪಿಸಿದೆ.
    • ಮರಗಳ ಸಂರಕ್ಷಣೆ: 2019 ರಲ್ಲಿ, ಬಾಗೇಪಲ್ಲಿ-ಹಲಗೂರು ರಸ್ತೆ ಅಗಲೀಕರಣ ಯೋಜನೆಯನ್ನು ಜಾರಿಗೊಳಿಸುವಾಗ, ತಿಮ್ಮಕ್ಕನವರು ನೆಟ್ಟ ಪಾರಂಪರಿಕ ಆಲದ ಮರಗಳನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಯೋಜನೆಯ ನಕ್ಷೆಯನ್ನೇ ಬದಲಾಯಿಸಲಾಯಿತು.
    • ಸ್ಮಾರಕ ನಿಧಿ (2025): ತಿಮ್ಮಕ್ಕ ಅವರ ನಿಧನದ ನಂತರ, ಅವರ ಹೆಸರಿನಲ್ಲಿ ವಾರ್ಷಿಕ ಪರಿಸರ ಪ್ರಶಸ್ತಿಯನ್ನು ಸ್ಥಾಪಿಸಲು ಕರ್ನಾಟಕ ಸರ್ಕಾರವು ₹1 ಕೋಟಿಗಳ ‘ಮೂಲ ನಿಧಿ’ಯನ್ನು ಘೋಷಿಸಿದೆ.

    114 ಸಸಿಗಳು: ನಿಧನದ ವೇಳೆಗಿದ್ದ ಅವರ ವಯಸ್ಸಿನ ಗೌರವಾರ್ಥವಾಗಿ, ಸರ್ಕಾರವು ರಾಜ್ಯದ ಆಯ್ದ ವಿಶಿಷ್ಟ ಸ್ಥಳಗಳಲ್ಲಿ 114 ಸಸಿಗಳನ್ನು ನೆಡುವುದಾಗಿ ಘೋಷಿಸಿದೆ.

  • RISE ಉಪಕ್ರಮ | ಆಪರೇಷನ್ ಪವನ್

    RISE ಉಪಕ್ರಮ

    ಸಾಮಾನ್ಯ ಅಧ್ಯಯನ-3/ ಪರಿಸರ

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚೆಗೆ, ಐಐಟಿ ಖರಗ್‌ಪುರ “ಇಂಪ್ಯಾಕ್ಟ್ RISE” (R-ಸಂಶೋಧನೆ, I-ನಾವೀನ್ಯತೆ, S-ಕೌಶಲ್ಯ ಮತ್ತು E-ಉದ್ಯಮಶೀಲತೆ) ಎಂಬ ಹೊಸ ಉಪಕ್ರಮವನ್ನು ಪ್ರಾರಂಭಿಸಿದೆ.

    RISE ಉಪಕ್ರಮದ ಬಗ್ಗೆ:

    • ಧ್ಯೇಯೋದ್ದೇಶ:- ಈ ಉಪಕ್ರಮವು ಸಾಮಾಜಿಕ ಪರಿವರ್ತನೆಗಾಗಿ ಸುಸ್ಥಿರ ತಂತ್ರಜ್ಞಾನ ಮತ್ತು ಸುಧಾರಿತ ನಿರ್ವಹಣಾ ಪದ್ಧತಿಗಳ ಮೇಲೆ ಕೇಂದ್ರೀಕರಿಸುತ್ತದೆ.
    • ನಾಲ್ಕು ಪ್ರಮುಖ ಆಧಾರಸ್ಥಂಭಗಳು: ಈ ಯೋಜನೆಯು ಸಂಶೋಧನೆ, ನಾವೀನ್ಯತೆ, ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಎಂಬ ನಾಲ್ಕು ಪ್ರಮುಖ ಆಯಾಮಗಳನ್ನು ಆಧರಿಸಿದೆ.
    • ಮಹತ್ವ:- ಇದು ಸುಸ್ಥಿರ ಅಭಿವೃದ್ಧಿ ಗುರಿಗಳು ಮತ್ತು ಭಾರತದ ಹವಾಮಾನ ಮತ್ತು ಅಭಿವೃದ್ಧಿ ಆದ್ಯತೆಗಳಿಗೆ ಅನುಗುಣವಾಗಿ ಸಂಶೋಧನೆಯನ್ನು ಒಳಗೊಂಡಿರುತ್ತದೆ.

    ಆಪರೇಷನ್ ಪವನ್

    ರಕ್ಷಣೆ

    ಇದೀಗ ಸುದ್ದಿಯಲ್ಲಿದೆ: 

    • ಶ್ರೀಲಂಕಾದಲ್ಲಿ ನಡೆದ ‘ಆಪರೇಷನ್ ಪವನ್’ (1987–1990) ಕಾರ್ಯಾಚರಣೆಯ ಅವಧಿಯಲ್ಲಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರ ಯೋಧರಿಗೆ ಭಾರತೀಯ ಭೂಸೇನಾ ಮುಖ್ಯಸ್ಥರಾದ ಜನರಲ್ ಉಪೇಂದ್ರ ದ್ವಿವೇದಿ ಅವರು ಗೌರವ ನಮನ ಸಲ್ಲಿಸಿದರು.

    ‘ಆಪರೇಷನ್ ಪವನ್’ (1987–1990) ಕಾರ್ಯಾಚರಣೆಯ ಬಗ್ಗೆ:

    • ಭಾರತ-ಶ್ರೀಲಂಕಾ ಒಪ್ಪಂದಕ್ಕೆ ಸಹಿ ಹಾಕಿದ ನಂತರ, 1987 ರಲ್ಲಿ ಅಂದಿನ ರಾಜೀವ್ ಗಾಂಧಿ ನೇತೃತ್ವದ ಸರ್ಕಾರವು ಈ ಕಾರ್ಯಾಚರಣೆಯನ್ನು ಹಮ್ಮಿಕೊಂಡಿತ್ತು.
    • ಶ್ರೀಲಂಕಾದ ಅಲ್ಪಸಂಖ್ಯಾತ ತಮಿಳು ಸಮುದಾಯ ಮತ್ತು ಸಿಂಹಳೀಯ ಬಹುಸಂಖ್ಯಾತ ಸರ್ಕಾರದ ನಡುವೆ ನಡೆಯುತ್ತಿದ್ದ ಅಂತರ್ಯುದ್ಧದ ವೇಳೆ, ಶಾಂತಿ ಸ್ಥಾಪನೆಗಾಗಿ ಭಾರತವು ತನ್ನ ‘ಭಾರತೀಯ ಶಾಂತಿ ಪಾಲನಾ ಪಡೆ’ (IPKF)ಯನ್ನು ನಿಯೋಜಿಸಿತ್ತು.

    ಭಾರತದ ತೀವ್ರ ಕಳವಳಕ್ಕೆ ಕಾರಣಗಳು:

    • ತಮಿಳುನಾಡಿನೊಂದಿಗೆ ತಮಿಳು ಸಮುದಾಯಕ್ಕಿದ್ದ ಜನಾಂಗೀಯ ಮತ್ತು ಸಾಂಸ್ಕೃತಿಕ ಬಾಂಧವ್ಯ.
    • ದ್ವೀಪರಾಷ್ಟ್ರದಲ್ಲಿ ಮಿತಿಮೀರುತ್ತಿದ್ದ ಹಿಂಸಾಚಾರ.
    • ಭಾರತಕ್ಕೆ ನಿರಾಶ್ರಿತರ ಒಳಹರಿವು ನಿರಂತರವಾಗಿ ಹೆಚ್ಚಾಗುತ್ತಿರುವುದು.

    ನಿಮಗಿದು ತಿಳಿದಿದೆಯೇ?

    • ಮೇ 18, 2009 ರಂದು ‘ಲಿಬರೇಷನ್ ಟೈಗರ್ಸ್ ಆಫ್ ತಮಿಳು ಈಲಂ’ (LTTE) ಸಂಘಟನೆಯ ಸೋಲಿನೊಂದಿಗೆ ಶ್ರೀಲಂಕಾದ ದಶಕಗಳ ಕಾಲದ ಅಂತರ್ಯುದ್ಧವು ಕೊನೆಗೊಂಡಿತು.
    • ಭಾರತವು ಕಳೆದ ಹಲವು ದಶಕಗಳಿಂದ ಆಪರೇಷನ್ ಪವನ್ ಅನ್ನು ಅಧಿಕೃತವಾಗಿ ಸ್ಮರಿಸಿರಲಿಲ್ಲ. ಆದರೆ, ಶ್ರೀಲಂಕಾ ಸರ್ಕಾರವು ಕೊಲಂಬೊದಲ್ಲಿ ‘ಭಾರತೀಯ ಶಾಂತಿ ಪಾಲನಾ ಪಡೆ’ (IPKF) ಯ ಸ್ಮಾರಕವನ್ನು ನಿರ್ವಹಿಸುತ್ತಾ ಬಂದಿದೆ.
    • ಪ್ರಸ್ತುತ, ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಬಲಿದಾನಗೈದ ಯೋಧರ ತ್ಯಾಗವನ್ನು ಭಾರತೀಯ ಸೇನೆಯು ಅಧಿಕೃತವಾಗಿ ಗುರುತಿಸುವ ಮೂಲಕ ತನ್ನ ನಿಲುವಿನಲ್ಲಿ ಮಹತ್ವದ ಬದಲಾವಣೆ ತಂದಿದೆ.
  • ಚಾಮರಾಜನಗರದಲ್ಲಿ ಬೃಹತ್ ಶಿಲಾಯುಗದ ಉತ್ಖನನ: ಅಪರೂಪದ ಶವಸಂಸ್ಕಾರ ಪದ್ಧತಿ ಮತ್ತು ಶಿಲಾ ಕಲೆ ಪತ್ತೆ

    ಚಾಮರಾಜನಗರದಲ್ಲಿ ಬೃಹತ್ ಶಿಲಾಯುಗದ ಉತ್ಖನನ: ಅಪರೂಪದ ಶವಸಂಸ್ಕಾರ ಪದ್ಧತಿ ಮತ್ತು ಶಿಲಾ ಕಲೆ ಪತ್ತೆ

    ಇದೀಗ ಸುದ್ದಿಯಲ್ಲಿದೆ:

    • ಚಾಮರಾಜನಗರ ಜಿಲ್ಲೆಯ ದೊಡ್ಡಾಲತ್ತೂರಿನಲ್ಲಿ ನಡೆದ ಇತ್ತೀಚಿನ ಉತ್ಖನನಗಳು, ದಕ್ಷಿಣ ಕರ್ನಾಟಕದ ಆರಂಭಿಕ ಬೃಹತ್ ಶಿಲಾಯುಗದ ಶವಸಂಸ್ಕಾರ ಪದ್ಧತಿ ಮತ್ತು ಸಂಪ್ರದಾಯಗಳ ಮೇಲೆ ಹೊಸ ಬೆಳಕು ಚೆಲ್ಲಿವೆ. 
    • ಇಲ್ಲಿ ಕಂಡುಬಂದಿರುವ ಅಸಾಮಾನ್ಯ ವಿನ್ಯಾಸಗಳು ಮತ್ತು ಬಂಡೆಗಳ ಮೇಲಿನ ಅಪರೂಪದ ಕೆತ್ತನೆಗಳು ಐತಿಹಾಸಿಕವಾಗಿ ಮಹತ್ವದ್ದಾಗಿವೆ.

    ಸ್ಥಳ ಮತ್ತು ಹಿನ್ನೆಲೆ:

    • ಹನೂರು ತಾಲೂಕಿನ ಕೌದಳ್ಳಿಯ ನೈಋತ್ಯಕ್ಕೆ 5 ಕಿ.ಮೀ ದೂರದಲ್ಲಿರುವ ದೊಡ್ಡಾಲತ್ತೂರು, ಈ ಪ್ರದೇಶದಲ್ಲಿ ಸುಸ್ಥಿತಿಯಲ್ಲಿರುವ ಕೆಲವೇ ಕೆಲವು ಬೃಹತ್ ಶಿಲಾಯುಗದ ತಾಣಗಳಲ್ಲಿ ಒಂದಾಗಿದೆ. ಇಲ್ಲಿ ಹೆಚ್ಚಿನ ಸಂಖ್ಯೆಯ ಸಮಾಧಿಗಳು ಕಂಡು ಬರುತ್ತವೆ.

    ಉತ್ಖನನದ ಪ್ರಮುಖಾಂಶಗಳು

    • ಸಮಾಧಿಗಳ ವಿಧಗಳು:- ಉತ್ಖನನದಲ್ಲಿ ಒಟ್ಟು 13 ಸಮಾಧಿಗಳನ್ನು ಪತ್ತೆಹಚ್ಚಲಾಗಿದೆ. ಇವು ವಿವಿಧ ವ್ಯಾಸದ ನೈಸರ್ಗಿಕ ಬಂಡೆಗಳಿಂದ ನಿರ್ಮಿಸಲಾದ ‘ಶಿಲಾವೃತ್ತಗಳು’ ಮತ್ತು ‘ಶಿಲೆಗಳ ರಾಶಿಯ  ವೃತ್ತಗಳನ್ನು’  ಒಳಗೊಂಡಿವೆ. 
    • ಇವುಗಳಲ್ಲಿ ನಾಲ್ಕು ‘ಕಲ್ಮನೆ ಸಮಾಧಿಗಳು’ ಆಗಿದ್ದರೆ, ಉಳಿದವು ‘ಬರಣಿ ಸಮಾಧಿಗಳು’ ಆಗಿವೆ.
    • ಪತ್ತೆಯಾದ ಅವಶೇಷಗಳು:- ಬೃಹತ್ ಶಿಲಾಯುಗಕ್ಕೆ ವಿಶಿಷ್ಟವಾದ ಕಪ್ಪು ಮತ್ತು ಕೆಂಪು ಮಡಕೆಗಳು , ಕಪ್ಪು ಮಡಕೆಗಳು, ಕೆಂಪು ಮಡಕೆಗಳು ಹಾಗೂ ಕಬ್ಬಿಣದ ವಸ್ತುಗಳು ಇಲ್ಲಿ ದೊರೆತಿವೆ. ಜೊತೆಗೆ ಅಸ್ಥಿಪಂಜರ ಮತ್ತು ಪ್ರಾಣಿಗಳ ಅವಶೇಷಗಳು ಹಾಗೂ ಕೆಲವು ಮಣಿಗಳು ಕೂಡ ಲಭ್ಯವಾಗಿವೆ.
    • ವಿಶೇಷ ಆವಿಷ್ಕಾರ: ಸಂಶೋಧಕರ ಪ್ರಕಾರ, ಇಲ್ಲಿ ಪತ್ತೆಯಾದ ಅತ್ಯಂತ ಕುತೂಹಲಕಾರಿ ವಸ್ತುವೆಂದರೆ ಕಬ್ಬಿಣದ ವಸ್ತು. ಇದು ವೃತ್ತಾಕಾರದಲ್ಲಿದ್ದು, ಎರಡೂ ಬದಿಗಳಲ್ಲಿ ಎರಡು ಕುಣಿಕೆಗಳನ್ನು ಹೊಂದಿದೆ ಮತ್ತು ಇದು ಕಬ್ಬಿಣದ ಗುರಾಣಿಯನ್ನು ಹೋಲುತ್ತದೆ.
    • ಈ ಸಮಾಧಿಯಲ್ಲಿ ಕೊಡಲಿ, ಬಾಣ ಮತ್ತು ಎರಡು ಬಾಯಿಯ ಕತ್ತಿಯಂತಹ ಕಬ್ಬಿಣದ ಆಯುಧಗಳು ಪತ್ತೆಯಾಗಿವೆ. ಇದೇ ಸಮಾಧಿಯ ಬಂಡೆಗಳ ಮೇಲೆ ಮಾನವ ಆಕೃತಿಗಳನ್ನು ಕೆತ್ತಲಾಗಿದೆ. 
    • ಕರ್ನಾಟಕದ ಈ ಭಾಗದಲ್ಲಿ ಶಿಲಾ ಕಲೆ ಅಪರೂಪವಾಗಿರುವುದರಿಂದ ಈ ಆವಿಷ್ಕಾರವು ಐತಿಹಾಸಿಕವಾಗಿ ಮಹತ್ವದ್ದಾಗಿದೆ.
    • ಕಾಲನಿರ್ಣಯ:- ಬರಣಿ ಮತ್ತು ಕಲ್ಮನೆ ಸಮಾಧಿಗಳಿಂದ ಸಂಗ್ರಹಿಸಲಾದ ಇದ್ದಿಲಿನ ಮಾದರಿಗಳನ್ನು ‘AMS ಕಾರ್ಬನ್-14 ವಿಶ್ಲೇಷಣೆ’ಗೆ  ಒಳಪಡಿಸಲಾಗಿದೆ. ಇದರನ್ವಯ, ಈ ಸಮಾಧಿಗಳು ಕ್ರಿ.ಪೂ. 6 ನೇ ಶತಮಾನದಿಂದ ಕ್ರಿ.ಶ. 4 ನೇ ಶತಮಾನದ ಕಾಲಘಟ್ಟಕ್ಕೆ ಸೇರಿವೆ ಎಂದು ನಿರ್ಧರಿಸಲಾಗಿದೆ. ಇದು ಪರ್ಯಾಯ ದ್ವೀಪ ಭಾರತದ ಇತರೆಡೆಗಳಲ್ಲಿ ಕಂಡುಬರುವ ಬೃಹತ್ ಶಿಲಾಯುಗದ ವಾಸಸ್ಥಾನದ ಹಂತಗಳೊಂದಿಗೆ ಹೊಂದಿಕೆಯಾಗುತ್ತದೆ.
  • ನಯೀ ಚೇತನಾ 4.0

    ನಯೀ ಚೇತನಾ 4.0

    ಸಾಮಾನ್ಯ ಅಧ್ಯಯನ-2/ ಆರೋಗ್ಯ ಮತ್ತು ಸಮಾಜ

    ಇದೀಗ ಸುದ್ದಿಯಲ್ಲಿದೆ:

    • ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಾದ ಶಿವ್‌ರಾಜ್ ಸಿಂಗ್ ಚೌಹಾಣ್ ಅವರು “ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ”ವನ್ನು ಉತ್ತೇಜಿಸುವ ಉದ್ದೇಶದಿಂದ ‘ನಯಿ ಚೇತನಾ 4.0’ ಎಂಬ ರಾಷ್ಟ್ರೀಯ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

    ನಯೀ ಚೇತನಾ 4.0 ಅಭಿಯಾನದ ಬಗ್ಗೆ:

    • ಆಯೋಜಕರು:- ಇದು ಒಂದು ತಿಂಗಳ ಕಾಲ ನಡೆಯುವ ಅಭಿಯಾನವಾಗಿದ್ದು, ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಡಿಯಲ್ಲಿನ ದೀನ್ ದಯಾಳ್ ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಗುರಿ (DAY-NRLM) ವತಿಯಿಂದ ಆಯೋಜಿಸಲ್ಪಟ್ಟಿದೆ.
    • ಅನುಷ್ಠಾನ ಸಚಿವಾಲಯ:- ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರು
    • ಧ್ಯೇಯೋದ್ದೇಶ:- ಗ್ರಾಮೀಣ ಭಾರತದಲ್ಲಿ ಲಿಂಗ ಆಧಾರಿತ ದೌರ್ಜನ್ಯದ ವಿರುದ್ಧ ಸಮುದಾಯದ ಕ್ರಿಯೆಯನ್ನು ಬಲಪಡಿಸುವುದು ಹಾಗೂ ಮಹಿಳೆಯರ ಸುರಕ್ಷತೆ, ಘನತೆ ಮತ್ತು ಆರ್ಥಿಕ ಸಬಲೀಕರಣವನ್ನು ಉತ್ತೇಜಿಸುವುದು.
    • ಮಹತ್ವ:- ಈ ಅಭಿಯಾನವು ಮಹಿಳೆಯರ ಸುರಕ್ಷಿತ ಸಂಚಾರವನ್ನು ಸಕ್ರಿಯಗೊಳಿಸುವುದು, ಅವರನ್ನು ಪ್ರಮುಖ ಆರ್ಥಿಕ ಕೊಡುಗೆದಾರರೆಂದು ಗುರುತಿಸುವುದು ಮತ್ತು ಹಂಚಿಕೆಯ ಸಮುದಾಯ ಜವಾಬ್ದಾರಿಯ ಮೂಲಕ ಸಂಭಾವನೆ ರಹಿತ ಶುಶ್ರೂಷಾ ಕೆಲಸಗಳನ್ನು ಪರಿಹರಿಸುವುದರ ಮೇಲೆ ಕೇಂದ್ರೀಕರಿಸುತ್ತದೆ.
  • ಕರ್ನಾಟಕ ವಿಕಲಚೇತನರ ಹಕ್ಕುಗಳ ಮಸೂದೆ, 2025

    ಕರ್ನಾಟಕ ವಿಕಲಚೇತನರ ಹಕ್ಕುಗಳ ಮಸೂದೆ, 2025

    ಇದೀಗ ಸುದ್ದಿಯಲ್ಲಿದೆ:

    • ಹೊಸ ಕರ್ನಾಟಕ ವಿಕಲಚೇತನರ ಹಕ್ಕುಗಳ ಮಸೂದೆ, 2025 ರ ಮೂಲಕ ವಿಕಲಚೇತನರ ಹಕ್ಕುಗಳನ್ನು ವಿಸ್ತರಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ.

    ಮಸೂದೆಯ ಪ್ರಮುಖಾಂಶಗಳು:

    • ಉದ್ಯೋಗ ಮೀಸಲಾತಿ: 20 ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ರಾಜ್ಯದ ಎಲ್ಲಾ ಖಾಸಗಿ ಸಂಸ್ಥೆಗಳಲ್ಲಿ ವಿಕಲಚೇತನರಿಗೆ ಶೇ. 5 ರಷ್ಟು ಮೀಸಲಾತಿಯನ್ನು ಕಲ್ಪಿಸುವ ‘ಉದ್ಯೋಗ ಮತ್ತು ಶಿಕ್ಷಣದಲ್ಲಿ ಕರ್ನಾಟಕ ವಿಕಲಚೇತನರ ಹಕ್ಕುಗಳ ಮಸೂದೆ, 2025’ ರ ಕರಡನ್ನು ರಾಜ್ಯ ಸರ್ಕಾರವು ಬಿಡುಗಡೆ ಮಾಡಿದೆ.
    • ಶೈಕ್ಷಣಿಕ ಮೀಸಲಾತಿ: ಶಿಕ್ಷಣ ಸಂಸ್ಥೆಗಳು ಪ್ರತಿ ಕೋರ್ಸ್‌ನಲ್ಲಿ ಶೇ. 10 ರಷ್ಟು ಆಸನಗಳನ್ನು ವಿಕಲಚೇತನ ವಿದ್ಯಾರ್ಥಿಗಳಿಗೆ ಕಾಯ್ದಿರಿಸುವುದನ್ನು ಈ ಕರಡು ಮಸೂದೆ ಕಡ್ಡಾಯಗೊಳಿಸಿದೆ. ಉದ್ಯೋಗ ಮತ್ತು ಉನ್ನತ ಶಿಕ್ಷಣದಲ್ಲಿ ಒಳಗೊಳ್ಳುವಿಕೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ.

