ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (DPI)@2047 ಮಾರ್ಗಸೂಚಿ
ಆರ್ಥಿಕತೆ
ಇತ್ತೀಚೆಗೆ ಸುದ್ದಿಯಲ್ಲಿದೆ:
- ನೀತಿ ಆಯೋಗವು ‘ವಿಕಸಿತ ಭಾರತ’ಕ್ಕಾಗಿ DPI@2047 ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಇದು ಒಳಗೊಳ್ಳುವಿಕೆ ಮತ್ತು ಉತ್ಪಾದಕತೆ ಆಧಾರಿತ ಬೆಳವಣಿಗೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಮುಂದಿನ ಹಂತದ ಮಾರ್ಗಸೂಚಿಯಾಗಿದೆ.
ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (DPI)ದ ಬಗ್ಗೆ:
- ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಿರುವ, ಸುರಕ್ಷಿತವಾದ ಮತ್ತು ಪರಸ್ಪರ ಕಾರ್ಯನಿರ್ವಹಿಸಬಲ್ಲ, ಹಾಗೂ ಅಗತ್ಯ ಸಾರ್ವಜನಿಕ ಸೇವೆಗಳನ್ನು ಬೆಂಬಲಿಸುವ ಮೂಲಭೂತ ಡಿಜಿಟಲ್ ವ್ಯವಸ್ಥೆಗಳನ್ನು ಇದು ಸೂಚಿಸುತ್ತದೆ.
- ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು ‘ಜಾಮ್ ತ್ರಿವಳಿ’ (JAM Trinity) ಅಂದರೆ ಜನ್ ಧನ್ ಬ್ಯಾಂಕ್ ಖಾತೆಗಳು, ಆಧಾರ್ ಗುರುತು ಮತ್ತು ಮೊಬೈಲ್ ಸಂಪರ್ಕದೊಂದಿಗೆ ಪ್ರಾರಂಭವಾಯಿತು. ಇದು ನಾಗರಿಕರನ್ನು ನೇರವಾಗಿ ಸರ್ಕಾರದ ವ್ಯವಸ್ಥೆಗಳೊಂದಿಗೆ ಸಂಪರ್ಕಿಸಲು ಸಹಾಯ ಮಾಡಿದೆ.
- ಮಹತ್ವ: ಇದು ಕಲ್ಯಾಣ ಯೋಜನೆಗಳ ಪ್ರಯೋಜನಗಳ ನೇರ ನಗದು ವರ್ಗಾವಣೆಯನ್ನು (DBT) ಸಕ್ರಿಯಗೊಳಿಸಿತು. ಇದರಿಂದಾಗಿ ಮಧ್ಯವರ್ತಿಗಳ ಹಸ್ತಕ್ಷೇಪ, ವಿಳಂಬ ಮತ್ತು ಸೋರಿಕೆಗಳು ಕಡಿಮೆಯಾದವು ಹಾಗೂ ಭಾರತದ ವ್ಯಾಪಕ ಡಿಜಿಟಲ್ ರೂಪಾಂತರಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟಿತು.
ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ (DPI) ಪ್ರಾಮುಖ್ಯತೆ:
- ಆಡಳಿತದ ದಕ್ಷತೆ: ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು ನೇರ ಲಾಭ ವರ್ಗಾವಣೆ, ಸಬ್ಸಿಡಿ ವಿತರಣೆ ಮತ್ತು ಇ-ಆಡಳಿತ ವೇದಿಕೆಗಳನ್ನು ಸಕ್ರಿಯಗೊಳಿಸುವ ಮೂಲಕ ಸೋರಿಕೆ ಮತ್ತು ಭ್ರಷ್ಟಾಚಾರವನ್ನು ಕಡಿಮೆ ಮಾಡುತ್ತದೆ.
- ಹಣಕಾಸು ಒಳಗೊಳ್ಳುವಿಕೆ: ಏಕೀಕೃತ ಪಾವತಿ ವ್ಯವಸ್ಥೆ (UPI)ಯನ್ನು ಸಂಪೂರ್ಣವಾಗಿ ರೂಪಾಂತರಿಸಿದೆ. ಇದು ಪ್ರಸ್ತುತ 8 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಗಡಿಯಾಚೆಗಿನ ವಹಿವಾಟುಗಳನ್ನು ಬೆಂಬಲಿಸುತ್ತಿದೆ.
- ಆರ್ಥಿಕ ಬೆಳವಣಿಗೆ: ಭಾರತವು ವಿಶ್ವದ 3ನೇ ಅತಿದೊಡ್ಡ ಡಿಜಿಟಲೀಕರಣಗೊಂಡ ಆರ್ಥಿಕತೆಯಾಗಿದೆ. ಡಿಜಿಟಲ್ ವೇದಿಕೆಗಳು ದೈನಂದಿನ ಆರ್ಥಿಕ ಮತ್ತು ಸಾಮಾಜಿಕ ಜೀವನದಲ್ಲಿ ಆಳವಾಗಿ ಬೇರೂರಿವೆ.
ಪ್ರಮುಖ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (DPI) ಮತ್ತು ಡಿಜಿಟಲ್ ಪರಿಹಾರಗಳು:
- ಆಧಾರ್ (Aadhaar): ಇದು ಬಯೋಮೆಟ್ರಿಕ್ ಆಧಾರಿತ ಡಿಜಿಟಲ್ ಗುರುತಿನ ವೇದಿಕೆಯಾಗಿದೆ. ಸಮರ್ಥ ಸೇವಾ ವಿತರಣೆಗಾಗಿ ನಿವಾಸಿಗಳ ವಿಶಿಷ್ಟ ಗುರುತಿಸುವಿಕೆ ಮತ್ತು ದೃಢೀಕರಣವನ್ನು ಇದು ಸಕ್ರಿಯಗೊಳಿಸುತ್ತದೆ.
- ಯುಪಿಐ (UPI): ತ್ವರಿತ, ಪರಸ್ಪರ ಕಾರ್ಯನಿರ್ವಹಿಸಬಲ್ಲ ಮತ್ತು ಸುರಕ್ಷಿತವಾದ, ವ್ಯಕ್ತಿಯಿಂದ-ವ್ಯಕ್ತಿಗೆ ಮತ್ತು ವ್ಯಾಪಾರ ವಹಿವಾಟುಗಳನ್ನು ಸಕ್ರಿಯಗೊಳಿಸುವ ನೈಜ-ಸಮಯದ ಡಿಜಿಟಲ್ ಪಾವತಿಯ ಏಕಿಕೃತ ವ್ಯವಸ್ಥೆಯಾಗಿದೆ.
- ಯುಪಿಐ ಪ್ರಸ್ತುತ 8 ದೇಶಗಳಲ್ಲಿ ಸಕ್ರಿಯವಾಗಿದೆ. ಇದು ಗಡಿಯಾಚೆಗಿನ ಪಾವತಿಗಳು, ಹಣ ರವಾನೆ ಮತ್ತು ಹಣಕಾಸು ಒಳಗೊಳ್ಳುವಿಕೆಯನ್ನು ಸುಧಾರಿಸಿದ್ದು, ಜಾಗತಿಕವಾಗಿ ಭಾರತದ ಫಿನ್ಟೆಕ್ ಪ್ರಭಾವವನ್ನು ಬಲಪಡಿಸುತ್ತಿದೆ.
- ಕೋವಿನ್ (CoWIN): ನೋಂದಣಿ, ವೇಳಾಪಟ್ಟಿ ನಿಗದಿಪಡಿಸುವಿಕೆ ಮತ್ತು ಪ್ರಮಾಣೀಕರಣವನ್ನು ಒಳಗೊಂಡಂತೆ ಲಸಿಕೆ (ವ್ಯಾಕ್ಸಿನೇಷನ್) ಸೇವೆಗಳ ಸಂಪೂರ್ಣ ನಿರ್ವಹಣೆಗಾಗಿ ವಿನ್ಯಾಸಗೊಳಿಸಲಾದ ಡಿಜಿಟಲ್ ವೇದಿಕೆಯಾಗಿದೆ.
- ಎಪಿಐ ಸೇತು (API Setu): ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ (APIs) ಮೂಲಕ ಸರ್ಕಾರದ ದತ್ತಾoಶ ಮತ್ತು ಸೇವೆಗಳನ್ನು ಸುರಕ್ಷಿತವಾಗಿ ಹಾಗೂ ಪ್ರಮಾಣೀಕೃತವಾಗಿ ಹಂಚಿಕೊಳ್ಳಲು ಅನುವು ಮಾಡಿಕೊಡುವ ವೇದಿಕೆಯಾಗಿದೆ.
- ಡಿಜಿಲಾಕರ್ (DigiLocker): ನಾಗರಿಕರಿಗೆ ದೃಢೀಕೃತ ಎಲೆಕ್ಟ್ರಾನಿಕ್ ದಾಖಲೆಗಳನ್ನು ಸಂಗ್ರಹಿಸಲು, ವೀಕ್ಷಿಸಲು ಮತ್ತು ಹಂಚಿಕೊಳ್ಳಲು ಅನುಮತಿಸುವ ಡಿಜಿಟಲ್ ಡಾಕ್ಯುಮೆಂಟ್ ವ್ಯಾಲೆಟ್ (Digital document wallet) ಆಗಿದೆ.
- ಆರೋಗ್ಯ ಸೇತು (Aarogya Setu): ಅಪಾಯದ ಮೌಲ್ಯಮಾಪನ, ಆರೋಗ್ಯ ಸಲಹೆಗಳು ಮತ್ತು ಆರೋಗ್ಯ ಸಂಬಂಧಿತ ಸೇವೆಗಳಿಗೆ ಪ್ರವೇಶವನ್ನು ಒದಗಿಸುವ ಡಿಜಿಟಲ್ ಆರೋಗ್ಯ ಅಪ್ಲಿಕೇಶನ್ ಆಗಿದೆ.
- ಗವರ್ನಮೆಂಟ್ ಇ-ಮಾರ್ಕೆಟ್ಪ್ಲೇಸ್ (GeM): ಸರ್ಕಾರಿ ಘಟಕಗಳಿಂದ ಸರಕು ಮತ್ತು ಸೇವೆಗಳ ಪಾರದರ್ಶಕ ಹಾಗೂ ಸಮರ್ಥ ಸಂಗ್ರಹಣೆಗಾಗಿ ರೂಪಿಸಲಾದ ಆನ್ಲೈನ್ ವೇದಿಕೆಯಾಗಿದೆ.
- ಉಮಂಗ್ (UMANG): ವ್ಯಾಪಕ ಶ್ರೇಣಿಯ ಸರ್ಕಾರಿ ಸೇವೆಗಳಿಗೆ ಏಕ-ಗವಾಕ್ಷಿ ಪ್ರವೇಶವನ್ನು ಒದಗಿಸುವ ಏಕೀಕೃತ ಮೊಬೈಲ್ ಮತ್ತು ವೆಬ್ ವೇದಿಕೆಯಾಗಿದೆ.
- ದೀಕ್ಷಾ (DIKSHA): ಇ-ಕಂಟೆಂಟ್, ತರಬೇತಿ ಮತ್ತು ಶೈಕ್ಷಣಿಕ ಸಂಪನ್ಮೂಲಗಳೊಂದಿಗೆ ಶಿಕ್ಷಕರು ಮತ್ತು ಕಲಿಯುವವರನ್ನು ಬೆಂಬಲಿಸುವ ರಾಷ್ಟ್ರೀಯ ಡಿಜಿಟಲ್ ವೇದಿಕೆಯಾಗಿದೆ.
- ಇ-ಸಂಜೀವಿನಿ (e-Sanjeevani): ವಿಶೇಷವಾಗಿ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ದೂರದಿಂದಲೇ ವೈದ್ಯರು ಮತ್ತು ರೋಗಿಗಳ ನಡುವೆ ಸಮಾಲೋಚನೆಗಳನ್ನು ಸಕ್ರಿಯಗೊಳಿಸುವ ಟೆಲಿಮೆಡಿಸಿನ್ ವೇದಿಕೆಯಾಗಿದೆ.
- ಇ-ಆಸ್ಪತ್ರೆ (e-Hospital): ಇದು ಆನ್ಲೈನ್ ನೋಂದಣಿ, ವೈದ್ಯರ ಭೇಟಿಗೆ ಸಮಯ ನಿಗದಿ, ರೋಗನಿರ್ಣಯ ಮತ್ತು ಶುಲ್ಕ ಪಾವತಿ ಸೇವೆಗಳನ್ನು ಒದಗಿಸುವ ಸಮಗ್ರ ಆಸ್ಪತ್ರೆ ನಿರ್ವಹಣಾ ವ್ಯವಸ್ಥೆಯಾಗಿದೆ.
- ಇ-ಆಫೀಸ್ (e-Office): ಸರ್ಕಾರಿ ಕಚೇರಿಗಳಲ್ಲಿ ಎಲೆಕ್ಟ್ರಾನಿಕ್ ಕಡತ ನಿರ್ವಹಣೆ ಮತ್ತು ತ್ವರಿತ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಸಕ್ರಿಯಗೊಳಿಸುವ ಮೂಲಕ ಕಾಗದರಹಿತ ಆಡಳಿತವನ್ನು ಬೆಂಬಲಿಸುವ ಡಿಜಿಟಲ್ ವೇದಿಕೆಯಾಗಿದೆ.
- ಇ-ಕೋರ್ಟ್ಸ್ (eCourts): ಇದು ನ್ಯಾಯಾಲಯದ ಪ್ರಕ್ರಿಯೆಗಳನ್ನು ಡಿಜಿಟಲೀಕರಣಗೊಳಿಸಲು ಮತ್ತು ಜನಸಾಮಾನ್ಯರಿಗೆ ನ್ಯಾಯಾಂಗ ಸೇವೆಗಳ ಲಭ್ಯತೆಯನ್ನು ಸುಧಾರಿಸಲು ರೂಪಿಸಲಾದ ನಿರ್ದಿಷ್ಟ ಗುರಿ ಮತ್ತು ಕಾಲಮಿತಿಯ ಯೋಜನೆಯಾಗಿದೆ.
- ಪೋಷಣ್ ಟ್ರ್ಯಾಕರ್ (POSHAN Tracker): ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ (ICDS) ಅಡಿಯಲ್ಲಿ ಪೌಷ್ಟಿಕಾಂಶ ಸೇವೆಗಳ ವಿತರಣೆಯ ನೈಜ-ಸಮಯದ ಮೇಲ್ವಿಚಾರಣೆಗಾಗಿ ಬಳಸಲಾಗುವ ಮೊಬೈಲ್ ಆಧಾರಿತ ಅಪ್ಲಿಕೇಶನ್ ಆಗಿದೆ.
- ರಾಷ್ಟ್ರೀಯ ಸಾಂಕ್ರಾಮಿಕವಲ್ಲದ ರೋಗಗಳ ವೇದಿಕೆ (NCD): ಪ್ರಮುಖ ಸಾಂಕ್ರಾಮಿಕವಲ್ಲದ ರೋಗಗಳ ತಪಾಸಣೆ, ರೋಗನಿರ್ಣಯ ಮತ್ತು ನಿರ್ವಹಣೆಗಾಗಿ ವಿನ್ಯಾಸಗೊಳಿಸಲಾದ ಡಿಜಿಟಲ್ ವೇದಿಕೆಯಾಗಿದೆ.
- ಸ್ಕಿಲ್ ಇಂಡಿಯಾ ಡಿಜಿಟಲ್ ಹಬ್ (SIDH): ಕೌಶಲ್ಯ ಅಭಿವೃದ್ಧಿ, ತರಬೇತಿ ಮತ್ತು ಉದ್ಯೋಗ ಸಂಬಂಧಿತ ಸೇವೆಗಳನ್ನು ಸಂಯೋಜಿಸುವ ಏಕೀಕೃತ ಡಿಜಿಟಲ್ ವೇದಿಕೆಯಾಗಿದೆ.
- ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ (PFMS): ಸರ್ಕಾರಿ ನಿಧಿಗಳ ವಿತರಣೆ ಮತ್ತು ನೇರ ಲಾಭ ವರ್ಗಾವಣೆಯನ್ನು (DBT) ಸಮಗ್ರವಾಗಿ ಮೇಲ್ವಿಚಾರಣೆ ಮಾಡುವ ವೇದಿಕೆಯಾಗಿದೆ.
- ಪಿಎಂ ಗತಿಶಕ್ತಿ (PM GatiShakti): ಮೂಲಸೌಕರ್ಯ ಯೋಜನೆಗಳ ಸಮಗ್ರ ಯೋಜನೆ ಮತ್ತು ಸಂಘಟಿತ ಅನುಷ್ಠಾನಕ್ಕಾಗಿ ರೂಪಿಸಲಾದ ಜಿಐಎಸ್ (GIS) ಆಧಾರಿತ ಡಿಜಿಟಲ್ ವೇದಿಕೆಯಾಗಿದೆ.
ಪಕ್ಷಾಂತರ ನಿಷೇಧ ಕಾಯ್ದೆ
ರಾಜ್ಯಶಾಸ್ತ್ರ ಮತ್ತು ಆಡಳಿತ
ಇತ್ತೀಚೆಗೆ ಸುದ್ದಿಯಲ್ಲಿದೆ:
- ರಾಜ್ಯಸಭೆಯಲ್ಲಿ ಆಮ್ ಆದ್ಮಿ ಪಕ್ಷದ ಮೂರನೇ ಎರಡರಷ್ಟು (2/3) ಸಂಸದರು ಭಾರತೀಯ ಜನತಾ ಪಕ್ಷದೊಂದಿಗೆ ವಿಲೀನಗೊಳ್ಳಲು ನಿರ್ಧರಿಸಿದ್ದಾರೆ. ಇದು ಪಕ್ಷಾಂತರ ನಿಷೇಧ ಕಾಯ್ದೆಯ ಅನ್ವಯಿಸುವಿಕೆಯ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಪಕ್ಷಾಂತರ ನಿಷೇಧ ಕಾಯ್ದೆಯ ಹಿನ್ನೆಲೆ:
- 1967ರಲ್ಲಿ ಹರಿಯಾಣದ ಶಾಸಕ ಗಯಾ ಲಾಲ್ ಒಂದೇ ದಿನದಲ್ಲಿ ಮೂರು ಬಾರಿ ತಮ್ಮ ಪಕ್ಷವನ್ನು ಬದಲಾಯಿಸಿದ ನಂತರ, ಭಾರತೀಯ ರಾಜಕೀಯದಲ್ಲಿ ‘ಆಯಾ ರಾಮ್ ಗಯಾ ರಾಮ್‘ ಎಂಬ ನುಡಿಗಟ್ಟು ಜನಪ್ರಿಯವಾಯಿತು.
- ರಾಜಕೀಯ ಪಕ್ಷಾಂತರಗಳನ್ನು ತಡೆಯುವ ಉದ್ದೇಶದಿಂದ 1985ರಲ್ಲಿ 52ನೇ ಸಂವಿಧಾನ ತಿದ್ದುಪಡಿಯ ಮೂಲಕ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಸಂವಿಧಾನದ ಹತ್ತನೇ ಅನುಸೂಚಿಗೆ ಸೇರಿಸಲಾಯಿತು.
ಸಾಂವಿಧಾನಿಕ ಅನರ್ಹತೆಗಳು [ವಿಧಿ 102(1) ಮತ್ತು 191(1)]
ಒಬ್ಬ ವ್ಯಕ್ತಿಯು ಈ ಕೆಳಗಿನ ಸಂದರ್ಭಗಳಲ್ಲಿ ಸಂಸತ್ತಿನ ಅಥವಾ ರಾಜ್ಯ ಶಾಸಕಾಂಗದ ಸದಸ್ಯತ್ವದಿಂದ ಅನರ್ಹನಾಗುತ್ತಾನೆ:
- ಕೇಂದ್ರ ಅಥವಾ ರಾಜ್ಯ ಸರ್ಕಾರದ ಅಡಿಯಲ್ಲಿ ಯಾವುದೇ ಲಾಭದಾಯಕ ಹುದ್ದೆಯನ್ನು (Office of profit) ಹೊಂದಿದ್ದರೆ.
- ಸಮರ್ಥ ನ್ಯಾಯಾಲಯದಿಂದ ಮಾನಸಿಕ ಅಸ್ವಸ್ಥ ಎಂದು ಘೋಷಿಸಲ್ಪಟ್ಟಿದ್ದರೆ.
- ತೀರಿಸಲಾಗದ ದಿವಾಳಿ (Undischarged insolvent) ಯಾಗಿದ್ದರೆ.
- ಭಾರತದ ಪ್ರಜೆಯಾಗಿಲ್ಲದಿದ್ದರೆ, ಅಥವಾ ಸ್ವಯಂಪ್ರೇರಣೆಯಿಂದ ವಿದೇಶಿ ರಾಷ್ಟ್ರದ ಪೌರತ್ವವನ್ನು ಪಡೆದುಕೊಂಡಿದ್ದರೆ, ಅಥವಾ ವಿದೇಶಿ ರಾಷ್ಟ್ರಕ್ಕೆ ನಿಷ್ಠೆಯನ್ನು ತೋರಿದರೆ.
- ಸಂಸತ್ತು ಮಾಡಿದ ಯಾವುದೇ ಕಾನೂನಿನ ಅಡಿಯಲ್ಲಿ ಅನರ್ಹಗೊಂಡಿದ್ದರೆ.
ಪಕ್ಷಾಂತರ ನಿಷೇಧ ಕಾಯ್ದೆಯ ಪ್ರಮುಖ ಲಕ್ಷಣಗಳು:
- ಪಕ್ಷಾಂತರದ ಆಧಾರದ ಮೇಲೆ ಅನರ್ಹತೆ: ರಾಜಕೀಯ ಪಕ್ಷಕ್ಕೆ ಸೇರಿದ ಶಾಸಕನೊಬ್ಬ ಸ್ವಯಂಪ್ರೇರಣೆಯಿಂದ ತನ್ನ ಪಕ್ಷದ ಸದಸ್ಯತ್ವವನ್ನು ತ್ಯಜಿಸಿದರೆ, ಅಥವಾ ತನ್ನ ರಾಜಕೀಯ ಪಕ್ಷ ಹೊರಡಿಸಿದ ನಿರ್ದೇಶನಕ್ಕೆ (Whip) ವಿರುದ್ಧವಾಗಿ ಸದನದಲ್ಲಿ ಮತ ಚಲಾಯಿಸಿದರೆ ಅಥವಾ ಮತದಾನದಿಂದ ದೂರವುಳಿದರೆ, ಆತನನ್ನು ಅನರ್ಹಗೊಳಿಸಲಾಗುತ್ತದೆ.
- ಸದಸ್ಯನು ತನ್ನ ಪಕ್ಷದಿಂದ ಪೂರ್ವಾನುಮತಿ ಪಡೆದಿದ್ದರೆ, ಅಥವಾ ಆತನ ಮತದಾನ ಅಥವಾ ಗೈರುಹಾಜರಿಯನ್ನು ಪಕ್ಷವು 15 ದಿನಗಳೊಳಗೆ ಕ್ಷಮಿಸಿದರೆ ಆತನನ್ನು ಅನರ್ಹಗೊಳಿಸಲಾಗುವುದಿಲ್ಲ.
- ಸ್ವತಂತ್ರ ಸದಸ್ಯರು ಸದನಕ್ಕೆ ಆಯ್ಕೆಯಾದ ನಂತರ ಯಾವುದೇ ರಾಜಕೀಯ ಪಕ್ಷವನ್ನು ಸೇರಿದರೆ ಅವರನ್ನು ಅನರ್ಹಗೊಳಿಸಲಾಗುತ್ತದೆ.
- ನಾಮನಿರ್ದೇಶಿತ ಸದಸ್ಯರು ನಾಮನಿರ್ದೇಶನಗೊಂಡ ಆರು ತಿಂಗಳ ನಂತರ ಯಾವುದೇ ರಾಜಕೀಯ ಪಕ್ಷವನ್ನು ಸೇರಿದರೆ ಅವರು ಅನರ್ಹರಾಗುತ್ತಾರೆ.
- ಸದನದ ಸದಸ್ಯನನ್ನು ಅನರ್ಹಗೊಳಿಸುವ ನಿರ್ಧಾರವು ಸದನದ ಸಭಾಪತಿ ಅಥವಾ ಸಭಾಧ್ಯಕ್ಷರ ವಿವೇಚನೆಗೆ ಒಳಪಟ್ಟಿರುತ್ತದೆ.
ವಿನಾಯಿತಿಗಳು:
ಹತ್ತನೇ ಅನುಸೂಚಿಯು ಮೂಲತಃ ಸದಸ್ಯರನ್ನು ಅನರ್ಹಗೊಳಿಸದಂತೆ ಎರಡು ವಿನಾಯಿತಿಗಳನ್ನು ಒಳಗೊಂಡಿತ್ತು:
- ‘ಶಾಸಕಾಂಗ ಪಕ್ಷ’ದ ಮೂರನೇ ಒಂದು (1/3) ಸದಸ್ಯರು ವಿಭಜನೆಗೊಂಡು ಪ್ರತ್ಯೇಕ ಗುಂಪನ್ನು ರಚಿಸುವುದು.
- ‘ಶಾಸಕಾಂಗ ಪಕ್ಷ’ದ ಮೂರನೇ ಎರಡರಷ್ಟು (2/3) ಸದಸ್ಯರ ಅನುಮೋದನೆಯೊಂದಿಗೆ ತಮ್ಮ ರಾಜಕೀಯ ಪಕ್ಷವನ್ನು ಮತ್ತೊಂದು ಪಕ್ಷದೊಂದಿಗೆ ವಿಲೀನಗೊಳಿಸುವುದು.
- ಆದರೆ, ಕಾನೂನನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ 2003ರಲ್ಲಿ 91ನೇ ತಿದ್ದುಪಡಿಯ ಮೂಲಕ ಮೊದಲ ವಿನಾಯಿತಿಯನ್ನು ( ಮೂರನೇ ಒಂದು ವಿಭಜನೆ) ತೆಗೆದುಹಾಕಲಾಯಿತು.
ಸರ್ವೋಚ್ಚ ನ್ಯಾಯಾಲಯದ ಪ್ರಮುಖ ತೀರ್ಪುಗಳು
- ಕಿಹೋಟೊ ಹೊಲ್ಲೋಹಾನ್ v/s ಜಚಿಲ್ಹು (1992): ಸಂವಿಧಾನದ ಹತ್ತನೇ ಅನುಸೂಚಿಯ (ಪಕ್ಷಾಂತರ ನಿಷೇಧ ಕಾಯ್ದೆ) ಅಡಿಯಲ್ಲಿ ಅನರ್ಹತೆಗೆ ಸಂಬಂಧಿಸಿದಂತೆ ಸಭಾಪತಿ ನೀಡುವ ನಿರ್ಧಾರಗಳು ಉಚ್ಚ ನ್ಯಾಯಾಲಯಗಳು ಮತ್ತು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಂಗ ವಿಮರ್ಶೆಗೆ ಒಳಪಟ್ಟಿರುತ್ತವೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
- ಕೀಶಮ್ ಮೇಘಚಂದ್ರ ಸಿಂಗ್ v/s ಸ್ಪೀಕರ್, ಮಣಿಪುರ (2020): ಅನರ್ಹತೆಯ ಅರ್ಜಿಯ ಮೇಲೆ ಸ್ಪೀಕರ್ ನಿರ್ಧಾರ ತೆಗೆದುಕೊಳ್ಳಲು ಸರ್ವೋಚ್ಚ ನ್ಯಾಯಾಲಯವು ಗರಿಷ್ಠ ಮೂರು ತಿಂಗಳ ಕಾಲಮಿತಿಯನ್ನು ನಿಗದಿಪಡಿಸಿದೆ.