Blog

  • ಬೆಳಕಿನ ಮಾಲಿನ್ಯ

    ಬೆಳಕಿನ ಮಾಲಿನ್ಯ

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇತ್ತೀಚಿಗೆ ‘ನೇಚರ್’ ನಿಯತಕಾಲಿಕದಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, 2014 ಮತ್ತು 2022 ರ ನಡುವೆ ಜಾಗತಿಕವಾಗಿ ರಾತ್ರಿಯ ಕೃತಕ ಬೆಳಕು ಶೇ. 16 ರಷ್ಟು ಹೆಚ್ಚಾಗಿದೆ.
    • ಉಪ-ಸಹರಾ ಆಫ್ರಿಕಾ ಮತ್ತು ಆಗ್ನೇಯ ಏಷ್ಯಾದಲ್ಲಿ ಇದರ ತೀವ್ರ ಏರಿಕೆ ಕಂಡುಬಂದಿದ್ದು, ಏಷ್ಯಾದಲ್ಲಿ ಭಾರತ ಮತ್ತು ಚೀನಾ ಪ್ರಮುಖ ಕೊಡುಗೆದಾರರಾಗಿ ಹೊರಹೊಮ್ಮಿವೆ.

    ಬೆಳಕಿನ ಮಾಲಿನ್ಯದ ಬಗ್ಗೆ:

    • ವ್ಯಾಖ್ಯಾನ:- ಹೊರಾಂಗಣದಲ್ಲಿ ಕೃತಕ ಬೆಳಕಿನ ಅತಿಯಾದ ಅಥವಾ ಅಸಮರ್ಪಕ ಬಳಕೆಯನ್ನು ಬೆಳಕಿನ ಮಾಲಿನ್ಯ ಎನ್ನಲಾಗುತ್ತದೆ. 
    • ಇದು ನೈಸರ್ಗಿಕ ಕತ್ತಲೆಯನ್ನು ಅಡ್ಡಿಪಡಿಸುತ್ತದೆ ಮತ್ತು ಮಾನವನ ಆರೋಗ್ಯ, ವನ್ಯಜೀವಿಗಳು ಹಾಗೂ ಪರಿಸರದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ.

    ಪರಿಸರ ಮತ್ತು ಆರೋಗ್ಯದ ಮೇಲೆ ಬೆಳಕಿನ ಮಾಲಿನ್ಯದ ಪರಿಣಾಮ:

    • ಜೀವವೈವಿಧ್ಯತೆ ಮತ್ತು ವನ್ಯಜೀವಿಗಳು:
    • ದಿಕ್ಸುಚಿ:- ಚಲನೆಗಾಗಿ ನೈಸರ್ಗಿಕ ಬೆಳಕನ್ನು (ಚಂದ್ರ/ನಕ್ಷತ್ರಗಳು) ಅವಲಂಬಿಸಿರುವ ವಲಸೆ ಹಕ್ಕಿಗಳು ಮತ್ತು ಕಡಲ ಆಮೆಯ ಮರಿಗಳು ದಾರಿ ತಪ್ಪುವಂತೆ ಮಾಡುತ್ತದೆ.
    • ಸಂತಾನೋತ್ಪತ್ತಿ:- ಮಿಂಚುಹುಳುಗಳ ಮಿಲನದ ಸಂಕೇತಗಳಿಗೆ ಅಡ್ಡಿಪಡಿಸುತ್ತದೆ ಮತ್ತು ಪ್ರಕಾಶಮಾನವಾದ ಮಿನಿ (ಕ್ಲೌನ್‌ಫಿಶ್‌)ನಂತಹ ಪ್ರಭೇದಗಳ ಮೊಟ್ಟೆ ಒಡೆಯುವ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರುತ್ತದೆ.
    • ಆಹಾರ ಸರಪಳಿಗಳಲ್ಲಿ ತೀವ್ರ ವ್ಯತ್ಯಯ:- ಮರದ ಎಲೆಗಳನ್ನು ಗಟ್ಟಿಯಾಗಿಸುತ್ತದೆ, ಇದರಿಂದ ಸಸ್ಯಾಹಾರಿ ಕೀಟಗಳಿಗೆ ಅವುಗಳನ್ನು ತಿನ್ನಲು ಸಾಧ್ಯವಾಗುವುದಿಲ್ಲ. ಇದು ನಗರ ಪ್ರದೇಶದ ಆಹಾರ ಸರಪಳಿಗಳಲ್ಲಿ (Urban food chains) ತೀವ್ರ ವ್ಯತ್ಯಯ ಉಂಟಾಗುತ್ತದೆ.
    • ಮಾನವನ ಆರೋಗ್ಯ:
    • ಜೈವಿಕ ಗಡಿಯಾರ (Circadian Rhythm):- ದೇಹದ ನೈಸರ್ಗಿಕ 24-ಗಂಟೆಗಳ ನಿದ್ರೆ ಮತ್ತು ಎಚ್ಚರದ ದೈನಂದಿನ ಚಕ್ರವನ್ನು ಅಡ್ಡಿಪಡಿಸುತ್ತದೆ.
    • ಮೆಲಟೋನಿನ್ ಉತ್ಪಾದನೆಯ ಕುಸಿತ:- ನಿದ್ರೆಗೆ ಅತ್ಯಗತ್ಯವಾದ ಮೆಲಟೋನಿನ್ ಉತ್ಪಾದನೆಯನ್ನು ತಡೆಯುತ್ತದೆ. ಇದು ನಿದ್ರಾಹೀನತೆ, ತೀವ್ರ ಒತ್ತಡ ಮತ್ತು ಕೆಲವು ಕ್ಯಾನ್ಸರ್‌ಗಳ (ಉದಾ: ಸ್ತನ ಕ್ಯಾನ್ಸರ್) ಅಪಾಯಗಳನ್ನು ಹೆಚ್ಚಿಸುತ್ತದೆ.
    • ನರಸಂಬಂಧಿ ಕಾಯಿಲೆಗಳು:- ಇತ್ತೀಚಿನ ಅಧ್ಯಯನಗಳು ರಾತ್ರಿಯ ಬೆಳಕಿನ ಮಾಲಿನ್ಯ ಮತ್ತು ಆಲ್ಝೈಮರ್ ಕಾಯಿಲೆಯ ಪ್ರಮಾಣದ ನಡುವಿನ ಸಂಬಂಧವನ್ನು ದೃಢಪಡಿಸಿವೆ.
    • ಆರ್ಥಿಕತೆ ಮತ್ತು ಶಕ್ತಿ:- ವಾರ್ಷಿಕವಾಗಿ ‘ಬಿಲಿಯನ್’ನಷ್ಟು ಯೂನಿಟ್ ವಿದ್ಯುತ್ ಅನ್ನು ವ್ಯರ್ಥ ಮಾಡುತ್ತದೆ, ಇದು ಹಸಿರುಮನೆ ಅನಿಲಗಳ ಹೊರಸೂಸುವಿಕೆಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ.

    ಬೆಳಕಿನ ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರದ ಉಪಕ್ರಮಗಳು:

    • ಇಂಧನ ಸಂರಕ್ಷಣೆ ಕಟ್ಟಡ ಸಂಹಿತೆ, 2017:- ಹೊಸ ವಾಣಿಜ್ಯ ಕಟ್ಟಡಗಳಲ್ಲಿ ಸುಸ್ಥಿರ ವಿನ್ಯಾಸವನ್ನು ಉತ್ತೇಜಿಸಲು ಮತ್ತು ಇಂಧನ ಬಳಕೆಯನ್ನು ಶೇ. 25-50 ರಷ್ಟು ಕಡಿಮೆ ಮಾಡಲು ‘ಇಂಧನ ದಕ್ಷತೆ ಬ್ಯೂರೋ’ (BEE) ರೂಪಿಸಿದ ಪ್ರಮುಖ ಮಾನದಂಡಗಳಾಗಿವೆ.
    • ರಾಷ್ಟ್ರೀಯ ಬೀದಿ ದೀಪ ಕಾರ್ಯಕ್ರಮ (SLNP):- ದೇಶಾದ್ಯಂತ ಸಾಂಪ್ರದಾಯಿಕ ಬೀದಿ ದೀಪಗಳನ್ನು ಬದಲಾಯಿಸಿ, ಸ್ಮಾರ್ಟ್ ಮತ್ತು ಇಂಧನ- ಸಮರ್ಥ LED ಬೀದಿ ದೀಪಗಳನ್ನು ಅಳವಡಿಸಲು 2015 ರಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲಾಯಿತು.
    • ಸ್ಮಾರ್ಟ್ ಸಿಟಿ ಗುರಿ:- ನೈಜ-ಸಮಯದ ಸಂಚಾರ ಮತ್ತು ಸಮಯದ ಪರಿಸ್ಥಿತಿಗಳಿಗೆ ಅನುಗುಣವಾಗಿ ಬೀದಿ ದೀಪದ ತೀವ್ರತೆಯನ್ನು ಸ್ವಯಂಚಾಲಿತವಾಗಿ ಹೊಂದಿಸುವ ‘ಸಂದರ್ಭಾನುಸಾರ ಹೊಂದಿಕೊಳ್ಳುವ ಬೆಳಕಿನ ವ್ಯವಸ್ಥೆ’ ಭಾರತದ ಸ್ಮಾರ್ಟ್ ಸಿಟಿ ಗುರಿಯ ಪ್ರಮುಖ ಅಂಶವಾಗಿದೆ. ಇದು ಇಂಧನದ ಬಳಕೆಯನ್ನು ಗರಿಷ್ಠಗೊಳಿಸುತ್ತದೆ ಮತ್ತು ಬೆಳಕಿನ ಮಾಲಿನ್ಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.
    • ಪರಿಸರ ಸಂರಕ್ಷಣಾ ಕಾಯ್ದೆ 1986:- ಇದು ಎಲ್ಲಾ ರೀತಿಯ ಪರಿಸರ ಮಾಲಿನ್ಯವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರಕ್ಕೆ ಈ ಕಾಯ್ದೆಯು ಸಮಗ್ರ ಅಧಿಕಾರವನ್ನು ಒದಗಿಸುತ್ತದೆ.
  • ಇ-ಚಾರ್ಜಿಂಗ್ ಮೂಲಸೌಕರ್ಯ: ಕರ್ನಾಟಕಕ್ಕೆ 2ನೇ ಸ್ಥಾನ

    ಇ-ಚಾರ್ಜಿಂಗ್ ಮೂಲಸೌಕರ್ಯ: ಕರ್ನಾಟಕಕ್ಕೆ 2ನೇ ಸ್ಥಾನ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಸಾರ್ವಜನಿಕ ಚಾರ್ಜಿಂಗ್ ಮೂಲಸೌಕರ್ಯಕ್ಕಾಗಿ ಕರ್ನಾಟಕವು ಭಾರತದ ಎರಡನೇ ಅತಿದೊಡ್ಡ ಕೇಂದ್ರವಾಗಿ ಹೊರಹೊಮ್ಮಿದ್ದು, ಚಾರ್ಜಿಂಗ್ ಘಟಕಗಳ ಸ್ಥಾಪನೆಯಲ್ಲಿ ಹೆಚ್ಚಾಗಿ ಮಹಾರಾಷ್ಟ್ರ ಮತ್ತು ತಮಿಳುನಾಡನ್ನು ಹಿಂದಿಕ್ಕಿದೆ.

    ಕರ್ನಾಟಕ ಶುದ್ಧ ಸಂಚಾರ ನೀತಿ (Karnataka Clean Mobility Policy), 2025–2030:

    • ಪ್ರಾರಂಭ:- ಫೆಬ್ರವರಿ 2025
    • ಉದ್ದೇಶ:- ಪರಿಸರ-ಸ್ನೇಹಿ ಸಾರಿಗೆಯ ನಾವೀನ್ಯತೆ ಮತ್ತು ಉತ್ಪಾದನೆಯಲ್ಲಿ ಕರ್ನಾಟಕವನ್ನು ಏಷ್ಯಾದ ಪ್ರಮುಖ ಕೇಂದ್ರವಾಗಿ ರೂಪಿಸುವುದು.
    • ಇದು 2030 ರ ವೇಳೆಗೆ ₹50,000 ಕೋಟಿ ಹೂಡಿಕೆಯನ್ನು ಆಕರ್ಷಿಸುವ ಮತ್ತು 1,00,000 ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ.

    ಪ್ರಮುಖ ಉದ್ದೇಶಗಳು ಮತ್ತು ಗುರಿಗಳು:

    • ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP) ಮೂಲಕ ಹೆಚ್ಚುವರಿಯಾಗಿ 2,600 ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವ ಗುರಿ ಹೊಂದಿದ್ದು, ರಾಜ್ಯದ ಒಟ್ಟು ಚಾರ್ಜಿಂಗ್ ಕೇಂದ್ರಗಳ ಸಂಖ್ಯೆಯನ್ನು 8,000 ಕ್ಕೆ ಹೆಚ್ಚಿಸಲಾಗುವುದು.
    • 2030 ರ ವೇಳೆಗೆ ಇ-ಕಾಮರ್ಸ್ ವಿತರಣಾ ವಾಹನಗಳನ್ನು ಶೇ. 100 ರಷ್ಟು ಎಲೆಕ್ಟ್ರಿಕ್ ಅಥವಾ ಹೈಡ್ರೋಜನ್-ಚಾಲಿತ ವಾಹನಗಳಾಗಿ ಪರಿವರ್ತಿಸುವುದನ್ನು ಇದು ಪ್ರೋತ್ಸಾಹಿಸುತ್ತದೆ.
    • ಮೂಲ ಉಪಕರಣ ತಯಾರಕರನ್ನು (OEMs), ಪೂರೈಕೆದಾರರನ್ನು ಮತ್ತು ಸಂಶೋಧನೆ ಹಾಗೂ ಅಭಿವೃದ್ಧಿ (R&D) ಕೇಂದ್ರಗಳನ್ನು ಒಗ್ಗೂಡಿಸಲು ಗೌರಿಬಿದನೂರು, ಧಾರವಾಡ ಮತ್ತು ಹಾರೋಹಳ್ಳಿಯಲ್ಲಿ ವಿಶ್ವದರ್ಜೆಯ ‘ಸಾರಿಗೆ-ಉತ್ಪಾದನಾ ವಲಯ’ಗಳನ್ನು ಅಭಿವೃದ್ಧಿಪಡಿಸುವುದು.
    • ಅಂತಿಮ-ಹಂತದ ಸಾರಿಗೆ ಸಂಪರ್ಕಕ್ಕಾಗಿ ಇ-ರಿಕ್ಷಾಗಳನ್ನು ಉತ್ತೇಜಿಸುವುದು ಮತ್ತು ಪ್ರಮುಖ ನಗರ ಕೇಂದ್ರಗಳ ಹೊರವಲಯದಲ್ಲಿ ಹಂಚಿಕೆಯ ಬಸ್ ಸೇವೆಗಳನ್ನು ವಿಸ್ತರಿಸುವುದು.
  • COP – 33 ಪಕ್ಷಗಳ ಸಮ್ಮೇಳನ, 2028 : ಭಾರತ ಆತಿಥ್ಯ ವಹಿಸಲು ಸಲ್ಲಿಸಿದ್ದ ಪ್ರಸ್ತಾವನೆ ಹಿಂಪಡೆತ | ಗ್ರೇಟ್ ನಿಕೋಬಾರ್ ದ್ವೀಪದ ಅಭಿವೃದ್ಧಿ ಯೋಜನೆಗಳ ಕರಡು ಯೋಜನೆ | ಮಹಾತ್ಮ ಜ್ಯೋತಿರಾವ್ ಫುಲೆ

    COP – 33 ಪಕ್ಷಗಳ ಸಮ್ಮೇಳನ, 2028 : ಭಾರತ ಆತಿಥ್ಯ ವಹಿಸಲು ಸಲ್ಲಿಸಿದ್ದ ಪ್ರಸ್ತಾವನೆ ಹಿಂಪಡೆತ

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ಹವಾಮಾನ ಬದಲಾವಣೆ ಕುರಿತಾದ ವಿಶ್ವಸಂಸ್ಥೆಯ ಚೌಕಟ್ಟಿನ ಸಮಾವೇಶದ (UNFCCC) ಪ್ರಕ್ರಿಯೆಯ ಅಡಿಯಲ್ಲಿ 2028 ರಲ್ಲಿ ನಡೆಯಲಿರುವ ಪಕ್ಷಗಳ ಸಮ್ಮೇಳನ (COP)- 33  ಶೃಂಗಸಭೆಯ ಆತಿಥ್ಯ ವಹಿಸುವ ತನ್ನ ಪ್ರಸ್ತಾವನೆಯನ್ನು ಭಾರತ ಹಿಂಪಡೆದಿದೆ.

    ಪ್ರಸ್ತಾವನೆ ಹಿಂಪಡೆಯಲು ಸಂಭವನೀಯ ಕಾರಣಗಳು:

    • ಆಡಳಿತಾತ್ಮಕ ಹೊರೆ:- COP ಶೃಂಗಸಭೆಯನ್ನು ಆಯೋಜಿಸಲು ಗಣನೀಯ ಮೂಲಸೌಕರ್ಯ, ಭದ್ರತೆ ಮತ್ತು ಅಪಾರ ಆರ್ಥಿಕ ವೆಚ್ಚದ ಅಗತ್ಯವಿರುತ್ತದೆ.
    • ಇತರ ದೊಡ್ಡ ಪ್ರಮಾಣದ ಅಂತರರಾಷ್ಟ್ರೀಯ ಕಾರ್ಯಕ್ರಮಗಳ ಸಿದ್ಧತೆ:- ಉದಾಹರಣೆಗೆ ಅಹಮದಾಬಾದ್‌ನಲ್ಲಿ ಉದ್ದೇಶಿಸಲಾದ 2030 ರ ಕಾಮನ್‌ವೆಲ್ತ್ ಕ್ರೀಡಾಕೂಟದಂತಹ ಕಾರ್ಯಕ್ರಮಗಳಿಗೂ ಇದೇ ರೀತಿಯ ಆಡಳಿತಾತ್ಮಕ ಮತ್ತು ಆರ್ಥಿಕ ಸಂಪನ್ಮೂಲಗಳು ಬೇಕಾಗುತ್ತವೆ.
    • ರಾಜಕೀಯ ಸಮಯ:- 2028 ನೇ ವರ್ಷವು 2029 ರ ಲೋಕಸಭಾ ಚುನಾವಣೆಗಳಿಗೆ ತೀರಾ ಹತ್ತಿರದಲ್ಲಿರುತ್ತದ ಈ ಅವಧಿಯು ತೀವ್ರವಾದ ಆಡಳಿತಾತ್ಮಕ, ರಾಜಕೀಯ ಮತ್ತು ಸಾಗಾಟ ವ್ಯವಸ್ಥೆಯ ಕಾರ್ಯಚಟುವಟಿಕೆಗಳಿಂದ ಕೂಡಿರುತ್ತದೆ.

    ಪಕ್ಷಗಳ ಸಮ್ಮೇಳನ (COP- Conference of Parties):

    • UNFCCC ಯ ಅತ್ಯುನ್ನತ ನಿರ್ಧಾರ-ತೆಗೆದುಕೊಳ್ಳುವ ಸಂಸ್ಥೆಯಾಗಿದೆ:- ಇದು ವಾರ್ಷಿಕವಾಗಿ ಜರುಗುವ ‘ಹವಾಮಾನ ಬದಲಾವಣೆ ಕುರಿತಾದ ವಿಶ್ವಸಂಸ್ಥೆಯ ಚೌಕಟ್ಟಿನ ಸಮಾವೇಶ’ದ (UNFCCC) ಅತ್ಯುನ್ನತ ನಿರ್ಧಾರ-ತೆಗೆದುಕೊಳ್ಳುವ ಸಂಸ್ಥೆಯಾಗಿದೆ.
    • ಇದು ಜಾಗತಿಕ ಹವಾಮಾನ ಕ್ರಮ, ಹವಾಮಾನ ಹಣಕಾಸು ಮತ್ತು ಹೊರಸೂಸುವಿಕೆ ಕಡಿತದ ಬದ್ಧತೆಗಳ ಕುರಿತು ಮಾತುಕತೆ ನಡೆಸಲು ಸುಮಾರು 200 ದೇಶಗಳನ್ನು ಒಟ್ಟುಗೂಡಿಸುತ್ತದೆ.
    • ಮೊದಲ COP ಅಧಿವೇಶನವು 1995 ರ ಮಾರ್ಚ್‌ನಲ್ಲಿ ಜರ್ಮನಿಯ ಬರ್ಲಿನ್‌ನಲ್ಲಿ ನಡೆಯಿತು.
    • ಪ್ರತಿ ವರ್ಷ ಕಡ್ಡಾಯ ಸಭೆ:- ಸದಸ್ಯ ರಾಷ್ಟ್ರಗಳು ಬೇರೆ ರೀತಿಯಲ್ಲಿ ನಿರ್ಧರಿಸದ ಹೊರತು, COP ಪ್ರತಿ ವರ್ಷವೂ ಕಡ್ಡಾಯವಾಗಿ ಸಭೆ ಸೇರುತ್ತದೆ.

    ಹವಾಮಾನ ಬದಲಾವಣೆ ಕುರಿತಾದ ವಿಶ್ವಸಂಸ್ಥೆಯ ಚೌಕಟ್ಟಿನ ಸಮಾವೇಶ (UNFCCC)ದ ಬಗ್ಗೆ:

    • ‘ಭೂ ಶೃಂಗಸಭೆ’, 1992 ರ ಅಡಿಯಲ್ಲಿ ಅಂಗೀಕರಿಸಲ್ಪಟ್ಟ 3 ‘ರಿಯೋ ಸಮಾವೇಶ’ಗಳಲ್ಲಿ ಒಂದಾಗಿದೆ. ಇನ್ನುಳಿದ ಎರಡು ಸಮಾವೇಶಗಳೆಂದರೆ:
    • ಜೈವಿಕ ವೈವಿಧ್ಯತೆಯ ಸಮಾವೇಶ (CBD)
    • ಮರುಭೂಮೀಕರಣವನ್ನು ತಡೆಗಟ್ಟುವ ಸಮಾವೇಶ (UNCCD)
    • ಈ ಸಮಾವೇಶವು 1994 ರಲ್ಲಿ ಅಧಿಕೃತವಾಗಿ ಜಾರಿಗೆ ಬಂದಿತು.
    • ಉದ್ದೇಶ:- ಹವಾಮಾನ ವ್ಯವಸ್ಥೆಯೊಂದಿಗೆ ಅಪಾಯಕಾರಿ ಮಾನವ-ಪ್ರೇರಿತ ಹಸ್ತಕ್ಷೇಪವನ್ನು ತಡೆಯುವ ಮಟ್ಟದಲ್ಲಿ ವಾತಾವರಣದಲ್ಲಿ ‘ಹಸಿರುಮನೆ ಅನಿಲಗಳ’ ಸಾಂದ್ರತೆಯನ್ನು ಸ್ಥಿರಗೊಳಿಸುವುದು.
    • ಸಚಿವಾಲಯ:- ಜರ್ಮನಿಯ ‘ಬಾನ್‌’.
    • ಇದು 2 ಪ್ರಮುಖ ಕಾನೂನುಬದ್ಧ ಒಪ್ಪಂದಗಳಿಗೆ ಮೂಲ ಒಪ್ಪಂದವಾಗಿದೆ. ಅವುಗಳೆಂದರೆ, 
    1. ಕ್ಯೋಟೋ ಶಿಷ್ಟಾಚಾರ, 1997:- ಇದು ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೊರಸೂಸುವಿಕೆ ಗುರಿಗಳನ್ನು ನಿಗದಿಪಡಿಸಿತು.
    2. ಪ್ಯಾರಿಸ್ ಒಪ್ಪಂದ, 2015:- ಇದು ಜಾಗತಿಕ ತಾಪಮಾನ ಏರಿಕೆಯನ್ನು ಕೈಗಾರಿಕಾ-ಪೂರ್ವ ಮಟ್ಟದ 2°C ಕ್ಕಿಂತ ಕಡಿಮೆ ಮಾಡುವುದು, ಆದ್ಯತೆಯ ಮೇರೆಗೆ 1.5°C ಗೆ ಸೀಮಿತಗೊಳಿಸುವ ಗುರಿಯನ್ನು ಹೊಂದಿರುವ ಐತಿಹಾಸಿಕ ಜಾಗತಿಕ ಒಪ್ಪಂದವಾಗಿದೆ.
    • ಹಣಕಾಸು ಕಾರ್ಯವಿಧಾನಗಳು:- ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ನೆರವಾಗಲು ಈ ಕೆಳಗಿನ ನಿಧಿಗಳನ್ನು ನಿರ್ವಹಿಸುತ್ತದೆ ಮತ್ತು ಸಂಯೋಜಿಸುತ್ತದೆ. 
    • ಹಸಿರು ಹವಾಮಾನ ನಿಧಿ (GCF), 
    • ಜಾಗತಿಕ ಪರಿಸರ ಸೌಲಭ್ಯ (GEF) 
    • ಹೊಂದಾಣಿಕೆ ನಿಧಿ 

    ಇತ್ತೀಚಿನ COP ಶೃಂಗಸಭೆಗಳು:

    • COP 27:- ಈಜಿಪ್ಟ್‌ನ ಶರ್ಮ್ ಎಲ್-ಶೇಖ್‌ನಲ್ಲಿ 2022 ರಲ್ಲಿ ನಡೆಯಿತು.
    • COP 28:- ಇದು UAE ಯ ದುಬೈನಲ್ಲಿ 2023 ರಲ್ಲಿ ನಡೆಯಿತು. ಇದು ಪಳೆಯುಳಿಕೆ ಇಂಧನಗಳಿಂದ ಹಂತಹಂತವಾಗಿ ಹೊರಬರುವತ್ತ ಗಮನಹರಿಸಿದ “UAE ಒಮ್ಮತ”ಕ್ಕೆ (UAE Consensus) ಕಾರಣವಾಯಿತು. 
    • COP 29:- ಅಜೆರ್ಬೈಜಾನ್‌ನ ‘ಬಾಕು’ವಿನಲ್ಲಿ 2024 ರಲ್ಲಿ ನಡೆಯಿತು.
    • COP 30:- ಬ್ರೆಜಿಲ್‌ನ ‘ಬೆಲೆಮ್‌’ನಲ್ಲಿ 2025 ರಲ್ಲಿ ನಡೆಯಿತು.
    • COP 31:- ಟರ್ಕಿಯ ‘ಅಂಟಾಲ್ಯಾ’ದಲ್ಲಿ 2026 ರಲ್ಲಿ ನಿಗದಿಯಾಗಿದೆ.

    ಗ್ರೇಟ್ ನಿಕೋಬಾರ್ ದ್ವೀಪದ ಅಭಿವೃದ್ಧಿ ಯೋಜನೆಗಳ ಕರಡು ಯೋಜನೆ

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ಗ್ರೇಟ್ ನಿಕೋಬಾರ್ ದ್ವೀಪದ (GNI) ಅಭಿವೃದ್ಧಿಗಾಗಿ ರೂಪಿಸಿದ ಕರಡು ಪೂರ್ಣ ಪ್ರಮಾಣದ ಯೋಜನೆಯಾಗಿದೆ, ಆರ್ಥಿಕ ಬೆಳವಣಿಗೆಯ ‘ಪ್ರಮುಖ ಚಾಲಕ’ವಾಗಿ ಪ್ರವಾಸೋದ್ಯಮವನ್ನು ಗಮನದಲ್ಲಿಟ್ಟುಕೊಳ್ಳುವಂತೆ ಪ್ರಸ್ತಾಪಿಸಲಾಗಿದೆ.

    ಗ್ರೇಟ್ ನಿಕೋಬಾರ್ ದ್ವೀಪದ ಅಭಿವೃದ್ಧಿ ಯೋಜನೆಯ ಬಗ್ಗೆ:

    • ಇದರ ಪರಿಕಲ್ಪನೆಯನ್ನು ನೀತಿ ಆಯೋಗವು 2021 ರಲ್ಲಿ ರೂಪಿಸಿ, ಪ್ರಾರಂಭಿಸಿದೆ.
    • ಇದೊಂದು ₹72,000 ದಿಂದ ₹81,000 ಕೋಟಿ ವೆಚ್ಚದ ಬೃಹತ್ ಮೂಲಸೌಕರ್ಯ ಉಪಕ್ರಮವಾಗಿದೆ.
    • ಇದು ಭಾರತದ ದಕ್ಷಿಣ ತುದಿಯ ದ್ವೀಪವನ್ನು ಪ್ರಮುಖ ಆಯಕಟ್ಟಿನ ಮತ್ತು ಆರ್ಥಿಕ ಕೇಂದ್ರವಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ.
    • ಪ್ರಾಮುಖ್ಯತೆ:- ಈ ಯೋಜನೆಯು ಭಾರತದ ‘ಕಡಲಯಾನ ದೃಷ್ಟಿಕೋನ 2030’ ಮತ್ತು ‘ಅಮೃತ ಕಾಲ ದೃಷ್ಟಿಕೋನ 2047’ ಗಳ ಕೇಂದ್ರಬಿಂದುವಾಗಿದೆ.

    ಪ್ರಮುಖ ಘಟಕಗಳು:

    • ಗಲಾಥಿಯಾ ಕೊಲ್ಲಿಯಲ್ಲಿ ಅಂತರರಾಷ್ಟ್ರೀಯ ಸರಕು ಪೆಟ್ಟಿಗೆ ಮರು ಸಾಗಣೆ ಕೇಂದ್ರ (ICTT):- ಪ್ರಾದೇಶಿಕ ಸರಕುಗಳನ್ನು ಸೆಳೆಯಲು 14.2 ಮಿಲಿಯನ್ TEU (ಒಂದು ಅಳತೆಯ ಮಾನದಂಡ) ಗಳನ್ನು ನಿರ್ವಹಿಸುವ ಉದ್ದೇಶದೊಂದಿಗೆ ಇದನ್ನು ನಿರ್ಮಿಸಲಾಗುತ್ತಿದೆ.
    • ಹೊಸದಾಗಿ ಅಭಿವೃದ್ಧಿಪಡಿಸಲಾಗುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ:- ಇದು ಪ್ರವಾಸೋದ್ಯಮ ಮತ್ತು ರಕ್ಷಣಾ ಉದ್ದೇಶಗಳಿಗಾಗಿ ನಿರ್ಮಿಸಲಾಗುತ್ತಿರುವ ದ್ವಿ-ಬಳಕೆಯ ಸೌಲಭ್ಯವನ್ನು ಒಳಗೊಂಡಿದೆ.
    • ಸಮಗ್ರ ಯೋಜಿತ ನಗರ:- ಇದು 2050 ರ ವೇಳೆಗೆ ಸುಮಾರು 6.5 ಲಕ್ಷ ಜನರಿಗೆ ಸ್ಥಳಾವಕಾಶ ಕಲ್ಪಿಸುವ ಯೋಜನೆಯಾಗಿದೆ. 
    • ವಿದ್ಯುತ್ ಸ್ಥಾವರ:- ಇದು 450 MVA ಸಾಮರ್ಥ್ಯದ ಅನಿಲ ಮತ್ತು ಸೌರ-ಆಧಾರಿತ ಸೌಲಭ್ಯವನ್ನು ಹೊಂದಿದೆ.

    ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಬಗ್ಗೆ:

    • ಈ ದ್ವೀಪ ಸಮೂಹಗಳ ದಕ್ಷಿಣ ತುದಿಯ ದ್ವೀಪವು ಗ್ರೇಟ್ ನಿಕೋಬಾರ್ ಆಗಿದ್ದು, ಇದರ ದಕ್ಷಿಣದ ತುದಿಯು ಇಂಡೋನೇಷ್ಯಾದ ಸುಮಾತ್ರಾದಿಂದ ಕೇವಲ 150 ಕಿ.ಮೀ ದೂರದಲ್ಲಿದೆ.
    • ಅತ್ಯುನ್ನತ ಶಿಖರಗಳು:- ಉತ್ತರ ಅಂಡಮಾನ್‌ನ ‘ಸ್ಯಾಡಲ್ ಶಿಖರ’ (732 ಮೀಟರ್) ಮತ್ತು ಗ್ರೇಟ್ ನಿಕೋಬಾರ್‌ನ “ಥುಲ್ಲಿಯರ್ ಪರ್ವತ” (642 ಮೀಟರ್). 
    • ‘ಪಾಂಡುನಸ್’ ಅಥವಾ ‘ನಿಕೋಬಾರ್ ಬ್ರೆಡ್‌ಫ್ರೂಟ್’ ಎಂಬುದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಕಂಡುಬರುವ ಅಪರೂಪದ ಹಣ್ಣಾಗಿದೆ.
    • ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದ ‘ಬ್ಯಾರೆನ್ ದ್ವೀಪ್ ಭಾರತದಲ್ಲಿ ಮಾತ್ರವಲ್ಲದೆ ಇಡೀ ದಕ್ಷಿಣ ಏಷ್ಯಾದಲ್ಲಿ ದೃಢೀಕರಿಸಲ್ಪಟ್ಟ ಏಕೈಕ ಸಕ್ರಿಯ ಜ್ವಾಲಾಮುಖಿಯಾಗಿದೆ.
    • ಗ್ರೇಟ್ ನಿಕೋಬಾರ್‌ನಲ್ಲಿರುವ ‘ಇಂದಿರಾ ಪಾಯಿಂಟ್’ ಭಾರತದ ಅತ್ಯಂತ ದಕ್ಷಿಣದ ತುದಿಯಾಗಿದೆ.

    ಮಹಾತ್ಮ ಜ್ಯೋತಿರಾವ್ ಫುಲೆ

    ಇತಿಹಾಸ

    ಇತ್ತೀಚೆಗೆ ಸುದ್ದಿಯಲ್ಲಿ:

    • ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಹಾತ್ಮ ಜ್ಯೋತಿರಾವ್ ಫುಲೆ ಅವರ ಜನ್ಮದಿನದಂದು ಅವರಿಗೆ ಗೌರವ ನಮನ ಸಲ್ಲಿಸಿದರು.

    ಮಹಾತ್ಮ ಜ್ಯೋತಿರಾವ್ ಫುಲೆ ಅವರ ಬಗ್ಗೆ:

    • ಜನನ:- ಏಪ್ರಿಲ್ 11, 1827 ರಂದು ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿರುವ ‘ಖತ್ಗುನ್’ ಗ್ರಾಮದಲ್ಲಿ ಜನಿಸಿದರು.
    • ಇವರ ಕುಟುಂಬವು ‘ಮಾಲಿ’ ಜಾತಿಗೆ ಸೇರಿತ್ತು ಮತ್ತು ಅವರ ಮೂಲ ಉಪನಾಮವು ‘ಗೋರ್ಹೆ’ ಎಂದಾಗಿತ್ತು.
    • ಇವರ ಸಿದ್ಧಾಂತವು ಸ್ವಾತಂತ್ರ್ಯ, ಸಮಾನತೆ ಮತ್ತು ಸಮಾಜವಾದವನ್ನು ಕೇಂದ್ರೀಕರಿಸಿತ್ತು.
    • ಇವರಿಗೆ ಕೇವಲ 13 ವರ್ಷ ವಯಸ್ಸಿದ್ದಾಗ ಸಾವಿತ್ರಿಬಾಯಿ ಅವರೊಂದಿಗೆ ವಿವಾಹವಾಯಿತು. 
    • ಈ ದಂಪತಿಗಳು 1848 ರಲ್ಲಿ ಪುಣೆಯ ಭಿಡೆವಾಡದಲ್ಲಿ ಹೆಣ್ಣುಮಕ್ಕಳಿಗಾಗಿ ದೇಶದ ಪ್ರಥಮ ಶಾಲೆಯನ್ನು ಸ್ಥಾಪಿಸಿದರು.
    • ಬಾಲಹತ್ಯಾ ಪ್ರತಿಬಂಧಕ ಗೃಹ, 1863:- ಹೆಣ್ಣು ಭ್ರೂಣಹತ್ಯೆಯನ್ನು ತಡೆಯಲು ಹಾಗೂ ಗರ್ಭಿಣಿ ಬ್ರಾಹ್ಮಣ ವಿಧವೆ ಮತ್ತು ಅತ್ಯಾಚಾರ ಸಂತ್ರಸ್ತರಿಗೆ ಬೆಂಬಲ ನೀಡಲು ಜ್ಯೋತಿರಾವ್ ಮತ್ತು ಸಾವಿತ್ರಿಬಾಯಿ ಅವರು ಭಾರತದ ಮೊದಲ ‘ಬಾಲಹತ್ಯಾ ಪ್ರತಿಬಂಧಕ ಗೃಹ’ವನ್ನು ಪ್ರಾರಂಭಿಸಿದರು.
    • ಸತ್ಯಶೋಧಕ ಸಮಾಜ, 1873:- ಫುಲೆಯವರು ತಮ್ಮ ಅನುಯಾಯಿಗಳೊಂದಿಗೆ ಸೇರಿ ಸ್ಥಾಪಿಸಿದರು. ಇದರರ್ಥ ‘ಸತ್ಯವನ್ನು ಹುಡುಕುವವರು’ ಎಂಬುದಾಗಿದೆ, ಇದು ದಲಿತರ ಸಾಮಾಜಿಕ-ಆರ್ಥಿಕ ಹಿಂದುಳಿದಿರುವಿಕೆಯನ್ನು ಹೋಗಲಾಡಿಸಲು ಶ್ರಮಿಸಿತು.
    • ‘ದಲಿತ’ ಎಂಬ ಪದ ಮೊದಲ ಬಾರಿಗೆ ಬಳಕೆ:- ‘ವರ್ಣ ವ್ಯವಸ್ಥೆ’ಯಿಂದ ಹೊರಗಿಡಲ್ಪಟ್ಟ ಮತ್ತು ದಮನಿತ ಜನಸಾಮಾನ್ಯರನ್ನು ಗುರುತಿಸಲು ಈ ಪದವನ್ನು ಮೊದಲ ಬಾರಿಗೆ ಫುಲೆ ಬಳಸಿದ್ದಾರೆ.
    • ಮೇ 11, 1888 ರಂದು, ಫುಲೆಯವರಿಗೆ ಮಹಾರಾಷ್ಟ್ರದ ಸಾಮಾಜಿಕ ಕಾರ್ಯಕರ್ತ ವಿಠಲರಾವ್ ಕೃಷ್ಣಾಜೀ ವಂಡೇಕರ್ ಅವರು ಜ್ಯೋತಿರಾವ್ ಫುಲೆ ಅವರಿಗೆ ‘ಮಹಾತ್ಮ’ ಎಂದು ಕರೆದರು.
    • ಪ್ರಮುಖ ಕೃತಿಗಳು:- ‘ಗುಲಾಮಗಿರಿ’, ‘ಶೇತ್ಕರ್ಯಾಚಾ ಆಸೂದ್’ (ರೈತನ ಚಾಟಿ) ಮತ್ತು ‘ತೃತೀಯ ರತ್ನ’ ಗ್ರಂಥಗಳು ಸೇರಿವೆ.
  • ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ

    ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗಾಗಿ ಹಾಸನ ಮತ್ತು ತುಮಕೂರು ಜಿಲ್ಲೆಗಳಲ್ಲಿ 111.02 ಹೆಕ್ಟೇರ್ ಅರಣ್ಯ ಭೂಮಿಯನ್ನು ಇತರ ಉದ್ದೇಶಗಳಿಗೆ ಬಳಸಲು ‘ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು’ (MoEFCC) ಅನುಮೋದನೆ ನೀಡಿದೆ.

    ಎತ್ತಿನಹೊಳೆ ಸಮಗ್ರ ಕುಡಿಯುವ ನೀರು ಸರಬರಾಜು ಯೋಜನೆಯ ಬಗ್ಗೆ:

    • ಉದ್ದೇಶ:- ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಮಗಳೂರು ಜಿಲ್ಲೆಗಳ 75 ಲಕ್ಷಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರು ಒದಗಿಸುವ ಉದ್ದೇಶವನ್ನು ಈ ಯೋಜನೆಯು ಹೊಂದಿದೆ.
    • ಸಾಮರ್ಥ್ಯ:- ಮೂಲತಃ 01 ಟಿಎಂಸಿ (TMC) ನೀರನ್ನು ತಿರುಗಿಸಲು ಉದ್ದೇಶಿಸಲಾಗಿತ್ತು, ಆದಾಗ್ಯೂ ವಾಸ್ತವಿಕ ಇಳುವರಿಯ ಬಗ್ಗೆ ಕಳವಳಗಳು ಅಸ್ತಿತ್ವದಲ್ಲಿವೆ.
    • ಘಟಕಗಳು:- ನದಿಗಳಿಗೆ ಅಡ್ಡಲಾಗಿ ಸಣ್ಣ ತಡೆಗೋಡೆಗಳನ್ನು, ಪಂಪಿಂಗ್ ಕೇಂದ್ರಗಳನ್ನು (ಸಕಲೇಶಪುರದಲ್ಲಿ ಸೇರಿದಂತೆ) ಮತ್ತು 260 ಕಿ.ಮೀ ಉದ್ದದ ‘ಸ್ವಾಭಾವಿಕ ಹರಿವಿನ ಮುಖ್ಯ ಕಾಲುವೆ’ಯನ್ನು ನಿರ್ಮಿಸುವುದನ್ನು ಇದು ಒಳಗೊಂಡಿದೆ.
  • ಕೌಶಲ್ಯ ಫಲಿತಾಂಶಗಳ ನಿಧಿ (Skills Outcomes Fund) | ಜಮ್ಮು ಮತ್ತು ಕಾಶ್ಮೀರದಲ್ಲಿ ಸರೋವರಗಳ ಅವನತಿ | ಯಥಾಸ್ಥಿತಿಯಲ್ಲಿ ರೆಪೋ ದರ (ಶೇ. 5.25) ಮುಂದುವರಿಕೆ : RBI | ಭಾರತದಲ್ಲಿ ಹೈಡ್ರೋಫ್ಲೋರೋಕಾರ್ಬನ್‌ಗಳ (HFCs) ಹಂತಹಂತವಾದ ಕಡಿತ | ವಿನಾಯಕ ದಾಮೋದರ ಸಾವರ್ಕರ್ | ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳು (CAPF’s)

    ಕೌಶಲ್ಯ ಫಲಿತಾಂಶಗಳ ನಿಧಿ (Skills Outcomes Fund)

    ಆರ್ಥಿಕತೆ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಕೇಂದ್ರ ‘ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ’ವು (MSDE) ವಿನೂತನವಾದ ‘ಕೌಶಲ್ಯ ಫಲಿತಾಂಶಗಳ ನಿಧಿ’ಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಹೊಸ ಅಭಿಯಾನವೊಂದನ್ನು ಪ್ರಾರಂಭಿಸಿದೆ.

    ಕೌಶಲ್ಯ ಫಲಿತಾಂಶಗಳ ನಿಧಿಯ ಬಗ್ಗೆ: 

    • ಉದ್ದೇಶ:- ಆರ್ಥಿಕವಾಗಿ ಹಿಂದುಳಿದ ವರ್ಗಗಳ ಯುವಜನತೆಗೆ ಉತ್ತಮ ವೃತ್ತಿ ಅವಕಾಶಗಳನ್ನು ಸೃಷ್ಟಿಸಲು ಈ ಉಪಕ್ರಮವನ್ನು ವಿನ್ಯಾಸಗೊಳಿಸಲಾಗಿದೆ.
    • ಅನುಷ್ಠಾನಗೊಳಿಸುವ ಸಂಸ್ಥೆ:- ‘ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ’ (NSDC)
    • ‘ಮಿಶ್ರಿತ ಹಣಕಾಸು ವಿಧಾನ’ದ ಮಾದರಿಯನ್ನು ಬಳಸಲಗುತ್ತಿದೆ:- ಅಂದರೆ, ಸರ್ಕಾರಿ ನಿಧಿಯೊಂದಿಗೆ ಖಾಸಗಿ ವಲಯದ CSR ಅನುದಾನ (ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ), ಗೇಟ್ಸ್ ಫೌಂಡೇಶನ್‌ನಂತಹ ದತ್ತಿ ಸಂಸ್ಥೆಗಳ ಮತ್ತು ಅಭಿವೃದ್ಧಿ ಏಜೆನ್ಸಿಗಳ ಬಂಡವಾಳವನ್ನು ಇದು ಒಗ್ಗೂಡಿಸುತ್ತದೆ.
    • ಉದ್ದೇಶಿತ ಫಲಾನುಭವಿಗಳು:- ಮುಂದಿನ 4 ವರ್ಷಗಳಲ್ಲಿ ಕಡಿಮೆ-ಆದಾಯದ ಹಿನ್ನೆಲೆಯಿಂದ ಬಂದ 2 ಲಕ್ಷಕ್ಕೂ ಹೆಚ್ಚು ಯುವಜನರನ್ನು ಬೆಂಬಲಿಸುವ ಗುರಿಯನ್ನು ಇದು ಹೊಂದಿದೆ. ಇದರಲ್ಲಿ ವಿಶೇಷವಾಗಿ ‘ಕಡಿಮೆ-ಆದಾಯದ ಮಹಿಳೆಯರ’ ಮೇಲೆ ಹೆಚ್ಚಿನ ಗಮನ ಹರಿಸಲಾಗುತ್ತದೆ.
    • ಹೆಚ್ಚಿನ ಬೆಳವಣಿಗೆಯ ವಲಯಗಳು:- ಇಲ್ಲಿ ನೀಡಲಾಗುವ ತರಬೇತಿಯು ಉದ್ಯೋಗದಾತ-ಚಾಲಿತ ಹಾಗೂ ಬೇಡಿಕೆ-ಆಧಾರಿತವಾಗಿರುತ್ತದೆ. ಪ್ರಮುಖವಾಗಿ BFSI (ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳು), IT-ITeS (ಮಾಹಿತಿ ತಂತ್ರಜ್ಞಾನ), ಹಸಿರು ವಲಯದಲ್ಲಿನ ಉದ್ಯೋಗಗಳು, ಆರೋಗ್ಯ ಸೇವೆ, ಸರಕು ಸಾಗಣೆ ಮತ್ತು ಎಲೆಕ್ಟ್ರಾನಿಕ್ಸ್ ವಲಯಗಳ ಉದ್ಯೋಗಗಳ ಮೇಲೆ ಈ ನಿಧಿ ಗಮನ ಕೇಂದ್ರೀಕರಿಸುತ್ತದೆ.

    ಜಮ್ಮು ಮತ್ತು ಕಾಶ್ಮೀರದಲ್ಲಿ ಸರೋವರಗಳ ಅವನತಿ

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖಪಾಲರು (CAG of India) ನೀಡಿದ ಇತ್ತೀಚಿನ ವರದಿಯ ಪ್ರಕಾರ, 1967 ರಿಂದೀಚೆಗೆ ಜಮ್ಮು ಮತ್ತು ಕಾಶ್ಮೀರದ ಸುಮಾರು ಅರ್ಧದಷ್ಟು ಸರೋವರಗಳು ಕಣ್ಮರೆಯಾಗಿವೆ. ಇದು ಗಂಭೀರವಾದ ಪರಿಸರ ಬಿಕ್ಕಟ್ಟಿನ ಮುನ್ಸೂಚನೆಯಾಗಿದೆ ಎಂದು ಸಿಎಜಿ ಎಚ್ಚರಿಸಿದೆ.

    ಜಮ್ಮು ಮತ್ತು ಕಾಶ್ಮೀರದಲ್ಲಿನ ಸರೋವರಗಳ ಅವನತಿಗೆ ಪ್ರಮುಖ ಕಾರಣಗಳು:

    • ಅನಿಯಂತ್ರಿತ ಮಾನವ ಚಟುವಟಿಕೆಗಳು ಮತ್ತು ಭೂ ಒತ್ತುವರಿ. 
    • ಸಂಬಂಧಪಟ್ಟ ಇಲಾಖೆಗಳ ನಡುವೆ ಸಾಂಸ್ಥಿಕ ಸಮನ್ವಯತೆಯ ಕೊರತೆ.
    • ಏಕೀಕೃತ ನಿಯಂತ್ರಣ ಚೌಕಟ್ಟಿನ ಅನುಪಸ್ಥಿತಿ. ಈ ಕಾರಣಗಳಿಂದಾಗಿ ಭೂ-ಬಳಕೆಯ ಸ್ವರೂಪದಲ್ಲಿ ಭಾರಿ ಬದಲಾವಣೆಗಳಾಗಿವೆ.

    ಜಮ್ಮು-ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶದಲ್ಲಿರುವ ಪ್ರಮುಖ ಸರೋವರಗಳು:

    • ದಾಲ್ ಸರೋವರ:- ಇದು ವಸತಿ ದೋಣಿಗಳು, ಸಾಂಪ್ರದಾಯಿಕ ‘ಶಿಕಾರಾ’ ದೋಣಿಗಳು ಮತ್ತು ತೇಲುವ ಉದ್ಯಾನವನಗಳಿಗೆ (ರಾಡ್) ಹೆಸರುವಾಸಿಯಾದ ಪ್ರಸಿದ್ಧ ಸಿಹಿನೀರಿನ ಸರೋವರವಾಗಿದೆ. 
    • ವುಲಾರ್ ಸರೋವರ:- ಇದು ಭಾರತದ ಅತ್ಯಂತ ದೊಡ್ಡ ಸಿಹಿನೀರಿನ ಸರೋವರವಾಗಿದ್ದು , ಭೂಪದರಗಳ (ಟೆಕ್ಟೋನಿಕ್) ಚಟುವಟಿಕೆಯಿಂದಾಗಿ ರೂಪುಗೊಂಡಿದೆ. ಇದಕ್ಕೆ ‘ಝೇಲಂ ನದಿ’ಯು ನೀರನ್ನು ಪೂರೈಸುತ್ತದೆ ಮತ್ತು ಇದು ‘ರಾಮ್ಸರ್ ತಾಣ’ದ ಮಾನ್ಯತೆ ಪಡೆದಿದೆ.
    • ಪ್ಯಾಂಗಾಂಗ್ ತ್ಸೋ:- ಇದೊಂದು ಅತಿ-ಎತ್ತರದ ಪ್ರದೇಶದಲ್ಲಿರುವ ಉಪ್ಪುನೀರಿನ ಸರೋವರವಾಗಿದ್ದು, ಟಿಬೆಟ್‌ವರೆಗೂ ವಿಸ್ತರಿಸಿದೆ. ಇದು ತನ್ನ ಬಣ್ಣ ಬದಲಾಯಿಸುವ ವಿಶಿಷ್ಟತೆ ಮತ್ತು ಆಯಕಟ್ಟಿನ ಪ್ರಾಮುಖ್ಯತೆಗೆ ಹೆಸರುವಾಸಿಯಾಗಿದೆ.
    • ತ್ಸೋ ಮೊರಿರಿ:- ಇದು ಸಹ ಅತಿ-ಎತ್ತರದಲ್ಲಿರುವ ಮತ್ತೊಂದು ಉಪ್ಪುನೀರಿನ ಸರೋವರವಾಗಿದ್ದು, ‘ರಾಮ್ಸರ್ ತಾಣ’ದ ಮಾನ್ಯತೆ ಪಡೆದಿದೆ.
    • ಮಾನಸ್‌ಬಲ್ ಸರೋವರ:- ಇದು ಈ ಪ್ರದೇಶದ ಅತ್ಯಂತ ಆಳವಾದ ಸಿಹಿನೀರಿನ ಸರೋವರಗಳಲ್ಲಿ ಒಂದಾಗಿದೆ. ನೂರ್ ಜಹಾನ್ ನಿರ್ಮಿಸಿದ ಪ್ರಸಿದ್ಧ ಮೊಘಲ್ ಉದ್ಯಾನವನವಾದ ‘ಜರೋಕಾ ಬಾಗ್’ ಈ ಸರೋವರದ ಮೇಲ್ಭಾಗದಲ್ಲಿದೆ.
    • ಹೊಕೇರ್ಸರ್ ಜೌಗು ಪ್ರದೇಶ:- ಇದನ್ನು ಹೆಚ್ಚಾಗಿ “ಜೌಗು ಪ್ರದೇಶಗಳ ರಾಣಿ” ಎಂದು ಕರೆಯಲಾಗುತ್ತದೆ.
    • ಸುರಿನ್ಸರ್ ಸರೋವರ ಮತ್ತು ಮಾನ್ಸರ್ ಸರೋವರ:- ಇವು ಅವಳಿ ಸರೋವರಗಳಾಗಿದ್ದು, ‘ರಾಮ್ಸರ್ ತಾಣ’ದ ಮಾನ್ಯತೆ ಪಡೆದಿದೆ.

    ಯಥಾಸ್ಥಿತಿಯಲ್ಲಿ ರೆಪೋ ದರ (ಶೇ. 5.25) ಮುಂದುವರಿಕೆ : RBI

    ಆರ್ಥಿಕತೆ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ಭಾರತೀಯ ರಿಸರ್ವ್ ಬ್ಯಾಂಕ್‌ನ (RBI) ‘ಹಣಕಾಸು ನೀತಿ ಸಮಿತಿ’ಯು (MPC) ತನ್ನ ಪ್ರಮುಖ ನೀತಿ ದರವಾದ ರೆಪೋ ದರವನ್ನು ಯಾವುದೇ ಬದಲಾವಣೆಯಿಲ್ಲದೆ ಶೇ. 5.25 ರಲ್ಲೇ ಮುಂದುವರಿಸಲು ನಿರ್ಧರಿಸಿದೆ.

    ಹಣಕಾಸು ನೀತಿ ಸಮಿತಿಯ ಬಗ್ಗೆ (MPC – Monetary Policy Committee):

    • ಸ್ಥಾಪನೆ:- ಭಾರತೀಯ ರಿಸರ್ವ್ ಬ್ಯಾಂಕ್ (RBI) ಕಾಯ್ದೆ, 1934 ರ ಸೆಕ್ಷನ್ 45ZB ಅಡಿಯಲ್ಲಿ ಕೇಂದ್ರ ಸರ್ಕಾರವು ಈ ಹಣಕಾಸು ನೀತಿ ಸಮಿತಿಯನ್ನು (MPC) ರಚಿಸಿದೆ.
    • ಈ ಸಮಿತಿಯು ವರ್ಷದಲ್ಲಿ ಕನಿಷ್ಠ ನಾಲ್ಕು ಬಾರಿಯಾದರೂ ಸಭೆ ಸೇರುವುದು ಕಡ್ಡಾಯವಾಗಿದೆ.
    • ಈ ಸಮಿತಿಯು ಒಟ್ಟು 6 ಸದಸ್ಯರನ್ನು ಒಳಗೊಂಡಿದೆ:
      • ಈ ಆರು ಸದಸ್ಯರ ಪೈಕಿ ಮೂವರು ‘ಆರ್‌ಬಿಐ’ನ ಆಂತರಿಕ ಸದಸ್ಯರಾಗಿರುತ್ತಾರೆ. ಇದರಲ್ಲಿ ಸಮಿತಿಯ ಅಧ್ಯಕ್ಷತೆ ವಹಿಸುವ ಆರ್‌ಬಿಐ ಗವರ್ನರ್ ಕೂಡ ಸೇರಿದ್ದಾರೆ.
      • ಆರ್‌ಬಿಐನ ಡೆಪ್ಯುಟಿ ಗವರ್ನರ್ ಎರಡನೇ ಆಂತರಿಕ ಸದಸ್ಯರಾಗಿರುತ್ತಾರೆ.
      • ಮೂರನೇ ಸದಸ್ಯರಾಗಿ ಆರ್‌ಬಿಐನ ಕೇಂದ್ರ ಮಂಡಳಿಯು ಓರ್ವ ಆರ್‌ಬಿಐನ ಅಧಿಕಾರಿಯನ್ನು ನಾಮನಿರ್ದೇಶನ ಮಾಡುತ್ತದೆ. (ಸಾಮಾನ್ಯವಾಗಿ, ಹಣಕಾಸು ನೀತಿಯ ಉಸ್ತುವಾರಿ ವಹಿಸುವ ‘ಕಾರ್ಯನಿರ್ವಾಹಕ ನಿರ್ದೇಶಕರು’ ಈ ಸ್ಥಾನದಲ್ಲಿರುತ್ತಾರೆ).
      • ಉಳಿದ ಮೂವರು ಬಾಹ್ಯ ಸದಸ್ಯರಾಗಿದ್ದು, ಅವರನ್ನು ಕೇಂದ್ರ ಸರ್ಕಾರವು ನಾಲ್ಕು ವರ್ಷಗಳ ಅವಧಿಗೆ ನೇಮಕ ಮಾಡುತ್ತದೆ.
    • MPC ಯ ಪ್ರತಿಯೊಬ್ಬ ಸದಸ್ಯರಿಗೂ ತಲಾ ಒಂದು ಮತದಾನದ ಹಕ್ಕಿರುತ್ತದೆ:- ಒಂದು ವೇಳೆ ನಿರ್ಣಯದ ಮೇಲಿನ ಮತಗಳು ಸಮಬಲಗೊಂಡರೆ, ಆರ್‌ಬಿಐ ಗವರ್ನರ್ ಅವರು ಎರಡನೇ ಅಥವಾ ‘ನಿರ್ಣಾಯಕ ಮತವನ್ನು’ ಚಲಾಯಿಸುವ ಅಧಿಕಾರ ಹೊಂದಿರುತ್ತಾರೆ.
    • ರಚನೆಯ ಪ್ರಾಮುಖ್ಯತೆ:- ಬೆಲೆ ಸ್ಥಿರತೆ ಮತ್ತು ಹಣದುಬ್ಬರವನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಆರ್‌ಬಿಐಗೆ ವಹಿಸಲು ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ನಡುವೆ ಏರ್ಪಟ್ಟ ಒಪ್ಪಂದದ ಪರಿಣಾಮವಾಗಿ ಈ MPC ಯನ್ನು ಸ್ಥಾಪಿಸಲಾಯಿತು. ಇದಕ್ಕಾಗಿ ಭಾರತ ಸರ್ಕಾರ ಮತ್ತು ಆರ್‌ಬಿಐ ‘ಹಣಕಾಸು ನೀತಿ ಚೌಕಟ್ಟಿನ ಒಪ್ಪಂದ’ಕ್ಕೆ (Monetary Policy Framework Agreement) ಸಹಿ ಹಾಕಿವೆ.
    • ಕಾರ್ಯಗಳು:- ನಿಗದಿತ ಹಣದುಬ್ಬರ ಗುರಿಯನ್ನು ಸಾಧಿಸಲು ಅಗತ್ಯವಿರುವ ನೀತಿ ‘ರೆಪೋ ದರ’ವನ್ನು ಈ ಸಮಿತಿಯು ನಿರ್ಧರಿಸುತ್ತದೆ. ಇದು ಆರ್ಥಿಕತೆಯಲ್ಲಿನ ಇತರೆಲ್ಲಾ ಬಡ್ಡಿದರಗಳಿಗೆ ಮಾನದಂಡವಾಗಿ ಕಾರ್ಯನಿರ್ವಹಿಸುತ್ತದೆ.

    ಭಾರತದಲ್ಲಿ ಹಣಕಾಸು ನೀತಿಯ ಪ್ರಮುಖ ಸಾಧನಗಳು:

    • ರೆಪೋ ದರ:- ಇದು ಆರ್‌ಬಿಐ ವಾಣಿಜ್ಯ ಬ್ಯಾಂಕ್‌ಗಳಿಗೆ ಅಲ್ಪಾವಧಿ ನಿಧಿಯನ್ನು ಸಾಲವಾಗಿ ನೀಡುವಾಗ ವಿಧಿಸುವ ಬಡ್ಡಿದರವಾಗಿದೆ. ಇದಕ್ಕೆ ವಾಣಿಜ್ಯ ಬ್ಯಾಂಕ್‌ಗಳು ಭದ್ರತೆಯನ್ನು ಒದಗಿಸಬೇಕಾಗುತ್ತದೆ.
    • ರಿವರ್ಸ್ ರೆಪೋ ದರ:- ಇದು ಆರ್‌ಬಿಐ ವಾಣಿಜ್ಯ ಬ್ಯಾಂಕ್‌ಗಳಿಂದ ಹೆಚ್ಚುವರಿ ಹಣದ ಹರಿವನ್ನು (ದ್ರವ್ಯತೆ) ತನ್ನತ್ತ ಸೆಳೆಯುವಾಗ ನೀಡುವ ಬಡ್ಡಿದರವಾಗಿದೆ. 
    • ನಗದು ಮೀಸಲು ಅನುಪಾತ (Cash Reserve Ratio – CRR):- ಇದು ವಾಣಿಜ್ಯ ಬ್ಯಾಂಕ್‌ಗಳು ತಮ್ಮ ಒಟ್ಟು ಠೇವಣಿಯ ನಿರ್ದಿಷ್ಟ ಭಾಗವನ್ನು ಕಡ್ಡಾಯವಾಗಿ ಆರ್‌ಬಿಐ ಬಳಿ ಕೇವಲ ನಗದು ರೂಪದಲ್ಲಿ ಕಾಯ್ದಿರಿಸಬೇಕಾದ ಪ್ರಮಾಣವಾಗಿದೆ.
    • ಶಾಸನಬದ್ಧ ದ್ರವ್ಯತೆ ಅನುಪಾತ (Statutory Liquidity Ratio – SLR):- ಇದು ವಾಣಿಜ್ಯ ಬ್ಯಾಂಕ್‌ಗಳು ತಮ್ಮ ಠೇವಣಿಯ ನಿರ್ದಿಷ್ಟ ಭಾಗವನ್ನು ಕಡ್ಡಾಯವಾಗಿ ದ್ರವ್ಯ ಚಿರಾಸ್ತಿಗಳ ರೂಪದಲ್ಲಿ (Liquid assets) ಅಂದರೆ ಚಿನ್ನ, ನಗದು, ಸರ್ಕಾರಿ ಭದ್ರತೆಗಳನ್ನು ತಮ್ಮ ಬಳಿಯೇ ಕಾಯ್ದಿರಿಸಿಕೊಳ್ಳಬೇಕಾದ ಪ್ರಮಾಣವಾಗಿದೆ.
    • ಮುಕ್ತ ಮಾರುಕಟ್ಟೆ ಕಾರ್ಯಾಚರಣೆಗಳು (Open Market Operations – OMO):- ಇದು ಮಾರುಕಟ್ಟೆಯಲ್ಲಿ ಹಣದ ಹರಿವನ್ನು ನಿಯಂತ್ರಿಸಲು ಆರ್‌ಬಿಐ ಸರ್ಕಾರಿ ಭದ್ರತೆಗಳನ್ನು (G- secs) ಖರೀದಿಸುವ ಅಥವಾ ಮಾರಾಟ ಮಾಡುವ ಪ್ರಕ್ರಿಯೆಯಾಗಿದೆ. 
    • ಸೀಮಾಂತ ಸ್ಥಾಯಿ ಸೌಲಭ್ಯ (Marginal Standing Facility – MSF):- ವಾಣಿಜ್ಯ ಬ್ಯಾಂಕ್‌ಗಳು ತುರ್ತು ಪರಿಸ್ಥಿತಿಯಲ್ಲಿ (ತೀವ್ರ ನಗದು ಕೊರತೆಯಾದಾಗ) ದಂಡದ ದರದಲ್ಲಿ ಆರ್‌ಬಿಐನಿಂದ ಸಾಲ ಪಡೆಯಲು ಇರುವ ವಿಶೇಷ ವ್ಯವಸ್ಥೆಯಾಗಿದೆ.
    • ದ್ರವ್ಯತೆ ಹೊಂದಾಣಿಕೆ ಸೌಲಭ್ಯ (Liquidity Adjustment Facility – LAF):- ಇದು ರೆಪೋ ಮತ್ತು ರಿವರ್ಸ್ ರೆಪೋ ಕಾರ್ಯಾಚರಣೆಗಳನ್ನು ನಿರ್ವಹಿಸುವ ಒಟ್ಟಾರೆ ಚೌಕಟ್ಟಾಗಿದೆ.
    • ಮಾರುಕಟ್ಟೆ ಸ್ಥಿರೀಕರಣ ಯೋಜನೆ (Market Stabilisation Scheme – MSS):- ಆರ್ಥಿಕತೆಯಲ್ಲಿನ ಹೆಚ್ಚುವರಿ ದ್ರವ್ಯತೆಯನ್ನು ಹೀರಿಕೊಳ್ಳಲು ಸರ್ಕಾರಿ ಬಾಂಡ್‌ಗಳನ್ನು ವಿತರಿಸುವ ವ್ಯವಸ್ಥೆಯಾಗಿದೆ.

    ಭಾರತದಲ್ಲಿ ಹೈಡ್ರೋಫ್ಲೋರೋಕಾರ್ಬನ್‌ಗಳ (HFCs) ಹಂತಹಂತವಾದ ಕಡಿತ

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಡಿಸೆಂಬರ್ 31, 2027 ರ ನಂತರ ಯಾವುದೇ ಹೊಸ ಹೈಡ್ರೋಫ್ಲೋರೋಕಾರ್ಬನ್ (Hydrofluorocarbon – HFC) ಉತ್ಪಾದನಾ ಯೋಜನೆಗಳಿಗೆ ಪರಿಸರ ಅನುಮತಿಯನ್ನು ನೀಡುವುದಿಲ್ಲ ಎಂದು ಭಾರತ ಸರ್ಕಾರವು ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
    • ಸರ್ಕಾರದ ಈ ಮಹತ್ವದ ನಿರ್ಧಾರವು, ‘ಮಾಂಟ್ರಿಯಲ್ ಶಿಷ್ಟಾಚಾರ’ (Montreal Protocol) ಮತ್ತು ‘ಕಿಗಾಲಿ ತಿದ್ದುಪಡಿ’ (Kigali Amendment) ಅಡಿಯಲ್ಲಿ ಭಾರತ ಮಾಡಿಕೊಂಡಿರುವ ಅಂತರರಾಷ್ಟ್ರೀಯ ಬದ್ಧತೆಗಳಿಗೆ ಅನುಗುಣವಾಗಿದೆ.

    ಮಾಂಟ್ರಿಯಲ್ ಶಿಷ್ಟಾಚಾರ (Montreal Protocol)ದ ಬಗ್ಗೆ:

    • ಜಾರಿ:- ಕೆನಡಾದ ಮಾಂಟ್ರಿಯಲ್‌ನಲ್ಲಿ 1987 ರಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು ಮತ್ತು ಇದು 1989 ರಿಂದ ಅಧಿಕೃತವಾಗಿ ಜಾರಿಗೆ ಬಂದಿತು.
    • ಉದ್ದೇಶ:- ಓಝೋನ್ ಪದರದ ಸವೆತಕ್ಕೆ ಕಾರಣವಾಗಿರುವ ವಸ್ತುಗಳ ಉತ್ಪಾದನೆಯನ್ನು ಗಣನೀಯವಾಗಿ ತಗ್ಗಿಸುವ ಮೂಲಕ ‘ಓಝೋನ್ ಪದರ’ವನ್ನು ರಕ್ಷಿಸುವುದು.
    • ಕಿಗಾಲಿ ಒಪ್ಪಂದ, 2016:- ರುವಾಂಡಾ ದೇಶದ ಕಿಗಾಲಿಯಲ್ಲಿ 2016 ರಲ್ಲಿ ಅಂಗೀಕರಿಸಲ್ಪಟ್ಟ, ಕಾನೂನುಬದ್ಧವಾದ ‘ಕಿಗಾಲಿ ಒಪ್ಪಂದ’ವನ್ನು ಅನುಮೋದಿಸುವ ಮೂಲಕ ಈ ಮಾಂಟ್ರಿಯಲ್ ಶಿಷ್ಟಾಚಾರವನ್ನು ಮತ್ತಷ್ಟು ಬಲಪಡಿಸಲಾಯಿತು.
    • ಪ್ರಾಮುಖ್ಯತೆ:- ಪ್ರಬಲ ಹಸಿರುಮನೆ ಅನಿಲಗಳಾಗಿರುವ ಹೈಡ್ರೋಫ್ಲೋರೋಕಾರ್ಬನ್‌ಗಳ (HFCs) ಉತ್ಪಾದನೆಯನ್ನು 2040 ರ ದಶಕದ ಅಂತ್ಯದ ವೇಳೆಗೆ ಹಂತಹಂತವಾಗಿ ಸಂಪೂರ್ಣವಾಗಿ ಸ್ಥಗಿತಗೊಳಿಸುವ ಗುರಿಯನ್ನು ಇದು ಹೊಂದಿದೆ.

    ಕಿಗಾಲಿ ತಿದ್ದುಪಡಿ (Kigali Amendment)ಯ ಬಗ್ಗೆ:

    • ಕಿಗಾಲಿ ಒಪ್ಪಂದವು ಮೂಲತಃ ‘ಮಾಂಟ್ರಿಯಲ್ ಶಿಷ್ಟಾಚಾರ’ಕ್ಕೆ ತರಲಾದ ಅಧಿಕೃತ ತಿದ್ದುಪಡಿಯಾಗಿದೆ.
    • ಉದ್ದೇಶ:- ಹೈಡ್ರೋಫ್ಲೋರೋಕಾರ್ಬನ್‌ಗಳ (HFCs) ಉತ್ಪಾದನೆ ಮತ್ತು ಬಳಕೆ ಎರಡನ್ನೂ ನಿಯಂತ್ರಿಸುವ ಮೂಲಕ, ಅವುಗಳನ್ನು ವ್ಯವಸ್ಥಿತವಾಗಿ ಹಂತಹಂತವಾಗಿ ತಗ್ಗಿಸುವುದು.
    • 2047 ರ ವೇಳೆಗೆ ಜಾಗತಿಕ HFC ಬಳಕೆಯಲ್ಲಿ ಶೇ. 80 ಕ್ಕಿಂತ ಹೆಚ್ಚಿನ ಕಡಿತವನ್ನು ಸಾಧಿಸುವುದು ಇದರ ಪ್ರಮುಖ ಗುರಿಯಾಗಿದೆ. ಇದು ಈ ಶತಮಾನದ ಅಂತ್ಯದ ವೇಳೆಗೆ ಜಾಗತಿಕ ತಾಪಮಾನದಲ್ಲಿನ ಹೆಚ್ಚಳವನ್ನು 0.5 ಡಿಗ್ರಿ ಸೆಲ್ಸಿಯಸ್‌ನಷ್ಟು ತಡೆಯಲು ಸಹಾಯ ಮಾಡುತ್ತದೆ.

    ಓಝೋನ್ ಪದರ (O3)ದ ಕುರಿತು:

    • ಓಜೋನ್ ಎಂಬುದು ಮೂರು ಆಮ್ಲಜನಕದ ಪರಮಾಣುಗಳಿಂದ ಮಾಡಲ್ಪಟ್ಟ ಅತ್ಯಂತ ಕ್ರಿಯಾಶೀಲ ಅಣುವಾಗಿದೆ.
    • ‘ಸಮೋಷ್ಣ ಮಂಡಲ’ (Stratosphere) ವಲಯದಲ್ಲಿ ಕಂಡುಬರುತ್ತದೆ:- ಇದು ಭೂಮಿಯ ಮೇಲ್ಮೈಯಿಂದ ಸುಮಾರು 10 ರಿಂದ 50 ಕಿ.ಮೀ ಎತ್ತರದಲ್ಲಿ ಅಸ್ತಿತ್ವದಲ್ಲಿದೆ ಮತ್ತು ಇದೊಂದು ತೆಳುವಾದ ಓಝೋನ್ ಪದರವಾಗಿ ರೂಪುಗೊಂಡಿದೆ.
    • ನೈಸರ್ಗಿಕ ರಕ್ಷಾಕವಚವಾಗಿ ಕಾರ್ಯನಿರ್ವಹಿಸುತ್ತದೆ:- ಸೂರ್ಯನಿಂದ ಹೊರಹೊಮ್ಮುವ ಮಾರಕವಾದ ‘ನೇರಳಾತೀತ ವಿಕಿರಣ’ಗಳನ್ನು (UV Radiation) ತಡೆ ಹಿಡಿಯುವ ಮೂಲಕ ಭೂಮಿಯ ಮೇಲಿರುವ ಮಾನವ ಸಂಕುಲ ಹಾಗೂ ಇತರ ಜೀವಿಗಳ ಉಳಿವಿಗೆ ಈ ‘ಓಝೋನ್ ಕವಚ’ವು ಅತ್ಯಂತ ಅವಶ್ಯಕವಾಗಿದೆ.

    ಓಝೋನ್ ಪದರದ ಸವೆತ (OZONE LAYER DEPLETION)ನ ಕುರಿತು:

    • ವ್ಯಾಖ್ಯಾನ:- ವಾತಾವರಣದ ಮಧ್ಯದ ಪದರಗಳಲ್ಲಿ, ಅದರಲ್ಲೂ ಪ್ರಮುಖವಾಗಿ ‘ಸಮೋಷ್ಣ ಮಂಡಲ’ ವಲಯದಲ್ಲಿ ಓಝೋನ್ ಅನಿಲದ ಸಾಂದ್ರತೆಯು ಕಡಿಮೆಯಾಗುವ ಪ್ರಕ್ರಿಯೆಯನ್ನು ‘ಓಝೋನ್ ಪದರದ ಸವೆತ’ ಎಂದು ಕರೆಯಲಾಗುತ್ತದೆ.
    • ಸವೆತಕ್ಕೇ ಕಾರಣಗಳು:- ಮಾನವ-ನಿರ್ಮಿತ ಹ್ಯಾಲೊಜನ್-ಯುಕ್ತ ಹೈಡ್ರೋಕಾರ್ಬನ್‌ಗಳ ನಿರಂತರ ಹೊರಸೂಸುವಿಕೆಯಿಂದಾಗಿ ಓಝೋನ್ ಸವೆತ ಉಂಟಾಗುತ್ತದೆ. ಅವುಗಳೆಂದರೆ,
    1. ಕ್ಲೋರೋಫ್ಲೋರೋಕಾರ್ಬನ್ (CFCs), 
    2. ಹೈಡ್ರೋಕ್ಲೋರೋಫ್ಲೋರೋಕಾರ್ಬನ್ (HCFCs), 
    3. ಹ್ಯಾಲಾನ್‌ (Halons), 
    4. ಕಾರ್ಬನ್ ಟೆಟ್ರಾಕ್ಲೋರೈಡ್ (Carbon tetrachloride) ಮತ್ತು 
    5. ಮೀಥೈಲ್ ಬ್ರೋಮೈಡ್‌ (Methyl bromide).
    6. ಓಝೋನ್ ರಂಧ್ರ:- 1970 ರ ದಶಕದ ಆರಂಭದಿಂದಲೂ, ಭೂಮಿಯ ಕೆಲವು ನಿರ್ದಿಷ್ಟ ಪ್ರದೇಶಗಳ ಮೇಲೆ, ವಿಶೇಷವಾಗಿ ‘ಅಂಟಾರ್ಕ್ಟಿಕ್ ಪ್ರದೇಶ’ದ ಮೇಲೆ ಸಮೋಷ್ಣ ಮಂಡಲ ವಲಯದ ಓಝೋನ್ ಪದರವು ಗಣನೀಯವಾಗಿ ತೆಳುವಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿ ಕಂಡುಬಂದಿದೆ.

    ವಿನಾಯಕ ದಾಮೋದರ ಸಾವರ್ಕರ್

    ಇತಿಹಾಸ

    ಇತ್ತೀಚೆಗೆ ಸುದ್ದಿಯಲ್ಲಿ:

    • ವಿನಾಯಕ ದಾಮೋದರ ಸಾವರ್ಕರ್ ಕುರಿತಾದ ಟೀಕೆಗಳಿಗೆ ಸಂಬಂಧಿಸಿದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯೊಂದು, ‘ಸ್ವಾತಂತ್ರ್ಯವೀರ’ ಎಂಬ ಬಿರುದಿನ ಮೂಲದ ಬಗ್ಗೆ ಪುಣೆ ನ್ಯಾಯಾಲಯದ ಮುಂದೆ ಗಮನ ಸೆಳೆದಿದೆ.

    ವಿನಾಯಕ ದಾಮೋದರ ಸಾವರ್ಕರ್ (1883–1966) ಅವರ ಬಗ್ಗೆ:

    • ಜನಪ್ರಿಯವಾಗಿ ‘ವೀರ ಸಾವರ್ಕರ್’ ಎಂದು ಕರೆಯಲ್ಪಡುವ ಇವರು ಪ್ರಮುಖ ಸ್ವಾತಂತ್ರ್ಯ ಹೋರಾಟಗಾರ, ರಾಜಕೀಯ ಚಿಂತಕ ಮತ್ತು ಬರಹಗಾರರಾಗಿದ್ದರು.
    • ಇವರು ಹಿಂದುತ್ವ ಸಿದ್ಧಾಂತದ ಬೆಳವಣಿಗೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು ಮತ್ತು ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಕ್ರಾಂತಿಕಾರಿ ರಾಷ್ಟ್ರೀಯತೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
    • ಶಿಕ್ಷಣ:-  ಸಾವರ್ಕರ್ ಅವರು ಪುಣೆಯ ಫರ್ಗುಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು ಮತ್ತು ನಂತರ ಕಾನೂನು ಅಧ್ಯಯನಕ್ಕಾಗಿ ಲಂಡನ್‌ಗೆ ಪ್ರಯಾಣ ಬೆಳೆಸಿದರು.
    • ಸ್ವಾತಂತ್ರ್ಯ ಹೋರಾಟದಲ್ಲಿನ ಪಾತ್ರ:- ಇವರು ಬ್ರಿಟಿಷ್ ಆಳ್ವಿಕೆಯ ವಿರುದ್ಧ ಸಶಸ್ತ್ರ ಕ್ರಾಂತಿಗೆ ಮುಡಿಪಾದ ‘ಅಭಿನವ್ ಭಾರತ್ ಸೊಸೈಟಿ’  ಎಂಬ ರಹಸ್ಯ ಸಂಘಟನೆಯನ್ನು 1904 ರಲ್ಲಿ ಸ್ಥಾಪಿಸಿದರು.
    • ಲಂಡನ್‌ನಲ್ಲಿದ್ದಾಗ, ಇವರು ‘ಇಂಡಿಯಾ ಹೌಸ್’  ಮತ್ತು ‘ಫ್ರೀ ಇಂಡಿಯಾ ಸೊಸೈಟಿ’ಯ ನೇತೃತ್ವ ವಹಿಸಿದ್ದರು. ಅಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ವಿಧ್ವಂಸಕ ಕೃತ್ಯ ಮತ್ತು ಹತ್ಯೆಯ ವಿಧಾನಗಳಲ್ಲಿ ತರಬೇತಿ ನೀಡುತ್ತಿದ್ದರು.
    • ಹಿಂದೂ ಮಹಾಸಭಾದ ಅಧ್ಯಕ್ಷರಾಗಿ ಸೇವೆ:- ಇವರು 1937 ರಿಂದ 1943 ರವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು, ಆ ಮೂಲಕ “ಹಿಂದೂ ರಾಷ್ಟ್ರ”ದ ಪರಿಕಲ್ಪನೆಯನ್ನು ಪ್ರತಿಪಾದಿಸಿದರು.
    • ಸಾಮಾಜಿಕ ಸುಧಾರಣೆ:- ಸಾವರ್ಕರ್ ಅವರು ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆಯ ಕಡು ವಿರೋಧಿಯಾಗಿದ್ದರು.
    • ಸಾಹಿತ್ಯಿಕ ಕೃತಿ:- ಇವರು ‘ದಿ ಇಂಡಿಯನ್ ವಾರ್ ಆಫ್ ಇಂಡಿಪೆಂಡೆನ್ಸ್, 1857’ (The Indian War of Independence, 1857) ಎಂಬ ಕೃತಿಯನ್ನು ರಚಿಸಿದರು. 1857 ರ ದಂಗೆಯನ್ನು ಭಾರತದ ‘ಮೊದಲ ಸ್ವಾತಂತ್ರ್ಯ ಸಂಗ್ರಾಮ’ವೆಂದು ಬಣ್ಣಿಸಿದ ಮೊದಲ ಕೃತಿ ಇದಾಗಿದೆ.

    ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳು (CAPF’s)

    ರಕ್ಷಣೆ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಅಧಿಕಾರಿಗಳ ನೇಮಕಾತಿ, ನಿಯೋಜನೆ, ಬಡ್ತಿ ಮತ್ತು ಸೇವಾ ಷರತ್ತುಗಳನ್ನು ನಿಯಂತ್ರಿಸಲು ಏಕೀಕೃತ ಕಾನೂನು ಚೌಕಟ್ಟನ್ನು ರಚಿಸುವ ಉದ್ದೇಶದಿಂದ, ಕೇಂದ್ರ ಸರ್ಕಾರವು ಇತ್ತೀಚೆಗೆ ‘ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ (ಸಾಮಾನ್ಯ ಆಡಳಿತ) ಕಾಯ್ದೆ, 2026’ ಅನ್ನು (Central Armed Police Forces (General Administration) Act, 2026 ಅಧಿಸೂಚನೆ ಹೊರಡಿಯಲಾಗಿದೆ. 

    ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ (CAPF) ಬಗ್ಗೆ:

    • ಕಾರ್ಯನಿರ್ವಹಣೆ:- ಇದು ಕೇಂದ್ರ ‘ಗೃಹ ಸಚಿವಾಲಯ’ದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
    • ಕಾರ್ಯಾದೇಶ:- ಗಡಿ ಕಾವಲು, ಆಂತರಿಕ ಭದ್ರತೆ, ಬಂಡಾಯ ನಿಗ್ರಹ ಮತ್ತು ಮೂಲಸೌಕರ್ಯ ರಕ್ಷಣೆಯ ಪ್ರಮುಖ ಜವಾಬ್ದಾರಿಯನ್ನು ಈ ಪಡೆಗಳು ಹೊಂದಿವೆ.
    • ಪ್ರಾಮುಖ್ಯತೆ:- ರಾಜ್ಯ ಪೊಲೀಸರಿಗೆ ನೆರವಾಗಲು ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ವಿನ್ಯಾಸಗೊಳಿಸಲಾದ ಈ ಪಡೆಗಳು ಪ್ರಮುಖವಾಗಿ CRPF, BSF, CISF, ITBP, SSB, NSG, ಮತ್ತು ಅಸ್ಸಾಂ ರೈಫಲ್ಸ್ ಅನ್ನು ಒಳಗೊಂಡಿವೆ.

    ಪ್ರಮುಖ ಘಟಕಗಳು ಮತ್ತು ಅವುಗಳ ಪಾತ್ರಗಳು:

    • ಗಡಿ ಕಾವಲು:- ಗಡಿ ಭದ್ರತಾ ಪಡೆ (BSF), ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ITBP), ಸಶಸ್ತ್ರ ಸೀಮಾ ಬಲ (SSB), ಮತ್ತು ಅಸ್ಸಾಂ ರೈಫಲ್ಸ್ (AR) ಪಡೆಗಳು ದೇಶದ ಗಡಿಗಳಲ್ಲಿ ಕಾವಲು ಮತ್ತು ಗಸ್ತು ಕಾಯುತ್ತವೆ.
    • ಆಂತರಿಕ ಭದ್ರತೆ:- ನಕ್ಸಲ್ ನಿಗ್ರಹ ಮತ್ತು ಬಂಡಾಯ-ನಿಗ್ರಹ ಕಾರ್ಯಾಚರಣೆಗಳಿಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆಯು (CRPF) ಪ್ರಾಥಮಿಕ ಪಡೆಯಾಗಿ ಕಾರ್ಯನಿರ್ವಹಿಸುತ್ತದೆ.
    • ಕೈಗಾರಿಕಾ ಭದ್ರತೆ:- ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯು (CISF) ವಿಮಾನ ನಿಲ್ದಾಣಗಳು ಸೇರಿದಂತೆ ನಿರ್ಣಾಯಕ ಮೂಲಸೌಕರ್ಯಗಳಿಗೆ ಭದ್ರತೆ ಒದಗಿಸುತ್ತದೆ.
    • ವಿಶೇಷ ಕಾರ್ಯಾಚರಣೆಗಳು:- ರಾಷ್ಟ್ರೀಯ ಭದ್ರತಾ ಪಡೆಯು (NSG) ವಿಶಿಷ್ಟ ಕಮಾಂಡೋ ಘಟಕವಾಗಿ ಕಾರ್ಯಾಚರಣೆಗಳನ್ನು ಕೈಗೊಳ್ಳುತ್ತದೆ.
  • ಜಿಎಸ್‌ಟಿ (GST) ಸಂಗ್ರಹದಲ್ಲಿ ಕರ್ನಾಟಕಕ್ಕೆ ದ್ವಿತೀಯ ಸ್ಥಾನ

    ಜಿಎಸ್‌ಟಿ (GST) ಸಂಗ್ರಹದಲ್ಲಿ ಕರ್ನಾಟಕಕ್ಕೆ ದ್ವಿತೀಯ ಸ್ಥಾನ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • 2025-2026ನೇ ಸಾಲಿನಲ್ಲಿ ಭಾರತದ ರಾಜ್ಯಗಳ ಪೈಕಿ ಕರ್ನಾಟಕವು ಎರಡನೇ ಅತಿ ಹೆಚ್ಚು ಜಿಎಸ್‌ಟಿ (GST) ಸಂಗ್ರಹವನ್ನು ಸಾಧಿಸಿದೆ.

    ಸರಕು ಮತ್ತು ಸೇವಾ ತೆರಿಗೆ (GST)ಯ ಬಗ್ಗೆ:

    • ಸರಕು ಮತ್ತು ಸೇವಾ ತೆರಿಗೆ (GST)ಯು ಸರಕು ಮತ್ತು ಸೇವೆಗಳ ಪೂರೈಕೆಯ ಮೇಲೆ ಭಾರತದಲ್ಲಿ ವಿಧಿಸಲಾಗುವ ಪರೋಕ್ಷ ತೆರಿಗೆಯಾಗಿದೆ.
    • ಇದು ದೇಶೀಯ ಬಳಕೆಗೆ ಮಾರಾಟವಾಗುವ ಹೆಚ್ಚಿನ ಸರಕು ಮತ್ತು ಸೇವೆಗಳ ಮೇಲೆ ವಿಧಿಸಲಾಗುವ ಮೌಲ್ಯವರ್ಧಿತ ತೆರಿಗೆಯಾಗಿದೆ.
    • ಇಡೀ ದೇಶಕ್ಕೆ ಅನ್ವಯವಾಗುವ ಸಮಗ್ರ ಪರೋಕ್ಷ ತೆರಿಗೆಯಾಗಿ ಇದನ್ನು 2017 ರಲ್ಲಿ ಭಾರತದಲ್ಲಿ ಜಾರಿಗೆ ತರಲಾಯಿತು.
    • ಇದು ಮೂರು ಪ್ರಕಾರದ ತೆರಿಗೆಗಳನ್ನು ಹೊಂದಿದೆ:-
      • CGST:- ಕೇಂದ್ರ ಸರ್ಕಾರವು ವಿಧಿಸುವ ತೆರಿಗೆ.
      • SGST:- ರಾಜ್ಯ ಸರ್ಕಾರಗಳು ವಿಧಿಸುವ ತೆರಿಗೆ.
      • IGST:- ಎಲ್ಲಾ ಅಂತರ-ರಾಜ್ಯ ಸರಕು ಮತ್ತು/ಅಥವಾ ಸೇವೆಗಳ ಪೂರೈಕೆಯ ಮೇಲೆ ವಿಧಿಸಲಾಗುವ ತೆರಿಗೆ.

    ಜಿಎಸ್‌ಟಿ ಮಂಡಳಿ (GST Council)ಯ ಬಗ್ಗೆ:

    • ಸಾಂವಿಧಾನಿಕ ಸಂಸ್ಥೆಯಾಗಿದೆ:- 2016 ರ ಸಂವಿಧಾನದ (101 ನೇ ತಿದ್ದುಪಡಿ) ಕಾಯ್ದೆಯ ಮೂಲಕ ಪರಿಚಯಿಸಲಾದ ಇದು, ಸಂವಿಧಾನದ 279A ವಿಧಿಯ ಅಡಿಯಲ್ಲಿ ಸ್ಥಾಪಿಸಲಾದ ಸಾಂವಿಧಾನಿಕ ಸಂಸ್ಥೆಯಾಗಿದೆ.
    • ಕಾರ್ಯಾಧಿಕಾರ:- ಭಾರತದಲ್ಲಿ ಜಿಎಸ್‌ಟಿಯ (GST) ಚೌಕಟ್ಟಿನಲ್ಲಿ ಯಾವುದೇ ಕಾನೂನು ಅಥವಾ ನಿಯಂತ್ರಣವನ್ನು ಮಾರ್ಪಡಿಸುವ, ಹೊಂದಾಣಿಕೆ ಮಾಡುವ ಅಥವಾ ಜಾರಿಗೊಳಿಸುವ ಅಧಿಕಾರವನ್ನು ಇದು ಹೊಂದಿದೆ.
    • ಒಕ್ಕೂಟ ವ್ಯವಸ್ಥೆ:- ಕೇಂದ್ರ ಮತ್ತು ರಾಜ್ಯಗಳೆರಡಕ್ಕೂ ಸೂಕ್ತ ಪ್ರಾತಿನಿಧ್ಯವನ್ನು ಒದಗಿಸುವ ‘ಒಕ್ಕೂಟ ಸಂಸ್ಥೆ’ ಎಂದೂ ಇದನ್ನು ಪರಿಗಣಿಸಲಾಗಿದೆ.
    • ಕಾರ್ಯಗಳು:- ಜಿಎಸ್‌ಟಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಇದು ಶಿಫಾರಸುಗಳನ್ನು ಮಾಡುತ್ತದೆ.
    • ಸಂಯೋಜನೆ:-
    1. ಅಧ್ಯಕ್ಷರು:- ಕೇಂದ್ರ ಹಣಕಾಸು ಸಚಿವರು.
    • ಸದಸ್ಯರು:- ಕೇಂದ್ರ ಕಂದಾಯ ಅಥವಾ ಹಣಕಾಸು ಖಾತೆ ರಾಜ್ಯ ಸಚಿವರು, ಮತ್ತು ಎಲ್ಲಾ ರಾಜ್ಯಗಳ ಹಣಕಾಸು ಅಥವಾ ತೆರಿಗೆ ಉಸ್ತುವಾರಿ ಸಚಿವರು.
  • ಲೂನಾರ್ ರಿಂಗ್ ಯೋಜನೆ – ಜಪಾನ್ | “Bhavasagara ಮತ್ತು MACS” : ರಾಷ್ಟ್ರೀಯ ದಾಖಲೆಗಳ ಸಂಗ್ರಹಕಾರ | ಎಲಿಫೆಂಟಾ ಗುಹೆಗಳು | “ಮಣ್ಣಿನ ಸಖಿಯರು”- ಮಣ್ಣಿನ ಆರೋಗ್ಯ ಮತ್ತು ಕೃಷಿ ಉತ್ಪಾದಕತೆ ಸುಧಾರಿಸಲು | ಪ್ರಾಣಿಗಳ ಆಹಾರ ನಿಯಂತ್ರಣಕ್ಕೆ FSSAI ಗೆ ಅಧಿಕಾರವಿಲ್ಲ | ಮುದ್ರಾ ಯೋಜನೆ : ಸಣ್ಣ-ಪ್ರಮಾಣದ ಉದ್ಯಮಗಳಿಗೆ

    ಲೂನಾರ್ ರಿಂಗ್ ಯೋಜನೆ – ಜಪಾನ್

    ವಿಜ್ಞಾನ ಮತ್ತು ತಂತ್ರಜ್ಞಾನ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಜಪಾನ್ ದೇಶದ ಸಂಸ್ಥೆಯಾದ ‘ಶಿಮಿಜು ಕಾರ್ಪೊರೇಷನ್’ ಈ ಮಹತ್ವಾಕಾಂಕ್ಷೆಯ ‘ಲೂನಾರ್ ರಿಂಗ್’ ಯೋಜನೆಯನ್ನು ಪ್ರಸ್ತಾಪಿಸಿದೆ.
    • ಇದೊಂದು ಭವಿಷ್ಯದ ವಿನೂತನ ಮೂಲಸೌಕರ್ಯ ಯೋಜನೆಯಾಗಿದ್ದು, ಚಂದ್ರನ ಸುತ್ತಲೂ ಬೃಹತ್ ಸೌರ ವಿದ್ಯುತ್ ಉಂಗುರವನ್ನು ನಿರ್ಮಿಸುವ ಮೂಲಕ ಭೂಮಿಯ ಇಂಧನ ಬೇಡಿಕೆಗಳನ್ನು ಪೂರೈಸುವ ಮಹತ್ವದ ಗುರಿಯನ್ನು ಹೊಂದಿದೆ.

    ಲೂನಾರ್ ರಿಂಗ್ ಯೋಜನೆ (Lunar Ring Project)ಯ ಬಗ್ಗೆ:

    • ಇದು ಚಂದ್ರನ ಸಮಭಾಜಕ ವೃತ್ತದ ಉದ್ದಕ್ಕೂ ಸುಮಾರು 11,000 ಕಿ.ಮೀ (ಅಂದಾಜು 6,800 ಮೈಲುಗಳು) ಉದ್ದದ ಬೃಹತ್ ಸೌರ ಫಲಕಗಳ ಪಟ್ಟಿಯನ್ನು ನಿರ್ಮಿಸುವ ವಿಸ್ತೃತ ಯೋಜನೆಯನ್ನು ಇದು ಒಳಗೊಂಡಿದೆ.
    • ಕಾರ್ಯವಿಧಾನ:- ಚಂದ್ರನ ಸುತ್ತಲಿರುವ ಈ ಸೌರ ಫಲಕಗಳು ಸೌರ ಶಕ್ತಿಯನ್ನು ಸೆರೆಹಿಡಿದು ವಿದ್ಯುತ್ ಉತ್ಪಾದಿಸುತ್ತವೆ. ಆ ನಂತರ, ಆ ವಿದ್ಯುತ್ ಶಕ್ತಿಯನ್ನು ಸೂಕ್ಷ್ಮ ತರಂಗಗಳು ಅಥವಾ ಲೇಸರ್ ಕಿರಣಗಳ ರೂಪಕ್ಕೆ ಪರಿವರ್ತಿಸಿ, ನಿರಂತರವಾಗಿ ಭೂಮಿಗೆ ರವಾನಿಸಲಾಗುತ್ತದೆ.
    • ಸ್ವಯಂಚಾಲಿತ ನಿರ್ಮಾಣ ರೋಬೋಟ್‌ಗಳನ್ನು ಈ ಯೋಜನೆಗಾಗಿ ಬಳಸಲಾಗುತ್ತದೆ:- ಈ ರೋಬೋಟ್‌ಗಳು ಚಂದ್ರನ ಮೇಲ್ಮೈ ಮಣ್ಣನ್ನು (ರೆಗೊಲಿತ್) ಸಂಸ್ಕರಿಸಿ ಕಾಂಕ್ರೀಟ್, ಇಟ್ಟಿಗೆಗಳು ಹಾಗೂ ಗಾಜಿನ ಫೈಬರ್‌ಗಳನ್ನಾಗಿ ಪರಿವರ್ತಿಸುತ್ತವೆ. ಈ ಪ್ರಕ್ರಿಯೆಯು ಅಂತರಿಕ್ಷದಲ್ಲಿ ‘ಸ್ಥಳೀಯ ಸಂಪನ್ಮೂಲಗಳ ಬಳಕೆ’ಯನ್ನು ಉತ್ತೇಜಿಸುತ್ತದೆ.
    • ನಿರಂತರ ವಿದ್ಯುತ್:- ಭೂಮಿಯಂತೆ ಚಂದ್ರನ ಮೇಲೆ ಸೂರ್ಯನ ಬೆಳಕನ್ನು ತಡೆಯುವ ಯಾವುದೇ ವಾತಾವರಣ ಇಲ್ಲದಿರುವುದರಿಂದ, ಅಲ್ಲಿ ದಿನದ 24 ಗಂಟೆಗಳ ಕಾಲ ಯಾವುದೇ ಅಡೆತಡೆಯಿಲ್ಲದೆ ನಿರಂತರವಾಗಿ ಸೌರ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗುತ್ತದೆ.

    “Bhavasagara ಮತ್ತು MACS” : ರಾಷ್ಟ್ರೀಯ ದಾಖಲೆಗಳ ಸಂಗ್ರಹಕಾರ

    ಆಡಳಿತ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇತ್ತೀಚೆಗೆ, ‘ರಾಷ್ಟ್ರೀಯ ಜೀವವೈವಿಧ್ಯತೆ ಪ್ರಾಧಿಕಾರ’ವು (NBA) ಭಾರತದ ಎರಡು ಪ್ರಮುಖ ವೈಜ್ಞಾನಿಕ ಸಂಸ್ಥೆಗಳನ್ನು ಜೈವಿಕ ವೈವಿಧ್ಯತೆ ಕಾಯ್ದೆ, 2002 ರ ಅಡಿಯಲ್ಲಿ ಅಧಿಕೃತವಾಗಿ ನಿಯೋಜಿತ ದಾಖಲೆಗಳ ಸಂಗ್ರಹಕಾರ ಎಂದು ಅಧಿಸೂಚಿಸಿದೆ.

    ಉಲ್ಲೇಖ ಕೇಂದ್ರಗಳ ವಿವರ:

    1. ‘ಭವಸಾಗರ’:- ಕೇರಳದ ಕೊಚ್ಚಿಯಲ್ಲಿರುವ ‘ಕಡಲ ಜೀವ ಸಂಪನ್ಮೂಲಗಳು ಮತ್ತು ಪರಿಸರಶಾಸ್ತ್ರ ಕೇಂದ್ರ’ (CMLRE)ದಲ್ಲಿರುವ ‘ಭವಸಾಗರ’ವು, ಸಂಪೂರ್ಣವಾಗಿ ಆಳ-ಸಮುದ್ರದ ಜೀವವೈವಿಧ್ಯದ ಸಂಶೋಧನೆಗೆ ಮೀಸಲಾದ ವಿಶೇಷ ರಾಷ್ಟ್ರೀಯ ಸೌಲಭ್ಯವಾಗಿದೆ.
    2. MACS ಸೂಕ್ಷ್ಮಜೀವಿಗಳ ಸಂಗ್ರಹ:- ಇದು ಮಹಾರಾಷ್ಟ್ರದ ಪುಣೆಯಲ್ಲಿರುವ ‘ಅಘರ್ಕರ್ ಸಂಶೋಧನಾ ಸಂಸ್ಥೆ’ಯಲ್ಲಿ (ARI) ನೆಲೆಗೊಂಡಿದ್ದು, ಸೂಕ್ಷ್ಮಜೀವಿಗಳು ಮತ್ತು ಶಿಲೀಂಧ್ರಗಳ ವೈವಿಧ್ಯತೆಯ ಕುರಿತಾದ ಪರಿಣಿತ ಕೇಂದ್ರವಾಗಿದೆ. ಇದು ‘ಭಾರತದ ರಾಷ್ಟ್ರೀಯ ಶಿಲೀಂಧ್ರ ಸಂಸ್ಕೃತಿ ಸಂಗ್ರಹ ಕೇಂದ್ರ’ವನ್ನು ಸಹ ಒಳಗೊಂಡಿದೆ.

    ಈ ಅಧಿಸೂಚನೆಯ ಪ್ರಾಮುಖ್ಯತೆ:

    • ರಾಷ್ಟ್ರೀಯ ಜಾಲದ ವಿಸ್ತರಣೆ:- ಈ ಎರಡು ಹೊಸ ಸಂಸ್ಥೆಗಳ ಸೇರ್ಪಡೆಯೊಂದಿಗೆ, ಭಾರತದಲ್ಲಿರುವ ಅಧಿಕೃತ ರಾಷ್ಟ್ರೀಯ ದಾಖಲೆಗಳ ಸಂಗ್ರಹಕಾರದ ಒಟ್ಟು ಸಂಖ್ಯೆಯು 20 ಕ್ಕೆ ಏರಿಕೆಯಾಗಿದೆ.
    • ವೈಜ್ಞಾನಿಕ ಬೆಂಬಲ:- ಅತ್ಯಂತ ಪಾರದರ್ಶಕ ಮತ್ತು ಜವಾಬ್ದಾರಿಯುತ ವೈಜ್ಞಾನಿಕ ಷರತ್ತುಗಳ ಅಡಿಯಲ್ಲಿ ಉನ್ನತ ಸಂಶೋಧನೆಗಳಿಗಾಗಿ ಜೈವಿಕ ವಸ್ತುಗಳನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡುವ ಮೂಲಕ, ಈ ಅಧಿಸೂಚನೆಯು ಭವಿಷ್ಯದ ಹೊಸ ವೈಜ್ಞಾನಿಕ ಆವಿಷ್ಕಾರಗಳನ್ನು ಸುಗಮಗೊಳಿಸುತ್ತದೆ.

    ಜೈವಿಕ ವೈವಿಧ್ಯತೆ ಕಾಯ್ದೆ, 2002 ರ ಬಗ್ಗೆ:

    • ಜಾರಿ:- 2002 ರಲ್ಲಿ ಜಾರಿಗೆ ತರಲಾಯಿತು.
    • ಉದ್ದೇಶ:- ಭಾರತದ, 
    • ಜೈವಿಕ ಸಂಪನ್ಮೂಲಗಳ ಸಂರಕ್ಷಣೆ, ಅವುಗಳ ಸುಸ್ಥಿರ ಬಳಕೆಯ ನಿರ್ವಹಣೆ, 
    • ಜೈವಿಕ ಸಂಪನ್ಮೂಲಗಳು ಮತ್ತು ಸಾಂಪ್ರದಾಯಿಕ ಜ್ಞಾನದ ಬಳಕೆಯಿಂದ ಉದ್ಭವಿಸುವ ಆರ್ಥಿಕ ಪ್ರಯೋಜನಗಳನ್ನು ಸ್ಥಳೀಯ ಸಮುದಾಯಗಳೊಂದಿಗೆ ನ್ಯಾಯಸಮ್ಮತವಾಗಿ ಮತ್ತು ಸಮಾನವಾಗಿ ಹಂಚಿಕೊಳ್ಳುವುದು.
    • ಮೂರು-ಹಂತದ ಸಾಂಸ್ಥಿಕ ರಚನೆ:- ಜೈವಿಕ ಸಂಪನ್ಮೂಲಗಳ ಪ್ರವೇಶ ಮತ್ತು ಬಳಕೆಯನ್ನು ನಿಯಂತ್ರಿಸಲು ಈ ಕಾಯ್ದೆಯು ದೇಶಾದ್ಯಂತ ರೂಪಿಸಿದೆ. ಅವುಗಳೆಂದರೆ,
      • ರಾಷ್ಟ್ರೀಯ ಜೀವವೈವಿಧ್ಯತೆ ಪ್ರಾಧಿಕಾರ (NBA – National Biodiversity Authority).
      • ರಾಜ್ಯ ಜೀವವೈವಿಧ್ಯತೆ ಮಂಡಳಿಗಳು (SBBs – State Biodiversity Boards).
      • ಜೀವವೈವಿಧ್ಯತೆ ನಿರ್ವಹಣಾ ಸಮಿತಿಗಳು (BMCs – Biodiversity Management Committees).

    ರಾಷ್ಟ್ರೀಯ ಜೀವವೈವಿಧ್ಯತೆ ಪ್ರಾಧಿಕಾರ (NBA)ದ ಬಗ್ಗೆ:

    • ಸ್ಥಾಪನೆ:- ಕೇಂದ್ರ ಸರ್ಕಾರವು 2003 ರಲ್ಲಿ ಸ್ಥಾಪಿಸಿತು.
    • ಶಾಸನಬದ್ಧ ಸಂಸ್ಥೆ (Statutory Body)ಯಾಗಿದೆ:- ಜೈವಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆಗೆ ಸಂಬಂಧಿಸಿದಂತೆ ಭಾರತ ಸರ್ಕಾರಕ್ಕೆ ನಿಯಂತ್ರಕ ಮತ್ತು ಸಲಹಾ ಕಾರ್ಯಗಳನ್ನು ನಿರ್ವಹಿಸುತ್ತದೆ.
    • ಪ್ರಧಾನ ಕಚೇರಿ:- ಚೆನ್ನೈನಲ್ಲಿದೆ.
    • ಪ್ರಮುಖ ಕಾರ್ಯಗಳು:-  
    1. ನಿಷೇಧಿಸಲಾದ ಕಾನೂನುಬಾಹಿರ ಕಾರ್ಯಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವುದು ಮತ್ತು ಅವುಗಳನ್ನು ಕಟ್ಟುನಿಟ್ಟಾಗಿ ತಡೆಯುವುದು.
    2. ಭಾರತದಲ್ಲಿನ ಅಪಾರ ಜೀವವೈವಿಧ್ಯತೆಯನ್ನು ಹೇಗೆ ಉತ್ತಮವಾಗಿ ಮತ್ತು ವೈಜ್ಞಾನಿಕವಾಗಿ ಸಂರಕ್ಷಿಸಬಹುದು ಎಂಬುದರ ಕುರಿತು ಕೇಂದ್ರ ಸರ್ಕಾರಕ್ಕೆ ಅಗತ್ಯ ಸಲಹೆಗಳನ್ನು ಒದಗಿಸುವುದು.
    3. ದೇಶದಾದ್ಯಂತ ‘ಜೈವಿಕ ಪರಂಪರೆಯ ತಾಣ’ಗಳನ್ನು ಸರ್ಕಾರವು ಹೇಗೆ ಗುರುತಿಸಿ ಆಯ್ಕೆ ಮಾಡಬಹುದು ಎಂಬುದರ ಕುರಿತು ವಿಸ್ತೃತ ವರದಿಯನ್ನು ಸಿದ್ಧಪಡಿಸುವುದು.
    4. ಸ್ಥಳೀಯವಾಗಿ ಬಳಸುವ ಜೈವಿಕ ಸಂಪನ್ಮೂಲಗಳು ಅಥವಾ ಅದಕ್ಕೆ ಸಂಬಂಧಿಸಿದ ಸಾಂಪ್ರದಾಯಿಕ ಜ್ಞಾನದ ಮೇಲೆ ಖಾಸಗಿಯವರು ಬೌದ್ಧಿಕ ಆಸ್ತಿ ಹಕ್ಕುಗಳನ್ನು (IPR) ಪಡೆಯದಂತೆ ತಡೆಯಲು ಅಗತ್ಯವಾದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದು.

    ಎಲಿಫೆಂಟಾ ಗುಹೆಗಳು

    ಇತಿಹಾಸ ಮತ್ತು ಸಂಸ್ಕೃತಿ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ASI) ಎಲಿಫೆಂಟಾ ದ್ವೀಪದಲ್ಲಿ ನಡೆಸಿದ ಬೃಹತ್ ಉತ್ಖನನದಲ್ಲಿ 1,500 ವರ್ಷಗಳ ಹಳೆಯ ಮೆಟ್ಟಿಲುಗಳಿರುವ ಜಲಾಶಯವೊಂದು ಪತ್ತೆಯಾಗಿದೆ.
    • ಈ ಉತ್ಖನನಗೊಂಡ ರಚನೆಯು ‘T-ಆಕಾರದ’ ಮೆಟ್ಟಿಲುಗಳ ಜಲಾಶಯವಾಗಿದ್ದು, ಇದು ಅಂದಿನ ಅತ್ಯುತ್ತಮ ಯೋಜಿತ ವಾಸ್ತುಶಿಲ್ಪ ವಿನ್ಯಾಸವನ್ನು ಸೂಚಿಸುತ್ತದೆ.

    ಎಲಿಫೆಂಟಾ ಗುಹೆಗಳ ಬಗ್ಗೆ:

    • ಮುಂಬೈ ಸಮೀಪದಲ್ಲಿರುವ ಎಲಿಫೆಂಟಾ ದ್ವೀಪದಲ್ಲಿ (ಐತಿಹಾಸಿಕವಾಗಿ ‘ಘಾರಾಪುರಿ’ – ಅಂದರೆ “ಗುಹೆಗಳ ನಗರ” ಎಂದು ಕರೆಯಲ್ಪಡುವ) ನೆಲೆಗೊಂಡಿರುವ ಈ ಎಲಿಫೆಂಟಾ ಗುಹೆಗಳು ‘ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿವೆ.
    • 16 ನೇ ಶತಮಾನದಲ್ಲಿ ಪೋರ್ಚುಗೀಸರು ಈ ದ್ವೀಪದ ಸಮೀಪದಲ್ಲಿ ಆನೆಯನ್ನೇ ಹೋಲುವ ಬೃಹತ್ ಕಲ್ಲಿನ ಆಕೃತಿಯನ್ನು ಪತ್ತೆಹಚ್ಚಿದ ನಂತರ, ಈ ದ್ವೀಪಕ್ಕೆ “ಎಲಿಫೆಂಟಾ” ಎಂದು ಹೆಸರಿಟ್ಟರು. ಆದರೆ, ಸ್ಥಳೀಯ ನಿವಾಸಿಗಳು ಇದರ ಮೂಲ ಹೆಸರಾದ ‘ಘಾರಾಪುರಿ’ ಯನ್ನೇ ಹೆಚ್ಚಾಗಿ ಬಳಸುತ್ತಿದ್ದರು.
    • ಐತಿಹಾಸಿಕವಾಗಿ, ಈ ದ್ವೀಪವು ಬಹಳ ರಾಜಮನೆತನಗಳೊಂದಿಗೆ ನಿಕಟ ಸಂಪರ್ಕ ಹೊಂದಿತ್ತು.
    • ಇತ್ತೀಚಿಗೆ ಪತ್ತೆಯಾದ ರಾಜ ‘ಕೃಷ್ಣರಾಜ‘ನ ನಾಣ್ಯಗಳ ಆಧಾರದ ಮೇಲೆ, ಕ್ರಿ.ಶ. 6 ನೇ ಶತಮಾನದಲ್ಲಿ ಈ ಗುಹೆಗಳ ಪ್ರಮುಖ ಪೋಷಕರು ‘ಮಾಹಿಷ್ಮತಿಯ ಕಲಚೂರಿಗಳು’ ಎಂದು ಪರಿಗಣಿಸಲಾಗಿದೆ. ಅವರಿಗಿಂತ ಮೊದಲು, ಈ ಪ್ರದೇಶವನ್ನು ಕೊಂಕಣ ಮೌರ್ಯರು ಆಳಿದರು; ನಂತರ ಬಂದ ಚಾಲುಕ್ಯರು ಮತ್ತು ರಾಷ್ಟ್ರಕೂಟರು ಇದರ ಪ್ರಾಮುಖ್ಯತೆಯನ್ನು ಕಾಯ್ದುಕೊಂಡರು.
    • ಒಟ್ಟು 7 ಗುಹೆಗಳಿವೆ:- 1 ನೇ ದೊಡ್ಡ ಗುಹೆಯಲ್ಲಿ 20-ಅಡಿ ಎತ್ತರದ ಪ್ರಸಿದ್ಧವಾದ ತ್ರಿಮೂರ್ತಿ ಶಿಲ್ಪವನ್ನು ಕಾಣಬಹುದಾಗಿದೆ. ಈ ಮೂರು-ಮುಖಗಳ ಆಕೃತಿಯು ಶಿವನನ್ನು ಸೃಷ್ಟಿಕರ್ತ, ರಕ್ಷಕ ಮತ್ತು ಸಂಹಾರಕ ಎಂದು ಪ್ರತಿಬಿಂಬಿಸುವ ರೂಪಗಳನ್ನು ಏಕಕಾಲದಲ್ಲಿ ಪ್ರತಿನಿಧಿಸುತ್ತದೆ.
    • ಇಲ್ಲಿ ಮುಖ್ಯವಾಗಿ ಶೈವ ಧರ್ಮಕ್ಕೆ ಸಂಬಂಧಿಸಿದ ಶಿಲ್ಪಗಳು ಇವೆ.

    “ಮಣ್ಣಿನ ಸಖಿಯರು”- ಮಣ್ಣಿನ ಆರೋಗ್ಯ ಮತ್ತು ಕೃಷಿ ಉತ್ಪಾದಕತೆ ಸುಧಾರಿಸಲು

    ಆರ್ಥಿಕತೆ

    ಇತ್ತೀಚೆಗೆ ಸುದ್ದಿಯಲ್ಲಿ:

    • ಪಶ್ಚಿಮ ಮಹಾರಾಷ್ಟ್ರದ ಬರಪೀಡಿತ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾದ “ಮಣ್ಣಿನ ಸಖಿಯರು” ಉಪಕ್ರಮವು ಗ್ರಾಮೀಣ ಮಹಿಳೆಯರನ್ನು ಸಬಲೀಕರಣಗೊಳಿಸುವುದರ ಜೊತೆಗೆ ಮಣ್ಣಿನ ಆರೋಗ್ಯ ಮತ್ತು ಕೃಷಿ ಉತ್ಪಾದಕತೆಯನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.

    ಮಣ್ಣಿನ ಸಖಿಯರು’ (Soil Sakhis) ಉಪಕ್ರಮದ ಬಗ್ಗೆ:

      • ಮನ್ ದೇಶಿ ಫೌಂಡೇಶನ್‌ನ ‘ಕೃಷಿ ಮತ್ತು ಹವಾಮಾನ ಕ್ರಿಯಾಯೋಜನೆ’ಯ ಅಡಿಯಲ್ಲಿ ಇದನ್ನು 2023 ರಲ್ಲಿ ಪ್ರಾರಂಭಿಸಲಾಯಿತು.
    • ಮಣ್ಣಿನ ಪರೀಕ್ಷೆ ಮತ್ತು ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಉತ್ತೇಜಿಸಲು ಇದು ಗ್ರಾಮೀಣ ಮಹಿಳೆಯರಿಗೆ “ಮಣ್ಣಿನ ಸಖಿಯರಾಗಿ” ತರಬೇತಿ ನೀಡುತ್ತದೆ.
    • ಪ್ರಸ್ತುತ ಇದನ್ನು ಸತಾರಾ, ಸಾಂಗ್ಲಿ, ಸೋಲಾಪುರ, ಕೊಲ್ಲಾಪುರ ಮತ್ತು ಪುಣೆ ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ.

    ಈ ಉಪಕ್ರಮದಪ್ರಮುಖ ವೈಶಿಷ್ಟ್ಯಗಳು:

    • ಮಣ್ಣಿನ ಸಖಿಯರು ಕೃಷಿ ಭೂಮಿಯಿಂದ ಮಣ್ಣಿನ ಮಾದರಿಗಳನ್ನು ಸಂಗ್ರಹಿಸುತ್ತಾರೆ ಮತ್ತು ಪ್ರಯೋಗಾಲಯಗಳ ಮೂಲಕ ಮಣ್ಣಿನ ಪರೀಕ್ಷೆಗೆ ಅನುಕೂಲ ಮಾಡಿಕೊಡುತ್ತಾರೆ.
    • ರೈತರು ಸುಧಾರಿತ ಬೆಳೆ ಮತ್ತು ಪೋಷಕಾಂಶಗಳ ನಿರ್ವಹಣೆಗಾಗಿ ಅಗತ್ಯ ಕ್ರಮ ಕೈಗೊಳ್ಳಬಹುದಾದ ವರದಿಗಳನ್ನು ಪಡೆಯುತ್ತಾರೆ.
    • ಮಣ್ಣಿನ ಸಖಿಯರು ಪ್ರತಿ ತಿಂಗಳಿಗೆ ಸುಮಾರು ₹8,000 ರಿಂದ ₹10,000 ವರೆಗೆ (ಪೆಟ್ರೋಲ್ ಭತ್ಯೆ ಹೊರತುಪಡಿಸಿ) ಆದಾಯ ಗಳಿಸುತ್ತಾರೆ.

    ಪ್ರಾಣಿಗಳ ಆಹಾರ ನಿಯಂತ್ರಣಕ್ಕೆ FSSAI ಗೆ ಅಧಿಕಾರವಿಲ್ಲ

    ಆರೋಗ್ಯ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ಹಾಲು ಕೊಡುವ ಪ್ರಾಣಿಗಳಿಗೆ ಗೋವು ಅಥವಾ ಹಂದಿಯ ಮೂಲದ ಮಾಂಸ ಅಥವಾ ಮೂಳೆಯ ಮಿಶ್ರಣವನ್ನು ಒಳಗೊಂಡಿರುವ ಪ್ರಾಣಿಗಳ ಆಹಾರದ ಮಾರಾಟವನ್ನು ನಿಷೇಧಿಸಿದ್ದ ‘ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ’ (FSSAI) ನಿಯಂತ್ರಣವನ್ನು ದೆಹಲಿಯ ಉಚ್ಚ ನ್ಯಾಯಾಲಯ ರದ್ದುಗೊಳಿಸಿದೆ.

    ಈ ಪ್ರಕರಣದ ಬಗ್ಗೆ:

    • ಕೋಳಿ, ಹಂದಿ ಮತ್ತು ಮೀನುಗಳನ್ನು ಹೊರತುಪಡಿಸಿ, ಹಾಲು ಮತ್ತು ಮಾಂಸ ಉತ್ಪಾದಿಸುವ ಪ್ರಾಣಿಗಳಿಗೆ ನೀಡುವ ಆಹಾರದಲ್ಲಿ ಮಾಂಸ ಅಥವಾ ಮೂಳೆಯ ಬಳಕೆಯನ್ನು FSSAI ನಿಷೇಧಿಸಿತ್ತು.
    • ಆದರೆ, ಪ್ರಾಣಿಗಳ ಬಳಕೆಗೆ ಉದ್ದೇಶಿಸಿರುವ ಆಹಾರಕ್ಕಾಗಿ ಮಾನದಂಡಗಳನ್ನು ರೂಪಿಸಲು FSSAI ಗೆ ಯಾವುದೇ ಅಧಿಕಾರವಿಲ್ಲ; ಅದರ ಅಧಿಕಾರ ವ್ಯಾಪ್ತಿಯು ಕೇವಲ ಮಾನವರ ಆಹಾರಕ್ಕೆ ಮಾತ್ರ ಸೀಮಿತವಾಗಿದೆ ಎಂದು ದೆಹಲಿಯ ಉಚ್ಚ ನ್ಯಾಯಾಲಯವು ಸ್ಪಷ್ಟವಾಗಿ ತೀರ್ಪು ನೀಡಿದೆ.

    ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಬಗ್ಗೆ:

      • FSSAI ಪೂರ್ಣ ರೂಪ:- ಫುಡ್ ಸೇಫ್ಟಿ ಅಂಡ್ ಸ್ಟ್ಯಾಂಡರ್ಡ್ಸ್ ಆಥೋರಿಟಿ ಆಫ್ ಇಂಡಿಯಾ (Food Safety and Standards Authority of India).
      • ಸ್ವಾಯತ್ತ ಶಾಸನಬದ್ಧ ಸಂಸ್ಥೆಯಾಗಿದೆ:- ಇದನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006 ರ (FSS Act, 2006) ಅಡಿಯಲ್ಲಿ ರಚಿಸಲಾಗಿದೆ.
      • ಸಚಿವಾಲಯ:- ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ.
      • ಸಂಯೋಜನೆ:- ಇದು ಭಾರತ ಸರ್ಕಾರದ ಕಾರ್ಯದರ್ಶಿ ಶ್ರೇಣಿಯ ಓರ್ವ ಅಧ್ಯಕ್ಷರನ್ನು ಮತ್ತು 22 ಸದಸ್ಯರನ್ನು ಒಳಗೊಂಡಿರುತ್ತದೆ. ಈ ಸದಸ್ಯರಲ್ಲಿ ಮೂರನೇ ಒಂದರಷ್ಟು ಕಡ್ಡಾಯವಾಗಿ ಮಹಿಳೆಯರಿರಬೇಕು.
      • ಪ್ರಧಾನ ಕಚೇರಿ:- ನವದೆಹಲಿ 
    • ಪ್ರಾದೇಶಿಕ ಕಚೇರಿಗಳು:- ದೇಶಾದ್ಯಂತ 6 ರಿಂದ 8 ಪ್ರಾದೇಶಿಕ ಕಚೇರಿಗಳನ್ನು (ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ, ಗುವಾಹಟಿ, ಕೊಚ್ಚಿ) ಹೊಂದಿದೆ.
    • ಕಾರ್ಯಗಳು:-
    1. ಆಹಾರಕ್ಕಾಗಿ ವಿಜ್ಞಾನ-ಆಧಾರಿತ ಮಾನದಂಡಗಳನ್ನು ರೂಪಿಸುವುದು.
    2. ಆಹಾರ ವ್ಯಾಪಾರ ನಿರ್ವಾಹಕರಿಗೆ (FBOs) ಕಡ್ಡಾಯ ಪರವಾನಗಿ ಮತ್ತು ನೋಂದಣಿ ನೀಡುವುದು.
    3. ಆಹಾರದ ತಯಾರಿಕೆ, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಆಮದು ಪ್ರಕ್ರಿಯೆಗಳನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡುವುದು.
    4. ಭಾರತದಾದ್ಯಂತ ಆಹಾರ ಪರೀಕ್ಷಾ ಪ್ರಯೋಗಾಲಯಗಳಿಗೆ ಮಾನ್ಯತೆ ನೀಡುವುದು.

    P&K ರಸಗೊಬ್ಬರ ಸಬ್ಸಿಡಿ: ಶೇ. 12ರಷ್ಟು ಹೆಚ್ಚಳ

    ಆರ್ಥಿಕತೆ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಮುಂಬರುವ 2026 ರ ಮುಂಗಾರು ಹಂಗಾಮಿಗೆ ಅನ್ವಯವಾಗುವಂತೆ, ರಂಜಕ ಮತ್ತು ಪೊಟ್ಯಾಸಿಯಮ್ (P&K – Phosphatic and Potassic) ರಸಗೊಬ್ಬರಗಳಿಗೆ ನೀಡಲಾಗುವ ‘ಪೋಷಕಾಂಶ-ಆಧಾರಿತ ಸಬ್ಸಿಡಿ’ (NBS) ದರಗಳನ್ನು ಶೇ. 12 ರಷ್ಟು ಹೆಚ್ಚಿಸಲು ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ.

    ಪೋಷಕಾಂಶ-ಆಧಾರಿತ ಸಬ್ಸಿಡಿ (NBS) ಯೋಜನೆಯ ಬಗ್ಗೆ: 

    • ಪ್ರಾರಂಭ:- ಕೇಂದ್ರ ‘ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ’ವು 2010 ರಲ್ಲಿ ಜಾರಿಗೆ ತಂದಿತು.
    • ಉದ್ದೇಶಗಳು:-
    1. ಎಲ್ಲಾ ಪೋಷಕಾಂಶಗಳನ್ನು ಒಳಗೊಂಡಂತೆ ಸಮತೋಲಿತ ರಸಗೊಬ್ಬರಗಳ ಬಳಕೆಯನ್ನು ಉತ್ತೇಜಿಸುವುದು.
    2. ಸರ್ಕಾರದ ಸಬ್ಸಿಡಿ ಹೊರೆಯನ್ನು ವೈಜ್ಞಾನಿಕವಾಗಿ ಕ್ರಮಬದ್ಧಗೊಳಿಸುವುದು ಮತ್ತು ನಿಯಂತ್ರಿಸುವುದು.
    3. ಕೃಷಿಯಲ್ಲಿ ಪರಿಣಾಮಕಾರಿ ಪೋಷಕಾಂಶ ನಿರ್ವಹಣೆಯನ್ನು ಉತ್ತೇಜಿಸುವುದು.
    4. ರೈತರಿಗೆ ರಸಗೊಬ್ಬರದ ಬೆಲೆಭಾರ ಕಡಿಮೆ ಮಾಡಿ, ಕೃಷಿ ಉತ್ಪಾದನೆ ಹೆಚ್ಚಿಸುವುದು.
    5. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಪರಿಣಾಮವನ್ನು ತಗ್ಗಿಸುವುದು.
    • ಪ್ರಮುಖ ವೈಶಿಷ್ಟ್ಯಗಳು:- ಈ ಸಬ್ಸಿಡಿಯು ಪೋಷಕಾಂಶ-ಕೇಂದ್ರಿತವಾಗಿದೆ. ಅಂದರೆ, ರಸಗೊಬ್ಬರದಲ್ಲಿರುವ ಈ ಕೆಳಗಿನ ಪ್ರಮುಖ ಅಂಶಗಳ ಆಧಾರದ ಮೇಲೆ ಸಬ್ಸಿಡಿಯನ್ನು ಲೆಕ್ಕಹಾಕಲಾಗುತ್ತದೆ:
    • ಸಾರಜನಕ (Nitrogen – N)
    • ರಂಜಕ (Phosphorus – P)
    • ಪೊಟ್ಯಾಸಿಯಮ್ (Potassium – K)
    • ಗಂಧಕ (Sulphur – S)
    • ವ್ಯಾಪಕವಾಗಿ ಬಳಸಲಾಗುವ DAP (ಡೈ-ಅಮೋನಿಯಂ ಫಾಸ್ಫೇಟ್) ಮತ್ತು SSP (ಸಿಂಗಲ್ ಸೂಪರ್ ಫಾಸ್ಫೇಟ್) ಸೇರಿದಂತೆ ಒಟ್ಟು 28 ಅಧಿಸೂಚಿತ ಗ್ರೇಡ್‌ನ P&K ರಸಗೊಬ್ಬರಗಳನ್ನು ಈ ಯೋಜನೆಯು ಒಳಗೊಂಡಿದೆ.

    ಗಮನಿಸಿ:- ಕೃಷಿಯಲ್ಲಿ ಅತಿ ಹೆಚ್ಚು ಬಳಸುವ ‘ಯೂರಿಯಾ’ ರಸಗೊಬ್ಬರವು NBS ವ್ಯಾಪ್ತಿಗೆ ಬರುವುದಿಲ್ಲ; ಅದು ಪ್ರತ್ಯೇಕ ಸಬ್ಸಿಡಿ ವ್ಯವಸ್ಥೆಯ ಅಡಿಯಲ್ಲಿ ಮುಂದುವರಿಯುತ್ತದೆ.

    ಮುದ್ರಾ ಯೋಜನೆ : ಸಣ್ಣ-ಪ್ರಮಾಣದ ಉದ್ಯಮಗಳಿಗೆ

    ಯೋಜನೆಗಳು

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಸಣ್ಣ ಉದ್ಯಮಗಳಿಗೆ ಬೆಂಬಲ ನೀಡುವ ‘ಪ್ರಧಾನ ಮಂತ್ರಿ ಮುದ್ರಾ ಯೋಜನೆ’ಯು (PMMY) ಯಶಸ್ವಿಯಾಗಿ 11 ವರ್ಷಗಳನ್ನು ಪೂರೈಸಿದೆ.

    ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY)ಯ ಬಗ್ಗೆ:

    • ಪ್ರಾರಂಭ:- 2015
    • ಉದ್ದೇಶ:- ಸಣ್ಣ-ಪ್ರಮಾಣದ ಉದ್ಯಮಗಳಿಗೆ ಸಾಲ ಸೌಲಭ್ಯ ಒದಗಿಸಿ ಬೆಂಬಲಿಸುವುದು.
    • ಉದ್ದೇಶಿತ ಗುಂಪು:- ಹೊಸ ಉದ್ಯಮಿಗಳು, ಮಹಿಳಾ ಉದ್ಯಮಿಗಳು, ಸಣ್ಣ ಅಂಗಡಿಯವರು, ಬೀದಿ ಬದಿ ವ್ಯಾಪಾರಿಗಳು, ಹಣ್ಣು/ತರಕಾರಿ ಮಾರಾಟಗಾರರು, ಕರಕುಶಲಕರ್ಮಿಗಳು, ಮತ್ತು ಸಣ್ಣ ಉತ್ಪಾದನಾ ಘಟಕಗಳು.
    • ಸಾಲ ನೀಡುವ ಸಂಸ್ಥೆಗಳು:- ವಾಣಿಜ್ಯ ಬ್ಯಾಂಕ್‌ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು (RRBs), ಸಣ್ಣ ಹಣಕಾಸು ಬ್ಯಾಂಕ್‌ಗಳು, ಸೂಕ್ಷ್ಮ ಹಣಕಾಸು ಸಂಸ್ಥೆಗಳು (MFIs) ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು (NBFCs).
    • ಈ ಯೋಜನೆಯು 4 ಪ್ರಮುಖ ವಿಭಾಗಗಳನ್ನು ರೂಪಿಸಿದೆ. ಅವುಗಳೆಂದರೆ,
    1. ಶಿಶು:- ₹50,000 ದ ವರೆಗಿನ ಸಾಲಗಳನ್ನು ಇದು ಒಳಗೊಂಡಿದೆ.
    2. ಕಿಶೋರ್:- ₹50,000 ದಿಂದ ₹5 ಲಕ್ಷದವರೆಗಿನ ಸಾಲಗಳನ್ನು ಒಳಗೊಂಡಿದೆ.
    3. ತರುಣ್:- ₹5 ಲಕ್ಷದಿಂದ ₹10 ಲಕ್ಷದವರೆಗಿನ ಸಾಲಗಳನ್ನು ಒಳಗೊಂಡಿದೆ.
    4. ತರುಣ್ ಪ್ಲಸ್:- ₹10 ಲಕ್ಷದಿಂದ ₹20 ಲಕ್ಷದವರೆಗಿನ ಸಾಲಗಳನ್ನು ಒಳಗೊಂಡಿದೆ (ಇದು ಇತ್ತೀಚಿನ ಹೊಸ ಸೇರ್ಪಡೆಯಾಗಿದೆ).
  • KSRTC ಗೆ ವಿಶ್ವ ಮಾನವ ಸಂಪನ್ಮೂಲ ಅಭಿವೃದ್ಧಿ (HRD) ಕಾಂಗ್ರೆಸ್ ಪ್ರಶಸ್ತಿ, 2026

    KSRTC ಗೆ ವಿಶ್ವ ಮಾನವ ಸಂಪನ್ಮೂಲ ಅಭಿವೃದ್ಧಿ (HRD) ಕಾಂಗ್ರೆಸ್ ಪ್ರಶಸ್ತಿ, 2026

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ (KSRTC) “ತರಬೇತಿ ಮತ್ತು ಸಾಂಸ್ಥಿಕ ಅಭಿವೃದ್ಧಿಯಲ್ಲಿ ಅತ್ಯುತ್ತಮ” ವಿಭಾಗದಲ್ಲಿ ಪ್ರತಿಷ್ಠಿತ ‘ವಿಶ್ವ ಮಾನವ ಸಂಪನ್ಮೂಲ ಅಭಿವೃದ್ಧಿ ಕಾಂಗ್ರೆಸ್ ಪ್ರಶಸ್ತಿ 2026’ (World HRD Congress Award 2026)ಅನ್ನು ನೀಡಿ ಗೌರವಿಸಲಾಗಿದೆ.
    • ಕಾರ್ಯಾಚರಣೆಯ ಸುರಕ್ಷತೆ ಮತ್ತು ದಕ್ಷತೆಯನ್ನು ಹೆಚ್ಚಿಸಿದ್ದಕ್ಕಾಗಿ ಮನ್ನಣೆ ಪಡೆದಿರುವ ಕೆಎಸ್‌ಆರ್‌ಟಿಸಿಯು (KSRTC), ಅನುಕರಣಾ ತಂತ್ರಜ್ಞಾನ (ಸಿಮ್ಯುಲೇಶನ್) ಮತ್ತು ಇಂಧನ-ದಕ್ಷತೆಯ ತರಬೇತಿ ಘಟಕಗಳನ್ನು ಬಳಸಿಕೊಂಡು ಆರು ತಿಂಗಳಲ್ಲಿ 12,000 ಕ್ಕೂ ಹೆಚ್ಚು ಉದ್ಯೋಗಿಗಳಿಗೆ ತರಬೇತಿ ನೀಡಿದೆ.

    KSRTC ಯ ತರಬೇತಿ ಉಪಕ್ರಮಗಳ ಪ್ರಮುಖ ವಿವರಗಳು:

    • ಮನ್ನಣೆ:- ಉದ್ಯೋಗಿಗಳ ಕೌಶಲ್ಯಗಳನ್ನು ಉನ್ನತೀಕರಿಸುವ ಬದ್ಧತೆಯನ್ನು ಪ್ರದರ್ಶಿಸುವ ಮೂಲಕ, ತರಬೇತಿಯಲ್ಲಿನ ಉತ್ಕೃಷ್ಟತೆಗಾಗಿ KSRTC ಯು ಈ ಪ್ರಶಸ್ತಿಯನ್ನು ಪಡೆದುಕೊಂಡಿದೆ.
    • ಪ್ರಮುಖ ತರಬೇತಿ ಘಟಕಗಳು:- ಸಿಮ್ಯುಲೇಟರ್-ಆಧಾರಿತ ತರಬೇತಿ, ಅಪಘಾತ-ಮುಕ್ತ ಚಾಲನೆ, ರಸ್ತೆ ಸುರಕ್ಷತೆ ಮತ್ತು ಇಂಧನ ದಕ್ಷತೆಯ ಕಾರ್ಯಕ್ರಮಗಳ ಮೇಲೆ ಗಮನಹರಿಸುತ್ತವೆ.
    • ಸಿಬ್ಬಂದಿ ಅಭಿವೃದ್ಧಿ:- ಕಳೆದ ಆರು ತಿಂಗಳಲ್ಲಿ 12,000 ಕ್ಕೂ ಹೆಚ್ಚು ಸಿಬ್ಬಂದಿ ಸದಸ್ಯರು ತರಬೇತಿ ಪಡೆದಿದ್ದಾರೆ.
    • ಸಾಮಾಜಿಕ ಉಪಕ್ರಮಗಳು:- ಪಿಎಂ-ಅಜಯ್ (PM-AJAY) ಯೋಜನೆಯ ಮೂಲಕ, ಸಾರಿಗೆ ಇಲಾಖೆಯ ಪಾಲುದಾರಿಕೆಯಲ್ಲಿ ಕೆಎಸ್‌ಆರ್‌ಟಿಸಿಯು ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಉಚಿತ ಭಾರಿ-ವಾಹನ ಚಾಲನಾ ತರಬೇತಿ ಮತ್ತು ಪರವಾನಗಿಗಳನ್ನು ಒದಗಿಸುತ್ತಿದೆ.
  • ಭಾರತದಲ್ಲಿ ಬಂಧನದಲ್ಲಿನ ಸಾವುಗಳು | ಪವನ ಶಕ್ತಿ ಸಾಮರ್ಥ್ಯ ಸೇರ್ಪಡೆಯಲ್ಲಿ ಭಾರತಕ್ಕೆ ಐತಿಹಾಸಿಕ ಸಾಧನೆ | ಟಾರ್ ಬಾಲ್ ನಿರ್ವಹಣಾ ನಿಯಮಗಳು (Tar Balls Management Rules) | ಸುಂದರಬನ್ಸ್: ಕ್ಷೀಣಿಸುತ್ತಿರುವ ನೈಸರ್ಗಿಕ ಚೇತರಿಕೆ | ಶಬರಿಮಲೆ ಪ್ರಕರಣ: ಸರ್ವೋಚ್ಚ ನ್ಯಾಯಾಲಯದ ವಿಚಾರಣೆ | ಸಾಲ ಖಾತರಿ ಯೋಜನೆ (Credit Guarantee Scheme) | ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC) | ಮಿಷನ್ ಮಿತ್ರ (Mission MITRA)

    ಭಾರತದಲ್ಲಿ ಬಂಧನದಲ್ಲಿನ ಸಾವುಗಳು

    ಆಡಳಿತ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • 2020 ರಲ್ಲಿ ತಮಿಳುನಾಡಿನಲ್ಲಿ ನಡೆದ ತಂದೆ ಪಿ. ಜಯರಾಜ್ ಮತ್ತು ಮಗ ಜೆ. ಬೆನಿಕ್ಸ್ ಅವರ ಬರ್ಬರ ಪೊಲೀಸ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಧುರೈ ವಿಚಾರಣಾ ನ್ಯಾಯಾಲಯವು ತಮಿಳುನಾಡಿನ 9 ಪೊಲೀಸರಿಗೆ ಮರಣದಂಡನೆ ವಿಧಿಸಿದೆ.

    ಬಂಧನದಲ್ಲಿನ ಸಾವು (Custodial Death) ಕುರಿತು:

    • ಪೊಲೀಸ್ ವಶದಲ್ಲಿ ಅಥವಾ ನ್ಯಾಯಾಂಗ ಬಂಧನದಲ್ಲಿರುವಾಗ ವ್ಯಕ್ತಿಯೊಬ್ಬ ಮರಣ ಹೊಂದುವುದನ್ನು ‘ಬಂಧನದಲ್ಲಿನ ಸಾವು’ ಎಂದು ಕರೆಯಲಾಗುತ್ತದೆ.
    • ಇದು ನ್ಯಾಯಾಲಯದ ವಿಚಾರಣೆಗೂ ಮುನ್ನ, ಪೊಲೀಸ್ ವಿಚಾರಣೆ ನಡೆಯುತ್ತಿರುವಾಗ ಅಥವಾ ಆರೋಪಿಯ ಮೇಲಿನ ಅಪರಾಧ ಸಾಬೀತಾದ ನಂತರವೂ ಸಂಭವಿಸಬಹುದಾಗಿದೆ.
    • ಪೊಲೀಸರ ಚಿತ್ರಹಿಂಸೆ, ತೀವ್ರ ನಿರ್ಲಕ್ಷ್ಯ, ಸಕಾಲದಲ್ಲಿ ವೈದ್ಯಕೀಯ ನೆರವು ನೀಡದಿರುವುದು ಅಥವಾ ಇತರ ಯಾವುದೇ ಅನುಮಾನಾಸ್ಪದ ಸಂದರ್ಭಗಳಿಂದಾಗಿ ಇಂತಹ ಸಾವುಗಳು ಸಂಭವಿಸಬಹುದು. 

    ಇದು ಭಾರತದ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗಿದೆ: 

    • ವಿಧಿ 20(1):- ಯಾವುದೇ ವ್ಯಕ್ತಿಗೆ ಕಾನೂನಿನಲ್ಲಿ ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ಅಥವಾ ಕಠಿಣವಾದ ಶಿಕ್ಷೆಯನ್ನು ನೀಡುವಂತಿಲ್ಲ ಎಂಬುದನ್ನು ಈ ವಿಧಿ ಸ್ಪಷ್ಟಪಡಿಸುತ್ತದೆ.
    • ವಿಧಿ 20(3):- ಇದು ಸ್ವಯಂ-ದೋಷಾರೋಪಣೆಯ ವಿರುದ್ಧದ ಹಕ್ಕನ್ನು ನೀಡುತ್ತದೆ. ಅಂದರೆ, ಆರೋಪಿಯಾಗಿರುವ ಯಾವುದೇ ವ್ಯಕ್ತಿಯನ್ನು ತನ್ನ ವಿರುದ್ಧವೇ ತಾನೇ ಸಾಕ್ಷಿ ನುಡಿಯುವಂತೆ ಒತ್ತಾಯಿಸುವಂತಿಲ್ಲ ಎಂದು ಇದು ಖಾತರಿಪಡಿಸುತ್ತದೆ.
    • ವಿಧಿ 21:- ಇದು ಪ್ರತಿಯೊಬ್ಬ ವ್ಯಕ್ತಿಯು ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಹೊಂದುವ ಹಕ್ಕನ್ನು ರಕ್ಷಿಸುತ್ತದೆ; ಈ ರಕ್ಷಣೆಯು ಪೊಲೀಸ್ ಅಥವಾ ನ್ಯಾಯಾಂಗ ಬಂಧನದಲ್ಲಿರುವ ವ್ಯಕ್ತಿಗೂ ಕಡ್ಡಾಯವಾಗಿ ಅನ್ವಯಿಸುತ್ತದೆ.

    ಭಾರತದಲ್ಲಿ ಬಂಧನದಲ್ಲಿನ ಸಾವುಗಳಿಗೆ ಸಂಬಂಧಿಸಿದ ಸಮಸ್ಯೆಗಳು:

    • ಸಂಸತ್ತಿನಲ್ಲಿ ಮಂಡಿಸಲಾದ ಅಧಿಕೃತ ದತ್ತಾಂಶದ ಪ್ರಕಾರ, 2016-17 ರಿಂದ 2021-22 ರ ನಡುವಿನ ಅವಧಿಯಲ್ಲಿ ಭಾರತದಾದ್ಯಂತ ಒಟ್ಟು 11,656 ಬಂಧನದಲ್ಲಿನ ಸಾವುಗಳು ದಾಖಲಾಗಿವೆ.
    • ಈ ಪಟ್ಟಿಯಲ್ಲಿ 2,630 ಸಾವುಗಳೊಂದಿಗೆ ಉತ್ತರ ಪ್ರದೇಶವು ಮೊದಲ ಸ್ಥಾನದಲ್ಲಿದೆ. ದಕ್ಷಿಣ ಭಾರತದ ರಾಜ್ಯಗಳ ಪೈಕಿ ತಮಿಳುನಾಡು (490 ಸಾವುಗಳು) ಅತಿ ಹೆಚ್ಚು ಪ್ರಕರಣಗಳನ್ನು ವರದಿ ಮಾಡಿದೆ.

    ರಕ್ಷಣೆಗಾಗಿ ಇರುವ ಅಂತರರಾಷ್ಟ್ರೀಯ ಕಾನೂನು ಚೌಕಟ್ಟುಗಳು:

    • ವಿಶ್ವಸಂಸ್ಥೆಯ ಘೋಷಣಾಪತ್ರ, 1945:- ಮಾನವ ಹಕ್ಕುಗಳ ಉತ್ತೇಜನ ಸೇರಿದಂತೆ, ವಿಶ್ವಸಂಸ್ಥೆಯ ಪ್ರಮುಖ ಉದ್ದೇಶಗಳು ಮತ್ತು ತತ್ವಗಳನ್ನು ಇದು ವಿವರಿಸುತ್ತದೆ.
    • ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ (1948):- ಇದು ಯಾವುದೇ ರೀತಿಯ ಚಿತ್ರಹಿಂಸೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ ಮತ್ತು ನ್ಯಾಯಾಲಯದಲ್ಲಿ ಅಪರಾಧ ಸಾಬೀತಾಗುವವರೆಗೆ ಪ್ರತಿಯೊಬ್ಬ ಆರೋಪಿಯನ್ನು ನಿರಪರಾಧಿ ಎಂದು ಪರಿಗಣಿಸುವ ಹಕ್ಕನ್ನು ರಕ್ಷಿಸುತ್ತದೆ.
    • ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಮೇಲಿನ ಅಂತರರಾಷ್ಟ್ರೀಯ ಒಪ್ಪಂದ (1966): ಇದು ಮನುಷ್ಯರ ಜೀವಿಸುವ ಹಕ್ಕನ್ನು ರಕ್ಷಿಸುತ್ತದೆ ಮತ್ತು ಚಿತ್ರಹಿಂಸೆಯನ್ನು ಸಂಪೂರ್ಣವಾಗಿ ನಿಷೇಧಿಸುತ್ತದೆ.
    • ನೆಲ್ಸನ್ ಮಂಡೇಲಾ ನಿಯಮಗಳು: ಇದನ್ನು ಅಧಿಕೃತವಾಗಿ 2015 ರ ‘ಖೈದಿಗಳ ಚಿಕಿತ್ಸೆಗಾಗಿನ ವಿಶ್ವಸಂಸ್ಥೆಯ ಪ್ರಮಾಣಿತ ಕನಿಷ್ಠ ನಿಯಮಗಳು’ ಎಂದು ಕರೆಯಲಾಗುತ್ತದೆ. ಬಂಧನದಲ್ಲಿರುವ ಅಥವಾ ಸ್ವಾತಂತ್ರ್ಯವನ್ನು ಕಳೆದುಕೊಂಡಿರುವ ಎಲ್ಲಾ ವ್ಯಕ್ತಿಗಳನ್ನು ಅತ್ಯಂತ ಮಾನವೀಯವಾಗಿ ನಡೆಸಿಕೊಳ್ಳಬೇಕಾದ ಕನಿಷ್ಠ ಮಾನದಂಡಗಳನ್ನು ಇದು ನಿಗದಿಪಡಿಸುತ್ತದೆ.
    • ಮಾನವ ಹಕ್ಕುಗಳ ಮೇಲಿನ ಯುರೋಪಿಯನ್ ಒಡಂಬಡಿಕೆ (1950): ಇದು ವ್ಯಕ್ತಿಯ ವೈಯಕ್ತಿಕ ಘನತೆಯನ್ನು ಎತ್ತಿಹಿಡಿಯುತ್ತದೆ ಮತ್ತು ಪ್ರತಿಯೊಬ್ಬರಿಗೂ ನ್ಯಾಯದಾನ ವ್ಯವಸ್ಥೆಯನ್ನು ತಲುಪುವ ಹಕ್ಕನ್ನು ಖಾತರಿಪಡಿಸುತ್ತದೆ.

    ಪವನ ಶಕ್ತಿ ಸಾಮರ್ಥ್ಯ ಸೇರ್ಪಡೆಯಲ್ಲಿ ಭಾರತಕ್ಕೆ ಐತಿಹಾಸಿಕ ಸಾಧನೆ

    ಪರಿಸರ

    ಇದೀಗ ಸುದ್ದಿಯಲ್ಲಿದೆ:

    • 2025-26 ರ ಅವಧಿಯಲ್ಲಿ ಭಾರತವು ವಾರ್ಷಿಕ ದಾಖಲೆಯ 6.05 GW (ಗಿಗಾವ್ಯಾಟ್) ಪವನ ಶಕ್ತಿ ಸಾಮರ್ಥ್ಯವನ್ನು ಸೇರ್ಪಡೆ ಮಾಡುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಇದರೊಂದಿಗೆ ದೇಶದ ಒಟ್ಟು ಪವನ ಶಕ್ತಿ ಸಾಮರ್ಥ್ಯವು 56 GW ಗಿಂತ ಹೆಚ್ಚಾಗಿದೆ.

    ಭಾರತದ ಇಂಧನ ಪಾಲು 

    • 2025 ರ ವೇಳೆಗೆ, ದೇಶದ ಒಟ್ಟು ಸ್ಥಾಪಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯವು 500 GW ಗಡಿ ದಾಟಿದ್ದು, 509.6 GW ತಲುಪಿದೆ.
    • ಪಳೆಯುಳಿಕೆಯೇತರ ಇಂಧನ ಮೂಲದ ಒಟ್ಟು ಸ್ಥಾಪಿತ ಸಾಮರ್ಥ್ಯವು 2025 ರಲ್ಲಿ 262.74 GW ತಲುಪಿದ್ದು, ಇದು ದೇಶದ ಒಟ್ಟು ವಿದ್ಯುತ್ ಸಾಮರ್ಥ್ಯದ 51.5% ರಷ್ಟಾಗಿದೆ.
    • ಸೌರಶಕ್ತಿ ಸ್ಥಾಪಿತ ಸಾಮರ್ಥ್ಯವು 2025 ರಲ್ಲಿ 132.85 GW ತಲುಪಿದೆ.
    • ಪಳೆಯುಳಿಕೆ ಇಂಧನ ಆಧಾರಿತ ಮೂಲಗಳು: ಇದು 244.80 GW ನಷ್ಟಿದ್ದು, ಒಟ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯದ 49% ರಷ್ಟಿದೆ.
    • ಜಾಗತಿಕವಾಗಿ, ಸೌರ ವಿದ್ಯುತ್ ಸ್ಥಾಪಿತ ಸಾಮರ್ಥ್ಯದಲ್ಲಿ ಭಾರತವು 3ನೇ ಸ್ಥಾನದಲ್ಲಿದೆ, ಹಾಗೂ ಪವನ ಶಕ್ತಿ ಸಾಮರ್ಥ್ಯ ಮತ್ತು ಒಟ್ಟು ನವೀಕರಿಸಬಹುದಾದ ಇಂಧನ ಸಾಮರ್ಥ್ಯದಲ್ಲಿ 4ನೇ ಸ್ಥಾನದಲ್ಲಿದೆ.

    ಭಾರತದ ಇಂಧನ ಗುರಿಗಳು

    • ಹೊರಸೂಸುವಿಕೆ ತೀವ್ರತೆ ಕಡಿತ : 2005 ರ ಮಟ್ಟಕ್ಕೆ ಹೋಲಿಸಿದರೆ, 2035 ರ ವೇಳೆಗೆ ತನ್ನ ಜಿಡಿಪಿಯ (GDP) ಹೊರಸೂಸುವಿಕೆ ತೀವ್ರತೆಯನ್ನು 47% ರಷ್ಟು ಕಡಿಮೆ ಮಾಡಲು ಭಾರತ ಬದ್ಧವಾಗಿದೆ.
    • ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯದ ವಿಸ್ತರಣೆ : 2035 ರ ವೇಳೆಗೆ ತನ್ನ ಒಟ್ಟು ಸ್ಥಾಪಿತ ವಿದ್ಯುತ್ ಸಾಮರ್ಥ್ಯದ 60% ರಷ್ಟನ್ನು ಪಳೆಯುಳಿಕೆಯೇತರ ಇಂಧನ ಮೂಲಗಳಿಂದ ಸಾಧಿಸಲು ಭಾರತ ಗುರಿಹೊಂದಿದೆ.
    • ಇಂಗಾಲದ ಸಂಗ್ರಹಗಾರಗಳ (ಕಾರ್ಬನ್ ಸಿಂಕ್) ಸೃಷ್ಟಿ: 2035 ರ ವೇಳೆಗೆ ಅರಣ್ಯ ಮತ್ತು ವೃಕ್ಷಗಳ ಹೊದಿಕೆಯ ಮೂಲಕ 3.5 ರಿಂದ 4 ಬಿಲಿಯನ್ ಟನ್ CO₂ ಸಮಾನವಾದ ‘ಕಾರ್ಬನ್ ಸಿಂಕ್’ ಅನ್ನು ಸೃಷ್ಟಿಸಲು ಭಾರತ ಬದ್ಧವಾಗಿದೆ.

    ಸರ್ಕಾರದ ಉಪಕ್ರಮಗಳು

    • ರಾಷ್ಟ್ರೀಯ ಸೌರ ಮಿಷನ್ (NSM): 2010 ರಲ್ಲಿ ಪ್ರಾರಂಭಿಸಲಾದ ಈ ಯೋಜನೆಯು ಗ್ರಿಡ್-ಸಂಪರ್ಕಿತ ಮತ್ತು ಆಫ್-ಗ್ರಿಡ್ ಸೌರಶಕ್ತಿ ಯೋಜನೆಗಳು ಸೇರಿದಂತೆ, ಸೌರ ವಿದ್ಯುತ್ ಸಾಮರ್ಥ್ಯವನ್ನು ಹೆಚ್ಚಿಸುವ ಮಹತ್ವಾಕಾಂಕ್ಷೆಯ ಗುರಿಗಳನ್ನು ಹೊಂದಿದೆ.
    • ರಾಷ್ಟ್ರೀಯ ಶುದ್ಧ ಇಂಧನ ನಿಧಿ (NCEF): ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುವ ಶುದ್ಧ ಇಂಧನ ತಂತ್ರಜ್ಞಾನಗಳು ಮತ್ತು ಯೋಜನೆಗಳ ಸಂಶೋಧನೆ ಹಾಗೂ ನಾವೀನ್ಯತೆಯನ್ನು ಬೆಂಬಲಿಸಲು ಇದನ್ನು ಸ್ಥಾಪಿಸಲಾಗಿದೆ.
    • ರಾಷ್ಟ್ರೀಯ ಪವನ ಶಕ್ತಿ ಮಿಷನ್: ಇದು ಭಾರತದಲ್ಲಿ ಪವನ ಶಕ್ತಿಯ ಅಭಿವೃದ್ಧಿ ಮತ್ತು ವಿಸ್ತರಣೆಯ ಮೇಲೆ ಕೇಂದ್ರೀಕರಿಸುತ್ತದೆ. 2030 ರ ವೇಳೆಗೆ ಪವನ ಶಕ್ತಿ ಸಾಮರ್ಥ್ಯವನ್ನು 140 GW ಗೆ ಹೆಚ್ಚಿಸುವ ಗುರಿಯನ್ನು ಇದು ಹೊಂದಿದೆ.

    ಟಾರ್ ಬಾಲ್ ನಿರ್ವಹಣಾ ನಿಯಮಗಳು (Tar Balls Management Rules)

    ಪರಿಸರ

    ಇದೀಗ ಸುದ್ದಿಯಲ್ಲಿದೆ: 

    • ಕಡಲೀಚೆಯ (On-shore) ಮತ್ತು ಕಡಲಾಚೆಯ (Off-shore) ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿರುವ ‘ಟಾರ್ ಬಾಲ್‌’ಗಳ ಸಮರ್ಪಕ ನಿರ್ವಹಣೆಗಾಗಿ ಕೇಂದ್ರ ಸರ್ಕಾರವು ಇದೇ ಮೊದಲ ಬಾರಿಗೆ ಮೀಸಲಾದ ನಿಯಮಾವಳಿಗಳನ್ನು ಪ್ರಸ್ತಾಪಿಸಿದೆ.

    ಕಡಲ ಟಾರ್ ಬಾಲ್‌ಗಳು

    • ಸಮುದ್ರ ಪರಿಸರದಲ್ಲಿ ಉಂಟಾಗುವ ತೈಲ ಸೋರಿಕೆ ಅಥವಾ ನೈಸರ್ಗಿಕವಾಗಿ ತೈಲ ಹೊರಹೊಮ್ಮುವಿಕೆಯ ನಂತರ ರೂಪುಗೊಳ್ಳುವ ಅಂಟಂಟಾದ, ಕಡು-ಬಣ್ಣದ ತೈಲದ ಉಂಡೆಗಳನ್ನು ‘ಟಾರ್ ಬಾಲ್‌ಗಳು’ ಎಂದು ಕರೆಯಲಾಗುತ್ತದೆ.

    ರೂಪುಗೊಳ್ಳುವಿಕೆ 

    • ಹವಾಮಾನ ಪ್ರಕ್ರಿಯೆ: ಸಮುದ್ರಕ್ಕೆ ಸೇರಿದ ತೈಲದಲ್ಲಿನ ಹಗುರವಾದ ಅಂಶಗಳು ಆವಿಯಾದಾಗ, ಉಳಿದ ಭಾರವಾದ ಹೈಡ್ರೋಕಾರ್ಬನ್‌ಗಳು ಮರಳು ಮತ್ತು ಸಮುದ್ರದ ತ್ಯಾಜ್ಯದೊಂದಿಗೆ ಬೆರೆತು ಈ ಟಾರ್ ಬಾಲ್‌ಗಳು ರೂಪುಗೊಳ್ಳುತ್ತವೆ.
    • ಗಾತ್ರ ಮತ್ತು ವಿನ್ಯಾಸ: ಇವು ಸಣ್ಣ ಬಟಾಣಿ ಗಾತ್ರದಿಂದ ಹಿಡಿದು ಬ್ಯಾಸ್ಕೆಟ್‌ಬಾಲ್ ಗಾತ್ರದವರೆಗೂ ವಿಭಿನ್ನವಾಗಿ ರೂಪುಗೊಳ್ಳುತ್ತವೆ.
    • ಸಂಯೋಜನೆ: ಇವು ಭಾರ ಲೋಹಗಳು, ನಿರಂತರ ಸಾವಯವ ಮಾಲಿನ್ಯಕಾರಕಗಳು (POPs) ಮತ್ತು ಪಾಲಿಸೈಕ್ಲಿಕ್ ಅರೋಮ್ಯಾಟಿಕ್ ಹೈಡ್ರೋಕಾರ್ಬನ್‌ಗಳಂತಹ (PAHs) ಅತ್ಯಂತ ವಿಷಕಾರಿ ರಾಸಾಯನಿಕ ಅಂಶಗಳನ್ನು ಒಳಗೊಂಡಿರುತ್ತವೆ.

    ಟಾರ್ ಬಾಲ್ ಮಾಲಿನ್ಯದ ದುಷ್ಪರಿಣಾಮಗಳು

    • ಸಮುದ್ರ ಜೀವಿಗಳ ಮೇಲೆ: ಕಡಲಾಮೆಗಳು ಮತ್ತು ಸಮುದ್ರ ಪಕ್ಷಿಗಳು ಇವುಗಳನ್ನು ಆಹಾರವೆಂದು ತಪ್ಪಾಗಿ ಭಾವಿಸಿ ನುಂಗುವುದರಿಂದ ಸಾವನ್ನಪ್ಪುವ ಅಪಾಯವಿರುತ್ತದೆ; ಅಲ್ಲದೆ, ಇವು ಮ್ಯಾಂಗ್ರೋವ್ ಕಾಡುಗಳು ಮತ್ತು ಹವಳದ ದಿಬ್ಬಗಳ ಸೂಕ್ಷ್ಮ ರಂಧ್ರಗಳನ್ನು ಮುಚ್ಚಿಹಾಕಿ ಅವುಗಳ ಉಸಿರುಗಟ್ಟಿಸುತ್ತವೆ.
    • ಮಾನವನ ಆರೋಗ್ಯ: ಇವುಗಳ ನೇರ ಸಂಪರ್ಕವು ಚರ್ಮದ ಕಿರಿಕಿರಿಯನ್ನು ಉಂಟುಮಾಡುತ್ತದೆ ಮತ್ತು ಕಲುಷಿತಗೊಂಡ ಸಮುದ್ರ ಆಹಾರದ ಮೂಲಕ ಇದರ ವಿಷಕಾರಿ ರಾಸಾಯನಿಕಗಳು ಮಾನವನ ಆಹಾರ ಸರಪಳಿಯನ್ನು ಪ್ರವೇಶಿಸಬಹುದಾಗಿದೆ.
    • ಆರ್ಥಿಕತೆ: ಕಡಲತೀರಗಳು ಎಣ್ಣೆಯುಕ್ತವಾಗಿ ದುರ್ವಾಸನೆ ಬೀರುವುದರಿಂದ ಪ್ರವಾಸೋದ್ಯಮದ ಮೇಲೆ ಹಾಗೂ ಮೀನುಗಾರಿಕಾ ಬಲೆಗಳು ಹಾಳಾಗುವುದರಿಂದ ಮೀನುಗಾರಿಕೆ ವಲಯದ ಮೇಲೆ ಇದು ತೀವ್ರ ನಕಾರಾತ್ಮಕ ಪರಿಣಾಮ ಬೀರುತ್ತದೆ.

    ಟಾರ್-ಬಾಲ್ ನಿರ್ವಹಣಾ ನಿಯಮಗಳು, 2026

    • 1986 ರ ಪರಿಸರ (ಸಂರಕ್ಷಣೆ) ಕಾಯ್ದೆಯ ಅಡಿಯಲ್ಲಿ ರೂಪಿಸಲಾದ ಈ ನಿಯಮಾವಳಿಗಳು, ಟಾರ್ ಬಾಲ್‌ಗಳ ಸಮರ್ಪಕ ನಿರ್ವಹಣೆಗಾಗಿ ಭಾರತದ ಮೊಟ್ಟಮೊದಲ ಮೀಸಲಾದ ನಿಯಂತ್ರಣ ಚೌಕಟ್ಟನ್ನು ಸ್ಥಾಪಿಸಿವೆ.

    ಲಕ್ಷಣಗಳು

    ವಿವರಣೆ

    ಮಾಲಿನ್ಯಕಾರಕನೇ ಪಾವತಿಸಬೇಕು ತತ್ವ (Polluter Pays Principle)

    ತೈಲ ಸೋರಿಕೆ ಅಥವಾ ಅಸಮರ್ಪಕ ನಿರ್ವಹಣೆಯಿಂದಾಗುವ ಪರಿಸರ ಹಾನಿಗೆ ಸೂಕ್ತ ಪರಿಹಾರವನ್ನು ಪಾವತಿಸಲು ಆಯಾ ಸೌಲಭ್ಯದ ಮಾಲೀಕರೇ ಸಂಪೂರ್ಣ ಹೊಣೆಗಾರರಾಗಿರುತ್ತಾರೆ.

    ವಿಪತ್ತು ವರ್ಗೀಕರಣ

    ಕರಾವಳಿ ರಾಜ್ಯಗಳು ಈ ಟಾರ್ ಬಾಲ್ ಮಾಲಿನ್ಯವನ್ನು “ರಾಜ್ಯ ವಿಪತ್ತು” ಎಂದು ಘೋಷಿಸುವುದು ಕಡ್ಡಾಯವಾಗಿದೆ.

    ಸಾಂಸ್ಥಿಕ ಪಾತ್ರಗಳು

    ‘ಭಾರತೀಯ ಕರಾವಳಿ ಕಾವಲು ಪಡೆ’ಯು (ICG) ‘ರಾಷ್ಟ್ರೀಯ ತೈಲ ಸೋರಿಕೆ ವಿಪತ್ತು ತುರ್ತು ಯೋಜನೆಯನ್ನು’ (NOSDCP) ಅನುಷ್ಠಾನಗೊಳಿಸುತ್ತದೆ ಮತ್ತು ಆಯಾ ಜಿಲ್ಲಾಡಳಿತಗಳು ಸ್ಥಳೀಯ ಸ್ವಚ್ಛತಾ ಕಾರ್ಯಾಚರಣೆಗಳನ್ನು ನಿರ್ವಹಿಸಲಿವೆ.

    ವೃತ್ತಾಕಾರದ ಆರ್ಥಿಕತೆ

    ಹೆಚ್ಚಿನ ಕ್ಯಾಲೋರಿಫಿಕ್ ಮೌಲ್ಯವನ್ನು (1,500 kcal ಗಿಂತ ಹೆಚ್ಚು) ಹೊಂದಿರುವ ಟಾರ್ ಬಾಲ್‌ಗಳನ್ನು ಸಿಮೆಂಟ್ ಕೈಗಾರಿಕೆಗಳಲ್ಲಿ ಪರ್ಯಾಯ ಇಂಧನವಾಗಿ ಮರುಬಳಕೆ ಮಾಡಬಹುದಾಗಿದೆ.

    ಸುಂದರಬನ್ಸ್: ಕ್ಷೀಣಿಸುತ್ತಿರುವ ನೈಸರ್ಗಿಕ ಚೇತರಿಕೆ

    ಪರಿಸರ

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚಿನ ಅಧ್ಯಯನವೊಂದರ ಪ್ರಕಾರ, ನಿರಂತರ ಪರಿಸರದ ಒತ್ತಡದಿಂದಾಗಿ ಸುಂದರಬನ್ಸ್‌ನ ಶೇ. 10 ರಿಂದ 15% ರಷ್ಟು ಪ್ರದೇಶವು “ನಿರ್ಣಾಯಕ ಕುಸಿತದ” ಪ್ರಕ್ರಿಯೆಗೆ ಒಳಗಾಗುತ್ತಿದೆ, ಅಂದರೆ ಇದು ತನ್ನ ನೈಸರ್ಗಿಕ ಚೇತರಿಕೆಯ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದೆ.

    ಪಶ್ಚಿಮ ಬಂಗಾಳದಲ್ಲಿರುವ ಸುಂದರಬನ್ಸ್

    • ಭೌಗೋಳಿಕ ನೆಲೆ : ಇದು ಬಂಗಾಳಕೊಲ್ಲಿಯ ಕರಾವಳಿ ಪ್ರದೇಶದಲ್ಲಿ ಕಂಡುಬರುವ ವಿಶಾಲವಾದ ಮತ್ತು ನಿರಂತರವಾದ ‘ಮ್ಯಾಂಗ್ರೋವ್ ಅರಣ್ಯ’ ಪರಿಸರ ವ್ಯವಸ್ಥೆಯಾಗಿದೆ.
    • ಇದು ಭಾರತ ಮತ್ತು ಬಾಂಗ್ಲಾದೇಶದಾದ್ಯಂತ ಗಂಗಾ, ಬ್ರಹ್ಮಪುತ್ರ ಮತ್ತು ಮೇಘನಾ ನದಿಗಳ ಮುಖಜ ಭೂಮಿಯಲ್ಲಿ ಹರಡಿಕೊಂಡಿದೆ.

    ಸಂರಕ್ಷಣಾ ಪ್ರಯತ್ನಗಳು

    • ಯುನೆಸ್ಕೋ ವಿಶ್ವ ಪರಂಪರೆಯ ತಾಣ: 1987 ರಲ್ಲಿ ‘ಸುಂದರಬನ್ಸ್ ರಾಷ್ಟ್ರೀಯ ಉದ್ಯಾನವನವನ್ನು’ ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಿದೆ.
    • ಜೀವಗೋಳ ಮೀಸಲು: 2001 ರಲ್ಲಿ ಯುನೆಸ್ಕೋ ಇದನ್ನು ‘ಜೀವಗೋಳ ಮೀಸಲು’ ಪ್ರದೇಶವೆಂದು ಅಧಿಕೃತವಾಗಿ ಘೋಷಿಸಿತು.
    • ಅಂತರರಾಷ್ಟ್ರೀಯ ಪ್ರಾಮುಖ್ಯತೆಯ ಜೌಗು ಪ್ರದೇಶ: ಜನವರಿ 2019 ರಲ್ಲಿ ‘ರಾಮ್ಸರ್ ಒಪ್ಪಂದದ’ ಅಡಿಯಲ್ಲಿ ಭಾರತದ ಸುಂದರಬನ್ಸ್ ಜೌಗು ಪ್ರದೇಶವನ್ನು ‘ಅಂತರರಾಷ್ಟ್ರೀಯ ಪ್ರಾಮುಖ್ಯತೆಯ ಜೌಗು ಪ್ರದೇಶ’ ಎಂದು ಗುರುತಿಸಲಾಗಿದೆ.
    • ಸಸ್ಯ ಮತ್ತು ಪ್ರಾಣಿಸಂಕುಲ: ಸುಂದರಬನ್ಸ್ ರಾಷ್ಟ್ರೀಯ ಉದ್ಯಾನವನವು 260 ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳು ಸೇರಿದಂತೆ ಅಪಾರ ಜೀವವೈವಿಧ್ಯಕ್ಕೆ ಹೆಸರುವಾಸಿಯಾಗಿದೆ. ಇದು ಪ್ರಸಿದ್ಧ ‘ರಾಯಲ್ ಬೆಂಗಾಲ್ ಟೈಗರ್’, ಗಂಗಾ ನದಿಯ ಡಾಲ್ಫಿನ್‌ಗಳು ಮತ್ತು ಅಳಿವೆ ಮೊಸಳೆಗಳಿಗೆ ನೆಲೆಯಾಗಿದೆ.

    ಶಬರಿಮಲೆ ಪ್ರಕರಣ: ಸರ್ವೋಚ್ಚ ನ್ಯಾಯಾಲಯದ ವಿಚಾರಣೆ

    ರಾಜ್ಯಶಾಸ್ತ್ರ ಮತ್ತು ಆಡಳಿತ

    ಇದೀಗ ಸುದ್ದಿಯಲ್ಲಿದೆ:

    • ಶಬರಿಮಲೆ ದೇವಾಲಯ ಸೇರಿದಂತೆ ವಿವಿಧ ಧಾರ್ಮಿಕ ಸ್ಥಳಗಳಿಗೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಭಾರತದ ಸರ್ವೋಚ್ಚ ನ್ಯಾಯಾಲಯದ ಒಂಬತ್ತು ನ್ಯಾಯಾಧೀಶರ ಪೀಠವು ಪ್ರಾರಂಭಿಸಿದೆ.

    ಹಿನ್ನೆಲೆ ಮಾಹಿತಿ

    • 2018 ರಲ್ಲಿ, ಸರ್ವೋಚ್ಚ ನ್ಯಾಯಾಲಯದ ಸಾಂವಿಧಾನಿಕ ಪೀಠವು (4:1 ಬಹುಮತದೊಂದಿಗೆ) ಋತುಮತಿಯಾಗುವ ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ದೇವಾಲಯದ ಪ್ರವೇಶವನ್ನು ಅನುಮತಿಸಿತ್ತು ಮತ್ತು ಈ ಹಿಂದಿನ ನಿರ್ಬಂಧವನ್ನು ಅಸಂವಿಧಾನಿಕ ಎಂದು ಘೋಷಿಸಿತ್ತು.
    • ಈ ತೀರ್ಪಿನ ವಿರುದ್ಧ ನಡೆದ ವ್ಯಾಪಕ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, 2019 ರಲ್ಲಿ ಈ ವಿಷಯವನ್ನು ವಿಶಾಲ ಪೀಠಕ್ಕೆ ವರ್ಗಾಯಿಸಲಾಯಿತು.
    • ಪ್ರಾಮುಖ್ಯತೆ: ಈ ಸಮಸ್ಯೆಯು ಸಮಾನತೆ ಮತ್ತು ತಾರತಮ್ಯ ನಿಷೇಧವನ್ನು ಪ್ರತಿಪಾದಿಸುವ ಮೂಲಭೂತ ಹಕ್ಕುಗಳು (ವಿಧಿ 14, 15, 17) ಹಾಗೂ ಧಾರ್ಮಿಕ ಸ್ವಾತಂತ್ರ್ಯದ ಹಕ್ಕುಗಳ (ವಿಧಿ 25, 26) ನಡುವಿನ ಸಂಘರ್ಷವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ.
    • ಇದು ಭಾರತದಲ್ಲಿ ನ್ಯಾಯಾಂಗದ ಸಕ್ರಿಯತೆ ವಿರುದ್ಧ ನ್ಯಾಯಾಂಗದ ಸ್ವಯಂ-ನಿರ್ಬಂಧ, ಹಾಗೂ ಜಾತ್ಯತೀತತೆಯ (ತಾತ್ವಿಕ ಅಂತರದ ಮಾದರಿ) ಕುರಿತಾದ ಮೂಲಭೂತ ಪ್ರಶ್ನೆಗಳನ್ನು ಎತ್ತುತ್ತದೆ.

    ಶಬರಿಮಲೆ ದೇವಾಲಯದ ಬಗ್ಗೆ 

    • ಸ್ಥಳ ಮತ್ತು ಆರಾಧ್ಯ ದೈವ: ಶಬರಿಮಲೆ ದೇವಾಲಯವು ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ಪವಿತ್ರ ಪಂಬಾ ನದಿಯ (ಪಂಪಾ ಎಂದೂ ಕರೆಯುತ್ತಾರೆ) ದಡದಲ್ಲಿದೆ. ಇದು ಪಶ್ಚಿಮ ಘಟ್ಟಗಳ ‘ಪೆರಿಯಾರ್ ಹುಲಿ ಮೀಸಲು ಪ್ರದೇಶ’ದ ಒಳಗೆ ನೆಲೆಗೊಂಡಿದೆ.
    • ಇದು ‘ಧರ್ಮಶಾಸ್ತ್ರ’ ಎಂದೂ ಕರೆಯಲ್ಪಡುವ ಅಯ್ಯಪ್ಪ ಸ್ವಾಮಿಗೆ ಸಮರ್ಪಿತವಾದ ಪ್ರಸಿದ್ಧ ದೇವಾಲಯವಾಗಿದೆ.
    • ಈ ದೇವಾಲಯವು ಸಮುದ್ರ ಮಟ್ಟದಿಂದ ಸುಮಾರು 1,260 ಮೀಟರ್ ಎತ್ತರದ ಬೆಟ್ಟದ ತುದಿಯಲ್ಲಿದೆ.
    • ಧಾರ್ಮಿಕ ಪ್ರಾಮುಖ್ಯತೆ: ಇದು ವಿಶ್ವದ ಅತಿದೊಡ್ಡ ವಾರ್ಷಿಕ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದೆ. ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುವ ಮುನ್ನ ಕಠಿಣವಾದ 41 ದಿನಗಳ ‘ವ್ರತ’ವನ್ನು ಆಚರಿಸುತ್ತಾರೆ.
    • ಈ ದೇವಾಲಯವು ಅಯ್ಯಪ್ಪ ಸ್ವಾಮಿಯ ‘ನೈಷ್ಠಿಕ ಬ್ರಹ್ಮಚರ್ಯ’ವನ್ನು ಸಂಕೇತಿಸುತ್ತದೆ.

    ಸಾಲ ಖಾತರಿ ಯೋಜನೆ (Credit Guarantee Scheme)

    ಅರ್ಥವ್ಯವಸ್ಥೆ

    ಇದೀಗ ಸುದ್ದಿಯಲ್ಲಿದೆ:

    • ಪಶ್ಚಿಮ ಏಷ್ಯಾದ ಬಿಕ್ಕಟ್ಟಿನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ವ್ಯಾಪಾರ-ವಹಿವಾಟುಗಳಿಗೆ, ಅದರಲ್ಲೂ ವಿಶೇಷವಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (MSMEs) ಆರ್ಥಿಕ ಬೆಂಬಲ ನೀಡಲು ಕೇಂದ್ರ ಸರ್ಕಾರವು ₹2.5 ಲಕ್ಷ ಕೋಟಿ ಮೊತ್ತದ ‘ಸಾಲ ಖಾತರಿ ಯೋಜನೆ’ಯನ್ನು ಜಾರಿಗೆ ತರಲು ಚಿಂತನೆ ನಡೆಸುತ್ತಿದೆ.

    ಯೋಜನೆಯ ಬಗ್ಗೆ

    • ಈ ಪ್ರಸ್ತಾವಿತ ಯೋಜನೆಯು ಪ್ರಸ್ತುತ ಜಾರಿಯಲ್ಲಿರುವ ‘ತುರ್ತು ಸಾಲ ಖಾತರಿ ಯೋಜನೆಯ’ (ECLGS) ಚೌಕಟ್ಟಿನ ವಿಸ್ತರಣೆಯಾಗಿರಲಿದೆ.

    ತುರ್ತು ಸಾಲ ಖಾತರಿ ಯೋಜನೆ (ECLGS)ಯ ಬಗ್ಗೆ

    • ಆತ್ಮನಿರ್ಭರ್ ಭಾರತ್ ಅಭಿಯಾನದ ಒಂದು ಭಾಗವಾಗಿ ಈ ಯೋಜನೆಯನ್ನು 2020 ರಲ್ಲಿ ಪ್ರಾರಂಭಿಸಲಾಯಿತು.
    • ಉದ್ದೇಶ: ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಉಂಟಾದ ಆರ್ಥಿಕ ಅಡಚಣೆಗಳಿಂದಾಗಿ ತೊಂದರೆಗೊಳಗಾದ ಅರ್ಹ MSME ಗಳು ಮತ್ತು ಇತರ ವ್ಯಾಪಾರ ಉದ್ಯಮಗಳಿಗೆ ಬೆಂಬಲ ನೀಡುವುದು ಇದರ ಗುರಿಯಾಗಿತ್ತು.
    • ಈ ಯೋಜನೆಯು (ECLGS) ಆರ್ಥಿಕತೆಯ ಬಹುತೇಕ ಎಲ್ಲಾ ವಲಯಗಳನ್ನು ಒಳಗೊಂಡಿದೆ.
    • ಯೋಜನೆಯ ರಚನೆಯು ಈ ಕೆಳಗಿನ ಸೌಲಭ್ಯಗಳಿಗೆ ಅನುಕೂಲ ಮಾಡಿಕೊಟ್ಟಿದೆ:
      • ಉದ್ಯಮಗಳು ಸುಲಭವಾಗಿ ಸಾಲವನ್ನು ಪಡೆಯಲು ಇದು ಅನುವು ಮಾಡಿಕೊಡುತ್ತದೆ.
      • ಇದರ ಅಡಿಯಲ್ಲಿ ಬಡ್ಡಿದರವನ್ನು ಕನಿಷ್ಠ ಮಟ್ಟಕ್ಕೆ ಸೀಮಿತಗೊಳಿಸಲಾಗಿದೆ.
      • ಯಾವುದೇ ಸಂಸ್ಕರಣಾ ಶುಲ್ಕಗಳಿಲ್ಲದೆ ಸಾಲಗಳನ್ನು ಮಂಜೂರು ಮಾಡಲಾಗುತ್ತದೆ.

    ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC)

    ಅಂತರರಾಷ್ಟ್ರೀಯ

    ಇದೀಗ ಸುದ್ದಿಯಲ್ಲಿದೆ:

    • ಹಾರ್ಮುಜ್ ಜಲಸಂಧಿಯನ್ನು ಮರುಮುಕ್ತಗೊಳಿಸುವ ಉದ್ದೇಶದಿಂದ ಮಂಡಿಸಲಾಗಿದ್ದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯವನ್ನು ರಷ್ಯಾ ಮತ್ತು ಚೀನಾ ‘ವೀಟೋ’ (Veto) ಅಧಿಕಾರ ಚಲಾಯಿಸುವ ಮೂಲಕ ತಡೆಹಿಡಿದಿವೆ.

    ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC)ಯ ಬಗ್ಗೆ

    • ಇದು ವಿಶ್ವಸಂಸ್ಥೆಯ ಆರು ಪ್ರಮುಖ ಅಂಗಗಳಲ್ಲಿ ಒಂದಾಗಿದೆ.
    • ಉದ್ದೇಶ: ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವುದು ಇದರ ಪ್ರಮುಖ ಗುರಿಯಾಗಿದೆ.
    • ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ವಿಶ್ವಸಂಸ್ಥೆಯ ಎಲ್ಲಾ ಸದಸ್ಯ ರಾಷ್ಟ್ರಗಳು ಪಾಲಿಸಲು ಬದ್ಧವಾಗಿರುವಂತಹ ‘ಕಾನೂನುಬದ್ಧ ನಿರ್ಣಯಗಳನ್ನು’ ಹೊರಡಿಸುವ ಅಧಿಕಾರ ಹೊಂದಿರುವ ಏಕೈಕ ವಿಶ್ವಸಂಸ್ಥೆಯ  ಅಂಗಸಂಸ್ಥೆ ಇದಾಗಿದೆ.
    • ರಚನೆ ಮತ್ತು ಸಂಯೋಜನೆ: ಮಂಡಳಿಯು ಒಟ್ಟು 15 ಸದಸ್ಯರನ್ನು ಹೊಂದಿದ್ದು, ಅವರನ್ನು ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ:
    • ವೀಟೋ ಅಧಿಕಾರ ಹೊಂದಿರುವ ಖಾಯಂ ಸದಸ್ಯ ರಾಷ್ಟ್ರಗಳು (P5): ಚೀನಾ, ಫ್ರಾನ್ಸ್, ರಷ್ಯಾ, ಯುನೈಟೆಡ್ ಕಿಂಗ್‌ಡಮ್ (ಬ್ರಿಟನ್) ಮತ್ತು ಯುನೈಟೆಡ್ ಸ್ಟೇಟ್ಸ್ (ಅಮೆರಿಕ).
    • ಭದ್ರತಾ ಮಂಡಳಿಯಲ್ಲಿ ಮಂಡಿಸಲಾಗುವ ಯಾವುದೇ ನಿರ್ಣಯವನ್ನು ಇತರ ಎಷ್ಟೇ ಸದಸ್ಯ ರಾಷ್ಟ್ರಗಳು ಬೆಂಬಲಿಸಿದರೂ ಸಹ, ಐದು ಖಾಯಂ ಸದಸ್ಯ ರಾಷ್ಟ್ರಗಳ (P5) ಪೈಕಿ ಯಾವುದೇ ಒಂದು ರಾಷ್ಟ್ರವು ತನ್ನ ‘ವೀಟೋ’ ಅಧಿಕಾರವನ್ನು ಚಲಾಯಿಸಿದರೆ, ಆ ನಿರ್ಣಯವು ಸಂಪೂರ್ಣವಾಗಿ ರದ್ದುಗೊಳ್ಳುತ್ತದೆ.
    • ಖಾಯಂ-ಅಲ್ಲದ ಸದಸ್ಯರು (10 ಸ್ಥಾನಗಳು) : ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಿಂದ ಎರಡು ವರ್ಷಗಳ ಅವಧಿಗೆ ಭೌಗೋಳಿಕ ಪ್ರಾತಿನಿಧ್ಯದ ಆಧಾರದ ಮೇಲೆ ಈ ದೇಶಗಳನ್ನು ಆಯ್ಕೆ ಮಾಡಲಾಗುತ್ತದೆ.
    • ಪ್ರಧಾನ ಕಚೇರಿ: ನ್ಯೂಯಾರ್ಕ್, ಅಮೆರಿಕಾ

    ಮಿಷನ್ ಮಿತ್ರ (Mission MITRA)

    ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ:

    • ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO), ಭಾರತೀಯ ವಾಯುಪಡೆಯ ‘ಬಾಹ್ಯಾಕಾಶ ವೈದ್ಯಕೀಯ ಸಂಸ್ಥೆ’ (IAF)ಯ ಸಹಯೋಗದಲ್ಲಿ ಲಡಾಖ್‌ನ ಲೇಹ್‌ನಲ್ಲಿ ‘ಮಿಷನ್ ಮಿತ್ರ’ ಯೋಜನೆಯನ್ನು ಪ್ರಾರಂಭಿಸಿದೆ.

    ‘ಮಿಷನ್ ಮಿತ್ರ’ ಯೋಜನೆಯ ಬಗ್ಗೆ (About Mission MITRA)

    • ಪೂರ್ಣ ರೂಪ: ಮ್ಯಾಪಿಂಗ್ ಆಫ್ ಇಂಟರ್-ಆಪರೇಬಲ್ ಟ್ರೈಟ್ಸ್ ಅಂಡ್ ರೆಸ್ಪಾನ್ಸ್ ಅಸೆಸ್‌ಮೆಂಟ್ (Mapping of Interoperable Traits and Response Assessment – ಪರಸ್ಪರ ಕಾರ್ಯಸಾಧ್ಯತೆಯ ಲಕ್ಷಣಗಳು ಮತ್ತು ಪ್ರತಿಕ್ರಿಯೆಗಳ ಮೌಲ್ಯಮಾಪನ).
    • ಭಾಗಿಯಾಗಿರುವ ಸಂಸ್ಥೆಗಳು: ಇಸ್ರೋ (ISRO) ಮತ್ತು ಭಾರತೀಯ ವಾಯುಪಡೆಯ ‘ಬಾಹ್ಯಾಕಾಶ ವೈದ್ಯಕೀಯ ಸಂಸ್ಥೆ’ (IAM) ಜಂಟಿಯಾಗಿ ಇದನ್ನು ವಿನ್ಯಾಸಗೊಳಿಸಿವೆ.
    • ಸ್ಥಳ: ಲೇಹ್, ಲಡಾಖ್ (ಸಮುದ್ರ ಮಟ್ಟದಿಂದ ಸುಮಾರು 3,500 ಮೀಟರ್ ಎತ್ತರದ ಪ್ರದೇಶದಲ್ಲಿ).
    • ಭಾಗವಹಿಸುವವರು: ಮುಂಬರುವ ಗಗನ್‌ಯಾನ್ ಕಾರ್ಯಾಚರಣೆಗಾಗಿ ನಿಯೋಜಿಸಲಾದ ನಾಲ್ವರು ಗಗನಯಾತ್ರಿಗಳಾದ ಪ್ರಶಾಂತ್ ನಾಯರ್, ಅಜಿತ್ ಕೃಷ್ಣನ್, ಅಂಗದ್ ಪ್ರತಾಪ್ ಮತ್ತು ಶುಭಾಂಶು ಶುಕ್ಲಾ ಅವರು ಈ ವಿಶೇಷ ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

    ಉದ್ದೇಶಗಳು ಮತ್ತು ಪ್ರಾಮುಖ್ಯತೆ

    • ಇದೊಂದು “ಅನಲಾಗ್ ಕಾರ್ಯಾಚರಣೆ” (ಕೃತಕ ಅನುಕರಣಾ ಕಾರ್ಯಾಚರಣೆ) ಆಗಿದೆ. ಅಂದರೆ, ಬಾಹ್ಯಾಕಾಶದಲ್ಲಿ ಎದುರಾಗುವ ಕಠಿಣ ದೈಹಿಕ ಮತ್ತು ಮಾನಸಿಕ ಒತ್ತಡಗಳನ್ನು ಭೂಮಿಯ ಮೇಲೆಯೇ ಅನುಕರಿಸುವ ಕೃತಕ ಪರಿಸರ ವ್ಯವಸ್ಥೆಯನ್ನು ಇದು ಬಳಸಿಕೊಳ್ಳುತ್ತದೆ.
    • ಮಾನವ-ಕೇಂದ್ರಿತ ಅಧ್ಯಯನ: ಹೈಪೋಕ್ಸಿಯಾ (ಕಡಿಮೆ ಆಮ್ಲಜನಕದ ಪರಿಸ್ಥಿತಿ), ವಿಪರೀತ ಚಳಿ ಮತ್ತು ಪ್ರತ್ಯೇಕತೆಯು ಸಿಬ್ಬಂದಿಯ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹಾಗೂ ತಂಡದ ಸಮನ್ವಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಇದು ವೈಜ್ಞಾನಿಕವಾಗಿ ಅಧ್ಯಯನ ಮಾಡುತ್ತದೆ.
    • ಪರಸ್ಪರ ಕಾರ್ಯಸಾಧ್ಯತೆ: ಕಾರ್ಯಾಚರಣೆಯ ತೀವ್ರ ಒತ್ತಡ ಮತ್ತು ಸಂವಹನ ವಿಳಂಬಗಳಂತಹ ಕೃತಕ ಸನ್ನಿವೇಶಗಳಲ್ಲಿ ಬಾಹ್ಯಾಕಾಶ ಸಿಬ್ಬಂದಿ ಹಾಗೂ ‘ಗ್ರೌಂಡ್ ಕಂಟ್ರೋಲ್’ ತಂಡಗಳ ನಡುವಿನ ಸಮನ್ವಯತೆಯನ್ನು ಇದು ಮೌಲ್ಯಮಾಪನ ಮಾಡುತ್ತದೆ.
    • ಗಗನ್‌ಯಾನ್ ಸಿದ್ಧತೆ: ಈ ಕಾರ್ಯಾಚರಣೆಯಿಂದ ಲಭ್ಯವಾಗುವ ದತ್ತಾಂಶವು ಮುಂಬರುವ ಮಾನವ ಸಹಿತ ಗಗನ್‌ಯಾನ್ ಕಾರ್ಯಾಚರಣೆಗೆ ಮತ್ತು ಭವಿಷ್ಯದಲ್ಲಿ ‘ಭಾರತೀಯ ಅಂತರಿಕ್ಷ ನಿಲ್ದಾಣ’ದಲ್ಲಿನ (BAS) ದೀರ್ಘಾವಧಿಯ ವಾಸ್ತವ್ಯಕ್ಕೆ ಅಗತ್ಯವಿರುವ ತರಬೇತಿ ಕಾರ್ಯವಿಧಾನಗಳನ್ನು ರೂಪಿಸಲು ನೇರವಾಗಿ ನೆರವಾಗುತ್ತದೆ.
  • ಉಪಶಮನಕಾರಿ ಆರೈಕೆ: ತಾಂತ್ರಿಕ ಸಲಹಾ ಸಮಿತಿ ರಚನೆ

    ಉಪಶಮನಕಾರಿ ಆರೈಕೆ: ತಾಂತ್ರಿಕ ಸಲಹಾ ಸಮಿತಿ ರಚನೆ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಗಂಭೀರ ಕಾಯಿಲೆಗಳಿರುವ ರೋಗಿಗಳ ಜೀವನದ ಗುಣಮಟ್ಟವನ್ನು ಸುಧಾರಿಸುವತ್ತ ಗಮನಹರಿಸಲು, ಉಪಶಮನಕಾರಿ ಆರೈಕೆ (Palliative care) ಸೇವೆಗಳನ್ನು ಯೋಜಿಸಲು ಮತ್ತು ಮೇಲ್ವಿಚಾರಣೆ ಮಾಡಲು ಕರ್ನಾಟಕ ಸರ್ಕಾರವು ‘ರಾಜ್ಯ-ಮಟ್ಟದ ತಾಂತ್ರಿಕ ಸಲಹಾ ಸಮಿತಿ’ಯನ್ನು (TAC) ಸ್ಥಾಪಿಸಿದೆ.

    ಈ ಉಪಕ್ರಮದ ಪ್ರಮುಖ ವಿವರಗಳು:

    • ಉದ್ದೇಶಗಳು:- ಈ ತಾಂತ್ರಿಕ ಸಲಹಾ ಸಮಿತಿಯು (TAC) ನೀತಿ, ಚಿಕಿತ್ಸಾ ಶಿಷ್ಟಾಚಾರಗಳು ಮತ್ತು ಮೂಲಸೌಕರ್ಯಗಳ ಕುರಿತು ಸಲಹೆ ನೀಡುತ್ತದೆ ಹಾಗೂ ಅಗತ್ಯ ಮಾದಕ ದ್ರವ್ಯಗಳ (ಪ್ರಬಲ ನೋವು ನಿವಾರಕಗಳ) ಲಭ್ಯತೆಯನ್ನು ಖಚಿತಪಡಿಸುತ್ತದೆ.
    • ರಚನೆ:- ಈ ಸಮಿತಿಯು ಆರೋಗ್ಯ ಇಲಾಖೆಗಳ ಸದಸ್ಯರು, ಬೆಂಗಳೂರಿನ ಪ್ರಮುಖ ವೈದ್ಯಕೀಯ ಸಂಸ್ಥೆಗಳ ತಜ್ಞರು ಮತ್ತು ಸರ್ಕಾರೇತರ ಸಂಸ್ಥೆಗಳನ್ನು (NGOs) ಒಳಗೊಂಡಿದೆ.
    • ಗುರಿ:- ಪ್ರವೇಶ ಮತ್ತು ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಅಸ್ತಿತ್ವದಲ್ಲಿರುವ ಆರೋಗ್ಯ ವ್ಯವಸ್ಥೆಯಲ್ಲಿ ಉಪಶಮನಕಾರಿ ಆರೈಕೆಯನ್ನು ಸಂಯೋಜಿಸುವ (ರಾಷ್ಟ್ರೀಯ ಉಪಶಮನಕಾರಿ ಆರೈಕೆ ಕಾರ್ಯಕ್ರಮಕ್ಕೆ ಅನುಗುಣವಾಗಿ) ಬಗ್ಗೆ ಈ ಉಪಕ್ರಮವು ಗಮನಹರಿಸುತ್ತದೆ.
    • ಅತ್ಯುತ್ತಮ ಪದ್ಧತಿಗಳ:- ಮನೆ-ಆಧಾರಿತ ಮತ್ತು ಸಮುದಾಯ-ಆಧಾರಿತ ಆರೈಕೆಯನ್ನು ಒಳಗೊಂಡಿರುವ ಮಾದರಿಗಳನ್ನು ಜಾರಿಗೆ ತರಲು ಈ ಉಪಕ್ರಮವು ಎದುರು ನೋಡುತ್ತಿದೆ.