Blog

  • ಬೆಂಗಳೂರಿನಲ್ಲಿ ನೂತನ ಏರೋಸ್ಪೇಸ್ ಸಾಮಾನ್ಯ ಸೌಲಭ್ಯ ಕೇಂದ್ರ

    ಬೆಂಗಳೂರಿನಲ್ಲಿ ನೂತನ ಏರೋಸ್ಪೇಸ್ ಸಾಮಾನ್ಯ ಸೌಲಭ್ಯ ಕೇಂದ್ರ

    ಇದೀಗ ಸುದ್ದಿಯಲ್ಲಿದೆ:

    • 2026ರ ಕರ್ನಾಟಕ ರಾಜ್ಯ ಮುಂಗಡ ಪತ್ರದಲ್ಲಿ, ಬೆಂಗಳೂರಿನ KIADB ಏರೋಸ್ಪೇಸ್ ಪಾರ್ಕ್‌ನಲ್ಲಿ ₹30 ಕೋಟಿ ವೆಚ್ಚದಲ್ಲಿ ನೂತನ ಏರೋಸ್ಪೇಸ್ ಸಾಮಾನ್ಯ ಸೌಲಭ್ಯ ಕೇಂದ್ರವನ್ನು (CFC) ಸ್ಥಾಪಿಸಲು ಘೋಷಿಸಲಾಗಿದೆ. 
    • ಇದರ ಜೊತೆಗೆ, ಶಿವಮೊಗ್ಗ ಮತ್ತು ವಿಜಯಪುರ ವಿಮಾನ ನಿಲ್ದಾಣಗಳಲ್ಲಿ ವಿಮಾನಯಾನ ತರಬೇತಿ ಶಾಲೆಯನ್ನು ಪ್ರಾರಂಭಿಸಲಾಗುತ್ತದೆ.
    • ಈ ಯೋಜನೆಗಳು ವಿಮಾನಯಾನ ಉಪಕರಣಗಳ ಉತ್ಪಾದನೆ, ಜೋಡಣೆ ಮತ್ತು ತರಬೇತಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿವೆ. ವಿಶೇಷವಾಗಿ, ತರಬೇತಿ ಶಾಲೆಯಲ್ಲಿ ಶೇಕಡಾ 25% ರಷ್ಟು ಸೀಟುಗಳನ್ನು ಸ್ಥಳೀಯ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ಮೀಸಲಿಡಲಾಗುತ್ತದೆ.

    ಏರೋಸ್ಪೇಸ್ ಉಪಕ್ರಮದ ಪ್ರಮುಖ ವಿವರಗಳು:

    • ಏರೋಸ್ಪೇಸ್ ಸಾಮಾನ್ಯ ಸೌಲಭ್ಯ ಕೇಂದ್ರ:- ಬೆಂಗಳೂರಿನ KIADB ಏರೋಸ್ಪೇಸ್ ಪಾರ್ಕ್‌ನಲ್ಲಿ ಸ್ಥಾಪನೆಯಾಗಲಿರುವ ಈ ಸೌಲಭ್ಯವು ಒಟ್ಟು ₹30 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ಉತ್ಪಾದನೆ ಮತ್ತು ಜೋಡಣಾ ಘಟಕಗಳಿಗೆ ಬೆಂಬಲ ನೀಡುತ್ತದೆ. ಯೋಜನೆಗೆ ಪ್ರಾಥಮಿಕ ಹಂಚಿಕೆಯಾಗಿ ₹10 ಕೋಟಿ ಅನುದಾನವನ್ನು ಒದಗಿಸಲಾಗಿದೆ.
    • ವಿಮಾನಯಾನ ತರಬೇತಿ ಶಾಲೆ:- ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯ ಅಡಿಯಲ್ಲಿ, ಈ ತರಬೇತಿ ಶಾಲೆಯನ್ನು ಶಿವಮೊಗ್ಗದ ಸೋಗಾನೆ ಮತ್ತು ವಿಜಯಪುರ ವಿಮಾನ ನಿಲ್ದಾಣಗಳಲ್ಲಿ ನಿರ್ಮಿಸಲಾಗುತ್ತದೆ.
    • ಆದ್ಯತಾ ಕ್ಷೇತ್ರಗಳು:- ವಿಮಾನಗಳ ಸಂಶೋಧನೆ ಮತ್ತು ಅಭಿವೃದ್ಧಿ (R&D), ನಿರ್ವಹಣೆ, ದುರಸ್ತಿ ಮತ್ತು ಕೂಲಂಕಷವಾಗಿ ಪರೀಕ್ಷೆ (MRO) ಹಾಗೂ ವಿಮಾನ ಉತ್ಪಾದನಾ ವಲಯವನ್ನು ಬೆಂಬಲಿಸುವುದು ಈ ಉಪಕ್ರಮದ ಗುರಿಯಾಗಿದೆ.
    • ನಿರೀಕ್ಷಿತ ಪ್ರಯೋಜನಗಳು:- ಈ ಯೋಜನೆಯು ಶಿವಮೊಗ್ಗ ಜಿಲ್ಲೆಯನ್ನು ರಾಜ್ಯದ ಪ್ರಮುಖ ವಿಮಾನಯಾನ ತರಬೇತಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ನೆರವಾಗುತ್ತದೆ.
  • ರುಬಿಡಿಯಮ್ ಪರಮಾಣು ಗಡಿಯಾರ ವೈಫಲ್ಯ: ಇಸ್ರೋದ ‘ನಾವಿಕ್’ ವ್ಯವಸ್ಥೆಗೆ ಹಿನ್ನಡೆ | ಭಾರತದ ವಿದ್ಯುತ್ ಉತ್ಪಾದನಾ ಗುರಿ, 2047: ಥೋರಿಯಂ ಆಧಾರ | ರಾಜಸ್ಥಾನದ ನೂತನ ಆಸ್ತಿ ಮಸೂದೆ

    ರುಬಿಡಿಯಮ್ ಪರಮಾಣು ಗಡಿಯಾರ ವೈಫಲ್ಯ: ಇಸ್ರೋದ ‘ನಾವಿಕ್’ ವ್ಯವಸ್ಥೆಗೆ ಹಿನ್ನಡೆ

    ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ: 

    • ಭಾರತದ ಸ್ವದೇಶಿ ನೌಕಾಯಾನ ಉಪಗ್ರಹ ವ್ಯವಸ್ಥೆಯಾದ ‘ನಾವಿಕ್’ಗೆ (NavIC) ತೀವ್ರ ಹಿನ್ನಡೆಯಾಗಿದ್ದು, IRNSS-1F ಉಪಗ್ರಹದಲ್ಲಿನ ಏಕೈಕ ಕಾರ್ಯನಿರತ ರುಬಿಡಿಯಮ್ ಪರಮಾಣು ಗಡಿಯಾರವು ವಿಫಲಗೊಂಡಿರುವುದು ಈ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ.

    ನಾವಿಕ್ (NavIC) ಉಪಗ್ರಹ ವ್ಯವಸ್ಥೆಯ ಬಗ್ಗೆ:

    • NavIC ಸಂಪೂರ್ಣ ರೂಪ:- ನಾವಿಗೇಷನ್ ವಿಥ್ ಇಂಡಿಯನ್ ಕಾನ್ಸ್ಟೇಲೇಷನ್ (Navigation with Indian Constellation).
    • ಈ ಉಪಗ್ರಹ ವ್ಯವಸ್ಥೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ISRO) ನಿರ್ಮಿಸಿ, 2013ರಲ್ಲಿ ಉಡಾವಣೆ ಮಾಡಿತು.
    • ಭಾರತದ ಸ್ವಾಯತ್ತ, ಪ್ರಾದೇಶಿಕ ನೌಕಾಯಾನ ಉಪಗ್ರಹ ವ್ಯವಸ್ಥೆಯಾಗಿದೆ:- ಇದು ನಾಗರಿಕ ಮತ್ತು ಸೇನಾ ನೌಕಾಯಾನದ ಅಗತ್ಯತೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ.
    • ನಾವಿಕ್ ಅನ್ನು ಈ ಮೊದಲು ಭಾರತೀಯ ಪ್ರಾದೇಶಿಕ ನೌಕಾಯಾನದ ಉಪಗ್ರಹ ವ್ಯವಸ್ಥೆ (IRNSS– ‘ಇಂಡಿಯನ್ ರೀಜನಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್’) ಎಂದು ಕರೆಯಲಾಗುತ್ತಿತ್ತು. 
    • ಪ್ರಮುಖ ಉದ್ದೇಶ:- ಭಾರತದಾದ್ಯಂತ ಹಾಗೂ ದೇಶದ ಗಡಿಯಿಂದ ಆಚೆಗೆ 1,500 ಕಿ.ಮೀ. ವ್ಯಾಪ್ತಿಯಲ್ಲಿ ನಿಖರವಾದ ಸ್ಥಾನ, ವೇಗ ಮತ್ತು ಸಮಯದ (PVT) ಸೇವೆಗಳನ್ನು ಒದಗಿಸುವುದು. ಈ ಭೌಗೋಳಿಕ ವ್ಯಾಪ್ತಿಯು ನಾವಿಕ್‌ನ ‘ಪ್ರಾಥಮಿಕ ಸೇವಾ ವಲಯ’ ಎನಿಸಿಕೊಂಡಿದೆ.
    • ನಾವಿಕ್ ವ್ಯವಸ್ಥೆಯ ರಚನೆ:- ಈ ವ್ಯವಸ್ಥೆಯು ಒಟ್ಟು 7 ಉಪಗ್ರಹಗಳ ಸಮೂಹವನ್ನು ಒಳಗೊಂಡಿದೆ. ಇದರ ಸುಗಮ ಕಾರ್ಯಾಚರಣೆಗಾಗಿ ದಿನದ 24 ಗಂಟೆಯೂ ನಿರಂತರವಾಗಿ ಕಾರ್ಯನಿರ್ವಹಿಸುವ ‘ಭೂಕೇಂದ್ರಗಳ ಜಾಲ’ವನ್ನು ಸ್ಥಾಪಿಸಲಾಗಿದೆ.
    • ಉಪಗ್ರಹಗಳ ಕಕ್ಷೆ:- ಈ 7 ಉಪಗ್ರಹಗಳ ಪೈಕಿ 3 ಉಪಗ್ರಹಗಳನ್ನು ‘ಭೂಸ್ಥಿರ ಕಕ್ಷೆ’ಯಲ್ಲಿ ನೆಲೆಗೊಳಿಸಲಾಗಿದೆ. ಉಳಿದ 4 ಉಪಗ್ರಹಗಳನ್ನು ‘ವಾಲಿದ ಭೂಸಮಕಾಲಿಕ ಕಕ್ಷೆ’ಯಲ್ಲಿ ಇರಿಸಲಾಗಿದೆ.
    • ಪ್ರಾಮುಖ್ಯತೆ:- ಈ ವ್ಯವಸ್ಥೆಯು ತನ್ನ ಸಂಪೂರ್ಣ ಸೇವಾ ವಲಯದಾದ್ಯಂತ 20 ಮೀಟರ್‌ಗಿಂತಲೂ ಕರಾರುವಕ್ಕಾದ ‘ಸ್ಥಾನಿಕ ನಿಖರತೆ’ಯನ್ನು ಮತ್ತು 40 ನ್ಯಾನೊ-ಸೆಕೆಂಡ್‌ಗಳಿಗಿಂತಲೂ ಅತ್ಯುನ್ನತ ಮಟ್ಟದ ‘ಕಾಲಮಾನದ ನಿಖರತೆ’ಯನ್ನು ಒದಗಿಸುವ ಸಾಮರ್ಥ್ಯ ಹೊಂದಿದೆ.

    ಭಾರತದ ವಿದ್ಯುತ್ ಉತ್ಪಾದನಾ ಗುರಿ, 2047: ಥೋರಿಯಂ ಆಧಾರ

    ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ:

    • ‘ಶಾಂತಿ ಕಾಯ್ದೆ’ (SHANTI Act), 2025 ಭಾರತದ ಪರಮಾಣು ಶಕ್ತಿ ಕಾರ್ಯಕ್ರಮದಲ್ಲಿ ಒಂದು ಐತಿಹಾಸಿಕ ಘಟ್ಟವಾಗಿದೆ. ಆದರೆ, ಥೋರಿಯಂ ಬಳಕೆಯಲ್ಲಿ ಎದುರಾಗುವ ಸವಾಲುಗಳನ್ನು ತುರ್ತಾಗಿ ಪರಿಹರಿಸಬೇಕಾದ ಅಗತ್ಯವಿದೆ.

    ಭಾರತದಲ್ಲಿನ ಥೋರಿಯಂ ನಿಕ್ಷೇಪಗಳು:

    • ಭಾರತವು ವಿಶ್ವದ ಅತಿದೊಡ್ಡ ಥೋರಿಯಂ ನಿಕ್ಷೇಪಗಳನ್ನು ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿದೆ.
    • ದೇಶದ ಒಟ್ಟು ಥೋರಿಯಂ ನಿಕ್ಷೇಪಗಳಲ್ಲಿ ಶೇ 70ರಷ್ಟು ಕೇವಲ ಕೇರಳ ಮತ್ತು ಒಡಿಶಾ ರಾಜ್ಯಗಳಲ್ಲೇ ಲಭ್ಯವಿದೆ.
    • ಭಾರತವು ಮೂರು-ಹಂತದ ಪರಮಾಣು ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸುತ್ತಿದ್ದು, ಥೋರಿಯಂ ಆಧಾರಿತ ರಿಯಾಕ್ಟರ್‌ಗಳು ಈ ಕಾರ್ಯಕ್ರಮದ ಮೂರನೇ ಹಂತದ ನಿರ್ಣಾಯಕ ಭಾಗವಾಗಿವೆ.
    • ಸವಾಲುಗಳು:- ಅದಿರಿನಿಂದ ಥೋರಿಯಂ ಅನ್ನು ಹೊರತೆಗೆಯಲು ಹೆಚ್ಚಿನ ಪ್ರಮಾಣದ ಶಕ್ತಿಯ ಅಗತ್ಯವಿರುತ್ತದೆ ಹಾಗೂ ಇದು ಗಣನೀಯ ಪ್ರಮಾಣದ ತ್ಯಾಜ್ಯವನ್ನು ಸೃಷ್ಟಿಸುತ್ತದೆ. ಜೊತೆಗೆ, ಸುಧಾರಿತ ರಿಯಾಕ್ಟರ್ ತಂತ್ರಜ್ಞಾನದ ಅಗತ್ಯತೆ ಮತ್ತು ಆರ್ಥಿಕ ಕಾರ್ಯಸಾಧ್ಯತೆಯಂತಹ ಸವಾಲುಗಳೂ ಇದರಲ್ಲಿವೆ.

    ಥೋರಿಯಂ ಬಳಕೆಯ ಅಗತ್ಯತೆ:

    • ಆಮದು ಮೇಲಿನ ಅವಲಂಬನೆ ಕಡಿತ:- ಪ್ರಸ್ತುತ ಭಾರತದ ಪರಮಾಣು ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಬೆಳವಣಿಗೆಯು ಆಮದು ಮಾಡಿಕೊಂಡ ಯುರೇನಿಯಂ ಅನ್ನು ಅತಿಯಾಗಿ ಅವಲಂಬಿಸಿದೆ.
    • ದೇಶೀಯ ಯುರೇನಿಯಂ ಅದಿರುಗಳು ಕಳಪೆ ಗುಣಮಟ್ಟದ್ದಾಗಿದ್ದು, ಅವುಗಳನ್ನು ಗಣಿಗಾರಿಕೆ ಮಾಡುವುದು ದುಬಾರಿಯಾಗಿದೆ:- ಆದರೂ, ಇದು ಯುರೇನಿಯಂ ಪೂರೈಕೆಯಲ್ಲಿನ ವ್ಯತ್ಯಯಗಳ ವಿರುದ್ಧ ಸ್ವಲ್ಪಮಟ್ಟಿನ ಭದ್ರತೆಯನ್ನು ಒದಗಿಸುತ್ತದೆ.

    ಭಾರತಕ್ಕೆ ಥೋರಿಯಂನ ಪ್ರಾಮುಖ್ಯತೆ:

    • ಸಂಪನ್ಮೂಲಗಳ ಲಭ್ಯತೆ:- ಭಾರತದಲ್ಲಿ ಯುರೇನಿಯಂ ನಿಕ್ಷೇಪಗಳು ಸೀಮಿತವಾಗಿವೆ. ಆದರೆ ಕರಾವಳಿ ಮತ್ತು ನದಿಪಾತ್ರದ ಮರಳಿನಲ್ಲಿ ಥೋರಿಯಂ ನಿಕ್ಷೇಪಗಳು ಹೇರಳವಾಗಿ ಲಭ್ಯವಿದೆ.
    • ಪರಮಾಣು ವಿದಳನ ಪ್ರಕ್ರಿಯೆ:- ಥೋರಿಯಂ ಧಾತುವಿನ ಗುಣಲಕ್ಷಣಗಳು ಯುರೇನಿಯಂನಂತೆ ನೇರವಾಗಿ ವಿದಳನಶೀಲವಲ್ಲ (non-fissile). ಬದಲಾಗಿ, ಇದು ಒಂದು ಪರಿವರ್ತನಶೀಲ (fertile) ವಸ್ತುವಾಗಿದ್ದು, ನ್ಯೂಟ್ರಾನ್‌ಗಳನ್ನು ಹೀರಿಕೊಂಡ ನಂತರ ‘ಯುರೇನಿಯಂ-233’ ಎಂಬ ವಿದಳನಶೀಲ ಐಸೋಟೋಪ್ ಆಗಿ ಮಾರ್ಪಾಡುಗೊಳ್ಳುತ್ತದೆ. ಈ ರೂಪಾಂತರದ ಬಳಿಕವಷ್ಟೇ ಇದು ಸತತವಾದ ಪರಮಾಣು ವಿದಳನ (Nuclear fission) ಪ್ರಕ್ರಿಯೆಯನ್ನು ಕಾಯ್ದುಕೊಳ್ಳುವ ಸಾಮರ್ಥ್ಯವನ್ನು ಪಡೆಯುತ್ತದೆ.
    • ಕಾರ್ಯತಂತ್ರದ ಹೊಂದಾಣಿಕೆ:- ಇದು ಭಾರತದ ದೀರ್ಘಾವಧಿಯ ‘ಮೂರು-ಹಂತದ ಪರಮಾಣು ವಿದ್ಯುತ್ ಕಾರ್ಯಕ್ರಮ’ಕ್ಕೆ ಅವಿಭಾಜ್ಯ ಅಂಗವಾಗಿದೆ.

    ಭಾರತದ ಮೂರು-ಹಂತದ ಪರಮಾಣು ಕಾರ್ಯಕ್ರಮ:

    • ಭಾರತವು 1948ರಲ್ಲಿ ಪರಮಾಣು ಶಕ್ತಿ ಆಯೋಗವನ್ನು ಸ್ಥಾಪಿಸಿತು.
    • ‘ಅಪ್ಸರಾ’:- 1956ರಲ್ಲಿ ಟ್ರಾಂಬೆಯಲ್ಲಿರುವ ಭಾಭಾ ಅಣು ಸಂಶೋಧನಾ ಕೇಂದ್ರದಲ್ಲಿ (BARC) ಏಷ್ಯಾದ ಮೊಟ್ಟಮೊದಲ ಸಂಶೋಧನಾ ರಿಯಾಕ್ಟರ್ ‘ಅಪ್ಸರಾ’ ಕಾರ್ಯಾರಂಭ ಮಾಡಿತು.
    • ಭಾರತದ ಪರಮಾಣು ಕಾರ್ಯಕ್ರಮದ ಪಿತಾಮಹ ಡಾ. ಹೋಮಿ ಜೆ. ಭಾಭಾ ಅವರು ಭಾರತದ ಅಣುಶಕ್ತಿ ಕಾರ್ಯಕ್ರಮದ ಮೂರು ಹಂತಗಳನ್ನು ರೂಪಿಸಿದರು. ಅವುಗಳೆಂದರೆ:
      1. ಮೊದಲನೇ ಹಂತ:- ಒತ್ತಡದ ಭಾರಜಲ ರಿಯಾಕ್ಟರ್‌ಗಳು (PHWRs).
      2. ಎರಡನೇ ಹಂತ:- ಫಾಸ್ಟ್ ಬ್ರೀಡರ್ ರಿಯಾಕ್ಟರ್‌ಗಳು (FBRs).
      3. ಮೂರನೇ ಹಂತ:- ಸುಧಾರಿತ ಭಾರಜಲ ರಿಯಾಕ್ಟರ್‌ಗಳು (AHWRs).

    ಗಮನಿಸಿ:- ಜಪಾನ್‌ನ ನಂತರ ಏಷ್ಯಾದಲ್ಲಿ ಪರಮಾಣು ವಿದ್ಯುತ್ ಸ್ಥಾವರವನ್ನು ನಿರ್ಮಿಸಿದ ಎರಡನೇ ರಾಷ್ಟ್ರ ಭಾರತ. ಚೀನಾಕ್ಕಿಂತಲೂ ಮುಂಚಿತವಾಗಿ 1969ರಲ್ಲೇ ಭಾರತವು ಮಹಾರಾಷ್ಟ್ರದ ತಾರಾಪುರದಲ್ಲಿ ಪರಮಾಣು ವಿದ್ಯುತ್ ಸ್ಥಾವರವನ್ನು ನಿರ್ಮಿಸಿತು.

    ರಾಜಸ್ಥಾನದ ನೂತನ ಆಸ್ತಿ ಮಸೂದೆ

    ರಾಜಕೀಯ ಮತ್ತು ಆಡಳಿತ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ರಾಜಸ್ಥಾನ ಶಾಸನಸಭೆಯು ‘ಅಶಾಂತ ಪ್ರದೇಶಗಳಲ್ಲಿನ ಸ್ಥಿರಾಸ್ತಿ ವರ್ಗಾವಣೆ ನಿಷೇಧ ಮಸೂದೆ’ಯನ್ನು ಅಂಗೀಕರಿಸಿದೆ. 
    • ಗುಜರಾತ ನಂತರ ಇಂತಹ ಕಠಿಣ ಮಾಸೂದೆಯನ್ನು ಜಾರಿಗೆ ತಂದ ದೇಶದ ಎರಡನೇ ರಾಜ್ಯವಾಗಿ ರಾಜಸ್ಥಾನ ಹೊರಹೊಮ್ಮಿದೆ.

    ಈ ಮಸೂದೆಯ ಪ್ರಮುಖ ಅಂಶಗಳು:

    • ಪ್ರಮುಖ ಉದ್ದೇಶ:- ಸರ್ಕಾರವು “ಅಶಾಂತ” (Disturbed) ಎಂದು ಘೋಷಿಸುವ ಸೂಕ್ಷ್ಮ ಪ್ರದೇಶಗಳಲ್ಲಿ ನಡೆಯುವ ಚಿರಾಸ್ತಿ ವಹಿವಾಟುಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವುದು.
    • ಪ್ರಸ್ತಾವಿತ ಮಸೂದೆಯ ಸೆಕ್ಷನ್ 3(1,2) ರ ಪ್ರಕಾರ, ಯಾವುದೇ ಪ್ರದೇಶದಲ್ಲಿ ಕೋಮು ಗಲಭೆ ಅಥವಾ ಸಾರ್ವಜನಿಕ ಅಶಾಂತಿ ಉಂಟಾಗುವ ಸಾಧ್ಯತೆಗಳಿದ್ದರೆ, ಅಂತಹ ಪ್ರದೇಶವನ್ನು ‘ಅಶಾಂತ ಪ್ರದೇಶ’ ಎಂದು ಘೋಷಿಸುವ ಅಧಿಕಾರವನ್ನು ರಾಜ್ಯ ಸರ್ಕಾರವು ಹೊಂದಿದೆ.
    • ಒಮ್ಮೆ ಯಾವುದೇ ಪ್ರದೇಶವನ್ನು ಅಶಾಂತ ಪ್ರದೇಶವೆಂದು ಅಧಿಸೂಚಿಸಿದರೆ, ಅಲ್ಲಿ ಭೂಮಿ, ಮನೆ ಅಥವಾ ವಾಣಿಜ್ಯ ಮಳಿಗೆಗಳಂತಹ ಯಾವುದೇ ಸ್ಥಿರಾಸ್ತಿಯನ್ನು ವರ್ಗಾಯಿಸಲು ಜಿಲ್ಲಾ ದಂಡಾಧಿಕಾರಿಯ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ.
    • ಜಿಲ್ಲಾ ದಂಡಾಧಿಕಾರಿಯ ಅನುಮತಿಯಿಲ್ಲದೆ ನಡೆಸುವ ಎಲ್ಲಾ ಚಿರಾಸ್ತಿ ವಹಿವಾಟುಗಳು ಕಾನೂನುಬಾಹಿರ ಎನಿಸಿಕೊಳ್ಳುತ್ತವೆ.
    • ಅಷ್ಟೇ ಅಲ್ಲದೆ, ನಿಯಮಗಳನ್ನು ಉಲ್ಲಂಘಿಸಿ ಚಿರಾಸ್ತಿ ವರ್ಗಾವಣೆ ಮಾಡಿದರೆ, ಅದಕ್ಕೆ ಕಾರಣರಾದವರ ವಿರುದ್ಧ ಕಠಿಣ ದಂಡ ವಿಧಿಸಲು ಈ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
    • “ಕಾನೂನಿನ ಮುಂದೆ ಎಲ್ಲರೂ ಸಮಾನರು” ಎಂಬುದನ್ನು ಖಾತರಿಪಡಿಸುವ ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗುವ ಸಾಧ್ಯತೆಗಳ ಬಗ್ಗೆ ಕಾನೂನು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

    ನಿಮಗಿದು ಗೊತ್ತೇ?

    • 44ನೇ ಸಂವಿಧಾನ ತಿದ್ದುಪಡಿ ಕಾಯ್ದೆ, 1978 ರ ಮೂಲಕ ‘ಆಸ್ತಿಯ ಹಕ್ಕನ್ನು’ ಮೂಲಭೂತ ಹಕ್ಕುಗಳ ಪಟ್ಟಿಯಿಂದ ತೆಗೆದು ಹಾಕಲಾಗಿದೆ.
    • ಪ್ರಸ್ತುತ, ಇದು ಸಂವಿಧಾನದ 300A ವಿಧಿಯ ಅಡಿಯಲ್ಲಿ ಕೇವಲ ‘ಕಾನೂನಾತ್ಮಕ ಹಕ್ಕು’ ಆಗಿ ರಕ್ಷಿಸಲ್ಪಟ್ಟಿದೆ.
    • ಕಾನೂನಿನ ಅಧಿಕಾರವಿಲ್ಲದೆ ಯಾವುದೇ ವ್ಯಕ್ತಿಯನ್ನು ಆತನ ಆಸ್ತಿಯ ಹಕ್ಕಿನಿಂದ ವಂಚಿತಗೊಳಿಸುವಂತಿಲ್ಲ ಎಂದು ಈ ವಿಧಿ ಸ್ಪಷ್ಟಪಡಿಸುತ್ತದೆ.
  • ಕರ್ನಾಟಕ ಎಲೆಕ್ಟ್ರಿಕ್ ಬಸ್ ಕಾರ್ಯಕ್ರಮ (KEBP)

    ಕರ್ನಾಟಕ ಎಲೆಕ್ಟ್ರಿಕ್ ಬಸ್ ಕಾರ್ಯಕ್ರಮ (KEBP)

    ಇದೀಗ ಸುದ್ದಿಯಲ್ಲಿದೆ:

    • ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಆಧುನೀಕರಿಸುವ ಉದ್ದೇಶದಿಂದ, ಕರ್ನಾಟಕ ಸರ್ಕಾರವು ತನ್ನ 2026-27ನೇ ಸಾಲಿನ ರಾಜ್ಯ ಮುಂಗಡ ಪತ್ರದಲ್ಲಿ ವಿಶ್ವಬ್ಯಾಂಕ್ ನೆರವಿನೊಂದಿಗೆ ₹2,000 ಕೋಟಿ ವೆಚ್ಚದ ಎಲೆಕ್ಟ್ರಿಕ್ ಬಸ್ ಕಾರ್ಯಕ್ರಮವನ್ನು ಘೋಷಿಸಿದೆ.

    ಕರ್ನಾಟಕ ಎಲೆಕ್ಟ್ರಿಕ್ ಬಸ್ ಕಾರ್ಯಕ್ರಮದ (KEBP) ಪ್ರಮುಖಾಂಶಗಳು:

    • ಈ ಉಪಕ್ರಮವು, ರಾಜ್ಯದ ರಸ್ತೆ ಸಾರಿಗೆ ನಿಗಮಗಳಿಗೆ ಹೊಸದಾಗಿ 4,000 ಎಲೆಕ್ಟ್ರಿಕ್ ಬಸ್‌ಗಳನ್ನು ಸೇರ್ಪಡೆಗೊಳಿಸುವ ಮತ್ತು 94 ಚಾರ್ಜಿಂಗ್ ಡಿಪೋಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.
    • ಸಾರಿಗೆ ಸಾಮರ್ಥ್ಯ ವಿಸ್ತರಣೆ:- ಈ ಉಪಕ್ರಮವು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಸೇರಿದಂತೆ ರಾಜ್ಯದ ಇತರ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ ಸೇವೆಗಳನ್ನು ಮೇಲ್ದರ್ಜೆಗೇರಿಸುವ ಗುರಿಯನ್ನು ಹೊಂದಿದೆ.
    • ಮೂಲಸೌಕರ್ಯ ಅಭಿವೃದ್ಧಿ:- ಈ ಕಾರ್ಯಕ್ರಮದ ಅಡಿಯಲ್ಲಿ BMTC ಗಾಗಿ 32 ಎಲೆಕ್ಟ್ರಿಕ್ ಬಸ್ ಡಿಪೋಗಳನ್ನು ಹಾಗೂ ಇತರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಿಗಾಗಿ 62 ಡಿಪೋಗಳನ್ನು ನಿರ್ಮಿಸಲಾಗುತ್ತದೆ.
    • ಗ್ರಾಮೀಣ ಪ್ರದೇಶಗಳಿಗೆ ಆದ್ಯತೆ:- ಅಂದಾಜು 1,950 ಎಲೆಕ್ಟ್ರಿಕ್ ಬಸ್‌ಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಸಾರಿಗೆ ಸಂಪರ್ಕವನ್ನು ಸುಧಾರಿಸಲು ವಿಶೇಷವಾಗಿ ಮೀಸಲಿಡಲಾಗುತ್ತದೆ.
    • ಮುಖ್ಯ ಉದ್ದೇಶಗಳು:- ರಾಜ್ಯದಾದ್ಯಂತ ವಾಯು ಮಾಲಿನ್ಯವನ್ನು ತಗ್ಗಿಸುವುದು, ಇಂಧನ ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ಸಾರ್ವಜನಿಕ ಸಾರಿಗೆ ಸಂಪರ್ಕವನ್ನು ಉತ್ತಮಗೊಳಿಸುವುದು.
  • ದಂಡಿ ಯಾತ್ರೆ | ಇರಾನಿನ ಕರುಣ್ ನದಿಯಲ್ಲಿ ‘ಬುಲ್ ಶಾರ್ಕ್’ ಪತ್ತೆ | ಕೊಲ್ಲಿ ರಾಷ್ಟ್ರಗಳ ಮೇಲೆ ಇರಾನ್ ದಾಳಿ: ವಿಶ್ವಸಂಸ್ಥೆ ಭದ್ರತಾ ಮಂಡಳಿ ಖಂಡನೆ | ನೇರಳೆ ಆಲೂಗಡ್ಡೆ | ಅಸ್ಸಾಂನ ಜಿಐ-ಮಾನ್ಯತೆ ಪಡೆದ ‘ಜೋಹಾ’ ಅಕ್ಕಿ | ಆಪರೇಷನ್ ವೈಟ್ ಹ್ಯಾಮರ್ | ಆಪರೇಷನ್ “ಸಾಗರ್ ಬಂಧು” ಕಾರ್ಯಾಚರಣೆ

    ದಂಡಿ ಯಾತ್ರೆ

    ಇತಿಹಾಸ

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚಿಗೆ, ಭಾರತದ ಉಪರಾಷ್ಟ್ರಪತಿಯವರು ಮಹಾತ್ಮ ಗಾಂಧೀಜಿ ಮತ್ತು 1930ರ ದಂಡಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ನಮನ ಸಲ್ಲಿಸಿದರು.

    ದಂಡಿ ಯಾತ್ರೆಯ ಬಗ್ಗೆ:

    • ಹಿನ್ನೆಲೆ:- ಬ್ರಿಟಿಷ್ ವಸಾಹತುಶಾಹಿ ಸರ್ಕಾರವು ಉಪ್ಪಿನ ಉತ್ಪಾದನೆ ಮತ್ತು ಮಾರಾಟದ ಮೇಲೆ ಏಕಸ್ವಾಮ್ಯ ಸಾಧಿಸಿತ್ತು ಹಾಗೂ ಅದರ ಮೇಲೆ ಕಠಿಣ ತೆರಿಗೆ ವಿಧಿಸಿತ್ತು. ಇದರಿಂದಾಗಿ ಭಾರತೀಯರಿಗೆ ಈ ಅತ್ಯಗತ್ಯ ದಿನಬಳಕೆಯ ವಸ್ತು ಕೂಡ 
    • ದುಬಾರಿಯಾಗಿತ್ತು.
    • ಉಪ್ಪು ಪ್ರತಿಯೊಬ್ಬರ ಆಹಾರದ ಅತ್ಯಗತ್ಯ ವಸ್ತುವಾಗಿದೆ. ಹೀಗಾಗಿ ಇದರ ಮೇಲೆ ತೆರಿಗೆ ವಿಧಿಸುವುದು ಪಾಪದ ಕೆಲಸ ಎಂದು ಖಂಡಿಸಿದ ಗಾಂಧೀಜಿಯವರು, ಈ ಕರಾಳ ಕಾನೂನನ್ನು ಮುರಿಯಲು 1930ರಲ್ಲಿ ಪಾದಯಾತ್ರೆಯನ್ನು ನಡೆಸುವುದಾಗಿ ಘೋಷಿಸಿದರು.
    • ಗಾಂಧೀಜಿಯವರು ತಮ್ಮ 78 ಅನುಯಾಯಿಗಳೊಂದಿಗೆ 1930ರ ಮಾರ್ಚ್ 12ರಂದು ಸಾಬರಮತಿ ಆಶ್ರಮದಿಂದ ‘ಉಪ್ಪಿನ ಸತ್ಯಾಗ್ರಹ’ವನ್ನು ಪ್ರಾರಂಭಿಸಿದರು. ಸತತ 24 ದಿನಗಳ ಪಾದಯಾತ್ರೆಯ ನಂತರ ಏಪ್ರಿಲ್ 6ರಂದು ಅವರು ದಂಡಿಯನ್ನು ತಲುಪಿದರು.
    • ಸಮುದ್ರ ತೀರದಲ್ಲಿ ನೈಸರ್ಗಿಕವಾಗಿ ದೊರೆಯುವ ಉಪ್ಪನ್ನು ಕೈಗೆತ್ತಿಕೊಳ್ಳುವ ಮೂಲಕ ಹಾಗೂ ಸಮುದ್ರದ ನೀರನ್ನು ಕುದಿಸಿ ಉಪ್ಪನ್ನು ತಯಾರಿಸುವ ಮೂಲಕ ಅವರು ಬ್ರಿಟಿಷರ ವಿಧಿಸಿದ ಉಪ್ಪಿನ ಮೇಲಿನ ತೆರಿಗೆ ಕಾನೂನನ್ನು ಮುರಿದರು.
    • ದಂಡಿ ಯಾತ್ರೆಯು ದೇಶಾದ್ಯಂತ ‘ಕಾನೂನುಭಂಗ ಚಳವಳಿಗೆ’ ನಾಂದಿ ಹಾಡಿತು.
    • ಈ ಐತಿಹಾಸಿಕ ಯಾತ್ರೆಯು ದೇಶದ ವಿವಿಧೆಡೆ ಇದೇ ರೀತಿಯ ಪ್ರತಿಭಟನೆಗಳಿಗೆ ಸ್ಫೂರ್ತಿ ನೀಡಿತು. ತಮಿಳುನಾಡಿನಲ್ಲಿ ಸಿ. ರಾಜಗೋಪಾಲಾಚಾರಿ ಹಾಗೂ ಕೇರಳದಲ್ಲಿ ‘ಕೇರಳ ಗಾಂಧಿ’ ಎಂದೇ ಖ್ಯಾತರಾದ ಕೆ. ಕೇಳಪ್ಪನ್ ಅವರ ನೇತೃತ್ವದಲ್ಲಿ ಉಪ್ಪಿನ ಸತ್ಯಾಗ್ರಹಗಳು ನಡೆದವು.
    • ಗಾಂಧೀಜಿಯವರ ಬಂಧನದ ನಂತರ, 1930ರ ಮೇ 21ರಂದು ಸರೋಜಿನಿ ನಾಯ್ಡು ಮತ್ತು ಗಾಂಧೀಜಿ ಅವರ ಮಗ ಮಣಿಲಾಲ ಅವರು ಗುಜರಾತಿನ ಧರಸನಾ ಉಪ್ಪಿನ ಕಾರ್ಖಾನೆಯ ಬಳಿ ಅಹಿಂಸಾತ್ಮಕ ಪ್ರತಿಭಟನೆಯನ್ನು ಯಶಸ್ವಿಯಾಗಿ ಮುನ್ನಡೆಸಿದರು.

    ಇರಾನಿನ ಕರುಣ್ ನದಿಯಲ್ಲಿ ‘ಬುಲ್ ಶಾರ್ಕ್’ ಪತ್ತೆ

    ಭೂಗೋಳ

    ಇದೀಗ ಸುದ್ದಿಯಲ್ಲಿದೆ:

    • ಅಸಾಮಾನ್ಯ ವನ್ಯಜೀವಿ ಆವಾಸಸ್ಥಾನಗಳ ಕುರಿತಾದ ಇತ್ತೀಚಿನ ಚರ್ಚೆಗಳು, ಇರಾನಿನ ಅಹ್ವಾಜ್ ನಗರದ ಬಳಿ ಹರಿಯುವ ಕರುಣ್ ನದಿಯಲ್ಲಿ ‘ಬುಲ್ ಶಾರ್ಕ್’ಗಳ ಇರುವಿಕೆಯನ್ನು ಬಹಿರಂಗಪಡಿಸಿವೆ.

    ಬುಲ್ ಶಾರ್ಕ್‌ಗಳ ಬಗ್ಗೆ:

    • ವೈಜ್ಞಾನಿಕ ಹೆಸರು:- ಚರ್ಚಾರ್ಹಿನುಸ್ ಲುಕಾಸ್ (Carcharhinus leucas)
    • ಲಕ್ಷಣಗಳು:- ಉಪ್ಪುನೀರು ಮತ್ತು ಸಿಹಿನೀರು ಎರಡರಲ್ಲೂ ವಾಸಿಸಬಲ್ಲ ಸಾಮರ್ಥ್ಯ ಹೊಂದಿರುವ ವಿಶ್ವದ ಕೆಲವೇ ಶಾರ್ಕ್ ಪ್ರಭೇದಗಳಲ್ಲಿ ಬುಲ್ ಶಾರ್ಕ್‌ಗಳು ಕೂಡ ಸೇರಿವೆ.
    • ಜಲ-ಉಪ್ಪು ಸಮತೋಲನ ನಿಯಂತ್ರಣ (‘ಆಸ್ಮೋ ರೇಗ್ಯುಲೇಶನ್’) ಕಾರ್ಯ ವಿಧಾನಗಳನ್ನು ಹೊಂದಿವೆ:- ಅವು ತಮ್ಮ ದೇಹದಲ್ಲಿನ ಉಪ್ಪಿನ ಸಾಂದ್ರತೆಯನ್ನು ನಿಯಂತ್ರಿಸಲು ನೆರವಾಗುವ ಈ ವಿಶಿಷ್ಟವಾದ ವ್ಯವಸ್ಥೆಯನ್ನು ಹೊಂದಿವೆ.
    • ಈ ವಿಶಿಷ್ಟ ಜೈವಿಕ ಹೊಂದಾಣಿಕೆಯಿಂದಾಗಿ ಅವು ನದಿ ವ್ಯವಸ್ಥೆಗಳ ಮೂಲಕ ಒಳನಾಡಿನ ಬಹುದೂರದವರೆಗೆ ಸಂಚರಿಸಲು ಸಾಧ್ಯವಾಗುತ್ತದೆ.
    • ಹಂಚಿಕೆ:- ಅಮೆರಿಕದ ಮಿಸ್ಸಿಸ್ಸಿಪ್ಪಿ ನದಿ, ಅಮೆಜಾನ್ ನದಿ, ಜಾಂಬೆಜಿ ನದಿ ಹಾಗೂ ಗಂಗಾ ನದಿ ಸೇರಿದಂತೆ ವಿಶ್ವದ ಪ್ರಮುಖ ನದಿಗಳಲ್ಲಿ ಈ ಬುಲ್ ಶಾರ್ಕ್‌ಗಳು ಪತ್ತೆಯಾಗಿವೆ.
    • ಸಂರಕ್ಷಣಾ ಸ್ಥಿತಿ: IUCN ಕೆಂಪು ಪಟ್ಟಿಯಲ್ಲಿ ಈ ಪ್ರಭೇದವನ್ನು ‘ದುರ್ಬಲ’ (Vu) ಎಂದು ವರ್ಗೀಕರಿಸಲಾಗಿದೆ.

    ಕರುಣ್ ನದಿಯ ಬಗ್ಗೆ:

    • ಇದು ಇರಾನಿನ ಅತಿದೊಡ್ಡ ನದಿಯಾಗಿದ್ದು, ಈ ದೇಶದ ಏಕೈಕ ನೌಕಾಯಾನ ಯೋಗ್ಯ ನದಿಯಾಗಿದೆ.
    • ಈ ನದಿಯು ಝಾಗ್ರೋಸ್ ಪರ್ವತ ಶ್ರೇಣಿಯಲ್ಲಿ ಉಗಮಿಸುತ್ತದೆ.
    • ನೈಋತ್ಯ ಇರಾನ್ ಮೂಲಕ ಹರಿಯುವ ಈ ನದಿಯು, ಅಂತಿಮವಾಗಿ ಟೈಗ್ರಿಸ್ ಮತ್ತು ಯುಫ್ರೆಟಿಸ್ ನದಿಗಳ ಸಂಗಮದಿಂದ ರೂಪುಗೊಂಡ ಷತ್ ಅಲ್-ಅರಬ್ ಜಲಮಾರ್ಗವನ್ನು ಸೇರುತ್ತದೆ.
    • ನಂತರದಲ್ಲಿ ಈ ಜಲಮಾರ್ಗವು ಪರ್ಷಿಯನ್ ಕೊಲ್ಲಿಯನ್ನು ಸೇರುತ್ತದೆ.

    ಕೊಲ್ಲಿ ರಾಷ್ಟ್ರಗಳ ಮೇಲೆ ಇರಾನ್ ದಾಳಿ: ವಿಶ್ವಸಂಸ್ಥೆ ಭದ್ರತಾ ಮಂಡಳಿ ಖಂಡನೆ

    ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ:

    • ಕೊಲ್ಲಿ ಸಹಕಾರ ಮಂಡಳಿಯ (GCC) ಸದಸ್ಯ ರಾಷ್ಟ್ರಗಳು ಮತ್ತು ಜೋರ್ಡಾನ್ ವಿರುದ್ಧ ಇರಾನ್ ನಡೆಸಿದ ದಾಳಿಗಳನ್ನು ಖಂಡಿಸುವ ಮೂಲಕ ಭಾರತವು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ (UNSC) ಬೆಂಬಲವನ್ನು ವ್ಯಕ್ತಪಡಿಸಿ, ಒಂದು ಪ್ರಸ್ತಾವನೆಯನ್ನು ಸಹ-ಪ್ರಾಯೋಜಿಸಿತು.
    • GCC ರಾಷ್ಟ್ರಗಳು ಹಾಗೂ ಜೋರ್ಡಾನ್ ವಿರುದ್ಧ “ಇರಾನ್ ತನ್ನೆಲ್ಲಾ ದಾಳಿಗಳನ್ನು ತಕ್ಷಣವೇ ನಿಲ್ಲಿಸಬೇಕು” ಎಂದು ಭಾರತವು 134 ದೇಶಗಳೊಂದಿಗೆ ಸೇರಿ ಬಲವಾಗಿ ಒತ್ತಾಯಿಸಿದೆ.
    • ಭಾರತವು ವಿಶ್ವಸಂಸ್ಥೆ ಭದ್ರತಾ ಮಂಡಳಿಯ 13 ಸದಸ್ಯ ರಾಷ್ಟ್ರಗಳ ಪರವಾಗಿ ಮತ ಚಲಾಯಿಸುವ ಮೂಲಕ ಈ ನಿರ್ಣಯವನ್ನು ಅಂಗೀಕರಿಸಲಾಯಿತು. ಆದರೆ, ರಷ್ಯಾ ಮತ್ತು ಚೀನಾ ದೇಶಗಳು ಮತದಾನದಿಂದ ಹೊರಗುಳಿದವು.
    • “ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವ ಅಂತರರಾಷ್ಟ್ರೀಯ ನೌಕಾಯಾನಕ್ಕೆ ಅಡ್ಡಿಪಡಿಸುವ ಇರಾನ್‌ನ ಯಾವುದೇ ಕ್ರಮಗಳು ಅಥವಾ ಬೆದರಿಕೆಗಳನ್ನು” ಈ ನಿರ್ಣಯವು ತೀವ್ರವಾಗಿ ಖಂಡಿಸಿದೆ.

    ಕೊಲ್ಲಿ ಸಹಕಾರ ಮಂಡಳಿ (GCC)ಯ ಬಗ್ಗೆ:

    • ಇದು ಅರೇಬಿಯ ಪರ್ಯಾಯ ದ್ವೀಪದ 6 ದೇಶಗಳನ್ನೊಳಗೊಂಡ ಪ್ರಾದೇಶಿಕ, ರಾಜಕೀಯ ಮತ್ತು ಆರ್ಥಿಕ ಒಕ್ಕೂಟವಾಗಿದೆ.
    • ಸದಸ್ಯ ರಾಷ್ಟ್ರಗಳು:- ಬಹ್ರೇನ್, ಕುವೈತ್, ಓಮನ್, ಕತಾರ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (UAE).
    • ಸ್ಥಾಪನೆ:- ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಸಹಿ ಹಾಕಲಾದ ಒಪ್ಪಂದದ ಮೂಲಕ 1981ರ ಮೇ 25ರಂದು ಈ ಮಂಡಳಿಯನ್ನು ಸ್ಥಾಪಿಸಲಾಯಿತು.
    • ಪ್ರಮುಖ ಉದ್ದೇಶ:- ಆರ್ಥಿಕ, ಭದ್ರತೆ, ಸಾಂಸ್ಕೃತಿಕ ಮತ್ತು ಸಾಮಾಜಿಕ ಸಹಕಾರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಸದಸ್ಯ ರಾಷ್ಟ್ರಗಳ ನಡುವೆ ಏಕತೆ ಮತ್ತು ಸಮನ್ವಯತೆಯನ್ನು ಸಾಧಿಸುವುದು.
    • ಪ್ರಧಾನ ಕಚೇರಿ:- ರಿಯಾದ್ (ಸೌದಿ ಅರೇಬಿಯಾ).

    ನೇರಳೆ ಆಲೂಗಡ್ಡೆ

    ಕೃಷಿ

    ಇದೀಗ ಸುದ್ದಿಯಲ್ಲಿದೆ: 

    • ಪಂಜಾಬಿನ ಯುವ ರೈತರೊಬ್ಬರು ಬೊಲಿವಿಯಾದಿಂದ ಆಮದು ಮಾಡಿಕೊಂಡ ಬಿತ್ತನೆ ಗೆಡ್ಡೆಗಳನ್ನು ಬಳಸಿಕೊಂಡು ‘ನೇರಳೆ ಆಲೂಗಡ್ಡೆ’ಯನ್ನು ಯಶಸ್ವಿಯಾಗಿ ಬೆಳೆಯುವ ಮೂಲಕ ಕೃಷಿ ವಲಯದ ಗಮನ ಸೆಳೆದಿದ್ದಾರೆ.

    ‘ನೇರಳೆ ಆಲೂಗಡ್ಡೆ’ಯ ಬಗ್ಗೆ:

    • ದಕ್ಷಿಣ ಅಮೆರಿಕಾದ ‘ಆಂಡಿಯ’ ಪರ್ವತ ಪ್ರದೇಶದಲ್ಲಿ ಪ್ರಮುಖವಾಗಿ ಬೆಳೆಯಲಾಗುತ್ತದೆ:- ಅದರಲ್ಲೂ ವಿಶೇಷವಾಗಿ ಪೆರು ಮತ್ತು ಬೊಲಿವಿಯಾದಲ್ಲಿ ಇದನ್ನು ಬೆಳೆಯಲಾಗುತ್ತದೆ.
    • ನೈಸರ್ಗಿಕ ವರ್ಣದ್ರವ್ಯವನ್ನು ಹೊಂದಿದೆ:- ಈ ಆಲೂಗಡ್ಡೆ ತಳಿಗಳು ಗಾಢ ನೇರಳೆ ಬಣ್ಣದ ಸಿಪ್ಪೆ ಹಾಗೂ ತಿರುಳನ್ನು ಒಳಗೊಂಡಿರುತ್ತವೆ.
    • ‘ಆಂಥೋಸಯಾನಿನ್’:- ಇದರಲ್ಲಿರುವ ಈ ನೈಸರ್ಗಿಕ ಉತ್ಕರ್ಷಣ ನಿರೋಧಕಗಳ ಹೆಚ್ಚಿನ ಸಾಂದ್ರತೆಯೇ ಈ ಗೆಡ್ಡೆಗಳ ಒಳ ಮತ್ತು ಹೊರಗಿನ ಗಾಢ ನೇರಳೆ ಬಣ್ಣಕ್ಕೆ ಪ್ರಮುಖ ಕಾರಣವಾಗಿದೆ.
    • ದಪ್ಪನೆಯ ಸಿಪ್ಪೆಯನ್ನು ಹೊಂದಿದೆ:- ಇದರಿಂದ ಸಾಂಪ್ರದಾಯಿಕ ಆಲೂಗಡ್ಡೆಗಳಿಗಿಂತ ಇವುಗಳ ಸಂಗ್ರಹಣಾ ಅವಧಿ ಹೆಚ್ಚಾಗಿರುತ್ತದೆ ಹಾಗೂ ಬೇಗನೆ ಕೆಡುವುದಿಲ್ಲ ಮತ್ತು ಹಾಳಾಗುವುದಿಲ್ಲ.
    • ಬೆಳೆಯ ಅವಧಿಯು ಸುಮಾರು 90 ರಿಂದ 100 ದಿನಗಳು:- ಸಾಮಾನ್ಯವಾಗಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಇದರ ಬಿತ್ತನೆ ಮಾಡಲಾಗುತ್ತದೆ.
    • ಜೀವಸತ್ವ-ಸಿ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ:- ಇದರಿಂದ ಈ ಆಲೂಗಡ್ಡೆಯು, ಮಧುಮೇಹ ಅಥವಾ ಕೀಲು ನೋವಿನಂತಹ ಸಮಸ್ಯೆಗಳನ್ನು ಹೊಂದಿರುವ ಜನರಿಗೆ ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

    ನಿಮಗಿದು ಗೊತ್ತೆ?

    • ‘ಕುಫ್ರಿ ಜಮುನಿಯಾ’:- ಪ್ರಧಾನಿ ನರೇಂದ್ರ ಮೋದಿ ಅವರು 2024ರಲ್ಲಿ ಭಾರತ ಅಭಿವೃದ್ಧಿಪಡಿಸಿದ ಸ್ಥಳೀಯ ನೇರಳೆ ಆಲೂಗಡ್ಡೆ ತಳಿಯಾದ ‘ಕುಫ್ರಿ ಜಮುನಿಯಾ’ ವನ್ನು ಬಿಡುಗಡೆಗೊಳಿಸಿದರು.

    ಆಲೂಗಡ್ಡೆ ಕೃಷಿಯ ಬಗ್ಗೆ:

    • ಉತ್ಪಾದನೆ ಮತ್ತು ಸೇವಿಸುವಲ್ಲಿ ಎರಡನೇ ಅತಿದೊಡ್ಡ ರಾಷ್ಟ್ರ:- ಭಾರತವು ಚೀನಾದ ನಂತರ ಜಗತ್ತಿನಲ್ಲಿಯೇ ಆಲೂಗಡ್ಡೆಯನ್ನು ಉತ್ಪಾದನೆ ಮತ್ತು ಸೇವಿಸುವಲ್ಲಿ ಎರಡನೇ ಅತಿದೊಡ್ಡ ದೇಶವಾಗಿದೆ. 2020ರ ಅಂಕಿ-ಅಂಶಗಳ ಪ್ರಕಾರ ಭಾರತವು 51.30 ದಶಲಕ್ಷ ಟನ್‌ಗಳಷ್ಟು ಆಲೂಗಡ್ಡೆಯನ್ನು ಉತ್ಪಾದಿಸಿದೆ.
    • ಭಾರತದಲ್ಲಿ ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು, ಬಿಹಾರವು ನಂತರದ ಸ್ಥಾನದಲ್ಲಿದೆ.
    • ರಾಬಿ ಬೆಳೆಯಾಗಿದೆ:- ಆಲೂಗಡ್ಡೆಯು ತಂಪಾದ ಹವಾಮಾನದ ಬೆಳೆಯಾಗಿದೆ. ನೀರು ಸರಾಗವಾಗಿ ಬಸಿದು ಹೋಗುವ ಮರಳು ಮಿಶ್ರಿತ ಗೋಡು ಮಣ್ಣು ಇದರ ಕೃಷಿಗೆ ಅತ್ಯಂತ ಸೂಕ್ತವಾಗಿದೆ.

    ಅಸ್ಸಾಂನ ಜಿಐ-ಮಾನ್ಯತೆ ಪಡೆದ ‘ಜೋಹಾ’ ಅಕ್ಕಿ

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ಭಾರತ ಸರ್ಕಾರವು ಅಸ್ಸಾಂನ ಭೌಗೋಳಿಕ ಸೂಚ್ಯಾಂಕ (GI) ಮಾನ್ಯತೆ ಪಡೆದ ‘ಜೋಹಾ’ ಅಕ್ಕಿಯನ್ನು ಯುನೈಟೆಡ್ ಕಿಂಗ್‌ಡಮ್ ಮತ್ತು ಇಟಲಿಗೆ 25 ಮೆಟ್ರಿಕ್ ಟನ್ ಅಕ್ಕಿಯನ್ನು ರಫ್ತು ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ.

    ಜೋಹಾ ಅಕ್ಕಿಯ ಬಗ್ಗೆ:

    • ಅಸ್ಸಾಂನ ಸುಗಂಧಭರಿತ ಸ್ಥಳೀಯ ಭತ್ತದ ತಳಿಯಾಗಿದೆ:- 2017ರಲ್ಲಿ ಭೌಗೋಳಿಕ ಸೂಚ್ಯಾಂಕ (GI) ಮಾನ್ಯತೆಯನ್ನು ಪಡೆದುಕೊಂಡಿದೆ.
    • ತನ್ನ ವಿಶಿಷ್ಟವಾದ ಪರಿಮಳ, ನಯವಾದ ವಿನ್ಯಾಸ ಮತ್ತು ಅತ್ಯುತ್ತಮ ರುಚಿಗಾಗಿ ಇದು ಜಾಗತಿಕ ಉನ್ನತ ಗುಣಮಟ್ಟದ ಮಾರುಕಟ್ಟೆಗಳಲ್ಲಿ ಅಪಾರ ಮನ್ನಣೆ ಪಡೆಯುತ್ತಿದೆ.
    • ಅಸ್ಸಾಂನ ನಗಾಂವ್, ಬಕ್ಸಾ, ಗೋಲ್ಪಾರಾ, ಶಿವಸಾಗರ್, ಮಜುಲಿ, ಚಿರಂಗ್ ಮತ್ತು ಗೋಲಾಘಾಟ್ ಜಿಲ್ಲೆಗಳು ಜೋಹಾ ಅಕ್ಕಿ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿವೆ.
    • ಈ ಬಲವಾದ ಕೃಷಿ ನೆಲೆಯು ರಫ್ತು ಪ್ರಮಾಣವನ್ನು ಹೆಚ್ಚಿಸಲು ಮತ್ತು ರೈತರ ಆದಾಯವನ್ನು ದ್ವಿಗುಣಗೊಳಿಸಲು ಅತ್ಯುತ್ತಮ ಅವಕಾಶವನ್ನು ಒದಗಿಸಿದೆ.

    ಭೌಗೋಳಿಕ ಸೂಚ್ಯಾಂಕ (GI Tag)ದ ಬಗ್ಗೆ:

    • ವ್ಯಾಖ್ಯಾನ:- ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶ, ಪಟ್ಟಣ ಅಥವಾ ದೇಶದ ಮೂಲಕ್ಕೆ ಸೇರಿದ ವಿಶಿಷ್ಟ ಉತ್ಪನ್ನಗಳಿಗೆ ನೀಡಲಾಗುವ ಅಧಿಕೃತ ಹೆಸರು ಅಥವಾ ಚಿಹ್ನೆ.
    • ನಿರ್ದಿಷ್ಟ ಉತ್ಪನ್ನಗಳಿಗೆ ಅಧಿಕೃತ ಪ್ರಮಾಣೀಕರಣ:- ಭೌಗೋಳಿಕ ಮೂಲದ ಕಾರಣದಿಂದಾಗಿ ನಿರ್ದಿಷ್ಟ ಗುಣಲಕ್ಷಣಗಳನ್ನು ಅಥವಾ ವಿಶಿಷ್ಟ ಖ್ಯಾತಿಯನ್ನು ಹೊಂದಿರುವ ಉತ್ಪನ್ನಗಳಿಗೆ ನೀಡಲಾಗುತ್ತದೆ.
    • ಕೃಷಿ ಉತ್ಪನ್ನಗಳು, ಆಹಾರ ಪದಾರ್ಥಗಳು, ಕರಕುಶಲ ವಸ್ತುಗಳು, ಕೈಗಾರಿಕಾ ಉತ್ಪನ್ನಗಳು ಹಾಗೂ ಮದ್ಯ ಮತ್ತು ಮದ್ಯಸಾರಯುಕ್ತ ಪಾನೀಯಗಳಿಗೆ ಜಿಐ ಟ್ಯಾಗ್‌ಗಳನ್ನು ನೀಡಲಾಗುತ್ತದೆ.
    • ಬೌದ್ಧಿಕ ಆಸ್ತಿ ಹಕ್ಕುಗಳ ವ್ಯಾಪಾರ-ಸಂಬಂಧಿತ ಅಂಶಗಳು (TRIPS):- ಅಂತರರಾಷ್ಟ್ರೀಯ ಮಟ್ಟದಲ್ಲಿ, ಜಿಐ ಅನ್ನು ವಿಶ್ವ ವ್ಯಾಪಾರ ಸಂಘಟನೆಯ (WTO) ‘ಬೌದ್ಧಿಕ ಆಸ್ತಿ ಹಕ್ಕುಗಳ ವ್ಯಾಪಾರ-ಸಂಬಂಧಿತ ಅಂಶಗಳ’ (TRIPS) ಒಪ್ಪಂದವು ನಿಯಂತ್ರಿಸುತ್ತದೆ.
    • ಭಾರತದ ‘ಸರಕುಗಳ ಭೌಗೋಳಿಕ ಸೂಚ್ಯಾಂಕಗಳ (ನೋಂದಣಿ ಮತ್ತು ರಕ್ಷಣೆ) ಕಾಯ್ದೆ-1999’:- ಭಾರತದಲ್ಲಿ ಭೌಗೋಳಿಕ ಸೂಚ್ಯಾಂಕಗಳ ನೋಂದಣಿಯನ್ನು ಈ ಕಾಯ್ದೆಯು ನಿರ್ವಹಿಸುತ್ತದೆ. ಈ ಕಾಯ್ದೆಯು 2003ರ ಸೆಪ್ಟೆಂಬರ್‌ನಿಂದ ಜಾರಿಗೆ ಬಂದಿದೆ.
    • ಡಾರ್ಜಿಲಿಂಗ್ ಚಹಾ:- ಇದು 2004-05ರಲ್ಲಿ ಜಿಐ ಟ್ಯಾಗ್ ಮಾನ್ಯತೆ ಪಡೆದ ಭಾರತದ ಮೊಟ್ಟಮೊದಲ ಉತ್ಪನ್ನವಾಗಿದೆ.

    ಆಪರೇಷನ್ ವೈಟ್ ಹ್ಯಾಮರ್

    ರಕ್ಷಣೆ ಮತ್ತು ಆಂತರಿಕ ಭದ್ರತೆ

    ಇದೀಗ ಸುದ್ದಿಯಲ್ಲಿದೆ: 

    • ಆಪರೇಷನ್ “ವೈಟ್ ಹ್ಯಾಮರ್” ಕಾರ್ಯಾಚರಣೆಯ ಭಾಗವಾಗಿ ಕಂದಾಯ ಗುಪ್ತಚರ ನಿರ್ದೇಶನಾಲಯವು (DRI) ಆಂಧ್ರಪ್ರದೇಶದಲ್ಲಿರುವ ಅಕ್ರಮ ‘ಅಲ್ಪ್ರಾಜೋಲಮ್’ ಉತ್ಪಾದನಾ ಘಟಕದ ಮೇಲೆ ಇತ್ತೀಚೆಗೆ ಕಾರ್ಯಾಚರಣೆ ನಡೆಸಿದೆ.

    ‘ಅಲ್ಪ್ರಾಜೋಲಮ್’ ನ ಬಗ್ಗೆ:

    • ಮನೋವರ್ಧಕ ಪದಾರ್ಥ:- ಇದು ಮಾದಕ ದ್ರವ್ಯಗಳು ಮತ್ತು ಮನೋವರ್ಧಕ ಪದಾರ್ಥಗಳ ಕಾಯ್ದೆ, 1985ರ ಅಡಿಯಲ್ಲಿ ನಿಯಂತ್ರಿಸಲ್ಪಡುತ್ತದೆ.
    • ಬೆಂಜೊಡಿಯಜೆಪೈನ್ ಗುಂಪಿನ ಔಷಧಿಯಾಗಿದೆ:- ಇದನ್ನು ಆತಂಕದ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡಲು ಬಳಸುವ ಔಷಧಿಯಾಗಿದೆ. ಇದನ್ನು ಸಾಮಾನ್ಯವಾಗಿ ಝಾನಾಕ್ಸ್ ಎಂಬ ಬ್ರಾಂಡ್ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ.
    • ಭಾರತವು ಜಗತ್ತಿನ ಅತಿದೊಡ್ಡ ಜೆನೆರಿಕ್ ಔಷಧಿ ಉತ್ಪಾದಕ ರಾಷ್ಟ್ರಗಳಲ್ಲಿ ಒಂದಾಗಿದೆ. ಆದರೆ, ಈ ಬೃಹತ್ ಜಾಲವು ಕೆಲವೊಮ್ಮೆ ಅಕ್ರಮ ಡ್ರಗ್ ವ್ಯಾಪಾರಕ್ಕಾಗಿ ಔಷಧೀಯ ರಾಸಾಯನಿಕಗಳ ದುರ್ಬಳಕೆಗೂ ದಾರಿಮಾಡಿಕೊಡುತ್ತಿದೆ.

    ಭಾರತದಲ್ಲಿನ ಕಾನೂನು ಚೌಕಟ್ಟು:

    • ‘ಮಾದಕ ದ್ರವ್ಯಗಳು ಮತ್ತು ಮನೋವರ್ಧಕ ಪದಾರ್ಥಗಳ ಕಾಯ್ದೆ, 1985 (NDPS Act):- ಈ ಕಾಯ್ದೆಯು ಮಾದಕ ದ್ರವ್ಯಗಳು ಮತ್ತು ಮನೋವರ್ಧಕ ಪದಾರ್ಥಗಳ ಉತ್ಪಾದನೆ, ಸ್ವಾಧೀನ, ಮಾರಾಟ, ಸಾಗಣೆ ಮತ್ತು ಬಳಕೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುತ್ತದೆ.
    • ಔಷಧಿ ಮತ್ತು ಸೌಂದರ್ಯವರ್ಧಕಗಳ ಕಾಯ್ದೆ, 1940:- ಇದು ಭಾರತದಲ್ಲಿ ಔಷಧೀಯ ವಸ್ತುಗಳ ತಯಾರಿಕೆ, ಗುಣಮಟ್ಟ ಕಾಯ್ದುಕೊಳ್ಳುವಿಕೆ ಮತ್ತು ಮಾರಾಟವನ್ನು ನಿಯಂತ್ರಿಸುತ್ತದೆ.

    ಕಂದಾಯ ಗುಪ್ತಚರ ನಿರ್ದೇಶನಾಲಯ (DRI):

    • ಇದು ಭಾರತದ ಪ್ರಮುಖ ಕಳ್ಳಸಾಗಣೆ ವಿರೋಧಿ ಗುಪ್ತಚರ ಸಂಸ್ಥೆಯಾಗಿದೆ.
    • ಇದು ಹಣಕಾಸು ಸಚಿವಾಲಯದ ಕಂದಾಯ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದರ ಪ್ರಧಾನ ಕಚೇರಿಯು ನವದೆಹಲಿಯಲ್ಲಿದೆ.

    ಆಪರೇಷನ್ “ಸಾಗರ್ ಬಂಧು” ಕಾರ್ಯಾಚರಣೆ

    ರಕ್ಷಣೆ

    ಇದೀಗ ಸುದ್ದಿಯಲ್ಲಿದೆ: 

    • ಭಾರತೀಯ ಸೇನೆಯು ‘ಆಪರೇಷನ್ ಸಾಗರ್ ಬಂಧು’ ಕಾರ್ಯಾಚರಣೆಯ ಅಡಿಯಲ್ಲಿ ಶ್ರೀಲಂಕಾದಲ್ಲಿ ಪ್ರಮುಖ ಸೇತುವೆ ನಿರ್ಮಾಣ ಯೋಜನೆಯೊಂದನ್ನು ಪ್ರಾರಂಭಿಸಿದೆ.

    ಯೋಜನೆಯ ಬಗ್ಗೆ :

    • ಈ ನೂತನ ಸೇತುವೆಯು ಶ್ರೀಲಂಕಾದ ರಾಜಧಾನಿ ಕೊಲಂಬೊವನ್ನು, ಚಿಲಾವ್ ಜಿಲ್ಲೆಯ ಮೂಲಕ ಹಾದುಹೋಗುವ ಪ್ರಮುಖ ಕರಾವಳಿ ಸಂಚಾರ ಮಾರ್ಗದ ಪ್ರಮುಖ ಆರ್ಥಿಕ ಕೇಂದ್ರವಾದ ಪುತ್ತಲಂ ನಗರದೊಂದಿಗೆ ಸಂಪರ್ಕಿಸುತ್ತದೆ.
    • ಈ ಯೋಜನೆಯು ಶ್ರೀಲಂಕಾದ ಮೂಲಸೌಕರ್ಯ ಮರುನಿರ್ಮಾಣ ಮತ್ತು ಸಂಪರ್ಕ ವಲಯವನ್ನು ಬೆಂಬಲಿಸುವ ನಿಟ್ಟಿನಲ್ಲಿ ಭಾರತವು ನೀಡುತ್ತಿರುವ ಅತ್ಯುನ್ನತ ಎಂಜಿನಿಯರಿಂಗ್ ನೆರವನ್ನು ಪ್ರತಿಬಿಂಬಿಸುತ್ತದೆ.
    • ನೆಯಿಗ್ಬೌರ್ಹುಡ್ ಫಸ್ಟ್ ಪಾಲಿಸಿ:- ಇದು ಭಾರತದ ‘ನೆರೆಹೊರೆಯವರಿಗೆ ಮೊದಲ ಆದ್ಯತೆ’ ನೀತಿ ಮತ್ತು ವಿಸ್ತೃತ ಪ್ರಾದೇಶಿಕ ಸಹಕಾರ ಉಪಕ್ರಮಗಳಿಗೆ ಸಂಪೂರ್ಣವಾಗಿ ಪೂರಕವಾಗಿದೆ.

    ಹಿನ್ನೆಲೆ:

    • ವಿನಾಶಕಾರಿ ‘ಡಿಟ್ವಾ’ ಚಂಡಮಾರುತವು ಅಪ್ಪಳಿಸಿದ ಬಳಿಕ, ಸಂತ್ರಸ್ತರಿಗೆ ನೆರವಾಗಲು ಪ್ರಥಮ ಸ್ಪಂದಕನಾಗಿ ಭಾರತವು 2025ರ ನವೆಂಬರ್‌ನಲ್ಲಿ ‘ಆಪರೇಷನ್ ಸಾಗರ್ ಬಂಧು’ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.
    • ಶ್ರೀಲಂಕಾಕ್ಕೆ ತ್ವರಿತಗತಿಯಲ್ಲಿ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರವನ್ನು (HADR) ಒದಗಿಸುವುದು ಈ ಕಾರ್ಯಾಚರಣೆಯ ಪ್ರಮುಖ ಉದ್ದೇಶವಾಗಿದೆ.
  • ಕರ್ನಾಟಕ ಡಿಜಿಟಲ್ ಆರ್ಥಿಕತೆ ಮಿಷನ್ (KDEM) ವಾರ್ಷಿಕ ವರದಿ

    ಕರ್ನಾಟಕ ಡಿಜಿಟಲ್ ಆರ್ಥಿಕತೆ ಮಿಷನ್ (KDEM) ವಾರ್ಷಿಕ ವರದಿ

    ಇದೀಗ ಸುದ್ದಿಯಲ್ಲಿದೆ:

    • 2024-25ನೇ ಸಾಲಿನ ಹಣಕಾಸು ವರ್ಷದ ಕರ್ನಾಟಕ ಡಿಜಿಟಲ್ ಆರ್ಥಿಕತೆ ಮಿಷನ್ (KDEM) ವಾರ್ಷಿಕ ವರದಿಯು ರಾಜ್ಯದ ತಂತ್ರಜ್ಞಾನ ವಲಯದಲ್ಲಿನ ಗಮನಾರ್ಹ ವಿಸ್ತರಣೆಯನ್ನು ಎತ್ತಿತೋರಿಸಿದೆ.
    • ನಿರ್ದಿಷ್ಟವಾಗಿ 50 ಹೊಸ ಜಾಗತಿಕ ಸಾಮರ್ಥ್ಯ ಕೇಂದ್ರಗಳ (GCCs) ಸೇರ್ಪಡೆಯನ್ನು ಇದು ಪ್ರಮುಖವಾಗಿ ಉಲ್ಲೇಖಿಸಿದೆ.

    KDEM ವಾರ್ಷಿಕ ವರದಿಯ ಪ್ರಮುಖ ಅಂಶಗಳು:

    • GCC ಹಂಚಿಕೆ:- ಹೊಸದಾಗಿ ಸ್ಥಾಪಿಸಲಾದ 50 GCC ಕೇಂದ್ರಗಳ ಪೈಕಿ 40 GCC ಕೇಂದ್ರಗಳನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಗಿದೆ. ಉಳಿದ 10 GCC ಕೇಂದ್ರಗಳನ್ನು “ಬಿಯಾಂಡ್ ಬೆಂಗಳೂರು” (ಬೆಂಗಳೂರಿನ ಹೊರಗಿನ ಪ್ರದೇಶಗಳು) ವಲಯಗಳಲ್ಲಿ ಸ್ಥಾಪಿಸಲಾಗಿದೆ.
    • ಉದ್ಯೋಗ ಮತ್ತು ಪ್ರತಿಭೆ:- ರಾಜ್ಯದ ಜಾಗತಿಕ ಸಾಮರ್ಥ್ಯ ಕೇಂದ್ರಗಳ (GCC) ಪ್ರತಿಭಾವಂತರ ಸಮೂಹವು 2021 ರಲ್ಲಿದ್ದ 3.5 ಲಕ್ಷದಿಂದ 2024-25 ನೇ ಹಣಕಾಸು ವರ್ಷದಲ್ಲಿ 6.5 ಲಕ್ಷ ವೃತ್ತಿಪರರಿಗೆ ಏರಿಕೆಯಾಗಿದೆ.
    • ನವೋದ್ಯಮಗಳ ಬೆಳವಣಿಗೆ:- ಕರ್ನಾಟಕದಲ್ಲಿ DPIIT-ನೋಂದಾಯಿತ ನವೋದ್ಯಮಗಳ ಸಂಖ್ಯೆ 16,700 ತಲುಪಿದೆ. ಇವುಗಳಲ್ಲಿ 3,300 ಕ್ಕೂ ಹೆಚ್ಚು ನವೋದ್ಯಮಗಳು ಬೆಂಗಳೂರಿನ ಹೊರಗೆ ನೋಂದಣಿಯಾಗಿವೆ.
    • ಮೂಲಸೌಕರ್ಯ:- ವಿಕೇಂದ್ರೀಕೃತ ಬೆಳವಣಿಗೆಯನ್ನು ಬೆಂಬಲಿಸುವ ಉದ್ದೇಶದಿಂದ, “ಬಿಯಾಂಡ್ ಬೆಂಗಳೂರು” ವಲಯಗಳಲ್ಲಿ ಇದೀಗ 1.1 ದಶಲಕ್ಷ ಚದರ ಅಡಿಗೂ ಹೆಚ್ಚು ವಿಸ್ತೀರ್ಣದ ಐಟಿ ಪಾರ್ಕ್ ಮೂಲಸೌಕರ್ಯ ಲಭ್ಯವಿದೆ.
    • ನಿಪುಣ ಕರ್ನಾಟಕ:-ಕೌಶಲ್ಯಾಭಿವೃದ್ಧಿ ಉಪಕ್ರಮದ ಪ್ರಗತಿಯನ್ನು ವರದಿಯು ಉಲ್ಲೇಖಿಸಿದೆ. ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಅಂದಾಜು 10,000 ಫಲಾನುಭವಿಗಳಿಗೆ ತರಬೇತಿ ನೀಡಲು ನಾಲ್ಕು ಕಾರ್ಪೊರೇಟ್ ಪ್ರಸ್ತಾವನೆಗಳನ್ನು ಸರ್ಕಾರ ಅನುಮೋದಿಸಿದೆ.

    ಕರ್ನಾಟಕ ಜಾಗತಿಕ ಸಾಮರ್ಥ್ಯ ಕೇಂದ್ರ (GCC) ನೀತಿ 2024–2029:

    • ಈ ನೀತಿಯನ್ನು ನವೆಂಬರ್ 19, 2024 ರಂದು ಪ್ರಾರಂಭಿಸಲಾಯಿತು.
    • ಇದು ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು (GCCs) ಆಕರ್ಷಿಸಲು ಮತ್ತು ಅವುಗಳ ವಿಸ್ತರಣೆಗೆ ಉತ್ತೇಜನ ನೀಡಲು ರೂಪಿಸಲಾದ ಭಾರತದ ಮೊಟ್ಟಮೊದಲ ಮೀಸಲಾದ ಚೌಕಟ್ಟಾಗಿದೆ.
    • ಉದ್ದೇಶ:- ರಾಜ್ಯದಲ್ಲಿ ಪ್ರಸ್ತುತ ಇರುವ 500 ಕ್ಕೂ ಹೆಚ್ಚು GCC ಗಳನ್ನು 2029 ರ ವೇಳೆಗೆ 1,000 ಕ್ಕೆ ದ್ವಿಗುಣಗೊಳಿಸುವ ಗುರಿಯನ್ನು ಈ ನೀತಿಯು ಹೊಂದಿದೆ. ಆ ಮೂಲಕ $50 ಬಿಲಿಯನ್ ಆರ್ಥಿಕ ಉತ್ಪನ್ನವನ್ನು ಸೃಷ್ಟಿಸುವ ಮತ್ತು 3.5 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿದೆ.
  • ಸಾವಿತ್ರಿಬಾಯಿ ಫುಲೆ | ಕುರುಂಬ ವರ್ಣಚಿತ್ರ ಕಲೆ | ಹಣಕಾಸು ಆರೋಗ್ಯ ಸೂಚ್ಯಂಕ, 2026 | ರಾಷ್ಟ್ರೀಯ ನೌಕಾಯಾನ ಮಂಡಳಿ (NSB) | ಅಂತರರಾಷ್ಟ್ರೀಯ ಇಂಧನ ಸಂಸ್ಥೆ (IEA) | ತೆಹ್ರಾನ್‌ನಲ್ಲಿ ಕಪ್ಪು ಮಳೆ

    ಸಾವಿತ್ರಿಬಾಯಿ ಫುಲೆ

    ಇತಿಹಾಸ

    ಇದೀಗ ಸುದ್ದಿಯಲ್ಲಿದ್ದಾರೆ: 

    • ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಸಾವಿತ್ರಿಬಾಯಿ ಫುಲೆ ಅವರ ಪುಣ್ಯತಿಥಿಯಂದು ಗೌರವ ನಮನ ಸಲ್ಲಿಸಿದರು.

    ಸಾವಿತ್ರಿಬಾಯಿ ಫುಲೆ (1831 – 1897) ಅವರ ಬಗ್ಗೆ:

    • ಇವರು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ನಯಿಗಾಂವ್ ಗ್ರಾಮದಲ್ಲಿ ಜನಿಸಿದರು.
    • ವಿವಾಹ:- 1840 ರಲ್ಲಿ, ತಮ್ಮ 9 ನೇ ವಯಸ್ಸಿನಲ್ಲಿ, ಇವರು 13 ವರ್ಷದ ಜ್ಯೋತಿರಾವ್ ಫುಲೆ ಅವರನ್ನು ವಿವಾಹವಾದರು.
    • ಇವರನ್ನು ಭಾರತದ ಮೊಟ್ಟಮೊದಲ ಮಹಿಳಾ ಶಿಕ್ಷಕಿ ಎಂದು ಅಧಿಕೃತವಾಗಿ ಗುರುತಿಸಲಾಗಿದೆ.
    • ಹೆಣ್ಣುಮಕ್ಕಳಿಗಾಗಿ ದೇಶದ ಮೊದಲ ಶಾಲೆಯನ್ನು ಸ್ಥಾಪಿಸಿದರು:- ಈ ದಂಪತಿಗಳು 1848 ರಲ್ಲಿ, ಪುಣೆಯ ಭಿಡೆವಾಡದಲ್ಲಿ ಸ್ಥಾಪಿಸಿದರು.
    • ‘ಬಾಲಹತ್ಯಾ ಪ್ರತಿಬಂಧಕ ಗೃಹ’ವನ್ನು ಪ್ರಾರಂಭಿಸಿದರು:- ಈ ದಂಪತಿಗಳು 1863 ರಲ್ಲಿ, ಶಿಶುಹತ್ಯೆಯನ್ನು ತಡೆಗಟ್ಟುವ ಉದ್ದೇಶದಿಂದ ಭಾರತದ ಮೊದಲ ಶಿಶು ಆಶ್ರಯ ತಾಣವನ್ನು ಪ್ರಾರಂಭಿಸಿದರು.
    • ಇವರು ಅಂತರ್ಜಾತಿ ವಿವಾಹ ಹಾಗೂ ವಿಧವಾ ಪುನರ್ವಿವಾಹಗಳನ್ನು ಸಕ್ರಿಯವಾಗಿ ಪ್ರತಿಪಾದಿಸಿದರು. ಇದರೊಂದಿಗೆ ಬಾಲ್ಯವಿವಾಹ, ಸತಿ ಪದ್ಧತಿ ಮತ್ತು ವರದಕ್ಷಿಣೆ ಪಿಡುಗಿನ ನಿರ್ಮೂಲನೆ ಸೇರಿದಂತೆ ಅನೇಕ ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡಿದರು.
    • ‘ಸತ್ಯಶೋಧಕ ಸಮಾಜ’ವನ್ನು ಸ್ಥಾಪಿಸಿದರು:- ಫುಲೆ ದಂಪತಿಗಳು 1873 ರಲ್ಲಿ, ಸಮಾಜದಲ್ಲಿ ಸಮಾನತೆಯನ್ನು ತರುವ ಏಕೈಕ ಉದ್ದೇಶದಿಂದ ಸ್ಥಾಪಿಸಿದರು. ಇದು ಜಾತಿ, ಧರ್ಮ ಅಥವಾ ವರ್ಗ ತಾರತಮ್ಯವಿಲ್ಲದೆ ಎಲ್ಲರಿಗೂ ಮುಕ್ತವಾದ ವೇದಿಕೆಯಾಗಿತ್ತು.

    ಸಾಹಿತ್ಯ ಕೃತಿಗಳು:- ಇವರು 1854 ರಲ್ಲಿ ‘ಕಾವ್ಯ ಫುಲೆ’ ಹಾಗೂ 1892 ರಲ್ಲಿ ‘ಬವನ್ ಕಾಶಿ ಸುಬೋಧ್ ರತ್ನಾಕರ್’ ಎಂಬ ಪ್ರಸಿದ್ಧ ಕೃತಿಗಳನ್ನು ರಚಿಸಿದ್ದಾರೆ.

    ಕುರುಂಬ ವರ್ಣಚಿತ್ರ ಕಲೆ

    ಇತಿಹಾಸ / ಸಂಸ್ಕೃತಿ

    ಇದೀಗ ಸುದ್ದಿಯಲ್ಲಿದೆ:

    • ಕುರುಂಬ ವರ್ಣಚಿತ್ರ ಕಲೆಯ ಪ್ರಕಾರವನ್ನು ರೂಢಿಸಿಕೊಂಡಿರುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವ ಕಾರಣ, ಈ ಪರಂಪರೆಯು ಪ್ರಸ್ತುತ ಅಳಿವಿನಂಚಿನಲ್ಲಿದೆ.

    ಕುರುಂಬ ವರ್ಣಚಿತ್ರಗಳ ಬಗ್ಗೆ:

    • ಕುರುಂಬ ಬುಡಕಟ್ಟು ಜನಾಂಗವು ರೂಢಿಸಿಕೊಂಡು ಬಂದಿರುವ ಈ ಕಲೆಯು 3000 ವರ್ಷಗಳಿಗಿಂತಲೂ ಹಳೆಯದಾದ ಇತಿಹಾಸವನ್ನು ಹೊಂದಿದೆ. ಇದು ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿರುವ ‘ಎಳುತುಪಾರೈ’ಯಂತಹ ಶಿಲಾ ಕಲಾ ತಾಣಗಳೊಂದಿಗೆ ನಿಕಟ ಸಂಪರ್ಕ ಹೊಂದಿದೆ.
    • ಕುರುಂಬ ಬುಡಕಟ್ಟು ಜನಾಂಗವನ್ನು ‘ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪು’ (PVTG) ಎಂದು ವರ್ಗೀಕರಿಸಲಾಗಿದೆ.
    • ಮೂಲತಃ ಈ ಚಿತ್ರಗಳನ್ನು ಮನೆ ಮತ್ತು ದೇವಾಲಯಗಳ ಗೋಡೆಗಳ ಮೇಲೆ ಅಥವಾ ಹಬ್ಬಗಳ ಸಂದರ್ಭದಲ್ಲಿ ಬಿಡಿಸಲಾಗುತ್ತಿತ್ತು. ಕಲಾವಿದರು ಮರದ ಅಂಟು ಸೇರಿದಂತೆ ನೈಸರ್ಗಿಕ ಅರಣ್ಯ ಮೂಲಗಳಿಂದ ಈ ವರ್ಣಚಿತ್ರಗಳಿಗೆ ಬೇಕಾದ ಬಣ್ಣಗಳನ್ನು ತಯಾರಿಸಿಕೊಳ್ಳುತ್ತಾರೆ.
    • ಈ ಜಾನಪದ ವರ್ಣಚಿತ್ರಗಳು ಸರಳವಾದ ರೇಖಾಕೃತಿಗಳು, ಚುಕ್ಕೆಗಳು ಮತ್ತು ಜ್ಯಾಮಿತೀಯ ವಿನ್ಯಾಸಗಳನ್ನು ಒಳಗೊಂಡಿರುತ್ತವೆ. ಇವುಗಳ ಮೂಲಕ ಬುಡಕಟ್ಟು ಆಚರಣೆಗಳು, ಹಬ್ಬಗಳು, ಜೇನುತುಪ್ಪ ಬೇಟೆ, ಪ್ರಕೃತಿ, ಪ್ರಾಣಿಗಳು ಹಾಗೂ ದೈನಂದಿನ ಸಮುದಾಯದ ಚಟುವಟಿಕೆಗಳನ್ನು ಚಿತ್ರಿಸಲಾಗುತ್ತದೆ.

    ಹಣಕಾಸು ಆರೋಗ್ಯ ಸೂಚ್ಯಂಕ, 2026

    ರಾಜಕೀಯ ಮತ್ತು ಆಡಳಿತ

    ಇದೀಗ ಸುದ್ದಿಯಲ್ಲಿದೆ:

    • ನೀತಿ ಆಯೋಗವು 2026ನೇ ಸಾಲಿನ ಎರಡನೇ ವಾರ್ಷಿಕ ‘ಹಣಕಾಸು ಆರೋಗ್ಯ ಸೂಚ್ಯಂಕ’ವನ್ನು (FHI) ಬಿಡುಗಡೆ ಮಾಡಿದೆ.

    ಹಣಕಾಸು ಆರೋಗ್ಯ ಸೂಚ್ಯಂಕದ ಬಗ್ಗೆ:

    • ಕಾರ್ಯವ್ಯಾಪ್ತಿ:- ಈ ಸೂಚ್ಯಂಕವು ಭಾರತದಲ್ಲಿನ ವಿವಿಧ ರಾಜ್ಯಗಳ ಆರ್ಥಿಕ ಪರಿಸ್ಥಿತಿ ಅಥವಾ ಹಣಕಾಸಿನ ಆರೋಗ್ಯವನ್ನು ಮೌಲ್ಯಮಾಪನ ಮಾಡುತ್ತದೆ.
    • ಮಾನದಂಡಗಳು:- ವೆಚ್ಚದ ಗುಣಮಟ್ಟ, ಆದಾಯ ಕ್ರೂಢೀಕರಣ, ಆರ್ಥಿಕ ವಿವೇಚನೆ, ಸಾಲದ ಸೂಚ್ಯಂಕ ಮತ್ತು ಸಾಲದ ಸುಸ್ಥಿರತೆ ಮುಂತಾದ ಪ್ರಮುಖ ಮಾನದಂಡಗಳನ್ನು ಆಧರಿಸಿ ಈ ಮೌಲ್ಯಮಾಪನವನ್ನು ಮಾಡಲಾಗುತ್ತದೆ.
    • ದತ್ತಾಂಶ ಮೂಲ:- ಈ ವರದಿಗಾಗಿ ಅಗತ್ಯವಾದ ದತ್ತಾಂಶವನ್ನು ‘ಭಾರತದ ನಿಯಂತ್ರಕರು ಮತ್ತು ಮಹಾಲೇಖಪಾಲರು’ (CAG) ಅವರಿಂದ ಪಡೆಯಲಾಗಿದೆ.

    ಹಣಕಾಸು ಆರೋಗ್ಯ ಸೂಚ್ಯಂಕ, 2026ರ ಪ್ರಮುಖ ಅಂಶಗಳು:

    • ಒಟ್ಟಾರೆ ರಾಜ್ಯಗಳ ಶ್ರೇಯಾಂಕ:- 
    • ಅಗ್ರಸ್ಥಾನ:- ಒಡಿಶಾ ರಾಜ್ಯವು ತನ್ನ ಆರ್ಥಿಕ ಕಾರ್ಯಕ್ಷಮತೆಯನ್ನು ಮತ್ತಷ್ಟು ಸುಧಾರಿಸಿಕೊಳ್ಳುವ ಮೂಲಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ. 
    • ‘ಸಾಧಕ’ (Achiever) ರಾಜ್ಯಗಳು:- ಗೋವಾ ಮತ್ತು ಜಾರ್ಖಂಡ್
    • ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳು ಅಗ್ರ ಐದು ಸ್ಥಾನಗಳಲ್ಲಿ ತಮ್ಮ ಸ್ಥಾನವನ್ನು ಕಾಯ್ದುಕೊಂಡಿವೆ. 
    • ಹರಿಯಾಣ ರಾಜ್ಯವು ಮೂರು ಸ್ಥಾನಗಳಷ್ಟು ಮೇಲೇರುವ ಮೂಲಕ ಗಮನಾರ್ಹ ಸುಧಾರಣೆ ಕಂಡಿದೆ.
    • ಚೇತರಿಕೆ ತೋರಿಸುತ್ತಿರುವ ರಾಜ್ಯಗಳು:- ಬಿಹಾರ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳು ತಮ್ಮ ಆರ್ಥಿಕ ಕಾರ್ಯಕ್ಷಮತೆಯಲ್ಲಿ ಸಾಧಾರಣ ಮಟ್ಟದ ಸುಧಾರಣೆಯನ್ನು ಪ್ರದರ್ಶಿಸಿವೆ.
    • ಕಳಪೆ ಕಾರ್ಯಕ್ಷಮತೆಯ ರಾಜ್ಯಗಳು:- ಪಂಜಾಬ್, ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯಗಳು ಶ್ರೇಯಾಂಕದ ಕೊನೆಯ ಸ್ಥಾನಗಳಲ್ಲಿ ಮುಂದುವರಿದಿದ್ದು, ಇದು ಈ ರಾಜ್ಯಗಳು ಎದುರಿಸುತ್ತಿರುವ ನಿರಂತರ ಆರ್ಥಿಕ ಸಂಕಷ್ಟವನ್ನು ಪ್ರತಿಬಿಂಬಿಸುತ್ತದೆ.
    • ಈಶಾನ್ಯ ಮತ್ತು ಹಿಮಾಲಯ ರಾಜ್ಯಗಳು:- ಇದೇ ಮೊದಲ ಬಾರಿಗೆ ಈ ರಾಜ್ಯಗಳನ್ನು ಪ್ರತ್ಯೇಕವಾಗಿ ಮೌಲ್ಯಮಾಪನ ಮಾಡಲಾಗಿದೆ. ಬಲವಾದ ಆದಾಯದ ಬೆಳವಣಿಗೆಯೊಂದಿಗೆ ಅರುಣಾಚಲ ಪ್ರದೇಶವು ‘ಸಾಧಕ’ ರಾಜ್ಯವಾಗಿ ಅಗ್ರಸ್ಥಾನದಲ್ಲಿದ್ದರೆ, ಉತ್ತರಾಖಂಡ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.

    ರಾಷ್ಟ್ರೀಯ ನೌಕಾಯಾನ ಮಂಡಳಿ (NSB)

    ಆಡಳಿತ

    ಇದೀಗ ಸುದ್ದಿಯಲ್ಲಿದೆ: 

    • ಬದಲಾಗುತ್ತಿರುವ ಜಾಗತಿಕ ಭೂ-ರಾಜಕೀಯ ಸನ್ನಿವೇಶಗಳ ನಡುವೆ ಭಾರತದ ನೌಕಾಯಾನ ವಲಯದಲ್ಲಿ ಎದುರಾಗುತ್ತಿರುವ ಉದಯೋನ್ಮುಖ ಸವಾಲುಗಳನ್ನು ಪರಿಹರಿಸಲು ಕೇಂದ್ರ ಸರ್ಕಾರವು ‘ರಾಷ್ಟ್ರೀಯ ನೌಕಾಯಾನ ಮಂಡಳಿ’ಯೊಂದಿಗೆ (NSB) ಉನ್ನತ ಮಟ್ಟದ ಸಂವಾದವನ್ನು ನಡೆಸಿದೆ.

    ರಾಷ್ಟ್ರೀಯ ನೌಕಾಯಾನ ಮಂಡಳಿಯ (NSB) ಬಗ್ಗೆ:

    • ಭಾರತದ ನೌಕಾಯಾನ ಮತ್ತು ಕಡಲ ಸಂಬಂಧಿತ ವಿಷಯಗಳ ಅತ್ಯುನ್ನತ ಸಲಹಾ ಸಂಸ್ಥೆಯಾಗಿದೆ:- ವಾಣಿಜ್ಯ ನೌಕಾಯಾನ ಕಾಯ್ದೆ, 1958ರ ಸೆಕ್ಷನ್ 23ರ ಅಡಿಯಲ್ಲಿ ಇದನ್ನು ಶಾಸನಬದ್ಧವಾಗಿ ರಚಿಸಲಾಗಿದೆ.
    • ಈ ಮಂಡಳಿಯು ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
    • ಪ್ರಮುಖ ಉದ್ದೇಶ:- ರಾಷ್ಟ್ರೀಯ ನೌಕಾಯಾನ ನೀತಿಗಳು ಮತ್ತು ಕಡಲ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಸೂಕ್ತ ಸಲಹೆಗಳನ್ನು ನೀಡುವುದು.
    • ಈ ಮಂಡಳಿಯ ಅಧ್ಯಕ್ಷರನ್ನು ಕೇಂದ್ರ ಸರ್ಕಾರವು ನೇಮಕ ಮಾಡುತ್ತದೆ.

    ಅಂತರರಾಷ್ಟ್ರೀಯ ಇಂಧನ ಸಂಸ್ಥೆ (IEA)

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ: 

      • ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಗಳನ್ನು ನಿಯಂತ್ರಿಸುವ (ತಗ್ಗಿಸುವ) ಉದ್ದೇಶದಿಂದ ‘ಆಯಕಟ್ಟಿನ ತೈಲ ನಿಕ್ಷೇಪ’ಗಳನ್ನು ಬಳಕೆಗೆ ಮುಕ್ತಗೊಳಿಸಲು (ಮಾರುಕಟ್ಟೆಗೆ ಬಿಡುಗಡೆ ಮಾಡಲು) ‘ಅಂತರರಾಷ್ಟ್ರೀಯ ಇಂಧನ ಸಂಸ್ಥೆಯು (IEA) ಕೈಗೊಂಡಿರುವ ಉಪಕ್ರಮದಲ್ಲಿ ಭಾರತವು ಪಾಲ್ಗೊಳ್ಳುತ್ತಿಲ್ಲ ಎಂದು ಸರ್ಕಾರವು ಸ್ಪಷ್ಟಪಡಿಸಿದೆ.
    • ಭಾರತವು ‘ಅಂತರರಾಷ್ಟ್ರೀಯ ಇಂಧನ ಸಂಸ್ಥೆ’ಯ ಪೂರ್ಣಪ್ರಮಾಣದ ಸದಸ್ಯ ರಾಷ್ಟ್ರವಲ್ಲದ ಕಾರಣ, ಈ ಅಂತರರಾಷ್ಟ್ರೀಯ ಸಂಸ್ಥೆಯ ಆದೇಶವನ್ನು ಕಡ್ಡಾಯವಾಗಿ ಪಾಲಿಸುವ ಯಾವುದೇ ಜವಾಬ್ದಾರಿಯನ್ನು ಭಾರತ ಹೊಂದಿಲ್ಲ.

    ಭಾರತದ ತೈಲ ಆಮದು:

    • ಭಾರತವು ಮೂರನೇ ಅತಿದೊಡ್ಡ ತೈಲ ಆಮದು ಮತ್ತು ಬಳಕೆದಾರ ರಾಷ್ಟ್ರವಾಗಿದೆ:- ಭಾರತವು 5.33 ದಶಲಕ್ಷ ಟನ್ ಸಾಮರ್ಥ್ಯದ ‘ಭೂಗತ ಕಾರ್ಯತಂತ್ರದ ತೈಲ ನಿಕ್ಷೇಪ’ಗಳನ್ನು ಹೊಂದಿದ್ದು, ಪ್ರಸ್ತುತ ಇದು ಶೇ 80 ರಷ್ಟು ಮಾತ್ರ ಭರ್ತಿಯಾಗಿದೆ.
    • ಭಾರತವು ತನ್ನ ಕಚ್ಚಾ ತೈಲದ ಒಟ್ಟು ಅವಶ್ಯಕತೆಯ ಸುಮಾರು ಶೇ 88 ರಷ್ಟನ್ನು ವಿಶ್ವದ 41 ದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ.
    • ಫೆಬ್ರವರಿ ತಿಂಗಳಲ್ಲಿ ಆಮದಾದ ತೈಲ ಪೂರೈಕೆಯ ಒಟ್ಟು ಪ್ರಮಾಣದಲ್ಲಿ ಸುಮಾರು ಅರ್ಧದಷ್ಟು ಭಾಗವು ಆಯಕಟ್ಟಿನ ‘ಹಾರ್ಮುಜ್ ಜಲಸಂಧಿ’ಯ ಮುಖಾಂತರವೇ ಸಾಗಾಣಿಕೆಯಾಗಿದೆ.

    ಅಂತರರಾಷ್ಟ್ರೀಯ ಇಂಧನ ಸಂಸ್ಥೆ (IEA)ಯ ಬಗ್ಗೆ:

    • ಸ್ಥಾಪನೆ:- 1974.
    • ಸಂಸ್ಥಾಪಕ ಸದಸ್ಯ ರಾಷ್ಟ್ರಗಳು:- ಆಸ್ಟ್ರಿಯಾ, ಬೆಲ್ಜಿಯಂ, ಕೆನಡಾ, ಡೆನ್ಮಾರ್ಕ್, ಜರ್ಮನಿ, ಐರ್ಲೆಂಡ್, ಇಟಲಿ, ಜಪಾನ್, ಲಕ್ಸೆಂಬರ್ಗ್, ನೆದರ್ಲ್ಯಾಂಡ್ಸ್, ನಾರ್ವೆ, ಸ್ಪೇನ್, ಸ್ವೀಡನ್, ಸ್ವಿಟ್ಜರ್ಲೆಂಡ್, ಟರ್ಕಿ, ಯುನೈಟೆಡ್ ಕಿಂಗ್‌ಡಮ್ ಮತ್ತು ಅಮೆರಿಕ.
    • ಸ್ಥಾಪನೆಯ ಹಿನ್ನೆಲೆ:- 1970ರ ದಶಕದಲ್ಲಿ ಪ್ರಮುಖ ತೈಲ ರಫ್ತು ಮಾಡುವ ರಾಷ್ಟ್ರಗಳು ತೈಲ ಪೂರೈಕೆಯನ್ನು ತೀವ್ರವಾಗಿ ಕಡಿತಗೊಳಿಸಿದಾಗ, ಕೈಗಾರಿಕೀಕರಣಗೊಂಡ ರಾಷ್ಟ್ರಗಳಲ್ಲಿ ಎದುರಾದ ತೀವ್ರ ಆರ್ಥಿಕ ಅಡಚಣೆಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಈ ಸಂಸ್ಥೆಯನ್ನು ಹುಟ್ಟುಹಾಕಲಾಯಿತು.
    • ಮೂಲ ಉದ್ದೇಶ:- ಜಾಗತಿಕ ತೈಲ ಪೂರೈಕೆಯನ್ನು ಸ್ಥಿರವಾಗಿರಿಸುವುದು ಹಾಗೂ ಸಕಾಲಿಕ ಕ್ರಮಗಳ ಮೂಲಕ ಭವಿಷ್ಯದಲ್ಲಿ ಎದುರಾಗಬಹುದಾದ ಸಂಭವನೀಯ ಅಡಚಣೆಗಳನ್ನು ನಿರೀಕ್ಷಿಸಿ ತಡೆಯುವುದು.
    • ಸದಸ್ಯತ್ವ:- ಈ ಸಂಸ್ಥೆಯ ಸದಸ್ಯತ್ವವನ್ನು ಕೇವಲ ‘ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ’ಯ (OECD) ರಾಷ್ಟ್ರಗಳಿಗೆ ಮಾತ್ರ ಮುಕ್ತವಾಗಿಡಲಾಗಿತ್ತು. 
    • ಪ್ರಸ್ತುತ ಇದು 33 ಪೂರ್ಣಪ್ರಮಾಣದ ಸದಸ್ಯ ರಾಷ್ಟ್ರಗಳನ್ನು ಹೊಂದಿದ್ದು, ಇತ್ತೀಚಿಗೆ ‘ಕೊಲಂಬಿಯಾ’ ದೇಶವನ್ನು 33ನೇ ಸದಸ್ಯ ರಾಷ್ಟ್ರವಾಗಿ ಅಧಿಕೃತವಾಗಿ ಸೇರ್ಪಡೆಗೊಳಿಸಲಾಗಿದೆ.
    • ಪ್ರಸ್ತುತ 13 ಸಹವರ್ತಿ ಸದಸ್ಯ ರಾಷ್ಟ್ರಗಳು:- 2015 ರಲ್ಲಿ, OECD-ಯೇತರ ರಾಷ್ಟ್ರಗಳಿಗೂ ಸಹವರ್ತಿ ಸದಸ್ಯರಾಗಲು IEA ಮುಕ್ತಗೊಳಿಸಿತು. 
    • ಭಾರತವು 2017 ರಲ್ಲಿ ಇದರ ಸಹವರ್ತಿ ಸದಸ್ಯತ್ವವನ್ನು ಪಡೆದುಕೊಂಡಿತು.
    • ಸಹವರ್ತಿ ಸದಸ್ಯರು ನೀತಿ ನಿರೂಪಣೆಯ ಚರ್ಚೆಗಳು ಮತ್ತು ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು, ಆದರೆ ಅವರಿಗೆ ಯಾವುದೇ ನಿರ್ಧಾರಗಳನ್ನು ಕೈಗೊಳ್ಳುವ (ಮತದಾನದ) ಹಕ್ಕು ಇರುವುದಿಲ್ಲ.

    ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (OECD)ಯ ಬಗ್ಗೆ:

    • ಇದೊಂದು ಅಂತರ್‌-ಸರ್ಕಾರಿ ಸಂಸ್ಥೆಯಾಗಿದ್ದು, ಜಾಗತಿಕವಾಗಿ ಆರ್ಥಿಕ ಅಭಿವೃದ್ಧಿ, ನೀತಿ ಸಮನ್ವಯ ಮತ್ತು ಜಾಗತಿಕ ಸಹಕಾರವನ್ನು ಉತ್ತೇಜಿಸುವ ಕಾರ್ಯ ಮಾಡುತ್ತದೆ.
    • ಧ್ಯೇಯವಾಕ್ಯ:- “ಉತ್ತಮ ಬದುಕಿಗಾಗಿ ಉತ್ತಮ ನೀತಿಗಳು”.
    • ಸ್ಥಾಪನೆ:- ‘ಐರೋಪ್ಯ ಆರ್ಥಿಕ ಸಹಕಾರ ಸಂಸ್ಥೆ’ಯ (OEEC) ಉತ್ತರಾಧಿಕಾರಿಯಾಗಿ 1961 ರಲ್ಲಿ ಇದನ್ನು ಸ್ಥಾಪಿಸಲಾಯಿತು.
    • ಕೇಂದ್ರ ಕಚೇರಿ:- ಪ್ಯಾರಿಸ್ (ಫ್ರಾನ್ಸ್).
    • ಸದಸ್ಯತ್ವ:- ಪ್ರಸ್ತುತ ಇದು 38 ಸದಸ್ಯ ರಾಷ್ಟ್ರಗಳನ್ನು, ಮುಖ್ಯವಾಗಿ ಅಭಿವೃದ್ಧಿ ಹೊಂದಿದ ಆರ್ಥಿಕತೆಯ ರಾಷ್ಟ್ರಗಳು ಹೊಂದಿದೆ. 
    • ಭಾರತವು ಈ ಸಂಸ್ಥೆಯ ಸದಸ್ಯ ರಾಷ್ಟ್ರವಲ್ಲ.

    ತೆಹ್ರಾನ್‌ನಲ್ಲಿ ಕಪ್ಪು ಮಳೆ

    ಪರಿಸರ

    ಇದೀಗ ಸುದ್ದಿಯಲ್ಲಿದೆ:

    • ತೈಲ ನೆಲೆಗಳ ಮೇಲಿನ ದಾಳಿಯ ಬೆನ್ನಲ್ಲೇ ಇರಾನಿನ ರಾಜಧಾನಿ ತೆಹ್ರಾನ್‌ನಲ್ಲಿ “ಕಪ್ಪು ಮಳೆ” ಹಾಗೂ ತೀವ್ರ ಪ್ರಮಾಣದ ವಿಷಕಾರಿ ವಾಯುಮಾಲಿನ್ಯ ಉಂಟಾಗುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಕೆ ನೀಡಿದೆ.

    ಕಪ್ಪು ಮಳೆ (Black Rain) ಎಂದರೇನು?

    • ಬೃಹತ್ ಅಗ್ನಿ ಅನಾಹುತಗಳು ಅಥವಾ ಸ್ಫೋಟಗಳ ನಂತರ ವಾತಾವರಣಕ್ಕೆ ಬಿಡುಗಡೆಯಾಗುವ ಮಸಿ, ಬೂದಿ, ತೈಲದ ಕಣಗಳು ಮತ್ತು ರಾಸಾಯನಿಕ ಮಾಲಿನ್ಯಕಾರಕಗಳಿಂದ ಕಲುಷಿತಗೊಂಡ ಮಳೆಯನ್ನು ಇದು ಸೂಚಿಸುತ್ತದೆ.
    • ಸಾಮಾನ್ಯ ಮಳೆಯ ಶುದ್ಧ ನೀರಿನ ಹನಿಗಳ ಬದಲಾಗಿ, ಈ ಮಳೆಯು ಕಪ್ಪು ಬಣ್ಣದ ಎಣ್ಣೆಯುಕ್ತ ಕಣಗಳನ್ನು ಒಳಗೊಂಡಿರುತ್ತದೆ; ಇದರಿಂದಾಗಿ ಮಳೆಯ ನೀರು ಕಪ್ಪು ಅಥವಾ ಬೂದು ಬಣ್ಣಕ್ಕೆ ತಿರುಗುತ್ತದೆ.
    • ಬೃಹತ್ ಪ್ರಮಾಣದ ಬೆಂಕಿಯಿಂದಾಗಿ ಅಪಾರ ಮಾಲಿನ್ಯಕಾರಕಗಳು ಗಾಳಿಗೆ ಸೇರ್ಪಡೆಯಾದಾಗ ಮತ್ತು ಆ ಮಾಲಿನ್ಯದ ಕಣಗಳನ್ನು ಮಳೆಯು ಭೂಮಿಯನ್ನು ತಲುಪುವ ಮುನ್ನವೇ ಹೀರಿಕೊಂಡಾಗ ಸಾಮಾನ್ಯವಾಗಿ ಇಂತಹ ‘ಕಪ್ಪು ಮಳೆ’ ಸುರಿಯುತ್ತದೆ.
    • ಐತಿಹಾಸಿಕ ಹಿನ್ನೆಲೆಯನ್ನು ಗಮನಿಸಿದರೆ, 1945 ರಲ್ಲಿ ಜಪಾನ್‌ನ ಹಿರೋಷಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ನಡೆದ ಪರಮಾಣು ಬಾಂಬ್ ದಾಳಿಯ ನಂತರ ವಿಕಿರಣಶೀಲ ಕಣಗಳು ಮತ್ತು ಛಿದ್ರಗೊಂಡ ಅವಶೇಷಗಳು ಮಳೆನೀರಿನೊಂದಿಗೆ ಬೆರೆತಾಗ ಇಂತಹದ್ದೇ ಭೀಕರ ವಿದ್ಯಮಾನಗಳು ಕಂಡುಬಂದಿದ್ದವು.
  • ಕಪ್ಪತಗುಡ್ಡ ವನ್ಯಜೀವಿ ಅಭಯಾರಣ್ಯ

    ಕಪ್ಪತಗುಡ್ಡ ವನ್ಯಜೀವಿ ಅಭಯಾರಣ್ಯ

    ಇದೀಗ ಸುದ್ದಿಯಲ್ಲಿದೆ:

    • ಮಾರ್ಚ್ 2026 ರಲ್ಲಿ, ಗದಗ ಜಿಲ್ಲೆಯ ಕಪ್ಪತಗುಡ್ಡ ವನ್ಯಜೀವಿ ಅಭಯಾರಣ್ಯಕ್ಕೆ ಸಂಬಂಧಿಸಿದಂತೆ ಹೊಸ ಅಧಿಸೂಚನೆಯನ್ನು ಹೊರಡಿಸುವಂತೆ ಕರ್ನಾಟಕ ಉಚ್ಚ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
    • ಮುಖ್ಯ ನ್ಯಾಯಮೂರ್ತಿ ವಿಭು ಬಾಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರ ನೇತೃತ್ವದ ವಿಭಾಗೀಯ ಪೀಠವು, 2019 ರ ಅಧಿಸೂಚನೆಯಲ್ಲಿ ಅಭಯಾರಣ್ಯದ ವಿಸ್ತೀರ್ಣವನ್ನು 244.15 ಚದರ ಕಿ.ಮೀ ಗೆ ಕಡಿತಗೊಳಿಸಿರುವುದು ಮೇಲ್ನೋಟಕ್ಕೆ ‘ಸ್ವೇಚ್ಛಾಚಾರದಿಂದ ಕೂಡಿದೆ’ ಎಂದು ತೀರ್ಪು ನೀಡಿದೆ.

    ಕಪ್ಪತಗುಡ್ಡ ವನ್ಯಜೀವಿ ಅಭಯಾರಣ್ಯ (KWS) ದ ಬಗ್ಗೆ:

    • ಸ್ಥಳ:- ಇದು ಕರ್ನಾಟಕದ ಗದಗ ಜಿಲ್ಲೆಯಲ್ಲಿದೆ.
    • ಇದನ್ನು ಹೆಚ್ಚಾಗಿ “ಉತ್ತರ ಕರ್ನಾಟಕದ ಪಶ್ಚಿಮ ಘಟ್ಟಗಳು” ಎಂದು ಕರೆಯಲಾಗುತ್ತದೆ.
    • ವಿಶೇಷತೆ:- ಅರಣ್ಯ ಸಸ್ಯವರ್ಗದ ಸಂರಕ್ಷಣೆಗಾಗಿ ಪ್ರತ್ಯೇಕವಾಗಿ ಘೋಷಿಸಲಾದ ರಾಜ್ಯದ ಏಕೈಕ ಅಭಯಾರಣ್ಯ ಎಂಬ ವಿಶಿಷ್ಟತೆಯನ್ನು ಇದು ಹೊಂದಿದೆ.
    • ಸ್ಥಾಪನೆ:- ಮೂಲತಃ ಮೀಸಲು ಅರಣ್ಯವಾಗಿದ್ದ ಇದನ್ನು ಮೇ 2019 ರಲ್ಲಿ ವನ್ಯಜೀವಿ ಅಭಯಾರಣ್ಯವೆಂದು ಅಧಿಕೃತವಾಗಿ ಘೋಷಿಸಲಾಯಿತು.
    • ಒಣಭೂಮಿ ಪರಿಸರ ವ್ಯವಸ್ಥೆಯನ್ನು ಹೊಂದಿದೆ:- ಇದು ಕುರುಚಲು ಕಾಡುಗಳು, ಹುಲ್ಲುಗಾವಲುಗಳು ಮತ್ತು ಒಣ ಎಲೆ ಉದುರುವ ಕಾಡುಗಳನ್ನು ಒಳಗೊಂಡಿದೆ.
    • ಜಲಮೂಲ:- ಇದು ತುಂಗಭದ್ರಾ ನದಿಯ ಪ್ರಮುಖ ಜಲಾನಯನ ಪ್ರದೇಶವಾಗಿ ಕಾರ್ಯನಿರ್ವಹಿಸುತ್ತದೆ.
    • ಸಸ್ಯವರ್ಗ:- ಔಷಧೀಯ ಮೌಲ್ಯಕ್ಕೆ ಹೆಸರುವಾಸಿಯಾದ ಇದು, 400 ಕ್ಕೂ ಹೆಚ್ಚು ಪ್ರಭೇದದ ಔಷಧೀಯ ಸಸ್ಯಗಳನ್ನು ಹೊಂದಿದೆ. ಇಲ್ಲಿನ ಪ್ರಮುಖ ಸಸ್ಯವರ್ಗವು ತೇಗ, ಮುತ್ತುಗ ಮತ್ತು ಅಕೇಶಿಯ ಕುರುಚಲು ಗಿಡಗಳನ್ನು ಒಳಗೊಂಡಿದೆ.
    • ಪ್ರಾಣಿವರ್ಗ:- ಇದು ಚಿರತೆಗಳು, ಭಾರತೀಯ ತೋಳಗಳು, ಪಟ್ಟೆ ಕತ್ತೆಕಿರುಬಗಳು, ಕೃಷ್ಣಮೃಗಗಳು ಮತ್ತು ಅಪರೂಪದ ನಾಲ್ಕು ಕೊಂಬಿನ ಹುಲ್ಲೆಗಳಿಗೆ ನೆಲೆಯಾಗಿದೆ.
    • ಸಾಂಸ್ಕೃತಿಕ ಪ್ರಾಮುಖ್ಯತೆ:- ಇದು 12 ನೇ ಶತಮಾನದ ಡಂಬಳ ದೇವಾಲಯ ಸೇರಿದಂತೆ ಚಾಲುಕ್ಯ ಮತ್ತು ರಾಷ್ಟ್ರಕೂಟರ ಪ್ರಾಚೀನ ಅವಶೇಷಗಳು ಮತ್ತು ದೇವಾಲಯಗಳನ್ನು ಒಳಗೊಂಡಿದೆ.

    ಇತ್ತೀಚಿನ ಬೆಳವಣಿಗೆಗಳು (2025–2026):

    • ಪರಿಸರ ಸೂಕ್ಷ್ಮ ವಲಯ (ESZ):- ಜೂನ್ 2025 ರಲ್ಲಿ, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು (MoEFCC) ಅಭಯಾರಣ್ಯದ ಸುತ್ತಲಿನ ಅಂದಾಜು 323 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವೆಂದು (ESZ) ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದೆ.
    • ಗಡಿ ವಿಸ್ತರಣೆ:- ಮಾರ್ಚ್ 2026 ರಲ್ಲಿ, ಮೂಲ 2019 ರ ಅಧಿಸೂಚನೆಯಿಂದ ಕೈಬಿಡಲಾಗಿದ್ದ ಹೆಚ್ಚುವರಿ 55 ಚದರ ಕಿ.ಮೀ ಮೀಸಲು ಅರಣ್ಯವನ್ನು ಸೇರಿಸುವಂತೆ ಕರ್ನಾಟಕ ಉಚ್ಚ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಇದು ಅಭಯಾರಣ್ಯದ ಉದ್ದೇಶಿತ ವಿಸ್ತೀರ್ಣವನ್ನು ಸರಿಸುಮಾರು 300 ಚದರ ಕಿ.ಮೀ ಗೆ ಮರುಸ್ಥಾಪಿಸುತ್ತದೆ.
    • ಅಪರೂಪದ ಪಕ್ಷಿ ವೀಕ್ಷಣೆ:- ಇತ್ತೀಚಿಗೆ ಅಭಯಾರಣ್ಯದ ಕುರುಚಲು-ಮುಳ್ಳಿನ ಆವಾಸಸ್ಥಾನದಲ್ಲಿ ಅಪರೂಪದ ಬಿಳಿ-ಕತ್ತಿನ ಟಿಟ್ (ಪ್ಯಾರಸ್ ನುಚಾಲಿಸ್) ಪಕ್ಷಿಯನ್ನು ದಾಖಲಿಸಲಾಗಿದೆ.

    ಅಪಾಯಗಳು ಮತ್ತು ಸಂರಕ್ಷಣೆ:

    • ಈ ಅಭಯಾರಣ್ಯವು ಗಣಿಗಾರಿಕೆ ಹಿತಾಸಕ್ತಿಗಳು (ಚಿನ್ನ ಮತ್ತು ಕಬ್ಬಿಣದ ಅದಿರು), ಅಕ್ರಮ ಉರುವಲು ಸಂಗ್ರಹಣೆ, ಅತಿಯಾದ ಮೇಯಿಸುವಿಕೆ ಮತ್ತು ಆವಾಸಸ್ಥಾನ ವಿಘಟನೆಯ ತೀವ್ರ ಒತ್ತಡವನ್ನು ಎದುರಿಸುತ್ತಿದೆ.
  • ಶಸ್ತ್ರಾಸ್ತ್ರಗಳ ಕುರಿತಾದ ಸಿಪ್ರಿ (SIPRI) ವರದಿ | ವಿಶಾಖಪಟ್ಟಣದಲ್ಲಿ ಪ್ರೋಟಾನ್ ವೇಗೋತ್ಕರ್ಷಕ ಸೌಲಭ್ಯ | ಹಲೀಮ್ | ರಾಷ್ಟ್ರೀಯ ಹೆದ್ದಾರಿ ಹಸಿರು ಹೊದಿಕೆ ಸೂಚ್ಯಂಕ (NH-GCI) | ಭಾರತದ ನವೀಕರಿಸಬಹುದಾದ ಇಂಧನ ವಲಯ

    ಶಸ್ತ್ರಾಸ್ತ್ರಗಳ ಕುರಿತಾದ ಸಿಪ್ರಿ (SIPRI) ವರದಿ

    ರಕ್ಷಣೆ

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚಿಗೆ ‘ಸ್ಟಾಕ್‌ಹೋಮ್ ಅಂತರರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ’ಯ (SIPRI) ‘ಶಸ್ತ್ರಾಸ್ತ್ರ ವರ್ಗಾವಣೆ ದತ್ತಾಂಶ’ವನ್ನು (1950–2025) ನವೀಕರಿಸಲಾಗಿದೆ.

    ಸಿಪ್ರಿ (SIPRI) ವರದಿಯ ಪ್ರಮುಖ ಅಂಶಗಳು:

    • ಅಗ್ರ ಪೂರೈಕೆದಾರರು:- 2021-25ರ ಅವಧಿಯಲ್ಲಿ ಪ್ರಮುಖ ಶಸ್ತ್ರಾಸ್ತ್ರಗಳನ್ನು ಪೂರೈಸಿದ (ರಫ್ತು ಮಾಡಿದ) ವಿಶ್ವದ ಐದು ಅತಿದೊಡ್ಡ ರಾಷ್ಟ್ರಗಳೆಂದರೆ – ಅಮೆರಿಕ, ಫ್ರಾನ್ಸ್, ರಷ್ಯಾ, ಜರ್ಮನಿ ಮತ್ತು ಚೀನಾ.
    • ಅಗ್ರ ಆಮದುದಾರರು:- ಜಾಗತಿಕ ಶಸ್ತ್ರಾಸ್ತ್ರ ಆಮದಿನಲ್ಲಿ ಶೇ 35 ರಷ್ಟು ಪಾಲನ್ನು ಹೊಂದಿರುವ ಅಗ್ರ ಐದು ಆಮದುದಾರ ರಾಷ್ಟ್ರಗಳೆಂದರೆ – ಉಕ್ರೇನ್, ಭಾರತ, ಸೌದಿ ಅರೇಬಿಯಾ, ಕತಾರ್ ಮತ್ತು ಪಾಕಿಸ್ತಾನ.
    • ಭಾರತ 2ನೇ ಅತಿದೊಡ್ಡ ಆಮದುದಾರ ರಾಷ್ಟ್ರ:- 2021 ಮತ್ತು 2025ರ ನಡುವಿನ ಒಟ್ಟು ಜಾಗತಿಕ ಶಸ್ತ್ರಾಸ್ತ್ರ ಆಮದಿನಲ್ಲಿ ಭಾರತವು ಶೇ 8.2 ರಷ್ಟು ಪಾಲನ್ನು ಹೊಂದಿದೆ.
    • ರಷ್ಯಾದ ಪಾಲು ಕುಸಿತ:- ಭಾರತವು ಅತಿ ಹೆಚ್ಚು ಅಂದರೆ ಶೇ 40 ರಷ್ಟು ಶಸ್ತ್ರಾಸ್ತ್ರಗಳನ್ನು ರಷ್ಯಾದಿಂದ ಆಮದು ಮಾಡಿಕೊಂಡಿದೆ. ಆದರೆ, ಈ ಪ್ರಮಾಣವು 2016-20ರ ಅವಧಿಗಿಂತ (ಶೇ 51) ಗಮನಾರ್ಹವಾಗಿ ಕಡಿಮೆಯಾಗಿದೆ ಮತ್ತು 2011-15ರ ಅವಧಿಗೆ (ಶೇ 70) ಹೋಲಿಸಿದರೆ ಬಹುತೇಕ ಅರ್ಧದಷ್ಟು ಕುಸಿದಿದೆ.

    ಸ್ಟಾಕ್‌ಹೋಮ್ ಅಂತರರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ (SIPRI)ಯ ಬಗ್ಗೆ:

    • SIPRI ಯ ಸಂಪೂರ್ಣ ರೂಪ:- ಸ್ಟಾಕ್ಹೋಲ್ಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್.
    • ಸ್ವತಂತ್ರ ಅಂತರರಾಷ್ಟ್ರೀಯ ಸಂಸ್ಥೆಯಾಗಿದೆ:- ಜಾಗತಿಕ ಸಂಘರ್ಷಗಳು, ಶಸ್ತ್ರಾಸ್ತ್ರಗಳ ಉತ್ಪಾದನೆ, ಶಸ್ತ್ರಾಸ್ತ್ರ ನಿಯಂತ್ರಣ ಮತ್ತು ನಿಶ್ಯಸ್ತ್ರೀಕರಣದ ಕುರಿತು ಉನ್ನತ ಮಟ್ಟದ ಸಂಶೋಧನೆ ನಡೆಸಲು ಮೀಸಲಾಗಿದೆ.
    • ಈ ಸಂಸ್ಥೆಯನ್ನು 1966 ರಲ್ಲಿ ಸ್ವೀಡನ್ ದೇಶದ ‘ಸ್ಟಾಕ್‌ಹೋಮ್’ನಲ್ಲಿ ಸ್ಥಾಪಿಸಲಾಯಿತು.

    ವಿಶಾಖಪಟ್ಟಣದಲ್ಲಿ ಪ್ರೋಟಾನ್ ವೇಗೋತ್ಕರ್ಷಕ ಸೌಲಭ್ಯ

    ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ:

    • ಭಾರತದ ದೀರ್ಘಕಾಲೀನ ಪರಮಾಣು ಸಂಶೋಧನಾ ಕಾರ್ಯಕ್ರಮದ ಭಾಗವಾಗಿ, ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಉನ್ನತ-ಶಕ್ತಿಯ ‘ಪ್ರೋಟಾನ್ ವೇಗೋತ್ಕರ್ಷಕ’ ಸೌಲಭ್ಯವನ್ನು ಸ್ಥಾಪಿಸಲಾಗುತ್ತಿದೆ.

    ಪ್ರೋಟಾನ್ ಎಂದರೇನು?

    • ಪ್ರೋಟಾನ್ ಎಂಬುದು ಧನಾತ್ಮಕ ವಿದ್ಯುದಾವೇಶವನ್ನು ಹೊಂದಿರುವ ಉಪ-ಪರಮಾಣು ಕಣವಾಗಿದೆ. 
    • ಪ್ರೋಟಾನ್ ಪ್ರತಿಯೊಂದು ಮೂಲವಸ್ತುವಿನ ಪ್ರತಿಯೊಂದು ಪರಮಾಣು ನ್ಯೂಕ್ಲಿಯಸ್‌ನಲ್ಲಿ (ಕೇಂದ್ರದಲ್ಲಿ) ಕಂಡುಬರುತ್ತದೆ.

    ಪ್ರೋಟಾನ್ ವೇಗೋತ್ಕರ್ಷಕ ಸೌಲಭ್ಯದ ಬಗ್ಗೆ:

    • ವಿಶಾಖಪಟ್ಟಣದಲ್ಲಿ ಸ್ಥಾಪನೆಯಾಗುತ್ತಿರುವ ಈ ಉನ್ನತ-ಶಕ್ತಿಯ ಪ್ರೋಟಾನ್ ವೇಗೋತ್ಕರ್ಷಕವು, ‘ಥೋರಿಯಂ’ ಧಾತುವನ್ನು ಯುರೇನಿಯಂ ಇಂಧನವನ್ನಾಗಿ ಪರಿವರ್ತಿಸಲು ಅಗತ್ಯವಾದ ಉನ್ನತ-ಶಕ್ತಿಯ ನ್ಯೂಟ್ರಾನ್‌ಗಳನ್ನು ಉತ್ಪಾದಿಸುತ್ತದೆ.
    • ವಿಶಾಖಪಟ್ಟಣದಲ್ಲಿರುವ ಅತ್ಯುತ್ತಮ ತಾಂತ್ರಿಕ ಪರಿಸರ ವ್ಯವಸ್ಥೆ ಹಾಗೂ ರಿಯಾಕ್ಟರ್‌ಗಳನ್ನು ತಂಪುಗೊಳಿಸುವ ಪ್ರಕ್ರಿಯೆಗೆ ಸಮುದ್ರದ ನೀರು ಸುಲಭವಾಗಿ ಲಭ್ಯವಿರುವುದು ಈ ಯೋಜನೆಯ ಸ್ಥಾಪನೆಗೆ ವರದಾನವಾಗಿದೆ.
    • ಪ್ರಾಮುಖ್ಯತೆ:- ಈ ಪ್ರೋಟಾನ್ ವೇಗೋತ್ಕರ್ಷಕವನ್ನು ಭಾರತದ ಮಹತ್ವಾಕಾಂಕ್ಷೆಯ ದೀರ್ಘಕಾಲೀನ ಪರಮಾಣು ಕಾರ್ಯಕ್ರಮದ ಅತ್ಯಂತ ಪ್ರಮುಖ ಭಾಗವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.

    ಹಲೀಮ್

    ಇತರೆ

    ಇದೀಗ ಸುದ್ದಿಯಲ್ಲಿದೆ: 

    • ಪ್ರಸ್ತುತ ಮಾರುಕಟ್ಟೆಯಲ್ಲಿ ವಾಣಿಜ್ಯ ಬಳಕೆಯ ಎಲ್.ಪಿ.ಜಿ (LPG) ಸಿಲಿಂಡರ್‌ಗಳ ಕೊರತೆ ಉಂಟಾಗಿರುವುದರಿಂದ, ಹೈದರಾಬಾದಿನ ಪ್ರಸಿದ್ಧ ರಂಜಾನ್ ಆಹಾರ ಪಟ್ಟಿಯಿಂದ (ಮೆನುವಿನಿಂದ) ‘ಹಲೀಮ್’ ಖಾದ್ಯವು ಕಣ್ಮರೆಯಾಗುವ ಆತಂಕ ಎದುರಾಗಿದೆ.

    ಹಲೀಮ್ ಖಾದ್ಯದ ವಿಶೇಷತೆ:

    • ಭೌಗೋಳಿಕ ಸೂಚ್ಯಾಂಕ (GI ಟ್ಯಾಗ್) ಮಾನ್ಯತೆ ಪಡೆದ ಒಂದು ವಿಶಿಷ್ಟ ಖಾದ್ಯವಾಗಿದೆ. ಹೈದರಾಬಾದಿನಲ್ಲಿ ಇಸ್ಲಾಂ ಧರ್ಮದ ಪವಿತ್ರ ‘ರಂಜಾನ್’ ತಿಂಗಳಿನಲ್ಲಿ ಮಾತ್ರ ಇದನ್ನು ವಿಶೇಷವಾಗಿ ತಯಾರಿಸಲಾಗುತ್ತದೆ ಹಾಗೂ ಅನೇಕ ರೆಸ್ಟೋರೆಂಟ್ ಗಳ ಮೂಲಕ ದೇಶಾದ್ಯಂತ ಪೂರೈಕೆ ಮಾಡಲಾಗುತ್ತದೆ.
    • ‘ಭಟ್ಟಿ’ ಎಂದು ಕರೆಯಲಾಗುವ, ಸೌದೆ (ಉರುವಲು) ಬಳಸುವ ಸಾಂಪ್ರದಾಯಿಕ ಒಲೆಗಳ ಮೇಲೆ ಸತತ 12 ಗಂಟೆಗಳ ಕಾಲ ಈ ಖಾದ್ಯವನ್ನು ಬೇಯಿಸಲಾಗುತ್ತದೆ.
    • ಗೋಧಿ, ಮಾಂಸ ಮತ್ತು ವಿವಿಧ ಮಸಾಲೆ ಪದಾರ್ಥಗಳನ್ನು ಬಳಸಿ ತಯಾರಿಸುವ ಈ ಖಾದ್ಯವು ಸಂಜೆಯ ವೇಳೆಗೆ ಮೃದುವಾದ (ಅರೆ-ಘನ) ಹದಕ್ಕೆ ಬರುತ್ತದೆ. ರಂಜಾನ್ ತಿಂಗಳಿನಲ್ಲಿ ಉಪವಾಸವನ್ನು ಅಂತ್ಯಗೊಳಿಸುವ ‘ಇಫ್ತಾರ್’ ಸಮಯದಲ್ಲಿ ಸೇವಿಸುವ ಪ್ರಮುಖ ಆಹಾರಗಳ ಪಟ್ಟಿಯಲ್ಲಿ ಇದು ಅವಿಭಾಜ್ಯ ಅಂಗವಾಗಿದೆ.

    ರಾಷ್ಟ್ರೀಯ ಹೆದ್ದಾರಿ ಹಸಿರು ಹೊದಿಕೆ ಸೂಚ್ಯಂಕ (NH-GCI)

    ಇತರೆ

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚಿಗೆ, ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಸಮನ್ವಯದೊಂದಿಗೆ 2025-26ನೇ ಸಾಲಿನ ‘ರಾಷ್ಟ್ರೀಯ ಹೆದ್ದಾರಿ ಹಸಿರು ಹೊದಿಕೆ ಸೂಚ್ಯಂಕ’ದ (NH-GCI) ಚೊಚ್ಚಲ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದೆ.

    ರಾಷ್ಟ್ರೀಯ ಹೆದ್ದಾರಿ ಹಸಿರು ಹೊದಿಕೆ ಸೂಚ್ಯಂಕ (NH-GCI):

    • ಇದು ‘ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ’ವು (NHAI) ಪ್ರಾರಂಭಿಸಿರುವ ಒಂದು ‘ಉಪಗ್ರಹ ಆಧಾರಿತ’ ವ್ಯವಸ್ಥೆಯಾಗಿದೆ.
    • ಪ್ರಮುಖ ಉದ್ದೇಶ:- ಭಾರತದ ರಾಷ್ಟ್ರೀಯ ಹೆದ್ದಾರಿಗಳ ಇಕ್ಕೆಲಗಳಲ್ಲಿರುವ (ರಸ್ತೆಬದಿಯ) ಸಸ್ಯವರ್ಗವನ್ನು ವೈಜ್ಞಾನಿಕವಾಗಿ ಮೇಲ್ವಿಚಾರಣೆ ಮಾಡುವುದು ಹಾಗೂ ಸಮರ್ಪಕವಾಗಿ ನಿರ್ವಹಿಸುವುದು.
    • ಮಹತ್ವ:- ಇಸ್ರೋದ ‘ರಾಷ್ಟ್ರೀಯ ದೂರಸಂವೇದಿ ಕೇಂದ್ರ’ದ (NRSC) ಸಹಯೋಗದೊಂದಿಗೆ ಈ ಸೂಚ್ಯಂಕವನ್ನು ಅಭಿವೃದ್ಧಿಪಡಿಸಲಾಗಿದೆ. ರಸ್ತೆಬದಿಯ ಸಸ್ಯಗಳ (ನೆಡುತೋಪುಗಳ) ಬೆಳವಣಿಗೆ ಮತ್ತು ಅವುಗಳ ಉಳಿವನ್ನು ಖಚಿತಪಡಿಸಿಕೊಳ್ಳಲು ಇದು ನೆರವಾಗುತ್ತದೆ.
    • ಈ ವ್ಯವಸ್ಥೆಯು ಕೇವಲ ಅಂದಾಜಿನ ಆಧಾರದ ಮೇಲಿನ ಸಾಮಾನ್ಯ ಕ್ಷೇತ್ರ ಸಮೀಕ್ಷೆಗಳ ಬದಲಾಗಿ, ನಿಖರವಾದ ಹಾಗೂ ತಂತ್ರಜ್ಞಾನ-ಚಾಲಿತ ದತ್ತಾಂಶಗಳನ್ನು ಒದಗಿಸುತ್ತದೆ.

    ಭಾರತದ ನವೀಕರಿಸಬಹುದಾದ ಇಂಧನ ವಲಯ

    ಪರಿಸರ

    ಇದೀಗ ಸುದ್ದಿಯಲ್ಲಿದೆ: 

    • 2026ರ ‘ಭಾರತ್ ಕ್ಲೈಮೇಟ್ ಫೋರಮ್’ನಲ್ಲಿ ಇಂಧನ ತಜ್ಞರು ಭಾರತದ ಇಂಧನ ಪರಿವರ್ತನೆಯಲ್ಲಿನ ಗಂಭೀರ ಸವಾಲಿನ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
    • ದೇಶದಲ್ಲಿ ನವೀಕರಿಸಬಹುದಾದ ವಿದ್ಯುತ್ ಉತ್ಪಾದನೆಯು ವೇಗವಾಗಿ ಹೆಚ್ಚಾಗುತ್ತಿದ್ದರೂ, ವಿದ್ಯುತ್ ಜಾಲ ಮತ್ತು ಸಾಂಸ್ಥಿಕ ಮಿತಿಗಳಿಂದಾಗಿ ಆ ವಿದ್ಯುತ್‌ನ ಸಮರ್ಪಕ ಬಳಕೆಯು ಸಾಧ್ಯವಾಗುತ್ತಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.

    ಭಾರತದ ನವೀಕರಿಸಬಹುದಾದ ಇಂಧನ ವಲಯದ ಪ್ರಗತಿ:

      • 2025ರ ನವೆಂಬರ್ ಅಂತ್ಯದ ವೇಳೆಗೆ ಭಾರತದ ಒಟ್ಟು ನವೀಕರಿಸಬಹುದಾದ ಇಂಧನ ಸಾಮರ್ಥ್ಯವು 253.96 ಗಿಗಾವ್ಯಾಟ್‌ಗಳಿಗೆ (GW) ತಲುಪಿದೆ. ಇದು 2024ರಲ್ಲಿ ಇದ್ದ 205.52 ಗಿಗಾವ್ಯಾಟ್‌ಗಳ ಸಾಮರ್ಥ್ಯಕ್ಕಿಂತ ಶೇಕಡಾ 23 ಕ್ಕಿಂತ ಹೆಚ್ಚಿನ ಏರಿಕೆಯನ್ನು ದಾಖಲಿಸಿದೆ.
    • ಸೌರಶಕ್ತಿಯ ಸ್ಥಾಪಿತ ಸಾಮರ್ಥ್ಯವು 132.85 ಗಿಗಾವ್ಯಾಟ್‌ಗಳಿಗೆ ತಲುಪಿದ್ದರೆ, ಪವನ ಶಕ್ತಿಯ ಸಾಮರ್ಥ್ಯವು ಅಂದಾಜು 53.99 ಗಿಗಾವ್ಯಾಟ್‌ಗಳಷ್ಟಿದೆ.

    ನವೀಕರಿಸಬಹುದಾದ ಇಂಧನ ವಲಯದಲ್ಲಿ ಭಾರತದ ಜಾಗತಿಕ ಸ್ಥಾನಮಾನ:

    • ಒಟ್ಟಾರೆ ನವೀಕರಿಸಬಹುದಾದ ಇಂಧನ ಸಾಮರ್ಥ್ಯದಲ್ಲಿ ಭಾರತವು ವಿಶ್ವದಲ್ಲಿ 4ನೇ ಅತಿದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದೆ.
    • ಜಾಗತಿಕ ಮಟ್ಟದಲ್ಲಿ ಸೌರಶಕ್ತಿಯ ಸ್ಥಾಪಿತ ಸಾಮರ್ಥ್ಯದಲ್ಲಿ ಭಾರತವು 3ನೇ ಸ್ಥಾನದಲ್ಲಿದೆ.
    • ಪವನ ಶಕ್ತಿಯ ಸ್ಥಾಪಿತ ಸಾಮರ್ಥ್ಯದಲ್ಲಿ ಭಾರತವು 4ನೇ ಸ್ಥಾನವನ್ನು ಕಾಯ್ದುಕೊಂಡಿದೆ.
    • ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳು:- ರಾಜಸ್ಥಾನ, ಗುಜರಾತ್, ತಮಿಳುನಾಡು ಮತ್ತು ಕರ್ನಾಟಕ.
    • ಗುರಿ:- ಜಾಗತಿಕ ಹವಾಮಾನ ಬದಲಾವಣೆಯ ನಿಯಂತ್ರಣದ ಬದ್ಧತೆಯ ಭಾಗವಾಗಿ, 2030ರ ವೇಳೆಗೆ 500 ಗಿಗಾವ್ಯಾಟ್ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯವನ್ನು ಸಾಧಿಸುವ ಬೃಹತ್ ಗುರಿಯನ್ನು ಭಾರತ ಹೊಂದಿದೆ.

    ಶುದ್ಧ ಇಂಧನ ಬಳಕೆಯನ್ನು ಸುಧಾರಿಸಲು ಸರ್ಕಾರದ ಉಪಕ್ರಮಗಳು:

    • ಹಸಿರು ಇಂಧನ ಕಾರಿಡಾರ್ (GEC):- ವಿದ್ಯುತ್ ಉತ್ಪಾದನಾ ಕೇಂದ್ರಗಳಿಂದ ಬೇಡಿಕೆಯಿರುವ ಪ್ರದೇಶಗಳಿಗೆ ನವೀಕರಿಸಬಹುದಾದ ಇಂಧನವನ್ನು ಸಮರ್ಥವಾಗಿ ರವಾನಿಸಲು ‘ವಿದ್ಯುತ್ ಪ್ರಸರಣ ಮೂಲಸೌಕರ್ಯ’ವನ್ನು ಬಲಪಡಿಸುವುದು.
    • ಪಿಎಂ-ಕುಸುಮ ಯೋಜನೆ:- ಕೃಷಿ ವಲಯದಲ್ಲಿ ಡೀಸೆಲ್ ಬಳಕೆಯನ್ನು ಕಡಿಮೆ ಮಾಡಲು ಹಾಗೂ ರೈತರಿಗೆ ಆರ್ಥಿಕ ಬೆಂಬಲ ನೀಡಲು, ಗ್ರಾಮೀಣ ಪ್ರದೇಶಗಳಲ್ಲಿ ಸೌರ ಪಂಪ್‌ಗಳು ಮತ್ತು ಜಾಲ (ಗ್ರಿಡ್) ಸಂಪರ್ಕಿತ ಸೌರ ವಿದ್ಯುತ್ ಸ್ಥಾವರಗಳ ಅಳವಡಿಕೆಯನ್ನು ಉತ್ತೇಜಿಸುವುದು.
    • ರಾಷ್ಟ್ರೀಯ ಹಸಿರು ಜಲಜನಕ ಮಿಷನ್:- ತೈಲ ಸಂಸ್ಕರಣೆ, ಉಕ್ಕು ಮತ್ತು ರಸಗೊಬ್ಬರಗಳಂತಹ ಪ್ರಮುಖ ಕೈಗಾರಿಕಾ ವಲಯಗಳಲ್ಲಿ ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ತಗ್ಗಿಸಲು, ‘ಹಸಿರು ಜಲಜನಕ ‘ ಉತ್ಪಾದನೆ ಹಾಗೂ ಬಳಕೆಯನ್ನು ಇದು ಪ್ರೋತ್ಸಾಹಿಸುತ್ತದೆ.
  • ಶರಾವತಿ ಪಂಪ್ಡ್ ಸ್ಟೋರೇಜ್ ಜಲವಿದ್ಯುತ್ ಯೋಜನೆ

    ಶರಾವತಿ ಪಂಪ್ಡ್ ಸ್ಟೋರೇಜ್ ಜಲವಿದ್ಯುತ್ ಯೋಜನೆ

    ಇದೀಗ ಸುದ್ದಿಯಲ್ಲಿದೆ:

    • ₹10,000 ಕೋಟಿ ವೆಚ್ಚದ ಶರಾವತಿ ಪಂಪ್ಡ್ ಸ್ಟೋರೇಜ್ (ನೀರನ್ನೆತ್ತಿ ಸಂಗ್ರಹಿಸುವ) ಜಲವಿದ್ಯುತ್ ಯೋಜನೆಗೆ ವನ್ಯಜೀವಿ ಮಂಡಳಿಗಳು ನೀಡಿರುವ ಅನುಮೋದನೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆ ನಡೆಸಿದ ಕರ್ನಾಟಕ ಉಚ್ಚ ನ್ಯಾಯಾಲಯವು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.
    • ಮುಂದಿನ ಆದೇಶದವರೆಗೆ ಶರಾವತಿ ಕಣಿವೆ ಸಿಂಹಬಾಲದ ಸಿಂಗಳೀಕ (LTM) ವನ್ಯಜೀವಿ ಅಭಯಾರಣ್ಯ ಮತ್ತು ಅದರ ಪರಿಸರ ಸೂಕ್ಷ್ಮ ವಲಯದ ಅರಣ್ಯ ಪ್ರದೇಶಗಳಲ್ಲಿ ನಡೆಯುತ್ತಿರುವ ಎಲ್ಲಾ ಭೂಮಟ್ಟದ ಕಾಮಗಾರಿಗಳನ್ನು ತಕ್ಷಣವೇ ನಿಲ್ಲಿಸುವಂತೆ ಉಚ್ಚ ನ್ಯಾಯಾಲಯವು ರಾಜ್ಯ ಸರ್ಕಾರ ಮತ್ತು ಕರ್ನಾಟಕ ವಿದ್ಯುತ್ ನಿಗಮ ನಿಯಮಿತಕ್ಕೆ (KPCL) ನಿರ್ದೇಶನ ನೀಡಿದೆ.

    ಶರಾವತಿ ಪಂಪ್ಡ್ ಸ್ಟೋರೇಜ್ ಜಲವಿದ್ಯುತ್ ಯೋಜನೆಯ ಬಗ್ಗೆ:

    • ಸ್ಥಳ:- ಇದು ಕರ್ನಾಟಕದ ಶರಾವತಿ ನದಿಯ ಮೇಲಿರುವ ಒಂದು ಪಂಪ್ಡ್ ಸ್ಟೋರೇಜ್ ವಿದ್ಯುತ್ ಯೋಜನೆಯಾಗಿದೆ.
    • ಒಟ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯ:- 2000 MW (ಮೆಗಾವ್ಯಾಟ್).
    • ವಿಶೇಷತೆ:- ಇದು ದೇಶದ ಅತಿದೊಡ್ಡ ಪಂಪ್ಡ್ ಸ್ಟೋರೇಜ್ ವಿದ್ಯುತ್ ಉತ್ಪಾದನಾ ಘಟಕವಾಗಿ ಹೊರಹೊಮ್ಮಲಿದೆ.
    • ಇದನ್ನು ಪ್ರಸ್ತುತ ಅಸ್ತಿತ್ವದಲ್ಲಿರುವ ಎರಡು ಜಲಾಶಯಗಳ ನಡುವೆ ನಿರ್ಮಿಸಲಾಗುತ್ತದೆ.
    • 62.48 ಮೀಟರ್ ಎತ್ತರವಿರುವ ತಳಕಳಲೆ ಅಣೆಕಟ್ಟು ಈ ಯೋಜನೆಯ ಮೇಲ್ಭಾಗದ ಜಲಾಶಯವಾಗಿ ಕಾರ್ಯನಿರ್ವಹಿಸುತ್ತದೆ. 
    • ಈ ಅಣೆಕಟ್ಟು ಪ್ರಸ್ತುತ ಅಸ್ತಿತ್ವದಲ್ಲಿರುವ ಶರಾವತಿ ಜಲವಿದ್ಯುತ್ ಯೋಜನೆಗೆ ನೀರಿನ ಸಮತೋಲನವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.
    • ಸುಮಾರು 64 ಮೀಟರ್ ಎತ್ತರವಿರುವ ಗೇರುಸೊಪ್ಪ ಅಣೆಕಟ್ಟು ಈ ಯೋಜನೆಯ ಕೆಳಭಾಗದ ಜಲಾಶಯವಾಗಿ ಕಾರ್ಯನಿರ್ವಹಿಸುತ್ತದೆ.
    • ವಿದ್ಯುತ್ ಬೇಡಿಕೆ ಕಡಿಮೆ ಇರುವ ಸಮಯದಲ್ಲಿ ಗ್ರಿಡ್ ವಿದ್ಯುತ್ ಬಳಸಿ ನೀರನ್ನು ಮೇಲ್ಭಾಗದ ಜಲಾಶಯಕ್ಕೆ ಕಳುಹಿಸಲಾಗುತ್ತದೆ ಮತ್ತು ವಿದ್ಯುತ್ ಬೇಡಿಕೆ ಗರಿಷ್ಠ ಮಟ್ಟದಲ್ಲಿರುವಾಗ ವಿದ್ಯುತ್ ಉತ್ಪಾದಿಸಲು ಆ ನೀರನ್ನು ಕೆಳಮುಖವಾಗಿ ಹರಿಸಲಾಗುತ್ತದೆ.
    • ತೆಲಂಗಾಣದ ಕಾಳೇಶ್ವರಂ ಯೋಜನೆಯ ಮಾದರಿಯಲ್ಲಿ ವಿನ್ಯಾಸಗೊಳಿಸಲಾದ ಈ ಯೋಜನೆಯು, ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಗುರಿಯನ್ನೂ ಸಹ ಹೊಂದಿದೆ.
    • ಕಳವಳಗಳು:- ಈ ಯೋಜನೆಯು ರಾಣಿ ಚೆನ್ನಭೈರಾದೇವಿಯವರ ಪರಂಪರೆಯಾಗಿರುವ 16ನೇ ಶತಮಾನದ ಪ್ರಾಚೀನ ಸ್ಮಾರಕಗಳನ್ನು ನಾಶಪಡಿಸುತ್ತದೆ ಎಂಬ ಆತಂಕ ವ್ಯಕ್ತವಾಗಿದೆ.

    ಶರಾವತಿ ನದಿಯ ಬಗ್ಗೆ:

    • ಇದು ಕರ್ನಾಟಕದಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ಅತ್ಯಂತ ಉದ್ದವಾದ ನದಿಯಾಗಿದೆ.
    • ಈ ನದಿ ಜಲಾನಯನ ಪ್ರದೇಶದ ಬಹುಪಾಲು ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿದೆ.
    • ನದಿಪಾತ್ರ:- ಪಶ್ಚಿಮ ಘಟ್ಟಗಳಲ್ಲಿ ಉಗಮಿಸುವ ಈ ನದಿಯು, ವಾಯುವ್ಯ ದಿಕ್ಕಿನಲ್ಲಿ ಹರಿದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಅರಬ್ಬಿ ಸಮುದ್ರವನ್ನು ಸೇರುತ್ತದೆ.
    • ಉದ್ದ:- ಈ ನದಿಯ ಒಟ್ಟು ಉದ್ದ 128 ಕಿ.ಮೀ, ಮತ್ತು ಇದರ ಜಲಾನಯನ ಪ್ರದೇಶವು 2,985 ಚದರ ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ.
    • ಜಲಪಾತಗಳು:- ಶರಾವತಿ ನದಿಯು ತನ್ನ ನದಿಪಾತ್ರದಲ್ಲಿ ಭಾರತದ ಅತಿ ಎತ್ತರದ ಜಲಪಾತಗಳಲ್ಲಿ ಒಂದಾದ ಜೋಗ ಜಲಪಾತವನ್ನು ಸೃಷ್ಟಿಸುತ್ತದೆ. ಇಲ್ಲಿ ನದಿಯು 253 ಮೀಟರ್ ಎತ್ತರದಿಂದ ಧುಮುಕುತ್ತದೆ.
    • ಪ್ರಮುಖ ಉಪನದಿಗಳು:- ನಂದಿಹೊಳೆ, ಹರಿದ್ರಾವತಿ, ಮಾವಿನಹೊಳೆ, ಹಿಲ್ಕುಂಜಿ, ಎಣ್ಣೆಹೊಳೆ, ಹುರ್ಲಿಹೊಳೆ ಮತ್ತು ನಾಗೋಡಿಹೊಳೆ.

    ರಾಣಿ ಚೆನ್ನಭೈರಾದೇವಿ ಅವರ ಬಗ್ಗೆ:

    • ಇವರು ಕ್ರಿ. ಶ. 1552 ರಿಂದ 1606 ರವರೆಗೆ ತಮ್ಮ ರಾಜಧಾನಿ ಗೇರುಸೊಪ್ಪದಿಂದ ಆಡಳಿತ ನಡೆಸಿದರು.
    • ಇವರು ಭಾರತೀಯ ಇತಿಹಾಸದಲ್ಲೇ ಅತಿ ದೀರ್ಘಕಾಲ ಆಡಳಿತ ನಡೆಸಿದ ರಾಣಿಯಾಗಿದ್ದಾರೆ.
    • ಇವರು ಪೋರ್ಚುಗೀಸರ ವಿರುದ್ಧ ಹೋರಾಡಿದರು. ಇವರ ಸಾಮ್ರಾಜ್ಯದಲ್ಲಿ ಮೆಣಸು ಹೆಚ್ಚಾಗಿ ಬೆಳೆಯುತ್ತಿದ್ದರಿಂದ ಪೋರ್ಚುಗೀಸರು ಇವರಿಗೆ ‘ರೈನಾ ಡಿ ಪಿಮೆಂಟಾ’ ಅಂದರೆ ‘ಕಾಳುಮೆಣಸಿನ ರಾಣಿ’ ಎಂಬ ಬಿರುದನ್ನು ನೀಡಿದ್ದರು.
    • ಇವರು ಐರೋಪ್ಯ ಮತ್ತು ಅರಬ್ ದೇಶಗಳಿಗೆ ಮಸಾಲೆ ಪದಾರ್ಥಗಳನ್ನು ರಫ್ತು ಮಾಡಲು ಹೆಸರುವಾಸಿಯಾಗಿದ್ದರು.
  • ಎಂ-ವಾಹನ್ (mVahan) ಫಿಟ್‌ನೆಸ್ ಆ್ಯಪ್

    ಎಂ-ವಾಹನ್ (mVahan) ಫಿಟ್‌ನೆಸ್ ಆ್ಯಪ್

    ಇದೀಗ ಸುದ್ದಿಯಲ್ಲಿದೆ:

    • ರಾಜ್ಯದಲ್ಲಿ ನೋಂದಾಯಿತವಾಗಿರುವ ಮತ್ತು ಕಾರ್ಯಾಚರಣೆ ನಡೆಸುತ್ತಿರುವ ವಾಣಿಜ್ಯ ವಾಹನಗಳಿಗೆ ಯೋಗ್ಯತಾ ಪ್ರಮಾಣಪತ್ರಗಳನ್ನು (FC) ನೀಡುವುದರಲ್ಲಿ ಆಗುವ ಅಕ್ರಮಗಳನ್ನು ತಡೆಗಟ್ಟುವ ಉದ್ದೇಶದಿಂದ, ಕರ್ನಾಟಕ ಸಾರಿಗೆ ಇಲಾಖೆಯು ಜಿಯೋ-ಫೆನ್ಸಿಂಗ್ ಆಧಾರಿತ ಎಂ-ವಾಹನ್ (mVahan) ಫಿಟ್‌ನೆಸ್ ಮೊಬೈಲ್ ಆ್ಯಪ್ ಅನ್ನು ಎಲ್ಲಾ 66 ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (RTO) ಪ್ರಾರಂಭಿಸಿದೆ.

    ಎಂ-ಪರಿವಾಹನ್ (mParivahan) ಫಿಟ್‌ನೆಸ್ ಆ್ಯಪ್:

    • ಇದನ್ನು “ವಾಹನ್ ಆ್ಯಪ್” ಎಂತಲೂ ಕರೆಯಲಾಗುತ್ತದೆ. 
    • ಇದು ವಾಹನ ಮತ್ತು ಚಾಲಕ ಸೇವೆಗಳಿಗಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ (MoRTH) ಅಧಿಕೃತ ಮೊಬೈಲ್ ಅಪ್ಲಿಕೇಶನ್ ಆಗಿದೆ.
    • ಹಿಂದೆ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ (RTO) ಭೇಟಿ ನೀಡಿ ಪಡೆಯಬೇಕಾಗಿದ್ದ ಸೇವೆಗಳನ್ನು ಡಿಜಿಟಲ್ ರೂಪದಲ್ಲಿ ಪಡೆಯಲು ಇದು ಸುಲಭ ವೇದಿಕೆಯನ್ನು ಒದಗಿಸುತ್ತದೆ.

    ಈ ಆ್ಯಪ್ ನ ಪ್ರಮುಖ ಲಕ್ಷಣಗಳು:

    • ಡಿಜಿಟಲ್ ದಾಖಲೆಗಳು:- ನಾಗರಿಕರು ತಮ್ಮ ಫೋನ್‌ನಲ್ಲಿ ವಾಹನ ನೋಂದಣಿ ಪ್ರಮಾಣಪತ್ರ (RC) ಮತ್ತು ಚಾಲನಾ ಪರವಾನಗಿಯ (DL) ಕಾನೂನುಬದ್ಧ ವರ್ಚುವಲ್ ಆವೃತ್ತಿಗಳನ್ನು ಸುಲಭವಾಗಿ ರಚಿಸಬಹುದು ಹಾಗೂ ಕೊಂಡೊಯ್ಯಬಹುದು.
    • ವಾಹನ ಹುಡುಕಾಟ:- ವಾಹನದ ನೋಂದಣಿ ಸಂಖ್ಯೆಯನ್ನು ನಮೂದಿಸುವ ಮೂಲಕ ಮಾಲೀಕರ ಹೆಸರು, ವಾಹನದ ವಯಸ್ಸು, ಇಂಧನದ ಪ್ರಕಾರ, ವಿಮೆಯ ಮಾನ್ಯತೆ ಮತ್ತು ಫಿಟ್‌ನೆಸ್ ಸ್ಥಿತಿಯಂತಹ ವಿವರಗಳನ್ನು ತಕ್ಷಣವೇ ಪಡೆಯಬಹುದಾಗಿದೆ.
    • ಚಲನ್ ಸ್ಥಿತಿ:- ಸಂಚಾರ ನಿಯಮ ಉಲ್ಲಂಘನೆಯ ದಂಡಗಳನ್ನು (eChallans) ನೇರವಾಗಿ ಆ್ಯಪ್ ಮೂಲಕ ಪರಿಶೀಲಿಸಬಹುದು ಮತ್ತು ಪಾವತಿಸಬಹುದು.

    ಸುರಕ್ಷತೆ ಮತ್ತು ಪರಿಶೀಲನೆ:- ಹಳೆಯ ವಾಹನಗಳನ್ನು ಖರೀದಿಸುವ ಮೊದಲು ಅವುಗಳ ವಿವರಗಳನ್ನು ಪರಿಶೀಲಿಸಲು ಅಥವಾ ಅಪಘಾತ ಮತ್ತು ಕಳ್ಳತನದ ಸಂದರ್ಭಗಳಲ್ಲಿ ವಾಹನಗಳನ್ನು ಗುರುತಿಸಲು ಇದನ್ನು ಬಳಸಲಾಗುತ್ತದೆ.