ವರ್ಗ: National and International Current Affairs Kannada

  • ಕರ್ ಸಾಥಿ (Kar Saathi) – ನೇರ ತೆರಿಗೆ ವಿಷಯಗಳ ಕುರಿತು AI ಆಧಾರಿತ ಚಾಟ್‌ಬಾಟ್ ವೇದಿಕೆ | E-20 ಪೆಟ್ರೋಲ್ (E20 Petrol) | ಕೊಳವೆ ನೈಸರ್ಗಿಕ ಅನಿಲದ (PNG) ಬಳಕೆಗೆ ಭಾರತದ ಉತ್ತೇಜನ | ಭಾರತದ ಬಹು-ವಿಪತ್ತು ಮುನ್ನೆಚ್ಚರಿಕೆ ನಿರ್ಧಾರ ಸಹಾಯಕ ವ್ಯವಸ್ಥೆ (MHEW-DSS) | ಇಂಡೋನೇಷ್ಯಾ | ‘NCERT’ಗೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಮಾನ್ಯತೆ

    ಕರ್ ಸಾಥಿ (Kar Saathi) – ನೇರ ತೆರಿಗೆ ವಿಷಯಗಳ ಕುರಿತು AI ಆಧಾರಿತ ಚಾಟ್‌ಬಾಟ್ ವೇದಿಕೆ

    ಆರ್ಥಿಕತೆ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಹೊಸ ಆದಾಯ ತೆರಿಗೆ ಕಾಯ್ದೆ, 2025ರ ಚೌಕಟ್ಟಿನಡಿಯಲ್ಲಿ ನೇರ ತೆರಿಗೆ ವಿಷಯಗಳ ಕುರಿತು 24×7 ಮಾರ್ಗದರ್ಶನ ನೀಡಲು ಆದಾಯ ತೆರಿಗೆ ಇಲಾಖೆಯು ಕೃತಕ ಬುದ್ಧಿಮತ್ತೆ (AI) ಆಧಾರಿತ ಡಿಜಿಟಲ್ ಚಾಟ್‌ಬಾಟ್ ವೇದಿಕೆಯನ್ನು ಪ್ರಾರಂಭಿಸಿದೆ.

    ‘ಕರ್ ಸಾಥಿ’ ಚಾಟ್‌ಬಾಟ್ ವೇದಿಕೆಯ ಬಗ್ಗೆ:

    • ನೇರ ತೆರಿಗೆ ವಿಷಯಗಳ ಕುರಿತು 24×7 ಮಾರ್ಗದರ್ಶನ ಒದಗಿಸುತ್ತದೆ:- ಅವುಗಳೆಂದರೆ ಐಟಿಆರ್ (ITR) ಸಲ್ಲಿಕೆ, ತೆರಿಗೆ ನಿಯಮಗಳು, ನಮೂನೆಗಳು, ನೋಟಿಸ್‌ಗಳು, ಕಡಿತಗಳು, ಮರುಪಾವತಿ ಮತ್ತು ಅನುಸರಣೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಸಹಾಯವನ್ನು ಒದಗಿಸುತ್ತದೆ.
    • ಎಲ್ಲಾ ನೇರ ತೆರಿಗೆಗೆ ಸಂಬಂಧಿಸಿದ ಸಂಪನ್ಮೂಲಗಳನ್ನು ಒಂದೇ ವೇದಿಕೆಯಡಿ ತರುತ್ತದೆ:- ಅವುಗಳೆಂದರೆ ನಮೂನೆಗಳು, ಸ್ವೀಕೃತಿ, ಇ-ಪಾವತಿ, ಇ-ಪರಿಶೀಲನೆ ಮತ್ತು ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs).

    ತೆರಿಗೆದಾರರ ಕುಂದುಕೊರತೆ ನಿವಾರಣೆ ಮತ್ತು ತೆರಿಗೆ ಅನುಸರಣೆಯ ಪ್ರಶ್ನೆಗಳನ್ನು ಪರಿಹರಿಸಲು ಬೆಂಬಲ ನೀಡುತ್ತದೆ.

    E-20 ಪೆಟ್ರೋಲ್ (E20 Petrol)

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಭಾರತವು ಏಪ್ರಿಲ್ 1, 2025 ರಿಂದ ದೇಶದ ಎಲ್ಲಾ ಇಂಧನ ಕೇಂದ್ರಗಳಲ್ಲಿ ಇ20 (E20) ಪೆಟ್ರೋಲ್ ವಿತರಣೆಯನ್ನು ಅಧಿಕೃತವಾಗಿ ಕಡ್ಡಾಯಗೊಳಿಸಿದೆ.

    E-20 ಪೆಟ್ರೋಲ್ ಉಪಕ್ರಮದ ಬಗ್ಗೆ:

    • ಇದು 20% ಎಥೆನಾಲ್ ಮತ್ತು 80% ಪೆಟ್ರೋಲ್ ಒಳಗೊಂಡಿರುವ ಇಂಧನ ಮಿಶ್ರಣವನ್ನು ಸೂಚಿಸುತ್ತದೆ.
    • ಭಾರತದ “ಎಥೆನಾಲ್ ಮಿಶ್ರಿತ ಪೆಟ್ರೋಲ್” (EBP) ಕಾರ್ಯಕ್ರಮದ ಪ್ರಮುಖ ಭಾಗವಾಗಿದೆ:- ಇದು ಕಚ್ಚಾ ತೈಲ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮತ್ತು ವಾಹನಗಳ ಹೊರಸೂಸುವಿಕೆಯನ್ನು ತಗ್ಗಿಸುವ ಉದ್ದೇಶವನ್ನು ಹೊಂದಿದೆ.
    • 20% ಎಥೆನಾಲ್ ಮಿಶ್ರಣದ ಗುರಿ, 2025-26:- ಆರಂಭದಲ್ಲಿ 20% ಎಥೆನಾಲ್ ಮಿಶ್ರಿತ ಪೆಟ್ರೋಲ್ ಗುರಿಯನ್ನು 2030ಕ್ಕೆ ನಿಗದಿಪಡಿಸಲಾಗಿತ್ತು, ಆದರೆ ತಿದ್ದುಪಡಿ ಮಾಡಲಾದ ರಾಷ್ಟ್ರೀಯ ಜೈವಿಕ ಇಂಧನ ನೀತಿ, 2022ರ ಅಡಿಯಲ್ಲಿ ಈ ಗುರಿಯನ್ನು 2025-26ನೇ ವರ್ಷಕ್ಕೆ ಮುಂಚಿತವಾಗಿ ಸಾಧಿಸಲು ನಿರ್ಧರಿಸಲಾಗಿದೆ.

    ಭಾರತಕ್ಕೆ ಇದರ ಪ್ರಾಮುಖ್ಯತೆ:

    • ಇಂಧನ ಭದ್ರತೆ:- ಇದು ಭಾರತದ ಅಗತ್ಯಗಳ ಸುಮಾರು 85% ರಷ್ಟು ಆಮದು ಮಾಡಿಕೊಳ್ಳಲಾಗುತ್ತಿರುವ ಕಚ್ಚಾ ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.
    • ವಿದೇಶಿ ವಿನಿಮಯವನ್ನು ಉಳಿತಾಯ:- ಇದು ವಾರ್ಷಿಕವಾಗಿ ಸರಿಸುಮಾರು ₹30,000 ರಿಂದ ₹50,000 ಕೋಟಿಗಳಷ್ಟು ವಿದೇಶಿ ವಿನಿಮಯವನ್ನು ಉಳಿತಾಯ ಮಾಡುತ್ತದೆ.
    • ಪರಿಸರ ಸಂರಕ್ಷಣೆ:- ಇದು ಇಂಗಾಲದ ಮೊನಾಕ್ಸೈಡ್, ಹೈಡ್ರೋಕಾರ್ಬನ್‌ಗಳು ಮತ್ತು ಸೂಕ್ಷ್ಮ ಕಣಗಳ ಹೊರಸೂಸುವಿಕೆಯನ್ನು 30-50% ರಷ್ಟು ಕಡಿಮೆ ಮಾಡುತ್ತದೆ.
    • ಗ್ರಾಮೀಣ ಆದಾಯ ಹೆಚ್ಚಿಸುವುದು:- ಇದು ಕಬ್ಬು, ಮೆಕ್ಕೆಜೋಳ ಮತ್ತು ಹಾನಿಗೊಳಗಾದ ಆಹಾರ ಧಾನ್ಯಗಳಂತಹ ಬೆಳೆಗಳಿಗೆ ಬೇಡಿಕೆಯನ್ನು ಸೃಷ್ಟಿಸುವ ಮೂಲಕ ಗ್ರಾಮೀಣ ಆದಾಯವನ್ನು ಹೆಚ್ಚಿಸುತ್ತದೆ.

    ಕೊಳವೆ ನೈಸರ್ಗಿಕ ಅನಿಲದ (PNG) ಬಳಕೆಗೆ ಭಾರತದ ಉತ್ತೇಜನ

    ವಿಜ್ಞಾನ ಮತ್ತು ತಂತ್ರಜ್ಜಾನ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಆಮದು ಅವಲಂಬನೆಯನ್ನು ಕಡಿಮೆ ಮಾಡಲು, ಇಂಧನ ಭದ್ರತೆಯನ್ನು ಹೆಚ್ಚಿಸಲು ಮತ್ತು ಶುದ್ಧ ಇಂಧನಗಳ ಬಳಕೆಯತ್ತ ಸಾಗಲು ಭಾರತವು ಕೊಳವೆ ನೈಸರ್ಗಿಕ ಅನಿಲ (PNG) ಸಂಪರ್ಕಗಳ ವಿಸ್ತರಣೆಯನ್ನು ವೇಗಗೊಳಿಸುತ್ತಿದೆ.

    ಅನಿಲಗಳ ವಿಧಗಳು:

    ದ್ರವೀಕೃತ ಪೆಟ್ರೋಲಿಯಂ ಅನಿಲ (LPG):

    • ಅನಿಲಗಳ ಸಂಯೋಜನೆ:- ಪ್ರೊಪೇನ್ (Propane) ಮತ್ತು ಬ್ಯೂಟೇನ್ (Butane).
    • ಸ್ಥಿತಿ ಮತ್ತು ಸಂಗ್ರಹಣೆ:- ಇದನ್ನು ಸಾಧಾರಣ ಒತ್ತಡದಲ್ಲಿ ಸಿಲಿಂಡರ್‌ಗಳಲ್ಲಿ ದ್ರವರೂಪದಲ್ಲಿ ಸಂಗ್ರಹಿಸಲಾಗುತ್ತದೆ.
    • ಬಳಕೆ:- ಇದನ್ನು ಗೃಹಬಳಕೆಯ ಅಡುಗೆ, ನೀರು ಕಾಯಿಸುವಿಕೆ ಮತ್ತು ಸಣ್ಣ-ಪ್ರಮಾಣದ ಕೈಗಾರಿಕೆಗಳಲ್ಲಿ ಬಳಸಲಾಗುತ್ತದೆ.
    • ಪ್ರಮುಖ ಲಕ್ಷಣ:- ಇದು ಗಾಳಿಗಿಂತ ಭಾರವಾಗಿರುತ್ತದೆ; ಆದ್ದರಿಂದ ಸೋರಿಕೆಯಾದರೆ ನೆಲದ ಮೇಲೆ ಶೇಖರಗೊಳ್ಳುತ್ತದೆ.

    ಕೊಳವೆ ನೈಸರ್ಗಿಕ ಅನಿಲ (PNG):

    • ಅನಿಲಗಳ ಸಂಯೋಜನೆ:- ಪ್ರಾಥಮಿಕವಾಗಿ ‘ಮಿಥೇನ್’.
    • ಸ್ಥಿತಿ ಮತ್ತು ಸಂಗ್ರಹಣೆ:- ಇದನ್ನು ನೆಲದಡಿಯ ಕೊಳವೆಗಳ ಮೂಲಕ ಅನಿಲ ರೂಪದಲ್ಲಿ ವಿತರಿಸಲಾಗುತ್ತದೆ.
    • ಬಳಕೆ:- ಇದನ್ನು ವಸತಿ ಸಮುಚ್ಚಯಗಳ ಅಡುಗೆಕೋಣೆಗಳು, ವಾಣಿಜ್ಯ ಅಡುಗೆ ಮತ್ತು ಕೈಗಾರಿಕೆಗಳಲ್ಲಿ ಬಳಸಲಾಗುತ್ತದೆ.
    • ಪ್ರಮುಖ ಲಕ್ಷಣ:- ಇದು ನಿರಂತರ ಪೂರೈಕೆಯನ್ನು ಒದಗಿಸುತ್ತದೆ; ಆದ್ದರಿಂದ ಯಾವುದೇ ಸಿಲಿಂಡರ್ ಸಂಗ್ರಹಣೆಯ ಅಗತ್ಯವಿರುವುದಿಲ್ಲ.

    ಸಂಕುಚಿತ ನೈಸರ್ಗಿಕ ಅನಿಲ (CNG):

    • ಅನಿಲಗಳ ಸಂಯೋಜನೆ:- ಪ್ರಾಥಮಿಕವಾಗಿ ‘ಮಿಥೇನ್’.
    • ಸ್ಥಿತಿ ಮತ್ತು ಸಂಗ್ರಹಣೆ:- ಇದನ್ನು ಟ್ಯಾಂಕ್‌ಗಳಲ್ಲಿ ಅತಿ ಹೆಚ್ಚಿನ ಒತ್ತಡದಲ್ಲಿ (200-250 bar) ಸಂಕುಚಿತಗೊಳಿಸಿ ಸಂಗ್ರಹಿಸಲಾಗುತ್ತದೆ.
    • ಬಳಕೆ:- ಇದನ್ನು ವಾಹನಗಳಲ್ಲಿ (ಕಾರು, ಬಸ್, ರಿಕ್ಷಾ) ಮತ್ತು ಕಡಿಮೆ-ಒತ್ತಡದ ಕೈಗಾರಿಕಾ ದಹನ ಸಾಧನಗಳಲ್ಲಿ ಬಳಸಲಾಗುತ್ತದೆ.
    • ಪ್ರಮುಖ ಲಕ್ಷಣ:- ಇದು ಪೆಟ್ರೋಲ್ ಅಥವಾ ಡೀಸೆಲ್‌ಗಿಂತ ಹೆಚ್ಚು ಮಾಲಿನ್ಯಮುಕ್ತವಾಗಿ ಮತ್ತು ಶುದ್ಧವಾಗಿ ದಹನಗೊಳ್ಳುತ್ತದೆ.

    ದ್ರವೀಕೃತ ನೈಸರ್ಗಿಕ ಅನಿಲ (LNG):

    • ಅನಿಲಗಳ ಸಂಯೋಜನೆ:- ಪ್ರಾಥಮಿಕವಾಗಿ ‘ಮಿಥೇನ್’.
    • ಸ್ಥಿತಿ ಮತ್ತು ಸಂಗ್ರಹಣೆ:- ಸಾಗಾಣಿಕೆಗಾಗಿ ಇದನ್ನು ದ್ರವರೂಪಕ್ಕೆ ಪರಿವರ್ತಿಸಲು ಸುಮಾರು –160°C ತಾಪಮಾನಕ್ಕೆ ತಂಪುಗೊಳಿಸಲಾಗುತ್ತದೆ.
    • ಬಳಕೆ:- ಸಮುದ್ರ ಮಾರ್ಗದ ಮೂಲಕ ನೈಸರ್ಗಿಕ ಅನಿಲವನ್ನು ದೂರದ ಸ್ಥಳಗಳಿಗೆ ಸಾಗಿಸಲು ಮತ್ತು ವಿದ್ಯುತ್ ಉತ್ಪಾದನೆಗೆ ಇದನ್ನು ಬಳಸಲಾಗುತ್ತದೆ.
    • ಪ್ರಮುಖ ಲಕ್ಷಣ:- ಇದನ್ನು ಬೃಹತ್ ಪ್ರಮಾಣದಲ್ಲಿ ಸುಲಭವಾಗಿ ಸಂಗ್ರಹಿಸಲು, ಇದರ ಗಾತ್ರವನ್ನು 600 ಪಟ್ಟು ಕಡಿಮೆಗೊಳಿಸಲಾಗುತ್ತದೆ.

    ಕೊಳವೆ ನೈಸರ್ಗಿಕ ಅನಿಲದ (PNG) ಕಡೆಗೆ ಭಾರತದ ಒಲವು:

    • ಆಮದು ಅವಲಂಬನೆ ಕಡಿತಗೊಳಿಸಲು:- ಭಾರತವು ತನ್ನ ಎಲ್‌ಪಿಜಿ (LPG) ಅಗತ್ಯತೆಯ ಸುಮಾರು 60% ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ. ಇದರ ಹೆಚ್ಚಿನ ಪಾಲು ಪಶ್ಚಿಮ ಏಷ್ಯಾದಿಂದ ಬರುತ್ತದೆ ಮತ್ತು ಹಾರ್ಮುಜ್ ಜಲಸಂಧಿಯಂತಹ ಪೂರೈಕೆಯ ಮಾರ್ಗಗಳು ಭೂ-ರಾಜಕೀಯವಾಗಿ ಸೂಕ್ಷ್ಮವಾಗಿವೆ.
    • ಸರಕು ಸಾಗಣೆ ವೆಚ್ಚವನ್ನು ಸಂಪೂರ್ಣವಾಗಿ ನಿವಾರಿಸುತ್ತದೆ:- ಸಿಲಿಂಡರ್ ಸಾಗಾಟ ಮತ್ತು ಸಂಗ್ರಹಣೆಗೆ ಸಂಬಂಧಿಸಿದ ವ್ಯವಸ್ಥಾಪನಾ ವೆಚ್ಚವನ್ನು ನಿವಾರಿಸುತ್ತದೆ.
    • ಬೆಲೆಯು ಹೆಚ್ಚು ಸ್ಥಿರವಾಗಿರುತ್ತದೆ:- ಜಾಗತಿಕ ತೈಲ ಬೆಲೆಗಳಿಗೆ ಸೂಕ್ಷ್ಮವಾಗಿರುವ ಎಲ್‌ಪಿಜಿ (LPG) ಬೆಲೆಗೆ ಹೋಲಿಸಿದರೆ, ಪಿಎನ್‌ಜಿ (PNG) ಬೆಲೆಯು ಹೆಚ್ಚು ಸ್ಥಿರವಾಗಿರುತ್ತದೆ.
    • ನೈಸರ್ಗಿಕ ಅನಿಲವು ಎಲ್‌ಪಿಜಿಗಿಂತ (LPG) ಹೆಚ್ಚು ಶುದ್ಧವಾಗಿ ಉರಿಯುತ್ತದೆ:- ಇದು ಕಡಿಮೆ ಮಾಲಿನ್ಯಕಾರಕಗಳು ಮತ್ತು ಹಸಿರುಮನೆ ಅನಿಲಗಳನ್ನು ಉತ್ಪಾದಿಸುತ್ತದೆ.

    ಭಾರತದ ಬಹು-ವಿಪತ್ತು ಮುನ್ನೆಚ್ಚರಿಕೆ ನಿರ್ಧಾರ ಸಹಾಯಕ ವ್ಯವಸ್ಥೆ (MHEW-DSS)

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಭಾರತೀಯ ಹವಾಮಾನ ಇಲಾಖೆಯು (IMD) ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಬಹು-ವಿಪತ್ತು ಮುನ್ನೆಚ್ಚರಿಕೆ ನಿರ್ಧಾರ ಸಹಾಯಕ ವ್ಯವಸ್ಥೆಗಾಗಿ (MHEW-DSS) ಇ-ಆಡಳಿತ 2025ರ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿದೆ.

    ಬಹು-ವಿಪತ್ತು ಮುನ್ನೆಚ್ಚರಿಕೆ ನಿರ್ಧಾರ ಸಹಾಯಕ ವ್ಯವಸ್ಥೆ (MHEW-DSS)ಯ ಬಗ್ಗೆ:

    • 2024 ರಲ್ಲಿ ಪ್ರಾರಂಭಿಸಲಾದ ಸ್ವಯಂಚಾಲಿತ ಡಿಜಿಟಲ್ ವೇದಿಕೆಯಾಗಿದೆ:- ನಿರ್ಣಾಯಕ ಹವಾಮಾನ ಮುನ್ಸೂಚನೆ ಪ್ರಕ್ರಿಯೆಗಳಲ್ಲಿ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಸ್ವಯಂಚಾಲಿತಗೊಳಿಸುತ್ತದೆ. ಇದು ಸಾರ್ವಜನಿಕರು, ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ಹಾಗೂ ನಿರ್ದಿಷ್ಟ ಪಾಲುದಾರರಿಗೆ ಮುನ್ಸೂಚನೆ ಮತ್ತು ಮುನ್ನೆಚ್ಚರಿಕೆ ಸೇವೆಗಳನ್ನು ಒದಗಿಸುತ್ತದೆ.
    • ಮಿಷನ್ ಮೌಸಮ್ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ:- ಈ ವ್ಯವಸ್ಥೆಯು ಹವಾಮಾನ ದತ್ತಾಂಶ ಸಂಸ್ಕರಣೆಯನ್ನು 90% ರಷ್ಟು ಸ್ವಯಂಚಾಲಿತಗೊಳಿಸಿದೆ. ಇದು ಮುನ್ಸೂಚನೆಯ ನಿಖರತೆಯನ್ನು 30% ರಷ್ಟು ಸುಧಾರಿಸಿದೆ ಮತ್ತು ಸಿದ್ಧತೆಯ ಸಮಯವನ್ನು 6 ಗಂಟೆಗಳಿಂದ 3 ಗಂಟೆಗಳಿಗೆ ಇಳಿಸಿದೆ.
    • ನೈಜ-ಸಮಯದ ದತ್ತಾಂಶಗಳನ್ನು ಕೇಂದ್ರೀಕೃತ GIS-ಆಧಾರಿತ ವೇದಿಕೆಗೆ ಸಂಯೋಜಿಸುತ್ತದೆ:- ಇದು ಉಪಗ್ರಹಗಳು, ರಾಡಾರ್‌ಗಳು ಮತ್ತು ಭೂಮಿ ಹಾಗೂ ಮೇಲಿನ ವಾತಾವರಣದ ಸಂವೇದಕಗಳಿಂದ (ಸೆನ್ಸಾರ್ ಗಳು) ಬರುವ ನೈಜ-ಸಮಯದ ದತ್ತಾಂಶಗಳನ್ನು ಸಂಯೋಜಿಸುವ ಮೂಲಕ ಹಳೆಯ ಮಾನವ-ಚಾಲಿತ ಕಾರ್ಯವಿಧಾನಗಳನ್ನು ಇದು ಬದಲಾಯಿಸಿದೆ.

    ಭಾರತೀಯ ಹವಾಮಾನ ಇಲಾಖೆ (IMD)ಯ ಬಗ್ಗೆ:

    • ಇದನ್ನು 1875 ರಲ್ಲಿ ಸ್ಥಾಪಿಸಲಾಯಿತು ಮತ್ತು ಇದು 2025 ರಲ್ಲಿ ತನ್ನ 150 ವರ್ಷಗಳ ಸೇವೆಯನ್ನು ಪೂರೈಸಿದೆ.
    • ಕಾರ್ಯನಿರ್ವಹಣೆ:- ಇದು ಭೂ ವಿಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
    • ಉದ್ದೇಶ:- ಇದು ಭಾರತದಲ್ಲಿ ಹವಾಮಾನ ವೀಕ್ಷಣೆಗಳು, ಹವಾಮಾನ ಮುನ್ಸೂಚನೆ ಮತ್ತು ಭೂಕಂಪನಶಾಸ್ತ್ರಗಳ ಬಗ್ಗೆ ಮಾಹಿತಿ ಒದಗಿಸಿವ ಒಂದು ಜವಾಬ್ದಾರಿಯುತ ಸರ್ಕಾರಿ ಸಂಸ್ಥೆಯಾಗಿದೆ.

    ‘ಮಿಷನ್ ಮೌಸಮ್’ ಉಪಕ್ರಮದ ಬಗ್ಗೆ:

    • ಇದು ಭೂ ವಿಜ್ಞಾನ ಸಚಿವಾಲಯವು (MoES) ಪ್ರಾರಂಭಿಸಿದ ಮಹತ್ವಾಕಾಂಕ್ಷೆಯ ಬಹುಮುಖಿ ಉಪಕ್ರಮವಾಗಿದೆ.
    • ಗುರಿ:- ಇದು ದೇಶವನ್ನು “ಹವಾಮಾನ-ಸಿದ್ಧ ಮತ್ತು ಹವಾಮಾನ-ಸ್ಮಾರ್ಟ್” ರಾಷ್ಟ್ರವನ್ನಾಗಿ ಪರಿವರ್ತಿಸುವುದು.
    • ಉದ್ದೇಶ:- ಹವಾಮಾನ ಮುನ್ಸೂಚನೆಗಳ ನಿಖರತೆ ಮತ್ತು ಮುನ್ನೆಚ್ಚರಿಕೆ ನೀಡುವ ಸಮಯವನ್ನು ಗಣನೀಯವಾಗಿ ಸುಧಾರಿಸುವುದು.

    ಇಂಡೋನೇಷ್ಯಾ

    ಭೂಗೋಳ

    ಇತ್ತೀಚೆಗೆ ಸುದ್ದಿಯಲ್ಲಿದೆ

    • ಇಂಡೋನೇಷ್ಯಾದ ಟರ್ನೇಟ್ ದ್ವೀಪದ ಸಮೀಪವಿರುವ ಉತ್ತರ ಮೊಲುಕ್ಕಾ ಸಮುದ್ರದಲ್ಲಿ 7.4 ತೀವ್ರತೆಯ ಭೂಕಂಪ ಸಂಭವಿಸಿದೆ.

    ಇಂಡೋನೇಷ್ಯಾ ದೇಶದ ಬಗ್ಗೆ:

    • ಜಗತ್ತಿನ ಅತ್ಯಂತ ದೊಡ್ಡ ದ್ವೀಪಸಮೂಹ ರಾಷ್ಟ್ರವಾಗಿದೆ:- ಇದು ಆಗ್ನೇಯ ಏಷ್ಯಾದ ಪ್ರಮುಖ ಭೂಭಾಗದ ಸಮೀಪ, ಹಿಂದೂ ಮತ್ತು ಪೆಸಿಫಿಕ್ ಮಹಾಸಾಗರಗಳ ನಡುವೆ ನೆಲೆಗೊಂಡಿದೆ.
    • ಪ್ರಮುಖ ದ್ವೀಪಗಳು:- ಸುಮಾತ್ರಾ, ಜಾವಾ, ಕಾಲಿಮಂತನ್ (ಬೋರ್ನಿಯೊ), ಸುಲವೇಸಿ ಮತ್ತು ಪಪುವಾ.
    • ಗಡಿ ಹಂಚಿಕೆ:- ಪೂರ್ವ ಟಿಮೋರ್ (ಟಿಮೋರ್-ಲೆಸ್ಟೆ), ಪಪುವಾ ನ್ಯೂಗಿನಿಯಾ ಮತ್ತು ಮಲೇಷ್ಯಾದೊಂದಿಗೆ ಭೂ ಗಡಿಗಳನ್ನು ಹಂಚಿಕೊಂಡಿದೆ.
    • ರಾಜಧಾನಿ:- ಜಕಾರ್ತಾ (ಜಾವಾ ದ್ವೀಪದಲ್ಲಿದೆ); ಹೊಸ ರಾಜಧಾನಿಯಾಗಿ ಕಾಲಿಮಂತನನಲ್ಲಿರುವ ನುಸಂತಾರಾವನ್ನು (Nusantara) ಅಭಿವೃದ್ಧಿಪಡಿಸಲಾಗುತ್ತಿದೆ.
    • ಪೆಸಿಫಿಕ್ ರಿಂಗ್ ಆಫ್ ಫೈರ್ ಪ್ರದೇಶದಲ್ಲಿ ನೆಲೆಗೊಂಡಿದೆ:- ಇದು ಭೂಕಂಪನಗಳ ಸಕ್ರಿಯ ವಲಯವಾಗಿದ್ದು, ಪ್ರಪಂಚದ ಸುಮಾರು 90% ರಷ್ಟು ಭೂಕಂಪಗಳು ಇಲ್ಲಿಯೇ ಸಂಭವಿಸುತ್ತವೆ.
    • ಇತ್ತೀಚೆಗೆ ಭೂಕಂಪ ಸಂಭವಿಸಿದ ಮೊಲುಕ್ಕಾ ಸಮುದ್ರವು ಇಂಡೋನೇಷ್ಯಾದ ಉತ್ತರ ಭಾಗದಲ್ಲಿರುವ ಅತ್ಯಂತ ಸಕ್ರಿಯವಾದ ಭೂಪಟಲ ಚಲನೆಯ ಪ್ರದೇಶವಾಗಿದೆ.

    ಪೆಸಿಫಿಕ್ ‘ರಿಂಗ್ ಆಫ್ ಫೈರ್’ (ಅಗ್ನಿವಲಯ)ನ ಬಗ್ಗೆ:

    • ಪೆಸಿಫಿಕ್ ಮಹಾಸಾಗರ ಸುತ್ತುವರಿದ ವಲಯ (ಸರ್ಕ್ಯೂಮ್ -ಪೆಸಿಫಿಕ್ ಬೆಲ್ಟ್) ಎಂತಲೂ ಕರೆಯುತ್ತಾರೆ:- ಇದು ಪೆಸಿಫಿಕ್ ಮಹಾಸಾಗರದ ಅಂಚುಗಳ ಸುತ್ತಲಿನ ಕುದುರೆ-ಲಾಳದ ಆಕಾರದ ಪ್ರದೇಶವಾಗಿದೆ.
    • ಇದನ್ನು ಅದರ ಆಕಾರದಿಂದಾಗಿ ‘ಕುದುರೆ-ಲಾಳದ ಆಕಾರದ ಪಟ್ಟಿ’ ಎಂತಲೂ ಕರೆಯುತ್ತಾರೆ
    • ಲಕ್ಷಣಗಳು:- ಇಲ್ಲಿ ಪ್ರಪಂಚದ ಅತ್ಯಂತ ಹೆಚ್ಚು ಅಂದರೆ 90% ಭೂಕಂಪಗಳು ಮತ್ತು 75% ಕ್ಕಿಂತ ಹೆಚ್ಚು ಜ್ವಾಲಾಮುಖಿ ಸ್ಫೋಟಗಳು ಸಂಭವಿಸುತ್ತವೆ. ಅಂದರೆ 450 ಕ್ಕೂ ಹೆಚ್ಚು ಜ್ವಾಲಾಮುಖಿಗಳು ರಿಂಗ್ ಆಫ್ ಫೈರ್‌ನ ಅಂಚಿನುದ್ದಕ್ಕೂ ನೆಲೆಗೊಂಡಿವೆ.
    • ಅತ್ಯಂತ ಸಕ್ರಿಯವಾದ ಭೂಪಟಲ ಚಲನೆಯು ಈ ಪ್ರಕ್ರಿಯೆಗಳಿಗೆ ಕಾರಣವಾಗಿದೆ:- ಈ ಪ್ರದೇಶದಲ್ಲಿನ ಟೆಕ್ಟಾನಿಕ್ ಭೂ ಫಲಕಗಳ ನಿರಂತರ ಚಲನೆಯೇ, ರಿಂಗ್ ಆಫ್ ಫೈರ್‌ನ ಅಂಚಿನುದ್ದಕ್ಕೂ ಜ್ವಾಲಾಮುಖಿಗಳು ಮತ್ತು ಭೂಕಂಪಗಳು ಹೇರಳವಾಗಿ ಕಂಡುಬರಲು ಪ್ರಮುಖ ಕಾರಣವಾಗಿದೆ.

    ಭಾರತದಲ್ಲಿನ ಜ್ವಾಲಾಮುಖಿಗಳು:

    • ಬ್ಯಾರೆನ್ ದ್ವೀಪ, ಅಂಡಮಾನ್ ದ್ವೀಪಗಳು (ಇದು ಭಾರತದ ಏಕೈಕ ಸಕ್ರಿಯ ಜ್ವಾಲಾಮುಖಿಯಾಗಿದೆ)
    • ನಾರ್ಕೊಂಡಮ್, ಅಂಡಮಾನ್ ದ್ವೀಪಗಳು
    • ಬಾರಾಟಾಂಗ್, ಅಂಡಮಾನ್ ದ್ವೀಪಗಳು
    • ದಖ್ಖನ್ ಲಾವಾ ಸ್ತರಗಳು (ಡೆಕ್ಕನ್ ಟ್ರ್ಯಾಪ್ಸ್), ಮಹಾರಾಷ್ಟ್ರ

    ‘NCERT’ಗೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಮಾನ್ಯತೆ

    ಸರ್ಕಾರಿ ಉಪಕ್ರಮಗಳು

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಶಿಕ್ಷಣ ಸಚಿವಾಲಯವು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT)ಯನ್ನು ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ ಎಂದು ಘೋಷಿಸಿದೆ.

    ಈ ನಿರ್ಧಾರದ ಪ್ರಭಾವ:

    • ಪದವಿಗಳನ್ನು ಪ್ರದಾನ ಮಾಡಬಹುದು:- ಹಾಗೆಯೇ ಈ ಮಾನ್ಯತೆಯಿಂದಾಗಿ NCERT ಯು ಈಗ ಹೊಸ ಪಠ್ಯಕ್ರಮಗಳು ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ಪ್ರಾರಂಭಿಸಬಹುದು.
    • ಸಂಶೋಧನಾ ಕಾರ್ಯಕ್ರಮಗಳು, ಡಾಕ್ಟರೇಟ್ ಕಾರ್ಯಕ್ರಮಗಳು ಮತ್ತು ನವೀನ ಶೈಕ್ಷಣಿಕ ಕಾರ್ಯಕ್ರಮಗಳನ್ನು ಪ್ರಾರಂಭಿಸುವಂತೆಯೂ ಸಂಸ್ಥೆಯನ್ನು ಕೇಳಿಕೊಳ್ಳಲಾಗಿದೆ.
    • ಯುಜಿಸಿ (UGC) ನಿಯಮಗಳು ಮತ್ತು ನಿಬಂಧನೆಗಳು ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಕ್ಕೆ ಅನುಗುಣವಾಗಿ, NCERT ಇತರ ಶೈಕ್ಷಣಿಕ ಕ್ಷೇತ್ರಗಳಿಗೂ ಕ್ರಮೇಣ ತನ್ನ ವ್ಯಾಪ್ತಿಯನ್ನು ವಿಸ್ತರಿಸಬೇಕು ಎಂದು ಸೂಚಿಸಲಾಗಿದೆ.

    ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT)ಯ ಬಗ್ಗೆ:

    • ಇದು 1961 ರಲ್ಲಿ ಸ್ಥಾಪನೆಯಾದ ಒಂದು ಸ್ವಾಯತ್ತ ಸಂಸ್ಥೆಯಾಗಿದೆ.
    • ಧ್ಯೇಯೋದ್ದೇಶ:- ಶಾಲಾ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ಉದ್ದೇಶವನ್ನು ಹೊಂದಿರುವ ನೀತಿಗಳು ಮತ್ತು ಕಾರ್ಯಕ್ರಮಗಳ ಕುರಿತು ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಅಗತ್ಯ ಸಹಾಯ ಹಾಗೂ ಸಲಹೆಗಳನ್ನು ನೀಡುತ್ತದೆ.

    NCERT ಯ ಪ್ರಮುಖ ಪಾತ್ರಗಳು ಮತ್ತು ಕಾರ್ಯಗಳು:

    • ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನು (NCF) ಅಭಿವೃದ್ಧಿಪಡಿಸುವ ನೋಡಲ್ ಸಂಸ್ಥೆಯಾಗಿದೆ:- ಇದು ಭಾರತದಲ್ಲಿ ಶಾಲಾ ಶಿಕ್ಷಣದ ಗುಣಮಟ್ಟವನ್ನು ನಿಗದಿಪಡಿಸುತ್ತದೆ.
    • ಪಠ್ಯಪುಸ್ತಕಗಳ ಪ್ರಕಟಣೆ:- ಇದು ಇಂಗ್ಲಿಷ್, ಹಿಂದಿ ಮತ್ತು ಉರ್ದು ಭಾಷೆಗಳಲ್ಲಿ I ರಿಂದ XII ನೇ ತರಗತಿಗಳಿಗೆ ಮಾದರಿ ಪಠ್ಯಪುಸ್ತಕಗಳನ್ನು ಪ್ರಕಟಿಸುತ್ತದೆ. ಈ ಪುಸ್ತಕಗಳನ್ನು ಸಿಬಿಎಸ್‌ಇ (CBSE) ಸಂಯೋಜಿತ ಶಾಲೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ ಮತ್ತು ಯುಪಿಎಸ್‌ಸಿ (UPSC), ಜೆಇಇ (JEE) ಹಾಗೂ ನೀಟ್ (NEET) ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇವು ಅತ್ಯಗತ್ಯವಾಗಿವೆ.
    • ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ:- ಇದು ಶಾಲಾ ಶಿಕ್ಷಣದಲ್ಲಿ ಸಂಶೋಧನೆಯನ್ನು ಉತ್ತೇಜಿಸುತ್ತದೆ ಮತ್ತು ಶಿಕ್ಷಕರಿಗೆ ಸೇವಾ-ಪೂರ್ವ ಹಾಗೂ ಸೇವಾನಿರತ ತರಬೇತಿಯನ್ನು ಒದಗಿಸುತ್ತದೆ.
    • ಡಿಜಿಟಲ್ ಉಪಕ್ರಮಗಳು:- ಇ-ಪಾಠಶಾಲಾ ಮತ್ತು ದೀಕ್ಷಾ (DIKSHA) ದಂತಹ ವೇದಿಕೆಗಳ ಮೂಲಕ, ಇದು ಪಠ್ಯಪುಸ್ತಕಗಳು, ಆಡಿಯೋ ಮತ್ತು ವಿಡಿಯೋ ಸಂಪನ್ಮೂಲಗಳಿಗೆ ಉಚಿತ ಡಿಜಿಟಲ್ ಪ್ರವೇಶವನ್ನು ನೀಡುತ್ತದೆ.
  • ವಿದೇಶಿ ದೇಣಿಗೆ ನಿಯಂತ್ರಣ (ತಿದ್ದುಪಡಿ) ಮಸೂದೆ, 2026 | ದಿವಾಳಿತನ ಮತ್ತು ದಿವಾಳಿಕೊರತನ ಸಂಹಿತೆ ಮಸೂದೆ, 2026 | ಕ್ಯೂಡೆಂಗಾ (Qdenga – TAK-003) – ಡೆಂಗ್ಯೂ ಲಸಿಕೆ | “GLP-1 ಔಷಧಿ” – ಮಧುಮೇಹ ಮತ್ತು ಬೊಜ್ಜು ಚಿಕಿತ್ಸೆ | ಪ್ರಧಾನ ಮಂತ್ರಿ ಆವಾಸ ಯೋಜನೆ – ಗ್ರಾಮೀಣ (PMAY-G) | ಜನ್ ವಿಶ್ವಾಸ್ (ನಿಬಂಧನೆಗಳ ತಿದ್ದುಪಡಿ) ಮಸೂದೆ, 2026 | E-3 ಸೆಂಟ್ರಿ – ವಾಯುಗಾಮಿ ಮುನ್ಸೂಚನೆ ಮತ್ತು ನಿಯಂತ್ರಣ ವ್ಯವಸ್ಥೆ (AWACS)

    ವಿದೇಶಿ ದೇಣಿಗೆ ನಿಯಂತ್ರಣ (ತಿದ್ದುಪಡಿ) ಮಸೂದೆ, 2026

    ರಾಜಕೀಯ ಮತ್ತು ಆಡಳಿತ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇತ್ತೀಚೆಗೆ, ಕೇಂದ್ರ ಸರ್ಕಾರವು ವಿದೇಶಿ ದೇಣಿಗೆ ನಿಯಂತ್ರಣ (FCRA) ತಿದ್ದುಪಡಿ ಮಸೂದೆ, 2026 ಕುರಿತು ಚರ್ಚೆಯನ್ನು ಮುಂದೂಡಿದ್ದು, ವಿಶೇಷವಾಗಿ ಕೇರಳ ವಿಧಾನಸಭಾ ಚುನಾವಣೆಗೆ ಮುನ್ನ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

    ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ (FCRA)ಯ ಬಗ್ಗೆ:

    • ಧ್ಯೇಯೋದ್ದೇಶ :- ಇದು ಭಾರತದಲ್ಲಿನ ವ್ಯಕ್ತಿಗಳು, ಸರ್ಕಾರೇತರ ಸಂಸ್ಥೆಗಳು (NGOs) ಮತ್ತು ಸಂಘ-ಸಂಸ್ಥೆಗಳು ವಿದೇಶಿ ನಿಧಿಗಳನ್ನು ಸ್ವೀಕರಿಸುವುದನ್ನು ಮತ್ತು ಬಳಸಿಕೊಳ್ಳುವುದನ್ನು ನಿಯಂತ್ರಿಸುವ ಪ್ರಮುಖ ಕಾನೂನಾಗಿದೆ.
    • ಇದನ್ನು ಕೇಂದ್ರ ಗೃಹ ಸಚಿವಾಲಯವು (MoHA) ನಿರ್ವಹಿಸುತ್ತದೆ.
    • ಪ್ರಾಮುಖ್ಯತೆ:- ವಿದೇಶಿ ದೇಣಿಗೆಗಳು ರಾಷ್ಟ್ರೀಯ ಹಿತಾಸಕ್ತಿ, ಸಾರ್ವಭೌಮತೆ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರದಂತೆ ನೋಡಿಕೊಳ್ಳುವುದು.

    FCRA (ತಿದ್ದುಪಡಿ) ಮಸೂದೆ, 2026 ರ ಪ್ರಮುಖ ನಿಬಂಧನೆಗಳು:

    • ವಿದೇಶಿ ನಿಧಿಗಳು ಮತ್ತು ಆಸ್ತಿಗಳನ್ನು ವಶಪಡಿಸಿಕೊಳ್ಳಲು ಹೊಸ “ನಿಯೋಜಿತ ಪ್ರಾಧಿಕಾರ”:- NGO ಒಂದರ ನೋಂದಣಿಯನ್ನು ರದ್ದುಗೊಳಿಸಿದರೆ, ಒಪ್ಪಿಸಿದರೆ ಅಥವಾ ನೋಂದಣಿ ಅವಧಿ ಮುಗಿದು ನವೀಕರಣಗೊಳ್ಳದಿದ್ದರೆ, ಈ ಪ್ರಾಧಿಕಾರವು ಮಧ್ಯಪ್ರವೇಶಿಸಿ ಅದರ ಎಲ್ಲಾ ವಿದೇಶಿ ನಿಧಿಗಳು ಮತ್ತು ಆಸ್ತಿಗಳನ್ನು (ವಿದೇಶಿ ಹಣದಿಂದ ಖರೀದಿಸಿದ ಕಟ್ಟಡಗಳು ಅಥವಾ ಉಪಕರಣಗಳು) ತನ್ನ ವಶಕ್ಕೆ ತೆಗೆದುಕೊಳ್ಳಬಹುದು.
      • ಶಾಶ್ವತ ಸ್ವಾಧೀನ:- ನಿರ್ದಿಷ್ಟ ಕಾಲಮಿತಿಯೊಳಗೆ ನೋಂದಣಿಯನ್ನು ಮರುಸ್ಥಾಪಿಸದಿದ್ದರೆ, ಸರ್ಕಾರವು ಈ ಆಸ್ತಿಗಳನ್ನು ಶಾಶ್ವತವಾಗಿ ಮುಟ್ಟುಗೋಲು ಹಾಕಿಕೊಳ್ಳಬಹುದು, ಮಾರಾಟ ಮಾಡಬಹುದು ಅಥವಾ ಇತರ ಸರ್ಕಾರಿ ಇಲಾಖೆಗಳಿಗೆ ವರ್ಗಾಯಿಸಬಹುದು.
    • “ಪ್ರಮುಖ ಪದಾಧಿಕಾರಿಗಳ” ವೈಯಕ್ತಿಕ ಹೊಣೆಗಾರಿಕೆ:-
      • ಈ ಮಸೂದೆಯು “ಪ್ರಮುಖ ಪದಾಧಿಕಾರಿ” ಎಂಬ ವ್ಯಾಖ್ಯಾನವನ್ನು ವಿಸ್ತರಿಸಿದ್ದು, ಇದು ನಿರ್ದೇಶಕರು, ಪಾಲುದಾರರು, ಟ್ರಸ್ಟಿಗಳು ಮತ್ತು ನಿರ್ವಹಣಾ ಹಂತದಲ್ಲಿರುವ ಪ್ರತಿಯೊಬ್ಬರನ್ನು ಒಳಗೊಳ್ಳುತ್ತದೆ.
    • ನೋಂದಣಿಯ ಸ್ವಯಂಚಾಲಿತ ಮುಕ್ತಾಯ:-
      • ಕಾರ್ಯವಿಧಾನ:- ಹೊಸ ನಿಯಮಗಳ ಅಡಿಯಲ್ಲಿ, FCRA ನೋಂದಣಿಯ ಅವಧಿ ಮುಗಿದು ನವೀಕರಣಗೊಳ್ಳದಿದ್ದರೆ ಅಥವಾ ನವೀಕರಣ ಕೋರಿಕೆಯನ್ನು ತಿರಸ್ಕರಿಸಿದರೆ, ನೋಂದಣಿಯು ಸ್ವಯಂಚಾಲಿತವಾಗಿ ರದ್ದಾಗುತ್ತದೆ.
      • ಕಟ್ಟುನಿಟ್ಟಾದ ಕಾಲಮಿತಿ:- ಸಂಸ್ಥೆಗಳು ತಾವು ಸ್ವೀಕರಿಸುವ ವಿದೇಶಿ ಹಣವನ್ನು ಎಷ್ಟು ಬೇಗನೆ ಬಳಸಿಕೊಳ್ಳಬೇಕು ಎಂಬುದಕ್ಕೆ ಈ ಮಸೂದೆಯು ನಿಗದಿತ ಕಾಲಮಿತಿಗಳನ್ನು ನಿಗದಿಪಡಿಸುತ್ತದೆ.
    • ತನಿಖೆ ಮತ್ತು ದಂಡನೆಗಳ ಕುರಿತಾದ ಬದಲಾವಣೆಗಳು:-
      • ಕೇಂದ್ರ ಸರ್ಕಾರದ ಪೂರ್ವಾನುಮತಿಯನ್ನು ಪಡೆಯುವುದು ಕಡ್ಡಾಯವಾಗಿದೆ:- FCRA-ಸಂಬಂಧಿತ ದೂರಿನ ಮೇಲೆ ತನಿಖೆಯನ್ನು ಪ್ರಾರಂಭಿಸುವ ಮೊದಲು ಸ್ಥಳೀಯ ಪೊಲೀಸ್ ಅಥವಾ ರಾಜ್ಯ ತನಿಖಾ ಸಂಸ್ಥೆಗಳು ಕಡ್ಡಾಯವಾಗಿ ಪಾಲಿಸಬೇಕು.
      • ಜೈಲು ಶಿಕ್ಷೆಯನ್ನು 5 ವರ್ಷಗಳಿಂದ 1 ವರ್ಷಕ್ಕೆ ಇಳಿಸಲಾಗಿದೆ:- FCRA ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ, ದಂಡದ ನಿಯಮಗಳು ಹಾಗೆಯೇ ಮುಂದುವರಿಯಲಿದ್ದು, ನೀಡಲಾಗುವ ಗರಿಷ್ಠ ಜೈಲು ಶಿಕ್ಷೆಯನ್ನು ಇಳಿಸಲಾಗಿದೆ.

    ದಿವಾಳಿತನ ಮತ್ತು ದಿವಾಳಿಕೊರತನ ಸಂಹಿತೆ ಮಸೂದೆ, 2026

    ಆರ್ಥಿಕತೆ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ಭಾರತದ ಸಂಸತ್ತು ‘ದಿವಾಳಿತನ ಮತ್ತು ದಿವಾಳಿಕೊರತನ ಸಂಹಿತೆ (ತಿದ್ದುಪಡಿ) ಮಸೂದೆ, 2026’ (IBC Bill, 2026) ಅನ್ನು ಅಂಗೀಕರಿಸಿದೆ.

    ದಿವಾಳಿತನ ಮತ್ತು ದಿವಾಳಿಕೊರತನ ಸಂಹಿತೆ (IBC), 2016 ರ ಬಗ್ಗೆ:

    • ಕಂಪನಿಗಳು ಮತ್ತು ವ್ಯಕ್ತಿಗಳು ಎದುರಿಸುವ ದಿವಾಳಿ ಸಮಸ್ಯೆಗಳನ್ನು ಬಗೆಹರಿಸಲು ಈ ಸಂಹಿತೆಯು ಕಟ್ಟುನಿಟ್ಟಾದ ಹಾಗೂ ನಿಗದಿತ ಕಾಲಮಿತಿಯ ಕಾನೂನು ಪ್ರಕ್ರಿಯೆಯನ್ನು ಒದಗಿಸುತ್ತದೆ.
    • ದಿವಾಳಿತನ (Insolvency) ಎಂದರೇನು?
    • ವ್ಯಕ್ತಿಗಳು ಅಥವಾ ಕಂಪನಿಗಳು ತಾವು ಪಡೆದ ಸಾಲವನ್ನು ಮರುಪಾವತಿಸಲು ಸಾಧ್ಯವಾಗದ ‘ಆರ್ಥಿಕ ಪರಿಸ್ಥಿತಿ’ಯನ್ನು ದಿವಾಳಿತನ ಎಂದು ಕರೆಯಲಾಗುತ್ತದೆ.
    • ದಿವಾಳಿಕೊರತನ (Bankruptcy) ಎಂದರೇನು?
    • ಸಕ್ಷಮ ನ್ಯಾಯಾಲಯವು ವ್ಯಕ್ತಿ ಅಥವಾ ಸಂಸ್ಥೆಯನ್ನು ‘ದಿವಾಳಿ’ ಎಂದು ಅಧಿಕೃತವಾಗಿ ಘೋಷಿಸುವ ಹಾಗೂ ಸಾಲದಾತರ ಹಕ್ಕುಗಳನ್ನು ರಕ್ಷಿಸಲು ಸೂಕ್ತ ಆದೇಶಗಳನ್ನು ನೀಡುವ ‘ಕಾನೂನಾತ್ಮಕ ಪ್ರಕ್ರಿಯೆ‘ಯೇ ದಿವಾಳಿಕೊರತನವಾಗಿದೆ. ಅಂದರೆ, ಸಾಲ ತೀರಿಸಲಾಗದ ಅಸಹಾಯಕ ಸ್ಥಿತಿಯ ಕಾನೂನುಬದ್ಧ ಘೋಷಣೆ ಇದಾಗಿದೆ.
    • ಪ್ರಮುಖ ಗುರಿಗಳು:- 
      1. ಆರ್ಥಿಕವಾಗಿ ಸಂಕಷ್ಟದಲ್ಲಿರುವ ವಲಯಗಳಲ್ಲಿ ಹೂಡಿಕೆಯನ್ನು ಉತ್ತೇಜಿಸುವುದು.
    • ಕಾರ್ಪೊರೇಟ್ ದಿವಾಳಿತನ ಇತ್ಯರ್ಥ ಪ್ರಕ್ರಿಯೆಯನ್ನು ಸುಗಮಗೊಳಿಸುವುದು.
    • ಅಂತಿಮ ಹಂತದ ಹಣಕಾಸು ನೆರವನ್ನು ರಕ್ಷಿಸುವುದು.
    • ನ್ಯಾಯನಿರ್ಣಯ ಪ್ರಾಧಿಕಾರಗಳು:-
    • ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯು (NCLT) ಕಂಪನಿಗಳು ಮತ್ತು ಸೀಮಿತ ಹೊಣೆಗಾರಿಕೆ ಪಾಲುದಾರಿಕೆಗಳಿಗೆ (LLPs) ನ್ಯಾಯನಿರ್ಣಯ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುತ್ತದೆ.
    • ಸಾಲ ವಸೂಲಾತಿ ನ್ಯಾಯಮಂಡಳಿಯು (DRT), ವ್ಯಕ್ತಿಗಳು ಮತ್ತು ಪಾಲುದಾರಿಕಾ ಸಂಸ್ಥೆಗಳ ಪ್ರಕರಣಗಳನ್ನು ನಿರ್ವಹಿಸುತ್ತದೆ.

    IBC(ತಿದ್ದುಪಡಿ) ಮಸೂದೆ, 2026 ರ ಪ್ರಮುಖ ಲಕ್ಷಣಗಳು:

    • 30 ದಿನಗಳೊಳಗೆ NCLT ಕಂಪನಿಯ ಆಸ್ತಿಗಳ ನಗದೀಕರಣ ಆದೇಶವನ್ನು ಹೊರಡಿಸಬೇಕು:- ಅರ್ಜಿಯನ್ನು ಸಲ್ಲಿಸಿದ ಅಥವಾ ಮಾಹಿತಿ ನೀಡಿದ ದಿನಾಂಕದಿಂದ ಕಡ್ಡಾಯವಾಗಿ ಆದೇಶವನ್ನು ಹೊರಡಿಸಬೇಕು.
    • ಈ ಸಮಾಪನಾ/ಆಸ್ತಿಗಳ ನಗದೀಕರಣ ಪ್ರಕ್ರಿಯೆಗಳನ್ನು ಕಡ್ಡಾಯವಾಗಿ 180 ದಿನಗಳಲ್ಲಿ ಪೂರ್ಣಗೊಳಿಸಬೇಕು ಮತ್ತು ಅತ್ಯಗತ್ಯವಿದ್ದಲ್ಲಿ ಇದನ್ನು ಗರಿಷ್ಠ 90 ದಿನಗಳವರೆಗೆ ಮಾತ್ರ ವಿಸ್ತರಿಸಬಹುದು ಎಂದು ಮಸೂದೆ ಸ್ಪಷ್ಟಪಡಿಸುತ್ತದೆ.
    • ಕಡ್ಡಾಯ ಅಂಗೀಕಾರ:- ಸಾಲ ಮರುಪಾವತಿಯಲ್ಲಿನ ‘ಸುಸ್ತಿದಾರಿಕೆ’ ಸಾಬೀತಾದರೆ ಮತ್ತು ಅರ್ಜಿಯು ಸಂಪೂರ್ಣವಾಗಿದ್ದರೆ, NCLT 14 ದಿನಗಳೊಳಗೆ ದಿವಾಳಿತನದ ಅರ್ಜಿಯನ್ನು ಕಡ್ಡಾಯವಾಗಿ ಅಂಗೀಕರಿಸಬೇಕು. ಇದು ಈ ಕಾಲಮಿತಿಯ ವಿಚಾರದಲ್ಲಿ ನ್ಯಾಯಾಂಗದ ವಿವೇಚನಾಧಿಕಾರವನ್ನು ತೆಗೆದುಹಾಕುತ್ತದೆ.
    • ಗಡಿಯಾಚೆಗಿನ ದಿವಾಳಿತನ:- ವಿದೇಶಿ ಆಸ್ತಿಗಳು ಅಥವಾ ವಿದೇಶಿ ಸಾಲದಾತರನ್ನು ಒಳಗೊಂಡಿರುವ ದಿವಾಳಿತನ ಪ್ರಕರಣಗಳನ್ನು ತ್ವರಿತವಾಗಿ ನಿಭಾಯಿಸಲು ಈ ಮಸೂದೆಯು ಹೊಸ ಕಾನೂನು ಚೌಕಟ್ಟೊಂದನ್ನು ಪರಿಚಯಿಸುತ್ತದೆ.

    ಕ್ಯೂಡೆಂಗಾ (Qdenga – TAK-003) – ಡೆಂಗ್ಯೂ ಲಸಿಕೆ

    ಆರೋಗ್ಯ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ಜಪಾನಿನ ‘ಟಕೆಡಾ ಫಾರ್ಮಾಸ್ಯುಟಿಕಲ್ ಕಂಪನಿ’ ಅಭಿವೃದ್ಧಿಪಡಿಸಿದ ‘ಕ್ಯೂಡೆಂಗಾ’ (Qdenga) ಲಸಿಕೆಗೆ ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನಾಲಯವು (DCGI) ಅನುಮೋದನೆ ನೀಡಿದೆ.
    • ಇದು 4 ರಿಂದ 60 ವರ್ಷ ವಯಸ್ಸಿನ ವ್ಯಕ್ತಿಗಳ ಬಳಕೆಗೆ ಮಂಜೂರಾತಿಯನ್ನು ಪಡೆದುಕೊಂಡಿದೆ.

    ಕ್ಯೂಡೆಂಗಾ (TAK-003) ಡೆಂಗ್ಯೂ ಲಸಿಕೆಯ ಬಗ್ಗೆ:

    • ಜೀವಂತ-ದೌರ್ಬಲ್ಯಗೊಳಿಸಿದ (ಲೈವ್-ಅಟೆನ್ಯುವೇಟೆಡ್) ಮತ್ತು ಡೆಂಗ್ಯೂವಿನ ಎಲ್ಲಾ 4 ರೂಪಾoತರಗಳ ವಿರುದ್ಧ ಪರಿಣಾಮಕಾರಿ (ಟೆಟ್ರಾವೇಲೆಂಟ್) ಲಸಿಕೆಯಾಗಿದೆ:- ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸಲು ಡೆಂಗ್ಯೂ ವೈರಾಣುವಿನ ಎಲ್ಲಾ 4 ರೂಪಾoತರಗಳ (Serotypes – DENV-1, DENV-2, DENV-3, ಮತ್ತು DENV-4) ದುರ್ಬಲಗೊಂಡ ರೂಪಗಳನ್ನು ಒಳಗೊಂಡಿದೆ.

    ‘ಡೆಂಗಿಆಲ್’ (DengiAll):- ಭಾರತದ ಮೊಟ್ಟಮೊದಲ ದೇಶೀಯ ಡೆಂಗ್ಯೂ ಲಸಿಕೆ

    • ಸಂಪೂರ್ಣ ದೇಶೀಯವಾಗಿ ತಯಾರಾಗುತ್ತಿರುವ, ಡೆಂಗ್ಯೂವಿನ ಎಲ್ಲಾ 4 ರೂಪಾoತರಗಳ ವಿರುದ್ಧ ಪರಿಣಾಮಕಾರಿ (ಟೆಟ್ರಾವೇಲೆಂಟ್) ಮತ್ತು ಒಂದೇ ಬಾರಿ ನೀಡುವ ಡೆಂಗ್ಯೂ ಲಸಿಕೆಯಾಗಿದೆ.
    • ಇದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) ಸಹಯೋಗದೊಂದಿಗೆ ‘ಪನಾಸಿಯಾ ಬಯೋಟೆಕ್’ ಸಂಸ್ಥೆಯು ಅಭಿವೃದ್ಧಿಪಡಿಸುತ್ತಿದೆ.
    • ಇದು ಡೆಂಗ್ಯೂವಿನ ಎಲ್ಲಾ 4 ರೂಪಾoತರಗಳ ವಿರುದ್ಧ ಹೋರಾಡಲು ವಿನ್ಯಾಸಗೊಳಿಸಲಾಗಿದ್ದು, ಪ್ರಸ್ತುತ ಇದು ಮೂರನೇ ಹಂತದ ವೈದ್ಯಕೀಯ ಪ್ರಯೋಗಗಳಲ್ಲಿದೆ.

    ‘ಡೆಂಗ್ಯೂ’ ಸೋಂಕಿನ ಬಗ್ಗೆ:

    • ರೋಗಕಾರಕ:- ಡೆಂಗ್ಯೂ ಎಂಬುದು ಡೆಂಗ್ಯೂ ವೈರಾಣುವಿನಿಂದ (DENV) ಉಂಟಾಗುವ ವೈರಾಣು ಸೋಂಕಾಗಿದೆ. 
    • ಈ ಡೆಂಗ್ಯೂ ವೈರಾಣು ‘ಫ್ಲಾವಿವಿರಿಡೆ’ ಕುಟುಂಬಕ್ಕೆ ಸೇರಿದ RNA ವೈರಾಣು ಆಗಿದ್ದು, ಎಲ್ಲಾ 4 ರೂಪಾoತರಗಳನ್ನು (DENV-1 ರಿಂದ 4 ರವರೆಗೆ) ಹೊಂದಿದೆ.
    • ರೋಗಲಕ್ಷಣಗಳು:- ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು, ಸ್ನಾಯು ಮತ್ತು ಕೀಲು ನೋವು, ವಾಕರಿಕೆ, ವಾಂತಿ, ಊದಿಕೊಂಡ ಗ್ರಂಥಿಗಳು ಮತ್ತು ಚರ್ಮದ ಮೇಲಿನ ದದ್ದುಗಳು ಇದರ ಪ್ರಮುಖ ಲಕ್ಷಣಗಳಾಗಿವೆ.
    • ಮನುಷ್ಯರಿಗೆ ಹರಡುವಿಕೆ:- ಸೋಂಕಿತ ಹೆಣ್ಣು ಸೊಳ್ಳೆಗಳ, ಅದರಲ್ಲೂ ಪ್ರಾಥಮಿಕವಾಗಿ ‘ಈಡಿಸ್ ಈಜಿಪ್ಟೈ’ ಸೊಳ್ಳೆಯ ಕಚ್ಚುವಿಕೆಯ ಮೂಲಕ ಈ ವೈರಸ್ ಮನುಷ್ಯರಿಗೆ ಹರಡುತ್ತದೆ.
    • ಗರ್ಭಿಣಿ ತಾಯಿಯಿಂದ ಅವಳ ಮಗುವಿಗೆ ಡೆಂಗ್ಯೂ ಹರಡುವ (ಮ್ಯಾಟರ್ನಲ್ ಟ್ರಾನ್ಸ್‌ಮಿಷನ್) ಸಾಧ್ಯತೆಯಿದೆ. ಜೊತೆಗೆ, ರಕ್ತದ ಉತ್ಪನ್ನಗಳು, ಅಂಗಾಂಗ ದಾನ ಮತ್ತು ರಕ್ತ ವರ್ಗಾವಣೆಯ ಮೂಲಕವೂ ಈ ಸೋಂಕು ಹರಡಬಹುದಾಗಿದೆ.
    • ಯಾವುದೇ ನಿರ್ದಿಷ್ಟವಾದ ವೈರಣು ವಿರೋಧಿ ಚಿಕಿತ್ಸೆ ಇಲ್ಲ:- ಆದ್ದರಿಂದ ಸೊಳ್ಳೆಗಳ ಸಂತತಿಯನ್ನು ನಿಯಂತ್ರಿಸುವುದು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದೇ ಪ್ರಮುಖ ತಡೆಗಟ್ಟುವಿಕೆಯ ವಿಧಾನವಾಗಿದೆ.
    • ಡೆಂಗ್ಯೂ ಹರಡುವ ಸೊಳ್ಳೆಗಳು ಹಗಲಿನ ವೇಳೆಯಲ್ಲಿ ಹೆಚ್ಚು ಸಕ್ರಿಯವಾಗಿರುತ್ತವೆ. ಸೊಳ್ಳೆ ಕಡಿತದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದೇ ಈ ರೋಗದಿಂದ ಪಾರಾಗಲು ಇರುವ ಅತ್ಯುತ್ತಮ ಮಾರ್ಗವಾಗಿದೆ.

    “GLP-1 ಔಷಧಿ” – ಮಧುಮೇಹ ಮತ್ತು ಬೊಜ್ಜು ಚಿಕಿತ್ಸೆ

    ಆರೋಗ್ಯ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ಭಾರತೀಯ ಮಾರುಕಟ್ಟೆಯಲ್ಲಿ GLP-1 ಔಷಧಿಗಳ ಬಹು ರೂಪಾoತರಗಳನ್ನು ಪರಿಚಯಿಸಲಾಗಿದ್ದು, ಅವುಗಳ ಮಿತಿಮೀರಿದ ಬೇಡಿಕೆ ಹಾಗೂ ಲಭ್ಯತೆಯ ಕುರಿತು ತೀವ್ರ ಕಳವಳಗಳು ವ್ಯಕ್ತವಾಗಿವೆ.
    • GLP-1 ಔಷಧಿಯನ್ನು 2005 ರಲ್ಲಿ ಅಮೆರಿಕದ ‘ಆಹಾರ ಮತ್ತು ಔಷಧ ನಿಯಂತ್ರಣ ಪ್ರಾಧಿಕಾರ’ (US FDA) ಅನುಮೋದಿಸಿದೆ.

    GLP-1 ಔಷಧಿಗಳು:

    • ಗ್ಲುಕಗನ್-ಸಮಾನ ಪೆಪ್ಟೈಡ್-1 ಗ್ರಾಹಕ ಉತ್ತೇಜಕಗಳು (Glucagon-like peptide-1 receptor agonists) ಎಂಬುದು ಹಾರ್ಮೋನ್‌ಗಳ ಅಸಮತೋಲನವನ್ನು ಸರಿಪಡಿಸುವ ಮೂಲಕ ಟೈಪ್-2 ಮಧುಮೇಹ ಮತ್ತು ಬೊಜ್ಜು ಎರಡಕ್ಕೂ ಚಿಕಿತ್ಸೆ ನೀಡಲು ಅಭಿವೃದ್ಧಿಪಡಿಸಲಾದ ಅತ್ಯಾಧುನಿಕ ಔಷಧಿಗಳಾಗಿವೆ.
    • ರೋಗಿಗಳ ಹಸಿವನ್ನು ತಗ್ಗಿಸುತ್ತದೆ:- ಈ ಔಷಧಿಗಳು ಹೊಟ್ಟೆ ಖಾಲಿಯಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತವೆ ಮತ್ತು ಈ ಮೂಲಕ ರೋಗಿಗಳಲ್ಲಿ ಹೊಟ್ಟೆ ತುಂಬಿರುವ ಭಾವನೆಯನ್ನು ಹೆಚ್ಚಿಸುತ್ತವೆ. ಆ ಮೂಲಕ ತ್ವರಿತ ತೂಕ ಇಳಿಕೆಗೆ ಕಾರಣವಾಗುತ್ತದೆ.
    • GLP-1 ಪೂರೈಕೆ ಸರಪಳಿಯಲ್ಲಿ ನೈತಿಕ ಔಷಧೀಯ ಪದ್ಧತಿಗಳನ್ನು ಖಚಿತಪಡಿಸಿಕೊಳ್ಳಲು, ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನಾಲಯವು (DCGI) ಈ ಔಷಧಿಯ ಅನಧಿಕೃತ ಮಾರಾಟ ಮತ್ತು ಪ್ರಚಾರದ ವಿರುದ್ಧ ತನ್ನ ನಿಯಂತ್ರಣಾತ್ಮಕ ಕಣ್ಗಾವಲನ್ನು ತೀವ್ರಗೊಳಿಸಿದೆ.
    • ಭಾರತದಲ್ಲಿ, ಈ ಔಷಧಿಯನ್ನು ಕೇವಲ ಅಂತಃಸ್ರಾವಕಶಾಸ್ತ್ರಜ್ಞರು, ಆಂತರಿಕ ಔಷಧ ತಜ್ಞರು ಮತ್ತು ಹೃದ್ರೋಗ ತಜ್ಞರು ಮಾತ್ರ ಅಧಿಕೃತವಾಗಿ ಶಿಫಾರಸು ಮಾಡಬಹುದಾಗಿದೆ.

    ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO)ಯ ಬಗ್ಗೆ:

      • ಇದು ಭಾರತದ ಪ್ರಮುಖ ಕೇಂದ್ರೀಯ ಔಷಧ ಪ್ರಾಧಿಕಾರವಾಗಿದ್ದು, ‘ಔಷಧಗಳು ಮತ್ತು ಸೌಂದರ್ಯವರ್ಧಕಗಳ ಕಾಯ್ದೆ, 1940’ರ ಅಡಿಯಲ್ಲಿ ವಹಿಸಲಾದ ಕರ್ತವ್ಯಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿದೆ.
      • ಪ್ರಮುಖ ಜವಾಬ್ದಾರಿಗಳು:
    • ಹೊಸ ಔಷಧಿಗಳ ಅಳವಡಿಕೆ ಮತ್ತು ಮಂಜೂರಾತಿ.
    • ಹೊಸ ಔಷಧಿಗಳ ವೈದ್ಯಕೀಯ ಪ್ರಯೋಗಗಳ ಕಟ್ಟುನಿಟ್ಟಿನ ನಿಯಂತ್ರಣ.
    • ಔಷಧಿಗಳ ಗುಣಮಟ್ಟದ ಮಾನದಂಡಗಳನ್ನು ರೂಪಿಸುವುದು.
    • ದೇಶಕ್ಕೆ ಆಮದು ಮಾಡಿಕೊಳ್ಳುವ ಔಷಧಿಗಳ ಗುಣಮಟ್ಟದ ಮೇಲೆ ನಿಗಾ ಹಾಗೂ ನಿಯಂತ್ರಣ ಸಾಧಿಸುವುದು.
    • ರಾಜ್ಯ ಔಷಧ ನಿಯಂತ್ರಣ ಸಂಸ್ಥೆಗಳ ಕಾರ್ಯಗಳ ನಡುವೆ ಸೂಕ್ತ ಸಮನ್ವಯ ಸಾಧಿಸುವುದು.

    ಭಾರತದ ಇತರ ಔಷಧ ನಿಯಂತ್ರಣ ಸಂಸ್ಥೆಗಳು:

    • ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನಾಲಯ (DCGI):- ನಿರ್ದಿಷ್ಟ ರೀತಿಯ ಔಷಧಿಗಳಿಗೆ ಪರವಾನಗಿಗಳನ್ನು ಅನುಮೋದಿಸುವ ಜವಾಬ್ದಾರಿಯನ್ನು ಇದು ಹೊಂದಿದೆ. ಇದರ ಮಹಾನಿರ್ದೇಶಕರು ಭಾರತ ಸರ್ಕಾರದ CDSCO ವಿಭಾಗದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸುತ್ತಾರೆ.
    • ಔಷಧ ಬೆಲೆ ನಿಯಂತ್ರಣ ಆದೇಶ (DPCO):- ಭಾರತದಲ್ಲಿ ಜನಸಾಮಾನ್ಯರಿಗೆ ಅಗತ್ಯವಾದ ಕೆಲವು ಜೀವನ್ಯಾವಶ್ಯಕ ಔಷಧಿಗಳು ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡಲು, DPCO ಆ ಔಷಧಿಗಳ ಬೆಲೆಗಳನ್ನು ನಿಯಂತ್ರಿಸುತ್ತದೆ.
    • ಔಷಧಗಳು ಮತ್ತು ಸೌಂದರ್ಯವರ್ಧಕಗಳ ಕಾಯ್ದೆ, 1940:- ಈ ಕಾನೂನು ದೇಶೀಯ ಔಷಧಗಳ ಉತ್ಪಾದನೆ, ಬಳಕೆ ಮತ್ತು ಮಾರಾಟವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುತ್ತದೆ.

    ಪ್ರಧಾನ ಮಂತ್ರಿ ಆವಾಸ ಯೋಜನೆ – ಗ್ರಾಮೀಣ (PMAY-G)

    ಯೋಜನೆಗಳು

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಭಾರತದ ಪ್ರಮುಖ ಗ್ರಾಮೀಣ ವಸತಿ ಯೋಜನೆಯಾದ ‘ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ’ (PMAY-G) 2026 ರಲ್ಲಿ ತನ್ನ ಅನುಷ್ಠಾನದ 10 ವರ್ಷಗಳನ್ನು ಪೂರೈಸಿದೆ.

    ಪ್ರಧಾನ ಮಂತ್ರಿ ಆವಾಸ ಯೋಜನೆ – ಗ್ರಾಮೀಣ (PMAY-G) ಯೋಜನೆಯ ಬಗ್ಗೆ:

    • ಗುರಿ:- ಗ್ರಾಮೀಣ ಪ್ರದೇಶಗಳಲ್ಲಿ “ಎಲ್ಲರಿಗೂ ವಸತಿ” ಒದಗಿಸುವುದು ಇದರ ಪ್ರಮುಖ ಗುರಿಯಾಗಿದೆ. 
    • ಉದ್ದೇಶ:- ವಸತಿ ರಹಿತ ಕುಟುಂಬಗಳು ಹಾಗೂ ಶೂನ್ಯ, ಒಂದು ಅಥವಾ ಎರಡು ಕೋಣೆಗಳ ಕಚ್ಚಾ ಮನೆಗಳಲ್ಲಿ ವಾಸಿಸುತ್ತಿರುವ ಅರ್ಹ ಗ್ರಾಮೀಣ ಕುಟುಂಬಗಳಿಗೆ ಮೂಲಸೌಕರ್ಯಗಳೊಂದಿಗೆ ‘ಪಕ್ಕಾ ಮನೆ’ ನಿರ್ಮಿಸಿಕೊಳ್ಳಲು ಆರ್ಥಿಕ ನೆರವು ನೀಡುವುದನ್ನು ಇದು ಒಳಗೊಂಡಿದೆ.
    • ಫಲಾನುಭವಿಗಳ ಆಯ್ಕೆ:- 2011 ರ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಯ (SECC) ವಸತಿ ಅಭಾವದ ಮಾನದಂಡಗಳನ್ನು ಬಳಸಿ, ಗ್ರಾಮಸಭೆಗಳ ಪರಿಶೀಲನೆಯ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ.
    • ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ:-
    1. ಬಯಲು ಸೀಮೆಯ ಪ್ರದೇಶಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲು 60:40
    2. ಈಶಾನ್ಯ ಮತ್ತು ಹಿಮಾಲಯದ ರಾಜ್ಯಗಳಲ್ಲಿ ಇದು 90:10 ಅನುಪಾತದಲ್ಲಿರುತ್ತದೆ.
    • ಅನುಷ್ಠಾನ ಸಚಿವಾಲಯ:- ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ (MoRD).
    • ಆರ್ಥಿಕ ನೆರವು ಪಡೆದುಕೊಳ್ಳುವ ಫಲಾನುಭವಿಗಳ,  
    1. ಮನೆಯ ಕನಿಷ್ಠ ವಿಸ್ತೀರ್ಣವು 25 ಚದರ ಮೀಟರ್ ಇರಬೇಕು.
    2. ಬಯಲು ಪ್ರದೇಶಗಳಲ್ಲಿ ₹1.20 ಲಕ್ಷ ಹಾಗೂ ಗುಡ್ಡಗಾಡು/ಈಶಾನ್ಯ ರಾಜ್ಯಗಳಲ್ಲಿ ₹1.30 ಲಕ್ಷ ಆರ್ಥಿಕ ನೆರವು ನೀಡಲಾಗುತ್ತದೆ.
    • ಸ್ವಚ್ಛ ಭಾರತ ಅಭಿಯಾನದೊಂದಿಗೆ ಸಂಯೋಜನೆಗೊಳ್ಳುವ ಮೂಲಕ ಶೌಚಾಲಯ ನಿರ್ಮಾಣಕ್ಕಾಗಿ ಹೆಚ್ಚುವರಿಯಾಗಿ ₹12,000 ಗಳನ್ನು ಒದಗಿಸಲಾಗುತ್ತದೆ.

    ಈ ಯೋಜನೆಯಲ್ಲಿನ ಸುಧಾರಣೆಗಳು:

    • ನೇರ ನಗದು ವರ್ಗಾವಣೆ (DBT):- ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ, ಆರ್ಥಿಕ ನೆರವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲಾಗುತ್ತದೆ.
    • ಜಿಯೋ-ಟ್ಯಾಗಿಂಗ್:- ನೈಜ-ಸಮಯದ ಮೇಲ್ವಿಚಾರಣೆಗಾಗಿ, ಮನೆ ನಿರ್ಮಾಣದ ಪ್ರತಿಯೊಂದು ಹಂತದಲ್ಲೂ ದಿನಾಂಕ ಮತ್ತು ಸಮಯದ ಮುದ್ರೆಯಿರುವ ಛಾಯಾಚಿತ್ರಗಳನ್ನು ಅಪ್‌ಲೋಡ್ ಮಾಡಲಾಗುತ್ತದೆ.
    • ಕೃತಕ ಬುದ್ಧಿಮತ್ತೆ ಚಾಲಿತ ಮೇಲ್ವಿಚಾರಣೆ:- ಅಕ್ರಮಗಳನ್ನು ಪತ್ತೆಹಚ್ಚಲು ‘ಕೃತಕ ಬುದ್ಧಿಮತ್ತೆ’ (AI) ಮತ್ತು ‘ಯಂತ್ರ ಕಲಿಕೆ’ (ML) ಸಾಧನಗಳನ್ನು ಬಳಸಲಾಗುತ್ತದೆ. ವಂಚನೆಯನ್ನು ತಡೆಗಟ್ಟಲು ಮತ್ತು ಫಲಾನುಭವಿಗಳನ್ನು ದೃಢೀಕರಿಸಲು, ಕಣ್ಣು ಮಿಟುಕಿಸುವಿಕೆಯನ್ನು ಒಳಗೊಂಡ ‘ಆಧಾರ್ ಮುಖ ದೃಢೀಕರಣ’ವನ್ನು ಅಳವಡಿಸಿಕೊಳ್ಳಲಾಗಿದೆ.
    • ಗ್ರಾಮ ಮಟ್ಟದ ಕಾರ್ಯಕರ್ತರು:- ಮಂಜೂರಾದ ಪ್ರತಿಯೊಂದು ಮನೆಯನ್ನು ಸ್ಥಳೀಯ ಕಾರ್ಯಕರ್ತರಿಗೆ ಟ್ಯಾಗ್ ಮಾಡಲಾಗಿರುತ್ತದೆ. ಇವರು ಫಲಾನುಭವಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸುತ್ತಾರೆ.
    • ಸಾಮಾಜಿಕ ಲೆಕ್ಕಪರಿಶೋಧನೆ:- ಪ್ರತಿಯೊಂದು ಗ್ರಾಮ ಪಂಚಾಯಿತಿಯು ವರ್ಷಕ್ಕೆ ಕನಿಷ್ಠ ಒಂದು ಬಾರಿಯಾದರೂ ಕಡ್ಡಾಯವಾಗಿ ಅಧಿಕೃತ ಸಾಮಾಜಿಕ ಲೆಕ್ಕಪರಿಶೋಧನೆಯನ್ನು ನಡೆಸುತ್ತದೆ.

    ಜನ್ ವಿಶ್ವಾಸ್ (ನಿಬಂಧನೆಗಳ ತಿದ್ದುಪಡಿ) ಮಸೂದೆ, 2026

    ಆರ್ಥಿಕತೆ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ಭಾರತದ ಸಂಸತ್ತು ಏಪ್ರಿಲ್ 2, 2026 ರಂದು ‘ಜನ್ ವಿಶ್ವಾಸ್ (ನಿಬಂಧನೆಗಳ ತಿದ್ದುಪಡಿ) ಮಸೂದೆ, 2026’ ಅನ್ನು ಅಂಗೀಕರಿಸಿದೆ.
    • ಈ ಶಾಸನವು ಮೂಲ ಜನ್ ವಿಶ್ವಾಸ್ ಕಾಯ್ದೆ, 2023 ರ ಮುಂದುವರಿದ ಭಾಗವಾಗಿದ್ದು, ಸರ್ಕಾರದ ಅಪರಾಧೀಕರಣ ರದ್ದತಿ ಉಪಕ್ರಮದ ಮಹತ್ವದ ವಿಸ್ತರಣೆಯಾಗಿದೆ.

    ಜನ್ ವಿಶ್ವಾಸ್ ಕಾಯ್ದೆ, 2023:

    • ಉದ್ದೇಶ:- ದಂಡನಾತ್ಮಕ ಆಡಳಿತ ಮಾದರಿಯಿಂದ ವಿಶ್ವಾಸ-ಆಧಾರಿತ ಆಡಳಿತ ಮಾದರಿಗೆ ಬದಲಾಗುವ ಮೂಲಕ ‘ಸುಗಮ ವ್ಯವಹಾರ’ (Ease of Doing Business) ಮತ್ತು ‘ಸುಗಮ ಜೀವನ’ವನ್ನು (Ease of Living) ಹೆಚ್ಚಿಸುವ ಉದ್ದೇಶ.
    • ಅಪರಾಧೀಕರಣ ರದ್ದತಿ:- ಇದು 79 ಕೇಂದ್ರ ಕಾಯ್ದೆಗಳ ಅಡಿಯಲ್ಲಿನ 717 ನಿಬಂಧನೆಗಳನ್ನು ಅಪರಾಧ ಮುಕ್ತಗೊಳಿಸುತ್ತದೆ.
    • ವ್ಯಾಪ್ತಿ:- ಒಟ್ಟಾರೆಯಾಗಿ, ಈ ಮಸೂದೆಯು 23 ವಿವಿಧ ಸಚಿವಾಲಯಗಳು ನಿರ್ವಹಿಸುವ 784 ನಿಬಂಧನೆಗಳನ್ನು ತಿದ್ದುಪಡಿ ಮಾಡುತ್ತದೆ.
    • 1,000 ಕ್ಕೂ ಹೆಚ್ಚು ಸಣ್ಣಪುಟ್ಟ ಅಪರಾಧಗಳ ತರ್ಕಬದ್ಧಗೊಳಿಸಲಾಗಿದೆ:- ಇವುಗಳನ್ನು ಅಪರಾಧಿ ಜೈಲು ಶಿಕ್ಷೆಯಿಂದ ನಾಗರೀಕ ದಂಡಗಳು, ಆಡಳಿತಾತ್ಮಕ ದಂಡಗಳು ಅಥವಾ ಎಚ್ಚರಿಕೆಗಳಿಗೆ ಬದಲಾಯಿಸಲಾಗಿದೆ.

    ಜನ್ ವಿಶ್ವಾಸ್ (ನಿಬಂಧನೆಗಳ ತಿದ್ದುಪಡಿ) ಮಸೂದೆ, 2026:

    • ನ್ಯಾಯನಿರ್ಣಯ ಅಧಿಕಾರಿಗಳ ನೇಮಕ:- ವಿಚಾರಣೆಗಳನ್ನು ನಡೆಸಲು ಮತ್ತು ದಂಡವನ್ನು ನಿರ್ಧರಿಸಲು ನೇಮಿಸಲಾಗುತ್ತದೆ.
    • ಮೇಲ್ಮನವಿ ಪ್ರಾಧಿಕಾರಗಳ ನೇಮಕ:- ಮೇಲ್ಮನವಿಗಳನ್ನು ಆಲಿಸಲು ನೇಮಿಸಲಾಗುತ್ತದೆ. ಈ ಮೂಲಕ ನ್ಯಾಯಾಲಯದ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ.
    • ಹಂತ-ಹಂತದ ಪ್ರತಿಕ್ರಿಯೆ:- ಮೊದಲ ಬಾರಿಯ ಅಥವಾ ಸಣ್ಣಪುಟ್ಟ ತಪ್ಪುಗಳಿಗಾಗಿ, ಈ ಮಸೂದೆಯು “ಮೊದಲು-ಎಚ್ಚರಿಕೆ” ತತ್ವಗಳನ್ನು ಪರಿಚಯಿಸುತ್ತದೆ.
    • ಕ್ರಿಯಾತ್ಮಕ ದಂಡಗಳು:- ದಂಡದ ಭಯವನ್ನು ಕಾಯ್ದುಕೊಳ್ಳಲು, ಹೆಚ್ಚಿನ ದಂಡಗಳು ಮತ್ತು ಶಿಕ್ಷೆಗಳಲ್ಲಿ ಪ್ರತಿ 3 ವರ್ಷಗಳಿಗೊಮ್ಮೆ 10% ರಷ್ಟು ಹೆಚ್ಚಳ ಮಾಡಲಾಗುತ್ತದೆ.
    • ಈ ಮಸೂದೆಯ ಮೂಲಕ ತಿದ್ದುಪಡಿಗೊಂಡ ಪ್ರಮುಖ ಕಾಯ್ದೆಗಳು:- 
    1. ಭಾರತೀಯ ರಿಸರ್ವ್ ಬ್ಯಾಂಕ್ ಕಾಯ್ದೆ-1934
    2. ಮೋಟಾರು ವಾಹನಗಳ ಕಾಯ್ದೆ-1988
    3. ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಕಾಯ್ದೆ-2006

    ಅಮೋನಿಯಂ ನೈಟ್ರೇಟ್

    ವಿಜ್ಞಾನ ಮತ್ತು ತಂತ್ರಜ್ಞಾನ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ‘ಭಾರತ ಕೋಲ್ ಗ್ಯಾಸಿಫಿಕೇಶನ್ ಅಂಡ್ ಕೆಮಿಕಲ್ಸ್ ಲಿಮಿಟೆಡ್’ ಮತ್ತು ‘ಮಹಾನದಿ ಕೋಲ್‌ಫೀಲ್ಡ್ಸ್ ಲಿಮಿಟೆಡ್’ ಕಲ್ಲಿದ್ದಲಿನಿಂದ ಅಮೋನಿಯಂ ನೈಟ್ರೇಟ್ ಉತ್ಪಾದಿಸುವ ಯೋಜನೆಗಾಗಿ ಒಪ್ಪಂದವೊಂದಕ್ಕೆ ಸಹಿ ಹಾಕಿವೆ.

    ಅಮೋನಿಯಂ ನೈಟ್ರೇಟ್ ಕುರಿತು:

    • ಬಿಳಿ ಬಣ್ಣದ, ಹರಳುರೂಪದ ಮತ್ತು ನೀರಿನಲ್ಲಿ ಕರಗುವ ಘನ ವಸ್ತುವಾಗಿದೆ:- ಇದು ಪ್ರಕೃತಿಯಲ್ಲಿ ಸ್ವಾಭಾವಿಕವಾಗಿ ಕಂಡುಬರುವುದಿಲ್ಲ. 
    • ಕೃತಕವಾಗಿ ಉತ್ಪಾದಿಸಲಾಗುತ್ತದೆ:- ಅಮೋನಿಯಾವನ್ನು ನೈಟ್ರಿಕ್ ಆಮ್ಲದೊಂದಿಗೆ ಪ್ರತಿಕ್ರಿಯಿಸುವ ಮೂಲಕ ಇದನ್ನು ಕೃತಕವಾಗಿ ಉತ್ಪಾದಿಸಲಾಗುತ್ತದೆ.
    • ತೇವಾಂಶವನ್ನು ಹೀರಿಕೊಳ್ಳುವ ಗುಣಲಕ್ಷಣವನ್ನು ಹೊಂದಿದೆ:- ಹೆಚ್ಚಿನ ಶಾಖಕ್ಕೆ ಒಳಪಟ್ಟಾಗ, ಇದು ಸ್ಫೋಟಕವಾಗಿ ವಿಭಜನೆಗೊಂಡು ‘ಸಾರಜನಕ ಡೈಆಕ್ಸೈಡ್’ (NO₂) ಅನ್ನು ಬಿಡುಗಡೆ ಮಾಡುತ್ತದೆ.
    • ಉದಾಹರಣೆ:- 2015 ರ ಟಿಯಾಂಜಿನ್ (ಚೀನಾ) ಸ್ಫೋಟ ಮತ್ತು 2020 ರ ಬೈರುತ್ ಬಂದರು ಸ್ಫೋಟ.
    • ರಸಗೊಬ್ಬರವಾಗಿ ಮತ್ತು ಕೈಗಾರಿಕಾ ಸ್ಫೋಟಕವಾಗಿ ಬಳಕೆ:- ಇದು ಪ್ರಪಂಚದಾದ್ಯಂತ ಅತ್ಯಂತ ವ್ಯಾಪಕವಾಗಿ ಬಳಸಲಾಗುವ ರಾಸಾಯನಿಕಗಳಲ್ಲಿ ಒಂದಾಗಿದೆ.
    • ಇದನ್ನು ‘ಅಪಾಯಕಾರಿ ರಾಸಾಯನಿಕಗಳ ನಿಯಮಗಳು, 1989’ರ ಅಡಿಯಲ್ಲಿ ಅಪಾಯಕಾರಿ ರಾಸಾಯನಿಕವೆಂದು ಪಟ್ಟಿ ಮಾಡಲಾಗಿದೆ.

    E-3 ಸೆಂಟ್ರಿ – ವಾಯುಗಾಮಿ ಮುನ್ಸೂಚನೆ ಮತ್ತು ನಿಯಂತ್ರಣ ವ್ಯವಸ್ಥೆ (AWACS)

    ರಕ್ಷಣೆ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ಸೌದಿ ಅರೇಬಿಯಾದ ಪ್ರಿನ್ಸ್ ಸುಲ್ತಾನ್ ವಾಯುನೆಲೆಯ ಮೇಲೆ ಇರಾನ್ ನಡೆಸಿದ ಕ್ಷಿಪಣಿ ಮತ್ತು ಡ್ರೋನ್ ದಾಳಿಯಲ್ಲಿ ಅಮೆರಿಕದ ‘E-3 ಸೆಂಟ್ರಿ ಅವಾಕ್ಸ್’ ವಿಮಾನವು ನಾಶವಾಗಿದೆ ಎಂದು ವರದಿಯಾಗಿದೆ.

    ‘E-3 ಸೆಂಟ್ರಿ ಅವಾಕ್ಸ್’ನ ಬಗ್ಗೆ:

    • ಸುಧಾರಿತ ಕಣ್ಗಾವಲು ಮತ್ತು ಯುದ್ಧ ನಿರ್ವಹಣೆ ವಿಮಾನವಾಗಿದೆ:- ಬೋಯಿಂಗ್ ಸಂಸ್ಥೆಯು ಅಭಿವೃದ್ಧಿಪಡಿಸಿದ ವಾಯುಗಾಮಿ ಮುನ್ಸೂಚನೆ ಮತ್ತು ನಿಯಂತ್ರಣ ವ್ಯವಸ್ಥೆಯ (AWACS) ವಿಮಾನವಾಗಿದೆ.
    • ಈ ವಿಮಾನವನ್ನು ಸಾಮಾನ್ಯವಾಗಿ ‘ಅವಾಕ್ಸ್’ (AWACS) ಎಂದು ಕರೆಯಲಾಗುತ್ತದೆ. ಇದರ ವಿಸ್ತೃತ ರೂಪ ‘ಏರ್‌ಬೋರ್ನ್ ವಾರ್ನಿಂಗ್ ಅಂಡ್ ಕಂಟ್ರೋಲ್ ಸಿಸ್ಟಮ್’ (Airborne Warning and Control System).
    • ಇದು ತನ್ನ ಮೇಲ್ಭಾಗದಲ್ಲಿ ಅಳವಡಿಸಲಾದ ವಿಶಿಷ್ಟವಾದ ತಿರುಗುವ ರೇಡಾರ್ ಗುಮ್ಮಟವನ್ನು ಹೊಂದಿದ್ದು, ಇದು ವೈರಿಗಳ ವಾಯು ಗುರಿಗಳನ್ನು ಬಹುದೂರದಿಂದಲೇ ಪತ್ತೆಹಚ್ಚುವ ಮತ್ತು ಮೇಲ್ವಿಚಾರಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

    ಭಾರತದಲ್ಲಿನ ವಾಯುಗಾಮಿ ಮುನ್ಸೂಚನೆ ಮತ್ತು ನಿಯಂತ್ರಣ ವ್ಯವಸ್ಥೆ (AWACS in India):

    • ಭಾರತೀಯ ವಾಯುಪಡೆಯು (IAF) ರಷ್ಯಾದ ಇಲ್ಯುಶಿನ್ Il-76 ಸಾರಿಗೆ ವಿಮಾನದ ಮೇಲೆ ಅಳವಡಿಸಲಾಗಿರುವ ಇಸ್ರೇಲ್ ಮೂಲದ 3 ಫಾಲ್ಕನ್ (Phalcon) ಅವಾಕ್ಸ್ (AWACS) ವ್ಯವಸ್ಥೆಗಳನ್ನು ನಿರ್ವಹಿಸುತ್ತಿದೆ.
    • “ಆಕಾಶದ ಕಣ್ಣುಗಳು” (Eyes in the sky) ಎಂದು ಕರೆಯಲ್ಪಡುವ ಈ ವ್ಯವಸ್ಥೆಗಳು 360-ಡಿಗ್ರಿ ರೇಡಾರ್ ವ್ಯಾಪ್ತಿಯನ್ನು ಒದಗಿಸುತ್ತವೆ ಮತ್ತು 370-500 ಕಿ.ಮೀ. ವ್ಯಾಪ್ತಿಯಲ್ಲಿರುವ ವಿಮಾನಗಳು, ಕ್ರೂಸ್ ಕ್ಷಿಪಣಿಗಳು ಹಾಗೂ ಡ್ರೋನ್‌ಗಳನ್ನು ಪತ್ತೆಹಚ್ಚುವ ಸಾಮರ್ಥ್ಯವನ್ನು ಹೊಂದಿವೆ.
    • ನೇತ್ರಾ (NETRA) ವಾಯುಗಾಮಿ ಮುನ್ಸೂಚನೆ ಮತ್ತು ನಿಯಂತ್ರಣ (AEW&C) ವ್ಯವಸ್ಥೆಯು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅಭಿವೃದ್ಧಿಪಡಿಸಿದ ಸಂಪೂರ್ಣ ದೇಶೀಯ, ಬಹು-ಸಂವೇದಕ ವೇದಿಕೆಯಾಗಿದೆ. ಇದನ್ನು ಪ್ರಾಥಮಿಕವಾಗಿ ವಾಯು ಕಣ್ಗಾವಲು, ಗುರಿ ಗುರುತಿಸುವಿಕೆ ಮತ್ತು ಕಮಾಂಡ್-ಮತ್ತು-ನಿಯಂತ್ರಣ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.
    • ಈ ‘ನೇತ್ರಾ’ ವ್ಯವಸ್ಥೆಯು ಬ್ರೆಜಿಲ್‌ನ ಎಂಬ್ರೇಯರ್ ERJ 145 ವಿಮಾನವನ್ನು ಆಧರಿಸಿದೆ.

    ರೈಸ್‌ನ ತಿಮಿಂಗಿಲ (Rice’s Whale)

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಅಮೆರಿಕವು ತೈಲ ಮತ್ತು ಅನಿಲ ಕೊರೆಯುವ ಕಾರ್ಯಾಚರಣೆಗಳನ್ನು ವಿಸ್ತರಿಸುತ್ತಿರುವುದು ‘ರೈಸ್ಸ್ ವೇಲ್’ (Rice Whale) ಎಂಬ ತಿಮಿಂಗಿಲ ಪ್ರಭೇದವನ್ನು ಸಂಪೂರ್ಣ ಅಳಿವಿನಂಚಿಗೆ ತಳ್ಳುವ ಆತಂಕವನ್ನು ಸೃಷ್ಟಿಸಿದೆ.

    ರೈಸ್ಸ್ ವೇಲ್ ತಿಮಿಂಗಿಲದ ಕುರಿತು:

    • ಈ ತಿಮಿಂಗಿಲವು ‘ಬಲನೋಪ್ಟೆರಿಡೆ’ (Balaenopteridae) ಎಂಬ ‘ಬಲೀನ್ ತಿಮಿಂಗಿಲ’ ಕುಟುಂಬಕ್ಕೆ ಸೇರಿದೆ.
    • ಜಗತ್ತಿನ ಅತ್ಯಂತ ಅಪರೂಪದ ತಿಮಿಂಗಿಲ ಪ್ರಭೇದಗಳಲ್ಲಿ ಒಂದಾಗಿದೆ:- ಪ್ರಪಂಚದಲ್ಲಿ ಕೇವಲ 100 ಕ್ಕಿಂತ ಕಡಿಮೆ ಸಂಖ್ಯೆಯ ಈ ತಿಮಿಂಗಿಲಗಳು ಉಳಿದುಕೊಂಡಿವೆ.
    • ಮೆಕ್ಸಿಕೋ ಕೊಲ್ಲಿಯ ಉತ್ತರದ ಭಾಗಕ್ಕೆ ಮಾತ್ರ ಸೀಮಿತವಾದ ಸ್ಥಳೀಯ ಪ್ರಭೇದವಾಗಿದೆ:- ಇದು ಯಾವುದೇ ದೀರ್ಘಕಾಲಿಕ ವಲಸೆ ಕೈಗೊಳ್ಳದೆ ವರ್ಷಪೂರ್ತಿ ಇದೇ ಪ್ರದೇಶದಲ್ಲಿ ವಾಸಿಸುತ್ತದೆ.
    • ಇದು ಪ್ರಾಥಮಿಕವಾಗಿ ಸಣ್ಣ ಮೀನುಗಳು ಮತ್ತು ಸ್ಕ್ವಿಡ್‌ಗಳನ್ನು ತಿಂದು ಜೀವಿಸುತ್ತದೆ.
    • ಅಪಾಯಗಳು:- ಸಮುದ್ರದಲ್ಲಿನ ತೈಲ ಕೊರೆಯುವಿಕೆ, ಹಡಗುಗಳ ಡಿಕ್ಕಿ ಮತ್ತು ಹವಾಮಾನ ಬದಲಾವಣೆಯು ಇವುಗಳ ಅಸ್ತಿತ್ವಕ್ಕೆ ಪ್ರಮುಖ ಬೆದರಿಕೆಯಾಗಿವೆ.
    • IUCN ಕೆಂಪು ಪಟ್ಟಿಯಲ್ಲಿ:- ‘ತೀವ್ರ ಅಳಿವಿನಂಚಿನಲ್ಲಿರುವ’ ಪ್ರಭೇದವೆಂದು ವರ್ಗೀಕರಿಸಲಾಗಿದೆ.

    ನಿಮಗಿದು ತಿಳಿದಿರಲಿ:

    • ಅಂತರರಾಷ್ಟ್ರೀಯ ತಿಮಿಂಗಿಲ ಆಯೋಗ (IWC):- ತಿಮಿಂಗಿಲ ಬೇಟೆಯನ್ನು ನಿರ್ವಹಿಸಲು ಮತ್ತು  ಅವುಗಳ ಸಂರಕ್ಷಣೆಗಾಗಿ 1946 ರಲ್ಲಿ ಜಾಗತಿಕ ಸಂಸ್ಥೆಯಾಗಿ ಸ್ಥಾಪಿಸಲಾಯಿತು.
    • ಪ್ರಸ್ತುತ, ಈ ಆಯೋಗವು ಭಾರತ ಸೇರಿದಂತೆ 80 ಕ್ಕೂ ಹೆಚ್ಚು ಸದಸ್ಯ ರಾಷ್ಟ್ರಗಳನ್ನು ಹೊಂದಿದೆ.
  • ಗುಜರಾತಿನ ಸಾನಂದ್: ಭಾರತದ ಸೆಮಿಕಂಡಕ್ಟರ್ ಹಬ್ | ಭಾರತದಲ್ಲಿ ಸಹಕಾರ ಸಂಘಗಳು | ಬಾಬ್-ಅಲ್-ಮಂದೇಬ್ ಜಲಸಂಧಿ | ಸಮ್ರಾಟ್ ಸಂಪ್ರತಿ | ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಉತ್ತೇಜನ ಮತ್ತು ಅನುಮೋದನಾ ಕೇಂದ್ರ (IN-SPACe) | ಘನತ್ಯಾಜ್ಯ ನಿರ್ವಹಣೆ (SWM) ನಿಯಮಗಳು, 2026

    ಗುಜರಾತಿನ ಸಾನಂದ್: ಭಾರತದ ಸೆಮಿಕಂಡಕ್ಟರ್ ಹಬ್

    ಆರ್ಥಿಕತೆ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ಭಾರತದ ಪ್ರಧಾನಮಂತ್ರಿಯವರು ಗುಜರಾತಿನ ಸಾನಂದ್‌ನಲ್ಲಿ ‘ಕೇನ್ಸ್ ಸೆಮಿಕಾನ್’ ಸಂಸ್ಥೆಯ ಅರೆವಾಹಕ (ಸೆಮಿಕಂಡಕ್ಟರ್)ಗಳನ್ನು ಜೋಡಿಸುವ ಮತ್ತು ಪರೀಕ್ಷಾ ಘಟಕವನ್ನು ಉದ್ಘಾಟಿಸಿದರು.
    • ಈ ಯೋಜನೆಯು “ಇಂಡಿಯಾ ಸೆಮಿಕಂಡಕ್ಟರ್ ಮಿಷನ್‌” (ISM)ನ ಒಂದು ಪ್ರಮುಖ ಭಾಗವಾಗಿದೆ.
    • ಇದು ಭಾರತವನ್ನು ಜಾಗತಿಕ ಅರೆವಾಹಕ (ಸೆಮಿಕಂಡಕ್ಟರ್) ಉತ್ಪಾದನಾ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
    • ಜಾಗತಿಕ ಅರೆವಾಹಕ ಪೂರೈಕೆ ಸರಪಳಿಯಲ್ಲಿ ಸಾನಂದ್ ಅನ್ನು ಒಂದು ನಿರ್ಣಾಯಕ ಕೊಂಡಿಯಾಗಿ ರೂಪಿಸಲಾಗುತ್ತಿದೆ.

    ಇಂಡಿಯಾ ಸೆಮಿಕಂಡಕ್ಟರ್ ಮಿಷನ್ (ISM):

    • ಪ್ರಾರಂಭ:- ಡಿಸೆಂಬರ್ 2021
    • ಅನುಷ್ಠಾನ ಸಂಸ್ಥೆ:- ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY).
    • ಉದ್ದೇಶ:- ದೇಶದಲ್ಲಿ ಸುಸ್ಥಿರವಾದ ಅರೆವಾಹಕ ಮತ್ತು ಪರದೆ (display)ಗಳ ಸಮಗ್ರ ಪೂರಕ ವ್ಯವಸ್ಥೆಯನ್ನು ನಿರ್ಮಿಸುವುದು.

    ಇಂಡಿಯಾ ಸೆಮಿಕಂಡಕ್ಟರ್ ಮಿಷನ್ 2.0 (ISM 2.0):

    • ಇದನ್ನು 2026-27ರ ಕೇಂದ್ರ ಬಜೆಟ್‌ ನಲ್ಲಿ ಘೋಷಿಸಲಾಯಿತು.
    • ಭಾರತದಲ್ಲಿ ಸಂಪೂರ್ಣ ಪ್ರಮಾಣದ ಅರೆವಾಹಕಗಳ ಸಮಗ್ರ ಪೂರಕ ವ್ಯವಸ್ಥೆಯನ್ನು ಸೃಷ್ಟಿಸಲು ಇದು ಅರೆವಾಹಕ ಉಪಕರಣಗಳು ಮತ್ತು ಕಚ್ಚಾ ವಸ್ತುಗಳ ಮೇಲೆ ಕೇಂದ್ರೀಕರಿಸುತ್ತದೆ.

    ಸರ್ಕಾರದ ಇತರ ಯೋಜನೆಗಳು:

    • ವಿನ್ಯಾಸ ಆಧಾರಿತ ಪ್ರೋತ್ಸಾಹ ಯೋಜನೆ (DLI Scheme):- ಚಿಪ್ ವಿನ್ಯಾಸ ಮಾಡುವ ಸ್ಟಾರ್ಟ್‌ಅಪ್‌ಗಳಿಗೆ ಹಣಕಾಸು ಮತ್ತು ಮೂಲಸೌಕರ್ಯ ಬೆಂಬಲ ಒದಗಿಸುತ್ತದೆ. 
    • ದೇಶೀಯವಾಗಿ 100 ಕ್ಕೂ ಹೆಚ್ಚು ಅರೆವಾಹಕ ವಿನ್ಯಾಸ ಸಂಸ್ಥೆಗಳನ್ನು ಸ್ಥಾಪಿಸುವ ಗುರಿಯನ್ನು ಇದು ಹೊಂದಿದೆ. 
    • ಎಲೆಕ್ಟ್ರಾನಿಕ್ಸ್ ಉತ್ಪಾದನೆಗಾಗಿ – ಉತ್ಪಾದನೆ ಆಧಾರಿತ ಪ್ರೋತ್ಸಾಹ (PLI) ಯೋಜನೆ:- ಇದು ಮೊಬೈಲ್ ಉತ್ಪಾದನೆಯ ಬೆಳವಣಿಗೆಯ ಜೊತೆಗೆ ಬೇಡಿಕೆಯ ಆಧಾರಿತ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ.
    • ಚಿಪ್ಸ್-ಟು-ಸ್ಟಾರ್ಟ್‌ಅಪ್ ಕಾರ್ಯಕ್ರಮ:- 300 ಕ್ಕೂ ಹೆಚ್ಚು ಸಂಸ್ಥೆಗಳಿಗೆ ಇಡಿಎ (EDA) ಉಪಕರಣಗಳು ಮತ್ತು ಉತ್ಪಾದನಾ ನಿರ್ಮಾಣ ಬೆಂಬಲವನ್ನು ಇದು ಒದಗಿಸುತ್ತದೆ.
    • ರಾಷ್ಟ್ರೀಯ ನಿರ್ಣಾಯಕ ಖನಿಜಗಳ ಮಿಷನ್ ಮತ್ತು ವಿರಳ ಭೂ-ಖನಿಜ ಸಂಚಾರ ಪಥ (Rare Earth Corridor):- ವಿರಳ ಭೂ-ಖನಿಜಗಳಿಗಾಗಿ ಚೀನಾ ಹಾಗೂ ಸೆಮಿಕಂಡಕ್ಟರ್ ‘ಫ್ಯಾಬ್’ (Fabs) ಘಟಕಗಳಿಗಾಗಿ ತೈವಾನ್ ಮೇಲಿನ ಅವಲಂಬನೆಯನ್ನು ತಗ್ಗಿಸುವುದು ಈ ಉಪಕ್ರಮದ ಪ್ರಮುಖ ಉದ್ದೇಶವಾಗಿದೆ.

    ಜಾಗತಿಕ ಪೂರೈಕೆ ಸರಪಳಿ ಮತ್ತು ಕಾರ್ಯತಂತ್ರದ ಸ್ಥಾನಮಾನ:

    • ಅಮೆರಿಕ ನೇತೃತ್ವದ ‘ಪ್ಯಾಕ್ಸ್ ಸಿಲಿಕಾ’ ಉಪಕ್ರಮ:- ಈ ಉಪಕ್ರಮದಲ್ಲಿ ಭಾರತದ ಸದಸ್ಯತ್ವವು ಅರೆವಾಹಕ ಮತ್ತು ಕೃತಕ ಬುದ್ಧಿಮತ್ತೆಯಂತಹ (AI) ನಿರ್ಣಾಯಕ ತಂತ್ರಜ್ಞಾನಗಳ ಪೂರೈಕೆ ಸರಪಳಿಯನ್ನು ಭದ್ರಪಡಿಸುವ ಗುರಿಯನ್ನು ಹೊಂದಿದೆ.

    ಪ್ಯಾಕ್ಸ್ ಸಿಲಿಕಾ ಉಪಕ್ರಮದ ಬಗ್ಗೆ:

    • ಉದ್ದೇಶ:- ನಿರ್ಣಾಯಕ ಖನಿಜಗಳಿಂದ ಸುಭದ್ರ, ಸಮೃದ್ಧ ಮತ್ತು ನಾವೀನ್ಯತೆ ಆಧಾರಿತ ಸಿಲಿಕಾನ್ ಪೂರೈಕೆ ಸರಪಳಿಯನ್ನು ನಿರ್ಮಿಸುವ ಅಮೆರಿಕ ನೇತೃತ್ವದ ಕಾರ್ಯತಂತ್ರದ ಉಪಕ್ರಮ ಇದಾಗಿದೆ.
    • ಸದಸ್ಯ ರಾಷ್ಟ್ರಗಳು:- ಜಪಾನ್, ದಕ್ಷಿಣ ಕೊರಿಯಾ, ಸಿಂಗಾಪುರ, ನೆದರ್ಲ್ಯಾಂಡ್ಸ್, ಯುನೈಟೆಡ್ ಕಿಂಗ್‌ಡಮ್, ಇಸ್ರೇಲ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಆಸ್ಟ್ರೇಲಿಯಾ.

    ಭಾರತದಲ್ಲಿ ಸಹಕಾರ ಸಂಘಗಳು

    ಆರ್ಥಿಕತೆ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ದೇಶದಲ್ಲಿ ಕೇವಲ 3.49 ಲಕ್ಷ ಸಹಕಾರ ಸಂಘಗಳು ಮಾತ್ರ ಲಾಭದಲ್ಲಿವೆ ಎಂದು ಕೇಂದ್ರ ಸರ್ಕಾರವು ಇತ್ತೀಚಿಗೆ ಲೋಕಸಭೆಗೆ ಮಾಹಿತಿ ನೀಡಿದೆ.

    ಸಹಕಾರ ಸಂಘಗಳ ಬಗ್ಗೆ:

    • ಸಾಮಾನ್ಯ ಹಿತಾಸಕ್ತಿ, ಗುರಿ ಅಥವಾ ಅಗತ್ಯವನ್ನು ಹೊಂದಿರುವ ವ್ಯಕ್ತಿಗಳ ಗುಂಪೊಂದು ಒಟ್ಟಾಗಿ ಮಾಲೀಕತ್ವ ಹೊಂದಿ, ನಿರ್ವಹಿಸುವ ಸಂಸ್ಥೆ ಅಥವಾ ವ್ಯವಹಾರವನ್ನು ‘ಸಹಕಾರ ಸಂಘ’ ಎಂದು ಕರೆಯಲಾಗುತ್ತದೆ.
    • ಉದ್ದೇಶ:- ಬಾಹ್ಯ ಷೇರುದಾರರಿಗೆ ಗರಿಷ್ಠ ಲಾಭ ಗಳಿಸಿಕೊಡುವುದಕ್ಕಿಂತ ಹೆಚ್ಚಾಗಿ, ತನ್ನ ಸದಸ್ಯರ ಆರ್ಥಿಕ, ಸಾಮಾಜಿಕ ಅಥವಾ ಸಾಂಸ್ಕೃತಿಕ ಅಗತ್ಯಗಳನ್ನು ಪೂರೈಸುವುದು.

    ಸಹಕಾರ ಸಂಘಗಳ ಪ್ರಯೋಜನಗಳು:

    • ಪ್ರಜಾಸತ್ತಾತ್ಮಕ ನಿಯಂತ್ರಣ:- ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಸದಸ್ಯರಿಗೂ ಸಮಾನವಾದ ಧ್ವನಿ ಇರುತ್ತದೆ.
    • ಆರ್ಥಿಕ ಭಾಗವಹಿಸುವಿಕೆ:- ಸದಸ್ಯರ ಬಳಕೆ ಅಥವಾ ಅವರ ಕೊಡುಗೆಯ ಆಧಾರದ ಮೇಲೆ ಲಾಭವನ್ನು ವಿತರಿಸಲಾಗುತ್ತದೆ. ಹೂಡಿಕೆ ಮಾಡಿದ ಬಂಡವಾಳದ ಆಧಾರದ ಮೇಲೆ ಅಲ್ಲ.
    • ಸಮುದಾಯದ ಮೇಲಿನ ಗಮನ:- ಸಂಪನ್ಮೂಲಗಳು ಮತ್ತು ಲಾಭವನ್ನು ಗುಂಪಿನೊಳಗೆ ಉಳಿಸಿಕೊಳ್ಳುವ ಮೂಲಕ ಸ್ಥಳೀಯ ಸಮುದಾಯಗಳಿಗೆ ಪ್ರಯೋಜನವನ್ನು ಒದಗಿಸುವುದು.
    • ಉತ್ತಮ ಸೇವೆಗಳು ಮತ್ತು ಬೆಲೆಗಳು:- ಸಂಪನ್ಮೂಲಗಳನ್ನು ಒಟ್ಟುಗೂಡಿಸುವ ಮೂಲಕ, ಲಾಭದಾಯಕ ಉದ್ದಿಮೆಗಳಿಗಿಂತ ಉತ್ತಮ ಸೇವೆಗಳನ್ನು ಅಥವಾ ಕೈಗೆಟುಕುವ ಬೆಲೆಗಳನ್ನು ಇವು ನೀಡುತ್ತವೆ.

    97ನೇ ಸಂವಿಧಾನ ತಿದ್ದುಪಡಿ ಕಾಯ್ದೆ 2011 ರ ಬಗ್ಗೆ:

    • ಇದು ಸಹಕಾರ ಸಂಘಗಳನ್ನು ರಚಿಸುವ ಹಕ್ಕನ್ನು ಮೂಲಭೂತ ಹಕ್ಕಾಗಿ (ವಿಧಿ 19) ಸ್ಥಾಪಿಸಿದೆ.
    • ಸಹಕಾರ ಸಂಘಗಳ ಉತ್ತೇಜನಕ್ಕಾಗಿ ರಾಜ್ಯ ನಿರ್ದೇಶಕ ತತ್ವಗಳಲ್ಲಿ (DPSP) ಹೊಸ ವಿಧಿ 43-B ಸೇರಿಸಲಾಗಿದೆ.
    • ಸಂವಿಧಾನಕ್ಕೆ “ಸಹಕಾರ ಸಂಘಗಳು” ಎಂಬ ಶೀರ್ಷಿಕೆಯ ಹೊಸ ಭಾಗ IX-B ಯಲ್ಲಿ ವಿಧಿ 243-ZH ನಿಂದ 243-ZT ವರೆಗೆ ಸೇರ್ಪಡೆಗೊಳಿಸಲಾಗಿದೆ.

    ಭಾರತದಲ್ಲಿ ಸಹಕಾರ ಸಂಘಗಳ ಕಾನೂನು ಚೌಕಟ್ಟು ಮತ್ತು ಬೆಂಬಲ:

    • ಸಹಕಾರ ಸಂಘಗಳ ಕಾಯ್ದೆ:- ಸಹಕಾರ ಸಂಘಗಳನ್ನು ನಿಯಂತ್ರಿಸಲಾಗುತ್ತದೆ ಮತ್ತು ಇದನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಜಾರಿಗೊಳಿಸಲಾಗುತ್ತದೆ.
    • ಬಹು-ರಾಜ್ಯ ಸಹಕಾರ ಸಂಘಗಳ ಕಾಯ್ದೆ, 2002:- ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಕಾರ್ಯನಿರ್ವಹಿಸುವ ಸಹಕಾರ ಸಂಘಗಳನ್ನು ನಿಯಂತ್ರಿಸುತ್ತದೆ.
    • ರಾಷ್ಟ್ರೀಯ ಸಹಕಾರ ನೀತಿ, 2002:- ಸಹಕಾರಿ ಚಳವಳಿಗೆ ಪೂರಕ ವಾತಾವರಣವನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿದ್ದು, ಇದು ಆಡಳಿತ, ಸದಸ್ಯರ ಭಾಗವಹಿಸುವಿಕೆ ಮತ್ತು ಆರ್ಥಿಕ ಸುಸ್ಥಿರತೆಯನ್ನು ಸುಧಾರಿಸುವತ್ತ ಗಮನಹರಿಸುತ್ತದೆ.
    • ಸಹಕಾರ ಸಚಿವಾಲಯ:- 2021 ರಲ್ಲಿ ಸ್ಥಾಪನೆಯಾದ ಈ ಸಚಿವಾಲಯವು, ಭಾರತದಲ್ಲಿ ಸಹಕಾರ ಸಂಘಗಳ ಆಡಳಿತವನ್ನು ಸುಧಾರಿಸುವ ಮತ್ತು ಆರ್ಥಿಕ ಬೆಂಬಲವನ್ನು ಒದಗಿಸುವ ಮೂಲಕ ಅವುಗಳ ಬೆಳವಣಿಗೆಯನ್ನು ಬೆಂಬಲಿಸುತ್ತದೆ.
    • ರಾಷ್ಟ್ರೀಯ ಸಹಕಾರ ನೀತಿ, 2025:- ಭಾರತದ ಸಹಕಾರಿ ಸಂಪ್ರದಾಯದ ವಿಶಿಷ್ಟ ಸಾಮರ್ಥ್ಯಗಳನ್ನು ಬೆಳೆಸುವುದು, ಆರ್ಥಿಕ ಪ್ರಜಾಪ್ರಭುತ್ವೀಕರಣವನ್ನು ಉತ್ತೇಜಿಸುವುದು ಮತ್ತು ಸಾಮೂಹಿಕ ಭಾಗವಹಿಸುವಿಕೆಯ ಮೂಲಕ ಗ್ರಾಮೀಣ ಆರ್ಥಿಕತೆಯನ್ನು ಉನ್ನತೀಕರಿಸುವುದು ಇದರ ಪ್ರಮುಖ ಗುರಿಯಾಗಿದೆ.

    ಬಾಬ್-ಅಲ್-ಮಂದೇಬ್ ಜಲಸಂಧಿ

    ಭೂಗೋಳ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಪ್ರಸ್ತುತ ನಡೆಯುತ್ತಿರುವ ಮಧ್ಯಪ್ರಾಚ್ಯ ಸಂಘರ್ಷದಲ್ಲಿ ‘ಇರಾನ್’ ಬೆಂಬಲಿತ ‘ಯೆಮನ್‌’ನ ‘ಹೌತಿ’ ಬಂಡುಕೋರರು ಪ್ರವೇಶಿಸಿದ ನಂತರ, ಬಾಬ್-ಎಲ್-ಮಂದೇಬ್ ಜಲಸಂಧಿಗೆ ಅಡ್ಡಿಯಾಗುವ ಸಾಧ್ಯತೆಯ ಬಗ್ಗೆ ತೀವ್ರ ಕಳವಳಗಳು ವ್ಯಕ್ತವಾಗಿವೆ.

    ಬಾಬ್-ಅಲ್-ಮಂದೇಬ್ ಜಲಸಂಧಿಯ ಬಗ್ಗೆ:

    • ಅರೇಬಿಕ್ ಭಾಷೆಯಲ್ಲಿ ಇದನ್ನು “ಕಣ್ಣೀರಿನ ಹೆಬ್ಬಾಗಿಲು” ಎಂದೂ ಕರೆಯಲಾಗುತ್ತಿದ್ದು, ಇದು ಕೆಂಪು ಸಮುದ್ರದ ದಕ್ಷಿಣ ತುದಿಯಲ್ಲಿದೆ.
    • ಇದು ಒಂದು ಕಡೆಯಲ್ಲಿ ಯೆಮನ್ ಹಾಗೂ ಮತ್ತೊಂದು ಕಡೆಯಲ್ಲಿ ‘ಹಾರ್ನ್ ಆಫ್ ಆಫ್ರಿಕಾ’ (ಆಫ್ರಿಕಾದ ಶೃಂಗ) ಪ್ರದೇಶದ ನಡುವೆ ನೆಲೆಗೊಂಡಿದೆ.
    • ಇದು ಕೆಂಪು ಸಮುದ್ರವನ್ನು ಏಡನ್ ಕೊಲ್ಲಿಯೊಂದಿಗೆ ಮತ್ತು ಮುಂದುವರಿದು ಹಿಂದೂ ಮಹಾಸಾಗರದೊಂದಿಗೆ ಸಂಪರ್ಕಿಸುತ್ತದೆ.
    • ಇದು ಸೂಯೆಜ್ ಕಾಲುವೆಯೊಂದಿಗೆ ಸಂಪರ್ಕ ಹೊಂದುವುದರಿಂದ ಆಯಕಟ್ಟಿನ ಪ್ರಾಮುಖ್ಯತೆಯನ್ನು ಪಡೆದಿದೆ ಮತ್ತು ಇದು ಮುಂದುವರಿದು ಮೆಡಿಟರೇನಿಯನ್ ಸಮುದ್ರಕ್ಕೆ ಸಂಪರ್ಕ ಕಲ್ಪಿಸುತ್ತದೆ.
    • ಇದು ಪ್ರಪಂಚದ ಅತ್ಯಂತ ಪ್ರಮುಖ ಕಡಲ-ಮಾರ್ಗದ ಕಾರ್ಯತಂತ್ರದ ಪ್ರದೇಶಗಳಲ್ಲಿ ಒಂದಾಗಿದೆ. ಏಕೆಂದರೆ,
    • ಜಾಗತಿಕ ತೈಲ ಮತ್ತು ನೈಸರ್ಗಿಕ ಅನಿಲ ಸಾಗಣೆಯ ಸರಿಸುಮಾರು 10-12% ರಷ್ಟು ಪಾಲು ಬಾಬ್-ಎಲ್-ಮಂಡೇಬ್ ಜಲಸಂಧಿಯ ಮೂಲಕ ಹಾದುಹೋಗುತ್ತದೆ.
    • ಇದು ಸುಮೆಡ್ (SUMED) ಪೈಪ್‌ಲೈನ್‌ಗೂ ಸಂಪರ್ಕ ಹೊಂದಿದ್ದು, ಜಾಗತಿಕ ಇಂಧನ ಮತ್ತು ವ್ಯಾಪಾರ ಹರಿವಿಗೆ ನಿರ್ಣಾಯಕ ಸಂಚಾರ ಮಾರ್ಗವಾಗಿದೆ.

    ಸುಮೆಡ್ (SUMED- ಸೂಯೆಜ್-ಮೆಡಿಟರೇನಿಯನ್) ಪೈಪ್‌ಲೈನ್:

    • ಈಜಿಪ್ಟ್‌ನಲ್ಲಿರುವ 200-ಮೈಲಿ ಉದ್ದದ ಪೈಪ್‌ಲೈನ್ ಆಗಿದೆ:- ಇದು ಕೆಂಪು ಸಮುದ್ರದ ಮೇಲಿರುವ ‘ಐನ್ ಸುಖ್ನಾ’ವನ್ನು ಮೆಡಿಟರೇನಿಯನ್ ಮೇಲಿರುವ ‘ಸಿಡಿ ಕೆರಿರ್’ಗೆ ಸಂಪರ್ಕಿಸುತ್ತದೆ.
    • ಸೂಯೆಜ್ ಕಾಲುವೆಗೆ ಒಂದು ಆಯಕಟ್ಟಿನ ಪರ್ಯಾಯ ಮಾರ್ಗವಾಗಿದೆ:- ಏಕೆಂದರೆ, ಪರ್ಷಿಯನ್ ಕೊಲ್ಲಿಯ ತೈಲವನ್ನು ಯುರೋಪ್ ಮತ್ತು ಉತ್ತರ ಅಮೆರಿಕಾಗೆ ಸಾಗಿಸಲು ಇದು ಅನುಕೂಲಮಾಡಿಕೊಡುತ್ತದೆ.
    • ಉದ್ದೇಶ:- ಇದು ಸೂಯೆಜ್ ಕಾಲುವೆಗೆ ಪರ್ಯಾಯವಾಗಿ ಕಚ್ಚಾ ತೈಲವನ್ನು ಸಾಗಿಸುವ ಪ್ರಮುಖ ಮಾರ್ಗವಾಗಿದ್ದು, ಹಡಗು ಸಂಚಾರ ದಟ್ಟಣೆಯ ಸಂದರ್ಭದಲ್ಲಿ ಇಂಧನ ಭದ್ರತೆಯನ್ನು ಕಾಯ್ದುಕೊಳ್ಳಲು ಇದು ಅತ್ಯಗತ್ಯವಾಗಿದೆ.
    • ಮಾರ್ಗ:- ಐನ್ ಸುಖ್ನಾವನ್ನು (ಸೂಯೆಜ್ ಕೊಲ್ಲಿ, ಕೆಂಪು ಸಮುದ್ರ) ಸಿಡಿ ಕೆರಿರ್‌ಗೆ (ಅಲೆಕ್ಸಾಂಡ್ರಿಯಾ ಬಳಿ, ಮೆಡಿಟರೇನಿಯನ್ ಸಮುದ್ರ) ಸಂಪರ್ಕಿಸುತ್ತದೆ.
    • ಸಾಮರ್ಥ್ಯ:- ಪ್ರತಿದಿನ ಸರಿಸುಮಾರು 2.5 ಮಿಲಿಯನ್ ಬ್ಯಾರೆಲ್‌ಗಳಷ್ಟು ತೈಲವನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ.
    • ಮಾಲೀಕತ್ವ:- ‘ಅರಬ್ ಪೆಟ್ರೋಲಿಯಂ ಪೈಪ್‌ಲೈನ್ ಕಂಪನಿಯು’ ಇದನ್ನು ನಿರ್ವಹಿಸುತ್ತಿದ್ದು, ಇದು ಈಜಿಪ್ಟ್, ಸೌದಿ ಅರೇಬಿಯಾ, ಕುವೈತ್, ಯುಎಇ ಮತ್ತು ಕತಾರ್ ನಡುವಿನ ಜಂಟಿ ಉದ್ಯಮವಾಗಿದೆ.

    ಸಮ್ರಾಟ್ ಸಂಪ್ರತಿ

    ಕಲೆ ಮತ್ತು ಸಂಸ್ಕೃತಿ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಪ್ರಧಾನಮಂತ್ರಿಯವರು ಗುಜರಾತಿನ ಗಾಂಧಿನಗರದಲ್ಲಿರುವ ಕೋಬಾ ತೀರ್ಥದಲ್ಲಿ ಜೈನ ಪರಂಪರೆ ವಸ್ತುಸಂಗ್ರಹಾಲಯವಾದ ‘ಸಮ್ರಾಟ್ ಸಂಪ್ರತಿ’ ಸಂಗ್ರಹಾಲಯ’ವನ್ನು ಉದ್ಘಾಟಿಸಿದರು.

    ಸಮ್ರಾಟ್ ಸಂಪ್ರತಿ ಕುರಿತು:

    • ಇವರು ಮೌರ್ಯ ಸಾಮ್ರಾಜ್ಯದ ಚಕ್ರವರ್ತಿ ಹಾಗೂ ಸಾಮ್ರಾಟ್ ಅಶೋಕನ ಮೊಮ್ಮಗನಾಗಿದ್ದಾರೆ.
    • ಇವರನ್ನು ಇಂದ್ರಪಾಲಿತ, ಸಂಗತ ಮತ್ತು ವಿಗತಾಶೋಕ ಎಂಬ ಹೆಸರುಗಳಿಂದಲೂ ಕರೆಯಲಾಗುತ್ತದೆ.
    • ಇವರ ಜೀವನ ಚರಿತ್ರೆಯನ್ನು ಸಂಪ್ರತಿಕಥಾ, ಪರಿಶಿಷ್ಟಪರ್ವ ಮತ್ತು ಪ್ರಭಾವಕಚರಿತ ಸೇರಿದಂತೆ ಪ್ರಮುಖ ಜೈನ ಧರ್ಮಗ್ರಂಥಗಳಲ್ಲಿ ವಿವರಿಸಲಾಗಿದೆ.
    • ಭಾರತ ಉಪಖಂಡದಾದ್ಯಂತ ಜೈನ ಧರ್ಮ ಮತ್ತು ಅಹಿಂಸಾ ತತ್ತ್ವವನ್ನು ಹರಡುವಲ್ಲಿ ಇವರ ನಿರ್ಣಾಯಕ ಪಾತ್ರಕ್ಕಾಗಿ, ಇವರನ್ನು ‘ಜೈನ ಅಶೋಕ’ ಎಂದು ಕರೆಯಲಾಗುತ್ತದೆ.
    • ಅಧಿಕಾರವನ್ನು ಕೇವಲ ಆಡಳಿತಕ್ಕಾಗಿ ಅಲ್ಲದೆ ಸೇವೆ ಮತ್ತು ಸಾಧನೆ ಎಂದು ಪರಿಗಣಿಸಿದ್ದ ಸಮ್ರಾಟ್ ಸಂಪ್ರತಿಯವರು ಸಿಂಹಾಸನದಿಂದಲೇ ಅಹಿಂಸೆಯನ್ನು ಹರಡಿದರು. ಜೊತೆಗೆ, ಸತ್ಯ, ಅಸ್ತೇಯ (ಕಳ್ಳತನ ಮಾಡದಿರುವುದು) ಮತ್ತು ಅಪರಿಗ್ರಹವನ್ನು (ಸಂಪತ್ತನ್ನು ಕೂಡಿಡದಿರುವುದು) ನಿಸ್ವಾರ್ಥತೆ ಹಾಗೂ ನಿರ್ಲಿಪ್ತತೆಯಿಂದ ಪ್ರಚಾರ ಮಾಡಿದರು ಎಂದು ಭಾರತದ ಪ್ರಧಾನಮಂತ್ರಿಯವರು ಶ್ಲಾಘಿಸಿದರು.
    • ಇವರು ಭಾರತ ಉಪಖಂಡದಾದ್ಯಂತ ಅನೇಕ ಜೈನ ಬಸದಿಗಳನ್ನು ನಿರ್ಮಿಸಿದ್ದಾರೆ ಮತ್ತು ಜೀರ್ಣೋದ್ಧಾರ ಮಾಡಿದ್ದಾರೆ ಎಂದು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ.

    ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಉತ್ತೇಜನ ಮತ್ತು ಅನುಮೋದನಾ ಕೇಂದ್ರ (IN-SPACe)

    ವಿಜ್ಞಾನ ಮತ್ತು ತಂತ್ರಜ್ಞಾನ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಉತ್ತೇಜನ ಮತ್ತು ಅನುಮೋದನಾ ಕೇಂದ್ರವು (IN-SPACe) ತನ್ನ ಪ್ರತಿಷ್ಠಿತ ‘ಮಾದರಿ ರಾಕೆಟ್ರಿ ಸ್ಪರ್ಧೆಯ’ 2ನೇ ಆವೃತ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ.

    ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಉತ್ತೇಜನ ಮತ್ತು ಅನುಮೋದನಾ ಕೇಂದ್ರ (IN-SPACe)ದ ಬಗ್ಗೆ:

    • IN-SPACe ಸಂಪೂರ್ಣ ರೂಪ:- ಇಂಡಿಯನ್ ನ್ಯಾಷನಲ್ ಸ್ಪೇಸ್ ಪ್ರಮೋಷನ್ ಅಂಡ್ ಆಥೋರೈಝೆಷನ್ ಸೆಂಟರ್.
    • ಇದು ಬಾಹ್ಯಾಕಾಶ ಇಲಾಖೆಯ (DOS) ಅಡಿಯಲ್ಲಿ ಕಾರ್ಯನಿರ್ವಹಿಸುವ ‘ಏಕ-ಗವಾಕ್ಷಿ’ ಮತ್ತು ಸ್ವಾಯತ್ತ ನೋಡಲ್ ಸಂಸ್ಥೆಯಾಗಿದೆ.
    • ಇದನ್ನು ಭಾರತ ಸರ್ಕಾರವು ಜೂನ್ 2020 ರಲ್ಲಿ ಸ್ಥಾಪಿಸಿತು.
    • ಇದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಹಾಗೂ ಖಾಸಗಿ ಕಂಪನಿಗಳು ಮತ್ತು ಶೈಕ್ಷಣಿಕ ವಲಯ ಸೇರಿದಂತೆ ಸರ್ಕಾರೇತರ ಸಂಸ್ಥೆಗಳ (NGEs) ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ.
    • ಅಧ್ಯಕ್ಷರು:- ಡಾ. ಪವನ್ ಕುಮಾರ್ ಗೋಯೆಂಕಾ.
    • ಪ್ರಧಾನ ಕಚೇರಿ:- ಗುಜರಾತಿನ ಅಹಮದಾಬಾದ ಜಿಲ್ಲೆಯ ಬೋಪಾಲ್‌ನಲ್ಲಿದೆ.

    ಪ್ರಮುಖ ಕಾರ್ಯಗಳು ಮತ್ತು ಜವಾಬ್ದಾರಿಗಳು:

    • ಭಾರತದಲ್ಲಿ ಖಾಸಗಿ ವಲಯದ ಬಾಹ್ಯಾಕಾಶ ಚಟುವಟಿಕೆಗಳನ್ನು ಉತ್ತೇಜಿಸುವ, ಸಕ್ರಿಯಗೊಳಿಸುವ, ಅನುಮೋದಿಸುವ ಮತ್ತು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು IN-SPACe ಹೊಂದಿದೆ.
    • ಸೌಲಭ್ಯ ಒದಗಿಸುವಿಕೆ:- ಬಾಹ್ಯಾಕಾಶ  ಗುರಿಗಳನ್ನು ನಿರ್ಮಿಸಲು ಮತ್ತು ಉಡಾವಣೆ ಮಾಡಲು ಇಸ್ರೋದ (ISRO) ಮೂಲಸೌಕರ್ಯ ಹಾಗೂ ತಾಂತ್ರಿಕ ಪರಿಣತಿಯನ್ನು ಬಳಸಿಕೊಳ್ಳಲು ಸರ್ಕಾರೇತರ ಸಂಸ್ಥೆ (NGEs)ಗಳಿಗೆ ಇದು ಅವಕಾಶ ಕಲ್ಪಿಸುತ್ತದೆ.
    • ಉತ್ತೇಜನ:- ಇದು ಈ ಕೆಳಗಿನ ಉಪಕ್ರಮಗಳ ಮೂಲಕ ಭಾರತೀಯ ಬಾಹ್ಯಾಕಾಶ ಆರ್ಥಿಕತೆಯನ್ನು ವಿಸ್ತರಿಸುವತ್ತ ಇದು ಗಮನಹರಿಸುತ್ತದೆ.
    • ‘ತಂತ್ರಜ್ಞಾನ ಅಳವಡಿಕೆ ನಿಧಿ’ (Technology Adoption Fund) – ₹500 ಕೋಟಿ ಮೌಲ್ಯದ್ದಾಗಿದೆ..
    • ‘ಸ್ಯಾಟಲೈಟ್ ಬಸ್ ಆಸ್ ಎ ಸರ್ವೀಸ್’ (SBaaS).

    ಘನತ್ಯಾಜ್ಯ ನಿರ್ವಹಣೆ (SWM) ನಿಯಮಗಳು, 2026

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ‘ಘನತ್ಯಾಜ್ಯ ನಿರ್ವಹಣೆ (SWM) ನಿಯಮಗಳು, 2026’ ಅನ್ನು ಅಧಿಸೂಚನೆ ಹೊರಡಿಸಿದೆ.

    ಘನತ್ಯಾಜ್ಯ ನಿರ್ವಹಣೆ (SWM) ನಿಯಮಗಳು, 2026 ರ ಬಗ್ಗೆ:

    • ಅನುಷ್ಠಾನ ಸಚಿವಾಲಯ:- ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC).
    • ಈ ಹೊಸ ನಿಯಮಗಳು ಏಪ್ರಿಲ್ 1, 2026 ರಿಂದ ಸಂಪೂರ್ಣವಾಗಿ ಜಾರಿಗೆ ಬರಲಿವೆ.
    • ಇವು ಪ್ರಸ್ತುತ ಇರುವ ‘SWM ನಿಯಮಗಳು 2016’ ಅನ್ನು ಬದಲಾಯಿಸಲಿವೆ ಮತ್ತು ಭಾರತವನ್ನು ‘ವೃತ್ತಾಕಾರದ ಆರ್ಥಿಕತೆ’ ಹಾಗೂ “ಶೂನ್ಯ ತ್ಯಾಜ್ಯ” ಮಾದರಿಯತ್ತ ಕೊಂಡೊಯ್ಯುವ ಗುರಿಯನ್ನು ಹೊಂದಿವೆ.

    SWM ನಿಯಮಗಳು 2026 ರ ಪ್ರಮುಖ ನಿಬಂಧನೆಗಳು:

    • ತ್ಯಾಜ್ಯವನ್ನು ಮೂಲದಲ್ಲೇ ವಿಂಗಡಿಸುವುದು ಕಡ್ಡಾಯ:- ತ್ಯಾಜ್ಯವನ್ನು ಹಸಿ, ಒಣ, ನೈರ್ಮಲ್ಯ ಮತ್ತು ವಿಶೇಷ ಕಾಳಜಿಯ (ಅಪಾಯಕಾರಿ) ತ್ಯಾಜ್ಯಗಳೆಂದು 4 ವಿಭಾಗಗಳಾಗಿ ವಿಂಗಡಿಸುವುದನ್ನು ಇದು ಕಡ್ಡಾಯಗೊಳಿಸಿದೆ.
    • ಬೃಹತ್ ತ್ಯಾಜ್ಯ ಉತ್ಪಾದಕರು:- ಪ್ರತಿದಿನ 100 ಕೆಜಿ ಅಥವಾ ಅದಕ್ಕಿಂತ ಹೆಚ್ಚು ತ್ಯಾಜ್ಯವನ್ನು ಉತ್ಪಾದಿಸುವ ಸಂಸ್ಥೆಗಳು ಹಸಿ ತ್ಯಾಜ್ಯವನ್ನು ಸ್ಥಳೀಯವಾಗಿಯೇ ನಿರ್ವಹಿಸಬೇಕು ಅಥವಾ ‘ವಿಸ್ತರಿತ ಉತ್ಪಾದಕರ ಜವಾಬ್ದಾರಿ’ (EPR) ನೀತಿಯನ್ನು ಅಳವಡಿಸಿಕೊಳ್ಳಬೇಕು.
    • ತ್ಯಾಜ್ಯ ಸಂಸ್ಕರಿತ ಇಂಧನದ ಬಳಕೆ:- ಕೈಗಾರಿಕೆಗಳು ಮತ್ತು ಸಿಮೆಂಟ್ ಕಾರ್ಖಾನೆಗಳು ಮುಂದಿನ 6 ವರ್ಷಗಳೊಳಗೆ ‘ತ್ಯಾಜ್ಯ ಸಂಸ್ಕರಿತ ಇಂಧನ’ದ (RDF) ಬಳಕೆಯನ್ನು 5% ರಿಂದ 15% ಕ್ಕೆ ಕಡ್ಡಾಯವಾಗಿ ಹೆಚ್ಚಿಸಬೇಕು.
    • CPCB ಪೋರ್ಟಲ್:- ತ್ಯಾಜ್ಯದ ಸಂಪೂರ್ಣ ಜೀವನಚಕ್ರವನ್ನು ಮೇಲ್ವಿಚಾರಣೆ ಮಾಡಲು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ (CPCB) ಕೇಂದ್ರೀಕೃತ ಪೋರ್ಟಲ್ ಅನ್ನು ಬಳಸಲಾಗುತ್ತದೆ.
    • “ಮಾಲಿನ್ಯ ಮಾಡುವವರೇ ದಂಡ ತೆರಬೇಕು” (Polluter Pays Principle) ನಿಯಮಗಳ ಕಟ್ಟುನಿಟ್ಟಿನ ಜಾರಿ:- ಮತ್ತು ಹಳೆಯ ತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿಗದಿತ ಕಾಲಮಿತಿಯೊಳಗೆ ಕಡ್ಡಾಯವಾಗಿ ಮರುಸ್ಥಾಪಿಸಲಾಗುತ್ತದೆ.
  • ಅರಬ್ ಲೀಗ್ (Arab League) | ಭಾರತೀಯ ನೌಕಾಪಡೆಗೆ 3 ಮುಂಚೂಣಿ ಯುದ್ಧನೌಕಾ ವೇದಿಕೆಗಳ ಹಸ್ತಾಂತರ

    ಅರಬ್ ಲೀಗ್ (Arab League)

    ಅಂತರರಾಷ್ಟ್ರೀಯ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಹಲವು ಅರಬ್ ರಾಷ್ಟ್ರಗಳ ಮೇಲೆ ಇರಾನ್ ನಡೆಸಿದ ಆಕ್ರಮಣಕಾರಿ ದಾಳಿಗಳನ್ನು ‘ಅರಬ್ ರಾಷ್ಟ್ರಗಳ ಒಕ್ಕೂಟದ ಮಂಡಳಿ’ಯು (Council of the League of Arab States) ತೀವ್ರವಾಗಿ ಖಂಡಿಸಿದೆ.

    ಅರಬ್ ಲೀಗ್ ಬಗ್ಗೆ:

    • ಇದನ್ನು ಅಧಿಕೃತವಾಗಿ ‘ಅರಬ್ ರಾಷ್ಟ್ರಗಳ ಒಕ್ಕೂಟ’ (League of Arab States) ಎಂದು ಕರೆಯಲಾಗುತ್ತದೆ. ಇದನ್ನು 1945 ರಲ್ಲಿ ‘ಕೈರೋ’ದಲ್ಲಿ ಆರಂಭಿಕವಾಗಿ ಏಳು ಸದಸ್ಯ ರಾಷ್ಟ್ರಗಳೊಂದಿಗೆ ಸ್ಥಾಪಿಸಲಾಯಿತು.
    • 7 ಸಂಸ್ಥಾಪಕ ಸದಸ್ಯ ರಾಷ್ಟ್ರಗಳು:- ಈಜಿಪ್ಟ್, ಇರಾಕ್, ಜೋರ್ಡಾನ್, ಲೆಬನಾನ್, ಸೌದಿ ಅರೇಬಿಯಾ, ಸಿರಿಯಾ ಮತ್ತು ಯೆಮನ್.
    • ಪ್ರಸ್ತುತ ಇದು 22 ಸದಸ್ಯ ರಾಷ್ಟ್ರಗಳನ್ನು ಹೊಂದಿದೆ.
    • ಇದರ ಸದಸ್ಯ ರಾಷ್ಟ್ರಗಳು ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾದಲ್ಲಿ ನೆಲೆಗೊಂಡಿವೆ.
    • ಇದು ಆರ್ಥಿಕ ಮತ್ತು ಸೇನಾ ವ್ಯವಹಾರಗಳಲ್ಲಿ ಸಹಕರಿಸಲು ವಾಗ್ದಾನ ಮಾಡಿದೆ.
    • 4 ರಾಷ್ಟ್ರಗಳಿಗೆ ‘ವೀಕ್ಷಕ ಸ್ಥಾನಮಾನ’ವನ್ನು ನೀಡಲಾಗಿದೆ: ಬ್ರೆಜಿಲ್, ಎರಿಟ್ರಿಯಾ, ಭಾರತ ಮತ್ತು ವೆನೆಜುವೆಲಾ.

    ಭಾರತೀಯ ನೌಕಾಪಡೆಗೆ 3 ಮುಂಚೂಣಿ ಯುದ್ಧನೌಕಾ ವೇದಿಕೆಗಳ ಹಸ್ತಾಂತರ

    ರಕ್ಷಣೆ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ ಅಂಡ್ ಇಂಜಿನಿಯರ್ಸ್ ಲಿಮಿಟೆಡ್ (GRSE) ಸಂಸ್ಥೆಯು, ಭಾರತೀಯ ನೌಕಾಪಡೆಗೆ ಐಎನ್‌ಎಸ್ ದೂನಗಿರಿ, ಐಎನ್‌ಎಸ್ ಸಂಶೋಧಕ್ ಮತ್ತು ಐಎನ್‌ಎಸ್ ಅಗ್ರೇ ಎಂಬ ಮೂರು ಅತ್ಯಾಧುನಿಕ ಯುದ್ಧನೌಕಾ ವೇದಿಕೆಗಳನ್ನು (Frontline naval platforms) ಹಸ್ತಾಂತರಿಸಿದೆ.
    1. ಐಎನ್‌ಎಸ್ ದೂನಗಿರಿ (INS Dunagiri – P17A ರಾಡಾರ್-ವಂಚಕ ಯುದ್ಧನೌಕೆ):
    • ಇದು GRSE ಸಂಸ್ಥೆ ನಿರ್ಮಿಸಿದ ‘ಪ್ರಾಜೆಕ್ಟ್ 17A’ಯ ಎರಡನೇ ರಡಾರ್‌ಗೆ ಸುಲಭವಾಗಿ ಪತ್ತೆಯಾಗದ ಯುದ್ಧನೌಕೆ (Stealth frigate) ಆಗಿದ್ದು, ಈ ವರ್ಗದ ಐದನೇ ನೌಕೆಯಾಗಿದೆ.
    • ಇದು ಬ್ರಹ್ಮೋಸ್ ನಂತಹ ನೆಲದಿಂದ-ನೆಲಕ್ಕೆ ಚಿಮ್ಮುವ ಕ್ಷಿಪಣಿಗಳು (Surface-to-surface missiles) ಮತ್ತು MF-STAR ರಾಡಾರ್‌ನಂತಹ ಸುಧಾರಿತ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಹೊಂದಿದೆ.
    • ಶತ್ರುಗಳ ರಾಡಾರ್‌ಗಳ ಕಣ್ತಪ್ಪಿಸುವ ಉನ್ನತ ಮಟ್ಟದ ‘ರಾಡಾರ್-ವಂಚಕ’ (Stealth) ತಂತ್ರಜ್ಞಾನದೊಂದಿಗೆ ಇದನ್ನು ವಿನ್ಯಾಸಗೊಳಿಸಲಾಗಿದೆ.
    1. ಐಎನ್‌ಎಸ್ ಸಂಶೋಧಕ್ (INS Sanshodhak – ಬೃಹತ್ ಜಲ-ಸಮೀಕ್ಷಾ ನೌಕೆ):
    • ಇದು ಬೃಹತ್ ಜಲ-ಸಮೀಕ್ಷಾ ನೌಕಾ (Survey Vessel – Large) ಯೋಜನೆಯ ನಾಲ್ಕನೇ ಮತ್ತು ಅಂತಿಮ ಹಡಗಾಗಿದೆ.
    • ಸ್ವಾಯತ್ತ ಜಲಾಂತರ್ಗಾಮಿ ವಾಹನಗಳು (AUVs) ಮತ್ತು ದೂರ-ನಿಯಂತ್ರಿತ ವಾಹನಗಳನ್ನು (ROVs) ಬಳಸಿಕೊಂಡು ಕರಾವಳಿ ಪ್ರದೇಶ ಮತ್ತು ಬಂದರುಗಳ ಪೂರ್ಣ-ಪ್ರಮಾಣದ ಜಲ-ಭೌಗೋಳಿಕ ಸಮೀಕ್ಷೆಗಳನ್ನು ನಡೆಸುವುದು ಇದರ ಪ್ರಾಥಮಿಕ ಪಾತ್ರವಾಗಿದೆ.
    • ಇದು ಶೇ. 80 ಕ್ಕಿಂತ ಹೆಚ್ಚು ಸ್ಥಳೀಯ ಬಿಡಿಭಾಗಗಳನ್ನು ಒಳಗೊಂಡಿದೆ.
    1. ಐಎನ್‌ಎಸ್ ಅಗ್ರೇ (INS Agray – ಜಲಾಂತರ್ಗಾಮಿ-ನಿರೋಧಕ ಕರಾವಳಿ ಯುದ್ಧನೌಕೆ):
    • ಇದು ಎಂಟು ಜಲಾಂತರ್ಗಾಮಿ-ನಿರೋಧಕ ಕರಾವಳಿ ಯುದ್ಧನೌಕೆಗಳ ಸರಣಿಯಲ್ಲಿ ನಾಲ್ಕನೆಯದಾಗಿದೆ.
    • ಇದು ‘ಜಲ-ನೂಕುಬಲ/ನೋದನ’ (Waterjet propulsion) ತಂತ್ರಜ್ಞಾನದಿಂದ ಚಾಲಿತವಾಗಿರುವ ಅತಿದೊಡ್ಡ ಭಾರತೀಯ ಯುದ್ಧನೌಕೆಗಳಲ್ಲಿ ಒಂದಾಗಿದ್ದು, ಆಳವಿಲ್ಲದ ಕರಾವಳಿ ಪ್ರದೇಶಗಳಲ್ಲಿನ ನೀರಿನೊಳಗಿನ ಅಪಾಯಗಳನ್ನು ಪತ್ತೆಹಚ್ಚಿ ಅವುಗಳನ್ನು ತಟಸ್ಥಗೊಳಿಸಲು ಅತ್ಯುತ್ತಮವಾಗಿ ವಿನ್ಯಾಸಗೊಳಿಸಲಾಗಿದೆ.
    • ಇದು ಸಂಪೂರ್ಣವಾಗಿ ಸ್ಥಳೀಯವಾಗಿ ನಿರ್ಮಿಸಲಾದ ಉಡಾವಣಾ ವಾಹನ ವ್ಯವಸ್ಥೆಗಳು (Rocket launchers) ಮತ್ತು ನೀರೊಳಗಿನ ಹಗುರವಾದ ಕ್ಷಿಪಣಿಗಳನ್ನು (Lightweight torpedoes) ಹೊಂದಿದೆ.
  • ವಿಶ್ವ ವ್ಯಾಪಾರ ಸಂಸ್ಥೆಯ 14ನೇ ಸಚಿವ ಸಮ್ಮೇಳನ | ಜನಗಣತಿ (Census), 2027

    ವಿಶ್ವ ವ್ಯಾಪಾರ ಸಂಸ್ಥೆಯ 14ನೇ ಸಚಿವ ಸಮ್ಮೇಳನ

    ಆರ್ಥಿಕತೆ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ವಿಶ್ವ ವ್ಯಾಪಾರ ಸಂಸ್ಥೆಯ (WTO) 14 ನೇ ಸಚಿವ ಸಮ್ಮೇಳನವು (MC14) ಕ್ಯಾಮರೂನ್‌ ದೇಶದ ‘ಯೌಂಡೆ’ಯಲ್ಲಿ ಮುಕ್ತಾಯಗೊಂಡಿತು.

    ಈ ಸಮ್ಮೇಳನದ ಪ್ರಮುಖ ಫಲಿತಾಂಶಗಳು ಮತ್ತು ನಿರ್ಧಾರಗಳು:

    ಪ್ರಮುಖ ವಿಷಯಗಳ ಬಗ್ಗೆ ಒಮ್ಮತದ ಕೊರತೆಯ ನಡುವೆಯೂ, ಸಚಿವರು ಹಲವಾರು ನಿರ್ಧಾರಗಳನ್ನು ಅಂಗೀಕರಿಸಿದರು. ಇವುಗಳನ್ನು ಒಟ್ಟಾಗಿ “ಯೌಂಡೆ ಪ್ಯಾಕೇಜ್” ಎಂದು ಕರೆಯಲಾಗುತ್ತದೆ. ಇವುಗಳನ್ನು ಜಿನೀವಾದಲ್ಲಿನ ಸಾಮಾನ್ಯ ಸಭೆಯಲ್ಲಿ ಮತ್ತಷ್ಟು ಪರಿಷ್ಕರಿಸಲಾಗುತ್ತದೆ:

    • ವಿಶ್ವ ವ್ಯಾಪಾರ ಸಂಸ್ಥೆ (WTO) ಸುಧಾರಣೆ:- 2028 ರ ವೇಳೆಗೆ ಹೆಚ್ಚು ಆಧುನೀಕೃತ ಮತ್ತು ಪರಿಣಾಮಕಾರಿ ಸಂಸ್ಥೆಯನ್ನು ಹೊಂದುವ ಗುರಿಯನ್ನು ಹೊಂದಿರುವ ಮಾರ್ಗಸೂಚಿಗೆ ಅನುಮೋದನೆ ನೀಡಲಾಯಿತು.
    • ಸಣ್ಣ ಮತ್ತು ದುರ್ಬಲ ಆರ್ಥಿಕತೆಗಳು ಮತ್ತು ಅಭಿವೃದ್ಧಿ:- ಜಾಗತಿಕ ವ್ಯಾಪಾರದಲ್ಲಿ ‘ಸಣ್ಣ ಮತ್ತು ದುರ್ಬಲ ಆರ್ಥಿಕತೆಗಳ’ (SVEs) ಸಂಯೋಜನೆಯನ್ನು ಸುಧಾರಿಸಲು ಅಧಿಕೃತವಾಗಿ ಪ್ಯಾಕೇಜ್‌ಗಳನ್ನು ಅಂಗೀಕರಿಸಲಾಯಿತು ಮತ್ತು ‘ವಿಶೇಷ ಮತ್ತು ಭೇದಾತ್ಮಕ ಪರಿಗಣನೆ’ಯ (S&DT) ಅನುಷ್ಠಾನವನ್ನು ಹೆಚ್ಚಿಸಲಾಯಿತು.
    • ಅತ್ಯಂತ ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಿಗೆ (LDCs) ಬೆಂಬಲ:- ತಮ್ಮ ‘LDC’ ಸ್ಥಾನಮಾನದಿಂದ ಮೇಲೇರಿದ ನಂತರದ ಪರಿವರ್ತನಾ ಹಂತದಲ್ಲಿ, ಆ ದೇಶಗಳಿಗೆ ಅಗತ್ಯ ಬೆಂಬಲ ಮತ್ತು ನೆರವು ನೀಡುವ ಪ್ರಮುಖ ಕ್ರಮಗಳನ್ನು ಒಪ್ಪಿಕೊಳ್ಳಲಾಯಿತು.
    • ಮೀನುಗಾರಿಕಾ ಸಬ್ಸಿಡಿಗಳು:- ಮುಂದಿನ 15ನೇ ಸಚಿವರ ಸಮ್ಮೇಳನದಲ್ಲಿ (MC15) ಹೆಚ್ಚುವರಿ ನಿಯಮಾವಳಿಗಳಿಗಾಗಿ ಸಮಗ್ರ ಶಿಫಾರಸುಗಳನ್ನು ಮಂಡಿಸುವ ಗುರಿಯೊಂದಿಗೆ ಮಾತುಕತೆಗಳನ್ನು ಮುಂದುವರಿಸಲು ಬದ್ಧತೆ ತೋರಲಾಗಿದೆ.

    ವಿಶ್ವ ವ್ಯಾಪಾರ ಸಂಸ್ಥೆ (WTO)ಯ ಬಗ್ಗೆ:

    • ಅಧಿಕಾರ ವ್ಯಾಪ್ತಿ:- ಇದು ರಾಷ್ಟ್ರಗಳ ನಡುವಿನ ವ್ಯಾಪಾರವನ್ನು ನಿಯಂತ್ರಿಸುವ ಮತ್ತು ಸುಗಮಗೊಳಿಸುವ ಜವಾಬ್ದಾರಿಯನ್ನು ಹೊಂದಿರುವ ಏಕೈಕ ಜಾಗತಿಕ ಅಂತರರಾಷ್ಟ್ರೀಯ ಸಂಸ್ಥೆಯಾಗಿದೆ.
    • ಸ್ಥಾಪನೆ:- 1948 ರಿಂದ ಜಾಗತಿಕ ವ್ಯಾಪಾರವನ್ನು ನಿರ್ವಹಿಸುತ್ತಿದ್ದ ‘ಸುಂಕ ಮತ್ತು ವ್ಯಾಪಾರದ ಮೇಲಿನ ಸಾಮಾನ್ಯ ಒಪ್ಪಂದ’ದ (General Agreement on Tariffs and Trade – GATT) ಮುಂದುವರಿದ ಸಾಂಸ್ಥಿಕ ರೂಪವಾಗಿ ಇದು ಜನವರಿ 1, 1995 ರಂದು ಸ್ಥಾಪನೆಯಾಯಿತು.
    • ಸದಸ್ಯ ರಾಷ್ಟ್ರಗಳು:- ಜಾಗತಿಕ ವ್ಯಾಪಾರದ 98% ಕ್ಕಿಂತ ಹೆಚ್ಚಿನ ಪಾಲನ್ನು ಪ್ರತಿನಿಧಿಸುವ 166 ಸದಸ್ಯ ರಾಷ್ಟ್ರಗಳನ್ನು ಹೊಂದಿದೆ.
    • ಪ್ರಧಾನ ಕಚೇರಿ:- ಜಿನೀವಾ, ಸ್ವಿಟ್ಜರ್ಲೆಂಡ್.

    ಜನಗಣತಿ (Census), 2027

    ರಾಜ್ಯಕೀಯ ಮತ್ತು ಆಡಳಿತ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಭಾರತವು ತನ್ನ ಮುಂದಿನ ಜನಗಣತಿಯನ್ನು ಡಿಜಿಟಲ್ ರೂಪದಲ್ಲಿ ನಡೆಸಲು ಸಜ್ಜಾಗಿದ್ದು, ಈ ಪ್ರಕ್ರಿಯೆಯು 2026 ರಲ್ಲಿ ಪ್ರಾರಂಭವಾಗಿ 2027 ರ ಮಾರ್ಚ್ 1 ರೊಳಗೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.

    ಭಾರತದಲ್ಲಿ ಜನಗಣತಿ:

    • ವ್ಯಾಖ್ಯಾನ: ಜನಗಣತಿ ಎಂದರೆ ಒಂದು ನಿರ್ದಿಷ್ಟ ಪ್ರದೇಶದ ಜನಸಂಖ್ಯೆಯ ಸಮೀಕ್ಷೆಯಾಗಿದ್ದು, ಇದು ದೇಶದ ಜನರ ವಯಸ್ಸು, ಲಿಂಗ ಮತ್ತು ವೃತ್ತಿ ಸೇರಿದಂತೆ ಒಟ್ಟಾರೆ ಜನಸಂಖ್ಯಾ ವಿವರಗಳ ಸಂಗ್ರಹವನ್ನು ಒಳಗೊಂಡಿರುತ್ತದೆ. 
    • ಇತಿಹಾಸ: ಭಾರತದ ಮೊದಲ ಜನಗಣತಿ ಆಯುಕ್ತರಾದ W.C.ಪ್ಲೌಡೆನ್ ಅವರ ನೇತೃತ್ವದಲ್ಲಿ 1881 ರಲ್ಲಿ ಮೊದಲ ಜನಗಣತಿಯನ್ನು ನಡೆಸಲಾಯಿತು.
    • ಸ್ವತಂತ್ರ ಭಾರತದ ಮೊದಲ ಜನಗಣತಿಯು 1951 ರಲ್ಲಿ ನಡೆಯಿತು ಮತ್ತು ಅಂದಿನಿಂದ ಪ್ರತಿ ದಶಕದ ಮೊದಲ ವರ್ಷದಲ್ಲಿ ಇದು ನಡೆಯುತ್ತಾ ಬಂದಿದೆ.
    • ಜನಗಣತಿ ಪ್ರಕ್ರಿಯೆಯನ್ನು ಕೈಗೊಳ್ಳಬೇಕೆಂದು ಸಂವಿಧಾನವು ಕಡ್ಡಾಯಗೊಳಿಸಿದೆ. ಆದರೆ, ಭಾರತೀಯ ಜನಗಣತಿ ಕಾಯ್ದೆ, 1948  ಅದರ ಸಮಯ ಅಥವಾ ಅವಧಿಯನ್ನು ನಿರ್ದಿಷ್ಟಪಡಿಸಿಲ್ಲ.
    • ಜನಗಣತಿಯನ್ನು ನಡೆಸುವವರು:- ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ‘ಭಾರತದ ಮಹಾನೋಂದಣಾಧಿಕಾರಿ ಮತ್ತು ಜನಗಣತಿ ಆಯುಕ್ತರು’ (Registrar General and Census Commissioner of India) ಇದನ್ನು ನಡೆಸುತ್ತಾರೆ.
  • ಪಶ್ಚಿಮ ಏಷ್ಯಾ ಬಿಕ್ಕಟ್ಟು : ಭಾರತದ ಕಾಫಿ ರಫ್ತಿಗೆ ಅಡ್ಡಿ | ಆರ್ಟೆಮಿಸ್ 2 ಮಿಷನ್ (Artemis 2 Mission) – ನಾಸಾ | ಪಿಎಂ-ಕುಸುಮ್ 2.0 (PM-KUSUM 2.0) | ಪರಮಾಣು ಒಪ್ಪಂದದಿಂದ ಹೊರಬರಲು ಇರಾನ್ ಚಿಂತನೆ

    ಪಶ್ಚಿಮ ಏಷ್ಯಾ ಬಿಕ್ಕಟ್ಟು : ಭಾರತದ ಕಾಫಿ ರಫ್ತಿಗೆ ಅಡ್ಡಿ

    ಆರ್ಥಿಕತೆ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಬಿಕ್ಕಟ್ಟು ಭಾರತದ ಕಾಫಿ ರಫ್ತಿಗೆ ತೀವ್ರ ಅಡ್ಡಿಯುಂಟುಮಾಡಿದೆ. ಪರ್ಷಿಯಾ ಕೊಲ್ಲಿಯ ಬಳಿ ಸುಮಾರು 15-20% ರಷ್ಟು ಸರಕು ಸಾಗಣೆಗಳು ಸ್ಥಗಿತಗೊಂಡಿದ್ದು, ಇದು ಪಶ್ಚಿಮ ಏಷ್ಯಾ ಮತ್ತು ಯುರೋಪ್‌ನ ಪ್ರಮುಖ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಿದೆ.

    ‘ಭಾರತದ ಕಾಫಿ ಮಂಡಳಿ’ಯ ಬಗ್ಗೆ:

      • ಶಾಸನಬದ್ಧ ಸಂಸ್ಥೆ:- ‘ಕಾಫಿ ಕಾಯ್ದೆ, 1942’ ರ ಮೂಲಕ ‘ಕಾಫಿ ಮಂಡಳಿ’ಯನ್ನು ಸ್ಥಾಪಿಸಲಾಯಿತು.
      • ಆಡಳಿತಾತ್ಮಕ ನಿಯಂತ್ರಣ:- ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ.
      • ರಚನೆ:- ಈ ಮಂಡಳಿಯು ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೇರಿದಂತೆ 33 ಸದಸ್ಯರನ್ನು ಒಳಗೊಂಡಿದೆ.
      • ಉದ್ದೇಶಗಳು:-
    • ಉತ್ಪಾದನೆ, ಉತ್ಪಾದಕತೆ ಮತ್ತು ಗುಣಮಟ್ಟದ ಉನ್ನತೀಕರಣ.
      • ಭಾರತದ ಕಾಫಿಗೆ ಹೆಚ್ಚಿನ ಮೌಲ್ಯದ ಆದಾಯವನ್ನು ತಂದುಕೊಡುವ ನಿಟ್ಟಿನಲ್ಲಿ ರಫ್ತು ಉತ್ತೇಜನ ನೀಡುವುದು.
      • ದೇಶೀಯ ಮಾರುಕಟ್ಟೆಯ ಅಭಿವೃದ್ಧಿಗೆ ಬೆಂಬಲ ನೀಡುವುದು.

    ಐತಿಹಾಸಿಕ ಹಿನ್ನೆಲೆ:

    • ಮೂಲ:- ‘ಕಾಫಿ’ ಎಂಬ ಪದವು ಇಥಿಯೋಪಿಯಾದಿಂದ ಬಂದಿದೆ, ಅಲ್ಲಿ ಅದನ್ನು ‘ಕಹ್ವೆ’ (Kahve) ಎಂದು ಕರೆಯುತ್ತಿದ್ದರು.
    • ಭಾರತಕ್ಕೆ ಪರಿಚಯ:- ಅರಬ್ಬರು ದಕ್ಷಿಣ ಭಾರತ ಮತ್ತು ಶ್ರೀಲಂಕಾದಲ್ಲಿ ಕಾಫಿ ತೋಟಗಳನ್ನು ಪರಿಚಯಿಸಿದರು.
    • ಸೂಫಿ ಸಂತ ಬಾಬಾ ಬುಡಾನ್ ಅವರು ಕರ್ನಾಟಕದ ಚಿಕ್ಕಮಗಳೂರಿನ ಸುತ್ತಮುತ್ತ ಕಾಫಿ ಗಿಡಗಳನ್ನು ಬೆಳೆಸಿದರು.

    ‘ಭಾರತದ ಕಾಫಿ ಉದ್ಯಮ’ದ ಬಗ್ಗೆ:

    • ಭಾರತದಲ್ಲಿ ಎರಡು ವಿಧದ ಕಾಫಿಯನ್ನು ಬೆಳೆಯಲಾಗುತ್ತದೆ:- ಅರೇಬಿಕಾ ಮತ್ತು ರೊಬಸ್ಟಾ.  ಅರೇಬಿಕಾವು ಅದರ ಸೌಮ್ಯವಾದ ಸುಗಂಧ ಪರಿಮಳದಿಂದಾಗಿ ರೊಬಸ್ಟಾ ಕಾಫಿಗಿಂತ ಹೆಚ್ಚಿನ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ.
    • ಎತ್ತರದ ಪ್ರದೇಶಗಳಲ್ಲಿ ‘ಅರೇಬಿಕಾ’ ಕಾಫಿ’ ಮತ್ತು ತಗ್ಗು ಪ್ರದೇಶಗಳಲ್ಲಿ ‘ರೊಬಸ್ಟಾ’ ಕಾಫಿಯನ್ನು ಬೆಳೆಯಲಾಗುತ್ತದೆ. 
    • ಭಾರತದ ಕಾಫಿಯು ನೆರಳಿನಲ್ಲಿ ಬೆಳೆಯುವ ವಿಶಿಷ್ಟತೆಯನ್ನು ಹೊಂದಿದೆ.
    • ಉತ್ಪಾದನೆ:- ಭಾರತವು ಅಗ್ರ 10 ಕಾಫಿ-ಉತ್ಪಾದಿಸುವ ದೇಶಗಳಲ್ಲಿ ಒಂದಾಗಿದ್ದು, 2020 ರಲ್ಲಿ ಜಾಗತಿಕ ಉತ್ಪಾದನೆಯ ಶೇಕಡಾ 3 ರಷ್ಟನ್ನು ಹೊಂದಿದೆ.
    • ರೊಬಸ್ಟಾ ಭಾರತದಲ್ಲಿ ಅತಿ ಹೆಚ್ಚು ಉತ್ಪಾದನೆಯಾಗುವ ಕಾಫಿಯಾಗಿದ್ದು, ಒಟ್ಟು ಕಾಫಿ ಉತ್ಪಾದನೆಯಲ್ಲಿ 72% ಪಾಲನ್ನು ಹೊಂದಿದೆ.
    • ದಕ್ಷಿಣ ಭಾರತದಲ್ಲಿ ಕಾಫಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಕರ್ನಾಟಕವು ಅತಿದೊಡ್ಡ ಉತ್ಪಾದಕ ರಾಜ್ಯವಾಗಿದ್ದು, ಭಾರತದ ಒಟ್ಟು ಕಾಫಿ ಉತ್ಪಾದನೆಯ ಶೇ. 70 ರಷ್ಟನ್ನು ಹೊಂದಿದೆ.
    • ಕೇರಳವು ಎರಡನೇ ಅತಿದೊಡ್ಡ ಉತ್ಪಾದಕ ರಾಜ್ಯವಾಗಿದ್ದು 23% ರಷ್ಟನ್ನು ಮತ್ತು ತಮಿಳುನಾಡು ಕೇವಲ 6% ರಷ್ಟನ್ನು ಹೊಂದಿದೆ.
    • ಉದ್ಯೋಗ: ಈ ಉದ್ಯಮವು ಭಾರತದಲ್ಲಿ 20 ಲಕ್ಷಕ್ಕೂ ಅಧಿಕ ಜನರಿಗೆ ನೇರ ಉದ್ಯೋಗವನ್ನು ಒದಗಿಸುತ್ತದೆ.
    • ಭಾರತವು ತನ್ನ ಒಟ್ಟು ಉತ್ಪಾದನೆಯ 70% ಕ್ಕಿಂತ ಹೆಚ್ಚಿನದನ್ನು ರಫ್ತು ಮಾಡುತ್ತದೆ. FAO ಅಂಕಿಅಂಶಗಳ ಪ್ರಕಾರ, ಒಟ್ಟು ಪ್ರಮಾಣದ ಆಧಾರದ ಮೇಲೆ ಭಾರತವು ಕಾಫಿ ರಫ್ತು ಮಾಡುವ ಜಗತ್ತಿನ ಎಂಟನೇ ಅತಿದೊಡ್ಡ ದೇಶವಾಗಿದೆ.

    ಆರ್ಟೆಮಿಸ್ 2 ಮಿಷನ್ (Artemis 2 Mission) – ನಾಸಾ

    ವಿಜ್ಞಾನ ಮತ್ತು ತಂತ್ರಜ್ಞಾನ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ಅಮೆರಿಕದ ನಾಸಾ (NASA) ಸಂಸ್ಥೆಯು ‘ಆರ್ಟೆಮಿಸ್ II’ ಮಿಷನ್ ಅನ್ನು ಉಡಾವಣೆ ಮಾಡಲು ಸನ್ನದ್ಧವಾಗಿದೆ.

    ಆರ್ಟೆಮಿಸ್ II (Artemis II) ಮಿಷನ್ ನ ಬಗ್ಗೆ:

    • ಆರ್ಟೆಮಿಸ್ II ನಾಸಾದ ಆರ್ಟೆಮಿಸ್ ಕಾರ್ಯಕ್ರಮದ ಒಂದು ಭಾಗವಾಗಿದೆ, ಇದು ಹೆಚ್ಚು ಸುಸ್ಥಿರ ಮತ್ತು ಕಾರ್ಯತಂತ್ರದ ರೀತಿಯಲ್ಲಿ ಮಾನವರನ್ನು ಚಂದ್ರನತ್ತ ಮರಳಿಸುವ ಗುರಿಯನ್ನು ಹೊಂದಿದೆ.
    • ಈ ಮಿಷನ್ ಚಂದ್ರನ ಸುತ್ತಲಿನ ಪಯಣಕ್ಕಾಗಿ ನಾಲ್ವರು ಗಗನಯಾತ್ರಿಗಳನ್ನು ಕಳುಹಿಸುತ್ತದೆ.
    • ಆರ್ಟೆಮಿಸ್ II ಮಿಷನ್ ಚಂದ್ರನ ಮೇಲೆ ದೀರ್ಘಾವಧಿಯ ಮಾನವ ಉಪಸ್ಥಿತಿಯನ್ನು ಸ್ಥಾಪಿಸುವ ವಿಶಾಲ ಪ್ರಯತ್ನದ ಒಂದು ಭಾಗವಾಗಿದೆ.
    • ಪ್ರಾಮುಖ್ಯತೆ:- ಈ ಮಿಷನ್ ಚಂದ್ರನನ್ನು ಕೇವಲ ಒಂದು ಗಮ್ಯಸ್ಥಾನವಾಗಿ ನೋಡದೆ, ಆಳವಾದ ಬಾಹ್ಯಾಕಾಶ ಪರಿಶೋಧನೆಗೆ ಒಂದು ವೇದಿಕೆಯಾಗಿ ಪರಿಗಣಿಸುತ್ತದೆ.

    ಪಿಎಂ-ಕುಸುಮ್ 2.0 (PM-KUSUM 2.0)

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಪರಿಷ್ಕೃತ ಪಿಎಂ-ಕುಸುಮ್ 2.0 ಯೋಜನೆಯ ಅಡಿಯಲ್ಲಿ ‘ಬ್ಯಾಟರಿ ಇಂಧನ ಶೇಖರಣಾ ವ್ಯವಸ್ಥೆ’ಯನ್ನು ಅಳವಡಿಸಲು ಸರ್ಕಾರ ಪರಿಗಣಿಸುತ್ತಿದೆ.

    ಪಿಎಂ-ಕುಸುಮ್ (PM-KUSUM) ಯೋಜನೆಯ ಬಗ್ಗೆ:

    • PM-KUSUM ವಿಸ್ತೃತ ರೂಪ:- ಪ್ರಧಾನ ಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ಥಾನ್ ಮಹಾಭಿಯಾನ್ (Pradhan Mantri Kisan Urja Suraksha evam Utthaan Mahabhiyan).
    • ಪ್ರಾರಂಭ:- 2019
    • ಅನುಷ್ಠಾನ:- ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ.
    • ಉದ್ದೇಶ:- ಸೌರ ಪಂಪ್‌ಗಳು ಮತ್ತು ಜಾಲ (ಗ್ರಿಡ್) ಸಂಪರ್ಕಿತ ಸೌರ ಸ್ಥಾವರಗಳಂತಹ ಸೌರ-ಚಾಲಿತ ನೀರಾವರಿ ವ್ಯವಸ್ಥೆಗಳನ್ನು ಅಳವಡಿಸಲು ರೈತರಿಗೆ ಆರ್ಥಿಕ ಬೆಂಬಲವನ್ನು ಒದಗಿಸುವುದು.
    • ಪ್ರಾಮುಖ್ಯತೆ:- ಕೃಷಿ ವಲಯಕ್ಕೆ ಕೈಗೆಟುಕುವ ಮತ್ತು ವಿಶ್ವಾಸಾರ್ಹ ಸೌರಶಕ್ತಿಯನ್ನು ತಲುಪಿಸುವುದು, ನೀರಾವರಿ ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ಡೀಸೆಲ್ ಬಳಕೆಯಿಂದ ಉಂಟಾಗುವ ಮಾಲಿನ್ಯವನ್ನು ತಗ್ಗಿಸುವುದು.
    • ಗುರಿ: ಈ ಯೋಜನೆಯು ಮಾರ್ಚ್ 2026 ರ ವೇಳೆಗೆ ಸುಮಾರು 34,800 ಮೆಗಾವ್ಯಾಟ್ (MW) ಸೌರ ಸಾಮರ್ಥ್ಯವನ್ನು ಸೇರ್ಪಡೆಗೊಳಿಸುವ ಗುರಿಯನ್ನು ಹೊಂದಿದೆ.

    ಪರಮಾಣು ಒಪ್ಪಂದದಿಂದ ಹೊರಬರಲು ಇರಾನ್ ಚಿಂತನೆ

    ಅಂತರರಾಷ್ಟ್ರೀಯ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇರಾನ್‌ನ ವಿದೇಶಾಂಗ ಸಚಿವಾಲಯದ ವಕ್ತಾರರ ಪ್ರಕಾರ, ಇರಾನ್‌ನ ಸಂಸತ್ತು ‘ಪರಮಾಣು ಪ್ರಸರಣ-ನಿಷೇಧ ಒಪ್ಪಂದ’ದಿಂದ (Nuclear Non-Proliferation Treaty – NPT) ಹೊರಬರುವ ಸಾಧ್ಯತೆಯನ್ನು ಪರಿಶೀಲಿಸುತ್ತಿದೆ.

    ಪರಮಾಣು ನಿಶಸ್ತ್ರೀಕರಣ:

    • ನಿಶ್ಶಸ್ತ್ರೀಕರಣ (Disarmament) ಎಂದರೆ ಏಕಪಕ್ಷೀಯವಾಗಿ ಅಥವಾ ಪರಸ್ಪರ ಒಪ್ಪಂದದ ಮೇರೆಗೆ ಶಸ್ತ್ರಾಸ್ತ್ರಗಳನ್ನು (ವಿಶೇಷವಾಗಿ ಆಕ್ರಮಣಕಾರಿ ಶಸ್ತ್ರಾಸ್ತ್ರಗಳನ್ನು) ಸಂಪೂರ್ಣವಾಗಿ ತೊಡೆದುಹಾಕುವ ಅಥವಾ ರದ್ದುಗೊಳಿಸುವ ಪ್ರಕ್ರಿಯೆಯಾಗಿದೆ.

    ಜಗತ್ತಿನ ಪರಮಾಣು ಶಕ್ತಿಗಳು:

    • ಜಗತ್ತಿನಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಒಂಬತ್ತು ದೇಶಗಳನ್ನು ಗುರುತಿಸಲಾಗಿದೆ.
    • ಅವುಗಳೆಂದರೆ: ಅಮೆರಿಕ (ಯುನೈಟೆಡ್ ಸ್ಟೇಟ್ಸ್), ರಷ್ಯಾ, ಚೀನಾ, ಯುನೈಟೆಡ್ ಕಿಂಗ್‌ಡಮ್, ಫ್ರಾನ್ಸ್, ಭಾರತ, ಪಾಕಿಸ್ತಾನ, ಉತ್ತರ ಕೊರಿಯಾ ಮತ್ತು ಇಸ್ರೇಲ್.

    ಪರಮಾಣು ನಿಶಸ್ತ್ರೀಕರಣಕ್ಕೆ ಸಂಬಂಧಿಸಿದ ಒಪ್ಪಂದಗಳು:

    • ಪರಮಾಣು ಅಣ್ವಸ್ತ್ರಗಳ ವಿಸ್ತರಣೆ ನಿಷೇಧ ಒಪ್ಪಂದ (NPT): 
      • ಇದು 1968 ರಲ್ಲಿ ಸಹಿ ಮಾಡಲ್ಪಟ್ಟಿತು ಮತ್ತು 1970 ರಲ್ಲಿ ಜಾರಿಗೆ ಬಂದಿತು.
      • ಇದು ಪರಮಾಣು ಶಸ್ತ್ರಾಸ್ತ್ರಗಳ ವಿಸ್ತರಣೆಯನ್ನು ನಿಷೇಧಿಸುವ ಮತ್ತು ನಿಶಸ್ತ್ರೀಕರಣವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
    • ಪರಮಾಣು ಅಣ್ವಸ್ತ್ರಗಳ ಸಂಪೂರ್ಣ ನಿಷೇಧದ ಒಪ್ಪಂದ (TPNW): 
      • ಇದು 2017 ರಲ್ಲಿ ವಿಶ್ವಸಂಸ್ಥೆಯಿಂದ ಅಂಗೀಕರಿಸಲ್ಪಟ್ಟಿತು ಮತ್ತು 2018 ರಲ್ಲಿ ಸಹಿ ಮಾಡಲು ಮುಕ್ತಗೊಳಿಸಲಾಯಿತು. 
      • ಇದು ಪರಮಾಣು ಶಸ್ತ್ರಾಸ್ತ್ರಗಳ ಅಭಿವೃದ್ಧಿ, ಪರೀಕ್ಷೆ, ಉತ್ಪಾದನೆ, ಸಂಗ್ರಹಣೆ, ನಿಯೋಜನೆ, ವರ್ಗಾವಣೆ, ಬಳಕೆ ಮತ್ತು ಬಳಕೆಯ ಅಪಾಯವನ್ನು ನಿಷೇಧಿಸುವ ಗುರಿಯನ್ನು ಹೊಂದಿದೆ.
    • ಸಮಗ್ರ ಪರಮಾಣು-ಪರೀಕ್ಷಾ-ನಿಷೇಧದ ಒಪ್ಪಂದ (CTBT):
      • ಇದನ್ನು 1996 ರಲ್ಲಿ ಸಹಿ ಮಾಡಲು ಮುಕ್ತಗೊಳಿಸಲಾಯಿತು.
      • ಇದು ನಾಗರಿಕ ಮತ್ತು ಸೇನಾ ಉದ್ದೇಶಗಳಿಗಾಗಿ ನಡೆಯುವ ಎಲ್ಲಾ ಪರಮಾಣು ಸ್ಫೋಟಗಳನ್ನು ನಿಷೇಧಿಸುವ ಗುರಿಯನ್ನು ಹೊಂದಿದೆ.
      • ಈ ಒಪ್ಪಂದಕ್ಕೆ 185 ದೇಶಗಳು ಸಹಿ ಹಾಕಿವೆ ಮತ್ತು 170 ದೇಶಗಳು ಅಂಗೀಕರಿಸಿವೆ, ಆದರೆ ಇದು ಕಾರ್ಯರೂಪಕ್ಕೆ ಬರಲು ಎಲ್ಲಾ ಪರಮಾಣು-ಸಜ್ಜಿತ ರಾಷ್ಟ್ರಗಳು ಇದನ್ನು ಕಡ್ಡಾಯವಾಗಿ ಅಂಗೀಕರಿಸಬೇಕಾಗಿರುವುದರಿಂದ ಇದು ಇನ್ನೂ ಜಾರಿಗೆ ಬಂದಿಲ್ಲ.
    • ಬಾಹ್ಯಾಕಾಶ ಒಪ್ಪಂದ (Outer Space Treaty):
      • ಈ ಬಹುಪಕ್ಷೀಯ ಒಪ್ಪಂದವು 1967 ರಲ್ಲಿ ಜಾರಿಗೆ ಬಂದಿತು ಮತ್ತು ಬಾಹ್ಯಾಕಾಶದಲ್ಲಿ ಸಾಮೂಹಿಕ ವಿನಾಶಕಾರಿ ಅಣ್ವಸ್ತ್ರಗಳ ನಿಯೋಜನೆಯನ್ನು ನಿಷೇಧಿಸುತ್ತದೆ.

    ಭಾರತದ ಪರಮಾಣು ಅಣ್ವಸ್ತ್ರಗಳ ಕಾರ್ಯಕ್ರಮ:

    • ಸ್ಮೈಲಿಂಗ್ ಬುದ್ಧ:- 1974 ರಲ್ಲಿ, ಭಾರತವು ತನ್ನ ಮೊದಲ ಪರಮಾಣು ಪರೀಕ್ಷೆಯನ್ನು “ಸ್ಮೈಲಿಂಗ್ ಬುದ್ಧ” ಎಂಬ ಸಂಕೇತನಾಮದಲ್ಲಿ ನಡೆಸಿತು. ಅಂದಿನಿಂದ, ಇದು ಭೂ-ಆಧಾರಿತ, ಸಮುದ್ರ-ಆಧಾರಿತ ಮತ್ತು ವಾಯು-ಆಧಾರಿತ ವಿತರಣಾ ವ್ಯವಸ್ಥೆಗಳನ್ನು ಒಳಗೊಂಡಿರುವ ‘ಪರಮಾಣು ತ್ರಯ’ವನ್ನು (Nuclear triad) ಅಭಿವೃದ್ಧಿಪಡಿಸಿದೆ.
    • ಆಪರೇಷನ್ ಶಕ್ತಿ:- 1998 ರಲ್ಲಿ, ಭಾರತವು ಪೋಖ್ರಾನ್‌ನಲ್ಲಿ ಸರಣಿ ಪರಮಾಣು ಪರೀಕ್ಷೆಗಳನ್ನು ನಡೆಸಿತು, ಇದಕ್ಕೆ “ಆಪರೇಷನ್ ಶಕ್ತಿ” ಎಂದು ಹೆಸರಿಸಲಾಗಿತ್ತು.
  • ವಿಶ್ವ ಬೌದ್ಧ ಶಾಂತಿ ಸಮ್ಮೇಳನ, 2026 | ಆಂಧ್ರಪ್ರದೇಶದಲ್ಲಿ ಆಲಿವ್ ರಿಡ್ಲೆ ಕಡಲಾಮೆಗಳ ಸಂರಕ್ಷಣೆ | “ತುಂಗುಸ್ಕಾ” ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ | ಕೆಂಪು-ಕಿರೀಟದ ಛಾವಣಿ ರೀತಿಯ ಚಿಪ್ಪಿನ ಆಮೆ (Red-Crowned Roofed Turtle) | ಪಿಎಂ ಇ-ಡ್ರೈವ್  (PM e-DRIVE) ಯೋಜನೆ | ಜೊಜಿಲಾ ಕಣಿವೆ ಮಾರ್ಗ (Zojila Pass)

    ವಿಶ್ವ ಬೌದ್ಧ ಶಾಂತಿ ಸಮ್ಮೇಳನ, 2026

    ಇತಿಹಾಸ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ಇತ್ತೀಚಿಗೆ ವಿಶ್ವ ಬೌದ್ಧ ಶಾಂತಿ ಸಮ್ಮೇಳನ 2026 ರ ಉದ್ಘಾಟನಾ ಸಮಾರಂಭಕ್ಕೆ ಹೈದರಾಬಾದ್ ಆತಿಥ್ಯ ವಹಿಸಿತ್ತು.

    ವಿಶ್ವ ಬೌದ್ಧ ಶಾಂತಿ ಸಮ್ಮೇಳನ 2026 ರ ಬಗ್ಗೆ:

    • ಆಯೋಜಕರು:- ‘ವಿಯೆಟ್ನಾಂ ಬೌದ್ಧ ಸಂಘ’ದ ಸಹಯೋಗದೊಂದಿಗೆ, ‘ಬುದ್ಧವನಂ’ ಮತ್ತು ‘ತೆಲಂಗಾಣ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ’ವು ಜಂಟಿಯಾಗಿ ಇದನ್ನು ಆಯೋಜಿಸಿದ್ದವು.
    • ಉದ್ದೇಶ:- ವಿಶ್ವದ ಬೌದ್ಧ ರಾಷ್ಟ್ರಗಳಿಗೆ ‘ಬುದ್ಧವನಂ’ ಅನ್ನು ಒಂದು ‘ಬೌದ್ಧ ಪರಂಪರೆಯ ವಿಷಯಾಧಾರಿತ ಉದ್ಯಾನ’ (ಥೀಮ್ ಪಾರ್ಕ್)ವನ್ನಾಗಿ ಪ್ರದರ್ಶಿಸುವುದು.

    ‘ಬುದ್ಧವನಂ’ ಬಗ್ಗೆ:

    • ಇದು ತೆಲಂಗಾಣದಲ್ಲಿದ್ದು, ಭಾರತದ ಮೊದಲ ‘ಬೌದ್ಧ ಪರಂಪರೆಯ ವಿಷಯಾಧಾರಿತ ಉದ್ಯಾನ’ವಾಗಿದೆ.
    • ಇದು ಕೃಷ್ಣಾ ನದಿಯ ದಡದಲ್ಲಿ ನೆಲೆಗೊಂಡಿದೆ.
    • ಇದು ಕಲೆ, ಶಿಲ್ಪಗಳು, ಧ್ಯಾನ ವಲಯಗಳು ಮತ್ತು ವಿಷಯಾಧಾರಿತ ರಚನೆಗಳ ಮೂಲಕ ಭಗವಾನ್ ಬುದ್ಧನ ಜೀವನ ಮತ್ತು ಬೋಧನೆಗಳನ್ನು ಅನಾವರಣಗೊಳಿಸುತ್ತದೆ.
    • ಇದನ್ನು ‘ತೆಲಂಗಾಣ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ’ವು (TSTDC) ಅಭಿವೃದ್ಧಿಪಡಿಸಿದೆ.

    ಆಂಧ್ರಪ್ರದೇಶದಲ್ಲಿ ಆಲಿವ್ ರಿಡ್ಲೆ ಕಡಲಾಮೆಗಳ ಸಂರಕ್ಷಣೆ

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ವನ್ಯಜೀವಿ ನಿರ್ವಹಣಾ ಪ್ರಾಧಿಕಾರ ಮತ್ತು ‘ಕೋರಿಂಗಾ ವನ್ಯಜೀವಿ ಅಭಯಾರಣ್ಯ’ದ ಅಧಿಕಾರಿಗಳು ಕಾಕಿನಾಡ ಕೊಲ್ಲಿಯ ‘ಹೋಪ್ ದ್ವೀಪ’ದಲ್ಲಿ ಸುಮಾರು 20,000 ಆಲಿವ್ ರಿಡ್ಲೆ ಕಡಲಾಮೆಗಳ ಮೊಟ್ಟೆಗಳನ್ನು ಸಂರಕ್ಷಿಸಿದ್ದಾರೆ.

    ಆಲಿವ್ ರಿಡ್ಲೆ ಕಡಲಾಮೆಗಳ ಬಗ್ಗೆ:

    • ಆಲಿವ್ ರಿಡ್ಲೆ ಕಡಲಾಮೆಗಳು ಪ್ರಪಂಚದಲ್ಲಿಯೇ ಕಂಡುಬರುವ ಎಲ್ಲಾ ಕಡಲಾಮೆಗಳಲ್ಲಿ ಅತಿ ಚಿಕ್ಕದಾದ ಮತ್ತು ಅತಿ ಹೆಚ್ಚು ಸಂಖ್ಯೆಯಲ್ಲಿರುವ ಪ್ರಭೇದವಾಗಿವೆ.
    • ಭಾರತದಲ್ಲಿನ ಪ್ರಮುಖ ಗೂಡುಕಟ್ಟುವ ತಾಣಗಳು:- 
    • ರುಷಿಕುಲ್ಯ ರುಕರಿ ಕರಾವಳಿ (ಒಡಿಶಾ), 
    • ಗಹಿರ್ಮಾತಾ ಕಡಲತೀರ (ಭಿತರ್‌ಕನಿಕಾ ರಾಷ್ಟ್ರೀಯ ಉದ್ಯಾನವನ), 
    • ದೇಬಿ ನದಿಯ ಮುಖಜ ಭೂಮಿ.
    • ಹಂಚಿಕೆ:- ಪೆಸಿಫಿಕ್, ಅಟ್ಲಾಂಟಿಕ್ ಮತ್ತು ಹಿಂದೂ ಮಹಾಸಾಗರಗಳ ಬೆಚ್ಚಗಿನ ನೀರು ಇರುವ ಪ್ರದೇಶಗಳಲ್ಲಿ ಇವು ಕಂಡುಬರುತ್ತವೆ.
    • ‘ಅರಿಬಾಡಾ’:- ಸಾವಿರಾರು ಹೆಣ್ಣು ಆಮೆಗಳು ಒಂದೇ ಕಡಲತೀರದಲ್ಲಿ ಒಗ್ಗೂಡಿ ಮೊಟ್ಟೆಯಿಡುವ ‘ಅರಿಬಾಡಾ’ ಎಂಬ ವಿಶಿಷ್ಟ ಸಾಮೂಹಿಕ ಗೂಡುಕಟ್ಟುವ ಪ್ರಕ್ರಿಯೆಗೆ ಇವು ಹೆಸರುವಾಸಿಯಾಗಿವೆ.
    • ಮಾಂಸಾಹಾರಿಗಳಾಗಿವೆ:- ಮುಖ್ಯವಾಗಿ ಜೆಲ್ಲಿ ಮೀನು, ಸೀಗಡಿ ಮುಂತಾದವುಗಳನ್ನು ತಿನ್ನುತ್ತವೆ.
    • ಭ್ರೂಣ ವಿಕಸನದ ಅವಧಿಯಲ್ಲಿ ಮರಳು ಮತ್ತು ವಾತಾವರಣದ ತಾಪಮಾನವನ್ನು ಅವಲಂಬಿಸಿ ಮೊಟ್ಟೆಗಳು 45 ರಿಂದ 60 ದಿನಗಳಲ್ಲಿ ಒಡೆಯುತ್ತವೆ.
    • ಪ್ರಮುಖ ಅಪಾಯಗಳು:- ಮಾಂಸ ಮತ್ತು ಚಿಪ್ಪಿಗಾಗಿ ಬೇಟೆಯಾಡುವುದು ಹಾಗೂ ಬೃಹತ್ ಯಾಂತ್ರೀಕೃತ ಮೀನುಗಾರಿಕಾ ಹಡಗುಗಳ (Trawlers) ಬಳಕೆಯಂತಹ ಮಾನವ-ಪ್ರೇರಿತ ಚಟುವಟಿಕೆಗಳು ಇವುಗಳ ಅಸ್ತಿತ್ವಕ್ಕೆ ತೀವ್ರ ಕುತ್ತು ತಂದಿವೆ.
    • ಸಂರಕ್ಷಣಾ ಸ್ಥಿತಿಗತಿ:- 
    1. IUCN ಕೆಂಪು ಪಟ್ಟಿ: ದುರ್ಬಲ (VU).
    2. ಭಾರತೀಯ ವನ್ಯಜೀವಿ (ಸಂರಕ್ಷಣೆ) ಕಾಯ್ದೆ, 1972: ಅನುಸೂಚಿ I.
    3. CITES: ಅನುಬಂಧ I.

    ಕೋರಿಂಗಾ ವನ್ಯಜೀವಿ ಅಭಯಾರಣ್ಯದ ಬಗ್ಗೆ:

    • ಇದು ಆಂಧ್ರಪ್ರದೇಶದ ಕಾಕಿನಾಡದ ಸಮೀಪವಿರುವ, ಭಾರತದ ಎರಡನೇ ಅತ್ಯಂತ ದೊಡ್ಡ ಮ್ಯಾಂಗ್ರೋವ್ ಅರಣ್ಯವಾಗಿದೆ.
    • ಗೋದಾವರಿ ನದಿಯು ಬಂಗಾಳಕೊಲ್ಲಿಯನ್ನು ಸೇರುವ ‘ಗೋದಾವರಿ ಅಳಿವೆ’ ಪ್ರದೇಶದಲ್ಲಿ ಈ ಅಭಯಾರಣ್ಯವಿದೆ.
    • ಸೂಚಕ ಪ್ರಭೇದಗಳು:- ಮೀನುಗಾರ ಬೆಕ್ಕು (Fishing cat), ನಯವಾದ-ತುಪ್ಪಳದ ನೀರುನಾಯಿ (Smooth-coated otter), ಮತ್ತು ಚಿನ್ನದ-ಬಣ್ಣದ ನರಿ (Golden jackal).

    “ತುಂಗುಸ್ಕಾ” ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ

    ರಕ್ಷಣೆ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ರಕ್ಷಣಾ ಸಚಿವಾಲಯವು ‘ತುಂಗುಸ್ಕಾ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ’ಯ ಖರೀದಿಗೆ ಹಲವು ಒಪ್ಪಂದಗಳಿಗೆ ಸಹಿ ಹಾಕಿದೆ.

    ತುಂಗುಸ್ಕಾ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯ ಬಗ್ಗೆ:

    • ತುಂಗುಸ್ಕಾ ಒಂದು ಸೋವಿಯತ್-ಮೂಲದ (1980 ರ ದಶಕದ ಆರಂಭದಲ್ಲಿ ಸೇರ್ಪಡೆಗೊಂಡ), ‘ಟ್ರ್ಯಾಕ್-ಆಧಾರಿತ’ (ಯುದ್ಧ ಟ್ಯಾಂಕ್‌ಗಳಂತೆ ಚಲಿಸುವ) ಮತ್ತು ಸ್ವಯಂಚಾಲಿತ ವಾಯು ರಕ್ಷಣಾ ವ್ಯವಸ್ಥೆಯಾಗಿದೆ.
    • ಉದ್ದೇಶ:- ಕಡಿಮೆ ಎತ್ತರದಲ್ಲಿ ಹಾರುವ ವೈಮಾನಿಕ ಅಪಾಯಗಳಿಂದ ಭೂಸೇನೆಯನ್ನು ರಕ್ಷಿಸಲು ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
    • ನವೀಕರಿಸಿದ ಆವೃತ್ತಿಗಳು:- 2K22M, ಮತ್ತು 2K22M1. ಇವುಗಳು ಸುಧಾರಿತ ದಾಳಿ-ನಿಯಂತ್ರಣ ವ್ಯವಸ್ಥೆ ಮತ್ತು ಹೆಚ್ಚಿನ ಕ್ಷಿಪಣಿ ಸಾಮರ್ಥ್ಯವನ್ನು ಹೊಂದಿವೆ.
    • ವಿಶೇಷತೆ:- ಇದು ಕೇವಲ ಒಂದೇ ವೇದಿಕೆಯಲ್ಲಿ ಕ್ಷಿಪಣಿಗಳು ಮತ್ತು ಫಿರಂಗಿಗಳನ್ನು ವಿಶಿಷ್ಟವಾಗಿ ಸಂಯೋಜಿಸಿರುವ ಜಗತ್ತಿನ ಪ್ರಬಲ ವ್ಯವಸ್ಥೆಗಳಲ್ಲಿ ಒಂದಾಗಿದೆ.

    ಕೆಂಪು-ಕಿರೀಟದ ಛಾವಣಿ ರೀತಿಯ ಚಿಪ್ಪಿನ ಆಮೆ (Red-Crowned Roofed Turtle)

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಒಂದು ಕಾಲದಲ್ಲಿ ಗಂಗಾ ನದಿಯ ‘ಅಮೂಲ್ಯ ರತ್ನ’ದಂತಿದ್ದ ಕೆಂಪು-ಕಿರೀಟದ ಛಾವಣಿ-ಚಿಪ್ಪಿನ ಆಮೆಯು, ಇದೀಗ ವೇಗವಾಗಿ ಕ್ಷೀಣಿಸುತ್ತಿರುವ ಆವಾಸಸ್ಥಾನದಲ್ಲಿ ಬದುಕುಳಿಯಲು ತೀವ್ರ ಹೋರಾಟ ನಡೆಸುತ್ತಿದೆ.

    ಕೆಂಪು-ಕಿರೀಟದ ಛಾವಣಿ-ಚಿಪ್ಪಿನ ಆಮೆಯ ಬಗ್ಗೆ:

    • ವೈಜ್ಞಾನಿಕ ಹೆಸರು:- ಬತಗೂರ್ ಕಚುಗಾ (Batagur kachuga)
    • ಕುಲ (Genus):- ಬಟಗೂರ್ (ಭಾರತದಲ್ಲಿ ಕಂಡುಬರುವ ಮೂರು ದೊಡ್ಡ ಸಿಹಿನೀರಿನ ಆಮೆ ಪ್ರಭೇದಗಳಲ್ಲಿ ಇದೂ ಒಂದಾಗಿದೆ).
    • ಆವಾಸಸ್ಥಾನ:- ಭಾರತವನ್ನು ಹೊರತುಪಡಿಸಿ, ಬಾಂಗ್ಲಾದೇಶ ಮತ್ತು ನೇಪಾಳಗಳು ಕೇವಲ ಅಲ್ಪಪ್ರಮಾಣದ ಆವಾಸಸ್ಥಾನವನ್ನು ಹೊಂದಿವೆ, ಹಾಗೂ ಅಲ್ಲಿ ಯಾವುದೇ ಖಚಿತವಾದ ವನ್ಯ-ಸಂತತಿ ಕಂಡುಬಂದಿಲ್ಲ.
    • ಪ್ರಾಥಮಿಕವಾಗಿ ಸಸ್ಯಾಹಾರಿಯಾಗಿದೆ:- ಜಲಸಸ್ಯಗಳನ್ನು ನಿಯಂತ್ರಿಸಲು ಮತ್ತು ಪೋಷಕಾಂಶಗಳ ಮರುಬಳಕೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಮೂಲಕ ಸಮತೋಲಿತ ಸಿಹಿನೀರಿನ ಪರಿಸರ ವ್ಯವಸ್ಥೆಗೆ ಬೆಂಬಲ ನೀಡುತ್ತದೆ.
    • ಪ್ರಮುಖ ಅಪಾಯಗಳು:- ವಯಸ್ಕ ಆಮೆಗಳು ಮತ್ತು ಮೊಟ್ಟೆಗಳ ಅತಿಯಾದ ಬೇಟೆ, ಅಕ್ರಮ ವ್ಯಾಪಾರ ಮತ್ತು ಆವಾಸಸ್ಥಾನದ ನಾಶ.
    • ಸಂರಕ್ಷಣಾ ಸ್ಥಿತಿಗತಿ:
    1. IUCN ಕೆಂಪು ಪಟ್ಟಿ:- ತೀವ್ರವಾಗಿ ಅಳಿವಿನಂಚಿನಲ್ಲಿರುವ ಪ್ರಭೇದ (CR).
    2. ಭಾರತೀಯ ವನ್ಯಜೀವಿ (ಸಂರಕ್ಷಣೆ) ಕಾಯ್ದೆ, 1972:- ಅನುಸೂಚಿ I.
    3. CITES:- ಅನುಬಂಧ I.

    ಪಿಎಂ ಇ-ಡ್ರೈವ್  (PM e-DRIVE) ಯೋಜನೆ

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ಸರ್ಕಾರವು ಇ-ಸ್ಕೂಟರ್‌ಗಳು ಮತ್ತು ಇ-ರಿಕ್ಷಾಗಳಿಗೆ ಹೊಸ ಗಡುವು ಮತ್ತು ಘಟಕದ ಮಿತಿಗಳನ್ನು ನಿಗದಿಪಡಿಸಲು PM E-DRIVE ಯೋಜನೆಯನ್ನು ಪರಿಷ್ಕರಿಸಿದೆ.

    ಪಿಎಂ ಇ-ಡ್ರೈವ್ (PM e-DRIVE) ಯೋಜನೆಯ ಬಗ್ಗೆ:

    • PM e-DRIVE ಸಂಕ್ಷಿಪ್ತ ರೂಪ:- ಪಿಎಂ ಎಲೆಕ್ಟ್ರಿಕ್ ಡ್ರೈವ್ ರೆವಲ್ಯೂಷನ್ ಇನ್ ಇನ್ನೋವೇಟಿವ್ ವೆಹಿಕಲ್ ಎನ್‌ಹ್ಯಾನ್ಸ್‌ಮೆಂಟ್ (PM Electric Drive Revolution in Innovative Vehicle Enhancement)
    • ಉದ್ದೇಶ: ಭಾರತದಲ್ಲಿ ಚಾರ್ಜಿಂಗ್ ಮೂಲಸೌಕರ್ಯವನ್ನು ಸ್ಥಾಪಿಸುವುದು ಮತ್ತು ಎಲೆಕ್ಟ್ರಿಕ್ ವಾಹನ (EV) ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು.
    • ಅವಧಿ:- ಈ ಯೋಜನೆಯನ್ನು ಅಕ್ಟೋಬರ್ 1, 2024 ರಿಂದ ಮಾರ್ಚ್ 31, 2026 ರವರೆಗೆ ಜಾರಿಗೊಳಿಸಲಾಗುವುದು.
    • ಇ-ವೋಚರ್‌ಗಳು:- ಯೋಜನೆಯ ಅಡಿಯಲ್ಲಿ ಬೇಡಿಕೆ ಆಧಾರಿತ ಪ್ರೋತ್ಸಾಹಕಗಳನ್ನು ಪಡೆಯಲು ಇ-ವಾಹನಗಳ ಖರೀದಿದಾರರಿಗೆ ‘ಭಾರೀ ಕೈಗಾರಿಕಾ ಸಚಿವಾಲಯ‘ವು ಇ-ವೋಚರ್‌ಗಳನ್ನು ಪರಿಚಯಿಸುತ್ತಿದೆ.
    • ಚಾರ್ಜಿಂಗ್ ಕೇಂದ್ರಗಳು:- ಸಾರ್ವಜನಿಕ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳ (EVPCS) ಸ್ಥಾಪನೆಯನ್ನು ಬೃಹತ್ ಪ್ರಮಾಣದಲ್ಲಿ ಉತ್ತೇಜಿಸುವ ಮೂಲಕ, ಈ ಯೋಜನೆಯು ಇ-ವಾಹನಗಳ (EV) ಖರೀದಿದಾರರ ‘ಮೈಲೇಜ್ ಆತಂಕ’ವನ್ನು ಪರಿಹರಿಸುತ್ತದೆ.

    EV ಉತ್ತೇಜಿಸಲು ಭಾರತ ಸರ್ಕಾರದ ಪ್ರಮುಖ ಉಪಕ್ರಮಗಳು:

    • ಭಾರತದ ಎಲೆಕ್ಟ್ರಿಕ್ ವಾಹನ ನೀತಿ:- 2030 ರ ವೇಳೆಗೆ ಖಾಸಗಿ ಕಾರುಗಳಲ್ಲಿ 30%, ವಾಣಿಜ್ಯ ಕಾರುಗಳಲ್ಲಿ 70%, ಬಸ್‌ಗಳಲ್ಲಿ 40% ಮತ್ತು ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಲ್ಲಿ 80% ರಷ್ಟು EV ಮಾರಾಟದ ವಿಸ್ತರಣೆಯನ್ನು ಹೊಂದುವ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸುವುದು.
    • ರಾಷ್ಟ್ರೀಯ ಎಲೆಕ್ಟ್ರಿಕ್ ಚಲನಶೀಲತಾ ಗುರಿ ಯೋಜನೆ (NEMMP):- ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸುವ ಮೂಲಕ ರಾಷ್ಟ್ರೀಯ ಇಂಧನ ಭದ್ರತೆಯನ್ನು ಸಾಧಿಸುವ ಗುರಿಯೊಂದಿಗೆ 2013 ರಲ್ಲಿ NEMMP ಯನ್ನು ಪ್ರಾರಂಭಿಸಲಾಯಿತು.
    • ಫೇಮ್ ಇಂಡಿಯಾ ಯೋಜನೆ (FAME):- ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ವೇಗವರ್ಧಿತ ಅಳವಡಿಕೆ ಮತ್ತು ಉತ್ಪಾದನೆಯನ್ನು ಉತ್ತೇಜಿಸುವ ಪ್ರಮುಖ ಉದ್ದೇಶದಿಂದ 2015 ರಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲಾಯಿತು.

    ಜೊಜಿಲಾ ಕಣಿವೆ ಮಾರ್ಗ (Zojila Pass)

    ಭೂಗೋಳ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ಜೊಜಿಲಾ ಕಣಿವೆ ಮಾರ್ಗದಲ್ಲಿ ಸಂಭವಿಸಿದ ಹಿಮಪಾತವು ಅನೇಕ ಜೀವಗಳನ್ನು ಬಲಿಪಡೆದುಕೊಂಡಿದ್ದು, ಈ ಅತಿ-ಅಪಾಯಕಾರಿ ಪರ್ವತ ಹೆದ್ದಾರಿಯಲ್ಲಿ ಸಂಚಾರ ನಿರ್ವಹಣೆ ಮತ್ತು ಸುರಕ್ಷತಾ ನಿಯಮಾವಳಿಗಳ ಬಗ್ಗೆ ತೀವ್ರ ಕಳವಳವನ್ನು ಹುಟ್ಟುಹಾಕಿದೆ.

    ಜೊಜಿಲಾ ಕಣಿವೆ ಮಾರ್ಗದ ಬಗ್ಗೆ: 

    • ಇದು ವಿಶ್ವದ ಅತ್ಯಂತ ನಿರ್ಣಾಯಕ ಮತ್ತು ಸವಾಲಿನ ಎತ್ತರದ ಕಣಿವೆ ಮಾರ್ಗಗಳಲ್ಲಿ ಒಂದಾಗಿದೆ.
    • ಇದು ಜಮ್ಮು ಮತ್ತು ಕಾಶ್ಮೀರದಲ್ಲಿ 3,528 ಮೀಟರ್ ಎತ್ತರದಲ್ಲಿದೆ.
    • ಇದು ಕಾಶ್ಮೀರ ಕಣಿವೆ ಮತ್ತು ಲಡಾಖ್ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿದೆ.
    • ಇದು ತನ್ನ ಆಯಕಟ್ಟಿನ ಪ್ರಾಮುಖ್ಯತೆ ಮತ್ತು ಬೆರಗುಗೊಳಿಸುವ ಹಿಮಾಲಯದ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ.

    ಜೊಜಿಲಾ ಸುರಂಗ ಮಾರ್ಗ ಯೋಜನೆಯ ಬಗ್ಗೆ:

    • ಇದು ಜಮ್ಮು ಮತ್ತು ಕಾಶ್ಮೀರದ ಶ್ರೀನಗರ-ಲೇಹ್ ಹೆದ್ದಾರಿಯಲ್ಲಿ 11,578 ಅಡಿ (ಸುಮಾರು 3,500 ಮೀಟರ್) ಎತ್ತರದಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗವಾಗಿದೆ.
    • ಇದು ಭಾರತದ ಅತಿ ಉದ್ದದ ರಸ್ತೆ ಸುರಂಗ ಮಾರ್ಗ ಮತ್ತು ಏಷ್ಯಾದ ಅತಿ ಉದ್ದದ ದ್ವಿಮುಖ ಸಂಚಾರದ ಸುರಂಗ ಮಾರ್ಗವಾಗಲಿದೆ.

    ಹಿಮಪಾತ (Avalanche)ದ ಬಗ್ಗೆ:

    • ವ್ಯಾಖ್ಯಾನ:- ಪರ್ವತದ ಇಳಿಜಾರಿನ ಉದ್ದಕ್ಕೂ ಹಿಮ, ಬಂಡೆಗಳು, ಮಂಜುಗಡ್ಡೆ ಮತ್ತು ಇತರ ಅವಶೇಷಗಳು ವೇಗವಾಗಿ ಕುಸಿಯುವುದನ್ನು ಹಿಮಪಾತ ಎನ್ನಲಾಗುತ್ತದೆ.

    ಹಿಮಪಾತ (Avalanche) v/s ಭೂಕುಸಿತ (Landslide):

    ಪ್ರಮುಖ ಅಂಶ

    ಹಿಮಪಾತ (Avalanche)

    ಭೂಕುಸಿತ (Landslide)

    ವ್ಯಾಖ್ಯಾನ

    ಇಳಿಜಾರಿನ ಉದ್ದಕ್ಕೂ ಹಿಮ, ಮಂಜುಗಡ್ಡೆ ಮತ್ತು ಅವಶೇಷಗಳ ವೇಗದ ಹರಿವು.

    ಬೆಟ್ಟದ ಇಳಿಜಾರಿನಲ್ಲಿ ಬಂಡೆ, ಮಣ್ಣು ಅಥವಾ ಅವಶೇಷಗಳ ಸಮೂಹವು ಕುಸಿಯುವುದು.

    ವೇಗ

    ಗಂಟೆಗೆ 320 ಕಿ.ಮೀ (200 mph) ವರೆಗಿನ ವೇಗವನ್ನು ತಲುಪಬಹುದು.

    ಇದರ ವೇಗ ಬದಲಾಗುತ್ತದೆ, ಆದರೆ ಸಾಮಾನ್ಯವಾಗಿ ಹಿಮಪಾತಗಳಿಗಿಂತ ನಿಧಾನವಾಗಿರುತ್ತದೆ.

    ಕಾರಣಗಳು

    ದುರ್ಬಲ ಹಿಮದ ಪದರಗಳು, ಹವಾಮಾನ ಅಥವಾ ಮಾನವ ಚಟುವಟಿಕೆ.

    ಭಾರಿ ಮಳೆ, ಭೂಕಂಪಗಳು ಅಥವಾ ಮಾನವ ಚಟುವಟಿಕೆ.

    ಸ್ಥಳ

    ಹಿಮದಿಂದ ಆವೃತವಾದ ಪರ್ವತಗಳು ಅಥವಾ ಇಳಿಜಾರುಗಳು.

    ವಿವಿಧ ಭೂಪ್ರದೇಶಗಳಲ್ಲಿನ (ಅರಣ್ಯಗಳು, ನಗರ ಪ್ರದೇಶಗಳು, ಬೆಟ್ಟಗಳು) ಕಡಿದಾದ ಇಳಿಜಾರುಗಳು.

  • ಭಾರತದ ರಾಷ್ಟ್ರೀಯವಾಗಿ ನಿರ್ಧರಿಸಲಾದ ಕೊಡುಗೆಗಳು, 2031-2035 | ಪಿತೃತ್ವ ರಜೆ (Paternity Leave) | QS ಜಾಗತಿಕ ವಿಶ್ವವಿದ್ಯಾಲಯಗಳ ವಿಷಯವಾರು ಶ್ರೇಯಾಂಕ, 2026

    ಭಾರತದ ರಾಷ್ಟ್ರೀಯವಾಗಿ ನಿರ್ಧರಿಸಲಾದ ಕೊಡುಗೆಗಳು, 2031-2035

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ಹವಾಮಾನ ಬದಲಾವಣೆಯ ಮೇಲಿನ ವಿಶ್ವಸಂಸ್ಥೆಯ ಚೌಕಟ್ಟಿನ ಸಮಾವೇಶ (UNFCCC) ಮತ್ತು ಪ್ಯಾರಿಸ್ ಒಪ್ಪಂದದ ಅಡಿಯಲ್ಲಿ 2031-2035ರ ಅವಧಿಗೆ ಭಾರತದ ನವೀಕರಿಸಲಾದ ‘ರಾಷ್ಟ್ರೀಯವಾಗಿ ನಿರ್ಧರಿಸಲಾದ ಕೊಡುಗೆ’ಗಳಿಗೆ (NDC) ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ.

    ರಾಷ್ಟ್ರೀಯವಾಗಿ ನಿರ್ಧರಿಸಲಾದ ಕೊಡುಗೆಗಳ (NDCs) ಬಗ್ಗೆ:

    • NDC ವಿಸ್ತೃತ ರೂಪ:- ನ್ಯಾಷನಲ್ಲಿ ಡಿಟರ್ಮೈನೆಡ್ ಕಾಂಟ್ರಿಬ್ಯುಷನ್ (Nationally Determined Contribution).
    • ಇವು ಪ್ಯಾರಿಸ್ ಒಪ್ಪಂದದ ಅಡಿಯಲ್ಲಿ ಸಲ್ಲಿಸಲಾದ ರಾಷ್ಟ್ರ-ನಿರ್ದಿಷ್ಟ ಹವಾಮಾನ ಕ್ರಿಯಾ ಯೋಜನೆಗಳಾಗಿವೆ.
    • ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತು ಹವಾಮಾನ ಬದಲಾವಣೆಗೆ ಹೊಂದಿಕೊಳ್ಳಲು ಇವು ಗುರಿಗಳನ್ನು ರೂಪಿಸುತ್ತವೆ.
    • ಮಹತ್ವಾಕಾಂಕ್ಷೆಯ ಗುರಿಗಳನ್ನು ಉನ್ನತೀಕರಿಸಲು NDC ಗಳನ್ನು ನಿಯತಕಾಲಿಕವಾಗಿ ಪರಿಷ್ಕರಿಸಲಾಗುತ್ತದೆ.

    NDC 3.0 (2031-2035) ರಲ್ಲಿನ ಪ್ರಮುಖ ಗುರಿಗಳು:

    • ಹೊರಸೂಸುವಿಕೆಯ ತೀವ್ರತೆಯ ಕಡಿತ:- ಭಾರತವು 2035 ರ ವೇಳೆಗೆ ತನ್ನ GDP ಯ ಹೊರಸೂಸುವಿಕೆಯ ತೀವ್ರತೆಯನ್ನು (ಪ್ರತಿ ಯೂನಿಟ್ ಜಿಡಿಪಿಗೆ CO₂) 2005 ರ ಮಟ್ಟಕ್ಕಿಂತ 47% ರಷ್ಟು ಕಡಿಮೆ ಮಾಡಲು ಬದ್ಧವಾಗಿದೆ.
    • ಭಾರತವು ಈಗಾಗಲೇ 2005 ಮತ್ತು 2020 ರ ನಡುವೆ ತನ್ನ ಹೊರಸೂಸುವಿಕೆಯ ತೀವ್ರತೆಯನ್ನು ಸುಮಾರು 36% ರಷ್ಟು ಕಡಿಮೆ ಮಾಡಿದೆ.
    • ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯದ ವಿಸ್ತರಣೆ:- ಭಾರತವು 2035 ರ ವೇಳೆಗೆ ತನ್ನ ಒಟ್ಟು ಸ್ಥಾಪಿತ ವಿದ್ಯುತ್ ಸಾಮರ್ಥ್ಯದ 60% ರಷ್ಟನ್ನು ಪಳೆಯುಳಿಕೆಯೇತರ ಇಂಧನ ಮೂಲಗಳಿಂದ ಸಾಧಿಸಲು ಬದ್ಧವಾಗಿದೆ.
    • ಭಾರತವು ತನ್ನ ಹಿಂದಿನ ಗುರಿಗಿಂತ ಮುಂಚಿತವಾಗಿಯೇ, 2026 ರ ವೇಳೆಗೆ 52% ಕ್ಕಿಂತ ಹೆಚ್ಚಿನ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯವನ್ನು ಈಗಾಗಲೇ ಸಾಧಿಸಿದೆ.
    • ಇಂಗಾಲದ ಹೀರುನೆಲೆ (Carbon Sink) ಸೃಷ್ಟಿ:- ಭಾರತವು 2035 ರ ವೇಳೆಗೆ ಅರಣ್ಯ ಮತ್ತು ವೃಕ್ಷಗಳ ಹೊದಿಕೆಯ ಮೂಲಕ 3.5 ರಿಂದ 4 ಬಿಲಿಯನ್ ಟನ್‌ಗಳಷ್ಟು CO₂ ಸಮಾನವಾದ ಇಂಗಾಲದ ಹೀರುನೆಲೆಯನ್ನು ಸೃಷ್ಟಿಸಲು ಬದ್ಧವಾಗಿದೆ.

    NDC ಗುರಿಗಳನ್ನು ಸಾಧಿಸಲು ಭಾರತ ಸರ್ಕಾರದ ಪ್ರಮುಖ ಉಪಕ್ರಮಗಳು:

    • ಪಿಎಂ ಸೂರ್ಯ ಘರ್ ‘ಮುಫ್ತ್ ಬಿಜ್ಲಿ ಯೋಜನೆ’:- ಈ ಯೋಜನೆಯು ಮನೆಗಳಲ್ಲಿ ಮೇಲ್ಛಾವಣಿ ಸೌರಶಕ್ತಿಯನ್ನು ಉತ್ತೇಜಿಸುವ ಮತ್ತು ಪಳೆಯುಳಿಕೆ ಇಂಧನ-ಆಧಾರಿತ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.
    • ಪಿಎಂ-ಕುಸುಮ್ (PM-KUSUM):- ‘ಪ್ರಧಾನ ಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ಥಾನ್ ಮಹಾಭಿಯಾನ್’ ಯೋಜನೆಯು ಸೌರ ಪಂಪ್‌ಗಳು ಮತ್ತು ವಿಕೇಂದ್ರೀಕೃತ ಸೌರ ಸ್ಥಾವರಗಳನ್ನು ಉತ್ತೇಜಿಸುತ್ತದೆ, ಈ ಮೂಲಕ ಕೃಷಿಯಲ್ಲಿ ಡೀಸೆಲ್ ಬಳಕೆಯನ್ನು ಕಡಿಮೆ ಮಾಡುತ್ತದೆ.
    • ರಾಷ್ಟ್ರೀಯ ಹಸಿರು ಜಲಜನಕ ಮಿಷನ್:- ಇದು ಇಂಗಾಲ ಕಡಿತಕ್ಕೆ ತೀವ್ರ ಸವಾಲಾಗಿರುವ ವಲಯಗಳನ್ನು ಇಂಗಾಲ-ಮುಕ್ತಗೊಳಿಸುವ ಮತ್ತು ಭಾರತವನ್ನು ಜಾಗತಿಕ ಹಸಿರು ಜಲಜನಕದ ಕೇಂದ್ರವಾಗಿ ಇರಿಸುವ ಗುರಿಯನ್ನು ಹೊಂದಿದೆ.

    ಪಿತೃತ್ವ ರಜೆ (Paternity Leave)

    ಆಡಳಿತ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ದತ್ತು ಪಡೆದ ಅಥವಾ ಜೈವಿಕ ತಂದೆ ಸೇರಿದಂತೆ ಎಲ್ಲಾ ತಂದೆಯರಿಗೂ ‘ಪಿತೃತ್ವ ರಜೆ’ಯನ್ನು ನೀಡುವ ಔಪಚಾರಿಕ ಕಾನೂನಿನ ಅಗತ್ಯವನ್ನು ಪರಿಶೀಲಿಸುವಂತೆ ಭಾರತದ ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

    ಪಿತೃತ್ವ ರಜೆಯ ಬಗ್ಗೆ:

    • ನವಜಾತ ಅಥವಾ ದತ್ತು ಪಡೆದ ಮಗುವಿನ ಆರೈಕೆ ಮಾಡಲು ಮತ್ತು ಹೆರಿಗೆಯ ನಂತರ ತಾಯಿಗೆ ಬೆಂಬಲ ನೀಡಲು ಪುರುಷ ಉದ್ಯೋಗಿಗೆ (ತಂದೆಗೆ) ನೀಡಲಾಗುವ ರಜೆಯನ್ನೇ ಪಿತೃತ್ವ ರಜೆ ಎನ್ನಲಾಗುತ್ತದೆ.
    • ಗಮನಿಸಿ:- ಭಾರತವು ಸಾರ್ವತ್ರಿಕ ಪಿತೃತ್ವ ರಜಾ ಕಾನೂನನ್ನು ಹೊಂದಿಲ್ಲ.
    • ಆದಾಗ್ಯೂ, ಕೇಂದ್ರ ನಾಗರಿಕ ಸೇವಾ (ರಜೆ) ನಿಯಮಗಳು, 1972 ರ ಅಡಿಯಲ್ಲಿ, ಪುರುಷ ಸರ್ಕಾರಿ ಉದ್ಯೋಗಿಗಳು 15 ದಿನಗಳ ಪಿತೃತ್ವ ರಜೆಗೆ ಅರ್ಹರಾಗಿರುತ್ತಾರೆ. ಇದನ್ನು ಅವರು ತಮ್ಮ ಮಗು ಜನಿಸಿದ ಅಥವಾ ದತ್ತು ಪಡೆದ 6 ತಿಂಗಳೊಳಗೆ ಪಡೆಯಬಹುದಾಗಿದೆ.

    ಸರ್ವೋಚ್ಚ ನ್ಯಾಯಾಲಯದ ಪ್ರಮುಖ ಮಾರ್ಗಸೂಚಿಗಳು:

    2026 ರಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯವು ಸರ್ಕಾರವನ್ನು ಈ ಕೆಳಗಿನಂತೆ ಒತ್ತಾಯಿಸಿದೆ:

    • ಪಿತೃತ್ವ ರಜೆಯ ಕುರಿತು ಪ್ರತ್ಯೇಕ ಕಾನೂನನ್ನು ರೂಪಿಸುವುದು.
    • ಇದನ್ನು ಒಂದು ‘ಸಾಮಾಜಿಕ ಭದ್ರತಾ ಪ್ರಯೋಜನ’ವೆಂದು (Social security benefit) ಪರಿಗಣಿಸುವುದು.

    (ಹೆಚ್ಚುವರಿ ಮಾಹಿತಿ: ಸ್ವೀಡನ್, ಐಸ್‌ಲ್ಯಾಂಡ್ ಮತ್ತು ಜರ್ಮನಿಯಂತಹ ದೇಶಗಳು ವೇತನ ಸಹಿತ ಪೋಷಕರ ರಜೆಗಳನ್ನು ಒದಗಿಸುತ್ತವೆ).

    QS ಜಾಗತಿಕ ವಿಶ್ವವಿದ್ಯಾಲಯಗಳ ವಿಷಯವಾರು ಶ್ರೇಯಾಂಕ, 2026

    ಇತರೆ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ‘QS ಜಾಗತಿಕ ವಿಶ್ವವಿದ್ಯಾಲಯಗಳ ವಿಷಯವಾರು ಶ್ರೇಯಾಂಕ’ದ 16ನೇ ವಾರ್ಷಿಕ ಆವೃತ್ತಿಯನ್ನು ಇತ್ತೀಚೆಗೆ ಪ್ರಕಟಿಸಲಾಗಿದೆ.

    QS ಜಾಗತಿಕ ವಿಶ್ವವಿದ್ಯಾಲಯಗಳ ವಿಷಯವಾರು ಶ್ರೇಯಾಂಕ:

      • ಇದು ಲಂಡನ್ ಮೂಲದ ಉನ್ನತ ಶಿಕ್ಷಣದ ವಿಶ್ಲೇಷಣಾ ಸಂಸ್ಥೆಯಾಗಿದೆ.
      • ಇದು ವಿಶ್ವವಿದ್ಯಾನಿಲಯಗಳಿಗೆ ಒಟ್ಟಾರೆ ಶ್ರೇಯಾಂಕ ನೀಡುವ ಬದಲು, ನಿರ್ದಿಷ್ಟವಾಗಿ 55 ಪ್ರತ್ಯೇಕ ವಿಷಯಗಳಿಗೆ ಶ್ರೇಯಾಂಕವನ್ನು ನೀಡುತ್ತದೆ. 
      • ಇದು ಶೈಕ್ಷಣಿಕ ಉತ್ಕೃಷ್ಟತೆಯ ಹೆಚ್ಚು ಸ್ಪಷ್ಟವಾದ ಚಿತ್ರಣವನ್ನು ಒದಗಿಸುತ್ತದೆ.
      • ಈ 55 ವಿಷಯಗಳನ್ನು 5 ವಿಶಾಲ ಕ್ಷೇತ್ರಗಳಾಗಿ ವಿಂಗಡಿಸಲಾಗಿದೆ:
    • ಕಲೆ ಮತ್ತು ಮಾನವಿಕ ವಿಜ್ಞಾನ
    • ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ
    • ಜೀವ ವಿಜ್ಞಾನ ಮತ್ತು ವೈದ್ಯಕೀಯ
    • ನೈಸರ್ಗಿಕ ವಿಜ್ಞಾನ
    • ಸಮಾಜ ವಿಜ್ಞಾನ ಮತ್ತು ನಿರ್ವಹಣೆ.

    ಭಾರತೀಯ ಸಂಸ್ಥೆಗಳ ಸಾಧನೆ:-

    • IIT-ISM  ಧನ್‌ಬಾದ್ (ಭಾರತೀಯ ಗಣಿ ವಿದ್ಯಾಲಯ):- ಖನಿಜ ಮತ್ತು ಗಣಿಗಾರಿಕೆ ಎಂಜಿನಿಯರಿಂಗ್‌ನಲ್ಲಿ ಜಾಗತಿಕವಾಗಿ 21ನೇ ಶ್ರೇಯಾಂಕವನ್ನು ಪಡೆದಿದೆ.
    • IIM ಅಹಮದಾಬಾದ್:- ವ್ಯವಹಾರ ಮತ್ತು ನಿರ್ವಹಣಾ ಅಧ್ಯಯನ ಹಾಗೂ ಮಾರ್ಕೆಟಿಂಗ್ ವಿಭಾಗಗಳೆರಡರಲ್ಲೂ ಭಾರತದ ಉನ್ನತ ಶ್ರೇಣಿಯ ಸಂಸ್ಥೆಯಾಗಿ ಹೊರಹೊಮ್ಮಿದೆ.

    IIED Food Security Index

    Syllabus: GS3/ Economy

    In News

    • A new study by the International Institute for Environment and Development (IIED) has found that India is among the large economies most vulnerable to worsening food insecurity under rising global temperatures.

    Key Highlights

    • India’s Position:
    • India’s baseline score in the new Food Security Index is 5.31, significantly below the global average of 6.74.
    • It is behind countries such as Brazil, Mexico, and Indonesia, indicating structural weaknesses in its food system.
    • Impact of Rising Temperatures:
    • India’s score is projected to decline further to:
    • 4.96 at 1.5°C warming
    • 4.52 at 2°C warming.
    • This means that climate change (long-term rise in global temperatures and weather instability) could increasingly reduce access to adequate food.
  • ಭಾರತೀಯ ಮಾನದಂಡಗಳ ಕಾರ್ಯಾಲಯ (BIS) | ಸುಭಾಷ್ ಚಂದ್ರ ಬೋಸ್ ಆಪದಾ ಪ್ರಬಂಧನ್ ಪುರಸ್ಕಾರ |

    ಭಾರತೀಯ ಮಾನದಂಡಗಳ ಕಾರ್ಯಾಲಯ (BIS)

    ಆರ್ಥಿಕತೆ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರು ‘ಭಾರತೀಯ ಮಾನದಂಡಗಳ ಕಾರ್ಯಾಲಯ’ (BIS) ದಶಕದ ಸಾಧನೆಗಳನ್ನು ಇತ್ತೀಚಿಗೆ ಶ್ಲಾಘಿಸಿದ್ದಾರೆ.

    ಭಾರತೀಯ ಮಾನದಂಡಗಳ ಕಾರ್ಯಾಲಯ (BIS)ದ ಬಗ್ಗೆ:

    • BIS ನ ಸಂಕ್ಷಿಪ್ತ ರೂಪ:- ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (Bureau of Indian Standards)
    • ಸಚಿವಾಲಯ:- ಇದು ಭಾರತ ಸರ್ಕಾರದ ‘ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ’ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
    • ಸ್ಥಾಪನೆ:- ‘ಭಾರತೀಯ ಮಾನದಂಡಗಳ ಕಾಯ್ದೆ, 2016’ (BIS Act, 2016) ರ ಅಡಿಯಲ್ಲಿ ಇದನ್ನು ಸ್ಥಾಪಿಸಲಾಗಿದೆ.
    • ಜಾರಿಗೆ:- ಅಕ್ಟೋಬರ್ 12, 2017.
    • ಪ್ರಧಾನ ಕಚೇರಿ:- ನವದೆಹಲಿ.

    BISನ ಪ್ರಮುಖ ಕಾರ್ಯಗಳು:

    • ಭಾರತೀಯ ಮಾನದಂಡಗಳ ರಚನೆ:- ವಿವಿಧ ವಲಯಗಳಲ್ಲಿ ‘ಭಾರತೀಯ ಮಾನದಂಡಗಳ ‘ (Indian Standards – IS) ರಚನೆಯನ್ನು ಮಾಡುತ್ತದೆ.
    • ಉತ್ಪನ್ನ ಪ್ರಮಾಣೀಕರಣ ಯೋಜನೆ:- ಸ್ವಯಂಪ್ರೇರಿತ ಮತ್ತು ಕಡ್ಡಾಯ – ಎರಡೂ ರೀತಿಯ ಉತ್ಪನ್ನ ಪ್ರಮಾಣೀಕರಣ ಯೋಜನೆಗಳ ನಿರ್ವಹಣೆ.
    • ಗುಣಮಟ್ಟ ನಿಯಂತ್ರಣ ಆದೇಶಗಳು (QCOs) ಬಿಡುಗಡೆ:- ಕೆಲವು ನಿರ್ದಿಷ್ಟ ಉತ್ಪನ್ನಗಳಿಗೆ ಭಾರತೀಯ ಮಾನದಂಡಗಳ ಅನುಸರಣೆಯನ್ನು ಕಡ್ಡಾಯಗೊಳಿಸುವ ಆದೇಶಗಳನ್ನು ಬಿಡುಗಡೆ ಮಾಡುವುದು.
    • ಪ್ರಮುಖ ಯೋಜನೆಗಳು:- ಗ್ರಾಹಕರ ರಕ್ಷಣೆಯ ಅಂತಿಮ ಗುರಿಯೊಂದಿಗೆ ಕೈಗಾರಿಕೆಗಳ ಅನುಕೂಲಕ್ಕಾಗಿ BIS ಹಲವಾರು ಯೋಜನೆಗಳನ್ನು ನಡೆಸುತ್ತಿದೆ. ಅವುಗಳೆಂದರೆ: ಉತ್ಪನ್ನ ಪ್ರಮಾಣೀಕರಣ ( ISI ಮುದ್ರೆ), ನಿರ್ವಹಣಾ ವ್ಯವಸ್ಥೆಗಳ ಪ್ರಮಾಣೀಕರಣ, ಚಿನ್ನ ಮತ್ತು ಬೆಳ್ಳಿ ಆಭರಣಗಳು/ಕಲಾಕೃತಿಗಳ ಹಾಲ್‌ಮಾರ್ಕಿಂಗ್ ಮತ್ತು ಪ್ರಯೋಗಾಲಯ ಸೇವೆಗಳು.

    ಸುಭಾಷ್ ಚಂದ್ರ ಬೋಸ್ ಆಪದಾ ಪ್ರಬಂಧನ್ ಪುರಸ್ಕಾರ

    ಪ್ರಶಸ್ತಿಗಳು / ಇತರೆ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ಸುಭಾಷ್ ಚಂದ್ರ ಬೋಸ್ ಆಪದಾ ಪ್ರಬಂಧನ್ ಪುರಸ್ಕಾರವು ಒಂದು ಪ್ರತಿಷ್ಠಿತ ರಾಷ್ಟ್ರೀಯ ಗೌರವವಾಗಿದ್ದು, ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವಾದ ಜನವರಿ 23 ರಂದು ಪ್ರತಿವರ್ಷ ಇದನ್ನು ಘೋಷಿಸಲಾಗುತ್ತದೆ.

    ಸುಭಾಷ್ ಚಂದ್ರ ಬೋಸ್ ಆಪದಾ ಪ್ರಬಂಧನ್ ಪುರಸ್ಕಾರದ ಬಗ್ಗೆ:

      • ಉದ್ದೇಶ:- ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿ ವ್ಯಕ್ತಿಗಳು ಮತ್ತು ಸಂಸ್ಥೆಗಳು ನೀಡಿದ ಅಮೂಲ್ಯವಾದ ಕೊಡುಗೆಗಳನ್ನು ಗುರುತಿಸುವುದು ಮತ್ತು ಗೌರವಿಸುವುದು.
    • ಪುರಸ್ಕಾರದ ವಿಭಾಗಗಳು:
    • ವ್ಯಕ್ತಿಗತ ವಿಭಾಗ: ಪ್ರಶಸ್ತಿ ಪತ್ರ ಮತ್ತು ಪದಕ.
    • ಸಂಸ್ಥೆಗಳ ವಿಭಾಗ: ಪ್ರಶಸ್ತಿ ಪತ್ರ ಮತ್ತು ಫಲಕ.
    • ಭಾರತೀಯ ನಾಗರಿಕರು ಹಾಗೂ ಸಂಸ್ಥೆಗಳು – ಎರಡೂ ಸಹ ಈ ಪುರಸ್ಕಾರಕ್ಕೆ ಅರ್ಹವಾಗಿವೆ.
    • ಅರ್ಜಿಗಳನ್ನು ಕಡ್ಡಾಯವಾಗಿ ‘ರಾಷ್ಟ್ರೀಯ ಪ್ರಶಸ್ತಿಗಳ ಪೋರ್ಟಲ್’ ಮೂಲಕ ಆನ್‌ಲೈನ್‌ನಲ್ಲಿಯೇ ಸಲ್ಲಿಸಬೇಕು.
    • ನಾಮನಿರ್ದೇಶನಗಳನ್ನು ವರ್ಷಪೂರ್ತಿ ಸ್ವೀಕರಿಸಲಾಗುತ್ತದೆ.
    • ಇದರಲ್ಲಿ ಸ್ವಯಂ-ನಾಮನಿರ್ದೇಶನಕ್ಕೆ ಹಾಗೂ ಅನ್ಯ-ವ್ಯಕ್ತಿ ನಾಮನಿರ್ದೇಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

    ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಬಗ್ಗೆ:

    • ಸುಭಾಷ್ ಚಂದ್ರ ಬೋಸ್ ಅವರು ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಅಪ್ರತಿಮ ರಾಷ್ಟ್ರೀಯವಾದಿ ಹಾಗೂ ಅಗ್ರಗಣ್ಯ ನಾಯಕರಾಗಿದ್ದರು.
    • ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC):- ಅವರು 1938 (ಹರಿಪುರ ಅಧಿವೇಶನ) ಮತ್ತು 1939 (ತ್ರಿಪುರಿ ಅಧಿವೇಶನ) ರಲ್ಲಿ ಸತತ ಎರಡು ಬಾರಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
    • ಆಜಾದ್ ಹಿಂದ್ ರೇಡಿಯೋ (1942):- ಭಾರತೀಯರೊಂದಿಗೆ ಸಂಪರ್ಕ ಸಾಧಿಸಲು ಮತ್ತು ತಮ್ಮ ಸ್ವಾತಂತ್ರ್ಯದ ಆಶಯವನ್ನು ಪಸರಿಸಲು ಅವರು ಜರ್ಮನಿಯಲ್ಲಿ ‘ಆಜಾದ್ ಹಿಂದ್ ರೇಡಿಯೋ’ವನ್ನು ಸ್ಥಾಪಿಸಿದರು.
    • ಪ್ರಮುಖ ಘೋಷವಾಕ್ಯಗಳು:- “ಜೈ ಹಿಂದ್”, “ದಿಲ್ಲಿ ಚಲೋ” (ದೆಹಲಿಯೆಡೆಗೆ ಸಾಗಿ), ಮತ್ತು “ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ”.
    • ಭಾರತೀಯ ರಾಷ್ಟ್ರೀಯ ಸೇನೆಯ (INA) 1942 ರಲ್ಲಿ ರಚನೆ:-, ಅವರು ಜಪಾನಿನ ಸೇನಾ ಪಡೆಗಳ ಬೆಂಬಲದೊಂದಿಗೆ ‘ಭಾರತೀಯ ರಾಷ್ಟ್ರೀಯ ಸೇನೆ’ಯನ್ನು (INA) ಸಂಘಟಿಸಿದರು.
    • ಆಜಾದ್ ಹಿಂದ್ ಸರ್ಕಾರ, 1943:- ಆಜಾದ್ ಹಿಂದ್ ಸರ್ಕಾರದ ನೇತೃತ್ವ ವಹಿಸಿದ್ದ ಬೋಸ್ ಅವರು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಕ್ರಮವಾಗಿ “ಶಾಹೀದ್” (ಹುತಾತ್ಮ) ಮತ್ತು “ಸ್ವರಾಜ್” (ಸ್ವ-ಆಡಳಿತ) ಎಂದು ಮರುನಾಮಕರಣ ಮಾಡಿದರು.
    • ಹಂಗಾಮಿ ಸರ್ಕಾರ:- ಅಕ್ಟೋಬರ್ 21, 1943 ರಂದು ನೇತಾಜಿ ಅವರು ಸ್ವತಂತ್ರ ಭಾರತದ ‘ಹಂಗಾಮಿ ಸರ್ಕಾರದ’ (ಆಜಾದ್ ಹಿಂದ್ ಸರ್ಕಾರ್) ಸ್ಥಾಪನೆಯನ್ನು ಘೋಷಿಸಿದರು.
    • ರಾಷ್ಟ್ರಪಿತ:- ಸಿಂಗಾಪುರದಿಂದ ಮಾಡಿದ ರೇಡಿಯೋ ಭಾಷಣದಲ್ಲಿ, ಮಹಾತ್ಮಾ ಗಾಂಧಿಯವರನ್ನು “ರಾಷ್ಟ್ರಪಿತ” ಎಂದು ಅಧಿಕೃತವಾಗಿ ಸಂಬೋಧಿಸಿದ ಮೊದಲ ವ್ಯಕ್ತಿ ಇವರಾಗಿದ್ದಾರೆ.
    • ಪರಂಪರೆ:- ರಾಷ್ಟ್ರೀಯವಾದಿ ಚಳುವಳಿಗೆ ಅವರು ನೀಡಿದ ಅದ್ವಿತೀಯ ಕೊಡುಗೆಗಳಿಗಾಗಿ ಅವರನ್ನು ಇಂದಿಗೂ ಅತ್ಯಂತ ಗೌರವದಿಂದ ಸ್ಮರಿಸಲಾಗುತ್ತದೆ. ಅವರ ಅಪ್ರತಿಮ ದೇಶಭಕ್ತಿಯು ಭಾರತ ಮತ್ತು ಭಾರತದ ಗಡಿಯಾಚೆಗಿನ ಜನರನ್ನು ನಿರಂತರವಾಗಿ ಪ್ರೇರೇಪಿಸುತ್ತಿದೆ.

    GlobE ನೆಟ್‌ವರ್ಕ್

    ಅಂತರರಾಷ್ಟ್ರೀಯ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ಭಾರತವು ನವದೆಹಲಿಯಲ್ಲಿ ‘ಭ್ರಷ್ಟಾಚಾರ-ನಿಗ್ರಹ ಕಾನೂನು ಜಾರಿ ಪ್ರಾಧಿಕಾರಗಳ ಜಾಗತಿಕ ಕಾರ್ಯಾಚರಣಾ ಜಾಲ’ದ 12ನೇ ಸಂಚಾಲನಾ ಸಮಿತಿಯ (Steering Committee) ಸಭೆಯನ್ನು ಆಯೋಜಿಸಿತ್ತು.

    ಗ್ಲೋಬ್ ನೆಟ್‌ವರ್ಕ್ (GlobE Network)ನ ಬಗ್ಗೆ:

    • GlobE ವಿಸ್ತೃತ ರೂಪ:- ಭ್ರಷ್ಟಾಚಾರ-ನಿಗ್ರಹ ಕಾನೂನು ಜಾರಿ ಪ್ರಾಧಿಕಾರಗಳ ಜಾಗತಿಕ ಕಾರ್ಯಾಚರಣಾ ಜಾಲ (GlobE Network – Global Operational Network of Anti-Corruption Law Enforcement Authorities).
    • ಸ್ಥಾಪನೆ:- 2021.
    • ಅಧಿಕಾರ ವ್ಯಾಪ್ತಿ:- ಇದು ಎಲ್ಲಾ ವಿಶ್ವಸಂಸ್ಥೆಯ (UN) ಸದಸ್ಯ ರಾಷ್ಟ್ರಗಳ ಭ್ರಷ್ಟಾಚಾರ-ನಿಗ್ರಹ ಕಾನೂನು ಜಾರಿ ಪ್ರಾಧಿಕಾರಗಳಿಗೆ ಮತ್ತು ‘ಭ್ರಷ್ಟಾಚಾರದ ವಿರುದ್ಧದ ವಿಶ್ವಸಂಸ್ಥೆಯ ಸಮಾವೇಶ’ದ (UN Convention against Corruption – UNCAC) ಪಾಲುದಾರ ರಾಷ್ಟ್ರಗಳಿಗೆ ಮುಕ್ತವಾಗಿದೆ.
    • ಈ ಜಾಲವನ್ನು ಅದರ ಸದಸ್ಯರೇ ನಿರ್ವಹಿಸುತ್ತಾರೆ ಮತ್ತು ಇದು ‘ವಿಶ್ವಸಂಸ್ಥೆಯ ಮಾದಕದ್ರವ್ಯ ಮತ್ತು ಅಪರಾಧ ನಿಯಂತ್ರಣ ಕಚೇರಿಯ’ (UNODC) ಬೆಂಬಲವನ್ನು ಹೊಂದಿದೆ. UNODC ಈ ಜಾಲದ ಸಚಿವಾಲಯವನ್ನು (Secretariat) ಒದಗಿಸುತ್ತದೆ.
    • ಭಾರತವು 2022 ರಲ್ಲಿ ಈ ಸಮಾವೇಶಕ್ಕೆ ಸೇರ್ಪಡೆಗೊಂಡಿತು, CBI ಮತ್ತು ED ಸಂಸ್ಥೆಗಳು ಇದರ ಎರಡು ನಿಯೋಜಿತ ಸದಸ್ಯ ಏಜೆನ್ಸಿಗಳಾಗಿವೆ.
  • ವಿಶ್ವ ಕ್ಷಯರೋಗ ದಿನ

    ವಿಶ್ವ ಕ್ಷಯರೋಗ ದಿನ

    ಆರೋಗ್ಯ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಕ್ಷಯರೋಗದ (TB) ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮಾರ್ಚ್ 24 ರಂದು ‘ವಿಶ್ವ ಕ್ಷಯರೋಗ ದಿನ’ವನ್ನು ಆಚರಿಸಲಾಗುತ್ತದೆ.

    ವಿಶ್ವ ಕ್ಷಯರೋಗ ದಿನದ ಬಗ್ಗೆ:

    • 1882 ರಲ್ಲಿ ಡಾ. ರಾಬರ್ಟ್ ಕೋಚ್ ಅವರು ಕ್ಷಯರೋಗಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು ಕಂಡುಹಿಡಿದ ಐತಿಹಾಸಿಕ ದಿನದ ಸ್ಮರಣಾರ್ಥವಾಗಿ ಈ ದಿನವನ್ನು ಆಚರಿಸಲಾಗುತ್ತದೆ.
    • 2026 ರ ಧ್ಯೇಯವಾಕ್ಯ:- “ಹೌದು! ನಾವು ಕ್ಷಯರೋಗವನ್ನು ಅಂತ್ಯಗೊಳಿಸಬಹುದು” (Yes! We can end TB).

    ಕ್ಷಯರೋಗ (Tuberculosis – TB)ದ ಬಗ್ಗೆ:

    • ಬ್ಯಾಕ್ಟೀರಿಯಾ:- ಇದು ‘ಮೈಕೋಬ್ಯಾಕ್ಟೀರಿಯಂ ಟ್ಯುಬರ್ಕ್ಯುಲೋಸಿಸ್’ (Mycobacterium tuberculosis) ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ.
    • ಹರಡುವಿಕೆ:- ಸೋಂಕಿತ ವ್ಯಕ್ತಿಗಳು ಕೆಮ್ಮಿದಾಗ, ಸೀನಿದಾಗ ಅಥವಾ ಉಗುಳಿದಾಗ ಇದು ಗಾಳಿಯ ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ.
    • ರೋಗಲಕ್ಷಣಗಳು:- ಕೆಮ್ಮು, ಎದೆನೋವು, ದೌರ್ಬಲ್ಯ, ತೂಕ ನಷ್ಟ, ಜ್ವರ ಮತ್ತು ರಾತ್ರಿಯ ಸಮಯದಲ್ಲಿ ವಿಪರೀತ ಬೆವರುವುದು.
    • ಚಿಕಿತ್ಸೆ:- ಸೂಕ್ಷ್ಮಾಣುಜೀವಿ ನಿರೋಧಕ (Antimicrobial) ಔಷಧಿಗಳ ಮೂಲಕ ಕ್ಷಯರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದು.
    • ಬಹು-ಔಷಧಿ ನಿರೋಧಕ ಕ್ಷಯರೋಗ (Multidrug-resistant tuberculosis – MDR-TB):- ಇದು ಕ್ಷಯರೋಗದ ಒಂದು ಜಟಿಲವಾದ ಪ್ರಕಾರವಾಗಿದೆ. ಕ್ಷಯರೋಗ ನಿರೋಧಕ ಪ್ರಬಲ ‘ಮೊದಲ-ಹಂತದ’ ಔಷಧಿಗಳಾದ ಐಸೋನಿಯಾಜಿಡ್ (Isoniazid) ಮತ್ತು ರಿಫಾಂಪಿಸಿನ್ (Rifampicin) ಗಳಿಗೆ ಬ್ಯಾಕ್ಟೀರಿಯಾಗಳು ಸ್ಪಂದಿಸದಿದ್ದಾಗ ಈ ಸ್ಥಿತಿ ಉಂಟಾಗುತ್ತದೆ. ಆದರೂ, ‘ಎರಡನೇ-ಹಂತದ’ ಔಷಧಿಗಳನ್ನು ಬಳಸುವ ಮೂಲಕ MDR-TB ಯನ್ನೂ ಗುಣಪಡಿಸಬಹುದಾಗಿದೆ.