    ಅನುಷ್ಠಾನದ ವಿವರಗಳು

    1. ಹಂತ-ಹಂತವಾಗಿ ಜಾರಿ: ಕರಡು ಮಸೂದೆಯು ಖಾಸಗಿ ವಲಯದಲ್ಲಿ ಶೇ. 5 ರಷ್ಟು ಉದ್ಯೋಗ ಮೀಸಲಾತಿಯನ್ನು ಹಂತಹಂತವಾಗಿ ಜಾರಿಗೆ ತರಲು ನಿರ್ಧರಿಸಿದೆ.
    2. ನಿಯಂತ್ರಣ ಮತ್ತು ವರದಿ: ಪ್ರಸ್ತಾಪಿತ ರಾಜ್ಯ ನಿಯಂತ್ರಕ ಪ್ರಾಧಿಕಾರವು ಸೂಚಿಸುವ ಮಾನದಂಡಗಳ ಆಧಾರದ ಮೇಲೆ ಕಂಪನಿಗಳು ಈ ಹುದ್ದೆಗಳನ್ನು ಹಂಚಿಕೆ ಮಾಡಬೇಕು. ಸಂಸ್ಥೆಗಳು ವಾರ್ಷಿಕ ಅನುಸರಣಾ ವರದಿಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಭರ್ತಿಯಾಗದ ಹುದ್ದೆಗಳನ್ನು ಮುಂದಿನ ಮೂರು ನೇಮಕಾತಿಗಳವರೆಗೆ ಮುಂದುವರೆಸಲು ಅವಕಾಶವಿದೆ.
    3. ವಿನಾಯಿತಿಗಳು : ಸಮಂಜಸವಾದ ಸೌಕರ್ಯಗಳನ್ನು ಒದಗಿಸಿದಾಗಲೂ, ಅತ್ಯಗತ್ಯ ಉದ್ಯೋಗ ಕಾರ್ಯಗಳನ್ನು ನಿರ್ವಹಿಸಲು ಅಸಾಧ್ಯವಾದ ಸಂದರ್ಭಗಳಲ್ಲಿ ಮಾತ್ರ ವಿನಾಯಿತಿಗಳನ್ನು ನೀಡಲಾಗುತ್ತದೆ.
    4. ಶಿಕ್ಷಣದಲ್ಲಿ ನಿರ್ದಿಷ್ಟತೆ: ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಮಸೂದೆಯು ಶೇ. 10 ರಷ್ಟು ಮೀಸಲಾತಿಯನ್ನು ‘ಸಂಸ್ಥೆಯ ಮಟ್ಟದಲ್ಲಿ’ ಅನ್ವಯಿಸದೆ, ‘ಕೋರ್ಸ್-ನಿರ್ದಿಷ್ಟವಾಗಿ’  ಜಾರಿಗೊಳಿಸಲು ಸೂಚಿಸಿದೆ. ಕಾಲೇಜುಗಳು ವಿವಿಧ ವಿಭಾಗಗಳ ಸೀಟುಗಳನ್ನು ಸರಾಸರಿ ಮಾಡಿ ಮೀಸಲಾತಿ ಪ್ರಮಾಣವನ್ನು ತಗ್ಗಿಸುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.
  • ಡಾ. ವರ್ಗೀಸ್ ಕುರಿಯನ್

    ಡಾ. ವರ್ಗೀಸ್ ಕುರಿಯನ್

    ಸಾಮಾನ್ಯ ಅಧ್ಯಯನ-3/ ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ: 

    • ಪ್ರತಿ ವರ್ಷ ನವೆಂಬರ್ 26 ರಂದು ಡಾ. ವರ್ಗೀಸ್ ಕುರಿಯನ್ ಅವರ ಜನ್ಮದಿನಾಚರಣೆಯನ್ನು ಸ್ಮರಿಸಲಾಗುತ್ತದೆ.

    ಡಾ.ವರ್ಗೀಸ್ ಕುರಿಯನ್ (1921-2012) ಅವರ ಬಗ್ಗೆ:

    • ಶ್ವೇತಕ್ರಾಂತಿಯ ಪಿತಾಮಹ:- ಇವರು ಭಾರತದ ಶ್ವೇತಕ್ರಾಂತಿಯ ಮುಖ್ಯ ರೂವಾರಿಯಾಗಿದ್ದು, ಇವರನ್ನು “ಶ್ವೇತಕ್ರಾಂತಿಯ ಪಿತಾಮಹ” ಎಂದು ಗೌರವಿಸಲಾಗುತ್ತದೆ.
    • ಆಪರೇಷನ್ ಫ್ಲಡ್:- ಕೇರಳದ ಕೋಝಿಕ್ಕೋಡ್‌ನಲ್ಲಿ ಜನಿಸಿದ ಇವರು , 1970 ರಲ್ಲಿ ‘ಆಪರೇಷನ್ ಫ್ಲಡ್’ ನ ನೇತೃತ್ವ ವಹಿಸಿದರು. ಇದರ ಯಶಸ್ಸಿನಿಂದಾಗಿ ಹಾಲಿನ ಕೊರತೆ ಎದುರಿಸುತ್ತಿದ್ದ ಭಾರತವು ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ದೇಶವಾಗಿ ಮಾರ್ಪಟ್ಟಿತು.
    • ಆನಂದ್ ಸಹಕಾರಿ ಮಾದರಿ:- ಡಾ. ವರ್ಗೀಸ್ ಕುರಿಯನ್ ಅವರು ಅಮುಲ್ ಮೂಲಕ ಯಶಸ್ವಿಯಾದ ‘ಆನಂದ್ ಸಹಕಾರಿ ಮಾದರಿ’ಯನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಮಾದರಿಯು ದೇಶಾದ್ಯಂತ ಡೈರಿ ಕ್ಷೇತ್ರದ ಅಭಿವೃದ್ಧಿಗೆ ಸಮರ್ಥವಾದ ನೀಲನಕ್ಷೆಯಾಗಿ ಹೊರಹೊಮ್ಮಿತು.
    • ಸಂಸ್ಥೆಗಳ ಸ್ಥಾಪನೆ: ಇವರ ಸಕ್ರಿಯ ಶ್ರಮದಿಂದಾಗಿ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ ಮತ್ತು ‘ಆನಂದ್‌’ನಲ್ಲಿರುವ ಗ್ರಾಮೀಣ ನಿರ್ವಹಣಾ ಸಂಸ್ಥೆಯಂತಹ ಪ್ರಮುಖ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದವು.
    • ಖಾದ್ಯ ತೈಲ ಉದ್ಯಮ:- 1979 ರಲ್ಲಿ ‘ಧಾರಾ’ ಬ್ರ್ಯಾಂಡ್ ಅನ್ನು ಪ್ರಾರಂಭಿಸುವ ಮೂಲಕ ಡಾ. ಕುರಿಯನ್ ಅವರು ಖಾದ್ಯ ತೈಲ ಉದ್ಯಮದಲ್ಲೂ ಕ್ರಾಂತಿಕಾರಿ ಬದಲಾವಣೆ ತಂದರು.
    • ಪ್ರಮುಖ ಪ್ರಶಸ್ತಿಗಳು: ಪದ್ಮವಿಭೂಷಣ, ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಮತ್ತು ವಿಶ್ವ ಆಹಾರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
  • ಉಡುಪಿ ಜಿಲ್ಲೆಯಲ್ಲಿ ಬೃಹತ್ ಶಿಲಾಯುಗದ ಮೆನ್ಹಿರ್‌ಗಳ ಪತ್ತೆ

    ಉಡುಪಿ ಜಿಲ್ಲೆಯಲ್ಲಿ ಬೃಹತ್ ಶಿಲಾಯುಗದ ಮೆನ್ಹಿರ್‌ಗಳ ಪತ್ತೆ

    ಇದೀಗ ಸುದ್ದಿಯಲ್ಲಿದೆ:

    • ಉಡುಪಿಯ ಆದಿಮ ಕಲಾ ಟ್ರಸ್ಟ್ (ರಿ.) ಕುಂದಾಪುರ ಪ್ರದೇಶದಲ್ಲಿ ಇತ್ತೀಚೆಗೆ ಕೈಗೊಂಡ ಪುರಾತತ್ವ ಅನ್ವೇಷಣೆಗಳಲ್ಲಿ ಎರಡು ಮೆನ್ಹಿರ್‌ಗಳನ್ನು ಪತ್ತೆಹಚ್ಚಲಾಗಿದೆ. 
    • ಸ್ಥಳೀಯವಾಗಿ ನಿಲ್ಸಕಲ್ಲು ಅಥವಾ ‘ಸ್ವತಂತ್ರವಾಗಿ ನಿಂತಿರುವ ಕಲ್ಲುಗಳು’ ಎಂದು ಕರೆಯಲ್ಪಡುವ ಈ ರಚನೆಗಳು, ಬೃಹತ್ ಶಿಲಾಯುಗದ ಅವಧಿಗೆ ಸೇರಿವೆ ಎಂದು ತಜ್ಞರು ಗುರುತಿಸಿದ್ದಾರೆ.

    ಪತ್ತೆಯಾದ ಸ್ಥಳಗಳು ಮತ್ತು ಅಳತೆಗಳು:

    ಈ ಎರಡು ಮೆನ್ಹಿರ್‌ಗಳು ಪ್ರತ್ಯೇಕ ಗ್ರಾಮಗಳಲ್ಲಿ ಪತ್ತೆಯಾಗಿದ್ದು, ವಿಶಿಷ್ಟ ಆಯಾಮಗಳನ್ನು ಹೊಂದಿವೆ:

    1. ಹಿಲ್ಕೋಡ್ ಮೆನ್ಹಿರ್: ನೇರಳಕಟ್ಟೆ-ಅಜ್ರಿ ರಸ್ತೆಯಲ್ಲಿರುವ ಹಿಲ್ಕೋಡ್‌ನಲ್ಲಿ ಒಂದು ಮೆನ್ಹಿರ್ ಪತ್ತೆಯಾಗಿದೆ. ಈ ನಿರ್ದಿಷ್ಟ ‘ನಿಲ್ಸ್ ಕಲ್’ ಸುಮಾರು 135 ಸೆಂ.ಮೀ ಎತ್ತರವಿದೆ.
    2. ಮಾವಿನಕೆರೆ ಮೆನ್ಹಿರ್: ಎರಡನೇ ಮೆನ್ಹಿರ್ ಕೆಂಚನೂರು ಗ್ರಾಮದ ಮಾವಿನಕೆರೆಯಲ್ಲಿ ಪತ್ತೆಯಾಗಿದೆ. ಇದು ಸುಮಾರು 112 ಸೆಂ.ಮೀ ಎತ್ತರವಿದ್ದು , ವಾಯುವ್ಯ ದಿಕ್ಕಿಗೆ ಸ್ವಲ್ಪ ವಾಲಿದಂತೆ ಕಂಡುಬರುತ್ತದೆ.

    “ನಿಲ್ಸಕಲ್ಲು” ಎಂದರೇನು?

    • ಭೂಮಿಯ ಮೇಲೆ ಲಂಭವಾಗಿ, ಸ್ವಲ್ಪ ವಾಲಿದಂತೆ ನಿಂತು ಬೃಹತ್ ಶಿಲಾಯುಗದ ಸಮಾಧಿಯ ಮೇಲೆ ಅಥವಾ ಸಮಾಧಿ ಸಮೀಪದಲ್ಲಿ ಮೃತರ ಸ್ಮರಣಾರ್ಥವಾಗಿ ನಿಲ್ಲಿಸಲಾದ ಒರಟಾದ ಬೃಹತ್ ಶಿಲೆಗಳನ್ನು ನಿಲ್ಸಕಲ್ಲು, ನಿಂತಿಕಲ್ಲು, ಗರ್ಭಿಣಿಕಲ್ಲು, ಆನೆಕಲ್ಲು, ರಕ್ಕಸಕಲ್ಲು ಹೆಸರುಗಳಿಂದ ಕರೆಯಲಾಗುತ್ತದೆ. ದಕ್ಷಿಣ ಭಾರತದೆಲ್ಲೆಡೆ ಇಂತಹ ಕಲ್ಲುಗಳು ಕಂಡುಬರುತ್ತವೆ.
  • ಸಂವಿಧಾನ ದಿನ

    ಸಂವಿಧಾನ ದಿನ

    (ಸಾಮಾನ್ಯ ಅಧ್ಯಯನ-2/ ರಾಜಕೀಯ ಮತ್ತು ಆಡಳಿತ)

    ಇದೀಗ ಸುದ್ದಿಯಲ್ಲಿದೆ: 

    • ಸಂವಿಧಾನ ರಚನಾ ಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಿದ ಸವಿನೆನಪಿಗಾಗಿ ಪ್ರತಿ ವರ್ಷ ನವೆಂಬರ್ 26 ರಂದು ‘ಸಂವಿಧಾನ ದಿನ’ವನ್ನಾಗಿ ಆಚರಿಸಲಾಗುತ್ತದೆ.

    ಸಂವಿಧಾನ ದಿನ (ಸಂವಿಧಾನ್ ದಿವಸ್ / ರಾಷ್ಟ್ರೀಯ ಕಾನೂನು ದಿನ) ದ ಬಗ್ಗೆ:

    • ಅಧಿಸೂಚನೆ:- 2015 ರಲ್ಲಿ, ಭಾರತ ಸರ್ಕಾರವು ಪ್ರತಿ ವರ್ಷ ನವೆಂಬರ್ 26 ಅನ್ನು ‘ಸಂವಿಧಾನ ದಿನ’ವನ್ನಾಗಿ ಆಚರಿಸುವ ನಿರ್ಧಾರವನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಮೂಲಕ ಅಧಿಕೃತವಾಗಿ ಪ್ರಕಟಿಸಿತು.
    • ಗೌರವ ಸಲ್ಲಿಕೆ:- ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಈ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ.

    ಐತಿಹಾಸಿಕ ಹಿನ್ನೆಲೆ:

    • 1934ರಲ್ಲಿ ಭಾರತಕ್ಕೆ ಪ್ರತ್ಯೇಕ “ಸಂವಿಧಾನ ರಚನಾ ಸಭೆ”ಯ ಅಗತ್ಯವಿದೆ ಎಂಬ ಬೇಡಿಕೆಯನ್ನು ಮೊದಲ ಬಾರಿಗೆ ಎಂ.ಎನ್. ರಾಯ್ ಅವರು ಮಂಡಿಸಿದರು.
    • 1940ರಲ್ಲಿ ಈ ಬೇಡಿಕೆಯನ್ನು ಬ್ರಿಟಿಷ್ ಸರ್ಕಾರವು ಅಂತಿಮವಾಗಿ ಅಂಗೀಕರಿಸಿತು.
    • ಡಿಸೆಂಬರ್ 9, 1946ರಂದು ಸಂವಿಧಾನದ ಕರಡು ಕುರಿತು ಚರ್ಚಿಸಲು ಸಂವಿಧಾನ ರಚನಾ ಸಭೆಯ ಮೊದಲ ಅಧಿವೇಶನ ನಡೆಯಿತು.
    • ನವೆಂಬರ್ 26, 1949ರಂದು ಸಂವಿಧಾನ ರಚನಾ ಸಭೆಯು ಭಾರತದ ಸಂವಿಧಾನವನ್ನು ಅಧಿಕೃತವಾಗಿ ಅಂಗೀಕರಿಸಿತು.
    • ಜನವರಿ 26, 1950ರಂದು ಭಾರತದ ಸಂವಿಧಾನವು ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿತು.

    ಸಂವಿಧಾನ ರಚನಾ ಸಭೆಯ ಪ್ರಮುಖಾಂಶಗಳು:

    • ಅವಧಿ:- ಭಾರತದ ಸಂವಿಧಾನವನ್ನು ಸಿದ್ಧಪಡಿಸಲು ಸಂವಿಧಾನ ರಚನಾ ಸಭೆಯು ಒಟ್ಟು 2 ವರ್ಷ, 11 ತಿಂಗಳು ಮತ್ತು 18 ದಿನಗಳನ್ನು ತೆಗೆದುಕೊಂಡಿತು.
    • ಅಧ್ಯಕ್ಷರು:-
      • ಸಂವಿಧಾನ ರಚನಾ ಸಭೆಯ ಮೊದಲ (ತಾತ್ಕಾಲಿಕ) ಅಧ್ಯಕ್ಷರಾಗಿ ಡಾ. ಸಚ್ಚಿದಾನಂದ ಸಿನ್ಹಾ ನೇಮಕಗೊಂಡಿದ್ದರು.
      • ನಂತರ ಡಾ. ರಾಜೇಂದ್ರ ಪ್ರಸಾದ್ ಅವರು ಸಂವಿಧಾನ ರಚನಾ ಸಭೆಯ ಕಾಯಂ ಅಧ್ಯಕ್ಷರಾಗಿ ಆಯ್ಕೆಯಾದರು.
    • ಧ್ಯೇಯೋದ್ದೇಶಗಳ ನಿರ್ಣಯ:- ಪ್ರಧಾನಿ ಜವಾಹರಲಾಲ್ ನೆಹರು ಅವರು ಡಿಸೆಂಬರ್ 13, 1946 ರಂದು ‘ಧ್ಯೇಯೋದ್ದೇಶಗಳ ನಿರ್ಣಯ’ವನ್ನು ಮಂಡಿಸಿದರು. ಇದನ್ನು ನಂತರ ಜನವರಿ 22, 1947 ರಂದು ಸಂವಿಧಾನದ ಪೀಠಿಕೆಯಾಗಿ ಅಂಗೀಕರಿಸಲಾಯಿತು.
    • ತಾತ್ಕಾಲಿಕ ಶಾಸಕಾಂಗ:- ಹೊಸ ಶಾಸಕಾಂಗವು ರಚನೆಯಾಗುವವರೆಗೆ ಸಂವಿಧಾನ ರಚನಾ ಸಭೆಯು ದೇಶದ ತಾತ್ಕಾಲಿಕ ಶಾಸಕಾಂಗವಾಗಿ ಕಾರ್ಯನಿರ್ವಹಿಸಿತು.

    ಭಾರತದ ಸಂವಿಧಾನದ ಕಿರು ಪರಿಚಯ:

    • ವಿಶ್ವದ ಅತಿ ಉದ್ದವಾದ ಲಿಖಿತ ಸಂವಿಧಾನ:- ಪ್ರಸ್ತುತ 25 ಭಾಗಗಳು ಮತ್ತು 12 ಅನುಸೂಚಿಗಳನ್ನು ಒಳಗೊಂಡಿದೆ.
    • ಸಂಪೂರ್ಣವಾಗಿ ಕೈಬರಹದ ಮೂಲಕವೇ ಸಿದ್ಧಪಡಿಸಲಾಗಿದೆ:- ಭಾರತದ ಮೂಲ ಸಂವಿಧಾನದ ಪ್ರತಿಯನ್ನು ಸಂಪೂರ್ಣವಾಗಿ ಕೈಬರಹದ ಮೂಲಕವೇ (ಹಸ್ತಪ್ರತಿ) ಸಿದ್ಧಪಡಿಸಲಾಗಿದ್ದು, ಸಂಸತ್ತಿನ ಗ್ರಂಥಾಲಯದಲ್ಲಿರುವ ಹೀಲಿಯಂ ಅನಿಲ ತುಂಬಿದ ವಿಶೇಷ ಪೆಟ್ಟಿಗೆಯಲ್ಲಿ ಈ ಐತಿಹಾಸಿಕ ದಾಖಲೆಯನ್ನು ಇಂದಿಗೂ ಅತ್ಯಂತ ಸುರಕ್ಷಿತವಾಗಿ ಸಂರಕ್ಷಿಸಿಡಲಾಗಿದೆ.
    • ಕಲಾತ್ಮಕವಾಗಿ ವಿನ್ಯಾಸ:- ಆಚಾರ್ಯ ನಂದಲಾಲ್ ಬೋಸ್ ಅವರ ಮಾರ್ಗದರ್ಶನದಲ್ಲಿ ಶಾಂತಿನಿಕೇತನದ ಕಲಾವಿದರು ಸಂವಿಧಾನದ ಪ್ರತಿ ಪುಟಗಳನ್ನು ಅತ್ಯಂತ ಕಲಾತ್ಮಕವಾಗಿ ವಿನ್ಯಾಸಗೊಳಿಸಿದ್ದಾರೆ.
  • ಮೀನುಗಾರರ ಸಂಕಷ್ಟ ಪರಿಹಾರ ನಿಧಿ

    ಮೀನುಗಾರರ ಸಂಕಷ್ಟ ಪರಿಹಾರ ನಿಧಿ

    ಇದೀಗ ಸುದ್ದಿಯಲ್ಲಿದೆ:

    • ರಾಜ್ಯದ ಮೀನುಗಾರಿಕೆ ವಲಯವನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ‘ಮೀನುಗಾರರ ಸಂಕಷ್ಟ ಪರಿಹಾರ ನಿಧಿ’ಯ ಅಡಿಯಲ್ಲಿ ನೀಡಲಾಗುವ ಪರಿಹಾರ ಮೊತ್ತವನ್ನು ₹6 ಲಕ್ಷದಿಂದ ₹10 ಲಕ್ಷಕ್ಕೆ ಹೆಚ್ಚಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. 
    • 2024–25 ನೇ ಸಾಲಿನಲ್ಲಿ 9.63 ಲಕ್ಷ ಟನ್ ಮೀನು ಉತ್ಪಾದನೆ ಮಾಡುವ ಮೂಲಕ, ಒಟ್ಟು ಮೀನು ಉತ್ಪಾದನೆಯಲ್ಲಿ ಕರ್ನಾಟಕವು ರಾಷ್ಟ್ರಮಟ್ಟದಲ್ಲಿ ಮೂರನೇ ಸ್ಥಾನವನ್ನು ಕಾಯ್ದುಕೊಂಡಿದೆ.

    ಮೀನುಗಾರರ ಸಂಕಷ್ಟ ಪರಿಹಾರ ನಿಧಿಯ ಬಗ್ಗೆ:

    • ಉದ್ದೇಶ:- ಮೀನುಗಾರಿಕೆಯಲ್ಲಿ ತೊಡಗಿರುವಾಗ ಸಮುದ್ರದಲ್ಲಿ ಅಥವಾ ಭೂಮಿಯ ಮೇಲೆ ಸಂಭವಿಸುವ ಅಪಘಾತಗಳು, ನೈಸರ್ಗಿಕ ವಿಪತ್ತುಗಳು ಅಥವಾ ಅಕಾಲಿಕ ಮರಣದಿಂದಾಗಿ ಸಂಕಷ್ಟಕ್ಕೆ ಸಿಲುಕುವ ಮೀನುಗಾರರಿಗೆ ಮತ್ತು ಅವರ ಕುಟುಂಬಗಳಿಗೆ ತಕ್ಷಣದ ಆರ್ಥಿಕ ಪರಿಹಾರ ಹಾಗೂ ಬೆಂಬಲವನ್ನು ಒದಗಿಸುವುದು ಇದರ ಮೂಲ ಉದ್ದೇಶವಾಗಿದೆ.
    • ನಿರ್ವಹಣಾ ಪ್ರಾಧಿಕಾರ: ಈ ನಿಧಿಯ ನಿರ್ವಹಣೆಯನ್ನು ಕರ್ನಾಟಕ ಸರ್ಕಾರದ ‘ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ’ಯು ನಿರ್ವಹಿಸುತ್ತದೆ.
    • ಪರಿಹಾರದ ಮೊತ್ತ: ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದಾಗ ಕಣ್ಮರೆಯಾದ ಅಥವಾ ಮೃತಪಟ್ಟ ಮೀನುಗಾರರ ಕುಟುಂಬಕ್ಕೆ ನೀಡಲಾಗುತ್ತಿದ್ದ ಪರಿಹಾರ ಧನವನ್ನು ರಾಜ್ಯ ಸರ್ಕಾರವು ಇತ್ತೀಚೆಗೆ ₹6 ಲಕ್ಷದಿಂದ ₹10 ಲಕ್ಷಕ್ಕೆ ಏರಿಸಿದೆ.
    • ಅರ್ಹತೆ:- ಪರಿಹಾರವನ್ನು ಕೋರುವ ಅರ್ಜಿದಾರರು ಇಲಾಖೆಯಲ್ಲಿ ನೋಂದಾಯಿತ ಮೀನುಗಾರರಾಗಿರಬೇಕು. ಅಲ್ಲದೆ, ಪರಿಹಾರದ ನಷ್ಟದ ಸ್ವರೂಪಕ್ಕೆ (ಉದಾಹರಣೆಗೆ: ಜೀವಹಾನಿ, ದೋಣಿ ಅಥವಾ ಮೀನುಗಾರಿಕೆ ಉಪಕರಣಗಳಿಗೆ ಹಾನಿ) ಅನುಗುಣವಾಗಿ ನಿಗದಿಪಡಿಸಲಾದ ನಿರ್ದಿಷ್ಟ ಮಾನದಂಡಗಳನ್ನು ಪೂರೈಸಿರಬೇಕು.
  • ಮೀರತ್ ಬ್ಯೂಗಲ್ ವಾದ್ಯ | ಸರ್ಕಾರಿ ಭದ್ರತಾ ಪತ್ರಗಳು (G-Secs) | ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) | ಸಂವಿಧಾನದ ವಿಧಿ 240

    ಮೀರತ್ ಬ್ಯೂಗಲ್ ವಾದ್ಯ

    ಸಾಮಾನ್ಯ ಅಧ್ಯಯನ -3/ ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ದಶಕಗಳಿಂದಲೂ ಸಶಸ್ತ್ರ ಪಡೆಗಳ ಕಸರತ್ತು, ಯುದ್ಧಗಳು, ಸಮಾರಂಭಗಳು ಮತ್ತು ಪಥಸಂಚಲನಗಳಲ್ಲಿ ಅವಿಭಾಜ್ಯ ಸಾಧನವಾಗಿ ಬಳಕೆಯಾಗುತ್ತಿದ್ದ ‘ಬ್ಯೂಗಲ್’ ವಾದ್ಯವು ಇತ್ತೀಚೆಗೆ ಪ್ರತಿಷ್ಠಿತ “ಭೌಗೋಳಿಕ ಸೂಚ್ಯಂಕ” (GI) ಟ್ಯಾಗ್‌ಗೆ ಭಾಜನವಾಗಿದೆ.

    ಮೀರತ್ ಬ್ಯೂಗಲ್ ವಾದ್ಯದ ಬಗ್ಗೆ:

    • ಮೀರತ್‌ನಲ್ಲಿ ಬ್ಯೂಗಲ್ ತಯಾರಿಕೆಯು 19ನೇ ಶತಮಾನದಷ್ಟು ಹಳೆಯ ಇತಿಹಾಸವನ್ನು ಹೊಂದಿದೆ.
    • ಭಾರತದ ಸೇನಾ ಸಂಸ್ಕೃತಿ ಬೆಳೆದಂತೆಲ್ಲಾ, ಈ ವಾದ್ಯದ ಇತಿಹಾಸವೂ ಅದರೊಂದಿಗೇ ಸಾಗಿಬಂದಿದೆ.
    • ಬ್ರಿಟಿಷರ ಕಾಲದಲ್ಲಿ ಇದನ್ನು ‘ಆದೇಶ ನೀಡುವ ಸಾಧನ’ವಾಗಿ ಬಳಸುತ್ತಿದ್ದರು. ಸೇನೆ ಎಷ್ಟೇ ಆಧುನಿಕವಾದರೂ, ಬ್ಯೂಗಲ್ ತನ್ನ ಗೌರವದ ಸ್ಥಾನವನ್ನು ಇಂದಿಗೂ ಉಳಿಸಿಕೊಂಡಿದೆ.

    ಸರ್ಕಾರಿ ಭದ್ರತಾ ಪತ್ರಗಳು (G-Secs)

    ಸಾಮಾನ್ಯ ಅಧ್ಯಯನ – 3/ ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚೆಗೆ, ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಕಡಿತಗೊಳಿಸಿದ್ದರೂ ಸಹ, ಸರ್ಕಾರಿ ಭದ್ರತಾ ಪತ್ರಗಳ ಇಳುವರಿಯು ಸ್ವಲ್ಪಮಟ್ಟಿಗೆ ಏರುಗತಿಯನ್ನು ಸಾಧಿಸಿದೆ.

    ಸರ್ಕಾರಿ ಭದ್ರತಾ ಪತ್ರ (G-Sec) ಗಳ ಬಗ್ಗೆ:

    • ವ್ಯಾಖ್ಯಾನ:- ಈ ಪತ್ರಗಳು ಕೇಂದ್ರ ಸರ್ಕಾರ ಇಲ್ಲವೇ ರಾಜ್ಯ ಸರ್ಕಾರಗಳಿಂದ ಹೊರಡಿಸಲ್ಪಡುವ ಒಂದು ವ್ಯಾಪಾರಾರ್ಹ ಭದ್ರತಾ ಸಾಧನಗಳಾಗಿವೆ.
    • ಹೊಣೆಗಾರಿಕೆ:- ಈ ಪತ್ರಗಳು ಸರ್ಕಾರದ ಸಾಲದ ಹೊಣೆಗಾರಿಕೆಯನ್ನು ಔಪಚಾರಿಕವಾಗಿ ಅಥವಾ ಅಧಿಕೃತವಾಗಿ ಅಂಗೀಕರಿಸುತ್ತವೆ. 
    • ಸ್ವರೂಪ: ಈ ಪತ್ರಗಳು ಅಲ್ಪಾವಧಿ ಮತ್ತು ದೀರ್ಘಾವಧಿ ಸ್ವರೂಪಗಳನ್ನು ಒಳಗೊಂಡಿರುತ್ತವೆ:
      • ಅಲ್ಪಾವಧಿ ಭದ್ರತಾ ಪತ್ರಗಳು: ಇವುಗಳನ್ನು ಸಾಮಾನ್ಯವಾಗಿ ಖಜಾನೆ ಬಿಲ್ಲುಗಳು ಎಂದು ಕರೆಯಲಾಗುತ್ತದೆ. ಇವುಗಳ ಮೂಲದ ಮುಕ್ತಾಯ ಅವಧಿಯು ಒಂದು ವರ್ಷಕ್ಕಿಂತ ಕಡಿಮೆ ಇರುತ್ತದೆ.
      • ದೀರ್ಘಾವಧಿ ಭದ್ರತಾ ಪತ್ರಗಳು: ಇವುಗಳನ್ನು ಸಾಮಾನ್ಯವಾಗಿ ಸರ್ಕಾರಿ ಬಾಂಡ್‌ಗಳು ಅಥವಾ ದಿನಾಂಕ ಸಹಿತ ಭದ್ರತಾ ಪತ್ರಗಳು ಎಂದು ಕರೆಯಲಾಗುತ್ತದೆ. ಇವುಗಳ ಮೂಲದ ಮುಕ್ತಾಯ ಅವಧಿಯು ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಇರುತ್ತದೆ.

    ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF)

    ಸಾಮಾನ್ಯ ಅಧ್ಯಯನ – 3/ ಆಂತರಿಕ ಭದ್ರತೆ

    ಇದೀಗ ಸುದ್ದಿಯಲ್ಲಿದೆ:

    • ‘ಅಂತರರಾಷ್ಟ್ರೀಯ ಹಡಗು ಮತ್ತು ಬಂದರು ಸೌಲಭ್ಯ ಭದ್ರತಾ ಸಂಹಿತೆ’ಯ (ISPS Code) ಅಡಿಯಲ್ಲಿ, ಕೇಂದ್ರೀಯ  ಕೈಗಾರಿಕಾ ಭದ್ರತಾ ಪಡೆಯನ್ನು ‘ಮಾನ್ಯತೆ ಪಡೆದ ಭದ್ರತಾ ಸಂಸ್ಥೆ’ ಯನ್ನಾಗಿ ಅಧಿಕೃತವಾಗಿ ನಾಮನಿರ್ದೇಶನ ಮಾಡಲಾಗಿದೆ.
    • ಭಾರತದಲ್ಲಿ ಸುಮಾರು 250 ಬಂದರುಗಳಿದ್ದು, ಅವುಗಳಲ್ಲಿ 65–68 ಬಂದರುಗಳು ಸರಕು ಸಾಗಣೆ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ.

    ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) ಯ ಬಗ್ಗೆ:

      • ಸ್ಥಾಪನೆ ಮತ್ತು ಸ್ಥಾನಮಾನ: ಇದು 1968 ರ ‘ಕೇಂದ್ರೀಯ  ಕೈಗಾರಿಕಾ ಭದ್ರತಾ ಪಡೆ ಕಾಯಿದೆ’ ಯ ಅನ್ವಯ 1969 ರಲ್ಲಿ ಅಸ್ತಿತ್ವಕ್ಕೆ ಬಂದ ಒಂದು ಅರೆಸೇನಾ ಪಡೆಯಾಗಿದೆ.
      • ದಿನಾಚರಣೆ: ಪ್ರತಿ ವರ್ಷ ಮಾರ್ಚ್ 10 ರಂದು ‘CISF ಸ್ಥಾಪನಾ ದಿನ’ವನ್ನು ಆಚರಿಸಲಾಗುತ್ತದೆ.
      • ಆಡಳಿತಾತ್ಮಕ ನಿಯಂತ್ರಣ: ಈ ಪಡೆಯು ಭಾರತ ಸರ್ಕಾರದ ಕೇಂದ್ರ ಗೃಹ ಸಚಿವಾಲಯದ ನೇರ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತದೆ.
      • ಪ್ರಮುಖ ಕಾರ್ಯಗಳು: ದೇಶದ ತಂತ್ರಾತ್ಮಕ ಸಂಸ್ಥೆಗಳಿಗೆ ಭದ್ರತೆಯನ್ನು ಒದಗಿಸುವುದು ಇದರ ಪ್ರಮುಖ ಕರ್ತವ್ಯವಾಗಿದೆ. ಪ್ರಮುಖವಾಗಿ ಈ ಕೆಳಗಿನ ಸಂಸ್ಥೆಗಳಿಗೆ ಈ ಪಡೆಯು ರಕ್ಷಣೆ ನೀಡುತ್ತದೆ:
    • ಬಾಹ್ಯಾಕಾಶ ಇಲಾಖೆ 
    • ಪರಮಾಣು ಶಕ್ತಿ ಇಲಾಖೆ
    • ವಿಮಾನ ನಿಲ್ದಾಣಗಳು, ದೆಹಲಿ ಮೆಟ್ರೋ ಮತ್ತು ಬಂದರುಗಳು
    • ಐತಿಹಾಸಿಕ ಸ್ಮಾರಕಗಳು
    • ಭಾರತೀಯ ಆರ್ಥಿಕತೆಯ ಮೂಲಭೂತ ಕ್ಷೇತ್ರಗಳಾದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ವಿದ್ಯುಚ್ಛಕ್ತಿ, ಕಲ್ಲಿದ್ದಲು, ಉಕ್ಕು ಮತ್ತು ಗಣಿಗಾರಿಕೆ ಸ್ಥಾವರಗಳಿಗೆ ಇದು ಭದ್ರತೆಯನ್ನು ಒದಗಿಸುತ್ತದೆ.

    ಸಂವಿಧಾನದ ವಿಧಿ 240

    ಸಾಮಾನ್ಯ ಅಧ್ಯಯನ – 2/ ಆಡಳಿತ

    ಇದೀಗ ಸುದ್ದಿಯಲ್ಲಿದೆ:

    • ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ, ಚಂಡೀಗಢವನ್ನು ಸಂವಿಧಾನದ ‘ವಿಧಿ 240’ ವ್ಯಾಪ್ತಿಗೆ ತರಲು ಯಾವುದೇ ‘ಸಂವಿಧಾನ ತಿದ್ದುಪಡಿ ಮಸೂದೆ’ಯನ್ನು ಮಂಡಿಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯವು ಸ್ಪಷ್ಟಪಡಿಸಿದೆ.

    131 ನೇ ಸಂವಿಧಾನ ತಿದ್ದುಪಡಿ ಮಸೂದೆ, 2025 ರ ಬಗ್ಗೆ:

    • ಈ ಮಸೂದೆಯು ಚಂಡೀಗಢವನ್ನು ವಿಧಿ 240 ರ ಅಡಿಯಲ್ಲಿ ತರಲು ಪ್ರಸ್ತಾಪಿಸುತ್ತದೆ. ಈ ಮೂಲಕ ಶಾಸಕಾಂಗಗಳನ್ನು ಹೊಂದಿರದ ಕೇಂದ್ರಾಡಳಿತ ಪ್ರದೇಶಗಳ ಗುಂಪಿಗೆ ಇದನ್ನು ಸೇರಿಸುತ್ತದೆ ಮತ್ತು ಅದಕ್ಕಾಗಿ ನಿಯಮಾವಳಿಗಳನ್ನು ರೂಪಿಸಲು ರಾಷ್ಟ್ರಪತಿಯವರಿಗೆ ಅಧಿಕಾರ ನೀಡುತ್ತದೆ.
    • ಇದು ಚಂಡೀಗಢ ಕೇಂದ್ರಾಡಳಿತ ಪ್ರದೇಶದಲ್ಲಿ ಸ್ವತಂತ್ರ ‘ಆಡಳಿತಾಧಿಕಾರಿ’ಯ ನೇಮಕಕ್ಕೆ ದಾರಿ ಮಾಡಿಕೊಡುತ್ತದೆ.
    • ಪ್ರಸ್ತುತ, ಪಂಜಾಬ್‌ನ ರಾಜ್ಯಪಾಲರೇ ಚಂಡೀಗಢದ ಆಡಳಿತಾಧಿಕಾರಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
    • ಚಂಡೀಗಢಕ್ಕಾಗಿ ಕೇಂದ್ರ ಸರ್ಕಾರದ ಕಾನೂನು ರಚನಾ ಪ್ರಕ್ರಿಯೆಯನ್ನು ಸರಳಗೊಳಿಸುವುದು ಈ ಕ್ರಮದ ಉದ್ದೇಶವಾಗಿದೆ.
    • ಶಾಸಕಾಂಗಗಳನ್ನು ಹೊಂದಿರದ ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಆಡಳಿತದಲ್ಲಿ ಏಕರೂಪತೆಯನ್ನು ಖಚಿತಪಡಿಸುವುದು ಇದರ ಗುರಿಯಾಗಿದೆ.
    • ಸಂಸತ್ತಿನ ಕಾಯಿದೆಗಳಿಗೆ ಸಮನಾದ ನಿಯಮಾವಳಿಗಳನ್ನು ಚಂಡೀಗಢಕ್ಕಾಗಿ ರೂಪಿಸಲು ರಾಷ್ಟ್ರಪತಿಯವರಿಗೆ ಅಧಿಕಾರ ನೀಡುವುದು ಇದರ ಉದ್ದೇಶವಾಗಿದೆ.

    ಸಂವಿಧಾನದ 240 ನೇ ವಿಧಿಯ ಬಗ್ಗೆ:

    • ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ಹಾಗೂ ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು ಸೇರಿದಂತೆ, ನಿರ್ದಿಷ್ಟ ಕೇಂದ್ರಾಡಳಿತ ಪ್ರದೇಶಗಳ ಶಾಂತಿ, ಪ್ರಗತಿ ಮತ್ತು ಪರಿಣಾಮಕಾರಿ ಆಡಳಿತಕ್ಕಾಗಿ ನಿಯಮಾವಳಿಗಳನ್ನು ರೂಪಿಸುವ ಅಧಿಕಾರವನ್ನು ಸಂವಿಧಾನದ 240 ನೇ ವಿಧಿಯು ರಾಷ್ಟ್ರಪತಿಯವರಿಗೆ ನೀಡುತ್ತದೆ.