ಚಾಂಪಿಯನ್ಸ್ ಆಫ್ ದಿ ಅರ್ಥ್ ಪ್ರಶಸ್ತಿ, 2025 | ದೀಪಾವಳಿ ಹಬ್ಬವನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ಸೇರಿಸಲಾಗಿದೆ | ವಿಶ್ವ ಅಸಮಾನತೆ ವರದಿ, 2026 | ಸೌರ ಬಿರುಗಾಳಿಯನ್ನು ಅಧ್ಯಯನ ಮಾಡಲು ಜಾಗತಿಕ ಪ್ರಯತ್ನಕ್ಕೆ ಕೈಜೋಡಿಸಿದ ಆದಿತ್ಯ-L1 | ಜಾಗತಿಕ ಪರಿಸರ ಮುನ್ನೋಟ (Global Environment Outlook)

ಚಾಂಪಿಯನ್ಸ್ ಆಫ್ ದಿ ಅರ್ಥ್ ಪ್ರಶಸ್ತಿ, 2025

ಪರಿಸರ

ಇದೀಗ ಸುದ್ದಿಯಲ್ಲಿದೆ: 

  • ತಮಿಳುನಾಡಿನ ಐಎಎಸ್ ಅಧಿಕಾರಿಯಾದ ಸುಪ್ರಿಯಾ ಸಾಹು ಅವರಿಗೆ ಸ್ಫೂರ್ತಿ ಮತ್ತು ಕ್ರಿಯೆ ವಿಭಾಗದಲ್ಲಿ, ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ (UNEP) ‘2025 ರ ಸಾಲಿನ “ಚಾಂಪಿಯನ್ಸ್ ಆಫ್ ದಿ ಅರ್ಥ್ ಪ್ರಶಸ್ತಿ”ಯನ್ನು ನೀಡಿ ಗೌರವಿಸಲಾಗಿದೆ.

ಸುಪ್ರಿಯಾ ಸಾಹು ಅವರು ಪರಿಸರಕ್ಕೇ ನೀಡಿದ ಕೊಡುಗೆಗಳು:

  • 2000ನೇ ಇಸವಿಯಲ್ಲಿ, ನೀಲಗಿರಿಯಲ್ಲಿ ‘ಏಕ-ಬಳಕೆಯ ಪ್ಲಾಸ್ಟಿಕ್’ ನಿರ್ಮೂಲನೆಗಾಗಿ ಸುಪ್ರಿಯಾ ಸಾಹು ಅವರು ‘ಆಪರೇಷನ್ ಬ್ಲೂ ಮೌಂಟೇನ್’ ಎಂಬ ಅಭಿಯಾನವನ್ನು ಪ್ರಾರಂಭಿಸಿದರು.
  • “ಕೂಲ್ ರೂಫ್ ಪ್ರಾಜೆಕ್ಟ್” ಅಡಿಯಲ್ಲಿ ಶಾಲಾ ಕಟ್ಟಡಗಳ ಮೇಲ್ಛಾವಣಿಗಳಿಗೆ ಬಿಳಿ ಬಣ್ಣ ಬಳಿಯುವುದರಿಂದ ಹಿಡಿದು, ಮ್ಯಾಂಗ್ರೋವ್‌ಗಳು (ಕಾಂಡ್ಲಾ ಕಾಡುಗಳು) ಮತ್ತು ಜೌಗು ಪ್ರದೇಶಗಳನ್ನು ಪುನಃಸ್ಥಾಪಿಸುವವರೆಗೆ ಹಾಗೂ 65 ಹೊಸ ಮೀಸಲು ಅರಣ್ಯಗಳನ್ನು ರಚಿಸುವವರೆಗೆ, ಅವರು ಹವಾಮಾನ ಬದಲಾವಣೆಗೆ ಸಂಬಂಧಿಸಿದ ಕಡಿಮೆ ವೆಚ್ಚದ ಪರಿಹಾರಗಳನ್ನು ಪರಿಚಯಿಸಿದರು.
  • ಅವರ ‘ಪ್ರಕೃತಿ-ಮೊದಲು’ ಎಂಬ ವಿಧಾನವು 2.5 ದಶಲಕ್ಷ ‘ಹಸಿರು ಉದ್ಯೋಗ’ಗಳನ್ನು ಸೃಷ್ಟಿಸಿದೆ ಮತ್ತು ಭಾರತದ ರಾಷ್ಟ್ರೀಯ ಇಂಗಾಲದ ಹೊರಸೂಸುವಿಕೆ ಕಡಿತದ ಗುರಿಗಳಿಗೆ ಗಮನಾರ್ಹ ಕೊಡುಗೆ ನೀಡಿದೆ.

ಚಾಂಪಿಯನ್ಸ್ ಆಫ್ ದಿ ಅರ್ಥ್ ಪ್ರಶಸ್ತಿಯ ಬಗ್ಗೆ:

    • ಈ ಪ್ರಶಸ್ತಿಯನ್ನು 2005 ರಲ್ಲಿ ಪ್ರಾರಂಭಿಸಲಾಯಿತು.
    • ಈ ಪ್ರಶಸ್ತಿಯು ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಗೌರವವಾಗಿದೆ.
    • ಪರಿಸರದ ಮೇಲೆ ಸಕಾರಾತ್ಮಕ ಪ್ರಭಾವ ಮತ್ತು ಪರಿವರ್ತನೆಯನ್ನು ಉಂಟುಮಾಡಿದ ಸಾರ್ವಜನಿಕ ಮತ್ತು ಖಾಸಗಿ ವಲಯಗಳು ಹಾಗೂ ನಾಗರಿಕ ಸಮಾಜದ ಗಣ್ಯ ವ್ಯಕ್ತಿಗಳನ್ನು ಇದು ಗುರುತಿಸುತ್ತದೆ.
    • ಈ ಪ್ರಶಸ್ತಿಯನ್ನು ಐದು ವಿಭಾಗಗಳಲ್ಲಿ ನೀಡಲಾಗುತ್ತದೆ:
  • ನೀತಿ ನಾಯಕತ್ವ 
  • ಉದ್ಯಮಶೀಲತಾ ದೃಷ್ಟಿಕೋನ
  • ವಿಜ್ಞಾನ ಮತ್ತು ನಾವೀನ್ಯತೆ
  • ಜೀವಮಾನದ ಸಾಧನೆ
  • ಸ್ಫೂರ್ತಿ ಮತ್ತು ಕ್ರಿಯೆ – (ಸುಪ್ರಿಯಾ ಸಾಹು ಅವರಿಗೆ ಈ ವಿಭಾಗದಲ್ಲಿ ಗೌರವಿಸಲಾಗಿದೆ).
  • ಈ ಹಿಂದೆ ಪ್ರಶಸ್ತಿ ಪಡೆದ ಭಾರತೀಯರು: ಮಾಧವ್ ಗಾಡ್ಗೀಳ್ (2024), ನರೇಂದ್ರ ಮೋದಿ (2018), ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (2018) ಮತ್ತು ಅಫ್ರೋಜ್ ಶಾ (2016).

ದೀಪಾವಳಿ ಹಬ್ಬವನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ಸೇರಿಸಲಾಗಿದೆ

ಸಾಮಾನ್ಯ ಅಧ್ಯಯನ -1/ಸಂಸ್ಕೃತಿ

ಇದೀಗ ಸುದ್ದಿಯಲ್ಲಿದೆ:

  • ನವದೆಹಲಿಯಲ್ಲಿ ನಡೆದ ಯುನೆಸ್ಕೋದ ಅಂತರ-ಸರ್ಕಾರಿ ಸಮಿತಿಯ 20ನೇ ಅಧಿವೇಶನದಲ್ಲಿ, ದೀಪಾವಳಿ ಹಬ್ಬವನ್ನು ಯುನೆಸ್ಕೋದ ‘ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪ್ರತಿನಿಧಿ ಪಟ್ಟಿ’ಗೆ ಸೇರ್ಪಡೆಗೊಳಿಸಲಾಗಿದೆ.
  • ಅಮೂರ್ತ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗೆ ಯುನೆಸ್ಕೋ ಅಂತರ-ಸರ್ಕಾರಿ ಸಮಿತಿಯ 20ನೇ ಅಧಿವೇಶನವನ್ನು (2025), ಭಾರತವು ನವದೆಹಲಿಯ ಕೆಂಪು ಕೋಟೆ ಸಂಕೀರ್ಣದಲ್ಲಿ ಇತ್ತೀಚಿಗೆ ಆಯೋಜಿಸಿತ್ತು. 

ದೀಪಾವಳಿ ಹಬ್ಬದ ಬಗ್ಗೆ:

  • ದೀಪಾವಳಿ ಹಬ್ಬವನ್ನು “ದೀವಾಳಿ” ಎಂತಲೂ ಕರೆಯುತ್ತಾರೆ. ಕಾರ್ತಿಕ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ; ಇದು ಸಾಮಾನ್ಯವಾಗಿ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಬರುತ್ತದೆ.
  • ಇದರ ಆಚರಣೆಯ ನಂತರ ನರಕ ಚತುರ್ದಶಿಯೂ ಬರುತ್ತದೆ.
  • ದೀಪಾವಳಿಯ ಮೂರನೇ ದಿನ ಹಬ್ಬದ ಪ್ರಮುಖ ದಿನವಾಗಿದ್ದು, ಅಂದು ಪವಿತ್ರ ಲಕ್ಷ್ಮಿ-ಗಣೇಶ ಪೂಜೆಯನ್ನು ನೆರವೇರಿಸಲಾಗುತ್ತದೆ.

ದೀಪಾವಳಿ ಹಬ್ಬದ ಜನಪ್ರಿಯ ಪೌರಾಣಿಕ ಕಥೆಗಳು:

  • ರಾಮಾಯಣದಲ್ಲಿ:– ದೀಪಾವಳಿಯು 14 ವರ್ಷಗಳ ವನವಾಸದ ನಂತರ ಶ್ರೀರಾಮ, ಸೀತೆ ಮತ್ತು ಲಕ್ಷ್ಮಣರು ಅಯೋಧ್ಯೆಗೆ ಮರಳಿದ ಮತ್ತು ರಾವಣನ ಮೇಲೆ ಅವರು ಸಾಧಿಸಿದ ವಿಜಯದ ಸಂಕೇತವಾಗಿದೆ; ದೀಪಗಳನ್ನು ಹಚ್ಚುವ ಮೂಲಕ ಅವರ ಹಾದಿಯನ್ನು ಬೆಳಗಿಸಿ ಇದನ್ನು ಆಚರಿಸಲಾಗುತ್ತದೆ.
  • ಮಹಾಭಾರತದಲ್ಲಿ:- ಪಾಂಡವರು ತಮ್ಮ ವನವಾಸದ ನಂತರ ಮರಳಿದ ಪೌರಾಣಿಕ ಕಥೆ.
  • ನರಕ ಚತುರ್ದಶಿ:– ದುಷ್ಟಶಕ್ತಿಯ ಅಂತ್ಯದ ಸಂಕೇತವಾಗಿ, ನರಕಾಸುರನ ಮೇಲೆ ಶ್ರೀಕೃಷ್ಣನು ಸಾಧಿಸಿದ ವಿಜಯವನ್ನು ಇದು ಸ್ಮರಿಸುತ್ತದೆ.
  • ಭಗವಾನ್ ಮಹಾವೀರನ ನಿರ್ವಾಣ:- 24ನೇ ತೀರ್ಥಂಕರರಾದ ಭಗವಾನ್ ಮಹಾವೀರನು ದೀಪಾವಳಿ ಹಬ್ಬದಂದು ಪಾವಾಪುರಿಯಲ್ಲಿ ನಿರ್ವಾಣ ಹೊಂದಿದನು. ಜೈನ ಧರ್ಮದ ಭಕ್ತರು ಈ ಹಬ್ಬವನ್ನು ‘ನಿರ್ವಾಣ ದಿನ’ವನ್ನಾಗಿ ಆಚರಿಸುತ್ತಾರೆ.
  • ಬಲಿ ಚಕ್ರವರ್ತಿಯ ಪುನರಾಗಮನ:- ಮಹಾರಾಷ್ಟ್ರದಲ್ಲಿ, ದೀಪಾವಳಿಯು ಬಲಿ ಚಕ್ರವರ್ತಿಯ ಭೇಟಿಯನ್ನು ಸೂಚಿಸುತ್ತದೆ; ಇದು ನ್ಯಾಯ ಮತ್ತು ಔದಾರ್ಯವನ್ನು ಸಂಕೇತಿಸುತ್ತದೆ.
  • ಕಾಳಿ ಪೂಜೆ:- ಬಂಗಾಳ, ಒಡಿಶಾ ಮತ್ತು ಅಸ್ಸಾಂನಲ್ಲಿ, ದೀಪಾವಳಿಯು ರಕ್ಷಣೆ ಮತ್ತು ಆಂತರಿಕ ಶಕ್ತಿಗಾಗಿ ಕಾಳಿ ದೇವಿಯ ಆರಾಧನೆಯೊಂದಿಗೆ ಏಕಕಾಲದಲ್ಲಿ ಆಚರಿಸಲ್ಪಡುತ್ತದೆ.
  • ಲಕ್ಷ್ಮೀ ದೇವಿಯ ಅವತರಣ:- ಐಶ್ವರ್ಯ ಮತ್ತು ಸಮೃದ್ಧಿಯ ಸಂಕೇತ.

ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆ ತಾಣಗಳ ಕುರಿತು:

ಯುನೆಸ್ಕೋ “ಅಮೂರ್ತ” ಎಂಬ ಪದವನ್ನು ಈ ಕೆಳಗಿನ ಗುಣಲಕ್ಷಣಗಳನ್ನು ಹೊಂದಿರುವ ಅಭಿವ್ಯಕ್ತಿಗಳೆಂದು ವ್ಯಾಖ್ಯಾನಿಸುತ್ತದೆ:

    • ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಹರಿದುಬಂದ ಸಂಪ್ರದಾಯಗಳು.
    • ತಮ್ಮ ಪರಿಸರಕ್ಕೆ ಪ್ರತಿಕ್ರಿಯೆಯಾಗಿ ವಿಕಸನಗೊಂಡ ಸಂಪ್ರದಾಯಗಳು. 
  • ನಮಗೆ ಅಸ್ಮಿತೆ ಮತ್ತು ನಿರಂತರತೆಯ ಪ್ರಜ್ಞೆಯನ್ನು ಒದಗಿಸುವಲ್ಲಿ ಕೊಡುಗೆ ನೀಡಿರುವ ಸಂಪ್ರದಾಯಗಳು. 

ಯುನೆಸ್ಕೋದ ಅಧಿಕೃತ ದಾಖಲೆಯನ್ವಯ, ‘ಅಮೂರ್ತ ಸಾಂಸ್ಕೃತಿಕ ಪರಂಪರೆ’ಯು ಈ ಕೆಳಗಿನವುಗಳನ್ನು ಒಳಗೊಂಡಿದೆ: “ಮೌಖಿಕ ಸಂಪ್ರದಾಯಗಳು, ಪ್ರದರ್ಶನ ಕಲೆಗಳು, ಸಾಮಾಜಿಕ ಆಚರಣೆಗಳು, ವಿಧಿವಿಧಾನಗಳು, ಹಬ್ಬದ ಸಂದರ್ಭಗಳು, ಪ್ರಕೃತಿ ಮತ್ತು ವಿಶ್ವಕ್ಕೆ ಸಂಬಂಧಿಸಿದ ಜ್ಞಾನ ಮತ್ತು ಆಚರಣೆಗಳು ಅಥವಾ ಸಾಂಪ್ರದಾಯಿಕ ಕರಕುಶಲ ವಸ್ತುಗಳನ್ನು ಉತ್ಪಾದಿಸುವ ಜ್ಞಾನ ಮತ್ತು ಕೌಶಲಗಳು.”

ಯುನೆಸ್ಕೋ ಪ್ರತಿನಿಧಿ ಪಟ್ಟಿಯಲ್ಲಿರುವ ಭಾರತದ 16 ಅಮೂರ್ತ ಸಾಂಸ್ಕೃತಿಕ ಪರಂಪರೆಗಳು:

  • ದೀಪಾವಳಿ (2025)
  1. ಗುಜರಾತಿನ ಗರ್ಬಾ (2023)
  2. ಕೋಲ್ಕತ್ತಾದ ದುರ್ಗಾ ಪೂಜೆ (2021)
  3. ಕುಂಭ ಮೇಳ (2017)
  4. ನವರೋಜ್ (2016)
  5. ಯೋಗ (2016)
  6. ಪಂಜಾಬ್‌ನ ಜಂಡಿಯಾಲ ಗುರುವಿನ ‘ತಾಥೇರ’ರ ಸಾಂಪ್ರದಾಯಿಕ ಹಿತ್ತಾಳೆ ಮತ್ತು ತಾಮ್ರದ ಪಾತ್ರೆ ತಯಾರಿಕೆ ಕಲೆ (2014)
  7. ಮಣಿಪುರದ ಸಂಕೀರ್ತನೆ (2013)
  8. ಲಡಾಖ್‌ನ ಬೌದ್ಧ ಮಂತ್ರ ಪಠಣ: ಜಮ್ಮು ಮತ್ತು ಕಾಶ್ಮೀರದ ಹಿಮಾಲಯದಾಚೆಗಿನ ಲಡಾಖ್ ಪ್ರದೇಶದಲ್ಲಿ ಪವಿತ್ರ ಬೌದ್ಧ ಗ್ರಂಥಗಳ ಪಠಣ (2012)
  9. ಪಶ್ಚಿಮ ಬಂಗಾಳದ ಛೌ ನೃತ್ಯ (2010)
  10. ರಾಜಸ್ಥಾನದ “ಕಾಲ್ಬೆಲಿಯಾ” ಜಾನಪದ ಹಾಡುಗಳು ಮತ್ತು ನೃತ್ಯಗಳು (2010)
  11. ಕೇರಳದ ಮುಡಿಯೆಟ್ಟು, ಧಾರ್ಮಿಕ ರಂಗಭೂಮಿ ಮತ್ತು ನೃತ್ಯ ನಾಟಕ (2010)
  12. ಗರ್ವಾಲ್ ಹಿಮಾಲಯದ ರಮ್ಮಾನ್, ಧಾರ್ಮಿಕ ಹಬ್ಬ ಮತ್ತು ಧಾರ್ಮಿಕ ರಂಗಭೂಮಿ (2009)
  13. ಕೇರಳದ ಕೂಡಿಯಟ್ಟಂ, ಸಂಸ್ಕೃತ ರಂಗಭೂಮಿ (2008)
  14. ವೇದ ಮಂತ್ರ ಪಠಣ ಸಂಪ್ರದಾಯ (2008)
  15. ಉತ್ತರ ಪ್ರದೇಶದ ರಾಮಲೀಲಾ, ರಾಮಾಯಣದ ಸಾಂಪ್ರದಾಯಿಕ ಪ್ರದರ್ಶನ (2008)

ವಿಶ್ವ ಅಸಮಾನತೆ ವರದಿ, 2026

ಸಾಮಾನ್ಯ ಅಧ್ಯಯನ- 2/ಸಾಮಾಜಿಕ ವಿಷಯಗಳು; ಸಾಮಾನ್ಯ ಅಧ್ಯಯನ- 3/ಒಳಗೊಳ್ಳುವ ಬೆಳವಣಿಗೆ

ಇದೀಗ ಸುದ್ದಿಯಲ್ಲಿದೆ:

  • ವಿಶ್ವ ಅಸಮಾನತೆ ಲ್ಯಾಬ್’, ವಿಶ್ವ ಅಸಮಾನತೆ ವರದಿಯ 3ನೇ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ವಿಶ್ವ ಅಸಮಾನತೆ ವರದಿ, 2026 ರ ಪ್ರಮುಖ ಅಂಶಗಳು:

  • ಸಂಪತ್ತಿನ ಕೇಂದ್ರೀಕರಣ:- ಜಾಗತಿಕ ಜನಸಂಖ್ಯೆಯ ಅತ್ಯಂತ ಶ್ರೀಮಂತ 10% ಜನರು, ವಿಶ್ವದ ಒಟ್ಟು ಸಂಪತ್ತಿನ ಸರಿಸುಮಾರು 75% ರಷ್ಟು ಪಾಲನ್ನು ಹೊಂದಿದ್ದಾರೆ.

ಭಾರತದ ಕುರಿತ ವರದಿಯಲ್ಲಿರುವ ಪ್ರಮುಖ ಅಂಶಗಳು:

  • ಜಾಗತಿಕವಾಗಿ ಅತಿ ಹೆಚ್ಚು ಅಸಮಾನತೆಯನ್ನು ಹೊಂದಿರುವ ಅತೀ ದೊಡ್ಡ ಆರ್ಥಿಕತೆಗಳಲ್ಲಿ ಒಂದಾಗಿ ಭಾರತವನ್ನು ಗುರುತಿಸಲಾಗಿದೆ.
  • ಆದಾಯ:– ಅತಿ ಹೆಚ್ಚು ಆದಾಯ ಗಳಿಸುವ ಅಗ್ರ 10% ರಷ್ಟು ಜನರು ರಾಷ್ಟ್ರೀಯ ಆದಾಯದ 58% ರಷ್ಟನ್ನು ತಮ್ಮದಾಗಿಸಿಕೊಂಡಿದ್ದರೆ, ಕೆಳಸ್ತರದ 50% ಜನರು ಕೇವಲ 15% ರಾಷ್ಟ್ರೀಯ ಆದಾಯವನ್ನು ಮಾತ್ರ ಪಡೆಯುತ್ತಾರೆ.
  • ಸಂಪತ್ತು:- ಭಾರತದ ಒಟ್ಟು ಸಂಪತ್ತಿನ ಪೈಕಿ ಸುಮಾರು 65% ರಷ್ಟು ಪಾಲನ್ನು ಅತ್ಯಂತ ಶ್ರೀಮಂತ 10% ಜನರು ಹೊಂದಿದ್ದಾರೆ; ಕೇವಲ ಅಗ್ರ 1% ರಷ್ಟು ಜನರು ಸುಮಾರು 40% ರಷ್ಟು ಸಂಪತ್ತನ್ನು ಹೊಂದಿದ್ದಾರೆ.
  • ಲಿಂಗ:– ಮಹಿಳಾ ಕಾರ್ಮಿಕರ ಭಾಗವಹಿಸುವಿಕೆಯು ಅತ್ಯಂತ ಕಡಿಮೆಯಿದ್ದು, 15.7% ರ ಮಟ್ಟದಲ್ಲಿಯೇ ನಿಶ್ಚಲವಾಗಿದೆ.

ಸೌರ ಬಿರುಗಾಳಿಯನ್ನು ಅಧ್ಯಯನ ಮಾಡಲು ಜಾಗತಿಕ ಪ್ರಯತ್ನಕ್ಕೆ ಕೈಜೋಡಿಸಿದ ಆದಿತ್ಯ-L1

ಸಾಮಾನ್ಯ ಅಧ್ಯಯನ -3/ ವಿಜ್ಞಾನ ಮತ್ತು ತಂತ್ರಜ್ಞಾನ

ಇದೀಗ ಸುದ್ದಿಯಲ್ಲಿದೆ : 

  • ಭಾರತದ ಸೌರ ವೀಕ್ಷಣಾಲಯವಾದ ಆದಿತ್ಯ-L1, ಮೇ 2024ರಲ್ಲಿ ಸಂಭವಿಸಿದ “ಗ್ಯಾನನ್‌ನ ಸ್ಟಾರ್ಮ್ (Gannon’s storm)” ಎಂದು ಕರೆಯಲ್ಪಡುವ ಸೌರ ಬಿರುಗಾಳಿಯ ಅಸಾಮಾನ್ಯ ವರ್ತನೆಯನ್ನು ಬಹಿರಂಗಪಡಿಸಿದೆ.
  • ಈ ಬಿರುಗಾಳಿ ಸೂರ್ಯನಲ್ಲಿ ಸಂಭವಿಸಿದ “ಕೊರೊನಲ್ ಮಾಸ್ ಇಜೆಕ್ಷನ್‌ಗಳು” (Coronal Mass Ejections – CMEs) ಎನ್ನುವ ದೈತ್ಯ ಪ್ರಮಾಣದ ಸ್ಫೋಟಗಳ ಸರಣಿಯಿಂದ ಉಂಟಾಗಿದೆ.

‘ಸೌರ ಬಿರುಗಾಳಿ’ಯ ಬಗ್ಗೆ:

  • ಸೌರ ಬಿರುಗಾಳಿಯು ಸೂರ್ಯನ ಮೇಲೆ ಸಂಭವಿಸುವ ‘ಕರೋನಲ್ ಮಾಸ್ ಇಜೆಕ್ಷನ್‌ಗಳು’ (CMEs) ಎಂದು ಕರೆಯಲ್ಪಡುವ ದೈತ್ಯ ಸ್ಫೋಟಗಳ ಸರಣಿಯಿಂದ ಕೂಡಿದೆ.
  • ಒಂದು ಕರೋನಲ್ ಮಾಸ್ ಇಜೆಕ್ಷನ್‌ ಎಂದರೆ ಸೂರ್ಯನಿಂದ ಬಾಹ್ಯಾಕಾಶಕ್ಕೆ ಉಗುಳಲ್ಪಡುವ ಬಿಸಿಯಾದ ಅನಿಲ ಮತ್ತು ಕಾಂತೀಯ ಶಕ್ತಿಯ ಬೃಹತ್ ಗುಳ್ಳೆಯಾಗಿದೆ.
  • ಭೂಮಿಯ ಮೇಲೆ ಬಿರುವ ಪರಿಣಾಮ:- ಈ ಗುಳ್ಳೆಗಳು ಭೂಮಿಗೆ ಅಪ್ಪಳಿಸಿದಾಗ, ಇವು ಭೂಮಿಯ ಕಾಂತೀಯ ಕವಚವನ್ನು ಅಸ್ಥಿರಗೊಳಿಸಬಹುದು. ಇದರಿಂದಾಗಿ ಉಪಗ್ರಹ, ಸಂಪರ್ಕ ವ್ಯವಸ್ಥೆ, ಜಿಪಿಎಸ್ ಹಾಗೂ ವಿದ್ಯುತ್ ಜಾಲಗಳಿಗೆ ಗಂಭೀರ ತೊಂದರೆ ಉಂಟಾಗಬಹುದು.

ಆದಿತ್ಯ-L1 ಯೋಜನೆಯ ಬಗ್ಗೆ:

  • ವಿಶಿಷ್ಟತೆ: ಆದಿತ್ಯ-L1 ಸೂರ್ಯನನ್ನು ಅಧ್ಯಯನ ಮಾಡಲು ಭಾರತದ ಮೊದಲ ಬಾಹ್ಯಾಕಾಶ ಆಧಾರಿತ ವೀಕ್ಷಣಾಲಯವಾಗಿದೆ. ಇದನ್ನು PSLV-C57 ರಾಕೆಟ್ ಮೂಲಕ ಉಡಾವಣೆ ಮಾಡಲಾಗುತ್ತದೆ.
  • ಈ ಸೌರ ಯೋಜನೆಯು ಬಾಹ್ಯಾಕಾಶ ನೌಕೆಯನ್ನು ನೇರವಾಗಿ ಸೂರ್ಯನ ಬಳಿಗೆ ಕಳುಹಿಸುವುದಿಲ್ಲ; ಬದಲಿಗೆ, ಗ್ರಹಣದ ಸಮಯದಲ್ಲೂ ಸೂರ್ಯನನ್ನು ತಡೆರಹಿತವಾಗಿ ವೀಕ್ಷಿಸಲು ಸಾಧ್ಯವಾಗುವಂತಹ ಬಾಹ್ಯಾಕಾಶ ವೀಕ್ಷಣಾಲಯವನ್ನು ಇದು ಸೃಷ್ಟಿಸುತ್ತದೆ.
  • ಭೂಮಿ-ಸೂರ್ಯ ವ್ಯವಸ್ಥೆಯ, ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿ.ಮೀ ದೂರದಲ್ಲಿರುವ ‘ಲ್ಯಾಗ್ರೇಂಜ್ ಬಿಂದು 1’ರ (L1) ಸುತ್ತಲಿನ ಹ್ಯಾಲೋ ಕಕ್ಷೆಯಲ್ಲಿ ಈ ಬಾಹ್ಯಾಕಾಶ ನೌಕೆಯನ್ನು ಇರಿಸಲು ಯೋಜಿಸಲಾಗಿದೆ.

ಯೋಜನೆಯ ಪ್ರಮುಖ ಉದ್ದೇಶಗಳು:

  • ಈ ಯೋಜನೆಯು ಸೂರ್ಯನ ಮೇಲ್ಮೈ ವಾತಾವರಣದ (ವರ್ಣಗೋಳ ಮತ್ತು ಕರೋನಾ) ಚಲನಶೀಲತೆಯ ಅಧ್ಯಯನದ ಮೇಲೆ ಗಮನಹರಿಸುತ್ತದೆ.
  • ಇದು ಬಾಹ್ಯಾಕಾಶ ಹವಾಮಾನಕ್ಕೆ ಕಾರಣವಾಗುವ ಅಂಶಗಳನ್ನು ಗುರುತಿಸುವುದರ ಜೊತೆಗೆ, ಸೌರ ಮಾರುತದ ಮೂಲ, ಸಂಯೋಜನೆ ಮತ್ತು ಚಲನಶೀಲತೆಯನ್ನು ಗುರುತಿಸುತ್ತದೆ.

ಸೂರ್ಯನಿಗೆ ಸಂಬಂಧಿಸಿದ ಇತರ ಪ್ರಮುಖ ಯೋಜನೆಗಳು:

  • 2018 ರಲ್ಲಿ ಉಡಾವಣೆಯಾದ ನಾಸಾದ (NASA) ‘ಪಾರ್ಕರ್ ಸೋಲಾರ್ ಪ್ರೋಬ್’ ಈಗಾಗಲೇ ಸೂರ್ಯನಿಗೆ ಸಾಕಷ್ಟು ಹತ್ತಿರ ಹೋಗಿದೆ – ಆದರೆ ಅದು ಸೂರ್ಯನಿಂದಾಚೆಗೆ ಹೋಗುವ ಗುರಿಯನ್ನು ಇಟ್ಟುಕೊಂಡಿದೆ..
  • ಸೂರ್ಯನ ಮೇಲ್ಮೈ ಪ್ರಕ್ರಿಯೆಗಳನ್ನು ತನಿಖೆ ಮಾಡಲು ನಾಸಾ ಮತ್ತು ಅಂದಿನ ಪಶ್ಚಿಮ ಜರ್ಮನಿಯ ಬಾಹ್ಯಾಕಾಶ ಸಂಸ್ಥೆಯ ಜಂಟಿ ಯೋಜನೆಯಾದ ‘ಹೆಲಿಯೋಸ್ 2’ ಸೌರ ಪ್ರೋಬ್ ಅನ್ನು 1976 ರಲ್ಲಿ ಉಡಾವಣೆ ಮಾಡಲಾಯಿತು.

ಜಾಗತಿಕ ಪರಿಸರ ಮುನ್ನೋಟ (Global Environment Outlook)

ಸಾಮಾನ್ಯ ಅಧ್ಯಯನ-3/ ಪರಿಸರ

ಇದೀಗ ಸುದ್ದಿಯಲ್ಲಿದೆ: 

  • ಕೀನ್ಯಾದ ನೈರೋಬಿಯಲ್ಲಿ ನಡೆದ ವಿಶ್ವಸಂಸ್ಥೆಯ ಪರಿಸರ ಸಭೆಯ 7ನೇ ಅಧಿವೇಶನದಲ್ಲಿ, ‘ಜಾಗತಿಕ ಪರಿಸರ ಮುನ್ನೋಟ, 7ನೇ ಆವೃತ್ತಿ: ಎ ಫ್ಯೂಚರ್ ವೀ ಚೂಸ್/ನಾವು ಆರಿಸಿಕೊಳ್ಳುವ ಭವಿಷ್ಯ (GEO-7) ದ ವರದಿಯನ್ನು ಬಿಡುಗಡೆ ಮಾಡಲಾಯಿತು.

ಜಾಗತಿಕ ಪರಿಸರ ಮುನ್ನೋಟ (GEO) ವರದಿಯ ಬಗ್ಗೆ:

  • ಪ್ರಕಟಿಸಿದವರು:- ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP).
  • ಉದ್ದೇಶ:- ಭೂಗ್ರಹದ ಪರಿಸರ ಆರೋಗ್ಯದ ಕುರಿತು ಸಮಗ್ರ ಮೌಲ್ಯಮಾಪನವನ್ನು ಒದಗಿಸುವುದು.
  • ಮಹತ್ವ:– ಸುಸ್ಥಿರ ಅಭಿವೃದ್ಧಿಯೆಡೆಗಿನ ಜಾಗತಿಕ ಕ್ರಮಗಳಿಗೆ ಮಾರ್ಗದರ್ಶನ ನೀಡಲು, ದತ್ತಾಂಶ-ಆಧಾರಿತ ಒಳನೋಟಗಳು ಮತ್ತು ನೀತಿ ಆಯ್ಕೆಗಳನ್ನು ಒದಗಿಸುವ ಮೂಲಕ ವಿಜ್ಞಾನ ಮತ್ತು ನೀತಿಯ ನಡುವಿನ ಅಂತರವನ್ನು ಕಡಿಮೆ ಮಾಡುವುದು.
  • ಇತ್ತೀಚಿನ ಆವೃತ್ತಿ: ಡಿಸೆಂಬರ್ 2025 ರಲ್ಲಿ, “ಎ ಫ್ಯೂಚರ್ ವೀ ಚೂಸ್” (ನಾವು ಆರಿಸಿಕೊಳ್ಳುವ ಭವಿಷ್ಯ) ಎಂಬ ಶೀರ್ಷಿಕೆಯಡಿ GEO ನ 7ನೇ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು.

2025 ರ GEO-7 ವರದಿಯ ಪ್ರಮುಖ ಅಂಶಗಳು:

  • ಹವಾಮಾನ ಬದಲಾವಣೆ ಮತ್ತು ನಿರ್ಣಾಯಕ ಹಂತಗಳು: ಜಾಗತಿಕ ತಾಪಮಾನ ಏರಿಕೆಯು ವೇಗಗೊಳ್ಳುತ್ತಿದೆ; ವಿಶ್ವವು ಈಗಾಗಲೇ ಸರಿಸುಮಾರು 1.3°C ನಷ್ಟು ತಾಪಮಾನ ಏರಿಕೆಯನ್ನು ಕಂಡಿದೆ.
  • ಮಾಲಿನ್ಯ ಮತ್ತು ಆರೋಗ್ಯ: ವಾಯು, ಜಲ ಮತ್ತು ಮಣ್ಣಿನ ಮಾಲಿನ್ಯವು ಜಾಗತಿಕವಾಗಿ ಪ್ರತಿ ವರ್ಷ ಸುಮಾರು 90 ಲಕ್ಷ ಸಾವುಗಳಿಗೆ ಕಾರಣವಾಗುತ್ತಿದೆ. ಕೇವಲ ವಾಯು ಮಾಲಿನ್ಯವೊಂದೇ ಪ್ರತಿ ವರ್ಷ ಲಕ್ಷಾಂತರ ಅಕಾಲಿಕ ಮರಣಗಳಿಗೆ ಕಾರಣವಾಗುತ್ತಿದೆ.
  • ಜೀವವೈವಿಧ್ಯತೆಯ ನಷ್ಟ ಮತ್ತು ಭೂಮಿಯ ಅವನತಿ: ಸುಮಾರು 10 ಲಕ್ಷ ಪ್ರಭೇದಗಳು ಅಳಿವಿನಂಚಿನಲ್ಲಿವೆ ಮತ್ತು 20-40% ರಷ್ಟು ಭೂಮಿ ಅವನತಿ ಹೊಂದಿದ್ದು, ಇದು 3 ಬಿಲಿಯನ್‌ಗಿಂತಲೂ ಹೆಚ್ಚು ಜನರ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ಸ್ವಾಹಿದ್ ದಿವಸ್ (ದಿನ)

ಸಾಮಾನ್ಯ ಅಧ್ಯಯನ -1/ಇತಿಹಾಸ; ಸಾಮಾನ್ಯ ಅಧ್ಯಯನ-2/ಆಡಳಿತ

ಇದೀಗ ಸುದ್ದಿಯಲ್ಲಿದೆ: 

  • ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ‘ಸ್ವಾಹಿದ್ ದಿವಸ್’ ಸಂದರ್ಭದಲ್ಲಿ, ಐತಿಹಾಸಿಕ ಅಸ್ಸಾಂ ಚಳವಳಿಯಲ್ಲಿ ಭಾಗವಹಿಸಿದವರ ಧೈರ್ಯವನ್ನು ಸ್ಮರಿಸಿ ಗೌರವ ಸಲ್ಲಿಸಿದರು.

“ಸ್ವಾಹಿದ್ ದಿನದ” ಬಗ್ಗೆ:

  • ಇದನ್ನು ಪ್ರತಿ ವರ್ಷ ಡಿಸೆಂಬರ್ 10 ರಂದು ಆಚರಿಸಲಾಗುತ್ತದೆ.
  • ಉದ್ದೇಶ:- ಅಸ್ಸಾಂ ಚಳವಳಿಯ ಸಮಯದಲ್ಲಿ ತಮ್ಮ ಪ್ರಾಣತ್ಯಾಗ ಮಾಡಿದವರನ್ನು ನೆನಪಿಸಿ ಗೌರವಿಸುವುದು.

ಅಸ್ಸಾಂ ಚಳವಳಿಯ ಬಗ್ಗೆ:

  • ಇದು ಬಾಂಗ್ಲಾದೇಶದಿಂದ ನಡೆಯುತ್ತಿದ್ದ ದೊಡ್ಡ ಪ್ರಮಾಣದ ಅಕ್ರಮ ಒಳನುಸುಳುವಿಕೆಯ ವಿರುದ್ಧ, 1979 ರಲ್ಲಿ ಅಸ್ಸಾಂ ವಿದ್ಯಾರ್ಥಿ ಒಕ್ಕೂಟ  ಮತ್ತು ಆಲ್ ಅಸ್ಸಾಂ ಗಣ ಸಂಗ್ರಾಮ ಪರಿಷತ್  ಆರಂಭಿಸಿದ ಸಾಮೂಹಿಕ ಆಂದೋಲನವಾಗಿದೆ.
  • ಈ ಚಳವಳಿಯು 1985 ರಲ್ಲಿ ಐತಿಹಾಸಿಕ ಅಸ್ಸಾಂ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ ಮುಕ್ತಾಯವಾಯಿತು.
  • ಈ ಒಪ್ಪಂದವು ಅಕ್ರಮ ವಿದೇಶಿಯರ ಪತ್ತೆ ಹಚ್ಚುವಿಕೆ ಮತ್ತು ಗಡಿಪಾರು ಮಾಡುವುದನ್ನು ಖಚಿತಪಡಿಸುತ್ತದೆ; ಜೊತೆಗೆ ಅಸ್ಸಾಮಿ ಅಸ್ಮಿತೆ, ಸಂಸ್ಕೃತಿ ಮತ್ತು ಪರಂಪರೆಯನ್ನು ರಕ್ಷಿಸಲು ಸಾಂವಿಧಾನಿಕ, ಶಾಸನಬದ್ಧ ಮತ್ತು ಆಡಳಿತಾತ್ಮಕ ರಕ್ಷಣೆಗಳನ್ನು ಖಾತರಿಪಡಿಸುತ್ತದೆ.

ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ADB)

ಸಾಮಾನ್ಯ ಅಧ್ಯಯನ -3/ ಆರ್ಥಿಕತೆ

ಇದೀಗ ಸುದ್ದಿಯಲ್ಲಿದೆ:

  • ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ADB), 2026ನೇ ಆರ್ಥಿಕ ವರ್ಷದ (FY26) ಭಾರತದ ಆರ್ಥಿಕ ಬೆಳವಣಿಗೆಯ ಮುನ್ನೋಟವನ್ನು ಶೇ. 6.5 ರಿಂದ ಶೇ. 7.2 ಕ್ಕೆ ಹೆಚ್ಚಿಸಿದೆ.

‘ಏಷ್ಯನ್ ಅಭಿವೃದ್ಧಿ ಬ್ಯಾಂಕ್’ ನ ಬಗ್ಗೆ:

  • ಏಷ್ಯಾ ಮತ್ತು ಪೆಸಿಫಿಕ್ ವಲಯದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುವ ಸಲುವಾಗಿ, 1966 ರಲ್ಲಿ ಸ್ಥಾಪಿತವಾದ ಪ್ರಾದೇಶಿಕ ಅಭಿವೃದ್ಧಿ ಬ್ಯಾಂಕ್ ಆಗಿದೆ.
  • ಕೇಂದ್ರ ಕಚೇರಿ:- ಫಿಲಿಪ್ಪೀನ್ಸ್‌ನ ಮನಿಲಾದಲ್ಲಿರುವ ‘ಮಂಡಲುಯಾಂಗ್’ನಲ್ಲಿದೆ.
  • ಸದಸ್ಯತ್ವ:- ಪ್ರಾದೇಶಿಕ (ಏಷ್ಯಾ-ಪೆಸಿಫಿಕ್) ಮತ್ತು ಪ್ರಾದೇಶಿಕೇತರ ದೇಶಗಳೆರಡನ್ನೂ ಒಳಗೊಂಡಿದೆ; ಏಷ್ಯಾ ಮತ್ತು ಪೆಸಿಫಿಕ್‌ಗಾಗಿ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗ (UNESCAP) ದ ಸುಮಾರು ಮೂರನೇ ಎರಡರಷ್ಟು ಸದಸ್ಯ ರಾಷ್ಟ್ರಗಳು ಹಾಗೂ ಅಭಿವೃದ್ಧಿ ಹೊಂದಿದ ದಾನಿ ರಾಷ್ಟ್ರಗಳು ಇದರಲ್ಲಿ ಪಾಲ್ಗೊಂಡಿವೆ.
  • ಭಾರತವು 1966 ರಲ್ಲಿ ಸ್ಥಾಪಕ ಸದಸ್ಯ ರಾಷ್ಟ್ರವಾಗಿ ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಗೆ ಸೇರ್ಪಡೆಗೊಂಡಿತು.
  • ಪ್ರಮುಖ ಷೇರುದಾರರು:- ಜಪಾನ್ ಮತ್ತು ಅಮೆರಿಕ (ತಲಾ 15.6%) ಸೇರಿವೆ; ನಂತರದ ಸ್ಥಾನಗಳಲ್ಲಿ ಚೀನಾ (6.4%), ಭಾರತ (6.3%) ಮತ್ತು ಆಸ್ಟ್ರೇಲಿಯಾ (5.8%) ಇವೆ. ಈ ಅಂಕಿಅಂಶಗಳು ಬ್ಯಾಂಕ್‌ನಲ್ಲಿನ ಪ್ರಾದೇಶಿಕ ಮತ್ತು ಪ್ರಾದೇಶಿಕೇತರ ಪಾಲುದಾರಿಕೆಗಳೆರಡನ್ನೂ ಪ್ರತಿಬಿಂಬಿಸುತ್ತವೆ.

ಗ್ಲೋ ಕ್ಯಾಸ್ 9 (GlowCas9)

ಸಾಮಾನ್ಯ ಅಧ್ಯಯನ -3/ ವಿಜ್ಞಾನ ಮತ್ತು ತಂತ್ರಜ್ಞಾನ

ಇದೀಗ ಸುದ್ದಿಯಲ್ಲಿದೆ: 

  • ಡಿಎನ್‌ಎ ಪರಿಷ್ಕರಿಸುವಾಗ ಬೆಳಕನ್ನು ಹೊರಸೂಸುವ, ಹೊಸದಾಗಿ ವಿನ್ಯಾಸಗೊಳಿಸಲಾದ ‘ಕ್ರಿಸ್ಪರ್ ಕ್ಯಾಸ್ 9’ (CRISPR Cas9) ಕಿಣ್ವದ ಒಂದು ರೂಪಾಂತರವೇ ‘ಗ್ಲೋ ಕ್ಯಾಸ್ 9’ ಆಗಿದೆ. 

ಗ್ಲೋಕ್ಯಾಸ್9 ನ ಬಗ್ಗೆ: 

  • ಇದನ್ನು ಕೋಲ್ಕತ್ತಾದ ಬೋಸ್ ಇನ್‌ಸ್ಟಿಟ್ಯೂಟ್‌ನಲ್ಲಿ ಸೃಷ್ಟಿಸಲಾದ, ಸ್ವಯಂ-ಬೆಳಗುವ ಅಥವಾ ‘ಜೈವಿಕ ದೀಪ್ತಿ’ ಹೊಂದಿರುವ ‘ಕ್ರಿಸ್ಪರ್ ಕ್ಯಾಸ್9’ ಆಗಿದೆ.
  • ಆಳ ಸಮುದ್ರದ ಸಿಗಡಿ ಪ್ರೋಟೀನ್‌ಗಳಿಂದ ಪಡೆಯಲಾದ ‘ವಿಭಜಿತ ನ್ಯಾನೊ-ಲೂಸಿಫೆರೇಸ್’ ಕಿಣ್ವದೊಂದಿಗೆ ಕ್ಯಾಸ್9 ಅನ್ನು ಸಂಯೋಜಿಸುವ ಮೂಲಕ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಜೀನ್ ಪರಿಷ್ಕರಿಸುವ (ಎಡಿಟಿಂಗ್) ತಂತ್ರಜ್ಞಾನದ ಬಗ್ಗೆ:

  • ಇದು ಜೀವಿಯೊಂದರ ಜೀನೋಮ್‌ನಲ್ಲಿ ನಿರ್ದಿಷ್ಟ ಸ್ಥಳಗಳಲ್ಲಿ ಆನುವಂಶಿಕ ವಸ್ತುವನ್ನು ಸೇರಿಸಲು, ತೆಗೆದುಹಾಕಲು ಅಥವಾ ಬದಲಾಯಿಸಲು ಅನುವು ಮಾಡಿಕೊಡುವ ತಂತ್ರಜ್ಞಾನವಾಗಿದೆ; ಈ ಮೂಲಕ ಆ ಜೀವಿಯ ಡಿಎನ್‌ಎ ಬದಲಾವಣೆಗೆ ಅವಕಾಶ ನೀಡುತ್ತದೆ.

ಕ್ರಿಸ್ಪರ್ ಕ್ಯಾಸ್9  ತಂತ್ರಜ್ಞಾನದ ಬಗ್ಗೆ:

  • ಸಂಕ್ಷಿಪ್ತ ರೂಪ:- CRISPR- ಕ್ಲಸ್ಟರ್ಡ್ ರೆಗ್ಯುಲರ್ಲಿ ಇಂಟರ್‌ಸ್ಪೇಸ್ಡ್ ಶಾರ್ಟ್ ಪ್ಯಾಲಿಂಡ್ರೋಮಿಕ್ ರಿಪೀಟ್ಸ್.
  • ಮಹತ್ವ:- CRISPR ಎಂಬ ಜೀನ್ ಪರಿಷ್ಕರಿಸುವ ತಂತ್ರದ ಬಳಕೆಯೊಂದಿಗೆ, ಸಂಶೋಧಕರು ಜೀವಿಗಳ ಡಿಎನ್‌ಎ ಅನ್ನು ಮಾರ್ಪಡಿಸಬಹುದು.
  • ಕಾರ್ಯವಿಧಾನ:– ಕ್ಯಾಸ್ 9  ಎಂಬ ಕಿಣ್ವವು ‘ಆಣ್ವಿಕ ಕತ್ತರಿ’ಯಂತೆ ಕಾರ್ಯನಿರ್ವಹಿಸುತ್ತದೆ. ನಿರ್ದಿಷ್ಟ ಡಿಎನ್‌ಎ ಅನುಕ್ರಮಕ್ಕೆ ನಿಖರವಾಗಿ ಹೊಂದಿಕೆಯಾಗುವಂತೆ ಸೃಷ್ಟಿಸಲಾದ ಆರ್‌ಎನ್‌ಎ ಅಣುಗಳು ಇದಕ್ಕೆ ಮಾರ್ಗದರ್ಶನ ನೀಡುತ್ತವೆ.
  • ಜಿಇ (ಜೀನೋಮ್ ಪರಿಷ್ಕರಿಸುವ):– ಇದು ಯಾವುದೇ ಬಾಹ್ಯ (ಅನ್ಯ) ಜೀನ್‌ಗಳನ್ನು ಪರಿಚಯಿಸದೆಯೇ, ಜೀವಿಯೊಂದರ ಜೀನೋಮ್‌ನೊಳಗಿನ ನಿರ್ದಿಷ್ಟ ಜೀನ್‌ಗಳ ನಿಖರವಾದ ಮಾರ್ಪಾಡನ್ನು ಒಳಗೊಂಡಿರುತ್ತದೆ; ಇದು ಉದ್ದೇಶಿತ ಆನುವಂಶಿಕ ಬದಲಾವಣೆಗಳಿಗೆ ಕಾರಣವಾಗುತ್ತದೆ.
  • ಜಿಎಂ (ತಳೀಯವಾಗಿ ಮಾರ್ಪಡಿಸಿದ/ಕುಲಾಂತರಿ):- ನಿರ್ದಿಷ್ಟ ಗುಣಲಕ್ಷಣಗಳು ಅಥವಾ ವೈಶಿಷ್ಟ್ಯಗಳನ್ನು ನೀಡಲು, ಸಂಬಂಧವಿಲ್ಲದ ಜೀವಿಗಳಿಂದ ಅನ್ಯ ಜೀನ್‌ಗಳನ್ನು ಜೀವಿಯೊಂದರ ಜೀನೋಮ್‌ಗೆ ಸೇರಿಸುವುದನ್ನು ಇದು ಒಳಗೊಂಡಿರುತ್ತದೆ.

ನಿಯಂತ್ರಕ ಸಂಸ್ಥೆಗಳು:

  • ಜಿಇಎಸಿ (GEAC- ಅನುವಂಶಿಕ ಎಂಜಿನಿಯರಿಂಗ್ ಮೌಲ್ಯಮಾಪನ ಸಮಿತಿ): ಇದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಡಿಯಲ್ಲಿರುವ ನಿಯಂತ್ರಕ ಸಂಸ್ಥೆಯಾಗಿದೆ. ಕುಲಾಂತರಿ ಜೀವಿಗಳನ್ನು ಮೌಲ್ಯಮಾಪನ ಮಾಡುವ ಮತ್ತು ಅನುಮೋದಿಸುವ ಜವಾಬ್ದಾರಿಯನ್ನು ಜಿಇಎಸಿ ಹೊಂದಿದೆ.
  • ಜೈವಿಕ ಸುರಕ್ಷತೆಗೆ ಕಾರ್ಟಜೆನಾ ಶಿಷ್ಟಾಚಾರ (CPB): ಜೈವಿಕ ವೈವಿಧ್ಯತೆಯ ಸಮಾವೇಶದ (CBD) ಅಡಿಯಲ್ಲಿ, ಜೀವವೈವಿಧ್ಯದ ಮೇಲೆ ಪರಿಣಾಮ ಬೀರಬಹುದಾದ ಕುಲಾಂತರಿ ಜೀವಿಗಳ ಸುರಕ್ಷಿತ ನಿರ್ವಹಣೆಯನ್ನು ಇದು ಖಚಿತಪಡಿಸುತ್ತದೆ.

CITES ಪಕ್ಷಗಳ ಸಮ್ಮೇಳನ (CoP20)

ಸಾಮಾನ್ಯ ಅಧ್ಯಯನ -3/ ಪರಿಸರ

ಇದೀಗ ಸುದ್ದಿಯಲ್ಲಿದೆ: 

  • “ಅಳಿವಿನಂಚಿನಲ್ಲಿರುವ ಕಾಡು ಪ್ರಾಣಿ ಮತ್ತು ಸಸ್ಯವರ್ಗಗಳ ಅಂತರರಾಷ್ಟ್ರೀಯ ವ್ಯಾಪಾರ ಸಮಾವೇಶದ” (CITES) ಪಕ್ಷಗಳ ಸಮ್ಮೇಳನದ 20ನೇ ಸಭೆಯು (CoP20) ಉಜ್ಬೇಕಿಸ್ತಾನದ ಸಮರ್ಕಂಡ್‌ನಲ್ಲಿ ಮುಕ್ತಾಯಗೊಂಡಿತು. ಇದು ಈ ಸಮಾವೇಶದ 50ನೇ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ.

CITES ನ ಬಗ್ಗೆ:

  • ಪೂರ್ಣ ರೂಪ:- CITES- ಅಳಿವಿನಂಚಿನಲ್ಲಿರುವ ಕಾಡು ಪ್ರಾಣಿ ಮತ್ತು ಸಸ್ಯವರ್ಗಗಳ ಅಂತರರಾಷ್ಟ್ರೀಯ ವ್ಯಾಪಾರ ಸಮಾವೇಶ.
  • 1963 ರಲ್ಲಿ ನಡೆದ ಅಂತರರಾಷ್ಟ್ರೀಯ ಪ್ರಕೃತಿ ಸಂರಕ್ಷಣೆ ಒಕ್ಕೂಟ (IUCN) ದ ಸಭೆಯಲ್ಲಿ CITES ಪರಿಕಲ್ಪನೆಯನ್ನು ರೂಪಿಸಲಾಯಿತು.
  • ಸ್ಥಾಪನೆ:- ಇದು 1975 ರಲ್ಲಿ ಜಾರಿಗೆ ಬಂದಿತು ಮತ್ತು 183 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ.
  • ಕೇಂದ್ರ ಕಚೇರಿ:- ಜಿನೀವಾ (ಸ್ವಿಟ್ಜರ್ಲೆಂಡ್).
  • ಆಡಳಿತ ನಿರ್ವಹಣೆ:- ವಿಶ್ವಸಂಸ್ಥೆಯು ತನ್ನ ‘ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ’ (UNEP) ವಿಭಾಗದ ಅಡಿಯಲ್ಲಿ ಇದರ ಆಡಳಿತವನ್ನು ನಿರ್ವಹಿಸುತ್ತದೆ.
  • CITES ಒಪ್ಪಂದವು ಪಕ್ಷಗಳಿಗೆ (ಸದಸ್ಯ ರಾಷ್ಟ್ರಗಳಿಗೆ) ಕಾನೂನುಬದ್ಧವಾಗಿದೆ, ಆದರೆ ಇದು ರಾಷ್ಟ್ರೀಯ ಕಾನೂನುಗಳ ಸ್ಥಾನವನ್ನು ತೆಗೆದುಕೊಳ್ಳುವುದಿಲ್ಲ.

CITES ಒಳಗೊಂಡಿರುವ ಅನುಬಂಧಗಳು:

  • ಅನುಬಂಧ 1:- ಇದು ಅಳಿವಿನಂಚಿನಲ್ಲಿರುವ ಮತ್ತು ವ್ಯಾಪಾರದಿಂದ ಪ್ರಭಾವಿತವಾಗಿರುವ ಅಥವಾ ಪ್ರಭಾವಿತವಾಗಬಹುದಾದ ಪ್ರಭೇದಗಳನ್ನು ಪಟ್ಟಿ ಮಾಡುತ್ತದೆ.
  • ಅನುಬಂಧ 2:- ಅಳಿವಿನಂಚಿನಲ್ಲಿಲ್ಲದಿದ್ದರೂ, ಅವುಗಳ ಉಳಿವಿಗಾಗಿ ವ್ಯಾಪಾರವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕಾದ ಅಗತ್ಯವಿರುವ ಪ್ರಭೇದಗಳನ್ನು ಈ ಪಟ್ಟಿ ಒಳಗೊಂಡಿದೆ (ಅವುಗಳ ಅಸ್ತಿತ್ವಕ್ಕೆ ಧಕ್ಕೆಯಾಗದಂತೆ ತಡೆಯಲು).
  • ಅನುಬಂಧ 3:- ಕನಿಷ್ಠ ಒಂದು ದೇಶದಲ್ಲಿ ಸಂರಕ್ಷಿಸಲ್ಪಟ್ಟಿರುವ ಮತ್ತು ಆ ಪ್ರಭೇದಗಳ ವ್ಯಾಪಾರವನ್ನು ನಿಯಂತ್ರಿಸಲು ಇತರೆ CITES ಪಕ್ಷಗಳ (ರಾಷ್ಟ್ರಗಳ) ನೆರವು ಕೋರಲಾಗಿರುವ ಪ್ರಭೇದಗಳನ್ನು ಇದು ಒಳಗೊಂಡಿದೆ.

ಗ್ರೇಟ್ ಬ್ಯಾರಿಯರ್ ರೀಫ್ (ಹವಳದ ದಿಬ್ಬ)

ಸಾಮಾನ್ಯ ಅಧ್ಯಯನ -3/ ಪರಿಸರ

ಇದೀಗ ಸುದ್ದಿಯಲ್ಲಿದೆ: 

  • ತೀವ್ರ ತಾಪಮಾನದ ಒತ್ತಡ ಮತ್ತು ಅಪರೂಪದ ಹವಳದ ಕಾಯಿಲೆಯ ಸಂಯೋಜನೆಯು ಗ್ರೇಟ್ ಬ್ಯಾರಿಯರ್ ರೀಫ್‌ನ ಒಂದು ತಾಣದಲ್ಲಿ 75% ರಷ್ಟು ‘ಗೊನಿಯೊಪೊರಾ’ ಹವಳದ ಸಮುದಾಯಗಳನ್ನು ನಾಶಪಡಿಸಿದೆ.

ಹವಳದ ದಿಬ್ಬಗಳ ಬಗ್ಗೆ:

  • ಹವಳದ ದಿಬ್ಬಗಳು ಭೂಮಿಯ ಮೇಲಿನ ಅತ್ಯಂತ ಜೈವಿಕ ವೈವಿಧ್ಯಮಯ ಪರಿಸರ ವ್ಯವಸ್ಥೆಗಳಾಗಿವೆ. ರಚನೆ ಮತ್ತು ಸಹಜೀವನದ ಸಂಬಂಧ – (ಕೋರಲ್  ಪಾಲಿಪ್ಸ್ + ಝೂಕ್ಸಾಂಥೆಲೆ).
  • ಹವಳದ ದಿಬ್ಬಗಳನ್ನು ನಿರ್ಮಿಸಲು ಪ್ರಾಥಮಿಕವಾಗಿ ಕಾರಣವಾಗುವ ಪ್ರಾಣಿಗಳಾದ ‘ಕೋರಲ್ ಪಾಲಿಪ್ಸ್’ , ತಮ್ಮ ಅಂಗಾಂಶಗಳಲ್ಲಿ ವಾಸಿಸುವ ‘ಝೂಕ್ಸಾಂಥೆಲೆ’ ಎಂಬ ದ್ಯುತಿಸಂಶ್ಲೇಷಕ ಪಾಚಿಗಳೊಂದಿಗೆ ಸಹಜೀವನದ ಸಂಬಂಧವನ್ನು ಬೆಳೆಸಿಕೊಂಡಾಗ ಇವು ರೂಪುಗೊಳ್ಳುತ್ತವೆ.
  • ರಚನೆ:- ಮುಕ್ತವಾಗಿ ಈಜುವ ಹವಳದ ಲಾರ್ವಾಗಳು, ದ್ವೀಪಗಳು ಅಥವಾ ಖಂಡಗಳ ಅಂಚುಗಳಲ್ಲಿರುವ ಮುಳುಗಿದ ಬಂಡೆಗಳಿಗೆ ಅಥವಾ ಇತರ ಗಟ್ಟಿಯಾದ ಮೇಲ್ಮೈಗಳಿಗೆ ಅಂಟಿಕೊಂಡಾಗ ಹವಳದ ದಿಬ್ಬಗಳು ರಚನೆಯಾಗಲು ಪ್ರಾರಂಭಿಸುತ್ತವೆ.
  • ಹವಳವು ಪಾಚಿಗೆ ಸಂರಕ್ಷಿತ ವಾತಾವರಣವನ್ನು ಮತ್ತು ದ್ಯುತಿಸಂಶ್ಲೇಷಣೆಗೆ ಅಗತ್ಯವಿರುವ ಸಂಯುಕ್ತಗಳನ್ನು ಒದಗಿಸುತ್ತದೆ.
  • ಇದರ ಪ್ರತಿಯಾಗಿ, ಪಾಚಿಯು ಹವಳಗಳ ಆಹಾರಕ್ಕಾಗಿ ಬಳಸುವ ಕಾರ್ಬೋಹೈಡ್ರೇಟ್‌ಗಳನ್ನು ಹಾಗೂ ಆಮ್ಲಜನಕವನ್ನು ಉತ್ಪಾದಿಸುತ್ತದೆ. ತ್ಯಾಜ್ಯವನ್ನು ಹೊರಹಾಕಲು ಸಹ ಪಾಚಿಯು ಹವಳಕ್ಕೆ ಸಹಾಯ ಮಾಡುತ್ತದೆ.

ಹವಳದ ದಿಬ್ಬಗಳ ರಚನೆಗೆ ಅನುಕೂಲಕರ ಪರಿಸ್ಥಿತಿಗಳು:

    • ಕನಿಷ್ಠ 20 ಡಿಗ್ರಿ ತಾಪಮಾನವಿರುವ ಬೆಚ್ಚಗಿನ ಉಷ್ಣವಲಯದ ಸಾಗರಗಳು (30 ಡಿಗ್ರಿ ಉತ್ತರ ಮತ್ತು 25 ಡಿಗ್ರಿ ದಕ್ಷಿಣ ಅಕ್ಷಾಂಶಗಳು).
  • ಹೂಳು ರಹಿತವಾದ ಸಾಗರದ ನೀರು.
  • ಸ್ವಚ್ಛ ಹಾಗೂ ಪಾರದರ್ಶಕ ಸಾಗರಗಳ ನೀರಿನ ಭಾಗಗಳು (ಸೂರ್ಯನ ಬೆಳಕು ಬೀಳುವಂತಿರಬೇಕು).
  • ತುಲನಾತ್ಮಕವಾಗಿ ಕಡಿಮೆ ಲವಣಾಂಶವಿರುವ ಸಾಗರದ ನೀರು.

ಹವಳದ ದಿಬ್ಬಗಳ ರಚನೆಯ ವಿಧಗಳು:

  • ಅಂಚಿನ ದಿಬ್ಬಗಳು:– ಇವು ಅತ್ಯಂತ ಸಾಮಾನ್ಯವಾಗಿವೆ; ಇವು ತೀರದಿಂದ ನೇರವಾಗಿ ಸಮುದ್ರದ ಕಡೆಗೆ ಚಾಚಿಕೊಂಡಿದ್ದು, ತೀರದ ಉದ್ದಕ್ಕೂ ಮತ್ತು ದ್ವೀಪಗಳ ಸುತ್ತಲೂ ಗಡಿಗಳನ್ನು ರೂಪಿಸುತ್ತವೆ.
  • ತಡೆಗೋಡೆ ದಿಬ್ಬಗಳು:- ಇವು ತೀರದ ಗಡಿಗಳಲ್ಲಿ ಬೆಳೆಯುತ್ತವೆ, ಆದರೆ ಹೆಚ್ಚಿನ ದೂರದಲ್ಲಿರುತ್ತವೆ. ಇವು ತೆರೆದ, ಸಾಮಾನ್ಯವಾಗಿ ಆಳವಾದ ನೀರಿನ ಲಗೂನ್‌ನಿಂದ ತಮ್ಮ ಪಕ್ಕದ ಭೂಭಾಗದಿಂದ ಬೇರ್ಪಟ್ಟರುತ್ತವೆ.
  • ಹವಳದ ದ್ವೀಪ (ಅಟಾಲ್): ಜ್ವಾಲಾಮುಖಿ ದ್ವೀಪದ ಸುತ್ತಲೂ ರೂಪುಗೊಂಡ ಅಂಚಿನ ದಿಬ್ಬವು ಸಮುದ್ರ ಮಟ್ಟಕ್ಕಿಂತ ಸಂಪೂರ್ಣವಾಗಿ ಕೆಳಗೆ ಕುಸಿದಾಗ, ಹವಳವು ಮೇಲ್ಮುಖವಾಗಿ ಬೆಳೆಯುವುದನ್ನು ಮುಂದುವರೆಸಿದರೆ, ಒಂದು ಹವಳದ ದ್ವೀಪ (ಅಟಾಲ್) ರಚನೆಯಾಗುತ್ತದೆ. ಅಟಾಲ್‌ಗಳು ಸಾಮಾನ್ಯವಾಗಿ ವೃತ್ತಾಕಾರ ಅಥವಾ ಅಂಡಾಕಾರದಲ್ಲಿದ್ದು, ಮಧ್ಯದಲ್ಲಿ ಲಗೂನ್ ಅನ್ನು ಹೊಂದಿರುತ್ತವೆ.

ಭಾರತದಲ್ಲಿ ಹಂಚಿಕೆ:

  • ಗುಜರಾತಿನ ಕಚ್ ಖಾರಿ
  • ಭಾರತದ ಪಶ್ಚಿಮ ಕರಾವಳಿ
  • ಲಕ್ಷದ್ವೀಪ
  • ತಮಿಳುನಾಡಿನ ಮನ್ನಾರ್ ಖಾರಿ
  • ಪಾಕ್ ಕೊಲ್ಲಿ 
  • ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹ

ಅಪಾಯಗಳು:

  • ವಿನಾಶಕಾರಿ ಮೀನುಗಾರಿಕೆ ಪದ್ಧತಿಗಳು, ಮಿತಿಮೀರಿದ ಮೀನುಗಾರಿಕೆ, ಅಜಾಗರೂಕ ಪ್ರವಾಸೋದ್ಯಮ, ಮಾಲಿನ್ಯ, ಹೂಳು ತುಂಬುವಿಕೆ, ಹವಳದ ಗಣಿಗಾರಿಕೆ, ಹವಾಮಾನ ಬದಲಾವಣೆ.

ಹವಳದ  ವಿವರ್ಣವಾಗುವಿಕೆ/ವರ್ಣನಾಶನ (ಕೋರಲ್ ಬ್ಲೀಚಿಂಗ್):

  • ತಾಪಮಾನ, ಬೆಳಕು ಅಥವಾ ಪೋಷಕಾಂಶಗಳಂತಹ ಪರಿಸ್ಥಿತಿಗಳಲ್ಲಿನ ಬದಲಾವಣೆಗಳಿಂದ ಹವಳಗಳು ಒತ್ತಡವನ್ನು ಎದುರಿಸಿದಾಗ, ಅವು ತಮ್ಮ ಅಂಗಾಂಶಗಳಲ್ಲಿ ವಾಸಿಸುವ ಸಹಜೀವನದ ಪಾಚಿಯಾದ ‘ಝೂಕ್ಸಾಂಥೆಲೆ’ಯನ್ನು ಹೊರಹಾಕುತ್ತವೆ. ಇದರಿಂದಾಗಿ ಅವು ಸಂಪೂರ್ಣವಾಗಿ ಬಿಳಿಯಾಗಿ ಬದಲಾಗುತ್ತವೆ. ಈ ವಿದ್ಯಮಾನವನ್ನು ‘ಹವಳದ ವಿವರ್ಣವಾಗುವಿಕೆ/ಬ್ಲೀಚಿಂಗ್’ ಎಂದು ಕರೆಯಲಾಗುತ್ತದೆ.

ಹವಳದ ವಿವರ್ಣವಾಗುವಿಕೆಗೆ ಕಾರಣಗಳು:

  • ಸಮುದ್ರದ ತಾಪಮಾನದಲ್ಲಿ ಏರಿಕೆ
  • ಸಾಗರದ ಆಮ್ಲೀಕರಣ
  • ಸೌರ ವಿಕಿರಣ ಮತ್ತು ನೇರಳಾತೀತ ವಿಕಿರಣ
  • ಸಾಂಕ್ರಾಮಿಕ ರೋಗಗಳು
  • ರಾಸಾಯನಿಕ ಮಾಲಿನ್ಯ
  • ಹೆಚ್ಚಿದ ಹೂಳು ತುಂಬುವಿಕೆ
  • ಬೆಳಕಿನ ಕಡಿಮೆ ಲಭ್ಯತೆ (ಕದಡಿದ ಸ್ಥಿತಿ)
  • ಮಾನವ ಪ್ರೇರಿತ ಅಪಾಯಗಳು

ಪಶ್ಚಿಮದ ಟ್ರಾಗೋಪನ್ (Western Tragopan)

ಸಾಮಾನ್ಯ ಅಧ್ಯಯನ- 3/ಪ್ರಭೇದಗಳು

ಇದೀಗ ಸುದ್ದಿಯಲ್ಲಿದೆ: 

  • ಇತ್ತೀಚಿನ ಅಧ್ಯಯನಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ‘ಪಶ್ಚಿಮ ಟ್ರಾಗೋಪನ್’ ಪಕ್ಷಿಗೆ ಸೂಕ್ತವಾದ ಆವಾಸಸ್ಥಾನಗಳಿರುವುದನ್ನು ದೃಢಪಡಿಸಿವೆ; ಆದರೆ ಮಾನವ ಅಡಚಣೆ ಮತ್ತು ಆವಾಸಸ್ಥಾನಗಳ ವಿಘಟನೆಯು ಈ ಪಕ್ಷಿಯ ಉಳಿವಿಗೆ ಬಲವಾದ ಅಪಾಯವನ್ನು ಒಡ್ದುತ್ತಿದೆ. 

ಪಶ್ಚಿಮ ಟ್ರಾಗೋಪನ್ ಪಕ್ಷಿಯ ಬಗ್ಗೆ:

  • ಪಶ್ಚಿಮ ಟ್ರಾಗೋಪನ್, ಭಾರತದ ಅತ್ಯಂತ ಅಪರೂಪದ ಬಣ್ಣದ ಕಾಡುಕೋಳಿ ಜಾತಿ (ಫೆಸೆಂಟ್‌) ಗಳಲ್ಲಿ  ಒಂದಾಗಿದೆ ಮತ್ತು ಹಿಮಾಚಲ ಪ್ರದೇಶದ ರಾಜ್ಯ ಪಕ್ಷಿಯಾಗಿದೆ.
  • ಇದು ಪ್ರಸ್ತುತ ಪಶ್ಚಿಮ ಹಿಮಾಲಯದಾದ್ಯಂತ ಸಣ್ಣ ಪ್ರಮಾಣದಲ್ಲಿ ವಿಘಟಿತ ತಾಣಗಳಲ್ಲಿ ಮಾತ್ರ ಉಳಿದುಕೊಂಡಿದೆ.
  • ಕೇವಲ 3,000 ರಿಂದ 9,500 ರಷ್ಟು ಪ್ರೌಢ ಹಂತದ ಪಕ್ಷಿಗಳು ಮಾತ್ರ ಉಳಿದಿವೆ ಎಂದು ಐಯುಸಿಎನ್ ಸಂಸ್ಥೆ ಅಂದಾಜಿಸಿದೆ.
  • ಅಪಾಯಗಳು: ಆವಾಸಸ್ಥಾನದ ನಾಶ, ಬೇಟೆ ಮತ್ತು ಇತರ ಮಾನವಜನ್ಯ ಕಾರಣಗಳು.
  • IUCN ಕೆಂಪು ಪಟ್ಟಿಯಲ್ಲಿ:- ‘ದುರ್ಬಲ’ (VU)
  • ಸಂರಕ್ಷಣಾ ಪ್ರಯತ್ನಗಳು:- ಶಿಮ್ಲಾದಲ್ಲಿರುವ ‘ಸರಾಹನ್ ಫೆಸಂಟ್ರಿ’ಯಲ್ಲಿ ಕಳೆದ ಕೆಲವು ವರ್ಷಗಳಿಂದ ಪಶ್ಚಿಮ ಟ್ರಾಗೋಪನ್‌ನ ‘ಬಂಧಿತ ಸಂತಾನೋತ್ಪತ್ತಿ’ ಯಶಸ್ವಿಯಾಗಿದೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts