ಜಿಎಸ್ಟಿ (GST) ಸಂಗ್ರಹದಲ್ಲಿ ಕರ್ನಾಟಕಕ್ಕೆ ದ್ವಿತೀಯ ಸ್ಥಾನ
ಇತ್ತೀಚೆಗೆ ಸುದ್ದಿಯಲ್ಲಿದೆ:
2025-2026ನೇ ಸಾಲಿನಲ್ಲಿ ಭಾರತದ ರಾಜ್ಯಗಳ ಪೈಕಿ ಕರ್ನಾಟಕವು ಎರಡನೇ ಅತಿ ಹೆಚ್ಚು ಜಿಎಸ್ಟಿ (GST) ಸಂಗ್ರಹವನ್ನು ಸಾಧಿಸಿದೆ.
ಸರಕು ಮತ್ತು ಸೇವಾ ತೆರಿಗೆ (GST)ಯ ಬಗ್ಗೆ:
ಸರಕು ಮತ್ತು ಸೇವಾ ತೆರಿಗೆ (GST)ಯು ಸರಕು ಮತ್ತು ಸೇವೆಗಳ ಪೂರೈಕೆಯ ಮೇಲೆ ಭಾರತದಲ್ಲಿ ವಿಧಿಸಲಾಗುವ ಪರೋಕ್ಷ ತೆರಿಗೆಯಾಗಿದೆ.
ಇದು ದೇಶೀಯ ಬಳಕೆಗೆ ಮಾರಾಟವಾಗುವ ಹೆಚ್ಚಿನ ಸರಕು ಮತ್ತು ಸೇವೆಗಳ ಮೇಲೆ ವಿಧಿಸಲಾಗುವ ಮೌಲ್ಯವರ್ಧಿತ ತೆರಿಗೆಯಾಗಿದೆ.
ಇಡೀ ದೇಶಕ್ಕೆ ಅನ್ವಯವಾಗುವ ಸಮಗ್ರ ಪರೋಕ್ಷ ತೆರಿಗೆಯಾಗಿ ಇದನ್ನು 2017 ರಲ್ಲಿ ಭಾರತದಲ್ಲಿ ಜಾರಿಗೆ ತರಲಾಯಿತು.
ಇದು ಮೂರು ಪ್ರಕಾರದ ತೆರಿಗೆಗಳನ್ನು ಹೊಂದಿದೆ:-
CGST:- ಕೇಂದ್ರ ಸರ್ಕಾರವು ವಿಧಿಸುವ ತೆರಿಗೆ.
SGST:- ರಾಜ್ಯ ಸರ್ಕಾರಗಳು ವಿಧಿಸುವ ತೆರಿಗೆ.
IGST:- ಎಲ್ಲಾ ಅಂತರ-ರಾಜ್ಯ ಸರಕು ಮತ್ತು/ಅಥವಾ ಸೇವೆಗಳ ಪೂರೈಕೆಯ ಮೇಲೆ ವಿಧಿಸಲಾಗುವ ತೆರಿಗೆ.
ಜಿಎಸ್ಟಿ ಮಂಡಳಿ (GST Council)ಯ ಬಗ್ಗೆ:
ಸಾಂವಿಧಾನಿಕ ಸಂಸ್ಥೆಯಾಗಿದೆ:-2016 ರ ಸಂವಿಧಾನದ (101 ನೇ ತಿದ್ದುಪಡಿ) ಕಾಯ್ದೆಯ ಮೂಲಕ ಪರಿಚಯಿಸಲಾದ ಇದು, ಸಂವಿಧಾನದ 279A ವಿಧಿಯ ಅಡಿಯಲ್ಲಿ ಸ್ಥಾಪಿಸಲಾದ ಸಾಂವಿಧಾನಿಕ ಸಂಸ್ಥೆಯಾಗಿದೆ.
ಕಾರ್ಯಾಧಿಕಾರ:- ಭಾರತದಲ್ಲಿ ಜಿಎಸ್ಟಿಯ (GST) ಚೌಕಟ್ಟಿನಲ್ಲಿ ಯಾವುದೇ ಕಾನೂನು ಅಥವಾ ನಿಯಂತ್ರಣವನ್ನು ಮಾರ್ಪಡಿಸುವ, ಹೊಂದಾಣಿಕೆ ಮಾಡುವ ಅಥವಾ ಜಾರಿಗೊಳಿಸುವ ಅಧಿಕಾರವನ್ನು ಇದು ಹೊಂದಿದೆ.
ಒಕ್ಕೂಟ ವ್ಯವಸ್ಥೆ:- ಕೇಂದ್ರ ಮತ್ತು ರಾಜ್ಯಗಳೆರಡಕ್ಕೂ ಸೂಕ್ತ ಪ್ರಾತಿನಿಧ್ಯವನ್ನು ಒದಗಿಸುವ ‘ಒಕ್ಕೂಟ ಸಂಸ್ಥೆ’ ಎಂದೂ ಇದನ್ನು ಪರಿಗಣಿಸಲಾಗಿದೆ.
ಕಾರ್ಯಗಳು:- ಜಿಎಸ್ಟಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಇದು ಶಿಫಾರಸುಗಳನ್ನು ಮಾಡುತ್ತದೆ.
ಸಂಯೋಜನೆ:-
ಅಧ್ಯಕ್ಷರು:-ಕೇಂದ್ರ ಹಣಕಾಸು ಸಚಿವರು.
ಸದಸ್ಯರು:- ಕೇಂದ್ರ ಕಂದಾಯ ಅಥವಾ ಹಣಕಾಸು ಖಾತೆ ರಾಜ್ಯ ಸಚಿವರು, ಮತ್ತು ಎಲ್ಲಾ ರಾಜ್ಯಗಳ ಹಣಕಾಸು ಅಥವಾ ತೆರಿಗೆ ಉಸ್ತುವಾರಿ ಸಚಿವರು.
ಜಪಾನ್ ದೇಶದ ಸಂಸ್ಥೆಯಾದ ‘ಶಿಮಿಜು ಕಾರ್ಪೊರೇಷನ್’ಈ ಮಹತ್ವಾಕಾಂಕ್ಷೆಯ ‘ಲೂನಾರ್ ರಿಂಗ್’ ಯೋಜನೆಯನ್ನು ಪ್ರಸ್ತಾಪಿಸಿದೆ.
ಇದೊಂದು ಭವಿಷ್ಯದ ವಿನೂತನ ಮೂಲಸೌಕರ್ಯ ಯೋಜನೆಯಾಗಿದ್ದು, ಚಂದ್ರನ ಸುತ್ತಲೂ ಬೃಹತ್ ಸೌರ ವಿದ್ಯುತ್ ಉಂಗುರವನ್ನು ನಿರ್ಮಿಸುವ ಮೂಲಕ ಭೂಮಿಯ ಇಂಧನ ಬೇಡಿಕೆಗಳನ್ನು ಪೂರೈಸುವ ಮಹತ್ವದ ಗುರಿಯನ್ನು ಹೊಂದಿದೆ.
ಲೂನಾರ್ ರಿಂಗ್ ಯೋಜನೆ (Lunar Ring Project)ಯ ಬಗ್ಗೆ:
ಇದು ಚಂದ್ರನ ಸಮಭಾಜಕ ವೃತ್ತದ ಉದ್ದಕ್ಕೂ ಸುಮಾರು 11,000 ಕಿ.ಮೀ (ಅಂದಾಜು 6,800 ಮೈಲುಗಳು) ಉದ್ದದ ಬೃಹತ್ ಸೌರ ಫಲಕಗಳ ಪಟ್ಟಿಯನ್ನು ನಿರ್ಮಿಸುವ ವಿಸ್ತೃತ ಯೋಜನೆಯನ್ನು ಇದು ಒಳಗೊಂಡಿದೆ.
ಕಾರ್ಯವಿಧಾನ:- ಚಂದ್ರನ ಸುತ್ತಲಿರುವ ಈ ಸೌರ ಫಲಕಗಳು ಸೌರ ಶಕ್ತಿಯನ್ನು ಸೆರೆಹಿಡಿದು ವಿದ್ಯುತ್ ಉತ್ಪಾದಿಸುತ್ತವೆ. ಆ ನಂತರ, ಆ ವಿದ್ಯುತ್ ಶಕ್ತಿಯನ್ನು ಸೂಕ್ಷ್ಮ ತರಂಗಗಳು ಅಥವಾ ಲೇಸರ್ ಕಿರಣಗಳ ರೂಪಕ್ಕೆ ಪರಿವರ್ತಿಸಿ, ನಿರಂತರವಾಗಿ ಭೂಮಿಗೆ ರವಾನಿಸಲಾಗುತ್ತದೆ.
ಸ್ವಯಂಚಾಲಿತ ನಿರ್ಮಾಣ ರೋಬೋಟ್ಗಳನ್ನು ಈ ಯೋಜನೆಗಾಗಿ ಬಳಸಲಾಗುತ್ತದೆ:- ಈ ರೋಬೋಟ್ಗಳು ಚಂದ್ರನ ಮೇಲ್ಮೈ ಮಣ್ಣನ್ನು (ರೆಗೊಲಿತ್) ಸಂಸ್ಕರಿಸಿ ಕಾಂಕ್ರೀಟ್, ಇಟ್ಟಿಗೆಗಳು ಹಾಗೂ ಗಾಜಿನ ಫೈಬರ್ಗಳನ್ನಾಗಿ ಪರಿವರ್ತಿಸುತ್ತವೆ. ಈ ಪ್ರಕ್ರಿಯೆಯು ಅಂತರಿಕ್ಷದಲ್ಲಿ ‘ಸ್ಥಳೀಯ ಸಂಪನ್ಮೂಲಗಳ ಬಳಕೆ’ಯನ್ನು ಉತ್ತೇಜಿಸುತ್ತದೆ.
ನಿರಂತರ ವಿದ್ಯುತ್:- ಭೂಮಿಯಂತೆ ಚಂದ್ರನ ಮೇಲೆ ಸೂರ್ಯನ ಬೆಳಕನ್ನು ತಡೆಯುವ ಯಾವುದೇ ವಾತಾವರಣ ಇಲ್ಲದಿರುವುದರಿಂದ, ಅಲ್ಲಿ ದಿನದ 24 ಗಂಟೆಗಳ ಕಾಲ ಯಾವುದೇ ಅಡೆತಡೆಯಿಲ್ಲದೆ ನಿರಂತರವಾಗಿ ಸೌರ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗುತ್ತದೆ.
“Bhavasagara ಮತ್ತು MACS” : ರಾಷ್ಟ್ರೀಯ ದಾಖಲೆಗಳ ಸಂಗ್ರಹಕಾರ
ಆಡಳಿತ
ಇತ್ತೀಚೆಗೆ ಸುದ್ದಿಯಲ್ಲಿದೆ:
ಇತ್ತೀಚೆಗೆ, ‘ರಾಷ್ಟ್ರೀಯ ಜೀವವೈವಿಧ್ಯತೆ ಪ್ರಾಧಿಕಾರ’ವು (NBA) ಭಾರತದ ಎರಡು ಪ್ರಮುಖ ವೈಜ್ಞಾನಿಕ ಸಂಸ್ಥೆಗಳನ್ನು ಜೈವಿಕ ವೈವಿಧ್ಯತೆ ಕಾಯ್ದೆ, 2002ರ ಅಡಿಯಲ್ಲಿ ಅಧಿಕೃತವಾಗಿ ನಿಯೋಜಿತ ದಾಖಲೆಗಳ ಸಂಗ್ರಹಕಾರ ಎಂದು ಅಧಿಸೂಚಿಸಿದೆ.
ಉಲ್ಲೇಖ ಕೇಂದ್ರಗಳ ವಿವರ:
‘ಭವಸಾಗರ’:- ಕೇರಳದ ಕೊಚ್ಚಿಯಲ್ಲಿರುವ ‘ಕಡಲ ಜೀವ ಸಂಪನ್ಮೂಲಗಳು ಮತ್ತು ಪರಿಸರಶಾಸ್ತ್ರ ಕೇಂದ್ರ’ (CMLRE)ದಲ್ಲಿರುವ ‘ಭವಸಾಗರ’ವು, ಸಂಪೂರ್ಣವಾಗಿ ಆಳ-ಸಮುದ್ರದ ಜೀವವೈವಿಧ್ಯದ ಸಂಶೋಧನೆಗೆ ಮೀಸಲಾದ ವಿಶೇಷ ರಾಷ್ಟ್ರೀಯ ಸೌಲಭ್ಯವಾಗಿದೆ.
MACS ಸೂಕ್ಷ್ಮಜೀವಿಗಳ ಸಂಗ್ರಹ:- ಇದು ಮಹಾರಾಷ್ಟ್ರದ ಪುಣೆಯಲ್ಲಿರುವ ‘ಅಘರ್ಕರ್ ಸಂಶೋಧನಾ ಸಂಸ್ಥೆ’ಯಲ್ಲಿ (ARI) ನೆಲೆಗೊಂಡಿದ್ದು, ಸೂಕ್ಷ್ಮಜೀವಿಗಳು ಮತ್ತು ಶಿಲೀಂಧ್ರಗಳ ವೈವಿಧ್ಯತೆಯ ಕುರಿತಾದ ಪರಿಣಿತ ಕೇಂದ್ರವಾಗಿದೆ. ಇದು ‘ಭಾರತದ ರಾಷ್ಟ್ರೀಯ ಶಿಲೀಂಧ್ರ ಸಂಸ್ಕೃತಿ ಸಂಗ್ರಹ ಕೇಂದ್ರ’ವನ್ನು ಸಹ ಒಳಗೊಂಡಿದೆ.
ಈ ಅಧಿಸೂಚನೆಯ ಪ್ರಾಮುಖ್ಯತೆ:
ರಾಷ್ಟ್ರೀಯ ಜಾಲದ ವಿಸ್ತರಣೆ:- ಈ ಎರಡು ಹೊಸ ಸಂಸ್ಥೆಗಳ ಸೇರ್ಪಡೆಯೊಂದಿಗೆ, ಭಾರತದಲ್ಲಿರುವ ಅಧಿಕೃತ ರಾಷ್ಟ್ರೀಯ ದಾಖಲೆಗಳ ಸಂಗ್ರಹಕಾರದ ಒಟ್ಟು ಸಂಖ್ಯೆಯು 20 ಕ್ಕೆ ಏರಿಕೆಯಾಗಿದೆ.
ವೈಜ್ಞಾನಿಕ ಬೆಂಬಲ:- ಅತ್ಯಂತ ಪಾರದರ್ಶಕ ಮತ್ತು ಜವಾಬ್ದಾರಿಯುತ ವೈಜ್ಞಾನಿಕ ಷರತ್ತುಗಳ ಅಡಿಯಲ್ಲಿ ಉನ್ನತ ಸಂಶೋಧನೆಗಳಿಗಾಗಿ ಜೈವಿಕ ವಸ್ತುಗಳನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡುವ ಮೂಲಕ, ಈ ಅಧಿಸೂಚನೆಯು ಭವಿಷ್ಯದ ಹೊಸ ವೈಜ್ಞಾನಿಕ ಆವಿಷ್ಕಾರಗಳನ್ನು ಸುಗಮಗೊಳಿಸುತ್ತದೆ.
ಜೈವಿಕ ವೈವಿಧ್ಯತೆ ಕಾಯ್ದೆ, 2002 ರ ಬಗ್ಗೆ:
ಜಾರಿ:-2002 ರಲ್ಲಿ ಜಾರಿಗೆ ತರಲಾಯಿತು.
ಉದ್ದೇಶ:- ಭಾರತದ,
ಜೈವಿಕ ಸಂಪನ್ಮೂಲಗಳ ಸಂರಕ್ಷಣೆ, ಅವುಗಳ ಸುಸ್ಥಿರ ಬಳಕೆಯ ನಿರ್ವಹಣೆ,
ಜೈವಿಕ ಸಂಪನ್ಮೂಲಗಳು ಮತ್ತು ಸಾಂಪ್ರದಾಯಿಕ ಜ್ಞಾನದ ಬಳಕೆಯಿಂದ ಉದ್ಭವಿಸುವ ಆರ್ಥಿಕ ಪ್ರಯೋಜನಗಳನ್ನು ಸ್ಥಳೀಯ ಸಮುದಾಯಗಳೊಂದಿಗೆ ನ್ಯಾಯಸಮ್ಮತವಾಗಿ ಮತ್ತು ಸಮಾನವಾಗಿ ಹಂಚಿಕೊಳ್ಳುವುದು.
ಮೂರು-ಹಂತದ ಸಾಂಸ್ಥಿಕ ರಚನೆ:-ಜೈವಿಕ ಸಂಪನ್ಮೂಲಗಳ ಪ್ರವೇಶ ಮತ್ತು ಬಳಕೆಯನ್ನು ನಿಯಂತ್ರಿಸಲು ಈ ಕಾಯ್ದೆಯು ದೇಶಾದ್ಯಂತ ರೂಪಿಸಿದೆ. ಅವುಗಳೆಂದರೆ,
ರಾಷ್ಟ್ರೀಯ ಜೀವವೈವಿಧ್ಯತೆ ಪ್ರಾಧಿಕಾರ (NBA – National Biodiversity Authority).
ರಾಜ್ಯ ಜೀವವೈವಿಧ್ಯತೆ ಮಂಡಳಿಗಳು (SBBs – State Biodiversity Boards).
ಜೀವವೈವಿಧ್ಯತೆ ನಿರ್ವಹಣಾ ಸಮಿತಿಗಳು (BMCs – Biodiversity Management Committees).
ರಾಷ್ಟ್ರೀಯ ಜೀವವೈವಿಧ್ಯತೆ ಪ್ರಾಧಿಕಾರ (NBA)ದ ಬಗ್ಗೆ:
ಸ್ಥಾಪನೆ:- ಕೇಂದ್ರ ಸರ್ಕಾರವು 2003 ರಲ್ಲಿ ಸ್ಥಾಪಿಸಿತು.
ಶಾಸನಬದ್ಧ ಸಂಸ್ಥೆ (Statutory Body)ಯಾಗಿದೆ:-ಜೈವಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆಗೆ ಸಂಬಂಧಿಸಿದಂತೆ ಭಾರತ ಸರ್ಕಾರಕ್ಕೆ ನಿಯಂತ್ರಕ ಮತ್ತು ಸಲಹಾ ಕಾರ್ಯಗಳನ್ನು ನಿರ್ವಹಿಸುತ್ತದೆ.
ಪ್ರಧಾನ ಕಚೇರಿ:-ಚೆನ್ನೈನಲ್ಲಿದೆ.
ಪ್ರಮುಖ ಕಾರ್ಯಗಳು:-
ನಿಷೇಧಿಸಲಾದ ಕಾನೂನುಬಾಹಿರ ಕಾರ್ಯಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವುದು ಮತ್ತು ಅವುಗಳನ್ನು ಕಟ್ಟುನಿಟ್ಟಾಗಿ ತಡೆಯುವುದು.
ಭಾರತದಲ್ಲಿನ ಅಪಾರ ಜೀವವೈವಿಧ್ಯತೆಯನ್ನು ಹೇಗೆ ಉತ್ತಮವಾಗಿ ಮತ್ತು ವೈಜ್ಞಾನಿಕವಾಗಿ ಸಂರಕ್ಷಿಸಬಹುದು ಎಂಬುದರ ಕುರಿತು ಕೇಂದ್ರ ಸರ್ಕಾರಕ್ಕೆ ಅಗತ್ಯ ಸಲಹೆಗಳನ್ನು ಒದಗಿಸುವುದು.
ದೇಶದಾದ್ಯಂತ ‘ಜೈವಿಕ ಪರಂಪರೆಯ ತಾಣ’ಗಳನ್ನು ಸರ್ಕಾರವು ಹೇಗೆ ಗುರುತಿಸಿ ಆಯ್ಕೆ ಮಾಡಬಹುದು ಎಂಬುದರ ಕುರಿತು ವಿಸ್ತೃತ ವರದಿಯನ್ನು ಸಿದ್ಧಪಡಿಸುವುದು.
ಸ್ಥಳೀಯವಾಗಿ ಬಳಸುವ ಜೈವಿಕ ಸಂಪನ್ಮೂಲಗಳು ಅಥವಾ ಅದಕ್ಕೆ ಸಂಬಂಧಿಸಿದ ಸಾಂಪ್ರದಾಯಿಕ ಜ್ಞಾನದ ಮೇಲೆ ಖಾಸಗಿಯವರು ಬೌದ್ಧಿಕ ಆಸ್ತಿ ಹಕ್ಕುಗಳನ್ನು (IPR) ಪಡೆಯದಂತೆ ತಡೆಯಲು ಅಗತ್ಯವಾದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದು.
ಎಲಿಫೆಂಟಾ ಗುಹೆಗಳು
ಇತಿಹಾಸ ಮತ್ತು ಸಂಸ್ಕೃತಿ
ಇತ್ತೀಚೆಗೆ ಸುದ್ದಿಯಲ್ಲಿದೆ:
ಇತ್ತೀಚಿಗೆ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ASI) ಎಲಿಫೆಂಟಾ ದ್ವೀಪದಲ್ಲಿ ನಡೆಸಿದ ಬೃಹತ್ ಉತ್ಖನನದಲ್ಲಿ 1,500 ವರ್ಷಗಳ ಹಳೆಯ ಮೆಟ್ಟಿಲುಗಳಿರುವ ಜಲಾಶಯವೊಂದು ಪತ್ತೆಯಾಗಿದೆ.
ಈ ಉತ್ಖನನಗೊಂಡ ರಚನೆಯು ‘T-ಆಕಾರದ’ ಮೆಟ್ಟಿಲುಗಳ ಜಲಾಶಯವಾಗಿದ್ದು, ಇದು ಅಂದಿನ ಅತ್ಯುತ್ತಮ ಯೋಜಿತ ವಾಸ್ತುಶಿಲ್ಪ ವಿನ್ಯಾಸವನ್ನು ಸೂಚಿಸುತ್ತದೆ.
ಎಲಿಫೆಂಟಾ ಗುಹೆಗಳ ಬಗ್ಗೆ:
ಮುಂಬೈ ಸಮೀಪದಲ್ಲಿರುವ ಎಲಿಫೆಂಟಾ ದ್ವೀಪದಲ್ಲಿ (ಐತಿಹಾಸಿಕವಾಗಿ ‘ಘಾರಾಪುರಿ’ – ಅಂದರೆ “ಗುಹೆಗಳ ನಗರ” ಎಂದು ಕರೆಯಲ್ಪಡುವ) ನೆಲೆಗೊಂಡಿರುವ ಈ ಎಲಿಫೆಂಟಾ ಗುಹೆಗಳು ‘ಯುನೆಸ್ಕೋದ ವಿಶ್ವ ಪಾರಂಪರಿಕ ತಾಣ‘ಗಳ ಪಟ್ಟಿಗೆ ಸೇರಿವೆ.
16 ನೇ ಶತಮಾನದಲ್ಲಿ ಪೋರ್ಚುಗೀಸರು ಈ ದ್ವೀಪದ ಸಮೀಪದಲ್ಲಿ ಆನೆಯನ್ನೇ ಹೋಲುವ ಬೃಹತ್ ಕಲ್ಲಿನ ಆಕೃತಿಯನ್ನು ಪತ್ತೆಹಚ್ಚಿದ ನಂತರ, ಈ ದ್ವೀಪಕ್ಕೆ “ಎಲಿಫೆಂಟಾ” ಎಂದು ಹೆಸರಿಟ್ಟರು. ಆದರೆ, ಸ್ಥಳೀಯ ನಿವಾಸಿಗಳು ಇದರ ಮೂಲ ಹೆಸರಾದ ‘ಘಾರಾಪುರಿ’ ಯನ್ನೇ ಹೆಚ್ಚಾಗಿ ಬಳಸುತ್ತಿದ್ದರು.
ಐತಿಹಾಸಿಕವಾಗಿ, ಈ ದ್ವೀಪವು ಬಹಳ ರಾಜಮನೆತನಗಳೊಂದಿಗೆ ನಿಕಟ ಸಂಪರ್ಕ ಹೊಂದಿತ್ತು.
ಇತ್ತೀಚಿಗೆ ಪತ್ತೆಯಾದ ರಾಜ ‘ಕೃಷ್ಣರಾಜ‘ನ ನಾಣ್ಯಗಳ ಆಧಾರದ ಮೇಲೆ, ಕ್ರಿ.ಶ. 6 ನೇ ಶತಮಾನದಲ್ಲಿ ಈ ಗುಹೆಗಳ ಪ್ರಮುಖ ಪೋಷಕರು ‘ಮಾಹಿಷ್ಮತಿಯ ಕಲಚೂರಿಗಳು’ ಎಂದು ಪರಿಗಣಿಸಲಾಗಿದೆ. ಅವರಿಗಿಂತ ಮೊದಲು, ಈ ಪ್ರದೇಶವನ್ನು ಕೊಂಕಣ ಮೌರ್ಯರು ಆಳಿದರು; ನಂತರ ಬಂದ ಚಾಲುಕ್ಯರು ಮತ್ತು ರಾಷ್ಟ್ರಕೂಟರು ಇದರ ಪ್ರಾಮುಖ್ಯತೆಯನ್ನು ಕಾಯ್ದುಕೊಂಡರು.
ಒಟ್ಟು 7 ಗುಹೆಗಳಿವೆ:-1 ನೇ ದೊಡ್ಡ ಗುಹೆಯಲ್ಲಿ 20-ಅಡಿ ಎತ್ತರದಪ್ರಸಿದ್ಧವಾದ ತ್ರಿಮೂರ್ತಿ ಶಿಲ್ಪವನ್ನು ಕಾಣಬಹುದಾಗಿದೆ. ಈ ಮೂರು-ಮುಖಗಳ ಆಕೃತಿಯು ಶಿವನನ್ನು ಸೃಷ್ಟಿಕರ್ತ, ರಕ್ಷಕ ಮತ್ತು ಸಂಹಾರಕ ಎಂದು ಪ್ರತಿಬಿಂಬಿಸುವರೂಪಗಳನ್ನು ಏಕಕಾಲದಲ್ಲಿ ಪ್ರತಿನಿಧಿಸುತ್ತದೆ.
ಇಲ್ಲಿ ಮುಖ್ಯವಾಗಿ ಶೈವ ಧರ್ಮಕ್ಕೆ ಸಂಬಂಧಿಸಿದ ಶಿಲ್ಪಗಳು ಇವೆ.
“ಮಣ್ಣಿನ ಸಖಿಯರು”- ಮಣ್ಣಿನ ಆರೋಗ್ಯ ಮತ್ತು ಕೃಷಿ ಉತ್ಪಾದಕತೆ ಸುಧಾರಿಸಲು
ಆರ್ಥಿಕತೆ
ಇತ್ತೀಚೆಗೆ ಸುದ್ದಿಯಲ್ಲಿ:
ಪಶ್ಚಿಮ ಮಹಾರಾಷ್ಟ್ರದ ಬರಪೀಡಿತ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾದ “ಮಣ್ಣಿನ ಸಖಿಯರು” ಉಪಕ್ರಮವು ಗ್ರಾಮೀಣ ಮಹಿಳೆಯರನ್ನು ಸಬಲೀಕರಣಗೊಳಿಸುವುದರ ಜೊತೆಗೆ ಮಣ್ಣಿನ ಆರೋಗ್ಯ ಮತ್ತು ಕೃಷಿ ಉತ್ಪಾದಕತೆಯನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.
ಮಣ್ಣಿನ ಸಖಿಯರು’ (Soil Sakhis) ಉಪಕ್ರಮದ ಬಗ್ಗೆ:
ಮನ್ ದೇಶಿ ಫೌಂಡೇಶನ್ನ ‘ಕೃಷಿ ಮತ್ತು ಹವಾಮಾನ ಕ್ರಿಯಾಯೋಜನೆ’ಯ ಅಡಿಯಲ್ಲಿ ಇದನ್ನು 2023 ರಲ್ಲಿ ಪ್ರಾರಂಭಿಸಲಾಯಿತು.
ಮಣ್ಣಿನ ಪರೀಕ್ಷೆ ಮತ್ತು ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಉತ್ತೇಜಿಸಲು ಇದು ಗ್ರಾಮೀಣ ಮಹಿಳೆಯರಿಗೆ “ಮಣ್ಣಿನ ಸಖಿಯರಾಗಿ” ತರಬೇತಿ ನೀಡುತ್ತದೆ.
ಪ್ರಸ್ತುತ ಇದನ್ನು ಸತಾರಾ, ಸಾಂಗ್ಲಿ, ಸೋಲಾಪುರ, ಕೊಲ್ಲಾಪುರ ಮತ್ತು ಪುಣೆ ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ.
ಈ ಉಪಕ್ರಮದಪ್ರಮುಖ ವೈಶಿಷ್ಟ್ಯಗಳು:
ಮಣ್ಣಿನ ಸಖಿಯರು ಕೃಷಿ ಭೂಮಿಯಿಂದ ಮಣ್ಣಿನ ಮಾದರಿಗಳನ್ನು ಸಂಗ್ರಹಿಸುತ್ತಾರೆ ಮತ್ತು ಪ್ರಯೋಗಾಲಯಗಳ ಮೂಲಕ ಮಣ್ಣಿನ ಪರೀಕ್ಷೆಗೆ ಅನುಕೂಲ ಮಾಡಿಕೊಡುತ್ತಾರೆ.
ರೈತರು ಸುಧಾರಿತ ಬೆಳೆ ಮತ್ತು ಪೋಷಕಾಂಶಗಳ ನಿರ್ವಹಣೆಗಾಗಿ ಅಗತ್ಯ ಕ್ರಮ ಕೈಗೊಳ್ಳಬಹುದಾದ ವರದಿಗಳನ್ನು ಪಡೆಯುತ್ತಾರೆ.
ಮಣ್ಣಿನ ಸಖಿಯರು ಪ್ರತಿ ತಿಂಗಳಿಗೆ ಸುಮಾರು ₹8,000 ರಿಂದ ₹10,000 ವರೆಗೆ (ಪೆಟ್ರೋಲ್ ಭತ್ಯೆ ಹೊರತುಪಡಿಸಿ) ಆದಾಯ ಗಳಿಸುತ್ತಾರೆ.
ಪ್ರಾಣಿಗಳ ಆಹಾರ ನಿಯಂತ್ರಣಕ್ಕೆ FSSAI ಗೆ ಅಧಿಕಾರವಿಲ್ಲ
ಆರೋಗ್ಯ
ಇತ್ತೀಚೆಗೆ ಸುದ್ದಿಯಲ್ಲಿದೆ:
ಹಾಲು ಕೊಡುವ ಪ್ರಾಣಿಗಳಿಗೆ ಗೋವು ಅಥವಾ ಹಂದಿಯ ಮೂಲದ ಮಾಂಸ ಅಥವಾ ಮೂಳೆಯ ಮಿಶ್ರಣವನ್ನು ಒಳಗೊಂಡಿರುವ ಪ್ರಾಣಿಗಳ ಆಹಾರದ ಮಾರಾಟವನ್ನು ನಿಷೇಧಿಸಿದ್ದ ‘ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ’ (FSSAI) ನಿಯಂತ್ರಣವನ್ನು ದೆಹಲಿಯ ಉಚ್ಚ ನ್ಯಾಯಾಲಯ ರದ್ದುಗೊಳಿಸಿದೆ.
ಈ ಪ್ರಕರಣದ ಬಗ್ಗೆ:
ಕೋಳಿ, ಹಂದಿ ಮತ್ತು ಮೀನುಗಳನ್ನು ಹೊರತುಪಡಿಸಿ, ಹಾಲು ಮತ್ತು ಮಾಂಸ ಉತ್ಪಾದಿಸುವ ಪ್ರಾಣಿಗಳಿಗೆ ನೀಡುವ ಆಹಾರದಲ್ಲಿ ಮಾಂಸ ಅಥವಾ ಮೂಳೆಯ ಬಳಕೆಯನ್ನು FSSAI ನಿಷೇಧಿಸಿತ್ತು.
ಆದರೆ, ಪ್ರಾಣಿಗಳ ಬಳಕೆಗೆ ಉದ್ದೇಶಿಸಿರುವ ಆಹಾರಕ್ಕಾಗಿ ಮಾನದಂಡಗಳನ್ನು ರೂಪಿಸಲು FSSAI ಗೆ ಯಾವುದೇ ಅಧಿಕಾರವಿಲ್ಲ; ಅದರ ಅಧಿಕಾರ ವ್ಯಾಪ್ತಿಯು ಕೇವಲ ಮಾನವರ ಆಹಾರಕ್ಕೆ ಮಾತ್ರ ಸೀಮಿತವಾಗಿದೆ ಎಂದು ದೆಹಲಿಯ ಉಚ್ಚ ನ್ಯಾಯಾಲಯವು ಸ್ಪಷ್ಟವಾಗಿ ತೀರ್ಪು ನೀಡಿದೆ.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಬಗ್ಗೆ:
FSSAI ಪೂರ್ಣ ರೂಪ:- ಫುಡ್ ಸೇಫ್ಟಿ ಅಂಡ್ ಸ್ಟ್ಯಾಂಡರ್ಡ್ಸ್ ಆಥೋರಿಟಿ ಆಫ್ ಇಂಡಿಯಾ (Food Safety and Standards Authority of India).
ಸ್ವಾಯತ್ತ ಶಾಸನಬದ್ಧ ಸಂಸ್ಥೆಯಾಗಿದೆ:- ಇದನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006 ರ (FSS Act, 2006) ಅಡಿಯಲ್ಲಿ ರಚಿಸಲಾಗಿದೆ.
ಸಚಿವಾಲಯ:- ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ.
ಸಂಯೋಜನೆ:- ಇದು ಭಾರತ ಸರ್ಕಾರದ ಕಾರ್ಯದರ್ಶಿ ಶ್ರೇಣಿಯ ಓರ್ವ ಅಧ್ಯಕ್ಷರನ್ನು ಮತ್ತು 22 ಸದಸ್ಯರನ್ನು ಒಳಗೊಂಡಿರುತ್ತದೆ. ಈ ಸದಸ್ಯರಲ್ಲಿ ಮೂರನೇ ಒಂದರಷ್ಟು ಕಡ್ಡಾಯವಾಗಿ ಮಹಿಳೆಯರಿರಬೇಕು.
ಪ್ರಧಾನ ಕಚೇರಿ:-ನವದೆಹಲಿ
ಪ್ರಾದೇಶಿಕ ಕಚೇರಿಗಳು:- ದೇಶಾದ್ಯಂತ 6 ರಿಂದ 8 ಪ್ರಾದೇಶಿಕ ಕಚೇರಿಗಳನ್ನು (ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ, ಗುವಾಹಟಿ, ಕೊಚ್ಚಿ) ಹೊಂದಿದೆ.
ಆಹಾರ ವ್ಯಾಪಾರ ನಿರ್ವಾಹಕರಿಗೆ (FBOs) ಕಡ್ಡಾಯ ಪರವಾನಗಿ ಮತ್ತು ನೋಂದಣಿ ನೀಡುವುದು.
ಆಹಾರದ ತಯಾರಿಕೆ, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಆಮದು ಪ್ರಕ್ರಿಯೆಗಳನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡುವುದು.
ಭಾರತದಾದ್ಯಂತ ಆಹಾರ ಪರೀಕ್ಷಾ ಪ್ರಯೋಗಾಲಯಗಳಿಗೆ ಮಾನ್ಯತೆ ನೀಡುವುದು.
P&K ರಸಗೊಬ್ಬರ ಸಬ್ಸಿಡಿ: ಶೇ. 12ರಷ್ಟು ಹೆಚ್ಚಳ
ಆರ್ಥಿಕತೆ
ಇತ್ತೀಚೆಗೆ ಸುದ್ದಿಯಲ್ಲಿದೆ:
ಮುಂಬರುವ 2026 ರ ಮುಂಗಾರು ಹಂಗಾಮಿಗೆ ಅನ್ವಯವಾಗುವಂತೆ, ರಂಜಕ ಮತ್ತು ಪೊಟ್ಯಾಸಿಯಮ್ (P&K – Phosphatic and Potassic) ರಸಗೊಬ್ಬರಗಳಿಗೆ ನೀಡಲಾಗುವ ‘ಪೋಷಕಾಂಶ-ಆಧಾರಿತ ಸಬ್ಸಿಡಿ’ (NBS) ದರಗಳನ್ನು ಶೇ. 12 ರಷ್ಟು ಹೆಚ್ಚಿಸಲು ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ.
ಪೋಷಕಾಂಶ-ಆಧಾರಿತ ಸಬ್ಸಿಡಿ (NBS) ಯೋಜನೆಯ ಬಗ್ಗೆ:
ಪ್ರಾರಂಭ:-ಕೇಂದ್ರ ‘ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ’ವು2010 ರಲ್ಲಿ ಜಾರಿಗೆ ತಂದಿತು.
ಉದ್ದೇಶಗಳು:-
ಎಲ್ಲಾ ಪೋಷಕಾಂಶಗಳನ್ನು ಒಳಗೊಂಡಂತೆ ಸಮತೋಲಿತ ರಸಗೊಬ್ಬರಗಳ ಬಳಕೆಯನ್ನು ಉತ್ತೇಜಿಸುವುದು.
ಸರ್ಕಾರದ ಸಬ್ಸಿಡಿ ಹೊರೆಯನ್ನು ವೈಜ್ಞಾನಿಕವಾಗಿ ಕ್ರಮಬದ್ಧಗೊಳಿಸುವುದು ಮತ್ತು ನಿಯಂತ್ರಿಸುವುದು.
ಕೃಷಿಯಲ್ಲಿ ಪರಿಣಾಮಕಾರಿ ಪೋಷಕಾಂಶ ನಿರ್ವಹಣೆಯನ್ನು ಉತ್ತೇಜಿಸುವುದು.
ರೈತರಿಗೆ ರಸಗೊಬ್ಬರದ ಬೆಲೆಭಾರ ಕಡಿಮೆ ಮಾಡಿ, ಕೃಷಿ ಉತ್ಪಾದನೆ ಹೆಚ್ಚಿಸುವುದು.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಪರಿಣಾಮವನ್ನು ತಗ್ಗಿಸುವುದು.
ಪ್ರಮುಖ ವೈಶಿಷ್ಟ್ಯಗಳು:- ಈ ಸಬ್ಸಿಡಿಯು ಪೋಷಕಾಂಶ-ಕೇಂದ್ರಿತವಾಗಿದೆ. ಅಂದರೆ, ರಸಗೊಬ್ಬರದಲ್ಲಿರುವ ಈ ಕೆಳಗಿನ ಪ್ರಮುಖ ಅಂಶಗಳ ಆಧಾರದ ಮೇಲೆ ಸಬ್ಸಿಡಿಯನ್ನು ಲೆಕ್ಕಹಾಕಲಾಗುತ್ತದೆ:
ಸಾರಜನಕ (Nitrogen – N)
ರಂಜಕ (Phosphorus – P)
ಪೊಟ್ಯಾಸಿಯಮ್ (Potassium – K)
ಗಂಧಕ (Sulphur – S)
ವ್ಯಾಪಕವಾಗಿ ಬಳಸಲಾಗುವ DAP (ಡೈ-ಅಮೋನಿಯಂ ಫಾಸ್ಫೇಟ್) ಮತ್ತು SSP (ಸಿಂಗಲ್ ಸೂಪರ್ ಫಾಸ್ಫೇಟ್) ಸೇರಿದಂತೆ ಒಟ್ಟು 28 ಅಧಿಸೂಚಿತ ಗ್ರೇಡ್ನ P&K ರಸಗೊಬ್ಬರಗಳನ್ನು ಈ ಯೋಜನೆಯು ಒಳಗೊಂಡಿದೆ.
ಗಮನಿಸಿ:- ಕೃಷಿಯಲ್ಲಿ ಅತಿ ಹೆಚ್ಚು ಬಳಸುವ ‘ಯೂರಿಯಾ’ ರಸಗೊಬ್ಬರವು NBS ವ್ಯಾಪ್ತಿಗೆ ಬರುವುದಿಲ್ಲ; ಅದು ಪ್ರತ್ಯೇಕ ಸಬ್ಸಿಡಿ ವ್ಯವಸ್ಥೆಯ ಅಡಿಯಲ್ಲಿ ಮುಂದುವರಿಯುತ್ತದೆ.
ಮುದ್ರಾ ಯೋಜನೆ : ಸಣ್ಣ-ಪ್ರಮಾಣದ ಉದ್ಯಮಗಳಿಗೆ
ಯೋಜನೆಗಳು
ಇತ್ತೀಚೆಗೆ ಸುದ್ದಿಯಲ್ಲಿದೆ:
ಸಣ್ಣ ಉದ್ಯಮಗಳಿಗೆ ಬೆಂಬಲ ನೀಡುವ ‘ಪ್ರಧಾನ ಮಂತ್ರಿ ಮುದ್ರಾ ಯೋಜನೆ’ಯು (PMMY) ಯಶಸ್ವಿಯಾಗಿ 11 ವರ್ಷಗಳನ್ನು ಪೂರೈಸಿದೆ.
ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY)ಯ ಬಗ್ಗೆ:
ಪ್ರಾರಂಭ:-2015
ಉದ್ದೇಶ:-ಸಣ್ಣ-ಪ್ರಮಾಣದ ಉದ್ಯಮಗಳಿಗೆ ಸಾಲ ಸೌಲಭ್ಯ ಒದಗಿಸಿ ಬೆಂಬಲಿಸುವುದು.
ಉದ್ದೇಶಿತ ಗುಂಪು:-ಹೊಸ ಉದ್ಯಮಿಗಳು, ಮಹಿಳಾ ಉದ್ಯಮಿಗಳು, ಸಣ್ಣ ಅಂಗಡಿಯವರು, ಬೀದಿ ಬದಿ ವ್ಯಾಪಾರಿಗಳು, ಹಣ್ಣು/ತರಕಾರಿ ಮಾರಾಟಗಾರರು, ಕರಕುಶಲಕರ್ಮಿಗಳು, ಮತ್ತು ಸಣ್ಣ ಉತ್ಪಾದನಾ ಘಟಕಗಳು.
ಸಾಲ ನೀಡುವ ಸಂಸ್ಥೆಗಳು:-ವಾಣಿಜ್ಯ ಬ್ಯಾಂಕ್ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳು (RRBs), ಸಣ್ಣ ಹಣಕಾಸು ಬ್ಯಾಂಕ್ಗಳು, ಸೂಕ್ಷ್ಮ ಹಣಕಾಸು ಸಂಸ್ಥೆಗಳು (MFIs) ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು (NBFCs).
ಈ ಯೋಜನೆಯು 4 ಪ್ರಮುಖ ವಿಭಾಗಗಳನ್ನು ರೂಪಿಸಿದೆ. ಅವುಗಳೆಂದರೆ,
ಶಿಶು:-₹50,000 ದ ವರೆಗಿನ ಸಾಲಗಳನ್ನು ಇದು ಒಳಗೊಂಡಿದೆ.
ಕಿಶೋರ್:-₹50,000 ದಿಂದ ₹5 ಲಕ್ಷದವರೆಗಿನ ಸಾಲಗಳನ್ನು ಒಳಗೊಂಡಿದೆ.
ತರುಣ್:-₹5 ಲಕ್ಷದಿಂದ ₹10 ಲಕ್ಷದವರೆಗಿನ ಸಾಲಗಳನ್ನು ಒಳಗೊಂಡಿದೆ.
ತರುಣ್ ಪ್ಲಸ್:-₹10 ಲಕ್ಷದಿಂದ ₹20 ಲಕ್ಷದವರೆಗಿನ ಸಾಲಗಳನ್ನು ಒಳಗೊಂಡಿದೆ (ಇದು ಇತ್ತೀಚಿನ ಹೊಸ ಸೇರ್ಪಡೆಯಾಗಿದೆ).
KSRTC ಗೆ ವಿಶ್ವ ಮಾನವ ಸಂಪನ್ಮೂಲ ಅಭಿವೃದ್ಧಿ (HRD) ಕಾಂಗ್ರೆಸ್ ಪ್ರಶಸ್ತಿ, 2026
ಇತ್ತೀಚೆಗೆ ಸುದ್ದಿಯಲ್ಲಿದೆ:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ (KSRTC) “ತರಬೇತಿ ಮತ್ತು ಸಾಂಸ್ಥಿಕ ಅಭಿವೃದ್ಧಿಯಲ್ಲಿ ಅತ್ಯುತ್ತಮ” ವಿಭಾಗದಲ್ಲಿ ಪ್ರತಿಷ್ಠಿತ ‘ವಿಶ್ವ ಮಾನವ ಸಂಪನ್ಮೂಲ ಅಭಿವೃದ್ಧಿ ಕಾಂಗ್ರೆಸ್ ಪ್ರಶಸ್ತಿ 2026’ (World HRD Congress Award 2026)ಅನ್ನು ನೀಡಿ ಗೌರವಿಸಲಾಗಿದೆ.
ಕಾರ್ಯಾಚರಣೆಯ ಸುರಕ್ಷತೆ ಮತ್ತು ದಕ್ಷತೆಯನ್ನು ಹೆಚ್ಚಿಸಿದ್ದಕ್ಕಾಗಿ ಮನ್ನಣೆ ಪಡೆದಿರುವ ಕೆಎಸ್ಆರ್ಟಿಸಿಯು (KSRTC), ಅನುಕರಣಾ ತಂತ್ರಜ್ಞಾನ (ಸಿಮ್ಯುಲೇಶನ್) ಮತ್ತು ಇಂಧನ-ದಕ್ಷತೆಯ ತರಬೇತಿ ಘಟಕಗಳನ್ನು ಬಳಸಿಕೊಂಡು ಆರು ತಿಂಗಳಲ್ಲಿ 12,000 ಕ್ಕೂ ಹೆಚ್ಚು ಉದ್ಯೋಗಿಗಳಿಗೆ ತರಬೇತಿ ನೀಡಿದೆ.
KSRTC ಯ ತರಬೇತಿ ಉಪಕ್ರಮಗಳ ಪ್ರಮುಖ ವಿವರಗಳು:
ಮನ್ನಣೆ:-ಉದ್ಯೋಗಿಗಳ ಕೌಶಲ್ಯಗಳನ್ನು ಉನ್ನತೀಕರಿಸುವ ಬದ್ಧತೆಯನ್ನು ಪ್ರದರ್ಶಿಸುವ ಮೂಲಕ, ತರಬೇತಿಯಲ್ಲಿನ ಉತ್ಕೃಷ್ಟತೆಗಾಗಿ KSRTC ಯು ಈ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಪ್ರಮುಖ ತರಬೇತಿ ಘಟಕಗಳು:- ಸಿಮ್ಯುಲೇಟರ್-ಆಧಾರಿತ ತರಬೇತಿ, ಅಪಘಾತ-ಮುಕ್ತ ಚಾಲನೆ, ರಸ್ತೆ ಸುರಕ್ಷತೆ ಮತ್ತು ಇಂಧನ ದಕ್ಷತೆಯ ಕಾರ್ಯಕ್ರಮಗಳ ಮೇಲೆ ಗಮನಹರಿಸುತ್ತವೆ.
ಸಿಬ್ಬಂದಿ ಅಭಿವೃದ್ಧಿ:- ಕಳೆದ ಆರು ತಿಂಗಳಲ್ಲಿ 12,000 ಕ್ಕೂ ಹೆಚ್ಚು ಸಿಬ್ಬಂದಿ ಸದಸ್ಯರು ತರಬೇತಿ ಪಡೆದಿದ್ದಾರೆ.
ಸಾಮಾಜಿಕ ಉಪಕ್ರಮಗಳು:-ಪಿಎಂ-ಅಜಯ್ (PM-AJAY) ಯೋಜನೆಯ ಮೂಲಕ, ಸಾರಿಗೆ ಇಲಾಖೆಯ ಪಾಲುದಾರಿಕೆಯಲ್ಲಿ ಕೆಎಸ್ಆರ್ಟಿಸಿಯು ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಉಚಿತ ಭಾರಿ-ವಾಹನ ಚಾಲನಾ ತರಬೇತಿ ಮತ್ತು ಪರವಾನಗಿಗಳನ್ನು ಒದಗಿಸುತ್ತಿದೆ.
2020 ರಲ್ಲಿ ತಮಿಳುನಾಡಿನಲ್ಲಿ ನಡೆದ ತಂದೆ ಪಿ. ಜಯರಾಜ್ ಮತ್ತು ಮಗ ಜೆ. ಬೆನಿಕ್ಸ್ ಅವರ ಬರ್ಬರ ಪೊಲೀಸ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಧುರೈ ವಿಚಾರಣಾ ನ್ಯಾಯಾಲಯವು ತಮಿಳುನಾಡಿನ 9 ಪೊಲೀಸರಿಗೆ ಮರಣದಂಡನೆ ವಿಧಿಸಿದೆ.
ಬಂಧನದಲ್ಲಿನ ಸಾವು (Custodial Death) ಕುರಿತು:
ಪೊಲೀಸ್ ವಶದಲ್ಲಿ ಅಥವಾ ನ್ಯಾಯಾಂಗ ಬಂಧನದಲ್ಲಿರುವಾಗ ವ್ಯಕ್ತಿಯೊಬ್ಬ ಮರಣ ಹೊಂದುವುದನ್ನು ‘ಬಂಧನದಲ್ಲಿನ ಸಾವು’ ಎಂದು ಕರೆಯಲಾಗುತ್ತದೆ.
ಇದು ನ್ಯಾಯಾಲಯದ ವಿಚಾರಣೆಗೂ ಮುನ್ನ, ಪೊಲೀಸ್ ವಿಚಾರಣೆ ನಡೆಯುತ್ತಿರುವಾಗ ಅಥವಾ ಆರೋಪಿಯ ಮೇಲಿನ ಅಪರಾಧ ಸಾಬೀತಾದ ನಂತರವೂ ಸಂಭವಿಸಬಹುದಾಗಿದೆ.
ಪೊಲೀಸರ ಚಿತ್ರಹಿಂಸೆ, ತೀವ್ರ ನಿರ್ಲಕ್ಷ್ಯ, ಸಕಾಲದಲ್ಲಿ ವೈದ್ಯಕೀಯ ನೆರವು ನೀಡದಿರುವುದು ಅಥವಾ ಇತರ ಯಾವುದೇ ಅನುಮಾನಾಸ್ಪದ ಸಂದರ್ಭಗಳಿಂದಾಗಿ ಇಂತಹ ಸಾವುಗಳು ಸಂಭವಿಸಬಹುದು.
ಇದು ಭಾರತದ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗಿದೆ:
ವಿಧಿ 20(1):- ಯಾವುದೇ ವ್ಯಕ್ತಿಗೆ ಕಾನೂನಿನಲ್ಲಿ ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ಅಥವಾ ಕಠಿಣವಾದ ಶಿಕ್ಷೆಯನ್ನು ನೀಡುವಂತಿಲ್ಲ ಎಂಬುದನ್ನು ಈ ವಿಧಿ ಸ್ಪಷ್ಟಪಡಿಸುತ್ತದೆ.
ವಿಧಿ 20(3):- ಇದು ಸ್ವಯಂ-ದೋಷಾರೋಪಣೆಯ ವಿರುದ್ಧದ ಹಕ್ಕನ್ನು ನೀಡುತ್ತದೆ. ಅಂದರೆ, ಆರೋಪಿಯಾಗಿರುವ ಯಾವುದೇ ವ್ಯಕ್ತಿಯನ್ನು ತನ್ನ ವಿರುದ್ಧವೇ ತಾನೇ ಸಾಕ್ಷಿ ನುಡಿಯುವಂತೆ ಒತ್ತಾಯಿಸುವಂತಿಲ್ಲ ಎಂದು ಇದು ಖಾತರಿಪಡಿಸುತ್ತದೆ.
ವಿಧಿ 21:- ಇದು ಪ್ರತಿಯೊಬ್ಬ ವ್ಯಕ್ತಿಯು ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಹೊಂದುವ ಹಕ್ಕನ್ನು ರಕ್ಷಿಸುತ್ತದೆ; ಈ ರಕ್ಷಣೆಯು ಪೊಲೀಸ್ ಅಥವಾ ನ್ಯಾಯಾಂಗ ಬಂಧನದಲ್ಲಿರುವ ವ್ಯಕ್ತಿಗೂ ಕಡ್ಡಾಯವಾಗಿ ಅನ್ವಯಿಸುತ್ತದೆ.
ಭಾರತದಲ್ಲಿ ಬಂಧನದಲ್ಲಿನ ಸಾವುಗಳಿಗೆ ಸಂಬಂಧಿಸಿದ ಸಮಸ್ಯೆಗಳು:
ಸಂಸತ್ತಿನಲ್ಲಿ ಮಂಡಿಸಲಾದ ಅಧಿಕೃತ ದತ್ತಾಂಶದ ಪ್ರಕಾರ, 2016-17 ರಿಂದ 2021-22 ರ ನಡುವಿನ ಅವಧಿಯಲ್ಲಿ ಭಾರತದಾದ್ಯಂತ ಒಟ್ಟು 11,656 ಬಂಧನದಲ್ಲಿನ ಸಾವುಗಳು ದಾಖಲಾಗಿವೆ.
ಈ ಪಟ್ಟಿಯಲ್ಲಿ 2,630 ಸಾವುಗಳೊಂದಿಗೆ ಉತ್ತರ ಪ್ರದೇಶವು ಮೊದಲ ಸ್ಥಾನದಲ್ಲಿದೆ. ದಕ್ಷಿಣ ಭಾರತದ ರಾಜ್ಯಗಳ ಪೈಕಿ ತಮಿಳುನಾಡು (490 ಸಾವುಗಳು) ಅತಿ ಹೆಚ್ಚು ಪ್ರಕರಣಗಳನ್ನು ವರದಿ ಮಾಡಿದೆ.
ರಕ್ಷಣೆಗಾಗಿ ಇರುವ ಅಂತರರಾಷ್ಟ್ರೀಯ ಕಾನೂನು ಚೌಕಟ್ಟುಗಳು:
ವಿಶ್ವಸಂಸ್ಥೆಯ ಘೋಷಣಾಪತ್ರ, 1945:- ಮಾನವ ಹಕ್ಕುಗಳ ಉತ್ತೇಜನ ಸೇರಿದಂತೆ, ವಿಶ್ವಸಂಸ್ಥೆಯ ಪ್ರಮುಖ ಉದ್ದೇಶಗಳು ಮತ್ತು ತತ್ವಗಳನ್ನು ಇದು ವಿವರಿಸುತ್ತದೆ.
ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ (1948):- ಇದು ಯಾವುದೇ ರೀತಿಯ ಚಿತ್ರಹಿಂಸೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ ಮತ್ತು ನ್ಯಾಯಾಲಯದಲ್ಲಿ ಅಪರಾಧ ಸಾಬೀತಾಗುವವರೆಗೆ ಪ್ರತಿಯೊಬ್ಬ ಆರೋಪಿಯನ್ನು ನಿರಪರಾಧಿ ಎಂದು ಪರಿಗಣಿಸುವ ಹಕ್ಕನ್ನು ರಕ್ಷಿಸುತ್ತದೆ.
ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಮೇಲಿನ ಅಂತರರಾಷ್ಟ್ರೀಯ ಒಪ್ಪಂದ (1966): ಇದು ಮನುಷ್ಯರ ಜೀವಿಸುವ ಹಕ್ಕನ್ನು ರಕ್ಷಿಸುತ್ತದೆ ಮತ್ತು ಚಿತ್ರಹಿಂಸೆಯನ್ನು ಸಂಪೂರ್ಣವಾಗಿ ನಿಷೇಧಿಸುತ್ತದೆ.
ನೆಲ್ಸನ್ ಮಂಡೇಲಾ ನಿಯಮಗಳು: ಇದನ್ನು ಅಧಿಕೃತವಾಗಿ 2015 ರ ‘ಖೈದಿಗಳ ಚಿಕಿತ್ಸೆಗಾಗಿನ ವಿಶ್ವಸಂಸ್ಥೆಯ ಪ್ರಮಾಣಿತ ಕನಿಷ್ಠ ನಿಯಮಗಳು’ ಎಂದು ಕರೆಯಲಾಗುತ್ತದೆ. ಬಂಧನದಲ್ಲಿರುವ ಅಥವಾ ಸ್ವಾತಂತ್ರ್ಯವನ್ನು ಕಳೆದುಕೊಂಡಿರುವ ಎಲ್ಲಾ ವ್ಯಕ್ತಿಗಳನ್ನು ಅತ್ಯಂತ ಮಾನವೀಯವಾಗಿ ನಡೆಸಿಕೊಳ್ಳಬೇಕಾದ ಕನಿಷ್ಠ ಮಾನದಂಡಗಳನ್ನು ಇದು ನಿಗದಿಪಡಿಸುತ್ತದೆ.
ಮಾನವ ಹಕ್ಕುಗಳ ಮೇಲಿನ ಯುರೋಪಿಯನ್ ಒಡಂಬಡಿಕೆ (1950): ಇದು ವ್ಯಕ್ತಿಯ ವೈಯಕ್ತಿಕ ಘನತೆಯನ್ನು ಎತ್ತಿಹಿಡಿಯುತ್ತದೆ ಮತ್ತು ಪ್ರತಿಯೊಬ್ಬರಿಗೂ ನ್ಯಾಯದಾನ ವ್ಯವಸ್ಥೆಯನ್ನು ತಲುಪುವ ಹಕ್ಕನ್ನು ಖಾತರಿಪಡಿಸುತ್ತದೆ.
ಪವನ ಶಕ್ತಿ ಸಾಮರ್ಥ್ಯ ಸೇರ್ಪಡೆಯಲ್ಲಿ ಭಾರತಕ್ಕೆ ಐತಿಹಾಸಿಕ ಸಾಧನೆ
ಪರಿಸರ
ಇದೀಗ ಸುದ್ದಿಯಲ್ಲಿದೆ:
2025-26 ರ ಅವಧಿಯಲ್ಲಿ ಭಾರತವು ವಾರ್ಷಿಕ ದಾಖಲೆಯ 6.05 GW (ಗಿಗಾವ್ಯಾಟ್) ಪವನ ಶಕ್ತಿ ಸಾಮರ್ಥ್ಯವನ್ನು ಸೇರ್ಪಡೆ ಮಾಡುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಇದರೊಂದಿಗೆ ದೇಶದ ಒಟ್ಟು ಪವನ ಶಕ್ತಿ ಸಾಮರ್ಥ್ಯವು 56 GW ಗಿಂತ ಹೆಚ್ಚಾಗಿದೆ.
ಭಾರತದ ಇಂಧನ ಪಾಲು
2025 ರ ವೇಳೆಗೆ, ದೇಶದ ಒಟ್ಟು ಸ್ಥಾಪಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯವು 500 GW ಗಡಿ ದಾಟಿದ್ದು, 509.6 GW ತಲುಪಿದೆ.
ಪಳೆಯುಳಿಕೆಯೇತರ ಇಂಧನ ಮೂಲದ ಒಟ್ಟು ಸ್ಥಾಪಿತ ಸಾಮರ್ಥ್ಯವು 2025 ರಲ್ಲಿ 262.74 GW ತಲುಪಿದ್ದು, ಇದು ದೇಶದ ಒಟ್ಟು ವಿದ್ಯುತ್ ಸಾಮರ್ಥ್ಯದ 51.5% ರಷ್ಟಾಗಿದೆ.
ಸೌರಶಕ್ತಿ ಸ್ಥಾಪಿತ ಸಾಮರ್ಥ್ಯವು 2025 ರಲ್ಲಿ 132.85 GW ತಲುಪಿದೆ.
ಪಳೆಯುಳಿಕೆ ಇಂಧನ ಆಧಾರಿತ ಮೂಲಗಳು: ಇದು 244.80 GW ನಷ್ಟಿದ್ದು, ಒಟ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯದ 49% ರಷ್ಟಿದೆ.
ಜಾಗತಿಕವಾಗಿ, ಸೌರ ವಿದ್ಯುತ್ ಸ್ಥಾಪಿತ ಸಾಮರ್ಥ್ಯದಲ್ಲಿ ಭಾರತವು 3ನೇ ಸ್ಥಾನದಲ್ಲಿದೆ, ಹಾಗೂ ಪವನ ಶಕ್ತಿ ಸಾಮರ್ಥ್ಯ ಮತ್ತು ಒಟ್ಟು ನವೀಕರಿಸಬಹುದಾದ ಇಂಧನ ಸಾಮರ್ಥ್ಯದಲ್ಲಿ 4ನೇ ಸ್ಥಾನದಲ್ಲಿದೆ.
ಭಾರತದ ಇಂಧನ ಗುರಿಗಳು
ಹೊರಸೂಸುವಿಕೆ ತೀವ್ರತೆ ಕಡಿತ : 2005 ರ ಮಟ್ಟಕ್ಕೆ ಹೋಲಿಸಿದರೆ, 2035 ರ ವೇಳೆಗೆ ತನ್ನ ಜಿಡಿಪಿಯ (GDP) ಹೊರಸೂಸುವಿಕೆ ತೀವ್ರತೆಯನ್ನು 47% ರಷ್ಟು ಕಡಿಮೆ ಮಾಡಲು ಭಾರತ ಬದ್ಧವಾಗಿದೆ.
ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯದ ವಿಸ್ತರಣೆ :2035 ರ ವೇಳೆಗೆ ತನ್ನ ಒಟ್ಟು ಸ್ಥಾಪಿತ ವಿದ್ಯುತ್ ಸಾಮರ್ಥ್ಯದ 60% ರಷ್ಟನ್ನು ಪಳೆಯುಳಿಕೆಯೇತರ ಇಂಧನ ಮೂಲಗಳಿಂದ ಸಾಧಿಸಲು ಭಾರತ ಗುರಿಹೊಂದಿದೆ.
ಇಂಗಾಲದ ಸಂಗ್ರಹಗಾರಗಳ (ಕಾರ್ಬನ್ ಸಿಂಕ್) ಸೃಷ್ಟಿ:2035 ರ ವೇಳೆಗೆ ಅರಣ್ಯ ಮತ್ತು ವೃಕ್ಷಗಳ ಹೊದಿಕೆಯ ಮೂಲಕ 3.5 ರಿಂದ 4 ಬಿಲಿಯನ್ ಟನ್ CO₂ ಸಮಾನವಾದ ‘ಕಾರ್ಬನ್ ಸಿಂಕ್’ ಅನ್ನು ಸೃಷ್ಟಿಸಲು ಭಾರತ ಬದ್ಧವಾಗಿದೆ.
ಸರ್ಕಾರದ ಉಪಕ್ರಮಗಳು
ರಾಷ್ಟ್ರೀಯ ಸೌರ ಮಿಷನ್ (NSM):2010 ರಲ್ಲಿ ಪ್ರಾರಂಭಿಸಲಾದ ಈ ಯೋಜನೆಯು ಗ್ರಿಡ್-ಸಂಪರ್ಕಿತ ಮತ್ತು ಆಫ್-ಗ್ರಿಡ್ ಸೌರಶಕ್ತಿ ಯೋಜನೆಗಳು ಸೇರಿದಂತೆ, ಸೌರ ವಿದ್ಯುತ್ ಸಾಮರ್ಥ್ಯವನ್ನು ಹೆಚ್ಚಿಸುವ ಮಹತ್ವಾಕಾಂಕ್ಷೆಯ ಗುರಿಗಳನ್ನು ಹೊಂದಿದೆ.
ರಾಷ್ಟ್ರೀಯ ಶುದ್ಧ ಇಂಧನ ನಿಧಿ (NCEF): ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುವ ಶುದ್ಧ ಇಂಧನ ತಂತ್ರಜ್ಞಾನಗಳು ಮತ್ತು ಯೋಜನೆಗಳ ಸಂಶೋಧನೆ ಹಾಗೂ ನಾವೀನ್ಯತೆಯನ್ನು ಬೆಂಬಲಿಸಲು ಇದನ್ನು ಸ್ಥಾಪಿಸಲಾಗಿದೆ.
ರಾಷ್ಟ್ರೀಯ ಪವನ ಶಕ್ತಿ ಮಿಷನ್: ಇದು ಭಾರತದಲ್ಲಿ ಪವನ ಶಕ್ತಿಯ ಅಭಿವೃದ್ಧಿ ಮತ್ತು ವಿಸ್ತರಣೆಯ ಮೇಲೆ ಕೇಂದ್ರೀಕರಿಸುತ್ತದೆ. 2030 ರ ವೇಳೆಗೆ ಪವನ ಶಕ್ತಿ ಸಾಮರ್ಥ್ಯವನ್ನು 140 GW ಗೆ ಹೆಚ್ಚಿಸುವ ಗುರಿಯನ್ನು ಇದು ಹೊಂದಿದೆ.
ಟಾರ್ ಬಾಲ್ ನಿರ್ವಹಣಾ ನಿಯಮಗಳು (Tar Balls Management Rules)
ಪರಿಸರ
ಇದೀಗ ಸುದ್ದಿಯಲ್ಲಿದೆ:
ಕಡಲೀಚೆಯ (On-shore) ಮತ್ತು ಕಡಲಾಚೆಯ (Off-shore) ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿರುವ ‘ಟಾರ್ ಬಾಲ್’ಗಳ ಸಮರ್ಪಕ ನಿರ್ವಹಣೆಗಾಗಿ ಕೇಂದ್ರ ಸರ್ಕಾರವು ಇದೇ ಮೊದಲ ಬಾರಿಗೆ ಮೀಸಲಾದ ನಿಯಮಾವಳಿಗಳನ್ನು ಪ್ರಸ್ತಾಪಿಸಿದೆ.
ಕಡಲ ಟಾರ್ ಬಾಲ್ಗಳು
ಸಮುದ್ರ ಪರಿಸರದಲ್ಲಿ ಉಂಟಾಗುವ ತೈಲ ಸೋರಿಕೆ ಅಥವಾ ನೈಸರ್ಗಿಕವಾಗಿ ತೈಲ ಹೊರಹೊಮ್ಮುವಿಕೆಯ ನಂತರ ರೂಪುಗೊಳ್ಳುವ ಅಂಟಂಟಾದ, ಕಡು-ಬಣ್ಣದ ತೈಲದ ಉಂಡೆಗಳನ್ನು ‘ಟಾರ್ ಬಾಲ್ಗಳು’ ಎಂದು ಕರೆಯಲಾಗುತ್ತದೆ.
ರೂಪುಗೊಳ್ಳುವಿಕೆ
ಹವಾಮಾನ ಪ್ರಕ್ರಿಯೆ: ಸಮುದ್ರಕ್ಕೆ ಸೇರಿದ ತೈಲದಲ್ಲಿನ ಹಗುರವಾದ ಅಂಶಗಳು ಆವಿಯಾದಾಗ, ಉಳಿದ ಭಾರವಾದ ಹೈಡ್ರೋಕಾರ್ಬನ್ಗಳು ಮರಳು ಮತ್ತು ಸಮುದ್ರದ ತ್ಯಾಜ್ಯದೊಂದಿಗೆ ಬೆರೆತು ಈ ಟಾರ್ ಬಾಲ್ಗಳು ರೂಪುಗೊಳ್ಳುತ್ತವೆ.
ಗಾತ್ರ ಮತ್ತು ವಿನ್ಯಾಸ: ಇವು ಸಣ್ಣ ಬಟಾಣಿ ಗಾತ್ರದಿಂದ ಹಿಡಿದು ಬ್ಯಾಸ್ಕೆಟ್ಬಾಲ್ ಗಾತ್ರದವರೆಗೂ ವಿಭಿನ್ನವಾಗಿ ರೂಪುಗೊಳ್ಳುತ್ತವೆ.
ಸಂಯೋಜನೆ: ಇವು ಭಾರ ಲೋಹಗಳು, ನಿರಂತರ ಸಾವಯವ ಮಾಲಿನ್ಯಕಾರಕಗಳು (POPs) ಮತ್ತು ಪಾಲಿಸೈಕ್ಲಿಕ್ ಅರೋಮ್ಯಾಟಿಕ್ ಹೈಡ್ರೋಕಾರ್ಬನ್ಗಳಂತಹ (PAHs) ಅತ್ಯಂತ ವಿಷಕಾರಿ ರಾಸಾಯನಿಕ ಅಂಶಗಳನ್ನು ಒಳಗೊಂಡಿರುತ್ತವೆ.
ಟಾರ್ ಬಾಲ್ ಮಾಲಿನ್ಯದ ದುಷ್ಪರಿಣಾಮಗಳು
ಸಮುದ್ರ ಜೀವಿಗಳ ಮೇಲೆ: ಕಡಲಾಮೆಗಳು ಮತ್ತು ಸಮುದ್ರ ಪಕ್ಷಿಗಳು ಇವುಗಳನ್ನು ಆಹಾರವೆಂದು ತಪ್ಪಾಗಿ ಭಾವಿಸಿ ನುಂಗುವುದರಿಂದ ಸಾವನ್ನಪ್ಪುವ ಅಪಾಯವಿರುತ್ತದೆ; ಅಲ್ಲದೆ, ಇವು ಮ್ಯಾಂಗ್ರೋವ್ ಕಾಡುಗಳು ಮತ್ತು ಹವಳದ ದಿಬ್ಬಗಳ ಸೂಕ್ಷ್ಮ ರಂಧ್ರಗಳನ್ನು ಮುಚ್ಚಿಹಾಕಿ ಅವುಗಳ ಉಸಿರುಗಟ್ಟಿಸುತ್ತವೆ.
ಮಾನವನ ಆರೋಗ್ಯ: ಇವುಗಳ ನೇರ ಸಂಪರ್ಕವು ಚರ್ಮದ ಕಿರಿಕಿರಿಯನ್ನು ಉಂಟುಮಾಡುತ್ತದೆ ಮತ್ತು ಕಲುಷಿತಗೊಂಡ ಸಮುದ್ರ ಆಹಾರದ ಮೂಲಕ ಇದರ ವಿಷಕಾರಿ ರಾಸಾಯನಿಕಗಳು ಮಾನವನ ಆಹಾರ ಸರಪಳಿಯನ್ನುಪ್ರವೇಶಿಸಬಹುದಾಗಿದೆ.
ಆರ್ಥಿಕತೆ: ಕಡಲತೀರಗಳು ಎಣ್ಣೆಯುಕ್ತವಾಗಿ ದುರ್ವಾಸನೆ ಬೀರುವುದರಿಂದ ಪ್ರವಾಸೋದ್ಯಮದ ಮೇಲೆ ಹಾಗೂ ಮೀನುಗಾರಿಕಾ ಬಲೆಗಳು ಹಾಳಾಗುವುದರಿಂದ ಮೀನುಗಾರಿಕೆ ವಲಯದ ಮೇಲೆ ಇದು ತೀವ್ರ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಟಾರ್-ಬಾಲ್ ನಿರ್ವಹಣಾ ನಿಯಮಗಳು, 2026
1986 ರ ಪರಿಸರ (ಸಂರಕ್ಷಣೆ) ಕಾಯ್ದೆಯ ಅಡಿಯಲ್ಲಿ ರೂಪಿಸಲಾದ ಈ ನಿಯಮಾವಳಿಗಳು, ಟಾರ್ ಬಾಲ್ಗಳ ಸಮರ್ಪಕ ನಿರ್ವಹಣೆಗಾಗಿ ಭಾರತದ ಮೊಟ್ಟಮೊದಲ ಮೀಸಲಾದ ನಿಯಂತ್ರಣ ಚೌಕಟ್ಟನ್ನು ಸ್ಥಾಪಿಸಿವೆ.
ಲಕ್ಷಣಗಳು
ವಿವರಣೆ
ಮಾಲಿನ್ಯಕಾರಕನೇ ಪಾವತಿಸಬೇಕು ತತ್ವ (Polluter Pays Principle)
ತೈಲ ಸೋರಿಕೆ ಅಥವಾ ಅಸಮರ್ಪಕ ನಿರ್ವಹಣೆಯಿಂದಾಗುವ ಪರಿಸರ ಹಾನಿಗೆ ಸೂಕ್ತ ಪರಿಹಾರವನ್ನು ಪಾವತಿಸಲು ಆಯಾ ಸೌಲಭ್ಯದ ಮಾಲೀಕರೇ ಸಂಪೂರ್ಣ ಹೊಣೆಗಾರರಾಗಿರುತ್ತಾರೆ.
ವಿಪತ್ತು ವರ್ಗೀಕರಣ
ಕರಾವಳಿ ರಾಜ್ಯಗಳು ಈ ಟಾರ್ ಬಾಲ್ ಮಾಲಿನ್ಯವನ್ನು “ರಾಜ್ಯ ವಿಪತ್ತು” ಎಂದು ಘೋಷಿಸುವುದು ಕಡ್ಡಾಯವಾಗಿದೆ.
ಸಾಂಸ್ಥಿಕ ಪಾತ್ರಗಳು
‘ಭಾರತೀಯ ಕರಾವಳಿ ಕಾವಲು ಪಡೆ’ಯು (ICG) ‘ರಾಷ್ಟ್ರೀಯ ತೈಲ ಸೋರಿಕೆ ವಿಪತ್ತು ತುರ್ತು ಯೋಜನೆಯನ್ನು’ (NOSDCP) ಅನುಷ್ಠಾನಗೊಳಿಸುತ್ತದೆ ಮತ್ತು ಆಯಾ ಜಿಲ್ಲಾಡಳಿತಗಳು ಸ್ಥಳೀಯ ಸ್ವಚ್ಛತಾ ಕಾರ್ಯಾಚರಣೆಗಳನ್ನು ನಿರ್ವಹಿಸಲಿವೆ.
ವೃತ್ತಾಕಾರದ ಆರ್ಥಿಕತೆ
ಹೆಚ್ಚಿನ ಕ್ಯಾಲೋರಿಫಿಕ್ ಮೌಲ್ಯವನ್ನು (1,500 kcal ಗಿಂತ ಹೆಚ್ಚು) ಹೊಂದಿರುವ ಟಾರ್ ಬಾಲ್ಗಳನ್ನು ಸಿಮೆಂಟ್ ಕೈಗಾರಿಕೆಗಳಲ್ಲಿ ಪರ್ಯಾಯ ಇಂಧನವಾಗಿ ಮರುಬಳಕೆ ಮಾಡಬಹುದಾಗಿದೆ.
ಸುಂದರಬನ್ಸ್: ಕ್ಷೀಣಿಸುತ್ತಿರುವ ನೈಸರ್ಗಿಕ ಚೇತರಿಕೆ
ಪರಿಸರ
ಇದೀಗ ಸುದ್ದಿಯಲ್ಲಿದೆ:
ಇತ್ತೀಚಿನ ಅಧ್ಯಯನವೊಂದರ ಪ್ರಕಾರ, ನಿರಂತರ ಪರಿಸರದ ಒತ್ತಡದಿಂದಾಗಿ ಸುಂದರಬನ್ಸ್ನ ಶೇ. 10 ರಿಂದ 15% ರಷ್ಟು ಪ್ರದೇಶವು “ನಿರ್ಣಾಯಕ ಕುಸಿತದ” ಪ್ರಕ್ರಿಯೆಗೆ ಒಳಗಾಗುತ್ತಿದೆ, ಅಂದರೆ ಇದು ತನ್ನ ನೈಸರ್ಗಿಕ ಚೇತರಿಕೆಯ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದೆ.
ಪಶ್ಚಿಮ ಬಂಗಾಳದಲ್ಲಿರುವ ಸುಂದರಬನ್ಸ್
ಭೌಗೋಳಿಕ ನೆಲೆ : ಇದು ಬಂಗಾಳಕೊಲ್ಲಿಯ ಕರಾವಳಿ ಪ್ರದೇಶದಲ್ಲಿ ಕಂಡುಬರುವ ವಿಶಾಲವಾದ ಮತ್ತು ನಿರಂತರವಾದ ‘ಮ್ಯಾಂಗ್ರೋವ್ ಅರಣ್ಯ’ ಪರಿಸರ ವ್ಯವಸ್ಥೆಯಾಗಿದೆ.
ಇದು ಭಾರತ ಮತ್ತು ಬಾಂಗ್ಲಾದೇಶದಾದ್ಯಂತ ಗಂಗಾ, ಬ್ರಹ್ಮಪುತ್ರ ಮತ್ತು ಮೇಘನಾ ನದಿಗಳ ಮುಖಜ ಭೂಮಿಯಲ್ಲಿ ಹರಡಿಕೊಂಡಿದೆ.
ಸಂರಕ್ಷಣಾ ಪ್ರಯತ್ನಗಳು
ಯುನೆಸ್ಕೋ ವಿಶ್ವ ಪರಂಪರೆಯ ತಾಣ:1987 ರಲ್ಲಿ ‘ಸುಂದರಬನ್ಸ್ ರಾಷ್ಟ್ರೀಯ ಉದ್ಯಾನವನವನ್ನು’ ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಿದೆ.
ಜೀವಗೋಳ ಮೀಸಲು:2001 ರಲ್ಲಿ ಯುನೆಸ್ಕೋ ಇದನ್ನು ‘ಜೀವಗೋಳ ಮೀಸಲು’ ಪ್ರದೇಶವೆಂದು ಅಧಿಕೃತವಾಗಿ ಘೋಷಿಸಿತು.
ಅಂತರರಾಷ್ಟ್ರೀಯ ಪ್ರಾಮುಖ್ಯತೆಯ ಜೌಗು ಪ್ರದೇಶ:ಜನವರಿ 2019 ರಲ್ಲಿ ‘ರಾಮ್ಸರ್ ಒಪ್ಪಂದದ’ ಅಡಿಯಲ್ಲಿ ಭಾರತದ ಸುಂದರಬನ್ಸ್ ಜೌಗು ಪ್ರದೇಶವನ್ನು ‘ಅಂತರರಾಷ್ಟ್ರೀಯ ಪ್ರಾಮುಖ್ಯತೆಯ ಜೌಗು ಪ್ರದೇಶ’ ಎಂದು ಗುರುತಿಸಲಾಗಿದೆ.
ಸಸ್ಯ ಮತ್ತು ಪ್ರಾಣಿಸಂಕುಲ: ಸುಂದರಬನ್ಸ್ ರಾಷ್ಟ್ರೀಯ ಉದ್ಯಾನವನವು 260 ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳು ಸೇರಿದಂತೆ ಅಪಾರ ಜೀವವೈವಿಧ್ಯಕ್ಕೆ ಹೆಸರುವಾಸಿಯಾಗಿದೆ. ಇದು ಪ್ರಸಿದ್ಧ ‘ರಾಯಲ್ ಬೆಂಗಾಲ್ ಟೈಗರ್’, ಗಂಗಾ ನದಿಯ ಡಾಲ್ಫಿನ್ಗಳು ಮತ್ತು ಅಳಿವೆ ಮೊಸಳೆಗಳಿಗೆ ನೆಲೆಯಾಗಿದೆ.
ಶಬರಿಮಲೆ ಪ್ರಕರಣ: ಸರ್ವೋಚ್ಚ ನ್ಯಾಯಾಲಯದ ವಿಚಾರಣೆ
ರಾಜ್ಯಶಾಸ್ತ್ರ ಮತ್ತು ಆಡಳಿತ
ಇದೀಗ ಸುದ್ದಿಯಲ್ಲಿದೆ:
ಶಬರಿಮಲೆ ದೇವಾಲಯ ಸೇರಿದಂತೆ ವಿವಿಧ ಧಾರ್ಮಿಕ ಸ್ಥಳಗಳಿಗೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಭಾರತದ ಸರ್ವೋಚ್ಚ ನ್ಯಾಯಾಲಯದ ಒಂಬತ್ತು ನ್ಯಾಯಾಧೀಶರ ಪೀಠವು ಪ್ರಾರಂಭಿಸಿದೆ.
ಹಿನ್ನೆಲೆ ಮಾಹಿತಿ
2018 ರಲ್ಲಿ, ಸರ್ವೋಚ್ಚ ನ್ಯಾಯಾಲಯದ ಸಾಂವಿಧಾನಿಕ ಪೀಠವು (4:1 ಬಹುಮತದೊಂದಿಗೆ) ಋತುಮತಿಯಾಗುವ ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ದೇವಾಲಯದ ಪ್ರವೇಶವನ್ನು ಅನುಮತಿಸಿತ್ತು ಮತ್ತು ಈ ಹಿಂದಿನ ನಿರ್ಬಂಧವನ್ನು ಅಸಂವಿಧಾನಿಕ ಎಂದು ಘೋಷಿಸಿತ್ತು.
ಈ ತೀರ್ಪಿನ ವಿರುದ್ಧ ನಡೆದ ವ್ಯಾಪಕ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, 2019 ರಲ್ಲಿ ಈ ವಿಷಯವನ್ನು ವಿಶಾಲ ಪೀಠಕ್ಕೆ ವರ್ಗಾಯಿಸಲಾಯಿತು.
ಪ್ರಾಮುಖ್ಯತೆ: ಈ ಸಮಸ್ಯೆಯು ಸಮಾನತೆ ಮತ್ತು ತಾರತಮ್ಯ ನಿಷೇಧವನ್ನು ಪ್ರತಿಪಾದಿಸುವ ಮೂಲಭೂತ ಹಕ್ಕುಗಳು (ವಿಧಿ 14, 15, 17) ಹಾಗೂ ಧಾರ್ಮಿಕ ಸ್ವಾತಂತ್ರ್ಯದ ಹಕ್ಕುಗಳ (ವಿಧಿ 25, 26) ನಡುವಿನ ಸಂಘರ್ಷವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ.
ಇದು ಭಾರತದಲ್ಲಿ ನ್ಯಾಯಾಂಗದ ಸಕ್ರಿಯತೆ ವಿರುದ್ಧ ನ್ಯಾಯಾಂಗದ ಸ್ವಯಂ-ನಿರ್ಬಂಧ, ಹಾಗೂ ಜಾತ್ಯತೀತತೆಯ (ತಾತ್ವಿಕ ಅಂತರದ ಮಾದರಿ) ಕುರಿತಾದ ಮೂಲಭೂತ ಪ್ರಶ್ನೆಗಳನ್ನು ಎತ್ತುತ್ತದೆ.
ಶಬರಿಮಲೆ ದೇವಾಲಯದ ಬಗ್ಗೆ
ಸ್ಥಳ ಮತ್ತು ಆರಾಧ್ಯ ದೈವ: ಶಬರಿಮಲೆ ದೇವಾಲಯವು ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ಪವಿತ್ರ ಪಂಬಾ ನದಿಯ (ಪಂಪಾ ಎಂದೂ ಕರೆಯುತ್ತಾರೆ) ದಡದಲ್ಲಿದೆ. ಇದು ಪಶ್ಚಿಮ ಘಟ್ಟಗಳ ‘ಪೆರಿಯಾರ್ ಹುಲಿ ಮೀಸಲು ಪ್ರದೇಶ’ದ ಒಳಗೆ ನೆಲೆಗೊಂಡಿದೆ.
ಇದು ‘ಧರ್ಮಶಾಸ್ತ್ರ’ ಎಂದೂ ಕರೆಯಲ್ಪಡುವ ಅಯ್ಯಪ್ಪ ಸ್ವಾಮಿಗೆ ಸಮರ್ಪಿತವಾದ ಪ್ರಸಿದ್ಧ ದೇವಾಲಯವಾಗಿದೆ.
ಈ ದೇವಾಲಯವು ಸಮುದ್ರ ಮಟ್ಟದಿಂದ ಸುಮಾರು 1,260 ಮೀಟರ್ ಎತ್ತರದ ಬೆಟ್ಟದ ತುದಿಯಲ್ಲಿದೆ.
ಧಾರ್ಮಿಕ ಪ್ರಾಮುಖ್ಯತೆ: ಇದು ವಿಶ್ವದ ಅತಿದೊಡ್ಡ ವಾರ್ಷಿಕ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದೆ. ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುವ ಮುನ್ನ ಕಠಿಣವಾದ 41 ದಿನಗಳ ‘ವ್ರತ’ವನ್ನು ಆಚರಿಸುತ್ತಾರೆ.
ಈ ದೇವಾಲಯವು ಅಯ್ಯಪ್ಪ ಸ್ವಾಮಿಯ ‘ನೈಷ್ಠಿಕ ಬ್ರಹ್ಮಚರ್ಯ’ವನ್ನು ಸಂಕೇತಿಸುತ್ತದೆ.
ಸಾಲ ಖಾತರಿ ಯೋಜನೆ (Credit Guarantee Scheme)
ಅರ್ಥವ್ಯವಸ್ಥೆ
ಇದೀಗ ಸುದ್ದಿಯಲ್ಲಿದೆ:
ಪಶ್ಚಿಮ ಏಷ್ಯಾದ ಬಿಕ್ಕಟ್ಟಿನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ವ್ಯಾಪಾರ-ವಹಿವಾಟುಗಳಿಗೆ, ಅದರಲ್ಲೂ ವಿಶೇಷವಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (MSMEs) ಆರ್ಥಿಕ ಬೆಂಬಲ ನೀಡಲು ಕೇಂದ್ರ ಸರ್ಕಾರವು ₹2.5 ಲಕ್ಷ ಕೋಟಿ ಮೊತ್ತದ ‘ಸಾಲ ಖಾತರಿ ಯೋಜನೆ’ಯನ್ನು ಜಾರಿಗೆ ತರಲು ಚಿಂತನೆ ನಡೆಸುತ್ತಿದೆ.
ಯೋಜನೆಯ ಬಗ್ಗೆ
ಈ ಪ್ರಸ್ತಾವಿತ ಯೋಜನೆಯು ಪ್ರಸ್ತುತ ಜಾರಿಯಲ್ಲಿರುವ ‘ತುರ್ತು ಸಾಲ ಖಾತರಿ ಯೋಜನೆಯ’ (ECLGS) ಚೌಕಟ್ಟಿನ ವಿಸ್ತರಣೆಯಾಗಿರಲಿದೆ.
ತುರ್ತು ಸಾಲ ಖಾತರಿ ಯೋಜನೆ (ECLGS)ಯ ಬಗ್ಗೆ
ಆತ್ಮನಿರ್ಭರ್ ಭಾರತ್ ಅಭಿಯಾನದ ಒಂದು ಭಾಗವಾಗಿ ಈ ಯೋಜನೆಯನ್ನು 2020 ರಲ್ಲಿ ಪ್ರಾರಂಭಿಸಲಾಯಿತು.
ಉದ್ದೇಶ: ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಉಂಟಾದ ಆರ್ಥಿಕ ಅಡಚಣೆಗಳಿಂದಾಗಿ ತೊಂದರೆಗೊಳಗಾದ ಅರ್ಹ MSME ಗಳು ಮತ್ತು ಇತರ ವ್ಯಾಪಾರ ಉದ್ಯಮಗಳಿಗೆ ಬೆಂಬಲ ನೀಡುವುದು ಇದರ ಗುರಿಯಾಗಿತ್ತು.
ಈ ಯೋಜನೆಯು (ECLGS) ಆರ್ಥಿಕತೆಯ ಬಹುತೇಕ ಎಲ್ಲಾ ವಲಯಗಳನ್ನು ಒಳಗೊಂಡಿದೆ.
ಯೋಜನೆಯ ರಚನೆಯು ಈ ಕೆಳಗಿನ ಸೌಲಭ್ಯಗಳಿಗೆ ಅನುಕೂಲ ಮಾಡಿಕೊಟ್ಟಿದೆ:
ಉದ್ಯಮಗಳು ಸುಲಭವಾಗಿ ಸಾಲವನ್ನು ಪಡೆಯಲು ಇದು ಅನುವು ಮಾಡಿಕೊಡುತ್ತದೆ.
ಇದರ ಅಡಿಯಲ್ಲಿ ಬಡ್ಡಿದರವನ್ನು ಕನಿಷ್ಠ ಮಟ್ಟಕ್ಕೆ ಸೀಮಿತಗೊಳಿಸಲಾಗಿದೆ.
ಯಾವುದೇ ಸಂಸ್ಕರಣಾ ಶುಲ್ಕಗಳಿಲ್ಲದೆ ಸಾಲಗಳನ್ನು ಮಂಜೂರು ಮಾಡಲಾಗುತ್ತದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC)
ಅಂತರರಾಷ್ಟ್ರೀಯ
ಇದೀಗ ಸುದ್ದಿಯಲ್ಲಿದೆ:
ಹಾರ್ಮುಜ್ ಜಲಸಂಧಿಯನ್ನು ಮರುಮುಕ್ತಗೊಳಿಸುವ ಉದ್ದೇಶದಿಂದ ಮಂಡಿಸಲಾಗಿದ್ದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯವನ್ನು ರಷ್ಯಾ ಮತ್ತು ಚೀನಾ ‘ವೀಟೋ’ (Veto) ಅಧಿಕಾರ ಚಲಾಯಿಸುವ ಮೂಲಕ ತಡೆಹಿಡಿದಿವೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC)ಯ ಬಗ್ಗೆ
ಇದು ವಿಶ್ವಸಂಸ್ಥೆಯ ಆರು ಪ್ರಮುಖ ಅಂಗಗಳಲ್ಲಿ ಒಂದಾಗಿದೆ.
ಉದ್ದೇಶ: ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವುದು ಇದರ ಪ್ರಮುಖ ಗುರಿಯಾಗಿದೆ.
ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ವಿಶ್ವಸಂಸ್ಥೆಯ ಎಲ್ಲಾ ಸದಸ್ಯ ರಾಷ್ಟ್ರಗಳು ಪಾಲಿಸಲು ಬದ್ಧವಾಗಿರುವಂತಹ ‘ಕಾನೂನುಬದ್ಧ ನಿರ್ಣಯಗಳನ್ನು’ ಹೊರಡಿಸುವ ಅಧಿಕಾರ ಹೊಂದಿರುವ ಏಕೈಕ ವಿಶ್ವಸಂಸ್ಥೆಯ ಅಂಗಸಂಸ್ಥೆ ಇದಾಗಿದೆ.
ರಚನೆ ಮತ್ತು ಸಂಯೋಜನೆ: ಮಂಡಳಿಯು ಒಟ್ಟು 15 ಸದಸ್ಯರನ್ನು ಹೊಂದಿದ್ದು, ಅವರನ್ನು ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ:
ವೀಟೋ ಅಧಿಕಾರ ಹೊಂದಿರುವ ಖಾಯಂ ಸದಸ್ಯ ರಾಷ್ಟ್ರಗಳು (P5): ಚೀನಾ, ಫ್ರಾನ್ಸ್, ರಷ್ಯಾ, ಯುನೈಟೆಡ್ ಕಿಂಗ್ಡಮ್ (ಬ್ರಿಟನ್) ಮತ್ತು ಯುನೈಟೆಡ್ ಸ್ಟೇಟ್ಸ್ (ಅಮೆರಿಕ).
ಭದ್ರತಾ ಮಂಡಳಿಯಲ್ಲಿ ಮಂಡಿಸಲಾಗುವ ಯಾವುದೇ ನಿರ್ಣಯವನ್ನು ಇತರ ಎಷ್ಟೇ ಸದಸ್ಯ ರಾಷ್ಟ್ರಗಳು ಬೆಂಬಲಿಸಿದರೂ ಸಹ, ಐದು ಖಾಯಂ ಸದಸ್ಯ ರಾಷ್ಟ್ರಗಳ (P5) ಪೈಕಿ ಯಾವುದೇ ಒಂದು ರಾಷ್ಟ್ರವು ತನ್ನ ‘ವೀಟೋ’ ಅಧಿಕಾರವನ್ನು ಚಲಾಯಿಸಿದರೆ, ಆ ನಿರ್ಣಯವು ಸಂಪೂರ್ಣವಾಗಿ ರದ್ದುಗೊಳ್ಳುತ್ತದೆ.
ಖಾಯಂ-ಅಲ್ಲದ ಸದಸ್ಯರು (10 ಸ್ಥಾನಗಳು) : ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಿಂದ ಎರಡು ವರ್ಷಗಳ ಅವಧಿಗೆ ಭೌಗೋಳಿಕ ಪ್ರಾತಿನಿಧ್ಯದ ಆಧಾರದ ಮೇಲೆ ಈ ದೇಶಗಳನ್ನು ಆಯ್ಕೆ ಮಾಡಲಾಗುತ್ತದೆ.
ಪ್ರಧಾನ ಕಚೇರಿ: ನ್ಯೂಯಾರ್ಕ್, ಅಮೆರಿಕಾ
ಮಿಷನ್ ಮಿತ್ರ (Mission MITRA)
ವಿಜ್ಞಾನ ಮತ್ತು ತಂತ್ರಜ್ಞಾನ
ಇದೀಗ ಸುದ್ದಿಯಲ್ಲಿದೆ:
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO), ಭಾರತೀಯ ವಾಯುಪಡೆಯ ‘ಬಾಹ್ಯಾಕಾಶ ವೈದ್ಯಕೀಯ ಸಂಸ್ಥೆ’ (IAF)ಯ ಸಹಯೋಗದಲ್ಲಿ ಲಡಾಖ್ನ ಲೇಹ್ನಲ್ಲಿ ‘ಮಿಷನ್ ಮಿತ್ರ’ ಯೋಜನೆಯನ್ನು ಪ್ರಾರಂಭಿಸಿದೆ.
‘ಮಿಷನ್ ಮಿತ್ರ’ ಯೋಜನೆಯ ಬಗ್ಗೆ (About Mission MITRA)
ಪೂರ್ಣ ರೂಪ: ಮ್ಯಾಪಿಂಗ್ ಆಫ್ ಇಂಟರ್-ಆಪರೇಬಲ್ ಟ್ರೈಟ್ಸ್ ಅಂಡ್ ರೆಸ್ಪಾನ್ಸ್ ಅಸೆಸ್ಮೆಂಟ್ (Mapping of Interoperable Traits and Response Assessment – ಪರಸ್ಪರ ಕಾರ್ಯಸಾಧ್ಯತೆಯ ಲಕ್ಷಣಗಳು ಮತ್ತು ಪ್ರತಿಕ್ರಿಯೆಗಳ ಮೌಲ್ಯಮಾಪನ).
ಭಾಗಿಯಾಗಿರುವ ಸಂಸ್ಥೆಗಳು: ಇಸ್ರೋ (ISRO) ಮತ್ತು ಭಾರತೀಯ ವಾಯುಪಡೆಯ ‘ಬಾಹ್ಯಾಕಾಶ ವೈದ್ಯಕೀಯ ಸಂಸ್ಥೆ’ (IAM) ಜಂಟಿಯಾಗಿ ಇದನ್ನು ವಿನ್ಯಾಸಗೊಳಿಸಿವೆ.
ಸ್ಥಳ: ಲೇಹ್, ಲಡಾಖ್ (ಸಮುದ್ರ ಮಟ್ಟದಿಂದ ಸುಮಾರು 3,500 ಮೀಟರ್ ಎತ್ತರದ ಪ್ರದೇಶದಲ್ಲಿ).
ಭಾಗವಹಿಸುವವರು: ಮುಂಬರುವ ಗಗನ್ಯಾನ್ ಕಾರ್ಯಾಚರಣೆಗಾಗಿ ನಿಯೋಜಿಸಲಾದ ನಾಲ್ವರು ಗಗನಯಾತ್ರಿಗಳಾದ ಪ್ರಶಾಂತ್ ನಾಯರ್, ಅಜಿತ್ ಕೃಷ್ಣನ್, ಅಂಗದ್ ಪ್ರತಾಪ್ ಮತ್ತು ಶುಭಾಂಶು ಶುಕ್ಲಾ ಅವರು ಈ ವಿಶೇಷ ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಉದ್ದೇಶಗಳು ಮತ್ತು ಪ್ರಾಮುಖ್ಯತೆ
ಇದೊಂದು “ಅನಲಾಗ್ ಕಾರ್ಯಾಚರಣೆ” (ಕೃತಕ ಅನುಕರಣಾ ಕಾರ್ಯಾಚರಣೆ) ಆಗಿದೆ. ಅಂದರೆ, ಬಾಹ್ಯಾಕಾಶದಲ್ಲಿ ಎದುರಾಗುವ ಕಠಿಣ ದೈಹಿಕ ಮತ್ತು ಮಾನಸಿಕ ಒತ್ತಡಗಳನ್ನು ಭೂಮಿಯ ಮೇಲೆಯೇ ಅನುಕರಿಸುವ ಕೃತಕ ಪರಿಸರ ವ್ಯವಸ್ಥೆಯನ್ನು ಇದು ಬಳಸಿಕೊಳ್ಳುತ್ತದೆ.
ಮಾನವ-ಕೇಂದ್ರಿತ ಅಧ್ಯಯನ: ಹೈಪೋಕ್ಸಿಯಾ (ಕಡಿಮೆ ಆಮ್ಲಜನಕದ ಪರಿಸ್ಥಿತಿ), ವಿಪರೀತ ಚಳಿ ಮತ್ತು ಪ್ರತ್ಯೇಕತೆಯು ಸಿಬ್ಬಂದಿಯ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹಾಗೂ ತಂಡದ ಸಮನ್ವಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಇದು ವೈಜ್ಞಾನಿಕವಾಗಿ ಅಧ್ಯಯನ ಮಾಡುತ್ತದೆ.
ಪರಸ್ಪರ ಕಾರ್ಯಸಾಧ್ಯತೆ: ಕಾರ್ಯಾಚರಣೆಯ ತೀವ್ರ ಒತ್ತಡ ಮತ್ತು ಸಂವಹನ ವಿಳಂಬಗಳಂತಹ ಕೃತಕ ಸನ್ನಿವೇಶಗಳಲ್ಲಿ ಬಾಹ್ಯಾಕಾಶ ಸಿಬ್ಬಂದಿ ಹಾಗೂ ‘ಗ್ರೌಂಡ್ ಕಂಟ್ರೋಲ್’ ತಂಡಗಳ ನಡುವಿನ ಸಮನ್ವಯತೆಯನ್ನು ಇದು ಮೌಲ್ಯಮಾಪನ ಮಾಡುತ್ತದೆ.
ಗಗನ್ಯಾನ್ ಸಿದ್ಧತೆ: ಈ ಕಾರ್ಯಾಚರಣೆಯಿಂದ ಲಭ್ಯವಾಗುವ ದತ್ತಾಂಶವು ಮುಂಬರುವ ಮಾನವ ಸಹಿತ ಗಗನ್ಯಾನ್ ಕಾರ್ಯಾಚರಣೆಗೆ ಮತ್ತು ಭವಿಷ್ಯದಲ್ಲಿ ‘ಭಾರತೀಯ ಅಂತರಿಕ್ಷ ನಿಲ್ದಾಣ’ದಲ್ಲಿನ (BAS) ದೀರ್ಘಾವಧಿಯ ವಾಸ್ತವ್ಯಕ್ಕೆ ಅಗತ್ಯವಿರುವ ತರಬೇತಿ ಕಾರ್ಯವಿಧಾನಗಳನ್ನು ರೂಪಿಸಲು ನೇರವಾಗಿ ನೆರವಾಗುತ್ತದೆ.
ಗಂಭೀರ ಕಾಯಿಲೆಗಳಿರುವ ರೋಗಿಗಳ ಜೀವನದ ಗುಣಮಟ್ಟವನ್ನು ಸುಧಾರಿಸುವತ್ತ ಗಮನಹರಿಸಲು, ಉಪಶಮನಕಾರಿ ಆರೈಕೆ (Palliative care) ಸೇವೆಗಳನ್ನು ಯೋಜಿಸಲು ಮತ್ತು ಮೇಲ್ವಿಚಾರಣೆ ಮಾಡಲು ಕರ್ನಾಟಕ ಸರ್ಕಾರವು ‘ರಾಜ್ಯ-ಮಟ್ಟದ ತಾಂತ್ರಿಕ ಸಲಹಾ ಸಮಿತಿ’ಯನ್ನು (TAC) ಸ್ಥಾಪಿಸಿದೆ.
ಈ ಉಪಕ್ರಮದ ಪ್ರಮುಖ ವಿವರಗಳು:
ಉದ್ದೇಶಗಳು:- ಈ ತಾಂತ್ರಿಕ ಸಲಹಾ ಸಮಿತಿಯು (TAC) ನೀತಿ, ಚಿಕಿತ್ಸಾ ಶಿಷ್ಟಾಚಾರಗಳು ಮತ್ತು ಮೂಲಸೌಕರ್ಯಗಳ ಕುರಿತು ಸಲಹೆ ನೀಡುತ್ತದೆ ಹಾಗೂ ಅಗತ್ಯ ಮಾದಕ ದ್ರವ್ಯಗಳ (ಪ್ರಬಲ ನೋವು ನಿವಾರಕಗಳ) ಲಭ್ಯತೆಯನ್ನು ಖಚಿತಪಡಿಸುತ್ತದೆ.
ರಚನೆ:- ಈ ಸಮಿತಿಯು ಆರೋಗ್ಯ ಇಲಾಖೆಗಳ ಸದಸ್ಯರು, ಬೆಂಗಳೂರಿನ ಪ್ರಮುಖ ವೈದ್ಯಕೀಯ ಸಂಸ್ಥೆಗಳ ತಜ್ಞರು ಮತ್ತು ಸರ್ಕಾರೇತರ ಸಂಸ್ಥೆಗಳನ್ನು (NGOs) ಒಳಗೊಂಡಿದೆ.
ಗುರಿ:- ಪ್ರವೇಶ ಮತ್ತು ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಅಸ್ತಿತ್ವದಲ್ಲಿರುವ ಆರೋಗ್ಯ ವ್ಯವಸ್ಥೆಯಲ್ಲಿ ಉಪಶಮನಕಾರಿ ಆರೈಕೆಯನ್ನು ಸಂಯೋಜಿಸುವ (ರಾಷ್ಟ್ರೀಯ ಉಪಶಮನಕಾರಿ ಆರೈಕೆ ಕಾರ್ಯಕ್ರಮಕ್ಕೆ ಅನುಗುಣವಾಗಿ) ಬಗ್ಗೆ ಈ ಉಪಕ್ರಮವು ಗಮನಹರಿಸುತ್ತದೆ.
ಅತ್ಯುತ್ತಮ ಪದ್ಧತಿಗಳ:- ಮನೆ-ಆಧಾರಿತ ಮತ್ತು ಸಮುದಾಯ-ಆಧಾರಿತ ಆರೈಕೆಯನ್ನು ಒಳಗೊಂಡಿರುವ ಮಾದರಿಗಳನ್ನು ಜಾರಿಗೆ ತರಲು ಈ ಉಪಕ್ರಮವು ಎದುರು ನೋಡುತ್ತಿದೆ.
ತಮಿಳುನಾಡಿನ ಕಲ್ಪಾಕ್ಕಂನಲ್ಲಿ ಸ್ವದೇಶಿಯವಾಗಿ ನಿರ್ಮಿಸಲಾದ “ಮಾದರಿ ತ್ವರಿತ ಉತ್ಪಾದನಾ ರಿಯಾಕ್ಟರ್” (PFBR) ಈಗ ನಿರ್ಣಾಯಕ (ಕ್ರಿಟಿಕಾಲಿಟಿ) ಹಂತವನ್ನು ತಲುಪುವ ಮೂಲಕ ಭಾರತವು ಪರಮಾಣು ಇಂಧನ ಕ್ಷೇತ್ರದಲ್ಲಿ ಒಂದು ಪ್ರಮುಖ ಮೈಲಿಗಲ್ಲನ್ನು ಸಾಧಿಸಿದೆ.
ಮಾದರಿ ತ್ವರಿತ ಉತ್ಪಾದನಾ ರಿಯಾಕ್ಟರ್ (PFBR) ನ ಬಗ್ಗೆ:
ಸುಧಾರಿತ ರಿಯಾಕ್ಟರ್ ಆಗಿದೆ:- ಇದು ತಾನು ಬಳಸುವ ಇಂಧನಕ್ಕಿಂತ ಹೆಚ್ಚಿನ ಪ್ರಮಾಣದ ವಿದಳನಕಾರಿ ಇಂಧನವನ್ನು ಉತ್ಪಾದಿಸುತ್ತದೆ.
ಸ್ಥಳ:- ಇದು ತಮಿಳುನಾಡಿನ ಕಲ್ಪಾಕ್ಕಂನಲ್ಲಿದೆ.
ನಿರ್ವಹಣೆ:-‘ಭಾರತೀಯ ನಾಭಿಕೀಯ ವಿದ್ಯುತ್ ನಿಗಮ ನಿಯಮಿತ’ (BHAVINI).
ಇದು ಯುರೇನಿಯಂ-ಪ್ಲುಟೋನಿಯಂ ಮಿಶ್ರಿತ ಆಕ್ಸೈಡ್ (MOX – Mixed Oxide) ಇಂಧನವನ್ನು ಬಳಸುತ್ತದೆ.
ಇದನ್ನು ತ್ವರಿತ ಉತ್ಪಾದನಾ (ಫಾಸ್ಟ್ ಬ್ರೀಡರ್) ಎಂದು ಕರೆಯಲಾಗುತ್ತದೆ ಏಕೆಂದರೆ:
ಸಾಮಾನ್ಯ ರಿಯಾಕ್ಟರ್ಗಳಲ್ಲಿ ಬಳಸುವ ನಿಧಾನಗತಿಯ ಉಷ್ಣ ನ್ಯೂಟ್ರಾನ್ಗಳ ಬದಲಾಗಿ, ವಿದಳನ ಕ್ರಿಯೆಯನ್ನು ಕಾಯ್ದುಕೊಳ್ಳಲು ಇದು ಹೆಚ್ಚಿನ ಶಕ್ತಿಯ, ಅತಿವೇಗದ ನ್ಯೂಟ್ರಾನ್ಗಳನ್ನು ಬಳಸುತ್ತದೆ.
ಇದು ಸ್ವಾಭಾವಿಕವಾಗಿ ವಿದಳನಗೊಳ್ಳದ ಪರಿವರ್ತನೀಯ (Fertile) ವಸ್ತುವನ್ನು (ಉದಾಹರಣೆಗೆ: ಯುರೇನಿಯಂ-238) ವಿದಳನಕಾರಿ ಇಂಧನವನ್ನಾಗಿ (ಪ್ಲುಟೋನಿಯಂ-239) ಪರಿವರ್ತಿಸುತ್ತದೆ.
ನಿರ್ಣಾಯಕ (Criticality) ಹಂತ ಎಂದರೇನು?:
ರಿಯಾಕ್ಟರ್ ಒಂದು ಸ್ವಯಂ-ಕಾಯ್ದುಕೊಳ್ಳುವ ಪರಮಾಣು ವಿದಳನ ಪ್ರಕ್ರಿಯೆಯನ್ನು ಸಾಧಿಸುವ ಹಂತವನ್ನು ‘ನಿರ್ಣಾಯಕ’ ಹಂತ ಎಂದು ಕರೆಯಲಾಗುತ್ತದೆ.
ಇಲ್ಲಿ ಉತ್ಪತ್ತಿಯಾಗುವ ನ್ಯೂಟ್ರಾನ್ಗಳ ಸಂಖ್ಯೆಯು ಯಾವುದೇ ಬಾಹ್ಯ ಹಸ್ತಕ್ಷೇಪವಿಲ್ಲದೆ ನಿರಂತರವಾಗಿ ಪ್ರತಿಕ್ರಿಯೆಯನ್ನು ಮುಂದುವರಿಸಲು ಸಾಕಷ್ಟು ಸಮರ್ಥವಾಗಿರುತ್ತದೆ.
ಈ ಸಾಧನೆಯ ಪ್ರಾಮುಖ್ಯತೆ:
ಭಾರತದ ಮೂರು-ಹಂತದ ಪರಮಾಣು ಕಾರ್ಯಕ್ರಮದ ಪ್ರಗತಿ:-PFBR ಯೋಜನೆಯು ಭಾರತದ ‘ಮೂರು-ಹಂತದ ಪರಮಾಣು ಕಾರ್ಯಕ್ರಮದ’ ಎರಡನೇ ಹಂತದ ಪ್ರಗತಿಯನ್ನು ಸೂಚಿಸುತ್ತದೆ.
ಇದು ಫಲವತ್ತಾದ ವಸ್ತುವನ್ನು ವಿದಳನಕಾರಿ ಇಂಧನವಾಗಿ ಪರಿವರ್ತಿಸಲು ಅನುವು ಮಾಡಿಕೊಡುತ್ತದೆ.
ಇದು ಥೋರಿಯಂ ಬಳಕೆಯ ಮೇಲೆ ಕೇಂದ್ರೀಕೃತವಾಗಿರುವ ಮೂರನೇ ಹಂತದ ಕಾರ್ಯಕ್ರಮಕ್ಕೆ ಭದ್ರ ಬುನಾದಿ ಹಾಕುತ್ತದೆ.
ಥೋರಿಯಂ ಸಾಮರ್ಥ್ಯದ ಬಳಕೆ:- ಭಾರತವು ಅಪಾರ ಪ್ರಮಾಣದ ಥೋರಿಯಂ ನಿಕ್ಷೇಪಗಳನ್ನು ಹೊಂದಿದೆ. PFBR ವ್ಯವಸ್ಥೆಯು ಥೋರಿಯಂ ಆಧಾರಿತ ರಿಯಾಕ್ಟರ್ಗಳಿಗೆ ಅಗತ್ಯವಿರುವ ವಿದಳನಕಾರಿ ವಸ್ತುವನ್ನು (U-233) ಉತ್ಪಾದಿಸಲು ಸಹಾಯ ಮಾಡುತ್ತದೆ.
ಥೋರಿಯಂ-232 ನೈಸರ್ಗಿಕವಾಗಿ ವಿದಳನಕಾರಿಯಲ್ಲ, ಆದರೆ ಅದನ್ನು ವಿದಳನಕಾರಿ ವಸ್ತುವಾಗಿ ಪರಿವರ್ತಿಸಲು ಸಾಧ್ಯವಿದೆ.
ತಾಂತ್ರಿಕ ಮತ್ತು ಕಾರ್ಯತಂತ್ರದ ಪ್ರಾಮುಖ್ಯತೆ:- ವಾಣಿಜ್ಯ ತ್ವರಿತ ಉತ್ಪಾದನಾ ರಿಯಾಕ್ಟರ್ ಅನ್ನು ಅಭಿವೃದ್ಧಿಪಡಿಸಿದ ರಷ್ಯಾದ ನಂತರಎರಡನೇ ದೇಶವಾಗಿ ಭಾರತ ಹೊರಹೊಮ್ಮಿದೆ.
ಇದು ಪರಮಾಣು ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಭಾರತದ ಸುಧಾರಿತ ದೇಶೀಯ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ.
ನಮೋ ಡ್ರೋನ್ ದೀದಿ ಯೋಜನೆ
ಯೋಜನೆಗಳು
ಇತ್ತೀಚೆಗೆ ಸುದ್ದಿಯಲ್ಲಿದೆ:
ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಮಾಹಿತಿಯ ಪ್ರಕಾರ, ದೇಶಾದ್ಯಂತ ಒಟ್ಟು 1,094 ಸ್ವಸಹಾಯ ಸಂಘಗಳ (SHG) ಮಹಿಳಾ ಸದಸ್ಯರಿಗೆ ಡ್ರೋನ್ ಪೈಲಟ್ಗಳಾಗಿ ತರಬೇತಿ ನೀಡಲಾಗಿದೆ.
ನಮೋ ಡ್ರೋನ್ ದೀದಿ ಯೋಜನೆಯ ಬಗ್ಗೆ:
ಪ್ರಾರಂಭ:-2023
ಗುರಿ:-ಗ್ರಾಮೀಣ ಮಹಿಳೆಯರನ್ನು “ಕೃಷಿ-ತಂತ್ರಜ್ಞಾನ” ಉದ್ಯಮಿಗಳನ್ನಾಗಿ ಮಾಡುವ ಮೂಲಕ ಅವರನ್ನು ಸಬಲೀಕರಣಗೊಳಿಸುವುದು.
ಉದ್ದೇಶ:-2024 ಮತ್ತು 2026 ರ ನಡುವೆ ದೇಶಾದ್ಯಂತ ಆಯ್ಕೆಯಾದ ಮಹಿಳಾ ಸ್ವಸಹಾಯ ಸಂಘಗಳಿಗೆ (SHGs) 15,000 ಡ್ರೋನ್ಗಳನ್ನು ಒದಗಿಸುವುದು.
ಹಣಕಾಸು ನೆರವು: ಇದೊಂದು ಕೇಂದ್ರ ವಲಯದ ಯೋಜನೆಯಾಗಿದ್ದು, ಇದರ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸುತ್ತದೆ.
ಅನುಷ್ಠಾನ ಸಚಿವಾಲಯ:-ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ.
ಈ ಯೋಜನೆಯ ಪ್ರಮುಖ ವೈಶಿಷ್ಟ್ಯಗಳು
ಮಹಿಳಾ ಸಬಲೀಕರಣ:-ಸ್ವಸಹಾಯ ಸಂಘಗಳ ಮಹಿಳೆಯರನ್ನು ನುರಿತ ಡ್ರೋನ್ ಪೈಲಟ್ಗಳು ಮತ್ತು ಸೇವಾ ಪೂರೈಕೆದಾರರನ್ನಾಗಿ ಪರಿವರ್ತಿಸಲಾಗುವುದು.
ಕೃಷಿ ಆಧುನೀಕರಣ:- ನಿಖರ ಕೃಷಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ನ್ಯಾನೋ ಯೂರಿಯಾದಂತಹ ದ್ರವರೂಪದ ರಸಗೊಬ್ಬರಗಳು ಮತ್ತು ಕೀಟನಾಶಕಗಳನ್ನು ನಿಖರವಾಗಿ ಸಿಂಪಡಿಸಲು ಡ್ರೋನ್ಗಳನ್ನು ಬಳಸಲಾಗುತ್ತದೆ. ಇದು ಕೃಷಿ ತ್ಯಾಜ್ಯವನ್ನು ಹಾಗೂ ರೈತರಿಗಾಗುವ ಆರೋಗ್ಯದ ಅಪಾಯಗಳನ್ನು ಕಡಿಮೆ ಮಾಡುತ್ತದೆ.
ಜೀವನೋಪಾಯ ಸೃಷ್ಟಿ:-ಡ್ರೋನ್ ಬಾಡಿಗೆ ಸೇವೆಗಳ ಮೂಲಕ ಪ್ರತಿಯೊಂದು ಸ್ವಸಹಾಯ ಸಂಘಕ್ಕೂ ಕನಿಷ್ಠ ₹1 ಲಕ್ಷಗಳವರೆಗೆ ಹೆಚ್ಚುವರಿ ವಾರ್ಷಿಕ ಆದಾಯವನ್ನು ಸೃಷ್ಟಿಸುವುದು.
ಬಾಬು ಜಗಜೀವನ್ ರಾಮ್
ಇತಿಹಾಸ ಮತ್ತು ಸಂಸ್ಕೃತಿ
ಇತ್ತೀಚೆಗೆ ಸುದ್ದಿಯಲ್ಲಿ:
ಪ್ರಧಾನಿ ನರೇಂದ್ರ ಮೋದಿಯವರು ಬಾಬು ಜಗಜೀವನ್ ರಾಮ್ ಅವರ ಜನ್ಮ ದಿನಾಚರಣೆಯಂದು ಅವರಿಗೆ ಗೌರವ ನಮನ ಸಲ್ಲಿಸಿದರು.
ಬಾಬು ಜಗಜೀವನ್ ರಾಮ್ ಅವರ ಬಗ್ಗೆ:
ಇವರು ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಮಾಜ ಸುಧಾರಕರಾಗಿದ್ದು, 5 ಏಪ್ರಿಲ್ 1908 ರಂದು ಪ್ರಸ್ತುತ ಬಿಹಾರ ರಾಜ್ಯದ ಚಂದ್ವಾ ಗ್ರಾಮದಲ್ಲಿ ಜನಿಸಿದರು.
ಇವರು ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದರು ಮತ್ತು ನಂತರ ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಪದವಿ ಪಡೆದರು.
ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು:- ಇವರು ಮಹಾತ್ಮ ಗಾಂಧಿಯವರಿಂದ ಸ್ಫೂರ್ತಿ ಪಡೆದಿದ್ದರು. ಇವರು,
“ಕಾನೂನುಭಂಗ ಚಳವಳಿ ಮತ್ತು ಭಾರತ ಬಿಟ್ಟು ತೊಲಗಿ” ಚಳವಳಿಯಲ್ಲಿ ಭಾಗವಹಿಸಿದ್ದರು.
ಸಾಮಾಜಿಕ ನ್ಯಾಯದ ಕೊಡುಗೆಗಳು:- ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಅವಕಾಶ ವಂಚಿತಸಮುದಾಯಗಳನ್ನು ಸಂಘಟಿಸಲು ಇವರು,
‘ಅಖಿಲ ಭಾರತೀಯ ರವಿದಾಸ ಮಹಾಸಭಾ’ ಮತ್ತು
‘ಅಖಿಲ ಭಾರತ ಅವಕಾಶ ವಂಚಿತ ವರ್ಗಗಳ ಲೀಗ್’ (All India Depressed Classes League) ಅನ್ನು ಸ್ಥಾಪಿಸಿದರು.
ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ,1955 ರಜಾರಿಯಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.
ರಾಜಕೀಯ ಜೀವನ:- ಇವರು ಭಾರತದ ಸಂವಿಧಾನ ರಚನಾ ಸಭೆಯ ಸದಸ್ಯರಾಗಿದ್ದರು.
ಇವರು ಕೇಂದ್ರ ಆಹಾರ ಮತ್ತು ಕೃಷಿ ಸಚಿವರಾಗಿ ಹಸಿರು ಕ್ರಾಂತಿಯಯಶಸ್ಸಿಗೆ ಕಾರಣಿಕರ್ತರಾದರೂ.
ರಕ್ಷಣಾ ಸಚಿವರಾಗಿ ಬಾಂಗ್ಲಾದೇಶದ ಉದಯಕ್ಕೆ ಕಾರಣವಾದ 1971 ರ ಐತಿಹಾಸಿಕ ಯುದ್ಧದಲ್ಲಿ ಭಾರತವನ್ನು ಇವರು ಯಶಸ್ವಿಯಾಗಿ ಮುನ್ನಡೆಸಿದರು.
1979 ರಲ್ಲಿ ಉಪಪ್ರಧಾನಿಯಾಗಿ ಸೇವೆ:-ಮೊರಾರ್ಜಿ ದೇಸಾಯಿ ಅವರ ಸರ್ಕಾರದ ಅವಧಿಯಲ್ಲಿ ಭಾರತದ ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ.
ಉಡಾನ್ ಯೋಜನೆಯಡಿ ಕರ್ನಾಟಕದ ಏಳು ಪ್ರಾದೇಶಿಕ ವಿಮಾನ ನಿಲ್ದಾಣಗಳನ್ನು ಕಾರ್ಯಾಚರಣೆಗೊಳಿಸಲು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ₹146.89 ಕೋಟಿ ಹಣವನ್ನು ಬಳಸಿಕೊಂಡಿದೆ.
ಬೀದರ್, ಮೈಸೂರು, ವಿದ್ಯಾನಗರ, ಹುಬ್ಬಳ್ಳಿ, ಕಲಬುರಗಿ, ಬೆಳಗಾವಿ ಮತ್ತು ಶಿವಮೊಗ್ಗವನ್ನು ಒಳಗೊಂಡಿರುವ ಈ ವಿಮಾನ ನಿಲ್ದಾಣಗಳು 118 ಮಾರ್ಗಗಳನ್ನು ಹೊಂದಿವೆ.
ಉಡಾನ್ (UDAN) ಯೋಜನೆಯ ಬಗ್ಗೆ:
UDAN ಸಂಕ್ಷಿಪ್ತ ರೂಪ:- ಉಡೇ ದೇಶ ಕಾ ಆಮ್ ನಾಗರಿಕ್ (Ude Desh ka Aam Nagrik).
ಇದು 2016 ರಲ್ಲಿ ಪ್ರಾರಂಭಿಸಲಾದ ಪ್ರಾದೇಶಿಕ ಸಂಪರ್ಕ ಯೋಜನೆಯಾಗಿದೆ.
ಮೊದಲ ಉಡಾನ್ ವಿಮಾನವು 2017 ರಲ್ಲಿ ಶಿಮ್ಲಾ ಮತ್ತು ದೆಹಲಿ ನಡುವೆ ಕಾರ್ಯಾಚರಣೆ ನಡೆಸಿತು.
ಸಚಿವಾಲಯ:-ನಾಗರಿಕ ವಿಮಾನಯಾನ ಸಚಿವಾಲಯ.
ಉದ್ದೇಶ:-2ನೇ (Tier-2) ಮತ್ತು 3ನೇ ದರ್ಜೆಯ (Tier-3) ನಗರಗಳನ್ನು ಪ್ರಮುಖ ಕೇಂದ್ರಗಳಿಗೆ ಸಂಪರ್ಕಿಸುವ ಮೂಲಕ ಸಾಮಾನ್ಯ ನಾಗರಿಕರಿಗೆ ವಿಮಾನಯಾನವನ್ನು ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡುವುದು.
ಅನುಷ್ಠಾನ:-
ಕಾರ್ಯಸಾಧ್ಯತೆಯ ಕೊರತೆ ನಿಧಿ (VGF):- ಇದು ಕೈಗೆಟುಕುವ ದರವನ್ನು ಖಚಿತಪಡಿಸಿಕೊಳ್ಳಲು ವಿಮಾನಯಾನ ಸಂಸ್ಥೆಗಳಿಗೆ ನೀಡುವ ಆರ್ಥಿಕ ಬೆಂಬಲವಾಗಿದೆ.
ವಿಮಾನ ದರದ ಮಿತಿ:- ಇದು ಪ್ರಯಾಣ ದರವು ಕೈಗೆಟುಕುವಂತೆ ಇರುವುದನ್ನು ಖಚಿತಪಡಿಸಿಕೊಳ್ಳಲು ವಿಧಿಸಲಾದ ಮಿತಿಯಾಗಿದೆ.
ಗಡಿ ರಸ್ತೆಗಳ ನಿರ್ಮಾಣ ಸಂಸ್ಥೆಯ (BRO) ಪ್ರಮುಖ ಯೋಜನೆಯಾದ ‘ಪ್ರಾಜೆಕ್ಟ್ ಚೇತಕ್’ ತನ್ನ 47ನೇ ಸಂಸ್ಥಾಪನಾ ದಿನವನ್ನು ಇತ್ತೀಚಿಗೆ ಆಚರಿಸಿಕೊಂಡಿತು.
‘ಪ್ರಾಜೆಕ್ಟ್ ಚೇತಕ್’ನ ಬಗ್ಗೆ:
ಇದು ಭೌಗೋಳಿಕ ವಿಸ್ತೀರ್ಣದ ಆಧಾರದ ಮೇಲೆ, ಗಡಿ ರಸ್ತೆಗಳ ನಿರ್ಮಾಣ ಸಂಸ್ಥೆಯ (BRO) ಅತಿದೊಡ್ಡ ಯೋಜನೆಗಳಲ್ಲಿ ಒಂದಾಗಿದೆ.
1980 ರಲ್ಲಿ ಸ್ಥಾಪನೆಯಾದ ಯೋಜನೆ:-ರಾಜಸ್ಥಾನ, ಪಂಜಾಬ್ ಮತ್ತು ಗುಜರಾತಿನ ಉತ್ತರ ಭಾಗಗಳಲ್ಲಿ ರಸ್ತೆ ಜಾಲಗಳನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಇದು ಅಂತರರಾಷ್ಟ್ರೀಯ ಗಡಿಯ ಕಡೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳನ್ನು ನಿರ್ವಹಿಸುವ ಮೂಲಕ ಭಾರತೀಯ ರಕ್ಷಣಾ ಪಡೆಗಳಿಗೆ ಬೆಂಬಲ ನೀಡುತ್ತದೆ.
‘ಗಡಿ ರಸ್ತೆಗಳ ನಿರ್ಮಾಣ ಸಂಸ್ಥೆ’ (BRO)ಯ ಬಗ್ಗೆ:
ಸ್ಥಾಪನೆ:-ಪಂಡಿತ್ ಜವಾಹರಲಾಲ್ ನೆಹರೂ ಅವರು 1960 ರಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಿದರು.
ಉದ್ದೇಶ:-ದೇಶದ ಉತ್ತರ ಮತ್ತು ಈಶಾನ್ಯ ಗಡಿ ಪ್ರದೇಶಗಳಲ್ಲಿ ಸಮರ್ಪಕವಾದ ರಸ್ತೆ ಸಂಪರ್ಕ ಜಾಲದ ತ್ವರಿತ ಅಭಿವೃದ್ಧಿಯನ್ನು ಸಂಯೋಜಿಸುವುದು.
ಆಡಳಿತಾತ್ಮಕ ನಿಯಂತ್ರಣ:- ಕೇಂದ್ರ ಸರ್ಕಾರದ ರಕ್ಷಣಾ ಸಚಿವಾಲಯ
ಪ್ರಾಮುಖ್ಯತೆ:- ಬದ್ಧತೆ, ಸಮರ್ಪಣಾ ಭಾವ ಮತ್ತು ವೆಚ್ಚ-ಪರಿಣಾಮಕಾರಿಯಾದ ಮೂಲಸೌಕರ್ಯಗಳ ಅಭಿವೃದ್ಧಿ ಹಾಗೂ ನಿರ್ವಹಣೆಯ ಮೂಲಕ ಸಶಸ್ತ್ರ ಪಡೆಗಳ ಕಾರ್ಯತಂತ್ರದ ಅಗತ್ಯಗಳನ್ನು ಪೂರೈಸಲು ಇದು ನೆರವಾಗುತ್ತದೆ.
ಇತ್ತೀಚಿನ ಮತ್ತು ಮುಂದಿನ ಯೋಜನೆಗಳು:- ಅರುಣಾಚಲ ಪ್ರದೇಶದ ಬಾಲಿಪಾರಾ-ಚಾರಿದುವಾರ್-ತವಾಂಗ್ ರಸ್ತೆಯಲ್ಲಿ ನಿರ್ಮಿಸಲಾಗುತ್ತಿರುವ ‘ಸೆಲಾ ಸುರಂಗ’ ಯೋಜನೆ.
ಬಯೋನೆಸ್ಟ್ (BioNEST)
ವಿಜ್ಞಾನ ಮತ್ತು ತಂತ್ರಜ್ಞಾನ
ಇತ್ತೀಚೆಗೆ ಸುದ್ದಿಯಲ್ಲಿದೆ:
ಇತ್ತೀಚೆಗೆ, ಮೈಸೂರಿನ CSIR-CFTRI ನಲ್ಲಿ ‘ಬಿರಾಕ್-ಬಯೋನೆಸ್ಟ್ ಸಂವರ್ಧನಾ ಕೇಂದ್ರ’ (BIRAC-BioNEST Incubation Centre) ವನ್ನು ಉದ್ಘಾಟಿಸಲಾಗಿದೆ.
ಪ್ರೋಬಯಾಟಿಕ್ಸ್(Probiotics) ಹಾಗೂ ಪೋಸ್ಟ್ಬಯಾಟಿಕ್ಸ್(Postbiotics) ತಂತ್ರಜ್ಞಾನಗಳ ಸಂಶೋಧನೆ ಮತ್ತು ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುವುದು ಈ ಕೇಂದ್ರದ ಪ್ರಮುಖ ಉದ್ದೇಶವಾಗಿದೆ.
ಬಿರಾಕ್-ಬಯೋನೆಸ್ಟ್ ಸಂವರ್ಧನಾ ಕೇಂದ್ರ’ದ ಬಗ್ಗೆ:
ಉದ್ದೇಶ:-ಆಹಾರ ಜೈವಿಕ ಸಂಸ್ಕರಣೆ, ಜೈವಿಕ ತಂತ್ರಜ್ಞಾನ ಸಂಶೋಧನೆ, ಯೋಜನೆಗಳ ವಿಸ್ತರಣೆ ಮತ್ತು ನಿಯಂತ್ರಕ ಬೆಂಬಲವನ್ನು ಒದಗಿಸುವುದು.
ವೈಜ್ಞಾನಿಕ ಸಂಶೋಧನೆಗಳನ್ನು ಮಾರುಕಟ್ಟೆಗೆ ಸಿದ್ಧವಾಗಿರುವ ಉತ್ಪನ್ನಗಳಾಗಿ ಪರಿವರ್ತಿಸುವುದು ಇದರ ಪ್ರಮುಖ ಗುರಿಯಾಗಿದೆ.
ಗುರಿಪಡಿಸಿದ ಕ್ಷೇತ್ರಗಳು:-ನ್ಯೂಟ್ರಾಸ್ಯುಟಿಕಲ್ಸ್, ನಿಖರ ಕಿಣ್ವನ/ಹುದುಗುವಿಕೆ, ಕ್ರಿಸ್ಪರ್ (CRISPR) ಆಧಾರಿತ ತಂತ್ರಜ್ಞಾನಗಳು ಮತ್ತು ಸಸ್ಯಶಾಸ್ತ್ರದ ಉತ್ಪನ್ನಗಳಂತಹ ಉದಯೋನ್ಮುಖ ಕ್ಷೇತ್ರಗಳಲ್ಲಿ ನವೋದ್ಯಮಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ.
ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (CFTRI), ಮೈಸೂರು
ಜೈವಿಕ ತಂತ್ರಜ್ಞಾನ ಉದ್ಯಮ ಸಂಶೋಧನಾ ನೆರವು ಮಂಡಳಿ (BIRAC)
CFTRI ಸಂಪೂರ್ಣ ರೂಪ:- ಸೆಂಟ್ರಲ್ ಫುಡ್ ಟೆಕ್ನಾಲಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್.
BIRAC ಸಂಪೂರ್ಣ ರೂಪ:- ಬಯೋಟೆಕ್ನಾಲಜಿ ಇಂಡಸ್ಟ್ರಿ ರಿಸರ್ಚ್ ಅಸಿಸ್ಟೆನ್ಸ್ ಕೌನ್ಸಿಲ್.
ಇದು ನವದೆಹಲಿಯ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (CSIR)ಯ ಅಡಿಯಲ್ಲಿ ಬರುವ ಪ್ರಮುಖ ಅಂಗ ಸಂಸ್ಥೆ ಮತ್ತು ಪ್ರಯೋಗಾಲಯವಾಗಿದೆ.
ಇದು ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆಯ (DBT) ಅಡಿಯಲ್ಲಿ ಸ್ಥಾಪಿಸಲಾದ ಲಾಭರಹಿತ ಸಾರ್ವಜನಿಕ ವಲಯದ ಉದ್ಯಮವಾಗಿದೆ.
ಈ ಸಂಸ್ಥೆಯು 1950 ರಲ್ಲಿ ಅಸ್ತಿತ್ವಕ್ಕೆ ಬಂದಿತು.
ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರಗಳಲ್ಲಿ ಆಳವಾದ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಕೈಗೊಳ್ಳುವುದು ಇದರ ಪ್ರಮುಖ ಧ್ಯೇಯವಾಗಿದೆ.
ರಾಷ್ಟ್ರೀಯವಾಗಿ ಅಗತ್ಯವಿರುವ ಉತ್ಪನ್ನಗಳ ಅಭಿವೃದ್ಧಿಯನ್ನು ಪೂರೈಸಲು ಮತ್ತು ಕಾರ್ಯತಂತ್ರದ ಸಂಶೋಧನೆ ಹಾಗೂ ನಾವೀನ್ಯತೆಯನ್ನು ಕೈಗೊಳ್ಳಲು ಇದು ಉದಯೋನ್ಮುಖ ಜೈವಿಕ ತಂತ್ರಜ್ಞಾನ ಉದ್ಯಮಗಳನ್ನು ಬಲಪಡಿಸುತ್ತದೆ ಮತ್ತು ಸಬಲೀಕರಣಗೊಳಿಸುತ್ತದೆ.
ಸಂಶೋಧನೆಯ ಪ್ರಮುಖ ಕ್ಷೇತ್ರಗಳು:
1. ಎಂಜಿನಿಯರಿಂಗ್ ವಿಜ್ಞಾನಗಳು
2. ತಂತ್ರಜ್ಞಾನ ಅಭಿವೃದ್ಧಿ
3. ಭಾಷಾಂತರ ಸಂಶೋಧನೆ
4. ಆಹಾರ ಸಂರಕ್ಷಣೆ ಮತ್ತು ಸುರಕ್ಷತೆ
ಸಂಪನ್ಮೂಲ ಕೇಂದ್ರಗಳು:-ಹೈದರಾಬಾದ್, ಲಕ್ನೋ ಮತ್ತು ಮುಂಬೈ.
ಭಾರತ ಜನಜಾತಿ ಉತ್ಸವ-2026
ರಾಜ್ಯಶಾಸ್ತ್ರ ಮತ್ತು ಆಡಳಿತ
ಇತ್ತೀಚೆಗೆ ಸುದ್ದಿಯಲ್ಲಿದೆ:
ಇತ್ತೀಚಿಗೆ ‘ಭಾರತ ಜನಜಾತಿ ಉತ್ಸವ-2026’ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. .
ಭಾರತ ಜನಜಾತಿ ಉತ್ಸವದ ಬಗ್ಗೆ:
ಇದು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯದಪ್ರಮುಖ ಉಪಕ್ರಮವಾಗಿದ್ದು, ಇದನ್ನು ಭಾರತೀಯ ಜನಜಾತಿ ಸಹಕಾರ ಮಾರುಕಟ್ಟೆ ಅಭಿವೃದ್ಧಿ ಒಕ್ಕೂಟ (TRIFED) ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಲಾಗುತ್ತದೆ.
ಉದ್ದೇಶ:- 19 ದಿನಗಳ ಕಾಲ ನಡೆದ ಈ ಉತ್ಸವವು ದೇಶಾದ್ಯಂತ ಇರುವ ಬುಡಕಟ್ಟು ಕುಶಲಕರ್ಮಿಗಳು, ಉದ್ಯಮಿಗಳು ಮತ್ತು ಸ್ವಸಹಾಯ ಸಂಘಗಳನ್ನು (SHGs) ಒಟ್ಟುಗೂಡಿಸಿ, ಭಾರತದ ವೈವಿಧ್ಯಮಯ ಬುಡಕಟ್ಟು ಪರಂಪರೆ ಮತ್ತು ವಿಶಿಷ್ಟ ಉತ್ಪನ್ನಗಳನ್ನು ಪ್ರದರ್ಶಿಸುವ ಉದ್ದೇಶವನ್ನು ಹೊಂದಿದೆ.
ಕರ್ನಾಟಕದ ಬುಡಕಟ್ಟು ಸಮುದಾಯಗಳ ಬಗ್ಗೆ:
ಕರ್ನಾಟಕವು ಸುಮಾರು 50 ಅಧಿಸೂಚಿತ ಪರಿಶಿಷ್ಟ ಪಂಗಡಗಳಿಗೆ(ST) ನೆಲೆಯಾಗಿದ್ದು, ಇವರು 2011 ರ ಜನಗಣತಿಯ ಪ್ರಕಾರ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ. 6.95% ರಷ್ಟಿದ್ದಾರೆ.
ಈ ಸಮುದಾಯಗಳು ಪ್ರಾಥಮಿಕವಾಗಿ ಬಳ್ಳಾರಿ, ರಾಯಚೂರು, ಮೈಸೂರು, ಚಿತ್ರದುರ್ಗ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಕೇಂದ್ರೀಕೃತವಾಗಿವೆ.
ಕರ್ನಾಟಕದ ಪ್ರಮುಖ ಬುಡಕಟ್ಟು ಸಮುದಾಯಗಳು:
ನಾಯ್ಕಡ/ ನಾಯಕ /ಬೇಡರ /ಬೇಡ /ವಾಲ್ಮೀಕಿ:- ಇವರು ಕರ್ನಾಟಕದ ಅತಿದೊಡ್ಡ ಬುಡಕಟ್ಟು ಸಮುದಾಯದವರಾಗಿದ್ದು, ಐತಿಹಾಸಿಕವಾಗಿ ಇವರು ಯೋಧ ಮತ್ತು ಬೇಟೆಗಾರರಾಗಿದ್ದಾರೆ.
ಗೋಂಡ:- ಇವರು ರಾಜ್ಯದ ಎರಡನೇ ಅತಿದೊಡ್ಡ ಬುಡಕಟ್ಟು ಸಮುದಾಯದವರಾಗಿದ್ದು, ಇವರು ಪ್ರಮುಖವಾಗಿ ಬೀದರ ಮತ್ತು ಉತ್ತರ ಕನ್ನಡದಂತಹ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ನೆಲೆಸಿದ್ದಾರೆ.
ಜೇನು ಕುರುಬ:- ಇವರ ಹೆಸರೇ ಸೂಚಿಸುವಂತೆ ಇವರು “ಜೇನು ಸಂಗ್ರಹಿಸುವ ಜನ”ರಾಗಿದ್ದಾರೆ. ಪಶ್ಚಿಮ ಘಟ್ಟಗಳಲ್ಲಿ ಜೇನುತುಪ್ಪವನ್ನು ಸಂಗ್ರಹಿಸುವಲ್ಲಿ ಇವರಿಗಿರುವ ಸಾಂಪ್ರದಾಯಿಕ ಪರಿಣತಿಯನ್ನು ಇದು ಪ್ರತಿಬಿಂಬಿಸುತ್ತದೆ.
ಸೋಲಿಗ /ಶೋಲಗ:- ಪ್ರಾಥಮಿಕವಾಗಿ ಬಿಳಿಗಿರಿರಂಗನ ಬೆಟ್ಟಗಳಲ್ಲಿ ನೆಲೆಸಿರುವ ಇವರು ಅರಣ್ಯದೊಂದಿಗೆ ಆಳವಾದ ಆಧ್ಯಾತ್ಮಿಕ ಸಂಪರ್ಕವನ್ನು ಹೊಂದಿದ್ದಾರೆ. ಇವರು ‘ಸ್ಥಳಾಂತರ ಬೇಸಾಯ’ ಪದ್ಧತಿಯನ್ನು ಆಚರಿಸುವುದಕ್ಕೆ ಹೆಸರುವಾಸಿಯಾಗಿದ್ದಾರೆ.
ಹಕ್ಕಿಪಿಕ್ಕಿ:- ಐತಿಹಾಸಿಕವಾಗಿ ಇವರು ಅರೆ-ಅಲೆಮಾರಿ “ಪಕ್ಷಿ ಬೇಟೆಗಾರರು” ಆಗಿದ್ದಾರೆ (ಹಕ್ಕಿ ಎಂದರೆ ಪಕ್ಷಿ, ಪಿಕ್ಕಿ ಎಂದರೆ ಹಿಡಿಯುವುದು). ಇವರು ರಾಜಸ್ಥಾನದ ಯೋಧ ಕುಲಗಳೊಂದಿಗೆ ತಮ್ಮ ಪೂರ್ವಜರ ಸಂಪರ್ಕವನ್ನು ಹೊಂದಿದ್ದಾರೆ ಎಂದು ಪರಿಗಣಿಸಲಾಗಿದೆ.
ಸಿದ್ಧಿ:- ಶತಮಾನಗಳ ಹಿಂದೆ ಭಾರತಕ್ಕೆ ಕರೆತರಲಾದ ಆಫ್ರಿಕಾ ಮೂಲದ ವಿಶಿಷ್ಟ ಜನಾಂಗೀಯ ಸಮುದಾಯದವರಾಗಿದ್ದಾರೆ. ಇವರು ಹೆಚ್ಚಾಗಿ ಉತ್ತರ ಕನ್ನಡದ ಕಾಡುಗಳಲ್ಲಿ ಕಂಡುಬರುತ್ತಾರೆ ಮತ್ತು ಇವರ ವಿಶಿಷ್ಟ ಸಂಸ್ಕೃತಿ ಹಾಗೂ “ಕವಂದಿ” ಎಂಬ ಕೌದಿ ಕಲೆಗೆ ಹೆಸರುವಾಸಿಯಾಗಿದ್ದಾರೆ.
ಕೊರಗ: ಇವರನ್ನು ‘ವಿಶೇಷವಾಗಿ ದುರ್ಬಲವಾಗಿರುವ ಬುಡಕಟ್ಟು ಗುಂಪು’ (PVTG) ಎಂದು ಗುರುತಿಸಲಾಗಿದೆ. ಇವರು ಉಡುಪಿ ಮತ್ತು ದಕ್ಷಿಣ ಕನ್ನಡದಂತಹ ಕರಾವಳಿ ಜಿಲ್ಲೆಗಳಿಗೆ ಸೇರಿದವರಾಗಿದ್ದು, ಸಾಂಪ್ರದಾಯಿಕವಾಗಿ ಬುಟ್ಟಿ ಹೆಣೆಯುವವರು ಮತ್ತು ಡೋಲು ಬಾರಿಸುವವರಾಗಿದ್ದಾರೆ.
ಯೆರವಾ: ಇವರು ಹೆಚ್ಚಾಗಿ ಕೊಡಗು ಮತ್ತು ಮೈಸೂರು ಭಾಗಗಳಲ್ಲಿ ಕಂಡುಬರುತ್ತಾರೆ. ಸಾಂಪ್ರದಾಯಿಕವಾಗಿ ಅರಣ್ಯವಾಸಿಗಳಾಗಿರುವ ಇವರು ಈಗ ಹೆಚ್ಚಾಗಿ ಕಾಫಿ ಮತ್ತು ಚಹಾ ತೋಟಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವನ್ನು (KSRTC) ತನ್ನ “ಪಾರದರ್ಶಕನೇಮಕಾತಿ ಮತ್ತು ತರಬೇತಿ ಕಾರ್ಯಕ್ರಮ”ಕ್ಕಾಗಿ 2025 ರ ಸ್ಕೋಚ್ ರಾಷ್ಟ್ರೀಯ ಪ್ರಶಸ್ತಿಯನ್ನು ಇತ್ತೀಚೆಗೆ ನವದೆಹಲಿಯಲ್ಲಿ ನೀಡಿ ಗೌರವಿಸಲಾಗಿದೆ.
ಸ್ವಯಂಚಾಲಿತ ಚಾಲನಾ ಪರೀಕ್ಷೆಗಳು ಮತ್ತು ಆನ್ಲೈನ್ ಪರೀಕ್ಷೆಗಳನ್ನು ಒಳಗೊಂಡಂತೆ ತಂತ್ರಜ್ಞಾನ-ಚಾಲಿತ, ಪಾರದರ್ಶಕ ನೇಮಕಾತಿ ಪದ್ಧತಿಗಳ ಜೊತೆಗೆ ವ್ಯಾಪಕವಾದ ಉದ್ಯೋಗಿ ತರಬೇತಿ ಉಪಕ್ರಮಗಳನ್ನು ಈ ಪ್ರಶಸ್ತಿಯು ಗುರುತಿಸುತ್ತದೆ.
ಈ ಪ್ರಶಸ್ತಿಗೆ ಸಂಬಂಧಿಸಿದ ಪ್ರಮುಖ ವಿವರಗಳು:
ಪ್ರಶಸ್ತಿ ಪ್ರದಾನ ಸಮಾರಂಭ:- 2025 ರ ಸ್ಕೋಚ್ ರಾಷ್ಟ್ರೀಯ ಪ್ರಶಸ್ತಿಯನ್ನು ಮಾರ್ಚ್ 28, 2026 ರಂದು ನವದೆಹಲಿಯಲ್ಲಿ ಪ್ರದಾನ ಮಾಡಲಾಯಿತು.
ನೇಮಕಾತಿ ವಿಧಾನಗಳು:- ಮಾನವ ಹಸ್ತಕ್ಷೇಪವನ್ನು ಕಡಿಮೆ ಮಾಡಲು ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು KSRTC ಯು ಸ್ವಯಂಚಾಲಿತ ಚಾಲನಾ ಪರೀಕ್ಷೆಗಳು, ಆನ್ಲೈನ್ ಪರೀಕ್ಷೆಗಳು, ಡಿಜಿಟಲ್ ದಾಖಲೆ ಪರಿಶೀಲನೆ ಮತ್ತು ವೆಬ್ಕಾಸ್ಟಿಂಗ್ ಅನ್ನು ಜಾರಿಗೆ ತಂದಿದೆ.
ಸಾಧನೆಗಳು:- ಈ ಉಪಕ್ರಮವು 2,000 ಚಾಲಕರು/ನಿರ್ವಾಹಕರು, 300 ತಾಂತ್ರಿಕ ಸಿಬ್ಬಂದಿ ಮತ್ತು ಅನುಕಂಪದ ಆಧಾರದ ಮೇಲೆ 441 ಅಭ್ಯರ್ಥಿಗಳ ನೇಮಕಾತಿಯನ್ನು ಸುಗಮಗೊಳಿಸಿದೆ ಮತ್ತು ಆರು ತಿಂಗಳಲ್ಲಿ 12,000 ಕ್ಕೂ ಹೆಚ್ಚು ಉದ್ಯೋಗಿಗಳಿಗೆ ತರಬೇತಿ ನೀಡಿದೆ.
ಪ್ರಶಸ್ತಿ ಸ್ವೀಕರಿಸಿದವರು:-KSRTC ವ್ಯವಸ್ಥಾಪಕ ನಿರ್ದೇಶಕ ಅಕ್ರಮ್ ಪಾಷಾ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದರು.
ಪ್ರಾಮುಖ್ಯತೆ:- ನವದೆಹಲಿ ಮೂಲದ ಚಿಂತಕರ ಚಾವಡಿಯಾದ ಸ್ಕೋಚ್ ಗ್ರೂಪ್ (SKOCH Group), ಆಡಳಿತ ಮತ್ತು ತಂತ್ರಜ್ಞಾನ ಅಳವಡಿಕೆಯಲ್ಲಿನ ಉತ್ಕೃಷ್ಟತೆಯನ್ನು ಗುರುತಿಸಲು ಈ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತದೆ.
ಭಾರತದ ಪ್ರಮುಖ ಬಂದರುಗಳು ಸರಕು ಸಾಗಣೆ ಗುರಿಯನ್ನು ಮೀರಿಸಿವೆ
ಅರ್ಥವ್ಯವಸ್ಥೆ
ಇತ್ತೀಚೆಗೆ ಸುದ್ದಿಯಲ್ಲಿದೆ:
2025-26ನೇ ಆರ್ಥಿಕ ವರ್ಷದಲ್ಲಿ ಭಾರತದ ಪ್ರಮುಖ ಬಂದರುಗಳು 915.17 ಮಿಲಿಯನ್ ಟನ್ (MT) ಸರಕುಗಳನ್ನು ನಿರ್ವಹಿಸಿವೆ. ಇದು ನಿಗದಿತ 904 MT ಗುರಿಯನ್ನು ಮೀರಿದ್ದು, ವಾರ್ಷಿಕವಾಗಿ 7.06% ರಷ್ಟು ಪ್ರಗತಿಯನ್ನು ದಾಖಲಿಸಿದೆ.
ಭಾರತದಲ್ಲಿನ ಬಂದರುಗಳ ಬಗ್ಗೆ ಪ್ರಮುಖ ಅಂಶಗಳು:
ಭಾರತದಲ್ಲಿ ಒಟ್ಟು 14 ಪ್ರಮುಖ ಬಂದರುಗಳಿದ್ದು, ಅವುಗಳಲ್ಲಿ 12 ಬಂದರುಗಳು ಪ್ರಸ್ತುತ ಕಾರ್ಯಾಚರಣೆಯಲ್ಲಿವೆ ಮತ್ತು ಇವುಗಳು ಕೇಂದ್ರ ಸರ್ಕಾರದ ‘ಬಂದರು, ಹಡಗು ಸಾಗಣೆ ಮತ್ತು ಜಲಸಾರಿಗೆ ಸಚಿವಾಲಯ’ದ ಆಡಳಿತಾತ್ಮಕ ನಿಯಂತ್ರಣಕ್ಕೆ ಒಳಪಡುತ್ತವೆ.
ದೇಶಾದ್ಯಂತ 200 ಸಣ್ಣ ಬಂದರುಗಳಿವೆ (Non-major ports), ಇವುಗಳು ಆಯಾ ರಾಜ್ಯ ಸರ್ಕಾರಗಳ ಜಲಸಾರಿಗೆ ಮಂಡಳಿ ಅಥವಾ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತವೆ.
ಅಧಿಸೂಚನೆ ಹೊರಡಿಸಲಾದ ಹೊಸ ಪ್ರಮುಖ ಬಂದರುಗಳು:-
ಮಹಾರಾಷ್ಟ್ರದ ವಢವನ್ ಬಂದರು.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಗಲಾಥಿಯಾ ಕೊಲ್ಲಿ ಬಂದರು.
ಭಾರತದಲ್ಲಿ ಕಾರ್ಯಾಚರಣೆಯಲ್ಲಿರುವ ಪ್ರಮುಖ ಬಂದರುಗಳು:
ಪಶ್ಚಿಮ ಕರಾವಳಿ ಬಂದರುಗಳು
ಪೂರ್ವ ಕರಾವಳಿ ಬಂದರುಗಳು
ದೀನದಯಾಳ ಬಂದರು (ಕಾಂಡ್ಲಾ, ಗುಜರಾತ)
ಪಾರಾದೀಪ ಬಂದರು (ಒಡಿಶಾ)
ಮುಂಬೈ ಬಂದರು (ಮಹಾರಾಷ್ಟ್ರ)
ವಿಶಾಖಪಟ್ಟಣಂ ಬಂದರು (ಆಂಧ್ರಪ್ರದೇಶ)
ಜವಾಹರಲಾಲ್ ನೆಹರು ಬಂದರು (JNPT, ಮಹಾರಾಷ್ಟ್ರ)
ಚೆನ್ನೈ ಬಂದರು (ತಮಿಳುನಾಡು)
ಮರ್ಮಾಗೋವಾ ಬಂದರು (ಗೋವಾ)
ಕಾಮರಾಜರ್ ಬಂದರು (ಎನ್ನೋರ್, ತಮಿಳುನಾಡು)
ನವಮಂಗಳೂರು ಬಂದರು (ಕರ್ನಾಟಕ)
ವಿ.ಒ. ಚಿದಂಬರನಾರ್ ಬಂದರು (ತೂತೂಕೂಡಿ , ತಮಿಳುನಾಡು)
ಕೊಚ್ಚಿ ಬಂದರು (ಕೇರಳ)
ಶ್ಯಾಮ ಪ್ರಸಾದ್ ಮುಖರ್ಜಿ ಬಂದರು (ಕೋಲ್ಕತ್ತಾ-ಹಲ್ದಿಯಾ, ಪಶ್ಚಿಮ ಬಂಗಾಳ)
ಒಪೆಕ್ ಪ್ಲಸ್ (OPEC+)
ಅಂತರರಾಷ್ಟ್ರೀಯ
ಇತ್ತೀಚೆಗೆ ಸುದ್ದಿಯಲ್ಲಿದೆ:
ಜಾಗತಿಕ ಇಂಧನ ಬಿಕ್ಕಟ್ಟು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆಯು (OPEC) ತನ್ನ ತೈಲ ಉತ್ಪಾದನೆಯನ್ನು ದಿನಕ್ಕೆ 206,000 ಬ್ಯಾರೆಲ್ಗಳಷ್ಟು ಹೆಚ್ಚಿಸಲು ನಿರ್ಧರಿಸಿದೆ.
ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ (OPEC)ಯ ಬಗ್ಗೆ:
OPEC ಸಂಪೂರ್ಣ ರೂಪ:-ಆರ್ಗಾನೈಝಷನ್ ಆಫ್ ದಿ ಪೆಟ್ರೋಲಿಯಂ ಎಕ್ಷಪೋರ್ಟಿಂಗ್ ಕಂಟ್ರಿಸ್.
OPEC ಒಂದು ಕಾಯಂ ಅಂತರ-ಸರ್ಕಾರಿ ಸಂಸ್ಥೆಯಾಗಿದೆ:- ಇದನ್ನು ಸೆಪ್ಟೆಂಬರ್ 1960 ರಲ್ಲಿ ನಡೆದ ಬಾಗ್ದಾದ್ ಸಮ್ಮೇಳನದಲ್ಲಿ ಸ್ಥಾಪಿಸಲಾಯಿತು.
ಸಂಸ್ಥಾಪನ ಸದಸ್ಯ ರಾಷ್ಟ್ರಗಳು:-ಇರಾನ್, ಇರಾಕ್, ಕುವೈತ್, ಸೌದಿ ಅರೇಬಿಯಾ ಮತ್ತು ವೆನೆಜುವೆಲಾ.
ಪ್ರಸ್ತುತ OPECನ 12 ಸದಸ್ಯ ರಾಷ್ಟ್ರಗಳಿವೆ:- ಅಲ್ಜೀರಿಯಾ, ಕಾಂಗೋ, ಈಕ್ವಟೋರಿಯಲ್ ಗಿನಿಯಾ, ಗ್ಯಾಬೊನ್, ಇರಾನ್, ಇರಾಕ್, ಕುವೈತ್, ಲಿಬಿಯಾ, ನೈಜೀರಿಯಾ, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಮತ್ತು ವೆನೆಜುವೆಲಾ.
ಪ್ರಧಾನ ಕಚೇರಿ:-ಆಸ್ಟ್ರಿಯಾದ ವಿಯೆನ್ನಾ.
ಒಪೆಕ್ ಸದಸ್ಯ ರಾಷ್ಟ್ರಗಳು ಪ್ರಪಂಚದ ಒಟ್ಟು ಪ್ರಮಾಣೀಕೃತ ತೈಲ ನಿಕ್ಷೇಪಗಳಲ್ಲಿ 80% ಕ್ಕಿಂತ ಹೆಚ್ಚಿನ ಪಾಲನ್ನು ಹೊಂದಿವೆ.
ಒಪೆಕ್ ಸದಸ್ಯ ರಾಷ್ಟ್ರಗಳು ವಿಶ್ವದ ಒಟ್ಟು ಕಚ್ಚಾ ತೈಲದ ಶೇ. 40% ರಷ್ಟನ್ನು ಉತ್ಪಾದಿಸುತ್ತದೆ ಮತ್ತು ಜಾಗತಿಕ ಪೆಟ್ರೋಲಿಯಂ ವ್ಯಾಪಾರದಲ್ಲಿ ಸುಮಾರು 60% ರಷ್ಟು ರಫ್ತು ಪಾಲನ್ನು ಹೊಂದಿವೆ.
ಒಪೆಕ್ ಪ್ಲಸ್ (OPEC+)ನ ಬಗ್ಗೆ:
ಒಪೆಕ್ ಸಂಘಟನೆಯು 2016 ರಲ್ಲಿ, ಇತರ ತೈಲ ಉತ್ಪಾದಿಸುವ ರಾಷ್ಟ್ರಗಳೊಂದಿಗೆ ಮೈತ್ರಿ ಮಾಡಿಕೊಂಡು ಒಪೆಕ್ ಪ್ಲಸ್ (OPEC+) ಅನ್ನು ರಚಿಸಿತು.
OPEC+ 10 ಒಪೆಕ್-ಯೇತರ ಪಾಲುದಾರ ರಾಷ್ಟ್ರಗಳ ಗುಂಪಾಗಿದೆ:- ಅವುಗಳೆಂದರೆ, ಅಜೆರ್ಬೈಜಾನ್, ಬಹ್ರೇನ್, ಬ್ರೂನಿ, ಕಜಕಿಸ್ತಾನ್, ಮಲೇಷ್ಯಾ, ಮೆಕ್ಸಿಕೋ, ಒಮಾನ್, ರಷ್ಯಾ, ದಕ್ಷಿಣ ಸುಡಾನ್ ಮತ್ತು ಸುಡಾನ್ ದೇಶಗಳನ್ನು ಒಳಗೊಂಡಿದೆ.
ಮಂದಗತಿಯ ಹಣದುಬ್ಬರ (Stagflation)
ಅರ್ಥವ್ಯವಸ್ಥೆ
ಇತ್ತೀಚೆಗೆ ಸುದ್ದಿಯಲ್ಲಿದೆ:
ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಪ್ರಸ್ತುತ ಸಂಘರ್ಷವು ತೈಲ ಪೂರೈಕೆಯಲ್ಲಿ ತೀವ್ರ ಅಡಚಣೆಯನ್ನು ಉಂಟುಮಾಡಿದ್ದು, ಇದು ಜಾಗತಿಕ ಮಟ್ಟದಲ್ಲಿ ಮಂದಗತಿಯ ದರ ಏರಿಕೆ ಭೀತಿಯನ್ನು ಮರುಕಳಿಸುವಂತೆ ಮಾಡಿದೆ.
ಮಂದಗತಿ (ಸ್ಥಗಿತ)ಯ ಹಣದುಬ್ಬರದ ಬಗ್ಗೆ:
ವ್ಯಾಖ್ಯಾನ:-ಆರ್ಥಿಕ ಸ್ಥಗಿತತೆ (ಅಥವಾ ಋಣಾತ್ಮಕ ಆರ್ಥಿಕ ಪ್ರಗತಿ), ತೀವ್ರ ನಿರುದ್ಯೋಗ ಮತ್ತು ಅಧಿಕ ಹಣದುಬ್ಬರ – ಈ ಮೂರೂ ಅಂಶಗಳು ಏಕಕಾಲದಲ್ಲಿ ಸಂಭವಿಸುವ ಸಂಕೀರ್ಣ ಆರ್ಥಿಕ ಪರಿಸ್ಥಿತಿಯನ್ನು ಮಂದಗತಿಯ ಹಣದುಬ್ಬರ (Stagflation) ಎಂದು ಕರೆಯಲಾಗುತ್ತದೆ.
ಪದದ ಮೂಲ:- ಬ್ರಿಟಿಷ್ ರಾಜಕಾರಣಿಯಾದ ಇಯಾನ್ ಮ್ಯಾಕ್ಲಿಯೋಡ್ ಅವರು 1960 ರ ದಶಕದಲ್ಲಿ ಈ ಪದವನ್ನು ಮೊದಲ ಬಾರಿಗೆ ಬಳಸಿದರು.
ಇದರ ಅಪಾಯಗಳೇನು?
ಸಾಂಪ್ರದಾಯಿಕ ಹಣಕಾಸು ನೀತಿಯ ಸಾಧನಗಳು ಸಂಪೂರ್ಣವಾಗಿ ವಿಫಲಗೊಳ್ಳುತ್ತವೆ. ಏಕೆಂದರೆ, ಹಣದುಬ್ಬರವನ್ನು ನಿಯಂತ್ರಿಸಲು ಬಡ್ಡಿದರಗಳನ್ನು ಹೆಚ್ಚಿಸಿದರೆ ಅದು ನಿರುದ್ಯೋಗ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸುತ್ತದೆ. ಬದಲಾಗಿ, ಆರ್ಥಿಕ ಪ್ರಗತಿಯನ್ನು ಉತ್ತೇಜಿಸಲು ಬಡ್ಡಿದರಗಳನ್ನು ಕಡಿತಗೊಳಿಸಿದರೆ ಅದು ಹಣದುಬ್ಬರವನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ.