Blog

  • ಅಭಿಜ್ಞಾನ್ ಆ್ಯಪ್ (Abhigyan App) | ಪಾದಚಾರಿ ಮಾರ್ಗದಲ್ಲಿ ನಡೆಯುವ ಹಕ್ಕು ಒಂದು ಮೂಲಭೂತ ಹಕ್ಕು: SC | ಜಾಗತಿಕ ಶಕ್ತಿ ಪರಿವರ್ತನೆ (ಇಂಧನ ಸ್ಥಿತ್ಯಂತರ) ಸೂಚ್ಯಂಕ (ETI) 2026 | ಹಣಕಾಸು ಕ್ರಿಯಾ ಕಾರ್ಯಪಡೆ (FATF) | ಬೆಳೆ ಇಳುವರಿ ಹೆಚ್ಚಿಸಲು ಸ್ಮಾರ್ಟ್ ಬೀಜ ಲೇಪನ ತಂತ್ರಜ್ಞಾನ

    ಅಭಿಜ್ಞಾನ್ ಆ್ಯಪ್ (Abhigyan App)

    ರಾಜಕೀಯ ಮತ್ತು ಆಡಳಿತ

    ಇದೀಗ ಸುದ್ದಿಯಲ್ಲಿ:

    • ಕೇಂದ್ರ ಗೃಹ ಸಚಿವರು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಅಭಿವೃದ್ಧಿಪಡಿಸಿರುವ ‘ಅಭಿಜ್ಞಾನ್’ ಆ್ಯಪ್’ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ.

    ಅಭಿಜ್ಞಾನ್ ಆ್ಯಪ್ ಬಗ್ಗೆ: 

    • ಈ ಆ್ಯಪ್ ಆರೋಪಿಗಳು, ಅಪರಾಧಿಗಳು ಮತ್ತು ಜೈಲಿನಲ್ಲಿರುವ ಕೈದಿಗಳ ಬೆರಳಚ್ಚು ಸ್ಕ್ಯಾನ್‌ಗಳನ್ನು ಕೇಂದ್ರೀಕೃತ ಪ್ಲ್ಯಾಟ್ ಫಾರ್ಮ್ ನಲ್ಲಿ ಸಂಗ್ರಹಿಸಲು ರಾಷ್ಟ್ರೀಯ ಸ್ವಯಂಚಾಲಿತ ಬೆರಳಚ್ಚು ಗುರುತಿಸುವಿಕೆ ವ್ಯವಸ್ಥೆ (National Automated Fingerprint Identification System – NAFIS) ಯೊಂದಿಗೆ ಸಂಪರ್ಕವನ್ನು ಕಲ್ಪಿಸುತ್ತದೆ.

    • ಸಂಗ್ರಹಿಸಲಾದ ಈ ಬೆರಳಚ್ಚು ಮಾಹಿತಿಯನ್ನು ಕೇವಲ 35 ಸೆಕೆಂಡುಗಳಲ್ಲಿ NAFIS ದತ್ತಾಂಶದೊಂದಿಗೆ ಹೋಲಿಕೆ ಮಾಡಿ ಅತ್ಯಂತ ವೇಗವಾಗಿ ಪರಿಶೀಲಿಸಬಹುದಾಗಿದೆ.

    ಪ್ರಾಮುಖ್ಯತೆ

    • ರಸ್ತೆಗಳಲ್ಲಿ ನಡೆಸಲಾಗುವ ನಿಯಮಿತ ವಾಹನ ತಪಾಸಣೆಯ ಸಂದರ್ಭದಲ್ಲಿ, ಯಾವುದೇ ಶಂಕಿತ ವ್ಯಕ್ತಿಯ ಬಯೋಮೆಟ್ರಿಕ್ ಸ್ಕ್ಯಾನ್ ನಡೆಸುವ ಮೂಲಕ ವಿವಿಧ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ಕಾನೂನು ಜಾರಿ ಸಂಸ್ಥೆಗಳಿಗೆ ಬೇಕಾಗಿರುವ ವ್ಯಕ್ತಿಗಳನ್ನು ತಕ್ಷಣವೇ ಗುರುತಿಸಲು ಈ ತಂತ್ರಜ್ಞಾನವು ನೆರವಾಗುತ್ತದೆ.

    ಪಾದಚಾರಿ ಮಾರ್ಗದಲ್ಲಿ ನಡೆಯುವ ಹಕ್ಕು ಒಂದು ಮೂಲಭೂತ ಹಕ್ಕು: SC

    ರಾಜಕೀಯ

    ಇದೀಗ ಸುದ್ದಿಯಲ್ಲಿ: 

    • ಇತ್ತೀಚಿನ ಒಂದು ಐತಿಹಾಸಿಕ ತೀರ್ಪಿನಲ್ಲಿ, ಸುರಕ್ಷಿತ ಮತ್ತು ನಿರ್ದಿಷ್ಟಪಡಿಸಿದ ಪಾದಚಾರಿ ಮಾರ್ಗಗಳ (Footpaths) ಮೇಲೆ ನಡೆಯುವ ಹಕ್ಕು ಒಂದು ಮೂಲಭೂತ ಹಕ್ಕು (Fundamental right) ಎಂದು ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿದೆ.

    ತೀರ್ಪಿನ ಕುರಿತು:

    • ನಡೆಯುವ ಹಕ್ಕು ಸಂವಿಧಾನದ ವಿಧಿ 19(1)(d) (ಸಂಚಾರದ ಸ್ವಾತಂತ್ರ್ಯ – Freedom of movement) ಮತ್ತು ವಿಧಿ 21 (ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು – Right to life and personal liberty) ಅಡಿಯಲ್ಲಿ ಬರುತ್ತದೆ.

    • ನ್ಯಾಯಾಲಯದ ಪ್ರಕಾರ, ನಡೆಯುವ ಹಕ್ಕು ವಿಧಿ 19(1)(a), 19(1)(b) ಮತ್ತು 19(1)(c) ಅಡಿಯಲ್ಲಿ ವಾಕ್ ಸ್ವಾತಂತ್ರ್ಯ, ಸಭೆ ಸೇರುವ ಮತ್ತು ಸಂಘಗಳನ್ನು ರಚಿಸುವ ಸ್ವಾತಂತ್ರ್ಯವನ್ನು ಸಹ ಬೆಂಬಲಿಸುತ್ತದೆ.

    • ಈ ತೀರ್ಪು ಪಾದಚಾರಿ ಮೂಲಸೌಕರ್ಯಗಳನ್ನು ನಿರ್ಮಿಸುವ, ನಿರ್ವಹಿಸುವ ಮತ್ತು ರಕ್ಷಿಸುವ ಜವಾಬ್ದಾರಿಯನ್ನು ಮುನ್ಸಿಪಲ್ ಕಾರ್ಪೊರೇಶನ್‌ಗಳು, ನಗರಾಭಿವೃದ್ಧಿ ಪ್ರಾಧಿಕಾರಗಳು, ಪುರಸಭೆಗಳು ಮತ್ತು ಪಂಚಾಯತ್‌ಗಳ ಮೇಲೆಯೂ ವಿಧಿಸುತ್ತದೆ.

    • ನಗರ ಯೋಜನೆಯಲ್ಲಿ ಮೋಟಾರು ವಾಹನಗಳಿಗಿಂತ ಪಾದಚಾರಿಗಳ ಹಕ್ಕುಗಳಿಗೆ ಆದ್ಯತೆ ನೀಡಬೇಕು ಮತ್ತು ಸುರಕ್ಷಿತ ಹಾಗೂ ಸುಲಭವಾಗಿ ನಿಲುಕುವ ಪಾದಚಾರಿ ಮಾರ್ಗಗಳನ್ನು ಒದಗಿಸದಿದ್ದರೆ ನಾಗರಿಕರು ಕಾನೂನು ಪರಿಹಾರಗಳನ್ನು ಕೋರಬಹುದು ಎಂದು ನ್ಯಾಯಾಲಯವು ಒತ್ತಿಹೇಳಿದೆ.

    ಜಾಗತಿಕ ಶಕ್ತಿ ಪರಿವರ್ತನೆ (ಇಂಧನ ಸ್ಥಿತ್ಯಂತರ) ಸೂಚ್ಯಂಕ (ETI) 2026

    ಸೂಚ್ಯಂಕಗಳು 

    ಇದೀಗ ಸುದ್ದಿಯಲ್ಲಿ:

    • 2025 ರಲ್ಲಿ ಜಾಗತಿಕ ಒಟ್ಟು ಇಂಧನ ಹೂಡಿಕೆಯು  $3.3 ಟ್ರಿಲಿಯನ್ ತಲುಪಿದ್ದರೂ ಸಹ, ಜಾಗತಿಕ ಶಕ್ತಿ ಪರಿವರ್ತನೆಯು ಪರಿಣಾಮಕಾರಿಯಾಗಿ ಸ್ಥಗಿತಗೊಂಡಿದೆ ಎಂದು ಜಾಗತಿಕ ಶಕ್ತಿ ಪರಿವರ್ತನೆ ಸೂಚ್ಯಂಕ (ETI – Energy Transition Index) 2026 ವರದಿ ತಿಳಿಸಿದೆ.

    ಜಾಗತಿಕ ಶಕ್ತಿ ಪರಿವರ್ತನೆ ಸೂಚ್ಯಂಕ (ETI)ದ ಬಗ್ಗೆ

    • ಪ್ರಕಟಣೆ: ಈ ಸೂಚ್ಯಂಕವನ್ನು ವಿಶ್ವ ಆರ್ಥಿಕ ವೇದಿಕೆಯು (WEF) ವಾರ್ಷಿಕವಾಗಿ ಪ್ರಕಟಿಸುತ್ತದೆ.

    • ಉದ್ದೇಶ: ವಿವಿಧ ದೇಶಗಳು ಸುರಕ್ಷಿತ, ಸುಸ್ಥಿರ, ಸಮಾನ ಮತ್ತು ಕೈಗೆಟುಕುವ ಬೆಲೆಯ ಇಂಧನ ವ್ಯವಸ್ಥೆಗಳತ್ತ ಎಷ್ಟು ಪರಿಣಾಮಕಾರಿಯಾಗಿ ಪರಿವರ್ತನೆಯಾಗುತ್ತಿವೆ ಎಂಬುದನ್ನು ಈ ಸೂಚ್ಯಂಕವು ಮೌಲ್ಯಮಾಪನ ಮಾಡುತ್ತದೆ.

    • ಮೌಲ್ಯಮಾಪನ ಮಾನದಂಡಗಳು: ಈ ಸೂಚ್ಯಂಕವು ಎರಡು ಪ್ರಮುಖ ಆಯಾಮಗಳನ್ನು ಆಧರಿಸಿದೆ:

      1. ವ್ಯವಸ್ಥೆಯ ಕಾರ್ಯಕ್ಷಮತೆ: ಇದು ಇಂಧನ ಭದ್ರತೆ, ಸುಸ್ಥಿರತೆ ಮತ್ತು ಸಮಾನತೆಯನ್ನು ಒಳಗೊಂಡಿರುತ್ತದೆ.

      2. ಪರಿವರ್ತನೆಯ ಸಿದ್ಧತೆ: ಇದು ನೀತಿಗಳು, ನಿಯಮಗಳು, ಹೂಡಿಕೆ, ಮೂಲಸೌಕರ್ಯ, ನಾವೀನ್ಯತೆ, ಶಿಕ್ಷಣ ಮತ್ತು ಸಾಂಸ್ಥಿಕ ಬೆಂಬಲವನ್ನು ಒಳಗೊಂಡಿರುತ್ತದೆ.

    • ಮಹತ್ವ: ಈ ಸೂಚ್ಯಂಕವು ಸರ್ಕಾರಗಳು ತಮ್ಮ ಶಕ್ತಿ ಪರಿವರ್ತನೆಯ ಪ್ರಯತ್ನಗಳಲ್ಲಿರುವ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗುರುತಿಸಲು ಸಹಾಯ ಮಾಡುತ್ತದೆ ಹಾಗೂ ನೀತಿ ಸುಧಾರಣೆಗಳಿಗೆ ಸೂಕ್ತ ಮಾರ್ಗದರ್ಶನ ನೀಡುತ್ತದೆ.

    ETI 2026 ರ ಪ್ರಮುಖ ಅವಲೋಕನಗಳು:

    • ಜಾಗತಿಕ ಮಟ್ಟದಲ್ಲಿ ಸ್ವೀಡನ್, ಫಿನ್ಲೆಂಡ್ ಮತ್ತು ಡೆನ್ಮಾರ್ಕ್ ದೇಶಗಳು ಮೊದಲ ಮೂರು ಸ್ಥಾನಗಳನ್ನು ಕಾಯ್ದುಕೊಂಡಿವೆ.

    • ಭಾರತವು ಈ ಸೂಚ್ಯಂಕದಲ್ಲಿ ಎರಡು ಸ್ಥಾನಗಳ ಪ್ರಗತಿ ಸಾಧಿಸುವ ಮೂಲಕ 70 ನೇ ಸ್ಥಾನವನ್ನು ಪಡೆದುಕೊಂಡಿದೆ.

    ಹಣಕಾಸು ಕ್ರಿಯಾ ಕಾರ್ಯಪಡೆ (FATF)

    ಅಂತರರಾಷ್ಟ್ರೀಯ

    ಇದೀಗ ಸುದ್ದಿಯಲ್ಲಿ:

    • ಹಣಕಾಸು ಕ್ರಿಯಾ ಕಾರ್ಯಪಡೆಯ (Financial Action Task Force – FATF) ಸಮಗ್ರ ಅಧಿವೇಶನವು ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ವಿವೇಕ್ ಅಗರ್‌ವಾಲ್ ಅವರನ್ನು ತನ್ನ ಮುಂದಿನ ಉಪಾಧ್ಯಕ್ಷರನ್ನಾಗಿ ನೇಮಿಸಿದೆ.

    • ಇದೆ ಮೊದಲ ಬಾರಿಗೆ ಭಾರತವು FATF ನ ಉಪಾಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳುತ್ತಿದೆ.

    • ಇವರು ಜುಲೈ 2026 ರಿಂದ ಜೂನ್ 2027 ರವರೆಗೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಲಿದ್ದಾರೆ.

    ಹಣಕಾಸು ಕ್ರಿಯಾ ಕಾರ್ಯಪಡೆ (FATF)ಯ ಬಗ್ಗೆ: 

    • ಸ್ಥಾಪನೆ: ಹಣಕಾಸು ಕ್ರಿಯಾ ಕಾರ್ಯಪಡೆಯು (FATF) 1989 ರಲ್ಲಿ ಪ್ಯಾರಿಸ್‌ನಲ್ಲಿ ನಡೆದ G7 ಶೃಂಗಸಭೆಯಲ್ಲಿ ಸ್ಥಾಪಿಸಲಾದ ಅಂತರ್-ಸರ್ಕಾರಿ ಸಂಸ್ಥೆಯಾಗಿದೆ.

    • ಉದ್ದೇಶ: ಅಕ್ರಮ ಹಣ ವರ್ಗಾವಣೆ (Money laundering), ಭಯೋತ್ಪಾದನೆಗೆ ಹಣಕಾಸು ಒದಗಿಸುವಿಕೆ (Terrorist financing) ಮತ್ತು ಅಂತರರಾಷ್ಟ್ರೀಯ ಹಣಕಾಸು ವ್ಯವಸ್ಥೆಯ ಸಮಗ್ರತೆಗೆ ಇರುವ ಇತರ ಸಂಬಂಧಿತ ಬೆದರಿಕೆಗಳನ್ನು ಎದುರಿಸಲು ಕಾನೂನು, ನಿಯಂತ್ರಣ ಮತ್ತು ಕಾರ್ಯಾಚರಣೆಯ ಕ್ರಮಗಳನ್ನು ರೂಪಿಸುವುದು ಹಾಗೂ ಅವುಗಳ ಪರಿಣಾಮಕಾರಿ ಅನುಷ್ಠಾನವನ್ನು ಉತ್ತೇಜಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

    • ಸಚಿವಾಲಯ: ಇದರ ಸಚಿವಾಲಯವು ಪ್ಯಾರಿಸ್‌ನಲ್ಲಿರುವ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆಯ (OECD) ಪ್ರಧಾನ ಕಚೇರಿಯಲ್ಲಿದೆ.

    • ಸದಸ್ಯ ರಾಷ್ಟ್ರಗಳು: ಪ್ರಸ್ತುತ FATF 40 ಸದಸ್ಯರನ್ನು ಹೊಂದಿದ್ದು, ಭಾರತವು ಸಹ ಇದರ ಸಕ್ರಿಯ ಸದಸ್ಯ ರಾಷ್ಟ್ರವಾಗಿದೆ.

    FATF ನ ಪ್ರಮುಖ ಪಟ್ಟಿಗಳು: 

    • ಬೂದು ಪಟ್ಟಿ (Grey List): ಭಯೋತ್ಪಾದನೆಗೆ ಹಣಕಾಸು ನೆರವು ಮತ್ತು ಅಕ್ರಮ ಹಣ ವರ್ಗಾವಣೆಗೆ ಸುರಕ್ಷಿತ ತಾಣವೆಂದು ಪರಿಗಣಿಸಲಾದ ದೇಶಗಳನ್ನು FATF ನ ಬೂದು ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಇದು ಭವಿಷ್ಯದಲ್ಲಿ ಆ ದೇಶ ಕಪ್ಪು ಪಟ್ಟಿಗೆ ಸೇರುವ ಎಚ್ಚರಿಕೆಯ ಸಂಕೇತವಾಗಿದೆ.

    • ಕಪ್ಪು ಪಟ್ಟಿ (Black List): ಸಹಕಾರೇತರ ದೇಶಗಳು ಅಥವಾ ಪ್ರಾಂತ್ಯಗಳನ್ನು (NCCTs) ಕಪ್ಪು ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಈ ದೇಶಗಳು ಭಯೋತ್ಪಾದಕ ನಿಧಿ ಮತ್ತು ಅಕ್ರಮ ಹಣ ವರ್ಗಾವಣೆ ಚಟುವಟಿಕೆಗಳನ್ನು ಸಕ್ರಿಯವಾಗಿ ಬೆಂಬಲಿಸುತ್ತವೆ. FATF ಈ ಪಟ್ಟಿಯನ್ನು ನಿಯಮಿತವಾಗಿ ಪರಿಷ್ಕರಿಸುತ್ತದೆ.

    ಬೆಳೆ ಇಳುವರಿ ಹೆಚ್ಚಿಸಲು ಸ್ಮಾರ್ಟ್ ಬೀಜ ಲೇಪನ ತಂತ್ರಜ್ಞಾನ

    ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿ:

    • ಹೈದರಾಬಾದ್‌ನಲ್ಲಿರುವ ಭಾರತೀಯ ಕೃಷಿ ಅನುಸಂಧಾನ ಮಂಡಳಿಯ – ಭಾರತೀಯ ಎಣ್ಣೆಬೀಜಗಳ ಸಂಶೋಧನಾ ಸಂಸ್ಥೆಯು (ICAR-IIOR), ಬೀಜಗಳ ಗುಣಮಟ್ಟವನ್ನು ಸುಧಾರಿಸುವ ಸ್ಮಾರ್ಟ್ ಬೀಜ ಲೇಪನ ತಂತ್ರಜ್ಞಾನವನ್ನು (Smart Seed Coating Technology) ಅಭಿವೃದ್ಧಿಪಡಿಸಿದೆ.

    ಸ್ಮಾರ್ಟ್ ಬೀಜ ಲೇಪನ ತಂತ್ರಜ್ಞಾನದ ಬಗ್ಗೆ

    • ಅಭಿವೃದ್ಧಿಪಡಿಸಿದವರು: ICAR-IIOR ಸಂಸ್ಥೆ

    • ಈ ತಂತ್ರಜ್ಞಾನವು ಜೈವಿಕ ವಿಘಟನೀಯ ಬಯೋಪಾಲಿಮರಿಕ್ ವಸ್ತುಗಳನ್ನು ಬಳಸಿಕೊಂಡು ಬೀಜಗಳ ಸುತ್ತ ಬಹುಕ್ರಿಯಾತ್ಮಕ ರಕ್ಷಣಾತ್ಮಕ ಪದರವನ್ನು ಸೃಷ್ಟಿಸುತ್ತದೆ.

    • ಈ ಲೇಪನವು ಪ್ರಯೋಜನಕಾರಿ ಸೂಕ್ಷ್ಮಾಣುಜೀವಿಗಳು, ಪೋಷಕಾಂಶಗಳು, ಸೂಕ್ಷ್ಮ ಪೋಷಕಾಂಶಗಳು, ಬೆಳೆ ಸಂರಕ್ಷಣಾ ಕಾರಕಗಳು ಮತ್ತು ಸಸ್ಯ ಬೆಳವಣಿಗೆಯನ್ನು ಉತ್ತೇಜಿಸುವ ಸಂಯುಕ್ತಗಳನ್ನು ನೇರವಾಗಿ ಬೀಜ-ಮಣ್ಣಿನ ಸಂಪರ್ಕ ಪ್ರದೇಶಕ್ಕೆ ತಲುಪಿಸುವ ವಾಹಕ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.

    • ಈ ರಕ್ಷಣಾತ್ಮಕ ಸೂಕ್ಷ್ಮ-ಪರಿಸರವು ತ್ವರಿತ ಮೊಳಕೆಯೊಡೆಯುವಿಕೆಗೆ, ಸಸಿಗಳ ದೃಢವಾದ ಬೆಳವಣಿಗೆ, ವರ್ಧಿತ ಬೇರುಗಳ ಅಭಿವೃದ್ಧಿ ಮತ್ತು ಬೆಳೆ ಬೆಳವಣಿಗೆಯ ನಿರ್ಣಾಯಕ ಹಂತದಲ್ಲಿ ಪರಿಸರದ ಒತ್ತಡಗಳನ್ನು ತಡೆದುಕೊಳ್ಳುವ ಸುಧಾರಿತ ಸಹಿಷ್ಣುತೆಗೆ ಉತ್ತೇಜನ ನೀಡುತ್ತದೆ.

    • ಮಳೆಯಾಶ್ರಿತ ಕೃಷಿಗೆ ಈ ಆವಿಷ್ಕಾರವು ಅತ್ಯಂತ ಮೌಲ್ಯಯುತವಾಗಿದೆ; ಏಕೆಂದರೆ ಮಳೆಯಾಶ್ರಿತ ಪ್ರದೇಶವು ಭಾರತದ ಕೃಷಿ ಭೂಮಿಯ ಗಮನಾರ್ಹ ಪಾಲನ್ನು ಹೊಂದಿದ್ದು, ವಿಳಂಬವಾದ ಮುಂಗಾರಿನಿಂದ (ಮಾನ್ಸೂನ್) ತೀವ್ರವಾಗಿ ಬಾಧಿತವಾಗುತ್ತದೆ.

  • ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಸಪ್ರಶ್ನೆ – ಜೂನ್ 20, 2026

    ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಸಪ್ರಶ್ನೆ – ಜೂನ್ 20, 2026

  • ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಚಲಿತ ವಿದ್ಯಮಾನಗಳ ಬಹು ಆಯ್ಕೆ ಪ್ರಶ್ನೆಗಳು (MCQs)

    ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಚಲಿತ ವಿದ್ಯಮಾನಗಳ ಬಹು ಆಯ್ಕೆ ಪ್ರಶ್ನೆಗಳು (MCQs)

    1. ಅಭಿಜ್ಞಾನ್ ಅಪ್ಲಿಕೇಶನ್‌ಗೆ (Abhigyan App) ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಇದನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಅಭಿವೃದ್ಧಿಪಡಿಸಿದೆ.
    2. ಇದನ್ನು ರಾಷ್ಟ್ರೀಯ ಸ್ವಯಂಚಾಲಿತ ಬೆರಳಚ್ಚು ಗುರುತಿಸುವಿಕೆ ವ್ಯವಸ್ಥೆಯೊಂದಿಗೆ (NAFIS) ಸಂಯೋಜಿಸಲಾಗಿದೆ.
    3. ಇದು ವಿಕೇಂದ್ರೀಕೃತ ಪ್ಲ್ಯಾಟ್ ಫಾರ್ಮ್ ನಲ್ಲಿ  ಬೆರಳಚ್ಚು ಸ್ಕ್ಯಾನ್‌ಗಳನ್ನು ಸಂಗ್ರಹಿಸುತ್ತದೆ.
      ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿ?
      A) 1 ಮತ್ತು 2 ಮಾತ್ರ
      B) 2 ಮತ್ತು 3 ಮಾತ್ರ
      C) 1 ಮತ್ತು 3 ಮಾತ್ರ
      D) 1, 2 ಮತ್ತು 3
      ಉತ್ತರ: A


    2. ಸುರಕ್ಷಿತ ಮತ್ತು ಗುರುತಿಸಲಾದ ಪಾದಚಾರಿ ಮಾರ್ಗಗಳಲ್ಲಿ ನಡೆಯುವ ಹಕ್ಕು (Right to walk) ಪ್ರಾಥಮಿಕವಾಗಿ ಕೆಳಗಿನ ಯಾವ ಮೂಲಭೂತ ಹಕ್ಕುಗಳಿಂದ ಹೊರಹೊಮ್ಮುತ್ತದೆ  ಎಂದು ಸರ್ವೋಚ್ಚ ನ್ಯಾಯಾಲಯವು ಇತ್ತೀಚೆಗೆ ತೀರ್ಪು ನೀಡಿದೆ?

    A) ವಿಧಿಗಳು 14 ಮತ್ತು 15

    B) ವಿಧಿಗಳು 19(1)(d) ಮತ್ತು 21 

    C) ವಿಧಿಗಳು 25 ಮತ್ತು 26 

    D) ವಿಧಿಗಳು 32 ಮತ್ತು 226 

    ಉತ್ತರ: B


    3. ಕೆಳಗಿನ ಯಾವ ಸಂಸ್ಥೆಯು ಇಂಧನ ಪರಿವರ್ತನಾ ಸೂಚ್ಯಂಕವನ್ನು (Energy Transition Index – ETI) ಪ್ರಕಟಿಸುತ್ತದೆ?

    A) ಅಂತರರಾಷ್ಟ್ರೀಯ ಇಂಧನ ಸಂಸ್ಥೆ (IEA)

    B) ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP)

    C) ವಿಶ್ವ ಆರ್ಥಿಕ ವೇದಿಕೆ (WEF)

    D) ಅಂತರರಾಷ್ಟ್ರೀಯ ನವೀಕರಿಸಬಹುದಾದ ಇಂಧನ ಸಂಸ್ಥೆ (IRENA)

    ಉತ್ತರ: C


    4. FATF ಉಪಾಧ್ಯಕ್ಷರಾಗಿ ವಿವೇಕ್ ಅಗರ್ವಾಲ್ ಅವರ ಇತ್ತೀಚಿನ ನೇಮಕವು ಗಮನಾರ್ಹವಾಗಿದೆ ಏಕೆಂದರೆ___________

    A) ಭಾರತವು ಮೊದಲ ಬಾರಿಗೆ FATF ಸಚಿವಾಲಯವನ್ನು ಆಯೋಜಿಸುತ್ತಿದೆ.

    B) ಭಾರತವು ಮೊದಲ ಬಾರಿಗೆ FATF ಉಪಾಧ್ಯಕ್ಷ ಸ್ಥಾನವನ್ನು ಹೊಂದಲಿದೆ.

    C) ಭಾರತವು FATF ನ ಸ್ಥಾಪಕ ಸದಸ್ಯ ರಾಷ್ಟ್ರವಾಗಿದೆ.

    D) ಭಾರತವು FATF ನಲ್ಲಿ ಖಾಯಂ ಸದಸ್ಯತ್ವವನ್ನು ಪಡೆದುಕೊಂಡಿದೆ.

    ಉತ್ತರ: B

     

    5. ಸ್ಮಾರ್ಟ್ ಬೀಜ ಲೇಪನ ತಂತ್ರಜ್ಞಾನವನ್ನು (Smart Seed Coating Technology) ಕೆಳಗಿನ ಯಾವ ಸಂಸ್ಥೆಯು ಅಭಿವೃದ್ಧಿಪಡಿಸಿದೆ?

    A) ICAR -ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ, ನವದೆಹಲಿ (ICAR-IARI)

    B) ICAR -ಭಾರತೀಯ ಎಣ್ಣೆಕಾಳು ಸಂಶೋಧನಾ ಸಂಸ್ಥೆ, ಹೈದರಾಬಾದ್ (ICAR-IIOR)

    C) ICAR -ಕೇಂದ್ರೀಯ ಒಣಭೂಮಿ ಕೃಷಿ ಸಂಶೋಧನಾ ಸಂಸ್ಥೆ, ಹೈದರಾಬಾದ್ (ICAR-CRIDA)

    D) ರಾಷ್ಟ್ರೀಯ ಬೀಜ ನಿಗಮ, ನವದೆಹಲಿ

    ಉತ್ತರ: B

  • NPCI ನಿಂದ ‘ಡ್ರೂನಿಕ್ಸ್’ ಪ್ಲಾಟ್‌ಫಾರ್ಮ್‌ ಬಿಡುಗಡೆ | ‘ಶಿ-ಬಾಕ್ಸ್ 2.0’ ಪೋರ್ಟಲ್ (SHe-Box 2.0 Portal) | ಡಾರ್ಕ್ ವೆಬ್ (Dark Web) | ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜಗಾರ ಯೋಜನೆ (PM-VBRY) | QS ಜಾಗತಿಕ ವಿಶ್ವವಿದ್ಯಾಲಯ ಶ್ರೇಯಾಂಕ 2027 | ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ 2.0 | ಖಾನ್ ಕ್ವೆಸ್ಟ್ (KHAAN QUEST) 2026 ಸಮರಾಭ್ಯಾಸ

    NPCI ನಿಂದ ‘ಡ್ರೂನಿಕ್ಸ್’ ಪ್ಲಾಟ್‌ಫಾರ್ಮ್‌ ಬಿಡುಗಡೆ

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿ: 

    • ಭಾರತೀಯ ರಾಷ್ಟ್ರೀಯ ಪಾವತಿ ನಿಗಮವು (NPCI) ಇತ್ತೀಚೆಗೆ ‘ಡ್ರೂನಿಕ್ಸ್’ (Drunix) ಎಂಬ ನೂತನ ಪ್ಲಾಟ್‌ಫಾರ್ಮ್‌ ಅನ್ನು ಬಿಡುಗಡೆಗೊಳಿಸಿದೆ.

    ಡ್ರೂನಿಕ್ಸ್ ಪ್ಲಾಟ್‌ಫಾರ್ಮ್‌ ಬಗ್ಗೆ: 

    • ಇದು ಒಂದು ಮುಕ್ತ-ಮೂಲ ಬ್ಲಾಕ್‌ಚೈನ್ ಪ್ಲಾಟ್‌ಫಾರ್ಮ್ (Open-Source Blockchain Platform) ಆಗಿದ್ದು, ಕಾರ್ಪೊರೇಟ್ ಸಂಸ್ಥೆಗಳಿಗೆ ತಮ್ಮದೇ ಆದ ಟೋಕನೈಸೇಶನ್ ಪ್ಲಾಟ್‌ಫಾರ್ಮ್‌ಗಳನ್ನು, ಡಿಜಿಟಲ್ ಆಸ್ತಿ ಪರಿಸರ ವ್ಯವಸ್ಥೆಗಳನ್ನು (Digital Asset Ecosystems) ಮತ್ತು ಬಹು-ಸಂಸ್ಥೆಗಳ ನೆಟ್ ವರ್ಕ್ ಗಳನ್ನು ನಿರ್ಮಿಸಲು ಹಾಗೂ ವಿಸ್ತರಿಸಲು ನೆರವಾಗುತ್ತದೆ.

    ಮಹತ್ವ: 

    • ದತ್ತಾಂಶವನ್ನು ಸುರಕ್ಷಿತವಾಗಿ ಹಂಚಿಕೊಳ್ಳಲು ಹಾಗೂ ಡಿಜಿಟಲ್ ಆಸ್ತಿಗಳನ್ನು ಸಮರ್ಪಕವಾಗಿ ಪತ್ತೆಹಚ್ಚಲು ಬ್ಯಾಂಕುಗಳು ಮತ್ತು ವ್ಯವಹಾರ ಸಂಸ್ಥೆಗಳಿಗೆ ಇದು ಸುಭದ್ರವಾದ ವ್ಯವಸ್ಥೆಯನ್ನು ಒದಗಿಸುತ್ತದೆ.

    • ಬ್ಲಾಕ್‌ಚೈನ್ ತಂತ್ರಜ್ಞಾನದ ಬಳಕೆ: ಈ ತಂತ್ರಜ್ಞಾನದ ಬಳಕೆಯಿಂದ ದತ್ತಾಂಶವು ಅತ್ಯಂತ ಸುರಕ್ಷಿತವಾಗಿರುತ್ತದೆ, ಪಾರದರ್ಶಕವಾಗಿ ಹಂಚಿಕೆಯಾಗುತ್ತದೆ ಮತ್ತು ಯಾವುದೇ ವಂಚನೆಗಳ ಮೂಲಕ ದತ್ತಾಂಶವನ್ನು ಬದಲಾಯಿಸಲು ಸಾಧ್ಯವಿಲ್ಲ.

    • ‘ಮೇಕ್ ಇನ್ ಇಂಡಿಯಾ’ ಪರಿಕಲ್ಪನೆ: ಜಾಗತಿಕ ಮಟ್ಟದಲ್ಲಿ ಬಳಕೆಯಲ್ಲಿರುವ ‘ಹೈಪರ್‌ಲೆಡ್ಜರ್ ಫ್ಯಾಬ್ರಿಕ್’ (Hyperledger Fabric) ಎಂಬ ತಂತ್ರಾಂಶವನ್ನು ಭಾರತೀಯ ಆಡಳಿತಾತ್ಮಕ ಅಗತ್ಯಗಳಿಗೆ ತಕ್ಕಂತೆ, ಇನ್ನಷ್ಟು ವೇಗವಾಗಿ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಭಾರತವು ಮಾರ್ಪಡಿಸಿದೆ.

    • ಇದು ಮುಕ್ತ-ಮೂಲ (Open-Source) ಆಗಿದೆ: ಇದರ ಸೋರ್ಸ್ ಕೋಡ್ (Source Code) ಯಾರಿಗಾದರೂ ವೀಕ್ಷಿಸಲು ಮತ್ತು ಬಳಸಲು ಉಚಿತವಾಗಿ ಲಭ್ಯವಿದ್ದು, ಇದರಿಂದ ಕಂಪನಿಗಳು ಒಟ್ಟಾಗಿ ಸುಲಭವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.

    ಪ್ರಮುಖ ಪರಿಕಲ್ಪನೆಗಳು

    • ಟೋಕನೈಸೇಶನ್ (Tokenization): ಇದು ಆಸ್ತಿಗಳು ಅಥವಾ ಮಾಲೀಕತ್ವದ ಹಕ್ಕುಗಳನ್ನು ಬ್ಲಾಕ್‌ಚೈನ್ ವ್ಯವಸ್ಥೆಯಲ್ಲಿ ಡಿಜಿಟಲ್ ಟೋಕನ್‌ಗಳಾಗಿ ಪರಿವರ್ತಿಸುವ ಒಂದು ಪ್ರಕ್ರಿಯೆಯಾಗಿದೆ.

    • ಈ ಡಿಜಿಟಲ್ ಆಸ್ತಿಗಳು ಆರ್ಥಿಕ ಭದ್ರತೆಗಳು, ರಿಯಲ್ ಎಸ್ಟೇಟ್, ಸರಕುಗಳು, ಡಿಜಿಟಲ್ ಕರೆನ್ಸಿಗಳು ಮತ್ತು ಗುರುತಿನ ರುಜುವಾತುಗಳನ್ನು (Identity Credentials) ಒಳಗೊಂಡಿರುತ್ತವೆ.

    • ಕ್ರಿಪ್ಟೋಕರೆನ್ಸಿ (Cryptocurrency): ಇದು ಆರ್ಥಿಕ ವಹಿವಾಟುಗಳಿಗಾಗಿ ಬಳಸಲಾಗುವ ಒಂದು ರೀತಿಯ ವರ್ಚುವಲ್ ಕರೆನ್ಸಿ ಆಗಿದ್ದು, ವಿವಿಧ ವಹಿವಾಟುಗಳನ್ನು ಅತ್ಯಂತ ಸುರಕ್ಷಿತವಾಗಿ ನಡೆಸಲು ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತದೆ.

    • ಬ್ಲಾಕ್‌ಚೈನ್ (Blockchain): ಬ್ಲಾಕ್‌ಚೈನ್ ಎಂಬುದು ಮೌಲ್ಯಯುತವಾದ ಪ್ರತಿಯೊಂದು ಅಂಶವನ್ನೂ ದಾಖಲಿಸಲು ಪ್ರೋಗ್ರಾಂ ಮಾಡಬಹುದಾದ, ಎಂದಿಗೂ ತಿರುಚಲಾಗದ ಡಿಜಿಟಲ್ ವಹಿವಾಟುಗಳ ಲೆಕ್ಕದ ಪುಸ್ತಕವಾಗಿದೆ. (Immutable Digital Ledger). ಇದರಲ್ಲಿರುವ ಪ್ರತಿಯೊಂದು ದಾಖಲೆಗಳ ಪಟ್ಟಿಯನ್ನು ‘ಬ್ಲಾಕ್’ (Block) ಎಂದು ಕರೆಯಲಾಗುತ್ತದೆ.

    ‘ಶಿ-ಬಾಕ್ಸ್ 2.0’ ಪೋರ್ಟಲ್ (SHe-Box 2.0 Portal)

    ಸರ್ಕಾರಿ ಯೋಜನೆಗಳು

    ಇದೀಗ ಸುದ್ದಿಯಲ್ಲಿ: 

    • ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆ ಕಾನೂನುಗಳ ಅನುಷ್ಠಾನವನ್ನು ಬಲಪಡಿಸುವಲ್ಲಿ ಮತ್ತು ಮಹಿಳೆಯರಿಗೆ ಸುರಕ್ಷಿತ ಕೆಲಸದ ವಾತಾವರಣವನ್ನು ಖಚಿತಪಡಿಸುವಲ್ಲಿ ‘ಮಿಷನ್ ಶಕ್ತಿ’ ಯೋಜನೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಶಿ-ಬಾಕ್ಸ್ 2.0 ಪೋರ್ಟಲ್’ನ (SHe-Box 2.0 Portal) ಪಾತ್ರವನ್ನು ಸರ್ಕಾರವು ಪ್ರಸ್ತುತ ಒತ್ತಿಹೇಳಿದೆ.

    ಶಿ-ಬಾಕ್ಸ್ (SHe-Box) ಪೋರ್ಟಲ್’ನ ಬಗ್ಗೆ

    • ಇದು ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ, 2013 (Sexual Harassment of Women at Workplace (Prevention, Prohibition and Redressal) Act, 2013) ರ ನಿಬಂಧನೆಗಳನ್ನು ಜಾರಿಗೆ ತರಲು ಅಭಿವೃದ್ಧಿಪಡಿಸಲಾದ ಒಂದು ಪೋರ್ಟಲ್ ಆಗಿದೆ.
    • ಈ ಪೋರ್ಟಲ್ ಅನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು (MWCD) ಪ್ರಾರಂಭಿಸಿದೆ.

    ಶಿ-ಬಾಕ್ಸ್ 2.0 (SHe-Box 2.0) ಬಗ್ಗೆ 

    • ಈ ನವೀಕೃತ ಆವೃತ್ತಿಯನ್ನು 2024 ರಲ್ಲಿ ಪ್ರಾರಂಭಿಸಲಾಗಿದೆ.
    • ಉದ್ದೇಶ: ಇದು ಮಹಿಳೆಯರು ಯಾವುದೇ ಕಳಂಕ ಅಥವಾ ಸೇಡಿನ ಭಯವಿಲ್ಲದೆ ಲೈಂಗಿಕ ಕಿರುಕುಳದ ಘಟನೆಗಳನ್ನು ವರದಿ ಮಾಡಲು ಅನುವು ಮಾಡಿಕೊಡುವ ಸುರಕ್ಷಿತ, ಗೌಪ್ಯ ಮತ್ತು ಬಳಕೆದಾರ-ಸ್ನೇಹಿ  ವ್ಯವಸ್ಥೆಯನ್ನು ಒದಗಿಸುತ್ತದೆ.
    • ಪ್ರಾಮುಖ್ಯತೆ: ಸಂಘಟಿತ, ಅಸಂಘಟಿತ, ಸಾರ್ವಜನಿಕ ಮತ್ತು ಖಾಸಗಿ ವಲಯಗಳಾದ್ಯಂತ ಕೆಲಸ ಮಾಡುವ ಎಲ್ಲಾ ಮಹಿಳೆಯರಿಗೆ ದೂರುಗಳನ್ನು ದಾಖಲಿಸಲು ಮತ್ತು ಆ ದೂರುಗಳ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಇದು ಏಕ-ಗವಾಕ್ಷಿ ವ್ಯವಸ್ಥೆಯನ್ನು ಒದಗಿಸುತ್ತದೆ.
    • ಈ ಪೋರ್ಟಲ್ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳನ್ನು ಒಳಗೊಂಡಂತೆ ಒಟ್ಟು 22 ಭಾಷೆಗಳಲ್ಲಿ ಲಭ್ಯವಿದೆ.

    ಮಿಷನ್ ಶಕ್ತಿ (Mission Shakti) ಬಗ್ಗೆ: 

    • ಇದು ಮಹಿಳೆಯರ ಸುರಕ್ಷತೆ, ಭದ್ರತೆ ಮತ್ತು ಆರ್ಥಿಕ ಸಬಲೀಕರಣಕ್ಕೆ ಮೀಸಲಾಗಿರುವ ಒಂದು ಸಮಗ್ರ ಯೋಜನೆಯಾಗಿದೆ.
    • ಈ ಯೋಜನೆಯನ್ನು ಎರಡು ಉಪ-ಯೋಜನೆಗಳಾಗಿ ವಿಂಗಡಿಸಲಾಗಿದೆ:
    1. ಸಂಬಲ್ (Sambal) (ಸುರಕ್ಷತೆ ಮತ್ತು ಭದ್ರತೆ):
    • ಒನ್ ಸ್ಟಾಪ್ ಕೇಂದ್ರಗಳು (One Stop Centres – OSC): ಇದು ಹಿಂಸಾಚಾರಕ್ಕೆ ಒಳಗಾದ ಸಂತ್ರಸ್ತ ಮಹಿಳೆಯರಿಗೆ ಸಂಯೋಜಿತ ಮತ್ತು ಸಮಗ್ರ ಬೆಂಬಲವನ್ನು ಒದಗಿಸುತ್ತದೆ.
    • ಮಹಿಳಾ ಸಹಾಯವಾಣಿ – 181: ಇದು ಮಹಿಳೆಯರಿಗೆ ದಿನದ 24 ಗಂಟೆಗಳ ಕಾಲ ತುರ್ತು ನೆರವನ್ನು ಒದಗಿಸುವ ವ್ಯವಸ್ಥೆಯಾಗಿದೆ.
    • ಬೇಟಿ ಬಚಾವೋ ಬೇಟಿ ಪಡಾವೋ (BBBP): ಲಿಂಗ-ಆಧಾರಿತ ಭ್ರೂಣ ಹತ್ಯೆಯನ್ನು ತಡೆಯುವುದು ಮತ್ತು ಹೆಣ್ಣು ಮಕ್ಕಳ ಶಿಕ್ಷಣವನ್ನು ಉತ್ತೇಜಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
    • ನಾರಿ ಅದಾಲತ್ : ಇವು ಸಮುದಾಯ ಮಟ್ಟದಲ್ಲಿ ಮಹಿಳಾ ಸಮಸ್ಯೆಗಳನ್ನು ಬಗೆಹರಿಸುವ ಪರ್ಯಾಯ ವಿವಾದ ಪರಿಹಾರ ವೇದಿಕೆಗಳಾಗಿವೆ.
    1. ಸಾಮರ್ಥ್ಯ (Samarthya) (ಸಬಲೀಕರಣ):
    • ಶಕ್ತಿ ಸದನ್: ಹಿಂದಿನ ‘ಸ್ವಾಧಾರ್ ಗೃಹ’ ಮತ್ತು ‘ಉಜ್ವಲ’ ಯೋಜನೆಗಳನ್ನು ವಿಲೀನಗೊಳಸಿ, ಮಹಿಳೆಯರಿಗಾಗಿ ಈ ಪುನರ್ವಸತಿ ಗೃಹಗಳನ್ನು ಸ್ಥಾಪಿಸಲಾಗಿದೆ.
    • ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ (PMMVY): ಇದು ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಆರ್ಥಿಕ ನೆರವು ನೀಡುವ ಮಾತೃತ್ವ ಭತ್ಯೆ ಯೋಜನೆಯಾಗಿದೆ.
    • ಮಹಿಳಾ ಸಬಲೀಕರಣ ಕೇಂದ್ರ (HEW): ಇದು ಸರ್ಕಾರಿ ಸೇವೆಗಳನ್ನು ಮಹಿಳೆಯರಿಗೆ ಸುಲಭವಾಗಿ ತಲುಪಿಸಲು ಅನುಕೂಲ ಮಾಡಿಕೊಡುತ್ತದೆ.

    ಡಾರ್ಕ್ ವೆಬ್ (Dark Web)

    ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿ:

    • ಕೇಂದ್ರ ಸರ್ಕಾರವು, ಸಂದೇಶ ಕಳುಹಿಸುವ ವೇದಿಕೆಯಾದ ಟೆಲಿಗ್ರಾಮ್ “ಹೊಸ ಡಾರ್ಕ್ ವೆಬ್” ಆಗಿ ಮಾರ್ಪಟ್ಟಿದೆ ಎಂದು ದೆಹಲಿ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ.

    ಡಾರ್ಕ್ ವೆಬ್ (Dark Web) ಬಗ್ಗೆ

    • ಡಾರ್ಕ್ ವೆಬ್ ಎಂಬುದು ಅಂತರ್ಜಾಲದ (ಇಂಟರ್ನೆಟ್) ಒಂದು ಗುಪ್ತ ಭಾಗವಾಗಿದ್ದು, ಇದನ್ನು ಗೂಗಲ್‌ನಂತಹ ಸಾಮಾನ್ಯ ಸರ್ಚ್ ಎಂಜಿನ್‌ಗಳನ್ನು ಬಳಸಿಕೊಂಡು ಹುಡುಕಲು ಸಾಧ್ಯವಿಲ್ಲ.
    • ಈ ಗುಪ್ತ ಜಾಲವನ್ನು ಪ್ರವೇಶಿಸಲು ಟಾರ್ ಬ್ರೌಸರ್‌ನಂತಹ (Tor browser) ವಿಶೇಷ ಸಾಫ್ಟ್‌ವೇರ್‌ಗಳ ಅವಶ್ಯಕತೆಯಿರುತ್ತದೆ.
    • ಇದು ಸೈಬರ್ ಅಪರಾಧ ಚಟುವಟಿಕೆಗಳನ್ನು ಮರೆಮಾಚಲು ಪ್ರಸಿದ್ಧವಾಗಿದ್ದರೂ ಸಹ, ಇದನ್ನು ಗೌಪ್ಯತೆ ಮತ್ತು ವಾಕ್ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಲು ಸಹ ಬಳಸಲಾಗುತ್ತದೆ.

    ಡಾರ್ಕ್ ವೆಬ್ ಅನ್ನು ಅರ್ಥಮಾಡಿಕೊಳ್ಳಲು, ಇಂಟರ್ನೆಟ್ ಅನ್ನು ಮುಖ್ಯವಾಗಿ ಮೂರು ವಿಭಿನ್ನ ಭಾಗಗಳಾಗಿ ವಿಂಗಡಿಸಬಹುದು:

    • ಸರ್ಫೇಸ್ ವೆಬ್ (The Surface Web): ಇದು ನಾವು ಪ್ರತಿದಿನ ಬಳಸುವ ಇಂಟರ್ನೆಟ್ ಆಗಿದ್ದು, ಇದರಲ್ಲಿ ಸುದ್ದಿ ವಾಹಿನಿಗಳು, ಸಾಮಾಜಿಕ ಜಾಲತಾಣಗಳು ಮತ್ತು ಆನ್‌ಲೈನ್ ಮಳಿಗೆಗಳಂತಹ ವೆಬ್‌ಸೈಟ್‌ಗಳನ್ನು ನೀವು ಸುಲಭವಾಗಿ ಹುಡುಕಬಹುದಾಗಿದೆ.
    • ಡೀಪ್ ವೆಬ್ (The Deep Web): ಇದು ಇಂಟರ್ನೆಟ್ ನ ಅತಿ ದೊಡ್ಡ ಭಾಗವಾಗಿದ್ದು, ಇದು ಗುಪ್ತವಾಗಿದ್ದರೂ ಹಾನಿಕಾರಕವಲ್ಲ. ಇದು ಖಾಸಗಿ ಡೇಟಾಬೇಸ್‌ಗಳು, ಆನ್‌ಲೈನ್ ಬ್ಯಾಂಕ್ ಖಾತೆಗಳು ಮತ್ತು ಪಾಸ್‌ವರ್ಡ್-ರಕ್ಷಿತ ಇಮೇಲ್ ಇನ್‌ಬಾಕ್ಸ್‌ಗಳನ್ನು ಒಳಗೊಂಡಿರುತ್ತದೆ.
    • ಡಾರ್ಕ್ ವೆಬ್ (The Dark Web): ಇದು ಡೀಪ್ ವೆಬ್‌ನ ಒಂದು ಸಣ್ಣ ಮತ್ತು ನಿರ್ದಿಷ್ಟ ವಿಭಾಗವಾಗಿದ್ದು, ಇದನ್ನು ಅತ್ಯುನ್ನತ ಗೂಢಲಿಪೀಕರಣದ (ಎನ್‌ಕ್ರಿಪ್ಶನ್ ) ಮೂಲಕ ಉದ್ದೇಶಪೂರ್ವಕವಾಗಿ ಮರೆಮಾಡಲಾಗಿರುತ್ತದೆ.

    ಡಾರ್ಕ್ ವೆಬ್‌ನ ಪ್ರಮುಖ ಲಕ್ಷಣಗಳು: 

    • ಅನಾಮಧೇಯತೆ: ಇದರಲ್ಲಿ ಬಳಕೆದಾರರು ಮತ್ತು ವೆಬ್‌ಸೈಟ್ ಹೋಸ್ಟ್‌ಗಳನ್ನು ಮರೆಮಾಡಲಾಗಿರುತ್ತದೆ ಮತ್ತು ಜನರ ಗುರುತು ಅಥವಾ ಸ್ಥಳಗಳನ್ನು ಪತ್ತೆಹಚ್ಚುವುದನ್ನು ತಡೆಯಲು ದತ್ತಾಂಶವನ್ನು ಅನೇಕ ಎನ್‌ಕ್ರಿಪ್ಟೆಡ್ ಸರ್ವರ್‌ಗಳ ಮೂಲಕ ರವಾನಿಸಲಾಗುತ್ತದೆ.
    • ವಿಶೇಷ ವೆಬ್‌ಸೈಟ್‌ಗಳು: ಡಾರ್ಕ್ ವೆಬ್ ಸೈಟ್‌ಗಳು ಸಾಮಾನ್ಯವಾಗಿ .com ಅಥವಾ .org ನೊಂದಿಗೆ ಕೊನೆಗೊಳ್ಳುವ ಬದಲು, .onion ನಂತಹ ಡೊಮೇನ್‌ಗಳನ್ನು ಬಳಸುತ್ತವೆ.
    • ಕಾನೂನುಬದ್ಧ ಮತ್ತು ಕಾನೂನುಬಾಹಿರ ಬಳಕೆಗಳು: ಇದು ಅಕ್ರಮ ಸರಕುಗಳು ಅಥವಾ ಕದ್ದ ದತ್ತಾಂಶಗಳಂತಹ ಕಾನೂನುಬಾಹಿರ ಮಾರುಕಟ್ಟೆಗಳೊಂದಿಗೆ ಹೆಚ್ಚು ಸಂಬಂಧ ಹೊಂದಿದ್ದರೂ ಸಹ, ಪತ್ರಕರ್ತರು, ವಿಸ್ಲ್‌ಬ್ಲೋವರ್‌ಗಳು (ಶಿಳ್ಳೆದಾರರು) ಮತ್ತು ದಬ್ಬಾಳಿಕೆಯ ಆಡಳಿತಗಳಲ್ಲಿ ಕಣ್ಗಾವಲಿನಿಂದ ಗೌಪ್ಯತೆಯನ್ನು ಬಯಸುವ ವ್ಯಕ್ತಿಗಳು ಇದನ್ನು ಕಾನೂನುಬದ್ಧವಾಗಿ ಪ್ರವೇಶಿಸುತ್ತಾರೆ.

    ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜಗಾರ ಯೋಜನೆ (PM-VBRY)

    ಸರ್ಕಾರಿ ಯೋಜನೆಗಳು

    ಇದೀಗ ಸುದ್ದಿಯಲ್ಲಿ:

    • ಪ್ರಧಾನ ಮಂತ್ರಿಯವರು ‘ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜಗಾರ ಯೋಜನೆ‘ಯ (PM-VBRY) ಅಡಿಯಲ್ಲಿ ₹2,400 ಕೋಟಿ ಮೌಲ್ಯದ ಪ್ರೋತ್ಸಾಹಕಗಳನ್ನು ವಿತರಿಸಲಿದ್ದಾರೆ.

    PM-VBRY ಯೋಜನೆಯ ಬಗ್ಗೆ  ಕುರಿತು: 

    • ಇದು ಭಾರತ ಸರ್ಕಾರದ ಪ್ರಮುಖ ಕಾರ್ಯಕ್ರಮವಾಗಿದ್ದು, ಇದನ್ನು 2025 ರಲ್ಲಿ ಪ್ರಾರಂಭಿಸಲಾಗಿದೆ.
    • ಅನುಷ್ಠಾನ: ಈ ಯೋಜನೆಯನ್ನು ‘ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ’ವು ಜಾರಿಗೊಳಿಸುತ್ತದೆ.
    • ಉದ್ದೇಶ: ಉತ್ಪಾದನಾ ವಲಯದ ಮೇಲೆ ವಿಶೇಷ ಗಮನ ಹರಿಸುವುದರೊಂದಿಗೆ ಎಲ್ಲಾ ವಲಯಗಳಾದ್ಯಂತ ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುವುದು, ಉದ್ಯೋಗಾವಕಾಶವನ್ನು ಹೆಚ್ಚಿಸುವುದು ಮತ್ತು ಸಾಮಾಜಿಕ ಭದ್ರತೆಯನ್ನು ಬಲಪಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

    ಪ್ರಮುಖ ಲಕ್ಷಣಗಳು:

    • ಮೊದಲ ಬಾರಿಗೆ ಉದ್ಯೋಗಕ್ಕೆ ಸೇರುವ ನೌಕರರು ₹15,000 ವರೆಗಿನ ಪ್ರೋತ್ಸಾಹಕಗಳಿಗೆ ಅರ್ಹರಾಗಿರುತ್ತಾರೆ.
    • ಉದ್ಯೋಗದಾತರ ಕಡೆಯಿಂದ, ಆರು ತಿಂಗಳ ಸುಸ್ಥಿರ ಉದ್ಯೋಗದ ನಂತರ ಪ್ರತಿಯೊಬ್ಬ ಹೊಸ ನೌಕರನ ನೇಮಕಾತಿಗೆ ಸರ್ಕಾರವು ₹3,000 ವರೆಗಿನ ಬಹುಮಾನವನ್ನು ಒದಗಿಸುತ್ತದೆ.
    • ಈ ಉಪಕ್ರಮವು ಔಪಚಾರಿಕ ಕಾರ್ಯಪಡೆಯಲ್ಲಿ ಹೆಚ್ಚಿನ ಭಾಗವಹಿಸುವಿಕೆಯನ್ನು ಉತ್ತೇಜಿಸುವ ನಿರೀಕ್ಷೆಯಿದೆ ಮತ್ತು ನಿರಂತರ ದೀರ್ಘಕಾಲೀನ ಆರ್ಥಿಕ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡುತ್ತದೆ.

    QS ಜಾಗತಿಕ ವಿಶ್ವವಿದ್ಯಾಲಯ ಶ್ರೇಯಾಂಕ 2027

    ಸೂಚ್ಯಂಕಗಳು ಮತ್ತು ವರದಿಗಳು

    ಇದೀಗ ಸುದ್ದಿಯಲ್ಲಿ:

    • ಇತ್ತೀಚೆಗೆ ಜಗತ್ತಿನಾದ್ಯಂತದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅತ್ಯುನ್ನತ ಶ್ರೇಯಾಂಕವನ್ನು ನೀಡುವ QS ಜಾಗತಿಕ ವಿಶ್ವವಿದ್ಯಾಲಯ ಶ್ರೇಯಾಂಕ 2027 ಬಿಡುಗಡೆಯಾಗಿದೆ.

    ಪ್ರಮುಖ ಅವಲೋಕನಗಳು: 

    • ಈ ಶ್ರೇಯಾಂಕ ವ್ಯವಸ್ಥೆಯು ಜಗತ್ತಿನ 106 ದೇಶಗಳು ಮತ್ತು ಪ್ರಾಂತ್ಯಗಳ 1,500 ಕ್ಕೂ ಹೆಚ್ಚು ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸಮಗ್ರವಾಗಿ ಮೌಲ್ಯಮಾಪನ ಮಾಡಿದೆ
    • ಈ ಪ್ರತಿಷ್ಠಿತ ಪಟ್ಟಿಯಲ್ಲಿ 52 ಭಾರತೀಯ ವಿಶ್ವವಿದ್ಯಾಲಯಗಳು ಸ್ಥಾನ ಪಡೆದಿದ್ದು, ಇದರೊಂದಿಗೆ ಭಾರತವು ಜಗತ್ತಿನಲ್ಲಿ ಅತಿ ಹೆಚ್ಚು ಪ್ರಾತಿನಿಧ್ಯ ಹೊಂದಿದ 5ನೇ ಅತಿದೊಡ್ಡ ಉನ್ನತ ಶಿಕ್ಷಣ ವ್ಯವಸ್ಥೆಯಾಗಿ ಹೊರಹೊಮ್ಮಿದೆ.
    • ಜಾಗತಿಕ ಮಟ್ಟದ ಅಗ್ರ 5 ಉನ್ನತ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಅಮೆರಿಕ (US) ಮತ್ತು ಬ್ರಿಟನ್ (UK) ದೇಶಗಳು ಸಂಪೂರ್ಣ ಪ್ರಾಬಲ್ಯ ಸಾಧಿಸಿವೆ.

    ಜಾಗತಿಕ ಮಟ್ಟದ ಅಗ್ರ 5 ವಿಶ್ವವಿದ್ಯಾಲಯಗಳು:

    1. ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT), ಅಮೆರಿಕ (US)
    2. ಇಂಪೀರಿಯಲ್ ಕಾಲೇಜ್ ಲಂಡನ್, ಬ್ರಿಟನ್ (UK) (ಜಂಟಿ ಸ್ಥಾನ – Tied)
    3. ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ, ಅಮೆರಿಕ (US) (ಜಂಟಿ ಸ್ಥಾನ – Tied)
    4. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ, ಬ್ರಿಟನ್ (UK)
    5. ಹಾರ್ವರ್ಡ್ ವಿಶ್ವವಿದ್ಯಾಲಯ, ಅಮೆರಿಕ (US)

    ಅಗ್ರ 5 ಭಾರತೀಯ ಸಂಸ್ಥೆಗಳು: QS ಜಾಗತಿಕ ಶ್ರೇಯಾಂಕ 2027

    ಭಾರತೀಯ ಶ್ರೇಯಾಂಕ  ಶಿಕ್ಷಣ ಸಂಸ್ಥೆ ಜಾಗತಿಕ ಶ್ರೇಯಾಂಕ 
    1 IIT ದೆಹಲಿ  118
    2 IIT ಬಾಂಬೆ  134
    3 IIT ಮದ್ರಾಸ್  170
    4 IIT ಖರಗ್‌ಪುರ  205
    5 IIT ಕಾನ್ಪುರ  221 (ಜಂಟಿ ಸ್ಥಾನ – Tied)
    6 IISc ಬೆಂಗಳೂರು  221 (ಜಂಟಿ ಸ್ಥಾನ – Tied)

    QS ಶ್ರೇಯಾಂಕದ ಕುರಿತು: 

    • QS (Quacquarelli Symonds) ಸಂಸ್ಥೆಯು 1990 ರಲ್ಲಿ ಅಧಿಕೃತವಾಗಿ ಸ್ಥಾಪನೆಯಾಯಿತು.
    • ಈ ಜಾಗತಿಕ ಸಂಸ್ಥೆಯು ಬ್ರಿಟನ್‌ನ ಲಂಡನ್ ನಗರದಲ್ಲಿ ತನ್ನ ಪ್ರಧಾನ ಕಛೇರಿಯನ್ನು ಹೊಂದಿದೆ.
    • ಇದು ಅಂತರರಾಷ್ಟ್ರೀಯ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಅಗತ್ಯವಿರುವ ದತ್ತಾಂಶ, ಉನ್ನತ ಸಂಶೋಧನೆ ಮತ್ತು ಸಲಹಾ ಸೇವೆಗಳನ್ನು ಒದಗಿಸುವಲ್ಲಿ ಜಾಗತಿಕ ಪರಿಣತಿಯನ್ನು ಪಡೆದಿದೆ.
    • 2004 ರಲ್ಲಿ ಸ್ಥಾಪಿತವಾದ QS ಶ್ರೇಯಾಂಕವು ಜಾಗತಿಕ ಪ್ರಮುಖ ವಿಶ್ವವಿದ್ಯಾಲಯಗಳ ಶ್ರೇಯಾಂಕಗಳಲ್ಲಿ ಅತ್ಯಂತ ಪ್ರತಿಷ್ಠಿತವಾಗಿದ್ದು, ಶಿಕ್ಷಣ ಸಂಸ್ಥೆಗಳ ನಿಷ್ಪಕ್ಷಪಾತ ಮೌಲ್ಯಮಾಪನವನ್ನು ಒದಗಿಸುತ್ತದೆ.
    • ಈ ಸಂಸ್ಥೆಯು ಜಾಗತಿಕ ಶಿಕ್ಷಣ ಸಂಸ್ಥೆಗಳನ್ನು ಒಟ್ಟು 10 ಪ್ರಮುಖ ಸೂಚಕಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡುತ್ತದೆ. ಅವುಗಳಲ್ಲಿ ಶೈಕ್ಷಣಿಕ ಪ್ರತಿಷ್ಠೆ, ಉದ್ಯೋಗದ ಫಲಿತಾಂಶಗಳು, ಅಂತರರಾಷ್ಟ್ರೀಯ ಅಧ್ಯಾಪಕರ ಅನುಪಾತ, ಅಂತರರಾಷ್ಟ್ರೀಯ ಸಂಶೋಧನಾ ಜಾಲ, ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ವೈವಿಧ್ಯತೆ, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಅನುಪಾತ ಹಾಗೂ ಸುಸ್ಥಿರತೆ ಇತ್ಯಾದಿಗಳನ್ನು ಒಳಗೊಂಡಿವೆ.

    ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ 2.0

    ಸರ್ಕಾರಿ ಯೋಜನೆಗಳು

    ಇದೀಗ ಸುದ್ದಿಯಲ್ಲಿ:

    • ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ 2.0 (PMAY-U 2.0) ಅಡಿಯಲ್ಲಿ ಅರ್ಹ ನಗರ ಬಡ ಕುಟುಂಬಗಳಿಗೆ 2.13 ಲಕ್ಷಕ್ಕೂ ಹೆಚ್ಚು ಹೆಚ್ಚುವರಿ ಮನೆಗಳನ್ನು ನಿರ್ಮಿಸಲು ಅನುಮೋದನೆ ನೀಡಿದೆ.

    ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ 2.0 ಬಗ್ಗೆ

    • ಇದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ (MoHUA) ಪ್ರಮುಖ ಯೋಜನೆಯಾಗಿದ್ದು, ಇದರ ಅಡಿಯಲ್ಲಿ ₹2.50 ಲಕ್ಷ ಕೋಟಿಗಳವರೆಗೆ ಕೇಂದ್ರ ಸಹಾಯವನ್ನು ಒದಗಿಸಲಾಗುತ್ತದೆ.
    • 25 ಜೂನ್ 2015 ರಂದು ಪ್ರಾರಂಭಿಸಲಾದ ಮೂಲ ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರದ (PMAY-U) ನವೀಕರಿಸಿದ ಮತ್ತು ವಿಸ್ತರಿತ ಆವೃತ್ತಿಯಾಗಿ ಈ 2.0 ಯೋಜನೆಯನ್ನು ಸೆಪ್ಟೆಂಬರ್ 2024 ರಲ್ಲಿ ಪ್ರಾರಂಭಿಸಲಾಯಿತು.
    • ದೇಶದ ಯಾವುದೇ ಭಾಗದಲ್ಲಿ ತಮ್ಮದೇ ಆದ ಶಾಶ್ವತವಾದ  ಮನೆಯನ್ನು ಹೊಂದಿರದ ಆರ್ಥಿಕವಾಗಿ ದುರ್ಬಲ ವರ್ಗದ (EWS), ಕಡಿಮೆ ಆದಾಯದ ಗುಂಪಿನ (LIG) ಮತ್ತು ಮಧ್ಯಮ ಆದಾಯದ ಗುಂಪಿನ (MIG) ಕುಟುಂಬಗಳು ಈ ಯೋಜನೆಯ ಪ್ರಯೋಜನ ಪಡೆಯಲು ಸಂಪೂರ್ಣವಾಗಿ ಅರ್ಹರಾಗಿರುತ್ತಾರೆ.
    • ಈ ಯೋಜನೆಯ ಅರ್ಹತೆಗಾಗಿ ನಿಗದಿಪಡಿಸಲಾದ ಆದಾಯದ ಮಾನದಂಡಗಳು ಕೆಳಗಿನಂತಿವೆ:
      • ಆರ್ಥಿಕವಾಗಿ ದುರ್ಬಲ ವರ್ಗದ (EWS) ಕುಟುಂಬಗಳು: ಈ ಕುಟುಂಬಗಳ ವಾರ್ಷಿಕ ಆದಾಯವು ₹3 ಲಕ್ಷಗಳವರೆಗೆ ಇರಬೇಕು.
      • ಕಡಿಮೆ ಆದಾಯದ ಗುಂಪಿನ (LIG) ಕುಟುಂಬಗಳು: ಈ ಕುಟುಂಬಗಳ ವಾರ್ಷಿಕ ಆದಾಯವು ₹3 ಲಕ್ಷದಿಂದ ₹6 ಲಕ್ಷಗಳವರೆಗೆ ಇರಬೇಕು.
      • ಮಧ್ಯಮ ಆದಾಯದ ಗುಂಪಿನ (MIG) ಕುಟುಂಬಗಳು: ಈ ಕುಟುಂಬಗಳ ವಾರ್ಷಿಕ ಆದಾಯವು ₹6 ಲಕ್ಷದಿಂದ ₹9 ಲಕ್ಷಗಳವರೆಗೆ ಇರಬೇಕು.
    • ಮನೆ ನಿರ್ಮಾಣದ ವೆಚ್ಚವನ್ನು ಕೇಂದ್ರ ಸರ್ಕಾರ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು, ನಗರ ಸ್ಥಳೀಯ ಸಂಸ್ಥೆಗಳು (ULBs) ಮತ್ತು ಫಲಾನುಭವಿಗಳ ನಡುವೆ ಹಂಚಿಕೆಯಾಗುತ್ತದೆ ಹಾಗೂ ಈ ವೆಚ್ಚ-ಹಂಚಿಕೆ ಮಾದರಿಯು ಪ್ರದೇಶಗಳಾದ್ಯಂತ ಭಿನ್ನವಾಗಿರುತ್ತದೆ.
    • ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ (PMAY-U) ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ 2.0 (PMAY-U 2.0) ಎರಡೂ ಯೋಜನೆಗಳು ಸೇರಿ ದೇಶಾದ್ಯಂತ 1.27 ಕೋಟಿಗೂ ಹೆಚ್ಚು ಮನೆಗಳನ್ನು ಮಂಜೂರು ಮಾಡಿವೆ.

    ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ (PMAY-G) ಬಗ್ಗೆ: 

    • ಪ್ರಾರಂಭಿಸಿದ ಸಚಿವಾಲಯ: ಈ ಯೋಜನೆಯನ್ನು ಗ್ರಾಮೀಣಾಭಿವೃದ್ಧಿ ಸಚಿವಾಲಯವು (MoRD) ಪ್ರಾರಂಭಿಸಿದೆ.
    • ಹಿನ್ನೆಲೆ: ಗ್ರಾಮೀಣ ಕುಟುಂಬಗಳಿಗೆ ಮೂಲಭೂತ ಸೌಕರ್ಯಗಳೊಂದಿಗೆ ಶಾಶ್ವತ ಮನೆಗಳನ್ನು ಒದಗಿಸುವ ಉದ್ದೇಶದಿಂದ, ಈ ಹಿಂದಿನ ಇಂದಿರಾ ಆವಾಸ್ ಯೋಜನೆಯನ್ನು (IAY) ಪುನರ್ರಚಿಸುವ ಮೂಲಕ 1 ಏಪ್ರಿಲ್ 2016 ರಂದು ಈ ಹೊಸ ಯೋಜನೆಯನ್ನು ಪರಿಚಯಿಸಲಾಯಿತು.

    ಖಾನ್ ಕ್ವೆಸ್ಟ್ (KHAAN QUEST) 2026 ಸಮರಾಭ್ಯಾಸ

    ರಕ್ಷಣೆ

    ಇದೀಗ ಸುದ್ದಿಯಲ್ಲಿ:

    • ಮಂಗೋಲಿಯಾದ ಉಲಾನ್‌ಬಾಟರ್‌ನ ಫೈವ್ ಹಿಲ್ಸ್ ತರಬೇತಿ ಪ್ರದೇಶದಲ್ಲಿ ಜೂನ್ 20 ರಿಂದ ಜುಲೈ 3 ರವರೆಗೆ ‘ಖಾನ್ ಕ್ವೆಸ್ಟ್’ ಸಮರಾಭ್ಯಾಸವನ್ನು ಆಯೋಜಿಸಲಾಗಿದೆ.

     ‘ಖಾನ್ ಕ್ವೆಸ್ಟ್’ ಸಮರಾಭ್ಯಾಸದ ಬಗ್ಗೆ:

    • ಈ ಸಮರಾಭ್ಯಾಸವು 2003 ರಲ್ಲಿ ಅಮೆರಿಕಾ (USA) ಮತ್ತು ಮಂಗೋಲಿಯಾದ ಸಶಸ್ತ್ರ ಪಡೆಗಳ ನಡುವೆ ನಡೆಯುವ ದ್ವಿಪಕ್ಷೀಯ ಸಮರಾಭ್ಯಾಸವಾಗಿ ಪ್ರಾರಂಭವಾಯಿತು.
    • ನಂತರ, 2006 ರಿಂದ ಈ ಸಮರಾಭ್ಯಾಸವನ್ನು ಬಹುರಾಷ್ಟ್ರೀಯ ಶಾಂತಿಪಾಲನಾ ಸಮರಾಭ್ಯಾಸವಾಗಿ ವಿಸ್ತರಿಸಲಾಗಿದ್ದು, ಪ್ರಸ್ತುತ ವರ್ಷ ನಡೆಯುತ್ತಿರುವುದು ಇದರ 23 ನೇ ಆವೃತ್ತಿಯಾಗಿದೆ.
    • ವಿಶ್ವಸಂಸ್ಥೆಯ ಸನ್ನದಿನ 7 ನೇ ಅಧ್ಯಾಯದ (Chapter VII of the United Nations Charter) ಅಡಿಯಲ್ಲಿ ನಡೆಯುವ ಶಾಂತಿ ಬೆಂಬಲ ಕಾರ್ಯಾಚರಣೆಗಳಲ್ಲಿ, ಭಾಗವಹಿಸುವ ದೇಶಗಳ ಸೈನ್ಯದ ನಡುವೆ ಕಾರ್ಯಾಚರಣೆಯ ಹೊಂದಾಣಿಕೆ ಮತ್ತು ಸಹಕಾರವನ್ನು ವೃದ್ಧಿಸುವುದು ಈ ಸಮರಾಭ್ಯಾಸದ ಪ್ರಮುಖ ಉದ್ದೇಶವಾಗಿದೆ.
  • ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಸಪ್ರಶ್ನೆ – ಜೂನ್ 19, 2026

    ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಸಪ್ರಶ್ನೆ – ಜೂನ್ 19, 2026

  • ಇರಾನ್-ಅಮೆರಿಕ ಶಾಂತಿ ಒಪ್ಪಂದ | ಪ್ಯಾರಿಸ್ ಒಪ್ಪಂದದ ಅಡಿಯಲ್ಲಿ ಜಂಟಿ ಕ್ರೆಡಿಟಿಂಗ್ ಕಾರ್ಯವಿಧಾನ | ಬಿಟುಮೆನ್ (Bitumen)

    ಇರಾನ್-ಅಮೆರಿಕ ಶಾಂತಿ ಒಪ್ಪಂದ

    ಅಂತರರಾಷ್ಟ್ರೀಯ

    ಇದೀಗ ಸುದ್ದಿಯಲ್ಲಿ:

    • ಸುದೀರ್ಘ ಅವಧಿಯ ಉದ್ವಿಗ್ನತೆಯ ನಂತರ, ಇರಾನ್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನ (United States) ಮರು ರಾಜತಾಂತ್ರಿಕ ಒಪ್ಪಂದಕ್ಕೆ ಪ್ರಾಥಮಿಕ ಚೌಕಟ್ಟನ್ನು ಸಿದ್ಧಪಡಿಸಿವೆ ಎಂದು ಇತ್ತೀಚಿನ ವರದಿಗಳು ಸ್ಪಷ್ಟಪಡಿಸಿವೆ.

    ಒಪ್ಪಂದದ ಬಗ್ಗೆ

    • ಈ ಒಪ್ಪಂದವು ಅಮೆರಿಕ ಮತ್ತು ಇರಾನ್ ನಡುವಿನ 14-ಅಂಶಗಳ ತಿಳಿವಳಿಕಾ ಒಪ್ಪಂದವನ್ನು (MoU) ಒಳಗೊಂಡಿದೆ.

    • ಇದು ಉದ್ವಿಗ್ನತೆಯನ್ನು ಶಮನಗೊಳಿಸಲು (De-escalation), ಹಾರ್ಮುಜ್ ಜಲಸಂಧಿಯ ಮೂಲಕ ವಾಣಿಜ್ಯ ನೌಕಾಯಾನವನ್ನು ಮರುಸ್ಥಾಪಿಸಲು ಮತ್ತು ಆರ್ಥಿಕ ನಿರ್ಬಂಧಗಳ ಸಡಿಲಿಕೆಯ ಮಾತುಕತೆಗಳಿಗೆ ಮಾರ್ಗಸೂಚಿಯನ್ನು ಒದಗಿಸುತ್ತದೆ.

    • ಲೆಬನಾನ್ ಸೇರಿದಂತೆ ಇತರ ಪ್ರದೇಶಗಳಲ್ಲಿನ ಮಿಲಿಟರಿ ಕಾರ್ಯಾಚರಣೆಯನ್ನು ತಕ್ಷಣವೇ ಸ್ಥಗಿತಗೊಳಿಸುವುದು ಮತ್ತು 60-ದಿನಗಳ ಮಾತುಕತೆಯ ಅವಧಿಯನ್ನು ಸಹ ಈ ಒಪ್ಪಂದವು ಒಳಗೊಂಡಿದೆ.

    ಇರಾನ್-ಅಮೆರಿಕ ಪರಮಾಣು ರಾಜತಾಂತ್ರಿಕತೆಯ ವಿಕಾಸ

    • 2015ರ ಪರಮಾಣು ಒಪ್ಪಂದ: ಇರಾನ್ ಮತ್ತು P5+1 ರಾಷ್ಟ್ರಗಳ ನಡುವೆ ಜಂಟಿ ಸಮಗ್ರ ಕ್ರಿಯಾ ಯೋಜನೆಗೆ (JCPOA) ಸಹಿ ಹಾಕಲಾಯಿತು.

    • ಆರ್ಥಿಕ ನಿರ್ಬಂಧಗಳ ಸಡಿಲಿಕೆಗೆ ಪ್ರತಿಯಾಗಿ, ಯುರೇನಿಯಂ ಪುಷ್ಟೀಕರಣವನ್ನು  ಸೀಮಿತಗೊಳಿಸಲು ಮತ್ತು ಕಟ್ಟುನಿಟ್ಟಾದ ತಪಾಸಣೆಗಳಿಗೆ ಒಳಪಡಲು ಇರಾನ್ ಸಮ್ಮತಿಸಿತ್ತು.

    • ಅಮೆರಿಕದ ನಿರ್ಗಮನ ಮತ್ತು ಮರುಕಳಿಸಿದ ಉದ್ವಿಗ್ನತೆ: ಅಮೆರಿಕವು 2018ರಲ್ಲಿ ಜಂಟಿ ಸಮಗ್ರ ಕ್ರಿಯಾ ಯೋಜನೆಯಿಂದ (JCPOA) ಹೊರಬಂದಿತು ಮತ್ತು ಇರಾನ್ ಮೇಲೆ ಮರು ನಿರ್ಬಂಧಗಳನ್ನು ಹೇರಿತು.

    • ಇದಕ್ಕೆ ಪ್ರತಿಕ್ರಿಯೆಯಾಗಿ, ಇರಾನ್ ಈ ಒಪ್ಪಂದದ ಹಲವಾರು ನಿಬಂಧನೆಗಳ ಪಾಲನೆಯನ್ನು ಹಂತಹಂತವಾಗಿ ಕಡಿತಗೊಳಿಸಿತು.

    ಇರಾನ್-ಅಮೆರಿಕ ಒಪ್ಪಂದದ ಸಂಭಾವ್ಯ ಫಲಿತಾಂಶಗಳು: 

    • ಈ ಉದ್ವಿಗ್ನತೆಯ ಕಡಿತವು ಪ್ರದೇಶದಾದ್ಯಂತ ಮಿಲಿಟರಿ ಸಂಘರ್ಷ ಮತ್ತು ಪರೋಕ್ಷ ಯುದ್ಧಗಳ ಅಪಾಯವನ್ನು ತಗ್ಗಿಸುತ್ತದೆ.

    • ಈ ಸ್ಥಿರ ವಾತಾವರಣವು ಸುಗಮ ಇಂಧನ ಪೂರೈಕೆಯನ್ನು ಖಚಿತಪಡಿಸುತ್ತದೆ ಮತ್ತು ಜಾಗತಿಕ ತೈಲ ಮಾರುಕಟ್ಟೆಯಲ್ಲಿನ ಏರಿಳಿತವನ್ನು ಕಡಿಮೆ ಮಾಡುತ್ತದೆ.

    • ಸುಧಾರಿತ ಭದ್ರತಾ ಪರಿಸ್ಥಿತಿಗಳು ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ವ್ಯಾಪಾರ, ಹೂಡಿಕೆ ಮತ್ತು ಪುನರ್ನಿರ್ಮಾಣ ಕಾರ್ಯಗಳನ್ನು ಉತ್ತೇಜಿಸುತ್ತವೆ.

    • ಭಾರತದ ಪಾಲಿಗೆ, ಚಾಬಹಾರ್ ಬಂದರು ಮತ್ತು ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್ (INSTC) ಅಭಿವೃದ್ಧಿಯನ್ನು ಉತ್ತೇಜಿಸಲು ಈ ಸುಧಾರಿತ ಪ್ರಾದೇಶಿಕ ಪರಿಸ್ಥಿತಿಗಳು ಅತ್ಯಗತ್ಯವಾಗಿವೆ.

    ಪ್ಯಾರಿಸ್ ಒಪ್ಪಂದದ ಅಡಿಯಲ್ಲಿ ಜಂಟಿ ಕ್ರೆಡಿಟಿಂಗ್ ಕಾರ್ಯವಿಧಾನ

    ಪರಿಸರ

    ಇದೀಗ ಸುದ್ದಿಯಲ್ಲಿ:

    • ಭಾರತ ಮತ್ತು ಜಪಾನ್ ದೇಶಗಳು ಪ್ಯಾರಿಸ್ ಒಪ್ಪಂದದ ವಿಧಿ 6.2ರ ಅಡಿಯಲ್ಲಿ ಜಂಟಿ ಕ್ರೆಡಿಟಿಂಗ್ ಕಾರ್ಯವಿಧಾನದ (Joint Crediting Mechanism – JCM) ಜಾರಿ ನಿಯಮಗಳನ್ನು ಅಂಗೀಕರಿಸಿವೆ.

    ಜಂಟಿ ಕ್ರೆಡಿಟಿಂಗ್ ಕಾರ್ಯವಿಧಾನ (JCM)ದ ಬಗ್ಗೆ: 

    • ಸುಧಾರಿತ ಕಡಿಮೆ-ಇಂಗಾಲದ ತಂತ್ರಜ್ಞಾನಗಳ ಮೂಲಕ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಜಪಾನ್ ಪ್ರಸ್ತಾಪಿಸಿದ ದ್ವಿಪಕ್ಷೀಯ ಇಂಗಾಲದ ಮಾರುಕಟ್ಟೆ ವ್ಯವಸ್ಥೆ ಇದಾಗಿದೆ.

    • ಇದು ಪ್ಯಾರಿಸ್ ಒಪ್ಪಂದದ ವಿಧಿ 6.2ರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ರಾಷ್ಟ್ರಗಳು ತಮ್ಮ ಹವಾಮಾನ ಗುರಿಗಳನ್ನು ತಲುಪಲು ಇಂಗಾಲದ ಕ್ರೆಡಿಟ್‌ಗಳನ್ನು ವ್ಯಾಪಾರ ಮಾಡಲು ಇದು ಅನುಮತಿಸುತ್ತದೆ.

    ಪ್ಯಾರಿಸ್ ಒಪ್ಪಂದದ ವಿಧಿ 6.2 ರ ಬಗ್ಗೆ: 

    • ಇದು ಇಂಗಾಲದ ಕ್ರೆಡಿಟ್‌ಗಳನ್ನು ವ್ಯಾಪಾರ ಮಾಡುವ ಮೂಲಕ ತಮ್ಮ ಹವಾಮಾನ ಗುರಿಗಳನ್ನು ತಲುಪಲು ಒಟ್ಟಾಗಿ ಕೆಲಸ ಮಾಡಲು ದೇಶಗಳಿಗೆ ಅವಕಾಶ ನೀಡುತ್ತದೆ.

    • ಈ ನಿಯಮದ ಅಡಿಯಲ್ಲಿ, ನಿಗದಿಗಿಂತ ಹೆಚ್ಚಿನ ಹಸಿರುಮನೆ ಅನಿಲಗಳನ್ನು ಕಡಿತಗೊಳಿಸುವ ದೇಶವು, ತಾನು ಉಳಿತಾಯ ಮಾಡಿದ ಆ ಹೆಚ್ಚುವರಿ ಕ್ರೆಡಿಟ್‌ಗಳನ್ನು ಮತ್ತೊಂದು ದೇಶಕ್ಕೆ ಮಾರಾಟ ಮಾಡಬಹುದು.

    ಹವಾಮಾನ ಬದಲಾವಣೆ ಕುರಿತಾದ ಪ್ಯಾರಿಸ್ ಒಪ್ಪಂದ, 2015 (COP 21)

    • ಇದನ್ನು 2015ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆಯ ಚೌಕಟ್ಟಿನ ಸಮಾವೇಶದಲ್ಲಿ (UNFCCC – COP21) ಅಂಗೀಕರಿಸಲಾಯಿತು.

    • ಉದ್ದೇಶ: ಹವಾಮಾನ ಬದಲಾವಣೆಯ ಅಪಾಯಗಳಿಗೆ ಜಾಗತಿಕ ಪ್ರತಿಕ್ರಿಯೆಯನ್ನು ಬಲಪಡಿಸುವುದು ಮತ್ತು ಜಾಗತಿಕ ಸರಾಸರಿ ತಾಪಮಾನ, ಹವಾಮಾನ ಬದಲಾವಣೆಯ ಹೊಂದಾಣಿಕೆ ಮತ್ತು ಹಣಕಾಸು ಹರಿವುಗಳಿಗೆ ಸಂಬಂಧಿಸಿದಂತೆ ದೀರ್ಘಕಾಲೀನ ಗುರಿಗಳನ್ನು ನಿರ್ದಿಷ್ಟಪಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

    ಪ್ಯಾರಿಸ್ ಒಪ್ಪಂದದ ಗುರಿಗಳು: 

    • ತಾಪಮಾನ: ಜಾಗತಿಕ ತಾಪಮಾನ ಏರಿಕೆಯನ್ನು ಕೈಗಾರಿಕಾ ಪೂರ್ವ ಮಟ್ಟಕ್ಕಿಂತ (Pre-industrial Levels) 2 ಡಿಗ್ರಿ ಸೆಲ್ಸಿಯಸ್‌ಗಿಂತ ಕೆಳಗೆ ತರಿಸುವುದು ಮತ್ತು ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಸೀಮಿತಗೊಳಿಸಲು ಪ್ರಯತ್ನಗಳನ್ನು ಮುಂದುವರಿಸುವುದು.

    • ಹೊರಸೂಸುವಿಕೆ ಕಡಿತ: 2030ರ ವೇಳೆಗೆ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಮೂಲಕ ಹವಾಮಾನ ಚೇತರಿಕೆಯನ್ನು ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವುದು.

    ಉದ್ದೇಶಿತ ರಾಷ್ಟ್ರೀಯ ನಿರ್ಧರಿತ ಕೊಡುಗೆಗಳು (INDCs)

    • ಉದ್ದೇಶಿತ ರಾಷ್ಟ್ರೀಯ ನಿರ್ಧರಿತ ಕೊಡುಗೆಯು ಹವಾಮಾನ ಬದಲಾವಣೆಯ ಮೇಲಿನ ಸಾಮೂಹಿಕ ಕ್ರಿಯೆಯ ಕುರಿತು ಒಂದು ದೇಶವು ಮಾಡುವ ಸಾರ್ವಜನಿಕ ಪ್ರತಿಜ್ಞೆಯಾಗಿದೆ.

    • ಈ ಹವಾಮಾನ ಸಂಬಂಧಿ ಕೊಡುಗೆಗಳನ್ನು 2030ರ ಮೊದಲು ಸಾಧಿಸಬೇಕಾಗಿದೆ.

    ಭಾರತದ ಹವಾಮಾನ ಕ್ರಿಯಾ ಗುರಿಗಳು (India’s Climate Action Targets)

    ಬದ್ಧತೆಯ ಕ್ಷೇತ್ರ

    ಆರಂಭಿಕ/ನವೀಕರಿಸಿದ 2030ರ ಗುರಿಗಳು 

    ವರ್ಧಿತ 2031-2035ರ ಗುರಿಗಳು 

    ಹೊರಸೂಸುವಿಕೆಯ ತೀವ್ರತೆ 

    2005ರ ಮಟ್ಟಕ್ಕೆ ಹೋಲಿಸಿದರೆ, GDP ಹೊರಸೂಸುವಿಕೆಯ ತೀವ್ರತೆಯನ್ನು ಶೇಕಡಾ 45 ರಷ್ಟು ಕಡಿಮೆ ಮಾಡುವ ಗುರಿಯನ್ನು ಹೊಂದಲಾಗಿದೆ.

    2005ರ ಮಟ್ಟಕ್ಕೆ ಹೋಲಿಸಿದರೆ, GDP ಹೊರಸೂಸುವಿಕೆಯ ತೀವ್ರತೆಯನ್ನು ಶೇಕಡಾ 47 ರಷ್ಟು ಕಡಿಮೆ ಮಾಡುವ ಗುರಿಯನ್ನು ಹೊಂದಲಾಗಿದೆ.

    ಪಳೆಯುಳಿಕೆಯೇತರ ಶಕ್ತಿಯ ಸಾಮರ್ಥ್ಯ 

    ಒಟ್ಟು ಸಂಚಿತ ವಿದ್ಯುತ್ ಸಾಮರ್ಥ್ಯದ ಶೇಕಡಾ 50 ರಷ್ಟನ್ನು ಪಳೆಯುಳಿಕೆಯೇತರ ಮೂಲಗಳಿಂದ ಸಾಧಿಸುವ ಗುರಿಯನ್ನು ಹೊಂದಲಾಗಿದೆ.

    ಒಟ್ಟು ಸಂಚಿತ ವಿದ್ಯುತ್ ಸ್ಥಾಪಿತ ಸಾಮರ್ಥ್ಯದ ಶೇಕಡಾ 60 ರಷ್ಟನ್ನು ಪಳೆಯುಳಿಕೆಯೇತರ ಮೂಲಗಳಿಂದ ಸಾಧಿಸುವ ಗುರಿಯನ್ನು ಹೊಂದಲಾಗಿದೆ.

    ಇಂಗಾಲದ ಸಂಗ್ರಾಹಕಗಳು (ಕಾರ್ಬನ್ ಸಿಂಕ್)

    2.5 ರಿಂದ 3 ಶತಕೋಟಿ ಟನ್‌ಗಳಷ್ಟು CO₂ ಸಮಾನವಾದ ಕಾರ್ಬನ್ ಸಿಂಕ್ ಅನ್ನು ರಚಿಸುವ ಗುರಿಯನ್ನು ಹೊಂದಲಾಗಿದೆ.

    ಹೆಚ್ಚುವರಿಯಾಗಿ 3.5 ರಿಂದ 4.0 ಶತಕೋಟಿ ಟನ್‌ಗಳಷ್ಟು CO₂ ಸಮಾನವಾದ ಕಾರ್ಬನ್ ಸಿಂಕ್ ಅನ್ನು ರಚಿಸುವ ಗುರಿಯನ್ನು ಹೊಂದಲಾಗಿದೆ.

    ಬಿಟುಮೆನ್ (Bitumen)

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿ:

    • ಪಶ್ಚಿಮ ಏಷ್ಯಾದಲ್ಲಿನ ಇತ್ತೀಚಿನ ಸಂಘರ್ಷವು ರಸ್ತೆ ಮೂಲಸೌಕರ್ಯವನ್ನು ವಿಸ್ತರಿಸುವ ಭಾರತದ ಪ್ರಯತ್ನಕ್ಕೆ ತೀವ್ರ ಹೊಡೆತ ನೀಡಿದೆ, ಏಕೆಂದರೆ ಭಾರತವು ತನ್ನ ಅಗತ್ಯದ ಶೇಕಡಾ 30 ರಿಂದ 40 ರಷ್ಟು ಬಿಟುಮೆನ್ ಅನ್ನು ಆಮದು ಮಾಡಿಕೊಳ್ಳುತ್ತದೆ.

    • ಭಾರತದ ಬಿಟುಮೆನ್ ಆಮದಿನ ಶೇಕಡಾ 99 ಕ್ಕಿಂತ ಹೆಚ್ಚಿನ ಪಾಲು ಇರಾಕ್, UAE, ಇರಾನ್, ಓಮನ್ ಮತ್ತು ಬಹ್ರೇನ್ ದೇಶಗಳಿಂದ ಬರುತ್ತದೆ.

    ಬಿಟುಮೆನ್ (Bitumen) ಬಗ್ಗೆ 

    • ಬಿಟುಮೆನ್ ಎಂಬುದು ಕಚ್ಚಾ ತೈಲದ ಉಪಉತ್ಪನ್ನವಾಗಿದೆ.

    • ಇದು ಜಲನಿರೋಧಕ ಮತ್ತು ಅಂಟಿಕೊಳ್ಳುವ ಗುಣಲಕ್ಷಣಗಳಿಗೆ ಹೆಚ್ಚು ಹೆಸರುವಾಸಿಯಾಗಿದೆ.

    • ಇದನ್ನು ಪ್ರಧಾನವಾಗಿ ರಸ್ತೆ ನಿರ್ಮಾಣ ಮತ್ತು ಛಾವಣಿಯ ನಿರ್ಮಾಣಗಳಲ್ಲಿ ಬಳಸಲಾಗುತ್ತದೆ.

    • ಕೆನಡಾ ದೇಶವು ತನ್ನ ತೈಲಯುಕ್ತ ಮರಳು (Oil Sands) ಪ್ರದೇಶಗಳಲ್ಲಿ ಬಿಟುಮೆನ್‌ನ ಅತಿದೊಡ್ಡ ನೈಸರ್ಗಿಕ ನಿಕ್ಷೇಪಗಳಲ್ಲಿ ಒಂದನ್ನು ಹೊಂದಿದ್ದು, ಇದು ಜಾಗತಿಕ ಪೂರೈಕೆಗೆ ಗಮನಾರ್ಹ ಕೊಡುಗೆಯನ್ನು ಒದಗಿಸುತ್ತದೆ.

    • ಶುದ್ಧತೆಯನ್ನು ಖಚಿತಪಡಿಸಿಕೊಳ್ಳಲು, ಸ್ಥಿರವಾದ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಮತ್ತು ಬೃಹತ್ ಜಾಗತಿಕ ನಿರ್ಮಾಣ ಬೇಡಿಕೆಗಳನ್ನು ಕಡಿಮೆ ವೆಚ್ಚದಲ್ಲಿ ಪೂರೈಸಲು ಇದನ್ನು ತೈಲ ಸಂಸ್ಕರಣಾಗಾರಗಳಲ್ಲಿ ಉತ್ಪಾದಿಸಲಾಗುತ್ತದೆ.

  • ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಸಪ್ರಶ್ನೆ – ಜೂನ್ 18, 2026

    ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಸಪ್ರಶ್ನೆ – ಜೂನ್ 18, 2026

  • ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಚಲಿತ ವಿದ್ಯಮಾನಗಳ ಬಹು ಆಯ್ಕೆ ಪ್ರಶ್ನೆಗಳು (MCQs)

    ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಚಲಿತ ವಿದ್ಯಮಾನಗಳ ಬಹು ಆಯ್ಕೆ ಪ್ರಶ್ನೆಗಳು (MCQs)

    1. ಕೆಳಗಿನ ಯಾವ ಕಾಯ್ದೆಯ ನಿಬಂಧನೆಗಳನ್ನು ಜಾರಿಗೆ ತರಲು ಶಿ-ಬಾಕ್ಸ್ (SHe-Box) ಅನ್ನು ಅಭಿವೃದ್ಧಿಪಡಿಸಲಾಗಿದೆ?

    (A) ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣೆ ಕಾಯ್ದೆ, 2005 (Protection of Women from Domestic Violence Act, 2005)

    (B) ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ, 2013 (Sexual Harassment of Women at Workplace (Prevention, Prohibition and Redressal) Act, 2013)

    (C) ಹೆರಿಗೆ ಸೌಲಭ್ಯ ಕಾಯ್ದೆ, 1961 (Maternity Benefit Act, 1961)

    (D) ಸಮಾನ ಸಂಭಾವನೆ ಕಾಯ್ದೆ, 1976 (Equal Remuneration Act, 1976)

    ಉತ್ತರ: B

    2. ‘ಡಾರ್ಕ್ ವೆಬ್‌’ಗೆ (Dark Web) ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಸಾಮಾನ್ಯ ಸರ್ಚ್ ಇಂಜಿನ್‌ಗಳ ಮೂಲಕ ಇದನ್ನು ಪ್ರವೇಶಿಸಬಹುದು.
    2. ಡಾರ್ಕ್ ವೆಬ್‌ನಲ್ಲಿರುವ ವೆಬ್‌ಸೈಟ್‌ಗಳು ಹೆಚ್ಚಾಗಿ “.onion” ಡೊಮೇನ್‌ಗಳನ್ನು ಬಳಸುತ್ತವೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
    A) 1 ಮಾತ್ರ
    B) 2 ಮಾತ್ರ
    C) 1 ಮತ್ತು 2 ಎರಡೂ
    D) 1 ಅಥವಾ  2 ಯಾವುದೂ ಅಲ್ಲ

    ಉತ್ತರ: B

    3. ಪ್ರಧಾನ ಮಂತ್ರಿ ವಿಕಸಿತ್ ಭಾರತ್ ರೋಜಗಾರ್ ಯೋಜನೆಯನ್ನು (PM-VBRY) ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಯಾವ ಸಚಿವಾಲಯ ಹೊಂದಿದೆ?

    A) ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ

    B) ಹಣಕಾಸು ಸಚಿವಾಲಯ

    C) ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ

    D) MSME ಸಚಿವಾಲಯ

    ಉತ್ತರ: C

    4. QS ವಿಶ್ವವಿದ್ಯಾಲಯಗಳ ಶ್ರೇಯಾಂಕ 2027 ರಲ್ಲಿ ಯಾವ ಭಾರತೀಯ ಸಂಸ್ಥೆಯು ಭಾರತೀಯ ಸಂಸ್ಥೆಗಳ ಪೈಕಿ ಅತ್ಯುನ್ನತ ಶ್ರೇಯಾಂಕವನ್ನು ಪಡೆದುಕೊಂಡಿದೆ?

    A) IIT ಬಾಂಬೆ

    B) IIT ದೆಹಲಿ (IIT Delhi)

    C) IISc ಬೆಂಗಳೂರು (IISc Bengaluru)

    D) IIT ಮದ್ರಾಸ್ (IIT Madras)

    ಉತ್ತರ: B

    5. PMAY-U 2.0 ಯೋಜನೆಗೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಇದನ್ನು PMAY-U ಯೋಜನೆಯ ನವೀಕರಿಸಿದ ಮತ್ತು ವಿಸ್ತರಿತ ಆವೃತ್ತಿಯಾಗಿ ಪ್ರಾರಂಭಿಸಲಾಗಿದೆ.
    2. PMAY-U ಯೋಜನೆಯನ್ನು ಮೂಲತಃ 2015 ರಲ್ಲಿ ಪ್ರಾರಂಭಿಸಲಾಯಿತು.
    3. PMAY-U 2.0 ಯೋಜನೆಯು ಪ್ರತ್ಯೇಕವಾಗಿ ಕೊಳೆಗೇರಿಗಳ ಮರು-ಅಭಿವೃದ್ಧಿಯ ಗುರಿಯನ್ನು ಹೊಂದಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿ?
    A) 1 ಮತ್ತು 2 ಮಾತ್ರ
    B) 2 ಮಾತ್ರ
    C) 1 ಮತ್ತು 3 ಮಾತ್ರ
    D) 1, 2 ಮತ್ತು 3
    ಉತ್ತರ: A

  • ಟೆಲಿಗ್ರಾಮ್ ನಿಷೇಧ : IT ಕಾಯ್ದೆ 2000 ರ ಸೆಕ್ಷನ್ 69A | ಆಪರೇಷನ್ ದೃಷ್ಟಿ | ಆಧಾರ್ ‘ದುರ್ಬಳಕೆ’ | ಕಾಶ್ಮೀರ ಕೇಸರಿ

    ಟೆಲಿಗ್ರಾಮ್ ನಿಷೇಧ : IT ಕಾಯ್ದೆ 2000 ರ ಸೆಕ್ಷನ್ 69A

    ರಾಜಕೀಯ ಮತ್ತು ಆಡಳಿತ

    ಇದೀಗ ಸುದ್ದಿಯಲ್ಲಿ:

    • ಕ್ರಿಮಿನಲ್ ಜಾಲಗಳು ಟೆಲಿಗ್ರಾಮ್‌ನ (Telegram) ಸಂದೇಶ- ತಿದ್ದುಪಡಿ ವೈಶಿಷ್ಟ್ಯವನ್ನು (Message-editing feature) ಬಳಸಿಕೊಂಡು NEET UG 2026 ಮರು-ಪರೀಕ್ಷೆಯ ಅಭ್ಯರ್ಥಿಗಳಿಗೆ ವಂಚಿಸಿದ ನಂತರ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ಶಿಫಾರಸಿನ ಮೇರೆಗೆ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಸೆಕ್ಷನ್ 69A ಅಡಿಯಲ್ಲಿ  ಭಾರತದಲ್ಲಿ ಟೆಲಿಗ್ರಾಮ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದೆ.

    ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಸೆಕ್ಷನ್ 69A 

    • ಇದು ಯಾವುದೇ ಕಂಪ್ಯೂಟರ್ ಸಂಪನ್ಮೂಲದ ಮೂಲಕ ಯಾವುದೇ ಡಿಜಿಟಲ್ ಮಾಹಿತಿಗೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುವ ಪ್ರಾಥಮಿಕ ಕಾನೂನು ನಿಬಂಧನೆಯಾಗಿದೆ.
    • ಅನ್ವಯಿಸುವ ಆಧಾರಗಳು: ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ, ರಕ್ಷಣೆ, ರಾಜ್ಯದ ಭದ್ರತೆ, ವಿದೇಶಿ ರಾಷ್ಟ್ರಗಳೊಂದಿಗೆ ಸ್ನೇಹಪರ ಸಂಬಂಧಗಳು, ಸಾರ್ವಜನಿಕ ಸುವ್ಯವಸ್ಥೆ ಅಥವಾ ಅರಿವಿಗೆ ಬರುವ (ಸಂಜ್ಞೆಯ) ಅಪರಾಧಗಳಿಗೆ ಪ್ರಚೋದನೆಯನ್ನು ತಡೆಯುವ ಆಧಾರದ ಮೇಲೆ ಈ ಸೆಕ್ಷನ್ ಅನ್ನು ಬಳಸಲಾಗುತ್ತದೆ.
    • ಈ ಐತಿಹಾಸಿಕ ಪ್ರಕರಣದಲ್ಲಿ, ಸರ್ವೋಚ್ಚ ನ್ಯಾಯಾಲಯವು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69A ಅನ್ನು ಸಾಂವಿಧಾನಿಕವಾಗಿ ಮಾನ್ಯವಾಗಿದೆ (Constitutionally valid) ಎಂದು ಎತ್ತಿಹಿಡಿದಿದೆ. ಅಲ್ಲದೆ, ನ್ಯಾಯಾಲಯವು ಈ ಸೆಕ್ಷನ್ ಅನ್ನು “ಹಲವಾರು ರಕ್ಷಣಾತ್ಮಕ ಕ್ರಮಗಳನ್ನು ಒಳಗೊಂಡಿರುವ ಹಾಗೂ ನಿರ್ದಿಷ್ಟವಾಗಿ ರೂಪಿಸಲಾದ ನಿಬಂಧನೆ” (Narrowly drawn provision with several safeguards) ಎಂದು ಬಣ್ಣಿಸಿದೆ.

    ಆಪರೇಷನ್ ದೃಷ್ಟಿ

    ಸರ್ಕಾರಿ ಯೋಜನೆಗಳು

    ಇದೀಗ ಸುದ್ದಿಯಲ್ಲಿ:

    • ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆಯು ಜಂಟಿಯಾಗಿ ರಾಂಚಿಯ ಮಿಲಿಟರಿ ಆಸ್ಪತ್ರೆ ನಾಮ್‌ಕುಮ್‌ನಲ್ಲಿ ‘ಆಪರೇಷನ್ ದೃಷ್ಟಿ‘ (Operation DRISHTI) ಅಡಿಯಲ್ಲಿ ಬೃಹತ್ ಸುಧಾರಿತ ಶಸ್ತ್ರಚಿಕಿತ್ಸಾ ನೇತ್ರ ಶಿಬಿರವನ್ನು ಪ್ರಾರಂಭಿಸಿವೆ.

    ಆಪರೇಷನ್ ದೃಷ್ಟಿ ಬಗ್ಗೆ

    • ಇದು ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ (AFMS) ಪ್ರಮುಖ ಮಾನವೀಯ ಸಂಪರ್ಕ ಕಾರ್ಯಕ್ರಮವಾಗಿದ್ದು, ಸುಧಾರಿತ ನೇತ್ರಶಾಸ್ತ್ರದ ಪರಿಣತಿಯನ್ನು ಸಮಾಜ ಸೇವೆಯೊಂದಿಗೆ ಸಂಯೋಜಿಸುತ್ತದೆ.
    • ದೇಶದ ದುರ್ಗಮ, ಅಭಿವೃದ್ಧಿ ವಂಚಿತ ಮತ್ತು ಭೌಗೋಳಿಕವಾಗಿ ಪ್ರತಿಕೂಲವಾದ ಪ್ರದೇಶಗಳಿಗೆ ವಿಶೇಷ ನೇತ್ರ ಆರೈಕೆ ಸೇವೆಗಳನ್ನು ಒದಗಿಸುವುದು ಈ ಕಾರ್ಯಕ್ರಮದ ಪ್ರಮುಖ ಗುರಿಯಾಗಿದೆ.
    • ಈ ಹಿಂದೆ ಈ ಉಪಕ್ರಮವು ಲೆಹ್, ಲಡಾಖ್, ಲಕ್ಷದ್ವೀಪ, ಭುಜ್, ಕಚ್ ಮತ್ತು ಬಾಗ್ದೋಗ್ರಾ ಸೇರಿದಂತೆ ದೇಶಾದ್ಯಂತ 8 ಸುಧಾರಿತ ಶಸ್ತ್ರಚಿಕಿತ್ಸಾ ನೇತ್ರ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿದೆ.

    ಆಧಾರ್ ‘ದುರ್ಬಳಕೆ’

    ರಾಜಕೀಯ ಮತ್ತು ಆಡಳಿತ

    ಇದೀಗ ಸುದ್ದಿಯಲ್ಲಿ:

    • ಆಧಾರ್ ಕಾರ್ಡ್‌ಗಳ ದುರ್ಬಳಕೆಯನ್ನು ಆರೋಪಿಸಿ ಸಲ್ಲಿಸಲಾದ ಅರ್ಜಿಯ ಕುರಿತು ಪ್ರತಿಕ್ರಿಯೆ ನೀಡುವಂತೆ ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಕೇಳಿದೆ.

    ಆಧಾರ್ ಬಗ್ಗೆ

    • ಆಧಾರ್ ಕಾರ್ಡ್ ಎಂಬುದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು (UIDAI) ಭಾರತೀಯ ನಿವಾಸಿಗಳಿಗೆ ನೀಡುವ 12-ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆಯಾಗಿದೆ.
    • ಇದನ್ನು 2010 ರಲ್ಲಿ ಪರಿಚಯಿಸಲಾಯಿತು.
    • ಇದು ಗುರುತು ಮತ್ತು ವಿಳಾಸದ ಮಾನ್ಯ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಸರ್ಕಾರಿ ಕಲ್ಯಾಣ ಯೋಜನೆಗಳು, ಹಣಕಾಸು ಸೇವೆಗಳು ಹಾಗೂ ಡಿಜಿಟಲ್ ದೃಢೀಕರಣವನ್ನು ಪಡೆಯಲು ಅತ್ಯಗತ್ಯವಾಗಿದೆ.

    ಆಧಾರ್‌ನ ಉದ್ದೇಶಗಳು: 

    • ವಿಶಿಷ್ಟ ಗುರುತು: ಈ ವಿಶಿಷ್ಟ ಗುರುತಿನ ಸಂಖ್ಯೆಯು ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟ ಗುರುತು ಮತ್ತು ವಿಳಾಸದ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ.
    • ಸಾಮಾಜಿಕ ಕಲ್ಯಾಣ ಯೋಜನೆಗಳು: ಆಧಾರ್ ಕಾರ್ಡ್ ಸರ್ಕಾರಿ ಪ್ರಯೋಜನಗಳು ಮತ್ತು ಸಬ್ಸಿಡಿಗಳ ವಿತರಣೆಯನ್ನು ಸುಗಮಗೊಳಿಸುತ್ತದೆ, ಆ ಮೂಲಕ ವಂಚನೆಯನ್ನು ಕಡಿಮೆ ಮಾಡಿ, ಪ್ರಯೋಜನಗಳು ಅರ್ಹ ಫಲಾನುಭವಿಗಳಿಗೆ ತಲುಪುವುದನ್ನು ಖಚಿತಪಡಿಸುತ್ತದೆ.
    • ದತ್ತಾಂಶ-ಚಾಲಿತ ಆಡಳಿತ: ನಿಖರವಾದ ಜನಸಂಖ್ಯಾ ಅಂಕಿಅಂಶಗಳು ಮತ್ತು ಜನಸಂಖ್ಯಾಶಾಸ್ತ್ರವನ್ನು ಒದಗಿಸುವ ಮೂಲಕ ದತ್ತಾಂಶ-ಚಾಲಿತ ನೀತಿಗಳು ಮತ್ತು ಆಡಳಿತವನ್ನು ರಚಿಸಲು ಆಧಾರ್ ಸಹಾಯ ಮಾಡುತ್ತದೆ.

    ಸಂಬಂಧಿತ ಆಡಳಿತಾತ್ಮಕ ಚೌಕಟ್ಟು

    • ಆಧಾರ್ ಕಾಯ್ದೆ, 2016: ಇದು ಆಧಾರ್ ಅನ್ನು ನಿಯಂತ್ರಿಸುವ ಪ್ರಾಥಮಿಕ ಕಾನೂನಾಗಿದ್ದು, ಸಬ್ಸಿಡಿಗಳು, ಪ್ರಯೋಜನಗಳು ಮತ್ತು ಸೇವೆಗಳ ವಿತರಣೆಗಾಗಿ ಆಧಾರ್ ಸಂಖ್ಯೆಗಳ ವಿತರಣೆ, ದೃಢೀಕರಣ ಮತ್ತು ಬಳಕೆಗೆ ಕಾನೂನು ಚೌಕಟ್ಟನ್ನು ಒದಗಿಸುತ್ತದೆ.
    • ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 : ಆಧಾರ್ ಸಂಬಂಧಿತ ಮಾಹಿತಿಯನ್ನು ಒಳಗೊಂಡಿರುವ ಅನಧಿಕೃತ ಪ್ರವೇಶ, ದತ್ತಾಂಶ ಕಳ್ಳತನ, ಹ್ಯಾಕಿಂಗ್ ಮತ್ತು ಸೈಬರ್ ಅಪರಾಧಗಳ ವಿರುದ್ಧ ಇದು ಕಾನೂನು ರಕ್ಷಣೆಯನ್ನು ಒದಗಿಸುತ್ತದೆ.
    • ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯ್ದೆ, 2023: ಇದು ಆಧಾರ್-ಸಂಯೋಜಿತ ಮಾಹಿತಿ ಸೇರಿದಂತೆ ವೈಯಕ್ತಿಕ ದತ್ತಾಂಶಗಳ ಸಂಸ್ಕರಣೆ ಮತ್ತು ರಕ್ಷಣೆಗಾಗಿ ಸುರಕ್ಷತಾ ಕ್ರಮಗಳನ್ನು ಸ್ಥಾಪಿಸುತ್ತದೆ ಮತ್ತು ವ್ಯಕ್ತಿಗಳ ದತ್ತಾಂಶ ಗೌಪ್ಯತೆಯ ಹಕ್ಕುಗಳನ್ನು ಗುರುತಿಸುತ್ತದೆ.
    • ನ್ಯಾಯಮೂರ್ತಿ ಕೆ.ಎಸ್. ಪುಟ್ಟಸ್ವಾಮಿ vs ಭಾರತ ಒಕ್ಕೂಟ ಪ್ರಕರಣ(2018): ಇದು ಆಧಾರ್‌ನ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿಹಿಡಿಯಿತು ಮತ್ತು ಖಾಸಗಿ ವಲಯದ ಹಲವಾರು ಸೇವೆಗಳಲ್ಲಿ ಕಡ್ಡಾಯ ಆಧಾರ್ ಜೋಡಣೆಯನ್ನು ನಿರ್ಬಂಧಿಸಿತು. ಗೌಪ್ಯತೆಯನ್ನು (ಖಾಸಗಿತನವನ್ನು) ಮೂಲಭೂತ ಹಕ್ಕಾಗಿ ಪ್ರತಿಪಾದಿಸಿದ ಈ ತೀರ್ಪು, ದುರ್ಬಳಕೆಯ ವಿರುದ್ಧ ಕಡ್ಡಾಯ ಸುರಕ್ಷತಾ ಕ್ರಮಗಳ ಅಗತ್ಯವನ್ನು ಒತ್ತಿಹೇಳಿತು.

    ಕಾಶ್ಮೀರ ಕೇಸರಿ

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿ: 

    • ಪಶ್ಚಿಮ ಏಷ್ಯಾದ ಸಂಘರ್ಷವು ಇರಾನ್‌ನ ಕೇಸರಿ ರಫ್ತಿಗೆ ಅಡ್ಡಿಯುಂಟುಮಾಡಿದೆ, ಇದು ಕಾಶ್ಮೀರಿ ಕೇಸರಿಗೆ ಜಾಗತಿಕ ಬೇಡಿಕೆಯು ತೀವ್ರವಾಗಿ ಹೆಚ್ಚಾಗಲು ಕಾರಣವಾಗಿದೆ.

    ‘ಕಾಶ್ಮೀರ ಕೇಸರಿ’ಯ ಬಗ್ಗೆ

    • ಕಾಶ್ಮೀರ ಕೇಸರಿಯು ಜಮ್ಮು ಮತ್ತು ಕಾಶ್ಮೀರದ ‘ಕರೇವಾ’ ಭೂಪ್ರದೇಶಗಳಲ್ಲಿ ಬೆಳೆಯುವ ಅತ್ಯಂತ ಉತ್ಕೃಷ್ಟ ಗುಣಮಟ್ಟದ ಸಾಂಬಾರ ಪದಾರ್ಥವಾಗಿದೆ.
    • ಈ ವಿಶಿಷ್ಟ ಕೃಷಿ ಉತ್ಪನ್ನವು 2020 ರಲ್ಲಿ ಭೌಗೋಳಿಕ ಸೂಚ್ಯಂಕ ಮಾನ್ಯತೆಯನ್ನು ಪಡೆದುಕೊಂಡಿದೆ.

    ಭೌಗೋಳಿಕತೆ ಮತ್ತು ಹವಾಮಾನ: 

    • ಮಣ್ಣು: ಇದು ಕರೇವಾ ಮಣ್ಣಿನಲ್ಲಿ (ಹಳೆಯ ಸರೋವರಗಳಿಂದ ರೂಪುಗೊಂಡ ಮಣ್ಣು ಮತ್ತು ಮರಳಿನ ದಪ್ಪ, ಸಮತಟ್ಟಾದ ಪದರಗಳು) ಮಾತ್ರ ಬೆಳೆಯುತ್ತದೆ.
    • ಎತ್ತರ: ಸಮುದ್ರ ಮಟ್ಟದಿಂದ 1,600 ರಿಂದ 1,800 ಮೀಟರ್‌ಗಳಷ್ಟು ಅತಿ ಎತ್ತರದ ಪ್ರದೇಶಗಳಲ್ಲಿ ಇದನ್ನು ಬೆಳೆಯಲಾಗುತ್ತದೆ.
    • ಪ್ರದೇಶಗಳು: ‘ಪಾಂಪೋರ್’ ಇದರ ಪ್ರಮುಖ ಬೆಳೆಯುವ ಪ್ರದೇಶವಾಗಿದ್ದು, ಇದನ್ನು “ಕಾಶ್ಮೀರದ ಕೇಸರಿ ಬಟ್ಟಲು” ಎಂದು ಕರೆಯಲಾಗುತ್ತದೆ.

    ಪ್ರಮುಖ ಲಕ್ಷಣಗಳು ಮತ್ತು ವಿಧಗಳು: 

    • ವಿಶಿಷ್ಟ ಲಕ್ಷಣಗಳು: ಕಡು ಕೆಂಪು ಬಣ್ಣ, ದಪ್ಪವಾದ ಶಲಾಕಾಗ್ರಗಳು, ಹೆಚ್ಚಿನ ಸುವಾಸನೆ ಮತ್ತು ಯಾವುದೇ ರಾಸಾಯನಿಕ ಬಣ್ಣಗಳಿಲ್ಲದಿರುವುದು ಇದರ ಪ್ರಮುಖ ಲಕ್ಷಣಗಳಾಗಿವೆ.
    • ಮೂರು ವಿಧಗಳು: 
    1. ಮೊಂಗ್ರಾ [Mongra] (ಶುದ್ಧ ಕಡು ಕೆಂಪು ಎಳೆಗಳು; ಅತ್ಯುತ್ತಮ ಗುಣಮಟ್ಟ), 
    2. ಲಚ್ಚಾ [Lachha] (ಕೆಲವು ಹಳದಿ ಭಾಗಗಳನ್ನು ಹೊಂದಿರುವ ಒಣ ಎಳೆಗಳು), 
    3. ಗುಚ್ಚಿ [Guchhi] (ಕಟ್ಟುಗಳಾಗಿ ಕಟ್ಟಿದ ಎಳೆಗಳು).

    ಸರ್ಕಾರದ ಉಪಕ್ರಮಗಳು: 

    • ರಾಷ್ಟ್ರೀಯ ಕೇಸರಿ ಮಿಷನ್: ಮಣ್ಣಿನ ಫಲವತ್ತತೆಯನ್ನು ಸುಧಾರಿಸಲು, ಕೃಷಿ ಭೂಮಿಗೆ ತುಂತುರು ನೀರಾವರಿ ಸಾಧನಗಳನ್ನು ಒದಗಿಸಲು ಮತ್ತು ಕೇಸರಿ ಬೆಳೆಯ ಇಳುವರಿಯನ್ನು ಹೆಚ್ಚಿಸುವ ಪ್ರಮುಖ ಉದ್ದೇಶದೊಂದಿಗೆ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ.
    • ಸ್ಯಾಫ್ರಾನ್ ಬೌಲ್ ಪ್ರಾಜೆಕ್ಟ್ : ಈ ಯೋಜನೆಯ ಮೂಲಕ ಈಶಾನ್ಯ ಭಾರತದಲ್ಲಿ (ಉದಾಹರಣೆಗೆ ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ) ಕೇಸರಿಯನ್ನು ಬೆಳೆಯಲು ಪ್ರಯತ್ನಿಸಲಾಗುತ್ತಿದೆ.
  • ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಸಪ್ರಶ್ನೆ – ಜೂನ್ 17, 2026

    ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಸಪ್ರಶ್ನೆ – ಜೂನ್ 17, 2026