ವರ್ಗ: National and International Current Affairs Kannada

  • ಹಣಕಾಸಿನ ಒಳಗೊಳ್ಳುವಿಕೆಗಾಗಿ ರಾಷ್ಟ್ರೀಯ ಕಾರ್ಯತಂತ್ರ, 2025–30 | ಜೈವಿಕ ಶಸ್ತ್ರಾಸ್ತ್ರಗಳ ಸಮಾವೇಶ ( BWC) | ಕೇಂದ್ರ ಅಬಕಾರಿ (ತಿದ್ದುಪಡಿ) ಮಸೂದೆ, 2025 | ಸಂಚಾರ್ ಸಾಥಿ ಆ್ಯಪ್‌ | ಪ್ರಧಾನ ಮಂತ್ರಿ ವಿರಾಸತ್ ಕಾ ಸಂವರ್ಧನ್ (PM VIKAS) | ಹೆರಾನ್ ಎಂಕೆ II ಮಾನವರಹಿತ ವೈಮಾನಿಕ ವಾಹನಗಳು (Heron Mk II UAVs)

    ಹಣಕಾಸಿನ ಒಳಗೊಳ್ಳುವಿಕೆಗಾಗಿ ರಾಷ್ಟ್ರೀಯ ಕಾರ್ಯತಂತ್ರ, 2025–30

    ಸಾಮಾನ್ಯ ಅಧ್ಯಯನ – 3/ ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚೆಗೆ, ಭಾರತೀಯ ರಿಸರ್ವ್ ಬ್ಯಾಂಕ್ (RBI) ‘ಹಣಕಾಸಿನ ಒಳಗೊಳ್ಳುವಿಕೆಗಾಗಿ ರಾಷ್ಟ್ರೀಯ ಕಾರ್ಯತಂತ್ರ’ (NSFI) 2025–30 ಅನ್ನು ಬಿಡುಗಡೆ ಮಾಡಿದೆ. ಇದು ಭಾರತದಲ್ಲಿ ಹಣಕಾಸಿನ ಒಳಗೊಳ್ಳುವಿಕೆಯನ್ನು ಮತ್ತಷ್ಟು ಹೆಚ್ಚಿಸಲು ಮತ್ತು ವಿಸ್ತರಿಸಲು ‘ಪಂಚ-ಜ್ಯೋತಿ’ ಎಂಬ ಐದು ವರ್ಷಗಳ ಯೋಜನೆಯನ್ನು ರೂಪಿಸಿದೆ.

    ‘ಪಂಚ-ಜ್ಯೋತಿ’ಯ ಕಾರ್ಯತಂತ್ರದ ಸ್ತಂಭಗಳು:

    1. ಹಣಕಾಸು ಸೇವೆಗಳನ್ನು ಹೆಚ್ಚಿಸುವುದು: ಕುಟುಂಬಗಳಿಗೆ ಮತ್ತು ಕಿರು-ಉದ್ಯಮಗಳಿಗೆ ಸಮಾನ, ಜವಾಬ್ದಾರಿಯುತ ಮತ್ತು ಕೈಗೆಟುಕುವ ದರದಲ್ಲಿ ಹಣಕಾಸು ಸೇವೆಗಳನ್ನು ಒದಗಿಸುವುದು.
    2. ಲಿಂಗ-ಸೂಕ್ಷ್ಮ ಒಳಗೊಳ್ಳುವಿಕೆ: ಮಹಿಳಾ ಕೇಂದ್ರಿತ ತಂತ್ರಗಳನ್ನು ಅನುಷ್ಠಾನಗೊಳಿಸುವುದು ಹಾಗೂ ದುರ್ಬಲ ಮತ್ತು ಕಡಿಮೆ ಸೇವೆಗಳನ್ನು ಪಡೆಯುವ ಗುಂಪುಗಳಿಗೆ ಬೆಂಬಲ ನೀಡುವುದು.
    3. ಜೀವನೋಪಾಯ ಮತ್ತು ಹಣಕಾಸು ಸಂಯೋಜನೆ: ಕೌಶಲ್ಯ ಅಭಿವೃದ್ಧಿ ಮತ್ತು ಜೀವನೋಪಾಯ ಕಾರ್ಯಕ್ರಮಗಳನ್ನು ಔಪಚಾರಿಕ ಹಣಕಾಸು ಸೇವೆಗಳೊಂದಿಗೆ ಸಂಯೋಜಿಸುವುದು.
    4. ಹಣಕಾಸು ಶಿಕ್ಷಣ: ಜವಾಬ್ದಾರಿಯುತ ಆರ್ಥಿಕ ನಡವಳಿಕೆ ಮತ್ತು ಶಿಸ್ತನ್ನು ಉತ್ತೇಜಿಸಲು ‘ಹಣಕಾಸು ಸಾಕ್ಷರತೆ’ಯನ್ನು  ಬಳಸಿಕೊಳ್ಳುವುದು.
    5. ಗ್ರಾಹಕರ ರಕ್ಷಣೆ: ವ್ಯವಸ್ಥೆಯಲ್ಲಿ ಉತ್ತಮ ವಿಶ್ವಾಸಾರ್ಹತೆ ಮತ್ತು ಲಭ್ಯತೆಯನ್ನು ತರಲು ಗ್ರಾಹಕ ರಕ್ಷಣೆ ಮತ್ತು ಕುಂದುಕೊರತೆ ಪರಿಹಾರ ಕಾರ್ಯವಿಧಾನಗಳನ್ನು ಬಲಪಡಿಸುವುದು.

    ಹಣಕಾಸಿನ ಒಳಗೊಳ್ಳುವಿಕೆಗಾಗಿ ಸರ್ಕಾರದ ಪ್ರಮುಖ ಉಪಕ್ರಮಗಳು:

    • ಪ್ರಧಾನ ಮಂತ್ರಿ ಮುದ್ರಾ ಯೋಜನೆ: ಸಣ್ಣ ಮತ್ತು ಕಿರು ಉದ್ಯಮಗಳಿಗೆ ₹10 ಲಕ್ಷದವರೆಗೆ ಸಾಲ ನೀಡುವ ಮೂಲಕ ಬೆಂಬಲಿಸಲು ಇದನ್ನು 2015 ರಲ್ಲಿ ಪ್ರಾರಂಭಿಸಲಾಯಿತು.
    • ಹಣಕಾಸಿನ ಒಳಗೊಳ್ಳುವಿಕೆ ಸೂಚ್ಯಂಕ (FI-Index): ಹಣಕಾಸು ಸೇವೆಗಳ ಲಭ್ಯತೆಯನ್ನು ಖಾತ್ರಿಪಡಿಸುವ ಪ್ರಕ್ರಿಯೆಯನ್ನು ಪತ್ತೆಹಚ್ಚಲು ಇದನ್ನು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಾರಂಭಿಸಿದೆ.
    • ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ (PMSBY): 2015 ರಲ್ಲಿ ಪ್ರಾರಂಭಿಸಲಾದ ಈ ಯೋಜನೆಯು ಸಾವು ಮತ್ತು ಅಂಗವೈಕಲ್ಯವನ್ನು ಒಳಗೊಳ್ಳುವ ಒಂದು ಅಪಘಾತ ವಿಮಾ ಯೋಜನೆಯಾಗಿದೆ.
    • ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ (PMJJBY): 2015 ರಲ್ಲಿ ಪ್ರಾರಂಭಿಸಲಾದ ಈ ಯೋಜನೆಯು ಸರ್ಕಾರದ ಬೆಂಬಲಿತ ಜೀವ ವಿಮಾ ಯೋಜನೆಯಾಗಿದೆ.
    • ಅಟಲ್ ಪಿಂಚಣಿ ಯೋಜನೆ (APY): 2015 ರಲ್ಲಿ ಪ್ರಾರಂಭಿಸಲಾದ ಈ ಯೋಜನೆಯು ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುತ್ತದೆ.
    • ಪ್ರಧಾನ ಮಂತ್ರಿ ಜನ ಧನ್ ಯೋಜನೆ (PMJDY): ಇದನ್ನು  2014 ರಲ್ಲಿ ಪ್ರಾರಂಭಿಸಲಾಯಿತು. ಬ್ಯಾಂಕ್ ಖಾತೆ ಹೊಂದಿಲ್ಲದವರನ್ನು ಔಪಚಾರಿಕ ಆರ್ಥಿಕ ವ್ಯವಸ್ಥೆಯೊಳಗೆ ತರುವುದು, ಉಳಿತಾಯ ಖಾತೆಗಳು, ಸಾಲ ಸೌಲಭ್ಯ, ಹಣ ರವಾನೆ, ವಿಮೆ ಮತ್ತು ಪಿಂಚಣಿಗಳಿಗೆ ಪ್ರವೇಶವನ್ನು ಒದಗಿಸುವುದು ಇದರ ಗುರಿಯಾಗಿದೆ.

    ಜೈವಿಕ ಶಸ್ತ್ರಾಸ್ತ್ರಗಳ ಸಮಾವೇಶ ( BWC)

    ಸಾಮಾನ್ಯ ಅಧ್ಯಯನ2/ಭಾರತದ ಹಿತಾಸಕ್ತಿಯಲ್ಲಿ ಜಾಗತಿಕ ಗುಂಪುಗಾರಿಕೆ ; ಸಾಮಾನ್ಯ ಅಧ್ಯಯನ3/ಭದ್ರತೆ

    ಇದೀಗ ಸುದ್ದಿಯಲ್ಲಿದೆ:

    • ‘ಜೈವಿಕ ಶಸ್ತ್ರಾಸ್ತ್ರಗಳ ಸಮಾವೇಶ’ (BWC) ಜಾರಿಗೆ ಬಂದು 50 ವರ್ಷಗಳು ಪೂರ್ಣಗೊಂಡಿವೆ.

    ಜೈವಿಕ ಭಯೋತ್ಪಾದನೆಯ ಬಗ್ಗೆ:

    • ವ್ಯಾಖ್ಯಾನ: ಮಾನವರು, ಪ್ರಾಣಿಗಳು ಅಥವಾ ಸಸ್ಯಗಳಲ್ಲಿ ಅನಾರೋಗ್ಯ ಅಥವಾ ಸಾವನ್ನು ಉಂಟುಮಾಡುವ ಉದ್ದೇಶದಿಂದ ಬ್ಯಾಕ್ಟೀರಿಯಾ, ವೈರಸ್‌ ಅಥವಾ ಜೀವಾಣು ವಿಷಗಳಂತಹ ಜೈವಿಕ ಕಾರಕಗಳನ್ನು ಉದ್ದೇಶಪೂರ್ವಕವಾಗಿ ಬಿಡುಗಡೆ ಮಾಡುವುದನ್ನು ‘ಜೈವಿಕ ಭಯೋತ್ಪಾದನೆ’ ಎನ್ನಲಾಗುತ್ತದೆ.
    • ಉದಾಹರಣೆಗಳು: ಬ್ಯಾಸಿಲಸ್ ಆಂಥ್ರಾಸಿಸ್ (ಆಂಥ್ರಾಕ್ಸ್), ವೇರಿಯೋಲಾ ಮೇಜರ್ (ಸಿಡುಬು), ಮತ್ತು ಬೊಟುಲಿನಮ್‌ನಂತಹ ವಿಷಕಾರಿಗಳು.
    • ನಿಯಂತ್ರಣ: ಜೈವಿಕ ಶಸ್ತ್ರಾಸ್ತ್ರಗಳ ಅಭಿವೃದ್ಧಿ, ಉತ್ಪಾದನೆ ಮತ್ತು ಸ್ವಾಧೀನವನ್ನು ನಿಷೇಧಿಸುವ ಪ್ರಮುಖ ಅಂತರರಾಷ್ಟ್ರೀಯ ಒಪ್ಪಂದವಾಗಿ ‘ಜೈವಿಕ ಶಸ್ತ್ರಾಸ್ತ್ರಗಳ ಸಮಾವೇಶ’ ಕಾರ್ಯನಿರ್ವಹಿಸುತ್ತದೆ.

    ‘ಜೈವಿಕ ಶಸ್ತ್ರಾಸ್ತ್ರಗಳ ಸಮಾವೇಶ’ದ ಬಗ್ಗೆ:

    • ಸ್ಥಾಪನೆ: ಈ ಒಪ್ಪಂದವು ಮಾರ್ಚ್ 26, 1975 ರಂದು ಜಾರಿಗೆ ಬಂದಿತು.
    • ವೈಶಿಷ್ಟ್ಯ: ಇದು ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳ ಒಂದು ಸಂಪೂರ್ಣ ವರ್ಗವನ್ನೇ ನಿಷೇಧಿಸಿದ ವಿಶ್ವದ ಮೊಟ್ಟಮೊದಲ ಬಹುಪಕ್ಷೀಯ ನಿರಸ್ತ್ರೀಕರಣ ಒಪ್ಪಂದವಾಗಿದೆ.
    • ಉದ್ದೇಶ: ಇದು ಜೈವಿಕ ಮತ್ತು ವಿಷಕಾರಿ ಶಸ್ತ್ರಾಸ್ತ್ರಗಳ ಅಭಿವೃದ್ಧಿ, ಉತ್ಪಾದನೆ, ಸ್ವಾಧೀನಪಡಿಸಿಕೊಳ್ಳುವಿಕೆ, ವರ್ಗಾವಣೆ, ದಾಸ್ತಾನು ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುತ್ತದೆ.
    • ಅನುಷ್ಠಾನ: ವಿಶ್ವಸಂಸ್ಥೆಯ ನಿರಸ್ತ್ರೀಕರಣ ವ್ಯವಹಾರಗಳ ಕಚೇರಿ (UNODA) ಇದರ ಅನುಷ್ಠಾನದ ಜವಾಬ್ದಾರಿಯನ್ನು ನಿರ್ವಹಿಸುತ್ತದೆ.
    • ಸದಸ್ಯತ್ವ: ಭಾರತ ಸೇರಿದಂತೆ ಒಟ್ಟು 189 ದೇಶಗಳು ಇದರ ಸದಸ್ಯತ್ವವನ್ನು ಹೊಂದಿವೆ.

    ಕೇಂದ್ರ ಅಬಕಾರಿ (ತಿದ್ದುಪಡಿ) ಮಸೂದೆ, 2025

    ಸಾಮಾನ್ಯ ಅಧ್ಯಯನ : 2/ ರಾಜಕೀಯ ಮತ್ತು ಆಡಳಿತ

    ಇದೀಗ ಸುದ್ದಿಯಲ್ಲಿದೆ:

    • ಕೇಂದ್ರ ಅಬಕಾರಿ (ತಿದ್ದುಪಡಿ) ಮಸೂದೆ, 2025′ ಅನ್ನು ಡಿಸೆಂಬರ್ 1, 2025 ರಂದು ಲೋಕಸಭೆಯಲ್ಲಿ ಮಂಡಿಸಲಾಯಿತು.

    ಕೇಂದ್ರ ಅಬಕಾರಿ (ತಿದ್ದುಪಡಿ) ಮಸೂದೆ, 2025 ರ ಪ್ರಮುಖ ಅಂಶಗಳು:

    • ಈ ಮಸೂದೆಯು ‘ಕೇಂದ್ರ ಅಬಕಾರಿ ಕಾಯ್ದೆ, 1944‘ ಅನ್ನು ತಿದ್ದುಪಡಿ ಮಾಡುವ ಉದ್ದೇಶವನ್ನು ಹೊಂದಿದೆ.
    • ಭಾರತದಲ್ಲಿ ಉತ್ಪಾದನೆಯಾದ ಅಥವಾ ತಯಾರಾದ ಸರಕುಗಳ ಮೇಲೆ ಕೇಂದ್ರ ಅಬಕಾರಿ ಸುಂಕಗಳನ್ನು ವಿಧಿಸಲು ಮತ್ತು ಸಂಗ್ರಹಿಸಲು 1944ರ ಕಾಯಿದೆ ಅವಕಾಶ ಕಲ್ಪಿಸುತ್ತದೆ.
    • ಈ ಮಸೂದೆಯು ತಯಾರಿಸದ ತಂಬಾಕು, ತಯಾರಿಸಿದ ತಂಬಾಕು, ತಂಬಾಕು ಉತ್ಪನ್ನಗಳು ಮತ್ತು ತಂಬಾಕು ಪರ್ಯಾಯಗಳ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ಹೆಚ್ಚಿಸುತ್ತದೆ.
    • ತಯಾರಿಸದ ತಂಬಾಕಿನ (ಉದಾಹರಣೆಗೆ ಬಿಸಿಲಿನಲ್ಲಿ ಒಣಗಿಸಿದ ತಂಬಾಕು ಎಲೆಗಳು) ಮೇಲಿನ ಸುಂಕವನ್ನು 64% ರಿಂದ 70% ಕ್ಕೆ ಹೆಚ್ಚಿಸಲಾಗಿದೆ.

    ಸಂಚಾರ್ ಸಾಥಿ ಆ್ಯಪ್‌

    ಸಾಮಾನ್ಯ ಅಧ್ಯಯನ2/ಸರ್ಕಾರದ ಉಪಕ್ರಮಗಳು

    ಇದೀಗ ಸುದ್ದಿಯಲ್ಲಿದೆ:

    • 2026 ರ ಮಾರ್ಚ್‌ನಿಂದ ಮಾರಾಟವಾಗುವ ಮೊಬೈಲ್ ಸಾಧನಗಳಲ್ಲಿ ‘ಸಂಚಾರ್ ಸಾಥಿ’ ಆ್ಯಪ್‌ ಅನ್ನು ಕಡ್ಡಾಯವಾಗಿ ಪೂರ್ವ-ಸ್ಥಾಪಿತವಾಗಿ ಒದಗಿಸುವಂತೆ ದೂರಸಂಪರ್ಕ ಇಲಾಖೆಯು (DoT) ಮೊಬೈಲ್ ಫೋನ್ ತಯಾರಕ ಕಂಪನಿಗಳಿಗೆ ನಿರ್ದೇಶನ ನೀಡಿದೆ.

    ಸಂಚಾರ್ ಸಾಥಿ ಆ್ಯಪ್‌ ನ ಬಗ್ಗೆ:

    • ಪ್ರಾರಂಭಿಸಿದವರು: ದೂರಸಂಪರ್ಕ ಇಲಾಖೆ, ಭಾರತ ಸರ್ಕಾರ. 
    • ಉದ್ದೇಶ: ಮೊಬೈಲ್ ಸಂಬಂಧಿತ ವಂಚನೆ ಮತ್ತು ಕಳ್ಳತನದಿಂದ ರಕ್ಷಣೆ ಪಡೆಯಲು ಹಾಗೂ ಈ ಕುರಿತು ವರದಿ ಮಾಡಲು ಬಳಕೆದಾರರಿಗೆ ನೆರವಾಗುವುದು.

    ಸಂಚಾರ್ ಸಾಥಿ ಆ್ಯಪ್‌ ನ ಪ್ರಮುಖ ಲಕ್ಷಣಗಳು:

    1. ಚಕ್ಷು: ನಕಲಿ ಕೆವೈಸಿ (KYC) ನವೀಕರಣಗಳಂತಹ ವಂಚನೆಗಳನ್ನು ಒಳಗೊಂಡಂತೆ, ಕರೆಗಳು, ಸಂದೇಶ ಅಥವಾ ವಾಟ್ಸಾಪ್ ಮೂಲಕ ನಡೆಯುವ ಶಂಕಿತ ವಂಚನೆಗಳನ್ನು ವರದಿ ಮಾಡಲು ಇದು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.
    2. IMEI ಜಾಡೀಕರಣ (ಟ್ರ್ಯಾಕಿಂಗ್) ಮತ್ತು ತಡೆಯುವುದು (ಬ್ಲಾಕಿಂಗ್): ಕಳೆದುಹೋದ ಅಥವಾ ಕಳ್ಳತನವಾದ ಫೋನ್‌ಗಳನ್ನು ದೇಶಾದ್ಯಂತ ಎಲ್ಲಾ ಟೆಲಿಕಾಂ ನೆಟ್‌ವರ್ಕ್‌ಗಳಲ್ಲಿ ಪತ್ತೆಹಚ್ಚಲು ಮತ್ತು ತಡೆಯಲು ಇದು ಸಹಾಯ ಮಾಡುತ್ತದೆ.
    3. ಮೊಬೈಲ್ ಸಾಧನಗಳ ನೈಜತೆಯನ್ನು ಪರಿಶೀಲಿಸುವುದು: IMEI ಸಂಖ್ಯೆ ಅಥವಾ ಬಾರ್‌ಕೋಡ್ ಸ್ಕ್ಯಾನ್ ಬಳಸುವ ಮೂಲಕ ಮೊಬೈಲ್ ಸಾಧನವು ಅಸಲಿಯೇ ಎಂಬುದನ್ನು ಬಳಕೆದಾರರು ಪರಿಶೀಲಿಸಬಹುದು.
    4. ಮರೆಮಾಚಲಾದ ಅಂತರರಾಷ್ಟ್ರೀಯ ಕರೆಗಳನ್ನು ವರದಿ ಮಾಡುವುದು: ಸ್ಥಳೀಯ ಸಂಖ್ಯೆಯಂತೆ (+91 ನಂತರ 10 ಅಂಕಿಗಳು) ಗೋಚರಿಸುವ ವಿದೇಶಿ ಕರೆಗಳನ್ನು ಗುರುತಿಸಲು ಮತ್ತು ವರದಿ ಮಾಡಲು ಇದು ಸಹಾಯ ಮಾಡುತ್ತದೆ.
    5. ನಿಮ್ಮ ಇಂಟರ್ನೆಟ್ ಸೇವಾ ಪೂರೈಕೆದಾರರನ್ನು ತಿಳಿಯಿರಿ: ಪಿನ್ ಕೋಡ್, ವಿಳಾಸ ಅಥವಾ ಹೆಸರಿನ ಮೂಲಕ ವೈರ್‌ಲೈನ್ ಇಂಟರ್ನೆಟ್ ಸೇವಾ ಪೂರೈಕೆದಾರರನ್ನು ಹುಡುಕಲು ಇದು ಸಹಕಾರಿಯಾಗಿದೆ.

    ಪ್ರಧಾನ ಮಂತ್ರಿ ವಿರಾಸತ್ ಕಾ ಸಂವರ್ಧನ್ (PM VIKAS)

    ಸಾಮಾನ್ಯ ಅಧ್ಯಯನ2/ಕಲ್ಯಾಣ ಯೋಜನೆಗಳು

    ಇದೀಗ ಸುದ್ದಿಯಲ್ಲಿದೆ:

    • ‘ಪಿಎಂ ವಿಕಾಸ್’ ಯೋಜನೆಯು ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವ ಮೂಲಕ ಅಲ್ಪಸಂಖ್ಯಾತ ಸಮುದಾಯಗಳ ಏಳಿಗೆಗೆ ಶ್ರಮಿಸುತ್ತಿದೆ.

    ಪ್ರಧಾನ ಮಂತ್ರಿ ವಿರಾಸತ್ ಕಾ ಸಂವರ್ಧನ್ ಯೋಜನೆಯ ಕುರಿತು:

    • ಹಣಕಾಸು ನೆರವು: ಇದೊಂದು ಕೇಂದ್ರ ವಲಯದ ಯೋಜನೆಯಾಗಿದೆ.
    • ಅನುಷ್ಠಾನ: ಕೇಂದ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಇದನ್ನು ಅನುಷ್ಠಾನಗೊಳಿಸುತ್ತಿದೆ.
    • ಯೋಜನೆಗಳ ವಿಲೀನ: ಈ ಯೋಜನೆಯು ಹಿಂದಿನ ಐದು ಯೋಜನೆಗಳಾದ ‘ಸೀಖೋ ಔರ್ ಕಮಾವೋ’, ‘ನೈ ಮಂಜಿಲ್’, ‘ನೈ ರೋಶ್ನಿ’, ‘ಉಸ್ತಾದ್’  ಮತ್ತು ‘ಹಮಾರಿ ಧರೋಹರ್’ ಯೋಜನೆಗಳನ್ನು ಸಂಯೋಜಿಸುತ್ತದೆ.
    • ಗುರಿಗಳು: ಇದು ಕೌಶಲ್ಯಾಭಿವೃದ್ಧಿಯ ಮೂಲಕ ಆರು ಅಧಿಸೂಚಿತ ಅಲ್ಪಸಂಖ್ಯಾತ ಸಮುದಾಯಗಳ ಉನ್ನತೀಕರಣ; ಅಲ್ಪಸಂಖ್ಯಾತ ಮಹಿಳೆಯರಲ್ಲಿ ಉದ್ಯಮಶೀಲತೆ ಮತ್ತು ನಾಯಕತ್ವ; ಹಾಗೂ ಶಾಲೆಯಿಂದ ಹೊರಗುಳಿದವರಿಗೆ ಶೈಕ್ಷಣಿಕ ಬೆಂಬಲವನ್ನು ಒದಗಿಸುವುದರತ್ತ ಗಮನಹರಿಸುತ್ತದೆ.

    ಇದು ನಿಮಗೆ ತಿಳಿದಿದೆಯೇ? 

    • ಭಾರತದಲ್ಲಿ ಸಾಮಾಜಿಕ-ಆರ್ಥಿಕ ರಂಗಗಳಲ್ಲಿ ಅಧಿಕೃತವಾಗಿ ಗುರುತಿಸಲ್ಪಟ್ಟ ಆರು ಅಲ್ಪಸಂಖ್ಯಾತ ಗುಂಪುಗಳೆಂದರೆ –  ಮುಸ್ಲಿಮರು, ಕ್ರೈಸ್ತರು, ಸಿಖ್ಖರು, ಬೌದ್ಧರು, ಜೈನರು ಮತ್ತು ಜೊರಾಸ್ಟ್ರಿಯನ್ನರು (ಪಾರ್ಸಿಗಳು).

    ಹೆರಾನ್ ಎಂಕೆ II ಮಾನವರಹಿತ ವೈಮಾನಿಕ ವಾಹನಗಳು (Heron Mk II UAVs)

    ಸಾಮಾನ್ಯ ಅಧ್ಯಯನ3/ ರಕ್ಷಣೆ

    ಇದೀಗ ಸುದ್ದಿಯಲ್ಲಿದೆ:

    • ‘ಆಪರೇಷನ್ ಸಿಂಧೂರ್’ ನ  ನಂತರ ಜಾರಿಗೊಳಿಸಲಾದ ತುರ್ತು ಉಪಬಂಧಗಳ ಅಡಿಯಲ್ಲಿ, ಇಸ್ರೇಲ್‌ನಿಂದ ಹೆರಾನ್ ಎಂಕೆ-II ಡ್ರೋನ್‌ಗಳನ್ನು ಖರೀದಿಸಲು ಭಾರತವು ಪ್ರಕ್ರಿಯೆಯನ್ನು ಆರಂಭಿಸಿದೆ.

    ಹೆರಾನ್ ಎಂಕೆ II ಯುಎವಿಗಳ ಕುರಿತು:

    • ಅಭಿವೃದ್ಧಿಪಡಿಸಿದ ಸಂಸ್ಥೆ: ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್.
    • ಸಾಮರ್ಥ್ಯ: ‘ಮಧ್ಯಮ-ಎತ್ತರದ, ದೀರ್ಘಕಾಲ ಕಾರ್ಯಾಚರಣೆ ನಡೆಸಬಲ್ಲ’ ಯುಎವಿ ಆಗಿದೆ.
    • ವೈಶಿಷ್ಟ್ಯ: ಇದು ಸುಮಾರು 500 ಕೆಜಿಯಷ್ಟು ಪೇಲೋಡ್ ಅನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದು, 24 ಗಂಟೆಗಳಿಗೂ ಹೆಚ್ಚು ಕಾಲ ನಿರಂತರ ಹಾರಾಟವನ್ನು ನಡೆಸಬಲ್ಲ ಸಾಮರ್ಥ್ಯವನ್ನು ಹೊಂದಿದೆ.
  • ವಿಶ್ವ ಏಡ್ಸ್ ದಿನ | ಭಾರತದ ಪರಮಾಣು ವಲಯದಲ್ಲಿ ಖಾಸಗಿ ವಲಯದ ಪ್ರವೇಶ | ಎಲ್ಲೋರಾ ಗುಹೆಗಳು | ಹಾರ್ನ್‌ಬಿಲ್ ಉತ್ಸವ | ಯುನೆಸ್ಕೋದ ಕಾರ್ಯಕಾರಿ ಮಂಡಳಿಗೆ ಭಾರತ ಮರು ಆಯ್ಕೆಯಾಗಿದೆ | ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) | ಹಂಸ-3 ಎನ್‌ಜಿ ತರಬೇತಿ ವಿಮಾನ | ಆಹಾರ ಮತ್ತು ಕೃಷಿಗಾಗಿ ಸಸ್ಯ ತಳಿ ಸಂಪನ್ಮೂಲಗಳ ಮೇಲಿನ ಅಂತರರಾಷ್ಟ್ರೀಯ ಒಪ್ಪಂದ (ITPGRFA)

    ವಿಶ್ವ ಏಡ್ಸ್ ದಿನ

    ಸಾಮಾನ್ಯ ಅಧ್ಯಯನ -2/ಆರೋಗ್ಯ

    ಇದೀಗ ಸುದ್ದಿಯಲ್ಲಿದೆ:

    • ಪ್ರತಿ ವರ್ಷ ಡಿಸೆಂಬರ್ 1 ರಂದು ‘ವಿಶ್ವ ಏಡ್ಸ್ ದಿನ’ವನ್ನು ಆಚರಿಸಲಾಗುತ್ತದೆ.

    ವಿಶ್ವ ಏಡ್ಸ್ ದಿನದ ಮಹತ್ವ:

    • ಎಚ್‌ಐವಿ/ಏಡ್ಸ್ ಸಾಂಕ್ರಾಮಿಕ ರೋಗದ ಬಗ್ಗೆ ಜಾಗೃತಿ ಮೂಡಿಸಲು ಇದನ್ನು ಪ್ರತಿವರ್ಷ ಆಚರಿಸಲಾಗುತ್ತದೆ.
    • ಇದನ್ನು ಮೊದಲ ಬಾರಿಗೆ 1988 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ಗುರುತಿಸಿತು.
    • 2025ರ ಧ್ಯೇಯವಾಕ್ಯ: “ಅಡಚಣೆಯನ್ನು ದಾಟಿ (ಮೀರಿ), ಏಡ್ಸ್ ಪ್ರತಿಕ್ರಿಯೆಯನ್ನು ಪರಿವರ್ತಿಸುವುದು” 

    ಅಕ್ವೈರ್ಡ್ ಇಮ್ಯುನೊ ಡಿಫಿಷಿಯನ್ಸಿ ಸಿಂಡ್ರೋಮ್ (AIDS) ನ ಬಗ್ಗೆ:

    • ರೋಗಕಾರಕ:- ಇದು ದೀರ್ಘಕಾಲದ, ಸಂಭಾವ್ಯವಾಗಿ ಪ್ರಾಣಾಪಾಯಕಾರಿ ಆರೋಗ್ಯ ಸ್ಥಿತಿಯಾಗಿದ್ದು, “ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್” (HIV) ನಿಂದ ಉಂಟಾಗುತ್ತದೆ. ಇದು ಮಾನವನ ರೋಗನಿರೋಧಕ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ.
    • ಹರಡುವಿಕೆ:- ಸೋಂಕಿತ ವ್ಯಕ್ತಿಯ ದೇಹದ ದ್ರವಗಳಾದ ರಕ್ತ, ವೀರ್ಯ, ಗುದನಾಳದ ದ್ರವ, ಯೋನಿ ದ್ರವ ಅಥವಾ ಎದೆ ಹಾಲಿನ ನೇರ ಸಂಪರ್ಕದ ಮೂಲಕ ಇದು ಹರಡುತ್ತದೆ.
    • ಈ ರೋಗದ ಲಕ್ಷಣಗಳು:
      • ಹಂತ 1: ಜ್ವರದಂತಹ ಅನಾರೋಗ್ಯ (ಜ್ವರ, ಚಳಿ, ದದ್ದುಗಳು, ರಾತ್ರಿ ಬೆವರುವಿಕೆ).
      • ಹಂತ 2: ವೈದ್ಯಕೀಯ ವಿಳಂಬ (ಯಾವುದೇ ನಿರ್ದಿಷ್ಟ ರೋಗ ಲಕ್ಷಣಗಳಿಲ್ಲ).
      • ಹಂತ 3: ಏಡ್ಸ್ (ರೋಗನಿರೋಧಕ ವ್ಯವಸ್ಥೆಯು ದುರ್ಬಲಗೊಳ್ಳುವುದು).
    • ತಡೆಗಟ್ಟುವಿಕೆ:- “ಚಿಕಿತ್ಸೆಗಿಂತ ತಡೆಗಟ್ಟುವಿಕೆ ಲೇಸು”. ರಕ್ಷಣಾತ್ಮಕ ತಂತ್ರಗಳನ್ನು ಬಳಸುವುದು, ಕಲುಷಿತವಾಗದ ಸೂಜಿಗಳನ್ನು ಉಪಯೋಗಿಸುವುದು ಮತ್ತು ತಾಯಿಯಿಂದ ಮಗುವಿಗೆ ಹರಡುವುದನ್ನು ತಡೆಯುವುದು ಅತ್ಯಗತ್ಯವಾಗಿದೆ.
    • ಚಿಕಿತ್ಸೆ:- ಹೆಚ್ಐವಿ ಸೋಂಕಿಗೆ ಯಾವುದೇ ಶಾಶ್ವತ ಚಿಕಿತ್ಸೆ ಇಲ್ಲ. ಆದಾಗ್ಯೂ, ಆಂಟಿರೀಟ್ರೋವೈರಲ್ ಔಷಧಿಗಳೊಂದಿಗೆ (ART) ಚಿಕಿತ್ಸೆ ನೀಡಲಾಗುತ್ತದೆ. ಇವು ದೇಹದಲ್ಲಿ ವೈರಸ್ ಸ್ವಪ್ರತೀಕರಣಗೊಳ್ಳುವುದನ್ನು ತಡೆಯುತ್ತವೆ.

    ಗಮನಿಸಿ: ಚಿಕಿತ್ಸೆ ನೀಡದ ಹೆಚ್ಐವಿ, ಏಡ್ಸ್ ಆಗಿ ಪರಿವರ್ತನೆಗೊಳ್ಳಬಹುದು, ಇದು ಸಾಮಾನ್ಯವಾಗಿ ಹಲವು ವರ್ಷಗಳ ನಂತರ ಸಂಭವಿಸುತ್ತದೆ.

    ಭಾರತ ಸರ್ಕಾರ ಕೈಗೊಂಡ ಕ್ರಮಗಳು

    • ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮ (NACP):- ಇದೊಂದು ಕೇಂದ್ರ ವಲಯದ ಯೋಜನೆಯಾಗಿದೆ.
    • ಹೆಚ್ಐವಿ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವುದು ಮತ್ತು ಹಿಮ್ಮೆಟ್ಟಿಸುವ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ 3 (SDG 3) ಭಾರತ ಸಾಧಿಸಿದೆ.
    • ಪಿಪಿಟಿಸಿಟಿ (PPTCT)- ಪೋಷಕರಿಂದ ಮಗುವಿಗೆ ಸೋಂಕು ಹರಡುವುದನ್ನು ತಡೆಗಟ್ಟುವ ಕಾರ್ಯಕ್ರಮ.
    • ಹೆಚ್ಐವಿ /ಏಡ್ಸ್ ಕಾಯ್ದೆ, 2017: ಹೆಚ್ಐವಿ -ಸೋಂಕಿತ ಜನರ ವಿರುದ್ಧ ಯಾವುದೇ ಆಧಾರದ ಮೇಲೆ ತಾರತಮ್ಯ ಮಾಡುವುದನ್ನು ಈ ಕಾಯ್ದೆ ನಿಷೇಧಿಸುತ್ತದೆ.
    • UNAIDS- 90:90:90 ಕಾರ್ಯತಂತ್ರ: ಇದು UNAIDS ಸಂಸ್ಥೆ ಅಳವಡಿಸಿಕೊಂಡಿರುವ ಕಾರ್ಯತಂತ್ರವಾಗಿದೆ. {2020 ರ ವೇಳೆಗೆ 90% ರೋಗನಿರ್ಣಯ, 90% ಚಿಕಿತ್ಸೆ (ಆಂಟಿರೀಟ್ರೋವೈರಲ್ ಚಿಕಿತ್ಸೆಯೊಂದಿಗೆ – ART ಮೂಲಕ) ಮತ್ತು 90% ವೈರಾಣು ನಿಗ್ರಹ} ಇದನ್ನು ಈಗ 95-95-95 ಗುರಿಯೊಂದಿಗೆ 10 ವರ್ಷಗಳವರೆಗೆ ವಿಸ್ತರಿಸಲಾಗಿದೆ.
    • “ಪ್ರಾಜೆಕ್ಟ್ ಆಕ್ಸಿಲರೇಟ್” (ACCELERATE): ಇದು ಜಾನ್ ಹಾಕಿನ್ ಮತ್ತು ನ್ಯಾಕೋ (NACO) ಸಂಸ್ಥೆಯ  ಉಪಕ್ರಮವಾಗಿದ್ದು, ‘ಸೇಫ್ ಜಿಂದಗಿ’ ಆನ್‌ಲೈನ್ ಪೋರ್ಟಲ್ ಮೂಲಕ ಹೆಚ್ಐವಿ ಸೇವೆಗಳನ್ನು ಒದಗಿಸುತ್ತದೆ.
    • ಮಿಷನ್ ಸಂಪರ್ಕ್:- ಆಂಟಿರೀಟ್ರೋವೈರಲ್ ಥೆರಪಿಯನ್ನು (ART) ಅರ್ಧಕ್ಕೆ ನಿಲ್ಲಿಸಿದ, ಹೆಚ್ಐವಿ ಯೊಂದಿಗೆ ಬದುಕುತ್ತಿರುವ ಜನರನ್ನು (PLHIV) ಮರಳಿ ಚಿಕಿತ್ಸೆಗೆ ತರುವುದು ಇದರ ಉದ್ದೇಶವಾಗಿತ್ತು.

    ಭಾರತದ ಪರಮಾಣು ವಲಯದಲ್ಲಿ ಖಾಸಗಿ ವಲಯದ ಪ್ರವೇಶ

    ಸಾಮಾನ್ಯ ಅಧ್ಯಯನ -3/ ಇಂಧನ/ಶಕ್ತಿ

    ಇದೀಗ ಸುದ್ದಿಯಲ್ಲಿದೆ:

    • ಪರಮಾಣು ವಲಯವನ್ನು ಖಾಸಗಿ ಪಾಲುದಾರರಿಗೆ ಮುಕ್ತಗೊಳಿಸುವ ನಿಟ್ಟಿನಲ್ಲಿ ಸರ್ಕಾರವು ಹೆಜ್ಜೆ ಇಡುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.

    ಭಾರತದ ಪರಮಾಣು ವಲಯ: 

    • ನಿರ್ವಹಣೆ:- ಪ್ರಸ್ತುತ, ಭಾರತದಲ್ಲಿನ ಪರಮಾಣು ವಿದ್ಯುತ್ ಸ್ಥಾವರಗಳು “ಭಾರತದ ಪರಮಾಣು ವಿದ್ಯುತ್ ನಿಗಮ ನಿಯಮಿತ” (NPCIL) ಒಡೆತನದಲ್ಲಿದ್ದು, ಸಂಪೂರ್ಣವಾಗಿ ಆ ಸಂಸ್ಥೆಯಿಂದಲೇ ನಿರ್ವಹಿಸಲ್ಪಡುತ್ತವೆ.
    • ಪ್ರಮುಖ ಕಾನೂನುಗಳು:- ಖಾಸಗಿ ವಲಯದ ಭಾಗವಹಿಸುವಿಕೆಗೆ ಅವಕಾಶ ಕಲ್ಪಿಸಲು, ಸರ್ಕಾರವು ಈ ಕೆಳಗಿನ ಪ್ರಮುಖ ಕಾನೂನುಗಳಿಗೆ ತಿದ್ದುಪಡಿ ತರಲು ಪ್ರಸ್ತಾಪಿಸಿದೆ:
      1. ಪರಮಾಣು ಶಕ್ತಿ ಕಾಯ್ದೆ, 1962: ಇದು ಪರಮಾಣು ಶಕ್ತಿಯ ಅಭಿವೃದ್ಧಿ ಮತ್ತು ನಿಯಂತ್ರಣಕ್ಕೆ ಅಗತ್ಯವಿರುವ ಮೂಲ ಚೌಕಟ್ಟನ್ನು ಒದಗಿಸುತ್ತದೆ.
      2. ಪರಮಾಣು ಹಾನಿಗಾಗಿ ನಾಗರಿಕ ಹೊಣೆಗಾರಿಕೆ ಕಾಯ್ದೆ, 2010: ಪರಮಾಣು ಅವಘಡಗಳು ಸಂಭವಿಸಿದಾಗ ಪರಿಹಾರ ನೀಡುವ ಕಾರ್ಯವಿಧಾನಗಳನ್ನು ಇದು ಖಾತ್ರಿಪಡಿಸುತ್ತದೆ.

    ಪರಮಾಣು ಶಕ್ತಿಯ ಬಗ್ಗೆ:

    • ವ್ಯಾಖ್ಯಾನ:- ಪರಮಾಣು ಕ್ರಿಯೆಗಳ ಸಮಯದಲ್ಲಿ ಬಿಡುಗಡೆಯಾಗುವ ಶಕ್ತಿಯೇ ‘ಪರಮಾಣು ಶಕ್ತಿ’. ಇದು ವಿದಳನ (ಪರಮಾಣು ನ್ಯೂಕ್ಲಿಯಸ್‌ಗಳ ವಿಭಜನೆ) ಅಥವಾ ಸಮ್ಮಿಲನ (ಪರಮಾಣು ನ್ಯೂಕ್ಲಿಯಸ್‌ಗಳ ವಿಲೀನ) ಪ್ರಕ್ರಿಯೆಯ ಮೂಲಕ ಬಿಡುಗಡೆಯಾಗುತ್ತದೆ.

    ಭಾರತದಲ್ಲಿ ಪರಮಾಣು ವಿದ್ಯುತ್ ಸಾಮರ್ಥ್ಯದ ಸ್ಥಿತಿಗತಿ:

    • ಪ್ರಸ್ತುತ ಸಾಮರ್ಥ್ಯ:- 8,180 ಮೆಗಾವ್ಯಾಟ್ (MW) ಆಗಿದ್ದು, ಇದು 24 ಪರಮಾಣು ವಿದ್ಯುತ್ ಸ್ಥಾವರಗಳಲ್ಲಿ ಹಂಚಿಕೆಯಾಗಿದೆ.
    • ಭವಿಷ್ಯದ ಗುರಿ:- 2047 ರ ವೇಳೆಗೆ 100 GW ಪರಮಾಣು ವಿದ್ಯುತ್ ಸಾಮರ್ಥ್ಯವನ್ನು ಸಾಧಿಸುವ ಗುರಿ.
    • ಸಾಮರ್ಥ್ಯ ವಿಸ್ತರಣೆ:- ಗುಜರಾತ್, ರಾಜಸ್ಥಾನ, ತಮಿಳುನಾಡು, ಹರಿಯಾಣ, ಕರ್ನಾಟಕ ಮತ್ತು ಮಧ್ಯಪ್ರದೇಶದಾದ್ಯಂತ 10 ಹೊಸ ಸ್ಥಾವರಗಳು (ಒಟ್ಟು 8 GW ಸಾಮರ್ಥ್ಯ) ನಿರ್ಮಾಣ ಹಂತದಲ್ಲಿವೆ.

    ಭಾರತದ ಪ್ರಮುಖ ಪರಮಾಣು ವಿದ್ಯುತ್ ಸ್ಥಾವರಗಳು:

    ಪರಮಾಣು ವಿದ್ಯುತ್ ಸ್ಥಾವರ 

    ರಾಜ್ಯ

    ಒಟ್ಟು ಸಾಮರ್ಥ್ಯ (MW ಗಳಲ್ಲಿ)

    ತಾರಾಪುರ

    ಮಹಾರಾಷ್ಟ್ರ

    1,400

    ರಾವತಭಾಟ

    ರಾಜಸ್ಥಾನ

    1,180

    ಕುಂದಕುಳಂ

    ತಮಿಳುನಾಡು

    2,000

    ಕೈಗಾ

    ಕರ್ನಾಟಕ

    880

    ಕಾಕ್ರಪಾರ

    ಗುಜರಾತ್

    1140

    ಕಲ್ಪಕ್ಕಂ

    ತಮಿಳುನಾಡು

    440

    ನರೋರಾ

    ಉತ್ತರ ಪ್ರದೇಶ

    440

    ಪ್ರಸ್ತಾಪಿತ/ನಿರ್ಮಾಣ ಹಂತದಲ್ಲಿರುವ ವಿದ್ಯುತ್ ಸ್ಥಾವರಗಳು:

    ವಿದ್ಯುತ್ ಸ್ಥಾವರ

    ನಿರ್ವಹಿಸುವ ಸಂಸ್ಥೆ

    ರಾಜ್ಯ

    ಒಟ್ಟು ಸಾಮರ್ಥ್ಯ (MW ಗಳಲ್ಲಿ)

    ಜೈಠಾಪುರ

    ಭಾರತದ ಪರಮಾಣು ವಿದ್ಯುತ್ ನಿಗಮ ನಿಯಮಿತ (NPCIL)

    ಮಹಾರಾಷ್ಟ್ರ

    9,900

    ಕೊವ್ವಾಡ

    ಭಾರತದ ಪರಮಾಣು ವಿದ್ಯುತ್ ನಿಗಮ ನಿಯಮಿತ (NPCIL)

    ಆಂಧ್ರ ಪ್ರದೇಶ

    6,600

    ಮಿಥಿ ವಿರ್ಡಿ

    ಭಾರತದ ಪರಮಾಣು ವಿದ್ಯುತ್ ನಿಗಮ ನಿಯಮಿತ (NPCIL)

    ಗುಜರಾತ

    6,000

    ಹರಿಪುರ

    ಭಾರತದ ಪರಮಾಣು ವಿದ್ಯುತ್ ನಿಗಮ ನಿಯಮಿತ (NPCIL)

    ಪಶ್ಚಿಮ ಬಂಗಾಳ

    4,000

    ಕುಂದಕುಳಂ (ವಿಸ್ತರಣೆ)

    ಭಾರತದ ಪರಮಾಣು ವಿದ್ಯುತ್ ನಿಗಮ ನಿಯಮಿತ (NPCIL)

    ತಮಿಳುನಾಡು

    2,800

    ಗೋರಖ್‌ಪುರ

    ಭಾರತದ ಪರಮಾಣು ವಿದ್ಯುತ್ ನಿಗಮ ನಿಯಮಿತ (NPCIL)

    ಹರಿಯಾಣ

    2,800

    ಭೀಮ್‌ಪುರ

    ಭಾರತದ ಪರಮಾಣು ವಿದ್ಯುತ್ ನಿಗಮ ನಿಯಮಿತ (NPCIL)

    ಮಧ್ಯ ಪ್ರದೇಶ

    2,800

    ಮಹಿ ಬನ್ಸ್ವಾರ

    ಭಾರತದ ಪರಮಾಣು ವಿದ್ಯುತ್ ನಿಗಮ ನಿಯಮಿತ (NPCIL)

    ರಾಜಸ್ಥಾನ

    1,400

    ಕೈಗಾ (ವಿಸ್ತರಣೆ)

    ಭಾರತದ ಪರಮಾಣು ವಿದ್ಯುತ್ ನಿಗಮ ನಿಯಮಿತ (NPCIL)

    ಕರ್ನಾಟಕ

    1,400

    ಚುಟ್ಕಾ

    ಭಾರತದ ಪರಮಾಣು ವಿದ್ಯುತ್ ನಿಗಮ ನಿಯಮಿತ (NPCIL)

    ಮಧ್ಯ ಪ್ರದೇಶ

    1,200

    ಮದ್ರಾಸ್

    ಭಾರತೀಯ ನಾಭಿಕೀಯ ವಿದ್ಯುತ್ ನಿಗಮ ನಿಯಮಿತ

    ತಮಿಳುನಾಡು

    300

    ಎಲ್ಲೋರಾ ಗುಹೆಗಳು

    ಸಾಮಾನ್ಯ ಅಧ್ಯಯನ : -1/ ಇತಿಹಾಸ ಮತ್ತು ಸಂಸ್ಕೃತಿ

    ಇದೀಗ ಸುದ್ದಿಯಲ್ಲಿದೆ:

    • ಎಲ್ಲೋರಾ ಗುಹೆಗಳ ಸುತ್ತಮುತ್ತಲಿರುವ, ಕಡಿಮೆ ಪ್ರಚಲಿತದಲ್ಲಿರುವ ಪಾರಂಪರಿಕ ತಾಣಗಳಿಗೆ ಹೆಚ್ಚಿನ ಪ್ರಚಾರ ಮತ್ತು ಮನ್ನಣೆ ನೀಡುವಂತೆ ಪ್ರಸಿದ್ಧ ಸ್ಕಾಟ್ಲೆಂಡಿನ ಇತಿಹಾಸಕಾರ ವಿಲಿಯಂ ಡಾಲ್ರಿಂಪಲ್ ಅವರು ಮಹಾರಾಷ್ಟ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ಎಲ್ಲೋರಾ ಗುಹೆಗಳ ಬಗ್ಗೆ:

    • ಸ್ಥಳ:- ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ (ಔರಂಗಾಬಾದ್) ಜಿಲ್ಲೆಯಲ್ಲಿರುವ ಎಲ್ಲೋರಾ ಗುಹೆಗಳು, ಭಾರತದ ಪ್ರಪ್ರಥಮ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಲ್ಲಿ ಒಂದಾಗಿವೆ.
    • ಕಾಲಘಟ್ಟ:- ಈ ಗುಹೆಗಳ ಸಂಕೀರ್ಣವನ್ನು ಕ್ರಿ.ಶ. 600 ಮತ್ತು ಕ್ರಿ.ಶ.1000 ರ ನಡುವಿನ ಅವಧಿಯಲ್ಲಿ ಕೆತ್ತಲಾಗಿದೆ. ಇದು ಪ್ರಮುಖವಾಗಿ ಚಾಲುಕ್ಯರು, ರಾಷ್ಟ್ರಕೂಟರು ಮತ್ತು ಯಾದವರ ಆಳ್ವಿಕೆಯ ಕಾಲಘಟ್ಟವನ್ನು ಪ್ರತಿನಿಧಿಸುತ್ತದೆ.
    • ಧಾರ್ಮಿಕ ಬಹುತ್ವ: ಈ ಸಂಕೀರ್ಣವು ಒಟ್ಟು 34 ಪ್ರಮುಖ ಗುಹೆಗಳನ್ನು ಒಳಗೊಂಡಿದೆ (12 ಬೌದ್ಧ, 17 ಹಿಂದೂ ಮತ್ತು 5 ಜೈನ ಗುಹೆಗಳು). ಇದು ಅಂದಿನ ಕಾಲದ ವಿಶಿಷ್ಟವಾದ ಅಂತರ್‌ಧರ್ಮೀಯ ಸಾಮರಸ್ಯ ಮತ್ತು ಕಲಾತ್ಮಕ ವಿನಿಮಯಕ್ಕೆ ಸಾಕ್ಷಿಯಾಗಿದೆ.

    ಪ್ರಮುಖ ವಾಸ್ತುಶಿಲ್ಪದ ಲಕ್ಷಣಗಳು:

    • ಕೈಲಾಸನಾಥ ದೇವಾಲಯ (ಗುಹೆ 16):- ಇದನ್ನು ಬೃಹತ್ ಏಕಶಿಲಾ ಜ್ವಾಲಾಮುಖಿ (ಬಸಾಲ್ಟ್) ಶಿಲೆಯಿಂದ ಕೆತ್ತಲಾಗಿದೆ. ಇದು ಹಿಂದೂಗಳ ದೇವರಾದ ಶಿವನಿಗೆ ಸಮರ್ಪಿತವಾದ ಅದ್ಭುತ ರಚನೆಯಾಗಿದೆ.
    • ಬೌದ್ಧ ಗುಹೆಗಳು:- ಇವುಗಳಲ್ಲಿ ಪ್ರಮುಖವಾಗಿ ಬೌದ್ಧ ಸನ್ಯಾಸಿಗಳ ವಸತಿಗಳಾದ ವಿಹಾರಗಳು ಮತ್ತು ಪ್ರಾರ್ಥನಾ ಮಂದಿರಗಳಾದ ಚೈತ್ಯಾಲಯಗಳನ್ನು ಕಾಣಬಹುದು.
    • ಜೈನ ಗುಹೆಗಳು: ಎಲ್ಲೋರಾ ನಿರ್ಮಾಣದ ಅಂತಿಮ ಅಥವಾ ನಂತರದ ಹಂತದಲ್ಲಿ ಇವುಗಳನ್ನು ನಿರ್ಮಿಸಲಾಗಿದೆ.

    ಹಾರ್ನ್‌ಬಿಲ್ ಉತ್ಸವ

    ಸಾಮಾನ್ಯ ಅಧ್ಯಯನ : 1/ಸಂಸ್ಕೃತಿ

    ಇದೀಗ ಸುದ್ದಿಯಲ್ಲಿದೆ:

    • “ಉತ್ಸವಗಳ ಉತ್ಸವ” ಎಂದೇ ಖ್ಯಾತಿಯಾಗಿರುವ ನಾಗಾಲ್ಯಾಂಡ್‌ನ ಪ್ರಸಿದ್ಧ “ಹಾರ್ನ್‌ಬಿಲ್” ಉತ್ಸವದ 26ನೇ ಆವೃತ್ತಿಯು, ಕೊಹಿಮಾದ ಕಿಸಾಮಾದಲ್ಲಿರುವ “ನಾಗಾ ಪರಂಪರೆ ಗ್ರಾಮ”ದಲ್ಲಿ ಆರಂಭಗೊಂಡಿದೆ. ಇದು ರಾಜ್ಯದ ‘ರಾಜ್ಯೋತ್ಸವ ದಿನ’ದೊಂದಿಗೆ (ಡಿಸೆಂಬರ್ 1) ಕಾಕತಾಳೀಯವಾಗಿ ಜರುಗುತ್ತದೆ.

    ಹಾರ್ನ್‌ಬಿಲ್ ಉತ್ಸವದ ಬಗ್ಗೆ:

    • ಸಮಯ ಮತ್ತು ಸ್ಥಳ:- ಇದು ವಾರ್ಷಿಕವಾಗಿ ಡಿಸೆಂಬರ್ ಮೊದಲ ವಾರದಲ್ಲಿ ಕೊಹಿಮಾ ಸಮೀಪದ ಕಿಸಾಮಾದಲ್ಲಿ ನಡೆಯುತ್ತದೆ.
    • ವೈಶಿಷ್ಟ್ಯ:- ಇದು ಎಲ್ಲಾ ನಾಗಾ ಬುಡಕಟ್ಟುಗಳ ರೋಮಾಂಚಕ ಸಾಂಸ್ಕೃತಿಕ ಪ್ರದರ್ಶನವಾಗಿದೆ.

    ಹಾರ್ನ್‌ಬಿಲ್ ಉತ್ಸವದ ಮಹತ್ವ:

    • ಉದ್ದೇಶ: ಏಕತೆಯನ್ನು ಉತ್ತೇಜಿಸಲು ಮತ್ತು ಜನಾಂಗೀಯ ಪರಂಪರೆಯನ್ನು ಸಂರಕ್ಷಿಸುವ ಉದ್ದೇಶದಿಂದ ಇದನ್ನು 2000ನೇ ಇಸವಿಯಲ್ಲಿ ರೂಪಿಸಿ ಆರಂಭಿಸಲಾಯಿತು.
    • ಸಂಸ್ಕೃತಿ ಪ್ರದರ್ಶನ: ಇದು ಸಂಗೀತ, ಕರಕುಶಲ ವಸ್ತುಗಳು, ತಿನಿಸು ಮತ್ತು ಜಾನಪದಗಳ ಮೂಲಕ ಸಾಂಪ್ರದಾಯಿಕ ಮತ್ತು ಸಮಕಾಲೀನ ನಾಗಾ ಸಂಸ್ಕೃತಿ ಎರಡನ್ನೂ ಎತ್ತಿ ತೋರಿಸುತ್ತದೆ.

    ಗ್ರೇಟರ್ ಹಾರ್ನ್‌ಬಿಲ್ ನ ಬಗ್ಗೆ:

    • ವೈಜ್ಞಾನಿಕ ಹೆಸರು:- ಬ್ಯುಸೆರೋಸ್ ಬೈಕಾರ್ನಿಸ್ 
    • ಇತರ ಹೆಸರುಗಳು:- ಇದನ್ನು ಕಾನ್ಕೇವ್-ಕ್ಯಾಸ್ಕ್ಡ್ ಹಾರ್ನ್‌ಬಿಲ್, ಗ್ರೇಟ್ ಇಂಡಿಯನ್ ಹಾರ್ನ್‌ಬಿಲ್ ಅಥವಾ ಗ್ರೇಟ್ ಪೈಡ್ ಹಾರ್ನ್‌ಬಿಲ್ ಎಂತಲೂ ಕರೆಯಲಾಗುತ್ತದೆ.
    • ಆವಾಸಸ್ಥಾನ:- ಇದು ಭಾರತೀಯ ಉಪಖಂಡ ಮತ್ತು ಆಗ್ನೇಯ ಏಷ್ಯಾದಲ್ಲಿ ಕಂಡುಬರುತ್ತದೆ.
    • ವೈಶಿಷ್ಟ್ಯ:- ಗ್ರೇಟರ್ ಹಾರ್ನ್‌ಬಿಲ್‌ನ ಅತ್ಯಂತ ಪ್ರಮುಖ ಲಕ್ಷಣವೆಂದರೆ ಅದರ ಬೃಹತ್ ಕೊಕ್ಕಿನ ಮೇಲಿರುವ ಪ್ರಕಾಶಮಾನವಾದ ಹಳದಿ ಮತ್ತು ಕಪ್ಪು ಬಣ್ಣದ ಶಿರಸ್ತ್ರಾಣ/ ತಲೆಕವಚ (‘ಕ್ಯಾಸ್ಕ್’- ಕೆಲವು ಪಕ್ಷಿಗಳ ತಲೆಯ ಮೇಲಿರುವ ಗಟ್ಟಿಯಾದ ರಚನೆ).
    • ಉತ್ಸವ:- ಹಾರ್ನ್‌ಬಿಲ್ ಉತ್ಸವವನ್ನು ನಾಗಾಲ್ಯಾಂಡ್‌ನಲ್ಲಿ ಆಚರಿಸಲಾಗುತ್ತದೆ.
    • ರಾಜ್ಯ ಪಕ್ಷಿ:- ಗ್ರೇಟರ್ ಹಾರ್ನ್‌ಬಿಲ್ ಅರುಣಾಚಲ ಪ್ರದೇಶ ಮತ್ತು ಕೇರಳದ ರಾಜ್ಯ ಪಕ್ಷಿಯಾಗಿದೆ.

    ಸಂರಕ್ಷಣಾ ಸ್ಥಿತಿ:

    • IUCN ಕೆಂಪುಪಟ್ಟಿಯಲ್ಲಿ ಸ್ಥಿತಿ:- ದುರ್ಬಲ (Vu).
    • ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯಿದೆ, 1972:- ಅನುಸೂಚಿ I.

    ಯುನೆಸ್ಕೋದ ಕಾರ್ಯಕಾರಿ ಮಂಡಳಿಗೆ ಭಾರತ ಮರು ಆಯ್ಕೆಯಾಗಿದೆ

    ಸಾಮಾನ್ಯ ಅಧ್ಯಯನ : 2/ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ: 

    • ಭಾರತವು ಯುನೆಸ್ಕೋದ ಕಾರ್ಯಕಾರಿ ಮಂಡಳಿಗೆ  2025-29ರ ಅವಧಿಗೆ ಮರು ಆಯ್ಕೆಯಾಗಿದೆ.

    ಯುನೆಸ್ಕೋದ ಕಾರ್ಯಕಾರಿ ಮಂಡಳಿಯ ಬಗ್ಗೆ:

    • ರಚನೆ:- ಇದು ವಿಶ್ವಸಂಸ್ಥೆಯ ಮೂರು ಸಾಂವಿಧಾನಿಕ ಅಂಗಗಳಲ್ಲಿ ಒಂದಾಗಿದೆ. (ಉಳಿದ ಎರಡು ಅಂಗಗಳೆಂದರೆ ‘ಸಾಮಾನ್ಯ ಸಮ್ಮೇಳನ’ ಮತ್ತು ‘ಸಚಿವಾಲಯ’). ಈ ಮಂಡಳಿಯನ್ನು ಸಾಮಾನ್ಯ ಸಮ್ಮೇಳನವು ಆಯ್ಕೆ ಮಾಡುತ್ತದೆ.
    • ಅಧಿಕಾರ:- ಇದು ಸಾಮಾನ್ಯ ಸಮ್ಮೇಳನದ ಅಧಿಕಾರದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ.
    • ಕಾರ್ಯಗಳು:- ಇದು ಮಹಾನಿರ್ದೇಶಕರು ಸಲ್ಲಿಸಿದ ಸಂಸ್ಥೆಯ ಕೆಲಸದ ಕಾರ್ಯಕ್ರಮ ಮತ್ತು ಅದಕ್ಕೆ ಸಂಬಂಧಿಸಿದ ಆಯಾವ್ಯಾಯ ಅಂದಾಜುಗಳನ್ನು ಪರಿಶೀಲಿಸುತ್ತದೆ.
    • ಸದಸ್ಯತ್ವ:- ಇದು 58 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದ್ದು, ಪ್ರತಿಯೊಂದು ರಾಷ್ಟ್ರವೂ ನಾಲ್ಕು ವರ್ಷಗಳ ಅಧಿಕಾರಾವಧಿಯನ್ನು ಹೊಂದಿರುತ್ತದೆ.

    ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF)

    ಸಾಮಾನ್ಯ ಅಧ್ಯಯನ : 3/ಆಂತರಿಕ ಭದ್ರತೆ

    ಇದೀಗ ಸುದ್ದಿಯಲ್ಲಿದೆ:

    • ಸಂಸತ್ತಿನ ಭದ್ರತಾ ಕರ್ತವ್ಯಗಳಿಗೆ ನಿಯೋಜಿಸಲಾದ ಸಿಬ್ಬಂದಿಗಾಗಿ, ಕೇಂದ್ರ ಕೈಗಾರಿಕಾ ಭದ್ರತಾ ಪಡೆಯು (CISF) ‘ಪರಿಷ್ಕೃತ ನಿಯೋಜನೆ ನೀತಿ’ಯನ್ನು ಪರಿಚಯಿಸಿದೆ.

    ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಯ ಕುರಿತು:

    • ಸ್ಥಾಪನೆ:- ‘ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಕಾಯ್ದೆ, 1968’ ರ ಅಡಿಯಲ್ಲಿ 1969 ರಲ್ಲಿ ಇದನ್ನು ಸ್ಥಾಪಿಸಲಾಯಿತು. ಇದೊಂದು ಅರೆಸೈನಿಕ ಪಡೆಯಾಗಿದೆ. 
    • ದಿನಾಚರಣೆ: ಪ್ರತಿ ವರ್ಷ ಮಾರ್ಚ್ 10 ರಂದು ‘CISF ಸಂಸ್ಥಾಪನಾ ದಿನ’ವನ್ನು (Raising Day) ಆಚರಿಸಲಾಗುತ್ತದೆ.
    • ನಿಯಂತ್ರಣ: ಇದು ಭಾರತ ಸರ್ಕಾರದ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.

    CISF ನ ಕಾರ್ಯಗಳು: ಇದು ಈ ಕೆಳಗಿನ ಕಾರ್ಯತಂತ್ರದ ಸಂಸ್ಥೆಗಳಿಗೆ ಭದ್ರತೆಯನ್ನು ಒದಗಿಸುತ್ತದೆ, ಅವುಗಳೆಂದರೆ:

    • ಬಾಹ್ಯಾಕಾಶ ಇಲಾಖೆ.
    • ಪರಮಾಣು ಶಕ್ತಿ ಇಲಾಖೆ.
    • ವಿಮಾನ ನಿಲ್ದಾಣಗಳು, ದೆಹಲಿ ಮೆಟ್ರೋ ಮತ್ತು ಬಂದರುಗಳು.
    • ಐತಿಹಾಸಿಕ ಸ್ಮಾರಕಗಳು.
    • ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ವಿದ್ಯುತ್, ಕಲ್ಲಿದ್ದಲು, ಉಕ್ಕು ಮತ್ತು ಗಣಿಗಾರಿಕೆಯಂತಹ ಭಾರತೀಯ ಆರ್ಥಿಕತೆಯ ಮೂಲಭೂತ ಕ್ಷೇತ್ರಗಳು.

    ಹಂಸ-3 ಎನ್‌ಜಿ ತರಬೇತಿ ವಿಮಾನ

    ಪಠ್ಯಕ್ರಮ: GS3/ ರಕ್ಷಣೆ (Defence)

    ಇದೀಗ ಸುದ್ದಿಯಲ್ಲಿದೆ:

    • ಬೆಂಗಳೂರಿನ “ಸಿಎಸ್‌ಐಆರ್-ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯ” (CSIR-NAL) ಸಂಸ್ಥೆಯು, ದೇಶೀಯವಾಗಿ ಅಭಿವೃದ್ಧಿಪಡಿಸಲಾದ ‘ಹಂಸ-3 (ಎನ್‌ಜಿ)’ ತರಬೇತಿ ವಿಮಾನದ “ಉತ್ಪಾದನಾ ಆವೃತ್ತಿ”ಯನ್ನು ಬಿಡುಗಡೆ ಮಾಡಿದೆ.

    ಹಂಸ-3 ರ ಬಗ್ಗೆ:

    • ಹಂಸ-3 ಎಂಬುದು CSIR-NAL ಸಂಸ್ಥೆಯು ದೇಶೀಯವಾಗಿ ಅಭಿವೃದ್ಧಿಪಡಿಸಿದ ಎರಡು – ಆಸನಗಳುಳ್ಳ ತರಬೇತಿ ವಿಮಾನವಾಗಿದೆ.
    • ಇದು ಪ್ರಾಥಮಿಕ ವಿಮಾನ ತರಬೇತಿಗಾಗಿ ವಿನ್ಯಾಸಗೊಳಿಸಲಾದ, ಸಂಕೇತ ಆಧಾರಿತ ಉಪಕರಣಗಳು, ಯಾಂತ್ರಿಕವಾಗಿ ಕಾರ್ಯನಿರ್ವಹಿಸುವ ರೆಕ್ಕೆಗಳು ಮತ್ತು ಪ್ರಮಾಣಿತ ವಿಮಾನ ನಿಯಂತ್ರಣ ಕೊಠಡಿಯನ್ನು ಒಳಗೊಂಡಿದೆ. ಇದು ಮುಖ್ಯವಾಗಿ ವಿಮಾನ ಹಾರಾಟ ಕ್ಲಬ್‌ಗಳು ಮತ್ತು ವಿಮಾನ ಚಾಲಕ ತರಬೇತಿ ಶಾಲೆಗಳಿಗೆ ಸೇವೆ ಸಲ್ಲಿಸುತ್ತಿತ್ತು.
    • ಇದನ್ನು ಸಂಪೂರ್ಣವಾಗಿ ರಬ್ಬರ ಮಿಶ್ರಿತ ಗಾಜು (ಫೈಬರ್‌ಗ್ಲಾಸ್) ಮತ್ತು ಕಾರ್ಬನ್ ಸಂಯೋಜಿತ ವಸ್ತುಗಳಿಂದ ನಿರ್ಮಿಸಲ್ಪಟ್ಟಿರುವುದರಿಂದ, ಇದು ತುಕ್ಕು ನಿರೋಧಕತೆ, ಹಾನಿ ತಡೆಯುವಂತೆ ಮತ್ತು ದುರಸ್ತಿಯ ಸುಲಭತೆಯಲ್ಲಿ ಅಂತರ್ಗತ ಅನುಕೂಲಗಳನ್ನು ಒದಗಿಸುತ್ತದೆ.

    ಹಂಸ-3 ಎನ್‌ಜಿ (ಹೊಸ ಪೀಳಿಗೆ): ಇದು ಹಂಸ-3 ರ ಸುಧಾರಿತ ಆವೃತ್ತಿಯಾಗಿದ್ದು, ಈ ಕೆಳಗಿನ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿದೆ:

    1. ಡಿಜಿಟಲ್ ಗಾಜಿನ ವಿಮಾನ ನಿಯಂತ್ರಣ ಕೊಠಡಿ: ಉತ್ತಮ ಸಾಂದರ್ಭಿಕ ಅರಿವಿಗಾಗಿ ಹಳೆಯ ಸಂಕೇತ ಆಧಾರಿತ ಉಪಕರಣಗಳನ್ನು ಇದು ಬದಲಾಯಿಸುತ್ತದೆ.
    2. ಹೆಚ್ಚಿದ ಇಂಧನ ಸಾಮರ್ಥ್ಯ: ಇದು ದೀರ್ಘಾವಧಿಯ ತರಬೇತಿ ಹಾರಾಟಗಳಿಗೆ ಮತ್ತು ಹೆಚ್ಚಿನ ಸಹನೆಗೆ ಅನುವು ಮಾಡಿಕೊಡುತ್ತದೆ.
    3. ಸ್ಥಿರ ಹಾರಾಟ ನಿರ್ವಹಣೆ: ಕನಿಷ್ಠ ಮಟ್ಟದ ವೇಗ  ಮತ್ತು ಊಹಿಸಬಹುದಾದ ನಡವಳಿಕೆಯು ಇದನ್ನು ಆರಂಭಿಕ ಹಂತದ ತರಬೇತಿಗೆ ಸೂಕ್ತವಾಗಿಸುತ್ತದೆ.

    ಆಹಾರ ಮತ್ತು ಕೃಷಿಗಾಗಿ ಸಸ್ಯ ತಳಿ ಸಂಪನ್ಮೂಲಗಳ ಮೇಲಿನ ಅಂತರರಾಷ್ಟ್ರೀಯ ಒಪ್ಪಂದ (ITPGRFA)

    ಸಾಮಾನ್ಯ ಅಧ್ಯಯನ 3/ ಕೃಷಿ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚೆಗೆ, ಪೆರುವಿನ ಲಿಮಾದಲ್ಲಿ ‘ಆಹಾರ ಮತ್ತು ಕೃಷಿಗಾಗಿ ಸಸ್ಯ ತಳಿ ಸಂಪನ್ಮೂಲಗಳ ಮೇಲಿನ ಅಂತರರಾಷ್ಟ್ರೀಯ ಒಪ್ಪಂದ’ದ (ITPGRFA) ಆಡಳಿತ ಮಂಡಳಿಯ 11ನೇ ಸಭೆಯು ಮುಕ್ತಾಯಗೊಂಡಿತು. ಆದರೆ, ‘ಪ್ರಮಾಣಿತ ವಸ್ತು ವರ್ಗಾವಣೆ ಒಪ್ಪಂದ’ (SMTA) ದ ಅಡಿಯಲ್ಲಿ ಬರುವ ಬೆಳೆಗಳ ಪಟ್ಟಿಯನ್ನು ವಿಸ್ತರಿಸುವ ವಿಷಯದಲ್ಲಿ ಯಾವುದೇ ಒಮ್ಮತ ಮೂಡಲಿಲ್ಲ.

    ಪ್ರಮುಖ ಅಂಶಗಳು:

    • ಭಾರತದ ವಿರೋಧ: ‘ಬಹುಪಕ್ಷೀಯ ವ್ಯವಸ್ಥೆ’ಯನ್ನು ಎಲ್ಲಾ ಬೆಳೆಗಳಿಗೆ ವಿಸ್ತರಿಸುವ ಮತ್ತು ಲಾಭ-ಹಂಚಿಕೆ ನಿಯಮಗಳನ್ನು ಪರಿಷ್ಕರಿಸುವ ಪ್ರಸ್ತಾಪವನ್ನು ಭಾರತ ಮತ್ತು ಇತರ ಕೆಲವು ದೇಶಗಳು ಬಲವಾಗಿ ವಿರೋಧಿಸಿದವು. ಈ ಕ್ರಮವು ಬೀಜ ವೈವಿಧ್ಯತೆಯ ಮೇಲಿನ ರಾಷ್ಟ್ರೀಯ ಸಾರ್ವಭೌಮತ್ವವನ್ನು ದುರ್ಬಲಗೊಳಿಸಬಹುದು ಎಂಬುದು ಅವುಗಳ ವಾದವಾಗಿದೆ.
    • ಪ್ರಮಾಣಿತ ವಸ್ತು ವರ್ಗಾವಣೆ ಒಪ್ಪಂದ (SMTA) ದ ನಿಯಮಗಳು: ಪ್ರಸ್ತುತ SMTA ಅಡಿಯಲ್ಲಿ, 64 ಬೆಳೆಗಳ ತಳಿ  (ಆನುವಂಶಿಕ) ವಸ್ತುವು ಕೇವಲ ಒಪ್ಪಂದದ ಸದಸ್ಯ ರಾಷ್ಟ್ರಗಳಿಗೆ ಮಾತ್ರ ಲಭ್ಯವಿರುತ್ತದೆ. ಇದನ್ನು ಪ್ರತ್ಯೇಕವಾಗಿ ಸಂಶೋಧನೆ, ತಳಿ ಅಭಿವೃದ್ಧಿ ಮತ್ತು ತರಬೇತಿಗಾಗಿ ಮಾತ್ರ ಬಳಸಿಕೊಳ್ಳಬಹುದಾಗಿದೆ.
    • ಬೌದ್ಧಿಕ ಆಸ್ತಿ ಹಕ್ಕುಗಳ (IPR) ನಿರ್ಬಂಧ: ಆನುವಂಶಿಕ ವಸ್ತುಗಳನ್ನು ಸ್ವೀಕರಿಸುವವರು, ತಾವು ಪಡೆದ ಮೂಲ ರೂಪದ ವಸ್ತುವಿನ ಮೇಲೆ ‘ಬೌದ್ಧಿಕ ಆಸ್ತಿ ಹಕ್ಕುಗಳನ್ನು’ (IPR) ಪ್ರತಿಪಾದಿಸುವಂತಿಲ್ಲ. ಅಲ್ಲದೆ, ಒಪ್ಪಂದದ ನಾಲ್ಕು ಲಾಭ-ಹಂಚಿಕೆ ಕಾರ್ಯವಿಧಾನಗಳ ಮೂಲಕ ಅದರಿಂದ ಬರುವ ಲಾಭಗಳನ್ನು ಕಡ್ಡಾಯವಾಗಿ ಹಂಚಿಕೊಳ್ಳಬೇಕು.

    ಆಹಾರ ಮತ್ತು ಕೃಷಿಗಾಗಿ ಸಸ್ಯ ತಳಿ ಸಂಪನ್ಮೂಲಗಳ ಮೇಲಿನ ಅಂತರರಾಷ್ಟ್ರೀಯ ಒಪ್ಪಂದ (ITPGRFA) ದ ಬಗ್ಗೆ:

    • ಇದು ಕಾನೂನು ಬದ್ಧವಾಗಿರುವ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ (FAO) ಒಂದು ಒಪ್ಪಂದವಾಗಿದೆ. ಇದನ್ನು 2001 ರಲ್ಲಿ ಅಂಗೀಕರಿಸಲಾಯಿತು ಮತ್ತು 2004 ರಿಂದ ಜಾರಿಗೆ ಬಂದಿತು.
    • ಉದ್ದೇಶ: ಆಹಾರ ಮತ್ತು ಕೃಷಿಗಾಗಿ ಸಸ್ಯ ತಳಿ (ಆನುವಂಶಿಕ) ಸಂಪನ್ಮೂಲಗಳ (PGRFA) ಸಂರಕ್ಷಣೆ, ಸುಸ್ಥಿರ ಬಳಕೆ  ಮತ್ತು ಅವುಗಳ ಬಳಕೆಯಿಂದ ಬರುವ ಲಾಭಗಳ ನ್ಯಾಯಯುತ ಹಂಚಿಕೆ ಇದರ ಪ್ರಮುಖ ಗುರಿಯಾಗಿದೆ.
    • ಇದು “ಜೀವ ವೈವಿಧ್ಯತೆ ಸಮಾವೇಶ (CBD) ಮತ್ತು ನಗೋಯಾ ಶಿಷ್ಟಾಚಾರ”ಗಳಿಗೆ  ಪೂರಕವಾಗಿ ಕಾರ್ಯನಿರ್ವಹಿಸುತ್ತದೆ.
  • ರಷ್ಯಾದ S-500 ವಾಯು ರಕ್ಷಣಾ ವ್ಯವಸ್ಥೆ | ಆಪರೇಷನ್ “ಸಾಗರ್ ಬಂಧು”

    ರಷ್ಯಾದ S-500 ವಾಯು ರಕ್ಷಣಾ ವ್ಯವಸ್ಥೆ

    ರಕ್ಷಣೆ

    ಇದೀಗ ಸುದ್ದಿಯಲ್ಲಿದೆ:

    • ಭಾರತದ ಪ್ರಧಾನಮಂತ್ರಿಗಳು ಮತ್ತು ರಷ್ಯಾದ ಅಧ್ಯಕ್ಷರು, ರಷ್ಯಾದ ಮುಂದಿನ ಪೀಳಿಗೆಯ ಅತ್ಯಾಧುನಿಕ ‘S-500’ ವಾಯು ರಕ್ಷಣಾ ವ್ಯವಸ್ಥೆಯನ್ನು ಪಡೆಯುವ ಕುರಿತು ಭಾರತಕ್ಕಿರುವ ಆಸಕ್ತಿಯ ಬಗ್ಗೆ ಚರ್ಚಿಸುವ ನಿರೀಕ್ಷೆಯಿದೆ.

    S-500 ವಾಯು ರಕ್ಷಣಾ ವ್ಯವಸ್ಥೆಯ ಬಗ್ಗೆ:

    • ಇದು ರಷ್ಯಾದ ಅತ್ಯಂತ ಸುಧಾರಿತ ದೀರ್ಘ-ವ್ಯಾಪ್ತಿಯ, ‘ಭೂಮಿಯಿಂದ ಗಗನಕ್ಕೆ ಚಿಮ್ಮುವ’ ಮತ್ತು ಬಾಹ್ಯಾಕಾಶ ನಿರೋಧಕ ರಕ್ಷಣಾ ವ್ಯವಸ್ಥೆಯಾಗಿದ್ದು, ಆಧುನಿಕ ಹಾಗೂ ಭವಿಷ್ಯದ ವಿವಿಧ ರೀತಿಯ ವೈಮಾನಿಕ ಬೆದರಿಕೆಗಳನ್ನು ಹತ್ತಿಕ್ಕಲು ಇದನ್ನು ವಿನ್ಯಾಸಗೊಳಿಸಲಾಗಿದೆ.
    • ಇದು 600 ಕಿ.ಮೀ ವರೆಗಿನ ದೂರದಲ್ಲಿರುವ ವಿಮಾನಗಳು, ಕ್ಷಿಪಣಿಗಳು ಮತ್ತು ಶಬ್ದಾತೀತ (ಹೈಪರ್‌ಸಾನಿಕ್) ಶಸ್ತ್ರಾಸ್ತ್ರಗಳನ್ನು ಪ್ರತಿಬಂಧಿಸುವ ಸಾಮರ್ಥ್ಯ ಹೊಂದಿದೆ.
    • ಇದು 200 ಕಿ.ಮೀ ವರೆಗಿನ ಎತ್ತರದಲ್ಲಿ ಕಾರ್ಯನಿರ್ವಹಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಇದರ ಪ್ರತಿಕ್ರಿಯಾ ಸಮಯವು ಕೇವಲ 3–4 ಸೆಕೆಂಡುಗಳಾಗಿದ್ದು, ಇದು S-400 ವ್ಯವಸ್ಥೆಗಿಂತ ಸುಮಾರು ಎರಡು ಪಟ್ಟು ವೇಗವಾಗಿದೆ.

    S-400 ಮತ್ತು S-500 ನಡುವಿನ ವ್ಯತ್ಯಾಸಗಳು

    ವೈಶಿಷ್ಟ್ಯ

    S-400

    S-500

    ವ್ಯಾಪ್ತಿ

    380 ಕಿ.ಮೀ

    600 ಕಿ.ಮೀ

    ಗುರಿಯ ಎತ್ತರ

    30–40 ಕಿ.ಮೀ

    200 ಕಿ.ಮೀ ವರೆಗೆ (ಸಮೀಪ-ಬಾಹ್ಯಾಕಾಶ)

    ಪ್ರತಿಬಂಧಿಸುವ ಬೆದರಿಕೆಗಳು 

    ವಿಮಾನಗಳು, ಕ್ರೂಸ್ ಕ್ಷಿಪಣಿಗಳು, ಸೀಮಿತ ಬ್ಯಾಲಿಸ್ಟಿಕ್ ಕ್ಷಿಪಣಿಗಳು

    ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಹೈಪರ್‌ಸಾನಿಕ್ ಶಸ್ತ್ರಾಸ್ತ್ರಗಳು, ಸ್ಟೆಲ್ತ್ (ರಹಸ್ಯ) ವಿಮಾನಗಳು, LEO ಉಪಗ್ರಹಗಳು

    ಪ್ರತಿಕ್ರಿಯೆಯ ಸಮಯ

    9–10 ಸೆಕೆಂಡುಗಳು

    3–4 ಸೆಕೆಂಡುಗಳು

    ಉಪಗ್ರಹ ನಿರೋಧಕ ಸಾಮರ್ಥ್ಯ

    ಇಲ್ಲ

    ಹೌದು

    ಕಾರ್ಯವ್ಯಾಪ್ತಿ/ಪಾತ್ರ

    ವಾಯು ರಕ್ಷಣೆ

    ವಾಯು ಮತ್ತು ಬಾಹ್ಯಾಕಾಶ ರಕ್ಷಣೆ

    ಆಪರೇಷನ್ “ಸಾಗರ್ ಬಂಧು”

    ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ:

    • ಶ್ರೀಲಂಕಾದಾದ್ಯಂತ ವ್ಯಾಪಕ ವಿನಾಶವನ್ನುಂಟುಮಾಡಿದ ದಿತ್ವಾಹ್‘ ಚಂಡಮಾರುತದ ಹಿನ್ನೆಲೆಯಲ್ಲಿ, ಪರಿಹಾರ ಮತ್ತು ರಕ್ಷಣಾ ಕಾರ್ಯಗಳಿಗೆ ಬೆಂಬಲ ನೀಡಲು ಭಾರತವು ತಕ್ಷಣವೇ ‘ಆಪರೇಷನ್ ಸಾಗರ್ ಬಂಧು’ ಕಾರ್ಯಾಚರಣೆಯನ್ನು ಕೈಗೊಂಡಿತು.

    ಆಪರೇಷನ್ “ಸಾಗರ್ ಬಂಧು” ಕಾರ್ಯಾಚರಣೆಯ ಬಗ್ಗೆ:

    • ಇದು ಶ್ರೀಲಂಕಾಕ್ಕೆ ತುರ್ತು ನೆರವು ನೀಡಲು ಭಾರತವು ಕೈಗೊಂಡ ‘ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ’ ಕಾರ್ಯಾಚರಣೆಯಾಗಿದೆ.
    • ಈ ಕಾರ್ಯಾಚರಣೆಯ ಅಡಿಯಲ್ಲಿ ಭಾರತವು ಈ ಕೆಳಗಿನ ನೆರವನ್ನು ರವಾನಿಸಿದೆ:
      • ಪರಿಹಾರ ಸಾಮಗ್ರಿಗಳು
      • ವೈದ್ಯಕೀಯ ಸರಬರಾಜುಗಳು 
      • ತುರ್ತು ರಕ್ಷಣಾ ಉಪಕರಣಗಳು

    ಮಹತ್ವ:

    • ಈ ಕಾರ್ಯಾಚರಣೆಯು ಭಾರತದ ‘ನೆರೆಹೊರೆ ಮೊದಲು ನೀತಿ’ (Neighbourhood First Policy) ಮತ್ತು ‘ಮಹಾಸಾಗರ್’ (MAHASAGAR) ಎಂಬ ವಿಶಾಲವಾದ ಸಮುದ್ರಯಾನ ದೃಷ್ಟಿಕೋನದ ಬಗೆಗಿನ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

    ದಿತ್ವಾಹ್ ಚಂಡಮಾರುತದ ಬಗ್ಗೆ:

    • ಇದು ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಅತ್ಯಂತ ವೇಗವಾಗಿ ರೂಪುಗೊಂಡ ಒಂದು ಉಷ್ಣವಲಯದ ಚಂಡಮಾರುತವಾಗಿದೆ.
    • ದಿತ್ವಾಹ್’ ಎಂಬ ಹೆಸರನ್ನು ಯೆಮನ್ ದೇಶವು ಸೂಚಿಸಿದೆ.
  • ಸ್ಕೈರೂಟ್‌ನ ಪ್ರಥಮ ಕಕ್ಷೀಯ ಉಡಾವಣೆ ವಾಹನ (ರಾಕೆಟ್): ವಿಕ್ರಮ್-1 | ಭಾರತವು ಅಂತರರಾಷ್ಟ್ರೀಯ ಸಮುದ್ರಯಾನ ಸಂಸ್ಥೆಯ (IMO) ಮಂಡಳಿಗೆ ಮರು ಆಯ್ಕೆಗೊಂಡಿದೆ

    ಸ್ಕೈರೂಟ್‌ನ ಪ್ರಥಮ ಕಕ್ಷೀಯ ಉಡಾವಣೆ ವಾಹನ (ರಾಕೆಟ್): ವಿಕ್ರಮ್-1

    ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ:

    • ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತೀಯ ಬಾಹ್ಯಾಕಾಶ ನವೋದ್ಯಮವಾದ ‘ಸ್ಕೈರೂಟ್’ನ ‘ಇನ್ಫಿನಿಟಿ ಕ್ಯಾಂಪಸ್’ ಅನ್ನು ಲೋಕಾರ್ಪಣೆಗೊಳಿಸಿದರು. 
    • ಇದೇ ಸಂದರ್ಭದಲ್ಲಿ ಉಪಗ್ರಹಗಳನ್ನು ಕಕ್ಷೆಗೆ ತಲುಪಿಸುವ ಸಾಮರ್ಥ್ಯವಿರುವ ಸಂಸ್ಥೆಯ ಮೊದಲ ಕಕ್ಷೀಯ ಉಡಾವಣೆ ವಾಹನ ‘ವಿಕ್ರಮ್-1’ ಅನ್ನು ಸಹ ಅನಾವರಣಗೊಳಿಸಿದರು.

    ‘ಸ್ಕೈರೂಟ್’ ನ ಬಗ್ಗೆ:

    • ಇದು ಪವನ್ ಚಂದನ್ ಮತ್ತು ಭರತ್ ಡಾಕಾ ಅವರಿಂದ ಸ್ಥಾಪಿಸಲ್ಪಟ್ಟ ಭಾರತದ ಪ್ರಮುಖ ಖಾಸಗಿ ಬಾಹ್ಯಾಕಾಶ ನವೋದ್ಯಮವಾಗಿದೆ.
    • ನವೆಂಬರ್ 2022 ರಲ್ಲಿ, ಸ್ಕೈರೂಟ್ ತನ್ನ ಉಪ-ಕಕ್ಷೀಯ ಉಡಾವಣೆ ವಾಹನ ‘ವಿಕ್ರಮ್-S’ ಅನ್ನು ಉಡಾವಣೆ ಮಾಡುವ ಮೂಲಕ ಬಾಹ್ಯಾಕಾಶಕ್ಕೆ ರಾಕೆಟ್ ಉಡಾಯಿಸಿದ ಭಾರತದ ಮೊದಲ ಖಾಸಗಿ ಕಂಪನಿ ಎಂಬ ಮೈಲಿಗಲ್ಲು ಸ್ಥಾಪಿಸಿತು.

    ‘ವಿಕ್ರಮ್-1’ ನ ಬಗ್ಗೆ:

    • ಇದನ್ನು ‘ಸ್ಕೈರೂಟ್ ಏರೋಸ್ಪೇಸ್’ ಅಭಿವೃದ್ಧಿಪಡಿಸಿದ್ದು, ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ಡಾ. ವಿಕ್ರಮ್ ಸಾರಾಭಾಯ್ ಅವರ ಗೌರವಾರ್ಥವಾಗಿ ‘ವಿಕ್ರಮ್’ ಎಂದು ಹೆಸರಿಡಲಾಗಿದೆ.
    • ಇದು ಸಣ್ಣ ಉಪಗ್ರಹಗಳ ಮಾರುಕಟ್ಟೆಯ ಬೇಡಿಕೆಗಳನ್ನು ಪೂರೈಸಲು, ತ್ವರಿತ ಹಾಗೂ ಮಿತವ್ಯಯಕಾರಿ ಉಡಾವಣೆಗಳಿಗಾಗಿ ವಿನ್ಯಾಸಗೊಳಿಸಲಾದ ಭಾರತದ ಮೊದಲ ಖಾಸಗಿ ಕಕ್ಷೀಯ ಶ್ರೇಣಿಯ ಉಡಾವಣಾ ವಾಹನವಾಗಿದೆ.

    ಭಾರತವು ಅಂತರರಾಷ್ಟ್ರೀಯ ಸಮುದ್ರಯಾನ ಸಂಸ್ಥೆಯ (IMO) ಮಂಡಳಿಗೆ ಮರು ಆಯ್ಕೆಗೊಂಡಿದೆ

    ಪರಿಸರ

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚಿಗೆ, ಭಾರತವು ಅಂತರರಾಷ್ಟ್ರೀಯ ಸಮುದ್ರಯಾನ ಸಂಸ್ಥೆಯ (IMO) ಮಂಡಳಿಗೆ 2026-27ರ ಅವಧಿಗೆ ಅತ್ಯಧಿಕ ಮತಗಳೊಂದಿಗೆ ಮರು ಆಯ್ಕೆಯಾಗಿದೆ.

    ಅಂತರರಾಷ್ಟ್ರೀಯ ಸಮುದ್ರಯಾನ ಸಂಸ್ಥೆ (IMO) ಯ ಬಗ್ಗೆ:

    • ಇದು ವಿಶ್ವಸಂಸ್ಥೆಯ ಒಂದು ವಿಶೇಷ ಸಂಸ್ಥೆಯಾಗಿದೆ.
    • ಧ್ಯೇಯೋದ್ದೇಶ:- ಹಡಗು ಸಂಚಾರದ ಸುರಕ್ಷತೆ ಮತ್ತು ಭದ್ರತೆಯನ್ನು ಖಾತರಿಪಡಿಸುವುದು ಹಾಗೂ ಹಡಗುಗಳಿಂದ ಉಂಟಾಗುವ ಸಮುದ್ರ ಮತ್ತು ವಾಯುಮಂಡಲದ ಮಾಲಿನ್ಯವನ್ನು ತಡೆಗಟ್ಟುವುದು ಇದರ ಪ್ರಮುಖ ಹೊಣೆಗಾರಿಕೆಯಾಗಿದೆ.
    • ಉಗಮ:- ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆಯ ಸಮ್ಮೇಳನದ ನಿರ್ಣಯದಂತೆ 1948 ರಲ್ಲಿ ಇದು ಸ್ಥಾಪನೆಯಾಯಿತು ಮತ್ತು 1958 ರಲ್ಲಿ ಅಸ್ತಿತ್ವಕ್ಕೆ ಬಂದಿತು.
    • ಸದಸ್ಯತ್ವ:- ಪ್ರಸ್ತುತ 175 ಸದಸ್ಯ ರಾಷ್ಟ್ರಗಳನ್ನು ಹೊಂದಿದೆ.
    • ಕೇಂದ್ರ ಕಚೇರಿ:- ಲಂಡನ್, (ಯುನೈಟೆಡ್ ಕಿಂಗ್‌ಡಮ್)
    • ಭಾರತವು ಕೂಡ ಸದಸ್ಯ:- 1959 ರಲ್ಲಿ ಇದರ ಸದಸ್ಯತ್ವವನ್ನು ಪಡೆಯಿತು.
    • ರಚನೆ:- ಐಎಂಒ ಆಡಳಿತವನ್ನು ದ್ವೈವಾರ್ಷಿಕವಾಗಿ ಸಭೆ ಸೇರುವ ಎಲ್ಲಾ ಸದಸ್ಯ ರಾಷ್ಟ್ರಗಳ ‘ಅಸೆಂಬ್ಲಿ’ ಮತ್ತು 2 ವರ್ಷಗಳ ಅವಧಿಗೆ ಆಯ್ಕೆಯಾಗುವ 40 ಸದಸ್ಯರ ‘ಮಂಡಳಿ’ಯು ನಿರ್ವಹಿಸುತ್ತದೆ.
  • RISE ಉಪಕ್ರಮ | ಆಪರೇಷನ್ ಪವನ್

    RISE ಉಪಕ್ರಮ

    ಸಾಮಾನ್ಯ ಅಧ್ಯಯನ-3/ ಪರಿಸರ

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚೆಗೆ, ಐಐಟಿ ಖರಗ್‌ಪುರ “ಇಂಪ್ಯಾಕ್ಟ್ RISE” (R-ಸಂಶೋಧನೆ, I-ನಾವೀನ್ಯತೆ, S-ಕೌಶಲ್ಯ ಮತ್ತು E-ಉದ್ಯಮಶೀಲತೆ) ಎಂಬ ಹೊಸ ಉಪಕ್ರಮವನ್ನು ಪ್ರಾರಂಭಿಸಿದೆ.

    RISE ಉಪಕ್ರಮದ ಬಗ್ಗೆ:

    • ಧ್ಯೇಯೋದ್ದೇಶ:- ಈ ಉಪಕ್ರಮವು ಸಾಮಾಜಿಕ ಪರಿವರ್ತನೆಗಾಗಿ ಸುಸ್ಥಿರ ತಂತ್ರಜ್ಞಾನ ಮತ್ತು ಸುಧಾರಿತ ನಿರ್ವಹಣಾ ಪದ್ಧತಿಗಳ ಮೇಲೆ ಕೇಂದ್ರೀಕರಿಸುತ್ತದೆ.
    • ನಾಲ್ಕು ಪ್ರಮುಖ ಆಧಾರಸ್ಥಂಭಗಳು: ಈ ಯೋಜನೆಯು ಸಂಶೋಧನೆ, ನಾವೀನ್ಯತೆ, ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಎಂಬ ನಾಲ್ಕು ಪ್ರಮುಖ ಆಯಾಮಗಳನ್ನು ಆಧರಿಸಿದೆ.
    • ಮಹತ್ವ:- ಇದು ಸುಸ್ಥಿರ ಅಭಿವೃದ್ಧಿ ಗುರಿಗಳು ಮತ್ತು ಭಾರತದ ಹವಾಮಾನ ಮತ್ತು ಅಭಿವೃದ್ಧಿ ಆದ್ಯತೆಗಳಿಗೆ ಅನುಗುಣವಾಗಿ ಸಂಶೋಧನೆಯನ್ನು ಒಳಗೊಂಡಿರುತ್ತದೆ.

    ಆಪರೇಷನ್ ಪವನ್

    ರಕ್ಷಣೆ

    ಇದೀಗ ಸುದ್ದಿಯಲ್ಲಿದೆ: 

    • ಶ್ರೀಲಂಕಾದಲ್ಲಿ ನಡೆದ ‘ಆಪರೇಷನ್ ಪವನ್’ (1987–1990) ಕಾರ್ಯಾಚರಣೆಯ ಅವಧಿಯಲ್ಲಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರ ಯೋಧರಿಗೆ ಭಾರತೀಯ ಭೂಸೇನಾ ಮುಖ್ಯಸ್ಥರಾದ ಜನರಲ್ ಉಪೇಂದ್ರ ದ್ವಿವೇದಿ ಅವರು ಗೌರವ ನಮನ ಸಲ್ಲಿಸಿದರು.

    ‘ಆಪರೇಷನ್ ಪವನ್’ (1987–1990) ಕಾರ್ಯಾಚರಣೆಯ ಬಗ್ಗೆ:

    • ಭಾರತ-ಶ್ರೀಲಂಕಾ ಒಪ್ಪಂದಕ್ಕೆ ಸಹಿ ಹಾಕಿದ ನಂತರ, 1987 ರಲ್ಲಿ ಅಂದಿನ ರಾಜೀವ್ ಗಾಂಧಿ ನೇತೃತ್ವದ ಸರ್ಕಾರವು ಈ ಕಾರ್ಯಾಚರಣೆಯನ್ನು ಹಮ್ಮಿಕೊಂಡಿತ್ತು.
    • ಶ್ರೀಲಂಕಾದ ಅಲ್ಪಸಂಖ್ಯಾತ ತಮಿಳು ಸಮುದಾಯ ಮತ್ತು ಸಿಂಹಳೀಯ ಬಹುಸಂಖ್ಯಾತ ಸರ್ಕಾರದ ನಡುವೆ ನಡೆಯುತ್ತಿದ್ದ ಅಂತರ್ಯುದ್ಧದ ವೇಳೆ, ಶಾಂತಿ ಸ್ಥಾಪನೆಗಾಗಿ ಭಾರತವು ತನ್ನ ‘ಭಾರತೀಯ ಶಾಂತಿ ಪಾಲನಾ ಪಡೆ’ (IPKF)ಯನ್ನು ನಿಯೋಜಿಸಿತ್ತು.

    ಭಾರತದ ತೀವ್ರ ಕಳವಳಕ್ಕೆ ಕಾರಣಗಳು:

    • ತಮಿಳುನಾಡಿನೊಂದಿಗೆ ತಮಿಳು ಸಮುದಾಯಕ್ಕಿದ್ದ ಜನಾಂಗೀಯ ಮತ್ತು ಸಾಂಸ್ಕೃತಿಕ ಬಾಂಧವ್ಯ.
    • ದ್ವೀಪರಾಷ್ಟ್ರದಲ್ಲಿ ಮಿತಿಮೀರುತ್ತಿದ್ದ ಹಿಂಸಾಚಾರ.
    • ಭಾರತಕ್ಕೆ ನಿರಾಶ್ರಿತರ ಒಳಹರಿವು ನಿರಂತರವಾಗಿ ಹೆಚ್ಚಾಗುತ್ತಿರುವುದು.

    ನಿಮಗಿದು ತಿಳಿದಿದೆಯೇ?

    • ಮೇ 18, 2009 ರಂದು ‘ಲಿಬರೇಷನ್ ಟೈಗರ್ಸ್ ಆಫ್ ತಮಿಳು ಈಲಂ’ (LTTE) ಸಂಘಟನೆಯ ಸೋಲಿನೊಂದಿಗೆ ಶ್ರೀಲಂಕಾದ ದಶಕಗಳ ಕಾಲದ ಅಂತರ್ಯುದ್ಧವು ಕೊನೆಗೊಂಡಿತು.
    • ಭಾರತವು ಕಳೆದ ಹಲವು ದಶಕಗಳಿಂದ ಆಪರೇಷನ್ ಪವನ್ ಅನ್ನು ಅಧಿಕೃತವಾಗಿ ಸ್ಮರಿಸಿರಲಿಲ್ಲ. ಆದರೆ, ಶ್ರೀಲಂಕಾ ಸರ್ಕಾರವು ಕೊಲಂಬೊದಲ್ಲಿ ‘ಭಾರತೀಯ ಶಾಂತಿ ಪಾಲನಾ ಪಡೆ’ (IPKF) ಯ ಸ್ಮಾರಕವನ್ನು ನಿರ್ವಹಿಸುತ್ತಾ ಬಂದಿದೆ.
    • ಪ್ರಸ್ತುತ, ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಬಲಿದಾನಗೈದ ಯೋಧರ ತ್ಯಾಗವನ್ನು ಭಾರತೀಯ ಸೇನೆಯು ಅಧಿಕೃತವಾಗಿ ಗುರುತಿಸುವ ಮೂಲಕ ತನ್ನ ನಿಲುವಿನಲ್ಲಿ ಮಹತ್ವದ ಬದಲಾವಣೆ ತಂದಿದೆ.
  • ನಯೀ ಚೇತನಾ 4.0

    ನಯೀ ಚೇತನಾ 4.0

    ಸಾಮಾನ್ಯ ಅಧ್ಯಯನ-2/ ಆರೋಗ್ಯ ಮತ್ತು ಸಮಾಜ

    ಇದೀಗ ಸುದ್ದಿಯಲ್ಲಿದೆ:

    • ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಾದ ಶಿವ್‌ರಾಜ್ ಸಿಂಗ್ ಚೌಹಾಣ್ ಅವರು “ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ”ವನ್ನು ಉತ್ತೇಜಿಸುವ ಉದ್ದೇಶದಿಂದ ‘ನಯಿ ಚೇತನಾ 4.0’ ಎಂಬ ರಾಷ್ಟ್ರೀಯ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

    ನಯೀ ಚೇತನಾ 4.0 ಅಭಿಯಾನದ ಬಗ್ಗೆ:

    • ಆಯೋಜಕರು:- ಇದು ಒಂದು ತಿಂಗಳ ಕಾಲ ನಡೆಯುವ ಅಭಿಯಾನವಾಗಿದ್ದು, ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಡಿಯಲ್ಲಿನ ದೀನ್ ದಯಾಳ್ ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಗುರಿ (DAY-NRLM) ವತಿಯಿಂದ ಆಯೋಜಿಸಲ್ಪಟ್ಟಿದೆ.
    • ಅನುಷ್ಠಾನ ಸಚಿವಾಲಯ:- ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರು
    • ಧ್ಯೇಯೋದ್ದೇಶ:- ಗ್ರಾಮೀಣ ಭಾರತದಲ್ಲಿ ಲಿಂಗ ಆಧಾರಿತ ದೌರ್ಜನ್ಯದ ವಿರುದ್ಧ ಸಮುದಾಯದ ಕ್ರಿಯೆಯನ್ನು ಬಲಪಡಿಸುವುದು ಹಾಗೂ ಮಹಿಳೆಯರ ಸುರಕ್ಷತೆ, ಘನತೆ ಮತ್ತು ಆರ್ಥಿಕ ಸಬಲೀಕರಣವನ್ನು ಉತ್ತೇಜಿಸುವುದು.
    • ಮಹತ್ವ:- ಈ ಅಭಿಯಾನವು ಮಹಿಳೆಯರ ಸುರಕ್ಷಿತ ಸಂಚಾರವನ್ನು ಸಕ್ರಿಯಗೊಳಿಸುವುದು, ಅವರನ್ನು ಪ್ರಮುಖ ಆರ್ಥಿಕ ಕೊಡುಗೆದಾರರೆಂದು ಗುರುತಿಸುವುದು ಮತ್ತು ಹಂಚಿಕೆಯ ಸಮುದಾಯ ಜವಾಬ್ದಾರಿಯ ಮೂಲಕ ಸಂಭಾವನೆ ರಹಿತ ಶುಶ್ರೂಷಾ ಕೆಲಸಗಳನ್ನು ಪರಿಹರಿಸುವುದರ ಮೇಲೆ ಕೇಂದ್ರೀಕರಿಸುತ್ತದೆ.
  • ಡಾ. ವರ್ಗೀಸ್ ಕುರಿಯನ್

    ಡಾ. ವರ್ಗೀಸ್ ಕುರಿಯನ್

    ಸಾಮಾನ್ಯ ಅಧ್ಯಯನ-3/ ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ: 

    • ಪ್ರತಿ ವರ್ಷ ನವೆಂಬರ್ 26 ರಂದು ಡಾ. ವರ್ಗೀಸ್ ಕುರಿಯನ್ ಅವರ ಜನ್ಮದಿನಾಚರಣೆಯನ್ನು ಸ್ಮರಿಸಲಾಗುತ್ತದೆ.

    ಡಾ.ವರ್ಗೀಸ್ ಕುರಿಯನ್ (1921-2012) ಅವರ ಬಗ್ಗೆ:

    • ಶ್ವೇತಕ್ರಾಂತಿಯ ಪಿತಾಮಹ:- ಇವರು ಭಾರತದ ಶ್ವೇತಕ್ರಾಂತಿಯ ಮುಖ್ಯ ರೂವಾರಿಯಾಗಿದ್ದು, ಇವರನ್ನು “ಶ್ವೇತಕ್ರಾಂತಿಯ ಪಿತಾಮಹ” ಎಂದು ಗೌರವಿಸಲಾಗುತ್ತದೆ.
    • ಆಪರೇಷನ್ ಫ್ಲಡ್:- ಕೇರಳದ ಕೋಝಿಕ್ಕೋಡ್‌ನಲ್ಲಿ ಜನಿಸಿದ ಇವರು , 1970 ರಲ್ಲಿ ‘ಆಪರೇಷನ್ ಫ್ಲಡ್’ ನ ನೇತೃತ್ವ ವಹಿಸಿದರು. ಇದರ ಯಶಸ್ಸಿನಿಂದಾಗಿ ಹಾಲಿನ ಕೊರತೆ ಎದುರಿಸುತ್ತಿದ್ದ ಭಾರತವು ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ದೇಶವಾಗಿ ಮಾರ್ಪಟ್ಟಿತು.
    • ಆನಂದ್ ಸಹಕಾರಿ ಮಾದರಿ:- ಡಾ. ವರ್ಗೀಸ್ ಕುರಿಯನ್ ಅವರು ಅಮುಲ್ ಮೂಲಕ ಯಶಸ್ವಿಯಾದ ‘ಆನಂದ್ ಸಹಕಾರಿ ಮಾದರಿ’ಯನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಮಾದರಿಯು ದೇಶಾದ್ಯಂತ ಡೈರಿ ಕ್ಷೇತ್ರದ ಅಭಿವೃದ್ಧಿಗೆ ಸಮರ್ಥವಾದ ನೀಲನಕ್ಷೆಯಾಗಿ ಹೊರಹೊಮ್ಮಿತು.
    • ಸಂಸ್ಥೆಗಳ ಸ್ಥಾಪನೆ: ಇವರ ಸಕ್ರಿಯ ಶ್ರಮದಿಂದಾಗಿ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ ಮತ್ತು ‘ಆನಂದ್‌’ನಲ್ಲಿರುವ ಗ್ರಾಮೀಣ ನಿರ್ವಹಣಾ ಸಂಸ್ಥೆಯಂತಹ ಪ್ರಮುಖ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದವು.
    • ಖಾದ್ಯ ತೈಲ ಉದ್ಯಮ:- 1979 ರಲ್ಲಿ ‘ಧಾರಾ’ ಬ್ರ್ಯಾಂಡ್ ಅನ್ನು ಪ್ರಾರಂಭಿಸುವ ಮೂಲಕ ಡಾ. ಕುರಿಯನ್ ಅವರು ಖಾದ್ಯ ತೈಲ ಉದ್ಯಮದಲ್ಲೂ ಕ್ರಾಂತಿಕಾರಿ ಬದಲಾವಣೆ ತಂದರು.
    • ಪ್ರಮುಖ ಪ್ರಶಸ್ತಿಗಳು: ಪದ್ಮವಿಭೂಷಣ, ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಮತ್ತು ವಿಶ್ವ ಆಹಾರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
  • ಸಂವಿಧಾನ ದಿನ

    ಸಂವಿಧಾನ ದಿನ

    (ಸಾಮಾನ್ಯ ಅಧ್ಯಯನ-2/ ರಾಜಕೀಯ ಮತ್ತು ಆಡಳಿತ)

    ಇದೀಗ ಸುದ್ದಿಯಲ್ಲಿದೆ: 

    • ಸಂವಿಧಾನ ರಚನಾ ಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಿದ ಸವಿನೆನಪಿಗಾಗಿ ಪ್ರತಿ ವರ್ಷ ನವೆಂಬರ್ 26 ರಂದು ‘ಸಂವಿಧಾನ ದಿನ’ವನ್ನಾಗಿ ಆಚರಿಸಲಾಗುತ್ತದೆ.

    ಸಂವಿಧಾನ ದಿನ (ಸಂವಿಧಾನ್ ದಿವಸ್ / ರಾಷ್ಟ್ರೀಯ ಕಾನೂನು ದಿನ) ದ ಬಗ್ಗೆ:

    • ಅಧಿಸೂಚನೆ:- 2015 ರಲ್ಲಿ, ಭಾರತ ಸರ್ಕಾರವು ಪ್ರತಿ ವರ್ಷ ನವೆಂಬರ್ 26 ಅನ್ನು ‘ಸಂವಿಧಾನ ದಿನ’ವನ್ನಾಗಿ ಆಚರಿಸುವ ನಿರ್ಧಾರವನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಮೂಲಕ ಅಧಿಕೃತವಾಗಿ ಪ್ರಕಟಿಸಿತು.
    • ಗೌರವ ಸಲ್ಲಿಕೆ:- ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಈ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ.

    ಐತಿಹಾಸಿಕ ಹಿನ್ನೆಲೆ:

    • 1934ರಲ್ಲಿ ಭಾರತಕ್ಕೆ ಪ್ರತ್ಯೇಕ “ಸಂವಿಧಾನ ರಚನಾ ಸಭೆ”ಯ ಅಗತ್ಯವಿದೆ ಎಂಬ ಬೇಡಿಕೆಯನ್ನು ಮೊದಲ ಬಾರಿಗೆ ಎಂ.ಎನ್. ರಾಯ್ ಅವರು ಮಂಡಿಸಿದರು.
    • 1940ರಲ್ಲಿ ಈ ಬೇಡಿಕೆಯನ್ನು ಬ್ರಿಟಿಷ್ ಸರ್ಕಾರವು ಅಂತಿಮವಾಗಿ ಅಂಗೀಕರಿಸಿತು.
    • ಡಿಸೆಂಬರ್ 9, 1946ರಂದು ಸಂವಿಧಾನದ ಕರಡು ಕುರಿತು ಚರ್ಚಿಸಲು ಸಂವಿಧಾನ ರಚನಾ ಸಭೆಯ ಮೊದಲ ಅಧಿವೇಶನ ನಡೆಯಿತು.
    • ನವೆಂಬರ್ 26, 1949ರಂದು ಸಂವಿಧಾನ ರಚನಾ ಸಭೆಯು ಭಾರತದ ಸಂವಿಧಾನವನ್ನು ಅಧಿಕೃತವಾಗಿ ಅಂಗೀಕರಿಸಿತು.
    • ಜನವರಿ 26, 1950ರಂದು ಭಾರತದ ಸಂವಿಧಾನವು ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿತು.

    ಸಂವಿಧಾನ ರಚನಾ ಸಭೆಯ ಪ್ರಮುಖಾಂಶಗಳು:

    • ಅವಧಿ:- ಭಾರತದ ಸಂವಿಧಾನವನ್ನು ಸಿದ್ಧಪಡಿಸಲು ಸಂವಿಧಾನ ರಚನಾ ಸಭೆಯು ಒಟ್ಟು 2 ವರ್ಷ, 11 ತಿಂಗಳು ಮತ್ತು 18 ದಿನಗಳನ್ನು ತೆಗೆದುಕೊಂಡಿತು.
    • ಅಧ್ಯಕ್ಷರು:-
      • ಸಂವಿಧಾನ ರಚನಾ ಸಭೆಯ ಮೊದಲ (ತಾತ್ಕಾಲಿಕ) ಅಧ್ಯಕ್ಷರಾಗಿ ಡಾ. ಸಚ್ಚಿದಾನಂದ ಸಿನ್ಹಾ ನೇಮಕಗೊಂಡಿದ್ದರು.
      • ನಂತರ ಡಾ. ರಾಜೇಂದ್ರ ಪ್ರಸಾದ್ ಅವರು ಸಂವಿಧಾನ ರಚನಾ ಸಭೆಯ ಕಾಯಂ ಅಧ್ಯಕ್ಷರಾಗಿ ಆಯ್ಕೆಯಾದರು.
    • ಧ್ಯೇಯೋದ್ದೇಶಗಳ ನಿರ್ಣಯ:- ಪ್ರಧಾನಿ ಜವಾಹರಲಾಲ್ ನೆಹರು ಅವರು ಡಿಸೆಂಬರ್ 13, 1946 ರಂದು ‘ಧ್ಯೇಯೋದ್ದೇಶಗಳ ನಿರ್ಣಯ’ವನ್ನು ಮಂಡಿಸಿದರು. ಇದನ್ನು ನಂತರ ಜನವರಿ 22, 1947 ರಂದು ಸಂವಿಧಾನದ ಪೀಠಿಕೆಯಾಗಿ ಅಂಗೀಕರಿಸಲಾಯಿತು.
    • ತಾತ್ಕಾಲಿಕ ಶಾಸಕಾಂಗ:- ಹೊಸ ಶಾಸಕಾಂಗವು ರಚನೆಯಾಗುವವರೆಗೆ ಸಂವಿಧಾನ ರಚನಾ ಸಭೆಯು ದೇಶದ ತಾತ್ಕಾಲಿಕ ಶಾಸಕಾಂಗವಾಗಿ ಕಾರ್ಯನಿರ್ವಹಿಸಿತು.

    ಭಾರತದ ಸಂವಿಧಾನದ ಕಿರು ಪರಿಚಯ:

    • ವಿಶ್ವದ ಅತಿ ಉದ್ದವಾದ ಲಿಖಿತ ಸಂವಿಧಾನ:- ಪ್ರಸ್ತುತ 25 ಭಾಗಗಳು ಮತ್ತು 12 ಅನುಸೂಚಿಗಳನ್ನು ಒಳಗೊಂಡಿದೆ.
    • ಸಂಪೂರ್ಣವಾಗಿ ಕೈಬರಹದ ಮೂಲಕವೇ ಸಿದ್ಧಪಡಿಸಲಾಗಿದೆ:- ಭಾರತದ ಮೂಲ ಸಂವಿಧಾನದ ಪ್ರತಿಯನ್ನು ಸಂಪೂರ್ಣವಾಗಿ ಕೈಬರಹದ ಮೂಲಕವೇ (ಹಸ್ತಪ್ರತಿ) ಸಿದ್ಧಪಡಿಸಲಾಗಿದ್ದು, ಸಂಸತ್ತಿನ ಗ್ರಂಥಾಲಯದಲ್ಲಿರುವ ಹೀಲಿಯಂ ಅನಿಲ ತುಂಬಿದ ವಿಶೇಷ ಪೆಟ್ಟಿಗೆಯಲ್ಲಿ ಈ ಐತಿಹಾಸಿಕ ದಾಖಲೆಯನ್ನು ಇಂದಿಗೂ ಅತ್ಯಂತ ಸುರಕ್ಷಿತವಾಗಿ ಸಂರಕ್ಷಿಸಿಡಲಾಗಿದೆ.
    • ಕಲಾತ್ಮಕವಾಗಿ ವಿನ್ಯಾಸ:- ಆಚಾರ್ಯ ನಂದಲಾಲ್ ಬೋಸ್ ಅವರ ಮಾರ್ಗದರ್ಶನದಲ್ಲಿ ಶಾಂತಿನಿಕೇತನದ ಕಲಾವಿದರು ಸಂವಿಧಾನದ ಪ್ರತಿ ಪುಟಗಳನ್ನು ಅತ್ಯಂತ ಕಲಾತ್ಮಕವಾಗಿ ವಿನ್ಯಾಸಗೊಳಿಸಿದ್ದಾರೆ.
  • ಮೀರತ್ ಬ್ಯೂಗಲ್ ವಾದ್ಯ | ಸರ್ಕಾರಿ ಭದ್ರತಾ ಪತ್ರಗಳು (G-Secs) | ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) | ಸಂವಿಧಾನದ ವಿಧಿ 240

    ಮೀರತ್ ಬ್ಯೂಗಲ್ ವಾದ್ಯ

    ಸಾಮಾನ್ಯ ಅಧ್ಯಯನ -3/ ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ದಶಕಗಳಿಂದಲೂ ಸಶಸ್ತ್ರ ಪಡೆಗಳ ಕಸರತ್ತು, ಯುದ್ಧಗಳು, ಸಮಾರಂಭಗಳು ಮತ್ತು ಪಥಸಂಚಲನಗಳಲ್ಲಿ ಅವಿಭಾಜ್ಯ ಸಾಧನವಾಗಿ ಬಳಕೆಯಾಗುತ್ತಿದ್ದ ‘ಬ್ಯೂಗಲ್’ ವಾದ್ಯವು ಇತ್ತೀಚೆಗೆ ಪ್ರತಿಷ್ಠಿತ “ಭೌಗೋಳಿಕ ಸೂಚ್ಯಂಕ” (GI) ಟ್ಯಾಗ್‌ಗೆ ಭಾಜನವಾಗಿದೆ.

    ಮೀರತ್ ಬ್ಯೂಗಲ್ ವಾದ್ಯದ ಬಗ್ಗೆ:

    • ಮೀರತ್‌ನಲ್ಲಿ ಬ್ಯೂಗಲ್ ತಯಾರಿಕೆಯು 19ನೇ ಶತಮಾನದಷ್ಟು ಹಳೆಯ ಇತಿಹಾಸವನ್ನು ಹೊಂದಿದೆ.
    • ಭಾರತದ ಸೇನಾ ಸಂಸ್ಕೃತಿ ಬೆಳೆದಂತೆಲ್ಲಾ, ಈ ವಾದ್ಯದ ಇತಿಹಾಸವೂ ಅದರೊಂದಿಗೇ ಸಾಗಿಬಂದಿದೆ.
    • ಬ್ರಿಟಿಷರ ಕಾಲದಲ್ಲಿ ಇದನ್ನು ‘ಆದೇಶ ನೀಡುವ ಸಾಧನ’ವಾಗಿ ಬಳಸುತ್ತಿದ್ದರು. ಸೇನೆ ಎಷ್ಟೇ ಆಧುನಿಕವಾದರೂ, ಬ್ಯೂಗಲ್ ತನ್ನ ಗೌರವದ ಸ್ಥಾನವನ್ನು ಇಂದಿಗೂ ಉಳಿಸಿಕೊಂಡಿದೆ.

    ಸರ್ಕಾರಿ ಭದ್ರತಾ ಪತ್ರಗಳು (G-Secs)

    ಸಾಮಾನ್ಯ ಅಧ್ಯಯನ – 3/ ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚೆಗೆ, ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಕಡಿತಗೊಳಿಸಿದ್ದರೂ ಸಹ, ಸರ್ಕಾರಿ ಭದ್ರತಾ ಪತ್ರಗಳ ಇಳುವರಿಯು ಸ್ವಲ್ಪಮಟ್ಟಿಗೆ ಏರುಗತಿಯನ್ನು ಸಾಧಿಸಿದೆ.

    ಸರ್ಕಾರಿ ಭದ್ರತಾ ಪತ್ರ (G-Sec) ಗಳ ಬಗ್ಗೆ:

    • ವ್ಯಾಖ್ಯಾನ:- ಈ ಪತ್ರಗಳು ಕೇಂದ್ರ ಸರ್ಕಾರ ಇಲ್ಲವೇ ರಾಜ್ಯ ಸರ್ಕಾರಗಳಿಂದ ಹೊರಡಿಸಲ್ಪಡುವ ಒಂದು ವ್ಯಾಪಾರಾರ್ಹ ಭದ್ರತಾ ಸಾಧನಗಳಾಗಿವೆ.
    • ಹೊಣೆಗಾರಿಕೆ:- ಈ ಪತ್ರಗಳು ಸರ್ಕಾರದ ಸಾಲದ ಹೊಣೆಗಾರಿಕೆಯನ್ನು ಔಪಚಾರಿಕವಾಗಿ ಅಥವಾ ಅಧಿಕೃತವಾಗಿ ಅಂಗೀಕರಿಸುತ್ತವೆ. 
    • ಸ್ವರೂಪ: ಈ ಪತ್ರಗಳು ಅಲ್ಪಾವಧಿ ಮತ್ತು ದೀರ್ಘಾವಧಿ ಸ್ವರೂಪಗಳನ್ನು ಒಳಗೊಂಡಿರುತ್ತವೆ:
      • ಅಲ್ಪಾವಧಿ ಭದ್ರತಾ ಪತ್ರಗಳು: ಇವುಗಳನ್ನು ಸಾಮಾನ್ಯವಾಗಿ ಖಜಾನೆ ಬಿಲ್ಲುಗಳು ಎಂದು ಕರೆಯಲಾಗುತ್ತದೆ. ಇವುಗಳ ಮೂಲದ ಮುಕ್ತಾಯ ಅವಧಿಯು ಒಂದು ವರ್ಷಕ್ಕಿಂತ ಕಡಿಮೆ ಇರುತ್ತದೆ.
      • ದೀರ್ಘಾವಧಿ ಭದ್ರತಾ ಪತ್ರಗಳು: ಇವುಗಳನ್ನು ಸಾಮಾನ್ಯವಾಗಿ ಸರ್ಕಾರಿ ಬಾಂಡ್‌ಗಳು ಅಥವಾ ದಿನಾಂಕ ಸಹಿತ ಭದ್ರತಾ ಪತ್ರಗಳು ಎಂದು ಕರೆಯಲಾಗುತ್ತದೆ. ಇವುಗಳ ಮೂಲದ ಮುಕ್ತಾಯ ಅವಧಿಯು ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಇರುತ್ತದೆ.

    ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF)

    ಸಾಮಾನ್ಯ ಅಧ್ಯಯನ – 3/ ಆಂತರಿಕ ಭದ್ರತೆ

    ಇದೀಗ ಸುದ್ದಿಯಲ್ಲಿದೆ:

    • ‘ಅಂತರರಾಷ್ಟ್ರೀಯ ಹಡಗು ಮತ್ತು ಬಂದರು ಸೌಲಭ್ಯ ಭದ್ರತಾ ಸಂಹಿತೆ’ಯ (ISPS Code) ಅಡಿಯಲ್ಲಿ, ಕೇಂದ್ರೀಯ  ಕೈಗಾರಿಕಾ ಭದ್ರತಾ ಪಡೆಯನ್ನು ‘ಮಾನ್ಯತೆ ಪಡೆದ ಭದ್ರತಾ ಸಂಸ್ಥೆ’ ಯನ್ನಾಗಿ ಅಧಿಕೃತವಾಗಿ ನಾಮನಿರ್ದೇಶನ ಮಾಡಲಾಗಿದೆ.
    • ಭಾರತದಲ್ಲಿ ಸುಮಾರು 250 ಬಂದರುಗಳಿದ್ದು, ಅವುಗಳಲ್ಲಿ 65–68 ಬಂದರುಗಳು ಸರಕು ಸಾಗಣೆ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ.

    ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) ಯ ಬಗ್ಗೆ:

      • ಸ್ಥಾಪನೆ ಮತ್ತು ಸ್ಥಾನಮಾನ: ಇದು 1968 ರ ‘ಕೇಂದ್ರೀಯ  ಕೈಗಾರಿಕಾ ಭದ್ರತಾ ಪಡೆ ಕಾಯಿದೆ’ ಯ ಅನ್ವಯ 1969 ರಲ್ಲಿ ಅಸ್ತಿತ್ವಕ್ಕೆ ಬಂದ ಒಂದು ಅರೆಸೇನಾ ಪಡೆಯಾಗಿದೆ.
      • ದಿನಾಚರಣೆ: ಪ್ರತಿ ವರ್ಷ ಮಾರ್ಚ್ 10 ರಂದು ‘CISF ಸ್ಥಾಪನಾ ದಿನ’ವನ್ನು ಆಚರಿಸಲಾಗುತ್ತದೆ.
      • ಆಡಳಿತಾತ್ಮಕ ನಿಯಂತ್ರಣ: ಈ ಪಡೆಯು ಭಾರತ ಸರ್ಕಾರದ ಕೇಂದ್ರ ಗೃಹ ಸಚಿವಾಲಯದ ನೇರ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತದೆ.
      • ಪ್ರಮುಖ ಕಾರ್ಯಗಳು: ದೇಶದ ತಂತ್ರಾತ್ಮಕ ಸಂಸ್ಥೆಗಳಿಗೆ ಭದ್ರತೆಯನ್ನು ಒದಗಿಸುವುದು ಇದರ ಪ್ರಮುಖ ಕರ್ತವ್ಯವಾಗಿದೆ. ಪ್ರಮುಖವಾಗಿ ಈ ಕೆಳಗಿನ ಸಂಸ್ಥೆಗಳಿಗೆ ಈ ಪಡೆಯು ರಕ್ಷಣೆ ನೀಡುತ್ತದೆ:
    • ಬಾಹ್ಯಾಕಾಶ ಇಲಾಖೆ 
    • ಪರಮಾಣು ಶಕ್ತಿ ಇಲಾಖೆ
    • ವಿಮಾನ ನಿಲ್ದಾಣಗಳು, ದೆಹಲಿ ಮೆಟ್ರೋ ಮತ್ತು ಬಂದರುಗಳು
    • ಐತಿಹಾಸಿಕ ಸ್ಮಾರಕಗಳು
    • ಭಾರತೀಯ ಆರ್ಥಿಕತೆಯ ಮೂಲಭೂತ ಕ್ಷೇತ್ರಗಳಾದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ವಿದ್ಯುಚ್ಛಕ್ತಿ, ಕಲ್ಲಿದ್ದಲು, ಉಕ್ಕು ಮತ್ತು ಗಣಿಗಾರಿಕೆ ಸ್ಥಾವರಗಳಿಗೆ ಇದು ಭದ್ರತೆಯನ್ನು ಒದಗಿಸುತ್ತದೆ.

    ಸಂವಿಧಾನದ ವಿಧಿ 240

    ಸಾಮಾನ್ಯ ಅಧ್ಯಯನ – 2/ ಆಡಳಿತ

    ಇದೀಗ ಸುದ್ದಿಯಲ್ಲಿದೆ:

    • ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ, ಚಂಡೀಗಢವನ್ನು ಸಂವಿಧಾನದ ‘ವಿಧಿ 240’ ವ್ಯಾಪ್ತಿಗೆ ತರಲು ಯಾವುದೇ ‘ಸಂವಿಧಾನ ತಿದ್ದುಪಡಿ ಮಸೂದೆ’ಯನ್ನು ಮಂಡಿಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯವು ಸ್ಪಷ್ಟಪಡಿಸಿದೆ.

    131 ನೇ ಸಂವಿಧಾನ ತಿದ್ದುಪಡಿ ಮಸೂದೆ, 2025 ರ ಬಗ್ಗೆ:

    • ಈ ಮಸೂದೆಯು ಚಂಡೀಗಢವನ್ನು ವಿಧಿ 240 ರ ಅಡಿಯಲ್ಲಿ ತರಲು ಪ್ರಸ್ತಾಪಿಸುತ್ತದೆ. ಈ ಮೂಲಕ ಶಾಸಕಾಂಗಗಳನ್ನು ಹೊಂದಿರದ ಕೇಂದ್ರಾಡಳಿತ ಪ್ರದೇಶಗಳ ಗುಂಪಿಗೆ ಇದನ್ನು ಸೇರಿಸುತ್ತದೆ ಮತ್ತು ಅದಕ್ಕಾಗಿ ನಿಯಮಾವಳಿಗಳನ್ನು ರೂಪಿಸಲು ರಾಷ್ಟ್ರಪತಿಯವರಿಗೆ ಅಧಿಕಾರ ನೀಡುತ್ತದೆ.
    • ಇದು ಚಂಡೀಗಢ ಕೇಂದ್ರಾಡಳಿತ ಪ್ರದೇಶದಲ್ಲಿ ಸ್ವತಂತ್ರ ‘ಆಡಳಿತಾಧಿಕಾರಿ’ಯ ನೇಮಕಕ್ಕೆ ದಾರಿ ಮಾಡಿಕೊಡುತ್ತದೆ.
    • ಪ್ರಸ್ತುತ, ಪಂಜಾಬ್‌ನ ರಾಜ್ಯಪಾಲರೇ ಚಂಡೀಗಢದ ಆಡಳಿತಾಧಿಕಾರಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
    • ಚಂಡೀಗಢಕ್ಕಾಗಿ ಕೇಂದ್ರ ಸರ್ಕಾರದ ಕಾನೂನು ರಚನಾ ಪ್ರಕ್ರಿಯೆಯನ್ನು ಸರಳಗೊಳಿಸುವುದು ಈ ಕ್ರಮದ ಉದ್ದೇಶವಾಗಿದೆ.
    • ಶಾಸಕಾಂಗಗಳನ್ನು ಹೊಂದಿರದ ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಆಡಳಿತದಲ್ಲಿ ಏಕರೂಪತೆಯನ್ನು ಖಚಿತಪಡಿಸುವುದು ಇದರ ಗುರಿಯಾಗಿದೆ.
    • ಸಂಸತ್ತಿನ ಕಾಯಿದೆಗಳಿಗೆ ಸಮನಾದ ನಿಯಮಾವಳಿಗಳನ್ನು ಚಂಡೀಗಢಕ್ಕಾಗಿ ರೂಪಿಸಲು ರಾಷ್ಟ್ರಪತಿಯವರಿಗೆ ಅಧಿಕಾರ ನೀಡುವುದು ಇದರ ಉದ್ದೇಶವಾಗಿದೆ.

    ಸಂವಿಧಾನದ 240 ನೇ ವಿಧಿಯ ಬಗ್ಗೆ:

    • ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ಹಾಗೂ ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು ಸೇರಿದಂತೆ, ನಿರ್ದಿಷ್ಟ ಕೇಂದ್ರಾಡಳಿತ ಪ್ರದೇಶಗಳ ಶಾಂತಿ, ಪ್ರಗತಿ ಮತ್ತು ಪರಿಣಾಮಕಾರಿ ಆಡಳಿತಕ್ಕಾಗಿ ನಿಯಮಾವಳಿಗಳನ್ನು ರೂಪಿಸುವ ಅಧಿಕಾರವನ್ನು ಸಂವಿಧಾನದ 240 ನೇ ವಿಧಿಯು ರಾಷ್ಟ್ರಪತಿಯವರಿಗೆ ನೀಡುತ್ತದೆ.
  • ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) | ಆಫ್ರಿಕಾದ ಬೂದು ಗಿಳಿ | ಸೆಮೆರು ಪರ್ವತ (Mount Semeru) | ಭಾರತೀಯ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆ (GSI) | ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ ಕಾರ್ಯಕ್ರಮ (ICDS) | ಅಮಿಬಿಕ್ ಮೆನಿಂಗೊ ಎನ್ಸೆಫಾಲಿಟಿಸ್

    ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP)

    ಸಾಮಾನ್ಯ ಅಧ್ಯಯನ -3/ ರಕ್ಷಣೆ

    ಇದೀಗ ಸುದ್ಧಿಯಲ್ಲಿದೆ:

    • ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಪಡೆಯು, ವಾಸ್ತವ ನಿಯಂತ್ರಣ ರೇಖೆಯ (LAC) ಉದ್ದಕ್ಕೂ ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಗಳೇ ಕಾರ್ಯನಿರ್ವಹಿಸುವ 10 ಗಡಿ ಹೊರಠಾಣೆಗಳನ್ನು ಸ್ಥಾಪಿಸುತ್ತಿದೆ. ಗಡಿ ಭದ್ರತಾ ವ್ಯವಸ್ಥೆಯಲ್ಲಿ ಲಿಂಗ ಸಮನ್ವಯತೆ ಮತ್ತು ಒಳಗೊಳ್ಳುವಿಕೆಯನ್ನು ಸಾಧಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ.

    ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ನ ಬಗ್ಗೆ:

    • ಸ್ಥಾಪನೆ: ಭಾರತ ಮತ್ತು ಚೀನಾ ಯುದ್ಧದ ನಂತರದ ಬೆಳವಣಿಗೆಗಳ ಹಿನ್ನೆಲೆಯಲ್ಲಿ, 1962 ರ ಅಕ್ಟೋಬರ್ 24 ರಂದು ಈ ಪಡೆಯನ್ನು ಅಸ್ತಿತ್ವಕ್ಕೆ ತರಲಾಯಿತು.
    • ಸ್ಥಾನಮಾನ: ಇದು ಕೇಂದ್ರ ಗೃಹ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುವ ಪ್ರಮುಖ ‘ಕೇಂದ್ರ ಸಶಸ್ತ್ರ ಪೊಲೀಸ್ ಪಡೆ’ಗಳಲ್ಲಿ (CAPF) ಒಂದಾಗಿದೆ.
    • ಧ್ಯೇಯವಾಕ್ಯ: “ಶೌರ್ಯ-ದೃಢತೆ-ಕರ್ಮ ನಿಷ್ಠೆ”.
    • ಕಾರ್ಯನಿರ್ವಹಣಾ ಪಾತ್ರ: ಲಡಾಖ್‌ನ ಕಾರಾಕೋರಂ ಕಣಿವೆಮಾರ್ಗದಿಂದ ಅರುಣಾಚಲ ಪ್ರದೇಶದ ಜಾಚೆಪ್ ಲಾ ವರೆಗೆ ಹಬ್ಬಿರುವ, ಸುಮಾರು 3,488 ಕಿ.ಮೀ. ಉದ್ದವಾದ ಭಾರತ-ಚೀನಾ ಗಡಿಯ ಕಾವಲು ಕಾಯುವುದು ಮತ್ತು ರಕ್ಷಣೆ ಒದಗಿಸುವುದು ಇದರ ಪ್ರಮುಖ ಜವಾಬ್ದಾರಿಯಾಗಿದೆ.
    • ಕಾನೂನಾತ್ಮಕ ಚೌಕಟ್ಟು: ಈ ಪಡೆಯ ಕಾರ್ಯನಿರ್ವಹಣೆಗೆ ಕಾನೂನು ಬಲ ನೀಡಲು, 1992 ರಲ್ಲಿ ‘ಐಟಿಬಿಪಿಎಫ್ ಕಾಯಿದೆ’ ಯನ್ನು ಜಾರಿಗೆ ತರಲಾಯಿತು. ನಂತರ , 2004 ರಲ್ಲಿ ಭಾರತ-ಚೀನಾ ಗಡಿಯ ಸಮಗ್ರ ಕಾವಲು ಜವಾಬ್ದಾರಿಯನ್ನು ಈ ಪಡೆಗೆ ನಿಯೋಜಿಸಲಾಯಿತು.

    ಆಫ್ರಿಕಾದ ಬೂದು ಗಿಳಿ

    ಸಾಮಾನ್ಯ ಅಧ್ಯಯನ – 3/ ಪ್ರಭೇದಗಳು

    ಇದೀಗ ಸುದ್ದಿಯಲ್ಲಿದೆ:

    • ದೇಶದ ಮಾರುಕಟ್ಟೆಗಳಲ್ಲಿ ಆಫ್ರಿಕಾದ ಬೂದು ಗಿಳಿಗಳು ವ್ಯಾಪಕವಾಗಿ ಲಭ್ಯವಿದ್ದರೂ ಕೂಡ, ಇವುಗಳಿಗೆ ಸಂಬಂಧಿಸಿದಂತೆ ಅಧಿಕೃತವಾಗಿ ನೋಂದಾಯಿತ ತಳಿಗಾರರು ಅಥವಾ ಅಧಿಕೃತ ಸಾಕುಪ್ರಾಣಿ ಮಾರಾಟ ಮಳಿಗೆಗಳು ಭಾರತದಲ್ಲಿ ಅಸ್ತಿತ್ವದಲ್ಲಿಲ್ಲ ಎಂದು ರಾಜ್ಯ ಅರಣ್ಯ ಇಲಾಖೆಗಳು ಸ್ಪಷ್ಟಪಡಿಸಿವೆ.

    ‘ಆಫ್ರಿಕಾದ ಬೂದು ಗಿಳಿ’ ಯ ಬಗ್ಗೆ: 

    • ವೈಜ್ಞಾನಿಕ ಹೆಸರು:- ಸಿಟ್ಟಾಕಸ್ ಎರಿಥಾಕಸ್ (Psittacus erithacus). ಇದು ಮಧ್ಯಮ ಗಾತ್ರದ ಹಾಗೂ ಅತ್ಯಂತ ಬುದ್ಧಿವಂತ ಗಿಳಿ ಪ್ರಭೇದವಾಗಿದೆ.
    • ಇದನ್ನು ಸಾಮಾನ್ಯವಾಗಿ “ಪಕ್ಷಿ ಸಂಕುಲದ ಐನ್‌ಸ್ಟೀನ್‌ಗಳು” ಎಂದು ಪರಿಗಣಿಸಲಾಗುತ್ತದೆ.
    • ಮೂಲ ಆವಾಸಸ್ಥಾನ:- ಇದು ಪಶ್ಚಿಮ ಮತ್ತು ಮಧ್ಯ ಆಫ್ರಿಕಾಕ್ಕೆ ಸ್ಥಳೀಯವಾಗಿದ್ದು, ಪ್ರಮುಖವಾಗಿ ಸವನ್ನಾ (ಹುಲ್ಲುಗಾವಲು) ಪ್ರದೇಶಗಳು ಮತ್ತು ಕರಾವಳಿ ಮ್ಯಾಂಗ್ರೋವ್‌ಗಳಲ್ಲಿ ಕಂಡುಬರುತ್ತದೆ.
    • ಇದರಲ್ಲಿ ಎರಡು ಪ್ರಮುಖ ಉಪ-ಪ್ರಭೇದಗಳಿವೆ:-
      1. ಕಾಂಗೋ ಆಫ್ರಿಕಾದ ಬೂದು (CAG) ಗಿಳಿ: ಇದು ತನ್ನ ಪ್ರಕಾಶಮಾನವಾದ ಕೆಂಪು ಬಾಲಕ್ಕೆ ಹೆಸರುವಾಸಿಯಾಗಿದೆ.
      2. ಟಿಮ್ನೆ ಆಫ್ರಿಕಾದ ಬೂದು (CAG) ಗಿಳಿ: ಇದು ಗಾಢವಾದ ಕಡುಗೆoಪು ಮಿಶ್ರಣ ಬಣ್ಣದ ಬಾಲವನ್ನು ಹೊಂದಿರುತ್ತದೆ.
    • ವಿಶಿಷ್ಟತೆ – ಆಫ್ರಿಕಾದ ಬೂದು ಗಿಳಿಗಳು ತಮ್ಮ ಅಸಾಧಾರಣ ಮಾತುಗಾರಿಕೆ ಮತ್ತು ಗ್ರಹಿಕೆ ಸಾಮರ್ಥ್ಯಗಳಿಗೆ ಪ್ರಖ್ಯಾತವಾಗಿವೆ. ಇವು ದೊಡ್ಡ ಶಬ್ದಕೋಶವನ್ನು ನೆನಪಿನಲ್ಲಿಟ್ಟುಕೊಳ್ಳುವ ಮತ್ತು ಸಂದರ್ಭಕ್ಕೆ ತಕ್ಕಂತೆ ಮಾತನಾಡುವ ಸಾಮರ್ಥ್ಯವನ್ನು ಹೊಂದಿವೆ.
    • IUCN ಕೆಂಪು ಪಟ್ಟಿಯಲ್ಲಿ ಸ್ಥಾನ:- ಇದನ್ನು “ಅಳಿವಿನಂಚಿನಲ್ಲಿರುವ (EN)” ಪ್ರಭೇದ ಎಂದು ವರ್ಗೀಕರಿಸಲಾಗಿದೆ.

    ಸೆಮೆರು ಪರ್ವತ (Mount Semeru)

    ಸಾಮಾನ್ಯ ಅಧ್ಯಯನ – 1 / ಪ್ರಾಕೃತಿಕ ಭೂಗೋಳಶಾಸ್ತ್ರ

    ಇದೀಗ ಸುದ್ದಿಯಲ್ಲಿದೆ:

    • ಇಂಡೋನೇಷ್ಯಾದ ಪೂರ್ವ ಜಾವಾದಲ್ಲಿ ನೆಲೆಗೊಂಡಿರುವ ಸೆಮೆರು ಪರ್ವತದ ಜ್ವಾಲಾಮುಖಿಯು ಇತ್ತೀಚೆಗೆ ಸ್ಫೋಟಗೊಂಡಿದೆ.

    ಇಂಡೋನೇಷ್ಯಾ ಜ್ವಾಲಾಮುಖಿ ಸ್ಫೋಟಗಳಿಗೆ ಹೆಚ್ಚು ತುತ್ತಾಗಲು ಕಾರಣಗಳು:

    • ಇಂಡೋ-ಆಸ್ಟ್ರೇಲಿಯನ್ ಭೂಫಲಕವು ಯುರೇಷಿಯನ್ ಭೂಫಲಕದ ಅಡಿಯಲ್ಲಿ ಕುಸಿಯುವ ‘ಒಮ್ಮುಖ ಭೂಫಲಕ ಗಡಿ’ಯ ಮೇಲೆ ಇಂಡೋನೇಷ್ಯಾ ನೆಲೆಗೊಂಡಿದೆ.
    • ಈ ಪ್ರಕ್ರಿಯೆಯು ಜಾವಾ, ಸುಮಾತ್ರಾ ಮತ್ತು ಸುಂಡಾ ದ್ವೀಪದುದ್ದಕ್ಕೂ ಸ್ತರ ಜ್ವಾಲಾಮುಖಿಗಳ ಸರಪಳಿಯನ್ನು ಸೃಷ್ಟಿಸುತ್ತದೆ.
    • ಇದು ಫೆಸಿಫಿಕ್ ನ ‘ಅಗ್ನಿ ವರ್ತುಲ’ದ (Ring of Fire) ಹೃದಯಭಾಗದಲ್ಲಿದೆ. ವಿಶ್ವದ ಶೇಕಡಾ 75 ರಷ್ಟು ಜ್ವಾಲಾಮುಖಿಗಳು ಮತ್ತು ಶೇಕಡಾ 90 ರಷ್ಟು ಭೂಕಂಪಗಳು ಈ ವಲಯದಲ್ಲೇ ಸಂಭವಿಸುತ್ತವೆ.

    ಭಾರತೀಯ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆ (GSI)

    ಸಾಮಾನ್ಯ ಅಧ್ಯಯನ – 1/ ಭೂಗೋಳಶಾಸ್ತ್ರ

    ಇದೀಗ ಸುದ್ದಿಯಲ್ಲಿದೆ:

    • ಭಾರತೀಯ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆಯ (GSI) 175ನೇ ಸ್ಥಾಪನಾ ವರ್ಷದ ಆಚರಣೆಯ ಭಾಗವಾಗಿ, ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವರು “ಭೂತಕಾಲದ ಶೋಧನೆ, ಭವಿಷ್ಯದ ರೂಪಿಸುವಿಕೆ: GSI ನ 175 ವರ್ಷಗಳು”  ಎಂಬ ಶೀರ್ಷಿಕೆಯ ಅಂತರರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿದರು.

    ಭಾರತೀಯ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆ (GSI) ಯ ಬಗ್ಗೆ:

    • ಈ ಸಂಸ್ಥೆಯು ಭಾರತದ ಅಗ್ರಗಣ್ಯ ರಾಷ್ಟ್ರೀಯ ಭೂವೈಜ್ಞಾನಿಕ ಸಂಸ್ಥೆಯಾಗಿದೆ.
    • ಕಾರ್ಯನಿರ್ವಹಣೆ:- ಇದು ಕೇಂದ್ರ ಗಣಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
    • ಸ್ಥಾಪನೆ:- ಈ ಸಂಸ್ಥೆಯನ್ನು 1851 ರಲ್ಲಿ ಸರ್ ಥಾಮಸ್ ಓಲ್ಡ್‌ಹ್ಯಾಮ್ ಅವರು ಸ್ಥಾಪಿಸಿದರು.
    • ಜಾನ್ ಮೆಕ್ಲೆಲ್ಯಾಂಡ್ ಅವರ ನೇತೃತ್ವದಲ್ಲಿ ನಡೆದ ಕಲ್ಲಿದ್ದಲು ಅನ್ವೇಷಣೆಯ ಸಂದರ್ಭದಲ್ಲಿ, 1848 ರಲ್ಲಿ ಮೊದಲ ಬಾರಿಗೆ “ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ” ಎಂಬ ಪದವನ್ನು ಬಳಸಲಾಯಿತು.

    ಪ್ರಮುಖ ಕಾರ್ಯಗಳು:

    • ಭೂವೈಜ್ಞಾನಿಕ ನಕ್ಷೆ ಮತ್ತು ಸಮೀಕ್ಷೆಗಳು:- ಭೂ, ವಾಯುಗಾಮಿ ಮತ್ತು ಸಾಗರ ಸಮೀಕ್ಷೆಗಳನ್ನು ಒಳಗೊಂಡಂತೆ, ಮೇಲ್ಮೈ ಹಾಗೂ ಉಪ-ಮೇಲ್ಮೈ ಭೂವಿಜ್ಞಾನದ ಸಮಗ್ರ ನಕ್ಷೆಗಳನ್ನು ತಯಾರಿಸುವುದು ಮತ್ತು  ನಿರ್ವಹಿಸುವುದು.
    • ಖನಿಜ ಅನ್ವೇಷಣೆ : ಖನಿಜ, ಇಂಧನ (ಕಲ್ಲಿದ್ದಲು, ತೈಲ ಸೇರಿದಂತೆ) ಮತ್ತು ಜಲ ಸಂಪನ್ಮೂಲಗಳ ವೈಜ್ಞಾನಿಕ ಅನ್ವೇಷಣೆ ಹಾಗೂ ಮೌಲ್ಯಮಾಪನ ಮಾಡುವುದು.
    • ಭೂವೈಪರೀತ್ಯ ಅಧ್ಯಯನಗಳು:- ಭೂಕಂಪನ-ಭೂರಚನಾ ಸಂಶೋಧನೆ, ಹಿಮನದಿ ಶಾಸ್ತ್ರ, ಹವಾಮಾನ ಸಂಬಂಧಿತ ಭೂ-ಅಧ್ಯಯನಗಳು ಮತ್ತು ವಿಪತ್ತು ಅಪಾಯದ ವಿಶ್ಲೇಷಣೆಯನ್ನು ನಡೆಸುವುದು.
    • ಭೂತಾಂತ್ರಿಕ ಮತ್ತು ಭೂಪರಿಸರೀಯ ಅಧ್ಯಯನಗಳು : ಮೂಲಸೌಕರ್ಯ ಯೋಜನೆ, ಅಂತರ್ಜಲ ಅಧ್ಯಯನಗಳು, ಭೂಸ್ಥಿರತೆ ವಿಶ್ಲೇಷಣೆ ಮತ್ತು ಪರಿಸರ ಮೌಲ್ಯಮಾಪನಗಳಿಗೆ ಉತ್ತೇಜನ ನೀಡುವುದು.

    ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ ಕಾರ್ಯಕ್ರಮ (ICDS)

    ಸಾಮಾನ್ಯ ಅಧ್ಯಯನ –  2/ ಸರ್ಕಾರಿ ಯೋಜನೆಗಳು

    ಇದೀಗ ಸುದ್ದಿಯಲ್ಲಿ

    • ಅಂಗನವಾಡಿಗಳ ಮುಖಾಂತರ ಪೌಷ್ಟಿಕಾಂಶ, ಶಿಕ್ಷಣ ಮತ್ತು ಬಾಲ್ಯಾವಸ್ಥೆಯ ಆರೈಕೆಯನ್ನು ಬಲಪಡಿಸುವ ನಿಟ್ಟಿನಲ್ಲಿ, ‘ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ (ICDS) ಕಾರ್ಯಕ್ರವನ್ನು ವ್ಯಾಪಕವಾಗಿ ವಿಸ್ತರಣೆಗೊಂಡಿದೆ.

    ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ (ICDS) ಕಾರ್ಯಕ್ರಮದ ಬಗ್ಗೆ:

    • ಆರಂಭ: 1975ರ ಅಕ್ಟೋಬರ್ 2
    • ಇದೊಂದು ದೇಶದ ಮಹತ್ವಾಕಾಂಕ್ಷೆಯ ‘ಪೂರ್ವ ಬಾಲ್ಯಾವಸ್ಥೆಯ ಆರೈಕೆ ಮತ್ತು ಅಭಿವೃದ್ಧಿ’ (ECCD) ಯೋಜನೆಯಾಗಿದೆ.
    • ಇದು ದೇಶಾದ್ಯಂತದ ಅಂಗನವಾಡಿ ಕೇಂದ್ರಗಳ ಜಾಲದ ಮೂಲಕ, 6 ವರ್ಷದೊಳಗಿನ ಮಕ್ಕಳು ಹಾಗೂ ತಾಯಂದಿರಿಗೆ ಪೌಷ್ಟಿಕಾಂಶ, ಆರೋಗ್ಯ ರಕ್ಷಣೆ ಮತ್ತು ಶಾಲಾ ಪೂರ್ವ ಶಿಕ್ಷಣದಂತಹ ಸಮಗ್ರ ಸೇವೆಗಳನ್ನು ಒದಗಿಸುತ್ತದೆ.
    • ಹಣಕಾಸು: ಇದೊಂದು ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.
    • ಪೌಷ್ಟಿಕಾಂಶ ಮತ್ತು ಬಾಲ್ಯದ ಆರಂಭಿಕ ಆರೈಕೆಯನ್ನು ಏಕೀಕರಿಸುವ ಸಲುವಾಗಿ, ಪ್ರಸ್ತುತ ಇದನ್ನು ‘ಸಕ್ಷಮ್ ಅಂಗನವಾಡಿ ಮತ್ತು ಪೋಷಣ್ 2.0’ ಅಭಿಯಾನದ ವ್ಯಾಪ್ತಿಗೆ ತರಲಾಗಿದೆ.

    ಅಮಿಬಿಕ್ ಮೆನಿಂಗೊ ಎನ್ಸೆಫಾಲಿಟಿಸ್

    ಸಾಮಾನ್ಯ ಅಧ್ಯಯನ – 2/ ಆರೋಗ್ಯ

    ಇದೀಗ ಸುದ್ದಿಯಲ್ಲಿದೆ:

    • ಅಮಿಬಿಕ್ ಮೆನಿಂಗೊ ಎನ್ಸೆಫಾಲಿಟಿಸ್ ಅಥವಾ ಮೆದುಳು ಜ್ವರದ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ, ಶಬರಿಮಲೆ ಯಾತ್ರಾರ್ಥಿಗಳಿಗೆ ಕರ್ನಾಟಕ ಸರ್ಕಾರವು ಮಾರ್ಗಸೂಚಿಗಳನ್ನು ಹೊರಡಿಸಿದೆ.

    ಅಮಿಬಿಕ್ ಮೆನಿಂಗೊ ಎನ್ಸೆಫಾಲಿಟಿಸ್ ನ ಬಗ್ಗೆ:

    • ರೋಗಕಾರಕ – ಇದು ನೇಗ್ಲೆರಿಯಾ ಫೌಲೆರಿ’ ಎಂಬ ರೋಗಕಾರಕದಿಂದ ಉಂಟಾಗುವ ಅಪರೂಪದ ಮೆದುಳಿನ ಸೋಂಕಾಗಿದೆ.
    • ನೇಗ್ಲೆರಿಯಾ ಫೌಲೆರಿ’ ಎಂಬುದು ಬೆಚ್ಚಗಿನ ಸಿಹಿನೀರು ಮತ್ತು ಮಣ್ಣಿನಲ್ಲಿ ಕಂಡುಬರುವ ಸ್ವತಂತ್ರವಾಗಿ ಬದುಕುವ ಅಮೀಬಾ ಆಗಿದೆ.
    • ಹರಡುವಿಕೆ: ಈಜುವುದು, ಧಾರ್ಮಿಕ ಆಚರಣೆಗಳಲ್ಲಿ ಮೂಗನ್ನು ಸ್ವಚ್ಛಗೊಳಿಸುವುದು ಇತ್ಯಾದಿ ಚಟುವಟಿಕೆಗಳ ಸಂದರ್ಭದಲ್ಲಿ, ಕಲುಷಿತ ನೀರು ಮೂಗಿನ ಮೂಲಕ ಪ್ರವೇಶಿಸಿದಾಗ ಸಾಮಾನ್ಯವಾಗಿ ಈ ಸೋಂಕು ಉಂಟಾಗುತ್ತದೆ.
    • ಇದು ನೀರನ್ನು ಕುಡಿಯುವುದರಿಂದ ಅಥವಾ ವ್ಯಕ್ತಿಯಿಂದ ವ್ಯಕ್ತಿಗೆ ನೇರ ಸಂಪರ್ಕದ ಮೂಲಕ ಹರಡುವುದಿಲ್ಲ.
    • ಲಕ್ಷಣಗಳು: ಇದು ಮೆದುಳಿಗೆ ಸಂಚರಿಸಿ, ಅಲ್ಲಿನ ಅಂಗಾಂಶಗಳನ್ನು ನಾಶಪಡಿಸುತ್ತದೆ ಮತ್ತು ಮೆದುಳಿನ ಊತಕ್ಕೆ ಕಾರಣವಾಗುತ್ತದೆ.
    • ಚಿಕಿತ್ಸೆ ಮತ್ತು ಮುನ್ನೆಚ್ಚರಿಕೆಗಳು: ಅಪಾಯವನ್ನು ತಗ್ಗಿಸಲು, ನೀರಿನ ಚಟುವಟಿಕೆಗಳ ಸಮಯದಲ್ಲಿ ಮೂಗಿನೊಳಗೆ ನೀರು ಹೋಗದಂತೆ ನಿಯಂತ್ರಿಸಬೇಕು.