ರಕ್ಷಣಾ ಪಡೆಗಳ ಮುಖ್ಯಸ್ಥರು (CDS) : ಎನ್.ಎಸ್. ರಾಜಾ ಸುಬ್ರಮಣಿ | ಸರ್ದಾರ್ ವಲ್ಲಭಭಾಯಿ ಪಟೇಲ್ | ತ್ವರಿತ ವಿಚಾರಣೆಯು ಒಂದು ‘ಮಾನವ ಹಕ್ಕು’ (Speedy Trial a ‘Human Right’) | PCOS ಅನ್ನು PMOS ಎಂದು ಮರುನಾಮಕರಣ | ಪ್ರಧಾನ ಮಂತ್ರಿ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ (PM SHRI) | ಮಲೇರಿಯಾ ಲಸಿಕೆಯ ಕುರಿತಾದ ಅಧ್ಯಯನ | ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿಗಳು, 2026

ರಕ್ಷಣಾ ಪಡೆಗಳ ಮುಖ್ಯಸ್ಥರು (CDS) : ಎನ್.ಎಸ್. ರಾಜಾ ಸುಬ್ರಮಣಿ

ರಕ್ಷಣೆ

ಇತ್ತೀಚೆಗೆ ಸುದ್ದಿಯಲ್ಲಿದೆ:

  • ಭಾರತ ಸರ್ಕಾರವು ಲೆಫ್ಟಿನೆಂಟ್ ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ಅವರನ್ನು ನೂತನ ‘ರಕ್ಷಣಾ ಪಡೆಗಳ ಮುಖ್ಯಸ್ಥ’ರನ್ನಾಗಿ (Chief of Defence Staff – CDS) ನೇಮಕ ಮಾಡಿದೆ.
  • ಅವರು ‘ಸೇನಾ ವ್ಯವಹಾರಗಳ ಇಲಾಖೆ’ಯ (Department of Military Affairs – DMA) ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಲಿದ್ದಾರೆ.

ರಕ್ಷಣಾ ಪಡೆಗಳ ಮುಖ್ಯಸ್ಥರು (Chief of Defence Staff – CDS):

  • ‘ಕಾರ್ಗಿಲ್ ಪರಾಮರ್ಶನಾ ಸಮಿತಿ’ಯ ಶಿಫಾರಸುಗಳು ಹಾಗೂ ನಂತರದ ರಕ್ಷಣಾ ಸುಧಾರಣೆಗಳ ಭಾಗವಾಗಿ 2019 ರಲ್ಲಿ CDS ಹುದ್ದೆಯನ್ನು ಸೃಷ್ಟಿಸಲಾಯಿತು.
  • ಭಾರತದ ಪ್ರಥಮ CDS ಆಗಿ ಜನರಲ್ ಬಿಪಿನ್ ರಾವತ್ ಅವರು ಸೇವೆ ಸಲ್ಲಿಸಿದ್ದರು.

ಸಿಡಿಎಸ್ (CDS) ಅವರ ಪಾತ್ರ ಮತ್ತು ಜವಾಬ್ದಾರಿಗಳು:

  • ಪ್ರಧಾನ ಸೇನಾ ಸಲಹೆಗಾರರು: ರಕ್ಷಣಾ ಸಚಿವರಿಗೆ ಮೂರು ಸಶಸ್ತ್ರ ಪಡೆಗಳಿಗೆ (ಭೂಸೇನೆ, ನೌಕಾಪಡೆ ಮತ್ತು ವಾಯುಪಡೆ) ಸಂಬಂಧಿಸಿದ ಎಲ್ಲಾ ವಿಷಯಗಳ ಬಗ್ಗೆ ಪ್ರಧಾನ ಸೇನಾ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಾರೆ.
  • ಸೇನಾ ವ್ಯವಹಾರಗಳ ಇಲಾಖೆ: ಭಾರತ ಸರ್ಕಾರದ ‘ಸೇನಾ ವ್ಯವಹಾರಗಳ ಇಲಾಖೆ’ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಾರೆ.
  • ಸೇನಾ ಸುಧಾರಣೆ: ಸಶಸ್ತ್ರ ಪಡೆಗಳ ಕಾರ್ಯಾಚರಣೆಗಳಲ್ಲಿ ಸಮನ್ವಯ, ಜಂಟಿ ಕಾರ್ಯಾಚರಣೆ ಹಾಗೂ ಸೇನಾ ಪಡೆಗಳ ಆಧುನೀಕರಣವನ್ನು ಹೆಚ್ಚಿಸುವ ಕಡೆಗೆ ಗಮನಹರಿಸುತ್ತಾರೆ.
  • ಸಂಯುಕ್ತ ಸೇನಾ ಕಮಾಂಡ್‌ಗಳು (Theater Commands): ಪ್ರಸ್ತುತವಿರುವ ಸೇನಾ ಕಮಾಂಡ್‌ಗಳನ್ನು ‘ಏಕೀಕೃತ ಸಂಯುಕ್ತ ಸೇನಾ ಕಮಾಂಡ್‌’ಗಳಾಗಿ ಮರುರೂಪಿಸುವ ಪ್ರಕ್ರಿಯೆಯನ್ನು ಇವರು ಮುನ್ನಡೆಸುತ್ತಾರೆ.
  • ಕಾರ್ಯತಂತ್ರ ಮತ್ತು ಪರಮಾಣು ಪಾತ್ರ: ‘ಪರಮಾಣು ಕಮಾಂಡ್ ಪ್ರಾಧಿಕಾರ’ಕ್ಕೆ ಪ್ರಮುಖ ಸೇನಾ ಸಲಹೆಗಾರರಾಗಿ ಇವರು ಸೇವೆ ಸಲ್ಲಿಸುತ್ತಾರೆ.

ಸರ್ದಾರ್ ವಲ್ಲಭಭಾಯಿ ಪಟೇಲ್

ಇತಿಹಾಸ

ಇತ್ತೀಚೆಗೆ ಸುದ್ದಿಯಲ್ಲಿದೆ:

  • ಇತ್ತೀಚೆಗೆ, ಸೋಮನಾಥ ದೇವಾಲಯದ ಪುನರ್ ನಿರ್ಮಾಣದ 75 ನೇ ವಾರ್ಷಿಕೋತ್ಸವದ ಆಚರಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಗೌರವ ನಮನ ಸಲ್ಲಿಸಿದರು.

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಬಗ್ಗೆ:

  • ಜನನ: ಅಕ್ಟೋಬರ್ 31, 1875.
  • ಇವರು ಸ್ವತಂತ್ರ ಭಾರತದ ಪ್ರಥಮ ಉಪಪ್ರಧಾನಿ ಹಾಗೂ ಗೃಹ ಸಚಿವರಾಗಿದ್ದರು.
  • ಇವರನ್ನು ಭಾರತದ ‘ರಾಷ್ಟ್ರೀಯ ಏಕೀಕರಣದ ಶಿಲ್ಪಿ’ ಹಾಗೂ ‘ಆಧುನಿಕ ನಾಗರಿಕ ಸೇವೆಗಳ’ ಸ್ಥಾಪನೆಯ ಹಿಂದಿನ ಪ್ರಮುಖ ಶಕ್ತಿ ಎಂದು ವ್ಯಾಪಕವಾಗಿ ಗೌರವಿಸಲಾಗುತ್ತದೆ.
  • 1991 ರಲ್ಲಿ ಇವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ವನ್ನು ಮರಣೋತ್ತರವಾಗಿ ನೀಡಿ ಗೌರವಿಸಲಾಯಿತು.

ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಇವರ ಕೊಡುಗೆಗಳು:

  • ಖೇಡಾ ಸತ್ಯಾಗ್ರಹ, 1917: ಗುಜರಾತಿನ ಖೇಡಾ ಜಿಲ್ಲೆಯ ಪ್ರಮುಖ ಸ್ಥಳೀಯ ನಾಯಕರಾಗಿದ್ದ ಪಟೇಲರು, ಬ್ರಿಟಿಷರು ವಿಧಿಸಿದ್ದ ಅನ್ಯಾಯದ ಭೂಕಂದಾಯದ ವಿರುದ್ಧ ಸತ್ಯಾಗ್ರಹವನ್ನು ಸಂಘಟಿಸಲು ಮಹಾತ್ಮಾ ಗಾಂಧಿಯವರಿಗೆ ಬೆಂಬಲ ನೀಡಿದರು.
  • ಅಸಹಕಾರ ಚಳುವಳಿ, 1920-22: ಅಸಹಕಾರ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಇವರು, ಸುಮಾರು 3 ಲಕ್ಷ ಜನರನ್ನು ಚಳುವಳಿಗೆ ಸೇರ್ಪಡೆಗೊಳಿಸಿದರು ಮತ್ತು ₹ 15 ಲಕ್ಷ (1.5 ಮಿಲಿಯನ್) ರೂಪಾಯಿಗಳ ನಿಧಿಯನ್ನು ಸಂಗ್ರಹಿಸಿದರು.
  • ಬಾರ್ಡೋಲಿ ಸತ್ಯಾಗ್ರಹ, 1928: ಬಾರ್ಡೋಲಿ ಸತ್ಯಾಗ್ರಹದ ಸಮಯದಲ್ಲಿ, ತೀವ್ರ ಬರಗಾಲ ಮತ್ತು ಹೆಚ್ಚಾದ ಭೂಕಂದಾಯದಿಂದ ಬಳಲುತ್ತಿದ್ದ ಸ್ಥಳೀಯ ಜನತೆಗೆ ಪಟೇಲರು ಬಲವಾದ ಬೆಂಬಲ ನೀಡಿದರು.
  • ಕಾನೂನು ಭಂಗ ಚಳುವಳಿ, 1930-34: ಬ್ರಿಟಿಷರ ಉಪ್ಪಿನ ಏಕಸ್ವಾಮ್ಯದ ವಿರುದ್ಧದ ಅಹಿಂಸಾತ್ಮಕ ಪ್ರತಿಭಟನೆಯಾದ ‘ಉಪ್ಪಿನ ಸತ್ಯಾಗ್ರಹ’ದಲ್ಲಿ ಇವರು ಸಕ್ರಿಯವಾಗಿ ಭಾಗವಹಿಸಿದರು.
  • ಭಾರತ ಬಿಟ್ಟು ತೊಲಗಿ (ಕ್ವಿಟ್ ಇಂಡಿಯಾ) ಚಳುವಳಿ, 1942: ಇವರು ಬ್ರಿಟಿಷ್ ಆಳ್ವಿಕೆಯ ವಿರುದ್ಧ ತೀವ್ರ ಪ್ರತಿಭಟನೆಗಳು ಮತ್ತು ಮುಷ್ಕರಗಳನ್ನು ಸಂಘಟಿಸಿದರು. ಭಾರತದಾದ್ಯಂತ ಅತ್ಯಂತ ಪ್ರಭಾವಶಾಲಿ ಹಾಗೂ ಸ್ಪೂರ್ತಿದಾಯಕ ಭಾಷಣಗಳನ್ನು ಮಾಡುವ ಮೂಲಕ ಜನರನ್ನು ಬೃಹತ್ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳಲು, ಕಾನೂನಿನ ಉಲ್ಲಂಘನೆಯಲ್ಲಿ ತೊಡಗಲು, ತೆರಿಗೆ ಪಾವತಿಯನ್ನು ಬಹಿಷ್ಕರಿಸಲು ಮತ್ತು ನಾಗರಿಕ ಸೇವೆಗಳನ್ನು ಸ್ಥಗಿತಗೊಳಿಸಲು ಪ್ರೇರೇಪಿಸಿದರು.

