ಅಂಬೇಡ್ಕರ್ ಜಯಂತಿ
ಇತಿಹಾಸ
ಇತ್ತೀಚೆಗೆ ಸುದ್ದಿಯಲ್ಲಿದೆ:
- ಭಾರತವು ಏಪ್ರಿಲ್ 14ರಂದು ‘ಅಂಬೇಡ್ಕರ್ ಜಯಂತಿ’ ಯನ್ನು ಆಚರಿಸುವ ಮೂಲಕ, ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮದಿನದಂದು ಗೌರವ ನಮನ ಸಲ್ಲಿಸಿತು.
ಡಾ. ಭೀಮರಾವ್ ರಾಮಜೀ ಅಂಬೇಡ್ಕರ್ ಅವರ ಬಗ್ಗೆ:
- ಬಾಬಾಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಅವರು ಪ್ರಮುಖ ಸಾಮಾಜ ಸುಧಾರಕ, ನ್ಯಾಯಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ, ಲೇಖಕ, ಬಹುಭಾಷಾ ಪಂಡಿತ, ವಾಗ್ಮಿ ಹಾಗೂ ವಿವಿಧ ಧರ್ಮಗಳ ತೌಲನಿಕ ಅಧ್ಯಯನಕಾರ ಮತ್ತು ಚಿಂತಕರಾಗಿದ್ದರು.
- ಜನನ:- ಇವರು 1891ರಲ್ಲಿ ಪ್ರಸ್ತುತ ಮಧ್ಯಪ್ರದೇಶದಲ್ಲಿರುವ ಮಹೌ (Mhow) ಎಂಬ ಗ್ರಾಮದಲ್ಲಿ ಜನಿಸಿದರು.
- ಇವರನ್ನು ‘ಭಾರತದ ಸಂವಿಧಾನದ ಶಿಲ್ಪಿ’ ಎಂದು ಕರೆಯಲಾಗುತ್ತದೆ ಮತ್ತು ಇವರು ಸ್ವತಂತ್ರ ಭಾರತದ ಮೊದಲ ಕಾನೂನು ಮಂತ್ರಿಯಾಗಿದ್ದರು.
- ಇವರು ಸಂವಿಧಾನದ ‘ಕರಡು ಸಮಿತಿಯ ಅಧ್ಯಕ್ಷರಾಗಿದ್ದರು’.
- ಇವರು ದಲಿತರು ಮತ್ತು ಇತರ ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಡಿದ ಪ್ರಸಿದ್ಧ ರಾಷ್ಟ್ರನಾಯಕರಾಗಿದ್ದರು.
ಇವರ ಪ್ರಮುಖ ಕೊಡುಗೆಗಳು:
- ‘ಮಹಾಡ್ ಸತ್ಯಾಗ್ರಹ’, 1927:- ಮಹಾರಾಷ್ಟ್ರದ ಮಹಾಡ್ ಪುರಸಭೆಯು 1926ರಲ್ಲಿ ಸಾರ್ವಜನಿಕ ಕೆರೆಯನ್ನು ಎಲ್ಲಾ ಸಮುದಾಯಗಳಿಗೂ ಮುಕ್ತಗೊಳಿಸಲು ಆದೇಶ ಹೊರಡಿಸಿತ್ತು. ಆದರೆ, ಅಸ್ಪೃಶ್ಯರು ಈ ಕೆರೆಯ ನೀರನ್ನು ಬಳಸುವುದನ್ನು ವಿರೋಧಿಸಿದ ಸವರ್ಣೀಯ ಹಿಂದೂಗಳ ವಿರುದ್ಧ, ಅಂಬೇಡ್ಕರ್ ಅವರು ಮಾರ್ಚ್ 1927ರಲ್ಲಿ ಐತಿಹಾಸಿಕ ‘ಮಹಾಡ್ ಸತ್ಯಾಗ್ರಹ’ದ ನೇತೃತ್ವ ವಹಿಸಿದ್ದರು.
- ಇವರು ಲಂಡನ್ನಲ್ಲಿ ನಡೆದ ಮೂರು ದುಂಡುಮೇಜಿನ ಸಮ್ಮೇಳನಗಳಲ್ಲೂ ಭಾಗವಹಿಸಿದ್ದರು.
- ‘ಪೂನಾ ಒಪ್ಪಂದ’, 1932:- ಡಾ. ಅಂಬೇಡ್ಕರ್ ಅವರು ಮಹಾತ್ಮ ಗಾಂಧೀಜಿಯವರೊಂದಿಗೆ ಐತಿಹಾಸಿಕ ‘ಪೂನಾ ಒಪ್ಪಂದ’ಕ್ಕೆ ಸಹಿ ಹಾಕಿದರು. ಈ ಮೂಲಕ ಅವರು ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗೆ ನೀಡಲಾಗಿದ್ದ ಪ್ರತ್ಯೇಕ ಚುನಾವಣಾ ಕ್ಷೇತ್ರಗಳ (ಕಮ್ಯುನಲ್ ಅವಾರ್ಡ್) ಬೇಡಿಕೆಯನ್ನು ಕೈಬಿಟ್ಟರು.
- ಆದಾಗ್ಯೂ, ಈ ಒಪ್ಪಂದದ ಪರಿಣಾಮವಾಗಿ ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಿಟ್ಟ ಸ್ಥಾನಗಳ ಸಂಖ್ಯೆಯನ್ನು ಪ್ರಾಂತೀಯ ಶಾಸನಸಭೆಗಳಲ್ಲಿ 71 ರಿಂದ 147ಕ್ಕೆ ಮತ್ತು ಕೇಂದ್ರೀಯ ಶಾಸನಸಭೆಯಲ್ಲಿ ಒಟ್ಟು ಸ್ಥಾನಗಳ ಶೇ. 18ರಷ್ಟಕ್ಕೆ ಹೆಚ್ಚಿಸಲಾಯಿತು.
- ‘ಹಿಲ್ಟನ್ ಯಂಗ್ ಆಯೋಗ’ದ ಮುಂದೆ ಇವರು ಮಂಡಿಸಿದ ಆರ್ಥಿಕ ವಿಚಾರಗಳೇ ಭಾರತೀಯ ರಿಸರ್ವ್ ಬ್ಯಾಂಕ್ (RBI) ಸ್ಥಾಪನೆಗೆ ಅಡಿಪಾಯವಾದವು.
ಚುನಾವಣೆ ಮತ್ತು ಹುದ್ದೆಗಳು:
- 1937ರಲ್ಲಿ, ಇವರು ಶಾಸಕರಾಗಿ (MLA) ಬಾಂಬೆ ಶಾಸನಸಭೆಗೆ ಆಯ್ಕೆಯಾದರು.
- 1942ರಲ್ಲಿ, ವೈಸ್ರಾಯ್ ಅವರ ಕಾರ್ಯಕಾರಿ ಮಂಡಳಿಗೆ ‘ಕಾರ್ಮಿಕ ಸದಸ್ಯ’ರಾಗಿ ನೇಮಕಗೊಂಡರು.
- 1947ರಲ್ಲಿ, ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆಹ್ವಾನವನ್ನು ಸ್ವೀಕರಿಸಿ, ಸ್ವತಂತ್ರ ಭಾರತದ ಮೊದಲ ಸಚಿವ ಸಂಪುಟದಲ್ಲಿ ಕಾನೂನು ಸಚಿವರಾದರು.
ಬೌದ್ಧ ಧರ್ಮದತ್ತ ಒಲವು:
- ‘ಹಿಂದೂ ಕೋಡ್ ಬಿಲ್’ ವಿಚಾರದಲ್ಲಿನ ಭಿನ್ನಾಭಿಪ್ರಾಯಗಳಿಂದಾಗಿ ಅವರು 1951ರಲ್ಲಿ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದರು. ತದನಂತರ, 1956ರಲ್ಲಿ ಅವರು ಅಧಿಕೃತವಾಗಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು.
- ಇವರ ಸಾಧನೆಗಳನ್ನು ಗುರುತಿಸಿ, ಇವರಿಗೆ ಮರಣೋತ್ತರವಾಗಿ 1990ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ ನೀಡಿ ಗೌರವಿಸಲಾಯಿತು.
ಪ್ರಮುಖ ಪತ್ರಿಕೆಗಳು, ಪುಸ್ತಕಗಳು ಮತ್ತು ಸಂಘಟನೆಗಳು:
-
- ಪತ್ರಿಕೆಗಳು:
- ಮೂಕನಾಯಕ ( 1920)
- ಬಹಿಷ್ಕೃತ ಭಾರತ (1927)
- ಪತ್ರಿಕೆಗಳು:
- ಸಮತಾ (1929)
- ಜನತಾ (1930)
- ಪುಸ್ತಕಗಳು:
- ಅನಿಹಿಲೇಶನ್ ಆಫ್ ಕಾಸ್ಟ್
- ಬುದ್ಧ ಆರ್ ಕಾರ್ಲ್ ಮಾರ್ಕ್ಸ್ (Buddha or Karl Marx)
- ದ ಅನ್ಟಚಬಲ್: ಹೂ ಆರ್ ದೇ ಅಂಡ್ ವೈ ದೇ ಹ್ಯಾವ್ ಬಿಕಮ್ ಅನ್ಟಚಬಲ್ಸ್ (The Untouchable: Who are They and Why They Have Become Untouchables)
- ಬುದ್ಧ ಅಂಡ್ ಹಿಸ್ ಧಮ್ಮ (Buddha and His Dhamma)
- ದ ರೈಸ್ ಅಂಡ್ ಫಾಲ್ ಆಫ್ ಹಿಂದೂ ವುಮೆನ್ (The Rise and Fall of Hindu Women)
- ಸ್ಥಾಪಿಸಿದ ಸಂಘಟನೆಗಳು:
- ಬಹಿಷ್ಕೃತ ಹಿತಕಾರಿಣಿ ಸಭಾ (1923)
- ಸ್ವತಂತ್ರ ಕಾರ್ಮಿಕ ಪಕ್ಷ (Independent Labor Party – 1936)
- ಪರಿಶಿಷ್ಟ ಜಾತಿಗಳ ಒಕ್ಕೂಟ (Scheduled Castes Federation – 1942)
ನಿಧನ:
- ಇವರು ಡಿಸೆಂಬರ್ 6, 1956 ರಂದು ನಿಧನರಾದರು.
- ಮುಂಬೈನಲ್ಲಿರುವ ಬಿ.ಆರ್. ಅಂಬೇಡ್ಕರ್ ಅವರ ಸ್ಮಾರಕವನ್ನು ‘ಚೈತ್ಯ ಭೂಮಿ’ ಎಂದು ಕರೆಯಲಾಗುತ್ತದೆ.
ಪ್ರಸ್ತುತ ಕಾಲಘಟ್ಟದಲ್ಲಿ ಅಂಬೇಡ್ಕರ್ ಅವರ ಪ್ರಸ್ತುತತೆ:
- ಭಾರತದಲ್ಲಿ ಜಾತಿ ಆಧಾರಿತ ಅಸಮಾನತೆಯು ಇಂದಿಗೂ ಮುಂದುವರಿದಿದೆ. ಮೀಸಲಾತಿ ಹಾಗೂ ತಮ್ಮದೇ ಆದ ರಾಜಕೀಯ ಪಕ್ಷಗಳನ್ನು ಕಟ್ಟುವ ಮೂಲಕ ದಲಿತರು ರಾಜಕೀಯ ಅಸ್ಮಿತೆಯನ್ನು ಪಡೆದುಕೊಂಡಿದ್ದರೂ, ಅವರು ಸಾಮಾಜಿಕ (ಆರೋಗ್ಯ ಮತ್ತು ಶಿಕ್ಷಣ) ಹಾಗೂ ಆರ್ಥಿಕ ಆಯಾಮಗಳಲ್ಲಿ ಇನ್ನೂ ಹಿಂದುಳಿದಿದ್ದಾರೆ.
9ನೇ ಹಿಂದೂ ಮಹಾಸಾಗರ ಸಮ್ಮೇಳನ
ರಕ್ಷಣೆ/ಭದ್ರತೆ
ಇತ್ತೀಚೆಗೆ ಸುದ್ದಿಯಲ್ಲಿದೆ:
- ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರು 9ನೇ ಹಿಂದೂ ಮಹಾಸಾಗರ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು. ಈ ಬಾರಿಯ ಸಮ್ಮೇಳನವು “ಹಿಂದೂ ಮಹಾಸಾಗರದ ಆಡಳಿತಕ್ಕಾಗಿ ಸಾಮೂಹಿಕ ಉಸ್ತುವಾರಿ” (Collective Stewardship for Indian Ocean Governance) ಎಂಬ ವಿಷಯವನ್ನು ಆಧರಿಸಿತ್ತು.
ಹಿಂದೂ ಮಹಾಸಾಗರ ಸಮ್ಮೇಳನದ ಬಗ್ಗೆ:
- ಇದು ಇಂಡಿಯಾ ಫೌಂಡೇಶನ್ ವತಿಯಿಂದ 2016ರಲ್ಲಿ ಪ್ರಾರಂಭಿಸಲಾದ ಪ್ರಮುಖ ವಾರ್ಷಿಕ ಸಲಹಾ ವೇದಿಕೆಯಾಗಿದೆ.
- ಉದ್ದೇಶ:- ಹಿಂದೂ ಮಹಾಸಾಗರ ವಲಯದಲ್ಲಿ (IOR) ಪ್ರಾದೇಶಿಕ ಸಹಕಾರ, ಕಡಲ ಭದ್ರತೆ ಮತ್ತು ಆರ್ಥಿಕ ಅಭಿವೃದ್ಧಿಯ ಕುರಿತು ಚರ್ಚಿಸುವುದು.
- ಪ್ರಾಮುಖ್ಯತೆ:- ಈ ವೇದಿಕೆಯು ಸಚಿವರು ಮತ್ತು ತಜ್ಞರನ್ನು ಒಳಗೊಂಡಂತೆ ಸುಮಾರು 40ಕ್ಕೂ ಹೆಚ್ಚು ದೇಶಗಳನ್ನು ಸಂಪರ್ಕಿಸುತ್ತದೆ. ಇದು ಪ್ರಮುಖವಾಗಿ ‘ಸಾಗರ್’ (SAGAR – Security and Growth for All in the Region) ಹಿಂದೂ ಮಹಾಸಾಗರ ವಲಯದಲ್ಲಿನ ಎಲ್ಲರಿಗೂ ಭದ್ರತೆ ಮತ್ತು ಪ್ರಗತಿ ದೃಷ್ಟಿಕೋನದ ಮೇಲೆ ಕೇಂದ್ರೀಕರಿಸಿದೆ.
- ಇದರ 9ನೇ ಆವೃತ್ತಿಯು ಏಪ್ರಿಲ್ 2026ರಲ್ಲಿ ‘ಮಾರಿಷಸ್’ ನಲ್ಲಿ ನಡೆಯಿತು ಹಾಗೂ 8ನೇ ಆವೃತ್ತಿಯು ‘ಒಮಾನ್’ನಲ್ಲಿ ನಡೆದಿತ್ತು.
ಸರ್ಕಾರದ ಪ್ರಮುಖ ಉಪಕ್ರಮಗಳು:
-
- ಸಾಗರಮಾಲಾ ಕಾರ್ಯಕ್ರಮ:- ಬಂದರುಗಳ ಮೂಲಸೌಕರ್ಯ, ಕರಾವಳಿ ಅಭಿವೃದ್ಧಿ ಮತ್ತು ಸಂಪರ್ಕ ವಿಸ್ತರಣೆಯನ್ನು ಈ ಕಾರ್ಯಕ್ರಮ ಬೆಂಬಲಿಸುತ್ತದೆ.
- ಭಾರತದ ಕಡಲ ದೃಷ್ಟಿಕೋನ 2030 (MIV 2030):- 2030ರ ವೇಳೆಗೆ ಭಾರತವನ್ನು ಪ್ರಪಂಚದ ‘ಉನ್ನತ 10 ಹಡಗು-ನಿರ್ಮಾಣ ರಾಷ್ಟ್ರಗಳ’ ಸಾಲಿಗೆ ಸೇರಿಸುವ ಗುರಿ ಹೊಂದಿದೆ. ಜೊತೆಗೆ, ಇದು ವಿಶ್ವದರ್ಜೆಯ, ಸಮರ್ಥ ಹಾಗೂ ಸುಸ್ಥಿರ ಕಡಲ-ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ.
- ಸಾಗರಮಂಥನ್ ಸಂವಾದ:- ಭಾರತವನ್ನು ಕಡಲ ವಲಯದ ಚರ್ಚೆಗಳ ಜಾಗತಿಕ ಕೇಂದ್ರವಾಗಿ ರೂಪಿಸಲು ನಡೆಸಲಾಗುವ ವಾರ್ಷಿಕ ಕಡಲ-ಕಾರ್ಯತಂತ್ರದ ಸಂವಾದವಾಗಿದೆ.
- ಕಡಲ ಅಭಿವೃದ್ಧಿ ನಿಧಿ:- ಬಂದರುಗಳು ಮತ್ತು ಹಡಗು ಸಾಗಣೆ ಮೂಲಸೌಕರ್ಯಗಳನ್ನು ಆಧುನೀಕರಿಸಲು ಹಾಗೂ ಖಾಸಗಿ ಹೂಡಿಕೆಯನ್ನು ಆಕರ್ಷಿಸುವ ನಿಟ್ಟಿನಲ್ಲಿ ₹25,000 ಕೋಟಿ ಮೌಲ್ಯದ ದೀರ್ಘಾವಧಿ ಹಣಕಾಸು ನಿಧಿಯನ್ನು ಸ್ಥಾಪಿಸಲಾಗಿದೆ.
- ಮಹಾಸಾಗರ್ ಉಪಕ್ರಮ (MAHASAGAR):- “ಹಿಂದೂ ಮಹಾಸಾಗರ ವಲಯದಲ್ಲಿನ ಎಲ್ಲರಿಗೂ ಭದ್ರತೆ ಮತ್ತು ಬೆಳವಣಿಗೆಗೆ ಪರಸ್ಪರ ಹಾಗೂ ಸಮಗ್ರ ಪ್ರಗತಿ” (Mutual and Holistic Advancement for Security and Growth for All in the Region) ಹಿಂದೂ ಮಹಾಸಾಗರ ವಲಯದಲ್ಲಿ (IOR) ಭಾರತದ ಕಾರ್ಯತಂತ್ರದ ಮರು-ರೂಪಿಸುವಿಕೆಯನ್ನು ಪ್ರತಿಬಿಂಬಿಸುತ್ತದೆ.
- ನೌಕಾಪಡೆಯ ಆಧುನೀಕರಣ ಮತ್ತು ಸ್ವದೇಶಿ ಅಭಿವೃದ್ಧಿ:- ಭಾರತವು ತನ್ನ ನೌಕಾಪಡೆಯ ಸಾಮರ್ಥ್ಯಗಳನ್ನು ನಿರಂತರವಾಗಿ ಆಧುನೀಕರಿಸುತ್ತಿದೆ.
- ಸ್ವದೇಶಿ-ನಿರ್ಮಿತ ಯುದ್ಧನೌಕೆಗಳ ನಿಯೋಜನೆ (ಉದಾಹರಣೆಗೆ: INS ವಿಕ್ರಾಂತ್, INS ವಿಶಾಖಪಟ್ಟಣಂ).
- ಕಡಲ ಪ್ರದೇಶದ ಜಾಗೃತಿ ಮತ್ತು ಕಾರ್ಯತಂತ್ರದ ಪ್ರಭಾವವನ್ನು ಹೆಚ್ಚಿಸಲಾಗುತ್ತಿದೆ.
ಅರುಣಾಚಲ ಪ್ರದೇಶದ ಸ್ಥಳಗಳಿಗೆ ಚೀನಾದ ‘ ಕಾಲ್ಪನಿಕ ಹೆಸರು’ಗಳನ್ನು ತಿರಸ್ಕರಿಸಿದ ಭಾರತ
ಅಂತರರಾಷ್ಟ್ರೀಯ ಸಂಬಂಧಗಳು

ಇತ್ತೀಚೆಗೆ ಸುದ್ದಿಯಲ್ಲಿದೆ:
- ತನ್ನ ಭೂಪ್ರದೇಶದ ಅವಿಭಾಜ್ಯ ಅಂಗವಾಗಿರುವ ಅರುಣಾಚಲ ಪ್ರದೇಶದ ಸ್ಥಳಗಳಿಗೆ, ಚೀನಾ ದೇಶವು “ಕಾಲ್ಪನಿಕ ಹೆಸರುಗಳನ್ನು” ನೀಡುವ ಪ್ರಯತ್ನಗಳನ್ನು ಭಾರತವು ಕಟ್ಟುನಿಟ್ಟಾಗಿ ಹಾಗೂ ಬಲವಾಗಿ ತಿರಸ್ಕರಿಸಿದೆ. ಚೀನಾದ ಇಂತಹ ಕ್ರಮಗಳನ್ನು “ಕಿಡಿಗೇಡಿತನ” ಎಂದು ಕರೆದಿರುವ ಭಾರತ, ಇದು ದ್ವಿಪಕ್ಷೀಯ ಸಂಬಂಧಗಳಿಗೆ ಹಾನಿಕರ ಎಂದು ಎಚ್ಚರಿಸಿದೆ.
ಚೀನಾದ ವಿವಾದಾತ್ಮಕ ಕ್ರಮಗಳು:
- ಚೀನಾ ದೇಶವು ಭಾರತದ ಅರುಣಾಚಲ ಪ್ರದೇಶವನ್ನು “ದಕ್ಷಿಣ ಟಿಬೆಟ್” (ಜಂಗ್ನಾನ್) ಎಂದು ಪ್ರತಿಪಾದಿಸುತ್ತಿದೆ.
- 2017 ರಿಂದಲೂ ಚೀನಾವು ಹೀಗೆ ಮರುನಾಮಕರಣಗೊಂಡ ಸ್ಥಳಗಳ ಹಲವು ಪಟ್ಟಿಗಳನ್ನು ಬಿಡುಗಡೆ ಮಾಡುತ್ತಲೇ ಇದೆ, ಆದರೆ ಭಾರತವು ಇವುಗಳನ್ನು ಅಮಾನ್ಯವೆಂದು ಸತತವಾಗಿ ತಿರಸ್ಕರಿಸುತ್ತಾ ಬಂದಿದೆ.
- ದೀರ್ಘ ಕಾಲದ ಗಡಿ ವಿವಾದಿತ ಪ್ರದೇಶವಾಗಿರುವ ‘ಅಕ್ಸಾಯ್ ಚಿನ್’ ನ ಕೆಲವು ಭಾಗಗಳು ಸೇರಿದಂತೆ ಲಡಾಖ್ನ ಪ್ರದೇಶಗಳಲ್ಲಿ ಚೀನಾವು ‘ಹೆ’ಆನ್’ ಮತ್ತು ‘ಹೆಕಾಂಗ್’ ನಂತಹ ಹೊಸ ಆಡಳಿತಾತ್ಮಕ ಜಿಲ್ಲೆಗಳನ್ನು (ಕೌಂಟಿಗಳು) ರಚಿಸುತ್ತಿದೆ.
- ವರದಿಗಳ ಪ್ರಕಾರ, ಚೀನಾವು ‘ಸೆನ್ಲಿಂಗ್’ ಎಂಬ ಹೊಸ ಜಿಲ್ಲಾ ಘಟಕವನ್ನೂ (ಕೌಂಟಿ) ಸಹ ಸೃಷ್ಟಿಸಿದೆ.
ಪ್ರಮುಖ ಪ್ರದೇಶಗಳು:
- ಸೆನ್ಲಿಂಗ್ (Cenling):- ಇದು ‘ಕಾರಾಕೋರಂ ಪರ್ವತ ಶ್ರೇಣಿ’ಯ ಸಮೀಪದಲ್ಲಿದೆ. ಈ ಪ್ರದೇಶವು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK) ಮತ್ತು ಅಫ್ಘಾನಿಸ್ತಾನದ ‘ವಾಖಾನ್ ಕಾರಿಡಾರ್’ನ ಹತ್ತಿರದಲ್ಲಿದೆ.
- ಹೆ’ಆನ್ (He’an): ಇದು ‘ಅಕ್ಸಾಯ್ ಚಿನ್ ಪ್ರಸ್ಥಭೂಮಿ’ಯ ಕೆಲವು ಭಾಗಗಳನ್ನು ಒಳಗೊಂಡಿದೆ. ಭಾರತ ಮತ್ತು ಚೀನಾ ನಡುವಿನ ಸುದೀರ್ಘ ಗಡಿ ವಿವಾದದ ಕಾರಣದಿಂದಾಗಿ ಈ ಪ್ರದೇಶವು ಸದಾ ಸುದ್ದಿಯಲ್ಲಿರುತ್ತದೆ.
ಭಾರತದ ಪ್ರತಿಕ್ರಿಯೆ:
- ಅರುಣಾಚಲ ಪ್ರದೇಶ ಮತ್ತು ಇತರ ವಿವಾದಿತ ಪ್ರದೇಶಗಳು ಭಾರತದ “ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ” ಅಂಗಗಳಾಗಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಪುನರುಚ್ಚರಿಸಿದೆ.
ವಾಸ್ತವಿಕ ಗಡಿ ನಿಯಂತ್ರಣ ರೇಖೆ (Line of Actual Control – LAC):
- LAC ಯು ಭಾರತ-ನಿಯಂತ್ರಿತ ಪ್ರದೇಶ ಮತ್ತು ಚೀನಾ-ನಿಯಂತ್ರಿತ ಪ್ರದೇಶಗಳನ್ನು ಪ್ರತ್ಯೇಕಿಸುವ ವಾಸ್ತವಿಕ ಗಡಿರೇಖೆಯಾಗಿದೆ.
- ಭಾರತದ ಪ್ರಕಾರ LAC ಯ ಒಟ್ಟು ಉದ್ದವು 3,488 ಕಿ.ಮೀ ಇದೆ. ಆದರೆ, ಚೀನಾವು ಇದನ್ನು ಕೇವಲ 2,000 ಕಿ.ಮೀ ಉದ್ದವಿದೆ ಎಂದು ಪರಿಗಣಿಸುತ್ತದೆ.
- ಈ ಗಡಿ ರೇಖೆಯನ್ನು ಪ್ರಮುಖವಾಗಿ ಮೂರು ವಲಯಗಳಾಗಿ ವಿಂಗಡಿಸಲಾಗಿದೆ:
- ಪೂರ್ವ ವಲಯ: ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ.
- ಮಧ್ಯ ವಲಯ: ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶ.
- ಪಶ್ಚಿಮ ವಲಯ: ಲಡಾಖ್.
ಹಿಮ್ ಸರೋವರ (HIM SAROVAR) ಯೋಜನೆ
ಪರಿಸರ
ಇತ್ತೀಚೆಗೆ ಸುದ್ದಿಯಲ್ಲಿದೆ:
- ಇತ್ತೀಚಿಗೆ ಲಡಾಖ್ ಪ್ರದೇಶದಲ್ಲಿ ‘ಹಿಮ್ ಸರೋವರ ಯೋಜನೆ’ಯನ್ನು ಪ್ರಾರಂಭಿಸಲಾಗಿದೆ.
ಹಿಮ್ ಸರೋವರ ಯೋಜನೆಯ ಬಗ್ಗೆ:
- ಇದು ಏಪ್ರಿಲ್ 10, 2026 ರಂದು ಪ್ರಾರಂಭಿಸಲಾದ ಒಂದು ವೈಜ್ಞಾನಿಕ ಜಲ ಸಂರಕ್ಷಣಾ ಉಪಕ್ರಮವಾಗಿದೆ.
- ಉದ್ದೇಶ:- ವಾರ್ಷಿಕ ಹಿಮ ಕರಗುವಿಕೆಯಿಂದ ಬರುವ ನೀರು ಮತ್ತು ಮಳೆನೀರನ್ನು ಸೆರೆಹಿಡಿದು ಸಂಗ್ರಹಿಸಲು 50 ಸಣ್ಣ ಜಲಮೂಲಗಳನ್ನು ನಿರ್ಮಿಸುವ ಮೂಲಕ, ಈ ಪ್ರದೇಶದಲ್ಲಿನ ತೀವ್ರವಾದ ನೀರಿನ ಅಭಾವವನ್ನು ಪರಿಹರಿಸುವುದು.
ಪ್ರಮುಖ ಉದ್ದೇಶಗಳು ಮತ್ತು ಪರಿಣಾಮಗಳು:
- ಜಲ ಭದ್ರತೆ:- ಎತ್ತರದ ಪ್ರದೇಶದ ಈ ಶೀತ ಮರುಭೂಮಿಯಲ್ಲಿ, ಕರಗಿದ ಹಿಮ ನೀರು ಹೆಚ್ಚಾಗಿ ಪೋಲಾಗುತ್ತಿದೆ. ಇದನ್ನು ತಡೆದು ನೀರಾವರಿ ಮತ್ತು ಗ್ರಾಮೀಣ ಅಗತ್ಯಗಳಿಗಾಗಿ ವರ್ಷವಿಡೀ ನೀರು ಲಭ್ಯವಾಗುವಂತೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.
- ಹವಾಮಾನ ಸ್ಥಿತಿಸ್ಥಾಪಕತ್ವ:- ಇದು ಹಿಮನದಿಗಳ ಕರಗುವಿಕೆ ಮತ್ತು ಅಂತರ್ಜಲ ಮಟ್ಟ ಕುಸಿಯುವಂತಹ ಹವಾಮಾನ ಬದಲಾವಣೆಯ ಸ್ಪಷ್ಟ ಪರಿಣಾಮಗಳ ವಿರುದ್ಧ ‘ರಕ್ಷಾಕವಚವಾಗಿ’ ಕಾರ್ಯನಿರ್ವಹಿಸುತ್ತದೆ.
- ಮೂಲಸೌಕರ್ಯ ಯೋಜನೆ:- ಮುಂದಿನ ಒಂದು ವರ್ಷದೊಳಗೆ ಲೇಹ್ನಲ್ಲಿ 30 ಮತ್ತು ಕಾರ್ಗಿಲ್ನಲ್ಲಿ 20 ಒಟ್ಟು 50 ಜಲಾಶಯಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.
- ಪುನಃಸ್ಥಾಪನಾ ಗುರಿಗಳು:- ಇದು 2030ರ ವೇಳೆಗೆ 2.6 ಕೋಟಿ ಹೆಕ್ಟೇರ್ ಕ್ಷೀಣಿಸಿದ ಭೂಮಿಯನ್ನು ಪುನಃಸ್ಥಾಪಿಸುವ ರಾಷ್ಟ್ರೀಯ ದೃಷ್ಟಿಕೋನದೊಂದಿಗೆ ಹೊಂದಾಣಿಕೆಯಾಗುತ್ತದೆ.
ರಾಷ್ಟ್ರೀಯ ಕೃಷಿ ಮಾರುಕಟ್ಟೆ (e-NAM)
ಆರ್ಥಿಕತೆ
ಇತ್ತೀಚೆಗೆ ಸುದ್ದಿಯಲ್ಲಿದೆ:
- ಇ-ನ್ಯಾಮ್ (e-NAM) ಪೋರ್ಟಲ್ ಮಾರುಕಟ್ಟೆಗಳ ಏಕೀಕರಣದಲ್ಲಿ ಗಣನೀಯ ಪ್ರಗತಿ ಸಾಧಿಸುತ್ತಿದ್ದು, ಇದಕ್ಕೆ ಸಂಯೋಜನೆಗೊಂಡಿರುವ ಕೃಷಿ ಮಾರುಕಟ್ಟೆಗಳ (ಮಂಡಿಗಳ) ಸಂಖ್ಯೆಯು 2024ರಲ್ಲಿದ್ದ 1,389 ರಿಂದ ಮಾರ್ಚ್ 2026ರ ಹೊತ್ತಿಗೆ 1,656 ಕ್ಕೆ ಏರಿಕೆಯಾಗಿದೆ.
- ಇದು ಪ್ರಸ್ತುತ 23 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳಲ್ಲಿ ವ್ಯಾಪಿಸಿದೆ.
ರಾಷ್ಟ್ರೀಯ ಕೃಷಿ ಮಾರುಕಟ್ಟೆ (e-NAM)ಯ ಬಗ್ಗೆ:
- ಇದು ಏಪ್ರಿಲ್ 14, 2016 ರಂದು ಪ್ರಾರಂಭಿಸಲಾದ ಅಖಿಲ-ಭಾರತ ಎಲೆಕ್ಟ್ರಾನಿಕ್ ವ್ಯಾಪಾರ ಪೋರ್ಟಲ್ ಆಗಿದೆ.
- ಇದು ‘ಕೃಷಿ ತಂತ್ರಜ್ಞಾನ ಮೂಲಸೌಕರ್ಯ ನಿಧಿ (ATIF)ಯ ಮೂಲಕ ಕೇಂದ್ರ ಸರ್ಕಾರದಿಂದ ಸಂಪೂರ್ಣವಾಗಿ ಧನಸಹಾಯ ಪಡೆಯುವ “ಕೇಂದ್ರ ವಲಯದ ಯೋಜನೆ”ಯಾಗಿ ಕಾರ್ಯನಿರ್ವಹಿಸುತ್ತದೆ.
- ಪ್ರಸ್ತುತ ಇರುವ ‘ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ’ (APMC) ಮಂಡಿಗಳನ್ನು ಒಂದೇ ಜಾಲದ ಅಡಿಯಲ್ಲಿ ತರುವ ಮೂಲಕ, ಕೃಷಿ ಸರಕುಗಳಿಗೆ ಏಕೀಕೃತ ರಾಷ್ಟ್ರೀಯ ಮಾರುಕಟ್ಟೆಯನ್ನು ಸೃಷ್ಟಿಸುವುದು ಇದರ ಪ್ರಾಥಮಿಕ ಗುರಿಯಾಗಿದೆ.
ಪ್ರಮುಖ ಉದ್ದೇಶಗಳು:
- ಏಕೀಕೃತ ರಾಷ್ಟ್ರೀಯ ಮಾರುಕಟ್ಟೆ:- “ಒಂದು ರಾಷ್ಟ್ರ, ಒಂದು ಮಾರುಕಟ್ಟೆ” ಎಂಬ ದೃಷ್ಟಿಕೋನದೊಂದಿಗೆ, ದೇಶಾದ್ಯಂತ ಕೃಷಿ ವ್ಯಾಪಾರವನ್ನು ಸುಗಮಗೊಳಿಸಲು ರಾಜ್ಯ-ಮಟ್ಟದ ಮಾರುಕಟ್ಟೆಗಳನ್ನು ಸಂಯೋಜಿಸುವುದು.
- ಪಾರದರ್ಶಕ ಬೆಲೆ ನಿರ್ಧಾರ:- ಪಾರದರ್ಶಕವಾದ ಆನ್ಲೈನ್ ಹರಾಜು ಪ್ರಕ್ರಿಯೆಯ ಮೂಲಕ ನೈಜ ಬೇಡಿಕೆ ಮತ್ತು ಪೂರೈಕೆಯ ಆಧಾರದ ಮೇಲೆ ನೈಜ-ಸಮಯದ ಬೆಲೆ ನಿರ್ಧಾರಕ್ಕೆ ಅನುವು ಮಾಡಿಕೊಡುವುದು.
- ಮಧ್ಯವರ್ತಿಗಳ ಹಾವಳಿ ಕಡಿತ:- ರೈತರಿಗೆ ಅಂತಿಮ ಗ್ರಾಹಕರು ನೀಡುವ ಬೆಲೆಯ ಹೆಚ್ಚಿನ ಪಾಲು ದಕ್ಕುವಂತೆ ಮಾಡಲು ಮಧ್ಯವರ್ತಿಗಳ ಹಸ್ತಕ್ಷೇಪವನ್ನು ಕಡಿಮೆ ಮಾಡುವುದು.
- ಗುಣಮಟ್ಟದ ಖಾತರಿ:- ಕೃಷಿ ಉತ್ಪನ್ನದ ಗುಣಮಟ್ಟಕ್ಕೆ ತಕ್ಕಂತೆ ಸೂಕ್ತ ಬೆಲೆ ಸಿಗುವಂತೆ ಮಾಡಲು, ಉತ್ಪನ್ನಗಳ ಗುಣಮಟ್ಟ ಪರೀಕ್ಷೆ ಮತ್ತು ಶ್ರೇಣೀಕರಣವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದು.







ನಿಮ್ಮದೊಂದು ಉತ್ತರ