ಪಶ್ಚಿಮ ಘಟ್ಟಗಳ ಸಮೀಕ್ಷೆ: 143 ಓಡೊನೇಟಾ ಪ್ರಭೇದಗಳ ದಾಖಲಾತಿ | ಸಂಚಾರ ಅಪಘಾತಗಳಲ್ಲಿ ಪ್ರತಿದಿನ 546 ಸಾವು: NCRB | ಕೇರಳದ ತೈಲ ಸೋರಿಕೆ ತುರ್ತು ಕಾರ್ಯಯೋಜನೆ (Kerala’s Oil Spill Contingency Plan)

ಪಶ್ಚಿಮ ಘಟ್ಟಗಳ ಸಮೀಕ್ಷೆ: 143 ಓಡೊನೇಟಾ ಪ್ರಭೇದಗಳ ದಾಖಲಾತಿ

ಪರಿಸರ

ಇತ್ತೀಚೆಗೆ ಸುದ್ದಿಯಲ್ಲಿದೆ:

  • ಪಶ್ಚಿಮ ಘಟ್ಟಗಳಲ್ಲಿ ಇತ್ತೀಚೆಗೆ ನಡೆದ ಅಧ್ಯಯನವೊಂದು ಡ್ರ್ಯಾಗನ್‌ಫ್ಲೈಗಳು (ತುಂಬಿಗಳು) ಮತ್ತು ಡ್ಯಾಮ್ಸೆಲ್‌ಫ್ಲೈಗಳಲ್ಲಿನ ಗಮನಾರ್ಹ ಜೀವವೈವಿಧ್ಯತೆಯ ಅಂತರವನ್ನು ಎತ್ತಿ ತೋರಿಸುತ್ತದೆ.
  • ಐತಿಹಾಸಿಕವಾಗಿ ದಾಖಲಾದ ಪ್ರಭೇದಗಳಲ್ಲಿ ಕೇವಲ 65% ರಷ್ಟನ್ನು ಮಾತ್ರ ದಾಖಲಿಸಲಾಗಿದ್ದು, 35% ರಷ್ಟು ಕುಸಿತವಾಗಿರುವ ಸಾಧ್ಯತೆಯನ್ನು ಇದು ಸೂಚಿಸುತ್ತದೆ.

ಓಡೊನೇಟಾ (Odonata) ಪ್ರಭೇದಗಳ ಬಗ್ಗೆ:

  • ಓಡೊನೇಟಾ ಎಂಬುದು ಕೀಟಗಳ ವರ್ಗವಾಗಿದ್ದು, ಇದು ಡ್ರ್ಯಾಗನ್‌ಫ್ಲೈಗಳನ್ನು (ಉಪವರ್ಗ: ಅನಿಷ್ಟೋಪ್ಟೆರಾ) ಮತ್ತು ಡ್ಯಾಮ್ಸೆಲ್‌ಫ್ಲೈಗಳನ್ನು (ಉಪವರ್ಗ: ಜೈಗೋಪ್ಟೆರಾ) ಒಳಗೊಂಡಿದೆ.
  • ಇವುಗಳು ಪಾರದರ್ಶಕ ರೆಕ್ಕೆಗಳು, ಉದ್ದವಾದ ತೆಳ್ಳಗಿನ ದೇಹಗಳು ಮತ್ತು ಇಳಿಜಾರಾದ ಎದೆಯ ಭಾಗವನ್ನು ಹೊಂದಿರುವುದು ಇವುಗಳ ಲಕ್ಷಣವಾಗಿದೆ.
  • ಸಾಮಾನ್ಯವಾಗಿ ನೀರಿನ ಬಳಿ ಕಂಡುಬರುವ ಓಡೊನೇಟಾಗಳು ಹಗಲಿನಲ್ಲಿ ಸಕ್ರಿಯವಾಗಿರುವ ಪರಭಕ್ಷಕಗಳಾಗಿವೆ, ಮತ್ತು ವಯಸ್ಕ ಕೀಟಗಳು ಹಾಗೂ ಜಲವಾಸಿ ಲಾರ್ವಾಗಳು ಎರಡೂ ಇತರ ಜೀವಿಗಳನ್ನು/ಕೀಟಗಳನ್ನು ತಿನ್ನುತ್ತವೆ.

ಪಶ್ಚಿಮ ಘಟ್ಟಗಳ ಕುರಿತು:

  • ಸಹ್ಯಾದ್ರಿಯ ಪಶ್ಚಿಮ ಘಟ್ಟಗಳು ಭಾರತೀಯ ಪರ್ಯಾಯ ದ್ವೀಪದ ಪಶ್ಚಿಮ ಕರಾವಳಿಯುದ್ದಕ್ಕೂ 1,600-ಕಿ.ಮೀ ಉದ್ದದ ಸಮಾನಾಂತರವಾದ ಪರ್ವತ ಶ್ರೇಣಿಯಾಗಿದೆ.
  • ಇದು 6 ರಾಜ್ಯಗಳ ಮೂಲಕ ಹಾದುಹೋಗುತ್ತವೆ. ಅವುಗಳೆಂದರೆ, ಗುಜರಾತ, ಮಹಾರಾಷ್ಟ್ರ, ಗೋವಾ, ಕರ್ನಾಟಕ, ತಮಿಳುನಾಡು ಮತ್ತು ಕೇರಳ.
  • ಇತರ ಹೆಸರುಗಳು: ಇದನ್ನು ‘ಭಾರತದ ಬೃಹತ್ ಕಡಿದಾದ ಇಳಿಜಾರು’ (The Great Escarpment of India) ಎಂದೂ ಕರೆಯಲಾಗುತ್ತದೆ.
  • ವಿಶೇಷ ಮಾನ್ಯತೆ: ಅಪಾರ ಪ್ರಮಾಣದ ಸ್ಥಳೀಯ ಜೀವವೈವಿಧ್ಯತೆ ಮತ್ತು ಅಪರೂಪದ ಪ್ರಭೇದಗಳಿಗೆ ಆಶ್ರಯತಾಣವಾಗಿರುವ ಕಾರಣದಿಂದಾಗಿ, ಇದು ಯುನೆಸ್ಕೋ ‘ವಿಶ್ವ ಪರಂಪರೆಯ ತಾಣ’ ಮತ್ತು ‘ಜೀವವೈವಿಧ್ಯತೆಯ ಬಿಸಿತಾಣ (biodiversity hotspot)’ ಎಂಬ ವಿಶೇಷ ಮಾನ್ಯತೆಗೆ ಪಾತ್ರವಾಗಿದೆ. 
  • ಬುಡಕಟ್ಟು ಜನಾಂಗಗಳು: ಇದು ಆಡರ್, ಕೋಟ, ಬಡಗ, ತೋಡ, ಕುರುಂಬ, ಮತ್ತು ಪಣಿಯ ಮುಂತಾದ ಹೆಚ್ಚಿನ ಸಂಖ್ಯೆಯ ಬುಡಕಟ್ಟು ಜನಾಂಗದವರಿಗೆ ನೆಲೆಯಾಗಿದೆ.
  • ಅರಣ್ಯಗಳು: ಪಶ್ಚಿಮ ಘಟ್ಟಗಳ ಪ್ರದೇಶವು ತೇವಾಂಶಯುಕ್ತ ಎಲೆ ಉದುರುವ ಕಾಡುಗಳು ಮತ್ತು ಮಳೆಕಾಡುಗಳನ್ನು ಹೊಂದಿದೆ.
  • ಸ್ಥಳೀಯತೆ (Endemism): ಈ ಪ್ರದೇಶವು ಹೆಚ್ಚಿನ ಪ್ರಭೇದಗಳ ವೈವಿಧ್ಯತೆ ಹಾಗೂ ಹೆಚ್ಚಿನ ಮಟ್ಟದ ಸ್ಥಳೀಯತೆಯನ್ನು ಹೊಂದಿದೆ.
  1. ಇಲ್ಲಿ ಕಂಡುಬರುವ ಶೇ. 77 ರಷ್ಟು ಉಭಯಚರಗಳು ಮತ್ತು ಶೇ. 62 ರಷ್ಟು ಸರೀಸೃಪ ಪ್ರಭೇದಗಳು ಪ್ರಪಂಚದಲ್ಲಿ ಬೇರೆಲ್ಲಿಯೂ ಕಂಡುಬರುವುದಿಲ್ಲ.
  • ಜೀವವೈವಿಧ್ಯ ಸಂರಕ್ಷಣೆ: ನಿರ್ದಿಷ್ಟ ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ಸಂರಕ್ಷಿಸಲು ಮಾನವರ ಪ್ರವೇಶವನ್ನು ನಿರ್ಬಂಧಿಸುವ ಉದ್ದೇಶದಿಂದ, ಭಾರತ ಸರ್ಕಾರವು 2 ಜೀವಗೋಳ ಮೀಸಲು ಪ್ರದೇಶಗಳು ಮತ್ತು 13 ರಾಷ್ಟ್ರೀಯ ಉದ್ಯಾನವನಗಳು ಸೇರಿದಂತೆ ಹಲವು ಸಂರಕ್ಷಿತ ಪ್ರದೇಶಗಳನ್ನು ಸ್ಥಾಪಿಸಿದೆ.

ಪಶ್ಚಿಮ ಘಟ್ಟಗಳಿಗೆ ಸಂಬಂಧಿಸಿದ ಸಮಿತಿಗಳು:

  • ಸಂಜಯ್ ಕುಮಾರ್ ಸಮಿತಿ:
      • ಉದ್ದೇಶ: ಪರಿಸರ ಸೂಕ್ಷ್ಮ ವಲಯಗಳ ಗಡಿರೇಖೆಗಳ ಮೇಲಿನ ರಾಜ್ಯಗಳ ಆಕ್ಷೇಪಣೆಗಳನ್ನು ಪರಿಶೀಲಿಸಲು ಮತ್ತು ಪ್ರಸ್ತಾವಿತ ಪ್ರದೇಶಗಳನ್ನು ಹೊರಗಿಡುವ ಕುರಿತು ಮೌಲ್ಯಮಾಪನ ಮಾಡಲು ಇದನ್ನು ರಚಿಸಲಾಗಿದೆ.
      • ಮಹತ್ವ: ಇದು ಹಳ್ಳಿಗಳ ಪರಿಸರ ಸೂಕ್ಷ್ಮ ಪ್ರದೇಶ (ESA) ಸ್ಥಾನಮಾನವನ್ನು ಅಂತಿಮಗೊಳಿಸಲು ಪ್ರಯತ್ನಿಸುತ್ತದೆ, ಮತ್ತು ಜೀವವೈವಿಧ್ಯತೆಗೆ ಹಾನಿಕಾರಕವಾದ ಚಟುವಟಿಕೆಗಳನ್ನು ನಿರ್ಬಂಧಿಸುತ್ತದೆ.
  • ಮಾಧವ್ ಗಾಡ್ಗೀಳ್ ಸಮಿತಿ (2011):
      • ಉದ್ದೇಶ: ಪಶ್ಚಿಮ ಘಟ್ಟಗಳಿಗೆ ಸಂರಕ್ಷಣಾ ಕ್ರಮಗಳನ್ನು ಪ್ರಸ್ತಾಪಿಸುವುದು.
      • ಸಂಪೂರ್ಣ ಪಶ್ಚಿಮ ಘಟ್ಟಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗೊತ್ತುಪಡಿಸಲು ಇದು ಶಿಫಾರಸು ಮಾಡಿದೆ.
      • ಅಭಿವೃದ್ಧಿಯನ್ನು ನಿಯಂತ್ರಿಸಲು ಮೀಸಲಾದ ಪರಿಸರ ಪ್ರಾಧಿಕಾರವನ್ನು ರಚಿಸುವಂತೆ ಇದು ಪ್ರಸ್ತಾಪಿಸಿತು.
      • ವರದಿಯು ಕಟ್ಟುನಿಟ್ಟಾದ ಸಂರಕ್ಷಣೆಯನ್ನು ಸೂಚಿಸಿತು, ಆದರೆ ಅದರ ಶಿಫಾರಸುಗಳನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳಲಾಗಿಲ್ಲ.
  • ಕಸ್ತೂರಿರಂಗನ್ ಸಮಿತಿ (2012):
    • ಹೆಚ್ಚು ಸಮತೋಲಿತ ವಿಧಾನವನ್ನು ಒದಗಿಸುವ ಸಲುವಾಗಿ ಗಾಡ್ಗೀಳ್ ಸಮಿತಿಯ ಮುಂದುವರಿದ ಭಾಗವಾಗಿ ಇದನ್ನು ರಚಿಸಲಾಗಿದೆ.
    • ಪಶ್ಚಿಮ ಘಟ್ಟಗಳ 37% ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯಗಳಾಗಿ (Eco sensitive zones) ಗುರುತಿಸಲು ಇದು ಶಿಫಾರಸು ಮಾಡಿದೆ.
    • ಇದು ಸಂರಕ್ಷಣೆ ಮತ್ತು ಅಭಿವೃದ್ಧಿ ಅಗತ್ಯಗಳ ನಡುವಿನ ಸಮತೋಲನಕ್ಕೆ ಒತ್ತು ನೀಡುತ್ತದೆ, ಜೊತೆಗೆ ನಿರ್ದಿಷ್ಟ ಪ್ರದೇಶಗಳಲ್ಲಿ ಸೀಮಿತ ಚಟುವಟಿಕೆಗಳಿಗೆ ಅವಕಾಶ ನೀಡುತ್ತದೆ.

ಸಂಚಾರ ಅಪಘಾತಗಳಲ್ಲಿ ಪ್ರತಿದಿನ 546 ಸಾವು: NCRB

ರಾಜಕೀಯ ಮತ್ತು ಆಡಳಿತ

ಇತ್ತೀಚೆಗೆ ಸುದ್ದಿಯಲ್ಲಿದೆ:

  • ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (NCRB)ದ ಇತ್ತೀಚಿನ ವರದಿಯ ಪ್ರಕಾರ, 2024 ರಲ್ಲಿ ಒಟ್ಟು 1.99 ಲಕ್ಷ ಜನರು ಸಂಚಾರ ಅಪಘಾತಗಳಲ್ಲಿ ಸಾವನ್ನಪ್ಪಿದ್ದು, ಇದು 2023 ಕ್ಕೆ ಹೋಲಿಸಿದರೆ 0.79% ರಷ್ಟು ಹೆಚ್ಚಳವಾಗಿದೆ.

ಈ ವರದಿಯ ಪ್ರಮುಖ ಅಂಶಗಳು

  • ಸಂಚಾರ (ಟ್ರಾಫಿಕ್) ಅಪಘಾತಗಳು: ಇವುಗಳು ರಸ್ತೆ ಅಪಘಾತಗಳು, ರೈಲ್ವೆ ಅಪಘಾತಗಳು, ರೈಲ್ವೆ ಹಳಿಗಳ ಮೇಲಿನ ಅಥವಾ ರೈಲ್ವೆ ಆವರಣದಲ್ಲಿನ ಘಟನೆಗಳು ಹಾಗೂ ರೈಲ್ವೆ ಕ್ರಾಸಿಂಗ್‌ಗಳಲ್ಲಿ ಸಂಭವಿಸುವ ಅಪಘಾತಗಳನ್ನು ಒಳಗೊಂಡಿರುತ್ತವೆ.
  • ರಸ್ತೆ ಅಪಘಾತಗಳೆ ಹೆಚ್ಚು: 2024 ರಲ್ಲಿ ದಾಖಲಾದ ಒಟ್ಟು 1.99 ಲಕ್ಷ ಸಂಚಾರ-ಸಂಬಂಧಿತ ಸಾವುಗಳ ಪೈಕಿ, 1.75 ಲಕ್ಷ (88%) ಸಾವುಗಳು ಕೇವಲ ರಸ್ತೆ ಅಪಘಾತಗಳಿಂದಲೇ ಸಂಭವಿಸಿವೆ.

ಸರ್ಕಾರದ ಉಪಕ್ರಮಗಳು

  • ರಾಷ್ಟ್ರೀಯ ರಸ್ತೆ ಸುರಕ್ಷತಾ ನೀತಿ, 2010 (National Road Safety Policy India, 2010): ಇದು ಉತ್ತಮ ರಸ್ತೆ ಮೂಲಸೌಕರ್ಯ, ಸಂಚಾರ ನಿಯಮಗಳ ಕಟ್ಟುನಿಟ್ಟಿನ ಜಾರಿ, ಸುಧಾರಿತ ತುರ್ತು ವೈದ್ಯಕೀಯ ಸೇವೆಗಳು, ಸಾರ್ವಜನಿಕ ಜಾಗೃತಿ ಅಭಿಯಾನಗಳು ಮತ್ತು ಅಪಘಾತದ ನಂತರದ ಆರೈಕೆಯ ಸುಧಾರಣೆಯ ಅಗತ್ಯಕ್ಕೆ ಒತ್ತು ನೀಡಿದೆ.
  • ಮೋಟಾರು ವಾಹನಗಳ ತಿದ್ದುಪಡಿ ಕಾಯ್ದೆ, 2019 (Motor Vehicles Amendment Act, 2019): ಈ ಕಾಯ್ದೆಯು ಮಿತಿಮೀರಿದ ವೇಗದ ಚಾಲನೆ, ಕುಡಿದು ವಾಹನ ಚಲಾಯಿಸುವುದು ಮತ್ತು ಹೆಲ್ಮೆಟ್ ಅಥವಾ ಸೀಟ್ ಬೆಲ್ಟ್ ಧರಿಸದಿರುವುದು ಸೇರಿದಂತೆ ಸಂಚಾರ ನಿಯಮಗಳ ಉಲ್ಲಂಘನೆಗಾಗಿ ಹೆಚ್ಚಿನ ದಂಡ ವಿಧಿಸುವ ನಿಯಮಗಳನ್ನು ಜಾರಿಗೆ ತಂದಿತು.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB)

  • ಸ್ಥಾಪನೆ: 1986.
  • ಕಾರ್ಯನಿರ್ವಹಿಸುವ ಸಚಿವಾಲಯ: ಇದು ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
  • ಉದ್ದೇಶ: ಅಪರಾಧ ಮತ್ತು ಅಪರಾಧಿಗಳ ನಡುವಿನ ಜಾಲವನ್ನು ಪತ್ತೆಹಚ್ಚುವಲ್ಲಿ ತನಿಖಾಧಿಕಾರಿಗಳಿಗೆ ನೆರವಾಗುವಂತೆ, ಇದು ಅಪರಾಧ ಹಾಗೂ ಅಪರಾಧಿಗಳ ಮಾಹಿತಿಯ ಭಂಡಾರವಾಗಿ ಕಾರ್ಯನಿರ್ವಹಿಸುತ್ತದೆ.
  • ಪ್ರಧಾನ ಕಚೇರಿ: ನವದೆಹಲಿ.
  • NCRB ಯಿಂದ ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳು:
    • ಪರಸ್ಪರ ಕಾರ್ಯಸಾಧ್ಯವಾದ ಅಪರಾಧ ನ್ಯಾಯ ವ್ಯವಸ್ಥೆ (Inter-Operable Criminal Justice System – ICJS) ಯೋಜನೆ.
    • ಅಪರಾಧ ಮತ್ತು ಅಪರಾಧಿಗಳ ಪತ್ತೆಹಚ್ಚುವ ಜಾಲ ಮತ್ತು ವ್ಯವಸ್ಥೆಗಳು (Crime and Criminal Tracking Network & Systems – CCTNS).
  • ವರದಿಗಳು: NCRB ಮೂರು ವಾರ್ಷಿಕ ವರದಿಗಳನ್ನು ಹೊರತರುತ್ತದೆ. ಈ ವರದಿಗಳು ಪೊಲೀಸ್ ಅಧಿಕಾರಿಗಳು, ಸಂಶೋಧಕರು, ಮಾಧ್ಯಮಗಳು ಮತ್ತು ನೀತಿ ನಿರೂಪಕರಿಗೆ ಪ್ರಮುಖ ಉಲ್ಲೇಖಗಳಾಗಿವೆ:
    • ಭಾರತದಲ್ಲಿ ಅಪರಾಧ (Crime in India).
    • ಭಾರತದಲ್ಲಿ ಆಕಸ್ಮಿಕ ಸಾವುಗಳು ಮತ್ತು ಆತ್ಮಹತ್ಯೆಗಳು (Accidental Deaths & Suicides in India).
    • ಭಾರತದ ಕಾರಾಗೃಹ ಅಂಕಿಅಂಶಗಳು (Prison Statistics India).

ಕೇರಳದ ತೈಲ ಸೋರಿಕೆ ತುರ್ತು ಕಾರ್ಯಯೋಜನೆ (Kerala’s Oil Spill Contingency Plan)

ಪರಿಸರ

ಇತ್ತೀಚೆಗೆ ಸುದ್ದಿಯಲ್ಲಿದೆ:

  • ಸಮುದ್ರ ಮಾಲಿನ್ಯ ಮತ್ತು ಕರಾವಳಿ ಪರಿಸರಕ್ಕೆ ಎದುರಾಗುವ ಅಪಾಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ, 2025ರಲ್ಲಿ ಕೇರಳ ಕರಾವಳಿಯ ಆಚೆಗೆ ಸಂಭವಿಸಿದ ಹಡಗು ಮುಳುಗಡೆ ಘಟನೆಗಳ ಹಿನ್ನೆಲೆಯಲ್ಲಿ ಕೇರಳ ಸರ್ಕಾರವು ‘ತೈಲ ಸೋರಿಕೆ ತುರ್ತು ಕಾರ್ಯಯೋಜನೆ’ಯನ್ನು (Oil Spill Contingency Plan) ಸಿದ್ಧಪಡಿಸಲು ಮುಂದಾಗಿದೆ.

ತೈಲ ಸೋರಿಕೆ (Oil Spill)

  • ವ್ಯಾಖ್ಯಾನ: ಟ್ಯಾಂಕರ್ ಅಪಘಾತಗಳು, ಕಡಲಾಚೆಯ ತೈಲ ಕೊರೆಯುವಿಕೆ ಅಥವಾ ಇಂಧನ ಸೋರಿಕೆಯಂತಹ ಮಾನವ ಚಟುವಟಿಕೆಗಳಿಂದಾಗಿ ಪೆಟ್ರೋಲಿಯಂ ವಸ್ತುಗಳು ಪರಿಸರಕ್ಕೆ, ವಿಶೇಷವಾಗಿ ಸಾಗರ ಮತ್ತು ಕರಾವಳಿ ನೀರಿಗೆ ಸೇರಿ ಗಂಭೀರ ಮಾಲಿನ್ಯವನ್ನು ಉಂಟುಮಾಡುವುದನ್ನು ಇದು ಸೂಚಿಸುತ್ತದೆ.

ತೈಲ ಸೋರಿಕೆಯ ಪರಿಣಾಮಗಳು

  • ಸಮುದ್ರ ಜೀವಿಗಳು: ತೈಲವು ಪಕ್ಷಿಗಳ ಗರಿಗಳು ಮತ್ತು ಸಸ್ತನಿಗಳ ತುಪ್ಪಳವನ್ನು ಆವರಿಸಿಕೊಳ್ಳುವುದರಿಂದ, ಅವುಗಳ ನೈಸರ್ಗಿಕ ನಿರೋಧಕ ಶಕ್ತಿ ಮತ್ತು ನೀರಿನಲ್ಲಿ ತೇಲುವ ಸಾಮರ್ಥ್ಯವು ನಾಶವಾಗುತ್ತದೆ. ಇದು ದೇಹದ ಉಷ್ಣಾಂಶವು ತೀವ್ರವಾಗಿ ಕುಸಿಯುವಿಕೆಗೆ (ಹೈಪೋಥರ್ಮಿಯಾ – Hypothermia) ಅಥವಾ ನೀರಿನಲ್ಲಿ ಮುಳುಗಿ ಸಾಯಲು ಕಾರಣವಾಗುತ್ತದೆ.
  • ಪರಿಸರ ವ್ಯವಸ್ಥೆಯ ಅಡ್ಡಿ: ದಪ್ಪನಾದ ತೈಲದ ಪದರಗಳು ಸೂರ್ಯನ ಬೆಳಕು ಮತ್ತು ಆಮ್ಲಜನಕವನ್ನು ತಡೆಯುತ್ತವೆ. ಇದರಿಂದಾಗಿ ಸಮುದ್ರದ ಸಸ್ಯಪ್ಲವಕಗಳು (Phytoplanktons) ನಾಶವಾಗುತ್ತವೆ, ಜೊತೆಗೆ ಮ್ಯಾಂಗ್ರೋವ್‌ಗಳು, ಹವಳದ ಬಂಡೆಗಳು ಹಾಗೂ ಉಪ್ಪುನೀರಿನ ಜವುಗು ಪ್ರದೇಶಗಳಂತಹ ಸೂಕ್ಷ್ಮ ಆವಾಸಸ್ಥಾನಗಳು ಉಸಿರುಗಟ್ಟುತ್ತವೆ.
  • ಆರ್ಥಿಕ ನಷ್ಟ: ಈ ಸೋರಿಕೆಯು ಮೀನುಗಾರಿಕೆ, ಪ್ರವಾಸೋದ್ಯಮ ಮತ್ತು ಕರಾವಳಿಯ ಜನರ ಜೀವನೋಪಾಯಕ್ಕೆ ತಕ್ಷಣದ ಹಾಗೂ ದೀರ್ಘಾವಧಿಯ ಹಾನಿಯನ್ನು ಉಂಟುಮಾಡುತ್ತದೆ.
  • ಮಾನವನ ಆರೋಗ್ಯ: ಕಲುಷಿತಗೊಂಡ ಸಮುದ್ರಾಹಾರ ಮತ್ತು ವಿಷಕಾರಿ ಅನಿಲಗಳು ಕರಾವಳಿ ಸಮುದಾಯಗಳಿಗೆ ಹಾಗೂ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರಿಗೆ ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತವೆ.

ತೈಲ ಸೋರಿಕೆಯನ್ನು ಸ್ವಚ್ಛಗೊಳಿಸಲು ಬಳಸುವ ವಿಧಾನಗಳು

  • ತೇಲುವ ತಡೆಗೋಡೆಗಳು ಮತ್ತು ತೈಲ ಹೀರುಯಂತ್ರಗಳು (Booms & Skimmers): ತೇಲುವ ತಡೆಗೋಡೆಗಳ (ಬೂಮ್ಸ್) ಮೂಲಕ ತೈಲವು ಹರಡದಂತೆ ನಿಯಂತ್ರಿಸಲಾಗುತ್ತದೆ, ನಂತರ ಸ್ಕಿಮ್ಮರ್‌ಗಳ (ನಿರ್ವಾತ-ರೀತಿಯ ಯಂತ್ರಗಳು) ಮೂಲಕ ಮೇಲ್ಮೈಯಲ್ಲಿರುವ ತೈಲವನ್ನು ಹೀರಿ ತೆಗೆಯಲಾಗುತ್ತದೆ.
  • ಪ್ರಸರಣಕಾರಕಗಳು (Dispersants): ಇವು ತೈಲವನ್ನು ಸಣ್ಣ ಹನಿಗಳಾಗಿ ಒಡೆಯುವ ರಾಸಾಯನಿಕಗಳಾಗಿದ್ದು, ಇವು ತೈಲವು ನೀರಿನೊಂದಿಗೆ ಬೆರೆತು ವೇಗವಾಗಿ ವಿಘಟನೆಗೊಳ್ಳಲು ಅನುವು ಮಾಡಿಕೊಡುತ್ತವೆ.
  • ಜೈವಿಕ ಪರಿಹಾರ (Bioremediation): ಹೈಡ್ರೋಕಾರ್ಬನ್‌ಗಳನ್ನು ಕಡಿಮೆ ಹಾನಿಕಾರಕ ವಸ್ತುಗಳಾಗಿ ವಿಭಜಿಸಲು, ತೈಲವನ್ನು ನಾಶಪಡಿಸುವ ಬ್ಯಾಕ್ಟೀರಿಯಾಗಳನ್ನು (ಉದಾಹರಣೆಗೆ: ಸೈಕ್ಲೋಕ್ಲಾಸ್ಟಿಕಸ್ ಬ್ಯಾಕ್ಟೀರಿಯಾ ಅಥವಾ ಟೆರಿ (TERI) ಸಂಸ್ಥೆಯು ಅಭಿವೃದ್ಧಿಪಡಿಸಿದ ‘ಆಯಿಲ್ ಜಾಪರ್’) ಬಳಸುವುದು.
  • ಸ್ಥಳದಲ್ಲೇ ಸುಡುವುದು (In-situ Burning): ಹೊಸದಾಗಿ ಸೋರಿಕೆಯಾದ ತೈಲಕ್ಕೆ ಬೆಂಕಿ ಹಚ್ಚುವ ಮೂಲಕ ಶೇ. 98 ರಷ್ಟು ತೈಲವನ್ನು ತೆಗೆದುಹಾಕಬಹುದು, ಆದರೂ ಇದು ಭಾರಿ ವಾಯುಮಾಲಿನ್ಯವನ್ನು ಉಂಟುಮಾಡುತ್ತದೆ.

ಸಮುದ್ರ ಮಾಲಿನ್ಯವನ್ನು ತಡೆಗಟ್ಟುವ ಪ್ರಯತ್ನಗಳು

  • ರಾಷ್ಟ್ರೀಯ ತೈಲ ಸೋರಿಕೆ ವಿಪತ್ತು ತುರ್ತು ಕಾರ್ಯಯೋಜನೆ (NOS-DCP): ಭಾರತೀಯ ಕರಾವಳಿ ಕಾವಲು ಪಡೆ (Indian Coast Guard – ICG) ತೈಲ ಸೋರಿಕೆಗಳ ಕುರಿತು ವರದಿ ಮಾಡಲು ಮತ್ತು ಕಾರ್ಯಾಚರಣೆ ಕೈಗೊಳ್ಳಲು ಇರುವ ಕೇಂದ್ರ ಸಮನ್ವಯ ಪ್ರಾಧಿಕಾರವಾಗಿದೆ.
  • ಬಂಕರ್ ತೈಲ ಸಮಾವೇಶ, 2001 (Bunker Oil Convention, 2001): ಹಡಗುಗಳಿಂದ ಇಂಧನ ತೈಲ ಸೋರಿಕೆಯಾಗಿ ಉಂಟಾಗುವ ಹಾನಿಗೆ ತ್ವರಿತ ಪರಿಹಾರ ಒದಗಿಸುವುದನ್ನು ಇದು ಖಚಿತಪಡಿಸುತ್ತದೆ.
  • MARPOL 73/78 (ಅನುಬಂಧ I): ಇದು ಹಡಗುಗಳಿಂದಾಗುವ ಸಮುದ್ರ ಮಾಲಿನ್ಯವನ್ನು ತಡೆಗಟ್ಟುವ ಗುರಿಯನ್ನು ಹೊಂದಿರುವ ಅಂತರರಾಷ್ಟ್ರೀಯ ಒಪ್ಪಂದವಾಗಿದೆ.
  • ಪರಿಸರ ಸಂರಕ್ಷಣಾ ಕಾಯ್ದೆ (EPA), 1986: ತೈಲ ಸೋರಿಕೆಯನ್ನು ನಿಭಾಯಿಸಲು ಪ್ರತ್ಯೇಕ ಕಾನೂನು ಇಲ್ಲದಿದ್ದರೂ, ಇಂತಹ ಘಟನೆಗಳನ್ನು ಹೆಚ್ಚಾಗಿ ಈ ಕಾಯ್ದೆಯಡಿ “ಆಕಸ್ಮಿಕ ಹೊರಸೂಸುವಿಕೆ” (Accidental discharge) ಎಂದು ಪರಿಗಣಿಸಿ ಮೊಕದ್ದಮೆ ಹೂಡಲಾಗುತ್ತದೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts