ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿವಾದ | ಕೇಂದ್ರೀಯ ತನಿಖಾ ದಳ (Central Bureau of Investigation – CBI) | ರೋಗನಿರೋಧಕ ಜೀವಕೋಶಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಿದರೆ HIV ವಿರುದ್ಧ ಹೋರಾಡಲು ನೆರವಾಗಬಹುದು : ಅಧ್ಯಯನ | ಅಲ್ಝೈಮರ್ ಕಾಯಿಲೆ (Alzheimer’s Disease) | ತಾತ್ಯಾ ಟೋಪೆ | ಸಿಕ್ಕಿಂ: ಭಾರತದ ಪ್ರಥಮ ಕಾಗದರಹಿತ ನ್ಯಾಯಾಂಗ ರಾಜ್ಯ | ಹೊಸ ಇ-ಬಸ್ ಯೋಜನೆಗೆ ಕೇಂದ್ರ ಸರ್ಕಾರದ ಒಲವು | ಭಾರತದಲ್ಲಿ ಪವಿತ್ರ ವನಗಳು / ದೇವರ ಕಾಡುಗಳು (Sacred Groves in India) | ಲಿಂಗತ್ವ ಅಲ್ಪಸಂಖ್ಯಾತರ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಕಾಯ್ದೆ, 2026 | ರು-ಸೋಮ್ ಸೇತುವೆಗಳು (Ru-Soam Bridges) | ತಾಂಜಾನಿಯಾ (Tanzania) | ಹಂಟಾವೈರಸ್ ಸೋಂಕು ಹರಡುವಿಕೆ

ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿವಾದ

ಆಡಳಿತ

ಇತ್ತೀಚಿಗೆ ಸುದ್ದಿಯಲ್ಲಿದೆ: 

  • ‘ರಾಷ್ಟ್ರೀಯ ಪರೀಕ್ಷಾ ಸಂಸ್ಥೆ’ (National Testing Agency – NTA)ಯು 2026 ರ ನೀಟ್ (NEET) ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಇತ್ತೀಚೆಗೆ ತಿಳಿಸಿದೆ. ಹೀಗಾಗಿ, ‘ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ’ (NEET)ಯ ಮರುಪರೀಕ್ಷೆಯನ್ನು ನಡೆಸಲಾಗುವುದು ಎಂದು ಘೋಷಿಸಿದೆ. 
  • ನೀಟ್ (NEET) ಪರೀಕ್ಷೆಯು ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪಡೆಯುವ ಪ್ರಮುಖ ಮಾರ್ಗವಾಗಿದೆ.

ರಾಧಾಕೃಷ್ಣನ್ ಸಮಿತಿ: 

  • ನೀಟ್-ಯುಜಿ (NEET-UG) 2024 ರ ವಿವಾದದ ಹಿನ್ನೆಲೆಯಲ್ಲಿ, ಕೇಂದ್ರ ಶಿಕ್ಷಣ ಸಚಿವಾಲಯವು ಇಸ್ರೋದ (ISRO) ಮಾಜಿ ಅಧ್ಯಕ್ಷರಾದ ಕೆ. ರಾಧಾಕೃಷ್ಣನ್ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (National Testing Agency – NTA):

  • ಸ್ಥಾಪನೆ: 2017 ರಲ್ಲಿ ಸ್ಥಾಪಿಸಲಾಯಿತು.
  • ಇದು ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ‘ಉನ್ನತ ಶಿಕ್ಷಣ ಇಲಾಖೆ’ಯ ಅಧೀನದಲ್ಲಿ ಕಾರ್ಯನಿರ್ವಹಿಸುವ ಸ್ವಾಯತ್ತ ಸಂಸ್ಥೆಯಾಗಿದೆ.
  • NTA ಯು ಪ್ರಮುಖವಾಗಿ ಈ ಕೆಳಗಿನ ಪ್ರವೇಶ ಪರೀಕ್ಷೆಗಳನ್ನು ನಡೆಸುತ್ತದೆ:
    • ಎಂಜಿನಿಯರಿಂಗ್‌ಗಾಗಿ – ಜಂಟಿ ಪ್ರವೇಶ ಪರೀಕ್ಷೆ (Joint Entrance Examination – JEE Main).
    • ವೈದ್ಯಕೀಯ ಶಿಕ್ಷಣಕ್ಕಾಗಿ – ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ-ಪದವಿಪೂರ್ವ (NEET-UG).
    • ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿನ ಸಾಮಾನ್ಯ ಪದವಿ ಮತ್ತು ಸ್ನಾತಕೋತ್ತರ ಕಾರ್ಯಕ್ರಮಗಳಿಗಾಗಿ – ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (Common University Entrance Test – CUET).
    • ಇದು ‘ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ’ (NHAI), ದೆಹಲಿ ಉಚ್ಚ ನ್ಯಾಯಾಲಯ, ‘ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ’ (EPFO) ಮತ್ತು ಕೇಂದ್ರೀಯ ವಿಶ್ವವಿದ್ಯಾಲಯಗಳ ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆಗಳನ್ನೂ ನಡೆಸುತ್ತದೆ.

ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ವಿಧಾನಗಳ ತಡೆಗಟ್ಟುವಿಕೆ) ಕಾಯ್ದೆ, 2024:

  • 2024 ರಲ್ಲಿ ಅಂಗೀಕರಿಸಲಾದ ಈ ಕಾಯ್ದೆಯು, UPSC, SSC ಯಂತಹ ನೇಮಕಾತಿ ಪರೀಕ್ಷೆಗಳು ಹಾಗೂ NEET, JEE, ಮತ್ತು CUET ನಂತಹ ಪ್ರವೇಶ ಪರೀಕ್ಷೆಗಳಲ್ಲಿ ನಡೆಯುವ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳನ್ನು ತಡೆಯುವ ಕಟ್ಟುನಿಟ್ಟಾದ ಗುರಿಯನ್ನು ಹೊಂದಿದೆ.
  • ಈ ಕಾಯ್ದೆಯು “ಅಕ್ರಮ ವಿಧಾನಗಳನ್ನು” ವಿಶಾಲವಾಗಿ ವ್ಯಾಖ್ಯಾನಿಸಿದ್ದು, ಇದು ಈ ಕೆಳಗಿನ ದುಷ್ಕೃತ್ಯಗಳನ್ನು ಒಳಗೊಂಡಿದೆ:
  1. ಪ್ರಶ್ನೆಪತ್ರಿಕೆಗಳು ಅಥವಾ ಸರಿ-ಉತ್ತರಗಳನ್ನು ಸೋರಿಕೆ ಮಾಡುವುದು.
  2. ಪರೀಕ್ಷೆಯ ಸಮಯದಲ್ಲಿ ಅಭ್ಯರ್ಥಿಗಳಿಗೆ ನೆರವಾಗುವುದು (ಅನಧಿಕೃತ ಸಂವಹನ, ಉತ್ತರಗಳನ್ನು ಒದಗಿಸುವುದು).
  3. ಕಂಪ್ಯೂಟರ್ ನೆಟ್‌ವರ್ಕ್‌ಗಳು ಅಥವಾ ಸಂಪನ್ಮೂಲಗಳನ್ನು ತಿರುಚುವುದು.
  4. ನಕಲಿ ಅಭ್ಯರ್ಥಿಯಾಗಿ ಪರೀಕ್ಷೆ ಬರೆಯುವುದು.
  5. ನಕಲಿ ಪರೀಕ್ಷೆಗಳನ್ನು ನಡೆಸುವುದು ಅಥವಾ ನಕಲಿ ದಾಖಲೆಗಳನ್ನು ನೀಡುವುದು.
  6. ಅರ್ಹತಾ ಪಟ್ಟಿ ಅಥವಾ ರ್‍ಯಾಂಕ್ ಪಡೆಯಲು ದಾಖಲೆಗಳನ್ನು ತಿರುಚುವುದು.
  • ದಂಡ ಮತ್ತು ಶಿಕ್ಷೆಗಳು:
  • ವ್ಯಕ್ತಿಗಳಿಗೆ: ಅಪರಾಧದ ತೀವ್ರತೆಗೆ ಅನುಗುಣವಾಗಿ 3 ರಿಂದ 10 ವರ್ಷಗಳವರೆಗೆ ಕಾರಾಗೃಹ ಶಿಕ್ಷೆ.
  • ಸಂಘಟಿತ ಅಪರಾಧಗಳಿಗೆ ರೂ. 1 ಕೋಟಿ ವರೆಗೆ ದಂಡ.
  • ಸೇವಾ ಪೂರೈಕೆದಾರರಿಗೆ: ಅಕ್ರಮಗಳಲ್ಲಿ ಭಾಗಿಯಾಗಿದ್ದಲ್ಲಿ ರೂ. 1 ಕೋಟಿ ವರೆಗೆ ದಂಡ.
  • 4 ವರ್ಷಗಳ ಕಾಲ ಯಾವುದೇ ಸಾರ್ವಜನಿಕ ಪರೀಕ್ಷೆಗಳನ್ನು ನಡೆಸದಂತೆ ನಿರ್ಬಂಧ.
  • ಇದರಲ್ಲಿ ಭಾಗಿಯಾದ ನಿರ್ದೇಶಕರು ಅಥವಾ ಆಡಳಿತ ಮಂಡಳಿಯ ಮೇಲೆ ವೈಯಕ್ತಿಕ ಹೊಣೆಗಾರಿಕೆ ನಿಗದಿಪಡಿಸುವುದು.
  • ಸಂಘಟಿತ ಅಪರಾಧಗಳು: 5 ರಿಂದ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಕನಿಷ್ಠ ರೂ. 1 ಕೋಟಿ ದಂಡ.
  • ಅಕ್ರಮದಲ್ಲಿ ಭಾಗಿಯಾದ ಸಂಸ್ಥೆಯ ಆಸ್ತಿಯನ್ನು ಜಪ್ತಿ ಮಾಡುವ ಮತ್ತು ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶ.
  • ತನಿಖೆ:
  1. ಈ ಕಾಯ್ದೆಯ ಅಡಿಯಲ್ಲಿ ಬರುವ ಎಲ್ಲಾ ಅಪರಾಧಗಳು ಸಂಜ್ಞೇಯ (Cognisable – ವಾರಂಟ್ ಇಲ್ಲದೆ ಬಂಧಿಸುವಂಥದ್ದು), ಜಾಮೀನು-ರಹಿತ ಹಾಗೂ ರಾಜಿ-ರಹಿತ (Non-compoundable) ಸ್ವರೂಪವನ್ನು ಹೊಂದಿವೆ.
  2. ಈ ಕಾಯ್ದೆಯ ಅಡಿಯಲ್ಲಿನ ಅಪರಾಧಗಳ ತನಿಖೆಯನ್ನು ‘ಪೊಲೀಸ್ ಅಧೀಕ್ಷಕರು’ ಅಥವಾ ‘ಸಹಾಯಕ ಪೊಲೀಸ್ ಆಯುಕ್ತರು’ ಶ್ರೇಣಿಗಿಂತ ಕೆಳಗಿನವರಲ್ಲದ ಅಧಿಕಾರಿಯು ಮಾತ್ರ ನಡೆಸುತ್ತಾರೆ.
  3. ಕೇಂದ್ರ ಸರ್ಕಾರವು ಈ ಪ್ರಕರಣಗಳ ತನಿಖೆಯನ್ನು ಯಾವುದೇ ‘ಕೇಂದ್ರೀಯ ತನಿಖಾ ಸಂಸ್ಥೆಗೆ’ ವರ್ಗಾಯಿಸುವ ಅಧಿಕಾರವನ್ನು ಹೊಂದಿದೆ.

ರಾಜಕೀಯ ಮತ್ತು ಆಡಳಿತ

Syllabus: GS2/Polity and Governance

ಇತ್ತೀಚಿಗೆ ಸುದ್ದಿಯಲ್ಲಿದೆ: 

  • ಕೇಂದ್ರ ಕ್ಯಾಬಿನೆಟ್ (ಸಚಿವ ಸಂಪುಟದ) ನೇಮಕಾತಿ ಸಮಿತಿಯು (ACC) ‘ಕೇಂದ್ರೀಯ ತನಿಖಾ ದಳ’ದ (CBI) ಹಾಲಿ ನಿರ್ದೇಶಕರಾದ ಪ್ರವೀಣ್ ಸೂದ್ ಅವರ ಅಧಿಕಾರಾವಧಿಯನ್ನು ಒಂದು ವರ್ಷದವರೆಗೆ ವಿಸ್ತರಿಸಲು ಅನುಮೋದನೆ ನೀಡಿದೆ.

ಕೇಂದ್ರೀಯ ತನಿಖಾ ದಳ (Central Bureau of Investigation)ದ ಬಗ್ಗೆ:

  • ಸ್ಥಾಪನೆ: ಕೇಂದ್ರ ಗೃಹ ಸಚಿವಾಲಯದ ನಿರ್ಣಯದ ಮೂಲಕ 1963 ರಲ್ಲಿ ಇದನ್ನು ಸ್ಥಾಪಿಸಲಾಯಿತು.
  • ಆಡಳಿತಾತ್ಮಕ ನಿಯಂತ್ರಣ: ಇದು ಭಾರತ ಸರ್ಕಾರದ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯದ ‘ಸಿಬ್ಬಂದಿ ಮತ್ತು ತರಬೇತಿ ಇಲಾಖೆ’ಯ (DoPT) ಆಡಳಿತಾತ್ಮಕ ನಿಯಂತ್ರಣಕ್ಕೆ ಒಳಪಡುತ್ತದೆ.
  • ಶಿಫಾರಸು ಮಾಡಿದ ಸಮಿತಿ: ‘ಸಂತಾನಂ ಸಮಿತಿ’ಯ ಶಿಫಾರಸಿನ ಮೇರೆಗೆ ಇದನ್ನು ಸ್ಥಾಪಿಸಲಾಯಿತು.
  • ಕಾನೂನಾತ್ಮಕ ಸ್ಥಾನಮಾನ: ಸಿಬಿಐ (CBI) ಒಂದು ಶಾಸನಬದ್ಧ ಸಂಸ್ಥೆಯಲ್ಲ. ಬದಲಾಗಿ, ಇದು ‘ದೆಹಲಿ ವಿಶೇಷ ಪೊಲೀಸ್ ಸ್ಥಾಪನಾ ಕಾಯ್ದೆ’ (DSPE Act), 1946ರ ಮೂಲಕ ತನ್ನ ಅಧಿಕಾರಗಳನ್ನು ಪಡೆಯುತ್ತದೆ.
  • ಪ್ರಮುಖ ಕಾರ್ಯಗಳು:
  1. ಸಿಬಿಐ ಕೇಂದ್ರ ಸರ್ಕಾರದ ಅತ್ಯುನ್ನತ ಹಾಗೂ ಪ್ರಮುಖ ತನಿಖಾ ಸಂಸ್ಥೆಯಾಗಿದೆ.
  2. ಇದು ‘ಕೇಂದ್ರೀಯ ಜಾಗೃತ ಆಯೋಗ’ (CVC) ಮತ್ತು ‘ಲೋಕಪಾಲ್’ಗೆ ಅಗತ್ಯ ತನಿಖಾ ನೆರವು ನೀಡುತ್ತದೆ.
  3. ಇದು ಇಂಟರ್‌ಪೋಲ್ ಸದಸ್ಯ ರಾಷ್ಟ್ರಗಳ ಪರವಾಗಿ ಭಾರತದಲ್ಲಿ ತನಿಖೆಗಳನ್ನು ಸಂಯೋಜಿಸುವ ‘ನೋಡಲ್ ಪೊಲೀಸ್ ಸಂಸ್ಥೆ’ಯಾಗಿ ಕಾರ್ಯನಿರ್ವಹಿಸುತ್ತದೆ.

ರೋಗನಿರೋಧಕ ಜೀವಕೋಶಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಿದರೆ HIV ವಿರುದ್ಧ ಹೋರಾಡಲು ನೆರವಾಗಬಹುದು : ಅಧ್ಯಯನ

ವಿಜ್ಞಾನ ಮತ್ತು ತಂತ್ರಜ್ಞಾನ

ಇತ್ತೀಚಿಗೆ ಸುದ್ದಿಯಲ್ಲಿದೆ:

  • ವಿಜ್ಞಾನಿಗಳು ರೋಗಿಯ ಸ್ವಂತ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ (CAR-T ಥೆರಪಿ) ಮೂಲಕ ಹೆಚ್‌ಐವಿ (HIV) ವೈರಸ್ ಅನ್ನು ನಿಯಂತ್ರಿಸಲು ಹೊಸದೊಂದು ಪ್ರಬಲವಾದ ಕ್ಯಾನ್ಸರ್ ಚಿಕಿತ್ಸಾ ವಿಧಾನವೊಂದನ್ನು ಅಳವಡಿಸಿಕೊಳ್ಳುತ್ತಿದ್ದಾರೆ.

ಅಕ್ವೈರ್ಡ್ ಇಮ್ಯುನೊ ಡಿಫಿಷಿಯೆನ್ಸಿ ಸಿಂಡ್ರೋಮ್ (ಏಡ್ಸ್ – AIDS):

  • ರೋಗಕಾರಕ: ಇದು HIV – ಹ್ಯೂಮನ್ ಇಮ್ಯುನೊ ಡಿಫಿಷಿಯೆನ್ಸಿ ವೈರಸ್’  (ಮಾನವ ರೋಗನಿರೋಧಕತೆ ಕೊರತೆ ವೈರಾಣು) ನಿಂದ ಉಂಟಾಗುವ ದೀರ್ಘಕಾಲೀನ ಹಾಗೂ ಮಾರಾಣಾಂತಿಕ ಕಾಯಿಲೆಯಾಗಿದೆ. ಈ ವೈರಸ್ ಮನುಷ್ಯನ ರೋಗನಿರೋಧಕ ವ್ಯವಸ್ಥೆಯನ್ನು ತೀವ್ರವಾಗಿ ಹಾನಿಗೊಳಿಸುತ್ತದೆ.
  • ಪ್ರಸರಣ: ಎಚ್‌ಐವಿ ಸೋಂಕಿತ ವ್ಯಕ್ತಿಯ ದೇಹದ ನಿರ್ದಿಷ್ಟ ದ್ರವಗಳಾದ ರಕ್ತ, ವೀರ್ಯ, ಗುದನಾಳದ ದ್ರವ, ಯೋನಿ ದ್ರವ ಅಥವಾ ಎದೆಹಾಲಿನೊಂದಿಗೆ ನೇರ ಸಂಪರ್ಕ ಹೊಂದುವುದರ ಮೂಲಕ ಇದು ಹರಡುತ್ತದೆ.
  • ಈ ರೋಗದ ಲಕ್ಷಣಗಳು:
  1. ಹಂತ 1: ಜ್ವರದಂತಹ ಲಕ್ಷಣಗಳು (ಚಳಿಜ್ವರ, ಚರ್ಮದ ಮೇಲೆ ಗುಳ್ಳೆಗಳು, ರಾತ್ರಿ ವೇಳೆ ವಿಪರೀತ ಬೆವರುವುದು).
  2. ಹಂತ 2: ವೈದ್ಯಕೀಯ ಸುಪ್ತಾವಸ್ಥೆ / ಲಕ್ಷಣರಹಿತ ಹಂತ (ಈ ಹಂತದಲ್ಲಿ ರೋಗದ ಯಾವುದೇ ನಿರ್ದಿಷ್ಟ ಲಕ್ಷಣಗಳು ಕಂಡುಬರುವುದಿಲ್ಲ).
  3. ಹಂತ 3: ಏಡ್ಸ್ ಹಂತ (ರೋಗನಿರೋಧಕ ವ್ಯವಸ್ಥೆಯು ತೀವ್ರವಾಗಿ ದುರ್ಬಲಗೊಳ್ಳುವುದು).
  • ತಡೆಗಟ್ಟುವಿಕೆ: ಚಿಕಿತ್ಸೆಗಿಂತ ತಡೆಗಟ್ಟುವಿಕೆಯೇ ಮೇಲು ಎಂಬ ಮಾತಿನಂತೆ, ಸುರಕ್ಷಿತ ವಿಧಾನಗಳ ಬಳಕೆ, ಸೋಂಕಿಲ್ಲದ ಶುದ್ಧ ಸೂಜಿಗಳ ಬಳಕೆ ಮತ್ತು ತಾಯಿಯಿಂದ ಮಗುವಿಗೆ ಸೋಂಕು ಹರಡುವುದನ್ನು ತಡೆಯುವ ಮೂಲಕ ಈ ರೋಗವನ್ನು ನಿಯಂತ್ರಿಸಬಹುದು.
  • ಚಿಕಿತ್ಸೆ : ಎಚ್‌ಐವಿ ಸೋಂಕನ್ನು ಸಂಪೂರ್ಣವಾಗಿ ಗುಣಪಡಿಸಲು ಯಾವುದೇ ಔಷಧಿಯಿಲ್ಲ. ಆದರೆ ‘ಆಂಟಿ-ರೆಟ್ರೋವೈರಲ್ ಔಷಧಗಳ’ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಈ ಔಷಧಗಳು ದೇಹದಲ್ಲಿ ವೈರಸ್ ದ್ವಿಗುಣಗೊಳ್ಳುವುದನ್ನು ತಡೆಯುತ್ತವೆ. ಚಿಕಿತ್ಸೆ ಪಡೆಯದಿದ್ದರೆ, ಎಚ್‌ಐವಿ ಸೋಂಕು ಹಲವು ವರ್ಷಗಳ ನಂತರ ‘ಏಡ್ಸ್’ (AIDS) ಹಂತಕ್ಕೆ ತಲುಪುತ್ತದೆ.

ಭಾರತ ಸರ್ಕಾರ ಕೈಗೊಂಡಿರುವ ಪ್ರಮುಖ ಕ್ರಮಗಳು:

  • ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮ (NACP): ಇದು ಕೇಂದ್ರ ಸರ್ಕಾರದ ‘ಕೇಂದ್ರ ವಲಯದ ಯೋಜನೆ’ ಯಾಗಿದೆ.
  • ಎಚ್‌ಐವಿ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಮತ್ತು ಹಿಮ್ಮೆಟ್ಟಿಸುವ ಮೂಲಕ ಭಾರತವು ‘6ನೇ ಸಹಸ್ರಮಾನದ ಅಭಿವೃದ್ಧಿ ಗುರಿ’ಯನ್ನು (MDG) ಯಶಸ್ವಿಯಾಗಿ ಸಾಧಿಸಿದೆ.
  • PPTCT ಕಾರ್ಯಕ್ರಮ: ಇದು ಪೋಷಕರಿಂದ ಮಗುವಿಗೆ HIV ಸೋಂಕು ಹರಡುವುದನ್ನು ತಡೆಯುವ ಕಾರ್ಯಕ್ರಮವಾಗಿದೆ.
  • ಎಚ್‌ಐವಿ/ಏಡ್ಸ್ ಕಾಯ್ದೆ 2017: ಎಚ್‌ಐವಿ ಸೋಂಕಿತ ವ್ಯಕ್ತಿಗಳ ವಿರುದ್ಧ ಯಾವುದೇ ಆಧಾರದ ಮೇಲೆ ತಾರತಮ್ಯ ಮಾಡುವುದನ್ನು ಇದು ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ.
  • UNAIDS – 90:90:90 ಕಾರ್ಯತಂತ್ರ: 2020ರ ವೇಳೆಗೆ 90% ಸೋಂಕಿತರನ್ನು ಪತ್ತೆ ಹಚ್ಚುವುದು, 90% ಜನರಿಗೆ ART (ಆಂಟಿ-ರೆಟ್ರೋವೈರಲ್) ಚಿಕಿತ್ಸೆ ಒದಗಿಸುವುದು ಮತ್ತು 90% ರಷ್ಟು ವೈರಸ್ ಅನ್ನು ನಿಗ್ರಹಿಸುವ UNAIDS ನ ಕಾರ್ಯತಂತ್ರ ಇದಾಗಿದೆ. ಪ್ರಸ್ತುತ ಈ ಗುರಿಯನ್ನು ’95-95-95′ ಕ್ಕೆ ಪರಿಷ್ಕರಿಸಿ, ಕಾಲಮಿತಿಯನ್ನು ಇನ್ನೂ 10 ವರ್ಷಗಳವರೆಗೆ ವಿಸ್ತರಿಸಲಾಗಿದೆ.
  • ಪ್ರಾಜೆಕ್ಟ್ ಆಕ್ಸಿಲರೇಟ್ (Project ACCELERATE): ಇದು ಜಾನ್ ಹಾಪ್ಕಿನ್ಸ್ ಮತ್ತು NACO ನ ಜಂಟಿ ಉಪಕ್ರಮವಾಗಿದೆ. ‘ಸೇಫ್ ಜಿಂದಗಿ’ (Safe Zindagi) ಆನ್‌ಲೈನ್ ಪೋರ್ಟಲ್ ಮೂಲಕ ಎಚ್‌ಐವಿ ಸೇವೆಗಳನ್ನು ಒದಗಿಸುವುದು ಇದರ ಉದ್ದೇಶವಾಗಿದೆ.
  • ಮಿಷನ್ ಸಂಪರ್ಕ (Mission Sampark): ಆಂಟಿ-ರೆಟ್ರೋವೈರಲ್ ಚಿಕಿತ್ಸೆಯನ್ನು (ART) ಅರ್ಧದಲ್ಲೇ ಕೈಬಿಟ್ಟಿರುವ ಎಚ್‌ಐವಿ ಸೋಂಕಿತರನ್ನು (PLHIV) ಮರಳಿ ಚಿಕಿತ್ಸಾ ವ್ಯಾಪ್ತಿಗೆ ತರುವುದು ಇದರ ಪ್ರಮುಖ ಉದ್ದೇಶವಾಗಿದೆ.

ಅಲ್ಝೈಮರ್ ಕಾಯಿಲೆ (Alzheimer’s Disease)

ವಿಜ್ಞಾನ ಮತ್ತು ತಂತ್ರಜ್ಞಾನ

ಇತ್ತೀಚಿಗೆ ಸುದ್ದಿಯಲ್ಲಿದೆ:

  • ಭಾರತದಲ್ಲಿ ಅಲ್ಝೈಮರ್ ಕಾಯಿಲೆಗೆ ಚಿಕಿತ್ಸೆ ನೀಡುವ ‘ಲೊರ್ಮಲ್ಜಿ’ ಎಂಬ ಹೊಸ ಔಷಧವನ್ನು ‘ಎಲಿ ಲಿಲ್ಲಿ ಅಂಡ್ ಕಂಪನಿ’ಯು ಬಿಡುಗಡೆ ಮಾಡಿದೆ. ಇದು ದೇಶದಲ್ಲಿ ಈ ಕಾಯಿಲೆಯ ಮೂಲ ಸ್ವರೂಪವನ್ನು ಮಾರ್ಪಡಿಸಬಲ್ಲ ಮೊಟ್ಟಮೊದಲ ಚಿಕಿತ್ಸಾ ವಿಧಾನಗಳಲ್ಲಿ ಒಂದಾಗಿದೆ.
  • ಲೊರ್ಮಲ್ಜಿ ಔಷಧ: ಇದೊಂದು ‘ಏಕತದ್ರೂಪಿ ಪ್ರತಿಕಾಯ’ವಾಗಿದೆ (Monoclonal antibody). ಇದನ್ನು ತಿಂಗಳಿಗೊಮ್ಮೆ ರಕ್ತನಾಳದ ಮೂಲಕ ನೀಡಲಾಗುತ್ತದೆ. ಅಲ್ಝೈಮರ್ ಕಾಯಿಲೆಯ ಉಲ್ಬಣಕ್ಕೆ ಕಾರಣವಾಗುವ ಹಾಗೂ ಮೆದುಳಿನಲ್ಲಿ ಶೇಖರವಾಗುವ ‘ಅಮೈಲಾಯ್ಡ್-ಬೀಟಾ’ ಎಂಬ ಹಾನಿಕಾರಕ ಪ್ರೋಟೀನ್ ಶೇಖರಣೆಗಳನ್ನು ತೆಗೆದುಹಾಕುವ ಮೂಲಕ ಇದು ಕಾರ್ಯನಿರ್ವಹಿಸುತ್ತದೆ.

ಅಲ್ಝೈಮರ್ ಕಾಯಿಲೆ’ಯ ಬಗ್ಗೆ:

  • ಇದು ‘ಬುದ್ಧಿಕ್ಷೀಣತೆ’ ಅಥವಾ ಮರೆಗುಳಿತನದ ಅತ್ಯಂತ ಸಾಮಾನ್ಯ ರೂಪವಾಗಿದೆ. ಇದೊಂದು ಮೆದುಳಿನ ಅಸ್ವಸ್ಥತೆಯಾಗಿದ್ದು, ಇದು ವ್ಯಕ್ತಿಯ ಸ್ಮರಣಶಕ್ತಿ ಮತ್ತು ಆಲೋಚನಾ ಸಾಮರ್ಥ್ಯವನ್ನು ನಿಧಾನವಾಗಿ ನಾಶಪಡಿಸುತ್ತದೆ.
  • ಆಲೋಚನೆ, ನೆನಪು ಮತ್ತು ತಾರ್ಕಿಕತೆಯಂತಹ ‘ಅರಿವಿನ ಸಾಮರ್ಥ್ಯಗಳು’ ಹಾಗೂ ನಡವಳಿಕೆಯ ಕೌಶಲ್ಯಗಳು ತೀವ್ರವಾಗಿ ಕುಗ್ಗುವುದು ಇದರ ಪ್ರಮುಖ ಲಕ್ಷಣವಾಗಿದೆ. ಇದು ಎಷ್ಟರಮಟ್ಟಿಗೆ ಇರುತ್ತದೆ ಎಂದರೆ, ವ್ಯಕ್ತಿಯ ದೈನಂದಿನ ಜೀವನ ಮತ್ತು ಚಟುವಟಿಕೆಗಳಿಗೆ ತೀವ್ರ ಅಡ್ಡಿಯುಂಟಾಗುತ್ತದೆ.
  • ಕಾಲಕ್ರಮೇಣ, ಅಲ್ಝೈಮರ್ ಪೀಡಿತರು ಊಟ ಮಾಡುವುದು ಅಥವಾ ನಡೆಯುವುದರಂತಹ ಅತ್ಯಂತ ಸರಳವಾದ ದೈನಂದಿನ ಕಾರ್ಯಗಳನ್ನು ಮಾಡುವ ಸಾಮರ್ಥ್ಯವನ್ನೂ ಸಹ ಕಳೆದುಕೊಳ್ಳುತ್ತಾರೆ.
  • ಜಾಗತಿಕವಾಗಿ ‘ಲೆಕಾನೆಮಾಬ್’ (Lecanemab) ಮತ್ತು ‘ಅಡುಕನುಮಾಬ್’ (Aducanumab) ನಂತಹ ಔಷಧಗಳು ಲಭ್ಯವಿದ್ದರೂ, ಅವುಗಳ ಪ್ರಯೋಜನಗಳು ಸೀಮಿತವಾಗಿವೆ. ಅಲ್ಲದೆ, ಅವು ಸಂಕೀರ್ಣತೆ, ಅತಿ ಹೆಚ್ಚಿನ ವೆಚ್ಚ ಮತ್ತು ಸುರಕ್ಷತೆಯ ಆತಂಕಗಳನ್ನು ಹೊಂದಿವೆ.

ತಾತ್ಯಾ ಟೋಪೆ

ಇತಿಹಾಸ

ಇತ್ತೀಚೆಗೆ ಸುದ್ದಿಯಲ್ಲಿದೆ:

  • ಮಧ್ಯಪ್ರದೇಶದ ಸರ್ಕಾರಿ ಪತ್ರಾಗಾರದಲ್ಲಿ (Archives – ಐತಿಹಾಸಿಕ ದಾಖಲೆಗಳ ಸಂಗ್ರಹಾಲಯ) 1857ರ ಕಾಲದ ತಾತ್ಯಾ ಟೋಪೆ ಅವರ ಅಪರೂಪದ ಕೈಬರಹದ ಮತ್ತು ಸಹಿ ಇರುವ ಪತ್ರವೊಂದು ಇತ್ತೀಚೆಗೆ ಪತ್ತೆಯಾಗಿದೆ.

ತಾತ್ಯಾ ಟೋಪೆ ಅವರ ಬಗ್ಗೆ

  • ಆರಂಭಿಕ ಜೀವನ: ತಾತ್ಯಾ ಟೋಪೆ ಅವರ ಮೂಲ ಹೆಸರು ‘ರಾಮಚಂದ್ರ ಪಾಂಡುರಂಗ ಟೋಪೆ’. ಇವರು 1814 ರಲ್ಲಿ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಜನಿಸಿದರು.
  • ಇವರ ತಂದೆಯು ಮರಾಠ ಸಾಮ್ರಾಜ್ಯದ ಕೊನೆಯ ಪೇಶ್ವೆಯಾದ ‘ಎರಡನೇ ಬಾಜಿರಾವ್’ ಅವರ ಆಸ್ಥಾನದಲ್ಲಿ ಗಣ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.
  • ಎರಡನೇ ಬಾಜಿರಾವ್ ಅವರ ದತ್ತುಪುತ್ರನಾದ ‘ನಾನಾ ಸಾಹೇಬ್’ ಅವರೊಂದಿಗೆ ತಾತ್ಯಾ ಟೋಪೆ ಅವರು ನಿಕಟ ಒಡನಾಟ ಹೊಂದಿದ್ದರು. ಇದೇ ನಂಟು ಮುಂದಿನ ದಿನಗಳಲ್ಲಿ 1857ರ ಮಹಾದಂಗೆಯಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಲು ಕಾರಣವಾಯಿತು.
  • 1857ರ ದಂಗೆಯಲ್ಲಿನ ಪಾತ್ರ: ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ (1857) ಇವರು ಅತ್ಯಂತ ಸಮರ್ಥ ಸೇನಾ ದಂಡನಾಯಕರಾಗಿ ಹೊರಹೊಮ್ಮಿದರು.
  1. ಬ್ರಿಟಿಷರ ವಿರುದ್ಧದ ಹೋರಾಟದ ಪ್ರಮುಖ ಕೇಂದ್ರಗಳಾಗಿದ್ದ ಕಾನ್ಪುರ ಮತ್ತು ಗ್ವಾಲಿಯರ್‌ನಲ್ಲಿ ಇವರು ಪ್ರಮುಖ ಪಾತ್ರ ವಹಿಸಿದರು.
  2. ಇವರು ಝಾನ್ಸಿ ರಾಣಿ ಲಕ್ಷ್ಮೀಬಾಯಿಯಂತಹ ನಾಯಕಿಯೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಿ, ಬ್ರಿಟಿಷ್ ಪಡೆಗಳ ವಿರುದ್ಧದ ದಂಗೆಯನ್ನು ಪ್ರಬಲವಾಗಿ ಮುನ್ನಡೆಸಲು ನೆರವಾದರು.
  • ಸೇನಾ ತಂತ್ರಗಳು: ತಾತ್ಯಾ ಟೋಪೆ ಅವರು ಗೆರಿಲ್ಲಾ ಯುದ್ಧತಂತ್ರ, ಕ್ಷಿಪ್ರ ಚಲನವಲನ ಮತ್ತು ಹಠಾತ್ ದಾಳಿಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸುವುದರಲ್ಲಿ ಅಪ್ರತಿಮರಾಗಿದ್ದರು.
  • ಅಂತಿಮವಾಗಿ ಇವರನ್ನು ಬ್ರಿಟಿಷರು ಸೆರೆಹಿಡಿದರು. ಔಪಚಾರಿಕ ವಿಚಾರಣೆಯ ನಂತರ 1859 ರಲ್ಲಿ ಶಿವಪುರಿಯಲ್ಲಿ ಇವರನ್ನು ಗಲ್ಲಿಗೇರಿಸಲಾಯಿತು.

ಸಿಕ್ಕಿಂ: ಭಾರತದ ಪ್ರಥಮ ಕಾಗದರಹಿತ ನ್ಯಾಯಾಂಗ ರಾಜ್ಯ

ರಾಜಕೀಯ ಮತ್ತು ಆಡಳಿತ

ಇತ್ತೀಚೆಗೆ ಸುದ್ದಿಯಲ್ಲಿದೆ:

  • ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು, ಸಿಕ್ಕಿಂ ರಾಜ್ಯವನ್ನು ಭಾರತದ ಮೊಟ್ಟಮೊದಲ ‘ಕಾಗದರಹಿತ ನ್ಯಾಯಾಂಗ ವ್ಯವಸ್ಥೆ’ ಹೊಂದಿದ ರಾಜ್ಯವೆಂದು ಘೋಷಿಸಿದ್ದಾರೆ.

ಪ್ರಮುಖ ಅಂಶಗಳು:

  • ಮಹತ್ವ: ಈ ಉಪಕ್ರಮವು ಕಾಗದದ ಕಡತಗಳ ಮೇಲಿನ ಅವಲಂಬನೆಯನ್ನು ಗಣನೀಯವಾಗಿ ತಗ್ಗಿಸುತ್ತದೆ. ಜೊತೆಗೆ, ಇದು ಕಾರ್ಯಾಚರಣೆಯ ವಿಳಂಬವನ್ನು ಕಡಿಮೆ ಮಾಡುತ್ತದೆ, ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ ಮತ್ತು ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆಯನ್ನು ತಗ್ಗಿಸಲು ನೆರವಾಗುತ್ತದೆ.
  • ತಂತ್ರಜ್ಞಾನದ ಅಳವಡಿಕೆ: ಈ ವ್ಯವಸ್ಥೆಯು ಇ-ಫೈಲಿಂಗ್, ಡಿಜಿಟಲ್ ಪ್ರಕರಣ ನಿರ್ವಹಣೆ ಮತ್ತು ವರ್ಚುವಲ್ (ಆನ್‌ಲೈನ್) ವಿಚಾರಣೆಗಳನ್ನು ಒಳಗೊಂಡಿದೆ. ಇದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಇ-ಕೋರ್ಟ್ಸ್ ಕಾರ್ಯಾಚರಣಾ ಮಾದರಿಯ ಯೋಜನೆ’ (e-Courts Mission Mode Project) ಮತ್ತು ‘ಡಿಜಿಟಲ್ ಇಂಡಿಯಾ’ ದೃಷ್ಟಿಕೋನಕ್ಕೆ ಪೂರಕವಾಗಿದೆ.
  • ಗುಡ್ಡಗಾಡು ಪ್ರದೇಶಗಳಿಗೆ ಇದರ ಪ್ರಸ್ತುತತೆ: ಸಿಕ್ಕಿಂನಂತಹ ಗುಡ್ಡಗಾಡು ಪ್ರದೇಶಗಳಲ್ಲಿ ಭೌಗೋಳಿಕ ಅಡೆತಡೆಗಳನ್ನು ನಿವಾರಿಸುವಲ್ಲಿ ಈ ಡಿಜಿಟಲೀಕರಣವು ಪ್ರಮುಖ ಪಾತ್ರ ವಹಿಸುತ್ತದೆ. ಇದು ಕಕ್ಷಿದಾರರು ಮತ್ತು ವಕೀಲರಿಗೆ ನ್ಯಾಯವನ್ನು ಸುಲಭವಾಗಿ ಹಾಗೂ ತ್ವರಿತವಾಗಿ ಪಡೆದುಕೊಳ್ಳಲು ಅನುಕೂಲ ಮಾಡಿಕೊಡುತ್ತದೆ.

ಹೊಸ ಇ-ಬಸ್ ಯೋಜನೆಗೆ ಕೇಂದ್ರ ಸರ್ಕಾರದ ಒಲವು

ಪರಿಸರ

ಇತ್ತೀಚೆಗೆ ಸುದ್ದಿಯಲ್ಲಿದೆ:

  • ‘ಪಿಎಂ ಇ-ಡ್ರೈವ್’ (PM E-DRIVE) ಕಾರ್ಯಕ್ರಮದ ಅಡಿಯಲ್ಲಿ ಎಲ್ಲಾ 14,000 ಇ-ಬಸ್‌ಗಳ ಗುತ್ತಿಗೆ ಪ್ರಕ್ರಿಯೆ ಮತ್ತು ಹಂಚಿಕೆಯನ್ನು ಪೂರ್ಣಗೊಳಿಸಿದ ನಂತರ, ಕೇಂದ್ರ ಸರ್ಕಾರವು ರಾಜ್ಯಗಳಿಗಾಗಿ ಹೊಸ ‘ಎಲೆಕ್ಟ್ರಿಕ್  ಬಸ್’ ಯೋಜನೆಯೊಂದನ್ನು ಜಾರಿಗೊಳಿಸುವ ಸಾಧ್ಯತೆಯಿದೆ.

ಪಿಎಂ ಇ-ಡ್ರೈವ್ (PM E-DRIVE) ಯೋಜನೆಯ ಬಗ್ಗೆ:

  • ಉದ್ದೇಶ: ಭಾರತದಲ್ಲಿ ವಿದ್ಯುತ್ ಚಾರ್ಜಿಂಗ್ ಮೂಲಸೌಕರ್ಯವನ್ನು ಸ್ಥಾಪಿಸುವುದು ಮತ್ತು ವಿದ್ಯುತ್ ಚಾಲಿತ ವಾಹನಗಳ (EV) ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು.
  • ಅವಧಿ : ಈ ಯೋಜನೆಯನ್ನು ಅಕ್ಟೋಬರ್ 1, 2024 ರಿಂದ ಮಾರ್ಚ್ 31, 2026 ರವರೆಗೆ ಜಾರಿಗೊಳಿಸಲಾಗುವುದು.
  • ಇ-ವೋಚರ್‌ಗಳು: ಈ ಯೋಜನೆಯ ಅಡಿಯಲ್ಲಿ ಅಗತ್ಯ ಉತ್ತೇಜನಾ ಸೌಲಭ್ಯಗಳನ್ನು ಪಡೆಯಲು, ಎಲೆಕ್ಟ್ರಿಕ್ ವಾಹನಗಳ ಖರೀದಿದಾರರಿಗಾಗಿ ‘ಭಾರೀ ಕೈಗಾರಿಕಾ ಸಚಿವಾಲಯ’ವು ಇ-ವೋಚರ್‌ಗಳನ್ನು ಪರಿಚಯಿಸುತ್ತಿದೆ.
  • ಚಾರ್ಜಿಂಗ್ ಕೇಂದ್ರಗಳು: ಎಲೆಕ್ಟ್ರಿಕ್ ವಾಹನಗಳ ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳನ್ನು (EVPCS) ಬೃಹತ್ ಪ್ರಮಾಣದಲ್ಲಿ ಸ್ಥಾಪಿಸುವ ಮೂಲಕ, EV ಖರೀದಿದಾರರ ಪ್ರಯಾಣದ ವ್ಯಾಪ್ತಿಯ ಕುರಿತಾದ ಆತಂಕವನ್ನು ಈ ಯೋಜನೆಯು ನಿವಾರಿಸುತ್ತದೆ.

ಸರ್ಕಾರದ ಉಪಕ್ರಮಗಳು: 

  • ಭಾರತದ ಎಲೆಕ್ಟ್ರಿಕ್ ವಾಹನಗಳ ನೀತಿ: 2030 ರ ವೇಳೆಗೆ ಖಾಸಗಿ ಕಾರುಗಳಲ್ಲಿ ಶೇ. 30%, ವಾಣಿಜ್ಯ ಕಾರುಗಳಲ್ಲಿ ಶೇ. 70%, ಬಸ್‌ಗಳಲ್ಲಿ ಶೇ. 40% ಮತ್ತು ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಲ್ಲಿ ಶೇ. 80% ರಷ್ಟು ಇ- ವಾಹನಗಳ ಮಾರಾಟದ ಗುರಿಯನ್ನು ಹೊಂದುವ ಮಹತ್ವಾಕಾಂಕ್ಷೆಯನ್ನು ಇದು ಹೊಂದಿದೆ.
  • ರಾಷ್ಟ್ರೀಯ ಎಲೆಕ್ಟ್ರಿಕ್ ಸಾರಿಗೆ ವಾಹನ ಗುರಿ ಯೋಜನೆ (NEMMP): ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸುವ ಮೂಲಕ ‘ರಾಷ್ಟ್ರೀಯ ಇಂಧನ ಭದ್ರತೆ’ಯನ್ನು ಸಾಧಿಸುವ ಗುರಿಯೊಂದಿಗೆ 2013 ರಲ್ಲಿ NEMMP ಯನ್ನು ಪ್ರಾರಂಭಿಸಲಾಯಿತು.
  • ಫೇಮ್-ಇಂಡಿಯಾ ಯೋಜನೆ (FAME India Scheme): ವಿದ್ಯುತ್ ಚಾಲಿತ ವಾಹನಗಳ ತ್ವರಿತ ಅಳವಡಿಕೆ ಮತ್ತು ಉತ್ಪಾದನೆಯನ್ನು (Faster Adoption and Manufacture of EVs – FAME) ಉತ್ತೇಜಿಸಲು 2015 ರಲ್ಲಿ ‘ಫೇಮ್ ಇಂಡಿಯಾ’ ಯೋಜನೆಯನ್ನು ಪ್ರಾರಂಭಿಸಲಾಯಿತು.

ಭಾರತದಲ್ಲಿ ಪವಿತ್ರ ವನಗಳು / ದೇವರ ಕಾಡುಗಳು (Sacred Groves in India)

ಪರಿಸರ

ಇತ್ತೀಚೆಗೆ ಸುದ್ದಿಯಲ್ಲಿದೆ:

  • ಕೇರಳ ರಾಜ್ಯ ಜೀವವೈವಿಧ್ಯ ಮಂಡಳಿಯು ಪವಿತ್ರ ವನಗಳನ್ನು ಮರುಸ್ಥಾಪಿಸಲು ಪ್ರಾಯೋಗಿಕ ಕಾರ್ಯಕ್ರಮವೊಂದನ್ನು ಪ್ರಾರಂಭಿಸಿದೆ.

ಪವಿತ್ರ ವನಗಳು/ ದೇವರ ಕಾಡುಗಳು (Sacred Groves):

  • ಪವಿತ್ರ ವನಗಳೆಂದರೆ, ಧಾರ್ಮಿಕ ನಂಬಿಕೆಗಳು ಮತ್ತು ಸಾಂಪ್ರದಾಯಿಕ ಆಚರಣೆಗಳ ಕಾರಣದಿಂದಾಗಿ ಸ್ಥಳೀಯ ಸಮುದಾಯಗಳಿಂದ ಸಂರಕ್ಷಿಸಲ್ಪಟ್ಟ ಅರಣ್ಯ ಅಥವಾ ನೈಸರ್ಗಿಕ ಸಸ್ಯವರ್ಗದ ಪ್ರದೇಶಗಳಾಗಿವೆ.
  • ಇವು ದೇವಾಲಯಗಳು, ಆಚರಣೆಗಳು ಮತ್ತು ಸ್ಥಳೀಯ ಸಂಪ್ರದಾಯಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದು, ಸಮುದಾಯ ಸಂರಕ್ಷಿತ ಪರಿಸರ ವ್ಯವಸ್ಥೆಗಳಾಗಿ ಕಾರ್ಯನಿರ್ವಹಿಸುತ್ತವೆ.
  • ಭಾರತದಲ್ಲಿ ಅಂದಾಜು 1 ಲಕ್ಷದಿಂದ 1.5 ಲಕ್ಷದವರೆಗೆ ಪವಿತ್ರ ವನಗಳಿವೆ. ಇದು ಅವುಗಳ ಅಪಾರ ಸಾಂಸ್ಕೃತಿಕ ಮತ್ತು ಪರಿಸರ ಸಂಬಂಧಿ ಪ್ರಾಮುಖ್ಯತೆಯನ್ನು ತೋರಿಸುತ್ತದೆ.
  • ‘ಜೈವಿಕ ವೈವಿಧ್ಯತಾ ಕಾಯ್ದೆ’, 2002 ರ ಅಡಿಯಲ್ಲಿ, ಸೂಕ್ತವಾದ ಪವಿತ್ರ ವನಗಳನ್ನು ‘ಜೀವವೈವಿಧ್ಯ ಪರಂಪರೆಯ ತಾಣಗಳು’ ಎಂದು ಘೋಷಿಸಬಹುದಾಗಿದೆ.

ಪ್ರಾಮುಖ್ಯತೆ:

  • ಪವಿತ್ರ ವನಗಳು ಅಪರೂಪದ, ಸ್ಥಳೀಯ ಮತ್ತು ಔಷಧೀಯ ಸಸ್ಯ ಪ್ರಭೇದಗಳನ್ನು ಸಂರಕ್ಷಿಸುವುದರ ಜೊತೆಗೆ ಜೀವವೈವಿಧ್ಯದ ಬಿಸಿ ತಾಣಗಳಾಗಿ ಕಾರ್ಯನಿರ್ವಹಿಸುತ್ತವೆ.
  • ಇವು ಮಣ್ಣಿನ ಸಂರಕ್ಷಣೆಗೆ ಕೊಡುಗೆ ನೀಡುತ್ತವೆ ಮತ್ತು ಮಣ್ಣಿನ ಸವೆತವನ್ನು ತಡೆಯುತ್ತವೆ. ವಿಶೇಷವಾಗಿ ಪಶ್ಚಿಮ ಘಟ್ಟಗಳು ಮತ್ತು ಹಿಮಾಲಯದಂತಹ ಸೂಕ್ಷ್ಮ ಪರಿಸರ ವ್ಯವಸ್ಥೆಗಳಲ್ಲಿ ಇವುಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ.
  • ಸಾಂಸ್ಕೃತಿಕವಾಗಿ, ಇವು ಧಾರ್ಮಿಕ ಆಚರಣೆಗಳು, ಹಬ್ಬಗಳು ಮತ್ತು ಸಮುದಾಯದ ಅಸ್ಮಿತೆಯ ಕೇಂದ್ರಗಳಾಗಿದ್ದು, ನಂಬಿಕೆಯ ವ್ಯವಸ್ಥೆಗಳ ಮೂಲಕವೇ ಪರಿಸರ ಸಂರಕ್ಷಣೆಯನ್ನು ಬಲಪಡಿಸುತ್ತವೆ.

ಲಿಂಗತ್ವ ಅಲ್ಪಸಂಖ್ಯಾತರ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಕಾಯ್ದೆ, 2026

ರಾಜಕೀಯ ಮತ್ತು ಆಡಳಿತ

ಇತ್ತೀಚೆಗೆ ಸುದ್ದಿಯಲ್ಲಿದೆ:

  • ಇತ್ತೀಚೆಗೆ ಭಾರತದ ಸರ್ವೋಚ್ಚ ನ್ಯಾಯಾಲಯವು ‘ಲಿಂಗತ್ವ ಅಲ್ಪಸಂಖ್ಯಾತರ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಕಾಯ್ದೆ, 2026’ರಲ್ಲಿರುವ ಕೆಲವು ಗಂಭೀರ ಕಾನೂನಾತ್ಮಕ ಸಮಸ್ಯೆಗಳ ಕುರಿತು ಗಮನ ಸೆಳೆದಿದೆ. 
  • ಪ್ರಮುಖವಾಗಿ, ‘ಸ್ವಯಂ-ಗುರುತಿಸುವಿಕೆ’ (Self-identification) v/s ರಾಜ್ಯದ ‘ಪರಿಶೀಲನಾ ಪ್ರಕ್ರಿಯೆ’ ಮತ್ತು ಕಲ್ಯಾಣ ಯೋಜನೆಗಳ ಗುರಿ v/s ‘ವ್ಯಕ್ತಿಗತ ಘನತೆ’ಯ ವಿವಾದಾತ್ಮಕ ಅಂಶಗಳನ್ನು ನ್ಯಾಯಾಲಯವು ಪ್ರಸ್ತಾಪಿಸಿದೆ.

ಹಿನ್ನೆಲೆ: ಭಾರತದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಕಾನೂನಾತ್ಮಕ ವಿಕಸನ

  • ನಾಲ್ಸಾ (NALSA) ತೀರ್ಪು, 2014: ಇದು ಲಿಂಗತ್ವ ಅಲ್ಪಸಂಖ್ಯಾತರನ್ನು ಅಧಿಕೃತವಾಗಿ ‘ತೃತೀಯ ಲಿಂಗ’ ಎಂದು ಗುರುತಿಸಿತು. ಜೊತೆಗೆ, ಯಾವುದೇ ವೈದ್ಯಕೀಯ ಹಸ್ತಕ್ಷೇಪವಿಲ್ಲದೆ ತಮ್ಮ ಲಿಂಗವನ್ನು ‘ಸ್ವಯಂ-ಗುರುತಿಸಿಕೊಳ್ಳುವ ಹಕ್ಕನ್ನು’ ಎತ್ತಿಹಿಡಿಯಿತು.
  • ಇದು ‘ಸ್ವಯಂ-ನಿರ್ಧಾರ’ವನ್ನು ಒಂದು ಪ್ರಮುಖ ಸಾಂವಿಧಾನಿಕ ಮೌಲ್ಯವಾಗಿ ಸ್ಥಾಪಿಸಿತು.
  • ಇದು ವ್ಯಕ್ತಿಯ ಲಿಂಗದ ಅಸ್ಮಿತೆಯನ್ನು ಸಂವಿಧಾನದ 21ನೇ ವಿಧಿಗೆ (ಜೀವಿಸುವ ಮತ್ತು ಘನತೆಯ ಹಕ್ಕು) ಸೇರಿಸಿತು.
  • ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ ಕಾಯ್ದೆ, 2019: ಇದು ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳನ್ನು ವ್ಯಾಖ್ಯಾನಿಸುತ್ತದೆ ಹಾಗೂ ‘ಸ್ವಯಂ-ಗ್ರಹಿಕೆಯ ಅಸ್ಮಿತೆಯ ಹಕ್ಕನ್ನು’ ಖಾತರಿಪಡಿಸುತ್ತದೆ. ಉದ್ಯೋಗ ಮತ್ತು ಶಿಕ್ಷಣದಲ್ಲಿನ ತಾರತಮ್ಯವನ್ನು ನಿಷೇಧಿಸುವುದರ ಜೊತೆಗೆ, ಸ್ವಂತ ಮನೆಯಲ್ಲಿ ವಾಸಿಸುವ ಹಕ್ಕನ್ನು ಇದು ಒದಗಿಸುತ್ತದೆ.
  • ಈ ಕಾಯ್ದೆಯು ‘ಜಿಲ್ಲಾ ದಂಡಾಧಿಕಾರಿ’ಯಿಂದ ಪ್ರಮಾಣೀಕರಣ ಪಡೆಯುವ ವ್ಯವಸ್ಥೆಯನ್ನು ಪರಿಚಯಿಸಿತು.
  • ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ (ತಿದ್ದುಪಡಿ) ಕಾಯ್ದೆ, 2026: ಇದು ಕಾನೂನಾತ್ಮಕ ಮಾನ್ಯತೆ ಪಡೆಯುವ ಮೊದಲು ‘ವೈದ್ಯಕೀಯ ಮಂಡಳಿಯ ಪ್ರಮಾಣೀಕರಣ’ವನ್ನು ಕಡ್ಡಾಯಗೊಳಿಸುತ್ತದೆ; ಸ್ವಯಂ-ಗ್ರಹಿಕೆಯ ಅಸ್ಮಿತೆಯ ಮೇಲಿದ್ದ ಸ್ಪಷ್ಟ ಮಾನ್ಯತೆಯನ್ನು ತೆಗೆದುಹಾಕುತ್ತದೆ; ಮತ್ತು ಕಠಿಣ ವ್ಯಾಖ್ಯಾನಗಳು ಹಾಗೂ ದಂಡನಾತ್ಮಕ ನಿಬಂಧನೆಗಳನ್ನು ಪರಿಚಯಿಸುತ್ತದೆ.

ಸರ್ವೋಚ್ಚ ನ್ಯಾಯಾಲಯವು ಗುರುತಿಸಿದ ಪ್ರಮುಖ ಸಮಸ್ಯೆಗಳು:

  • ಸ್ವಯಂ-ಗುರುತಿಸುವಿಕೆ v/s ವೈದ್ಯಕೀಯ ನಿರ್ಬಂಧ: ಇದು ವ್ಯಕ್ತಿಯ ದೈಹಿಕ ಸ್ವಾಯತ್ತತೆ ಮತ್ತು ಘನತೆಯನ್ನು (ವಿಧಿ 21) ಉಲ್ಲಂಘಿಸುತ್ತದೆ, ಹಾಗೂ ರಾಜ್ಯದಿಂದ ‘ವೈದ್ಯಕೀಯ ನಿರ್ಬಂಧ’ವನ್ನು ಸೃಷ್ಟಿಸುತ್ತದೆ. ‘ವೈದ್ಯಕೀಯ ಮೌಲ್ಯಮಾಪನ’ವು ವ್ಯಕ್ತಿಯ ಅಸ್ಮಿತೆಯ ಸ್ವಾಯತ್ತತೆಯನ್ನು ಕುಗ್ಗಿಸುತ್ತದೆ.
  • ದುರ್ಬಳಕೆಯ ಭೀತಿ v/s ಹಕ್ಕುಗಳ ರಕ್ಷಣೆ: ಮೀಸಲಾತಿ ಅಥವಾ ಕಲ್ಯಾಣ ಯೋಜನೆಗಳನ್ನು ಪಡೆಯಲು ‘ಸೋಗು ಹಾಕುವ’ ಅಪಾಯಗಳ ಕುರಿತು ನ್ಯಾಯಾಲಯವು ಎಚ್ಚರಿಸಿದೆ.
  1. ಆದಾಗ್ಯೂ, ಈ ಸೌಲಭ್ಯಗಳ ದುರ್ಬಳಕೆಯ ಸಾಧ್ಯತೆಯು ಅತ್ಯಲ್ಪವಾಗಿರುತ್ತದೆ. ಇವರನ್ನು ವ್ಯವಸ್ಥಿತವಾಗಿ ಸಮಾಜದಿಂದ ಹೊರಗಿಡುವುದಕ್ಕೆ ಹೋಲಿಸಿದರೆ, ದುರ್ಬಳಕೆಯ ಕುರಿತಾದ ಆತಂಕಗಳನ್ನು ಅತಿಯಾಗಿ ಉತ್ಪ್ರೇಕ್ಷೆ ಮಾಡಲಾಗುತ್ತಿದೆ.
  • ನಾಲ್ಸಾ (NALSA) ತತ್ವಗಳ ಮೇಲಿನ ಪರಿಣಾಮ: 2026 ರ ತಿದ್ದುಪಡಿಯು ‘ಸ್ವಯಂ-ಗುರುತಿಸುವಿಕೆಯ ಸಿದ್ಧಾಂತ’ವನ್ನು ದುರ್ಬಲಗೊಳಿಸುತ್ತದೆ ಮತ್ತು ಜೈವಿಕ ಅಗತ್ಯತಾವಾದವನ್ನು (Biological essentialism – ಕೇವಲ ಜೈವಿಕ ಆಧಾರದ ಮೇಲೆ ಲಿಂಗ ನಿರ್ಧರಿಸುವುದು) ಮರಳಿ ಪರಿಚಯಿಸುತ್ತದೆ.
  • ಇದು ಹಕ್ಕು-ಆಧಾರಿತ ಚೌಕಟ್ಟಿನಿಂದ ನಿಯಂತ್ರಕ ಚೌಕಟ್ಟಿನೆಡೆಗಿನ ‘ಹಿಮ್ಮುಖ ಚಲನೆ ಅಥವಾ ಹಿನ್ನಡೆ’ಯಾಗಿ ಕಾರ್ಯನಿರ್ವಹಿಸುತ್ತದೆ.
  • ಆರೋಗ್ಯ ರಕ್ಷಣೆ ಮತ್ತು ಪರಿವರ್ತನೆಯ ಹಕ್ಕುಗಳು: ಪ್ರಸ್ತುತ ನಡೆಯುತ್ತಿರುವ ‘ಲಿಂಗ-ದೃಢೀಕರಣ ಚಿಕಿತ್ಸೆ’ಗಳಿಗೆ ಇದರಿಂದ ತೀವ್ರ ಅಡ್ಡಿಯುಂಟಾಗುತ್ತದೆ ಎಂದು ಆರೋಪಿಸಲಾಗಿದೆ.
  • ಭಾರತದಲ್ಲಿ ಈ ವರ್ಗಕ್ಕೆ ಆರೋಗ್ಯ ಸೇವೆಯ ಲಭ್ಯತೆಯು ಈಗಾಗಲೇ ಸೀಮಿತವಾಗಿದೆ ಮತ್ತು ಕಳಂಕದಿಂದ ಕೂಡಿದೆ.
  • ವರ್ಗೀಕರಣ ಮತ್ತು ಕಳಂಕ: ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ ಜೊತೆಗೆ ದಬ್ಬಾಳಿಕೆಗೆ ಒಳಗಾದ ಸಂತ್ರಸ್ತರನ್ನು ಒಟ್ಟಿಗೆ ಸೇರಿಸುವುದು ತರ್ಕಬದ್ಧವಲ್ಲದ ಮತ್ತು ಕಳಂಕಿತ ವರ್ಗೀಕರಣಕ್ಕೆ ಕಾರಣವಾಗುತ್ತದೆ (ಇದು ಸಂವಿಧಾನದ 14 ನೇ ವಿಧಿಯ ಸ್ಪಷ್ಟ ಉಲ್ಲಂಘನೆಯಾಗುತ್ತದೆ).

ರು-ಸೋಮ್ ಸೇತುವೆಗಳು (Ru-Soam Bridges)

ಪರಿಸರ

ಇತ್ತೀಚೆಗೆ ಸುದ್ದಿಯಲ್ಲಿದೆ:

  • ಸ್ಥಳೀಯ ‘ರು-ಸೋಮ್’ (ಬೆತ್ತದ ಸೇತುವೆ) ವಾಸ್ತುಶಿಲ್ಪ ಮತ್ತು ತಾಂತ್ರಿಕ ಕೌಶಲ್ಯಗಳನ್ನು ದಾಖಲಿಸಲು ‘ಯುನೆಸ್ಕೋ’ (UNESCO) ಸಂಸ್ಥೆಯು ಸಿಕ್ಕಿಂ ಸರ್ಕಾರದೊಂದಿಗೆ ಪಾಲುದಾರಿಕೆ ಹೊಂದಿದೆ.
  • ಪ್ರವಾಸೋದ್ಯಮ ಸಂಸ್ಥೆಯಾದ ‘ಏರ್‌ಬಿಎನ್‌ಬಿ’ (Airbnb) ನೆರವಿನೊಂದಿಗೆ, ಈ ಯೋಜನೆಯನ್ನು ‘ಕಾಂಚನಜುಂಗಾ ಜೀವಿಗೋಳ ಸಂರಕ್ಷಿತ ವಲಯ’ದಲ್ಲಿ ಜಾರಿಗೊಳಿಸಲಾಗುತ್ತಿದೆ.

ರು-ಸೋಮ್ ಸೇತುವೆಗಳ ಬಗ್ಗೆ:

  • ‘ರು-ಸೋಮ್’ ಎನ್ನುವುದು ಲೆಪ್ಚಾ ಸಮುದಾಯವು ನಿರ್ಮಿಸುವ ಸಾಂಪ್ರದಾಯಿಕ ಬೆತ್ತದ ಸೇತುವೆಗಳಾಗಿವೆ.
  • ಬಿದಿರು, ಬೆತ್ತ ಮತ್ತು ಮರದಂತಹ ಸ್ಥಳೀಯವಾಗಿ ಲಭ್ಯವಿರುವ ನೈಸರ್ಗಿಕ ವಸ್ತುಗಳನ್ನು ಬಳಸಿಕೊಂಡು ಈ ಸೇತುವೆಗಳನ್ನು ನಿರ್ಮಿಸಲಾಗುತ್ತದೆ.
  • ಗುಡ್ಡಗಾಡು ಮತ್ತು ಪರ್ವತ ಪ್ರದೇಶಗಳಿಗೆ ಹೊಂದುವಂತಹ ಉನ್ನತ ಮಟ್ಟದ ಪರಿಸರ ಜ್ಞಾನ ಮತ್ತು ಅತ್ಯುತ್ತಮ ‘ರಚನಾತ್ಮಕ ಸ್ಥಿತಿಸ್ಥಾಪಕತ್ವ’ವನ್ನು ಈ ಸೇತುವೆಗಳು ಪ್ರತಿಬಿಂಬಿಸುತ್ತವೆ.
  • 2023 ರಲ್ಲಿ ಸಂಭವಿಸಿದ ಭೀಕರ ‘ಸಿಕ್ಕಿಂ ಹಿಮನದಿ ಸರೋವರ ಸ್ಫೋಟ ಪ್ರವಾಹ’ದ (GLOF) ಸಂದರ್ಭದಲ್ಲಿಯೂ ಈ ಸೇತುವೆಗಳು ತಮ್ಮ ಸ್ಥಿತಿಸ್ಥಾಪಕತ್ವ ಮತ್ತು ಸದೃಢತೆಯನ್ನು ಸಾಬೀತುಪಡಿಸಿವೆ.

ತಾಂಜಾನಿಯಾ (Tanzania)

ಭೂಗೋಳ

ಇತ್ತೀಚೆಗೆ ಸುದ್ದಿಯಲ್ಲಿದೆ:

  • ಇತ್ತೀಚೆಗೆ ತಾಂಜಾನಿಯಾದ ದಾರ್ ಎಸ್ ಸಲಾಮ್‌ನಲ್ಲಿ (Dar es Salaam), ‘ಭಾರತ-ತಾಂಜಾನಿಯಾ ಜಂಟಿ ವ್ಯಾಪಾರ ಸಮಿತಿ’ಯ (JTC) 5ನೇ ಅಧಿವೇಶನವು ಜರುಗಿತು.

ತಾಂಜಾನಿಯಾ ದೇಶದ ಭೌಗೋಳಿಕ ಲಕ್ಷಣಗಳು:

  • ಇದು ಸಮಭಾಜಕ ವೃತ್ತದ ಸ್ವಲ್ಪ ದಕ್ಷಿಣಕ್ಕೆ ನೆಲೆಗೊಂಡಿರುವ ಪೂರ್ವ ಆಫ್ರಿಕಾದ ರಾಷ್ಟ್ರವಾಗಿದೆ.
  • ‘ಡೊಡೊಮಾ’ (Dodoma) ಇದರ ರಾಜಧಾನಿಯಾಗಿದ್ದು, ‘ದಾರ್ ಎಸ್ ಸಲಾಮ್’ ಇಲ್ಲಿನ ಅತಿ ದೊಡ್ಡ ನಗರ ಹಾಗೂ ಪ್ರಮುಖ ಬಂದರು ಪಟ್ಟಣವಾಗಿದೆ.
  • ನೆರೆಹೊರೆಯ ರಾಷ್ಟ್ರಗಳು ಮತ್ತು ಗಡಿಗಳು:
  1. ಉತ್ತರಕ್ಕೆ  ಉಗಾಂಡಾ, ಕೀನ್ಯಾ ಮತ್ತು ವಿಕ್ಟೋರಿಯಾ ಸರೋವರ.
  2. ಪೂರ್ವಕ್ಕೆ: ಹಿಂದೂ ಮಹಾಸಾಗರ.
  3. ದಕ್ಷಿಣಕ್ಕೆ: ಮೋಜಾಂಬಿಕ್, ಮಳಾವಿ, ಜಾಂಬಿಯಾ ಮತ್ತು ನ್ಯಾಸಾ ಸರೋವರ.
  4. ಪಶ್ಚಿಮಕ್ಕೆ: ರುವಾಂಡಾ, ಬುರುಂಡಿ ಮತ್ತು ಟಾಂಗನ್ಯಿಕಾ ಸರೋವರ.
  • ಕಿಲಿಮಂಜಾರೊ ಪರ್ವತ: ತಾಂಜಾನಿಯಾದಲ್ಲಿರುವ ಈ ಪರ್ವತವು ಆಫ್ರಿಕಾ ಖಂಡದ ಅತ್ಯುನ್ನತ ಶಿಖರವಾಗಿದೆ.
  • ಆಫ್ರಿಕಾದ ಅತಿ ದೊಡ್ಡ ಸರೋವರ ಹಾಗೂ ನೈಲ್ ನದಿಯ ಉಗಮಸ್ಥಾನವಾದ ‘ವಿಕ್ಟೋರಿಯಾ ಸರೋವರ’ದ ಒಂದು ಭಾಗವು ತಾಂಜಾನಿಯಾದಲ್ಲಿದೆ.
  • ಪ್ರಮುಖ ನದಿಗಳು: ಗ್ರೇಟ್ ರುವಾಹಾ, ರುಫಿಜಿ ಮತ್ತು ಕಾಗೇರಾ ನದಿಗಳು.
  • ಟಾಂಗನ್ಯಿಕಾ ಸರೋವರ: ಇದು ತಾಂಜಾನಿಯಾ ಮತ್ತು ‘ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ’ (DRC) ರಾಷ್ಟ್ರಗಳ ನಡುವೆ ನೈಸರ್ಗಿಕ ಗಡಿಯನ್ನು ನಿರ್ಮಿಸುತ್ತದೆ.

ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ (RBSK) 2.0 ಮಾರ್ಗಸೂಚಿಗಳು

ಆಡಳಿತ

ಇತ್ತೀಚೆಗೆ ಸುದ್ದಿಯಲ್ಲಿದೆ:

  • ಇತ್ತೀಚೆಗೆ ಮುಕ್ತಾಯಗೊಂಡ ‘ಸಾರ್ವಜನಿಕ ಆರೋಗ್ಯ ಸೇವಾ ವಿತರಣೆಯಲ್ಲಿನ ಉತ್ತಮ ಕಾರ್ಯವಿಧಾನಗಳು ಮತ್ತು ನಾವೀನ್ಯತೆಗಳ ರಾಷ್ಟ್ರೀಯ ಶೃಂಗಸಭೆ’ಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ‘ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ (RBSK) 2.0’ದ ನೂತನ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ(RBSK)ದ ಬಗ್ಗೆ: 

  • ಇದು ‘ರಾಷ್ಟ್ರೀಯ ಆರೋಗ್ಯ ಅಭಿಯಾನ’ದ (National Health Mission – NHM) ಅಡಿಯಲ್ಲಿ ಜಾರಿಗೊಳಿಸಲಾದ ಪ್ರಮುಖ ರಾಷ್ಟ್ರೀಯ ಉಪಕ್ರಮವಾಗಿದೆ.
  • ಅನುಷ್ಠಾನ: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ.
  • ಉದ್ದೇಶ: ಜನನದಿಂದ 18 ವರ್ಷದವರೆಗಿನ ಮಕ್ಕಳಲ್ಲಿ ಕಂಡುಬರುವ ಜನ್ಮಜಾತ ನ್ಯೂನತೆಗಳು, ಪೋಷಕಾಂಶಗಳ ಕೊರತೆ, ಬಾಲ್ಯದ ರೋಗಗಳು ಮತ್ತು ಬೆಳವಣಿಗೆಯ ವಿಳಂಬದಂತಹ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ ಸೂಕ್ತ ಚಿಕಿತ್ಸಾ ಕ್ರಮಗಳನ್ನು ಕೈಗೊಳ್ಳುವುದು ಇದರ ಪ್ರಧಾನ ಉದ್ದೇಶವಾಗಿದೆ.
  • ಉದ್ದೇಶಿತ ಫಲಾನುಭವಿಗಳು: ವ್ಯವಸ್ಥಿತ ಕಣ್ಗಾವಲಿಗಾಗಿ ಈ ಕಾರ್ಯಕ್ರಮವು ಮಕ್ಕಳನ್ನು ಅವರ ವಯಸ್ಸಿಗನುಗುಣವಾಗಿ ವಿವಿಧ ಗುಂಪುಗಳಾಗಿ ವಿಂಗಡಿಸುತ್ತದೆ:
    • 0 ರಿಂದ 6 ವಾರಗಳು: ಹೆರಿಗೆ ಕೇಂದ್ರಗಳಲ್ಲಿ ಹಾಗೂ ಆಶಾ (ASHA) ಕಾರ್ಯಕರ್ತೆಯರ ಮನೆ ಭೇಟಿಯ ಮೂಲಕ ನವಜಾತ ಶಿಶುಗಳ ತಪಾಸಣೆ.
    • 6 ವಾರಗಳಿಂದ 6 ವರ್ಷ: ಅಂಗನವಾಡಿ ಕೇಂದ್ರಗಳಲ್ಲಿ ಶಾಲಾಪೂರ್ವ ಮಕ್ಕಳ ಆರೋಗ್ಯ ಮೇಲ್ವಿಚಾರಣೆ.
    • 6 ವರ್ಷದಿಂದ 18 ವರ್ಷ: ಸರ್ಕಾರಿ ಮತ್ತು ಸರ್ಕಾರಿ-ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ತಪಾಸಣೆ.
  • “4Ds” ಕಾರ್ಯತಂತ್ರ (The “4Ds” Strategy): RBSK ಯೋಜನೆಯು ಆಯ್ದ 30 ರಿಂದ 32 ಆರೋಗ್ಯ ಸಮಸ್ಯೆಗಳನ್ನು ನಾಲ್ಕು ಪ್ರಮುಖ ವರ್ಗಗಳಾಗಿ ವಿಂಗಡಿಸಿ, ವ್ಯವಸ್ಥಿತ ತಪಾಸಣೆ ಹಾಗೂ ಉಚಿತ ಚಿಕಿತ್ಸೆಯನ್ನು ಒದಗಿಸುತ್ತದೆ. ಅವುಗಳೆಂದರೆ,
  1. ಜನ್ಮಜಾತ ನ್ಯೂನತೆಗಳು: ಡೌನ್ ಸಿಂಡ್ರೋಮ್ (ವರ್ಣತಂತು ಅಸಹಜತೆ), ಜನ್ಮಜಾತ ಕಣ್ಣಿನ ಪೊರೆ, ಸೀಳು ತುಟಿ/ಅಂಗುಳು, ವಕ್ರಪಾದ ಮತ್ತು ಜನ್ಮಜಾತ ಹೃದಯ ಕಾಯಿಲೆಗಳು.
  2. ಪೋಷಕಾಂಶಗಳ ಕೊರತೆ: ರಕ್ತಹೀನತೆ, ವಿಟಮಿನ್ ‘ಎ’ ಅಥವಾ ‘ಡಿ’ ಕೊರತೆ, ತೀವ್ರ ಸ್ವರೂಪದ ಅಪೌಷ್ಟಿಕತೆ ಮತ್ತು ಗಾಯಿಟ್ರೆ (ಗಳಗಂಡ ರೋಗ).
  3. ಬಾಲ್ಯದ ರೋಗಗಳು: ಚರ್ಮದ ಕಾಯಿಲೆಗಳು, ಓಟಿಟಿಸ್ ಮೀಡಿಯಾ (ಮಧ್ಯ ಕಿವಿಯ ಸೋಂಕು), ರುಮಾಟಿಕ್ ಹೃದಯ ಕಾಯಿಲೆ ಮತ್ತು ಉಸಿರಾಟ ನಾಳದ ಪ್ರತಿಕ್ರಿಯಾತ್ಮಕ ಕಾಯಿಲೆ.
  4. ಬೆಳವಣಿಗೆಯ ವಿಳಂಬ ಮತ್ತು ವಿಕಲಾಂಗತೆಗಳು: ದೃಷ್ಟಿ ದೋಷ, ಶ್ರವಣ ದೋಷ, ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ ಮತ್ತು ಸೆರೆಬ್ರಲ್ ಪಾಲ್ಸಿ (ಮಿದುಳಿನ ಲಕ್ವ).

ಹಂಟಾವೈರಸ್ ಸೋಂಕು ಹರಡುವಿಕೆ

ವಿಜ್ಞಾನ ಮತ್ತು ತಂತ್ರಜ್ಞಾನ

ಇತ್ತೀಚೆಗೆ ಸುದ್ದಿಯಲ್ಲಿದೆ:

  • ಅಟ್ಲಾಂಟಿಕ್ ಮಹಾಸಾಗರದಲ್ಲಿ ಸಂಚರಿಸುತ್ತಿದ್ದ ಐಷಾರಾಮಿ ಪ್ರವಾಸಿ ನೌಕೆಯೊಂದರಲ್ಲಿ ‘ಹಂಟಾವೈರಸ್’ ಸೋಂಕಿನಿಂದಾಗಿ ಮೂವರು ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ‘ವಿಶ್ವ ಆರೋಗ್ಯ ಸಂಸ್ಥೆ’ (WHO) ವರದಿ ಮಾಡಿದೆ.

ಹಂಟಾವೈರಸ್ (Hantavirus) ಬಗ್ಗೆ:

  • ಕಾರಣವಾಗುವ ರೋಗಕಾರಕ: ಇದೊಂದು ಅಪರೂಪದ ಆದರೆ ತೀವ್ರ ಸ್ವರೂಪದ ಪ್ರಾಣಿಜನ್ಯ ರೋಗವಾಗಿದೆ. ಅಂದರೆ ಇದು ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ಇದು ‘ಹಂಟಾವಿರಿಡೆ’ (Hantaviridae) ಕುಟುಂಬಕ್ಕೆ ಸೇರಿದ್ದು, ಆರ್‌ಎನ್‌ಎ (RNA) ಮಾದರಿಯ ವೈರಸ್ ಆಗಿದೆ.
  • ರೋಗವಾಹಕ : ಈ ವೈರಸ್ ಪ್ರಮುಖವಾಗಿ ಇಲಿ ಮತ್ತು ಹೆಗ್ಗಣಗಳಂತಹ ದಂಶಕಗಳ ಮೂಲಕ ಹರಡುತ್ತದೆ.
  • ಸೋಂಕಿತ ದಂಶಕಗಳ ಮೂತ್ರ ಅಥವಾ ಮಲದಿಂದ ಗಾಳಿಯಲ್ಲಿ ಬೆರೆಯುವ ವಾಯುಗಾಮಿ ಕಣಗಳನ್ನು ಉಸಿರಾಡುವುದರಿಂದ ಅಥವಾ ಸೋಂಕಿತ ಮೇಲ್ಮೈಗಳನ್ನು ಸ್ಪರ್ಶಿಸುವ ಮೂಲಕ ಇದು ಮನುಷ್ಯರಿಗೆ ಹರಡುತ್ತದೆ.
  • ಈ ಸೋಂಕು ಮನುಷ್ಯರಿಂದ ಮನುಷ್ಯರಿಗೆ ಹರಡುವ ಸಾಧ್ಯತೆ ಅತ್ಯಂತ ವಿರಳವಾಗಿರುತ್ತದೆ.
  • ರೋಗಲಕ್ಷಣಗಳು: ಸೋಂಕಿಗೆ ತುತ್ತಾದ ಒಂದು ಅಥವಾ ಎಂಟು ವಾರಗಳ ಒಳಗೆ ಜ್ವರ ಮತ್ತು ತೀವ್ರ ಆಯಾಸದಂತಹ ಜ್ವರ (ಫ್ಲೂ)ದಂತಹ ಲಕ್ಷಣಗಳೊಂದಿಗೆ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ.
  • ತೀವ್ರತರವಾದ ಪ್ರಕರಣಗಳಲ್ಲಿ, ಇದು ‘ಹಂಟಾವೈರಸ್ ಪಲ್ಮನರಿ ಸಿಂಡ್ರೋಮ್’ಗೆ ಪರಿವರ್ತನೆ ಆಗಬಹುದು. ಇದು ಉಸಿರಾಟದ ತೀವ್ರ ತೊಂದರೆಯನ್ನು ಉಂಟುಮಾಡಿ, ಮಾರಣಾಂತಿಕವೂ ಆಗಬಹುದು.
  • ಚಿಕಿತ್ಸೆ: ಈ ರೋಗವನ್ನು ಗುಣಪಡಿಸಲು ಯಾವುದೇ ನಿರ್ದಿಷ್ಟ ಔಷಧಗಳಿಲ್ಲ. ಹೀಗಾಗಿ, ರೋಗದ ಲಕ್ಷಣಗಳ ಆಧಾರದ ಮೇಲೆ ಪೂರಕ ಆರೈಕೆ ನೀಡುವುದರ ಕಡೆಗೆ ಹೆಚ್ಚು ಗಮನಹರಿಸಲಾಗುತ್ತದೆ. ತೀವ್ರ ಸ್ವರೂಪದ ಪ್ರಕರಣಗಳಲ್ಲಿ ರೋಗಿಗಳಿಗೆ ಕೃತಕ ಉಸಿರಾಟದ ವ್ಯವಸ್ಥೆಯನ್ನು ಅಳವಡಿಸುವುದು ಇದರಲ್ಲಿ ಸೇರಿದೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts