Blog

  • ಎಂ. ಗೋವಿಂದರಾವ್ ಸಮಿತಿ – ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ

    ಎಂ. ಗೋವಿಂದರಾವ್ ಸಮಿತಿ – ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ

    ಇದೀಗ ಸುದ್ದಿಯಲ್ಲಿದೆ:

    • ಪ್ರಖ್ಯಾತ ಅರ್ಥಶಾಸ್ತ್ರಜ್ಞ ಎಂ. ಗೋವಿಂದರಾವ್ ನೇತೃತ್ವದ ‘ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ’ಯು 2026 ರ ಜನವರಿ 31 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತನ್ನ ಅಂತಿಮ ವರದಿಯನ್ನು ಸಲ್ಲಿಸಿದೆ.
    • 2002 ರ ಐತಿಹಾಸಿಕ ‘ನಂಜುಂಡಪ್ಪ ಸಮಿತಿ’ ವರದಿಯ ಬಳಿಕ ರಾಜ್ಯದಲ್ಲಿ ಒಟ್ಟಾರೆ ಆರ್ಥಿಕ ಬೆಳವಣಿಗೆಯು ಬಲವಾಗಿದ್ದರೂ, ಪ್ರಾದೇಶಿಕ ಅಸಮತೋಲನವು ಮತ್ತಷ್ಟು ಹೆಚ್ಚಾಗಿದೆ ಎಂಬ ಆತಂಕಕಾರಿ ಪ್ರವೃತ್ತಿಯನ್ನು 2026 ರ ಈ ವರದಿಯು ಎತ್ತಿತೋರಿಸಿದೆ.

    ಈ ವರದಿಯ ಪ್ರಮುಖ ಅಂಶಗಳು ಮತ್ತು ವರ್ಗೀಕರಣ:

    ಸಮಿತಿಯು ರಾಜ್ಯದ ಎಲ್ಲಾ 236 ತಾಲ್ಲೂಕುಗಳನ್ನು ಮೌಲ್ಯಮಾಪನ ಮಾಡಿದ್ದು, ಉತ್ತರ ಕರ್ನಾಟಕದಲ್ಲಿಯೇ ಅತಿ ಹೆಚ್ಚು ಹಿಂದುಳಿದಿರುವಿಕೆ ಕೇಂದ್ರೀಕೃತವಾಗಿದೆ ಎಂಬುದನ್ನು ಕಂಡುಕೊಂಡಿದೆ.

    • ಅತ್ಯಂತ ಹಿಂದುಳಿದ (Most Backward) ತಾಲ್ಲೂಕುಗಳು:- 93 ತಾಲ್ಲೂಕುಗಳು (ಮುಖ್ಯವಾಗಿ ಕಲಬುರಗಿ ಮತ್ತು ಬೆಳಗಾವಿ ವಿಭಾಗಗಳಲ್ಲಿವೆ).
    • ಹೆಚ್ಚು ಹಿಂದುಳಿದ (More Backward) ತಾಲ್ಲೂಕುಗಳು:- 36 ತಾಲ್ಲೂಕುಗಳು.
    • ಹಿಂದುಳಿದ ತಾಲ್ಲೂಕುಗಳು:- 43 ತಾಲ್ಲೂಕುಗಳು.
    • ಅಭಿವೃದ್ಧಿ ಹೊಂದಿದ ತಾಲ್ಲೂಕುಗಳು:- 64 ತಾಲ್ಲೂಕುಗಳು.
    • ಪ್ರಾದೇಶಿಕ ಕೇಂದ್ರೀಕರಣ:- ರಾಜ್ಯದ ಒಟ್ಟು ಹಿಂದುಳಿದ ತಾಲ್ಲೂಕುಗಳಲ್ಲಿ ಅಂದಾಜು ಶೇ 60 ರಷ್ಟು ತಾಲ್ಲೂಕುಗಳು ಉತ್ತರ ಕರ್ನಾಟಕದಲ್ಲಿವೆ.

    ಈ ವರದಿಯ ಪ್ರಮುಖ ಶಿಫಾರಸುಗಳು:

    ಕರ್ನಾಟಕವು ಪ್ರಾದೇಶಿಕ ಅಭಿವೃದ್ಧಿಯನ್ನು ಸಾಧಿಸುವ ನಿಟ್ಟಿನಲ್ಲಿ ಸಮಿತಿಯು ಪ್ರಮುಖ ರಚನಾತ್ಮಕ ಸುಧಾರಣೆಗಳನ್ನು ಪ್ರಸ್ತಾಪಿಸಿದೆ:

    • ಮಂಡಳಿಗಳ ರದ್ದತಿ:- ಕಳೆದ ಮೂರು ದಶಕಗಳಲ್ಲಿ ಮೂಲಸೌಕರ್ಯಗಳ ಮೇಲೆ ಯಾವುದೇ ಅರ್ಥಪೂರ್ಣ ಪ್ರಭಾವ ಬೀರುವಲ್ಲಿ ವಿಫಲವಾಗಿವೆ ಎಂದು ಉಲ್ಲೇಖಿಸಿ, ‘ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ’ ಹಾಗೂ ‘ಬಯಲುಸೀಮೆ ಅಭಿವೃದ್ಧಿ ಮಂಡಳಿ’ಯನ್ನು ರದ್ದುಗೊಳಿಸುವಂತೆ ಸಮಿತಿ ಶಿಫಾರಸು ಮಾಡಿದೆ.
    • ಕೆಕೆಆರ್‌ಡಿಬಿ (KKRDB) ಪುನರ್‌ರಚನೆ:- ಕಾರ್ಯಾಚರಣೆಯ ವೈಫಲ್ಯಗಳು ಮತ್ತು ತಾತ್ಕಾಲಿಕ ಯೋಜನೆಗಳ ಕಾರಣದಿಂದಾಗಿ ‘ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ’ಯನ್ನು (KKRDB) ಸಂಪೂರ್ಣವಾಗಿ ಪುನರ್‌ರಚಿಸುವಂತೆ ಸಮಿತಿಯು ಕರೆ ನೀಡಿದೆ.
    • ಅನುದಾನ ಮೀಸಲಾತಿ:- 2026-27 ರಿಂದ 2030-31 ರವರೆಗಿನ ಅವಧಿಗೆ ಕೆಕೆಆರ್‌ಡಿಬಿಗೆ ₹29,009 ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ಒದಗಿಸುವಂತೆ ಶಿಫಾರಸು ಮಾಡಿದೆ.
    • ಶಿಕ್ಷಣ ಸುಧಾರಣೆ:- ಕಲಬುರಗಿ ವಿಭಾಗದಲ್ಲಿನ ತೀವ್ರ ಶಿಕ್ಷಕರ ಕೊರತೆಯನ್ನು ಗಮನಿಸಿರುವ ಸಮಿತಿಯು, ಕಡಿಮೆ ದಾಖಲಾತಿಯಿರುವ (25 ಕ್ಕಿಂತ ಕಡಿಮೆ ವಿದ್ಯಾರ್ಥಿಗಳು) ಶಾಲೆಗಳನ್ನು ತರ್ಕಬದ್ಧಗೊಳಿಸಿ ವಿಲೀನಗೊಳಿಸುವಂತೆ ಸೂಚಿಸಿದೆ.
  • ಜಿಯೋ ಪಾರ್ಸಿ ಯೋಜನೆ | ಜಾಗತಿಕ ಶಿಕ್ಷಕ ಪ್ರಶಸ್ತಿ, 2026 | ಅಪ್ರಾಪ್ತೆಯ 30 ವಾರಗಳ ಗರ್ಭಧಾರಣೆಯ ಗರ್ಭಪಾತಕ್ಕೆ ಸರ್ವೋಚ್ಚ ನ್ಯಾಯಾಲಯದ ಅನುಮತಿ | ಹಕ್ಕಿ-ಪಿಕ್ಕಿ ಬುಡಕಟ್ಟು ಸಮುದಾಯ | ದೊಡ್ಡ ಕೆಂಪು ನೀರು ಹಕ್ಕಿ (ರಾಜಹಂಸ) | ಕುಡಗೋಲು ಕಣ ಕಾಯಿಲೆ (Sickle Cell Disease) | ಪರ್ವತ ಗೊರಿಲ್ಲಾಗಳು

    ಜಿಯೋ ಪಾರ್ಸಿ ಯೋಜನೆ

    ಸಾಮಾಜಿಕ ನ್ಯಾಯ

    ಇದೀಗ ಸುದ್ದಿಯಲ್ಲಿದೆ:

    • ‘ಜಿಯೋ ಪಾರ್ಸಿ’ ಯೋಜನೆಯು 490ಕ್ಕೂ ಹೆಚ್ಚು ಪಾರ್ಸಿ ಜನನಕ್ಕೆ ಅನುವು ಮಾಡಿಕೊಟ್ಟಿದೆ. ಮತ್ತು ಪಾರ್ಸಿ ದಂಪತಿಗಳಿಗೆ 35.05 ಕೋಟಿ ರೂ. ಆರ್ಥಿಕ ನೆರವನ್ನು ಒದಗಿಸಿದೆ.

    ಭಾರತದಲ್ಲಿ ಪಾರ್ಸಿ ಸಮುದಾಯ:

    • 2011ರ ಭಾರತದ ಜನಗಣತಿಯ ಪ್ರಕಾರ, ದೇಶದಲ್ಲಿ ಪಾರ್ಸಿ ಜನಸಂಖ್ಯೆಯು 57,264 ಆಗಿತ್ತು.
    • ಇದು 2001ರ ಜನಗಣತಿಯ ಅಂಕಿಅಂಶವಾದ 69,601ಕ್ಕೆ ಹೋಲಿಸಿದರೆ ಸರಿಸುಮಾರು ಶೇ. 22 ರಷ್ಟು ಗಣನೀಯ ಇಳಿಕೆಯನ್ನು ಸೂಚಿಸುತ್ತದೆ.

    ಜಿಯೋ ಪಾರ್ಸಿ ಯೋಜನೆಯ ಬಗ್ಗೆ:

    • ಜಾರಿಗೆ ಬಂದ ವರ್ಷ:- 2013-14
    • ಉದ್ದೇಶ:- ವೈಜ್ಞಾನಿಕ ವಿಧಾನ ಮತ್ತು ರಚನಾತ್ಮಕ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಪಾರ್ಸಿ ಜನಸಂಖ್ಯೆಯ ಇಳಿಕೆಯ ಪ್ರವೃತ್ತಿಯನ್ನು ಹಿಮ್ಮುಖವಾಗಿಸುವುದು. 

    ಈ ಯೋಜನೆಯು ಮೂರು ಘಟಕಗಳು:

    • ವೈದ್ಯಕೀಯ ನೆರವು:- ಇದು ಬಂಜೆತನ ನಿವಾರಣಾ ಚಿಕಿತ್ಸೆಗಳಾದ ಐವಿಎಫ್ (IVF), ಐಸಿಎಸ್‌ಐ (ICSI), ಬಾಡಿಗೆ ತಾಯ್ತನ ಮತ್ತು ಗರ್ಭಧಾರಣೆಯ ನಂತರದ ಆರೈಕೆಗಾಗಿ ಆರ್ಥಿಕ ನೆರವನ್ನು ಒದಗಿಸುತ್ತದೆ.
    • ಜಾಗೃತಿ ಮತ್ತು ಸಮಾಲೋಚನೆ:- ಇದು ಫಲವತ್ತತೆಯ ಸಮಸ್ಯೆಗಳನ್ನು ಹೊಂದಿರುವ ದಂಪತಿಗಳಿಗೆ ಸಮಾಲೋಚನೆಯನ್ನು ಒದಗಿಸುತ್ತದೆ.
    • ಸಮುದಾಯದ ಆರೋಗ್ಯ:- ಇದು ಮಕ್ಕಳನ್ನು ಹೊಂದಿರುವ ಪಾರ್ಸಿ ದಂಪತಿಗಳಿಗೆ ಹಾಗೂ ಅವಲಂಬಿತ ಹಿರಿಯ ಸದಸ್ಯರಿಗೆ ಮಾಸಿಕ ಆರ್ಥಿಕ ಬೆಂಬಲವನ್ನು ನೀಡುತ್ತದೆ.

    ಜಾಗತಿಕ ಶಿಕ್ಷಕ ಪ್ರಶಸ್ತಿ, 2026

    ಇತರೆ

    ಇದೀಗ ಸುದ್ದಿಯಲ್ಲಿದೆ:

    • ಭಾರತೀಯ ಶಿಕ್ಷಕಿ ‘ರೂಬಲ್ ನಾಗಿ’ ಅವರು 2026ನೇ ಸಾಲಿನ ಜಾಗತಿಕ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ದುಬೈನಲ್ಲಿ ನಡೆದ ವಿಶ್ವ ಸರ್ಕಾರಗಳ ಶೃಂಗಸಭೆಯಲ್ಲಿ ಅವರು 1 ಮಿಲಿಯನ್ ಡಾಲರ್ ಮೊತ್ತದ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.

    ‘ಜಾಗತಿಕ ಶಿಕ್ಷಕ ಪ್ರಶಸ್ತಿ’ಯ ಬಗ್ಗೆ:

    • ಇದನ್ನು 2014ರಲ್ಲಿ ಪ್ರಾರಂಭಿಸಲಾಯಿತು ಮತ್ತು ಇದನ್ನು ಸಾಮಾನ್ಯವಾಗಿ “ಬೋಧನಾ ಕ್ಷೇತ್ರದ ನೊಬೆಲ್ ಪ್ರಶಸ್ತಿ” ಎಂದು ಕರೆಯಲಾಗುತ್ತದೆ.
    • ಪ್ರಸ್ತುತಪಡಿಸುವವರು:- ‘ಜೆಮ್ಸ್ ಎಜುಕೇಶನ್’ 
    • ಆಯೋಜಕರು:- ಯುನೆಸ್ಕೋ ಸಹಯೋಗದೊಂದಿಗೆ ‘ವರ್ಕಿ ಫೌಂಡೇಶನ್’.
    • ಧ್ಯೇಯ:- ಬೋಧನೆ ಮತ್ತು ಸಾಮಾಜಿಕ ಪರಿವರ್ತನೆಗೆ ನೀಡಿದ ಅತ್ಯುತ್ತಮ ಕೊಡುಗೆಗಳಿಗಾಗಿ ಅಪ್ರತಿಮ ಶಿಕ್ಷಕರನ್ನು ಇದು ಗುರುತಿಸುತ್ತದೆ.

    ನಿಮಗೆ ತಿಳಿದಿದೆಯೇ?

    • ‘ರೂಬಲ್ ನಾಗಿ’ ಅವರು ಭಾರತದ ಪ್ರವರ್ತಕ ಶಿಕ್ಷಕಿಯಾಗಿದ್ದು, ಸಮಾಜದ ಅತ್ಯಂತ ಅಂಚಿನಲ್ಲಿರುವ ಸಮುದಾಯಗಳಿಗೆ ಕಲಿಕೆಯನ್ನು ಲಭ್ಯವಾಗುವಂತೆ ಮಾಡಲು ತಮ್ಮನ್ನು ತಾವು ಮುಡಿಪಾಗಿಟ್ಟಿದ್ದಾರೆ.
    • ಕಳೆದ ಎರಡು ದಶಕಗಳಲ್ಲಿ, ಅವರು 100ಕ್ಕೂ ಹೆಚ್ಚು ಸೌಲಭ್ಯ ವಂಚಿತ ಸಮುದಾಯಗಳು ಮತ್ತು ಹಳ್ಳಿಗಳಲ್ಲಿ 800ಕ್ಕೂ ಹೆಚ್ಚು ಕಲಿಕಾ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ.

    ಅಪ್ರಾಪ್ತೆಯ 30 ವಾರಗಳ ಗರ್ಭಧಾರಣೆಯ ಗರ್ಭಪಾತಕ್ಕೆ ಸರ್ವೋಚ್ಚ ನ್ಯಾಯಾಲಯದ ಅನುಮತಿ

    ರಾಜಕೀಯ ವ್ಯವಸ್ಥೆ ಮತ್ತು ಆಡಳಿತ; ಸಾಮಾಜಿಕ ನ್ಯಾಯ

    ಇದೀಗ ಸುದ್ದಿಯಲ್ಲಿದೆ:

    • ಯಾವುದೇ ಮಹಿಳೆಯನ್ನು ಆಕೆಯ ಇಚ್ಛೆಗೆ ವಿರುದ್ಧವಾಗಿ ಪೂರ್ಣಾವಧಿಯವರೆಗೆ ಗರ್ಭ ಧರಿಸುವಂತೆ ಒತ್ತಾಯಿಸುವಂತಿಲ್ಲ ಎಂದು ಒತ್ತಿಹೇಳಿರುವ ಸರ್ವೋಚ್ಚ ನ್ಯಾಯಾಲಯವು, ಅಪ್ರಾಪ್ತೆಯೊಬ್ಬರ 30 ವಾರಗಳ ಗರ್ಭವನ್ನು ವೈದ್ಯಕೀಯವಾಗಿ ಅಂತ್ಯಗೊಳಿಸಲು ಅನುಮತಿ ನೀಡಿದೆ.

    ವೈದ್ಯಕೀಯ ಗರ್ಭಪಾತ (ತಿದ್ದುಪಡಿ) ಕಾಯಿದೆ, 2021:

    • 20 ವಾರಗಳವರೆಗೆ ಗರ್ಭಪಾತಕ್ಕೆ ಅನುಮತಿ:- ಒಬ್ಬರು ನೋಂದಾಯಿತ ವೈದ್ಯಕೀಯ ವೃತ್ತಿಪರರ ಅಭಿಪ್ರಾಯದ ಮೇರೆಗೆ ಈ ಕಾಯಿದೆ ಅನುಮತಿ ನೀಡುತ್ತದೆ.
    • 20 ರಿಂದ 24 ವಾರಗಳ ನಡುವೆ ನಿರ್ದಿಷ್ಟ ವರ್ಗದ ಮಹಿಳೆಯರಿಗೆ ಗರ್ಭಪಾತಕ್ಕೆ ಅನುಮತಿ:- ಅಪ್ರಾಪ್ತರು, ಅತ್ಯಾಚಾರ ಸಂತ್ರಸ್ತರು ಮತ್ತು ವಿಶೇಷ ಚೇತನ ಮಹಿಳೆಯರು ಸೇರಿದಂತೆ, ಇಬ್ಬರು ವೈದ್ಯರ ಅಭಿಪ್ರಾಯದ ಮೇರೆಗೆ ಗರ್ಭಪಾತಕ್ಕೆ ಅವಕಾಶವಿರುತ್ತದೆ.
    • ಭ್ರೂಣದಲ್ಲಿ ಗಂಭೀರವಾದ ಅಸಹಜತೆಗಳು ಕಂಡುಬಂದ ಪ್ರಕರಣಗಳಲ್ಲಿ ಮಾತ್ರ 24 ವಾರಗಳ ನಂತರ ಗರ್ಭಪಾತಕ್ಕೆ ಅನುಮತಿ:- ವೈದ್ಯಕೀಯ ಮಂಡಳಿಯು ದೃಢಪಡಿಸಿದಂತೆ ಅನುಮತಿ ನೀಡಲಾಗುತ್ತದೆ.

    ಸರ್ವೋಚ್ಚ ನ್ಯಾಯಾಲಯದ ಪ್ರಮುಖ ಅವಲೋಕನಗಳು:

    • ‘ಸಂತಾನೋತ್ಪತ್ತಿಯ ಸ್ವಾಯತ್ತತೆ’- ಸಂವಿಧಾನದ 21ನೇ ವಿಧಿ:- ಈ ವಿಧಿಯ ಅಡಿಯಲ್ಲಿ ಬರುವ ವೈಯಕ್ತಿಕ ಸ್ವಾತಂತ್ರ್ಯದ ಅವಿಭಾಜ್ಯ ಅಂಗವಾಗಿದೆ ಎಂದು ನ್ಯಾಯಾಲಯ ಪುನರುಚ್ಚರಿಸಿದೆ.
    • ಅಪ್ರಾಪ್ತೆಯ ಗರ್ಭಧಾರಣೆಯು “ಮೇಲ್ನೋಟಕ್ಕೆ ಕಾನೂನುಬಾಹಿರ”:- ಅಪ್ರಾಪ್ತೆಯು ಲೈಂಗಿಕ ಸಂಬಂಧಗಳಿಗೆ ಸಮ್ಮತಿ ನೀಡುವ ಕಾನೂನುಬದ್ಧ ಸಾಮರ್ಥ್ಯವನ್ನು ಹೊಂದಿರುವುದಿಲ್ಲವಾದ್ದರಿಂದ, ಇದು “ಮೇಲ್ನೋಟಕ್ಕೆ ಕಾನೂನುಬಾಹಿರ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

    ಹಕ್ಕಿ-ಪಿಕ್ಕಿ ಬುಡಕಟ್ಟು ಸಮುದಾಯ

    ಸಮಾಜ

    ಇದೀಗ ಸುದ್ದಿಯಲ್ಲಿದೆ:

    • ಚಾಡ್ ದೇಶದಲ್ಲಿ ಜೈಲು ಶಿಕ್ಷೆಗೆ ಗುರಿಯಾಗುವ ಅಪಾಯದಲ್ಲಿದ್ದ ದಾವಣಗೆರೆ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಹಕ್ಕಿ-ಪಿಕ್ಕಿ ಸಮುದಾಯದ ಸದಸ್ಯರಿಗೆ ಭಾರತೀಯ ರಾಯಭಾರ ಕಚೇರಿಯು ನೆರವು ನೀಡಿದೆ.

    ಹಕ್ಕಿ-ಪಿಕ್ಕಿ ಬುಡಕಟ್ಟು ಸಮುದಾಯದ ಬಗ್ಗೆ:

    • ಇವರು ಪಶ್ಚಿಮ ಮತ್ತು ದಕ್ಷಿಣ ಭಾರತದ ಹಲವಾರು ರಾಜ್ಯಗಳಲ್ಲಿ, ವಿಶೇಷವಾಗಿ ಅರಣ್ಯ ಪ್ರದೇಶಗಳ ಬಳಿ ವಾಸಿಸುವ ಬುಡಕಟ್ಟು ಸಮುದಾಯದವರಾಗಿದ್ದಾರೆ.
    • ಅರೆ-ಅಲೆಮಾರಿ ಬುಡಕಟ್ಟು ಸಮುದಾಯದವರು:- ಹಕ್ಕಿ-ಪಿಕ್ಕಿಗಳು (ಕನ್ನಡದಲ್ಲಿ ‘ಹಕ್ಕಿ’ ಎಂದರೆ ಪಕ್ಷಿ ಮತ್ತು ‘ಪಿಕ್ಕಿ’ ಎಂದರೆ ಹಿಡಿಯುವವರು) ಸಾಂಪ್ರದಾಯಿಕವಾಗಿ ಪಕ್ಷಿ ಹಿಡಿಯುವವರು ಮತ್ತು ಬೇಟೆಗಾರರಾಗಿದ್ದಾರೆ.
    • ಹಕ್ಕಿ-ಪಿಕ್ಕಿ ಜನರು ಮೂಲತಃ ಗುಜರಾತ ಮತ್ತು ರಾಜಸ್ಥಾನದ ಗಡಿ ಜಿಲ್ಲೆಗಳಿಂದ ಬಂದವರು ಎಂದು ನಂಬಲಾಗಿದೆ.
    • ಹಿಂದೂ ಸಂಪ್ರದಾಯ ಅನುಸರಿಸುತ್ತಾರೆ:- ಕರ್ನಾಟಕದಲ್ಲಿರುವ ಹಕ್ಕಿ-ಪಿಕ್ಕಿಗಳು ಎಲ್ಲಾ ಹಿಂದೂ ಹಬ್ಬಗಳನ್ನು ಆಚರಿಸುತ್ತಾರೆ.
    • ಮಾಂಸಾಹಾರಿಗಳಾಗಿದ್ದಾರೆ:- ಕುಟುಂಬದ ಹಿರಿಯ ಮಗನನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುವಂತೆ, ಅವನು ತನ್ನ ಕೂದಲನ್ನು ಕತ್ತರಿಸಬಾರದು ಎಂಬ ವಾಡಿಕೆ ಇದೆ.
    • ಸೋದರಸಂಬಂಧಿ ವಿವಾಹಗಳಿಗೆ ಆದ್ಯತೆ:- ಇವರ  ಸಮಾಜವು ಮಾತೃಪ್ರಧಾನವಾಗಿದ್ದು, ಇಲ್ಲಿ ವರನು ವಧುವಿನ ಕುಟುಂಬಕ್ಕೆ ವಧುದಕ್ಷಿಣೆಯನ್ನು ನೀಡುತ್ತಾನೆ. ಏಕಪತ್ನಿತ್ವವು ಇಲ್ಲಿನ ರೂಢಿಯಾಗಿದೆ.

    ದೊಡ್ಡ ಕೆಂಪು ನೀರು ಹಕ್ಕಿ (ರಾಜಹಂಸ)

    ಪರಿಸರ

    ಇದೀಗ ಸುದ್ದಿಯಲ್ಲಿದೆ:

    • ಆಂಧ್ರಪ್ರದೇಶದ ಕಾಕಿನಾಡ ಕೊಲ್ಲಿಯ ಕೋರಿಂಗಾ ವನ್ಯಜೀವಿ ಧಾಮದಲ್ಲಿರುವ ಹೋಪ್ ದ್ವೀಪದಲ್ಲಿ ಇದೇ ಮೊದಲ ಬಾರಿಗೆ ಸುಮಾರು 70 ರಾಜಹಂಸ (ಗ್ರೇಟರ್ ಫ್ಲೆಮಿಂಗೊ) ಪಕ್ಷಿಗಳು  ಕಂಡುಬಂದಿವೆ.

    ದೊಡ್ಡ ಕೆಂಪು ನೀರು ಹಕ್ಕಿ (ಗ್ರೇಟರ್ ಫ್ಲೆಮಿಂಗೊ)ಗಳ ಬಗ್ಗೆ: 

    • ವೈಜ್ಞಾನಿಕ ಹೆಸರು:- ಫೀನಿಕ್ಯಾಪ್ಟರಸ್ ರೋಸಿಯಸ್
    • ದೊಡ್ಡ ಕೆಂಪು ನೀರು ಹಕ್ಕಿ ಕುಟುಂಬದಲ್ಲಿಯೇ ಅತಿದೊಡ್ಡ ಪ್ರಭೇದವಾಗಿದೆ:- ಇದು ಸರಾಸರಿ 110–150 ಸೆಂ.ಮೀ. ಎತ್ತರವಿದ್ದು, 2–4 ಕೆ.ಜಿ. ತೂಕ ವಿರುತ್ತದೆ ಮತ್ತು ಅತ್ಯಂತ ವ್ಯಾಪಕವಾಗಿ ಹರಡಿರುವ ಪ್ರಭೇದವಾಗಿದೆ.
    • ಹಂಚಿಕೆ:- ಉತ್ತರ (ಕರಾವಳಿ) ಮತ್ತು ಸಹಾರಾ ಮರುಭೂಮಿಯ ದಕ್ಷಿಣ ಭಾಗದಲ್ಲಿರುವ ಆಫ್ರಿಕಾ ಪ್ರದೇಶ, ಭಾರತೀಯ ಉಪಖಂಡ (ಹಿಮಾಲಯದ ದಕ್ಷಿಣಕ್ಕೆ), ಮಧ್ಯಪ್ರಾಚ್ಯ, ಪರ್ಷಿಯನ್ ಕೊಲ್ಲಿ, ಏಡನ್ ಕೊಲ್ಲಿ, ಕೆಂಪು ಸಮುದ್ರ ಮತ್ತು ದಕ್ಷಿಣ ಯುರೋಪಿನ ಮೆಡಿಟರೇನಿಯನ್ ದೇಶಗಳಲ್ಲಿ ಕಂಡುಬರುತ್ತವೆ.
    • ದೊಡ್ಡ ಕೆಂಪು ನೀರು ಹಕ್ಕಿಗಳು ಸಾಮಾನ್ಯವಾಗಿ ಇಸ್ರೇಲ್, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬರುತ್ತವೆ.
    • ಸರಾಸರಿ ಜೀವಿತಾವಧಿ:- 30–40 ವರ್ಷಗಳು
    • ಆಹಾರ:- ಸಣ್ಣ ಮೀನುಗಳು ಮತ್ತು ಇತರೆ ಜಲಚರ ಜೀವಿಗಳು.
    • ಅಪಾಯಗಳು:- ಬ್ಯಾಕ್ಟೀರಿಯಾ, ವಿಷಕಾರಿ ವಸ್ತುಗಳು, ಆವಾಸಸ್ಥಾನದ ನಾಶ ಮತ್ತು ನೀರಿನ ಪೂರೈಕೆಯಲ್ಲಿನ ಮಾಲಿನ್ಯವಾಗಿದೆ. ಈ ಮಾಲಿನ್ಯವು ಸಾಮಾನ್ಯವಾಗಿ ಉತ್ಪಾದನಾ ಕಂಪನಿಗಳಿಂದ ಹರಿದುಬರುವ ತ್ಯಾಜ್ಯದಿಂದ ಉಂಟಾಗುತ್ತದೆ.
    • ಗುಜರಾತಿನ ರಾಜ್ಯ ಪಕ್ಷಿ:- ಗ್ರೇಟರ್ ಫ್ಲೆಮಿಂಗೊ ಗುಜರಾತಿನ ರಾಜ್ಯ ಪಕ್ಷಿಯಾಗಿದೆ.

    ನೀರು ಹಕ್ಕಿಯ ವಿಧಗಳು ಮತ್ತು IUCN ಕೆಂಪು ಪಟ್ಟಿಯಲ್ಲಿ ಸ್ಥಿತಿಗತಿ:

    • ದೊಡ್ಡ ಕೆಂಪು ನೀರು ಹಕ್ಕಿ/ರಾಜಹಂಸ (ಗ್ರೇಟರ್ ಫ್ಲೆಮಿಂಗೊ) – ಕನಿಷ್ಠ ಕಾಳಜಿ (LC)
    • ಚಿಲಿಯ ನೀರು ಹಕ್ಕಿ (ಫ್ಲೆಮಿಂಗೊ) – ಅಪಾಯದ ಅಂಚಿನಲ್ಲಿರುವ (NT)
    • ಅಮೆರಿಕಾದ ನೀರು ಹಕ್ಕಿ (ಫ್ಲೆಮಿಂಗೊ) – ಕನಿಷ್ಠ ಕಾಳಜಿ (LC) 
    • ಸಣ್ಣ ಕೆಂಪು ನೀರು ಹಕ್ಕಿ (ಲೆಸ್ಸರ್ ಫ್ಲೆಮಿಂಗೊ) – ಅಪಾಯದ ಅಂಚಿನಲ್ಲಿರುವ (NT)
    • ಆಂಡೀಸ್ ಪರ್ವತ ಪ್ರದೇಶದ ನೀರು ಹಕ್ಕಿ (ಫ್ಲೆಮಿಂಗೊ) – ದುರ್ಬಲ (VU)
    • ಜೇಮ್ಸ್ ನೀರು ಹಕ್ಕಿ (ಫ್ಲೆಮಿಂಗೊ) – ಅಪಾಯದ ಅಂಚಿನಲ್ಲಿರುವ (NT)

    ಕುಡಗೋಲು ಕಣ ಕಾಯಿಲೆ (Sickle Cell Disease)

    ಆರೋಗ್ಯ

    ಇದೀಗ ಸುದ್ದಿಯಲ್ಲಿದೆ:

    • ಯು.ಎಸ್. ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (U.S. FDA), ಸಿಕ್ಕಲ್ ಸೆಲ್ ಕಾಯಿಲೆಗೆ (SCD) ಚಿಕಿತ್ಸೆ ನೀಡಲು ಅಪರೂಪದ ಕಾಯಿಲೆಗಳ ಔಷಧಿಗಳಿಗೆ ನೀಡುವ ವಿಶೇಷ (ODD – ‘ಆರ್ಫನ್ ಡ್ರಗ್ ಡೆಸಿಗ್ನೇಷನ್’) ಮಾನ್ಯತೆಯನ್ನು ನೀಡಿದೆ.

    ODD – ಆರ್ಫನ್ ಡ್ರಗ್ ಡೆಸಿಗ್ನೇಷನ್ (ಅಪರೂಪದ ಕಾಯಿಲೆಗಳ ಔಷಧಿಗಳಿಗೆ ವಿಶೇಷ ಮಾನ್ಯತೆ) ಬಗ್ಗೆ:

    • ಔಷಧೀಯ ವಸ್ತುಗಳಾಗಿವೆ:- ‘ಆರ್ಫನ್ ಡ್ರಗ್‌’ಗಳು (Orphan drugs) ಅಪರೂಪದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿದೆ.
    • ಒಮ್ಮೆ ಈ ಮಾನ್ಯತೆ ದೊರೆತ ನಂತರ, ಈ ಔಷಧಗಳ ಅಭಿವೃದ್ಧಿಯನ್ನು ಉತ್ತೇಜಿಸಲು ಹಲವಾರು ಪ್ರೋತ್ಸಾಹಕಗಳನ್ನು ನೀಡಲಾಗುತ್ತದೆ. ಮಾರುಕಟ್ಟೆ ಏಕಸ್ವಾಮ್ಯ, ಸಂಶೋಧನೆ ಮತ್ತು ಅಭಿವೃದ್ಧಿ ವೆಚ್ಚಗಳಿಗೆ ತೆರಿಗೆ ವಿನಾಯಿತಿಗಳು ಮತ್ತು ನಿಯಂತ್ರಕ ಅರ್ಜಿಗಳಿಗೆ ಶುಲ್ಕ ಮನ್ನಾ ಇದರಲ್ಲಿ ಸೇರಿವೆ.

    ಕುಡಗೋಲು ಕಣ ರಕ್ತಹೀನತೆ (ಸಿಕ್ಕಲ್ ಸೆಲ್ ಅನಮಿಯಾ)ಯ ಬಗ್ಗೆ:

    • ಸ್ವಭಾವಿಕವಾಗಿ ಅನುವಂಶಿಕ ರೋಗವಾಗಿದೆ:- ಇದು ವಂಶಪಾರಂಪರ್ಯವಾಗಿ ಬಂದಿರುವ ರಕ್ತ ಸಂಬಂಧಿತ ಕಾಯಿಲೆಗಳ ಒಂದು ಗುಂಪಾಗಿದೆ.
    • ಕಾರಣ:- 11ನೇ ವರ್ಣತಂತುವಿನಲ್ಲಿ (Chromosome) ಕಂಡುಬರುವ ಹಿಮೋಗ್ಲೋಬಿನ್-ಬೀಟಾ ವಂಶವಾಹಿಯಲ್ಲಿನ ರೂಪಾಂತರದಿಂದ ಇದು ಉಂಟಾಗುತ್ತದೆ. ಈ ರೂಪಾಂತರವು ದೋಷಪೂರಿತ ಹಿಮೋಗ್ಲೋಬಿನ್ (Hb) ಉಂಟಾಗಲು ಕಾರಣವಾಗುತ್ತದೆ.
    • ಲಕ್ಷಣಗಳು:- 
    • ಆಮ್ಲಜನಕವನ್ನು ಬಿಡುಗಡೆ ಮಾಡಿದ ನಂತರ, ಈ ದೋಷಪೂರಿತ ಹಿಮೋಗ್ಲೋಬಿನ್ ಅಣುಗಳು ಒಗ್ಗೂಡಿ ಕೋಲಿನಂತಹ ರಚನೆಗಳನ್ನು ರೂಪಿಸುತ್ತವೆ.
    • ಕೆಂಪು ರಕ್ತ ಕಣಗಳು ಗಡುಸಾಗುತ್ತವೆ ಮತ್ತು ಕುಡಗೋಲಿನ ಆಕಾರವನ್ನು ಪಡೆಯುತ್ತವೆ.
    • ಹರಡುವಿಕೆ:- ಇದು ಸಾಮಾನ್ಯವಾಗಿ ಮಗುವಿನ ಜನನದ ಸಮಯದಲ್ಲಿ ಪೋಷಕರಿಂದ ಮಗುವಿಗೆ ವರ್ಗಾವಣೆಯಾಗುತ್ತದೆ. ಅಂದರೆ, ತಂದೆ ಮತ್ತು ತಾಯಿ ಇಬ್ಬರೂ ಕುಡಗೋಲು ಕಣ (ಸಿಕ್ಕಲ್ ಸೆಲ್) ಕಾಯಿಲೆಯ ವಾಹಕರಾಗಿರಬಹುದು.
    • ರೋಗಲಕ್ಷಣಗಳು:- 
      • ಕುಡಗೋಲು ಕಣ ರಕ್ತಹೀನತೆಯೊಂದಿಗೆ ಜನಿಸಿದ ಮಕ್ಕಳು ಹಲವು ತಿಂಗಳುಗಳವರೆಗೆ ರೋಗಲಕ್ಷಣಗಳನ್ನು ತೋರಿಸದಿರಬಹುದು.
    • ವಿಪರೀತ ಆಯಾಸ, ಕಿರಿಕಿರಿ, ಕೈ ಮತ್ತು ಕಾಲುಗಳ ನೋವಿನಿಂದ ಕೂಡಿದ ಊತ ಮತ್ತು ಕಾಮಾಲೆ.
    • ಪರಿಣಾಮಗಳು:- 
    • ಆಕಾರ ಕಳೆದುಕೊಂಡ ಈ ಕಣಗಳು ನಮ್ಯತೆಯನ್ನು ಹೊಂದಿರುವುದಿಲ್ಲ ಮತ್ತು ಸಣ್ಣ ರಕ್ತನಾಳಗಳನ್ನು ನಿರ್ಬಂಧಿಸಬಹುದು. ಇದರಿಂದ ರಕ್ತದ ಹರಿವಿಗೆ ಅಡ್ಡಿಯಾಗುತ್ತದೆ.
    • ಕುಡಗೋಲು ಕಣಗಳು ಅಕಾಲಿಕವಾಗಿ ಸಾಯುತ್ತವೆ. ಇದರಿಂದ ಕೆಂಪು ರಕ್ತ ಕಣಗಳ ದೀರ್ಘಕಾಲದ ಕೊರತೆ (ರಕ್ತಹೀನತೆ) ಉಂಟಾಗುತ್ತದೆ. ಇದನ್ನು ಸಾಮಾನ್ಯವಾಗಿ ‘ಕುಡಗೋಲು ಕಣ (ಸಿಕ್ಕಲ್ ಸೆಲ್) ರಕ್ತಹೀನತೆ’ ಎಂದು ಕರೆಯಲಾಗುತ್ತದೆ.
    • ಚಿಕಿತ್ಸೆ:- ಔಷಧಗಳು, ರಕ್ತ ವರ್ಗಾವಣೆ ಮತ್ತು ಅಪರೂಪದ ಸಂದರ್ಭಗಳಲ್ಲಿ ಮೂಳೆ ಮಜ್ಜೆಯ ಕಸಿ ಮಾಡಲಾಗುತ್ತದೆ.

    ಹಿಮೋಗ್ಲೋಬಿನ್ (Hb) ಎನ್ನುವುದು ಕೆಂಪು ರಕ್ತ ಕಣಗಳಲ್ಲಿ ಕಂಡುಬರುವ ಪ್ರೋಟೀನ್ ಆಗಿದ್ದು, ಇದು ದೇಹದಲ್ಲಿ ಆಮ್ಲಜನಕವನ್ನು ಸಾಗಿಸುತ್ತದೆ ಮತ್ತು ರಕ್ತಕ್ಕೆ ಕೆಂಪು ಬಣ್ಣವನ್ನು ನೀಡುತ್ತದೆ.

    ಪರ್ವತ ಗೊರಿಲ್ಲಾಗಳು

    ಪರಿಸರ,ಸುದ್ದಿಯಲ್ಲಿರುವ ಪ್ರಭೇದಗಳು

    ಸಂದರ್ಭ:

    • ಇತ್ತೀಚಿಗೆ, ಪೂರ್ವ ‘ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ’ದಲ್ಲಿ (ಡಿಆರ್‌ಸಿ) ಅಪರೂಪದ ಅವಳಿ ಪರ್ವತ ಗೊರಿಲ್ಲಾಗಳು ಜನಿಸಿವೆ.

    ಪರ್ವತ ಗೊರಿಲ್ಲಾಗಳು (ಗೊರಿಲ್ಲಾ ಬೆರಿಂಗೆ ಬೆರಿಂಗೆ): 

    • ಪೂರ್ವದ ಗೊರಿಲ್ಲಾದ ಒಂದು ಉಪ-ಪ್ರಭೇದವಾಗಿದೆ:- ಪರ್ವತ ಗೊರಿಲ್ಲಾಗಳು ಜಾಗತಿಕವಾಗಿ ಕಂಡುಬರುವ ಎರಡು ಗೊರಿಲ್ಲಾ ಪ್ರಭೇದಗಳು ಪೈಕಿ ಒಂದು (ಪೂರ್ವದ ಮತ್ತು ಪಶ್ಚಿಮದ ಗೊರಿಲ್ಲಾಗಳು).
    • ಕಾಡಿನಲ್ಲಿ, ಗೊರಿಲ್ಲಾಗಳು 40 ವರ್ಷಗಳಿಗೂ ಹೆಚ್ಚು ಕಾಲ ಬದುಕಬಲ್ಲವು. 
    • ವಿಶೇಷವೆಂದರೆ, ಮಾನವರು ಈ ಜೀವಿಗಳೊಂದಿಗೆ ಸುಮಾರು ಶೇ. 98 ರಷ್ಟು ಡಿಎನ್‌ಎ (DNA) ಯನ್ನು ಹಂಚಿಕೊಳ್ಳುತ್ತಾರೆ.
    • ಆವಾಸಸ್ಥಾನ:- ಇವು ಸುಮಾರು 8,000 ದಿಂದ 13,000 ಅಡಿ ಎತ್ತರದ ಪ್ರದೇಶಗಳಲ್ಲಿ ವಾಸಿಸುತ್ತವೆ. ತಂಪಾದ ಪರ್ವತ ಹವಾಮಾನಕ್ಕೆ ಹೊಂದಿಕೊಳ್ಳಲು ಇತರೆ ದೈತ್ಯ ವಾನರಗಳಿಗಿಂತ “ದಪ್ಪವಾದ ತುಪ್ಪಳ”ವನ್ನು ಇವು ಹೊಂದಿವೆ.
    • ಹಂಚಿಕೆ:- ಇವು ಸಾಮಾನ್ಯವಾಗಿ ಆಫ್ರಿಕಾದ ರುವಾಂಡಾ, ಉಗಾಂಡಾ ಮತ್ತು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಕಂಡುಬರುತ್ತವೆ.
    • ಆಹಾರ:- ಮುಖ್ಯವಾಗಿ ಎಲೆಗಳು, ಚಿಗುರುಗಳು ಮತ್ತು ಕಾಂಡಗಳನ್ನು ಒಳಗೊಂಡಿರುತ್ತದೆ. ಇದರೊಂದಿಗೆ ಖನಿಜಗಳ ಮೂಲವಾಗಿ ಕೀಟಗಳು, ಬೇರುಗಳು, ಮರದ ತೊಗಟೆ ಮತ್ತು ಕೊಳೆಯುತ್ತಿರುವ ಮರಗಳನ್ನು ಇವು ಸೇವಿಸುತ್ತವೆ.
    • IUCN ಕೆಂಪು ಪಟ್ಟಿ ಸ್ಥಿತಿಗತಿ:- ಅಳಿವಿನಂಚಿನಲ್ಲಿರುವ (EN)
    • ಗಣತಿ:- ಕಾಡಿನಲ್ಲಿ ಇವುಗಳ ಅಂದಾಜು ಗಣತಿ ಸುಮಾರು 1,063 ರಷ್ಟಿದೆ.
  • ಎಸ್. ಸದಾಗೋಪನ್ ಸಮಿತಿ

    ಎಸ್. ಸದಾಗೋಪನ್ ಸಮಿತಿ

    ಇದೀಗ ಸುದ್ದಿಯಲ್ಲಿದೆ:

    • 2026 ರ ಫೆಬ್ರವರಿಯಲ್ಲಿ, ಎಂಜಿನಿಯರಿಂಗ್ ಪ್ರವೇಶಾತಿ ಮತ್ತು ಉದ್ಯೋಗಾರ್ಹತೆಯಲ್ಲಿ ಕಂಡುಬಂದಿರುವ ಆತಂಕಕಾರಿ ಕುಸಿತವನ್ನು ಪರಿಹರಿಸಲು ಕರ್ನಾಟಕ ಉನ್ನತ ಶಿಕ್ಷಣ ಇಲಾಖೆಯು 10 ಸದಸ್ಯರ ತಜ್ಞರ ಸಮಿತಿಯನ್ನು ಅಧಿಕೃತವಾಗಿ ರಚಿಸಿದೆ.
    • ಐಐಐಟಿ-ಬೆಂಗಳೂರಿನ ಸಂಸ್ಥಾಪಕ ನಿರ್ದೇಶಕರಾದ ಪ್ರೊ. ಎಸ್. ಸದಾಗೋಪನ್ ಅವರು ಈ ಸಮಿತಿಯ ಅಧ್ಯಕ್ಷತೆ ವಹಿಸಿದ್ದಾರೆ.

    ಸುಧಾರಣೆಯ ಪ್ರಮುಖ ಉದ್ದೇಶಗಳು:

    • ಪಠ್ಯಕ್ರಮದ ನವೀಕರಣ:- ಮೂಲಭೂತ ಎಂಜಿನಿಯರಿಂಗ್ ಕೋರ್ಸ್‌ಗಳನ್ನು (ಮೆಕ್ಯಾನಿಕಲ್, ಸಿವಿಲ್, ಎಲೆಕ್ಟ್ರಿಕಲ್) ಪ್ರಸ್ತುತ ಕೈಗಾರಿಕಾ ಮತ್ತು ಉದ್ಯೋಗದ ಅಗತ್ಯಗಳಿಗೆ ತಕ್ಕಂತೆ ಸರಿಹೊಂದಿಸುವುದು.
    • ಪ್ರವೇಶಾತಿ ಪರಿಶೀಲನೆ:- ಕಂಪ್ಯೂಟರ್ ವಿಜ್ಞಾನ ಮತ್ತು ಸಂಬಂಧಿತ ವಿಭಾಗಗಳಲ್ಲಿನ ಹೆಚ್ಚುವರಿ ಸೀಟುಗಳ ಲಭ್ಯತೆಯನ್ನು ಮೌಲ್ಯಮಾಪನ ಮಾಡುವುದು; (ಗಮನಿಸಿ: 2025-26 ನೇ ಶೈಕ್ಷಣಿಕ ವರ್ಷದಲ್ಲಿ ಈ ವಿಭಾಗಗಳಲ್ಲಿ 9,000 ಕ್ಕೂ ಹೆಚ್ಚು ಸೀಟುಗಳು ಖಾಲಿ ಉಳಿದಿದ್ದವು).
    • ಬೇಡಿಕೆ ಹೆಚ್ಚಿಸುವುದು:- ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮುಚ್ಚುವ ಹಂತ ತಲುಪಿರುವ ‘ಕೋರ್ ಎಂಜಿನಿಯರಿಂಗ್’ ವಿಭಾಗಗಳತ್ತ ವಿದ್ಯಾರ್ಥಿಗಳನ್ನು ಮರಳಿ ಆಕರ್ಷಿಸಲು ಸೂಕ್ತ ಕಾರ್ಯತಂತ್ರಗಳನ್ನು ಗುರುತಿಸುವುದು.
    • ಉದ್ಯೋಗಾರ್ಹತೆಯ ಕೊರತೆ ನಿವಾರಣೆ:- ರಾಜ್ಯದಲ್ಲಿ ಕೇವಲ 17% ರಷ್ಟು ಎಂಜಿನಿಯರಿಂಗ್ ಪದವೀಧರರು ಮಾತ್ರ ಯಶಸ್ವಿಯಾಗಿ ಉದ್ಯೋಗ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂಬ ವರದಿಗಳನ್ನು ಗಮನದಲ್ಲಿಟ್ಟುಕೊಂಡು, ಈ ಅಂತರವನ್ನು ನಿವಾರಿಸಲು ಕ್ರಮಕೈಗೊಳ್ಳುವುದು.

    ಈ ಸಮಿತಿಯ ಸದಸ್ಯರು: 

    • ಈ 10 ಸದಸ್ಯರ ಸಮಿತಿಯು ಐಐಎಸ್‌ಸಿ (IISc) ಮತ್ತು ಯುವಿಸಿಇಯ (UVCE) ಉನ್ನತ ಮಟ್ಟದ ಶೈಕ್ಷಣಿಕ ತಜ್ಞರ ಮಿಶ್ರಣವನ್ನು ಒಳಗೊಂಡಿದೆ. ಇದರ ಜೊತೆಗೆ ವಿಟಿಯು (VTU) ಪ್ರತಿನಿಧಿಗಳು, ಕೈಗಾರಿಕಾ ಮುಖಂಡರು ಹಾಗೂ ಸರ್ಕಾರಿ ಅಧಿಕಾರಿಗಳು ಸಹ ಈ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ.
  • ಗಡಿನಾಡು ನಾಗಾಲ್ಯಾಂಡ್ ಪ್ರಾದೇಶಿಕ ಪ್ರಾಧಿಕಾರ (FNTA) | ವಿಝಿಂಜಂ ಬಂದರು | ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) | ವಿಪತ್ತು ಸಂತ್ರಸ್ತರ ಗುರುತಿಸುವಿಕೆಗಾಗಿ NDMAಯ ಮೊದಲ ಮಾರ್ಗಸೂಚಿಗಳು | ಸಿಎಆರ್ ಟಿ-ಕೋಶ ಚಿಕಿತ್ಸೆ (CAR T-cell therapy) | ಅಗ್ನಿ-3 ಮಧ್ಯಮ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ

    ಗಡಿನಾಡು ನಾಗಾಲ್ಯಾಂಡ್ ಪ್ರಾದೇಶಿಕ ಪ್ರಾಧಿಕಾರ (FNTA)

    ಆಡಳಿತ

    ಇದೀಗ ಸುದ್ದಿಯಲ್ಲಿದೆ:

    • ಪೂರ್ವ ನಾಗಾಲ್ಯಾಂಡ್‌ನ ಜನತಾ ಸಂಸ್ಥೆ (ENPO), ನಾಗಾಲ್ಯಾಂಡ್ ಸರ್ಕಾರ ಮತ್ತು ಭಾರತ ಸರ್ಕಾರ ಇತ್ತೀಚೆಗೆ ಐತಿಹಾಸಿಕ ಒಪ್ಪಂದವೊಂದಕ್ಕೆ ಸಹಿ ಹಾಕಿವೆ. ಈ ಒಪ್ಪಂದದ ಪ್ರಕಾರ, ಗಡಿನಾಡು ನಾಗಾಲ್ಯಾಂಡ್‌ಗಾಗಿ ಪ್ರಾದೇಶಿಕ ಪ್ರಾಧಿಕಾರವನ್ನು (FNTA) ಸ್ಥಾಪಿಸಲಾಗುವುದು.

    ಗಡಿನಾಡು ನಾಗಾಲ್ಯಾಂಡ್ ಪ್ರಾದೇಶಿಕ ಪ್ರಾಧಿಕಾರ (FNTA)ದ ಬಗ್ಗೆ:

    • ವ್ಯಾಪ್ತಿ:- ಇದರಲ್ಲಿ 6 ಜಿಲ್ಲೆಗಳು ಒಳಗೊಂಡಿವೆ – ಟ್ಯುಯೆನ್ಸಾಂಗ್, ಮೋನ್, ಕಿಫಿರೆ, ಲಾಂಗ್ಲೆಂಗ್, ನೋಕ್ಲಾಕ್ ಮತ್ತು ಶಾಮಟೋರ್. ಇಲ್ಲಿ 8 ಪ್ರಮುಖ ನಾಗಾ ಬುಡಕಟ್ಟುಗಳು ನೆಲೆಸಿವೆ.
    • ಉದ್ದೇಶ:- ಆಡಳಿತಾತ್ಮಕ ಮತ್ತು ಅಭಿವೃದ್ಧಿ ಸ್ವಾಯತ್ತತೆಯನ್ನು ಹೆಚ್ಚಿಸುವ ಮೂಲಕ ಅಧಿಕಾರ ವಿಕೇಂದ್ರೀಕರಣಕ್ಕೆ ಈ ಒಪ್ಪಂದವು ಅವಕಾಶ ಕಲ್ಪಿಸುತ್ತದೆ.
    • ಕಿರು-ಸಚಿವಾಲಯ:- ಇದು ಅಪರ ಮುಖ್ಯ ಕಾರ್ಯದರ್ಶಿ ಅಥವಾ ಪ್ರಧಾನ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಯ ನೇತೃತ್ವದಲ್ಲಿರುತ್ತದೆ.
    • ಮಹತ್ವ:- ಐತಿಹಾಸಿಕವಾಗಿ ಹಿಂದುಳಿದ ಪ್ರದೇಶದಲ್ಲಿ ಸಮತೋಲಿತ ಪ್ರಾದೇಶಿಕ ಅಭಿವೃದ್ಧಿ, ಆರ್ಥಿಕ ಸ್ವಾಯತ್ತತೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು ಇದರ ಗುರಿಯಾಗಿದೆ.
    • ಗಮನಿಸಿ:- ಆದಾಗ್ಯೂ, ಈ ವ್ಯವಸ್ಥೆಯು ಸಂವಿಧಾನದ ವಿಧಿ 371(A) ಅಡಿಯಲ್ಲಿ ನಾಗಾ ಸಾಂಪ್ರದಾಯಿಕ ಆಚರಣೆಗಳು, ಭೂ ಹಕ್ಕುಗಳು ಮತ್ತು ಸಾಮಾಜಿಕ ಸಂಸ್ಥೆಗಳಿಗೆ ಒದಗಿಸಲಾದ ರಕ್ಷಣೆಗಳನ್ನು ದುರ್ಬಲಗೊಳಿಸುವುದಿಲ್ಲ.

    ವಿಝಿಂಜಂ ಬಂದರು

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ಸರಕು ಪೆಟ್ಟಿಗೆಗಳ (ಕಂಟೈನರ್) ನಿರ್ವಹಣೆಯಲ್ಲಿ ಕೇರಳದ ವಿಝಿಂಜಂ ಅಂತರರಾಷ್ಟ್ರೀಯ ಬಂದರು ಜಾಗತಿಕವಾಗಿ 83ನೇ ಸ್ಥಾನಕ್ಕೇರಿದೆ. ಈ ಸಾಧನೆಯು ಭಾರತದ ಅತ್ಯಂತ ಹೊಸ ಆಳಸಮುದ್ರದ ಸರಕು ವರ್ಗಾವಣೆ ಕೇಂದ್ರದ ತ್ವರಿತ ವಿಸ್ತರಣೆಯನ್ನು ಪ್ರತಿಬಿಂಬಿಸುತ್ತದೆ.

    ವಿಝಿಂಜಂ  ಬಂದರಿನ ಬಗ್ಗೆ:

    • ಸ್ಥಳ:- ತಿರುವನಂತಪುರಂ, (ಕೇರಳ)

    ಪ್ರಮುಖ ವೈಶಿಷ್ಟ್ಯಗಳು:

    • ಇದು ಭಾರತದ ಅತ್ಯಂತ ಆಳವಾದ ಬಂದರುಗಳಲ್ಲಿ ಒಂದಾಗಿದೆ.
    • ಇದು ಬೃಹತ್ ಸರಕು ಪೆಟ್ಟಿಗೆಗಳ ಹಡಗು (ULCVs- ಅಲ್ಟ್ರಾ ಲಾರ್ಜ್ ಕಂಟೈನರ್ ವೆಸೆಲ್ )ಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.
    • ಇದನ್ನು ವಿನ್ಯಾಸ, ನಿರ್ಮಾಣ, ಹಣಕಾಸು, ಕಾರ್ಯಾಚರಣೆ ಮತ್ತು ಹಸ್ತಾಂತರ (DBFOT) ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ.

    ಮಹತ್ವ:

    • ಪರಿಣಾಮಕಾರಿ ಸರಕು ಸಾಗಣೆ.
    • ಸರಕು ವರ್ಗಾವಣೆ (ಟ್ರಾನ್ಸ್‌ಶಿಪ್‌ಮೆಂಟ್‌)ಗಾಗಿ ಕೊಲಂಬೊ (ಶ್ರೀಲಂಕಾ), ಸಿಂಗಾಪುರ ಮತ್ತು ಯುಎಇಯಂತಹ ವಿದೇಶಿ ಬಂದರುಗಳ ಮೇಲಿನ ಭಾರತದ ಅವಲಂಬನೆಯನ್ನು ಇದು ಕಡಿಮೆ ಮಾಡುತ್ತದೆ.
    • ಭಾರತದ ಕಡಲ ಭದ್ರತೆಯನ್ನು ಬಲಪಡಿಸುತ್ತದೆ.

    ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS)

    ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ:

    • ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು (ISS) 2030ರಲ್ಲಿ ಕಕ್ಷೆಯಿಂದ ಕೆಳಗಿಳಿಸಲು ನಿರ್ಧರಿಸಲಾಗಿದೆ. ಇದು ಬಾಹ್ಯಾಕಾಶದಲ್ಲಿ ಮಾನವನ ಸುಮಾರು ಮೂರು ದಶಕಗಳ ನಿರಂತರ ಉಪಸ್ಥಿತಿಯ ಅಂತ್ಯವನ್ನು ಸೂಚಿಸುತ್ತದೆ.

    ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS)ದ ಬಗ್ಗೆ:

    • ಇದು ಭೂ ಮೇಲ್ಮೈಯಿಂದ 400 ಕಿ.ಮೀ ಎತ್ತರದಲ್ಲಿರುವ ‘ಭೂಮಿಗೆ ಸನಿಹದ ಕಕ್ಷೆ’ಯಲ್ಲಿ (LEO) ಸುತ್ತುತ್ತಿರುವ, ವಾಸಯೋಗ್ಯವಾದ ಮತ್ತು ವಿವಿಧ ಘಟಕಗಳ ಜೋಡಣೆಯ ಒಂದು ‘ಸೂಕ್ಷ್ಮ ಗುರುತ್ವ ಪ್ರಯೋಗಾಲಯ‘ವಾಗಿದೆ.
    • ಇದನ್ನು 1998ರಲ್ಲಿ ಉಡಾವಣೆ ಮಾಡಲಾಯಿತು ಮತ್ತು 2000ನೇ ಇಸವಿಯಿಂದ ಇಲ್ಲಿ ಮಾನವರು ನಿರಂತರವಾಗಿ ನೆಲೆಸಿದ್ದಾರೆ. ಇದು ಇತಿಹಾಸದಲ್ಲಿಯೇ ಅತಿ ದೀರ್ಘಕಾಲ ನಡೆದ ಮಾನವ ಸಹಿತ ಬಾಹ್ಯಾಕಾಶ ಯೋಜನೆಗಳಲ್ಲಿ ಒಂದಾಗಿದೆ.
    • 5 ಪ್ರಮುಖ ಬಾಹ್ಯಾಕಾಶ ಸಂಸ್ಥೆಗಳು ಸಹಭಾಗಿತ್ವದಲ್ಲಿ ನಿರ್ವಹಿಸಲಾಗುತ್ತದೆ:- ನಾಸಾ (ಅಮೆರಿಕ), ರಾಸ್‌ಕಾಸ್ಮೋಸ್ (ರಷ್ಯಾ), ಇಎಸ್‌ಎ (ಯುರೋಪ್), ಜಾಕ್ಸಾ (ಜಪಾನ್) ಮತ್ತು ಸಿಎಸ್‌ಎ (ಕೆನಡಾ).

    ಪ್ರಮುಖ ವೈಶಿಷ್ಟ್ಯಗಳು:

    • ಬಾಹ್ಯಾಕಾಶದಲ್ಲಿರುವ ಮಾನವ ನಿರ್ಮಿತ ಅತ್ಯಂತ ದೊಡ್ಡ ರಚನೆಯಾಗಿದೆ:- ಇದರ ದ್ರವ್ಯರಾಶಿ 4,00,000 ಕೆ.ಜಿ.ಗೂ ಅಧಿಕವಿದ್ದು, ಸುಮಾರು 109 ಮೀಟರ್ ಉದ್ದವಿದೆ.
    • ಹತ್ತಾರು ಕಿಲೋವ್ಯಾಟ್ ವಿದ್ಯುತ್ ಉತ್ಪಾದಿಸುವ ಸೌರ ಫಲಕಗಳ ಮೂಲಕ ಇದಕ್ಕೆ ವಿದ್ಯುತ್ ಪೂರೈಕೆಯಾಗುತ್ತದೆ.
    • ಮಹತ್ವ:- ದೀರ್ಘಕಾಲದ ಬಾಹ್ಯಾಕಾಶ ವಿಕಿರಣ ಮತ್ತು ಸೂಕ್ಷ್ಮ ಗುರುತ್ವವು ಮಾನವನ ದೇಹದ ಮೇಲೆ ಬೀರುವ ಪರಿಣಾಮಗಳನ್ನು ಅಧ್ಯಯನ ಮಾಡುವಲ್ಲಿ ISS ನಿರ್ಣಾಯಕ ಪಾತ್ರ ವಹಿಸುತ್ತದೆ. ವಿಜ್ಞಾನಿಗಳಿಗೆ ಮೂಳೆ ಸವೆತ, ಸ್ನಾಯು ಕ್ಷೀಣತೆ ಮತ್ತು ರೋಗನಿರೋಧಕ ವ್ಯವಸ್ಥೆಯಲ್ಲಿನ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ.

    ವಿಪತ್ತು ಸಂತ್ರಸ್ತರ ಗುರುತಿಸುವಿಕೆಗಾಗಿ NDMAಯ ಮೊದಲ ಮಾರ್ಗಸೂಚಿಗಳು

    ವಿಪತ್ತು ನಿರ್ವಹಣೆ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ‘ಸಾಮೂಹಿಕ ಸಾವು ಸಂಭವಿಸುವ ಘಟನೆಗಳ’ ಸಂದರ್ಭದಲ್ಲಿ ಸಂತ್ರಸ್ತರನ್ನು ಗುರುತಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು (NDMA) ದೇಶದ ಮೊಟ್ಟಮೊದಲ ‘ಪ್ರಮಾಣಿತ ಕಾರ್ಯಾಚರಣಾ ವಿಧಾನ’ವನ್ನು (SOP) ಮಾರ್ಗಸೂಚಿಗಳೊಂದಿಗೆ ಬಿಡುಗಡೆ ಮಾಡಿದೆ.

    ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA)ದ ಬಗ್ಗೆ:

    • ಮುಖ್ಯಸ್ಥರು:- ಭಾರತದ ಪ್ರಧಾನ ಮಂತ್ರಿಗಳು.
    • ಇದು ಭಾರತದಲ್ಲಿ ವಿಪತ್ತು ನಿರ್ವಹಣೆಗಾಗಿ ಇರುವ ಅತ್ಯುನ್ನತ ಸಂಸ್ಥೆಯಾಗಿದೆ.
    • ಇದನ್ನು ವಿಪತ್ತು ನಿರ್ವಹಣಾ ಕಾಯ್ದೆ, 2005ರ ಅಡಿಯಲ್ಲಿ ಸ್ಥಾಪಿಸಲಾಗಿದೆ.
    • ಉದ್ದೇಶ:- ವಿಪತ್ತು ನಿರ್ವಹಣೆಗಾಗಿ ನೀತಿಗಳು, ಯೋಜನೆಗಳು ಮತ್ತು ಮಾರ್ಗಸೂಚಿಗಳನ್ನು ರೂಪಿಸುವುದು ಹಾಗೂ ತಡೆಗಟ್ಟುವಿಕೆ, ಉಪಶಮನ, ಸನ್ನದ್ಧತೆ ಮತ್ತು ಪ್ರತಿಕ್ರಿಯೆಯ ನೀತಿಯನ್ನು ಉತ್ತೇಜಿಸುವುದು ಇದರ ಜವಾಬ್ದಾರಿಯಾಗಿದೆ.

    ಸಿಎಆರ್ ಟಿ-ಕೋಶ ಚಿಕಿತ್ಸೆ (CAR T-cell therapy)

    ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ:

    • ಐಐಟಿ ಬಾಂಬೆಯ ಸಂಶೋಧಕರು ‘ಸಿಎಆರ್ ಟಿ-ಕೋಶ’ (CAR T-cell) ಮತ್ತು ಇತರೆ ‘ಅಡಾಪ್ಟಿವ್ ಟಿ-ಕೋಶ ವರ್ಗಾವಣೆ’ (Adoptive T-cell Transfer – ACT) ಚಿಕಿತ್ಸೆಗಳಲ್ಲಿನ ನಿರ್ಣಾಯಕ ಸವಾಲೊಂದನ್ನು ಪರಿಹರಿಸಿದ್ದಾರೆ.

    ಟಿ-ಕೋಶಗಳ ಬಗ್ಗೆ:

    • ಇವು ದೇಹದ ಮುಂಚೂಣಿ ರಕ್ಷಕರಂತೆ ಕಾರ್ಯನಿರ್ವಹಿಸುವ ಬಿಳಿ ರಕ್ತಕಣಗಳಾಗಿವೆ.
    • ಇವು ಸೋಂಕುಗಳು ಅಥವಾ ಕ್ಯಾನ್ಸರ್‌ನಂತಹ ಅಸಹಜ ಕೋಶಗಳನ್ನು ಪತ್ತೆಹಚ್ಚಿ ನಾಶಪಡಿಸುತ್ತವೆ ಹಾಗೂ ಪ್ರತಿಕ್ರಿಯಿಸಲು ಇತರ ರೋಗನಿರೋಧಕ ಕೋಶಗಳನ್ನು ಸಂಯೋಜಿಸುತ್ತವೆ. ಈ ಕಾರಣದಿಂದಾಗಿ, ರೋಗನಿರೋಧಕ ಚಿಕಿತ್ಸೆಯಲ್ಲಿ ಇವು ನಿರ್ಣಾಯಕ ಪಾತ್ರ ವಹಿಸುತ್ತವೆ.

    ಸಿಎಆರ್ ಟಿ-ಕೋಶ ಚಿಕಿತ್ಸೆಯ ಬಗ್ಗೆ:

    • ಸುಧಾರಿತ ಚಿಕಿತ್ಸೆ:- ಇದು ಕ್ಯಾನ್ಸರ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಎದುರಿಸಲು ರೋಗಿಯ ಟಿ-ಕೋಶಗಳನ್ನು ಮಾರ್ಪಡಿಸುವ ಒಂದು ಸುಧಾರಿತ ಚಿಕಿತ್ಸೆಯಾಗಿದೆ.
    • ಕಾರ್ಯ ವಿಧಾನ:- 
    1. ವೈದ್ಯರು ಮೊದಲು ರೋಗಿಯ ರಕ್ತದಿಂದ ಟಿ-ಕೋಶಗಳನ್ನು ಸಂಗ್ರಹಿಸುತ್ತಾರೆ ಮತ್ತು ನಂತರ ಅವುಗಳಿಗೆ ‘ಕೈಮೆರಿಕ್ ಆಂಟಿಜೆನ್ ರಿಸೆಪ್ಟರ್‌ಗಳು’ (CARs – Chimeric Antigen Receptors) ಎಂದು ಕರೆಯಲ್ಪಡುವ ವಿಶೇಷ ಗ್ರಾಹಕಗಳನ್ನು ನೀಡುವ ವಂಶವಾಹಿಯನ್ನು ಸೇರಿಸುತ್ತಾರೆ.
    2. ಈ ಗ್ರಾಹಕಗಳು ಜಿಪಿಎಸ್ (GPS) ನಂತೆ ಕಾರ್ಯನಿರ್ವಹಿಸುತ್ತವೆ; ಅಂದರೆ, ಕ್ಯಾನ್ಸರ್ ಕೋಶಗಳನ್ನು ಪತ್ತೆಹಚ್ಚಲು ಮತ್ತು ಗುರಿಯಾಗಿಸಲು ಇವು ಟಿ-ಕೋಶಗಳಿಗೆ ನಿರ್ದೇಶನ ನೀಡುತ್ತವೆ.
    3. ಹೀಗೆ ತಾಂತ್ರಿಕವಾಗಿ ಮಾರ್ಪಡಿಸಿದ ನಂತರ, ಈ ಟಿ-ಕೋಶಗಳನ್ನು ಪ್ರಯೋಗಾಲಯದಲ್ಲಿ ವಿಸ್ತರಿಸಲಾಗುತ್ತದೆ (ಸಂಖ್ಯಾಭಿವೃದ್ಧಿ ಮಾಡಲಾಗುತ್ತದೆ) ಮತ್ತು ನಂತರ ರೋಗಿಯ ದೇಹಕ್ಕೆ ಮರು-ಸೇರ್ಪಡೆ ಮಾಡಲಾಗುತ್ತದೆ.

    ನೆಕ್ಸ್‌ಕಾರ್19 (NexCAR 19):- 

    • ಎಂಬುದು ‘ಇಮ್ಯುನೊ ಎಸಿಟಿ’ (Immune ACT) ಸಂಸ್ಥೆ ಅಭಿವೃದ್ಧಿಪಡಿಸಿದ ವಿಶ್ವದ ಮೊದಲ ಹ್ಯೂಮನೈಸ್ಡ್  ಸಿಎಆರ್-ಟಿ ಚಿಕಿತ್ಸೆಯಾಗಿದೆ.

    ಪ್ರಯೋಜನಗಳು:

    • ನಿಖರ ಗುರಿ:- ಸಿಎಆರ್-ಟಿ ಕೋಶ ಚಿಕಿತ್ಸೆಯು ನಿರ್ದಿಷ್ಟವಾಗಿ ಕ್ಯಾನ್ಸರ್ ಕೋಶಗಳ ಮೇಲೆ ದಾಳಿ ಮಾಡುತ್ತದೆ ಮತ್ತು ಆರೋಗ್ಯಕರ ಕೋಶಗಳಿಗೆ ಹಾನಿಯಾಗದಂತೆ ನೋಡಿಕೊಳ್ಳುತ್ತದೆ. ಇದರಿಂದಾಗಿ ‘ಕೀಮೋಥೆರಪಿ’ಗೆ (ರಾಸಾಯನಿಕ ಚಿಕಿತ್ಸೆ) ಹೋಲಿಸಿದರೆ ಅಡ್ಡಪರಿಣಾಮಗಳು ಕಡಿಮೆಯಾಗಿರುತ್ತವೆ.
    • ವೈಯಕ್ತೀಕರಿಸಿದ ಚಿಕಿತ್ಸೆ:- ಇದು ರೋಗಿಯ ಸ್ವಂತ ಟಿ-ಕೋಶಗಳನ್ನು ಬಳಸುತ್ತದೆ ಮತ್ತು ಅವರ ವಿಶಿಷ್ಟ ಕ್ಯಾನ್ಸರ್ ಅನ್ನು ಗುರಿಯಾಗಿಸಲು ವಿನ್ಯಾಸಗೊಳಿಸಲಾಗಿರುವುದರಿಂದ, ಚಿಕಿತ್ಸೆಯ ಪರಿಣಾಮಕಾರಿತ್ವ ಹೆಚ್ಚುತ್ತದೆ.
    • ದೀರ್ಘಕಾಲೀನ ಪರಿಣಾಮಗಳು:- ಮಾರ್ಪಡಿಸಿದ ಟಿ-ಕೋಶಗಳು ದೇಹದಲ್ಲಿ ಉಳಿಯಬಲ್ಲವು. ಈ ಮೂಲಕ ಕ್ಯಾನ್ಸರ್ ಮರುಕಳಿಸದಂತೆ ದೀರ್ಘಕಾಲದ ರಕ್ಷಣೆ ಒದಗಿಸುತ್ತವೆ.
    • ಕಡಿಮೆ ಆಸ್ಪತ್ರೆ ವಾಸ ಮತ್ತು ವೆಚ್ಚಗಳು:- ಆಸ್ಪತ್ರೆಯಲ್ಲಿ ಉಳಿಯುವ ಅವಧಿ ಕಡಿಮೆ ಮತ್ತು ಕಡಿಮೆ ಬೆಂಬಲ ಚಿಕಿತ್ಸೆ ಅಗತ್ಯವಿರುವುದರಿಂದ, ಇದು ಸಂಭಾವ್ಯ ವೆಚ್ಚದ  ಉಳಿತಾಯಕ್ಕೆ ಕಾರಣವಾಗುತ್ತದೆ.
    • ಕ್ಯಾನ್ಸರ್ ಚಿಕಿತ್ಸೆಯಲ್ಲಿನ ಪ್ರಗತಿ:- ಇದು ರೋಗನಿರೋಧಕ ಚಿಕಿತ್ಸೆಯಲ್ಲಿ ಹೊಸ ಮಾರ್ಗಗಳನ್ನು ತೆರೆಯುತ್ತದೆ ಹಾಗೂ ಚಿಕಿತ್ಸಾ ಆಯ್ಕೆಗಳು ಮತ್ತು ಸಂಶೋಧನಾ ಸಾಧ್ಯತೆಗಳನ್ನು ವಿಸ್ತರಿಸುತ್ತದೆ.
    • ತಾಂತ್ರಿಕ ವಿಕಸನ:- ಸಿಎಆರ್ ರಚನೆಗಳ ನಿರಂತರ ಅಭಿವೃದ್ಧಿಯು ವಿವಿಧ ರೀತಿಯ ಕ್ಯಾನ್ಸರ್‌ಗಳನ್ನು ಗುರಿಯಾಗಿಸಲು ಮತ್ತು ಸಂಯೋಜಿತ ಚಿಕಿತ್ಸೆಗಳಿಗೆ ಅವಕಾಶ ನೀಡುತ್ತದೆ.
    • ಕೈಗೆಟುಕುವ ದರ:- ಭಾರತದಲ್ಲಿ ನೆಕ್ಸ್‌ಕಾರ್19 (NexCAR 19) ನಂತಹ ಸ್ವದೇಶಿ ಚಿಕಿತ್ಸೆಗಳು ಸಿಎಆರ್-ಟಿ ಚಿಕಿತ್ಸೆಯನ್ನು ಹೆಚ್ಚು ಲಭ್ಯವಾಗುವಂತೆ ಮತ್ತು ಕಡಿಮೆ ವೆಚ್ಚದಾಯಕವಾಗಿಸುತ್ತವೆ.

    ಅಗ್ನಿ-3 ಮಧ್ಯಮ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ

    ರಕ್ಷಣೆ

    ಇದೀಗ ಸುದ್ದಿಯಲ್ಲಿದೆ:

    • ಒಡಿಶಾದ ಚಂಡಿಪುರದಿಂದ 3,000 ಕಿ.ಮೀ.ಗೂ ಅಧಿಕ ದಾಳಿ ವ್ಯಾಪ್ತಿಯನ್ನು ಹೊಂದಿರುವ, ಅಣ್ವಸ್ತ್ರ ಸಾಮರ್ಥ್ಯದ ‘ಅಗ್ನಿ-3 ಬ್ಯಾಲಿಸ್ಟಿಕ್ ಕ್ಷಿಪಣಿ’ಯನ್ನು ಭಾರತವು ಯಶಸ್ವಿಯಾಗಿ ಪರೀಕ್ಷಿಸಿದೆ.

    ಅಗ್ನಿ-3 ಬ್ಯಾಲಿಸ್ಟಿಕ್ ಕ್ಷಿಪಣಿಯ ಬಗ್ಗೆ:

    • ಅಭಿವೃದ್ಧಿಪಡಿಸಿದವರು:- ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO).
    • ದಾಳಿ ವ್ಯಾಪ್ತಿ:- 3,000 ಕಿ.ಮೀ.
    • ವಿಶಿಷ್ಟತೆ:- ಇದು ಸಾಂಪ್ರದಾಯಿಕ ಮತ್ತು ಅಣ್ವಸ್ತ್ರ ಸಿಡಿತಲೆಗಳೆರಡನ್ನೂ ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.

    ಅಗ್ನಿ ಕ್ಷಿಪಣಿ ಸರಣಿಯ ಬಗ್ಗೆ:

    • ಇದು ಡಿಆರ್‌ಡಿಒ (DRDO) ಅಭಿವೃದ್ಧಿಪಡಿಸಿದ ಸ್ವದೇಶಿ ನಿರ್ಮಿತ ದೀರ್ಘ-ಶ್ರೇಣಿಯ ಕ್ಷಿಪಣಿ ವ್ಯವಸ್ಥೆಯಾಗಿದೆ.
    • ಅಗ್ನಿ-I ರಿಂದ ಅಗ್ನಿ-IV:- 1990ರ ದಶಕದಲ್ಲಿ ಅಭಿವೃದ್ಧಿಪಡಿಸಲಾಯಿತು ಮತ್ತು 2000ರ ದಶಕದ ಮಧ್ಯಭಾಗದಲ್ಲಿ ನಿಯೋಜಿಸಲಾಯಿತು.
    • ವ್ಯಾಪ್ತಿ:- 700–3,500 ಕಿ.ಮೀ. 
    • ಸಿಡಿತಲೆ (ಪೇಲೋಡ್):- 12–40 kt, 
    • ಅಗ್ನಿ-V:-
    • 3 ಹಂತದ ಘನ ಇಂಧನ ವ್ಯವಸ್ಥೆಯನ್ನು ಹೊಂದಿದೆ.
    • ‘ಎಂಐಆರ್‌ವಿ’ (MIRV – ಒಂದೇ ಕ್ಷಿಪಣಿಯಲ್ಲಿ ಹಲವು ಸಿಡಿತಲೆಗಳನ್ನು ಅಳವಡಿಸಿ ಬೇರೆ ಬೇರೆ ಗುರಿಗಳನ್ನು ತಲುಪುವ ತಂತ್ರಜ್ಞಾನ) ಸಾಮರ್ಥ್ಯವನ್ನು ಒಳಗೊಂಡಿದೆ. 
    • ದಾಳಿ ವ್ಯಾಪ್ತಿ:- 5,000 ಕಿ.ಮೀ.
    • 5,500 ಕಿ.ಮೀ.ಗೂ ಅಧಿಕ ದೂರ ಕ್ರಮಿಸಬಲ್ಲ ಸಂಭಾವ್ಯ ಖಂಡಾಂತರ ಕ್ಷಿಪಣಿಯಾಗಿದೆ.
    • ಅಗ್ನಿ-ಪಿ (Agni-P):- 
    • 2 ಹಂತದ ಘನ ಇಂಧನ ವ್ಯವಸ್ಥೆಯನ್ನು ಹೊಂದಿದ್ದು, 11,000 ಕೆ.ಜಿ. ತೂಕವನ್ನು ಹೊಂದಿದೆ. 
    • ದಾಳಿ ವ್ಯಾಪ್ತಿ:- 1,000 ದಿಂದ 2,000 ಕಿ.ಮೀ. 
    • ಇದು ಸುಧಾರಿತ ನೋದನ ಮತ್ತು ಪಥ ನಿರ್ದೇಶನ (Propulsion and Navigation) ವ್ಯವಸ್ಥೆಯನ್ನು ಒಳಗೊಂಡಿದೆ.
    • ಇದು ತೀವ್ರ ಸ್ಫೋಟಕ, ಥರ್ಮೋಬ್ಯಾರಿಕ್ ಅಥವಾ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.
  • ನಮ್ಮ 112 ಸಹಾಯವಾಣಿ

    ನಮ್ಮ 112 ಸಹಾಯವಾಣಿ

    ಇದೀಗ ಸುದ್ದಿಯಲ್ಲಿದೆ:

    • ಬೆಂಗಳೂರಿನ ತುರ್ತು ಸ್ಪಂದನಾ ವ್ಯವಸ್ಥೆಯಾದ ‘ನಮ್ಮ 112’ರ ಬಳಕೆಯಲ್ಲಿ ಭಾರಿ ಏರಿಕೆ ಹಾಗೂ ತಾಂತ್ರಿಕ ಸುಧಾರಣೆಗಳು ಕಂಡುಬಂದಿದ್ದು, ಇದರ ಜೊತೆಗೆ ಅಪರಾಧ ಪ್ರಕರಣಗಳಲ್ಲಿ 9% ರಷ್ಟು ಇಳಿಕೆಯಾಗಿದೆ ಎಂದು ವರದಿಯಾಗಿದೆ.

    ‘ನಮ್ಮ 112’ ಸಹಾಯವಾಣಿ ವ್ಯವಸ್ಥೆಯ ಬಗ್ಗೆ:

    • ಇದು ಬೆಂಗಳೂರಿನ ಏಕೀಕೃತ ತುರ್ತು ಸಹಾಯವಾಣಿಯಾಗಿದ್ದು, ಪೊಲೀಸ್, ಅಗ್ನಿಶಾಮಕ ಮತ್ತು ಆಂಬ್ಯುಲೆನ್ಸ್ ಸೇವೆಗಳನ್ನು ಒಂದೇ ಸಂಪರ್ಕ ಕೇಂದ್ರದಡಿ ಸಂಯೋಜಿಸುತ್ತದೆ.
    • ನಿರ್ವಹಣೆ:- ‘ಬೆಂಗಳೂರು ನಗರ ಪೊಲೀಸ್’ ಇಲಾಖೆ.
    • ಪ್ರಮುಖ ಉದ್ದೇಶ:- ಜೀವನ್ಮರಣದ ಹೋರಾಟದ ನಿರ್ಣಾಯಕ ‘ಸುವರ್ಣ ಅವಧಿ’ಯಲ್ಲಿ (golden hours) ತ್ವರಿತ ನೆರವು ಒದಗಿಸುವುದು.

    ‘ನಮ್ಮ 112’ ಸಹಾಯವಾಣಿಯ ಪ್ರಮುಖ ಸೇವೆಗಳು ಮತ್ತು ವೈಶಿಷ್ಟ್ಯಗಳು:

    • ಏಕೀಕೃತ ಬೆಂಬಲ:- ಇದು ಸಾಂಪ್ರದಾಯಿಕ ಸಹಾಯವಾಣಿಗಳಾದ 100 (ಪೊಲೀಸ್), 101 (ಅಗ್ನಿಶಾಮಕ) ಮತ್ತು 108 (ಆಂಬ್ಯುಲೆನ್ಸ್) ಸಂಖ್ಯೆಗಳನ್ನು ಬದಲಾಯಿಸಿ ಒಂದೇ ಏಕೀಕೃತ ಸಂಖ್ಯೆಯಡಿ ಕಾರ್ಯನಿರ್ವಹಿಸುತ್ತದೆ.
    • ಮಾನಸಿಕ ಆರೋಗ್ಯ ಬೆಂಬಲ:- ಮನೋವೈದ್ಯಕೀಯ ತುರ್ತುಸ್ಥಿತಿಗಳನ್ನು ‘ನಮ್ಮ 112’ ವ್ಯವಸ್ಥೆಯ ಮೂಲಕ ನೇರವಾಗಿ ನಿಭಾಯಿಸಲು, ಇತ್ತೀಚೆಗೆ ಇದನ್ನು ‘ಟೆಲಿ ಮಾನಸ್’ (14416) ಜೊತೆಗೆ ಸಂಯೋಜಿಸಲಾಗಿದೆ.
    • ತ್ವರಿತ ಸ್ಪಂದನೆ:- ನಗರ ಪ್ರದೇಶಗಳಲ್ಲಿ ‘ಹೊಯ್ಸಳ’ ಗಸ್ತು ತಂಡಗಳು ಸಾಮಾನ್ಯವಾಗಿ 5 ರಿಂದ 10 ನಿಮಿಷಗಳಲ್ಲಿ ದೂರುದಾರರನ್ನು ತಲುಪುವ ಮೂಲಕ ಕ್ಷಿಪ್ರ ಕಾರ್ಯಾಚರಣೆ ನಡೆಸುತ್ತವೆ.
    • ಗೌಪ್ಯತೆ ಮತ್ತು ಅನಾಮಧೇಯತೆ:- ಕರೆ ಮಾಡುವವರು ಮಾತನಾಡುವಾಗ “ದಯವಿಟ್ಟು ನನ್ನ ಮಾಹಿತಿಯನ್ನು ಅನಾಮಧೇಯವಾಗಿಡಿ” ಎಂದು ವಿನಂತಿಸುವ ಮೂಲಕ ತಮ್ಮ ಗುರುತನ್ನು ಗೌಪ್ಯವಾಗಿಡಬಹುದು.
    • ವಾಟ್ಸ್ಆ್ಯಪ್ ಸಂಯೋಜನೆ:- ನಾಗರಿಕರು 9480801000 ಸಂಖ್ಯೆಗೆ ವಾಟ್ಸ್ಆ್ಯಪ್ ಮಾಡುವ ಮೂಲಕವೂ ಈ ಸಹಾಯವಾಣಿಯನ್ನು ಸಂಪರ್ಕಿಸಬಹುದಾಗಿದೆ.
    • ಬಹುಭಾಷಾ ಬೆಂಬಲ:- ನಗರದ ವೈವಿಧ್ಯಮಯ ನಿವಾಸಿಗಳಿಗೆ ತಮ್ಮ ಆದ್ಯತೆಯ ಭಾಷೆಯಲ್ಲಿ ಸಂವಹನ ನಡೆಸಲು ಅನುಕೂಲವಾಗುವಂತೆ, ಈ ವ್ಯವಸ್ಥೆಯನ್ನು ಬಹುಭಾಷಾ ವೈಶಿಷ್ಟ್ಯಗಳೊಂದಿಗೆ ಮೇಲ್ದರ್ಜೆಗೇರಿಸಲಾಗುತ್ತಿದೆ.
  • ನಮಸ್ತೆ (NAMASTE) ಯೋಜನೆ | ಉರ್ಮಿಯಾ ಸರೋವರ (Lake Urmia) | ರಫಾ ಗಡಿ (Rafah border) | ಫೋರ್ಜ್ (FORGE) ಉಪಕ್ರಮ | ಸಾರಸ್ ಕೊಕ್ಕರೆಗಳು (Sarus cranes) | ‘ಖಂಜರ್’ ಸಮರಾಭ್ಯಾಸ (Exercise KHANJAR)

    ನಮಸ್ತೆ (NAMASTE) ಯೋಜನೆ

    ಇದೀಗ ಸುದ್ದಿಯಲ್ಲಿದೆ: 

    • ಕೇಂದ್ರ ಸರ್ಕಾರವು ಇದೇ ಮೊದಲ ಬಾರಿಗೆ NAMASTE (‘ನಮಸ್ತೆ’- ಯಾಂತ್ರೀಕೃತ ನೈರ್ಮಲ್ಯ ಪರಿಸರ ವ್ಯವಸ್ಥೆಗಾಗಿ ರಾಷ್ಟ್ರೀಯ ಕ್ರಿಯಾಯೋಜನೆ) ಯೋಜನೆಯ ಅಡಿಯಲ್ಲಿ ತ್ಯಾಜ್ಯ ಸಂಗ್ರಹಿಸುವವರ ರಾಷ್ಟ್ರಮಟ್ಟದ ಗಣತಿ ದತ್ತಾಂಶವನ್ನು ಬಿಡುಗಡೆ ಮಾಡಿದೆ.

    ನಮಸ್ತೆ (NAMASTE) ಯೋಜನೆಯ ಬಗ್ಗೆ:


    • NAMASTE ಸಂಕ್ಷಿಪ್ತ ರೂಪ:- ನ್ಯಾಷನಲ್ ಆಕ್ಷನ್ ಫಾರ್ ಮೆಕ್ಯಾನೈಸ್ಡ್ ಸ್ಯಾನಿಟೇಷನ್ ಏಕೋಸಿಸ್ಟಮ್ (ಯಾಂತ್ರೀಕೃತ ನೈರ್ಮಲ್ಯ ಪರಿಸರ ವ್ಯವಸ್ಥೆಗಾಗಿ ರಾಷ್ಟ್ರೀಯ ಕ್ರಿಯಾಯೋಜನೆ).
    • ಪ್ರಾರಂಭ:- ಜುಲೈ 2023.
    • ಹಣಕಾಸು:- ಕೇಂದ್ರ ವಲಯದ ಯೋಜನೆಯಾಗಿದೆ.
    • ಅನುಷ್ಠಾನ ಸಚಿವಾಲಯ:- ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಹಾಗೂ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ.
    • ಉದ್ದೇಶಗಳು:-
      • ನೈರ್ಮಲ್ಯ ಕಾರ್ಯಗಳಲ್ಲಿ ಶೂನ್ಯ ಮರಣ ಪ್ರಮಾಣವನ್ನು ಖಚಿತಪಡಿಸುವುದು.
      • ಎಲ್ಲಾ ನೈರ್ಮಲ್ಯ ಕಾರ್ಯಾಚರಣೆಗಳನ್ನು ಕೌಶಲ್ಯಯುತ ಕಾರ್ಮಿಕರಿಂದಲೇ ನಿರ್ವಹಿಸುವುದು.
      • ಮಾನವ ತ್ಯಾಜ್ಯದೊಂದಿಗೆ ಯಾರಿಗೂ ನೇರ ಸಂಪರ್ಕ ಇರದಂತೆ ನೋಡುವುದು.
      • ಮಲಹೊರುವ ಪದ್ಧತಿಯಲ್ಲಿ ತೊಡಗಿರುವವರಿಗೆ  ಪುನರ್ವಸತಿ ಕಲ್ಪಿಸುವುದು.
    • ಮಹತ್ವ: ಇದು ಸುಸ್ಥಿರ ಅಭಿವೃದ್ಧಿ ಗುರಿ 6 (SDG 6 – ಶುದ್ಧ ನೀರು ಮತ್ತು ನೈರ್ಮಲ್ಯ) ರೊಂದಿಗೆ ಅನುಗುಣವಾಗಿದೆ ಮತ್ತು ನೈರ್ಮಲ್ಯ ಕಾರ್ಮಿಕರ ಘನತೆ ಹಾಗೂ ಸುರಕ್ಷತೆಯನ್ನು ಉತ್ತೇಜಿಸುತ್ತದೆ.

    ಪ್ರಮುಖ ಉಪಕ್ರಮಗಳು:

    • ವಿವರ ಸಂಗ್ರಹ:- ಒಳಚರಂಡಿ ಮತ್ತು ಮಲತ್ಯಾಜ್ಯ ತೊಟ್ಟಿ ಕಾರ್ಮಿಕರ (SSWs) ಡಿಜಿಟಲ್ ವಿವರಗಳನ್ನು ಸಂಗ್ರಹಿಸುವುದು..
    • ಸುರಕ್ಷತೆ:- ಕಾರ್ಮಿಕರಿಗೆ ವೈಯಕ್ತಿಕ ರಕ್ಷಣಾ ಕವಚಗಳು (ಪಿಪಿಇ ಕಿಟ್‌ಗಳು), ಸುರಕ್ಷತಾ ಸಾಧನಗಳು ಮತ್ತು ತರಬೇತಿಯನ್ನು ಒದಗಿಸುವುದು.
    • ಸಬಲೀಕರಣ:- ನೈರ್ಮಲ್ಯ ಯಂತ್ರೋಪಕರಣಗಳನ್ನು ಖರೀದಿಸಲು ಬಂಡವಾಳ ಸಹಾಯಧನ ನೀಡುವ ಮೂಲಕ ಅವರನ್ನು “ನೈರ್ಮಲ್ಯ ಉದ್ಯಮಿಗಳನ್ನಾಗಿ” ಮಾಡುವುದು.
    • ಆರೋಗ್ಯ:- ವೃತ್ತಿಪರ ಸುರಕ್ಷತಾ ತರಬೇತಿ ಮತ್ತು ಆರೋಗ್ಯ ವಿಮೆಯನ್ನು ಒದಗಿಸುವುದು.

    ಉರ್ಮಿಯಾ ಸರೋವರ (Lake Urmia)

    ಸುದ್ದಿಯಲ್ಲಿರುವ ಸ್ಥಳಗಳು

    ಇದೀಗ ಸುದ್ದಿಯಲ್ಲಿದೆ: 

    • ದಶಕಗಳಲ್ಲೇ ಅತ್ಯಂತ ಭೀಕರ ಬರಗಾಲವನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಇರಾನ್ ಅಧಿಕಾರಿಗಳು ಉರ್ಮಿಯಾ ಸರೋವರದ ಜಲಾನಯನ ಪ್ರದೇಶದಲ್ಲಿ ಕೃತಕ ಮಳೆಯನ್ನು ಉಂಟುಮಾಡಲು ‘ಮೋಡ ಬಿತ್ತನೆ’ ತಂತ್ರಜ್ಞಾನದ ಮೊರೆಹೋಗಿದ್ದಾರೆ.

    ‘ಉರ್ಮಿಯಾ ಸರೋವರ’ ದ ಬಗ್ಗೆ:

    • ಇದು ವಾಯುವ್ಯ ಇರಾನಿನ ಅಜರ್‌ಬೈಜಾನ್ ಪ್ರದೇಶದಲ್ಲಿದೆ ಮತ್ತು ಪೂರ್ವ ಅಜರ್‌ಬೈಜಾನ್ ಹಾಗೂ ಪಶ್ಚಿಮ ಅಜರ್‌ಬೈಜಾನ್ ಪ್ರಾಂತ್ಯಗಳ ನಡುವೆ ನೆಲೆಗೊಂಡಿದೆ.
    • ಅಧಿಕ ಬಾಷ್ಪೀಕರಣದ ದರವು ಇದನ್ನು ತೀವ್ರವಾಗಿ ಲವಣಯುಕ್ತವಾಗಿಸಿವೆ.
    • ವೈಶಿಷ್ಟ್ಯ:- ಇದು ಮಧ್ಯಪ್ರಾಚ್ಯದ ಅತಿದೊಡ್ಡ ಸರೋವರವಾಗಿದೆ.
    • ರಾಮ್‌ಸರ್ ಜೌಗು ಪ್ರದೇಶ ಮತ್ತು ಯುನೆಸ್ಕೋ ಜೀವಗೋಳ ಮೀಸಲು ತಾಣವಾಗಿ ಗುರುತಿಸಲ್ಪಟ್ಟಿರುವ ಈ ಸರೋವರವು, 1990 ರ ದಶಕದಿಂದೀಚೆಗೆ ಗಣನೀಯವಾಗಿ ಕ್ಷೀಣಿಸಿದೆ.

    ರಫಾ ಗಡಿ (Rafah border)

    ಸುದ್ದಿಯಲ್ಲಿರುವ ಸ್ಥಳಗಳು

    ಇದೀಗ ಸುದ್ದಿಯಲ್ಲಿದೆ:

      • ಅನೇಕ ತಿಂಗಳುಗಳ ಕಾಲ ಮುಚ್ಚಲ್ಪಟ್ಟಿದ್ದ ಗಾಜಾ ಮತ್ತು ಈಜಿಪ್ಟ್ ನಡುವಿನ ರಫಾ ಗಡಿ ದ್ವಾರ (ಕ್ರಾಸಿಂಗ್) ವನ್ನು, ಸೀಮಿತ ನಾಗರಿಕ ಸಂಚಾರಕ್ಕಾಗಿ ಇಸ್ರೇಲ್ ಮರುತೆರೆದಿದೆ.
    • ಮೇ 2024 ರಲ್ಲಿ ಗಾಜಾದ ಕಡೆಯ ಭಾಗವನ್ನು ಇಸ್ರೇಲ್ ಪಡೆಗಳು ವಶಪಡಿಸಿಕೊಂಡ ನಂತರ, ಈ ಗಡಿ ದ್ವಾರವು ಬಹುತೇಕ ಮುಚ್ಚಲ್ಪಟ್ಟಿತ್ತು.

    ಗಾಜಾಗೆ ರಫಾ ಗಡಿ ಏಕೆ ಮುಖ್ಯವಾಗಿದೆ?

    • ಸ್ಥಾನ:- ರಫಾ ಗಡಿಯು ಗಾಜಾ-ಈಜಿಪ್ಟ್ ಗಡಿಯಲ್ಲಿದೆ; ಇದು 1979 ರ ಈಜಿಪ್ಟ್-ಇಸ್ರೇಲ್ ಶಾಂತಿ ಒಪ್ಪಂದದ ಮೂಲಕ ಮಾನ್ಯತೆ ಪಡೆದಿದೆ.
    • ಮಹತ್ವ:- ರಫಾ ಗಡಿ ದ್ವಾರ ಅಥವಾ ರಫಾ ಗಡಿ ದಾಟುವ ತಾಣವು, ಈಜಿಪ್ಟ್ ಮತ್ತು ಗಾಜಾ ಪಟ್ಟಿಯ ನಡುವಿನ ಏಕೈಕ ಸಂಪರ್ಕ ದ್ವಾರವಾಗಿದೆ.

    ಫೋರ್ಜ್ (FORGE) ಉಪಕ್ರಮ

    ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ: 

    • ವಾಷಿಂಗ್ಟನ್ ಡಿ.ಸಿ.ಯಲ್ಲಿ ಅಮೆರಿಕ ಆಯೋಜಿಸಿದ್ದ ಮೊದಲ ‘ನಿರ್ಣಾಯಕ ಖನಿಜಗಳ ಸಚಿವ ಮಟ್ಟದ ಸಭೆ’ಯಲ್ಲಿ, ಭಾರತವು ‘ಫೋರ್ಜ್’ (FORGE) ಉಪಕ್ರಮಕ್ಕೆ ಬೆಂಬಲ ವ್ಯಕ್ತಪಡಿಸಿದೆ.

    ಫೋರ್ಜ್ (FORGE) ಉಪಕ್ರಮದ ಬಗ್ಗೆ:

    • ಬಹುಪಕ್ಷೀಯ ಅಂತರರಾಷ್ಟ್ರೀಯ ಸಹಕಾರ ಚೌಕಟ್ಟಾಗಿದೆ:- ಸಮಾನ ಮನಸ್ಕ ದೇಶಗಳನ್ನು ಒಗ್ಗೂಡಿಸುವ ಮೂಲಕ ಜಾಗತಿಕ ‘ನಿರ್ಣಾಯಕ ಖನಿಜ ಪೂರೈಕೆ ಸರಪಳಿ’ಯ ಅಪಾಯಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.
    • ಇದನ್ನು ‘ಖನಿಜ ಭದ್ರತಾ ಪಾಲುದಾರಿಕೆ’ಯ (MSP) ಮುಂದುವರಿದ ಉಪಕ್ರಮವಾಗಿ ರೂಪಿಸಲಾಗಿದೆ.
    • ಮಹತ್ವ:- ಕೆಲವೇ ಪ್ರಬಲ ಪೂರೈಕೆದಾರರ ಮೇಲಿನ ಅತಿಯಾದ ಅವಲಂಬನೆಯನ್ನು ತಗ್ಗಿಸುವುದು ಮತ್ತು ವಿಶ್ವಾಸಾರ್ಹ, ಪಾರದರ್ಶಕ ಹಾಗೂ ಸ್ಥಿತಿಸ್ಥಾಪಕತ್ವವುಳ್ಳ ನಿರ್ಣಾಯಕ ಖನಿಜ ಪರಿಸರ ವ್ಯವಸ್ಥೆಗಳನ್ನು ನಿರ್ಮಿಸುವುದು ಇದರ ಉದ್ದೇಶವಾಗಿದೆ.

    ಸಾರಸ್ ಕೊಕ್ಕರೆಗಳು (Sarus cranes)

    ಪರಿಸರ

    ಇದೀಗ ಸುದ್ದಿಯಲ್ಲಿದೆ: 

    • ಸರ್ಕಾರದ ಗಣತಿಯ ಪ್ರಕಾರ, ಉತ್ತರ ಪ್ರದೇಶದಲ್ಲಿ ಸಾರಸ್ ಕೊಕ್ಕರೆಗಳ ಸಂಖ್ಯೆಯು ಒಂದು ವರ್ಷದಲ್ಲಿ 634 ಅಥವಾ 3.1% ರಷ್ಟು ಏರಿಕೆಯಾಗಿದೆ.

    ‘ಸಾರಸ್ ಕೊಕ್ಕರೆ’ಯ ಬಗ್ಗೆ:

    • ವಿಶ್ವದ ಅತಿ ಎತ್ತರದ ಹಾರುವ ಪಕ್ಷಿಯಾಗಿದೆ:- 152-156 ಸೆಂ.ಮೀ. ಎತ್ತರ ಮತ್ತು 240 ಸೆಂ.ಮೀ. ರೆಕ್ಕೆಗಳ ವಿಸ್ತಾರವನ್ನು ಹೊಂದಿದೆ.
    • ಸಂಘಜೀವಿ ಪಕ್ಷಿಯಾಗಿದೆ:- ಹೆಚ್ಚಾಗಿ ಜೋಡಿಗಳಲ್ಲಿ ಅಥವಾ ಮೂರು-ನಾಲ್ಕು ಪಕ್ಷಿಗಳ ಸಣ್ಣ ಗುಂಪುಗಳಲ್ಲಿ ಕಂಡುಬರುತ್ತದೆ.
    • ಸರ್ವಭಕ್ಷಕ ಪಕ್ಷಿಯಾಗಿದೆ:- ಮೀನು ಮತ್ತು ಕೀಟಗಳು ಹಾಗೂ ಬೇರುಗಳು ಮತ್ತು ಸಸ್ಯಗಳನ್ನು ಆಹಾರವಾಗಿ ಸೇವಿಸುತ್ತದೆ.
    • ಜೀವನಪರ್ಯಂತ ಒಂದೇ ಸಂಗಾತಿಯೊಂದಿಗೆ ಬೆರೆಯುವುದಕ್ಕೆ ಹೆಸರುವಾಸಿಯಾಗಿದೆ:- ಇದರ ಸಂತಾನೋತ್ಪತ್ತಿ ಋತುವು ಮುಂಗಾರು ಮಳೆಯ ಧಾರಾಕಾರ ಅವಧಿಯೊಂದಿಗೆ ಹೊಂದಿಕೆಯಾಗುತ್ತದೆ.
    • ಆವಾಸಸ್ಥಾನ:- ಸಂರಕ್ಷಿತ ಪ್ರದೇಶಗಳ ಹೊರಭಾಗದಲ್ಲಿದ್ದು, ಇವು ಕಡಿಮೆ ಆಳದ ನೀರಿರುವ ನೈಸರ್ಗಿಕ ಜೌಗು ಪ್ರದೇಶಗಳು, ಕೆಸರುಮಯ ಮತ್ತು ಪಾಳು ಬಿದ್ದ ಪ್ರದೇಶಗಳು ಹಾಗೂ ಕೃಷಿ ಭೂಮಿಗಳಲ್ಲಿ ಕಂಡುಬರುತ್ತವೆ.
    • ಹಂಚಿಕೆ:- ಸಾರಸ್ ಕೊಕ್ಕರೆಯು 3 ಪ್ರತ್ಯೇಕ ನೆಲೆಗಳನ್ನು ಹೊಂದಿದೆ. ಅವುಗಳೆಂದರೆ, ಭಾರತೀಯ ಉಪಖಂಡ, ಆಗ್ನೇಯ ಏಷ್ಯಾ ಮತ್ತು ಉತ್ತರ ಆಸ್ಟ್ರೇಲಿಯಾ. 
    • ಭಾರತೀಯ ಉಪಖಂಡದಲ್ಲಿ, ಇದು ಉತ್ತರ ಮತ್ತು ಮಧ್ಯ ಭಾರತ, ನೇಪಾಳದ ತೆರೈ ಪ್ರದೇಶ ಮತ್ತು ಪಾಕಿಸ್ತಾನದಲ್ಲಿ ಕಂಡುಬರುತ್ತದೆ.
    • ಇದು ಒಂದು ಕಾಲದಲ್ಲಿ ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಪಶ್ಚಿಮ ಬಂಗಾಳ, ಗುಜರಾತ್, ಮಧ್ಯಪ್ರದೇಶ ಮತ್ತು ಅಸ್ಸಾಂನ ಭತ್ತದ ಗದ್ದೆಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ಪಕ್ಷಿಯಾಗಿತ್ತು.
    • ಆದರೆ ಪ್ರಸ್ತುತ ಇದು ಮುಖ್ಯವಾಗಿ ಉತ್ತರ ಪ್ರದೇಶದಲ್ಲಿ ಮಾತ್ರ ಕೇಂದ್ರೀಕೃತವಾಗಿದೆ.
    • ಪರಿಸರ ಸಮತೋಲನ:- ಹಾನಿಕಾರಕ ಕೀಟಗಳ ಸಂಖ್ಯೆಯನ್ನು ನಿಯಂತ್ರಿಸುವ ಮೂಲಕ ಇವು ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
    • ಸಂರಕ್ಷಣಾ ಸ್ಥಾನ:-
    • ವನ್ಯಜೀವಿ (ಸಂರಕ್ಷಣಾ) ಕಾಯ್ದೆ, 1972 – ಅನುಸೂಚಿ IV
    • IUCN ಕೆಂಪು ಪಟ್ಟಿಯಲ್ಲಿ – ‘ದುರ್ಬಲ’ (VU)

    ‘ಖಂಜರ್’ ಸಮರಾಭ್ಯಾಸ (Exercise KHANJAR)

    ರಕ್ಷಣೆ

    ಇದೀಗ ಸುದ್ದಿಯಲ್ಲಿದೆ: 

    • ಅಸ್ಸಾಂನ ಸೋನಿತ್‌ಪುರ ಜಿಲ್ಲೆಯಲ್ಲಿ ಭಾರತ ಮತ್ತು ಕಿರ್ಗಿಸ್ತಾನ ನಡುವಿನ 13ನೇ ಆವೃತ್ತಿಯ ಜಂಟಿ ಸೇನಾ ಸಮರಾಭ್ಯಾಸ ‘ಖಂಜರ್’ (KHANJAR) ಪ್ರಾರಂಭವಾಗಿದೆ.

    ‘ಖಂಜರ್’ ಸಮರಾಭ್ಯಾಸದ ಬಗ್ಗೆ:

    • ಭಾರತ ಮತ್ತು ಕಿರ್ಗಿಸ್ತಾನ್ ನಡುವೆ ನಡೆಸಲಾಗುತ್ತಿರುವ ವಾರ್ಷಿಕ ತರಬೇತಿ ಕಾರ್ಯಕ್ರಮವಾಗಿದೆ:- ಇದು 2011 ರಿಂದ ಪರ್ಯಾಯ ಕ್ರಮದಲ್ಲಿ ನಡೆಸಲಾಗುತ್ತಿದೆ.
    • ಉದ್ದೇಶ:- ವಿಶ್ವಸಂಸ್ಥೆಯ ಧ್ಯೇಯೋಧ್ಯೆಶದ ಪ್ರಕಾರ, ನಗರ ಪ್ರದೇಶದ ಯುದ್ಧ ಮತ್ತು ಭಯೋತ್ಪಾದನಾ ನಿಗ್ರಹ ಸನ್ನಿವೇಶಗಳಲ್ಲಿನ ಜಂಟಿ ಕಾರ್ಯಾಚರಣೆಗಳ ಮೇಲೆ ಗಮನಹರಿಸುವ ಮೂಲಕ, ಎರಡೂ ರಾಷ್ಟ್ರಗಳ ವಿಶೇಷ ಪಡೆಗಳ ನಡುವಿನ ಅಂತರ್-ಕಾರ್ಯಾಚರಣೆಯ ಸಾಮರ್ಥ್ಯವನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ.
  • ಹಂಪಿ ಮೂಲಸೌಕರ್ಯ ಯೋಜನೆಗಳ ಕುರಿತು ಯುನೆಸ್ಕೋ ಕಳವಳ

    ಹಂಪಿ ಮೂಲಸೌಕರ್ಯ ಯೋಜನೆಗಳ ಕುರಿತು ಯುನೆಸ್ಕೋ ಕಳವಳ

    ಇದೀಗ ಸುದ್ದಿಯಲ್ಲಿದೆ:

    • ಅಂಜನಾದ್ರಿ ಬೆಟ್ಟದಲ್ಲಿ ಕೈಗೊಳ್ಳಲಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ, ಕರ್ನಾಟಕ ಸರ್ಕಾರವು ‘ಪಾರಂಪರಿಕ ಪರಿಣಾಮ ಮೌಲ್ಯಮಾಪನ’ (HIA) ವರದಿಯನ್ನು ಸಿದ್ಧಪಡಿಸುತ್ತಿದ್ದು, ಇದನ್ನು 2026 ರ ಫೆಬ್ರವರಿ 1 ರೊಳಗೆ ಯುನೆಸ್ಕೋಗೆ ಸಲ್ಲಿಸಲು ನಿರ್ಧರಿಸಿದೆ.

    ಯುನೆಸ್ಕೋದ ವಿಶ್ವ ಪಾರಂಪರಿಕ ತಾಣವಾದ ಹಂಪಿಯ ಐತಿಹಾಸಿಕ ಪ್ರಾಮುಖ್ಯತೆಯ ಬಗ್ಗೆ ( ಪಡೆದಿದೆ):

    • 1986 ರಲ್ಲಿ ಯುನೆಸ್ಕೋದಿಂದ ಮಾನ್ಯತೆ ದೊರೆತಿದೆ.
    • ರಾಜಧಾನಿ:- 1336 ರಲ್ಲಿ ಒಂದನೇ ಹರಿಹರ ಮತ್ತು ಒಂದನೇ ಬುಕ್ಕರಾಯ ಎಂಬ ಸಹೋದರರು ಸ್ಥಾಪಿಸಿದ ವಿಜಯನಗರ ಸಾಮ್ರಾಜ್ಯದ 14 ನೇ ಶತಮಾನದ ಭವ್ಯ ರಾಜಧಾನಿಯಾಗಿ ಹಂಪಿ ಮೆರೆದಿತ್ತು.
    • ಸುವರ್ಣ ಯುಗ:- ಶ್ರೀ ಕೃಷ್ಣದೇವರಾಯನ ಆಳ್ವಿಕೆಯಲ್ಲಿ (1509–1530) ತನ್ನ ಉತ್ತುಂಗವನ್ನು ತಲುಪಿದ ಈ ನಗರವು, ವಿಶ್ವದ ಅತಿದೊಡ್ಡ ಹಾಗೂ ಅತ್ಯಂತ ಶ್ರೀಮಂತ ಮಧ್ಯಕಾಲೀನ ನಗರಗಳಲ್ಲಿ ಒಂದಾಗಿ ಹೊರಹೊಮ್ಮಿತ್ತು.
    • ಅವನತಿ:- 1565 ರಲ್ಲಿ ನಡೆದ ಐತಿಹಾಸಿಕ ತಾಳಿಕೋಟೆ ಕದನದಲ್ಲಿ ದಖನ್ ಸುಲ್ತಾನರ ಒಕ್ಕೂಟದಿಂದ ವಿಜಯನಗರ ಸಾಮ್ರಾಜ್ಯವು ಸೋಲನುಭವಿಸಿದ ನಂತರ, ಈ ನಗರವನ್ನು ಲೂಟಿ ಮಾಡಿ ಪಾಳುಗೆಡವಲಾಯಿತು.
    • ಸಾಹಿತ್ಯಿಕ ಉಲ್ಲೇಖಗಳು:- ಪೋರ್ಚುಗೀಸ್ ಪ್ರವಾಸಿ ಡೊಮಿಂಗೊ ಪಯಾಸ್ ಮತ್ತು ಇಟಾಲಿಯನ್ ಪ್ರವಾಸಿ ನಿಕೊಲೊ ಡಿ ಕಾಂಟಿ  ಅವರಂತಹ ವಿದೇಶಿಯರು, ಹಂಪಿಯನ್ನು ‘ರೋಮ್ ನಗರಕ್ಕಿಂತಲೂ ಸುಂದರವಾಗಿದೆ’ ಎಂದು ತಮ್ಮ ಪ್ರವಾಸ ಕಥನಗಳಲ್ಲಿ ಬಣ್ಣಿಸಿದ್ದಾರೆ.

    ಹಂಪಿ ನಗರದ ವಾಸ್ತುಶಿಲ್ಪದ ಮುಖ್ಯಾಂಶಗಳು:

    • ಶೈಲಿ:- ಇದು ಪ್ರಾಥಮಿಕವಾಗಿ ದ್ರಾವಿಡ ವಾಸ್ತುಶಿಲ್ಪ ಶೈಲಿಯನ್ನು ಹೊಂದಿದ್ದು, ಬೃಹತ್ ಆವರಣಗಳು, ಎತ್ತರದ ಗೋಪುರಗಳು ಮತ್ತು ಅತ್ಯಂತ ಸುಂದರವಾಗಿ ಅಲಂಕರಿಸಲ್ಪಟ್ಟ ಕಲ್ಯಾಣ ಮಂಟಪಗಳಿಂದ ಕೂಡಿದೆ.
    • ವಿರೂಪಾಕ್ಷ ದೇವಾಲಯ:- ಇದು 7ನೇ ಶತಮಾನದಲ್ಲಿ ನಿರ್ಮಾಣವಾದ, ಭಾರತದ ಅತ್ಯಂತ ಹಳೆಯ ಮತ್ತು ಇಂದಿಗೂ ಪೂಜೆ ನಡೆಯುತ್ತಿರುವ ದೇವಾಲಯಗಳಲ್ಲಿ ಒಂದಾಗಿದ್ದು, ಶಿವನಿಗೆ ಸಮರ್ಪಿತವಾಗಿದೆ.
    • ವಿಜಯ ವಿಠಲ ದೇವಾಲಯ:- 50 ರೂ. ಮುಖಬೆಲೆಯ ನೋಟಿನಲ್ಲಿ ಚಿತ್ರಿಸಲಾಗಿರುವ ‘ಕಲ್ಲಿನ ರಥ’  ಮತ್ತು ಕೈಯಿಂದ ತಟ್ಟಿದಾಗ ಸುಮಧುರ ನಾದವನ್ನು ಹೊರಹೊಮ್ಮಿಸುವ ‘ಸಂಗೀತ ಸ್ತಂಭ’ಗಳಿಗೆ ಈ ದೇವಾಲಯವು ಜಗತ್ಪ್ರಸಿದ್ಧವಾಗಿದೆ.
    • ಧಾರ್ಮಿಕೇತರ ರಚನೆಗಳು:- ಧಾರ್ಮಿಕ ರಚನೆಗಳಲ್ಲದೆ, ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪದ ಪ್ರಭಾವವನ್ನು ಸ್ಪಷ್ಟವಾಗಿ ಪ್ರದರ್ಶಿಸುವ ಕಮಲ ಮಹಲ್, ಆನೆ ಲಾಯಗಳು ಮತ್ತು ರಾಣಿಯ ಸ್ನಾನಗೃಹವನ್ನು ಇದು ಒಳಗೊಂಡಿದೆ.
  • ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (MPLADS) | ಘನತ್ಯಾಜ್ಯ ನಿರ್ವಹಣೆ (SWM) ನಿಯಮಗಳು, 2026 | ನ್ಯೂ ಸ್ಟಾರ್ಟ್ ಒಪ್ಪಂದ (New START Treaty) | ಪ್ರಧಾನ ಮಂತ್ರಿ ವಿರಾಸತ್ ಕಾ ಸಂವರ್ಧನ್ (PM VIKAS) | SFDR ತಂತ್ರಜ್ಞಾನ ಹೊಂದಿರುವ ಗಣ್ಯ ರಾಷ್ಟ್ರಗಳ ಗುಂಪಿಗೆ ಭಾರತ ಸೇರ್ಪಡೆ | ಕೃಷಿ ಮೂಲಸೌಕರ್ಯ ನಿಧಿ (AIF)

    ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (MPLADS)

    ಕಲ್ಯಾಣ ಯೋಜನೆಗಳು

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚಿಗೆ, MPLADS ನಿಧಿಯ ದುರುಪಯೋಗದ ಆರೋಪದ ಕುರಿತು ವಿವಾದ ಉದ್ಭವಿಸಿದ್ದು, ವಿಮರ್ಶಕರು ಈ ಯೋಜನೆಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.

    ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (MPLADS)ಯ ಬಗ್ಗೆ:

    • ಇದು 1993 ರಲ್ಲಿ ಪ್ರಾರಂಭವಾದ ಒಂದು ಕೇಂದ್ರ ವಲಯದ ಯೋಜನೆಯಾಗಿದೆ.
    • ಅನುಷ್ಠಾನ ಸಚಿವಾಲಯ:- ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯವು (MoSPI). 
    • ಉದ್ದೇಶ:- ಕುಡಿಯುವ ನೀರು, ನೈರ್ಮಲ್ಯ, ರಸ್ತೆಗಳು ಮತ್ತು ಸಾರ್ವಜನಿಕ ಆರೋಗ್ಯ ಮೂಲಸೌಕರ್ಯಗಳಂತಹ ಸ್ಥಳೀಯ ಅಗತ್ಯಗಳನ್ನು ಆಧರಿಸಿ, ಬಾಳಿಕೆ ಬರುವ ಸಮುದಾಯ ಆಸ್ತಿಗಳನ್ನು ನಿರ್ಮಿಸುವ ಕಾಮಗಾರಿಗಳಿಗೆ ಶಿಫಾರಸು ಮಾಡಲು ಸಂಸದರಿಗೆ (MPs) ಅವಕಾಶ ಕಲ್ಪಿಸುವುದು.
    • ವರ್ಷಕ್ಕೆ 5 ಕೋಟಿ ರೂ. ಹಂಚಿಕೆ ಮಾಡಲಾದ ನಿಧಿ: ಪ್ರತಿಯೊಬ್ಬ ಸಂಸದರು MPLADS ಅಡಿಯಲ್ಲಿ ಪಡೆಯಲು ಅರ್ಹರಾಗಿರುತ್ತಾರೆ.
    • ಅಸ್ತಿತ್ವದಲ್ಲಿರುವ ಅಭಿವೃದ್ಧಿ ಯೋಜನೆಗಳಿಗೆ ಪೂರಕವಾಗಿ ಮತ್ತು ಸ್ಥಳೀಯ ಕೊರತೆಗಳನ್ನು ನೀಗಿಸಲು ಈ ನಿಧಿಯನ್ನು ಬಳಸಲಾಗುತ್ತದೆ.
    • ಸಂಸದರು ವಾರ್ಷಿಕವಾಗಿ ಕನಿಷ್ಠ 15% ರಷ್ಟು ನಿಧಿಯನ್ನು ಪರಿಶಿಷ್ಟ ಜಾತಿ (SC) ವಾಸಿಸುವ ಪ್ರದೇಶಗಳಿಗೆ ಮತ್ತು 7.5% ರಷ್ಟು ನಿಧಿಯನ್ನು ಪರಿಶಿಷ್ಟ ಪಂಗಡ (ST) ವಾಸಿಸುವ ಪ್ರದೇಶಗಳಿಗೆ ಶಿಫಾರಸು ಮಾಡುವುದು ಕಡ್ಡಾಯವಾಗಿದೆ.
    • ಲೋಪವಾಗದ ನಿಧಿ:- MPLADS ನಿಧಿಗಳು ಲೋಪವಾಗುವುದಿಲ್ಲ/ರದ್ದಾಗುವುದಿಲ್ಲ, ಅಂದರೆ ಬಳಕೆಯಾಗದ ಹಣವನ್ನು ಮುಂದಿನ ವರ್ಷಗಳಿಗೆ ವರ್ಗಾಯಿಸಲಾಗುತ್ತದೆ ಮತ್ತು ಇದು ಯೋಜನೆಗಳ ಮುಂದುವರಿಕೆಯನ್ನು ಖಚಿತಪಡಿಸುತ್ತದೆ.
    • ಭೌಗೋಳಿಕ ವ್ಯಾಪ್ತಿ:- 
    • ಲೋಕಸಭೆಯ ಸಂಸದರು ತಮ್ಮ ಮತ ಕ್ಷೇತ್ರಗಳಲ್ಲಿ, ಕಾಮಗಾರಿಗಳನ್ನು ಶಿಫಾರಸು ಮಾಡಬಹುದು.
    • ರಾಜ್ಯಸಭೆಯ ಸಂಸದರು ತಾವು ಆಯ್ಕೆಯಾದ ರಾಜ್ಯದೊಳಗೆ ಕಾಮಗಾರಿಗಳನ್ನು ಶಿಫಾರಸು ಮಾಡಬಹುದು.
    • ನಾಮನಿರ್ದೇಶಿತ ಸಂಸದರು ದೇಶದ ಯಾವುದೇ ಭಾಗದಲ್ಲಿ ಕಾಮಗಾರಿಗಳನ್ನು ಶಿಫಾರಸು ಮಾಡಬಹುದು.
    • ವಿನಾಯಿತಿಗಳು:-
    • ಸಂಸದರು ತಮ್ಮ ಮತ ಕ್ಷೇತ್ರ ಅಥವಾ ರಾಜ್ಯದ ಹೊರಗೆ ವರ್ಷಕ್ಕೆ ₹ 25 ಲಕ್ಷ ರೂ.ಗಳವರೆಗೆ ಮತ್ತು ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಪೀಡಿತ ಜಿಲ್ಲೆಗೆ ₹ 1 ಕೋಟಿ ರೂ.ಗಳವರೆಗೆ ಕಾಮಗಾರಿಗಳನ್ನು ಶಿಫಾರಸು ಮಾಡಬಹುದು.

    ಘನತ್ಯಾಜ್ಯ ನಿರ್ವಹಣೆ (SWM) ನಿಯಮಗಳು, 2026

    ಪರಿಸರ

    ಇದೀಗ ಸುದ್ದಿಯಲ್ಲಿದೆ: 

    • ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಘನತ್ಯಾಜ್ಯ ನಿರ್ವಹಣೆ ನಿಯಮಗಳು, 2016 ಅನ್ನು ರದ್ದುಗೊಳಿಸಿ, ಘನತ್ಯಾಜ್ಯ ನಿರ್ವಹಣೆ (SWM) ನಿಯಮಗಳು, 2026 ಅನ್ನು ಅಧಿಸೂಚಿಸಿದೆ.

    ಘನತ್ಯಾಜ್ಯ ನಿರ್ವಹಣೆ (SWM) ನಿಯಮಗಳು, 2026:

    • ಈ ನಿಯಮಗಳನ್ನು ಪರಿಸರ (ಸಂರಕ್ಷಣೆ) ಕಾಯಿದೆ, 1986 ರ ಅಡಿಯಲ್ಲಿ ಅಧಿಸೂಚಿಸಲಾಗಿದೆ ಮತ್ತು ಇವು ಏಪ್ರಿಲ್ 1, 2026 ರಿಂದ ಸಂಪೂರ್ಣವಾಗಿ ಜಾರಿಗೆ ಬರಲಿವೆ.
    • ಪರಿಸರ ಪರಿಹಾರ ದಂಡ:- ನೋಂದಣಿ ಇಲ್ಲದೆ ಕಾರ್ಯನಿರ್ವಹಿಸುವುದು, ತಪ್ಪು ವರದಿ ನೀಡುವುದು, ನಕಲಿ ದಾಖಲೆಗಳನ್ನು ಸಲ್ಲಿಸುವುದು ಅಥವಾ ಅನುಚಿತ ಘನತ್ಯಾಜ್ಯ ನಿರ್ವಹಣಾ ಪದ್ಧತಿಗಳಂತಹ ನಿಯಮಗಳ ಉಲ್ಲಂಘನೆಗಾಗಿ, ‘ಮಾಲಿನ್ಯಕಾರನೇ ದಂಡ ತೆರಬೇಕು’ ತತ್ವದ ಆಧಾರದ ಮೇಲೆ ಪರಿಸರ ಪರಿಹಾರ ದಂಡವನ್ನು ವಿಧಿಸಲು ಈ ನಿಯಮಗಳು ಅವಕಾಶ ಕಲ್ಪಿಸುತ್ತವೆ.
    • ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (CPCB):- CPCB ಇದಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಸಿದ್ಧಪಡಿಸುತ್ತದೆ, ಆದರೆ “ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ”ಗಳು ಮತ್ತು “ಮಾಲಿನ್ಯ ನಿಯಂತ್ರಣ ಸಮಿತಿ”ಗಳು ಪರಿಸರ ಪರಿಹಾರ ದಂಡವನ್ನು ವಿಧಿಸುತ್ತವೆ.

    ಈ ಹೊಸ ನಿಯಮಗಳ ಪ್ರಮುಖ ಲಕ್ಷಣಗಳು:

    • ಮೂಲದಲ್ಲೇ ಘನ ತ್ಯಾಜ್ಯದ 4 ವಿಧಗಳ ಪ್ರತ್ಯೇಕ ವಿಂಗಡಣೆ ಕಡ್ಡಾಯಗೊಳಿಸಲಾಗಿದೆ:-
    1. ಹಸಿ ತ್ಯಾಜ್ಯ:- ಇದು ಅಡುಗೆಮನೆಯ ತ್ಯಾಜ್ಯ, ತರಕಾರಿಗಳು, ಹಣ್ಣಿನ ಸಿಪ್ಪೆಗಳು, ಮಾಂಸ ಮತ್ತು ಹೂವುಗಳು ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಇದನ್ನು ಹತ್ತಿರದ ಸಂಸ್ಕರಣಾ ಘಟಕದಲ್ಲಿ ಮಿಶ್ರಗೊಬ್ಬರ (ಕಾಂಪೋಸ್ಟ್) ಮಾಡಬೇಕು ಅಥವಾ ಜೈವಿಕ ಮೆಥನೇಷನ್ (ಜೈವಿಕ ಅನಿಲ ಉತ್ಪಾದನೆ) ಮೂಲಕ ಸಂಸ್ಕರಿಸಬೇಕು.
    2. ಒಣ ತ್ಯಾಜ್ಯ:- ಇದು ಪ್ಲಾಸ್ಟಿಕ್, ಕಾಗದ, ಲೋಹ, ಗಾಜು, ಮರ ಮತ್ತು ರಬ್ಬರ್ ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಇದನ್ನು ವಿಂಗಡಣೆ ಮತ್ತು ಮರುಬಳಕೆಗಾಗಿ ವಸ್ತು ಮರುಪಡೆಯುವ ಘಟಕ (MRFs) ಗಳಿಗೆ ಸಾಗಿಸಬೇಕು.
    3. ನೈರ್ಮಲ್ಯ ತ್ಯಾಜ್ಯ:- ಇದು ಬಳಸಿದ  ‘ಶಿಶು ಲಂಗೋಟಗಳು (ಡೈಪರ್‌ಗಳು), ಋತುಸ್ರಾವದ ಪ್ಯಾಡ್‌ಗಳು, ಟ್ಯಾಂಪೂನ್‌ಗಳು ಮತ್ತು ಕಾಂಡೋಮ್‌ಗಳು ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಇವುಗಳನ್ನು ಸುರಕ್ಷಿತವಾಗಿ ಸುತ್ತಿ ಪ್ರತ್ಯೇಕವಾಗಿ ಸಂಗ್ರಹಿಸಿಡಬೇಕು.
    4. ವಿಶೇಷ ಕಾಳಜಿ ಅಗತ್ಯವಿರುವ ತ್ಯಾಜ್ಯ:- ಇದು ಬಣ್ಣದ ಡಬ್ಬಿಗಳು, ವಿದ್ಯುತ್ ದೀಪ (ಬಲ್ಬ್‌)ಗಳು, ಪಾದರಸದ ಥರ್ಮಾಮೀಟರ್‌ಗಳು ಮತ್ತು ಔಷಧಗಳು ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಇವುಗಳನ್ನು ಅಧಿಕೃತ ಸಂಸ್ಥೆಗಳು ಸಂಗ್ರಹಿಸಬೇಕು ಅಥವಾ ನಿಗದಿತ ಸಂಗ್ರಹಣಾ ಕೇಂದ್ರಗಳಲ್ಲಿ ಜಮಾ ಮಾಡಬೇಕು.
    • ಬೃಹತ್ ತ್ಯಾಜ್ಯ ಉತ್ಪಾದಕರ ಸ್ಪಷ್ಟ ವ್ಯಾಖ್ಯಾನ:- 20,000 ಚದರ ಮೀಟರ್ ಅಥವಾ ಅದಕ್ಕಿಂತ ಹೆಚ್ಚಿನ ವಿಸ್ತೀರ್ಣ ಹೊಂದಿರುವ, ದಿನಕ್ಕೆ 40,000 ಲೀಟರ್ ಅಥವಾ ಅದಕ್ಕಿಂತ ಹೆಚ್ಚು ನೀರು ಬಳಸುವ, ಅಥವಾ ದಿನಕ್ಕೆ 100 ಕೆ.ಜಿ ಅಥವಾ ಅದಕ್ಕಿಂತ ಹೆಚ್ಚು ಘನತ್ಯಾಜ್ಯ ಉತ್ಪಾದಿಸುವ ಸಂಸ್ಥೆಗಳನ್ನು ‘ಬೃಹತ್ ತ್ಯಾಜ್ಯ ಉತ್ಪಾದಕರು’ ಎಂದು ಪರಿಗಣಿಸಲಾಗುತ್ತದೆ.
    • ತ್ವರಿತ ಭೂ ಹಂಚಿಕೆ ಮತ್ತು ಮೇಲ್ವಿಚಾರಣೆ:- ತ್ಯಾಜ್ಯ ಸಂಸ್ಕರಣೆಗೆ ತ್ವರಿತ ಭೂ ಹಂಚಿಕೆ ಮತ್ತು ಸಂಪೂರ್ಣ ಘನತ್ಯಾಜ್ಯ ನಿರ್ವಹಣೆಯ ಆನ್‌ಲೈನ್ ಮೇಲ್ವಿಚಾರಣೆ ವ್ಯವಸ್ಥೆಯನ್ನು ಇದು ಒಳಗೊಂಡಿದೆ.
    • ಸ್ಥಳೀಯ ಸಂಸ್ಥೆಗಳು ಮತ್ತು ವಸ್ತು ಮರುಗಳಿಕೆ ಘಟಕಗಳ (MRFs) ಕರ್ತವ್ಯಗಳು:- ಈ ಎರಡರ ಸಹಯೋಗದೊಂದಿಗೆ ಘನತ್ಯಾಜ್ಯವನ್ನು ಸಂಗ್ರಹಿಸಬೇಕು, ವಿಂಗಡಿಸಬೇಕು ಮತ್ತು ಸಾಗಿಸಬೇಕು.

    ನ್ಯೂ ಸ್ಟಾರ್ಟ್ ಒಪ್ಪಂದ (New START Treaty)

    ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ: 

    • ನ್ಯೂ ಸ್ಟಾರ್ಟ್ ಒಪ್ಪಂದದ (New START Treaty) ಮುಕ್ತಾಯವು, ವಿಶ್ವದ ಎರಡು ಬೃಹತ್ ಅಣ್ವಸ್ತ್ರ ಶಕ್ತಿಗಳ ಅಣ್ವಸ್ತ್ರ ಸಂಗ್ರಹದ ಮೇಲಿರುವ ಏಕೈಕ ಹಾಗೂ ಕೊನೆಯ ಕಾನೂನುಬದ್ಧ ನಿರ್ಬಂಧವನ್ನು ಇಲ್ಲವಾಗಿಸುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

    ನ್ಯೂ ಸ್ಟಾರ್ಟ್ ಒಪ್ಪಂದದ ಬಗ್ಗೆ:

    • New START Treaty ಸಂಕ್ಷಿಪ್ತ ರೂಪ:- ‘ಸ್ಟ್ರಾಟೆಜಿಕ್ ಆರ್ಮ್ಸ್ ರಿಡಕ್ಷನ್ ಟ್ರೀಟಿ’ (ಕಾರ್ಯತಂತ್ರದ  ಶಸ್ತ್ರಾಸ್ತ್ರ ಕಡಿತ ಒಪ್ಪಂದ).

    ಸ್ಟಾರ್ಟ್-I ಒಪ್ಪಂದದ ಬಗ್ಗೆ:

    • ಇದು 1991 ರಲ್ಲಿ ಅಮೆರಿಕ (US) ಮತ್ತು ಹಿಂದಿನ ಸೋವಿಯತ್ ಒಕ್ಕೂಟದ (USSR) ನಡುವೆ ಸಹಿ ಹಾಕಲ್ಪಟ್ಟ ಒಪ್ಪಂದವಾಗಿದ್ದು, 1994 ರಲ್ಲಿ ಜಾರಿಗೆ ಬಂದಿತು.
    • ಇದು ಎರಡೂ ರಾಷ್ಟ್ರಗಳಿಗೆ ತಲಾ 6,000 ಅಣ್ವಸ್ತ್ರ ಸಿಡಿತಲೆಗಳು ಮತ್ತು 1,600 ಖಂಡಾಂತರ ಕ್ಷಿಪಣಿಗಳನ್ನು (ICBMs) ಹೊಂದುವ ಮಿತಿಯನ್ನು ವಿಧಿಸಿತ್ತು; ಆದರೆ ಈ ಒಪ್ಪಂದವು 2009 ರಲ್ಲಿ ಮುಕ್ತಾಯಗೊಂಡಿತು.
    • ಇದರ ನಂತರ SORT- ‘ಸ್ಟ್ರಾಟೆಜಿಕ್ ಅಫೆನ್ಸಿವ್ ರಿಡಕ್ಷನ್ ಟ್ರೀಟಿ’ (ಮಾಸ್ಕೋ ಒಪ್ಪಂದ) ಜಾರಿಗೆ ಬಂದಿತು. ತದನಂತರ ‘ನ್ಯೂ ಸ್ಟಾರ್ಟ್ ಒಪ್ಪಂದ’ (2010 ರಲ್ಲಿ ಸಹಿ ಹಾಕಲಾಗಿ, 2011 ರಲ್ಲಿ ಜಾರಿಗೆ ಬಂದಿತು) ಅಸ್ತಿತ್ವಕ್ಕೆ ಬಂದಿತು.

    ನ್ಯೂ ಸ್ಟಾರ್ಟ್ ಒಪ್ಪಂದದ ಬಗ್ಗೆ:

    • ಇದು ಎರಡೂ ರಾಷ್ಟ್ರಗಳು ನಿಯೋಜಿಸಬಹುದಾದ ಕಾರ್ಯತಂತ್ರದ ಅಣ್ವಸ್ತ್ರ ಸಿಡಿತಲೆಗಳ ಸಂಖ್ಯೆಯನ್ನು ತಲಾ 1,550 ಕ್ಕೆ ಮಿತಿಗೊಳಿಸುತ್ತದೆ.
    • ಇದಲ್ಲದೆ, ನಿಯೋಜಿತ ಭೂ ಅಥವಾ ಜಲಾಂತರ್ಗಾಮಿ ಉಡಾವಣಾ ಕ್ಷಿಪಣಿಗಳು ಮತ್ತು ಬಾಂಬರ್ ವಿಮಾನಗಳ ಸಂಖ್ಯೆಯನ್ನು 700 ಕ್ಕೆ ಹಾಗೂ ಉಡಾವಣಾ ವಾಹನಗಳ (ಲಾಂಚರ್ಸ್) ಸಂಖ್ಯೆಯನ್ನು 800 ಕ್ಕೆ ಸೀಮಿತಗೊಳಿಸುತ್ತದೆ.

    ಒಪ್ಪಂದದ ಮುಕ್ತಾಯದ ಪರಿಣಾಮಗಳು:

    • ಒಪ್ಪಂದವಿಲ್ಲದೆ, ರಷ್ಯಾ ಮತ್ತು ಅಮೆರಿಕ ತಮ್ಮ ಅಣ್ವಸ್ತ್ರಗಳ ಸಂಖ್ಯೆಯನ್ನು ಮುಕ್ತವಾಗಿ ವಿಸ್ತರಿಸಬಹುದು. ಇದು ಜಾಗತಿಕ ಉದ್ವಿಗ್ನತೆಯ ನಡುವೆ ನವೀಕೃತ ಅಣ್ವಸ್ತ್ರ ಪೈಪೋಟಿಯ ಅಪಾಯವನ್ನು ತಂದೊಡ್ಡಬಹುದು.
    • ಯಾವುದೇ ಚೌಕಟ್ಟು ಇಲ್ಲದಿರುವುದು ಅಣ್ವಸ್ತ್ರದ ಅಪಾಯಗಳನ್ನು ಹೆಚ್ಚಿಸುತ್ತದೆ ಮತ್ತು ಶಸ್ತ್ರಾಸ್ತ್ರ ನಿಯಂತ್ರಣ ಒಪ್ಪಂದಗಳು ಒದಗಿಸುವ ಪಾರದರ್ಶಕತೆ ಹಾಗೂ ಸ್ಥಿರತೆಯನ್ನು ಇಲ್ಲವಾಗಿಸುತ್ತದೆ.

    ಪ್ರಧಾನ ಮಂತ್ರಿ ವಿರಾಸತ್ ಕಾ ಸಂವರ್ಧನ್ (PM VIKAS)

    ಆಡಳಿತ/ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ: 

    • ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಯೋಜನಾ ಅನುಷ್ಠಾನ ಸಂಸ್ಥೆಗಳ ಮೂಲಕ ಸುಮಾರು 1.51 ಲಕ್ಷ ಅಲ್ಪಸoಖ್ಯಾತ ಫಲಾನುಭವಿಗಳಿಗೆ ತರಬೇತಿ ನೀಡುವ ಗುರಿಯನ್ನು ‘ಪಿಎಂ ವಿಕಾಸ್’ ಯೋಜನೆಗೆ ನಿಗದಿಪಡಿಸಲಾಗಿದೆ.

    ಪ್ರಧಾನ ಮಂತ್ರಿ ವಿರಾಸತ್ ಕಾ ಸಂವರ್ಧನ್ (PM VIKAS) ಯೋಜನೆಯ ಬಗ್ಗೆ:

    • ಹಣಕಾಸು:- ಕೇಂದ್ರ ವಲಯದ ಯೋಜನೆಯಾಗಿದೆ.
    • ಅನುಷ್ಠಾನ ಸಚಿವಾಲಯ:- ಅಲ್ಪಸoಖ್ಯಾತ ವ್ಯವಹಾರಗಳ ಸಚಿವಾಲಯ. 
    • ಹಿಂದಿನ 5 ಯೋಜನೆಗಳ ವಿಲೀನ:– 
    • ಸಿಖೋ ಔರ್ ಕಮಾವೋ 
    • ನಯಿ ಮಂಜಿಲ್ 
    • ನಯಿ ರೋಶನಿ
    • ಉಸ್ತಾದ್’ (USTTAD)
    • ಹಮಾರಿ ಧರೋಹರ್
    • ಗುರಿ:- ಈ ಯೋಜನೆಯು ಕೌಶಲ್ಯ ಅಭಿವೃದ್ಧಿ, ಅಲ್ಪಸಖ್ಯಾತ ಮಹಿಳೆಯರ ಉದ್ಯಮಶೀಲತೆ ಮತ್ತು ನಾಯಕತ್ವ ಹಾಗೂ ಶಾಲೆಯಿಂದ ಹೊರಗುಳಿದವರಿಗೆ ಶಿಕ್ಷಣ ಬೆಂಬಲವನ್ನು ನೀಡುವ ಮೂಲಕ 6 ಅಧಿಸೂಚಿತ ಅಲ್ಪಸoಖ್ಯಾತ ಸಮುದಾಯಗಳ ಏಳಿಗೆಯತ್ತ ಗಮನಹರಿಸುತ್ತದೆ.

    ನಿಮಗಿದು ತಿಳಿದಿದೆಯೇ?

    • ಸಾಮಾಜಿಕ ಮತ್ತು ಆರ್ಥಿಕ ಮಾನದಂಡಗಳ ಆಧಾರದ ಮೇಲೆ ಭಾರತದಲ್ಲಿ ಅಧಿಕೃತವಾಗಿ ಗುರುತಿಸಲ್ಪಟ್ಟ 6 ಅಲ್ಪಸಖ್ಯಾತ ಗುಂಪುಗಳೆಂದರೆ -> ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಖ್ಖರು, ಬೌದ್ಧರು, ಜೈನರು ಮತ್ತು ಜೊರಾಸ್ಟ್ರಿಯನ್ನರು (ಪಾರ್ಸಿಗಳು).

    SFDR ತಂತ್ರಜ್ಞಾನ ಹೊಂದಿರುವ ಗಣ್ಯ ರಾಷ್ಟ್ರಗಳ ಗುಂಪಿಗೆ ಭಾರತ ಸೇರ್ಪಡೆ

    ರಕ್ಷಣೆ

    ಇದೀಗ ಸುದ್ದಿಯಲ್ಲಿದೆ: 

    • ಒಡಿಶಾದ ಚಂಡಿಪುರದಲ್ಲಿರುವ  ಸಮಗ್ರ ಪರೀಕ್ಷಾ ವಲಯದಿಂದ (ITR) ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ಯು SFDR- ‘ಸಾಲಿಡ್ ಫ್ಯುಯೆಲ್ ಡಕ್ಟೆಡ್ ರಾಮ್‌ಜೆಟ್’ (ಘನ ಇಂಧನ ನಾಳೀಕೃತ ರಾಮ್‌ಜೆಟ್) ತಂತ್ರಜ್ಞಾನವನ್ನು ಯಶಸ್ವಿಯಾಗಿ ಪ್ರದರ್ಶಿಸಿದೆ. ಈ ಬೆಳವಣಿಗೆಯು ಭಾರತದ ದೀರ್ಘ ಶ್ರೇಣಿಯ ಆಕಾಶದಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ ಸಾಮರ್ಥ್ಯಗಳನ್ನು ಹೆಚ್ಚಿಸಲಿದೆ.

    SFDR- ಸಾಲಿಡ್ ಫ್ಯುಯೆಲ್ ಡಕ್ಟೆಡ್ ರಾಮ್‌ಜೆಟ್ (ಘನ ಇಂಧನ ನಾಳೀಕೃತ ರಾಮ್‌ಜೆಟ್) ತಂತ್ರಜ್ಞಾನದ ಬಗ್ಗೆ:

    • ಕ್ಷಿಪಣಿ ಚಾಲನಾ ವ್ಯವಸ್ಥೆಯಾಗಿದೆ:- ಇದು ನಿರಂತರವಾದ ನೂಕುಬಲವನ್ನು ಒದಗಿಸಲು ರಾಮ್‌ಜೆಟ್ ಎಂಜಿನ್ ಅನ್ನು ಬಳಸುತ್ತದೆ.
    • ವಾಯು ಹೀರಿಕೊಳ್ಳುವ ವ್ಯವಸ್ಥೆಯಾಗಿದೆ:- ಸಾಂಪ್ರದಾಯಿಕ ರಾಕೆಟ್‌ಗಳಿಗಿಂತ ಭಿನ್ನವಾಗಿ, ಇದೊಂದು ‘ವಾಯು ಹೀರಿಕೊಳ್ಳುವ’ ವ್ಯವಸ್ಥೆಯಾಗಿದೆ; ಅಂದರೆ, ಇದು ಉತ್ಕರ್ಷಕ (ಆಕ್ಸಿಡೈಜರ್)ವನ್ನು ತನ್ನೊಂದಿಗೆ ಕೊಂಡೊಯ್ಯುವುದಿಲ್ಲ, ಬದಲಿಗೆ ವಾತಾವರಣದಲ್ಲಿರುವ ಆಮ್ಲಜನಕವನ್ನೇ ಬಳಸಿಕೊಳ್ಳುತ್ತದೆ.
    • ನಳಿಕೆ ರಹಿತ ಘನ ವೇಗವರ್ಧಕ ಬಳಸಿ ಉಡಾವಣೆ:- ರಾಮ್‌ಜೆಟ್ ಎಂಜಿನ್‌ಗಳು ಅಧಿಕ ವೇಗದಲ್ಲಿ ಮಾತ್ರ ಕಾರ್ಯನಿರ್ವಹಿಸುವುದರಿಂದ, ಶಬ್ದಾತೀತ ವೇಗವನ್ನು (ಮ್ಯಾಕ್ 2 ಕ್ಕಿಂತ ಹೆಚ್ಚು) ತಲುಪಲು ಕ್ಷಿಪಣಿಯನ್ನು ಆರಂಭದಲ್ಲಿ ‘ನಳಿಕೆ ರಹಿತ ಘನ ವೇಗವರ್ಧಕ’ ಬಳಸಿ ಉಡಾಯಿಸಲಾಗುತ್ತದೆ.

    ಭಾರತಕ್ಕೆ ಕಾರ್ಯತಂತ್ರದ ಮಹತ್ವ:

    • ದೀರ್ಘ ಶ್ರೇಣಿಯ ಆಕಾಶದಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿಗಳು (LRAAM):- SFDR ತಂತ್ರಜ್ಞಾನವು ‘ಅಸ್ತ್ರ ಮಾರ್ಕ್-3’ ಕ್ಷಿಪಣಿಗೆ ಸಾಮರ್ಥ್ಯ ಒದಗಿಸಲಿದ್ದು, ಇದು 150-300 ಕಿ.ಮೀ.ಗಿಂತ ಹೆಚ್ಚಿನ ದೂರದಲ್ಲಿರುವ, ವೇಗವಾಗಿ ಚಲಿಸುವ ಶತ್ರು ವಿಮಾನಗಳನ್ನು ತಡೆಹಿಡಿದು ಧ್ವಂಸಗೊಳಿಸಲು ಸಮರ್ಥವಾಗಿದೆ.
    • ವಿಸ್ತೃತ “ನೋ-ಎಸ್ಕೇಪ್ ಜೋನ್” (ತಪ್ಪಿಸಿಕೊಳ್ಳಲು ಅವಕಾಶವಿಲ್ಲದ ವಲಯ):- ಕ್ಷಿಪಣಿಯು ಗುರಿಯನ್ನು ತಲುಪುವ ಅಂತಿಮ ಹಂತದವರೆಗೂ “ಚಾಲಿತ ಸ್ಥಿತಿಯಲ್ಲಿ” ಇರುವುದರಿಂದ, ಇದು ಗುರಿಯ ಸಮೀಪದಲ್ಲಿಯೂ ತೀವ್ರ ಸ್ವರೂಪದ ತಿರುವುಗಳನ್ನು ತೆಗೆದುಕೊಳ್ಳಬಲ್ಲ ಸಾಮರ್ಥ್ಯವನ್ನು ಹೊಂದಿದೆ ; ಇದರಿಂದಾಗಿ ಶತ್ರು ವಿಮಾನಗಳು ತಪ್ಪಿಸಿಕೊಳ್ಳುವುದು ಅಸಾಧ್ಯವಾಗುತ್ತದೆ.
    • ಭೂಮಿಯಿಂದ ಆಕಾಶಕ್ಕೆ ಅನ್ವಯ:- ಹೈಪರ್‌ಸಾನಿಕ್ ಅಥವಾ ಅತ್ಯಂತ ವೇಗವಾಗಿ ಚಲಿಸುವ ಕ್ರೂಸ್ ಕ್ಷಿಪಣಿಗಳನ್ನು ಎದುರಿಸಲು, ಇದನ್ನು ಭವಿಷ್ಯದ ‘ಭೂಮಿಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ’ (SAM) ವ್ಯವಸ್ಥೆಗಳಿಗೆ (ಉದಾಹರಣೆಗೆ ಪ್ರಸ್ತಾಪಿತ SAM-X) ಅಳವಡಿಸಿಕೊಳ್ಳಬಹುದಾಗಿದೆ.

    ಕೃಷಿ ಮೂಲಸೌಕರ್ಯ ನಿಧಿ (AIF)

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ: 

    • ಕೃಷಿ ಮೂಲಸೌಕರ್ಯ ನಿಧಿಯು (AIF) 2020 ರಿಂದ ಇಲ್ಲಿಯವರೆಗೆ 1.5 ಲಕ್ಷಕ್ಕೂ ಹೆಚ್ಚು ಯೋಜನೆಗಳಿಗೆ ₹80,224.15 ಕೋಟಿ ರೂ.ಗಳ ಸಾಲವನ್ನು ಮಂಜೂರು ಮಾಡಿದ್ದು, ಒಟ್ಟಾರೆಯಾಗಿ ₹1.27 ಲಕ್ಷ ಕೋಟಿ ರೂ.ಗಳ ಹೂಡಿಕೆಯನ್ನು ಕ್ರೂಢೀಕರಿಸಿದೆ.

    ಕೃಷಿ ಮೂಲಸೌಕರ್ಯ ನಿಧಿ (AIF)ಯ ಬಗ್ಗೆ:

    • ಇದೊಂದು ಕೇಂದ್ರ ವಲಯದ ಯೋಜನೆಯಾಗಿದೆ.
    • ಉದ್ದೇಶ:- ಕೊಯ್ಲಿನ ನಂತರದ ನಿರ್ವಹಣಾ ಮೂಲಸೌಕರ್ಯ ಮತ್ತು ಸಮುದಾಯ ಕೃಷಿ ಆಸ್ತಿಗಳ ಅಭಿವೃದ್ಧಿಗಾಗಿ ಮಧ್ಯಮ ಮತ್ತು ದೀರ್ಘಾವಧಿಯ ಸಾಲದ ಮೂಲಕ ಹಣಕಾಸು ಒದಗಿಸುವುದು.
    • ಪ್ರಾಮುಖ್ಯತೆ:- ಇದು ಕೃಷಿ ಸರಕು ಸಾಗಣೆಯನ್ನು ಬಲಪಡಿಸುವುದು, ಕೊಯ್ಲಿನ ನಂತರದ ನಷ್ಟವನ್ನು ಕಡಿಮೆ ಮಾಡುವುದು, ಆಧುನಿಕ ಶೇಖರಣಾ ವ್ಯವಸ್ಥೆ, ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಘಟಕಗಳನ್ನು ಉತ್ತೇಜಿಸುವುದು ಹಾಗೂ ಪೂರೈಕೆ ಸರಪಳಿಗಳ ದಕ್ಷತೆಗಾಗಿ ‘ಫಾರ್ಮ್-ಗೇಟ್’ (ಹೊಲದ ಬಾಗಿಲಲ್ಲಿಯೇ) ಮಟ್ಟದ ಮೂಲಸೌಕರ್ಯವನ್ನು ಸುಧಾರಿಸುವುದರತ್ತ ಗಮನಹರಿಸುತ್ತದೆ.
  • ಕರ್ನಾಟಕದ ‘ಆರೆಂಜ್ ಎಕಾನಮಿ’ ಮತ್ತು ಎವಿಜಿಸಿ (AVGC) ವಲಯದ ಬೆಳವಣಿಗೆ

    ಕರ್ನಾಟಕದ ‘ಆರೆಂಜ್ ಎಕಾನಮಿ’ ಮತ್ತು ಎವಿಜಿಸಿ (AVGC) ವಲಯದ ಬೆಳವಣಿಗೆ

    ಇದೀಗ ಸುದ್ದಿಯಲ್ಲಿದೆ:

    • ಐಟಿ-ಬಿಟಿ (IT-BT) ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ‘ಆರೆಂಜ್ ಎಕಾನಮಿ’ಯಲ್ಲಿ ಕರ್ನಾಟಕದ ಒಂದು ದಶಕದ ನಾಯಕತ್ವವನ್ನು ಎತ್ತಿತೋರಿಸಿದ್ದಾರೆ ಮತ್ತು ಮುಂಬರುವ ‘ಬೆಂಗಳೂರು ಗ್ಯಾಫ್ಎಕ್ಸ್ (GAFX) 2026’ ವಸ್ತುಪ್ರದರ್ಶನವನ್ನು ಘೋಷಿಸಿದ್ದಾರೆ.

    ‘ಆರೆಂಜ್ ಎಕಾನಮಿ’ ಬಗ್ಗೆ:

    • ಇದನ್ನು ‘ಸೃಜನಶೀಲ ಆರ್ಥಿಕತೆ’ ಎಂತಲೂ ಕರೆಯಲಾಗುತ್ತದೆ.
    • ಅರ್ಥ:- ಇದು ಜ್ಞಾನಾಧಾರಿತ ಆರ್ಥಿಕ ಚಟುವಟಿಕೆಗಳನ್ನು ಉಲ್ಲೇಖಿಸುತ್ತದೆ; ಅಂದರೆ ಇಲ್ಲಿ ವ್ಯಕ್ತಿಯ ಸೃಜನಶೀಲತೆ, ಕೌಶಲ್ಯ್, ಪ್ರತಿಭೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಬೌದ್ಧಿಕ ಆಸ್ತಿಯ (IP) ಹಕ್ಕುಗಳ ಮೂಲಕ ಆರ್ಥಿಕ ಮೌಲ್ಯವಾಗಿ ಪರಿವರ್ತಿಸಲಾಗುತ್ತದೆ.
    • ಮೂಲ:- 2013 ರಲ್ಲಿ ಕೊಲಂಬಿಯಾದ ಅರ್ಥಶಾಸ್ತ್ರಜ್ಞರಾದ ಫೆಲಿಪೆ ಬ್ಯುಟ್ರಾಗೊ ಮತ್ತು ಇವಾನ್ ಡ್ಯೂಕ್ (ಕೊಲಂಬಿಯಾದ ಮಾಜಿ ಅಧ್ಯಕ್ಷ) ಅವರು ತಮ್ಮ ‘ದಿ ಆರೆಂಜ್ ಎಕಾನಮಿ: ಆನ್ ಇನ್ಫೈನೈಟ್ ಆಪರ್ಚುನಿಟಿ’ (The Orange Economy: An Infinite Opportunity) ಎಂಬ ಪುಸ್ತಕದಲ್ಲಿ ಈ ಪದವನ್ನು ಮೊದಲು ಹುಟ್ಟುಹಾಕಿದರು.
    • ಸಂಕೇತ:- ಕಿತ್ತಳೆ (Orange) ಬಣ್ಣವು ಐತಿಹಾಸಿಕವಾಗಿ ಸಂಸ್ಕೃತಿ, ಸೃಜನಶೀಲತೆ ಮತ್ತು ಅಸ್ಮಿತೆಯೊಂದಿಗೆ ಸಂಬಂಧ ಹೊಂದಿರುವುದರಿಂದ, ಈ ವಲಯಕ್ಕೆ ಆ ಬಣ್ಣವನ್ನು ಆಯ್ಕೆ ಮಾಡಲಾಗಿದೆ.
    • ಪ್ರಮುಖ ಕ್ಷೇತ್ರಗಳು:- ಚಲನಚಿತ್ರ, ಸಂಗೀತ, ಗೇಮಿಂಗ್, ಅನಿಮೇಷನ್, ದೃಶ್ಯ ಪರಿಣಾಮಗಳು (AVGC), ಫ್ಯಾಷನ್, ಪ್ರಕಾಶನ, ಸಾಫ್ಟ್‌ವೇರ್ ಅಭಿವೃದ್ಧಿ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮಗಳು ಈ ವಲಯದಲ್ಲಿ ಸೇರಿವೆ.

    ಕರ್ನಾಟಕದಲ್ಲಿ ಇತ್ತೀಚಿನ ಬೆಳವಣಿಗೆಗಳು:

    • ಕರ್ನಾಟಕದ ಎವಿಜಿಸಿ-ಎಕ್ಸ್‌ಆರ್ (AVGC-XR) ನೀತಿ 3.0 (2024-2029):- ಇದು ಅನಿಮೇಷನ್, ದೃಶ್ಯ ಪರಿಣಾಮಗಳು, ಗೇಮಿಂಗ್, ಕಾಮಿಕ್ಸ್  ಮತ್ತು ವಿಸ್ತರಿತ ನೈಜತೆ (XR) ವಿಭಾಗದಲ್ಲಿ ರಾಜ್ಯವನ್ನು ಜಾಗತಿಕ ನಾಯಕನನ್ನಾಗಿ ಸ್ಥಾಪಿಸಲು ವಿನ್ಯಾಸಗೊಳಿಸಲಾದ ಒಂದು ಪ್ರಮುಖ ಕಾರ್ಯತಂತ್ರದ ಚೌಕಟ್ಟಾಗಿದೆ.
  • 2026ರ ದೆಹಲಿ ಘೋಷಣೆ | ಜ್ಞಾನ ಭಾರತಂ | ರಾಷ್ಟ್ರೀಯ ಭಾವೈಕ್ಯತೆ ಪರಿಷತ್ತು | ಭಾರತ್-ವಿಸ್ತಾರ್ (Bharat-VISTAAR) | ಗೋಬರ್ಧನ್ ಯೋಜನೆ

    2026ರ ದೆಹಲಿ ಘೋಷಣೆ

    ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ಭಾರತವು 2ನೇ ಭಾರತ-ಅರಬ್ ವಿದೇಶಾಂಗ ಸಚಿವರ ಸಭೆಯನ್ನು ಆಯೋಜಿಸಿತ್ತು.

    ಅರಬ್ ಲೀಗ್ ಮೈತ್ರಿಕೂಟದ ಬಗ್ಗೆ: 

    • ಇದನ್ನು ಅಧಿಕೃತವಾಗಿ ‘ಲೀಗ್ ಆಫ್ ಅರಬ್ ಸ್ಟೇಟ್ಸ್’ ಎಂದು ಕರೆಯಲಾಗುತ್ತದೆ.
    • ಸ್ಥಾಪನೆ:- 1945 ರಲ್ಲಿ ಈಜಿಪ್ಟ್‌ನ ಕೈರೋದಲ್ಲಿ ಸ್ಥಾಪಿಸಲಾಯಿತು.
    • ಸದಸ್ಯ ರಾಷ್ಟ್ರಗಳು:- 22 ಸದಸ್ಯ ರಾಷ್ಟ್ರಗಳನ್ನು ಹೊಂದಿದೆ.
    • ಭಾರತವು ‘ವೀಕ್ಷಕ ಸ್ಥಾನಮಾನ’ವನ್ನು ಹೊಂದಿದೆ:- ಪಶ್ಚಿಮ ಏಷ್ಯಾ ಮತ್ತು ಉತ್ತರ ಆಫ್ರಿಕಾದಾದ್ಯಂತ ಇರುವ ದೇಶಗಳನ್ನು ಪ್ರತಿನಿಧಿಸುವ ಅರಬ್ ಲೀಗ್‌ನಲ್ಲಿ ಈ ಸ್ಥಾನಮಾನ ಹೊಂದಿದೆ.

    ಭಾರತ-ಅರಬ್ ಲೀಗ್ ಸಂಪರ್ಕ:

    • ಭಾರತ-ಅರಬ್ ವಿದೇಶಾಂಗ ಸಚಿವರ ಸಭೆಯು ಅರಬ್ ಲೀಗ್‌ನೊಂದಿಗಿನ ಭಾರತದ ಸಂಪರ್ಕಕ್ಕೆ ಮಾರ್ಗದರ್ಶನ ನೀಡುವ ಅತ್ಯುನ್ನತ ಸಾಂಸ್ಥಿಕ ವ್ಯವಸ್ಥೆಯಾಗಿದೆ.

    ದೆಹಲಿ ಘೋಷಣೆಯ ಪ್ರಮುಖ ಅಂಶಗಳು:

    • ದೆಹಲಿ ಘೋಷಣೆಯು ಸುಡಾನ್, ಲಿಬಿಯಾ ಮತ್ತು ಸೋಮಾಲಿಯಾ ದೇಶಗಳ ಸಾರ್ವಭೌಮತ್ವ, ಏಕತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಬೆಂಬಲವನ್ನು ಪುನರುಚ್ಚರಿಸುತ್ತದೆ.
    • ಸುಡಾನ್:- ಯುಎಇ (UAE) ದೇಶವು’ ಕ್ಷಿಪ್ರ ಬೆಂಬಲ ಪಡೆ’ಗಳನ್ನು  (‘ರಾಪಿಡ್  ಸಪೋರ್ಟ್ ಫೋರ್ಸಸ್’ -RSF) ಬೆಂಬಲಿಸುತ್ತಿದೆ ಎಂದು ಆರೋಪಿಸಲಾಗಿದೆ. ಈ ಪಡೆಯು 2023 ರಿಂದ ಸುಡಾನ್ ಸರ್ಕಾರದ ವಿರುದ್ಧ ಹೋರಾಡುತ್ತಿದೆ ಮತ್ತು 2025 ರಲ್ಲಿ ಸಮಾನಾಂತರ ಸರ್ಕಾರವನ್ನು ರಚಿಸಿದೆ. ಪ್ರಸ್ತುತ ಘೋಷಣೆಯು ಸುಡಾನ್ ಸರ್ಕಾರದ ನಿಲುವಿಗೆ ಬೆಂಬಲ ನೀಡಿದೆ ಮತ್ತು ನಾಗರಿಕರ ಮೇಲಿನ ದೌರ್ಜನ್ಯಗಳನ್ನು ಖಂಡಿಸಿದೆ.
    • ಸೋಮಾಲಿಯಾ:- ಇಸ್ರೇಲ್ ಮಾತ್ರ ಸೋಮಾಲಿಲ್ಯಾಂಡ್ ಅನ್ನು ಪ್ರತ್ಯೇಕವೆಂದು ಗುರುತಿಸುತ್ತದೆ; 2025 ರಲ್ಲಿ ಯುಎಇ ಸೋಮಾಲಿಲ್ಯಾಂಡ್ ಪಾಸ್‌ಪೋರ್ಟ್‌ಗಳಿಗೆ ಮಾನ್ಯತೆ ನೀಡಿರುವುದು ಅರಬ್ ಲೀಗ್‌ನ ಒಮ್ಮತದ ನಿಲುವಿನಿಂದ ಭಿನ್ನವಾಗಿದೆ. ಭಾರತವು ಈ ಮಾನ್ಯತೆಯನ್ನು ದೃಢವಾಗಿ ತಿರಸ್ಕರಿಸಿದೆ ಮತ್ತು ಸೋಮಾಲಿಯಾದ ಪ್ರಾದೇಶಿಕ ಸಮಗ್ರತೆಯನ್ನು ಬೆಂಬಲಿಸಿದೆ.
    • ಯೆಮೆನ್:- ‘ಕೆಂಪು ಸಮುದ್ರ’ದಲ್ಲಿ ಹೌತಿ ಬಂಡುಕೋರರು ನಡೆಸುತ್ತಿರುವ ದಾಳಿಯನ್ನು ಭಾರತ ಮತ್ತು ಅರಬ್ ಲೀಗ್ ಸ್ಪಷ್ಟವಾಗಿ ಖಂಡಿಸಿವೆ. 2023 ರ ನಂತರದ ಅವಧಿಯಲ್ಲಿ ಭಾರತವು ಬಳಸುತ್ತಿದ್ದ ಪರೋಕ್ಷ ಭಾಷಾ ಪ್ರಯೋಗದಿಂದ ಇದೀಗ ಉಂಟಾಗಿರುವ ಬದಲಾವಣೆಯನ್ನು ಇದು ಸೂಚಿಸುತ್ತದೆ.
    • ಯೆಮೆನ್‌ನ ಏಕತೆಗೆ ಬೆಂಬಲ ನೀಡುವುದು, ಯುಎಇ ಬೆಂಬಲಿತ ‘ಸದರ್ನ್ ಟ್ರಾನ್ಸಿಷನಲ್ ಕೌನ್ಸಿಲ್’ ನ ವಿರುದ್ಧ ಸೌದಿ ಅರೇಬಿಯಾ ಕೈಗೊಂಡಿರುವ ಕ್ರಮಗಳಿಗೆ ಅನುಗುಣವಾಗಿದೆ.

    ಜ್ಞಾನ ಭಾರತಂ

    ಸಂಸ್ಕೃತಿ

    ಇದೀಗ ಸುದ್ದಿಯಲ್ಲಿದೆ:

    • ಜ್ಞಾನ ಭಾರತಂ ಉಪಕ್ರಮದ ಅಡಿಯಲ್ಲಿ 7.5 ಲಕ್ಷಕ್ಕೂ ಹೆಚ್ಚು ಹಸ್ತಪ್ರತಿಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಈ ಪೈಕಿ 1.29 ಲಕ್ಷ ಹಸ್ತಪ್ರತಿಗಳು ಜ್ಞಾನ ಭಾರತಂ ಪೋರ್ಟಲ್‌ನಲ್ಲಿ ಲಭ್ಯವಿವೆ.

    ಜ್ಞಾನ ಭಾರತಂ ಅಭಿಯಾನದ ಬಗ್ಗೆ:

    • ಗುರಿ:- ದೇಶಾದ್ಯಂತ ಕಂಡುಬರುವ ಹಸ್ತಪ್ರತಿಗಳನ್ನು ಸಂರಕ್ಷಿಸುವುದು ಮತ್ತು ರಕ್ಷಿಸುವುದು.
    • ಧ್ಯೇಯೋದ್ದೇಶ:- ಶೈಕ್ಷಣಿಕ ಸಂಸ್ಥೆ, ವಸ್ತುಸಂಗ್ರಹಾಲಯ, ಗ್ರಂಥಾಲಯ ಇತ್ಯಾದಿಗಳಲ್ಲಿ ಲಭ್ಯವಿರುವ ಒಂದು ಕೋಟಿಗೂ ಹೆಚ್ಚು ಹಸ್ತಪ್ರತಿ ಸಂಪತ್ತಿನ “ಸಮೀಕ್ಷೆ, ದಾಖಲೀಕರಣ ಮತ್ತು ಸಂರಕ್ಷಣೆ”ಯನ್ನು ಕೈಗೊಳ್ಳುವುದು.
    • ಅಭಿಯಾನದ ಮಹತ್ವ:- ಐತಿಹಾಸಿಕ ಮೌಲ್ಯವನ್ನು ಕಾಪಾಡುವುದು, ಪ್ರಾಚೀನ ಭಾರತೀಯ ಜ್ಞಾನವನ್ನು ಜಗತ್ತಿಗೆ ಅನಾವರಣಗೊಳಿಸುವುದು, ಹಸ್ತಪ್ರತಿಗಳ ದೀರ್ಘಕಾಲೀನ ಉಳಿವಿಕೆ ಮತ್ತು ದಿನದ 24 ಗಂಟೆಯೂ ಪ್ರವೇಶಾವಕಾಶವನ್ನು ಖಚಿತಪಡಿಸುವುದು ಇತ್ಯಾದಿಗಳನ್ನು ಇದು ಒಳಗೊಂಡಿದೆ.

    ಹಸ್ತಪ್ರತಿಗಳ ಬಗ್ಗೆ:

    • ಕೈಬರಹದ ರಚನೆ:- ಹಸ್ತಪ್ರತಿಯು ಕಾಗದ, ಮರದ ತೊಗಟೆ, ತಾಳೆಗರಿ ಇತ್ಯಾದಿಗಳ ಮೇಲಿನ ಕೈಬರಹದ ರಚನೆಯಾಗಿದ್ದು, ಇದು ಕನಿಷ್ಠ 75 ವರ್ಷಗಳಷ್ಟು ಹಳೆಯದಾಗಿರುತ್ತದೆ ಮತ್ತು ಗಮನಾರ್ಹ ವೈಜ್ಞಾನಿಕ, ಐತಿಹಾಸಿಕ ಅಥವಾ ಸೌಂದರ್ಯಾತ್ಮಕ ಮೌಲ್ಯವನ್ನು ಹೊಂದಿರುತ್ತದೆ.
    • ಉದಾಹರಣೆ:- ಭೂರ್ಜ ಮರದ ತೊಗಟೆಯ ಮೇಲೆ ಬರೆಯಲಾದ ಪ್ರಾಚೀನ ಭಾರತದ ಗಣಿತ ಗ್ರಂಥವಾದ ‘ಬಖ್ಶಾಲೀ ಹಸ್ತಪ್ರತಿ’ಯು (ಕ್ರಿ.ಶ. 3 ನೇ ಅಥವಾ 4 ನೇ ಶತಮಾನ), ಸೊನ್ನೆಯ (ಶೂನ್ಯದ) ಬಳಕೆಯ ಅತ್ಯಂತ ಹಳೆಯ ದಾಖಲಿತ ಉದಾಹರಣೆ ಎಂದು ಪರಿಗಣಿಸಲಾಗಿದೆ.
    • ಭಾರತವು ಬ್ರಾಹ್ಮಿ, ಕುಶಾನ್, ಗೌಡಿ, ಲೆಪ್ಚಾ ಮತ್ತು ಮೈಥಿಲಿಯಂತಹ 80 ಪ್ರಾಚೀನ ಲಿಪಿಗಳಲ್ಲಿ ಅಂದಾಜು 10 ದಶಲಕ್ಷ ಹಸ್ತಪ್ರತಿಗಳನ್ನು ಹೊಂದಿದೆ.

    ಭಾರತದಲ್ಲಿ ಹಸ್ತಪ್ರತಿ ಸಂರಕ್ಷಣೆಗಾಗಿ ಇರುವ ಇತರ ಉಪಕ್ರಮಗಳು:

    • ರಾಷ್ಟ್ರೀಯ ಹಸ್ತಪ್ರತಿ ಅಭಿಯಾನ (NMM):- ಹಸ್ತಪ್ರತಿಗಳನ್ನು ಪತ್ತೆಹಚ್ಚಲು ಮತ್ತು ಸಂರಕ್ಷಿಸಲು ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವಾಲಯವು 2003 ರಲ್ಲಿ ಇದನ್ನು ಪ್ರಾರಂಭಿಸಿತು.
    • ಭಾರತೀಯ ರಾಷ್ಟ್ರೀಯ ಗ್ರಂಥಾಲಯ, ಕೋಲ್ಕತ್ತಾ:- ಈ ಗ್ರಂಥಾಲಯವು ಸುಮಾರು 3600 ಅಪರೂಪದ ಮತ್ತು ಐತಿಹಾಸಿಕವಾಗಿ ಪ್ರಮುಖವಾದ ಹಸ್ತಪ್ರತಿಗಳನ್ನು ಹೊಂದಿದೆ.
    • ಬಂಗಾಳದ ಏಷ್ಯಾಟಿಕ್ ಸೊಸೈಟಿ:- ಸರ್ ವಿಲಿಯಂ ಜೋನ್ಸ್ ಅವರಿಂದ 1784 ರ ಜನವರಿ 15 ರಂದು ಸ್ಥಾಪಿಸಲ್ಪಟ್ಟ ಈ ಸಂಸ್ಥೆಯು, ಪ್ರಾಚೀನ ಹಸ್ತಪ್ರತಿಗಳ ಡಿಜಿಟಲೀಕರಣ ಕಾರ್ಯವನ್ನು ಕೈಗೊಳ್ಳುತ್ತದೆ.

    ರಾಷ್ಟ್ರೀಯ ಭಾವೈಕ್ಯತೆ ಪರಿಷತ್ತು

    ಆಡಳಿತ

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚಿಗೆ, ರಾಜ್ಯಸಭೆಯ ಶೂನ್ಯ ವೇಳೆಯಲ್ಲಿ, ರಾಷ್ಟ್ರೀಯ ಭಾವೈಕ್ಯತೆ ಪರಿಷತ್ತಿಗೆ ಪುನಶ್ಚೇತನ ನೀಡಬೇಕೆಂಬ ಆಗ್ರಹ ವ್ಯಕ್ತವಾಯಿತು.

    ರಾಷ್ಟ್ರೀಯ ಭಾವೈಕ್ಯತೆ ಪರಿಷತ್ತಿನ ಬಗ್ಗೆ:

    • ಸ್ಥಾಪನೆ:- 1961
    • ಉದ್ದೇಶ:- ರಾಷ್ಟ್ರೀಯ ಭಾವೈಕ್ಯತೆ, ಕೋಮು ಸೌಹಾರ್ದತೆ ಮತ್ತು ವೈವಿಧ್ಯತೆಯಲ್ಲಿ ಏಕತೆಯನ್ನು ಉತ್ತೇಜಿಸುವುದು ಹಾಗೂ ದೇಶದ ಸಾಮಾಜಿಕ ಒಗ್ಗಟ್ಟಿಗೆ ಧಕ್ಕೆ ತರುವ ಸಮಸ್ಯೆಗಳನ್ನು ಪರಿಹರಿಸುವುದು.
    • ರಚನೆ:- ಕೇಂದ್ರ ಸಚಿವರು, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು, ಪ್ರಮುಖ ರಾಜಕೀಯ ಪಕ್ಷಗಳ ನಾಯಕರು, ಗಣ್ಯ ಸಾರ್ವಜನಿಕ ವ್ಯಕ್ತಿಗಳು, ಚಿಂತಕರು ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳನ್ನು ಈ ಪರಿಷತ್ತು ಒಳಗೊಂಡಿರುತ್ತದೆ.
    • ಪ್ರಮುಖ ಕಾರ್ಯಗಳು:
      • ಚರ್ಚೆ ಮತ್ತು ಶಿಫಾರಸು:- ಇದು ಕೋಮುವಾದ, ಜಾತಿವಾದ, ಪ್ರಾದೇಶಿಕವಾದ, ಪ್ರತ್ಯೇಕತಾವಾದ ಮತ್ತು ಉಗ್ರವಾದವನ್ನು ಎದುರಿಸಲು ಕ್ರಮಗಳನ್ನು ಚರ್ಚಿಸುತ್ತದೆ ಮತ್ತು ಶಿಫಾರಸು ಮಾಡುತ್ತದೆ.
      • ನೀತಿಗಳ ಕುರಿತು ಸರ್ಕಾರಕ್ಕೆ ಸಲಹೆ:- ಸಾಂವಿಧಾನಿಕ ಮೌಲ್ಯಗಳು, ಜಾತ್ಯತೀತತೆ ಮತ್ತು ಸಾಮಾಜಿಕ ಸೌಹಾರ್ದತೆಯನ್ನು ಬಲಪಡಿಸುವ ನೀತಿಗಳ ಕುರಿತು ಇದು ಸರ್ಕಾರಕ್ಕೆ ಸಲಹೆ ನೀಡುತ್ತದೆ.
      • ಒಮ್ಮತ ಮೂಡಿಸುವ ಒಂದು ವೇದಿಕೆ:- ಸೂಕ್ಷ್ಮ ರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಒಮ್ಮತ ಮೂಡಿಸಲು ಇದು ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.
    • ಸಲಹಾ ಸಂಸ್ಥೆಯಾಗಿದೆ:- ಇದು ಶಾಸನಬದ್ಧ ಅಥವಾ ಸಂವಿಧಾನಾತ್ಮಕ ಸಂಸ್ಥೆಯಲ್ಲ.
    • ಇದರ ಶಿಫಾರಸುಗಳು ಸರ್ಕಾರದ ಮೇಲೆ ಕಡ್ಡಾಯವಾಗಿರುವುದಿಲ್ಲ.
    • ಸಭೆಗಳು ನಿಯಮಿತವಾಗಿ ನಡೆಯುವುದಿಲ್ಲ:- ರಾಷ್ಟ್ರೀಯ ಸಂದರ್ಭಗಳಿಗೆ ಅನುಗುಣವಾಗಿ ಅಗತ್ಯವಿದ್ದಾಗ ಸಭೆಯನ್ನು ಕರೆಯಲಾಗುತ್ತದೆ.
    • ರಾಷ್ಟ್ರೀಯ ಭಾವೈಕ್ಯತಾ ಪರಿಷತ್ತು 2013 ರಿಂದ ಯಾವುದೇ ಸಭೆಯನ್ನು ನಡೆಸಿಲ್ಲ.

    ಭಾರತ್-ವಿಸ್ತಾರ್ (Bharat-VISTAAR)

    ಆಡಳಿತ,ಕೃಷಿ

    ಇದೀಗ ಸುದ್ದಿಯಲ್ಲಿದೆ: 

    • 2026-27 ರ ಕೇಂದ್ರ ಮುಂಗಡ ಪತ್ರದಲ್ಲಿ ‘ಭಾರತ್-ವಿಸ್ತಾರ್’ (Bharat-VISTAAR – ಕೃಷಿ ಸಂಪನ್ಮೂಲಗಳಿಗೆ ಪ್ರವೇಶಿಸಲು ವಾಸ್ತವಿಕ ಸಂಯೋಜಿತ ವ್ಯವಸ್ಥೆ) ಯೋಜನೆಯನ್ನು ಪ್ರಸ್ತಾಪಿಸಲಾಗಿದೆ.

    ಭಾರತ್-ವಿಸ್ತಾರ್ (Bharat-VISTAAR) ವ್ಯವಸ್ಥೆಯ ಬಗ್ಗೆ:

    • Bharat-VISTAAR ಸಂಪೂರ್ಣ ರೂಪ:- ವರ್ಚುವಲ್ಲಿ ಇಂಟೆಗ್ರಟೆಡ್ ಸಿಸ್ಟಮ್ ಟು ಅಕ್ಸಸ್ ಅಗ್ರಿಕಲ್ಚರಲ್ ರೆಸೊರ್ಸ್ಸ್ (ಕೃಷಿ ಸಂಪನ್ಮೂಲಗಳಿಗೆ ಪ್ರವೇಶಿಸಲು ವಾಸ್ತವಿಕ ಸಂಯೋಜಿತ ವ್ಯವಸ್ಥೆ).
    • ಬಹುಭಾಷಾ ಎಐ (AI) ಸಾಧನ:- ರೈತರಿಗೆ ಈ ಕೆಳಗಿನವುಗಳ ಕುರಿತು ಅವರ ಸ್ವಂತ ಭಾಷೆಯಲ್ಲಿಯೇ ಮಾಹಿತಿಯನ್ನು ಒದಗಿಸುವ ಗುರಿಯನ್ನು ಹೊಂದಿದೆ.
    • ಬೆಳೆ ಯೋಜನೆ, ಸಾಗುವಳಿ ಕ್ರಮಗಳ ಪ್ಯಾಕೇಜ್ ಮತ್ತು ಕೀಟಬಾಧೆ, ಹವಾಮಾನ ಮುನ್ಸೂಚನೆ, ಮಾರುಕಟ್ಟೆಗಳು, ಯೋಜನೆಯ ಮಾಹಿತಿ, ಅರ್ಹತೆ, ಅರ್ಜಿ ಸಲ್ಲಿಕೆ ಮತ್ತು ಕುಂದುಕೊರತೆ. 
    • ಇದು ‘ಅಗ್ರಿ-ಸ್ಟಾಕ್’ (AgriStack) ಪೋರ್ಟಲ್‌ಗಳು ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR)ಯ ಕೃಷಿ ಪದ್ಧತಿಗಳ ಪ್ಯಾಕೇಜ್ ಅನ್ನು AI ವ್ಯವಸ್ಥೆಗಳೊಂದಿಗೆ ಸಂಯೋಜಿಸಲಿದೆ.
    • ಮಹತ್ವ:- ಇದು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲಿದೆ, ರೈತರು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡಲಿದೆ ಮತ್ತು ರೈತರಿಗೆ ವೈಯಕ್ತೀಕರಿಸಿದ ಸಲಹಾ ಬೆಂಬಲವನ್ನು ನೀಡುವ ಮೂಲಕ ಅಪಾಯವನ್ನು ಕಡಿಮೆ ಮಾಡಲಿದೆ.
    • ಹಣಕಾಸು ಸಚಿವರು ಮುಂದಿನ ಆರ್ಥಿಕ ವರ್ಷಕ್ಕೆ (2026-27) ಭಾರತ್-ವಿಸ್ತಾರ್‌ ಯೋಜನೆಗಾಗಿ ₹ 150 ಕೋಟಿ ರೂ.ಗಳನ್ನು ಹಂಚಿಕೆ ಮಾಡಿದ್ದಾರೆ.

    ಗೋಬರ್ಧನ್ ಯೋಜನೆ

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ: 

    • ‘ಗೋಬರ್ಧನ್ ಯೋಜನೆ’ಯು ಉದ್ಯೋಗ ಸೃಷ್ಟಿ, ರೈತರ ಆದಾಯ ಹೆಚ್ಚಳ, ಗೊಬ್ಬರ ಮತ್ತು ಜೈವಿಕ ಇಂಧನ ಪೂರೈಕೆ ಸರಪಳಿಯ ಅಭಿವೃದ್ಧಿ ಹಾಗೂ ಗ್ರಾಮೀಣ ಮೂಲಸೌಕರ್ಯಕ್ಕೆ ಬೆಂಬಲ ನೀಡುವ ಮೂಲಕ ಗ್ರಾಮೀಣ ಆರ್ಥಿಕತೆಗೆ ಮಹತ್ತರವಾದ ಕೊಡುಗೆ ನೀಡುತ್ತಿದೆ.

    ‘ಸಾವಯವ ಜೈವಿಕ-ಕೃಷಿ ಸಂಪನ್ಮೂಲಗಳ ಸಂವರ್ಧನೆ ಮತ್ತು ಧನ್ (GOBARdhan) ಯೋಜನೆ’ಯ ಬಗ್ಗೆ:

    • GOBARdhan ಸಂಪೂರ್ಣ ರೂಪ:- ಗ್ಯಾಲ್ವನೈಸಿಂಗ್ ಆರ್ಗಾನಿಕ್ ಬಯೋ – ಆಗ್ರೋ ರೆಸೊರ್ಸ್ಸ್ ಧನ್.
    • ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಅಡಿಯಲ್ಲಿ ಇದನ್ನು 2018 ರಲ್ಲಿ ಪ್ರಾರಂಭಿಸಲಾಯಿತು.
    • ಉದ್ದೇಶ:- ಹಳ್ಳಿಗಳ ನೈರ್ಮಲ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವುದು ಮತ್ತು ಜಾನುವಾರು ಹಾಗೂ ಸಾವಯವ ತ್ಯಾಜ್ಯದಿಂದ ಸಂಪತ್ತು ಮತ್ತು ಇಂಧನವನ್ನು ಉತ್ಪಾದಿಸುವುದು.
    • ಮಹತ್ವ:- ಹಳ್ಳಿಗಳನ್ನು ಸ್ವಚ್ಛವಾಗಿಡುವುದು, ಗ್ರಾಮೀಣ ಕುಟುಂಬಗಳ ಆದಾಯವನ್ನು ಹೆಚ್ಚಿಸುವುದು ಮತ್ತು ಜಾನುವಾರುಗಳ ತ್ಯಾಜ್ಯದಿಂದ ಶಕ್ತಿ ಹಾಗೂ ಸಾವಯವ ಗೊಬ್ಬರವನ್ನು ಉತ್ಪಾದಿಸುವುದು.