ಬೆಂಗಳೂರಿನ ಮೇಲಿರುವ ತಂತ್ರಜ್ಞಾನ ಮೂಲಸೌಕರ್ಯದ ಒತ್ತಡವನ್ನು ಕಡಿಮೆ ಮಾಡಲು ಮತ್ತು ಐಟಿ ವಲಯವನ್ನು ರಾಜ್ಯದ ಇತರೆಡೆ ವಿಕೇಂದ್ರೀಕರಿಸಲು, ಕರ್ನಾಟಕ ಸರ್ಕಾರವು ಮೂರು ಸುಸ್ಥಿರ ‘ಡೇಟಾ ಪಾರ್ಕ್’ಗಳನ್ನು ಸ್ಥಾಪಿಸಲು ನಿರ್ಧರಿಸಿದೆ.
ಯೋಜನೆಯ ವಿವರಗಳು:
ಬೆಂಗಳೂರು: ಹೊಸಕೋಟೆಯ ಸಮೀಪ 500 ಮೆಗಾವ್ಯಾಟ್ (MW) ಸಾಮರ್ಥ್ಯದ ಡೇಟಾ ಪಾರ್ಕ್ ಅನ್ನು ಅಭಿವೃದ್ಧಿಪಡಿಸಲಾಗುವುದು. ಇದಕ್ಕೆ ಪಾವಗಡ ಸೌರ ಉದ್ಯಾನವನದಿಂದ ನೇರವಾಗಿ ಸೌರಶಕ್ತಿಯನ್ನು ಒದಗಿಸಲಾಗುತ್ತದೆ. ಅಲ್ಲದೆ, ಬೆಂಗಳೂರು ಜಲಮಂಡಳಿಯು (BWSSB) ಪೂರೈಸುವ ಪ್ರತಿದಿನ 60 ಮಿಲಿಯನ್ ಲೀಟರ್ (60 MLD) ‘ದ್ವಿತೀಯ-ಹಂತದಲ್ಲಿ ಸಂಸ್ಕರಿಸಿದ ನೀರನ್ನು’ ಈ ಪಾರ್ಕ್ ಬಳಸಿಕೊಳ್ಳಲಿದೆ.
ಮಂಗಳೂರು: ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ‘ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ’ಯ (KIADB) ಸುಮಾರು 350 ಎಕರೆ ಜಮೀನನ್ನು ಇದಕ್ಕಾಗಿ ಗುರುತಿಸಲಾಗಿದೆ.
ಮೈಸೂರು: ರಾಜ್ಯದ ಎರಡನೇ ಅತಿದೊಡ್ಡ ಐಟಿ ಕೇಂದ್ರವಾಗಿ (IT Hub) ಬೆಳೆಯುತ್ತಿರುವ ಮೈಸೂರಿನಲ್ಲಿ, ಮೂರನೇ ಡೇಟಾ ಪಾರ್ಕ್ ನಿರ್ಮಾಣಕ್ಕಾಗಿ ಸೂಕ್ತ ಜಮೀನನ್ನು ಪ್ರಸ್ತುತ ಮೌಲ್ಯಮಾಪನ ಮಾಡಿ ಅಂತಿಮಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ.
ಪಶ್ಚಿಮ ಘಟ್ಟಗಳ ಸಮೀಕ್ಷೆ: 143 ಓಡೊನೇಟಾ ಪ್ರಭೇದಗಳ ದಾಖಲಾತಿ
ಪರಿಸರ
ಇತ್ತೀಚೆಗೆ ಸುದ್ದಿಯಲ್ಲಿದೆ:
ಪಶ್ಚಿಮ ಘಟ್ಟಗಳಲ್ಲಿ ಇತ್ತೀಚೆಗೆ ನಡೆದ ಅಧ್ಯಯನವೊಂದು ಡ್ರ್ಯಾಗನ್ಫ್ಲೈಗಳು (ತುಂಬಿಗಳು) ಮತ್ತು ಡ್ಯಾಮ್ಸೆಲ್ಫ್ಲೈಗಳಲ್ಲಿನ ಗಮನಾರ್ಹ ಜೀವವೈವಿಧ್ಯತೆಯ ಅಂತರವನ್ನು ಎತ್ತಿ ತೋರಿಸುತ್ತದೆ.
ಐತಿಹಾಸಿಕವಾಗಿ ದಾಖಲಾದ ಪ್ರಭೇದಗಳಲ್ಲಿ ಕೇವಲ 65% ರಷ್ಟನ್ನು ಮಾತ್ರ ದಾಖಲಿಸಲಾಗಿದ್ದು, 35% ರಷ್ಟು ಕುಸಿತವಾಗಿರುವ ಸಾಧ್ಯತೆಯನ್ನು ಇದು ಸೂಚಿಸುತ್ತದೆ.
ಓಡೊನೇಟಾ (Odonata) ಪ್ರಭೇದಗಳ ಬಗ್ಗೆ:
ಓಡೊನೇಟಾ ಎಂಬುದು ಕೀಟಗಳ ವರ್ಗವಾಗಿದ್ದು, ಇದು ಡ್ರ್ಯಾಗನ್ಫ್ಲೈಗಳನ್ನು (ಉಪವರ್ಗ: ಅನಿಷ್ಟೋಪ್ಟೆರಾ) ಮತ್ತು ಡ್ಯಾಮ್ಸೆಲ್ಫ್ಲೈಗಳನ್ನು (ಉಪವರ್ಗ: ಜೈಗೋಪ್ಟೆರಾ) ಒಳಗೊಂಡಿದೆ.
ಇವುಗಳು ಪಾರದರ್ಶಕ ರೆಕ್ಕೆಗಳು, ಉದ್ದವಾದ ತೆಳ್ಳಗಿನ ದೇಹಗಳು ಮತ್ತು ಇಳಿಜಾರಾದ ಎದೆಯ ಭಾಗವನ್ನು ಹೊಂದಿರುವುದು ಇವುಗಳ ಲಕ್ಷಣವಾಗಿದೆ.
ಸಾಮಾನ್ಯವಾಗಿ ನೀರಿನ ಬಳಿ ಕಂಡುಬರುವ ಓಡೊನೇಟಾಗಳು ಹಗಲಿನಲ್ಲಿ ಸಕ್ರಿಯವಾಗಿರುವ ಪರಭಕ್ಷಕಗಳಾಗಿವೆ, ಮತ್ತು ವಯಸ್ಕ ಕೀಟಗಳು ಹಾಗೂ ಜಲವಾಸಿ ಲಾರ್ವಾಗಳು ಎರಡೂ ಇತರ ಜೀವಿಗಳನ್ನು/ಕೀಟಗಳನ್ನು ತಿನ್ನುತ್ತವೆ.
ಪಶ್ಚಿಮ ಘಟ್ಟಗಳ ಕುರಿತು:
ಸಹ್ಯಾದ್ರಿಯ ಪಶ್ಚಿಮ ಘಟ್ಟಗಳು ಭಾರತೀಯ ಪರ್ಯಾಯ ದ್ವೀಪದ ಪಶ್ಚಿಮ ಕರಾವಳಿಯುದ್ದಕ್ಕೂ 1,600-ಕಿ.ಮೀ ಉದ್ದದ ಸಮಾನಾಂತರವಾದ ಪರ್ವತ ಶ್ರೇಣಿಯಾಗಿದೆ.
ಇದು 6 ರಾಜ್ಯಗಳ ಮೂಲಕ ಹಾದುಹೋಗುತ್ತವೆ. ಅವುಗಳೆಂದರೆ, ಗುಜರಾತ, ಮಹಾರಾಷ್ಟ್ರ, ಗೋವಾ, ಕರ್ನಾಟಕ, ತಮಿಳುನಾಡು ಮತ್ತು ಕೇರಳ.
ಇತರ ಹೆಸರುಗಳು: ಇದನ್ನು ‘ಭಾರತದ ಬೃಹತ್ ಕಡಿದಾದ ಇಳಿಜಾರು’ (The Great Escarpment of India) ಎಂದೂ ಕರೆಯಲಾಗುತ್ತದೆ.
ವಿಶೇಷ ಮಾನ್ಯತೆ: ಅಪಾರ ಪ್ರಮಾಣದ ಸ್ಥಳೀಯ ಜೀವವೈವಿಧ್ಯತೆ ಮತ್ತು ಅಪರೂಪದ ಪ್ರಭೇದಗಳಿಗೆ ಆಶ್ರಯತಾಣವಾಗಿರುವ ಕಾರಣದಿಂದಾಗಿ, ಇದು ಯುನೆಸ್ಕೋ ‘ವಿಶ್ವ ಪರಂಪರೆಯ ತಾಣ’ ಮತ್ತು ‘ಜೀವವೈವಿಧ್ಯತೆಯ ಬಿಸಿತಾಣ (biodiversity hotspot)’ ಎಂಬ ವಿಶೇಷ ಮಾನ್ಯತೆಗೆ ಪಾತ್ರವಾಗಿದೆ.
ಬುಡಕಟ್ಟು ಜನಾಂಗಗಳು: ಇದು ಆಡರ್, ಕೋಟ, ಬಡಗ, ತೋಡ, ಕುರುಂಬ, ಮತ್ತು ಪಣಿಯ ಮುಂತಾದ ಹೆಚ್ಚಿನ ಸಂಖ್ಯೆಯ ಬುಡಕಟ್ಟು ಜನಾಂಗದವರಿಗೆ ನೆಲೆಯಾಗಿದೆ.
ಅರಣ್ಯಗಳು: ಪಶ್ಚಿಮ ಘಟ್ಟಗಳ ಪ್ರದೇಶವು ತೇವಾಂಶಯುಕ್ತ ಎಲೆ ಉದುರುವ ಕಾಡುಗಳು ಮತ್ತು ಮಳೆಕಾಡುಗಳನ್ನು ಹೊಂದಿದೆ.
ಸ್ಥಳೀಯತೆ (Endemism): ಈ ಪ್ರದೇಶವು ಹೆಚ್ಚಿನ ಪ್ರಭೇದಗಳ ವೈವಿಧ್ಯತೆ ಹಾಗೂ ಹೆಚ್ಚಿನ ಮಟ್ಟದ ಸ್ಥಳೀಯತೆಯನ್ನು ಹೊಂದಿದೆ.
ಇಲ್ಲಿ ಕಂಡುಬರುವ ಶೇ. 77 ರಷ್ಟು ಉಭಯಚರಗಳು ಮತ್ತು ಶೇ. 62 ರಷ್ಟು ಸರೀಸೃಪ ಪ್ರಭೇದಗಳು ಪ್ರಪಂಚದಲ್ಲಿ ಬೇರೆಲ್ಲಿಯೂ ಕಂಡುಬರುವುದಿಲ್ಲ.
ಜೀವವೈವಿಧ್ಯ ಸಂರಕ್ಷಣೆ: ನಿರ್ದಿಷ್ಟ ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ಸಂರಕ್ಷಿಸಲು ಮಾನವರ ಪ್ರವೇಶವನ್ನು ನಿರ್ಬಂಧಿಸುವ ಉದ್ದೇಶದಿಂದ, ಭಾರತ ಸರ್ಕಾರವು 2 ಜೀವಗೋಳ ಮೀಸಲು ಪ್ರದೇಶಗಳು ಮತ್ತು 13 ರಾಷ್ಟ್ರೀಯ ಉದ್ಯಾನವನಗಳು ಸೇರಿದಂತೆ ಹಲವು ಸಂರಕ್ಷಿತ ಪ್ರದೇಶಗಳನ್ನು ಸ್ಥಾಪಿಸಿದೆ.
ಪಶ್ಚಿಮ ಘಟ್ಟಗಳಿಗೆ ಸಂಬಂಧಿಸಿದ ಸಮಿತಿಗಳು:
ಸಂಜಯ್ ಕುಮಾರ್ ಸಮಿತಿ:
ಉದ್ದೇಶ: ಪರಿಸರ ಸೂಕ್ಷ್ಮ ವಲಯಗಳ ಗಡಿರೇಖೆಗಳ ಮೇಲಿನ ರಾಜ್ಯಗಳ ಆಕ್ಷೇಪಣೆಗಳನ್ನು ಪರಿಶೀಲಿಸಲು ಮತ್ತು ಪ್ರಸ್ತಾವಿತ ಪ್ರದೇಶಗಳನ್ನು ಹೊರಗಿಡುವ ಕುರಿತು ಮೌಲ್ಯಮಾಪನ ಮಾಡಲುಇದನ್ನು ರಚಿಸಲಾಗಿದೆ.
ಮಹತ್ವ: ಇದು ಹಳ್ಳಿಗಳ ಪರಿಸರ ಸೂಕ್ಷ್ಮ ಪ್ರದೇಶ (ESA) ಸ್ಥಾನಮಾನವನ್ನು ಅಂತಿಮಗೊಳಿಸಲು ಪ್ರಯತ್ನಿಸುತ್ತದೆ, ಮತ್ತು ಜೀವವೈವಿಧ್ಯತೆಗೆ ಹಾನಿಕಾರಕವಾದ ಚಟುವಟಿಕೆಗಳನ್ನು ನಿರ್ಬಂಧಿಸುತ್ತದೆ.
ಮಾಧವ್ ಗಾಡ್ಗೀಳ್ ಸಮಿತಿ (2011):
ಉದ್ದೇಶ: ಪಶ್ಚಿಮ ಘಟ್ಟಗಳಿಗೆ ಸಂರಕ್ಷಣಾ ಕ್ರಮಗಳನ್ನು ಪ್ರಸ್ತಾಪಿಸುವುದು.
ಸಂಪೂರ್ಣ ಪಶ್ಚಿಮ ಘಟ್ಟಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗೊತ್ತುಪಡಿಸಲು ಇದು ಶಿಫಾರಸು ಮಾಡಿದೆ.
ಅಭಿವೃದ್ಧಿಯನ್ನು ನಿಯಂತ್ರಿಸಲು ಮೀಸಲಾದ ಪರಿಸರ ಪ್ರಾಧಿಕಾರವನ್ನು ರಚಿಸುವಂತೆ ಇದು ಪ್ರಸ್ತಾಪಿಸಿತು.
ವರದಿಯು ಕಟ್ಟುನಿಟ್ಟಾದ ಸಂರಕ್ಷಣೆಯನ್ನು ಸೂಚಿಸಿತು, ಆದರೆ ಅದರ ಶಿಫಾರಸುಗಳನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳಲಾಗಿಲ್ಲ.
ಕಸ್ತೂರಿರಂಗನ್ ಸಮಿತಿ (2012):
ಹೆಚ್ಚು ಸಮತೋಲಿತ ವಿಧಾನವನ್ನು ಒದಗಿಸುವ ಸಲುವಾಗಿ ಗಾಡ್ಗೀಳ್ ಸಮಿತಿಯ ಮುಂದುವರಿದ ಭಾಗವಾಗಿ ಇದನ್ನು ರಚಿಸಲಾಗಿದೆ.
ಪಶ್ಚಿಮ ಘಟ್ಟಗಳ 37% ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯಗಳಾಗಿ (Eco sensitive zones) ಗುರುತಿಸಲು ಇದು ಶಿಫಾರಸು ಮಾಡಿದೆ.
ಇದು ಸಂರಕ್ಷಣೆ ಮತ್ತು ಅಭಿವೃದ್ಧಿ ಅಗತ್ಯಗಳ ನಡುವಿನ ಸಮತೋಲನಕ್ಕೆ ಒತ್ತು ನೀಡುತ್ತದೆ, ಜೊತೆಗೆ ನಿರ್ದಿಷ್ಟ ಪ್ರದೇಶಗಳಲ್ಲಿ ಸೀಮಿತ ಚಟುವಟಿಕೆಗಳಿಗೆ ಅವಕಾಶ ನೀಡುತ್ತದೆ.
ಸಂಚಾರ ಅಪಘಾತಗಳಲ್ಲಿ ಪ್ರತಿದಿನ 546 ಸಾವು: NCRB
ರಾಜಕೀಯ ಮತ್ತು ಆಡಳಿತ
ಇತ್ತೀಚೆಗೆ ಸುದ್ದಿಯಲ್ಲಿದೆ:
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (NCRB)ದ ಇತ್ತೀಚಿನ ವರದಿಯ ಪ್ರಕಾರ, 2024 ರಲ್ಲಿ ಒಟ್ಟು 1.99 ಲಕ್ಷ ಜನರು ಸಂಚಾರ ಅಪಘಾತಗಳಲ್ಲಿ ಸಾವನ್ನಪ್ಪಿದ್ದು, ಇದು 2023 ಕ್ಕೆ ಹೋಲಿಸಿದರೆ 0.79% ರಷ್ಟು ಹೆಚ್ಚಳವಾಗಿದೆ.
ಈ ವರದಿಯ ಪ್ರಮುಖ ಅಂಶಗಳು
ಸಂಚಾರ (ಟ್ರಾಫಿಕ್) ಅಪಘಾತಗಳು: ಇವುಗಳು ರಸ್ತೆ ಅಪಘಾತಗಳು, ರೈಲ್ವೆ ಅಪಘಾತಗಳು, ರೈಲ್ವೆ ಹಳಿಗಳ ಮೇಲಿನ ಅಥವಾ ರೈಲ್ವೆ ಆವರಣದಲ್ಲಿನ ಘಟನೆಗಳು ಹಾಗೂ ರೈಲ್ವೆ ಕ್ರಾಸಿಂಗ್ಗಳಲ್ಲಿ ಸಂಭವಿಸುವ ಅಪಘಾತಗಳನ್ನು ಒಳಗೊಂಡಿರುತ್ತವೆ.
ರಸ್ತೆ ಅಪಘಾತಗಳೆ ಹೆಚ್ಚು: 2024 ರಲ್ಲಿ ದಾಖಲಾದ ಒಟ್ಟು 1.99 ಲಕ್ಷ ಸಂಚಾರ-ಸಂಬಂಧಿತ ಸಾವುಗಳ ಪೈಕಿ, 1.75 ಲಕ್ಷ (88%) ಸಾವುಗಳು ಕೇವಲ ರಸ್ತೆ ಅಪಘಾತಗಳಿಂದಲೇ ಸಂಭವಿಸಿವೆ.
ಸರ್ಕಾರದ ಉಪಕ್ರಮಗಳು
ರಾಷ್ಟ್ರೀಯ ರಸ್ತೆ ಸುರಕ್ಷತಾ ನೀತಿ, 2010 (National Road Safety Policy India, 2010): ಇದು ಉತ್ತಮ ರಸ್ತೆ ಮೂಲಸೌಕರ್ಯ, ಸಂಚಾರ ನಿಯಮಗಳ ಕಟ್ಟುನಿಟ್ಟಿನ ಜಾರಿ, ಸುಧಾರಿತ ತುರ್ತು ವೈದ್ಯಕೀಯ ಸೇವೆಗಳು, ಸಾರ್ವಜನಿಕ ಜಾಗೃತಿ ಅಭಿಯಾನಗಳು ಮತ್ತು ಅಪಘಾತದ ನಂತರದ ಆರೈಕೆಯ ಸುಧಾರಣೆಯ ಅಗತ್ಯಕ್ಕೆ ಒತ್ತು ನೀಡಿದೆ.
ಮೋಟಾರು ವಾಹನಗಳ ತಿದ್ದುಪಡಿ ಕಾಯ್ದೆ, 2019 (Motor Vehicles Amendment Act, 2019): ಈ ಕಾಯ್ದೆಯು ಮಿತಿಮೀರಿದ ವೇಗದ ಚಾಲನೆ, ಕುಡಿದು ವಾಹನ ಚಲಾಯಿಸುವುದು ಮತ್ತು ಹೆಲ್ಮೆಟ್ ಅಥವಾ ಸೀಟ್ ಬೆಲ್ಟ್ ಧರಿಸದಿರುವುದು ಸೇರಿದಂತೆ ಸಂಚಾರ ನಿಯಮಗಳ ಉಲ್ಲಂಘನೆಗಾಗಿ ಹೆಚ್ಚಿನ ದಂಡ ವಿಧಿಸುವ ನಿಯಮಗಳನ್ನು ಜಾರಿಗೆ ತಂದಿತು.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB)
ಸ್ಥಾಪನೆ: 1986.
ಕಾರ್ಯನಿರ್ವಹಿಸುವ ಸಚಿವಾಲಯ: ಇದು ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
ಉದ್ದೇಶ: ಅಪರಾಧ ಮತ್ತು ಅಪರಾಧಿಗಳ ನಡುವಿನ ಜಾಲವನ್ನು ಪತ್ತೆಹಚ್ಚುವಲ್ಲಿ ತನಿಖಾಧಿಕಾರಿಗಳಿಗೆ ನೆರವಾಗುವಂತೆ, ಇದು ಅಪರಾಧ ಹಾಗೂ ಅಪರಾಧಿಗಳ ಮಾಹಿತಿಯ ಭಂಡಾರವಾಗಿ ಕಾರ್ಯನಿರ್ವಹಿಸುತ್ತದೆ.
ಪ್ರಧಾನ ಕಚೇರಿ: ನವದೆಹಲಿ.
NCRB ಯಿಂದ ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳು:
ಪರಸ್ಪರ ಕಾರ್ಯಸಾಧ್ಯವಾದ ಅಪರಾಧ ನ್ಯಾಯ ವ್ಯವಸ್ಥೆ (Inter-Operable Criminal Justice System – ICJS) ಯೋಜನೆ.
ಅಪರಾಧ ಮತ್ತು ಅಪರಾಧಿಗಳ ಪತ್ತೆಹಚ್ಚುವ ಜಾಲ ಮತ್ತು ವ್ಯವಸ್ಥೆಗಳು (Crime and Criminal Tracking Network & Systems – CCTNS).
ವರದಿಗಳು: NCRB ಮೂರು ವಾರ್ಷಿಕ ವರದಿಗಳನ್ನು ಹೊರತರುತ್ತದೆ. ಈ ವರದಿಗಳು ಪೊಲೀಸ್ ಅಧಿಕಾರಿಗಳು, ಸಂಶೋಧಕರು, ಮಾಧ್ಯಮಗಳು ಮತ್ತು ನೀತಿ ನಿರೂಪಕರಿಗೆ ಪ್ರಮುಖ ಉಲ್ಲೇಖಗಳಾಗಿವೆ:
ಭಾರತದಲ್ಲಿ ಅಪರಾಧ (Crime in India).
ಭಾರತದಲ್ಲಿ ಆಕಸ್ಮಿಕ ಸಾವುಗಳು ಮತ್ತು ಆತ್ಮಹತ್ಯೆಗಳು (Accidental Deaths & Suicides in India).
ಭಾರತದ ಕಾರಾಗೃಹ ಅಂಕಿಅಂಶಗಳು (Prison Statistics India).
ಕೇರಳದ ತೈಲ ಸೋರಿಕೆ ತುರ್ತು ಕಾರ್ಯಯೋಜನೆ (Kerala’s Oil Spill Contingency Plan)
ಪರಿಸರ
ಇತ್ತೀಚೆಗೆ ಸುದ್ದಿಯಲ್ಲಿದೆ:
ಸಮುದ್ರ ಮಾಲಿನ್ಯ ಮತ್ತು ಕರಾವಳಿ ಪರಿಸರಕ್ಕೆ ಎದುರಾಗುವ ಅಪಾಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ, 2025ರಲ್ಲಿ ಕೇರಳ ಕರಾವಳಿಯ ಆಚೆಗೆ ಸಂಭವಿಸಿದ ಹಡಗು ಮುಳುಗಡೆ ಘಟನೆಗಳ ಹಿನ್ನೆಲೆಯಲ್ಲಿ ಕೇರಳ ಸರ್ಕಾರವು ‘ತೈಲ ಸೋರಿಕೆ ತುರ್ತು ಕಾರ್ಯಯೋಜನೆ’ಯನ್ನು (Oil Spill Contingency Plan) ಸಿದ್ಧಪಡಿಸಲು ಮುಂದಾಗಿದೆ.
ತೈಲ ಸೋರಿಕೆ (Oil Spill)
ವ್ಯಾಖ್ಯಾನ: ಟ್ಯಾಂಕರ್ ಅಪಘಾತಗಳು, ಕಡಲಾಚೆಯ ತೈಲ ಕೊರೆಯುವಿಕೆ ಅಥವಾ ಇಂಧನ ಸೋರಿಕೆಯಂತಹ ಮಾನವ ಚಟುವಟಿಕೆಗಳಿಂದಾಗಿ ಪೆಟ್ರೋಲಿಯಂ ವಸ್ತುಗಳು ಪರಿಸರಕ್ಕೆ, ವಿಶೇಷವಾಗಿ ಸಾಗರ ಮತ್ತು ಕರಾವಳಿ ನೀರಿಗೆ ಸೇರಿ ಗಂಭೀರ ಮಾಲಿನ್ಯವನ್ನು ಉಂಟುಮಾಡುವುದನ್ನು ಇದು ಸೂಚಿಸುತ್ತದೆ.
ತೈಲ ಸೋರಿಕೆಯ ಪರಿಣಾಮಗಳು
ಸಮುದ್ರ ಜೀವಿಗಳು: ತೈಲವು ಪಕ್ಷಿಗಳ ಗರಿಗಳು ಮತ್ತು ಸಸ್ತನಿಗಳ ತುಪ್ಪಳವನ್ನು ಆವರಿಸಿಕೊಳ್ಳುವುದರಿಂದ, ಅವುಗಳ ನೈಸರ್ಗಿಕ ನಿರೋಧಕ ಶಕ್ತಿ ಮತ್ತು ನೀರಿನಲ್ಲಿ ತೇಲುವ ಸಾಮರ್ಥ್ಯವು ನಾಶವಾಗುತ್ತದೆ. ಇದು ದೇಹದ ಉಷ್ಣಾಂಶವು ತೀವ್ರವಾಗಿ ಕುಸಿಯುವಿಕೆಗೆ (ಹೈಪೋಥರ್ಮಿಯಾ – Hypothermia) ಅಥವಾ ನೀರಿನಲ್ಲಿ ಮುಳುಗಿ ಸಾಯಲು ಕಾರಣವಾಗುತ್ತದೆ.
ಪರಿಸರ ವ್ಯವಸ್ಥೆಯ ಅಡ್ಡಿ: ದಪ್ಪನಾದ ತೈಲದ ಪದರಗಳು ಸೂರ್ಯನ ಬೆಳಕು ಮತ್ತು ಆಮ್ಲಜನಕವನ್ನು ತಡೆಯುತ್ತವೆ. ಇದರಿಂದಾಗಿ ಸಮುದ್ರದ ಸಸ್ಯಪ್ಲವಕಗಳು (Phytoplanktons) ನಾಶವಾಗುತ್ತವೆ, ಜೊತೆಗೆ ಮ್ಯಾಂಗ್ರೋವ್ಗಳು, ಹವಳದ ಬಂಡೆಗಳು ಹಾಗೂ ಉಪ್ಪುನೀರಿನ ಜವುಗು ಪ್ರದೇಶಗಳಂತಹ ಸೂಕ್ಷ್ಮ ಆವಾಸಸ್ಥಾನಗಳು ಉಸಿರುಗಟ್ಟುತ್ತವೆ.
ಆರ್ಥಿಕ ನಷ್ಟ: ಈ ಸೋರಿಕೆಯು ಮೀನುಗಾರಿಕೆ, ಪ್ರವಾಸೋದ್ಯಮ ಮತ್ತು ಕರಾವಳಿಯ ಜನರ ಜೀವನೋಪಾಯಕ್ಕೆ ತಕ್ಷಣದ ಹಾಗೂ ದೀರ್ಘಾವಧಿಯ ಹಾನಿಯನ್ನು ಉಂಟುಮಾಡುತ್ತದೆ.
ಮಾನವನ ಆರೋಗ್ಯ: ಕಲುಷಿತಗೊಂಡ ಸಮುದ್ರಾಹಾರ ಮತ್ತು ವಿಷಕಾರಿ ಅನಿಲಗಳು ಕರಾವಳಿ ಸಮುದಾಯಗಳಿಗೆ ಹಾಗೂ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರಿಗೆ ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತವೆ.
ತೈಲ ಸೋರಿಕೆಯನ್ನು ಸ್ವಚ್ಛಗೊಳಿಸಲು ಬಳಸುವ ವಿಧಾನಗಳು
ತೇಲುವ ತಡೆಗೋಡೆಗಳು ಮತ್ತು ತೈಲ ಹೀರುಯಂತ್ರಗಳು (Booms & Skimmers): ತೇಲುವ ತಡೆಗೋಡೆಗಳ (ಬೂಮ್ಸ್) ಮೂಲಕ ತೈಲವು ಹರಡದಂತೆ ನಿಯಂತ್ರಿಸಲಾಗುತ್ತದೆ, ನಂತರ ಸ್ಕಿಮ್ಮರ್ಗಳ (ನಿರ್ವಾತ-ರೀತಿಯ ಯಂತ್ರಗಳು) ಮೂಲಕ ಮೇಲ್ಮೈಯಲ್ಲಿರುವ ತೈಲವನ್ನು ಹೀರಿ ತೆಗೆಯಲಾಗುತ್ತದೆ.
ಪ್ರಸರಣಕಾರಕಗಳು (Dispersants): ಇವು ತೈಲವನ್ನು ಸಣ್ಣ ಹನಿಗಳಾಗಿ ಒಡೆಯುವ ರಾಸಾಯನಿಕಗಳಾಗಿದ್ದು, ಇವು ತೈಲವು ನೀರಿನೊಂದಿಗೆ ಬೆರೆತು ವೇಗವಾಗಿ ವಿಘಟನೆಗೊಳ್ಳಲು ಅನುವು ಮಾಡಿಕೊಡುತ್ತವೆ.
ಜೈವಿಕ ಪರಿಹಾರ (Bioremediation): ಹೈಡ್ರೋಕಾರ್ಬನ್ಗಳನ್ನು ಕಡಿಮೆ ಹಾನಿಕಾರಕ ವಸ್ತುಗಳಾಗಿ ವಿಭಜಿಸಲು, ತೈಲವನ್ನು ನಾಶಪಡಿಸುವ ಬ್ಯಾಕ್ಟೀರಿಯಾಗಳನ್ನು (ಉದಾಹರಣೆಗೆ: ಸೈಕ್ಲೋಕ್ಲಾಸ್ಟಿಕಸ್ ಬ್ಯಾಕ್ಟೀರಿಯಾ ಅಥವಾ ಟೆರಿ (TERI) ಸಂಸ್ಥೆಯು ಅಭಿವೃದ್ಧಿಪಡಿಸಿದ ‘ಆಯಿಲ್ ಜಾಪರ್’) ಬಳಸುವುದು.
ಸ್ಥಳದಲ್ಲೇ ಸುಡುವುದು (In-situ Burning): ಹೊಸದಾಗಿ ಸೋರಿಕೆಯಾದ ತೈಲಕ್ಕೆ ಬೆಂಕಿ ಹಚ್ಚುವ ಮೂಲಕ ಶೇ. 98 ರಷ್ಟು ತೈಲವನ್ನು ತೆಗೆದುಹಾಕಬಹುದು, ಆದರೂ ಇದು ಭಾರಿ ವಾಯುಮಾಲಿನ್ಯವನ್ನು ಉಂಟುಮಾಡುತ್ತದೆ.
ಸಮುದ್ರ ಮಾಲಿನ್ಯವನ್ನು ತಡೆಗಟ್ಟುವ ಪ್ರಯತ್ನಗಳು
ರಾಷ್ಟ್ರೀಯ ತೈಲ ಸೋರಿಕೆ ವಿಪತ್ತು ತುರ್ತು ಕಾರ್ಯಯೋಜನೆ (NOS-DCP):ಭಾರತೀಯ ಕರಾವಳಿ ಕಾವಲು ಪಡೆ (Indian Coast Guard – ICG) ತೈಲ ಸೋರಿಕೆಗಳ ಕುರಿತು ವರದಿ ಮಾಡಲು ಮತ್ತು ಕಾರ್ಯಾಚರಣೆ ಕೈಗೊಳ್ಳಲು ಇರುವ ಕೇಂದ್ರ ಸಮನ್ವಯ ಪ್ರಾಧಿಕಾರವಾಗಿದೆ.
ಬಂಕರ್ ತೈಲ ಸಮಾವೇಶ, 2001 (Bunker Oil Convention, 2001): ಹಡಗುಗಳಿಂದ ಇಂಧನ ತೈಲ ಸೋರಿಕೆಯಾಗಿ ಉಂಟಾಗುವ ಹಾನಿಗೆ ತ್ವರಿತ ಪರಿಹಾರ ಒದಗಿಸುವುದನ್ನು ಇದು ಖಚಿತಪಡಿಸುತ್ತದೆ.
MARPOL 73/78 (ಅನುಬಂಧ I): ಇದು ಹಡಗುಗಳಿಂದಾಗುವ ಸಮುದ್ರ ಮಾಲಿನ್ಯವನ್ನು ತಡೆಗಟ್ಟುವ ಗುರಿಯನ್ನು ಹೊಂದಿರುವ ಅಂತರರಾಷ್ಟ್ರೀಯ ಒಪ್ಪಂದವಾಗಿದೆ.
ಪರಿಸರ ಸಂರಕ್ಷಣಾ ಕಾಯ್ದೆ (EPA), 1986: ತೈಲ ಸೋರಿಕೆಯನ್ನು ನಿಭಾಯಿಸಲು ಪ್ರತ್ಯೇಕ ಕಾನೂನು ಇಲ್ಲದಿದ್ದರೂ, ಇಂತಹ ಘಟನೆಗಳನ್ನು ಹೆಚ್ಚಾಗಿ ಈ ಕಾಯ್ದೆಯಡಿ “ಆಕಸ್ಮಿಕ ಹೊರಸೂಸುವಿಕೆ” (Accidental discharge) ಎಂದು ಪರಿಗಣಿಸಿ ಮೊಕದ್ದಮೆ ಹೂಡಲಾಗುತ್ತದೆ.
‘ಕನ್ನಡ ಅಭಿವೃದ್ಧಿ ಪ್ರಾಧಿಕಾರ’ (KDA) ರಾಜ್ಯ ಸರ್ಕಾರಕ್ಕೆ “ಮಕ್ಕಳು ಕನ್ನಡದಲ್ಲಿ ಏಕೆ ಅನುತ್ತೀರ್ಣರಾಗುತ್ತಾರೆ?” ಎಂಬ ಶೀರ್ಷಿಕೆಯ ವರದಿಯೊಂದನ್ನು ಸಲ್ಲಿಸಿದೆ. ಇದು ಸಿಬಿಎಸ್ಇ (CBSE) ಮತ್ತು ಐಸಿಎಸ್ಇ (ICSE) ಸೇರಿದಂತೆ ಎಲ್ಲಾ ಶಾಲಾ ಮಂಡಳಿಗಳಲ್ಲಿ ಕನ್ನಡ ಕಲಿಕೆಯನ್ನು ಕಡ್ಡಾಯಗೊಳಿಸುವಂತೆ ಶಿಫಾರಸು ಮಾಡಿದೆ.
ಈ ವರದಿಯಲ್ಲಿರುವ ಪ್ರಮುಖ ಶಿಫಾರಸುಗಳು ಮತ್ತು ನೀತಿ ಕ್ರಮಗಳು:
ಎಲ್ಲಾ ಮಂಡಳಿಗಳಲ್ಲೂ ಕಡ್ಡಾಯ: ಶಾಲೆಯ ಪಠ್ಯಕ್ರಮ ಯಾವುದೇ ಆಗಿರಲಿ, ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಡ್ಡಾಯವಾಗಿ ಕಲಿಸಲೇಬೇಕು.
ಸರ್ಕಾರಿ ಉದ್ಯೋಗಗಳಲ್ಲಿ 25% ಮೀಸಲಾತಿ: ಕನಿಷ್ಠ 10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಮಕ್ಕಳಿಗೆ, ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ಕನಿಷ್ಠ ಶೇ. 25ರಷ್ಟು ಮೀಸಲಾತಿಯನ್ನು ಒದಗಿಸಬೇಕು.
ದ್ವಿಭಾಷಾ ನೀತಿ: ವಿದ್ಯಾರ್ಥಿಗಳ ಮೇಲಿನ ಶೈಕ್ಷಣಿಕ ಹೊರೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ‘ತ್ರಿಭಾಷಾ ಸೂತ್ರ’ದ ಬದಲಾಗಿ ದ್ವಿಭಾಷಾ ನೀತಿಯನ್ನು ಅಳವಡಿಸಿಕೊಳ್ಳುವಂತೆ ಸಮಿತಿಯು ಸಲಹೆ ನೀಡಿದೆ.
ಆರಂಭಿಕ ಹಂತದ ಕಲಿಕೆ: ಅಂಗನವಾಡಿ ಮತ್ತು ಪೂರ್ವ-ಪ್ರಾಥಮಿಕ ಹಂತದಿಂದಲೇ ಪ್ರಾರಂಭಿಸಿ ಎಲ್ಲಾ ಹಂತಗಳಲ್ಲೂ ಕನ್ನಡವನ್ನು ಕಡ್ಡಾಯಗೊಳಿಸಬೇಕು. ಅಲ್ಲದೆ, ಕೇವಲ ವಿಷಯ-ಆಧಾರಿತ ಪಠ್ಯಪುಸ್ತಕಗಳ ಬದಲಾಗಿ, ಭಾಷಾ ಕಲಿಕೆಯ ಮೇಲೆಯೇ ಹೆಚ್ಚು ಗಮನಹರಿಸುವ ಪಠ್ಯಪುಸ್ತಕಗಳನ್ನು ರೂಪಿಸಬೇಕು ಎಂದು ವರದಿ ಆಗ್ರಹಿಸಿದೆ.
ಕಾನೂನಿನ ಬೆಂಬಲ: ಈ ಮೇಲಿನ ಸಲಹೆಗಳು, 2017ರಿಂದ ಜಾರಿಯಲ್ಲಿರುವ ‘ಕನ್ನಡ ಭಾಷಾ ಕಲಿಕಾ ಕಾಯ್ದೆ, 2015’ರ ವ್ಯಾಪಕ ಅನುಷ್ಠಾನಕ್ಕೆ ಪೂರಕವಾಗಿವೆ.
ಕನ್ನಡ ಭಾಷಾ ಕಲಿಕಾ ಕಾಯ್ದೆ, 2015 ರ ಬಗ್ಗೆ:
ಕಾನೂನಿನ ವ್ಯಾಪ್ತಿ: ಇದು 1 ರಿಂದ 10ನೇ ತರಗತಿಯವರೆಗಿನ ಎಲ್ಲಾ ಶಾಲೆಗಳಲ್ಲಿ ಕನ್ನಡವನ್ನು (ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ) ಕಡ್ಡಾಯ ವಿಷಯವಾಗಿ ಬೋಧಿಸುವುದನ್ನು ಕಡ್ಡಾಯಗೊಳಿಸುತ್ತದೆ.
ಸಿಬಿಎಸ್ಇ (CBSE), ಐಸಿಎಸ್ಇ (ICSE) ಮತ್ತು ರಾಜ್ಯ ಪಠ್ಯಕ್ರಮದ ಶಾಲೆಗಳನ್ನು ಒಳಗೊಂಡಂತೆ ರಾಜ್ಯಾದ್ಯಂತ ಇರುವ ಎಲ್ಲಾ ಶಾಲೆಗಳಿಗೂ ಈ ಕಾಯ್ದೆಯು ಅನ್ವಯಿಸುತ್ತದೆ.
ಇತ್ತೀಚೆಗೆ, ಪ್ರಧಾನಿ ಮೋದಿಯವರು ಕೇಂದ್ರ ಸರ್ಕಾರ 11 ವರ್ಷಗಳ ಹಿಂದೆ ಪ್ರಾರಂಭಿಸಿದ ಪ್ರಮುಖ ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY), ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಮತ್ತು ಅಟಲ್ ಪಿಂಚಣಿ ಯೋಜನೆ (APY) ಗಳ ಪ್ರಭಾವ ಮತ್ತು ಪರಿಣಾಮಗಳ ಕುರಿತು ಮಾತನಾಡಿದರು.
ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY – Pradhan Mantri Suraksha Bima Yojana):
ಪ್ರಾರಂಭಿಸಿದ್ದು: ಮೇ 9, 2015.
ಅನುಷ್ಠಾನ: ಹಣಕಾಸು ಸಚಿವಾಲಯ.
ಉದ್ದೇಶ: ಸಮಾಜದ ಹಿಂದುಳಿದ ವರ್ಗಗಳ ಜನರಿಗೆ ವಿಮಾ ಯೋಜನೆಯನ್ನು ಒದಗಿಸುವುದು.
ಪ್ರಮುಖ ಲಕ್ಷಣಗಳು:
ಇದು ತನ್ನ ಎಲ್ಲಾ ಖಾತೆದಾರರಿಗೆ ಒಂದು ವರ್ಷದ ಅವಧಿಗೆ ರೂ. 2 ಲಕ್ಷದ ಜೀವ ವಿಮಾ ರಕ್ಷಣೆಯನ್ನು ನೀಡುತ್ತದೆ. ಆಕಸ್ಮಿಕ ಸಾವು ಅಥವಾ ಶಾಶ್ವತ ಅಂಗವೈಕಲ್ಯದ ಸಂದರ್ಭದಲ್ಲಿ ಈ ಜೀವ ವಿಮಾ ರಕ್ಷಣೆಯನ್ನು ಒದಗಿಸಲಾಗುತ್ತದೆ.
ಭಾಗಶಃ ಅಂಗವೈಕಲ್ಯದ ಸಂದರ್ಭದಲ್ಲಿ ಫಲಾನುಭವಿಗೆ ರೂ. 1 ಲಕ್ಷದ ಜೀವ ವಿಮಾ ರಕ್ಷಣೆ ನೀಡಲಾಗುತ್ತದೆ.
18 ರಿಂದ 70 ವರ್ಷದೊಳಗಿನ ಯಾವುದೇ ವ್ಯಕ್ತಿ ಈ ಯೋಜನೆಯ ಪ್ರಯೋಜನ ಪಡೆಯಬಹುದು.
ಖಾತೆದಾರರ ಮರಣದ ಸಂದರ್ಭದಲ್ಲಿ, ಆತನ/ಆಕೆಯ ನಾಮನಿರ್ದೇಶಿತ ವ್ಯಕ್ತಿ (ವಾರಸುದಾರರು) ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು.
ವಿಮಾ ಕಂತು (ಪ್ರೀಮಿಯಂ): ಈ ಯೋಜನೆಯು ಪ್ರತಿ ಸದಸ್ಯರಿಗೆ ವಾರ್ಷಿಕ ರೂ. 12 ಪ್ರೀಮಿಯಂ ಅನ್ನು ಒದಗಿಸುತ್ತದೆ. ಪ್ರತಿ ವರ್ಷ ಜೂನ್ 1 ರಂದು ಅಥವಾ ಅದಕ್ಕೂ ಮೊದಲು ಈ ಪ್ರೀಮಿಯಂ ಅನ್ನು ಒಂದೇ ಕಂತಿನಲ್ಲಿ ಸ್ವಯಂಚಾಲಿತವಾಗಿ ಕಡಿತಗೊಳಿಸಲಾಗುತ್ತದೆ.
ಅಟಲ್ ಪಿಂಚಣಿ ಯೋಜನೆ (APY –Atal Pension Yojana):
ಪ್ರಾರಂಭಿಸಿದ್ದು: ಮೇ, 2015.
ಉದ್ದೇಶ: ಎಲ್ಲಾ ಭಾರತೀಯರಿಗೆ, ವಿಶೇಷವಾಗಿ ಬಡವರು, ಹಿಂದುಳಿದವರು ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಸಾರ್ವತ್ರಿಕ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ರಚಿಸುವುದು.
ನಿರ್ವಹಣೆ: ರಾಷ್ಟೀಯ ಪಿಂಚಣಿ ಯೋಜನೆ (NPS)ಯ ಮೂಲಕ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ನಿರ್ವಹಿಸುತ್ತದೆ.
ಅರ್ಹತೆ: ಭಾರತದ ಯಾವುದೇ ನಾಗರಿಕರು ಅಟಲ್ ಪಿಂಚಣಿ ಯೋಜನೆಗೆ ಸೇರಬಹುದು. ಚಂದಾದಾರರ ವಯಸ್ಸು 18-40 ವರ್ಷಗಳ ನಡುವೆ ಇರಬೇಕು.
ಪ್ರಯೋಜನಗಳು:
ಇದು 60 ವರ್ಷ ವಯಸ್ಸನ್ನು ತಲುಪಿದ ನಂತರ ರೂ. 1000 ದಿಂದ ರೂ. 5000 ವರೆಗಿನ ಕನಿಷ್ಠ ಖಾತರಿಯ ಪಿಂಚಣಿಯನ್ನು ಒದಗಿಸುತ್ತದೆ.
ಚಂದಾದಾರರ ಮರಣದ ನಂತರ ಅವರ ಪತ್ನಿಗೆ/ಪತಿಗೆ ಜೀವಮಾನವಿಡೀ ಪಿಂಚಣಿಯ ಮೊತ್ತವನ್ನು ಖಾತರಿಪಡಿಸಲಾಗುತ್ತದೆ.
ಚಂದಾದಾರರು ಮತ್ತು ಅವರ ಪತ್ನಿ/ಪತಿ ಇಬ್ಬರ ಮರಣದ ಸಂದರ್ಭದಲ್ಲಿ, ಸಂಪೂರ್ಣ ಪಿಂಚಣಿ ನಿಧಿಯನ್ನು (ಕಾರ್ಪಸ್) ನಾಮನಿರ್ದೇಶಿತ ವ್ಯಕ್ತಿಗೆ (ವಾರಸುದಾರರಿಗೆ) ಪಾವತಿಸಲಾಗುತ್ತದೆ.
ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY – Pradhan Mantri Jeevan Jyoti Bima Yojana):
ಪ್ರಾರಂಭಿಸಿದ್ದು: ಮೇ 9, 2015.
ಅನುಷ್ಠಾನ: ಹಣಕಾಸು ಸಚಿವಾಲಯ.
ಉದ್ದೇಶ: ಸಮಾಜದ ಬಡ ಮತ್ತು ಕಡಿಮೆ ಆದಾಯದ ವರ್ಗದವರಿಗೆ ಜೀವ ವಿಮಾ ಭದ್ರತೆಯನ್ನು ಒದಗಿಸುವುದು.
ಅರ್ಹತೆ: 18 ರಿಂದ 50 ವರ್ಷ ವಯಸ್ಸಿನ ಜನರು ಈ ಯೋಜನೆಯ ಪ್ರಯೋಜನ ಪಡೆಯಬಹುದು.
ಯೋಜನೆಯ ಪ್ರಮುಖ ಲಕ್ಷಣಗಳು:
ಯೋಜನೆಯು ಗರಿಷ್ಠ ರೂ. 2 ಲಕ್ಷದ ಖಚಿತ ವಿಮಾ ಮೊತ್ತವನ್ನು ನೀಡುತ್ತದೆ.
ವಿಮೆ ಮಾಡಿದ ವ್ಯಕ್ತಿಯ ಮರಣದ ಸಂದರ್ಭದಲ್ಲಿ, ಮುಂದಿನ ಅರ್ಹ ಫಲಾನುಭವಿಗೆ ರೂ. 2,00,000 ಮರಣ ರಕ್ಷಣೆಯನ್ನು ಒಳಗೊಂಡ ಮರಣದ ಪ್ರಯೋಜನವನ್ನು ನೀಡಲಾಗುತ್ತದೆ.
ವಿಮಾ ಕಂತು (ಪ್ರೀಮಿಯಂ): ಈ ಯೋಜನೆಗೆ ವಾರ್ಷಿಕ ಪ್ರೀಮಿಯಂ ರೂ. 330 ಆಗಿದೆ.
ಬಹು ಸ್ವತಂತ್ರ ಗುರಿ-ನಿರ್ದೇಶಿತ ಮರು-ಪ್ರವೇಶ ವಾಹನ ವ್ಯವಸ್ಥೆ (MIRV system)
ರಕ್ಷಣೆ
ಇತ್ತೀಚೆಗೆ ಸುದ್ದಿಯಲ್ಲಿದೆ:
ಒಡಿಶಾದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ದ್ವೀಪದಿಂದ ಬಹು ಸ್ವತಂತ್ರ ಗುರಿ-ನಿರ್ದೇಶಿತ ಮರು-ಪ್ರವೇಶ ವಾಹನ (MIRV) ವ್ಯವಸ್ಥೆಯನ್ನು ಹೊಂದಿರುವ ಸುಧಾರಿತ ಅಗ್ನಿ ಕ್ಷಿಪಣಿಯ ಯಶಸ್ವಿ ಹಾರಾಟ-ಪರೀಕ್ಷೆಯನ್ನು ಇತ್ತೀಚೆಗೆ ಭಾರತ ನಡೆಸಿತು.
MIRV ತಂತ್ರಜ್ಞಾನದ ಬಗ್ಗೆ:
MIRV ಸಂಕ್ಷಿಪ್ತ ರೂಪ: ಬಹುವಿಧದ ಸ್ವತಂತ್ರ ಗುರಿ-ನಿರ್ದೇಶಿತ ಮರು-ಪ್ರವೇಶ ವಾಹನ (Multiple Independently Targetable Reentry Vehicle)
ವಿಶಿಷ್ಟತೆ: ಈ ತಂತ್ರಜ್ಞಾನವು ಒಂದೇ ಕ್ಷಿಪಣಿಯ ಮೂಲಕ ಅನೇಕ ಸಿಡಿತಲೆಗಳನ್ನು ಹೊತ್ತೋಯ್ಯುವ ಮತ್ತು ಪ್ರತಿಯೊಂದು ಸಿಡಿತಲೆಯನ್ನೂ ಪ್ರತ್ಯೇಕವಾದ ಗುರಿಗಳಿಗೆ ನಿರ್ದೇಶಿಸುವ ಸಾಮರ್ಥ್ಯವನ್ನು ಹೊಂದಿದೆ, ಇದರಿಂದ ಕ್ಷಿಪಣಿಯ ವಿನಾಶಕಾರಿ ಶಕ್ತಿಯು ಗಣನೀಯವಾಗಿ ಹೆಚ್ಚಾಗುತ್ತದೆ.
ಅಗ್ನಿ ಕ್ಷಿಪಣಿಗಳ (Agni Missiles) ಬಗ್ಗೆ:
ಅಗ್ನಿ ಕ್ಷಿಪಣಿ ವರ್ಗವು ಭಾರತದ ಪರಮಾಣು ಉಡಾವಣಾ ಸಾಮರ್ಥ್ಯದ ಬೆನ್ನೆಲುಬಾಗಿದೆ.
ಅಭಿವೃದ್ಧಿಪಡಿಸಿದವರು: ಅಗ್ನಿ-1 ರಿಂದ 5 ಕ್ಷಿಪಣಿಗಳನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿದೆ.
ಅಗ್ನಿ ಕ್ಷಿಪಣಿಗಳ ಇತರ ಶ್ರೇಣಿಗಳು:
ಅಗ್ನಿ I: 700-800 ಕಿ.ಮೀ ವ್ಯಾಪ್ತಿ.
ಅಗ್ನಿ II: 2000 ಕಿ.ಮೀ ಗಿಂತ ಹೆಚ್ಚಿನ ವ್ಯಾಪ್ತಿ.
ಅಗ್ನಿ III: 2,500 ಕಿ.ಮೀ ಗಿಂತ ಹೆಚ್ಚಿನ ವ್ಯಾಪ್ತಿ.
ಅಗ್ನಿ IV: 3,500 ಕಿ.ಮೀ ಗಿಂತ ಹೆಚ್ಚಿನ ವ್ಯಾಪ್ತಿಯನ್ನು ಹೊಂದಿದೆ ಮತ್ತು ಇದನ್ನು ರಸ್ತೆ-ಸಂಚಾರಿ ಉಡಾವಣಾ ವಾಹನದಿಂದ (Road-mobile launcher) ಉಡಾವಣೆ ಮಾಡಬಹುದು.
ಅಗ್ನಿ-V: ಅಗ್ನಿ ಸರಣಿಯಲ್ಲಿಯೇ ಅತ್ಯಂತ ಉದ್ದವಾದ, 5,000 ಕಿ.ಮೀ ಗಿಂತ ಹೆಚ್ಚಿನ ವ್ಯಾಪ್ತಿಯನ್ನು ಹೊಂದಿರುವ ಖಂಡಾಂತರ ಕ್ಷಿಪಣಿಯಾಗಿದೆ (ICBM).
ಸಮಗ್ರ ಮಾರ್ಗದರ್ಶಿತ ಕ್ಷಿಪಣಿ ಅಭಿವೃದ್ಧಿ ಕಾರ್ಯಕ್ರಮ (Integrated Guided Missile Development Programme – IGMDP):
ಪ್ರಾರಂಭಿಸಿದ್ದು: 1983.
ಪರಿಕಲ್ಪನೆ : 1980ರ ದಶಕದಲ್ಲಿ IGMDP ಯ ಪರಿಕಲ್ಪನೆಯನ್ನು ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಕೊಟ್ಟರು.
ಉದ್ದೇಶ: ಕ್ಷಿಪಣಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಸ್ವಾವಲಂಬನೆ ಸಾಧಿಸಲು ಅನುಕೂಲ ಮಾಡಿಕೊಡುವುದು.
ಜಲ ಜೀವನ್ ಮಿಷನ್ (JJM) ಯೋಜನೆಯಡಿ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಬರಬೇಕಿರುವ ಬಾಕಿ ಅನುದಾನವನ್ನು ತಕ್ಷಣ ಬಿಡುಗಡೆ ಮಾಡುವಂತೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಜಲ ಜೀವನ್ ಮಿಷನ್ (JJM) ಬಗ್ಗೆ :
ಪ್ರಾರಂಭವಾದ ವರ್ಷ: 2019.
ಉದ್ದೇಶ: ಗ್ರಾಮೀಣ ಭಾಗದ ಪ್ರತಿಯೊಂದು ಮನೆಗೂ ‘ಕಾರ್ಯನಿರ್ವಹಿಸುವ ನಲ್ಲಿಯ ಸಂಪರ್ಕ’ವನ್ನು (Functional Household Tap Connections – FHTC) ಒದಗಿಸುವುದು.
ಮಹತ್ವ: 2024ರ ವೇಳೆಗೆ ಎಲ್ಲಾ ಗ್ರಾಮೀಣ ಕುಟುಂಬಗಳಿಗೆ ಪ್ರತಿದಿನ ಪ್ರತಿ ವ್ಯಕ್ತಿಗೆ ತಲಾ 55 ಲೀಟರ್ನಷ್ಟು ಶುದ್ಧ ಕುಡಿಯುವ ನೀರನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳುವುದು ಇದರ ಪ್ರಮುಖ ಗುರಿಯಾಗಿತ್ತು. ಆದರೆ, ಯೋಜನೆಯ ಅನುಷ್ಠಾನದಲ್ಲಿ ಎದುರಾದ ಕೆಲವು ಸವಾಲುಗಳಿಂದಾಗಿ, ಈ ಗುರಿಯನ್ನು ತಲುಪುವ ಗಡುವನ್ನು ಇದೀಗ 2028ಕ್ಕೆ ವಿಸ್ತರಿಸಲಾಗಿದೆ.
ಅನುಷ್ಠಾನ ಸಚಿವಾಲಯ : ಕೇಂದ್ರ ಜಲಶಕ್ತಿ ಸಚಿವಾಲಯ.
ಹಣಕಾಸು ಸ್ವರೂಪ: ಇದೊಂದು ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.
ಕೆರಿಬಿಯನ್ ರಾಷ್ಟ್ರದೊಂದಿಗಿನ ಭಾರತದ ಬಾಂಧವ್ಯವನ್ನು ಬಲಪಡಿಸಲು ಮತ್ತು ಗಿರ್ಮಿತ್ಯಾ ಸಮುದಾಯದ ಪರಂಪರೆಯನ್ನು ಸಂರಕ್ಷಿಸುವ ಸಲುವಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಟ್ರಿನಿಡಾಡ್ ಮತ್ತು ಟೊಬಾಗೊ ದೇಶಗಳಿಗೆ ಭೇಟಿ ನೀಡಿದರು.
ಗಿರ್ಮಿತ್ಯಾ ಸಮುದಾಯದ ಬಗ್ಗೆ:
ಗಿರ್ಮಿತ್ಯಾ ಸಮುದಾಯವು 19ನೇ ಮತ್ತು 20ನೇ ಶತಮಾನದ ಆರಂಭದಲ್ಲಿ ತೋಟಗಾರಿಕಾ ಪ್ರದೇಶಗಳಲ್ಲಿ ಕೆಲಸ ಮಾಡಲು ಬ್ರಿಟಿಷ್ ಭಾರತದಿನಿಂದ ಒಪ್ಪಂದದ ಆಧಾರದ ಮೇಲೆ ಸಾಗಿಸಲ್ಪಟ್ಟ ವಲಸೆ ಕಾರ್ಮಿಕರಾಗಿದ್ದಾರೆ.
“ಗಿರ್ಮಿತ್ಯಾ” ಎಂಬ ಪದವು ಇಂಗ್ಲಿಷ್ನ “ಅಗ್ರಿಮೆಂಟ್” (ಒಪ್ಪಂದ) ಎಂಬ ಪದದಿಂದ ಬಂದಿದೆ, ವಸಾಹತುಶಾಹಿ ಅಧಿಕಾರವಧಿಯಲ್ಲಿ ಭಾರತೀಯ ಕಾರ್ಮಿಕರು ಸಹಿ ಮಾಡಿದ ಕರಾರು ಒಪ್ಪಂದಗಳನ್ನು ಇದು ಉಲ್ಲೇಖಿಸುತ್ತದೆ.
ಫಿಜಿ, ಮಾರಿಷಸ್, ಸೀಶೆಲ್ಸ್, ರಿಯೂನಿಯನ್, ದಕ್ಷಿಣ ಆಫ್ರಿಕಾ, ಟ್ರಿನಿಡಾಡ್ ಮತ್ತು ಟೊಬಾಗೊ, ಬ್ರಿಟಿಷ್ ಗಯಾನಾ (ಈಗಿನ ಗಯಾನಾ), ಸುರಿನಾಮೆ, ಮಲೇಷ್ಯಾ ಮತ್ತು ಕೀನ್ಯಾದಂತಹ ದೇಶಗಳಿಗೆ ಗಿರ್ಮಿತ್ಯಾರನ್ನು ಕಳುಹಿಸಲಾಗಿತ್ತು.
ಟ್ರಿನಿಡಾಡ್ ಮತ್ತು ಟೊಬಾಗೊ ದೇಶಗಳಿಗೆ ಜನರ ವಲಸೆ:
1845 ರಿಂದ 1917 ರ ನಡುವೆ ಭಾರತದಿಂದ ಟ್ರಿನಿಡಾಡ್ಗೆ ಅಂದಾಜು 143,000 ಒಪ್ಪಂದದ ಕಾರ್ಮಿಕರು ವಲಸೆ ಹೋದರು, ಈ ವಲಸಿಗರಲ್ಲಿ ಹೆಚ್ಚಿನವರು ಉತ್ತರ ಭಾರತ ಮತ್ತು ಬಿಹಾರದಿಂದ ಬಂದವರಾಗಿದ್ದರು.
ಅವರ ವಂಶಸ್ಥರು ಇಂದು ಟ್ರಿನಿಡಾಡ್ ಮತ್ತು ಟೊಬಾಗೊದ ಜನಸಂಖ್ಯೆಯ ಸುಮಾರು 40-45% ರಷ್ಟಿದ್ದಾರೆ, ಜೊತೆಗೆ ಆ ದೇಶದ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದಾರೆ.
ಕೆರಿಬ್ಬಿಯನ್ ಸಮುದಾಯ (CARICOM – The Caribbean Community):
ಇದು 1973 ರಲ್ಲಿ ರಚನೆಯಾಗಿದೆ.
ಇದು ಆರ್ಥಿಕ ಏಕೀಕರಣ ಮತ್ತು ವಿದೇಶಾಂಗ ನೀತಿಯ ಸಮನ್ವಯದ ಗುರಿಯನ್ನು ಹೊಂದಿರುವ 15-ಸದಸ್ಯ ರಾಷ್ಟ್ರಗಳ ನಿರ್ಣಾಯಕ ಪ್ರಾದೇಶಿಕ ಒಕ್ಕೂಟವಾಗಿದೆ.
15 ಸದಸ್ಯ ರಾಷ್ಟ್ರಗಳು: ಆಂಟಿಗುವಾ ಮತ್ತು ಬಾರ್ಬುಡಾ, ದ ಬಹಾಮಾಸ್, ಬಾರ್ಬಡೋಸ್, ಬೆಲೀಜ್, ಡೊಮಿನಿಕಾ, ಗ್ರೆನಡಾ, ಗಯಾನಾ, ಹೈತಿ, ಜಮೈಕಾ, ಮಾಂಟ್ಸೆರಾಟ್, ಸೇಂಟ್ ಕಿಟ್ಸ್ ಮತ್ತು ನೆವಿಸ್, ಸೇಂಟ್ ಲೂಸಿಯಾ, ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್, ಸುರಿನಾಮೆ, ಹಾಗೂ ಟ್ರಿನಿಡಾಡ್ ಮತ್ತು ಟೊಬಾಗೊ.
ಸ್ಥಳ: ಆಗ್ನೇಯ ಮೆಕ್ಸಿಕೋ ಕೊಲ್ಲಿ, ಮಧ್ಯ ಅಮೆರಿಕದ ಪೂರ್ವ ಹಾಗೂ ದಕ್ಷಿಣ ಅಮೆರಿಕದ ಉತ್ತರ.
ಭಾರತ-CARICOM ಸಂಬಂಧಗಳು:
2ನೇ ಶೃಂಗಸಭೆ, 2024: ಬಹುಪಕ್ಷೀಯ ಬಾಂಧವ್ಯವನ್ನು ವೃದ್ಧಿಸುವ ಸಲುವಾಗಿ ಗಯಾನಾದ ಜಾರ್ಜ್ಟೌನ್ನಲ್ಲಿ ಇದು ನಡೆಯಿತು.
ಸಹಕಾರದ ಕ್ಷೇತ್ರಗಳು: ಹವಾಮಾನ ಬದಲಾವಣೆ, ವಿಪತ್ತು ನಿರ್ವಹಣೆ, ನವೀಕರಿಸಬಹುದಾದ ಇಂಧನ ಮತ್ತು ಹಣಕಾಸು ತಂತ್ರಜ್ಞಾನ (UPI).
ಪ್ರಮುಖ ಉಪಕ್ರಮ: ಭಾರತದ UPI ಅನ್ನು ಅಳವಡಿಸಿಕೊಂಡ ಮೊದಲ ಕೆರಿಬಿಯನ್ ರಾಷ್ಟ್ರವಾಗಿ ಟ್ರಿನಿಡಾಡ್ ಮತ್ತು ಟೊಬಾಗೊ ಹೊರಹೊಮ್ಮಿದೆ.
ಹಿಂದೂ ಮಹಾಸಾಗರ ತೀರದ ರಾಷ್ಟ್ರಗಳ ಸಂಘಟನೆ (IORA)
ಅಂತರರಾಷ್ಟ್ರೀಯ
ಇತ್ತೀಚೆಗೆ ಸುದ್ದಿಯಲ್ಲಿದೆ:
“ರೂಪಾಂತರಗೊಳ್ಳುತ್ತಿರುವ ಜಗತ್ತಿನಲ್ಲಿ ಹಿಂದೂ ಮಹಾಸಾಗರ ಪ್ರದೇಶ” ಎಂಬ ಧ್ಯೇಯವಾಕ್ಯದ ಅಡಿಯಲ್ಲಿ 10ನೇ ಹಿಂದೂ ಮಹಾಸಾಗರ ಸಂವಾದ (IOD)ವು ಇತ್ತೀಚಿಗೆ ನವದೆಹಲಿಯಲ್ಲಿ ನಡೆಯಿತು.
ಹಿಂದೂ ಮಹಾಸಾಗರ ತೀರದ ರಾಷ್ಟ್ರಗಳ ಸಂಘಟನೆ (IORA)ಯ ಬಗ್ಗೆ:
ಇದು ಹಿಂದೂ ಮಹಾಸಾಗರದ ಗಡಿಯಲ್ಲಿರುವ 23 ಸದಸ್ಯ ರಾಷ್ಟ್ರಗಳ ನಡುವಿನ ಪ್ರಾದೇಶಿಕ ಸಹಕಾರಕ್ಕಾಗಿ ಇರುವ ಒಂದು ಅಂತರ-ಸರ್ಕಾರಿ ಸಂಸ್ಥೆಯಾಗಿದೆ.
ಸ್ಥಾಪನೆ: ಮಾರ್ಚ್ 7, 1997 (ಹಿಂದೆ IOR-ARC ಎಂದು ಕರೆಯಲಾಗುತ್ತಿತ್ತು).
ಸಚಿವಾಲಯ: ಎಬೆನ್ (Ebène), ಮಾರಿಷಸ್.
ಸದಸ್ಯತ್ವ: 23 ಸದಸ್ಯ ರಾಷ್ಟ್ರಗಳು ಮತ್ತು 12 ಸಂವಾದ ಪಾಲುದಾರರು (ಉದಾ: ಚೀನಾ, USA, ಜಪಾನ್).
ಅಧ್ಯಕ್ಷತೆ: ಶ್ರೀಲಂಕಾದಿಂದ ಅಧಿಕಾರ ವಹಿಸಿಕೊಂಡಿರುವ ಭಾರತವು, ಪ್ರಸ್ತುತ 2025-2027ರ ಅವಧಿಗೆ ಅಧ್ಯಕ್ಷ ಸ್ಥಾನದಲ್ಲಿದೆ.
ಮೂಲ: ಸಾಮಾಜಿಕ-ಆರ್ಥಿಕ ಸಹಕಾರವನ್ನು ಪ್ರತಿಪಾದಿಸಿದ ನೆಲ್ಸನ್ ಮಂಡೇಲಾ ಅವರ 1995ರ ಭಾರತ ಭೇಟಿಯಿಂದ ಇದು ಪ್ರೇರಿತವಾಗಿದೆ.
‘ಪ್ಯಾನ್-ಐಐಟಿ ಬೆಂಗಳೂರು ಶೃಂಗಸಭೆ 2026’, ಮೇ 16, 2026 ರಂದು ಬೆಂಗಳೂರಿನ ತಾಜ್ ಯಶವಂತಪುರದಲ್ಲಿ ಯಶಸ್ವಿಯಾಗಿ ಜರುಗಿತು.
ಈ ಶೃಂಗಸಭೆಯ ಕುರಿತು ವಿವರಗಳು:
ಆಯೋಜಕರು: ಕರ್ನಾಟಕ ಸರ್ಕಾರ ಮತ್ತು ಪ್ಯಾನ್-ಐಐಟಿ ಅಲುಮ್ನಿ ಇಂಡಿಯಾ ಅಸೋಸಿಯೇಷನ್ ಜಂಟಿಯಾಗಿ ಇದನ್ನು ಆಯೋಜಿಸಿದ್ದವು.
ಧ್ಯೇಯವಾಕ್ಯ: ಈ ಶೃಂಗಸಭೆಯು ಸಂಪೂರ್ಣವಾಗಿ “ತಂತ್ರಜ್ಞಾನ ಸಾರ್ವಭೌಮತ್ವ” (Technology Sovereignty) ಎಂಬ ವಿಷಯದ ಮೇಲೆ ಕೇಂದ್ರೀಕೃತವಾಗಿತ್ತು.
ಕಾರ್ಯಾದೇಶ: ರಾಷ್ಟ್ರೀಯ ಸ್ವಾವಲಂಬನೆ ಮತ್ತು ಡೀಪ್-ಟೆಕ್ ನಾವೀನ್ಯತೆಯನ್ನು ಬೆಳೆಸುವುದು.
ಪ್ರಮುಖ ಆದ್ಯತಾ ಕ್ಷೇತ್ರಗಳು: ಕೃತಕ ಬುದ್ಧಿಮತ್ತೆ (AI), ಡೀಪ್-ಟೆಕ್, ಸೆಮಿಕಂಡಕ್ಟರ್ಗಳು, ರಕ್ಷಣಾ ವಲಯ, ಇಂಧನ, ಸಾರಿಗೆ ಮತ್ತು ಆರೋಗ್ಯ ರಕ್ಷಣೆಯಂತಹ ಕ್ಷೇತ್ರಗಳ ಕುರಿತಾದ ವಿಶೇಷ ಸ್ವತಂತ್ರ ಅಧಿವೇಶನಗಳನ್ನು ಇದು ಒಳಗೊಂಡಿತ್ತು.
ಬೃಹತ್ ಹ್ಯಾಕಥಾನ್: ರಾಜ್ಯ ಸರ್ಕಾರವು ಒದಗಿಸಿದ ನೈಜ-ಪ್ರಪಂಚದ ‘ಡಿಜಿಟಲ್ ಆಡಳಿತ’ದ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ, 12,000 ಕ್ಕೂ ಹೆಚ್ಚು ಸ್ಪರ್ಧಿಗಳನ್ನು ಒಳಗೊಂಡ ಬೃಹತ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಪಿಚ್-ಎ-ಥಾನ್ (Pitch-a-Thon): ಅತ್ಯುತ್ತಮ ಸಾಮರ್ಥ್ಯ ಹೊಂದಿರುವ ಆಯ್ದ ನವೋದ್ಯಮಗಳಿಗೆ ತಮ್ಮ ಮುಂದಿನ ಬೆಳವಣಿಗೆಗೆ ಅಗತ್ಯವಿರುವ ಬಂಡವಾಳವನ್ನು ಪಡೆಯಲು, 200 ಕ್ಕೂ ಹೆಚ್ಚು ಸಾಹಸೋದ್ಯಮ ಬಂಡವಾಳಗಾರರೊಂದಿಗೆ ನೇರ ಸಂಪರ್ಕ ಕಲ್ಪಿಸುವ ವೇದಿಕೆಯನ್ನು ಇದು ನಿರ್ಮಿಸಿಕೊಟ್ಟಿತು.
ಕಬ್ಬು ಬೆಳೆಗೆ : ನ್ಯಾಯಯುತ ಮತ್ತು ಲಾಭದಾಯಕ ಬೆಲೆ (FRP), 2026-27
ಅರ್ಥವ್ಯವಸ್ಥೆ
ಇತ್ತೀಚೆಗೆ ಸುದ್ದಿಯಲ್ಲಿದೆ:
ಪ್ರಧಾನಮಂತ್ರಿಯವರ ನೇತೃತ್ವದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು (CCEA), 2026-27ನೇ ಹಂಗಾಮಿಗೆ ಕಬ್ಬಿನ ಬೆಳೆಗೆ ‘ನ್ಯಾಯಯುತ ಮತ್ತು ಲಾಭದಾಯಕ ಬೆಲೆ’ಯನ್ನು (Fair and Remunerative Price – FRP) ಶೇ. 10.25ರಷ್ಟು ಇಳುವರಿ ದರಕ್ಕೆ ಪ್ರತಿ ಕ್ವಿಂಟಾಲ್ಗೆ ₹365 ರಂತೆ ನಿಗದಿಪಡಿಸಲು ಒಪ್ಪಿಗೆ ನೀಡಿದೆ.
ಕಬ್ಬಿನ ಬೆಳವಣಿಗೆಗೆ ಬೇಕಾದ ಸೂಕ್ತ ಪರಿಸ್ಥಿತಿಗಳು:
ಬೆಳೆಯ ಅವಧಿ: ಭೌಗೋಳಿಕ ಪರಿಸ್ಥಿತಿಗಳಿಗೆ ಅನುಗುಣವಾಗಿ ಕಬ್ಬು ಪಕ್ವವಾಗಿ ಕಟಾವಿಗೆ ಬರಲು 10 ರಿಂದ 15 ತಿಂಗಳುಗಳು ಹಾಗೂ ಕೆಲವು ಕಡೆ 18 ತಿಂಗಳುಗಳವರೆಗೂ ಸಮಯ ತೆಗೆದುಕೊಳ್ಳುತ್ತದೆ.
ಮಣ್ಣು: ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿರುವ ಯಾವುದೇ ಮಣ್ಣಿನಲ್ಲಿ ಕಬ್ಬು ಬೆಳೆಯಬಲ್ಲದು. ಉದಾಹರಣೆಗೆ: ಗೋಡು ಮಣ್ಣು (ಲೋಮಿ ಮಣ್ಣು), ಜೇಡಿಮಣ್ಣು (Clayey), ಕಪ್ಪು ಹತ್ತಿ ಮಣ್ಣು, ಕಂದು ಅಥವಾ ಕೆಂಪು ಮಣ್ಣು ಮತ್ತು ಜಂಬಿಟ್ಟಿಗೆ (ಲ್ಯಾಟರೈಟ್) ಮಣ್ಣು.
ಮಣ್ಣಿನಲ್ಲಿ ಸಾರಜನಕ, ಕ್ಯಾಲ್ಸಿಯಂ ಮತ್ತು ರಂಜಕದ ಅಂಶಗಳು ಹೇರಳವಾಗಿರಬೇಕು.
ಹವಾಮಾನ: ಕಬ್ಬಿಗೆ ಉಷ್ಣ ಮತ್ತು ಆರ್ದ್ರತೆಯಿಂದ ಕೂಡಿದ ವಾತಾವರಣದ ಅಗತ್ಯವಿರುತ್ತದೆ. 21-27°C ನಷ್ಟು ತಾಪಮಾನ ಮತ್ತು 75-150 ಸೆಂ.ಮೀ. ನಷ್ಟು ಮಳೆ ಕಬ್ಬಿನ ಬೆಳೆಗೆ ಹೆಚ್ಚು ಸೂಕ್ತವಾಗಿದೆ.
ಕಬ್ಬಿನ ಉಪಯೋಗಗಳು:
ಇದು ಬಿದಿರು (Bamboo) ಸಸ್ಯ ಕುಟುಂಬಕ್ಕೆ ಸೇರಿದ್ದು, ಭಾರತದ ಮೂಲ ಬೆಳೆಯಾಗಿದೆ.
ಭಾರತದಲ್ಲಿ ಬೆಳೆಯುವ ಒಟ್ಟು ಕಬ್ಬಿನಲ್ಲಿ ಮೂರನೇ ಎರಡರಷ್ಟು (2/3) ಭಾಗವನ್ನು ಬೆಲ್ಲ ಮತ್ತು ಖಂಡಸಾರಿ ತಯಾರಿಸಲು ಬಳಸಲಾಗುತ್ತದೆ. ಉಳಿದ ಮೂರನೇ ಒಂದರಷ್ಟು (1/3) ಭಾಗ ಮಾತ್ರ ಸಕ್ಕರೆ ಕಾರ್ಖಾನೆಗಳಿಗೆ ಪೂರೈಕೆಯಾಗುತ್ತದೆ.
ಇದು ಮದ್ಯ (ಆಲ್ಕೋಹಾಲ್) ತಯಾರಿಕೆಗೆ ಅಗತ್ಯವಾದ ಕಚ್ಚಾ ವಸ್ತುವನ್ನೂ ಒದಗಿಸುತ್ತದೆ.
ಕಬ್ಬಿನ ಸಿಪ್ಪೆ ಅಥವಾ ಜಲ್ಲೆಯನ್ನು (ಬಗಾಸ್) ಕಾಗದದ ತಯಾರಿಕೆಯಲ್ಲಿ ಅತ್ಯಂತ ಉಪಯುಕ್ತವಾಗಿ ಬಳಸಲಾಗುತ್ತದೆ.
ಎಥೆನಾಲ್ ಉತ್ಪಾದನೆ: ಎಥೆನಾಲ್ ಪೆಟ್ರೋಲಿಯಂ ಉತ್ಪನ್ನಗಳಿಗೆ ಮತ್ತು ಇತರ ಅನೇಕ ರಾಸಾಯನಿಕ ವಸ್ತುಗಳಿಗೆ ಸಮರ್ಥ ಪರ್ಯಾಯವಾಗಿದೆ. ಅಮೆರಿಕಾ (USA) ಮತ್ತು ಬ್ರೆಜಿಲ್ ನಂತರ ಭಾರತವು ಪ್ರಪಂಚದಲ್ಲಿಯೇ ಎಥೆನಾಲ್ ಉತ್ಪಾದಿಸುವ 3ನೇ ಅತಿದೊಡ್ಡ ರಾಷ್ಟ್ರವಾಗಿದೆ.
ಸರ್ಕಾರದ ಉಪಕ್ರಮಗಳು:
ಕಬ್ಬಿನ ಬೆಳೆಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (FRP – Fair and Remunerative Price)
ಶಿಫಾರಸು ಮಾಡುವವರು: ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗ (Commission for Agricultural Costs and Prices – CACP).
ಉದ್ದೇಶ: ಸಕ್ಕರೆ ಕಾರ್ಖಾನೆಗಳು ಲಾಭ ಗಳಿಸುತ್ತಿರಲಿ ಅಥವಾ ಇಲ್ಲದಿರಲಿ, ರೈತರಿಗೆ ಅವರ ಶ್ರಮ ಮತ್ತು ನಷ್ಟದ ಅಪಾಯದ ಆಧಾರದ ಮೇಲೆ ಖಚಿತವಾದ ಆದಾಯವನ್ನು ಖಾತರಿಪಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
ಭಾರತದಲ್ಲಿ ಸಕ್ಕರೆ ಉತ್ಪಾದನೆ:
2021-2022ರಲ್ಲಿ ಬ್ರೆಜಿಲ್ ದೇಶವನ್ನು ಹಿಂದಿಕ್ಕಿದ ಭಾರತವು, ಪ್ರಪಂಚದ ಅತಿದೊಡ್ಡ ಸಕ್ಕರೆ ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಿದೆ.
ಭಾರತದಲ್ಲಿ ಸಕ್ಕರೆ ಕೈಗಾರಿಕೆಗಳ ಹಂಚಿಕೆ: ಭಾರತದಲ್ಲಿ ಸಕ್ಕರೆ ಉದ್ಯಮವು ಪ್ರಮುಖವಾಗಿ ಎರಡು ದೊಡ್ಡ ಉತ್ಪಾದನಾ ವಲಯಗಳಲ್ಲಿ ಹಂಚಿಕೆಯಾಗಿದೆ:
ಉತ್ತರ ಭಾರತದಲ್ಲಿ: ಉತ್ತರ ಪ್ರದೇಶ, ಬಿಹಾರ, ಹರಿಯಾಣ ಮತ್ತು ಪಂಜಾಬ್.
ದಕ್ಷಿಣ ಭಾರತದಲ್ಲಿ: ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶ.
ಜಮೈಕಾ (Jamaica)
ಭೂಗೋಳ
ಇತ್ತೀಚೆಗೆ ಸುದ್ದಿಯಲ್ಲಿದೆ:
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರ ಅಧಿಕೃತ ಭೇಟಿಯ ಸಂದರ್ಭದಲ್ಲಿ, ಭಾರತ ಮತ್ತು ಜಮೈಕಾ ದೇಶಗಳು ಆರೋಗ್ಯ ಸಹಕಾರ, ಸೌರಶಕ್ತಿ ಅಭಿವೃದ್ಧಿ ಮತ್ತು ಪ್ರಸಾರ ವಲಯಗಳಿಗೆ ಸಂಬಂಧಿಸಿದಂತೆ ಮೂರು ‘ತಿಳುವಳಿಕಾ ಒಪ್ಪಂದ’ಗಳಿಗೆ (MoUs) ಸಹಿ ಹಾಕಿವೆ.
ಜಮೈಕಾ ದ್ವೀಪದ ಬಗ್ಗೆ:
ಜಮೈಕಾ ಕೆರಿಬಿಯನ್ ಸಮುದ್ರದಲ್ಲಿರುವ ಪರ್ವತಗಳಿಂದ ಕೂಡಿದ ಒಂದು ದ್ವೀಪ ರಾಷ್ಟ್ರವಾಗಿದ್ದು, ಇದು ಕ್ಯೂಬಾ (Cuba) ದೇಶದ ದಕ್ಷಿಣ ಭಾಗದಲ್ಲಿ ನೆಲೆಗೊಂಡಿದೆ.
ಇದು ಕ್ಯೂಬಾ, ಹಿಸ್ಪಾನಿಯೋಲಾ, ಹೈತಿ, ಡೊಮಿನಿಕನ್ ಗಣರಾಜ್ಯ ಮತ್ತು ಪೋರ್ಟೊ ರಿಕೊ ದ್ವೀಪಗಳೊಂದಿಗೆ, ‘ಗ್ರೇಟರ್ ಆಂಟಿಲೀಸ್ ದ್ವೀಪಗಳು’ ಎಂದು ಕರೆಯಲ್ಪಡುವ ಕೆರಿಬಿಯನ್ ದ್ವೀಪ ಸಮೂಹದ ಒಂದು ಪ್ರಮುಖ ಭಾಗವಾಗಿದೆ.
ಗಾತ್ರ: ವಿಸ್ತೀರ್ಣದಲ್ಲಿ ಕ್ಯೂಬಾ ಮತ್ತು ಹಿಸ್ಪಾನಿಯೋಲಾ ದ್ವೀಪಗಳ ನಂತರ, ಇದು ಕೆರಿಬಿಯನ್ ಸಮುದ್ರದ ಮೂರನೇ ಅತಿದೊಡ್ಡ ದ್ವೀಪ ಅಥವಾ ದ್ವೀಪ ರಾಷ್ಟವಾಗಿದೆ.
ಜಮೈಕಾ ರಾಷ್ಟ್ರವು 1962 ರಲ್ಲಿ ಯುನೈಟೆಡ್ ಕಿಂಗ್ಡಮ್ನಿಂದ (UK – ಬ್ರಿಟನ್) ಸ್ವಾತಂತ್ರ್ಯ ಪಡೆಯಿತು. ಆದರೂ, ಇದು ಈಗಲೂ ‘ಕಾಮನ್ವೆಲ್ತ್’ ಒಕ್ಕೂಟದ ಸದಸ್ಯ ರಾಷ್ಟ್ರವಾಗಿ ಮುಂದುವರಿದಿದೆ.
ಭೌಗೋಳಿಕ ರಚನೆ: ಸುಮಾರು 25 ದಶಲಕ್ಷ (ಮಿಲಿಯನ್) ವರ್ಷಗಳ ಹಿಂದೆ ‘ಉತ್ತರ ಅಮೆರಿಕ’ ಮತ್ತು ‘ಕೆರಿಬಿಯನ್’ ಭೂಫಲಕಗಳು (Tectonic plates) ಪರಸ್ಪರ ಡಿಕ್ಕಿ ಹೊಡೆದಾಗ (ಮುಖಾಮುಖಿಯಾದಾಗ) ಈ ಜಮೈಕಾ ದ್ವೀಪವು ರೂಪುಗೊಂಡಿತು.
ಪ್ರಮುಖ ಪರ್ವತ ಶ್ರೇಣಿಗಳು: ನೀಲಿ ಪರ್ವತಗಳು (ಬ್ಲೂ ಮೌಂಟೇನ್ಸ್), ಜಾನ್ ಕ್ರೋ ಮೌಂಟೇನ್ಸ್, ಡಾನ್ ಫಿಗ್ಯುರೊ ಮೌಂಟೇನ್ಸ್ ಮತ್ತು ಕಾಕ್ಪಿಟ್ ಕಂಟ್ರಿ.
ಪ್ರಮುಖ ನದಿಗಳು: ಬ್ಲ್ಯಾಕ್ ರಿವರ್, ರಿಯೊ ಕೋಬ್ರೆ ಮತ್ತು ರಿಯೊ ಗ್ರಾಂಡೆ.
ಪುಲಿಟ್ಜರ್ ಪ್ರಶಸ್ತಿ, 2026 (Pulitzer Prize 2026)
ಪ್ರಶಸ್ತಿಗಳು
ಇತ್ತೀಚೆಗೆ ಸುದ್ದಿಯಲ್ಲಿದೆ:
ಭಾರತೀಯ ಪತ್ರಕರ್ತರಾದ ಆನಂದ್ ಆರ್.ಕೆ. ಮತ್ತು ಸುಪರ್ಣಾ ಶರ್ಮಾ ಅವರು ನತಾಲಿಯ ಒಬಿಕೊ ಪಿಯರ್ಸನ್ ಅವರೊಂದಿಗೆ ಜಂಟಿಯಾಗಿ ಪ್ರತಿಷ್ಠಿತ ‘ಪುಲಿಟ್ಜೆರ್ ಪ್ರಶಸ್ತಿ 2026’ ಅನ್ನು ಪಡೆದು ಕೊಂಡಿದ್ದಾರೆ.
ಪುಲಿಟ್ಜರ್ ಪ್ರಶಸ್ತಿಯ ಬಗ್ಗೆ:
ಹಿನ್ನೆಲೆ: ಖ್ಯಾತ ಪತ್ರಿಕಾ ಪ್ರಕಾಶಕರಾಗಿದ್ದ ಜೋಸೆಫ್ ಪುಲಿಟ್ಜರ್ ಅವರ ಸ್ಮರಣಾರ್ಥ ಈ ಪ್ರಶಸ್ತಿಯನ್ನು 1917 ರಲ್ಲಿ ಸ್ಥಾಪಿಸಲಾಯಿತು.
ನಿರ್ವಹಣೆ ಮತ್ತು ಪ್ರದಾನ: ಅಮೆರಿಕಾದ ಪ್ರತಿಷ್ಠಿತ ‘ಕೊಲಂಬಿಯಾ ವಿಶ್ವವಿದ್ಯಾಲಯ’.
ಪ್ರಶಸ್ತಿಯ ಸ್ವರೂಪ: ಒಟ್ಟು 23 ವಿಭಾಗಗಳಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಪೈಕಿ 22 ವಿಭಾಗಗಳ ವಿಜೇತರಿಗೆ ಪ್ರಮಾಣಪತ್ರ ಹಾಗೂ $ 15,000 ಅಮೆರಿಕನ್ ಡಾಲರ್ ನಗದು ಬಹುಮಾನವನ್ನು ನೀಡಲಾಗುತ್ತದೆ. ಆದರೆ, ‘ಸಾರ್ವಜನಿಕ ಸೇವೆ’ ವಿಭಾಗದ ವಿಜೇತರಿಗೆ ಮಾತ್ರ ವಿಶೇಷವಾಗಿ ಚಿನ್ನದ ಪದಕವನ್ನು ನೀಡಿ ಗೌರವಿಸಲಾಗುತ್ತದೆ.
ಕ್ಷೇತ್ರಗಳು: ಇದು ಪತ್ರಿಕೋದ್ಯಮ, ಸಾಹಿತ್ಯ ಮತ್ತು ಸಂಗೀತ ಸಂಯೋಜನೆ ಕ್ಷೇತ್ರಗಳಲ್ಲಿನ ಅಸಾಧಾರಣ ಸಾಧನೆಯನ್ನು ಗುರುತಿಸಿ ನೀಡುವ ಅತ್ಯುನ್ನತ ಪುರಸ್ಕಾರವಾಗಿದೆ.
ಈ ಹಿಂದಿನ ಪ್ರಮುಖ ಭಾರತೀಯ ವಿಜೇತರು:
ಗೋಬಿಂದ್ ಬಿಹಾರಿ ಲಾಲ್: ಇವರು 1937 ರಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಈ ಪ್ರಶಸ್ತಿಯನ್ನು ಪಡೆದ ಮೊಟ್ಟಮೊದಲ ಭಾರತೀಯರಾಗಿದ್ದಾರೆ. ಇವರು ಅಮೆರಿಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ‘ಗದರ್ ಪಕ್ಷ’ದ ಸಕ್ರಿಯ ಸದಸ್ಯರಾಗಿದ್ದರು.
ಸಿದ್ಧಾರ್ಥ ಮುಖರ್ಜಿ: ಕ್ಯಾನ್ಸರ್ ರೋಗದ ಕುರಿತು ಇವರು ರಚಿಸಿದ “ದಿ ಎಂಪರರ್ ಆಫ್ ಆಲ್ ಮಲಾಡೀಸ್: ಎ ಬಯೋಗ್ರಫಿ ಆಫ್ ಕ್ಯಾನ್ಸರ್” (The Emperor of All Maladies: A Biography of Cancer) ಎಂಬ ಕೃತಿಗಾಗಿ, ಇವರಿಗೆ ‘ಸಾಮಾನ್ಯ ಕಾಲ್ಪನಿಕವಲ್ಲದ ಸಾಹಿತ್ಯ’ (General Non-Fiction) ವಿಭಾಗದಲ್ಲಿ ಈ ಪ್ರಶಸ್ತಿ ಲಭಿಸಿದೆ.
ದಾನಿಶ್ ಸಿದ್ದಿಕಿ: ಪ್ರಖ್ಯಾತ ಛಾಯಾಚಿತ್ರ ಪತ್ರಕರ್ತರಾಗಿದ್ದ ಇವರು ಎರಡು ಬಾರಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2018 ರಲ್ಲಿ ರೋಹಿಂಗ್ಯಾ ಬಿಕ್ಕಟ್ಟಿನ ವರದಿಗಾಗಿ ಮತ್ತು 2020 ರಲ್ಲಿ ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕವು ಸೃಷ್ಟಿಸಿದ ಭೀಕರ ಮಾನವ ದುರಂತವನ್ನು ಸೆರೆಹಿಡಿದ ಅವರ ಅತ್ಯುತ್ತಮ ಛಾಯಾಚಿತ್ರಗಳಿಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿತ್ತು.
ಭಾರತದಾದ್ಯಂತ ಮಾರುಕಟ್ಟೆ-ಆಧಾರಿತ ಮತ್ತು ಸುಧಾರಣಾ-ಚಾಲಿತ ನಗರ ಪರಿವರ್ತನೆಯನ್ನು ಉತ್ತೇಜಿಸಲು, ಕೇಂದ್ರ ಸರ್ಕಾರದ ‘ನಗರ ಸವಾಲು ನಿಧಿ’ (UCF) ಯೋಜನೆಯಡಿ ₹1 ಲಕ್ಷ ಕೋಟಿ ಹಣಕಾಸಿನ ನೆರವನ್ನು ಮೀಸಲಿಡಲಾಗಿದೆ.
ಈ ರಾಷ್ಟ್ರವ್ಯಾಪಿ ನಿಧಿಯಿಂದ ಕರ್ನಾಟಕವು ಅಂದಾಜು ₹5,000 ಕೋಟಿಯಿಂದ ₹5,500 ಕೋಟಿಗಳವರೆಗಿನ ಮೂಲ ಹಂಚಿಕೆಯನ್ನು ನಿರೀಕ್ಷಿಸುತ್ತಿದೆ.
ನಗರ ಸವಾಲು ನಿಧಿ (UCF)ಯ ಬಗ್ಗೆ:
ಉದ್ದೇಶ: ಇದು ಸಾಂಪ್ರದಾಯಿಕ ಅನುದಾನಗಳ ವ್ಯವಸ್ಥೆಯಿಂದ ಹೊರಬಂದು, ಮಾರುಕಟ್ಟೆ-ಸಂಯೋಜಿತ ಹಾಗೂ ಸುಧಾರಣಾ-ಚಾಲಿತ ಮೂಲಸೌಕರ್ಯಗಳಿಗೆ ಹಣಕಾಸು ಒದಗಿಸುವ ಮೂಲಕ ಭಾರತದ ನಗರಗಳ ಸ್ವರೂಪವನ್ನು ಸಮಗ್ರವಾಗಿ ಪರಿವರ್ತಿಸುವ ಗುರಿ ಹೊಂದಿರುವ ಪ್ರಮುಖ ಯೋಜನೆಯಾಗಿದೆ.
ಹಣಕಾಸು ಸ್ವರೂಪ: ಇದು ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.
ಅನುಷ್ಠಾನ ಸಚಿವಾಲಯ: ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA).
ಕಾಲಮಿತಿ: 2025-26 ರಿಂದ 2030-31ರ ಹಣಕಾಸು ವರ್ಷದವರೆಗೆ.
ಮೂರು ಪ್ರಮುಖ ಕಾರ್ಯತಂತ್ರದ ವಿಭಾಗಗಳು:
ಬೆಳವಣಿಗೆಯ ಕೇಂದ್ರಗಳಾಗಿ ನಗರಗಳು: ಉನ್ನತ ಮಟ್ಟದ ಸಾರಿಗೆ-ಆಧಾರಿತ ಅಭಿವೃದ್ಧಿ (TOD), ಆರ್ಥಿಕ ಕಾರಿಡಾರ್ಗಳು ಮತ್ತು ಮೊದಲಿನಿಂದಲೇ ವ್ಯವಸ್ಥಿತವಾಗಿ ಯೋಜಿತ ನೂತನ ನಗರಗಳ (Greenfield Townships) ನಿರ್ಮಾಣ.
ಸೃಜನಾತ್ಮಕವಾಗಿ ಮರು-ಅಭಿವೃದ್ಧಿ: ದಟ್ಟಣೆಯಿಂದ ಕೂಡಿದ ನಗರದ ಪ್ರಮುಖ ಪ್ರದೇಶಗಳನ್ನು ಮರು-ನವೀಕರಿಸುವುದು, ಪಾರಂಪರಿಕ ತಾಣಗಳ ಅಭಿವೃದ್ಧಿ ಮತ್ತು ಬಳಕೆಯಾಗದ ಕೈಗಾರಿಕಾ ಪ್ರದೇಶಗಳನ್ನು ಪುನರುಜ್ಜೀವನಗೊಳಿಸುವುದು.
ನೀರು ಮತ್ತು ನೈರ್ಮಲ್ಯ: ಘನತ್ಯಾಜ್ಯ ನಿರ್ವಹಣೆಯನ್ನು ಆಧುನೀಕರಿಸುವುದು, ಹಳೆಯ ತ್ಯಾಜ್ಯದ ವಿಲೇವಾರಿ ಮತ್ತು ಶುದ್ಧ ನೀರು ಸರಬರಾಜು ಜಾಲಗಳ ನಿರ್ಮಾಣ.
ಕರ್ನಾಟಕದಲ್ಲಿ ಶಿಶು ಮರಣಕ್ಕೆ (infant mortality) ಅತಿದೊಡ್ಡ ಏಕೈಕ ಕಾರಣವಾಗಿ ನ್ಯುಮೋನಿಯಾ ಮುಂದುವರೆದಿದೆ.
‘ನ್ಯುಮೋನಿಯಾ’ ಬಗ್ಗೆ:
ಇದು ಶ್ವಾಸಕೋಶದ ವಾಯುಕೋಶಗಳಲ್ಲಿ (ಅಲ್ವಿಯೋಲೈಗಳು) ಉರಿಯೂತವನ್ನು ಉಂಟುಮಾಡುವ ತೀವ್ರವಾದ ಉಸಿರಾಟದ ಸೋಂಕಾಗಿದೆ.
ಕಾರ್ಯವಿಧಾನ: ಅಲ್ವಿಯೋಲೈಗಳು ದ್ರವ ಅಥವಾ ಕೀವುಗಳಿಂದ ತುಂಬಿಕೊಳ್ಳುತ್ತವೆ, ಇದು ಆಮ್ಲಜನಕದ ಸೇವನೆಯನ್ನು ನಿರ್ಬಂಧಿಸುತ್ತದೆ.
ಹರಡುವಿಕೆ: ವಾಯುಗಾಮಿ ಹನಿಗಳು (Airborne droplets), ಮೇಲ್ಮೈ ಸಂಪರ್ಕ, ಅಥವಾ ಹೆರಿಗೆಯ ಸಮಯದಲ್ಲಿ ರಕ್ತದ ಮೂಲಕ ಇದು ಹರಡುತ್ತದೆ.
ದುರ್ಬಲ ಗುಂಪುಗಳು:5 ವರ್ಷದೊಳಗಿನ ಮಕ್ಕಳು ಮತ್ತು 65 ವರ್ಷ ಮೇಲ್ಪಟ್ಟ ವಯಸ್ಕರು ಈ ಸೋಂಕಿಗೆ ಸುಲಭವಾಗಿ ತುತ್ತಾಗುತ್ತಾರೆ.
ಕಾರಣವಾಗುವ ವಾಹಕಗಳು
ಬ್ಯಾಕ್ಟೀರಿಯಾ: ಸ್ಟ್ರೆಪ್ಟೊಕಾಕಸ್ ನ್ಯುಮೋನಿಯೇ (Streptococcus pneumoniae – ಅತ್ಯಂತ ಸಾಮಾನ್ಯ) ಮತ್ತು ಹಿಮೋಫಿಲಸ್ ಇನ್ಫ್ಲುಯೆಂಜಾ ಟೈಪ್ ಬಿ (Hib) ಬ್ಯಾಕ್ಟೀರಿಯಾಗಳು ಇದಕ್ಕೆ ಕಾರಣವಾಗಿವೆ.
ವೈರಸ್ಗಳು: ಆರ್ಎಸ್ವಿ (RSV), ಇನ್ಫ್ಲುಯೆಂಜಾ ಮತ್ತು ಕರೋನವೈರಸ್ಗಳು ಈ ರೋಗವನ್ನು ಉಂಟುಮಾಡುತ್ತವೆ.
ಶಿಲೀಂಧ್ರಗಳು: ನ್ಯುಮೋಸಿಸ್ಟಿಸ್ ಜಿರೋವೆಸಿ (Pneumocystis jirovecii) ಶಿಲೀಂಧ್ರವು ಎಚ್ಐವಿ (HIV) ಅಥವಾ ರೋಗನಿರೋಧಕ ಶಕ್ತಿ ಕುಂಠಿತಗೊಂಡ ರೋಗಿಗಳನ್ನು ಗುರಿಯಾಗಿಸುತ್ತದೆ.
ವಿಲಕ್ಷಣ : ಮೈಕೋಪ್ಲಾಸ್ಮಾ ನ್ಯುಮೋನಿಯೇ (Mycoplasma pneumoniae) ಸೌಮ್ಯವಾದ “ವಾಕಿಂಗ್ ನ್ಯುಮೋನಿಯಾ” ವನ್ನು ಉಂಟುಮಾಡುತ್ತದೆ.
ಭಾರತದ ಯೋಜನೆಗಳು ಮತ್ತು ಉಪಕ್ರಮಗಳು:
PCV ಲಸಿಕೆ: ಇದನ್ನು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ (Universal Immunization Programme – UIP) ಅಡಿಯಲ್ಲಿ ಜಾರಿಗೊಳಿಸಲಾಗಿದೆ. ಇದು ನ್ಯುಮೋನಿಯಾ, ಮೆನಿಂಜೈಟಿಸ್ ಮತ್ತು ಸೆಪ್ಸಿಸ್ ವಿರುದ್ಧ ರಕ್ಷಣೆ ಒದಗಿಸುತ್ತದೆ.
ಸಾನ್ಸ್ (SAANS) ಅಭಿಯಾನ: ‘ನ್ಯುಮೋನಿಯಾವನ್ನು ಯಶಸ್ವಿಯಾಗಿ ಹತ್ತಿಕ್ಕಲು ಸಾಮಾಜಿಕ ಜಾಗೃತಿ ಮತ್ತು ಕ್ರಮ’ (SAANS – Social Awareness and Action to Neutralise Pneumonia Successfully) ಎನ್ನುವುದು ಇದರ ವಿಸ್ತೃತ ರೂಪವಾಗಿದೆ. ಇದು 5 ವರ್ಷದೊಳಗಿನ ಮಕ್ಕಳಲ್ಲಿ ರೋಗವನ್ನು ಆರಂಭಿಕ ಹಂತದಲ್ಲೇ ಗುರುತಿಸಲು ಪ್ರೇರೇಪಿಸುತ್ತದೆ.
IAPPD: ಭಾರತದಲ್ಲಿ 5 ವರ್ಷದೊಳಗಿನ ಮಕ್ಕಳ ಸಾವಿಗೆ ಎರಡು ಪ್ರಮುಖ ಕಾರಣಗಳಾದ ನ್ಯುಮೋನಿಯಾ ಮತ್ತು ಅತಿಸಾರವನ್ನು ಗುರಿಯಾಗಿಸಿಕೊಂಡಿರುವ ಸಮಗ್ರ ಕಾರ್ಯತಂತ್ರ ಇದಾಗಿದೆ.
ಜಾಗತಿಕ ಚೌಕಟ್ಟುಗಳು
GAPPD: ಪ್ರತಿ 1,000 ಜೀವಂತ ಜನನಗಳಿಗೆ 3 ಕ್ಕಿಂತ ಕಡಿಮೆ ಮಕ್ಕಳ ನ್ಯುಮೋನಿಯಾ ಸಾವುಗಳನ್ನು ಹೊಂದುವ ಗುರಿಯನ್ನು ಹೊಂದಿರುವ WHO/UNICEF ಯೋಜನೆಯಾಗಿದೆ.
ವಿಶ್ವ ನ್ಯುಮೋನಿಯಾ ದಿನ: ಪ್ರತಿ ವರ್ಷ ನವೆಂಬರ್ 12 ರಂದು ಈ ದಿನವನ್ನು ಆಚರಿಸಲಾಗುತ್ತದೆ.