ನಿಮಗಿದು ತಿಳಿದಿರಲಿ:

  • ಸರ್ದಾರ್ ಪಟೇಲರ ಜನ್ಮದಿನದ ಸ್ಮರಣಾರ್ಥವಾಗಿ 2014 ರಿಂದ, ಪ್ರತಿ ವರ್ಷ ಅಕ್ಟೋಬರ್ 31 ರಂದು ‘ರಾಷ್ಟ್ರೀಯ ಏಕತಾ ದಿನ’ವನ್ನು ಆಚರಿಸಲಾಗುತ್ತಿದೆ.
  • ಗುಜರಾತಿನ ಕೇವಾಡಿಯಾದಲ್ಲಿ , ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 143 ನೇ ಜನ್ಮದಿನದಂದು (ಅಕ್ಟೋಬರ್ 31, 2018) ಪ್ರಪಂಚದ ಅತ್ಯಂತ ಎತ್ತರದ ಪ್ರತಿಮೆಯಾದ ‘ಏಕತಾ ಪ್ರತಿಮೆ’ಯನ್ನು ಅನಾವರಣಗೊಳಿಸಲಾಯಿತು.
  • 1947 ರಲ್ಲಿ ಸ್ವತಂತ್ರ ಭಾರತದ ಪ್ರಥಮ ಬ್ಯಾಚ್ ನ ನಾಗರಿಕ ಸೇವಾ ಅಧಿಕಾರಿಗಳನ್ನು ಉದ್ದೇಶಿಸಿ ಸರ್ದಾರ್ ಪಟೇಲರು ಮಾಡಿದ ಐತಿಹಾಸಿಕ ಭಾಷಣದ ಸವಿನೆನಪಿಗಾಗಿ, ಪ್ರತಿ ವರ್ಷ ಏಪ್ರಿಲ್ 21 ರಂದು ‘ನಾಗರಿಕ ಸೇವಾ ದಿನ’ವನ್ನು ಆಚರಿಸಲಾಗುತ್ತದೆ.

ತ್ವರಿತ ವಿಚಾರಣೆಯು ಒಂದು ‘ಮಾನವ ಹಕ್ಕು’ (Speedy Trial a ‘Human Right’)

ರಾಜಕೀಯ ಮತ್ತು ಆಡಳಿತ

ಇತ್ತೀಚೆಗೆ ಸುದ್ದಿಯಲ್ಲಿದೆ:

  • ಉತ್ತರ ಪ್ರದೇಶದಲ್ಲಿ ಸುಮಾರು 35 ವರ್ಷಗಳಿಂದ ಬಾಕಿ ಉಳಿದಿದ್ದ ಅಪರಾಧ ಪ್ರಕರಣವೊಂದರ ವಿಚಾರಣೆ ನಡೆಸುವಾಗ ಸರ್ವೋಚ್ಚ ನ್ಯಾಯಾಲಯವು, ‘ತ್ವರಿತ ವಿಚಾರಣೆಯ ಹಕ್ಕು’ ಕೇವಲ ಸಂವಿಧಾನದ 21ನೇ ವಿಧಿಯ ಅಡಿಯಲ್ಲಿದ್ದ ಸಾಂವಿಧಾನಿಕ ಖಾತರಿಯಷ್ಟೇ ಅಲ್ಲ, ಅದೊಂದು ‘ಮಾನವ ಹಕ್ಕು’ ಕೂಡ ಆಗಿದೆ ಎಂದು ಮಹತ್ವದ ತೀರ್ಪು ನೀಡಿದೆ.

ಸಂವಿಧಾನದ 21ನೇ ವಿಧಿ:

  • ಸಂವಿಧಾನದ 21ನೇ ವಿಧಿಯು ಕಾನೂನಿನಿಂದ ಸ್ಥಾಪಿತವಾದ ಪ್ರಕ್ರಿಯೆಯ (Procedure established by law) ಹೊರತಾಗಿ, ಪ್ರತಿಯೊಬ್ಬ ವ್ಯಕ್ತಿಗೂ ‘ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆ’ಯನ್ನು ಖಾತರಿಪಡಿಸುತ್ತದೆ.
  • ನ್ಯಾಯಾಂಗದ ವ್ಯಾಖ್ಯಾನಗಳು 21ನೇ ವಿಧಿಯ ವ್ಯಾಪ್ತಿಯನ್ನು ವಿಸ್ತರಿಸಿದ್ದು, ಇದು ನ್ಯಾಯಸಮ್ಮತ ವಿಚಾರಣೆ, ಉಚಿತ ಕಾನೂನು ನೆರವು, ಸೆರೆಮನೆಯಲ್ಲಿ ಮಾನವೀಯ ವಾತಾವರಣ ಮತ್ತು ತ್ವರಿತ ನ್ಯಾಯವನ್ನು ಒಳಗೊಂಡಿದೆ.

ನ್ಯಾಯಾಂಗದ ವಿಕಸನ:

  • ಹುಸೇನಾರಾ ಖಾತುನ್ v/s ಬಿಹಾರ ರಾಜ್ಯ ಪ್ರಕರಣ: ಸರ್ವೋಚ್ಚ ನ್ಯಾಯಾಲಯವು 21ನೇ ವಿಧಿಯ ಅಡಿಯಲ್ಲಿ ತ್ವರಿತ ವಿಚಾರಣೆಯನ್ನು ‘ಮೂಲಭೂತ ಹಕ್ಕು’ ಎಂದು ಮೊದಲ ಬಾರಿಗೆ ಗುರುತಿಸಿತು. ವರ್ಷಗಳ ಕಾಲ ಜೈಲುಗಳಲ್ಲಿರುವ ವಿಚಾರಣಾಧೀನ ಕೈದಿಗಳ ದುಸ್ಥಿತಿಯ ಕುರಿತು ಈ ಪ್ರಕರಣವು ಗಮನ ಹರಿಸಿತು.
  • ಎ.ಆರ್. ಅಂತುಲೆ v/s ಆರ್.ಎಸ್. ನಾಯಕ್ ಪ್ರಕರಣ: ತ್ವರಿತ ವಿಚಾರಣೆಯ ಹಕ್ಕಿನ ಉಲ್ಲಂಘನೆಯನ್ನು ನಿರ್ಧರಿಸಲು ನ್ಯಾಯಾಲಯವು ಕೆಲವು ತತ್ವಗಳನ್ನು ರೂಪಿಸಿತು. ಆಡಳಿತ ವ್ಯವಸ್ಥೆಯ ನ್ಯೂನತೆಗಳಿಂದ ಉಂಟಾಗುವ ವಿಳಂಬಗಳು ಸಹ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸುತ್ತವೆ ಎಂದು ಇದು ಸ್ಪಷ್ಟಪಡಿಸಿದೆ.

PCOS ಅನ್ನು PMOS ಎಂದು ಮರುನಾಮಕರಣ

ಆರೋಗ್ಯ

ಇತ್ತೀಚೆಗೆ ಸುದ್ದಿಯಲ್ಲಿದೆ:

  • ವಿಶ್ವದಾದ್ಯಂತ ವೈದ್ಯರು, ಸಂಶೋಧಕರು ಮತ್ತು ರೋಗಿಗಳ ಹಕ್ಕುಗಳ ಪ್ರತಿಪಾದನಾ ಗುಂಪುಗಳನ್ನು ಒಳಗೊಂಡ ಜಾಗತಿಕ ವೈದ್ಯಕೀಯ ಒಮ್ಮತವು ಸುಮಾರು 14 ವರ್ಷಗಳ ವೈಜ್ಞಾನಿಕ ಸಮಾಲೋಚನೆಗಳ ನಂತರ, ‘ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್’ (PCOS) ಅನ್ನು ‘ಪಾಲಿಎಂಡೋಕ್ರೈನ್ ಮೆಟಬೋಲಿಕ್ ಓವೇರಿಯನ್ ಸಿಂಡ್ರೋಮ್’ (PMOS) ಎಂದು ಅಧಿಕೃತವಾಗಿ ಮರುನಾಮಕರಣ ಮಾಡಿದೆ.

ಪಿಎಂಓಎಸ್ (PMOS) ಬಗ್ಗೆ:

  • ಹಿಂದೆ ‘ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್’ (PCOS) ಎಂದು ಕರೆಯಲ್ಪಡುತ್ತಿದ್ದ ‘ಪಾಲಿಎಂಡೋಕ್ರೈನ್ ಮೆಟಬೋಲಿಕ್ ಓವೇರಿಯನ್ ಸಿಂಡ್ರೋಮ್’ (PMOS), ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರನ್ನು ಬಾಧಿಸುವ ಒಂದು ಸಂಕೀರ್ಣ ಹಾರ್ಮೋನ್ ಮತ್ತು ಚಯಾಪಚಯ ಅಸ್ವಸ್ಥತೆಯಾಗಿದೆ.
  • ಇದು ಅಂತಃಸ್ರಾವಕ ವ್ಯವಸ್ಥೆ, ಚಯಾಪಚಯ, ಸಂತಾನೋತ್ಪತ್ತಿ ಆರೋಗ್ಯ ಮತ್ತು ಮಾನಸಿಕ ಯೋಗಕ್ಷೇಮದ ಮೇಲೆ ತೀವ್ರ ಪರಿಣಾಮ ಬೀರುತ್ತದೆ.
  • ಈ ಅಸ್ವಸ್ಥತೆಯು ಜಾಗತಿಕವಾಗಿ ಪ್ರತಿ ಎಂಟು ಮಹಿಳೆಯರಲ್ಲಿ ಒಬ್ಬರಿಗೆ ಬಾಧಿಸುತ್ತಿದ್ದು, ಬಂಜೆತನ ಹಾಗೂ ಋತುಸ್ರಾವದ ವ್ಯತ್ಯಯಗಳಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.
  • ಪ್ರಮುಖ ಲಕ್ಷಣಗಳು:
  1. ಮಧುಮೇಹದ ಅಪಾಯ: ಇನ್ಸುಲಿನ್ ಪ್ರತಿರೋಧವು ಟೈಪ್-2 ಮಧುಮೇಹಕ್ಕೆ (Type-2 diabetes mellitus) ಕಾರಣವಾಗಬಹುದು.
  2. ಹೃದ್ರೋಗದ ಅಪಾಯಗಳು: PMOS ಹೊಂದಿರುವ ಮಹಿಳೆಯರು ಅಧಿಕ ರಕ್ತದೊತ್ತಡ  ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ.
  3. ಸಂತಾನೋತ್ಪತ್ತಿಯ ಸವಾಲುಗಳು: ಈ ಅಸ್ವಸ್ಥತೆಯು ಅಂಡೋತ್ಪತ್ತಿ ಮತ್ತು ಸಂತಾನೋತ್ಪತ್ತಿಯ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
  4. ಮಾನಸಿಕ ಆರೋಗ್ಯದ ಸಮಸ್ಯೆಗಳು: ದೀರ್ಘಕಾಲೀನ ಒತ್ತಡ, ದೇಹದ ಬಗ್ಗೆ ಕೀಳರಿಮೆ ಮತ್ತು ಹಾರ್ಮೋನ್‌ಗಳ ಅಸಮತೋಲನವು ಮಾನಸಿಕ ಅಸ್ವಸ್ಥತೆಗಳಿಗೆ ಕಾರಣವಾಗಬಹುದು.

PCOS ಹೆಸರನ್ನು ಬದಲಾಯಿಸಿದ್ದೇಕೆ?

  • ‘ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್’ (PCOS) ಎಂಬ ಹಿಂದಿನ ಹೆಸರು ವೈಜ್ಞಾನಿಕವಾಗಿ ನಿಖರವಾಗಿರಲಿಲ್ಲ ಮತ್ತು ತಪ್ಪು ಕಲ್ಪನೆ ಮೂಡಿಸುವಂತಿತ್ತು. ಏಕೆಂದರೆ, ಈ ಅಸ್ವಸ್ಥತೆಯಿಂದ ಬಳಲುವ ಅನೇಕ ಮಹಿಳೆಯರಲ್ಲಿ ವಾಸ್ತವವಾಗಿ ಅಂಡಾಶಯದ ಚೀಲಗಳು (Ovarian cysts) ರೂಪುಗೊಳ್ಳುವುದೇ ಇಲ್ಲ.
  • ಹಿಂದಿನ ಹೆಸರು ಪ್ರಾಥಮಿಕವಾಗಿ ಈ ಅಸ್ವಸ್ಥತೆಯನ್ನು ಕೇವಲ ಸಂತಾನೋತ್ಪತ್ತಿ ಅಂಗಗಳಿಗೆ ಮಾತ್ರ ಸೀಮಿತಗೊಳಿಸುವಂತಿತ್ತು. ಆದರೆ ವಾಸ್ತವದಲ್ಲಿ, ಈ ಸ್ಥಿತಿಯು ದೇಹದ ಚಯಾಪಚಯ ಕ್ರಿಯೆ, ಹಾರ್ಮೋನ್ ವ್ಯವಸ್ಥೆ, ಹೃದಯದ ಆರೋಗ್ಯ ಹಾಗೂ ಮಾನಸಿಕ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ.

ಪ್ರಧಾನ ಮಂತ್ರಿ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ (PM SHRI)

ಆಡಳಿತ

ಇತ್ತೀಚೆಗೆ ಸುದ್ದಿಯಲ್ಲಿದೆ:

  • ಕೇಂದ್ರ ಶಿಕ್ಷಣ ಸಚಿವಾಲಯವು, ‘ಪಿಎಂ-ಶ್ರೀ’ (PM SHRI) ಯೋಜನೆಯ ಅನುಷ್ಠಾನವು ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ, ಪಶ್ಚಿಮ ಬಂಗಾಳ, ಕೇರಳ ಮತ್ತು ತಮಿಳುನಾಡು ರಾಜ್ಯಗಳಿಗೆ, ಈ ಯೋಜನೆಯನ್ನು ಕಾರ್ಯಗತಗೊಳಿಸುವಂತೆ ಆಗ್ರಹಿಸಿ ಮತ್ತೊಮ್ಮೆ ಜ್ಞಾಪನಾ ಪತ್ರವನ್ನು ರವಾನಿಸಿದೆ.

ಪಿಎಂ-ಶ್ರೀ ಶಾಲೆಗಳು (PM SHRI Schools):

  • PM SHRI ವಿಸ್ತೃತ ರೂಪ: ಪ್ರಧಾನ ಮಂತ್ರಿ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ (PM Schools for Rising India).
  • ಅನುಷ್ಠಾನ ಸಚಿವಾಲಯ: ಕೇಂದ್ರ ಶಿಕ್ಷಣ ಸಚಿವಾಲಯ.
  • ಯೋಜನೆಯ ಸ್ವರೂಪ: ಕೇಂದ್ರ ಪ್ರಾಯೋಜಿತ ಯೋಜನೆ.
  • ಉದ್ದೇಶ: ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು ಹಾಗೂ ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿರುವ ಶಾಲೆಗಳ ಪೈಕಿ ಕೆಲವು ಶಾಲೆಗಳನ್ನು ಆಯ್ಕೆಮಾಡಿ ಬಲಪಡಿಸುವ ಮೂಲಕ, ದೇಶದಾದ್ಯಂತ 14,500 ಕ್ಕೂ ಹೆಚ್ಚು ಶಾಲೆಗಳನ್ನು ಉನ್ನತೀಕರಿಸುವುದು ಮತ್ತು ಅಭಿವೃದ್ಧಿಪಡಿಸುವುದು.
  • ವೈಶಿಷ್ಟ್ಯಗಳು:
  1. ಪಿಎಂ-ಶ್ರೀ ಶಾಲೆಗಳು ಶಿಕ್ಷಣವನ್ನು ನೀಡುವಲ್ಲಿ ಅತ್ಯಾಧುನಿಕ, ಪರಿವರ್ತನಾಶೀಲ ಹಾಗೂ ಸಮಗ್ರ ವಿಧಾನವನ್ನು ಅಳವಡಿಸಿಕೊಳ್ಳಲಿವೆ.
  2. ಈ ಶಾಲೆಗಳು ಅತ್ಯಾಧುನಿಕ ತಂತ್ರಜ್ಞಾನ, ಸ್ಮಾರ್ಟ್ ತರಗತಿಗಳು ಹಾಗೂ ಕ್ರೀಡೆಗಳನ್ನು ಒಳಗೊಂಡಂತೆ ‘ಆಧುನಿಕ ಮೂಲಸೌಕರ್ಯಗಳ’ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಿವೆ.
  3. ಜಲ ಸಂರಕ್ಷಣೆ, ತ್ಯಾಜ್ಯ ಮರುಬಳಕೆ, ಇಂಧನ-ದಕ್ಷ ಮೂಲಸೌಕರ್ಯ ಮತ್ತು ಪಠ್ಯಕ್ರಮದಲ್ಲಿ ನೈಸರ್ಗಿಕ ಜೀವನಶೈಲಿಯನ್ನು ಅಳವಡಿಸುವ ಮೂಲಕ ಈ ಶಾಲೆಗಳನ್ನು “ಹಸಿರು ಶಾಲೆಗಳಾಗಿ” ರೂಪುಗೊಳಿಸಲಾಗುವುದು.
  4. ಒಟ್ಟಾರೆಯಾಗಿ, ಈ ಶಾಲೆಗಳು ‘ರಾಷ್ಟ್ರೀಯ ಶಿಕ್ಷಣ ನೀತಿ 2020’ರ (NEP 2020) ಎಲ್ಲಾ ಆಶಯಗಳನ್ನು ಸಂಪೂರ್ಣವಾಗಿ ಪ್ರತಿಬಿಂಬಿಸಲಿವೆ. ಅಲ್ಲದೆ, ಇವು ಅತ್ಯುತ್ತಮ ‘ಮಾದರಿ ಶಾಲೆಗಳಾಗಿ’ ಕಾರ್ಯನಿರ್ವಹಿಸುವುದರ ಜೊತೆಗೆ, ತಮ್ಮ ಸುತ್ತಮುತ್ತಲಿನ ಇತರ ಶಾಲೆಗಳಿಗೂ ಉತ್ತಮ ಮಾರ್ಗದರ್ಶನ ನೀಡಲಿವೆ.

ಮಲೇರಿಯಾ ಲಸಿಕೆಯ ಕುರಿತಾದ ಅಧ್ಯಯನ

ಆರೋಗ್ಯ

ಇತ್ತೀಚೆಗೆ ಸುದ್ದಿಯಲ್ಲಿದೆ:

  • ಖ್ಯಾತ ವೈದ್ಯಕೀಯ ನಿಯತಕಾಲಿಕೆ ‘ಲ್ಯಾನ್ಸೆಟ್’ ಪ್ರಕಟಿಸಿದ ಪ್ರಮುಖ ಅಧ್ಯಯನದ ಪ್ರಕಾರ, ಪ್ರಪಂಚದ ಮೊಟ್ಟಮೊದಲ ಅಂಗೀಕೃತ ಮಲೇರಿಯಾ ಲಸಿಕೆಯಾದ ‘RTS,S/AS01E’, ಆಫ್ರಿಕಾದ ಕೆಲವು ಭಾಗಗಳಲ್ಲಿ ಮಕ್ಕಳ ಒಟ್ಟಾರೆ ಮರಣ ಪ್ರಮಾಣವನ್ನು ಶೇ. 13% ರಷ್ಟು ತಗ್ಗಿಸಿದೆ.

ಮಲೇರಿಯಾ ಕಾಯಿಲೆಯ ಬಗ್ಗೆ:

  • ರೋಗಕಾರಕ: ಮಲೇರಿಯಾವು ‘ಪ್ಲಾಸ್ಮೋಡಿಯಂ’ ಎಂಬ ಪರಾವಲಂಬಿ ಜೀವಿಗಳಿಂದ ಬರುವ ತೀವ್ರ ಜ್ವರದ ಕಾಯಿಲೆಯಾಗಿದೆ.
  • ರೋಗವಾಹಕ: ಸೋಂಕಿತ ‘ಹೆಣ್ಣು ಅನಾಫಿಲಿಸ್’ ಸೊಳ್ಳೆಗಳು ಕಚ್ಚುವುದರಿಂದ ಇದು ಮನುಷ್ಯರಿಂದ ಮನುಷ್ಯನಿಗೆ ಹರಡುತ್ತದೆ. 
  • ಈ ರೋಗವನ್ನು ತಡೆಗಟ್ಟಬಹುದು ಮತ್ತು ಗುಣಪಡಿಸಬಹುದು.
  • ಪ್ರಸರಣ: ಮಲೇರಿಯಾವು ಸಾಂಕ್ರಾಮಿಕ ರೋಗವಲ್ಲ. ಅಂದರೆ ಇದು ಸ್ಪರ್ಶದಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದಿಲ್ಲ; ಬದಲಾಗಿ ಕೇವಲ ಹೆಣ್ಣು ಅನಾಫಿಲಿಸ್ ಸೊಳ್ಳೆಗಳ ಕಚ್ಚುವಿಕೆಯಿಂದ ಮಾತ್ರ ಹರಡುತ್ತದೆ.
  • ಮನುಷ್ಯರಲ್ಲಿ ಒಟ್ಟು ಐದು ಪ್ರಭೇದದ ಪರಾವಲಂಬಿಗಳು ಮಲೇರಿಯಾವನ್ನು ಉಂಟುಮಾಡುತ್ತವೆ. ಇವುಗಳಲ್ಲಿ ‘ಪ್ಲಾಸ್ಮೋಡಿಯಂ ಫಾಲ್ಸಿಪ್ಯಾರಮ್’ (Plasmodium falciparum) ಮತ್ತು ‘ಪ್ಲಾಸ್ಮೋಡಿಯಂ ವಿವಾಕ್ಸ್’ (Plasmodium vivax) ಎಂಬ ಎರಡು ಪ್ರಭೇದಗಳು ಅತಿ ಹೆಚ್ಚು ಅಪಾಯಕಾರಿಯಾಗಿವೆ.
  • ರೋಗಲಕ್ಷಣಗಳು: ನವಜಾತ ಶಿಶುಗಳು, 5 ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು, ಪ್ರಯಾಣಿಕರು ಮತ್ತು ಎಚ್‌ಐವಿ (HIV) ಅಥವಾ ಏಡ್ಸ್ (AIDS) ಸೋಂಕಿತ ವ್ಯಕ್ತಿಗಳು ಈ ರೋಗಕ್ಕೆ ತುತ್ತಾಗುವ ಅಪಾಯ ಹೆಚ್ಚಾಗಿರುತ್ತದೆ. ಇದರ ತೀವ್ರ ಸ್ವರೂಪದ ಲಕ್ಷಣಗಳು ಈ ಕೆಳಗಿನಂತಿವೆ:
  1. ತೀವ್ರ ಆಯಾಸ ಮತ್ತು ಬಳಲಿಕೆ.
  2. ಪ್ರಜ್ಞಾಹೀನತೆ ಅಥವಾ ಮಂಕು ಕವಿಯುವುದು.
  3. ಪದೇ ಪದೇ ಸ್ನಾಯು ಸೆಳೆತ ಬರುವುದು
  4. ಉಸಿರಾಟದ ತೊಂದರೆ.
  5. ಕಡು ಬಣ್ಣದ ಅಥವಾ ರಕ್ತ ಮಿಶ್ರಿತ ಮೂತ್ರ
  6. ಕಾಮಾಲೆ (ಜಾಂಡಿಸ್) (ಕಣ್ಣು ಮತ್ತು ಚರ್ಮ ಹಳದಿಯಾಗುವುದು)
  7. ಅಸಹಜ ರಕ್ತಸ್ರಾವ

ಮಲೇರಿಯಾ ನಿಯಂತ್ರಣಕ್ಕೆ ವಿಶ್ವ ಆರೋಗ್ಯ ಸಂಸ್ಥೆ(WHO)ಯ ಉಪಕ್ರಮಗಳು:

  • ಮಲೇರಿಯಾ ನಿಯಂತ್ರಣದ ಜಾಗತಿಕ ತಾಂತ್ರಿಕ ಕಾರ್ಯತಂತ್ರ 2016–2030: 2015 ರ ಅಂಕಿ-ಅಂಶಗಳನ್ನು ಆಧಾರವಾಗಿಟ್ಟುಕೊಂಡು, ಮಲೇರಿಯಾ ಪ್ರಕರಣಗಳ ಸಂಖ್ಯೆ ಮತ್ತು ಮರಣ ಪ್ರಮಾಣವನ್ನು 2020 ರ ವೇಳೆಗೆ ಕನಿಷ್ಠ ಶೇ. 40%, 2025 ರ ವೇಳೆಗೆ ಶೇ. 75% ಮತ್ತು 2030 ರ ವೇಳೆಗೆ ಕನಿಷ್ಠ ಶೇ. 90% ರಷ್ಟು ತಗ್ಗಿಸುವ ಗುರಿಯನ್ನು ಇದು ಹೊಂದಿದೆ.
  • ‘E-2025 ಉಪಕ್ರಮ’: ಈ ಯೋಜನೆಯ ಅಡಿಯಲ್ಲಿ 2025 ರ ವೇಳೆಗೆ ಮಲೇರಿಯಾವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಸಾಮರ್ಥ್ಯ ಹೊಂದಿರುವ 25 ದೇಶಗಳನ್ನು WHO ಗುರುತಿಸಿದೆ.
  • ಅಧಿಕ ರೋಗಭಾರದಿಂದ ಅಧಿಕ ಪರಿಣಾಮದತ್ತ (High Burden to High Impact – HBHI): ಭಾರತವೂ ಸೇರಿದಂತೆ ಮಲೇರಿಯಾ ಪ್ರಕರಣಗಳ ಹೊರೆ ಅತಿ ಹೆಚ್ಚಾಗಿರುವ 11 ದೇಶಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು (WHO) ಈ ಯೋಜನೆಯನ್ನು ಜಾರಿಗೊಳಿಸಿದೆ.

ಮಲೇರಿಯಾ ನಿಯಂತ್ರಣಕ್ಕೆ ಭಾರತ ಸರ್ಕಾರದ ಉಪಕ್ರಮಗಳು:

  • ರಾಷ್ಟ್ರೀಯ ಗುರಿ, 2027: ಭಾರತದಲ್ಲಿ 2027 ರ ವೇಳೆಗೆ ಮಲೇರಿಯಾವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ.
  • ಮಲೇರಿಯಾ ನಿರ್ಮೂಲನೆಗೆ ರಾಷ್ಟ್ರೀಯ ಚೌಕಟ್ಟು (NFME): WHO ನ ಜಾಗತಿಕ ತಾಂತ್ರಿಕ ಕಾರ್ಯತಂತ್ರಕ್ಕೆ (2016-2030) ಅನುಗುಣವಾಗಿ 2016 ರಲ್ಲಿ ಈ ಚೌಕಟ್ಟನ್ನು ರೂಪಿಸಿ ಜಾರಿಗೊಳಿಸಲಾಗಿದೆ.
  • ಮಲೇರಿಯಾ ನಿರ್ಮೂಲನಾ ಸಂಶೋಧನಾ ಒಕ್ಕೂಟ – ಭಾರತ (MERA-India): ಮಲೇರಿಯಾ ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ ಪಾಲುದಾರರನ್ನು ಒಗ್ಗೂಡಿಸುವ ವೇದಿಕೆಯಾಗಿ ‘ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ’ಯು (ICMR) ಇದನ್ನು ಸ್ಥಾಪಿಸಿದೆ.

ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿಗಳು, 2026

ಪ್ರಶಸ್ತಿಗಳು

ಇತ್ತೀಚೆಗೆ ಸುದ್ದಿಯಲ್ಲಿದೆ:

  • ಇತ್ತೀಚೆಗೆ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭವೊಂದರಲ್ಲಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶದ ಶುಶ್ರೂಷಕಿಯರಿಗೆ (Nurses) ‘ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ 2026’ ಪ್ರದಾನ ಮಾಡಿದರು.

ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿಗಳ ಬಗ್ಗೆ:

  • ಆಧುನಿಕ ನರ್ಸಿಂಗ್‌ನ ಸಂಸ್ಥಾಪಕಿಯಾದ ‘ಫ್ಲಾರೆನ್ಸ್ ನೈಟಿಂಗೇಲ್’ ಅವರ ಸವಿನೆನಪಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
  • ಇದನ್ನು 1973 ರಲ್ಲಿ ಭಾರತ ಸರ್ಕಾರದ ‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ’ವು ಆರಂಭಿಸಿತು.
  • ಸಮಾಜಕ್ಕೆ ಗಮನಾರ್ಹ ಕೊಡುಗೆ ನೀಡುತ್ತಿರುವ ಶುಶ್ರೂಷಕಿಯರು ಮತ್ತು ನರ್ಸಿಂಗ್ ವೃತ್ತಿಪರರ ಅತ್ಯುತ್ತಮ ಹಾಗೂ ಶ್ಲಾಘನೀಯ ಸೇವೆಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
  • ಪ್ರತಿಯೊಂದು ಪ್ರಶಸ್ತಿಯು ಒಂದು ಅರ್ಹತಾ ಪ್ರಮಾಣಪತ್ರ, ರೂ. 1,00,000/- ನಗದು ಬಹುಮಾನ ಹಾಗೂ ಒಂದು ಪದಕವನ್ನು ಒಳಗೊಂಡಿರುತ್ತದೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts