ಲೇಖಕ: instakas

  • ಮುಖ್ಯ ಚುನಾವಣಾ ಆಯುಕ್ತರ ವಜಾಗೊಳಿಸುವ ಪ್ರಕ್ರಿಯೆ | ಮೇಘಾಲಯದಲ್ಲಿ ಸ್ವಾಯತ್ತ ಜಿಲ್ಲಾ ಮಂಡಳಿಗಳು | ಸೈಟ್ಸ್ (CITES) | ನೀಲಗಿರಿ ತಾಹರ್ (Nilgiri Tahr) | ಲೋಕಪಾಲ್‌ನ ತನಿಖಾ ಮತ್ತು ಅಭಿಯೋಜನಾ (ದೋಷಾರೋಪ) ವಿಭಾಗ

    ಮುಖ್ಯ ಚುನಾವಣಾ ಆಯುಕ್ತರ ವಜಾಗೊಳಿಸುವ ಪ್ರಕ್ರಿಯೆ

    ರಾಜಕೀಯ

    ಇದೀಗ ಸುದ್ದಿಯಲ್ಲಿದೆ: 

    • ವಿರೋಧ ಪಕ್ಷಗಳು ಪ್ರಸ್ತುತ ಮುಖ್ಯ ಚುನಾವಣಾ ಆಯುಕ್ತರಾದ (CEC) ಜ್ಞಾನೇಶ್ ಕುಮಾರ್ ಅವರ ವಿರುದ್ಧ ಸಂಸತ್ತಿನಲ್ಲಿ ಅವರನ್ನು ವಜಾಗೊಳಿಸಲು ಮಹಾಭಿಯೋಗ ನಿರ್ಣಯವನ್ನು ಮಂಡಿಸಲು ಚಿಂತನೆ ನಡೆಸುತ್ತಿವೆ.

    ‘ಸಂವಿಧಾನದ 324ನೇ ವಿಧಿ’ಯ ಬಗ್ಗೆ:

      • ಭಾರತದ ಸಂವಿಧಾನದ 324ನೇ ವಿಧಿಯ ಪ್ರಕಾರ, ಭಾರತದ ಚುನಾವಣಾ ಆಯೋಗವು (ECI) ಒಬ್ಬರು ಮುಖ್ಯ ಚುನಾವಣಾ ಆಯುಕ್ತರನ್ನು (CEC) ಹಾಗೂ ರಾಷ್ಟ್ರಪತಿಗಳು ನಿರ್ಧರಿಸುವಷ್ಟು ಸಂಖ್ಯೆಯ ಇತರ ಚುನಾವಣಾ ಆಯುಕ್ತರನ್ನು (ECs) ಒಳಗೊಂಡಿರುತ್ತದೆ.
    • ಭಾರತದ ಚುನಾವಣಾ ಆಯೋಗವು ಈ ಕೆಳಗಿನ ಜವಾಬ್ದಾರಿಗಳನ್ನು ಹೊಂದಿದೆ:
    • ಸಂಸತ್ತು, ರಾಜ್ಯ ಶಾಸಕಾಂಗಗಳು ಹಾಗೂ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಹುದ್ದೆಗಳಿಗೆ ಮುಕ್ತ ಮತ್ತು ನಿಷ್ಪಕ್ಷಪಾತವಾಗಿ ಚುನಾವಣೆಗಳನ್ನು ನಡೆಸುವುದು ಹಾಗೂ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು.
    • ಚುನಾವಣಾ ಆಯುಕ್ತರನ್ನು ನೇಮಕ:- ಸಂಸತ್ತಿನ ಕಾಯ್ದೆಯ ನಿಬಂಧನೆಗಳಿಗೆ ಒಳಪಟ್ಟು, ರಾಷ್ಟ್ರಪತಿಗಳು ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇತರ ಚುನಾವಣಾ ಆಯುಕ್ತರನ್ನು ನೇಮಕ ಮಾಡುತ್ತಾರೆ ಎಂದು ಸಂವಿಧಾನವು ಸ್ಪಷ್ಟಪಡಿಸುತ್ತದೆ.

    ಮುಖ್ಯ ಚುನಾವಣಾ ಆಯುಕ್ತರನ್ನು ವಜಾಗೊಳಿಸುವ ಸಾಂವಿಧಾನಿಕ ನಿಬಂಧನೆಗಳು:

      • ಭಾರತದ ಸಂವಿಧಾನದ 324(5) ನೇ ವಿಧಿಯ ಅನ್ವಯ, ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ವಜಾಗೊಳಿಸುವ ಪ್ರಕ್ರಿಯೆಯ ರೀತಿಯಲ್ಲಿಯೇ ಮತ್ತು ಅದೇ ಆಧಾರಗಳ ಮೇರೆಗೆ ಮಾತ್ರ ಮುಖ್ಯ ಚುನಾವಣಾ ಆಯುಕ್ತರನ್ನು ಹುದ್ದೆಯಿಂದ ವಜಾಗೊಳಿಸಬಹುದು (ಪದಚ್ಯುತಿಗೊಳಿಸಬಹುದು).
      • ಮುಖ್ಯ ಚುನಾವಣಾ ಆಯುಕ್ತರ ವಜಾ ಕೋರುವ ನಿರ್ಣಯವನ್ನು ಸಂಸತ್ತಿನ ಯಾವುದೇ ಸದನದಲ್ಲಿ (ಲೋಕಸಭೆ ಅಥವಾ ರಾಜ್ಯಸಭೆ) ಮಂಡಿಸಬಹುದು. ಆದರೆ, ಆ ನಿರ್ಣಯದಲ್ಲಿ ವಜಾಗೊಳಿಸಲು ಇರುವ ನಿಖರವಾದ ಕಾರಣಗಳನ್ನು ಸ್ಪಷ್ಟವಾಗಿ ನಮೂದಿಸಿರಬೇಕು.
    • ಈ ನಿರ್ಣಯವನ್ನು ಮಂಡಿಸಲು ಕೆಳಕಂಡ ರೀತಿಯಲ್ಲಿ ಬೆಂಬಲ ಅಗತ್ಯವಿರುತ್ತದೆ:
        • ಲೋಕಸಭೆಯ ಕನಿಷ್ಠ 100 ಸದಸ್ಯರ ಬೆಂಬಲ, ಅಥವಾ
    • ರಾಜ್ಯಸಭೆಯ ಕನಿಷ್ಠ 50 ಸದಸ್ಯರ ಬೆಂಬಲ.
    • ಒಮ್ಮೆ ಈ ನಿರ್ಣಯವನ್ನು ಅಂಗೀಕರಿಸಿದ ನಂತರ, ಆರೋಪಗಳ ಕುರಿತು ತನಿಖೆ ನಡೆಸಲು ಲೋಕಸಭೆಯ ಸಭಾಧ್ಯಕ್ಷರು ಅಥವಾ ರಾಜ್ಯಸಭೆಯ ಸಭಾಪತಿಯವರು ಒಂದು ವಿಚಾರಣಾ ಸಮಿತಿಯನ್ನು ರಚಿಸುತ್ತಾರೆ.
    • ಒಂದು ವೇಳೆ ಈ ಸಮಿತಿಯು ಆರೋಪಗಳು ಸಾಬೀತಾಗಿವೆ ಎಂದು ವರದಿ ನೀಡಿದರೆ, ಆ ನಿರ್ಣಯವನ್ನು ಸಂಸತ್ತಿನಲ್ಲಿ ಮತದಾನಕ್ಕೆ ತೆಗೆದುಕೊಳ್ಳಲಾಗುತ್ತದೆ.
    • ನಂತರ, ಎರಡೂ ಸದನಗಳು ಹಾಜರಿರುವ ಮತ್ತು ಮತ ಚಲಾಯಿಸುವ ಸದಸ್ಯರ ಪೈಕಿ ಮೂರನೇ ಎರಡರಷ್ಟು (2/3ರಷ್ಟು) ‘ವಿಶೇಷ ಬಹುಮತ’ದೊಂದಿಗೆ ಆ ನಿರ್ಣಯವನ್ನು ಅಂಗೀಕರಿಸಬೇಕು. ಎರಡೂ ಸದನಗಳು ಈ ನಿರ್ಣಯವನ್ನು ಒಪ್ಪಿದ ನಂತರ, ಅಂತಿಮವಾಗಿ ರಾಷ್ಟ್ರಪತಿಗಳು ವಜಾಗೊಳಿಸುವ ಆದೇಶವನ್ನು ಹೊರಡಿಸುತ್ತಾರೆ.

    ಮೇಘಾಲಯದಲ್ಲಿ ಸ್ವಾಯತ್ತ ಜಿಲ್ಲಾ ಮಂಡಳಿಗಳು

    ರಾಜಕೀಯ ಮತ್ತು ಆಡಳಿತ

    ಇದೀಗ ಸುದ್ದಿಯಲ್ಲಿದೆ:

    • ‘ಪಶ್ಚಿಮ ಗಾರೊ ಹಿಲ್ಸ್’ ಜಿಲ್ಲೆಯಲ್ಲಿ ನಡೆಯುತ್ತಿರುವ ನಿರಂತರ ಹಿಂಸಾಚಾರ ಮತ್ತು ಅಶಾಂತಿಯ ಹಿನ್ನೆಲೆಯಲ್ಲಿ, ಮೇಘಾಲಯದ ‘ಗಾರೊ ಹಿಲ್ಸ್ ಸ್ವಾಯತ್ತ ಜಿಲ್ಲಾ ಮಂಡಳಿ’ಯ ಚುನಾವಣೆಯನ್ನು ಮುಂದೂಡಲಾಗಿದೆ.

    ಸ್ವಾಯತ್ತ ಜಿಲ್ಲಾ ಮಂಡಳಿಗಳ ಬಗ್ಗೆ ಸಾಂವಿಧಾನಿಕ ನಿಬಂಧನೆಗಳು:

    • ಭಾರತದ ಸಂವಿಧಾನದ 6ನೇ ಅನುಸೂಚಿಯ ವಿಧಿ 244(2) ಮತ್ತು 275(1) ರನ್ವಯ ಅಸ್ಸಾಂ, ಮೇಘಾಲಯ, ತ್ರಿಪುರಾ ಮತ್ತು ಮಿಜೋರಾಂನಂತಹ ಈಶಾನ್ಯ ರಾಜ್ಯಗಳಲ್ಲಿರುವ ಬುಡಕಟ್ಟು ಪ್ರದೇಶಗಳಿಗೆ ವಿಶಿಷ್ಟವಾದ ಸ್ವಾಯತ್ತ ಆಡಳಿತ ವ್ಯವಸ್ಥೆಗಳನ್ನು ಒದಗಿಸುತ್ತದೆ.
    • ಮೇಘಾಲಯದಲ್ಲಿರುವ ‘ಸ್ವಾಯತ್ತ ಜಿಲ್ಲಾ ಮಂಡಳಿ’ಗಳು (ADCs) ಸ್ಥಳೀಯ ಬುಡಕಟ್ಟು ಸಮುದಾಯಗಳ ರಾಜಕೀಯ, ಸಾಂಸ್ಕೃತಿಕ ಮತ್ತು ಆರ್ಥಿಕ ಹಕ್ಕುಗಳನ್ನು ರಕ್ಷಿಸಲು ಸಂವಿಧಾನದ 6ನೇ ಅನುಸೂಚಿಯ ಅಡಿಯಲ್ಲಿ ರಚಿಸಲಾದ ವಿಶೇಷ ಸ್ಥಳೀಯ ಸಾಯತ್ತ ಆಡಳಿತ ಸಂಸ್ಥೆಗಳಾಗಿವೆ.
    • ಈ ಮಂಡಳಿಗಳು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಹಣಕಾಸಿನ ಅಧಿಕಾರಗಳನ್ನು ಹೊಂದಿವೆ.

    ಪ್ರಮುಖ ಉದ್ದೇಶಗಳು:

    • ಬುಡಕಟ್ಟು ಜನಾಂಗದವರ ಭೂಮಿ ಮತ್ತು ಅವರ ಸಾಂಪ್ರದಾಯಿಕ ಪದ್ಧತಿಗಳನ್ನು ರಕ್ಷಿಸುವುದು.
    • ಸ್ಥಳೀಯ ಬುಡಕಟ್ಟು ಸಮುದಾಯಗಳಿಗೆ ಸ್ವಾಯತ್ತ ಆಡಳಿತವನ್ನು ಒದಗಿಸುವುದು.
    • ಬಾಹ್ಯ ಗುಂಪುಗಳಿಂದ ಈ ಸಮುದಾಯಗಳ ಮೇಲೆ ಆಗಬಹುದಾದ ಶೋಷಣೆಯನ್ನು ತಡೆಯಲು ಈ ಮಂಡಳಿಗಳು ಕಾರ್ಯನಿರ್ವಹಿಸುತ್ತವೆ.

    ಸೈಟ್ಸ್ (CITES)

    ಪರಿಸರ

    ಇದೀಗ ಸುದ್ದಿಯಲ್ಲಿದೆ:

    • ‘ಅಳಿವಿನಂಚಿನಲ್ಲಿರುವ ವನ್ಯಜೀವಿಗಳು ಮತ್ತು ಸಸ್ಯ ಪ್ರಭೇದಗಳ ಅಂತರರಾಷ್ಟ್ರೀಯ ವ್ಯಾಪಾರ ಒಪ್ಪಂದ‘ದ (CITES) ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಭಾರತದ ಸರ್ವೋಚ್ಚ ನ್ಯಾಯಾಲಯವು ಇತ್ತೀಚಿಗೆ ವಜಾಗೊಳಿಸಿದೆ.

    CITES ಒಪ್ಪಂದದ ಬಗ್ಗೆ:

    • CITES ಸಂಪೂರ್ಣ ರೂಪ:- ಕಾನ್ವೆಂಷನ್ ಆನ್ ಇಂಟರ್ನ್ಯಾಷನಲ್ ಟ್ರೇಡ್ ಇನ್ ಎಂಡೇಂಜೆರ್ಡ್ ಸ್ಪೆಷಿಸ್ ಆಫ್ ವೈಲ್ಡ್ ಫಾನಾ ಅಂಡ್ ಫ್ಲೋರಾ (ಅಳಿವಿನಂಚಿನಲ್ಲಿರುವ ವನ್ಯಜೀವಿಗಳು ಮತ್ತು ಸಸ್ಯ ಪ್ರಭೇದಗಳ ಅಂತರರಾಷ್ಟ್ರೀಯ ವ್ಯಾಪಾರ ಒಪ್ಪಂದ).
    • ಕಾನೂನುಬದ್ಧವಾದ ಒಪ್ಪಂದ:- ಕಾಡು ಪ್ರಾಣಿಗಳ ಮತ್ತು ಸಸ್ಯಗಳ ಅಂತರರಾಷ್ಟ್ರೀಯ ವ್ಯಾಪಾರವು ಆ ಪ್ರಭೇದಗಳ ಉಳಿವಿಗೆ ಅಪಾಯವಾಗದಂತೆ ನೋಡಿಕೊಳ್ಳುವ ಉದ್ದೇಶವನ್ನು ಹೊಂದಿದೆ.
    • ಕಟ್ಟುನಿಟ್ಟಾಗಿ ನಿಯಂತ್ರಿಸುತ್ತದೆ:- ಇದು ವನ್ಯಜೀವಿಗಳ ವ್ಯಾಪಾರವನ್ನು ಸಂಪೂರ್ಣವಾಗಿ ನಿಷೇಧಿಸುವುದಿಲ್ಲ; ಬದಲಾಗಿ, ಪರವಾನಗಿಗಳು ಮತ್ತು ವರ್ಗೀಕರಣಗಳ ವ್ಯವಸ್ಥೆಯ ಮೂಲಕ ಅದನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುತ್ತದೆ.
    • ಸಹಿ ಮತ್ತು ಜಾರಿ:- ಈ ಒಪ್ಪಂದಕ್ಕೆ 1973 ರಲ್ಲಿ ವಾಷಿಂಗ್ಟನ್ ಸಮ್ಮೇಳನದಲ್ಲಿ ಸಹಿ ಹಾಕಲಾಯಿತು ಹಾಗೂ ಇದು 1975 ರಲ್ಲಿ ಅಧಿಕೃತವಾಗಿ ಜಾರಿಗೆ ಬಂದಿತು.
    • ಆಡಳಿತ ನಿರ್ವಹಣೆ:- ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿರುವ, ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP)ದ ಸಚಿವಾಲಯವು ಇದರ ಆಡಳಿತವನ್ನು ನಿರ್ವಹಿಸುತ್ತದೆ.
    • ಸದಸ್ಯ ರಾಷ್ಟ್ರಗಳು:- ಭಾರತವು ಸಹ ಸೇರಿದಂತೆ 180 ಕ್ಕೂ ಹೆಚ್ಚು ರಾಷ್ಟ್ರಗಳು.
    • ಸ್ವರೂಪ:- ಇದು ಸದಸ್ಯ ರಾಷ್ಟ್ರಗಳ ಮೇಲೆ ಕಾನೂನುಬದ್ಧವಾಗಿ ಬದ್ಧವಾಗಿರುತ್ತದೆ. ಆದರೆ, ಇದರ ಅನುಷ್ಠಾನವನ್ನು ಆಯಾ ದೇಶಗಳು ತಮ್ಮದೇ ಆದ ರಾಷ್ಟ್ರೀಯ ಕಾನೂನುಗಳ ಮೂಲಕ ಮಾಡಬೇಕಾಗುತ್ತದೆ.
    • ಸಾಂಸ್ಥಿಕ ಸ್ವರೂಪ:- ‘ಪಕ್ಷಗಳ ಸಮ್ಮೇಳನ’ (CoP) ಎಂಬುದು ಇದರ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿದೆ. ಈ ಸಂಸ್ಥೆಯು ಪ್ರತಿ 2-3 ವರ್ಷಗಳಿಗೊಮ್ಮೆ ಸಭೆ ಸೇರುತ್ತದೆ.

    ಮೂರು ಅನುಬಂಧಗಳು:

    • ಅನುಬಂಧ 1ತೀವ್ರವಾಗಿ ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ಒಳಗೊಂಡಿದೆ:- ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಇವುಗಳ ವ್ಯಾಪಾರಕ್ಕೆ ಅವಕಾಶ ನೀಡಲಾಗುತ್ತದೆ. 
    • ಉದಾಹರಣೆ:- ಹುಲಿ, ಆನೆ (ಕೆಲವು ನಿರ್ದಿಷ್ಟ ಪ್ರಭೇದಗಳು) ಮತ್ತು ಖಡ್ಗಮೃಗ.
    • ಅನುಬಂಧ 2 – ತಕ್ಷಣವೆ ಅಳಿವಿನಂಚಿನಲ್ಲಿಲ್ಲದ, ಆದರೆ ಭವಿಷ್ಯದಲ್ಲಿ ಅಂತಹ ಅಪಾಯಕ್ಕೆ ಸಿಲುಕಬಹುದಾದ ಪ್ರಭೇದಗಳನ್ನು ಒಳಗೊಂಡಿದೆ:- ಇವುಗಳ ನಿಯಂತ್ರಿತ ವ್ಯಾಪಾರಕ್ಕೆ ಮಾತ್ರ ಅವಕಾಶವಿದೆ. 
    • ಉದಾಹರಣೆ:- ಅನೇಕ ಮರಮಟ್ಟುಗಳ ಪ್ರಭೇದಗಳು ಹಾಗೂ ಸಮುದ್ರ ಜೀವಿಗಳು (ಉದಾಹರಣೆಗೆ: ಶಾರ್ಕ್).
    • ಅನುಬಂಧ 3 – ಕನಿಷ್ಠ ಒಂದು ದೇಶದಲ್ಲಾದರೂ ಸಂರಕ್ಷಿಸಲ್ಪಟ್ಟಿರುವ ಪ್ರಭೇದಗಳನ್ನು ಒಳಗೊಂಡಿದೆ:- ಇವುಗಳ ವ್ಯಾಪಾರವನ್ನು ನಿಯಂತ್ರಿಸಲು ಇತರ ಸದಸ್ಯ ದೇಶಗಳು ಸಹಾಯ ಮಾಡುತ್ತವೆ.

    ಭಾರತ ಮತ್ತು CITES:

    • ಭಾರತವು 1976 ರಿಂದಲೇ ಈ ಒಪ್ಪಂದಕ್ಕೆ ಸಹಿ ಹಾಕಿದೆ:- ‘ವನ್ಯಜೀವಿ ಸಂರಕ್ಷಣಾ ಕಾಯ್ದೆ 1972’ ರ ಮೂಲಕ ಇದನ್ನು ಭಾರತದಲ್ಲಿ ಜಾರಿಗೆ ತರಲಾಗಿದೆ.
    • ಪ್ರಮುಖ ಪ್ರಾಧಿಕಾರಗಳು:- 
    • ನಿರ್ವಹಣಾ ಪ್ರಾಧಿಕಾರ:- ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC).
    • ವೈಜ್ಞಾನಿಕ ಪ್ರಾಧಿಕಾರ:- ಭಾರತೀಯ ವನ್ಯಜೀವಿ ಸಂಸ್ಥೆ (WII).

    ನೀಲಗಿರಿ ತಾಹರ್ (Nilgiri Tahr)

    ಪರಿಸರ

    ಇದೀಗ ಸುದ್ದಿಯಲ್ಲಿದೆ:

    • ಕೇರಳದ ಇಡುಕ್ಕಿ ಜಿಲ್ಲೆಯ ಮುನ್ನಾರ್ ಬಳಿಯಿರುವ ಚೊಕ್ರಮುಡಿ ಬೆಟ್ಟಗಳು ಇದೀಗ ‘ನೀಲಗಿರಿ ತಾಹರ್’ಗಳ ಅತ್ಯುತ್ತಮ ನೈಸರ್ಗಿಕ ಆವಾಸಸ್ಥಾನವಾಗಿ ಮಾರ್ಪಟ್ಟಿವೆ.

    ನೀಲಗಿರಿ ತಾಹರ್ ಬಗ್ಗೆ:

    • ವೈಜ್ಞಾನಿಕ ಹೆಸರು:- ನೀಲಗಿರಿಟ್ರಾಗಸ್ ಹೈಲೋಕ್ರಿಯಸ್ (Nilgiritragus hylocrius).
    • ದೃಢಕಾಯದ ಪರ್ವತ ಕಾಡು ಮೇಕೆಯಾಗಿದೆ:- ಚಿಕ್ಕದಾದ ಮತ್ತು ಹಳದಿ-ಕಂದು ಬಣ್ಣದ ತುಪ್ಪಳವನ್ನು ಹೊಂದಿದೆ. 
    • ಇದು ತಮಿಳುನಾಡಿನ ರಾಜ್ಯ ಪ್ರಾಣಿಯಾಗಿದೆ.
    • ಆವಾಸಸ್ಥಾನ ಮತ್ತು ಭೌಗೋಳಿಕ ವ್ಯಾಪ್ತಿ:- ಇದು ಪ್ರಾಥಮಿಕವಾಗಿ ಕೇರಳ ಮತ್ತು ತಮಿಳುನಾಡಿನಾದ್ಯಂತ ಪಶ್ಚಿಮ ಘಟ್ಟಗಳ 400 ಕಿ.ಮೀ. ಉದ್ದದ ಪ್ರದೇಶಕ್ಕೆ ಮಾತ್ರ ಸೀಮಿತವಾದ (ಸ್ಥಳೀಯ) ಪ್ರಾಣಿಯಾಗಿದೆ.
    • ಸಂಪೂರ್ಣ ಸಸ್ಯಾಹಾರಿಯಾಗಿದೆ:- 120 ಕ್ಕೂ ಹೆಚ್ಚು ಪ್ರಭೇದದ ಹುಲ್ಲು, ಗಿಡಮೂಲಿಕೆಗಳು ಮತ್ತು ಪೊದೆಗಳನ್ನು ತಿನ್ನುತ್ತದೆ.
    • ಎದುರಿಸುತ್ತಿರುವ ಅಪಾಯಗಳು:- ಆವಾಸಸ್ಥಾನದ ನಾಶ (ಅರಣ್ಯನಾಶ, ತೋಟಗಾರಿಕೆ ವಿಸ್ತರಣೆ, ಜಲವಿದ್ಯುತ್ ಯೋಜನೆಗಳು), ಸಾಕುಪ್ರಾಣಿಗಳೊಂದಿಗಿನ ಸ್ಪರ್ಧೆ ಮತ್ತು ಬೇಟೆಯಾಡುವಿಕೆ.
    • ಸಂರಕ್ಷಣಾ ಸ್ಥಾನಮಾನ:-
    • IUCN ಕೆಂಪು ಪಟ್ಟಿಯಲ್ಲಿ:- ‘ಅಳಿವಿನಂಚಿನಲ್ಲಿರುವ’ (EN). 
    • ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿಯಲ್ಲಿ:-   1ನೇ ಅನುಸೂಚಿ.
    • ಕೇರಳದ ಎರವಿಕುಲಂ ರಾಷ್ಟ್ರೀಯ ಉದ್ಯಾನವನವು ಈ ಪ್ರಭೇದದ ಅತಿ ಹೆಚ್ಚು ಜನಸಂಖ್ಯೆ ಮತ್ತು ಅತಿ ಹೆಚ್ಚಿನ ಸಾಂದ್ರತೆಯನ್ನು ಹೊಂದಿದೆ.

    ಲೋಕಪಾಲ್‌ನ ತನಿಖಾ ಮತ್ತು ಅಭಿಯೋಜನಾ (ದೋಷಾರೋಪ) ವಿಭಾಗ

    ರಾಜಕೀಯ ಮತ್ತು ಆಡಳಿತ

    ಇದೀಗ ಸುದ್ದಿಯಲ್ಲಿದೆ: 

    • ‘ಲೋಕಪಾಲ್ ಮತ್ತು ಲೋಕಾಯುಕ್ತ ಕಾಯ್ದೆ, 2013’ರ ಅನ್ವಯ ‘ತನಿಖಾ ಮತ್ತು ಅಭಿಯೋಜನಾ ವಿಭಾಗ’ಗಳ ಕಾರ್ಯಾಚರಣೆಯ ಕುರಿತಂತೆ ಸಂಸದೀಯ ಸ್ಥಾಯಿ ಸಮಿತಿಯು ಕೇಂದ್ರ ಸರ್ಕಾರದಿಂದ ವಿವರಗಳನ್ನು ಕೋರಿದೆ. 
    • ಕಾಯ್ದೆ ಜಾರಿಯಾಗಿ ಒಂದು ದಶಕವೇ ಕಳೆದರೂ, ಈ ವಿಭಾಗಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡದಿರುವ ಕುರಿತು ಸಮಿತಿಯು ಕಳವಳ ವ್ಯಕ್ತಪಡಿಸಿದೆ.

    ಲೋಕಪಾಲ್ ಬಗ್ಗೆ:

    • ಕೇಂದ್ರ ಮಟ್ಟದ ‘ಶಾಸನಬದ್ಧ ಭ್ರಷ್ಟಾಚಾರ ನಿಗ್ರಹ ಸಂಸ್ಥೆ’ಯಾಗಿದೆ:- ಇದು “ಲೋಕಪಾಲ್ ಮತ್ತು ಲೋಕಾಯುಕ್ತ ಕಾಯ್ದೆ, 2013”ರ ಅಡಿಯಲ್ಲಿ ರಚನೆಯಾಗಿದೆ. ಇದು 2019 ರಿಂದ ಅಧಿಕೃತವಾಗಿ ಕಾರ್ಯಾರಂಭ ಮಾಡಿತು. 
    • ಉದ್ದೇಶ:- ಸಾರ್ವಜನಿಕ ಹುದ್ದೆಗಳಲ್ಲಿರುವವರ ವಿರುದ್ಧದ ಭ್ರಷ್ಟಾಚಾರದ ಆರೋಪಗಳನ್ನು ತನಿಖೆ ಮಾಡುವ ಶಾಸನಬದ್ಧ ಜವಾಬ್ದಾರಿಯನ್ನು ಇದು ಹೊಂದಿದೆ.
    • ಸಾಂಸ್ಥಿಕ ರಚನೆ:- ಇದು, 
    1. ಒಬ್ಬ ಅಧ್ಯಕ್ಷರನ್ನು (ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ, ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶರು ಅಥವಾ ಗಣ್ಯ ವ್ಯಕ್ತಿಗಳು ಆಗಿರುತ್ತಾರೆ).
    2. 8 ಜನ ಸದಸ್ಯರು:- ಈ 8 ಜನ ಸದಸ್ಯರ ಪೈಕಿ 4 ಜನ ‘ನ್ಯಾಯಾಂಗ ಸದಸ್ಯರು’ ಆಗಿರಬೇಕು. ಮತ್ತು ಮಂಡಳಿಯ ಕನಿಷ್ಠ ಶೇ.50ರಷ್ಟು ಸದಸ್ಯರು ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಇತರ ಹಿಂದುಳಿದ ವರ್ಗ (OBC), ಅಲ್ಪಸಂಖ್ಯಾತರು ಅಥವಾ ಮಹಿಳಾ ವರ್ಗಕ್ಕೆ ಸೇರಿದವರಾಗಿರಬೇಕು.
    • ನೇಮಕಾತಿ:- ಪ್ರಧಾನ ಮಂತ್ರಿಯವರ ನೇತೃತ್ವದ ಉನ್ನತಾಧಿಕಾರ ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳು ಇವರನ್ನು ನೇಮಕ ಮಾಡುತ್ತಾರೆ. 
    • ಅಧಿಕಾರಾವಧಿ:- 5 ವರ್ಷಗಳು ಅಥವಾ 70 ವರ್ಷ ವಯಸ್ಸಾಗುವವರೆಗೆ (ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ) ಇರುತ್ತದೆ.
    • ಅಧಿಕಾರ ವ್ಯಾಪ್ತಿ:- ಹಾಲಿ ಅಥವಾ ಮಾಜಿ ಪ್ರಧಾನ ಮಂತ್ರಿ, ಕೇಂದ್ರ ಸಚಿವರು, ಸಂಸತ್ ಸದಸ್ಯರು (MPs) ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳು (ಎ, ಬಿ, ಸಿ ಮತ್ತು ಡಿ ವೃಂದಗಳು) ಇದರ ವ್ಯಾಪ್ತಿಗೆ ಬರುತ್ತಾರೆ. ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಧನಸಹಾಯ ಪಡೆಯುವ ಅಥವಾ 10 ಲಕ್ಷ ರೂಪಾಯಿಗಿಂತ ಹೆಚ್ಚಿನ ವಿದೇಶಿ ದೇಣಿಗೆ ಪಡೆಯುವ ಸಂಸ್ಥೆಗಳ ಮುಖ್ಯಸ್ಥರು ಮತ್ತು ಆಡಳಿತ ಮಂಡಳಿಯ ಸದಸ್ಯರು ಸಹ ಇದರ ತನಿಖಾ ವ್ಯಾಪ್ತಿಗೆ ಒಳಪಡುತ್ತಾರೆ.
    • ಅಧಿಕಾರಗಳು:- ಕೇಂದ್ರೀಯ ತನಿಖಾ ದಳದ (CBI) ಮೇಲೆ ಮೇಲ್ವಿಚಾರಣೆ ನಡೆಸುವ ಮತ್ತು ಅದಕ್ಕೆ ನಿರ್ದೇಶನಗಳನ್ನು ನೀಡುವ ಅಧಿಕಾರವನ್ನು ಇದು ಹೊಂದಿದೆ. ಕೇಂದ್ರ ಸರ್ಕಾರಿ ನೌಕರರ ಮೇಲಿನ ದೂರುಗಳನ್ನು ‘ಕೇಂದ್ರ ಜಾಗೃತ ಆಯೋಗ’ಕ್ಕೆ (CVC) ವರ್ಗಾಯಿಸುವ ಅಧಿಕಾರವನ್ನೂ ಇದು ಹೊಂದಿದೆ.
    • ಪ್ರಧಾನಮಂತ್ರಿ ಹುದ್ದೆಗೆ ಇರುವ ವಿನಾಯಿತಿಗಳು:- ಅಂತರರಾಷ್ಟ್ರೀಯ ಸಂಬಂಧಗಳು, ರಾಷ್ಟ್ರೀಯ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ, ಪರಮಾಣು ಶಕ್ತಿ ಅಥವಾ ಬಾಹ್ಯಾಕಾಶ ಇಲಾಖೆಗೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿಯವರ ಮೇಲಿನ ಭ್ರಷ್ಟಾಚಾರದ ಆರೋಪಗಳನ್ನು ಇದು ವಿಚಾರಣೆ ಮಾಡುವಂತಿಲ್ಲ.
    • ಪ್ರಧಾನ ಮಂತ್ರಿಯವರ ವಿರುದ್ಧ ಯಾವುದೇ ವಿಚಾರಣೆಯನ್ನು ಪ್ರಾರಂಭಿಸಲು ಸಂಪೂರ್ಣ ಲೋಕಪಾಲ್ ಪೀಠದ ಪರಿಶೀಲನೆ ಮತ್ತು ಕನಿಷ್ಠ ಮೂರನೇ ಎರಡರಷ್ಟು (2/3) ಸದಸ್ಯರ ಅನುಮೋದನೆ ಕಡ್ಡಾಯವಾಗಿ ಅಗತ್ಯವಿರುತ್ತದೆ.
  • ಉಡಾನ್ (UDAN) ಯೋಜನೆ

    ಉಡಾನ್ (UDAN) ಯೋಜನೆ

    ಇದೀಗ ಸುದ್ದಿಯಲ್ಲಿದೆ: 

    • ಉಡಾನ್ (UDAN) ಯೋಜನೆಯ ಅಡಿಯಲ್ಲಿ ವಿಮಾನಯಾನ ಸಂಸ್ಥೆಗಳಿಗೆ ನೀಡಲಾಗುವ ಮೂರು ವರ್ಷಗಳ ಪ್ರೋತ್ಸಾಹಕ ಅವಧಿಯ ನಂತರ, 2ನೇ ದರ್ಜೆಯ (ಟೈರ್-II) ನಗರಗಳಲ್ಲಿನ ವಿಮಾನ ನಿಲ್ದಾಣಗಳು ಆರ್ಥಿಕವಾಗಿ ಲಾಭದಾಯಕವಾಗಿ ಉಳಿದಿಲ್ಲ ಎಂದು ಕರ್ನಾಟಕದ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಅವರು ಇತ್ತೀಚಿಗೆ ಹೇಳಿಕೆ ನೀಡಿದ್ದಾರೆ.

    ಉಡಾನ್ (ಉಡೇ ದೇಶ್ ಕಾ ಆಮ್ ನಾಗರಿಕ್) ಯೋಜನೆ:

    • ಪ್ರಾರಂಭವಾದ ವರ್ಷ:- ಅಕ್ಟೋಬರ್ 2016.
    • ಪ್ರಾದೇಶಿಕ ಸಂಪರ್ಕ ಕಾರ್ಯಕ್ರಮವಾಗಿದೆ:- ಇದು ಸಾಮಾನ್ಯ ನಾಗರಿಕರಿಗೂ ವಿಮಾನಯಾನವನ್ನು ಕೈಗೆಟುಕುವ ದರದಲ್ಲಿ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ವಿನ್ಯಾಸಗೊಳಿಸಲಾದ ಭಾರತ ಸರ್ಕಾರದ ಪ್ರಮುಖ ಕಾರ್ಯಕ್ರಮವಾಗಿದೆ.
    • ಈ ಯೋಜನೆಯು  2ನೇ ದರ್ಜೆಯ (Tier-2) ಮತ್ತು 3ನೇ ದರ್ಜೆಯ (Tier-3) ನಗರಗಳಲ್ಲಿ ವಿಮಾನಯಾನ ಸೇವೆ ಇಲ್ಲದ ಅಥವಾ ಅತ್ಯಂತ ಕಡಿಮೆ ಸೇವೆಯಿರುವ ವಿಮಾನ ನಿಲ್ದಾಣಗಳನ್ನು ಸಂಪರ್ಕಿಸುವತ್ತ ಗಮನಹರಿಸುತ್ತದೆ.

    ಉಡಾನ್ ಯೋಜನೆಯ ಪ್ರಮುಖ ಲಕ್ಷಣಗಳು:

    • ಕೈಗೆಟುಕುವ ದರಗಳು:- ಪ್ರತಿ ವಿಮಾನದಲ್ಲಿನ ಶೇಕಡಾ 50% ರಷ್ಟು ಆಸನಗಳಿಗೆ ವಿಮಾನಯಾನ ದರವನ್ನು ಮಿತಿಗೊಳಿಸಲಾಗಿದೆ. ಉದಾಹರಣೆಗೆ, ಒಂದು ಗಂಟೆಯ ವಿಮಾನ ಪ್ರಯಾಣಕ್ಕೆ (ಅಂದಾಜು 500 ಕಿ.ಮೀ ದೂರ) ಗರಿಷ್ಠ ₹2,500 ದರವನ್ನು ನಿಗದಿಪಡಿಸಲಾಗಿದೆ.
    • ಕಾರ್ಯಸಾಧ್ಯತಾ ಕೊರತೆ ನಿಧಿ (VGF):- ಕಡಿಮೆ ಲಾಭದಾಯಕವಾದ ಪ್ರಾದೇಶಿಕ ಮಾರ್ಗಗಳಲ್ಲಿ ವಿಮಾನಯಾನ ಸೇವೆಗಳನ್ನು ಒದಗಿಸಲು ವಿಮಾನಯಾನ ಸಂಸ್ಥೆಗಳನ್ನು ಉತ್ತೇಜಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ವಿಮಾನ ಕಾರ್ಯಾಚರಣೆಯ ಒಟ್ಟು ವೆಚ್ಚ ಮತ್ತು ಮಿತಿಗೊಳಿಸಿದ ಟಿಕೆಟ್ ದರದಿಂದ ಬರುವ ಆದಾಯದ ನಡುವಿನ ಆರ್ಥಿಕ ಅಂತರವನ್ನು ಸರಿದೂಗಿಸಲು ಕೇಂದ್ರ ಸರ್ಕಾರವು ಈ ನಿಧಿಯ ಮೂಲಕ ಆರ್ಥಿಕ ನೆರವು (ಸಬ್ಸಿಡಿ) ಒದಗಿಸುತ್ತದೆ.
  • ರಾಷ್ಟ್ರೀಯ ನೌಕಾಯಾನ ಮಂಡಳಿ (NSB) | ತೆಹ್ರಾನ್‌ನಲ್ಲಿ ಕಪ್ಪು ಮಳೆ | ವಿಶಾಖಪಟ್ಟಣದಲ್ಲಿ ಪ್ರೋಟಾನ್ ವೇಗೋತ್ಕರ್ಷಕ ಸೌಲಭ್ಯ

    ರಾಷ್ಟ್ರೀಯ ನೌಕಾಯಾನ ಮಂಡಳಿ (NSB)

    ಆಡಳಿತ

    ಇದೀಗ ಸುದ್ದಿಯಲ್ಲಿದೆ: 

    • ಬದಲಾಗುತ್ತಿರುವ ಜಾಗತಿಕ ಭೂ-ರಾಜಕೀಯ ಸನ್ನಿವೇಶಗಳ ನಡುವೆ ಭಾರತದ ನೌಕಾಯಾನ ವಲಯದಲ್ಲಿ ಎದುರಾಗುತ್ತಿರುವ ಉದಯೋನ್ಮುಖ ಸವಾಲುಗಳನ್ನು ಪರಿಹರಿಸಲು ಕೇಂದ್ರ ಸರ್ಕಾರವು ‘ರಾಷ್ಟ್ರೀಯ ನೌಕಾಯಾನ ಮಂಡಳಿ’ಯೊಂದಿಗೆ (NSB) ಉನ್ನತ ಮಟ್ಟದ ಸಂವಾದವನ್ನು ನಡೆಸಿದೆ.

    ರಾಷ್ಟ್ರೀಯ ನೌಕಾಯಾನ ಮಂಡಳಿಯ (NSB) ಬಗ್ಗೆ:

    • ಭಾರತದ ನೌಕಾಯಾನ ಮತ್ತು ಕಡಲ ಸಂಬಂಧಿತ ವಿಷಯಗಳ ಅತ್ಯುನ್ನತ ಸಲಹಾ ಸಂಸ್ಥೆಯಾಗಿದೆ:- ವಾಣಿಜ್ಯ ನೌಕಾಯಾನ ಕಾಯ್ದೆ, 1958ರ ಸೆಕ್ಷನ್ 23ರ ಅಡಿಯಲ್ಲಿ ಇದನ್ನು ಶಾಸನಬದ್ಧವಾಗಿ ರಚಿಸಲಾಗಿದೆ.
    • ಈ ಮಂಡಳಿಯು ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
    • ಪ್ರಮುಖ ಉದ್ದೇಶ:- ರಾಷ್ಟ್ರೀಯ ನೌಕಾಯಾನ ನೀತಿಗಳು ಮತ್ತು ಕಡಲ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಸೂಕ್ತ ಸಲಹೆಗಳನ್ನು ನೀಡುವುದು.
    • ಈ ಮಂಡಳಿಯ ಅಧ್ಯಕ್ಷರನ್ನು ಕೇಂದ್ರ ಸರ್ಕಾರವು ನೇಮಕ ಮಾಡುತ್ತದೆ.

    ತೆಹ್ರಾನ್‌ನಲ್ಲಿ ಕಪ್ಪು ಮಳೆ

    ಪರಿಸರ

    ಇದೀಗ ಸುದ್ದಿಯಲ್ಲಿದೆ:

    • ತೈಲ ನೆಲೆಗಳ ಮೇಲಿನ ದಾಳಿಯ ಬೆನ್ನಲ್ಲೇ ಇರಾನಿನ ರಾಜಧಾನಿ ತೆಹ್ರಾನ್‌ನಲ್ಲಿ “ಕಪ್ಪು ಮಳೆ” ಹಾಗೂ ತೀವ್ರ ಪ್ರಮಾಣದ ವಿಷಕಾರಿ ವಾಯುಮಾಲಿನ್ಯ ಉಂಟಾಗುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಕೆ ನೀಡಿದೆ.

    ಕಪ್ಪು ಮಳೆ (Black Rain) ಎಂದರೇನು?

    • ಬೃಹತ್ ಅಗ್ನಿ ಅನಾಹುತಗಳು ಅಥವಾ ಸ್ಫೋಟಗಳ ನಂತರ ವಾತಾವರಣಕ್ಕೆ ಬಿಡುಗಡೆಯಾಗುವ ಮಸಿ, ಬೂದಿ, ತೈಲದ ಕಣಗಳು ಮತ್ತು ರಾಸಾಯನಿಕ ಮಾಲಿನ್ಯಕಾರಕಗಳಿಂದ ಕಲುಷಿತಗೊಂಡ ಮಳೆಯನ್ನು ಇದು ಸೂಚಿಸುತ್ತದೆ.
    • ಸಾಮಾನ್ಯ ಮಳೆಯ ಶುದ್ಧ ನೀರಿನ ಹನಿಗಳ ಬದಲಾಗಿ, ಈ ಮಳೆಯು ಕಪ್ಪು ಬಣ್ಣದ ಎಣ್ಣೆಯುಕ್ತ ಕಣಗಳನ್ನು ಒಳಗೊಂಡಿರುತ್ತದೆ; ಇದರಿಂದಾಗಿ ಮಳೆಯ ನೀರು ಕಪ್ಪು ಅಥವಾ ಬೂದು ಬಣ್ಣಕ್ಕೆ ತಿರುಗುತ್ತದೆ.
    • ಬೃಹತ್ ಪ್ರಮಾಣದ ಬೆಂಕಿಯಿಂದಾಗಿ ಅಪಾರ ಮಾಲಿನ್ಯಕಾರಕಗಳು ಗಾಳಿಗೆ ಸೇರ್ಪಡೆಯಾದಾಗ ಮತ್ತು ಆ ಮಾಲಿನ್ಯದ ಕಣಗಳನ್ನು ಮಳೆಯು ಭೂಮಿಯನ್ನು ತಲುಪುವ ಮುನ್ನವೇ ಹೀರಿಕೊಂಡಾಗ ಸಾಮಾನ್ಯವಾಗಿ ಇಂತಹ ‘ಕಪ್ಪು ಮಳೆ’ ಸುರಿಯುತ್ತದೆ.
    • ಐತಿಹಾಸಿಕ ಹಿನ್ನೆಲೆಯನ್ನು ಗಮನಿಸಿದರೆ, 1945 ರಲ್ಲಿ ಜಪಾನ್‌ನ ಹಿರೋಷಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ನಡೆದ ಪರಮಾಣು ಬಾಂಬ್ ದಾಳಿಯ ನಂತರ ವಿಕಿರಣಶೀಲ ಕಣಗಳು ಮತ್ತು ಛಿದ್ರಗೊಂಡ ಅವಶೇಷಗಳು ಮಳೆನೀರಿನೊಂದಿಗೆ ಬೆರೆತಾಗ ಇಂತಹದ್ದೇ ಭೀಕರ ವಿದ್ಯಮಾನಗಳು ಕಂಡುಬಂದಿದ್ದವು.

    ವಿಶಾಖಪಟ್ಟಣದಲ್ಲಿ ಪ್ರೋಟಾನ್ ವೇಗೋತ್ಕರ್ಷಕ ಸೌಲಭ್ಯ

    ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ:

    • ಭಾರತದ ದೀರ್ಘಕಾಲೀನ ಪರಮಾಣು ಸಂಶೋಧನಾ ಕಾರ್ಯಕ್ರಮದ ಭಾಗವಾಗಿ, ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಉನ್ನತ-ಶಕ್ತಿಯ ‘ಪ್ರೋಟಾನ್ ವೇಗೋತ್ಕರ್ಷಕ’ ಸೌಲಭ್ಯವನ್ನು ಸ್ಥಾಪಿಸಲಾಗುತ್ತಿದೆ.

    ಪ್ರೋಟಾನ್ ಎಂದರೇನು?

    • ಪ್ರೋಟಾನ್ ಎಂಬುದು ಧನಾತ್ಮಕ ವಿದ್ಯುದಾವೇಶವನ್ನು ಹೊಂದಿರುವ ಉಪ-ಪರಮಾಣು ಕಣವಾಗಿದೆ. 
    • ಪ್ರೋಟಾನ್ ಪ್ರತಿಯೊಂದು ಮೂಲವಸ್ತುವಿನ ಪ್ರತಿಯೊಂದು ಪರಮಾಣು ನ್ಯೂಕ್ಲಿಯಸ್‌ನಲ್ಲಿ (ಕೇಂದ್ರದಲ್ಲಿ) ಕಂಡುಬರುತ್ತದೆ.

    ಪ್ರೋಟಾನ್ ವೇಗೋತ್ಕರ್ಷಕ ಸೌಲಭ್ಯದ ಬಗ್ಗೆ:

    • ವಿಶಾಖಪಟ್ಟಣದಲ್ಲಿ ಸ್ಥಾಪನೆಯಾಗುತ್ತಿರುವ ಈ ಉನ್ನತ-ಶಕ್ತಿಯ ಪ್ರೋಟಾನ್ ವೇಗೋತ್ಕರ್ಷಕವು, ‘ಥೋರಿಯಂ’ ಧಾತುವನ್ನು ಯುರೇನಿಯಂ ಇಂಧನವನ್ನಾಗಿ ಪರಿವರ್ತಿಸಲು ಅಗತ್ಯವಾದ ಉನ್ನತ-ಶಕ್ತಿಯ ನ್ಯೂಟ್ರಾನ್‌ಗಳನ್ನು ಉತ್ಪಾದಿಸುತ್ತದೆ.
    • ವಿಶಾಖಪಟ್ಟಣದಲ್ಲಿರುವ ಅತ್ಯುತ್ತಮ ತಾಂತ್ರಿಕ ಪರಿಸರ ವ್ಯವಸ್ಥೆ ಹಾಗೂ ರಿಯಾಕ್ಟರ್‌ಗಳನ್ನು ತಂಪುಗೊಳಿಸುವ ಪ್ರಕ್ರಿಯೆಗೆ ಸಮುದ್ರದ ನೀರು ಸುಲಭವಾಗಿ ಲಭ್ಯವಿರುವುದು ಈ ಯೋಜನೆಯ ಸ್ಥಾಪನೆಗೆ ವರದಾನವಾಗಿದೆ.
    • ಪ್ರಾಮುಖ್ಯತೆ:- ಈ ಪ್ರೋಟಾನ್ ವೇಗೋತ್ಕರ್ಷಕವನ್ನು ಭಾರತದ ಮಹತ್ವಾಕಾಂಕ್ಷೆಯ ದೀರ್ಘಕಾಲೀನ ಪರಮಾಣು ಕಾರ್ಯಕ್ರಮದ ಅತ್ಯಂತ ಪ್ರಮುಖ ಭಾಗವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.
  • ಇವ ನಮ್ಮವ ಇವ ನಮ್ಮವ ಮಸೂದೆ

    ಇವ ನಮ್ಮವ ಇವ ನಮ್ಮವ ಮಸೂದೆ

    ಇದೀಗ ಸುದ್ದಿಯಲ್ಲಿದೆ:

    • ‘ಇವ ನಮ್ಮವ ಇವ ನಮ್ಮವ ಮಸೂದೆ’ಯನ್ನು ಮಾರ್ಚ್ 2026 ರಲ್ಲಿ ಕರ್ನಾಟಕ ರಾಜ್ಯ ಶಾಸಕಾಂಗವು ಅಂಗೀಕರಿಸಿದ್ದು, ಇದೊಂದು ಐತಿಹಾಸಿಕ ಶಾಸನವಾಗಿದೆ. ಇದನ್ನು ಅಧಿಕೃತವಾಗಿ ‘ಕರ್ನಾಟಕ ವಿವಾಹದ ಆಯ್ಕೆಯ ಸ್ವಾತಂತ್ರ್ಯ ಮತ್ತು ಮರ್ಯಾದೆ ಹಾಗೂ ಸಂಪ್ರದಾಯದ ಹೆಸರಿನಲ್ಲಿ ನಡೆಯುವ ಅಪರಾಧಗಳ ತಡೆಗಟ್ಟುವಿಕೆ ಮತ್ತು ನಿಷೇಧ ಕಾಯ್ದೆ, 2026’ ಎಂದು ಕರೆಯಲಾಗುತ್ತದೆ.

    ಇವ ನಮ್ಮವ ಇವ ನಮ್ಮವ ಮಸೂದೆಯ ಬಗ್ಗೆ:

    • ಕಾರ್ಯಾದೇಶ:- “ಮರ್ಯಾದೆ ಹತ್ಯೆಗಳನ್ನು” ಸಂಪೂರ್ಣವಾಗಿ ತಡೆಗಟ್ಟುವುದು ಇದರ ಪ್ರಮುಖ ಗುರಿಯಾಗಿದೆ. ಅಲ್ಲದೆ, ಯಾವುದೇ ಕುಟುಂಬ, ಜಾತಿ ಅಥವಾ ಸಮುದಾಯದ ಮುಖಂಡರ ಹಸ್ತಕ್ಷೇಪವಿಲ್ಲದೆ ವಯಸ್ಕರು ತಮ್ಮ ಜೀವನ ಸಂಗಾತಿಯನ್ನು ಮುಕ್ತವಾಗಿ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ರಕ್ಷಿಸಲು ಇದನ್ನು ನಿರ್ದಿಷ್ಟವಾಗಿ ರೂಪಿಸಲಾಗಿದೆ.

    ಈ ಮಸೂದೆಯ ಪ್ರಮುಖ ಲಕ್ಷಣಗಳು:

    • ಆಯ್ಕೆಯ ಹಕ್ಕು:- ಪ್ರತಿಯೊಬ್ಬ ವಯಸ್ಕ ಪ್ರಜೆಯು ತನ್ನ ಸಂಗಾತಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಹೊಂದಿರುತ್ತಾನೆ ಎಂದು ಈ ಮಸೂದೆ ಖಾತರಿಪಡಿಸುತ್ತದೆ. ಈ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಕುಟುಂಬದ ಸದಸ್ಯರಿಗೆ, ಜಾತಿ ಗುಂಪಿಗೆ ಅಥವಾ ಸಮುದಾಯದ ಮುಖಂಡರಿಗೆ ಅಧಿಕಾರವಿಲ್ಲ ಎಂದು ಇದು ಸ್ಪಷ್ಟಪಡಿಸುತ್ತದೆ.
    • ಅಪರಾಧಗಳ ವಿಸ್ತೃತ ವ್ಯಾಖ್ಯಾನ:- ಕೇವಲ ದೈಹಿಕ ಹಿಂಸೆಯನ್ನಷ್ಟೇ ಅಲ್ಲದೆ, ಸಾಮಾಜಿಕ ಮತ್ತು ಆರ್ಥಿಕ ಬಹಿಷ್ಕಾರ, ಮಾನಸಿಕ ಹಿಂಸೆ (ಉದಾಹರಣೆಗೆ: ಜೀವಂತ ವ್ಯಕ್ತಿಗಳಿಗೆ ಅಂತಿಮ ಸಂಸ್ಕಾರ ಮಾಡುವುದು) ಹಾಗೂ ಪ್ರೇಮಿಗಳನ್ನು ಬಲವಂತವಾಗಿ ಬೇರ್ಪಡಿಸುವಿಕೆಯನ್ನು ಸಹ ಈ ಕಾನೂನು ಅಪರಾಧವೆಂದು ಪರಿಗಣಿಸುತ್ತದೆ.
    • ಇವ ನಮ್ಮವ ಜಿಲ್ಲಾ ಮಟ್ಟದ ವೇದಿಕೆ/ಸಮಿತಿ:- ಇಂತಹ ವಿವಾಹಗಳನ್ನು ನೆರವೇರಿಸಲು ಮತ್ತು ಆಪ್ತ ಸಮಾಲೋಚನೆ ಒದಗಿಸಲು ನಿವೃತ್ತ ನ್ಯಾಯಾಧೀಶರು ಮತ್ತು ಪೊಲೀಸ್ ಅಧಿಕಾರಿಗಳನ್ನು ಈ ವೇದಿಕೆಯು ಒಳಗೊಂಡಿದೆ.
    • ಪ್ರತಿ ಜಿಲ್ಲೆಗಳಲ್ಲಿ ಸುರಕ್ಷಿತ ಮನೆಗಳು ಮತ್ತು 24/7 ಸಹಾಯವಾಣಿಗಳು:- ಬೆದರಿಕೆ ಎದುರಿಸುತ್ತಿರುವ ಜೋಡಿಗಳಿಗಾಗಿ ಪ್ರತಿಯೊಂದು ಜಿಲ್ಲೆಯಲ್ಲೂ 24/7 ಸಹಾಯವಾಣಿಗಳನ್ನು ಮತ್ತು ರಾಜ್ಯ ಸರ್ಕಾರದ ಧನಸಹಾಯದೊಂದಿಗೆ ನಡೆಯುವ ಸುರಕ್ಷಿತ ಮನೆಗಳನ್ನು ಸ್ಥಾಪಿಸುವುದನ್ನು ಇದು ಕಡ್ಡಾಯಗೊಳಿಸುತ್ತದೆ.
    • ತ್ವರಿತ ಸ್ಪಂದನೆ:- ದೂರು ಸ್ವೀಕರಿಸಿದ ಕೇವಲ 6 ಗಂಟೆಗಳ ಒಳಗೆ ಪೊಲೀಸರು ದೂರುದಾರರಿಗೆ ಸೂಕ್ತ ರಕ್ಷಣೆ ಒದಗಿಸುವುದು ಕಡ್ಡಾಯವಾಗಿದೆ.
    • ಸಂಜ್ಞೇಯ (Cognizable) ಮತ್ತು ಜಾಮೀನು ರಹಿತ ದಂಡನೆಗಳು:- ಮರ್ಯಾದಾ ಹತ್ಯೆಗಳಿಗೆ ಕನಿಷ್ಠ 5 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ಅದೇ ರೀತಿ ಗಾಯಗೊಳಿಸುವ ಪ್ರಕರಣಗಳಲ್ಲಿ 2 ರಿಂದ 3 ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ವಿಧಿಸಬಹುದಾಗಿದೆ.
  • ಸಾವಿತ್ರಿಬಾಯಿ ಫುಲೆ | ಕುರುಂಬ ವರ್ಣಚಿತ್ರ ಕಲೆ | ಹಣಕಾಸು ಆರೋಗ್ಯ ಸೂಚ್ಯಂಕ, 2026

    ಸಾವಿತ್ರಿಬಾಯಿ ಫುಲೆ

    ಇತಿಹಾಸ

    ಇದೀಗ ಸುದ್ದಿಯಲ್ಲಿದ್ದಾರೆ: 

    • ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಸಾವಿತ್ರಿಬಾಯಿ ಫುಲೆ ಅವರ ಪುಣ್ಯತಿಥಿಯಂದು ಗೌರವ ನಮನ ಸಲ್ಲಿಸಿದರು.

    ಸಾವಿತ್ರಿಬಾಯಿ ಫುಲೆ (1831 – 1897) ಅವರ ಬಗ್ಗೆ:

    • ಇವರು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ನಯಿಗಾಂವ್ ಗ್ರಾಮದಲ್ಲಿ ಜನಿಸಿದರು.
    • ವಿವಾಹ:- 1840 ರಲ್ಲಿ, ತಮ್ಮ 9 ನೇ ವಯಸ್ಸಿನಲ್ಲಿ, ಇವರು 13 ವರ್ಷದ ಜ್ಯೋತಿರಾವ್ ಫುಲೆ ಅವರನ್ನು ವಿವಾಹವಾದರು.
    • ಇವರನ್ನು ಭಾರತದ ಮೊಟ್ಟಮೊದಲ ಮಹಿಳಾ ಶಿಕ್ಷಕಿ ಎಂದು ಅಧಿಕೃತವಾಗಿ ಗುರುತಿಸಲಾಗಿದೆ.
    • ಹೆಣ್ಣುಮಕ್ಕಳಿಗಾಗಿ ದೇಶದ ಮೊದಲ ಶಾಲೆಯನ್ನು ಸ್ಥಾಪಿಸಿದರು:- ಈ ದಂಪತಿಗಳು 1848 ರಲ್ಲಿ, ಪುಣೆಯ ಭಿಡೆವಾಡದಲ್ಲಿ ಸ್ಥಾಪಿಸಿದರು.
    • ‘ಬಾಲಹತ್ಯಾ ಪ್ರತಿಬಂಧಕ ಗೃಹ’ವನ್ನು ಪ್ರಾರಂಭಿಸಿದರು:- ಈ ದಂಪತಿಗಳು 1863 ರಲ್ಲಿ, ಶಿಶುಹತ್ಯೆಯನ್ನು ತಡೆಗಟ್ಟುವ ಉದ್ದೇಶದಿಂದ ಭಾರತದ ಮೊದಲ ಶಿಶು ಆಶ್ರಯ ತಾಣವನ್ನು ಪ್ರಾರಂಭಿಸಿದರು.
    • ಇವರು ಅಂತರ್ಜಾತಿ ವಿವಾಹ ಹಾಗೂ ವಿಧವಾ ಪುನರ್ವಿವಾಹಗಳನ್ನು ಸಕ್ರಿಯವಾಗಿ ಪ್ರತಿಪಾದಿಸಿದರು. ಇದರೊಂದಿಗೆ ಬಾಲ್ಯವಿವಾಹ, ಸತಿ ಪದ್ಧತಿ ಮತ್ತು ವರದಕ್ಷಿಣೆ ಪಿಡುಗಿನ ನಿರ್ಮೂಲನೆ ಸೇರಿದಂತೆ ಅನೇಕ ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡಿದರು.
    • ‘ಸತ್ಯಶೋಧಕ ಸಮಾಜ’ವನ್ನು ಸ್ಥಾಪಿಸಿದರು:- ಫುಲೆ ದಂಪತಿಗಳು 1873 ರಲ್ಲಿ, ಸಮಾಜದಲ್ಲಿ ಸಮಾನತೆಯನ್ನು ತರುವ ಏಕೈಕ ಉದ್ದೇಶದಿಂದ ಸ್ಥಾಪಿಸಿದರು. ಇದು ಜಾತಿ, ಧರ್ಮ ಅಥವಾ ವರ್ಗ ತಾರತಮ್ಯವಿಲ್ಲದೆ ಎಲ್ಲರಿಗೂ ಮುಕ್ತವಾದ ವೇದಿಕೆಯಾಗಿತ್ತು.
    • ಸಾಹಿತ್ಯ ಕೃತಿಗಳು:- ಇವರು 1854 ರಲ್ಲಿ ‘ಕಾವ್ಯ ಫುಲೆ’ ಹಾಗೂ 1892 ರಲ್ಲಿ ‘ಬವನ್ ಕಾಶಿ ಸುಬೋಧ್ ರತ್ನಾಕರ್’ ಎಂಬ ಪ್ರಸಿದ್ಧ ಕೃತಿಗಳನ್ನು ರಚಿಸಿದ್ದಾರೆ.

    ಕುರುಂಬ ವರ್ಣಚಿತ್ರ ಕಲೆ

    ಇತಿಹಾಸ / ಸಂಸ್ಕೃತಿ

    ಇದೀಗ ಸುದ್ದಿಯಲ್ಲಿದೆ:

    • ಕುರುಂಬ ವರ್ಣಚಿತ್ರ ಕಲೆಯ ಪ್ರಕಾರವನ್ನು ರೂಢಿಸಿಕೊಂಡಿರುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವ ಕಾರಣ, ಈ ಪರಂಪರೆಯು ಪ್ರಸ್ತುತ ಅಳಿವಿನಂಚಿನಲ್ಲಿದೆ.

    ಕುರುಂಬ ವರ್ಣಚಿತ್ರಗಳ ಬಗ್ಗೆ:

    • ಕುರುಂಬ ಬುಡಕಟ್ಟು ಜನಾಂಗವು ರೂಢಿಸಿಕೊಂಡು ಬಂದಿರುವ ಈ ಕಲೆಯು 3000 ವರ್ಷಗಳಿಗಿಂತಲೂ ಹಳೆಯದಾದ ಇತಿಹಾಸವನ್ನು ಹೊಂದಿದೆ. ಇದು ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿರುವ ‘ಎಳುತುಪಾರೈ’ಯಂತಹ ಶಿಲಾ ಕಲಾ ತಾಣಗಳೊಂದಿಗೆ ನಿಕಟ ಸಂಪರ್ಕ ಹೊಂದಿದೆ.
    • ಕುರುಂಬ ಬುಡಕಟ್ಟು ಜನಾಂಗವನ್ನು ‘ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪು’ (PVTG) ಎಂದು ವರ್ಗೀಕರಿಸಲಾಗಿದೆ.
    • ಮೂಲತಃ ಈ ಚಿತ್ರಗಳನ್ನು ಮನೆ ಮತ್ತು ದೇವಾಲಯಗಳ ಗೋಡೆಗಳ ಮೇಲೆ ಅಥವಾ ಹಬ್ಬಗಳ ಸಂದರ್ಭದಲ್ಲಿ ಬಿಡಿಸಲಾಗುತ್ತಿತ್ತು. ಕಲಾವಿದರು ಮರದ ಅಂಟು ಸೇರಿದಂತೆ ನೈಸರ್ಗಿಕ ಅರಣ್ಯ ಮೂಲಗಳಿಂದ ಈ ವರ್ಣಚಿತ್ರಗಳಿಗೆ ಬೇಕಾದ ಬಣ್ಣಗಳನ್ನು ತಯಾರಿಸಿಕೊಳ್ಳುತ್ತಾರೆ.
    • ಈ ಜಾನಪದ ವರ್ಣಚಿತ್ರಗಳು ಸರಳವಾದ ರೇಖಾಕೃತಿಗಳು, ಚುಕ್ಕೆಗಳು ಮತ್ತು ಜ್ಯಾಮಿತೀಯ ವಿನ್ಯಾಸಗಳನ್ನು ಒಳಗೊಂಡಿರುತ್ತವೆ. ಇವುಗಳ ಮೂಲಕ ಬುಡಕಟ್ಟು ಆಚರಣೆಗಳು, ಹಬ್ಬಗಳು, ಜೇನುತುಪ್ಪ ಬೇಟೆ, ಪ್ರಕೃತಿ, ಪ್ರಾಣಿಗಳು ಹಾಗೂ ದೈನಂದಿನ ಸಮುದಾಯದ ಚಟುವಟಿಕೆಗಳನ್ನು ಚಿತ್ರಿಸಲಾಗುತ್ತದೆ.

    ಹಣಕಾಸು ಆರೋಗ್ಯ ಸೂಚ್ಯಂಕ, 2026

    ರಾಜಕೀಯ ಮತ್ತು ಆಡಳಿತ

    ಇದೀಗ ಸುದ್ದಿಯಲ್ಲಿದೆ:

    • ನೀತಿ ಆಯೋಗವು 2026ನೇ ಸಾಲಿನ ಎರಡನೇ ವಾರ್ಷಿಕ ‘ಹಣಕಾಸು ಆರೋಗ್ಯ ಸೂಚ್ಯಂಕ’ವನ್ನು (FHI) ಬಿಡುಗಡೆ ಮಾಡಿದೆ.

    ಹಣಕಾಸು ಆರೋಗ್ಯ ಸೂಚ್ಯಂಕದ ಬಗ್ಗೆ:

    • ಕಾರ್ಯವ್ಯಾಪ್ತಿ:- ಈ ಸೂಚ್ಯಂಕವು ಭಾರತದಲ್ಲಿನ ವಿವಿಧ ರಾಜ್ಯಗಳ ಆರ್ಥಿಕ ಪರಿಸ್ಥಿತಿ ಅಥವಾ ಹಣಕಾಸಿನ ಆರೋಗ್ಯವನ್ನು ಮೌಲ್ಯಮಾಪನ ಮಾಡುತ್ತದೆ.
    • ಮಾನದಂಡಗಳು:- ವೆಚ್ಚದ ಗುಣಮಟ್ಟ, ಆದಾಯ ಕ್ರೂಢೀಕರಣ, ಆರ್ಥಿಕ ವಿವೇಚನೆ, ಸಾಲದ ಸೂಚ್ಯಂಕ ಮತ್ತು ಸಾಲದ ಸುಸ್ಥಿರತೆ ಮುಂತಾದ ಪ್ರಮುಖ ಮಾನದಂಡಗಳನ್ನು ಆಧರಿಸಿ ಈ ಮೌಲ್ಯಮಾಪನವನ್ನು ಮಾಡಲಾಗುತ್ತದೆ.
    • ದತ್ತಾಂಶ ಮೂಲ:- ಈ ವರದಿಗಾಗಿ ಅಗತ್ಯವಾದ ದತ್ತಾಂಶವನ್ನು ‘ಭಾರತದ ನಿಯಂತ್ರಕರು ಮತ್ತು ಮಹಾಲೇಖಪಾಲರು’ (CAG) ಅವರಿಂದ ಪಡೆಯಲಾಗಿದೆ.

    ಹಣಕಾಸು ಆರೋಗ್ಯ ಸೂಚ್ಯಂಕ, 2026ರ ಪ್ರಮುಖ ಅಂಶಗಳು:

    • ಒಟ್ಟಾರೆ ರಾಜ್ಯಗಳ ಶ್ರೇಯಾಂಕ:- 
    • ಅಗ್ರಸ್ಥಾನ:- ಒಡಿಶಾ ರಾಜ್ಯವು ತನ್ನ ಆರ್ಥಿಕ ಕಾರ್ಯಕ್ಷಮತೆಯನ್ನು ಮತ್ತಷ್ಟು ಸುಧಾರಿಸಿಕೊಳ್ಳುವ ಮೂಲಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ. 
    • ‘ಸಾಧಕ’ (Achiever) ರಾಜ್ಯಗಳು:- ಗೋವಾ ಮತ್ತು ಜಾರ್ಖಂಡ್
    • ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳು ಅಗ್ರ ಐದು ಸ್ಥಾನಗಳಲ್ಲಿ ತಮ್ಮ ಸ್ಥಾನವನ್ನು ಕಾಯ್ದುಕೊಂಡಿವೆ. 
    • ಹರಿಯಾಣ ರಾಜ್ಯವು ಮೂರು ಸ್ಥಾನಗಳಷ್ಟು ಮೇಲೇರುವ ಮೂಲಕ ಗಮನಾರ್ಹ ಸುಧಾರಣೆ ಕಂಡಿದೆ.
    • ಚೇತರಿಕೆ ತೋರಿಸುತ್ತಿರುವ ರಾಜ್ಯಗಳು:- ಬಿಹಾರ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳು ತಮ್ಮ ಆರ್ಥಿಕ ಕಾರ್ಯಕ್ಷಮತೆಯಲ್ಲಿ ಸಾಧಾರಣ ಮಟ್ಟದ ಸುಧಾರಣೆಯನ್ನು ಪ್ರದರ್ಶಿಸಿವೆ.
    • ಕಳಪೆ ಕಾರ್ಯಕ್ಷಮತೆಯ ರಾಜ್ಯಗಳು:- ಪಂಜಾಬ್, ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯಗಳು ಶ್ರೇಯಾಂಕದ ಕೊನೆಯ ಸ್ಥಾನಗಳಲ್ಲಿ ಮುಂದುವರಿದಿದ್ದು, ಇದು ಈ ರಾಜ್ಯಗಳು ಎದುರಿಸುತ್ತಿರುವ ನಿರಂತರ ಆರ್ಥಿಕ ಸಂಕಷ್ಟವನ್ನು ಪ್ರತಿಬಿಂಬಿಸುತ್ತದೆ.
    • ಈಶಾನ್ಯ ಮತ್ತು ಹಿಮಾಲಯ ರಾಜ್ಯಗಳು:- ಇದೇ ಮೊದಲ ಬಾರಿಗೆ ಈ ರಾಜ್ಯಗಳನ್ನು ಪ್ರತ್ಯೇಕವಾಗಿ ಮೌಲ್ಯಮಾಪನ ಮಾಡಲಾಗಿದೆ. ಬಲವಾದ ಆದಾಯದ ಬೆಳವಣಿಗೆಯೊಂದಿಗೆ ಅರುಣಾಚಲ ಪ್ರದೇಶವು ‘ಸಾಧಕ’ ರಾಜ್ಯವಾಗಿ ಅಗ್ರಸ್ಥಾನದಲ್ಲಿದ್ದರೆ, ಉತ್ತರಾಖಂಡ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.
  • ಕ್ರಿಸ್ ಗೋಪಾಲಕೃಷ್ಣನ್ ಸಮಿತಿ – ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ (AI)

    ಕ್ರಿಸ್ ಗೋಪಾಲಕೃಷ್ಣನ್ ಸಮಿತಿ – ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ (AI)

    ಇದೀಗ ಸುದ್ದಿಯಲ್ಲಿದೆ: 

    • ಕರ್ನಾಟಕ ಸರ್ಕಾರವು ಇನ್ಫೋಸಿಸ್‌ನ ಸಹ-ಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಅವರ ಅಧ್ಯಕ್ಷತೆಯಲ್ಲಿ ‘ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ’ ಕುರಿತಾದ ಸಮಿತಿಯನ್ನು ರಚಿಸಿದೆ.

    ಈ ಸಮಿತಿಯ ಪ್ರಮುಖ ಉದ್ದೇಶಗಳು:

    • ಪ್ರಮುಖ ಉದ್ದೇಶ:- ಸಾರ್ವಜನಿಕ ಸೇವೆಗಳಲ್ಲಿ ಸುರಕ್ಷಿತ, ನೈತಿಕ ಮತ್ತು ಪಾರದರ್ಶಕವಾದ AI (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನದ ಅಳವಡಿಕೆಗಾಗಿ ಸೂಕ್ತ ಚೌಕಟ್ಟನ್ನು ಅಭಿವೃದ್ಧಿಪಡಿಸುವುದು.
    • ಕೃತಕ ಬುದ್ಧಿಮತ್ತೆ (AI) ವ್ಯವಸ್ಥೆಗಳಲ್ಲಿ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ಉದ್ಯಮ ತಜ್ಞರು ಮತ್ತು ಅಧಿಕಾರಿಗಳನ್ನು ಒಳಗೊಂಡ ಈ ಸಮಿತಿಯು ಇತ್ತೀಚಿಗೆ ಬೆಂಗಳೂರಿನಲ್ಲಿ ಸಭೆ ಸೇರಿತು. ಈ ಸಭೆಯಲ್ಲಿ AI ನೈತಿಕತೆ, ಅಪಾಯದ ವರ್ಗೀಕರಣ ಮತ್ತು ದತ್ತಾಂಶ ಗೌಪ್ಯತೆಯ ಕುರಿತು ವಿವರವಾಗಿ ಚರ್ಚಿಸಲಾಯಿತು.

    ಜವಾಬ್ದಾರಿಯುತ AI ಸಮಿತಿಯ ಪ್ರಮುಖ ಅಂಶಗಳು:

    • ಸದಸ್ಯ ಕಾರ್ಯದರ್ಶಿ:- ‘ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ’ಯ (KITS) ವ್ಯವಸ್ಥಾಪಕ ನಿರ್ದೇಶಕರು.
    • ಕಾರ್ಯಾದೇಶ:- ಸರ್ಕಾರಿ ಆಡಳಿತದಲ್ಲಿ ಜವಾಬ್ದಾರಿಯುತವಾಗಿ AI ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು, ಕೇವಲ 90 ದಿನಗಳೊಳಗೆ ಸೂಕ್ತ ನೀತಿ ಮತ್ತು ಅನುಷ್ಠಾನದ ಮಾರ್ಗಸೂಚಿಯನ್ನು ಸಿದ್ಧಪಡಿಸುವುದು ಕಡ್ಡಾಯವಾಗಿದೆ.
    • ಆದ್ಯತಾ ಕ್ಷೇತ್ರಗಳು:- AI ತತ್ವಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು ಹಾಗೂ ಸರ್ಕಾರದ AI ಅನ್ವಯಿಕೆಗಳಿಗೆ ಸಂಬಂಧಿಸಿದಂತೆ ಅಪಾಯದ ವರ್ಗೀಕರಣಗಳನ್ನು ರಚಿಸುವುದು ಇದರ ಆದ್ಯತೆಯಾಗಿದೆ. ಅಲ್ಲದೆ, ದತ್ತಾಂಶ ಆಡಳಿತ, ಗೌಪ್ಯತೆ ಮತ್ತು ಸೈಬರ್ ಭದ್ರತೆಗಾಗಿ ಮಾರ್ಗಸೂಚಿಗಳನ್ನು ರೂಪಿಸುವ ಜವಾಬ್ದಾರಿಯನ್ನು ಇದು ಹೊಂದಿದೆ.
    • ಪ್ರಮುಖ ನಾಗರಿಕ-ಕೇಂದ್ರಿತ ವಲಯಗಳು:- ಈ ಹೊಸ ಚೌಕಟ್ಟು ಆರೋಗ್ಯ, ಶಿಕ್ಷಣ, ಕಲ್ಯಾಣ ಯೋಜನೆಗಳ ವಿತರಣೆ ಮತ್ತು ಪೊಲೀಸ್ ವ್ಯವಸ್ಥೆಯಂತಹ ನಾಗರಿಕ-ಕೇಂದ್ರಿತ ವಲಯಗಳಲ್ಲಿ AI ತಂತ್ರಜ್ಞಾನದ ಬಳಕೆಯನ್ನು ಒಳಗೊಂಡಿರುತ್ತದೆ.
  • ಅರಾವಳಿ ಬೆಟ್ಟಗಳು | ಭಾರತದ ಜೈವಿಕ ಆರ್ಥಿಕತೆಯು $300 ಶತಕೋಟಿ ಡಾಲರ್‌ಗಳತ್ತ ಮುನ್ನಡೆ | ರಿಲೀಫ್ (RELIEF) ಯೋಜನೆ | ಸಣ್ಣ ಜಲವಿದ್ಯುತ್ ಅಭಿವೃದ್ಧಿ ಯೋಜನೆ | ವಿಶ್ವ ಸಂತೋಷದ ವರದಿ, 2026

    ಅರಾವಳಿ ಬೆಟ್ಟಗಳು

    ಪರಿಸರ

    ಇದೀಗ ಸುದ್ದಿಯಲ್ಲಿದೆ:

    • ರಾಜಸ್ಥಾನದ ಅರಾವಳಿ ಬೆಟ್ಟಗಳ ಸಾಲಿನಲ್ಲಿ ನಡೆಯುತ್ತಿರುವ ಗಣಿಗಾರಿಕಾ ಪ್ರದೇಶಗಳನ್ನು ನಕ್ಷೆ ಮಾಡುವ ಮಹತ್ವದ ಕಾರ್ಯವನ್ನು ಸರ್ವೋಚ್ಚ ನ್ಯಾಯಾಲಯದ ‘ಕೇಂದ್ರೀಯ ಉನ್ನತಾಧಿಕಾರ ಸಮಿತಿ’ಯು ‘ಭಾರತೀಯ ಅರಣ್ಯ ಸಮೀಕ್ಷಾ ಸಂಸ್ಥೆ’ಗೆ (FSI) ವಹಿಸಿದೆ.

    ಅರಾವಳಿ ಬೆಟ್ಟಗಳ ಬಗ್ಗೆ:

    • ಉಗಮ:- ಪ್ರೊಟೆರೋಜೋಯಿಕ್ ಯುಗದಲ್ಲಿ (ಪ್ರಿ-ಕ್ಯಾಂಬ್ರಿಯನ್ ಅವಧಿ) ‘ಅರಾವಳಿ-ದೆಹಲಿ ಓರೊಜೆನಿ’ಯ (ಪರ್ವತ ನಿರ್ಮಾಣ ಪ್ರಕ್ರಿಯೆ) ಮೂಲಕ ಇವು ರೂಪುಗೊಂಡಿವೆ.
    • ಅತ್ಯಂತ ಪ್ರಾಚೀನ ‘ಮಡಿಕೆ ಪರ್ವತ ಶ್ರೇಣಿ ವ್ಯವಸ್ಥೆ’ಯಾಗಿದೆ:- ಲಕ್ಷಾಂತರ ವರ್ಷಗಳ ನಿರಂತರ ಸವೆತದಿಂದಾಗಿ ಪ್ರಸ್ತುತ ಇದು ಕೇವಲ “ಶೇಷ ಬೆಟ್ಟಗಳಾಗಿ” ಉಳಿದುಕೊಂಡಿದೆ.
    • ವ್ಯಾಪ್ತಿ:- ಗುಜರಾತ್‌ನಿಂದ (ಅಹಮದಾಬಾದ್) ಆರಂಭವಾಗಿ, ರಾಜಸ್ಥಾನ ಮತ್ತು ಹರಿಯಾಣದ ಮೂಲಕ ದೆಹಲಿಯವರೆಗೆ ಸುಮಾರು 670 ರಿಂದ 800 ಕಿ.ಮೀ ಉದ್ದಕ್ಕೂ ಈ ಪರ್ವತ ಶ್ರೇಣಿಯು ವಿಸ್ತರಿಸಿದೆ.
    • ಅತ್ಯುನ್ನತ ಶಿಖರ:- ರಾಜಸ್ಥಾನದ ಮೌಂಟ್ ಅಬುವಿನಲ್ಲಿರುವ ‘ಗುರು ಶಿಖರ’ (1,722 ಮೀಟರ್).
    • ಪ್ರಮುಖ ನದಿಗಳು:- ಬನಾಸ್, ಲೂನಿ, ಸಾಬರಮತಿ ಮತ್ತು ಸಾಹಿಬಿ ನದಿಗಳಿಗೆ ಈ ಬೆಟ್ಟಗಳು ಉಗಮ ಸ್ಥಾನವಾಗಿವೆ.
    • ಖನಿಜ ಸಂಪತ್ತು:- ತಾಮ್ರ, ಸತು, ಸೀಸ, ಬೆಳ್ಳಿ, ಅಮೃತಶಿಲೆ ಮತ್ತು ಗ್ರಾನೈಟ್‌ನಂತಹ ಬೆಲೆಬಾಳುವ ಖನಿಜ ಸಂಪನ್ಮೂಲಗಳಿಂದ ಈ ಪ್ರದೇಶವು ಸಮೃದ್ಧವಾಗಿದೆ.

    ಪರಿಸರ ವಿಜ್ಞಾನ ಮತ್ತು ಕಾರ್ಯತಂತ್ರದ ಪ್ರಾಮುಖ್ಯತೆ:

    • ಹವಾಮಾನ ನಿಯಂತ್ರಕ:- ನೈಋತ್ಯ ಮುಂಗಾರು ಮಾರುತಗಳನ್ನು ಹಿಮಾಲಯದ ಕಡೆಗೆ ತಿರುವು ನೀಡುವ ಭೌಗೋಳಿಕ ತಡೆಗೋಡೆಯಾಗಿ ಇದು ಕಾರ್ಯನಿರ್ವಹಿಸುತ್ತದೆ; ತನ್ಮೂಲಕ ಉತ್ತರ ಭಾರತದ ಬಯಲು ಸೀಮೆಗಳಿಗೆ ಮಳೆ ತರಿಸಲು ನೆರವಾಗುತ್ತದೆ.
    • “ಹಸಿರು ಗೋಡೆ”:- ‘ಥಾರ್ ಮರುಭೂಮಿ’ಯು ಪೂರ್ವದ ಫಲವತ್ತಾದ ‘ಸಿಂಧೂ-ಗಂಗಾ ಬಯಲು ಸೀಮೆ’ಯತ್ತ ವಿಸ್ತರಿಸದಂತೆ ತಡೆಯುವ ನೈಸರ್ಗಿಕ ರಕ್ಷಾಕವಚವಾಗಿ ಕಾರ್ಯನಿರ್ವಹಿಸುತ್ತದೆ.
    • ಅಂತರ್ಜಲ ಮರುಪೂರಣ:- ರಾಷ್ಟ್ರೀಯ ರಾಜಧಾನಿ ವಲಯ (NCR) ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಿಗೆ ಇದು ಅಂತರ್ಜಲದ ಬಹುಮುಖ್ಯ ಮೂಲವಾಗಿದೆ.
    • ಜೀವವೈವಿಧ್ಯತೆ:- 300ಕ್ಕೂ ಹೆಚ್ಚು ಅಪರೂಪದ ಪಕ್ಷಿ ಪ್ರಭೇದಗಳಿಗೆ, ಹಾಗೂ ಚಿರತೆ, ಪಟ್ಟೆ ಕತ್ತೆಕಿರುಬ, ಮತ್ತು ‘ಹೊನ್ನರಿ’ಯಂತಹ ವನ್ಯಜೀವಿಗಳಿಗೆ ಇದು ನೆಚ್ಚಿನ ಆವಾಸಸ್ಥಾನವಾಗಿದೆ.

    ಭಾರತೀಯ ಅರಣ್ಯ ಸಮೀಕ್ಷಾ ಸಂಸ್ಥೆ(FSI)ಯ ಬಗ್ಗೆ:

    • ಸ್ಥಾಪನೆ:- 1981
    • ಆಡಳಿತಾತ್ಮಕ ನಿಯಂತ್ರಣ:- ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC).
    • ಕಾರ್ಯ:- ಭಾರತದಾದ್ಯಂತ ಅರಣ್ಯ ಸಂಪನ್ಮೂಲಗಳನ್ನು ಮೇಲ್ವಿಚಾರಣೆ ಮಾಡುವ ಪ್ರಮುಖ ರಾಷ್ಟ್ರೀಯ ಸಂಸ್ಥೆಯಾಗಿದೆ.
    • ಪ್ರಾಮುಖ್ಯತೆ:- ದೇಶದ ಅರಣ್ಯ ಹೊದಿಕೆಯಲ್ಲಿನ (ಅರಣ್ಯ ವ್ಯಾಪ್ತಿ) ಬದಲಾವಣೆಗಳನ್ನು ಮೌಲ್ಯಮಾಪನ ಮಾಡಲು ಪ್ರತಿ ಎರಡು ವರ್ಷಗಳಿಗೊಮ್ಮೆ ‘ಭಾರತೀಯ ಅರಣ್ಯ ಸ್ಥಿತಿಗತಿ ವರದಿ’ (ISFR)ಯನ್ನು ಪ್ರಕಟಿಸುವುದು, ಹಾಗೂ ಅರಣ್ಯ ಮತ್ತು ಅರಣ್ಯೇತರ ಪ್ರದೇಶಗಳಲ್ಲಿನ ವೃಕ್ಷ ಸಂಪನ್ಮೂಲಗಳ ಸಮಗ್ರ ದಾಸ್ತಾನನ್ನು ನಿರ್ವಹಿಸುವುದು ಇದರ ಪ್ರಮುಖ ಜವಾಬ್ದಾರಿಯಾಗಿದೆ.

    ಭಾರತದ ಜೈವಿಕ ಆರ್ಥಿಕತೆಯು $300 ಶತಕೋಟಿ ಡಾಲರ್‌ಗಳತ್ತ ಮುನ್ನಡೆ

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ಭಾರತದ ‘ಜೈವಿಕ ಆರ್ಥಿಕತೆ’ಯು 2014ರಲ್ಲಿದ್ದ ಸುಮಾರು 10 ಶತಕೋಟಿ ಡಾಲರ್‌ಗಳಿಂದ, 2025ರ ಹೊತ್ತಿಗೆ 195 ಶತಕೋಟಿ ಡಾಲರ್‌ಗಳಿಗೂ ಅಧಿಕ ಮಟ್ಟಕ್ಕೆ ಏರಿಕೆಯಾಗುವ ಮೂಲಕ ಅಸಾಧಾರಣ ಬೆಳವಣಿಗೆಯನ್ನು ದಾಖಲಿಸಿದೆ; ಹಾಗೂ ಶೀಘ್ರದಲ್ಲೇ 300 ಶತಕೋಟಿ ಡಾಲರ್‌ಗಳ ಗುರಿಯನ್ನು ತಲುಪಲಿದೆ ಎಂದು ಕೇಂದ್ರ ಸಚಿವರು ಇತ್ತೀಚಿಗೆ ತಿಳಿಸಿದ್ದಾರೆ.

    ‘ಜೈವಿಕ ಆರ್ಥಿಕತೆ’ಯ ಬಗ್ಗೆ:

    • ‘ಜ್ಞಾನ-ಆಧಾರಿತ’ ಉತ್ಪಾದನಾ ಪ್ರಕ್ರಿಯೆ:- ಸುಸ್ಥಿರ ಆರ್ಥಿಕ ವ್ಯವಸ್ಥೆಯ ಚೌಕಟ್ಟಿನೊಳಗೆ ಜೈವಿಕ ಸಂಪನ್ಮೂಲಗಳನ್ನು ಬಳಸಿಕೊಂಡು, ವಿವಿಧ ಆರ್ಥಿಕ ವಲಯಗಳಿಗೆ ಅಗತ್ಯವಿರುವ ಉತ್ಪನ್ನಗಳು, ಪ್ರಕ್ರಿಯೆಗಳು ಮತ್ತು ಸೇವೆಗಳನ್ನು ಒದಗಿಸುವ ‘ಜ್ಞಾನ-ಆಧಾರಿತ’ ಉತ್ಪಾದನಾ ಪ್ರಕ್ರಿಯೆಯನ್ನೇ ‘ಜೈವಿಕ ಆರ್ಥಿಕತೆ’ ಎನ್ನಲಾಗುತ್ತದೆ.
    • ಇದು ಕೃಷಿ, ಅರಣ್ಯ, ಮೀನುಗಾರಿಕೆ, ಆಹಾರ ಉತ್ಪಾದನೆ, ಜೈವಿಕ ತಂತ್ರಜ್ಞಾನ ಮತ್ತು ಜೈವಿಕ-ಇಂಧನ ಸೇರಿದಂತೆ ವೈವಿಧ್ಯಮಯ ವಲಯಗಳನ್ನು ಒಳಗೊಂಡಿದೆ.

    ಭಾರತದಲ್ಲಿನ ಜೈವಿಕ ಆರ್ಥಿಕತೆಯ ಪ್ರಮುಖ ಉಪ-ವಲಯಗಳು:

    • ಬಯೋಫಾರ್ಮಾ (ಜೈವಿಕ ಔಷಧ) ಅಥವಾ ಬಯೋಮೆಡಿಕಲ್ (ಜೈವ ವೈದ್ಯಕೀಯ):- ಔಷಧಗಳು, ವೈದ್ಯಕೀಯ ಉಪಕರಣಗಳು ಮತ್ತು ಪ್ರಯೋಗಾಲಯದಲ್ಲಿ ಬೆಳೆಸಿದ ಅಂಗಾಂಶ ಮಾದರಿಗಳಂತಹ ವೈದ್ಯಕೀಯ ಉತ್ಪನ್ನಗಳು ಹಾಗೂ ಸೇವೆಗಳ ಅಭಿವೃದ್ಧಿ ಮತ್ತು ಉತ್ಪಾದನೆಯನ್ನು ಇದು ಒಳಗೊಂಡಿದೆ.
    • ಬಯೋ-ಅಗ್ರಿ (ಜೈವಿಕ ಕೃಷಿ):- ಕುಲಾಂತರಿ (ತಳೀಯವಾಗಿ ಮಾರ್ಪಡಿಸಿದ) ಬೆಳೆಗಳು ಮತ್ತು ಪ್ರಾಣಿಗಳ ಅಭಿವೃದ್ಧಿ, ‘ನಿಖರ ಕೃಷಿ ತಂತ್ರಜ್ಞಾನ’ಗಳ ಅಳವಡಿಕೆ ಹಾಗೂ ಜೈವಿಕ-ಆಧಾರಿತ ಉತ್ಪನ್ನಗಳ ಉತ್ಪಾದನೆಯನ್ನು ಇದು ಒಳಗೊಂಡಿದೆ. (ಉದಾಹರಣೆಗೆ: ಬಿಟಿ ಹತ್ತಿ).
    • ಬಯೋ-ಇಂಡಸ್ಟ್ರಿಯಲ್ (ಜೈವಿಕ ಕೈಗಾರಿಕಾ ವಲಯ):- ಕಿಣ್ವಗಳು, ಜೈವಿಕ-ಸಂಶ್ಲೇಷಿತ ಮಾರ್ಗಗಳು ಮತ್ತು ಮರುಸಂಯೋಜಿತ ಡಿಎನ್‌ಎ ತಂತ್ರಜ್ಞಾನವನ್ನು ಬಳಸಿಕೊಂಡು ಜೈವಿಕ-ಆಧಾರಿತ ರಾಸಾಯನಿಕಗಳು ಹಾಗೂ ಕೈಗಾರಿಕಾ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವುದನ್ನು ಇದು ಒಳಗೊಂಡಿದೆ.

    ಸರ್ಕಾರದ ಪ್ರಮುಖ ಉಪಕ್ರಮಗಳು:

    • ಬಯೋ-ಇ3 ನೀತಿ (BioE3 Policy):- ಇದು ಸುಸ್ಥಿರ ಜೈವಿಕ-ಉತ್ಪಾದನೆ ಮತ್ತು ಜೈವಿಕ-ಆಧಾರಿತ ಕೈಗಾರಿಕೆಗಳನ್ನು ಉತ್ತೇಜಿಸುತ್ತದೆ. ಸ್ಮಾರ್ಟ್ ಪ್ರೋಟೀನ್‌ಗಳು, ನಿಖರ ಚಿಕಿತ್ಸಕಗಳು ಮತ್ತು ‘ಹವಾಮಾನ-ಸ್ಥಿತಿಸ್ಥಾಪಕ ಕೃಷಿ’ಯ ಮೇಲೆ ಇದು ವಿಶೇಷ ಗಮನ ಹರಿಸಿದೆ.
    • ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆ (RDI) ನಿಧಿ:- ಡೀಪ್-ಟೆಕ್ ಆವಿಷ್ಕಾರಗಳನ್ನು ಬೆಂಬಲಿಸಲು ಮತ್ತು ನವೋದ್ಯಮಗಳನ್ನು ಉನ್ನತ ಮಟ್ಟಕ್ಕೆ ಬೆಳೆಸಲು ₹1 ಲಕ್ಷ ಕೋಟಿ ಮೊತ್ತದ ಬೃಹತ್ ನಿಧಿಯನ್ನು ಸ್ಥಾಪಿಸಲಾಗಿದೆ.
    • ನವೋದ್ಯಮ ಮತ್ತು ಇನ್‌ಕ್ಯುಬೇಶನ್ ಬೆಂಬಲ:- ಭಾರತದಾದ್ಯಂತ ಜೈವಿಕ ತಂತ್ರಜ್ಞಾನ ವಲಯಗಳು ಮತ್ತು ನಾವೀನ್ಯತಾ ಕೇಂದ್ರಗಳನ್ನು ಬಲಪಡಿಸುವುದು ಇದರ ಗುರಿಯಾಗಿದೆ.
    • ಅಂತರ್ಗತ ಪ್ರತಿಭಾ ವಿಕಸನ:- 2ನೇ ಮತ್ತು 3ನೇ ದರ್ಜೆಯ (ಟೈರ್-2 & 3) ನಗರಗಳು, ಮಹಿಳಾ ಉದ್ಯಮಿಗಳು ಹಾಗೂ ಯುವ ಸಂಶೋಧಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿಶೇಷ ಆದ್ಯತೆ ನೀಡಲಾಗುತ್ತಿದೆ.

    ರಿಲೀಫ್ (RELIEF) ಯೋಜನೆ

    ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ:

    • ಪಶ್ಚಿಮ ಏಷ್ಯಾದ ಭೌಗೋಳಿಕ-ರಾಜಕೀಯ ಬಿಕ್ಕಟ್ಟಿನಿಂದಾಗಿ ಉಂಟಾಗಿರುವ ಕಡಲ ಸಾರಿಗೆ ಅಡಚಣೆಗಳಿಂದ ಸಂಕಷ್ಟಕ್ಕೀಡಾಗಿರುವ ಭಾರತದ ರಫ್ತುದಾರರನ್ನು ಬೆಂಬಲಿಸಲು, ಕೇಂದ್ರ ಸರ್ಕಾರವು ‘ರಿಲೀಫ್’ (RELIEF) ಎಂಬ ನೂತನ ಯೋಜನೆಯನ್ನು ಜಾರಿಗೊಳಿಸಿದೆ.

    ರಿಲೀಫ್ ಯೋಜನೆ ( – RELIEF):

    • RELIEF ಸಂಪೂರ್ಣ ರೂಪ:- ರೆಸಿಲಿಯೆನ್ಸ್ ಅಂಡ್ ಲಾಜಿಸ್ಟಿಕ್ಸ್ ಇಂಟರ್ವೀನ್ಷನ್ ಫಾರ್ ಎಕ್ಸ್ಪೋರ್ಟ್ ಫಾಸೀಲಿಟೇಷನ್ (ರಫ್ತು ಸೌಲಭ್ಯಕ್ಕಾಗಿ ಸ್ಥಿತಿಸ್ಥಾಪಕತ್ವ ಮತ್ತು ಲಾಜಿಸ್ಟಿಕ್ಸ್ ಮಧ್ಯಸ್ಥಿಕೆ).
    • ಪ್ರಾರಂಭ:- 2026ರ ಮಾರ್ಚ್ 19ರಂದು ಭಾರತ ಸರ್ಕಾರವು ಪ್ರಾರಂಭಿಸಿದ ₹497 ಕೋಟಿ ವಿಶೇಷ ಉಪಕ್ರಮವಾಗಿದೆ.
    • ಉದ್ದೇಶ:- ಪಶ್ಚಿಮ ಏಷ್ಯಾದಲ್ಲಿನ ಭೌಗೋಳಿಕ-ರಾಜಕೀಯ ಉದ್ವಿಗ್ನತೆಗಳಿಂದಾಗಿ ಎದುರಾಗಿರುವ ಸರಕು ಸಾಗಣೆ ದರಗಳ ಅಸಾಧಾರಣ ಏರಿಕೆ, ವಿಮಾ ಕಂತುಗಳ ತೀವ್ರ ಹೆಚ್ಚಳ ಮತ್ತು ಲಾಜಿಸ್ಟಿಕ್ಸ್ ಅಡಚಣೆಗಳನ್ನು ಎದುರಿಸುತ್ತಿರುವ ಭಾರತದ ರಫ್ತುದಾರರಿಗೆ ಅದರಲ್ಲೂ ವಿಶೇಷವಾಗಿ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ (MSMEs) ಆರ್ಥಿಕ ಬೆಂಬಲ ನೀಡುವುದು.
    • ಮಿಷನ್:- ಈ ಯೋಜನೆಯನ್ನು ‘ರಫ್ತು ಉತ್ತೇಜನಾ ಮಿಷನ್’ (EPM) ಅಡಿಯಲ್ಲಿ ಜಾರಿಗೊಳಿಸಲಾಗಿದೆ.
    • ಅನುಷ್ಠಾನ ಸಂಸ್ಥೆ:- ‘ಭಾರತೀಯ ರಫ್ತು ಸಾಲ ಖಾತರಿ ನಿಗಮ’ (ECGC).
    • ಗುರಿ ಪ್ರದೇಶ:- ಯುನೈಟೆಡ್ ಅರಬ್ ಎಮಿರೇಟ್ಸ್ (UAE), ಸೌದಿ ಅರೇಬಿಯಾ, ಕುವೈತ್, ಕತಾರ್, ಓಮನ್, ಬಹ್ರೇನ್, ಇರಾಕ್, ಇರಾನ್, ಇಸ್ರೇಲ್ ಮತ್ತು ಯೆಮೆನ್ ದೇಶಗಳಿಗೆ ಸಾಗಿಸಲಾಗುತ್ತಿರುವ ಅಥವಾ ಆ ದೇಶಗಳ ಮೂಲಕ ಹಾದುಹೋಗುವ ಸರಕುಗಳಿಗೆ ಮಾತ್ರ ಈ ಯೋಜನೆಯು ಅನ್ವಯಿಸುತ್ತದೆ.
    • ಪ್ರಾಮುಖ್ಯತೆ:- ಕಡಲ ಮಾರ್ಗದ ಅಡಚಣೆಗಳ ಸಂದರ್ಭದಲ್ಲಿ ಆರ್ಥಿಕ ಅಪಾಯಗಳನ್ನು ತಗ್ಗಿಸುವುದು, ರಫ್ತು ಆದೇಶಗಳ ರದ್ದತಿಯನ್ನು ತಡೆಯುವುದು ಮತ್ತು ರಫ್ತು-ಸಂಯೋಜಿತ ವಲಯಗಳಲ್ಲಿನ ಉದ್ಯೋಗಗಳನ್ನು ರಕ್ಷಿಸುವುದು ಇದರ ಪ್ರಮುಖ ಮಹತ್ವವಾಗಿದೆ.

    ಸಣ್ಣ ಜಲವಿದ್ಯುತ್ ಅಭಿವೃದ್ಧಿ ಯೋಜನೆ

    ಯೋಜನೆಗಳು

    ಇದೀಗ ಸುದ್ದಿಯಲ್ಲಿದೆ:

    • ಗ್ರಾಮೀಣ ಅಭಿವೃದ್ಧಿ ಹಾಗೂ ಶುದ್ಧ ಇಂಧನ (ಕಡಿಮೆ-ಹೊರಸೂಸುವಿಕೆಯ ನವೀಕರಿಸಬಹುದಾದ ಶಕ್ತಿ) ಉತ್ಪಾದನೆಯನ್ನು ಉತ್ತೇಜಿಸುವ ಮಹತ್ವಾಕಾಂಕ್ಷಿ ಗುರಿಯೊಂದಿಗೆ, ಕೇಂದ್ರ ಸಚಿವ ಸಂಪುಟವು 2026-31ರ ಅವಧಿಗೆ ಅನ್ವಯವಾಗುವಂತೆ ‘ಸಣ್ಣ ಜಲವಿದ್ಯುತ್ ಅಭಿವೃದ್ಧಿ ಯೋಜನೆ’ಗೆ ಇತ್ತೀಚಿಗೆ ಅಧಿಕೃತ ಅನುಮೋದನೆ ನೀಡಿದೆ.

    ಸಣ್ಣ ಜಲವಿದ್ಯುತ್ (SHP) ಅಭಿವೃದ್ಧಿ ಯೋಜನೆಯ ಬಗ್ಗೆ:

    • ಇದೊಂದು ‘ಕೇಂದ್ರ ಪ್ರಾಯೋಜಿತ ಉಪಕ್ರಮ’ವಾಗಿದ್ದು, 2026ರ ಮಾರ್ಚ್‌ನಲ್ಲಿ ಕೇಂದ್ರ ಸಚಿವ ಸಂಪುಟದಿಂದ ಇದಕ್ಕೆ ಅನುಮೋದನೆ ದೊರೆತಿದೆ.
    • ಪ್ರಮುಖ ಉದ್ದೇಶ:- ದೇಶದ ದೂರದ, ಗುಡ್ಡಗಾಡು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಇಂಧನ ಉತ್ಪಾದನೆಯನ್ನು ಉತ್ತೇಜಿಸುವುದು ಹಾಗೂ ಗಣನೀಯವಾಗಿ ಹೆಚ್ಚಿಸುವುದು.
    • ಅನುಷ್ಠಾನ ಸಚಿವಾಲಯ:- ಕೇಂದ್ರ ‘ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ’ (MNRE).
    • ಗುರಿ:- 2026-27ನೇ ಹಣಕಾಸು ವರ್ಷದಿಂದ ಆರಂಭಿಸಿ 2030-31ನೇ ಹಣಕಾಸು ವರ್ಷದ ಒಳಗೆ, ಒಟ್ಟು 1,500 ಮೆಗಾವ್ಯಾಟ್ (MW) ಸಾಮರ್ಥ್ಯದ ನವೀಕರಿಸಬಹುದಾದ ವಿದ್ಯುತ್ ಅನ್ನು ಉತ್ಪಾದಿಸುವ ಗುರಿಯನ್ನು ನಿಗದಿಪಡಿಸಲಾಗಿದೆ.

    ವಿಶ್ವ ಸಂತೋಷದ ವರದಿ, 2026

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ಪ್ರಪಂಚದಾದ್ಯಂತ ಅನೇಕ ದೇಶಗಳಲ್ಲಿ ಯುವಜನರು ಸಾಮಾಜಿಕ ಜಾಲತಾಣಗಳ ಮಿತಿಮೀರಿದ ಬಳಕೆಗೆ ವ್ಯಸನಿಗಳಾಗುತ್ತಿದ್ದು, ಇದು ಅವರ ಒಟ್ಟಾರೆ ಯೋಗಕ್ಷೇಮದ ಮೇಲೆ ತೀವ್ರ ಸ್ವರೂಪದ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಇತ್ತೀಚಿಗೆ ಬಿಡುಗಡೆಯಾದ ‘ವಿಶ್ವ ಸಂತೋಷದ ವರದಿ, 2026’ ತೀವ್ರ ಕಳವಳ ವ್ಯಕ್ತಪಡಿಸಿದೆ.

    ವಿಶ್ವ ಸಂತೋಷದ ವರದಿ, 2026 ರ ಬಗ್ಗೆ:

      • ಈ ವಾರ್ಷಿಕ ವರದಿಯನ್ನು ಸಿದ್ಧಪಡಿಸಿ ಪ್ರಕಟಿಸುವವರು:- ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ‘ವೆಲ್‌ಬೀಯಿಂಗ್ ರಿಸರ್ಚ್ ಸೆಂಟರ್’, ‘ಗ್ಯಾಲಪ್’ ಸಮೀಕ್ಷಾ ಸಂಸ್ಥೆ ಮತ್ತು ವಿಶ್ವಸಂಸ್ಥೆಯ ‘ಸುಸ್ಥಿರ ಅಭಿವೃದ್ಧಿ ಪರಿಹಾರಗಳ ಜಾಲ’ (SDSN) ಜಂಟಿಯಾಗಿ ಸಿದ್ಧಪಡಿಸಿ ಪ್ರಕಟಿಸುತ್ತವೆ.
      • ಸಂತೋಷದ ಶ್ರೇಯಾಂಕವನ್ನು ಮೌಲ್ಯಮಾಪನ ಮಾಡುವ 6 ಪ್ರಮುಖ ಮಾನದಂಡಗಳು:-
        1. ತಲಾದಾಯ (GDP per capita)
        2. ಆರೋಗ್ಯಕರ ಜೀವಿತಾವಧಿ
        3. ಸಾಮಾಜಿಕ ಬೆಂಬಲ ವ್ಯವಸ್ಥೆ
        4. ಬದುಕಿನ ಆಯ್ಕೆಗಳನ್ನು ನಿರ್ಧರಿಸುವ ಸ್ವಾತಂತ್ರ್ಯ 
        5. ಉದಾರತೆ
        6. ಭ್ರಷ್ಟಾಚಾರದ ಕುರಿತಾದ ಗ್ರಹಿಕೆ.
    • ಪ್ರಮುಖ ಶ್ರೇಯಾಂಕಗಳು:-
    • ಅಗ್ರ 3 ರಾಷ್ಟ್ರಗಳು:- ಫಿನ್‌ಲ್ಯಾಂಡ್ (1ನೇ ಸ್ಥಾನ – 2018 ರಿಂದ ಸತತವಾಗಿ ಅಗ್ರಸ್ಥಾನ ಕಾಯ್ದುಕೊಂಡಿದೆ), ಐಸ್‌ಲ್ಯಾಂಡ್ ಮತ್ತು ಡೆನ್ಮಾರ್ಕ್.
    • ಕೊನೆಯ 3 ರಾಷ್ಟ್ರಗಳು:- ಅಫ್ಘಾನಿಸ್ತಾನ (147ನೇ ಸ್ಥಾನ – ಅತ್ಯಂತ ಕೊನೆಯ ಸ್ಥಾನ), ಸಿಯೆರಾ ಲಿಯೋನ್ (146ನೇ ಸ್ಥಾನ) ಮತ್ತು ಮಲಾವಿ (145ನೇ ಸ್ಥಾನ).
    • ಪ್ರಸ್ತುತ ಭಾರತದ ಸ್ಥಾನ:- 116ನೇ ಸ್ಥಾನವನ್ನು ಪಡೆದುಕೊಂಡಿದೆ (2025ರ ವರದಿಯಲ್ಲಿ ಭಾರತ 118ನೇ ಸ್ಥಾನದಲ್ಲಿತ್ತು; ಹೀಗಾಗಿ ಪ್ರಸ್ತುತ ಶ್ರೇಯಾಂಕದಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿದೆ).
  • ‘QpiAI ಇಂಡಸ್’ – ಕ್ವಾಂಟಮ್ ಕಂಪ್ಯೂಟಿಂಗ್ ವ್ಯವಸ್ಥೆ

    ‘QpiAI ಇಂಡಸ್’ – ಕ್ವಾಂಟಮ್ ಕಂಪ್ಯೂಟಿಂಗ್ ವ್ಯವಸ್ಥೆ

    ಇದೀಗ ಸುದ್ದಿಯಲ್ಲಿದೆ:

    • ಕರ್ನಾಟಕ ಸರ್ಕಾರವು IIIT-ಧಾರವಾಡದಲ್ಲಿರುವ ‘ಕ್ವಾಂಟಮ್ ಕಂಪ್ಯೂಟಿಂಗ್ ಸೆಂಟರ್ ಆಫ್ ಎಕ್ಸಲೆನ್ಸ್’ (QCCE) ನಲ್ಲಿ 25-ಕ್ಯೂಬಿಟ್ ಸಾಮರ್ಥ್ಯದ ಸೂಪರ್ ಕಂಡಕ್ಟಿಂಗ್ ಕ್ವಾಂಟಮ್ ಕಂಪ್ಯೂಟಿಂಗ್ ವ್ಯವಸ್ಥೆಯಾದ ‘QpiAI ಇಂಡಸ್’ ಅನ್ನು ಅಧಿಕೃತವಾಗಿ ಸ್ಥಾಪಿಸಿದೆ.

    ಈ ವ್ಯವಸ್ಥೆಯ ಉದ್ದೇಶಗಳು ಮತ್ತು ಬಳಕೆ:

    • ಶೈಕ್ಷಣಿಕ ಸಂಯೋಜನೆ:- ಈ ವ್ಯವಸ್ಥೆಯನ್ನು ಉನ್ನತ ಶಿಕ್ಷಣದ ಪಠ್ಯಕ್ರಮ ಅಭಿವೃದ್ಧಿ, ಕ್ವಾಂಟಮ್ ಅಲ್ಗಾರಿದಮ್‌ಗಳ ಸಂಶೋಧನೆ ಮತ್ತು ವಿದ್ಯಾರ್ಥಿಗಳಿಗೆ ಈ ಸುಧಾರಿತ ತಂತ್ರಜ್ಞಾನದಲ್ಲಿ ಪ್ರಾಯೋಗಿಕ ತರಬೇತಿ ನೀಡಲು ಬಳಸಲಾಗುತ್ತದೆ.
    • ವಾಣಿಜ್ಯ ಪ್ರವೇಶಾವಕಾಶ:- ಈ ಕೇಂದ್ರವು ಉದ್ಯಮಗಳಿಗೆ ‘ಸೇವಾ ರೂಪದ ಕ್ವಾಂಟಮ್ ಕಂಪ್ಯೂಟಿಂಗ್’ (QCaaS) ಮಾದರಿಯ ಸೌಲಭ್ಯವನ್ನು ಒದಗಿಸುತ್ತದೆ. ಇದರಿಂದಾಗಿ ಕಂಪನಿಗಳು ಸ್ವಂತವಾಗಿ ಅತ್ಯಂತ ದುಬಾರಿ ಕ್ವಾಂಟಮ್ ಕಂಪ್ಯೂಟರ್‌ಗಳನ್ನು ಖರೀದಿಸುವ ಅಗತ್ಯವಿಲ್ಲದೆ, ಇಂಟರ್ನೆಟ್ ನ ಮೂಲಕ ಈ ಕೇಂದ್ರದ ತಂತ್ರಜ್ಞಾನವನ್ನು ಬಳಸಿಕೊಂಡು ಹಣಕಾಸು, ಸಾರಿಗೆ ನಿರ್ವಹಣೆ ಮತ್ತು ಔಷಧ ಸಂಶೋಧನಾ ಕ್ಷೇತ್ರಗಳಲ್ಲಿ ಸಂಕೀರ್ಣ ಪ್ರಯೋಗಗಳನ್ನು ನಡೆಸಬಹುದಾಗಿದೆ.
    • ‘ಕರ್ನಾಟಕ ಕ್ವಾಂಟಮ್ ಮಾರ್ಗಸೂಚಿ’:- ಇದು ಕರ್ನಾಟಕ ಸರ್ಕಾರದ ‘ಕರ್ನಾಟಕ ಕ್ವಾಂಟಮ್ ಮಾರ್ಗಸೂಚಿ’ಯ ಭಾಗವಾಗಿದ್ದು, 2035ರ ವೇಳೆಗೆ $ 20 ಬಿಲಿಯನ್ ಡಾಲರ್ ಮೌಲ್ಯದ ಕ್ವಾಂಟಮ್ ಆರ್ಥಿಕತೆಯನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ.

    ಕ್ವಾಂಟಮ್ ಕಂಪ್ಯೂಟಿಂಗ್ ಬಗ್ಗೆ:

    • ಕ್ವಾಂಟಮ್ ಕಂಪ್ಯೂಟಿಂಗ್ ಎನ್ನುವುದು ಭೌತಶಾಸ್ತ್ರದ ವಿಶಿಷ್ಟ ನಿಯಮಗಳನ್ನು ಬಳಸಿಕೊಂಡು ಮಾಹಿತಿಯನ್ನು ಅತ್ಯಂತ ವೇಗವಾಗಿ ಸಂಸ್ಕರಿಸುವ ಕಂಪ್ಯೂಟರ್‌ಗಳ ಹೊಸ ವಿಧಾನವಾಗಿದೆ. 
    • ನಾವು ಬಳಸುವ ಸಾಮಾನ್ಯ ಫೋನ್ ಅಥವಾ ಲ್ಯಾಪ್‌ಟಾಪ್‌ಗಳು ಮಾಹಿತಿಯನ್ನು ಬಿಟ್‌ಗಳ (Bits) ರೂಪದಲ್ಲಿ (ಅಂದರೆ 0 ಅಥವಾ 1, ಲೈಟ್ ಸ್ವಿಚ್ ಆನ್ ಅಥವಾ ಆಫ್ ಇರುವಂತೆ) ಸಂಗ್ರಹಿಸುತ್ತವೆ. ಆದರೆ ಕ್ವಾಂಟಮ್ ಕಂಪ್ಯೂಟರ್‌ಗಳು ಕ್ಯೂಬಿಟ್‌ಗಳನ್ನು (Qubits) ಬಳಸುತ್ತವೆ.
    • ಸಾಮರ್ಥ್ಯ:- ಇಂದಿನ ಅತ್ಯಂತ ವೇಗದ ಸೂಪರ್ ಕಂಪ್ಯೂಟರ್‌ಗಳು ಸಮಸ್ಯೆಗಳನ್ನು ಪರಿಹರಿಸಲು ಸಾವಿರಾರು ವರ್ಷ ತೆಗೆದುಕೊಳ್ಳುವ ಬೃಹತ್ ಮತ್ತು ಸಂಕೀರ್ಣ ಸಮಸ್ಯೆಗಳನ್ನು ಕ್ವಾಂಟಮ್ ಕಂಪ್ಯೂಟರ್‌ಗಳು ಕೇವಲ ಕೆಲವೇ ನಿಮಿಷಗಳಲ್ಲಿ ಪರಿಹರಿಸುವ ಸಾಮರ್ಥ್ಯ ಹೊಂದಿವೆ.

    ಕ್ವಾಂಟಮ್ ಕಂಪ್ಯೂಟರ್‌ಗಳು ಪ್ರಮುಖ ಅನ್ವಯಗಳು:

    • ವೈದ್ಯಕೀಯ ಕ್ಷೇತ್ರ:- ಹೊಸ ಔಷಧಗಳು ಮಾನವ ದೇಹದೊಂದಿಗೆ ಆಣ್ವಿಕ ಮಟ್ಟದಲ್ಲಿ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಇವು ನಿಖರವಾಗಿ ವಿಶ್ಲೇಷಿಸಬಲ್ಲ ಸಾಮರ್ಥ್ಯವನ್ನು ಹೊಂದಿವೆ. 
    • ಸೈಬರ್ ಭದ್ರತೆ:- ಇವು ಪ್ರಸ್ತುತ ಇರುವ ಬಹುತೇಕ ಇಂಟರ್ನೆಟ್ ಎನ್‌ಕ್ರಿಪ್ಶನ್‌ಗಳನ್ನು (ಪಾಸ್ವರ್ಡ್ ಭದ್ರತೆ) ಭೇದಿಸುವ ಸಾಮರ್ಥ್ಯ ಹೊಂದಿರುವುದರಿಂದ, ಅತ್ಯಂತ ಸುರಕ್ಷಿತವಾದ ಭದ್ರತಾ ವ್ಯವಸ್ಥೆಯನ್ನು ರೂಪಿಸಲು ಇವುಗಳ ಬಳಕೆ ಅತ್ಯಗತ್ಯವಾಗಿದೆ.
    • ಹವಾಮಾನ ಮತ್ತು ಇಂಧನ:- ಸಂಕೀರ್ಣ ರಾಸಾಯನಿಕ ಕ್ರಿಯೆಗಳನ್ನು ವಿಶ್ಲೇಷಿಸುವ ಮೂಲಕ ಸುಧಾರಿತ ಬ್ಯಾಟರಿಗಳ ವಿನ್ಯಾಸ ಮತ್ತು ಗಾಳಿಯಿಂದ ಇಂಗಾಲವನ್ನು ತೆಗೆದುಹಾಕುವ ಮಾರ್ಗಗಳನ್ನು ಕಂಡುಹಿಡಿಯಲು ಇವು ನೆರವಾಗುತ್ತವೆ.
  • ರಾಷ್ಟ್ರೀಯ ಲಸಿಕಾ ದಿನ – ಮಾರ್ಚ್ 16 | ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ (NATO) | ಪಿಎಂ ಪೋಷಣ್ ಯೋಜನೆ (PM POSHAN Scheme) | ಭಾರತ್ ಔದ್ಯೋಗಿಕ್ ವಿಕಾಸ್ ಯೋಜನೆ (BHAVYA) | ಮೀಥೇನ್ ಹೊರಸೂಸುವಿಕೆಯ ತೀವ್ರ ತಾಣಗಳು

    ರಾಷ್ಟ್ರೀಯ ಲಸಿಕಾ ದಿನ – ಮಾರ್ಚ್ 16

    ಆರೋಗ್ಯ

    ಇದೀಗ ಸುದ್ದಿಯಲ್ಲಿದೆ:

    • ರೋಗನಿರೋಧಕ ಲಸಿಕಾ ಅಭಿಯಾನದಲ್ಲಿ ಭಾರತವು ಸಾಧಿಸಿರುವ ಐತಿಹಾಸಿಕ ಮೈಲಿಗಲ್ಲುಗಳನ್ನು ಗುರುತಿಸುವ ಉದ್ದೇಶದಿಂದ, ಮಾರ್ಚ್ 16 ರಂದು ‘ರಾಷ್ಟ್ರೀಯ ಲಸಿಕಾ ದಿನ’ವನ್ನು ಆಚರಿಸಲಾಯಿತು.
    • 1995ರಲ್ಲಿ ‘ಪಲ್ಸ್ ಪೋಲಿಯೊ ಕಾರ್ಯಕ್ರಮ’ದ ಅಡಿಯಲ್ಲಿ, ಮೊದಲ ಬಾರಿಗೆ ಬಾಯಿಯ ಮೂಲಕ ನೀಡುವ ಪೋಲಿಯೊ ಲಸಿಕೆಯ ಡೋಸ್ ಅನ್ನು ನೀಡಿದ ಐತಿಹಾಸಿಕ ದಿನದ ಸವಿನೆನಪಿಗಾಗಿ ಪ್ರತಿವರ್ಷ ಈ ದಿನವನ್ನು ಆಚರಿಸಲಾಗುತ್ತದೆ.

    ಸರ್ಕಾರದ ಪ್ರಮುಖ ಉಪಕ್ರಮಗಳು:

    • ಸಾರ್ವತ್ರಿಕ ಲಸಿಕಾ ಅಭಿಯಾನ ಕಾರ್ಯಕ್ರಮ (UIP):- 
    • ಪ್ರಾರಂಭ:- 1985
    • ಅನುಷ್ಠಾನ ಸಚಿವಾಲಯ:- ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ.
    • ಪ್ರಮುಖ ಉದ್ದೇಶ:- ಮಕ್ಕಳು ಮತ್ತು ಗರ್ಭಿಣಿಯರಿಗೆ ವಿವಿಧ ಮಾರಣಾಂತಿಕ ಕಾಯಿಲೆಗಳ ವಿರುದ್ಧ ಉಚಿತವಾಗಿ ಲಸಿಕೆಗಳನ್ನು ಒದಗಿಸುವುದು.
    • ಮಿಷನ್ ಇಂದ್ರಧನುಷ್:- 
    • ಪ್ರಾರಂಭ:- 2014ರ ಡಿಸೆಂಬರ್‌ನಲ್ಲಿ ಭಾರತ ಸರ್ಕಾರವು ಈ ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಿತು.
    • ಉದ್ದೇಶ:- ಇದುವರೆಗೂ ಲಸಿಕೆ ಪಡೆಯದ ಅಥವಾ ಭಾಗಶಃ ಮಾತ್ರ ಲಸಿಕೆ ಪಡೆದಿರುವ ಎಲ್ಲಾ ಮಕ್ಕಳು ಮತ್ತು ಗರ್ಭಿಣಿಯರನ್ನು ತಲುಪುವ ಮಹತ್ವಾಕಾಂಕ್ಷೆಯ ಉದ್ದೇಶ.

    ಇತ್ತೀಚಿನ ಉಪಕ್ರಮಗಳು (2026ರ ಗುರಿಗಳು):

    • ಎಚ್‌ಪಿವಿ ಲಸಿಕಾ ಅಭಿಯಾನ:- ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ, ದೇಶಾದ್ಯಂತ ಸುಮಾರು 1.15 ಕೋಟಿ ಹೆಣ್ಣುಮಕ್ಕಳಿಗೆ (14 ವರ್ಷ ವಯಸ್ಸಿನ) ಲಸಿಕೆ ನೀಡುವ ಬೃಹತ್ ಗುರಿಯನ್ನು ಇದು ಹೊಂದಿದೆ.
    • ಸ್ವದೇಶಿ ಟಿಡಿ(Td) ಲಸಿಕೆ:- ಹಿಮಾಚಲ ಪ್ರದೇಶದ ಕಸೌಲಿಯಲ್ಲಿರುವ ‘ಕೇಂದ್ರೀಯ ಸಂಶೋಧನಾ ಸಂಸ್ಥೆ’ಯಲ್ಲಿ (CRI) ಈ ಸ್ಥಳೀಯ ಲಸಿಕೆಯನ್ನು ಉತ್ಪಾದಿಸಲಾಗುತ್ತಿದ್ದು, ಸುಮಾರು 55 ಲಕ್ಷ ಡೋಸ್‌ಗಳನ್ನು ಪೂರೈಸಲು ಸರ್ಕಾರ ಯೋಜಿಸಿದೆ.

    ಡಿಜಿಟಲ್ ಉಪಕ್ರಮಗಳು:

    • ಇ-ವಿನ್ (eVIN):- ಇದು ಲಸಿಕೆಗಳ ದಾಸ್ತಾನು ಮತ್ತು ತಾಪಮಾನವನ್ನು ನೈಜ-ಸಮಯದಲ್ಲಿ ಮೇಲ್ವಿಚಾರಣೆ ಮಾಡುವ ಅತ್ಯಾಧುನಿಕ ಡಿಜಿಟಲ್ ವ್ಯವಸ್ಥೆಯಾಗಿದೆ.
    • ಯು-ವಿನ್ (U-Win):- ಇದೊಂದು ಡಿಜಿಟಲ್ ಲಸಿಕಾ ನೋಂದಣಿ ಮತ್ತು ಮೇಲ್ವಿಚಾರಣಾ ವೇದಿಕೆಯಾಗಿದೆ.
    • ಕೋ-ವಿನ್ (CoWIN):- ಭಾರತದಲ್ಲಿ 220 ಕೋಟಿಗೂ ಅಧಿಕ ಕೋವಿಡ್ ಲಸಿಕಾ ಡೋಸ್‌ಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಲು ಈ ಡಿಜಿಟಲ್ ವೇದಿಕೆಯು ಬೆನ್ನೆಲುಬಾಗಿ ಕಾರ್ಯನಿರ್ವಹಿಸಿದೆ.

    ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ (NATO)

    ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ:

    • ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಪ್ರಮುಖವಾದ ‘ಹಾರ್ಮುಜ್ ಜಲಸಂಧಿ’ಯ ಭದ್ರತೆಯನ್ನು ಕಾಪಾಡುವಲ್ಲಿ ನ್ಯಾಟೋ (NATO) ಮಿತ್ರರಾಷ್ಟ್ರಗಳು ನೆರವು ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ‘ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ’ಯಿಂದ (NATO) ಹೊರಬರುವ ಎಚ್ಚರಿಕೆಯನ್ನು ನೀಡಿದ್ದಾರೆ.

    ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ (NATO)ಯ ಬಗ್ಗೆ:

    • ಅಂತರ್‌-ಸರ್ಕಾರಿ ಸೇನಾ ಮೈತ್ರಿಕೂಟವಾಗಿದೆ:- ‘ನ್ಯಾಟೋ’ (NATO)ವನ್ನು ‘ಉತ್ತರ ಅಟ್ಲಾಂಟಿಕ್ ಮೈತ್ರಿಕೂಟ’ (North Atlantic Alliance) ಎಂತಲೂ ಕರೆಯಲಾಗುತ್ತದೆ.
    • ಕೇಂದ್ರ ಕಚೇರಿ:- ಬ್ರಸೆಲ್ಸ್ (ಬೆಲ್ಜಿಯಂ)
    • ಸ್ಥಾಪನೆಯ ಹಿನ್ನೆಲೆ:- ಎರಡನೇ ಮಹಾಯುದ್ಧದ ನಂತರ, ಸೋವಿಯತ್ ಒಕ್ಕೂಟದ ಸಂಭವನೀಯ ದಾಳಿಗಳನ್ನು ಹಿಮ್ಮೆಟ್ಟಿಸಲು ‘ಸಾಮೂಹಿಕ ಭದ್ರತೆ’ಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ 1949ರಲ್ಲಿ ವಾಷಿಂಗ್ಟನ್ ಡಿ.ಸಿ.ಯಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಲಾಯಿತು. 
    • ಯುರೋಪ್ ಮತ್ತು ಉತ್ತರ ಅಮೆರಿಕದ 12 ರಾಷ್ಟ್ರಗಳು ‘ಉತ್ತರ ಅಟ್ಲಾಂಟಿಕ್ ಒಪ್ಪಂದ’ (ವಾಷಿಂಗ್ಟನ್ ಒಪ್ಪಂದ)ಕ್ಕೇ ಸಹಿ ಹಾಕುವ ಮೂಲಕ ಇದನ್ನು ಅಸ್ತಿತ್ವಕ್ಕೆ ತಂದವು.
    • ಸಾಮೂಹಿಕ ರಕ್ಷಣೆ:- ವಾಷಿಂಗ್ಟನ್ ಒಪ್ಪಂದದ 5ನೇ ವಿಧಿಯ ಅನ್ವಯ, ನ್ಯಾಟೋ ‘ಸಾಮೂಹಿಕ ರಕ್ಷಣೆ’ಯ ತತ್ವದಡಿ ಕಾರ್ಯನಿರ್ವಹಿಸುತ್ತದೆ. ಅಂದರೆ, 
    • ಯಾವುದೇ ಒಂದು ನ್ಯಾಟೋ ಸದಸ್ಯ ರಾಷ್ಟ್ರದ ಮೇಲಿನ ಶಸ್ತ್ರಾಸ್ತ್ರ ದಾಳಿಯನ್ನು, ಒಟ್ಟಾರೆ ಎಲ್ಲಾ ನ್ಯಾಟೋ ಸದಸ್ಯ ರಾಷ್ಟ್ರಗಳ ಮೇಲಿನ ದಾಳಿ ಎಂದೇ ಪರಿಗಣಿಸಲಾಗುತ್ತದೆ.
    • 2001ರಲ್ಲಿ ಅಮೆರಿಕದ ಮೇಲೆ ನಡೆದ 9/11 ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ, ಇತಿಹಾಸದಲ್ಲಿ ಇಲ್ಲಿಯವರೆಗೆ ಕೇವಲ ಒಮ್ಮೆ ಮಾತ್ರ ಈ 5ನೇ ವಿಧಿಯನ್ನು ಅಧಿಕೃತವಾಗಿ ಪ್ರಯೋಗಿಸಲಾಗಿದೆ.
    • ಸದಸ್ಯ ರಾಷ್ಟ್ರಗಳು:- ಪ್ರಸ್ತುತ ಈ ಸೇನಾ ಮೈತ್ರಿಕೂಟವು 32 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ.
    • ಇತ್ತೀಚೆಗೆ ‘ಸ್ವೀಡನ್’ ದೇಶವು ಇದರ 32ನೇ ಸದಸ್ಯ ರಾಷ್ಟ್ರವಾಗಿ ಅಧಿಕೃತವಾಗಿ ಸೇರ್ಪಡೆಗೊಂಡಿದೆ.

    ಪಿಎಂ ಪೋಷಣ್ ಯೋಜನೆ (PM POSHAN Scheme)

    ಯೋಜನೆಗಳು

    ಇದೀಗ ಸುದ್ದಿಯಲ್ಲಿದೆ: 

    • ‘ಪಿಎಂ ಪೋಷಣ್’ ಯೋಜನೆಯ ಅಡಿಯಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಬೆಳಗಿನ ಉಪಾಹಾರವನ್ನು ಕಡ್ಡಾಯವಾಗಿ ಒದಗಿಸಬೇಕು ಹಾಗೂ ಈ ಯೋಜನೆಯ ವ್ಯಾಪ್ತಿಯನ್ನು 12ನೇ ತರಗತಿಯವರೆಗೆ ವಿಸ್ತರಿಸಬೇಕು ಎಂದು ‘ಸಂಸದೀಯ ಸ್ಥಾಯಿ ಸಮಿತಿ’ಯು ಕೇಂದ್ರ ಸರ್ಕಾರಕ್ಕೆ ಮಹತ್ವದ ಶಿಫಾರಸು ಮಾಡಿದೆ.

    ಪಿಎಂ ಪೋಷಣ್ ಯೋಜನೆ (PM-POSHAN)ಯ ಬಗ್ಗೆ:

    • ಈ  ಮೊದಲು ‘ಮಧ್ಯಾಹ್ನದ ಬಿಸಿಯೂಟ ಯೋಜನೆ’ (MDMS) ಎಂದು ಕರೆಯಲ್ಪಡುತ್ತಿದ್ದ ಈ ಮಹತ್ವಾಕಾಂಕ್ಷಿ ಯೋಜನೆಯನ್ನು 2021ರಲ್ಲಿ ‘ಪಿಎಂ ಪೋಷಣ್’ (ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್) ಎಂದು ಮರುನಾಮಕರಣ ಮಾಡಲಾಯಿತು.
    • ಇದು ಕೇಂದ್ರ ಶಿಕ್ಷಣ ಸಚಿವಾಲಯದ ಆಡಳಿತಾತ್ಮಕ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, 2021-22 ರಿಂದ 2025-26ರ ವರೆಗಿನ ಅವಧಿಗೆ ಇದರ ಮುಂದುವರಿಕೆಗೆ ಸಂಪುಟದ ಅನುಮೋದನೆ ನೀಡಲಾಗಿದೆ.
    • ಇದೊಂದು ‘ಕೇಂದ್ರ ಪ್ರಾಯೋಜಿತ ಯೋಜನೆ’ಯಾಗಿದ್ದು (ಅಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ನಿರ್ದಿಷ್ಟ ಅನುಪಾತದಲ್ಲಿ ಅನುದಾನ ಒದಗಿಸುತ್ತವೆ). ಸರ್ಕಾರಿ ಮತ್ತು ಸರ್ಕಾರಿ-ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1 ರಿಂದ 8ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ದಿನಕ್ಕೊಂದು ಬಿಸಿ ಊಟವನ್ನು ಒದಗಿಸುವುದು ಇದರ ಮೂಲ ಸ್ವರೂಪವಾಗಿದೆ.
    • ಪ್ರಮುಖ ಉದ್ದೇಶ:- ಶಾಲಾ ಮಕ್ಕಳಲ್ಲಿನ ಅಪೌಷ್ಟಿಕತೆ ಹಾಗೂ ಹಸಿವನ್ನು (ಸಾಕಷ್ಟು ಆಹಾರ ಸೇವನೆಯ ಕೊರತೆ) ನೀಗಿಸುವುದು, ಹಾಗೂ ಅದೇ ಹೊತ್ತಿಗೆ ಶೈಕ್ಷಣಿಕ ಫಲಿತಾಂಶಗಳನ್ನು (ಶಾಲಾ ಹಾಜರಾತಿ ಹೆಚ್ಚಿಸುವುದು, ಶಾಲೆಯಲ್ಲೇ ಉಳಿಸಿಕೊಳ್ಳುವ ಪ್ರಮಾಣ ಹೆಚ್ಚಿಸುವುದು ಮತ್ತು ಕಲಿಕಾ ಸಾಮರ್ಥ್ಯವನ್ನು ಸುಧಾರಿಸುವುದು) ಏಕಕಾಲದಲ್ಲಿ ಉನ್ನತೀಕರಿಸುವುದು.

    ಭಾರತ್ ಔದ್ಯೋಗಿಕ್ ವಿಕಾಸ್ ಯೋಜನೆ (BHAVYA)

    ಯೋಜನೆಗಳು

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ಕೇಂದ್ರ ಸಚಿವ ಸಂಪುಟವು ₹33,660 ಕೋಟಿಗಳ ಬೃಹತ್ ಅನುದಾನದೊಂದಿಗೆ ‘ಭಾರತ್ ಔದ್ಯೋಗಿಕ್ ವಿಕಾಸ್ ಯೋಜನೆ’ಗೆ (BHAVYA) ಅಧಿಕೃತ ಅನುಮೋದನೆ ನೀಡಿದೆ.

    ಭಾರತ್ ಔದ್ಯೋಗಿಕ್ ವಿಕಾಸ್ ಯೋಜನೆ (BHAVYA)ಯ ಬಗ್ಗೆ:

    • ಗುರಿ:- ‘ಪಿಎಂ ಗತಿಶಕ್ತಿ’ ರಾಷ್ಟ್ರೀಯ ಯೋಜನೆಯೊಂದಿಗೆ ಸಂಯೋಜನೆಗೊಂಡು, “ಭವಿಷ್ಯದ ಅಗತ್ಯತೆಗಳಿಗೆ ಸಜ್ಜಾದ 100 ಅತ್ಯಾಧುನಿಕ ಕೈಗಾರಿಕಾ ಪಾರ್ಕ್‌”ಗಳನ್ನು ನಿರ್ಮಿಸುವುದು ಇದರ ಪ್ರಮುಖ ಗುರಿಯಾಗಿದೆ. ಇದರಿಂದಾಗಿ ಈ ಪಾರ್ಕ್‌ಗಳಿಗೆ ‘ಬಹು-ಮಾದರಿ ಸಂಪರ್ಕ ವ್ಯವಸ್ಥೆ’ ಮತ್ತು ‘ಕೊನೆಯ ಹಂತದವರೆಗಿನ ಸಂಪರ್ಕ’ ಸುಲಭವಾಗಿ ಲಭ್ಯವಾಗಲಿದೆ.
    • ಈ ಕೈಗಾರಿಕಾ ಪಾರ್ಕ್‌ಗಳು ಕೈಗಾರಿಕಾ ಮೂಲಸೌಕರ್ಯದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಲಿವೆ. ಕಾರ್ಯಾಚರಣೆಯ ವಿಶ್ವಾಸಾರ್ಹತೆಯನ್ನು ಖಚಿತಪಡಿಸುವುದು, ದಕ್ಷತೆಯ ಕೊರತೆಯನ್ನು ತಗ್ಗಿಸುವುದು ಮತ್ತು ವಿವಿಧ ಕೈಗಾರಿಕಾ ವಲಯಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವುದು ಇದರ ಮಹತ್ವಾಕಾಂಕ್ಷೆಯಾಗಿದೆ.
    • ಭೂಬಳಕೆ:- ಅಭಿವೃದ್ಧಿಗಾಗಿ 100 ರಿಂದ 1,000 ಎಕರೆಗಳವರೆಗಿನ ವಿಸ್ತೀರ್ಣದ ಕೈಗಾರಿಕಾ ಪಾರ್ಕ್‌ಗಳನ್ನು ಗುರುತಿಸಿ ನಿರ್ಮಿಸಲು ಉದ್ದೇಶಿಸಲಾಗಿದೆ.
    • ಹಣಕಾಸು ನೆರವು:- ಕೇಂದ್ರ ಸರ್ಕಾರವು ಪ್ರತಿ ಎಕರೆಗೆ 1 ಕೋಟಿ ರೂ.ಗಳವರೆಗೆ ಆರ್ಥಿಕ ನೆರವು ಒದಗಿಸಲಿದೆ. ಈ ಯೋಜನೆಯು ಕೇವಲ ಕೇಂದ್ರಕ್ಕೆ ಸೀಮಿತವಾಗಿರದೆ, ಸಂಬಂಧಪಟ್ಟ ರಾಜ್ಯ ಸರ್ಕಾರಗಳು ಹಾಗೂ ಖಾಸಗಿ ವಲಯದ ಸಕ್ರಿಯ ಪಾಲ್ಗೊಳ್ಳುವಿಕೆಯನ್ನೂ ನಿರೀಕ್ಷಿಸುತ್ತದೆ.
    • ಮೂಲಸೌಕರ್ಯ:- ಆಂತರಿಕ ರಸ್ತೆಗಳು, ಭೂಗತ ಉಪಯುಕ್ತತೆಗಳು, ಒಳಚರಂಡಿ ವ್ಯವಸ್ಥೆ, ಸಾಮಾನ್ಯ ತ್ಯಾಜ್ಯ ಸಂಸ್ಕರಣಾ ಘಟಕಗಳು, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT) ಹಾಗೂ ಆಡಳಿತಾತ್ಮಕ ವ್ಯವಸ್ಥೆಗಳಂತಹ ಸುಸಜ್ಜಿತ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.
    • ಅನುಷ್ಠಾನ:- ಕೇಂದ್ರ ‘ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆಯ’ (DPIIT) ಅಡಿಯಲ್ಲಿ ಬರುವ ‘ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ನಿಗಮ’ವು (NICDC) ಈ ಉಪಕ್ರಮದ ಅನುಷ್ಠಾನದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.
    • ಯೋಜನೆಯ ಅವಧಿ:- ಈ ಯೋಜನೆಯು 2026-27ನೇ ಸಾಲಿನಿಂದ ಪ್ರಾರಂಭವಾಗಿ ಒಟ್ಟು ಆರು ವರ್ಷಗಳ ಅವಧಿಯವರೆಗೆ ಜಾರಿಯಲ್ಲಿರಲಿದೆ.

    ‘ಪಿಎಂ ಗತಿಶಕ್ತಿ’ ಯೋಜನೆಯ ಬಗ್ಗೆ:

    • ಪ್ರಾರಂಭ:- 2021ರಲ್ಲಿ ಪ್ರಾರಂಭಿಸಲಾಯಿತು.
    • ಉದ್ದೇಶ:- ದೇಶದ ಸಮಗ್ರ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವುದು ಮತ್ತು ವಿವಿಧ ವಲಯಗಳಾದ್ಯಂತ ತಡೆರಹಿತ ಸಂಪರ್ಕವನ್ನು ಉತ್ತೇಜಿಸುವುದು.
    • ಪ್ರಾಮುಖ್ಯತೆ:- ಇದು ಆರ್ಥಿಕ ಬೆಳವಣಿಗೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಪೂರಕವಾದ ‘ಪರಿವರ್ತನಾತ್ಮಕ ವಿಧಾನ’ವಾಗಿದೆ. 
    • ಈ ಯೋಜನೆಯ 7 ಪ್ರಮುಖ ಚಾಲಕ ಶಕ್ತಿಗಳೆಂದರೆ:- ರೈಲ್ವೆ, ರಸ್ತೆಗಳು, ಬಂದರುಗಳು, ಜಲಮಾರ್ಗಗಳು, ವಿಮಾನ ನಿಲ್ದಾಣಗಳು, ಸಮೂಹ ಸಾರಿಗೆ ಮತ್ತು ಸರಕು ಸಾಗಣೆ (ಲಾಜಿಸ್ಟಿಕ್ಸ್) ಮೂಲಸೌಕರ್ಯ.
    • ಅನುಷ್ಠಾನ:- ‘ಪಿಎಂ ಗತಿಶಕ್ತಿ’ಯು ವಿವಿಧ ಕೇಂದ್ರ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳ ಮೂಲಸೌಕರ್ಯ ಯೋಜನೆಗಳಾದ ‘ಭಾರತಮಾಲಾ’, ‘ಸಾಗರಮಾಲಾ’, ಒಳನಾಡು ಜಲಮಾರ್ಗಗಳು, ಶುಷ್ಕ ಬಂದರುಗಳು, ಉಡಾನ್ (UDAN) ಮುಂತಾದವುಗಳನ್ನು ಒಂದೇ ವೇದಿಕೆಯಡಿ ಸಂಯೋಜಿಸುತ್ತದೆ.

    ಮೀಥೇನ್ ಹೊರಸೂಸುವಿಕೆಯ ತೀವ್ರ ತಾಣಗಳು

    ಪರಿಸರ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ‘ಸ್ಟಾಪ್ ಮೀಥೇನ್ ಪ್ರಾಜೆಕ್ಟ್’ (UCLA) ನಡೆಸಿದ ಉಪಗ್ರಹ-ಆಧಾರಿತ ಸಂಶೋಧನೆಯು ಆಘಾತಕಾರಿ ವಿಚಾರವೊಂದನ್ನು ಬಹಿರಂಗಪಡಿಸಿದೆ. ಕೇವಲ ಬೆರಳೆಣಿಕೆಯಷ್ಟು ತೈಲ ಮತ್ತು ಅನಿಲ ನಿಕ್ಷೇಪ ತಾಣಗಳು ಅಸಮಾನವಾಗಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮೀಥೇನ್ ಅನಿಲವನ್ನು ಹೊರಸೂಸುತ್ತಿವೆ ಎಂದು ಈ ವರದಿಯು ಎತ್ತಿ ತೋರಿಸಿದೆ.

    ಮೀಥೇನ್ (CH₄) ಕುರಿತಾದ ಮೂಲಭೂತ ಅಂಶಗಳು:

    • ಬಣ್ಣರಹಿತ, ವಾಸನೆರಹಿತ ಮತ್ತು ಹೆಚ್ಚು ದಹನಶೀಲವಾದ ಅನಿಲವಾಗಿದೆ:- ಇದು ‘ನೈಸರ್ಗಿಕ ಅನಿಲ’ದ ಪ್ರಾಥಮಿಕ ಹಾಗೂ ಪ್ರಮುಖ ಘಟಕವಾಗಿದೆ.
    • ಇಂಗಾಲದ ಡೈಆಕ್ಸೈಡ್‌ಗೆ (CO2) ಹೋಲಿಸಿದರೆ, ಮೀಥೇನ್ ವಾತಾವರಣದಲ್ಲಿ ಕೇವಲ 12 ವರ್ಷಗಳಷ್ಟು ಅಲ್ಪಾವಧಿಯ ಜೀವಿತಾವಧಿಯನ್ನು ಹೊಂದಿದೆ.
    • ಅತ್ಯಂತ ಪ್ರಬಲವಾದ ಹಸಿರುಮನೆ ಅನಿಲವಾಗಿದೆ (GHG):- ಅಲ್ಪಾವಧಿಯಲ್ಲಿ ತೀವ್ರತರವಾದ ತಾಪಮಾನ ಏರಿಕೆಗೆ ಕಾರಣವಾಗುತ್ತದೆ.
    • 20 ವರ್ಷಗಳ ಅವಧಿಯಲ್ಲಿ ವಾತಾವರಣದಲ್ಲಿ ಶಾಖವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯದಲ್ಲಿ, ಇದು ಇಂಗಾಲದ ಡೈಆಕ್ಸೈಡ್‌ಗಿಂತ 80 ಪಟ್ಟು ಹೆಚ್ಚು ಪರಿಣಾಮಕಾರಿಯಾಗಿದೆ.
    • ಕೈಗಾರಿಕಾ-ಪೂರ್ವ ಕಾಲಘಟ್ಟದಿಂದ ಇಲ್ಲಿಯವರೆಗೆ ಸಂಭವಿಸಿರುವ ಒಟ್ಟಾರೆ ಜಾಗತಿಕ ತಾಪಮಾನ ಏರಿಕೆಯಲ್ಲಿ, ಶೇಕಡಾ 30ರಷ್ಟು ಪಾಲು ಕೇವಲ ಮೀಥೇನ್ ಅನಿಲದ್ದೇ ಆಗಿದೆ.  
    • ಪ್ರಮುಖ ಮೂಲಗಳು:-
    • ಮಾನವ-ಪ್ರೇರಿತ ಮೂಲಗಳು:- ತೈಲ ಮತ್ತು ಅನಿಲ ಉತ್ಪಾದನೆ, ಕಲ್ಲಿದ್ದಲು ಗಣಿಗಾರಿಕೆ, ಜಾನುವಾರುಗಳ ಜೀರ್ಣಕ್ರಿಯೆ ಪ್ರಕ್ರಿಯೆ, ಮತ್ತು ಭೂಕುಸಿತ ಪ್ರದೇಶಗಳಲ್ಲಿ ತ್ಯಾಜ್ಯ ಕೊಳೆಯುವಿಕೆಯಿಂದ ಇದು ಹೆಚ್ಚಾಗಿ ಬಿಡುಗಡೆಯಾಗುತ್ತದೆ.
    • ನೈಸರ್ಗಿಕ ಮೂಲಗಳು:- ಜೌಗು ಪ್ರದೇಶಗಳು, ಸಾಗರ ಜಲಸಂಚಯಗಳು, ಹೈಡ್ರೇಟ್‌ಗಳು ಮತ್ತು ಜ್ವಾಲಾಮುಖಿಗಳಂತಹ ಭೌಗೋಳಿಕ ಮೂಲಗಳಿಂದ ಮೀಥೇನ್ ನೈಸರ್ಗಿಕವಾಗಿ ಬಿಡುಗಡೆಯಾಗುತ್ತದೆ.
  • ‘ಶಕುಂತಲಾ ಅನುದಾನ’ ಉಪಕ್ರಮ

    ‘ಶಕುಂತಲಾ ಅನುದಾನ’ ಉಪಕ್ರಮ

    ಇದೀಗ ಸುದ್ದಿಯಲ್ಲಿದೆ:

    • 2026ರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ, ಬೆಂಗಳೂರು ಮೂಲದ ಬಾಹ್ಯಾಕಾಶ ತಂತ್ರಜ್ಞಾನ ಸಂಸ್ಥೆಯಾದ ‘ಪಿಕ್ಸೆಲ್’ (Pixxel) ತನ್ನ ನೂತನ ‘ಶಕುಂತಲಾ ಉಪಕ್ರಮ’ದ ಅಡಿಯಲ್ಲಿ ‘ಶಕುಂತಲಾ ಅನುದಾನ’ವನ್ನು ಪ್ರಾರಂಭಿಸಿದೆ. 
    • ಹವಾಮಾನ ಸ್ಥಿತಿಸ್ಥಾಪಕತ್ವ ಮತ್ತು ಪರಿಸರ ಅಧ್ಯಯನದ ಮೇಲೆ ಸಂಶೋಧನೆ ನಡೆಸುತ್ತಿರುವ ಮಹಿಳಾ ಸಂಶೋಧಕರಿಗೆ ಈ ಉಪಕ್ರಮವು ಕಿರು-ಅನುದಾನಗಳನ್ನು ಒದಗಿಸುತ್ತದೆ.
    • ಈ ಕಾರ್ಯಕ್ರಮವು ವೃತ್ತಿಜೀವನದ ಆರಂಭಿಕ ಹಂತದಲ್ಲಿರುವ ಮಹಿಳಾ ಸಂಶೋಧಕರಿಗೆ ಕ್ಷೇತ್ರ ಅಧ್ಯಯನಗಳು, ದತ್ತಾಂಶ ಸಂಗ್ರಹಣೆ ಮತ್ತು ಸಂಶೋಧನಾ ಉಪಕರಣಗಳ ಖರೀದಿಗೆ ಅಗತ್ಯವಿರುವ ಆರ್ಥಿಕ ಬೆಂಬಲವನ್ನು ನೀಡುತ್ತದೆ.

    ‘ಶಕುಂತಲಾ ಅನುದಾನ’ ಮತ್ತು ಉಪಕ್ರಮದ ಪ್ರಮುಖ ವಿವರಗಳು:

    • ಮುಖ್ಯ ಉದ್ದೇಶ:- STEM ಕ್ಷೇತ್ರದಲ್ಲಿ ಮಹಿಳಾ ಸಂಶೋಧಕರು ಎದುರಿಸುತ್ತಿರುವ ಹಣಕಾಸಿನ ಕೊರತೆಯನ್ನು ನೀಗಿಸುವುದು ಮತ್ತು ದೀರ್ಘಕಾಲೀನವಾಗಿ STEM (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ) ಸಮುದಾಯವನ್ನು ಬಲಪಡಿಸುವುದು.
    • ಪಾಲುದಾರಿಕೆ:- ಈ ಕಾರ್ಯಕ್ರಮವನ್ನು ‘ಎಸ್ಕೇಪ್ ವೆಲಾಸಿಟಿ ಗ್ರಾಂಟ್ಸ್’ ಸಂಸ್ಥೆಯ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ.
    • ಆದ್ಯತಾ ಕ್ಷೇತ್ರಗಳು:- ಹವಾಮಾನ ಬದಲಾವಣೆ, ಪರಿಸರ ಸಂರಕ್ಷಣೆ ಮತ್ತು ಭೂಮಿಯ ವೀಕ್ಷಣೆಗೆ ಸಂಬಂಧಿಸಿದ ಸಂಶೋಧನಾ ಯೋಜನೆಗಳಿಗೆ ಈ ಅನುದಾನವು ಬೆಂಬಲ ನೀಡುತ್ತದೆ.
    • ಪ್ರೇರಣೆ:- ಈ ಹೊಸ ಪ್ರಯತ್ನಕ್ಕೆ ಪಿಕ್ಸೆಲ್ ಸಂಸ್ಥೆಯು ಬಾಹ್ಯಾಕಾಶಕ್ಕೆ ಹಾರಿಸಿದ ಮೊಟ್ಟಮೊದಲ ಮಾರ್ಗದರ್ಶಕ ಉಪಗ್ರಹವಾದ ‘ಶಕುಂತಲಾ’ ಮತ್ತು ಭಾರತದ ಹೆಮ್ಮೆಯ ಗಣಿತಜ್ಞೆ ಶಕುಂತಲಾ ದೇವಿ ಅವರ ಸವಿನೆನಪಿಗಾಗಿ ಈ ಹೆಸರನ್ನು ಇಡಲಾಗಿದೆ.