ಭಾರತ-ಸ್ವೀಡನ್ ಕಾರ್ಯತಂತ್ರದ ಪಾಲುದಾರಿಕೆ
ಅಂತರರಾಷ್ಟ್ರೀಯ

ಇತ್ತೀಚೆಗೆ ಸುದ್ದಿಯಲ್ಲಿದೆ:
- ಪ್ರಧಾನಿ ಮೋದಿಯವರು ಸ್ವೀಡನ್ ಗೆ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ, ಭಾರತ ಮತ್ತು ಸ್ವೀಡನ್ ತಮ್ಮ ದ್ವಿಪಕ್ಷೀಯ ಸಂಬಂಧವನ್ನು ‘ಕಾರ್ಯತಂತ್ರದ ಪಾಲುದಾರಿಕೆ’ ಮಟ್ಟಕ್ಕೆ ಉನ್ನತೀಕರಿಸಿವೆ.
ಭೇಟಿಯ ಪ್ರಮುಖ ಅಂಶಗಳು:
- ಪ್ರಧಾನಿ ಮೋದಿಯವರಿಗೆ ಸ್ವೀಡನ್ನ ‘ರಾಯಲ್ ಆರ್ಡರ್ ಆಫ್ ಪೋಲಾರ್ ಸ್ಟಾರ್’ ಮತ್ತು ‘ಕಮಾಂಡರ್ ಗ್ರಾಂಡ್ ಕ್ರಾಸ್’ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಇದು ಅಲ್ಲಿನ ಸರ್ಕಾರದ ಮುಖ್ಯಸ್ಥರಿಗೆ ನೀಡಲಾಗುವ ಅತ್ಯುನ್ನತ ಮನ್ನಣೆ ಮತ್ತು ಗೌರವವಾಗಿದೆ.
ಭಾರತ-ಸ್ವೀಡನ್ ಸಂಬಂಧಗಳು:
- ರಾಜತಾಂತ್ರಿಕ ಸಂಬಂಧಗಳು: ಭಾರತ ಮತ್ತು ಸ್ವೀಡನ್ 1948 ರಲ್ಲಿ ಅಧಿಕೃತವಾಗಿ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದವು.
- 2018 ರಲ್ಲಿ ಸ್ವೀಡನ್ ಮೊದಲ ‘ಇಂಡಿಯಾ-ನಾರ್ಡಿಕ್ ಶೃಂಗಸಭೆ’ಯನ್ನು ಆಯೋಜಿಸಿತು. ಇದು ನಾರ್ಡಿಕ್ ಪ್ರದೇಶದೊಂದಿಗೆ ಭಾರತದ ಸಕ್ರಿಯ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಿತು.
- 2019 ರ ವಿಶ್ವಸಂಸ್ಥೆಯ ಹವಾಮಾನ ಕ್ರಿಯಾ ಶೃಂಗಸಭೆಯಲ್ಲಿ (UN Climate Action Summit) ಭಾರತ ಮತ್ತು ಸ್ವೀಡನ್ ಜಂಟಿಯಾಗಿ ‘ಲೀಡರ್ಶಿಪ್ ಗ್ರೂಪ್ ಫಾರ್ ಇಂಡಸ್ಟ್ರಿ ಟ್ರಾನ್ಸಿಶನ್’ (LeadIT) ಉಪಕ್ರಮವನ್ನು ಪ್ರಾರಂಭಿಸಿದವು.
- ಈ LeadIT ಉಪಕ್ರಮವು ಪ್ರಮುಖವಾಗಿ ಕಡಿಮೆ-ಇಂಗಾಲದ ಕೈಗಾರಿಕಾ ಪರಿವರ್ತನೆ (Low-carbon industrial transition) ಮತ್ತು ಸುಸ್ಥಿರ ಉತ್ಪಾದನಾ ವಿಧಾನಗಳನ್ನು ಉತ್ತೇಜಿಸುತ್ತದೆ.
ಸಿಂಧೂ ನದಿ ಜಲ ಒಪ್ಪಂದ (Indus Water Treaty)
ಅಂತರರಾಷ್ಟ್ರೀಯ

ಇತ್ತೀಚೆಗೆ ಸುದ್ದಿಯಲ್ಲಿದೆ:
- ಜಮ್ಮು ಮತ್ತು ಕಾಶ್ಮೀರದಲ್ಲಿನ ಭಾರತದ ‘ಕಿಶನ್ಗಂಗಾ’ ಮತ್ತು ‘ರಾಟ್ಲೆ’ ಜಲವಿದ್ಯುತ್ ಯೋಜನೆಗಳ ತಾಂತ್ರಿಕ ವಿನ್ಯಾಸದ ವಿವಾದವನ್ನು ಇತ್ಯರ್ಥಪಡಿಸಲು ಪಾಕಿಸ್ತಾನದ ಕೋರಿಕೆಯ ಮೇರೆಗೆ 2023 ರಲ್ಲಿ ಸ್ಥಾಪಿಸಲಾದ ಐದು ಸದಸ್ಯರ ಮಧ್ಯಸ್ಥಿಕೆ ನ್ಯಾಯಾಲಯದ (Court of Arbitration – CoA) ಇತ್ತೀಚಿನ ತೀರ್ಪನ್ನು ಭಾರತ ದೃಢವಾಗಿ ತಿರಸ್ಕರಿಸಿದೆ.
ಸಿಂಧೂ ನದಿ ಜಲ ಒಪ್ಪಂದದ ಬಗ್ಗೆ:
- ಹಿನ್ನೆಲೆ: 1947 ರ ದೇಶ ವಿಭಜನೆಯು ಸಿಂಧೂ ನದಿ ವ್ಯವಸ್ಥೆಯನ್ನು ಭಾರತ ಮತ್ತು ಪಾಕಿಸ್ತಾನದ ನಡುವೆ ಎರಡಾಗಿ ವಿಭಜಿಸಿತು.
- ಮಧ್ಯಸ್ಥಿಕೆ ವಹಿಸಿದವರು: ವಿಶ್ವಬ್ಯಾಂಕ್.
- ಸಹಿ ಹಾಕಿದ್ದು: 1960 ರಲ್ಲಿ ಅಂದಿನ ಭಾರತದ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಪಾಕಿಸ್ತಾನದ ಅಂದಿನ ಅಧ್ಯಕ್ಷ ಅಯೂಬ್ ಖಾನ್ ಈ ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕಿದರು.
- ಗಡಿಯಾಚೆಗಿನ ನದಿ (Transboundary river): ಸಿಂಧೂ ನದಿಯು ಪಾಕಿಸ್ತಾನ (47%), ಭಾರತ (39%), ಟಿಬೆಟ್ (8%) ಮತ್ತು ಅಫ್ಘಾನಿಸ್ತಾನ (6%) ಮೂಲಕ ಹರಿಯುವ ಒಂದು ಪ್ರಮುಖ ಗಡಿಯಾಚೆಗಿನ ನದಿಯಾಗಿದೆ.
- ಇದು ಪಾಕಿಸ್ತಾನದ ಅತಿ ಉದ್ದವಾದ ನದಿಯಾಗಿದೆ.
- ಸಿಂಧೂ ಜಲಾನಯನ ಪ್ರದೇಶದ ಗಡಿಗಳು:
- ಪೂರ್ವದಲ್ಲಿ: ಹಿಮಾಲಯ ಪರ್ವತಗಳು.
- ಉತ್ತರದಲ್ಲಿ: ಕಾರಕೋರಂ ಮತ್ತು ಹರಾಮೋಶ್ ಶ್ರೇಣಿಗಳು.
- ಪಶ್ಚಿಮದಲ್ಲಿ: ಸುಲೈಮಾನ್ ಮತ್ತು ಕಿರ್ಥಾರ್ ಪರ್ವತ ಶ್ರೇಣಿಗಳು.
- ದಕ್ಷಿಣದಲ್ಲಿ: ಅರಬ್ಬಿ ಸಮುದ್ರ.
- ಗಮನಿಸಿ: ಭಾರತದಲ್ಲಿ, ಸಿಂಧೂ ಜಲಾನಯನ ಪ್ರದೇಶವು ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಪಂಜಾಬ್, ರಾಜಸ್ಥಾನ, ಹರಿಯಾಣ ಮತ್ತು ಚಂಡೀಗಢ ರಾಜ್ಯಗಳಲ್ಲಿ ಹರಡಿಕೊಂಡಿದೆ.
ಸಿಂಧೂ ನದಿಯ ಪ್ರಮುಖ ಉಪನದಿಗಳು:
|
ನದಿ |
ಉಗಮ ಸ್ಥಳ |
ಸೇರುವ ಸ್ಥಳ |
|
ಝೀಲಂ |
ಕಾಶ್ಮೀರ ಕಣಿವೆಯ ವೆರಿನಾಗ್ ಬಳಿಯ ಚಿಲುಮೆ. |
ಪಾಕಿಸ್ತಾನದ ಟ್ರಿಮ್ಮು ಬಳಿ ಚೀನಾಬ್ ನದಿಯನ್ನು ಸೇರುತ್ತದೆ. |
|
ಚೀನಾಬ್ |
ಬಾರಾಲಾಚಾ ಕಣಿವೆ ಮಾರ್ಗದ ಬಳಿಯ ಚಂದ್ರ ಮತ್ತು ಭಾಗಾ ತೊರೆಗಳು |
ಝೀಲಂ ಮತ್ತು ರಾವಿ ನದಿಗಳು ಬಂದು ಸೇರಿದ ನಂತರ ಇದು ಸಟ್ಲೆಜ್ ನದಿಯನ್ನು ಸೇರುತ್ತದೆ. |
|
ರಾವಿ |
ರೋಹ್ತಾಂಗ್ ಕಣಿವೆ ಮಾರ್ಗದ ಬಳಿಯ ಕುಲು ಬೆಟ್ಟಗಳು |
ಪಾಕಿಸ್ತಾನದ ರಂಗಪುರ ಬಳಿ ಚೀನಾಬ್ ನದಿಯನ್ನು ಸೇರುತ್ತದೆ. |
|
ಬಿಯಾಸ್ |
ರೋಹ್ತಾಂಗ್ ಕಣಿವೆ ಮಾರ್ಗದ ಬಳಿಯ ಬಿಯಾಸ್ ಕುಂಡ |
ಭಾರತದ ಹರಿಕೆ ಅಣೆಕಟ್ಟಿನ ಬಳಿ ಸಟ್ಲೆಜ್ ನದಿಯನ್ನು ಸೇರುತ್ತದೆ. |
|
ಸಟ್ಲೆಜ್ |
ಟಿಬೆಟ್ನ ಮಾನಸ ಸರೋವರ-ರಾಕ್ಷಸತಲ್ ಸರೋವರಗಳು |
ಪಾಕಿಸ್ತಾನದ ಮಿಥಾನಕೋಟ್ನಿಂದ ಸ್ವಲ್ಪ ದೂರದ ಮೇಲ್ಭಾಗದಲ್ಲಿ ಸಿಂಧೂ ನದಿಯನ್ನು ಸೇರುತ್ತದೆ. |
ಸಿಂಧೂ ನದಿ ಜಲ ಒಪ್ಪಂದದ ನಿಬಂಧನೆಗಳು:
- ಇದು ಮೂರು ಪಶ್ಚಿಮದ ನದಿಗಳನ್ನು, ಅಂದರೆ ಸಿಂಧೂ, ಚೀನಾಬ್ ಮತ್ತು ಝೀಲಂ ನದಿಗಳ ನಿರ್ಬಂಧ ರಹಿತ ಬಳಕೆಗೆ ಪಾಕಿಸ್ತಾನಕ್ಕೆ ಹಂಚಿಕೆ ಮಾಡಿದೆ, ಆದರೆ ಭಾರತಕ್ಕೆ ಕೃಷಿ ಮತ್ತು ಗೃಹಬಳಕೆಯನ್ನು ಹೊರತುಪಡಿಸಿ, ಇತರೆ ಬಳಕೆಗೆ ಈ ನದಿಗಳ ಬಳಕೆಯನ್ನು ನಿರ್ಬಂಧಿಸುತ್ತದೆ.
- ಇದು ಮೂರು ಪೂರ್ವದ ನದಿಗಳನ್ನು, ಅಂದರೆ ರಾವಿ, ಬಿಯಾಸ್ ಮತ್ತು ಸಟ್ಲೆಜ್ ನದಿಗಳ ನಿರ್ಬಂಧ ರಹಿತ ಬಳಕೆಗಾಗಿ ಭಾರತಕ್ಕೆ ಹಂಚಿಕೆ ಮಾಡಿದೆ.
- ಇದರ ಅರ್ಥವೇನೆಂದರೆ, ಶೇಕಡಾ 80% ರಷ್ಟು ಸಿಂಧೂ ನದಿ ಮತ್ತು ಅದರ ಉಪನದಿಗಳ ನೀರಿನ ಪಾಲು ಪಾಕಿಸ್ತಾನಕ್ಕೆ ಹಂಚಿಕೆಯಾದರೆ, ಶೇಕಡಾ 20% ರಷ್ಟು ನೀರಿನ ಪಾಲು ಮಾತ್ರ ಭಾರತದ ಬಳಕೆಗೆ ಲಭ್ಯವಿದೆ.
ಅನುಬಂಧ ಸಿ ಮತ್ತು ಡಿ (Annexure C and D):
ಪಾಕಿಸ್ತಾನವು ಝೀಲಂ, ಚೀನಾಬ್ ಮತ್ತು ಸಿಂಧೂ ನದಿಗಳ ನೀರಿನ ಮೇಲೆ ಹಕ್ಕನ್ನು ಹೊಂದಿದ್ದರೂ ಕೂಡ:
- ಸಿಂಧೂ ಜಲ ಒಪ್ಪಂದದ ‘ಅನುಬಂಧ ಸಿ’ ನಲ್ಲಿ ಭಾರತಕ್ಕೆ ಕೆಲವು ಕೃಷಿ ಬಳಕೆಗಾಗಿ ಅನುಮತಿಸುತ್ತದೆ.
- ‘ಅನುಬಂಧ ಡಿ’ ನಲ್ಲಿ ಭಾರತಕ್ಕೆ ನದಿಯ ಸ್ವಾಭಾವಿಕ ಹರಿವಿನ ಆಧಾರಿತ (run of the river) ಜಲವಿದ್ಯುತ್ ಯೋಜನೆಗಳನ್ನು ನಿರ್ಮಿಸಲು ಅನುಮತಿಸುತ್ತದೆ, ಅಂದರೆ, ನೀರನ್ನು ಪ್ರತ್ಯೇಕವಾಗಿ ಸಂಗ್ರಹಿಸಿಡದೆ ನೇರವಾಗಿ ಹರಿಯುವ ನೀರಿನಿಂದ ವಿದ್ಯುತ್ ಉತ್ಪಾದಿಸುವ ಯೋಜನೆಗಳು.
ಶಾಶ್ವತ ಸಿಂಧೂ ನದಿ ಜಲ ಆಯೋಗ (Permanent Indus Commission):
- ಎರಡೂ ದೇಶಗಳು ತಮ್ಮ ರಾಷ್ಟ್ರಗಳನ್ನು ಪ್ರತಿನಿಧಿಸುವ ಖಾಯಂ ಆಯುಕ್ತರನ್ನು ಒಳಗೊಂಡ ‘ಶಾಶ್ವತ ಸಿಂಧೂ ನದಿ ಜಲ ಆಯೋಗ’ವನ್ನು ಸ್ಥಾಪಿಸಬೇಕು ಎಂದು ಈ ಒಪ್ಪಂದವು ಕಡ್ಡಾಯಗೊಳಿಸಿದೆ.
- ಇದು ಸಂಘರ್ಷಗಳ ಪರಿಹಾರಕ್ಕಾಗಿ ಪ್ರಥಮ ಹಂತದ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.
- ಈ ಆಯೋಗವು ವರ್ಷಕ್ಕೆ ಕನಿಷ್ಠ ಒಮ್ಮೆಯಾದರೂ ಸಭೆ ಸೇರಬೇಕು.
ಭಾರತ-ನೆದರ್ಲ್ಯಾಂಡ್ಸ್ ಕಾರ್ಯತಂತ್ರದ ಪಾಲುದಾರಿಕೆ
ಅಂತರರಾಷ್ಟ್ರೀಯ
ಇತ್ತೀಚೆಗೆ ಸುದ್ದಿಯಲ್ಲಿದೆ:
- ಇತ್ತೀಚೆಗೆ ಪ್ರಧಾನಿ ಮೋದಿಯವರು ನೆದರ್ಲ್ಯಾಂಡ್ಸ್ ದೇಶಕ್ಕೆ ಅಧಿಕೃತವಾಗಿ ಭೇಟಿ ನೀಡಿದರು.
- ಕಾರ್ಯತಂತ್ರದ ಪಾಲುದಾರಿಕೆಗೆ ಉನ್ನತೀಕರಣ: ಭಾರತ ಮತ್ತು ನೆದರ್ಲ್ಯಾಂಡ್ಸ್ ತಮ್ಮ ದ್ವಿಪಕ್ಷೀಯ ಸಂಬಂಧಗಳನ್ನು “ಕಾರ್ಯತಂತ್ರದ ಪಾಲುದಾರಿಕೆ” (Strategic Partnership) ಮಟ್ಟಕ್ಕೆ ಉನ್ನತೀಕರಿಸಿವೆ.
ಭಾರತ-ನೆದರ್ಲ್ಯಾಂಡ್ಸ್ ಸಂಬಂಧಗಳು:
- ರಾಜತಾಂತ್ರಿಕ ಸಂಬಂಧಗಳು: ಭಾರತ ಮತ್ತು ನೆದರ್ಲ್ಯಾಂಡ್ಸ್ 1947 ರಲ್ಲಿ ಅಧಿಕೃತ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದವು, 2026 ಕ್ಕೆ ಈ ದ್ವಿಪಕ್ಷೀಯ ರಾಜತಾಂತ್ರಿಕ ಸಂಬಂಧಗಳು 79 ವರ್ಷಗಳನ್ನು ಪೂರೈಸಲಿವೆ.
- ಆರ್ಥಿಕ ಸಹಕಾರ: ಭಾರತ ಮತ್ತು ನೆದರ್ಲ್ಯಾಂಡ್ಸ್ 2025 ರಲ್ಲಿ ‘ಜಂಟಿ ವ್ಯಾಪಾರ ಮತ್ತು ಹೂಡಿಕೆ ಸಮಿತಿ’ಯನ್ನು (JTIC) ಅಧಿಕೃತಗೊಳಿಸಿದವು. ಇದು ದ್ವಿಪಕ್ಷೀಯ ವ್ಯಾಪಾರ, ದ್ವಿಪಕ್ಷೀಯ ಹೂಡಿಕೆ ಸಹಕಾರ ಹಾಗೂ ತಂತ್ರಜ್ಞಾನ, ಎಂಎಸ್ಎಂಇಗಳು (MSMEs) ಮತ್ತು ಉದಯೋನ್ಮುಖ ವಲಯಗಳಲ್ಲಿನ ಸಹಕಾರವನ್ನು ಬಲಪಡಿಸುತ್ತದೆ.
- ಸಾಂಸ್ಕೃತಿಕ ಸಹಕಾರ: ಗುಜರಾತಿನ ಲೋಥಾಲ್ನಲ್ಲಿ ‘ರಾಷ್ಟ್ರೀಯ ಕಡಲ ಪರಂಪರೆಯ ಸಂಕೀರ್ಣ’ದ (NMHC) ಅಭಿವೃದ್ಧಿಯಲ್ಲಿ ಸಹಕರಿಸಲು ಭಾರತ ಮತ್ತು ನೆದರ್ಲ್ಯಾಂಡ್ಸ್ 2025 ರಲ್ಲಿ ತಿಳುವಳಿಕಾ ಒಪ್ಪಂದಕ್ಕೆ (MoU) ಸಹಿ ಹಾಕಿವೆ.
ರಾಷ್ಟ್ರೀಯ ಕಡಲ ಪರಂಪರೆಯ ಸಂಕೀರ್ಣ (NMHC)ದ ಬಗ್ಗೆ:

-
- ಭಾರತದ 4,500-ವರ್ಷಗಳ ಹಳೆಯ ಭವ್ಯ ಕಡಲ ಇತಿಹಾಸವನ್ನು ಪ್ರದರ್ಶಿಸಲು ಗುಜರಾತಿನ ಲೋಥಾಲ್ನಲ್ಲಿ ನಿರ್ಮಾಣವಾಗುತ್ತಿರುವ ವಿಶ್ವದರ್ಜೆಯ ಪ್ರವಾಸೋದ್ಯಮ ಸೌಲಭ್ಯ ಇದಾಗಿದೆ.
- ಸ್ಥಳ: ಗುಜರಾತಿನ ಲೋಥಾಲ್ (ಪ್ರಾಚೀನ ಸಿಂಧೂ ನಾಗರಿಕತೆಯ ಪ್ರಮುಖ ಬಂದರು ನಗರ).
- ನೋಡಲ್ ಸಚಿವಾಲಯ: ಸಾಗರಮಾಲಾ ಕಾರ್ಯಕ್ರಮದ ಅಡಿಯಲ್ಲಿ ಬರುವ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ (MoPSW).
- ವ್ಯಾಪ್ತಿ: 400 ಎಕರೆಗಳಿಗೂ ಹೆಚ್ಚು ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಇದು, ವಿಶ್ವದ ಅತಿದೊಡ್ಡ ಕಡಲ ವಸ್ತುಸಂಗ್ರಹಾಲಯ ಸಂಕೀರ್ಣವಾಗಲಿದೆ.
- ಪ್ರಮುಖ ವೈಶಿಷ್ಟ್ಯ: ಇದು ವಿಶ್ವದ ಅತಿ ಎತ್ತರದ ದೀಪಸ್ತಂಭ (Lighthouse) ವಸ್ತುಸಂಗ್ರಹಾಲಯವನ್ನು ಹೊಂದಿರಲಿದೆ.
ಭೋಜಶಾಲಾ
ಇತಿಹಾಸ /ಕಲೆ ಮತ್ತು ಸಂಸ್ಕೃತಿ

ಇತ್ತೀಚೆಗೆ ಸುದ್ದಿಯಲ್ಲಿದೆ:
- ಮಧ್ಯಪ್ರದೇಶದ ಉಚ್ಚ ನ್ಯಾಯಾಲಯವು ಇತ್ತೀಚೆಗೆ ಧಾರ್ ಜಿಲ್ಲೆಯಲ್ಲಿರುವ ‘ಭೋಜಶಾಲಾ’ ಸಂಕೀರ್ಣವನ್ನು ಹಿಂದೂ ದೇವಾಲಯವೆಂದು ಘೋಷಿಸಿದೆ.
ಭೋಜಶಾಲಾ ಸಂಕೀರ್ಣ’ದ ಬಗ್ಗೆ:
- ಪರಮಾರ ರಾಜವಂಶದ ಅತ್ಯಂತ ಶ್ರೇಷ್ಠ ರಾಜನಾದ ‘ರಾಜ ಭೋಜ’ನು ಕ್ರಿ.ಶ. 1000-1055 ರ ಸುಮಾರಿಗೆ ಧಾರ್ನಲ್ಲಿ ಸರಸ್ವತಿ ದೇವಿಗೆ ಸಮರ್ಪಿತವಾದ ಈ ಪ್ರಸಿದ್ಧ ಭೋಜಶಾಲೆಯನ್ನು ಪ್ರಮುಖ ಶಿಕ್ಷಣ ಕೇಂದ್ರವನ್ನಾಗಿ ಸ್ಥಾಪಿಸಿದನು.
- ನಂತರ, ಮುಸ್ಲಿಂ ಆಳ್ವಿಕೆಯ ಕಾಲದಲ್ಲಿ ಈ ರಚನೆಯನ್ನು ‘ಕಮಲ್ ಮೌಲಾ ಮಸೀದಿ’ಯಾಗಿ ಪರಿವರ್ತಿಸಲಾಯಿತು.
- ಇದು ಸಂಸ್ಕೃತ ಕಲಿಕೆಯ ಅತ್ಯುನ್ನತ ಮಹಾವಿದ್ಯಾಲಯ ಮತ್ತು ಪ್ರಮುಖ ಕಲಿಕಾ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿತ್ತು. ಈ ಮಸೀದಿಯು ಇಂದಿಗೂ ಮೂಲ ಭೋಜಶಾಲೆಯ ಕೆತ್ತನೆಯ ಕಂಬಗಳು, ಛಾವಣಿಗಳು ಮತ್ತು ಶಿಲಾಶಾಸನಗಳನ್ನು ಒಳಗೊಂಡಿದೆ.
- ಇಲ್ಲಿನ ಪ್ರಮುಖ ಶಾಸನಗಳು ಸಂಸ್ಕೃತ ವ್ಯಾಕರಣ ಕೋಷ್ಟಕಗಳು, ವಿಷ್ಣುವಿನ ಸ್ತುತಿಗೀತೆಗಳು, ಪರಮಾರ ರಾಜರ ಪ್ರಶಂಸೆಗಳು ಮತ್ತು ಅರ್ಜುನವರ್ಮ ದೇವನ ಆಳ್ವಿಕೆಯಲ್ಲಿ ಮದನ ಕವಿಯು ಬರೆದ ‘ಕರ್ಪೂರಮಂಜರಿ’ ಎಂಬ ಸಂಸ್ಕೃತ ನಾಟಕವನ್ನು ಒಳಗೊಂಡಿವೆ.
ಭಾರತದಲ್ಲಿ ಬೆಲ್ಲದ ಉದ್ಯಮ ವಲಯ
ಆರ್ಥಿಕತೆ

ಇತ್ತೀಚೆಗೆ ಸುದ್ದಿಯಲ್ಲಿದೆ:
- ಭಾರತದಲ್ಲಿ ಬೆಲ್ಲದ ಉತ್ಪಾದನೆಯು ಗ್ರಾಮೀಣ ಜೀವನೋಪಾಯ, ರೈತರ ಆದಾಯ ಮತ್ತು ಗುಡಿ ಕೈಗಾರಿಕೆಗಳ ಮೂಲಕ ಮೌಲ್ಯವರ್ಧನೆಗೆ ಬೆಂಬಲ ನೀಡುತ್ತಿರುವ ಪ್ರಮುಖ ಕೃಷಿ-ಸಂಸ್ಕರಣಾ ವಲಯವಾಗಿದೆ.
‘ಬೆಲ್ಲ’ದ ಬಗ್ಗೆ ಮಾಹಿತಿ:
- ಇದನ್ನು ಸಾಮಾನ್ಯವಾಗಿ ‘ಗುಢ’ ಎಂದು ಕರೆಯಲಾಗುತ್ತದೆ. ಇದು ಸಂಸ್ಕರಿಸದ, ನೈಸರ್ಗಿಕ ಮತ್ತು ಸಾಂಪ್ರದಾಯಿಕ ಸಿಹಿಕಾರಕವಾಗಿದೆ.
- ರಾಸಾಯನಿಕಗಳನ್ನು ಬಳಸದೆ ಕಬ್ಬಿನ ರಸವನ್ನು ಸಾಂದ್ರೀಕರಿಸುವ ಮೂಲಕ ಇದನ್ನು ಉತ್ಪಾದಿಸಲಾಗುತ್ತದೆ.
- ಏಷ್ಯಾ, ಆಫ್ರಿಕಾ, ಲ್ಯಾಟಿನ್ ಅಮೆರಿಕಾ ಮತ್ತು ಕೆರಿಬಿಯನ್ ಪ್ರದೇಶಗಳಾದ್ಯಂತ ಇದನ್ನು ವಿಭಿನ್ನ ಸ್ಥಳೀಯ ಹೆಸರುಗಳಿಂದ ಕರೆಯಲಾಗುತ್ತಿದ್ದು, ಅಲ್ಲಿನ ಜನರು ಇದನ್ನು ವ್ಯಾಪಕವಾಗಿ ಆಹಾರದಲ್ಲಿ ಬಳಸುತ್ತಾರೆ.
ಭಾರತದಲ್ಲಿ ಬೆಲ್ಲದ ಉತ್ಪಾದನೆ:
- ಭಾರತವು ಜಾಗತಿಕವಾಗಿ ಬೆಲ್ಲದ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿದ್ದು, ವಿಶ್ವದ ಒಟ್ಟು ಬೆಲ್ಲದ 70% ಕ್ಕಿಂತ ಹೆಚ್ಚಿನ ಉತ್ಪಾದನೆಯನ್ನು ಹೊಂದಿದೆ.
- ಉತ್ತರ ಪ್ರದೇಶವು ಒಟ್ಟು ಉತ್ಪಾದನೆಯಲ್ಲಿ ಶೇಕಡಾ 48.5% ರಷ್ಟು ಕೊಡುಗೆ ನೀಡುವ ಮೂಲಕ ಪ್ರಥಮ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಮಹಾರಾಷ್ಟ್ರ (24.1%) ಮತ್ತು ಕರ್ನಾಟಕ (10.5%) ರಾಜ್ಯಗಳಿವೆ.
ಸಾರಂಡಾ ಅರಣ್ಯ (Saranda Forest)
ಪರಿಸರ
ಇತ್ತೀಚೆಗೆ ಸುದ್ದಿಯಲ್ಲಿದೆ:
- ಸಾರಂಡಾ ಆನೆಗಳ ಅರಣ್ಯ ಪ್ರದೇಶವನ್ನು ಮೂರು ತಿಂಗಳೊಳಗೆ ‘ವನ್ಯಜೀವಿ ಅಭಯಾರಣ್ಯ’ವಾಗಿ ಅಧಿಸೂಚಿಸುವಂತೆ ಸರ್ವೋಚ್ಚ ನ್ಯಾಯಾಲಯವು ಈ ಹಿಂದೆ ನೀಡಿದ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ಜಾರ್ಖಂಡ್ ಸರ್ಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ‘ಮರುಪರಿಶೀಲನಾ ಅರ್ಜಿ’ಯನ್ನು (Review petition) ಸಲ್ಲಿಸಿದೆ.
- ಕಾರಣ: ಈ ಪ್ರದೇಶವನ್ನು ಅಭಯಾರಣ್ಯವೆಂದು ಘೋಷಿಸುವುದರಿಂದ, ಅಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನಾಂಗದವರ ಆವಾಸಸ್ಥಾನಗಳು, ರಸ್ತೆಗಳು ಮತ್ತು ಮೂಲಸೌಕರ್ಯಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಹೀಗಾಗಿ, ಈ ಕುರಿತು ಹೆಚ್ಚಿನ ಅಧ್ಯಯನಗಳ ಅಗತ್ಯವಿದೆ ಎಂದು ಜಾರ್ಖಂಡ್ ಸರ್ಕಾರ ವಾದಿಸಿದೆ.
ಸಾರಂಡಾ ಅರಣ್ಯದ ಬಗ್ಗೆ:
- ಇದು ಜಾರ್ಖಂಡ್ ರಾಜ್ಯದ ಜಮ್ಶೆಡ್ಪುರದಿಂದ ಸುಮಾರು 122 ಕಿ.ಮೀ. ದೂರದಲ್ಲಿದೆ.
- ಇದು ಏಷ್ಯಾ ಖಂಡದಲ್ಲೇ ಅತಿದೊಡ್ಡ ‘ಸಾಲ್’ ವೃಕ್ಷಗಳ ಅರಣ್ಯವಾಗಿದ್ದು, ಇದನ್ನು “ಏಳು ನೂರು ಬೆಟ್ಟಗಳ ನಾಡು” ಎಂದು ಕರೆಯಲಾಗುತ್ತದೆ.
- ಇದು ಛೋಟಾನಾಗ್ಪುರ ‘ಜೈವಿಕ-ಭೌಗೋಳಿಕ ವಲಯ’ದ ಪ್ರಮುಖ ಭಾಗವಾಗಿದೆ. ಇದು ನೆರೆಯ ಒಡಿಶಾ ಮತ್ತು ಛತ್ತೀಸ್ಗಢ ರಾಜ್ಯಗಳ ಅರಣ್ಯಗಳೊಂದಿಗೆ ಸಂಪರ್ಕ ಹೊಂದಿದ್ದು, ವನ್ಯಜೀವಿಗಳಿಗೆ ನಿರಂತರವಾದ ಆವಾಸಸ್ಥಾನವನ್ನು ಒದಗಿಸುತ್ತದೆ.
- ಪ್ರಾಣಿಸಂಕುಲ: ಈ ಅರಣ್ಯದಲ್ಲಿ ಅಳಿವಿನಂಚಿನಲ್ಲಿರುವ ‘ಹಾರುವ ಹಲ್ಲಿಗಳು’ ಮತ್ತು ದೊಡ್ಡ ಪ್ರಮಾಣದ ಆನೆಗಳ ಸಂತತಿ ಕಂಡುಬರುತ್ತದೆ. ಇದು ಆನೆಗಳ ಪ್ರಮುಖ ವಲಸೆ ಮಾರ್ಗವಾಗಿದೆ.
- ಪ್ರಮುಖ ವೃಕ್ಷ ಪ್ರಭೇದಗಳು: ಸಾಲ್, ಮಹುವಾ ಮತ್ತು ಕುಸುಮ್.
- ಬುಡಕಟ್ಟುಗಳು: ಹೋ (Ho), ಮುಂಡಾ, ಉರಾವ್ (Uraon) ಮತ್ತು ಸಂತಾಲ್ ಜನಾಂಗದವರು ಇಲ್ಲಿ ವಾಸಿಸುತ್ತಾರೆ.
- ಮಹತ್ವ: ಇದು ಸ್ಥಳೀಯ ಬುಡಕಟ್ಟು ಜನಾಂಗದವರ ಪಾಲಿಗೆ ಆಳವಾದ ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ಅವರ ಸಂಪ್ರದಾಯಗಳು, ಆಚರಣೆಗಳು ಮತ್ತು “ಸರ್ನಾ” ಎಂದು ಕರೆಯಲ್ಪಡುವ ಪವಿತ್ರ ತೋಪುಗಳು ಈ ಅರಣ್ಯ ಪರಿಸರ ವ್ಯವಸ್ಥೆಯೊಂದಿಗೆ ನಿಕಟ ಸಂಬಂಧವನ್ನು ಹೊಂದಿವೆ.








ನಿಮ್ಮದೊಂದು ಉತ್ತರ