ಕಬ್ಬು ಬೆಳೆಗೆ : ನ್ಯಾಯಯುತ ಮತ್ತು ಲಾಭದಾಯಕ ಬೆಲೆ (FRP), 2026-27 | ಜಮೈಕಾ (Jamaica) | ಪುಲಿಟ್ಜರ್ ಪ್ರಶಸ್ತಿ, 2026 (Pulitzer Prize 2026)

ಕಬ್ಬು ಬೆಳೆಗೆ : ನ್ಯಾಯಯುತ ಮತ್ತು ಲಾಭದಾಯಕ ಬೆಲೆ (FRP), 2026-27

ಅರ್ಥವ್ಯವಸ್ಥೆ

ಇತ್ತೀಚೆಗೆ ಸುದ್ದಿಯಲ್ಲಿದೆ:

  • ಪ್ರಧಾನಮಂತ್ರಿಯವರ ನೇತೃತ್ವದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು (CCEA), 2026-27ನೇ ಹಂಗಾಮಿಗೆ ಕಬ್ಬಿನ ಬೆಳೆಗೆ ‘ನ್ಯಾಯಯುತ ಮತ್ತು ಲಾಭದಾಯಕ ಬೆಲೆ’ಯನ್ನು (Fair and Remunerative Price – FRP) ಶೇ. 10.25ರಷ್ಟು ಇಳುವರಿ ದರಕ್ಕೆ ಪ್ರತಿ ಕ್ವಿಂಟಾಲ್‌ಗೆ ₹365 ರಂತೆ ನಿಗದಿಪಡಿಸಲು ಒಪ್ಪಿಗೆ ನೀಡಿದೆ.

ಕಬ್ಬಿನ ಬೆಳವಣಿಗೆಗೆ ಬೇಕಾದ ಸೂಕ್ತ ಪರಿಸ್ಥಿತಿಗಳು:

  • ಬೆಳೆಯ ಅವಧಿ: ಭೌಗೋಳಿಕ ಪರಿಸ್ಥಿತಿಗಳಿಗೆ ಅನುಗುಣವಾಗಿ ಕಬ್ಬು ಪಕ್ವವಾಗಿ ಕಟಾವಿಗೆ ಬರಲು 10 ರಿಂದ 15 ತಿಂಗಳುಗಳು ಹಾಗೂ ಕೆಲವು ಕಡೆ 18 ತಿಂಗಳುಗಳವರೆಗೂ ಸಮಯ ತೆಗೆದುಕೊಳ್ಳುತ್ತದೆ.
  • ಮಣ್ಣು: ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿರುವ ಯಾವುದೇ ಮಣ್ಣಿನಲ್ಲಿ ಕಬ್ಬು ಬೆಳೆಯಬಲ್ಲದು. ಉದಾಹರಣೆಗೆ: ಗೋಡು ಮಣ್ಣು (ಲೋಮಿ ಮಣ್ಣು), ಜೇಡಿಮಣ್ಣು (Clayey), ಕಪ್ಪು ಹತ್ತಿ ಮಣ್ಣು, ಕಂದು ಅಥವಾ ಕೆಂಪು ಮಣ್ಣು ಮತ್ತು ಜಂಬಿಟ್ಟಿಗೆ (ಲ್ಯಾಟರೈಟ್) ಮಣ್ಣು.
  • ಮಣ್ಣಿನಲ್ಲಿ ಸಾರಜನಕ, ಕ್ಯಾಲ್ಸಿಯಂ ಮತ್ತು ರಂಜಕದ ಅಂಶಗಳು ಹೇರಳವಾಗಿರಬೇಕು.
  • ಹವಾಮಾನ: ಕಬ್ಬಿಗೆ ಉಷ್ಣ ಮತ್ತು ಆರ್ದ್ರತೆಯಿಂದ ಕೂಡಿದ ವಾತಾವರಣದ ಅಗತ್ಯವಿರುತ್ತದೆ.  21-27°C ನಷ್ಟು ತಾಪಮಾನ ಮತ್ತು 75-150 ಸೆಂ.ಮೀ. ನಷ್ಟು ಮಳೆ ಕಬ್ಬಿನ ಬೆಳೆಗೆ ಹೆಚ್ಚು ಸೂಕ್ತವಾಗಿದೆ.

ಕಬ್ಬಿನ ಉಪಯೋಗಗಳು:

  • ಇದು ಬಿದಿರು (Bamboo) ಸಸ್ಯ ಕುಟುಂಬಕ್ಕೆ ಸೇರಿದ್ದು, ಭಾರತದ ಮೂಲ ಬೆಳೆಯಾಗಿದೆ.
  • ಭಾರತದಲ್ಲಿ ಬೆಳೆಯುವ ಒಟ್ಟು ಕಬ್ಬಿನಲ್ಲಿ ಮೂರನೇ ಎರಡರಷ್ಟು (2/3) ಭಾಗವನ್ನು ಬೆಲ್ಲ ಮತ್ತು ಖಂಡಸಾರಿ ತಯಾರಿಸಲು ಬಳಸಲಾಗುತ್ತದೆ. ಉಳಿದ ಮೂರನೇ ಒಂದರಷ್ಟು (1/3) ಭಾಗ ಮಾತ್ರ ಸಕ್ಕರೆ ಕಾರ್ಖಾನೆಗಳಿಗೆ ಪೂರೈಕೆಯಾಗುತ್ತದೆ.
  • ಇದು ಮದ್ಯ (ಆಲ್ಕೋಹಾಲ್) ತಯಾರಿಕೆಗೆ ಅಗತ್ಯವಾದ ಕಚ್ಚಾ ವಸ್ತುವನ್ನೂ ಒದಗಿಸುತ್ತದೆ.
  • ಕಬ್ಬಿನ ಸಿಪ್ಪೆ ಅಥವಾ ಜಲ್ಲೆಯನ್ನು (ಬಗಾಸ್) ಕಾಗದದ ತಯಾರಿಕೆಯಲ್ಲಿ ಅತ್ಯಂತ ಉಪಯುಕ್ತವಾಗಿ ಬಳಸಲಾಗುತ್ತದೆ.
  • ಎಥೆನಾಲ್ ಉತ್ಪಾದನೆ: ಎಥೆನಾಲ್ ಪೆಟ್ರೋಲಿಯಂ ಉತ್ಪನ್ನಗಳಿಗೆ ಮತ್ತು ಇತರ ಅನೇಕ ರಾಸಾಯನಿಕ ವಸ್ತುಗಳಿಗೆ ಸಮರ್ಥ ಪರ್ಯಾಯವಾಗಿದೆ. ಅಮೆರಿಕಾ (USA) ಮತ್ತು ಬ್ರೆಜಿಲ್ ನಂತರ ಭಾರತವು ಪ್ರಪಂಚದಲ್ಲಿಯೇ ಎಥೆನಾಲ್ ಉತ್ಪಾದಿಸುವ 3ನೇ ಅತಿದೊಡ್ಡ ರಾಷ್ಟ್ರವಾಗಿದೆ.

ಸರ್ಕಾರದ ಉಪಕ್ರಮಗಳು:

  • ಕಬ್ಬಿನ ಬೆಳೆಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (FRP – Fair and Remunerative Price)
    • ಶಿಫಾರಸು ಮಾಡುವವರು: ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗ (Commission for Agricultural Costs and Prices – CACP).
    • ಉದ್ದೇಶ: ಸಕ್ಕರೆ ಕಾರ್ಖಾನೆಗಳು ಲಾಭ ಗಳಿಸುತ್ತಿರಲಿ ಅಥವಾ ಇಲ್ಲದಿರಲಿ, ರೈತರಿಗೆ ಅವರ ಶ್ರಮ ಮತ್ತು ನಷ್ಟದ ಅಪಾಯದ ಆಧಾರದ ಮೇಲೆ ಖಚಿತವಾದ ಆದಾಯವನ್ನು ಖಾತರಿಪಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ಭಾರತದಲ್ಲಿ ಸಕ್ಕರೆ ಉತ್ಪಾದನೆ:

  • 2021-2022ರಲ್ಲಿ ಬ್ರೆಜಿಲ್ ದೇಶವನ್ನು ಹಿಂದಿಕ್ಕಿದ ಭಾರತವು, ಪ್ರಪಂಚದ ಅತಿದೊಡ್ಡ ಸಕ್ಕರೆ ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಿದೆ.
  • ಭಾರತದಲ್ಲಿ ಸಕ್ಕರೆ ಕೈಗಾರಿಕೆಗಳ ಹಂಚಿಕೆ: ಭಾರತದಲ್ಲಿ ಸಕ್ಕರೆ ಉದ್ಯಮವು ಪ್ರಮುಖವಾಗಿ ಎರಡು ದೊಡ್ಡ ಉತ್ಪಾದನಾ ವಲಯಗಳಲ್ಲಿ ಹಂಚಿಕೆಯಾಗಿದೆ:
    • ಉತ್ತರ ಭಾರತದಲ್ಲಿ: ಉತ್ತರ ಪ್ರದೇಶ, ಬಿಹಾರ, ಹರಿಯಾಣ ಮತ್ತು ಪಂಜಾಬ್.
  • ದಕ್ಷಿಣ ಭಾರತದಲ್ಲಿ: ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶ.

ಜಮೈಕಾ (Jamaica)

ಭೂಗೋಳ

ಇತ್ತೀಚೆಗೆ ಸುದ್ದಿಯಲ್ಲಿದೆ:

  • ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರ ಅಧಿಕೃತ ಭೇಟಿಯ ಸಂದರ್ಭದಲ್ಲಿ, ಭಾರತ ಮತ್ತು ಜಮೈಕಾ ದೇಶಗಳು ಆರೋಗ್ಯ ಸಹಕಾರ, ಸೌರಶಕ್ತಿ ಅಭಿವೃದ್ಧಿ ಮತ್ತು ಪ್ರಸಾರ ವಲಯಗಳಿಗೆ ಸಂಬಂಧಿಸಿದಂತೆ ಮೂರು ‘ತಿಳುವಳಿಕಾ ಒಪ್ಪಂದ’ಗಳಿಗೆ (MoUs) ಸಹಿ ಹಾಕಿವೆ.

ಜಮೈಕಾ ದ್ವೀಪದ ಬಗ್ಗೆ:

  • ಜಮೈಕಾ ಕೆರಿಬಿಯನ್ ಸಮುದ್ರದಲ್ಲಿರುವ ಪರ್ವತಗಳಿಂದ ಕೂಡಿದ ಒಂದು ದ್ವೀಪ ರಾಷ್ಟ್ರವಾಗಿದ್ದು, ಇದು ಕ್ಯೂಬಾ (Cuba) ದೇಶದ ದಕ್ಷಿಣ ಭಾಗದಲ್ಲಿ ನೆಲೆಗೊಂಡಿದೆ.
  • ಇದು ಕ್ಯೂಬಾ, ಹಿಸ್ಪಾನಿಯೋಲಾ, ಹೈತಿ, ಡೊಮಿನಿಕನ್ ಗಣರಾಜ್ಯ ಮತ್ತು ಪೋರ್ಟೊ ರಿಕೊ ದ್ವೀಪಗಳೊಂದಿಗೆ, ‘ಗ್ರೇಟರ್ ಆಂಟಿಲೀಸ್ ದ್ವೀಪಗಳು’ ಎಂದು ಕರೆಯಲ್ಪಡುವ ಕೆರಿಬಿಯನ್ ದ್ವೀಪ ಸಮೂಹದ ಒಂದು ಪ್ರಮುಖ ಭಾಗವಾಗಿದೆ.
  • ಗಾತ್ರ: ವಿಸ್ತೀರ್ಣದಲ್ಲಿ ಕ್ಯೂಬಾ ಮತ್ತು ಹಿಸ್ಪಾನಿಯೋಲಾ ದ್ವೀಪಗಳ ನಂತರ, ಇದು ಕೆರಿಬಿಯನ್ ಸಮುದ್ರದ ಮೂರನೇ ಅತಿದೊಡ್ಡ ದ್ವೀಪ ಅಥವಾ ದ್ವೀಪ ರಾಷ್ಟವಾಗಿದೆ.
  • ಜಮೈಕಾ ರಾಷ್ಟ್ರವು 1962 ರಲ್ಲಿ ಯುನೈಟೆಡ್ ಕಿಂಗ್‌ಡಮ್‌ನಿಂದ (UK – ಬ್ರಿಟನ್) ಸ್ವಾತಂತ್ರ್ಯ ಪಡೆಯಿತು. ಆದರೂ, ಇದು ಈಗಲೂ ‘ಕಾಮನ್‌ವೆಲ್ತ್’ ಒಕ್ಕೂಟದ ಸದಸ್ಯ ರಾಷ್ಟ್ರವಾಗಿ ಮುಂದುವರಿದಿದೆ.
  • ಭೌಗೋಳಿಕ ರಚನೆ: ಸುಮಾರು 25 ದಶಲಕ್ಷ (ಮಿಲಿಯನ್) ವರ್ಷಗಳ ಹಿಂದೆ ‘ಉತ್ತರ ಅಮೆರಿಕ’ ಮತ್ತು ‘ಕೆರಿಬಿಯನ್’ ಭೂಫಲಕಗಳು (Tectonic plates) ಪರಸ್ಪರ ಡಿಕ್ಕಿ ಹೊಡೆದಾಗ (ಮುಖಾಮುಖಿಯಾದಾಗ) ಈ ಜಮೈಕಾ ದ್ವೀಪವು ರೂಪುಗೊಂಡಿತು.
  • ಪ್ರಮುಖ ಪರ್ವತ ಶ್ರೇಣಿಗಳು: ನೀಲಿ ಪರ್ವತಗಳು (ಬ್ಲೂ ಮೌಂಟೇನ್ಸ್), ಜಾನ್ ಕ್ರೋ ಮೌಂಟೇನ್ಸ್, ಡಾನ್ ಫಿಗ್ಯುರೊ ಮೌಂಟೇನ್ಸ್ ಮತ್ತು ಕಾಕ್‌ಪಿಟ್ ಕಂಟ್ರಿ.
  • ಪ್ರಮುಖ ನದಿಗಳು: ಬ್ಲ್ಯಾಕ್ ರಿವರ್, ರಿಯೊ ಕೋಬ್ರೆ ಮತ್ತು ರಿಯೊ ಗ್ರಾಂಡೆ.

ಪುಲಿಟ್ಜರ್ ಪ್ರಶಸ್ತಿ, 2026 (Pulitzer Prize 2026)

ಪ್ರಶಸ್ತಿಗಳು

ಇತ್ತೀಚೆಗೆ ಸುದ್ದಿಯಲ್ಲಿದೆ:

  • ಭಾರತೀಯ ಪತ್ರಕರ್ತರಾದ ಆನಂದ್ ಆರ್.ಕೆ. ಮತ್ತು ಸುಪರ್ಣಾ ಶರ್ಮಾ ಅವರು ನತಾಲಿಯ ಒಬಿಕೊ ಪಿಯರ್ಸನ್ ಅವರೊಂದಿಗೆ ಜಂಟಿಯಾಗಿ ಪ್ರತಿಷ್ಠಿತ ‘ಪುಲಿಟ್ಜೆರ್ ಪ್ರಶಸ್ತಿ 2026’ ಅನ್ನು ಪಡೆದು ಕೊಂಡಿದ್ದಾರೆ.

ಪುಲಿಟ್ಜರ್ ಪ್ರಶಸ್ತಿಯ ಬಗ್ಗೆ:

  • ಹಿನ್ನೆಲೆ: ಖ್ಯಾತ ಪತ್ರಿಕಾ ಪ್ರಕಾಶಕರಾಗಿದ್ದ ಜೋಸೆಫ್ ಪುಲಿಟ್ಜರ್ ಅವರ ಸ್ಮರಣಾರ್ಥ ಈ ಪ್ರಶಸ್ತಿಯನ್ನು 1917 ರಲ್ಲಿ ಸ್ಥಾಪಿಸಲಾಯಿತು. 
  • ನಿರ್ವಹಣೆ ಮತ್ತು ಪ್ರದಾನ: ಅಮೆರಿಕಾದ ಪ್ರತಿಷ್ಠಿತ ‘ಕೊಲಂಬಿಯಾ ವಿಶ್ವವಿದ್ಯಾಲಯ’.
  • ಪ್ರಶಸ್ತಿಯ ಸ್ವರೂಪ: ಒಟ್ಟು 23 ವಿಭಾಗಗಳಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಪೈಕಿ 22 ವಿಭಾಗಗಳ ವಿಜೇತರಿಗೆ ಪ್ರಮಾಣಪತ್ರ ಹಾಗೂ $ 15,000 ಅಮೆರಿಕನ್ ಡಾಲರ್ ನಗದು ಬಹುಮಾನವನ್ನು ನೀಡಲಾಗುತ್ತದೆ. ಆದರೆ, ‘ಸಾರ್ವಜನಿಕ ಸೇವೆ’ ವಿಭಾಗದ ವಿಜೇತರಿಗೆ ಮಾತ್ರ ವಿಶೇಷವಾಗಿ ಚಿನ್ನದ ಪದಕವನ್ನು ನೀಡಿ ಗೌರವಿಸಲಾಗುತ್ತದೆ.
  • ಕ್ಷೇತ್ರಗಳು: ಇದು ಪತ್ರಿಕೋದ್ಯಮ, ಸಾಹಿತ್ಯ ಮತ್ತು ಸಂಗೀತ ಸಂಯೋಜನೆ ಕ್ಷೇತ್ರಗಳಲ್ಲಿನ ಅಸಾಧಾರಣ ಸಾಧನೆಯನ್ನು ಗುರುತಿಸಿ ನೀಡುವ ಅತ್ಯುನ್ನತ ಪುರಸ್ಕಾರವಾಗಿದೆ.

ಈ ಹಿಂದಿನ ಪ್ರಮುಖ ಭಾರತೀಯ ವಿಜೇತರು:

  • ಗೋಬಿಂದ್ ಬಿಹಾರಿ ಲಾಲ್: ಇವರು 1937 ರಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಈ ಪ್ರಶಸ್ತಿಯನ್ನು ಪಡೆದ ಮೊಟ್ಟಮೊದಲ ಭಾರತೀಯರಾಗಿದ್ದಾರೆ. ಇವರು ಅಮೆರಿಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ  ‘ಗದರ್ ಪಕ್ಷ’ದ ಸಕ್ರಿಯ ಸದಸ್ಯರಾಗಿದ್ದರು.
  • ಸಿದ್ಧಾರ್ಥ ಮುಖರ್ಜಿ: ಕ್ಯಾನ್ಸರ್ ರೋಗದ ಕುರಿತು ಇವರು ರಚಿಸಿದ “ದಿ ಎಂಪರರ್ ಆಫ್ ಆಲ್ ಮಲಾಡೀಸ್: ಎ ಬಯೋಗ್ರಫಿ ಆಫ್ ಕ್ಯಾನ್ಸರ್” (The Emperor of All Maladies: A Biography of Cancer) ಎಂಬ ಕೃತಿಗಾಗಿ, ಇವರಿಗೆ ‘ಸಾಮಾನ್ಯ ಕಾಲ್ಪನಿಕವಲ್ಲದ ಸಾಹಿತ್ಯ’ (General Non-Fiction) ವಿಭಾಗದಲ್ಲಿ ಈ ಪ್ರಶಸ್ತಿ ಲಭಿಸಿದೆ.
  • ದಾನಿಶ್ ಸಿದ್ದಿಕಿ: ಪ್ರಖ್ಯಾತ ಛಾಯಾಚಿತ್ರ ಪತ್ರಕರ್ತರಾಗಿದ್ದ ಇವರು ಎರಡು ಬಾರಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2018 ರಲ್ಲಿ ರೋಹಿಂಗ್ಯಾ ಬಿಕ್ಕಟ್ಟಿನ ವರದಿಗಾಗಿ ಮತ್ತು 2020 ರಲ್ಲಿ ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕವು ಸೃಷ್ಟಿಸಿದ ಭೀಕರ ಮಾನವ ದುರಂತವನ್ನು ಸೆರೆಹಿಡಿದ ಅವರ ಅತ್ಯುತ್ತಮ ಛಾಯಾಚಿತ್ರಗಳಿಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿತ್ತು.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts