ಎಬೋಲಾ (Ebola) ಸೋಂಕು ಹರಡುವಿಕೆ | SMILE : ಸೋಲಾರ್ ವಿಂಡ್ ಮ್ಯಾಗ್ನೆಟೋಸ್ಫಿಯರ್ ಅಯಾನೋಸ್ಫಿಯರ್ ಲಿಂಕ್ ಎಕ್ಸ್‌ಪ್ಲೋರರ್ | ಭಾರತ-ನಾರ್ವೆ ಹಸಿರು ಕಾರ್ಯತಂತ್ರದ ಪಾಲುದಾರಿಕೆ | ಭಾರತ-ದಕ್ಷಿಣ ಕೊರಿಯಾ ಸಂಬಂಧಗಳು | ಆರ್‌ಟಿಐ ಕಾಯ್ದೆಯು ಕ್ರಿಕೆಟ್ ಮಂಡಳಿಗೆ ಅನ್ವಯಿಸುವುದಿಲ್ಲ: CIC | ಬೆಳ್ಳಿ (Silver) ಆಮದು : “ನಿರ್ಬಂಧಿತ” ವರ್ಗಕ್ಕೆ ಸೇರ್ಪಡೆ

ಎಬೋಲಾ (Ebola) ಸೋಂಕು ಹರಡುವಿಕೆ

ವಿಜ್ಞಾನ ಮತ್ತು ತಂತ್ರಜ್ಞಾನ

ಇತ್ತೀಚೆಗೆ ಸುದ್ದಿಯಲ್ಲಿದೆ:

  • ‘ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ (DR Congo)’ ದೇಶದಲ್ಲಿ ಎಬೋಲಾ ಸೋಂಕು ಹರಡಿ 80ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯು (WHO) ‘ಅಂತರರಾಷ್ಟ್ರೀಯ ಆರೋಗ್ಯ ತುರ್ತು ಪರಿಸ್ಥಿತಿ’ಯನ್ನು ಘೋಷಿಸಿದೆ.

 

ಎಬೋಲಾ ವೈರಸ್ ಕಾಯಿಲೆ (EVD)ಯ ಬಗ್ಗೆ:

  • ಇದನ್ನು ಹಿಂದೆ ‘ಎಬೋಲಾ ರಕ್ತಸ್ರಾವದ ಜ್ವರ’ ಎಂದು ಗುರುತಿಸಲಾಗುತ್ತಿತ್ತು. ಇದು ಮನುಷ್ಯರಿಗೆ ತಗುಲುವ ಅಪರೂಪದ ಮತ್ತು ತೀವ್ರ ಸ್ವರೂಪದ ಕಾಯಿಲೆಯಾಗಿದ್ದು, ಹೆಚ್ಚಾಗಿ ಪ್ರಾಣಾಪಾಯವನ್ನು ಉಂಟುಮಾಡುತ್ತದೆ.
  • ಮೊದಲು ಪತ್ತೆಯಾಗಿದ್ದು: ಡಿಸೆಂಬರ್ 2013ರಲ್ಲಿ ‘ಗಿನಿಯಾ’ ದೇಶದಲ್ಲಿ.
  • ಕಾಡುಪ್ರಾಣಿಗಳಿಂದ ಮನುಷ್ಯರಿಗೆ ಹರಡುವಿಕೆ: ಈ ವೈರಸ್ ಕಾಡುಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ ಮತ್ತು ನಂತರ ಮಾನವ ಸಮುದಾಯದಲ್ಲಿ ವೇಗವಾಗಿ ಹರಡುತ್ತದೆ. ಪ್ರಾಣಿಗಳಿಂದ ಮನುಷ್ಯರಿಗೆ ಹರಡುವುದರಿಂದ ಇದನ್ನು ‘ಝೂನೋಟಿಕ್’ (Zoonotic) ಸ್ವರೂಪದ ರೋಗ ಎನ್ನಲಾಗುತ್ತದೆ.
  • ಆಶ್ರಯದಾತ: ‘ಟೆರೋಪೊಡಿಡೆ’ (Pteropodidae) ಕುಟುಂಬಕ್ಕೆ ಸೇರಿದ ಹಣ್ಣು-ಬಾವಲಿಗಳು ಈ ಎಬೋಲಾ ವೈರಸ್‌ನ ನೈಸರ್ಗಿಕ ಆಶ್ರಯದಾತಗಳಾಗಿವೆ.
  • ರೋಗಲಕ್ಷಣಗಳು: ಜ್ವರ, ತೀವ್ರ ಆಯಾಸ, ಸ್ನಾಯು ನೋವು, ತಲೆನೋವು ಮತ್ತು ಗಂಟಲು ನೋವು. ಇದರೊಂದಿಗೆ ವಾಂತಿ, ಅತಿಸಾರ, ಚರ್ಮದ ಮೇಲೆ ದದ್ದುಗಳು ಹಾಗೂ ಮೂತ್ರಪಿಂಡ ಮತ್ತು ಯಕೃತ್ತಿನ ಕಾರ್ಯವೈಫಲ್ಯದ ಲಕ್ಷಣಗಳು ಕಂಡುಬರುತ್ತವೆ.
  • ಚಿಕಿತ್ಸೆ: ‘ಜೈರ್ ಎಬೋಲಾವೈರಸ್’ (Zaire ebolavirus) ಪ್ರಭೇದದಿಂದ ಜನರನ್ನು ರಕ್ಷಿಸುವಲ್ಲಿ ‘ಎರ್ವೆಬೊ ಲಸಿಕೆ’ (Ervebo vaccine) ಪರಿಣಾಮಕಾರಿಯಾಗಿದೆ ಎಂದು ಸಾಬೀತಾಗಿದೆ. ಇದರ ಜೊತೆಗೆ, ‘ರೆಮ್‌ಡೆಸಿವಿರ್’ (Remdesivir) ಔಷಧವನ್ನು ಸಹ ಎಬೋಲಾ ಚಿಕಿತ್ಸೆಯಾಗಿ ಪರೀಕ್ಷಿಸಲಾಗಿದೆ.

SMILE : ಸೋಲಾರ್ ವಿಂಡ್ ಮ್ಯಾಗ್ನೆಟೋಸ್ಫಿಯರ್ ಅಯಾನೋಸ್ಫಿಯರ್ ಲಿಂಕ್ ಎಕ್ಸ್‌ಪ್ಲೋರರ್

ವಿಜ್ಞಾನ ಮತ್ತು ತಂತ್ರಜ್ಞಾನ

ಇತ್ತೀಚೆಗೆ ಸುದ್ದಿಯಲ್ಲಿದೆ:

  • ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ESA) ಮತ್ತು ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್ ಜಂಟಿಯಾಗಿ ‘ಸ್ಮೈಲ್’ (SMILE) ಎಂಬ ಬಾಹ್ಯಾಕಾಶ ಮಿಷನ್ ಅನ್ನು ಅಭಿವೃದ್ಧಿಪಡಿಸುತ್ತಿವೆ. ಸೌರ ಬಿರುಗಾಳಿಗಳಿಗೆ ಮತ್ತು ಬಾಹ್ಯಾಕಾಶ ಹವಾಮಾನ ವೈಪರೀತ್ಯಗಳಿಗೆ ಭೂಮಿಯ ಕಾಂತೀಯ ಕವಚವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಅಧ್ಯಯನ ಮಾಡುವುದು ಈ ಕಾರ್ಯಾಚರಣೆಯ ಪ್ರಮುಖ ಉದ್ದೇಶವಾಗಿದೆ.

ಸ್ಮೈಲ್ ಮಿಷನ್ ನ ಬಗ್ಗೆ (SMILE Mission):

  • SMILE ವಿಸ್ತೃತ ರೂಪ: ‘ಸೋಲಾರ್ ವಿಂಡ್ ಮ್ಯಾಗ್ನೆಟೋಸ್ಫಿಯರ್ ಅಯಾನೋಸ್ಫಿಯರ್ ಲಿಂಕ್ ಎಕ್ಸ್‌ಪ್ಲೋರರ್’ (Solar wind Magnetosphere Ionosphere Link Explorer).
  • ಉಡಾವಣೆ: ಇದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ESA) ಮತ್ತು ಚೀನಾ ದೇಶದ ಜಂಟಿ ಉಪಗ್ರಹ ಮಿಷನ್ ಆಗಿದ್ದು, ಇದನ್ನು ಮೇ 19, 2026 ರಂದು ಉಡಾವಣೆ ಮಾಡಲಾಗಿದೆ.
  • ಪ್ರಮುಖ ಉದ್ದೇಶ : ಸೌರ ಮಾರುತಗಳು ಭೂಮಿಯ ಕಾಂತಗೋಳದ (Magnetosphere) ಹೊರವಲಯಕ್ಕೆ ಡಿಕ್ಕಿಹೊಡೆಯುವ ಸಂಪರ್ಕ ಪ್ರದೇಶವನ್ನು ಅನ್ವೇಷಿಸುವುದು ಮತ್ತು ಅಧ್ಯಯನ ಮಾಡುವುದು.

ಇತರೆ ಜಾಗತಿಕ ಬಾಹ್ಯಾಕಾಶ ಮಿಷನ್ ಗಳು (Global Space Missions):

  • ಪಾರ್ಕರ್ ಸೋಲಾರ್ ಪ್ರೋಬ್ (NASA): ಇದನ್ನು 2018 ರಲ್ಲಿ ಉಡಾವಣೆ ಮಾಡಲಾದ, ಅತ್ಯಾಧುನಿಕ ‘ಕಾರ್ಬನ್-ಸಂಯೋಜಿತ ಉಷ್ಣ ಕವಚ’ವನ್ನು ಬಳಸಿಕೊಂಡು ಸೂರ್ಯನ ಕರೋನಾ ವಾತಾವರಣದ ಒಳಗೆ (6.5 ಮಿಲಿಯನ್ ಕಿ.ಮೀ. ವ್ಯಾಪ್ತಿಯೊಳಗೆ) ನೇರವಾಗಿ ಹಾದುಹೋಗುತ್ತದೆ.
  • ಸೋಲಾರ್ ಆರ್ಬಿಟರ್ (ESA & NASA): ಸೂರ್ಯನ ಧ್ರುವ ಪ್ರದೇಶಗಳ ಮೊದಲ ಮತ್ತು ಅತ್ಯಂತ ಹತ್ತಿರದ ಚಿತ್ರಗಳನ್ನು ಸೆರೆಹಿಡಿಯುವ ಉದ್ದೇಶದಿಂದ ಇದನ್ನು 2020 ರಲ್ಲಿ ಉಡಾವಣೆ ಮಾಡಲಾಯಿತು. ಇದು ಸಾಂಪ್ರದಾಯಿಕ ಕ್ರಾಂತಿವೃತ್ತದ ಸಮತಲದಿಂದ ಹೊರಬಂದು ತನ್ನ ಕಾರ್ಯಾಚರಣೆಯನ್ನು ನಡೆಸುತ್ತದೆ.
  • ಪಂಚ್ ಮಿಷನ್ (PUNCH Mission – NASA): ಸೂರ್ಯನ ಕರೋನಾದಿಂದ ನೇರವಾಗಿ ವಿಶಾಲವಾದ ಸೌರ ಪ್ರಭಾವಲಯಕ್ಕೆ (Heliosphere) ಹಾದುಹೋಗುವ ಸೌರ ಮಾರುತಗಳನ್ನು ಮತ್ತು ‘ಕರೋನಾ ದ್ರವ್ಯರಾಶಿ ಹೊರಸೂಸುವಿಕೆ’ಗಳನ್ನು (Coronal mass ejections) ಪತ್ತೆಹಚ್ಚುವ ಗುರಿಯನ್ನು ಈ ಕಾರ್ಯಾಚರಣೆಯು ಹೊಂದಿದೆ.

ಭಾರತ-ನಾರ್ವೆ ಹಸಿರು ಕಾರ್ಯತಂತ್ರದ ಪಾಲುದಾರಿಕೆ

ಅಂತರರಾಷ್ಟ್ರೀಯ

ಇತ್ತೀಚೆಗೆ ಸುದ್ದಿಯಲ್ಲಿದೆ:

  • 43 ವರ್ಷಗಳ ಸುದೀರ್ಘ ಅಂತರದ ನಂತರ ಭಾರತದ ಪ್ರಧಾನ ಮಂತ್ರಿಯೊಬ್ಬರು ನಾರ್ವೆ ದೇಶಕ್ಕೆ ಭೇಟಿ ನೀಡಿದ್ದು, ಪ್ರಧಾನಿ ಮೋದಿಯವರು ಈ ಐತಿಹಾಸಿಕ ದ್ವಿಪಕ್ಷೀಯ ಭೇಟಿಗೆ ಸಾಕ್ಷಿಯಾದರು.

ಭೇಟಿಯ ಪ್ರಮುಖ ಅಂಶಗಳು:

  • ಹಸಿರು ಕಾರ್ಯತಂತ್ರದ ಪಾಲುದಾರಿಕೆ (Green Strategic Partnership): ಶುದ್ಧ ಇಂಧನದಿಂದ ಹವಾಮಾನ ಸ್ಥಿತಿಸ್ಥಾಪಕತ್ವದವರೆಗೆ ಹಾಗೂ ನೀಲಿ ಆರ್ಥಿಕತೆಯಿಂದ ಹಸಿರು ನೌಕಾಯಾನದವರೆಗೆ, ಹೀಗೆ ವಿವಿಧ ಪ್ರಮುಖ ವಲಯಗಳಲ್ಲಿ ಪರಸ್ಪರ ಸಹಕಾರವನ್ನು ಹೆಚ್ಚಿಸುವ ಉದ್ದೇಶದಿಂದ, ಭಾರತ ಮತ್ತು ನಾರ್ವೆ ತಮ್ಮ ದ್ವಿಪಕ್ಷೀಯ ಸಂಬಂಧವನ್ನು ‘ಹಸಿರು ಕಾರ್ಯತಂತ್ರದ ಪಾಲುದಾರಿಕೆ’ಯಾಗಿ ಮೇಲ್ದರ್ಜೆಗೇರಿಸಲು ಅಧಿಕೃತವಾಗಿ ಘೋಷಿಸಿವೆ.
  • ಇಂಡೋ-ಪೆಸಿಫಿಕ್ ಸಾಗರ ಉಪಕ್ರಮಕ್ಕೆ ನಾರ್ವೆ ಸೇರ್ಪಡೆ (IPOI): ಮುಕ್ತ, ಸ್ವತಂತ್ರ ಮತ್ತು ನಿಯಮ-ಆಧಾರಿತ ಇಂಡೋ-ಪೆಸಿಫಿಕ್ ಪ್ರದೇಶವನ್ನು ಉತ್ತೇಜಿಸುವ ಭಾರತದ ‘ಇಂಡೋ-ಪೆಸಿಫಿಕ್ ಸಾಗರ ಉಪಕ್ರಮ’ದ (Indo-Pacific Oceans Initiative – IPOI) ಚೌಕಟ್ಟಿಗೆ ನಾರ್ವೆ ಅಧಿಕೃತವಾಗಿ ಸೇರ್ಪಡೆಗೊಂಡಿದೆ. ಈ ಉಪಕ್ರಮವನ್ನು ಭಾರತವು 2019 ರಲ್ಲಿ ಪ್ರಾರಂಭಿಸಿತ್ತು.
  • ತ್ರಿಕೋನ ಸಹಕಾರ ಒಪ್ಪಂದ: ಭಾರತ ಮತ್ತು ನಾರ್ವೆ ದೇಶಗಳು ಜಂಟಿಯಾಗಿ ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು (Digital Public Infrastructure – DPI) ಅಂದರೆ ಆಧಾರ್-ಯುಪಿಐ-ಕೋವಿನ್ ವ್ಯವಸ್ಥೆಯನ್ನು ಅಭಿವೃದ್ಧಿಶೀಲ ‘ಜಾಗತಿಕ ದಕ್ಷಿಣದ’ ದೇಶಗಳಿಗೆ ಒದಗಿಸಲು ನಿರ್ಧರಿಸಿವೆ.
  • ರಾಜತಾಂತ್ರಿಕ ಮುನ್ನಡೆ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು (UNSC) ವಿಸ್ತರಿಸಿ, ಅದರಲ್ಲಿ ಭಾರತಕ್ಕೆ ಕಾಯಂ ಸದಸ್ಯತ್ವ ನೀಡುವ ವಿಚಾರಕ್ಕೆ ನಾರ್ವೆ ದೇಶವು ತನ್ನ ಬೆಂಬಲವನ್ನು ಮತ್ತೊಮ್ಮೆ ದೃಢಪಡಿಸಿದೆ.
  • ಗೌರವ ಪುರಸ್ಕಾರ: ವಿದೇಶಿ ಸರ್ಕಾರದ ಮುಖ್ಯಸ್ಥರಿಗೆ ನೀಡಲಾಗುವ ನಾರ್ವೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ‘ಗ್ರಾಂಡ್ ಕ್ರಾಸ್ ಆಫ್ ದಿ ರಾಯಲ್ ನಾರ್ವೇಜಿಯನ್ ಆರ್ಡರ್ ಆಫ್ ಮೆರಿಟ್’ ಪ್ರಶಸ್ತಿಯನ್ನು ನಾರ್ವೆಯ ರಾಜ ಹರಾಲ್ಡ್ V ಅವರು ಪ್ರಧಾನಿ ಮೋದಿಯವರಿಗೆ ಪ್ರದಾನ ಮಾಡಿದರು.

ಭಾರತ-ನಾರ್ವೆ ದ್ವಿಪಕ್ಷೀಯ ಸಂಬಂಧಗಳು: 

  • ಭಾರತ ಮತ್ತು ನಾರ್ವೆ ದೇಶಗಳು 1947 ರಲ್ಲಿಯೇ ತಮ್ಮ ನಡುವೆ ಅಧಿಕೃತ ದ್ವಿಪಕ್ಷೀಯ ಸಂಬಂಧಗಳನ್ನು ಸ್ಥಾಪಿಸಿವೆ.
  • ‘ಭಾರತ-ನಾರ್ಡಿಕ್ ಶೃಂಗಸಭೆ’ಯ ಸ್ವರೂಪವು, ಎರಡೂ ದೇಶಗಳ ಪ್ರಧಾನ ಮಂತ್ರಿಗಳ ಮಟ್ಟದಲ್ಲಿ ಹೆಚ್ಚು ನಿಯಮಿತ ಮತ್ತು ವ್ಯವಸ್ಥಿತ ಸಂವಹನಗಳಿಗೆ ಉತ್ತಮ ವೇದಿಕೆಯನ್ನು ಕಲ್ಪಿಸಿದೆ.
  • ಈ ಮೊದಲ ಶೃಂಗಸಭೆಯು 2018 ರಲ್ಲಿ ಸ್ಟಾಕ್‌ಹೋಮ್‌ನಲ್ಲಿ ನಡೆದಿತ್ತು.
  • ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆ ಹಾಗೂ ಅದರಲ್ಲಿ ಕಾಯಂ ಸದಸ್ಯತ್ವ ಸ್ಥಾನಮಾನ ಪಡೆಯುವ ಭಾರತದ ಸುದೀರ್ಘ ಪ್ರಯತ್ನಕ್ಕೆ ನಾರ್ವೆ ತನ್ನ ಬೆಂಬಲವನ್ನು ಮುಂದುವರಿಸಿದೆ.
  • ಆರ್ಕ್ಟಿಕ್ (ಉತ್ತರ ಧ್ರುವ) ಸಂಶೋಧನೆ (Arctic/Polar Research): ಭಾರತವು ತನ್ನ ಮೊದಲ ಖಾಯಂ ಸಂಶೋಧನಾ ಕೇಂದ್ರವಾದ ‘ಹಿಮಾದ್ರಿ’ಯನ್ನು 2008 ರಲ್ಲಿ ನಾರ್ವೆಯ ‘ಸ್ವಾಲ್ಬಾರ್ಡ್‌’ ಪ್ರದೇಶದಲ್ಲಿ ಸ್ಥಾಪಿಸಿತು.
  • ‘ರಾಷ್ಟ್ರೀಯ ಧ್ರುವೀಯ ಮತ್ತು ಸಾಗರ ಸಂಶೋಧನಾ ಕೇಂದ್ರ’ (NCPOR) ಸಂಸ್ಥೆಯು ಪ್ರತಿ ವರ್ಷ ಆರ್ಕ್ಟಿಕ್ ಪ್ರದೇಶಕ್ಕೆ ಅನೇಕ ವೈಜ್ಞಾನಿಕ ಸಂಶೋಧನಾ ಯಾತ್ರೆಗಳನ್ನು ಆಯೋಜಿಸುತ್ತದೆ.
  • ಭಾರತವು 2013 ರಿಂದ ಆರ್ಕ್ಟಿಕ್ ಮಂಡಳಿಯಲ್ಲಿ ‘ವೀಕ್ಷಕ ರಾಷ್ಟ್ರ’ದ ಸ್ಥಾನಮಾನವನ್ನು ಹೊಂದಿದೆ.
  • ಬಾಹ್ಯಾಕಾಶ ವಲಯ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ISRO), ತನ್ನ ಐಆರ್‌ಎಸ್ (IRS) ಉಪಗ್ರಹಗಳಿಂದ ದತ್ತಾoಶವನ್ನು ಸ್ವೀಕರಿಸಲು ವಾಣಿಜ್ಯ ಒಪ್ಪಂದದ ಆಧಾರದ ಮೇಲೆ ನಾರ್ವೆಯ ಸ್ವಾಲ್ಬಾರ್ಡ್ ಗ್ರೌಂಡ್ ಸ್ಟೇಷನ್ ಅನ್ನು ಬಳಸಿಕೊಳ್ಳುತ್ತಿದೆ.
  • ಇದರ ಜೊತೆಗೆ, ನಾರ್ವೆಯ ಕೆಎಸ್‌ಎಟಿ (KSAT) ಸಂಸ್ಥೆಯು ಸ್ವಾಲ್ಬಾರ್ಡ್‌ನಲ್ಲಿ ಇಸ್ರೋದ ‘ಆಂಟೆನಾ’ವನ್ನು ಸ್ಥಾಪಿಸುತ್ತಿದೆ.

ಭಾರತ-ದಕ್ಷಿಣ ಕೊರಿಯಾ ಸಂಬಂಧಗಳು

ಅಂತರರಾಷ್ಟ್ರೀಯ

ಇತ್ತೀಚೆಗೆ ಸುದ್ದಿಯಲ್ಲಿದೆ:

  • ದಕ್ಷಿಣ ಕೊರಿಯಾ ದೇಶದ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದ ನಂತರ, ಭಾರತದ ರಕ್ಷಣಾ ಸಚಿವರು ಸಿಯೋಲ್ ನಗರಕ್ಕೆ ಭೇಟಿ ನೀಡಿದ್ದಾರೆ. ಈ ಬೆಳವಣಿಗೆಯು ಭಾರತ ಮತ್ತು ದಕ್ಷಿಣ ಕೊರಿಯಾ ದೇಶಗಳ ನಡುವಿನ ಸಂಬಂಧಗಳು ಬಲಗೊಳ್ಳುತ್ತಿರುವುದನ್ನು ಹಾಗೂ ಇದರ ಭೌಗೋಳಿಕ-ಕಾರ್ಯತಂತ್ರದ ಮಹತ್ವವನ್ನು ಗುರುತಿಸುತ್ತದೆ.

ಭಾರತ-ದಕ್ಷಿಣ ಕೊರಿಯಾ ಸಂಬಂಧಗಳು:

  • ವಿಶೇಷ ಕಾರ್ಯತಂತ್ರದ ಪಾಲುದಾರಿಕೆ: 2015 ರಲ್ಲಿ ಉಭಯ ದೇಶಗಳ ಈ ಸಂಬಂಧವನ್ನು ಇನ್ನಷ್ಟು ಉನ್ನತೀಕರಿಸಲಾಯಿತು. ಇದು ಭಾರತದ ‘ಆಕ್ಟ್ ಈಸ್ಟ್ ನೀತಿ’ಯನ್ನು ದಕ್ಷಿಣ ಕೊರಿಯಾದ ‘ಇಂಡೋ-ಪೆಸಿಫಿಕ್ ಕಾರ್ಯತಂತ್ರ’ದೊಂದಿಗೆ ಜೋಡಿಸುತ್ತದೆ.
  • ರಕ್ಷಣಾ ವಲಯದ ಯಶಸ್ಸು: ಕೆ9-ವಜ್ರ (K9-Vajra) ಎಂಬ ಸ್ವಯಂ-ಚಾಲಿತ ಫಿರಂಗಿ ಬಂದೂಕುಗಳ ಉತ್ಪಾದನೆಯ ಮೂಲಕ ಉಭಯ ದೇಶಗಳ ಸಂಬಂಧವು ಕೇವಲ ‘ಖರೀದಿದಾರ-ಮಾರಾಟಗಾರ’ ಎಂಬ ಹಂತದಿಂದ ‘ಸಹ-ಉತ್ಪಾದನೆ’ಯ ಹಂತಕ್ಕೆ ಬೆಳೆದಿದೆ.
  • ಪೂರೈಕೆ ಸರಪಳಿಯ ಸ್ಥಿತಿಸ್ಥಾಪಕತ್ವ : ವಸ್ತುಗಳ ಪೂರೈಕೆ ಸರಪಳಿಯಲ್ಲಿನ ಅಪಾಯಗಳನ್ನು ಕಡಿಮೆ ಮಾಡಲು ಮತ್ತು ಆರ್ಥಿಕವಾಗಿ ಚೀನಾ ದೇಶದ ಮೇಲಿರುವ ಅತಿಯಾದ ಅವಲಂಬನೆಯನ್ನು ತಗ್ಗಿಸಲು ಎರಡೂ ದೇಶಗಳು ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ.
  • ಹವಾಮಾನ ಒಪ್ಪಂದ: ಭಾರತ ನೇತೃತ್ವದ ‘ಅಂತರರಾಷ್ಟ್ರೀಯ ಸೌರ ಒಕ್ಕೂಟ’ಕ್ಕೆ (ISA) ದಕ್ಷಿಣ ಕೊರಿಯಾ ದೇಶವು ಅಧಿಕೃತವಾಗಿ ಸೇರ್ಪಡೆಗೊಂಡಿದೆ.

ಸವಾಲುಗಳು:

  • ವ್ಯಾಪಾರ ಅಸಮತೋಲನ: ಭಾರತವು ಹೆಚ್ಚು ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿರುವುದರಿಂದ ಉಂಟಾಗಿರುವ ವ್ಯಾಪಾರ ಕೊರತೆಯು ಎರಡು ದೇಶಗಳ ನಡುವೆ ಆರ್ಥಿಕ ಘರ್ಷಣೆಗೆ ಕಾರಣವಾಗುತ್ತಿದೆ.
  • ಚೀನಾ ಕುರಿತ ಸಂದಿಗ್ಧತೆ: ಭಾರತವು ಚೀನಾದ ವಿರುದ್ಧ ಮೂಲಭೂತವಾಗಿ ಕಠಿಣವಾದ ಹಾಗೂ ದೃಢವಾದ ನಿಲುವನ್ನು ಹೊಂದಿದೆ. ಆದರೆ, ದಕ್ಷಿಣ ಕೊರಿಯಾವು ಆರ್ಥಿಕವಾಗಿ ಚೀನಾದ ಮೇಲೆ ಹೆಚ್ಚು ಅವಲಂಬಿತವಾಗಿದೆ.

ಆರ್‌ಟಿಐ ಕಾಯ್ದೆಯು ಕ್ರಿಕೆಟ್ ಮಂಡಳಿಗೆ ಅನ್ವಯಿಸುವುದಿಲ್ಲ: CIC

ರಾಜಕೀಯ ಮತ್ತು ಆಡಳಿತ

ಇತ್ತೀಚೆಗೆ ಸುದ್ದಿಯಲ್ಲಿದೆ:

  • ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (BCCI) ‘ಮಾಹಿತಿ ಹಕ್ಕು ಕಾಯ್ದೆ’ (RTI), 2005 ರ ಅಡಿಯಲ್ಲಿ ಬರುವ “ಸಾರ್ವಜನಿಕ ಪ್ರಾಧಿಕಾರ”ದ ವ್ಯಾಪ್ತಿಗೆ ಸೇರುವುದಿಲ್ಲ ಎಂದು ‘ಕೇಂದ್ರ ಮಾಹಿತಿ ಆಯೋಗ’ವು (CIC) ಇತ್ತೀಚೆಗೆ ಸ್ಪಷ್ಟಪಡಿಸಿದೆ.

ಕೇಂದ್ರ ಮಾಹಿತಿ ಆಯೋಗ (CIC)ದ ಬಗ್ಗೆ:

  • ಸ್ಥಾಪನೆ: ಮಾಹಿತಿ ಹಕ್ಕು ಕಾಯ್ದೆಯ (RTI Act), 2005 ರ ನಿಬಂಧನೆಗಳ ಅಡಿಯಲ್ಲಿ, ಕೇಂದ್ರ ಸರ್ಕಾರವು ಈ ಆಯೋಗವನ್ನು 2005 ರಲ್ಲಿ ಸ್ಥಾಪಿಸಿತು.
  • ಉದ್ದೇಶ:  ಸಾರ್ವಜನಿಕರಿಗೆ ತೃಪ್ತಿದಾಯಕವಾಗಿ ಮಾಹಿತಿಯನ್ನು ಒದಗಿಸದ ಸಾರ್ವಜನಿಕ ಪ್ರಾಧಿಕಾರಗಳ ವಿರುದ್ಧ ಸಾರ್ವಜನಿಕರು ಸಲ್ಲಿಸುವ ಮೇಲ್ಮನವಿಗಳನ್ನು ಇದು ವಿಚಾರಣೆ ಮಾಡುತ್ತದೆ. ಜೊತೆಗೆ ಆರ್‌ಟಿಐ ಕಾಯ್ದೆಗೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳನ್ನು ಇದು ಪರಿಹರಿಸುತ್ತದೆ.
  • ವಾರ್ಷಿಕ ವರದಿ: ಆರ್‌ಟಿಐ ಕಾಯ್ದೆಯ ನಿಯಮಗಳು ಹೇಗೆ ಜಾರಿಯಾಗುತ್ತಿವೆ ಎಂಬುದರ ಕುರಿತು ಸಿಐಸಿ (CIC) ಆಯೋಗವು ಕೇಂದ್ರ ಸರ್ಕಾರಕ್ಕೆ ಪ್ರತಿ ವರ್ಷ ವಾರ್ಷಿಕ ವರದಿಯನ್ನು ಸಲ್ಲಿಸುತ್ತದೆ.
  • ಕೇಂದ್ರ ಮಾಹಿತಿ ಆಯೋಗ (CIC)ದ ಸಂಯೋಜನೆ: 
  1. ಈ ಆಯೋಗವು ಒಬ್ಬರು ‘ಮುಖ್ಯ ಮಾಹಿತಿ ಆಯುಕ್ತರು’ (ಇವರು ಮುಖ್ಯಸ್ಥರಾಗಿರುತ್ತಾರೆ) ಹಾಗೂ ಗರಿಷ್ಠ 10 ‘ಮಾಹಿತಿ ಆಯುಕ್ತರನ್ನು’ ಒಳಗೊಂಡಿರುತ್ತದೆ.
  2. ಅಧಿಕಾರಾವಧಿ: ಮುಖ್ಯ ಮಾಹಿತಿ ಆಯುಕ್ತರು 5 ವರ್ಷಗಳ ಕಾಲ ಅಥವಾ ಅವರಿಗೆ 65 ವರ್ಷ ವಯಸ್ಸಾಗುವವರೆಗೆ (ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ) ಅಧಿಕಾರದಲ್ಲಿರುತ್ತಾರೆ. ಅವರು ತಮ್ಮ ಹುದ್ದೆಗೆ ಮರುನೇಮಕಗೊಳ್ಳಲು ಅರ್ಹರಾಗಿರುವುದಿಲ್ಲ.
  3. ನೇಮಕಾತಿ: ವಿಶೇಷ ಆಯ್ಕೆ ಸಮಿತಿಯ ಶಿಫಾರಸಿನ ಆಧಾರದ ಮೇಲೆ ಆಯುಕ್ತರನ್ನು ಭಾರತದ ರಾಷ್ಟ್ರಪತಿಯವರು ನೇಮಕ ಮಾಡುತ್ತಾರೆ.
  4. ಆಯ್ಕೆ ಸಮಿತಿ: ಈ ಸಮಿತಿಯಲ್ಲಿ ಭಾರತದ ಪ್ರಧಾನ ಮಂತ್ರಿಯವರು ಅಧ್ಯಕ್ಷರಾಗಿರುತ್ತಾರೆ. ಜೊತೆಗೆ ಲೋಕಸಭೆಯ ವಿರೋಧ ಪಕ್ಷದ ನಾಯಕರು ಹಾಗೂ ಪ್ರಧಾನ ಮಂತ್ರಿಯವರು ನಾಮನಿರ್ದೇಶನ ಮಾಡಿದ ಕೇಂದ್ರ ಕ್ಯಾಬಿನೆಟ್ ಸಚಿವರು ಈ ಸಮಿತಿಯ ಸದಸ್ಯರಾಗಿರುತ್ತಾರೆ.

ರಾಜ್ಯ ಮಾಹಿತಿ ಆಯೋಗದ ಬಗ್ಗೆ:

  • 2005 ರ ಮಾಹಿತಿ ಹಕ್ಕು ಕಾಯ್ದೆಯು ಪ್ರತಿ ರಾಜ್ಯ ಮಟ್ಟದಲ್ಲಿ ‘ರಾಜ್ಯ ಮಾಹಿತಿ ಆಯೋಗ’ದ ರಚನೆಗೆ ಅವಕಾಶ ಕಲ್ಪಿಸಿದೆ.
  • ರಾಜ್ಯ ಮಾಹಿತಿ ಆಯೋಗವು ಉನ್ನತ ಅಧಿಕಾರವನ್ನು ಹೊಂದಿರುವ ಒಂದು ಸ್ವತಂತ್ರ ಸಂಸ್ಥೆಯಾಗಿದೆ. ಇದು ತನಗೆ ಬರುವ ದೂರುಗಳನ್ನು ಪರಿಶೀಲಿಸುತ್ತದೆ ಮತ್ತು ಮೇಲ್ಮನವಿಗಳನ್ನು ಇತ್ಯರ್ಥಪಡಿಸುತ್ತದೆ.
  • ಇದು ಆಯಾ ರಾಜ್ಯ ಸರ್ಕಾರದ ಆಡಳಿತದ ಅಡಿಯಲ್ಲಿ ಬರುವ ಕಚೇರಿಗಳು, ಹಣಕಾಸು ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳಿಗೆ ಸಂಬಂಧಿಸಿದ ದೂರುಗಳು ಹಾಗೂ ಮೇಲ್ಮನವಿಗಳನ್ನು ವಿಚಾರಣೆ ಮಾಡುತ್ತದೆ.
  • ಸಂಯೋಜನೆ: ಈ ಆಯೋಗವು ರಾಜ್ಯದ ರಾಜ್ಯಪಾಲರಿಂದ ನೇಮಕಗೊಂಡ ಒಬ್ಬರು ‘ರಾಜ್ಯ ಮುಖ್ಯ ಮಾಹಿತಿ ಆಯುಕ್ತರು’ ಹಾಗೂ ಗರಿಷ್ಠ 10 ‘ರಾಜ್ಯ ಮಾಹಿತಿ ಆಯುಕ್ತರನ್ನು’ ಒಳಗೊಂಡಿರುತ್ತದೆ.

ಬೆಳ್ಳಿ (Silver) ಆಮದು : “ನಿರ್ಬಂಧಿತ” ವರ್ಗಕ್ಕೆ ಸೇರ್ಪಡೆ

ಆರ್ಥಿಕತೆ

ಇತ್ತೀಚೆಗೆ ಸುದ್ದಿಯಲ್ಲಿದೆ:

  • ಬೆಳ್ಳಿಯ ಆಮದು ಪ್ರಮಾಣವು ದೇಶದಲ್ಲಿ ಹೆಚ್ಚಾಗುತ್ತಿರುವುದನ್ನು ನಿಯಂತ್ರಿಸಲು ಮತ್ತು ದೇಶೀಯ ಹಿತಾಸಕ್ತಿಗಳನ್ನು ಕಾಪಾಡಲು, ಕೇಂದ್ರ ಸರ್ಕಾರವು ಬೆಳ್ಳಿಯ ಆಮದನ್ನು “ನಿರ್ಬಂಧಿತ” (Restricted) ವರ್ಗಕ್ಕೆ ಸೇರಿಸಿದೆ ಹಾಗೂ ಅದರ ಮೇಲೆ 15% ಆಮದು ಸುಂಕವನ್ನು ವಿಧಿಸಿದೆ.

‘ಬೆಳ್ಳಿ’ಯ ಬಗ್ಗೆ:

  • ಇದು ತುಲನಾತ್ಮಕವಾಗಿ ಮೃದುವಾದ ಮತ್ತು ಹೊಳೆಯುವ ಗುಣವನ್ನು ಹೊಂದಿರುವ ಒಂದು ಬೆಲೆಬಾಳುವ ಲೋಹವಾಗಿದೆ.
  • ಪ್ರಕೃತಿಯಲ್ಲಿರುವ ಎಲ್ಲಾ ಲೋಹಗಳಿಗಿಂತ ಬೆಳ್ಳಿಯು ಅತಿ ಹೆಚ್ಚಿನ ವಿದ್ಯುತ್ ವಾಹಕತೆ ಮತ್ತು ಉಷ್ಣ ವಾಹಕತೆಯನ್ನು ಹೊಂದಿದೆ. ಆದ್ದರಿಂದ ಇದು ಎಲೆಕ್ಟ್ರಾನಿಕ್ಸ್, ವಿದ್ಯುನ್ಮಂಡಲದ ಫಲಕಗಳು (Circuit boards), ಕನೆಕ್ಟರ್‌ಗಳು, ಬ್ಯಾಟರಿಗಳು ಮತ್ತು ಸ್ವಯಂಚಾಲಿತ ವಾಹನ ವ್ಯವಸ್ಥೆಗಳ (Automotive systems) ತಯಾರಿಕೆಯಲ್ಲಿ ಅತ್ಯಂತ ನಿರ್ಣಾಯಕವಾದ ಪಾತ್ರ ವಹಿಸುತ್ತದೆ.
  • ಭೂಮಿಯ ಹೊರಪದರದಲ್ಲಿ (crust) ಇದು ಮುಖ್ಯವಾಗಿ ಅರ್ಜೆಂಟೈಟ್ ಮತ್ತು ‘ಕ್ಲೋರಾರ್ಗೈರೈಟ್’ (ಇದನ್ನು ಸಾಮಾನ್ಯವಾಗಿ ‘ಹಾರ್ನ್ ಸಿಲ್ವರ್’ ಎಂದೂ ಕರೆಯಲಾಗುತ್ತದೆ) ಎಂಬ ಪ್ರಮುಖ ಅದಿರುಗಳ ರೂಪದಲ್ಲಿ ದೊರೆಯುತ್ತದೆ.
  • ಪ್ರಪಂಚದಲ್ಲಿ ಮೆಕ್ಸಿಕೋ ದೇಶವು ಅತಿ ಹೆಚ್ಚು ಬೆಳ್ಳಿಯನ್ನು ಉತ್ಪಾದಿಸುವ ರಾಷ್ಟ್ರವಾಗಿದೆ.
  • ಭಾರತವು ತನ್ನ ಬಳಕೆಗೆ ಅಗತ್ಯವಿರುವ ಬೆಳ್ಳಿಯನ್ನು ಮುಖ್ಯವಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ (UAE), ಬ್ರಿಟನ್ ಮತ್ತು ಚೀನಾ ದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts